Monday 31 December 2012

'ನಿರ್ಭಯ'ಳಿಗೆ ಸಲ್ಲಿಸುವ ಸಂತಾಪದಲ್ಲಿ ತೋಮರ್ ಗೂ ಪಾಲಿರಲಿ..


   ಸಾವು ಎಲ್ಲರ ಪಾಲಿಗೆ ಸಹಜವೇ ಆಗಿದ್ದರೂ ಕೆಲವು ಸಾವುಗಳು ಪ್ರತಿಭಟನೆಗೆ, ಇನ್ನೊಬ್ಬರ ಸಾವಿಗೆ ಕಾರಣವಾಗಿ ಸುದ್ದಿಗೊಳಗಾಗುವುದಿದೆ. ದೆಹಲಿಯಲ್ಲಿ ಅತ್ಯಾಚಾರಕ್ಕೀಡಾದ ಯುವತಿ ‘ನಿರ್ಭಯ’ (ಮಾಧ್ಯಮಗಳೇ ಕೊಟ್ಟ ಹೆಸರು) ಡಿ. 29ರಂದು ಸಾವಿಗೀಡಾಗುವುದಕ್ಕಿಂತ 3 ದಿನಗಳ ಮೊದಲೇ ಪ್ರತಿಭಟನಾಕಾರರ ಹಲ್ಲೆಯಿಂದ ಸುಭಾಶ್ಚಂದ್ರ ತೋಮರ್ ಎಂಬ ಪೊಲೀಸ್ ಕಾನ್‍ಸ್ಟೇಬಲ್ ಸಾವಿಗೀಡಾಗಿದ್ದರು. ಹೆಣ್ಣಾಗಿರುವುದೇ ನಿರ್ಭಯಳ ಅಪರಾಧವಾಗಿದ್ದರೆ ಕಾನೂನು ಪಾಲನೆಗೆ ಮುಂದಾದುದೇ ತೋಮರ್‍ರ ಅಪರಾಧವಾಗಿತ್ತು. ನಿರ್ಭಯಳಿಗೆ ತಂದೆ, ತಾಯಿ, ಸಹೋದರಿಯರಿರುವಂತೆಯೇ ತೋಮರ್‍ಗೂ ಪತ್ನಿ, ಮಕ್ಕಳು, ಕುಟುಂಬವಿದೆ. ಒಂದು ರೀತಿಯಲ್ಲಿ ಎರಡೂ ಕುಟುಂಬಗಳು ಸಮಾನ ನೋವಿಗೆ ಒಳಗಾಗಿವೆ. ಕಣ್ಣೀರು ಹರಿಸಿವೆ. ದುರಂತ ಏನೆಂದರೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಘೋಷಿಸುವವರ ಮಧ್ಯೆ ತೋಮರ್‍ರ ನೋವು ಎಲ್ಲೂ ಕಾಣಿಸುತ್ತಲೇ ಇಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳು ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ ತೋಮರ್‍ರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ತಪ್ಪನ್ನೂ ಒಪ್ಪಿಕೊಳ್ಳುತ್ತಿಲ್ಲ. ತೋಮರ್‍ರ ಸಾವನ್ನು ಸಹಜ ಸಾವೆಂದು ಬಿಂಬಿಸಲು ಅವರು ವಿವಿಧ ನೆಪಗಳನ್ನು ಹುಡುಕುತ್ತಿದ್ದಾರೆ.
  ನಿಜವಾಗಿ, ಪ್ರತಿಭಟನಾಕಾರರಲ್ಲಿ ಕೆಲವು ಮೂಲಭೂತ ಗುಣಗಳು ಇದ್ದಿರಲೇಬೇಕು. ಇಲ್ಲದಿದ್ದರೆ ಪ್ರತಿಭಟನಾಕಾರರ ಪ್ರಾಮಾಣಿಕತೆಯೇ ಪ್ರಶ್ನೆಗೀಡಾಗುತ್ತದೆ. ಇಷ್ಟಕ್ಕೂ ಒಂದು ಅತ್ಯಾಚಾರಕ್ಕೆ ಇನ್ನೊಂದು ಅತ್ಯಾಚಾರ ಪರಿಹಾರವಾಗುತ್ತದೆಯೇ? ಪೊಲೀಸರಲ್ಲಿ ಕೆಟ್ಟವರಿದ್ದಾರೆ ಎಂಬ ಮಾತ್ರಕ್ಕೇ ಎಲ್ಲ ಪೊಲೀಸರನ್ನೂ ಕೆಟ್ಟವರೆಂಬಂತೆ ನೋಡಬೇಕಾದ ಅಗತ್ಯವೂ ಇಲ್ಲವಲ್ಲವೇ? ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಪ್ರತಿಭಟನೆಯ ವೇಳೆ ಪೊಲೀಸರು ಹಲ್ಲೆಗೋ ಸಾವಿಗೋ ಒಳಗಾದರೆ ಅದನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣ ಮಾಧ್ಯಮಗಳಲ್ಲಾಗಲಿ, ಪ್ರತಿಭಟನಾಕಾರರಲ್ಲಾಗಲಿ ಕಾಣಿಸುತ್ತಲೇ ಇಲ್ಲ. ಅಂದಹಾಗೆ, ಎಲ್ಲೇ ಪ್ರತಿಭಟನೆ, ಧರಣಿ, ಕೋಮುಗಲಭೆ, ಏನೇ ಆಗಲಿ ಅಲ್ಲಿಗೆ ಮೊತ್ತಮೊದಲು ತಲುಪುವುದು ಸಾಮಾನ್ಯ ಪೊಲೀಸ್ ಪೇದೆಗಳು. ಆಕ್ರೋಶಿತ ಗುಂಪುಗಳ ಕಲ್ಲಿನೇಟಿಗೆ ಮೊದಲು ಗುರಿಯಾಗುವುದೂ ಅವರೇ. ಪೊಲೀಸ್ ಕಮೀಷನರೋ ಅಥವಾ ಇನ್ನಾರೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಾಗ ಆಕ್ರೋಶಿತ ಗುಂಪುಗಳ ಬತ್ತಳಿಕೆಯಲ್ಲಿರುವ ಕಲ್ಲುಗಳು ಖಾಲಿಯಾಗಿರುತ್ತವೆ. ಇಷ್ಟಾದರೂ ಪೊಲೀಸರು ಸಾರ್ವಜನಿಕರ ಅನುಕಂಪಕ್ಕೆ ಒಳಗಾಗುವುದು ಕಡಿಮೆ. ಇದಕ್ಕೆ ಕಾರಣವೂ ಇದೆ. ಈ ದೇಶದ ಅತ್ಯಂತ ಭ್ರಷ್ಟ ಇಲಾಖೆಯಲ್ಲಿ ಪೊಲೀಸ್ ಇಲಾಖೆಯೂ ಒಂದು. ಅತ್ಯಾಚಾರಕ್ಕೀಡಾದ ಯುವತಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ಆಕೆಯನ್ನೇ ಅತ್ಯಾಚಾರಕ್ಕೊಳಪಡಿಸುವ ಕ್ರೂರಿಗಳೂ ಪೊಲೀಸ್ ಇಲಾಖೆಯಲ್ಲಿದ್ದಾರೆ. 100 ರೂಪಾಯಿ ಪಿಕ್ ಪಾಕೆಟ್ ಮಾಡಿ ಸಿಕ್ಕಿ ಬಿದ್ದವನನ್ನು ಠಾಣೆಯಲ್ಲೇ  ಕೊಲೆ ಮಾಡುವ ಪೊಲೀಸರಿದ್ದಾರೆ. ಕೋಮು ಗಲಭೆಯ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಪಕ್ಷಪಾತಿಯಾಗಿ ಇಡೀ ಗಲಭೆಯ ಬಗ್ಗೆ ತಪ್ಪು ವರದಿ ಕೊಡುವ ಖಾಕಿ ಸಮವಸ್ತ್ರಧಾರಿಗಳಿದ್ದಾರೆ. ದುಡ್ಡು ಪಡಕೊಂಡು ನ್ಯಾಯವನ್ನೇ ನಿರಾಕರಿಸುವವರಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನೊಬ್ಬ ಠಾಣೆಯನ್ನು ಹತ್ತಬೇಕಾದರೆ ಇನ್‍ಫ್ಲುಯೆನ್ಸ್ ಗೆ ಯಾರನ್ನಾದರೂ ಜೊತೆಗೆ ಠಾಣೆಗೆ ಕೊಂಡೊಯ್ಯಲೇಬೇಕು ಎಂಬ ವಾತಾವರಣವನ್ನು ನಿರ್ಮಿಸಿದವರಿದ್ದಾರೆ. ಆದರೂ ಎಲ್ಲ ಪೊಲೀಸರೂ ಹಾಗಲ್ಲವಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದವರನ್ನು ಮುಂದಿಟ್ಟುಕೊಂಡು ಎಲ್ಲ ಪುರುಷರೂ ಹೀಗೆಯೇ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಇದೂ ಅಲ್ಲವೇ?
  ಅತ್ಯಾಚಾರದ ವಿರುದ್ಧ ದೇಶಾದ್ಯಂತ ಸಂಚಲನ ಮೂಡಿಸುವುದಕ್ಕೆ ನಿರ್ಭಯಳ ಸಾವು ಕಾರಣವಾದಂತೆಯೇ, ಪ್ರತಿಭಟನೆಗಳು ಹೇಗಿರಬೇಕು ಎಂಬ ಬಗ್ಗೆ ಒಂದೊಳ್ಳೆಯ ಚರ್ಚೆಗೆ ತೋಮರ್‍ರ ಸಾವೂ ನೆಪವಾಗಬೇಕು. ಪ್ರತಿಭಟನೆ ಅಂದರೆ, ಜನರ ಕೈಯಲ್ಲಿ ಕಲ್ಲು, ಸಲಾಕೆಗಳು ಇರಲೇಬೇಕೆಂದೇನೂ ಇಲ್ಲವಲ್ಲ. ಪ್ರತಿಭಟಿಸುವುದು ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಎಂಬುದರ ಕುರಿತು ಸ್ಪಷ್ಟ ತಿಳುವಳಿಕೆ ಇರುವ ಮಂದಿ ಆಯುಧಗಳನ್ನು ಬಳಸುವುದಕ್ಕೆ ಸಾಧ್ಯವೂ ಇಲ್ಲ. ಹಾಗೆಯೇ, ತೋಮರ್‍ರ ಸಾವಿಗೆ ತಾವೆಷ್ಟು ಕಾರಣರು ಎಂಬ ಬಗ್ಗೆ ಪೊಲೀಸ್ ಇಲಾಖೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮ್ಮನ್ನು ಜನರೇಕೆ ಅನುಮಾನದಿಂದ ನೋಡುತ್ತಾರೆ ಎಂಬುದಕ್ಕೆ ಅದು ಕಾರಣಗಳನ್ನು ಕಂಡುಕೊಳ್ಳಬೇಕು. ಇವತ್ತು ಯಾವುದೇ ಒಂದು ಪೊಲೀಸ್ ಠಾಣೆಗೆ, ತಾನು ನೂರಕ್ಕೆ ನೂರು ಪ್ರಾಮಾಣಿಕ ಎಂದು ಬೋರ್ಡು ತಗುಲಿಸಿಕೊಳ್ಳಲು ಸಾಧ್ಯವೇ? ಒಂದು ವೇಳೆ ಹಾಗೆ ಬೋರ್ಡು ಹಾಕಿದರೂ ಅದನ್ನು ಜನಸಾಮಾನ್ಯರು ನಂಬಿಯಾರೇ? ಇಂಥದ್ದೊಂದು ಕೆಟ್ಟ ಗುರುತಿನಿಂದ ಹೊರಬರಲು ಎಲ್ಲ ಠಾಣೆಗಳೂ ಸಿದ್ಧವಾಗಬೇಕಾದ ಅಗತ್ಯವಿದೆ. ಜನಸಾಮಾನ್ಯರು ಪೊಲೀಸರನ್ನು ಕಾಣುವಾಗ ಕಲ್ಲಿನ ಬದಲು ಹೂವನ್ನು ಎತ್ತಿಕೊಳ್ಳಬೇಕಾದರೆ ಹೂವಿನಂಥ ಮನಸ್ಸು ಮತ್ತು ವರ್ಚಸ್ಸು ಪೊಲೀಸರಿಗೂ ಇರಬೇಕಾಗುತ್ತದೆ. ಅಂಥ ವರ್ಚಸ್ಸನ್ನು ಪೊಲೀಸ್ ಇಲಾಖೆ ಸದ್ಯ ಕಳ ಕೊಂಡದ್ದರಿಂದಲೇ ತೋಮರ್‍ರಂಥ ಕಾನ್‍ಸ್ಟೇಬಲ್‍ಗಳ ಸಾವು ಜನರನ್ನು ತಲುಪಲು ವಿಫಲವಾಗಿರುವುದು. ಆದ್ದರಿಂದ ಪ್ರಾಮಾಣಿಕ ಪೊಲೀಸರು ತಮ್ಮ ಸಹೋದ್ಯೋಗಿಗಳ ಅಪ್ರಾಮಾಣಿಕತೆ, ಅನ್ಯಾಯ, ಕೋಮುವಾದಿ ಮನಸ್ಥಿತಿಯ ವಿರುದ್ಧ ಧ್ವನಿಯೆತ್ತುವ ಮೂಲಕ ಕಳೆದ ಹೋಗಿರುವ ಗೌರವವನ್ನು ಪೊಲೀಸ್ ಇಲಾಖೆಗೆ ಮರಳಿ ದೊರಕಿಸಲು ಪ್ರಯತ್ನಿಸಬೇಕಾಗಿದೆ. ನಿರ್ಭಯಳ ಜೀವ ಎಷ್ಟು ಅಮೂಲ್ಯವೋ ಅಷ್ಟೇ ತೋಮರ್‍ರ ಜೀವವೂ ಅಮೂಲ್ಯ ಎಂದು ಜನಸಾಮಾನ್ಯರೂ ಘೋಷಿಸುವಂಥ ವಾತಾವರಣವನ್ನು ತಮ್ಮ ವರ್ತನೆಯ ಮುಖಾಂತರ ಪೊಲೀಸರು ಸಾಬೀತುಪಡಿಸಬೇಕಾಗಿದೆ.
  ಏನೇ ಆಗಲಿ, ನಿರ್ಭಯ ಮತ್ತು ತೋಮರ್‍ರ ಸಾವು, ಈ ದೇಶ ಗಮನಹರಿಸಲೇಬೇಕಾದ ಎರಡು ಸಂಗತಿಗಳತ್ತ ಬೊಟ್ಟು ಮಾಡಿವೆ. ನಿರ್ಭಯಳ ಸಾವು ಅತ್ಯಾಚಾರಿಗಳ ವಿರುದ್ಧ ಪ್ರಬಲ ಕಾನೂನಿನ ರಚನೆಗೆ ಕಾರಣವಾಗುವಂತೆಯೇ ತೋಮರ್‍ರ ಸಾವು ಪೊಲೀಸ್ ಇಲಾಖೆಯ ಸುಧಾರಣೆಗೂ ಕಾರಣವಾಗಬೇಕು. ಹಾಗೆಯೇ ಪ್ರತಿಭಟನಾಕಾರರ ಮನಸ್ಥಿತಿಯ ಬದಲಾವಣೆಗೂ ಇದು ಹೇತುವಾಗಬೇಕು. ನಮಗೆ ನಿರ್ಭಯಳೂ ಬೇಕು, ತೋಮರ್‍ರೂ ಬೇಕು. ಯಾರೂ ಅನ್ಯಾಯವಾಗಿ ಸಾವಿಗೀಡಾಗಬಾರದು.

Wednesday 26 December 2012

ನಮ್ಮೆಲ್ಲರ ಆತ್ಮಸಾಕ್ಷಿಗೆ ಚುಚ್ಚಿ ಹೊರಟುಹೋದ ಉಪನ್ಯಾಸಕ


  ಅನೇಕ ಬಾರಿ, ಓರ್ವರ ಒಂದು ಗೆರೆಯ ಹೇಳಿಕೆ ನೂರಾರು ಪ್ರತಿಕ್ರಿಯೆಗಳಿಗೆ ಕಾರಣವಾಗುವುದಿದೆ. ದೇಶದಲ್ಲಿ ಪ್ರತಿದಿನ ಅನೇಕಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಒಂದು ಪ್ರಕರಣಕ್ಕೆ ಇತರೆಲ್ಲವುಗಳಿಗಿಂತ ಹೆಚ್ಚು ಪ್ರಚಾರ ಸಿಕ್ಕಿ, ಅಭೂತಪೂರ್ವ ಪ್ರತಿಭಟನೆಗೆ ಕಾರಣವಾಗುವುದಿದೆ. ಆತ್ಮಹತ್ಯೆಯೂ ಹಾಗೆಯೇ. ಪತ್ರಿಕೆಗಳ ತೀರಾ ಒಳಪುಟದಲ್ಲಿ ಸಣ್ಣದೊಂದು ಸುದ್ದಿಯಾಗಿ ಪ್ರಕಟವಾಗುವಷ್ಟು ಮಾಮೂಲು ಎನಿಸಿಬಿಟ್ಟಿರುವ ಆತ್ಮಹತ್ಯೆಯು, ಕೆಲವೊಮ್ಮೆ ತನ್ನ ವಿಶಿಷ್ಟತೆಯಿಂದಾಗಿ ಸಾರ್ವಜನಿಕ ಚರ್ಚೆಗೆ ಒಳಗಾಗುವುದಿದೆ. ಡಾ| ಯು.ಬಿ. ಅಶೋಕ್ ಕುಮಾರ್‍ರ ಆತ್ಮಹತ್ಯೆಯು ಇಂಥದ್ದೊಂದು ಚರ್ಚೆಗೆ ಅವಕಾಶ ಒದಗಿಸಿದೆ. ನಿಜವಾಗಿ, ಮೈಸೂರಿನ ಮಹಾರಾಜ ಸಂಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಇವರ ಆತ್ಮಹತ್ಯೆಯು ಚರ್ಚೆಗೆ ಒಳಗಾಗಬೇಕಾದದ್ದು ಇವರು ಉಪನ್ಯಾಸಕರು ಎಂಬ ಕಾರಣಕ್ಕಾಗಿ ಖಂಡಿತ ಅಲ್ಲ. ಇವರ ಆತ್ಮಹತ್ಯೆಯಲ್ಲಿ ಒಂದು ವೈಶಿಷ್ಟ್ಯವಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮೊದಲು ಅದಕ್ಕೆ ಕಾರಣವನ್ನು ಬರೆದಿಟ್ಟು ಹೋಗಿದ್ದಾರೆ. ವ್ಯಾಪಕವಾಗುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ಕೆಟ್ಟ ರಾಜಕಾರಣಗಳನ್ನು ನೋಡಿ ಮನಸ್ಸಿಗೆ ಆಘಾತವಾಗಿದೆ ಎಂದಿದ್ದಾರೆ. ಮುಂದಿನ ಜನಾಂಗವನ್ನು ರೂಪಿಸಬೇಕಾದ ವಿಶ್ವ ವಿದ್ಯಾಲಯಗಳಲ್ಲೇ ಕುಲಪತಿಯಂಥ ಹುದ್ದೆಗಾಗಿ ಲಾಬಿ, ಭ್ರಷ್ಟತನ ನಡೆಯುತ್ತಿದೆ, ಹೀಗಿರುವಾಗ ಹೇಗೆ ನಾನು ಮಕ್ಕಳಿಗೆ ಮೌಲ್ಯವನ್ನು ಬೋಧಿಸಲಿ.. ಎಂದು ಪ್ರಶ್ನಿಸಿದ್ದಾರೆ.
  ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಖಂಡಿತ ಅಲ್ಲ. ಅದರಲ್ಲೂ ಉಪನ್ಯಾಸಕರೋರ್ವರು, ಆತ್ಮಹತ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಆಘಾತಕಾರಿಯಾದದ್ದು. ಆದರೆ, ಓರ್ವ ಪ್ರಾಮಾಣಿಕ ವ್ಯಕ್ತಿಯ ಮೇಲೆ ಈ ದೇಶದ ಸದ್ಯದ ಬೆಳವಣಿಗೆಗಳು ಯಾವ ಬಗೆಯ ಪರಿಣಾಮ ಬೀರುತ್ತವೆಂಬುದಕ್ಕೆ ಈ ಆತ್ಮಹತ್ಯೆ ಒಂದು ಅತ್ಯುತ್ತಮ ಪುರಾವೆ. ಮೌಲ್ಯಗಳನ್ನು ಕಲಿಸಬೇಕಾದ, ಮೌಲ್ಯವಂತ ಪೀಳಿಗೆಯನ್ನು ತಯಾರಿಸಬೇಕಾದ ಶಿಕ್ಷಣ ಸಂಸ್ಥೆಗಳು ಮೌಲ್ಯರಹಿತ ಕಸುಬಿನಲ್ಲಿ ತೊಡಗಿ ಬಿಟ್ಟರೆ ಕೆಡುಕುರಹಿತ ಸಮಾಜ ನಿರ್ಮಾಣವಾಗುವುದಾದರೂ ಹೇಗೆ? ಸಮಾಜದಲ್ಲಿ ಇವತ್ತು ನೂರಾರು ಕೆಡುಕುಗಳಿವೆ. ಆ ಕೆಡುಕುಗಳಿಗೆಲ್ಲ ಕಾರಣವಾಗಿರುವುದು ಅನ್ಯಗೃಹದ ಜೀವಿಗಳೇನೂ ಅಲ್ಲ. ದುರಂತ ಏನೆಂದರೆ, ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರಿಗೆ ಕಣ್ಣೀರು ಮಿಡಿದು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಎಂದು ನಾವು ಆಗ್ರಹಿಸುತ್ತೇವೆಯೇ ಹೊರತು ಭ್ರಷ್ಟಾಚಾರದ ಮೊಲಕ್ಕೆ ಮದ್ದರೆಯುವ ಬಗ್ಗೆ ಆಲೋಚಿಸುವುದೇ ಇಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ. ಪ್ರತಿಭಟನೆ ನಡೆಸುತ್ತೇವೆ. ಆದರೆ ಹೀಗೆ ಆಗ್ರಹಿಸುತ್ತಿರುವಾಗಲೂ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಷ್ಟಕ್ಕೂ ಅತ್ಯಾಚಾರಕ್ಕೆ ಮರಣ ದಂಡನೆಯಾಗಬೇಕು, ನಿಜ. ಆದರೆ ಕೇವಲ ಮರಣದಂಡನೆಯೊಂದೇ ಅತ್ಯಾಚಾರ ಪ್ರಕರಣಕ್ಕೆ ಕಡಿವಾಣ ಹಾಕೀತು ಅಂತ ಹೇಳಲು ಸಾಧ್ಯವೇ? ಅತ್ಯಾಚಾರಕ್ಕೆ ಯಾವುದು ಪ್ರಚೋದಕವಾಗುತ್ತದೋ ಅವುಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುತ್ತಾ ಗಲ್ಲು ಶಿಕ್ಷೆಯ ಬಗ್ಗೆ ಮಾತಾಡುವುದು ಎಷ್ಟು ಪರಿಣಾಮಕಾರಿ? ನಮ್ಮ ಸಿನಿಮಾಗಳು, ಸಾಂಸ್ಕ್ರಿತಿಕ ಕಾರ್ಯಕ್ರಮಗಳು, ಮಾಧ್ಯಮಗಳು ಮತ್ತು ಆಧುನಿಕತೆಯ ಹೆಸರಲ್ಲಿ ಸಮರ್ಥಿಸಲಾಗುತ್ತಿರುವ ಮುಕ್ತ ಸಂಸ್ಕ್ರಿತಿಗಳೆಲ್ಲ ಕಲಿಸುವುದಾದರೂ ಏನನ್ನು? ಸಿನಿಮಾ ಪರದೆಯ ಮೇಲೆ ಹಿರೋಯಿನ್‍ಗಳ ಬಟ್ಟೆಯನ್ನು ಹೀರೋ ಎಲ್ಲರೆದುರೇ ಒಂದು ಹಂತದವರೆಗೆ ಬಿಚ್ಚುತ್ತಾನೆ ಅಥವಾ ಹಿರೋಯಿನ್‍ಳ ಬಟ್ಟೆಯೇ ಅಷ್ಟು ಕನಿಷ್ಠ ಮಟ್ಟದಲ್ಲಿರುತ್ತದೆ. ಅಲ್ಲದೆ ಜಾಹೀರಾತುಗಳಲ್ಲಿ ಬರುವ ಮಾಡೆಲ್‍ಗಳ ಭಂಗಿಯು ಒಂದು ಕುಟುಂಬದ ಎಲ್ಲರೂ ಒಟ್ಟಿಗೆ ಕೂತು ನೋಡುವಂತೆಯೂ ಇರುವುದಿಲ್ಲ. ಇಂತಹ ಸಿನಿಮಾ ಮತ್ತು ಜಾಹೀರಾತುಗಳನ್ನು ವೀಕ್ಷಿಸುವ ಸಾವಿರಾರು ಮಂದಿಯಲ್ಲಿ ಒಬ್ಬರೋ ಇಬ್ಬರೋ ನಕಾರಾತ್ಮಕ ಪ್ರಚೋದನೆಗೆ ಒಳಗಾಗಲಾರರೆಂದು ಹೇಗೆ ಹೇಳುವುದು? ಅಂದ ಹಾಗೆ, ಮದ್ಯಪಾನಕ್ಕೇನೂ ಈ ದೇಶದಲ್ಲಿ ನಿಷೇಧ ಇಲ್ಲವಲ್ಲ. ಒಂದು ಕಡೆ ಲೈಂಗಿಕ ಪ್ರಚೋದನೆಗೆ ಪೂರಕವಾದ ದೃಶ್ಯಗಳು, ಇನ್ನೊಂದು ಕಡೆ ಮನುಷ್ಯರನ್ನು ಭ್ರಮೆಯಲ್ಲಿ ತೇಲಿಸುವ ಮದ್ಯ.. ಇವೆರಡೂ ಒಟ್ಟಾದರೆ ಕೆಡುಕಲ್ಲದೇ ಒಳಿತು ಉಂಟಾಗಲು ಸಾಧ್ಯವೇ? ಕೆಡುಕುಗಳಿಗೆ ಪ್ರಚೋದಕವಾಗುವ ಯಾವೆಲ್ಲ ಪ್ರಕಾರಗಳಿವೆಯೋ ಅವುಗಳಿಗೆಲ್ಲ ಸಮಾಜದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತಾ, ಅದರಿಂದ ಜನರು ಪ್ರಚೋದಿತರಾಗಬಾರದೆಂದು ಬಯಸುವುದು ಎಷ್ಟು ಪ್ರಾಯೋಗಿಕವಾಗಬಹುದು? ಅಂದಹಾಗೆ, ಒಂದು ಊರಿನಲ್ಲಿ ಮಲೇರಿಯದ ಹಾವಳಿ ಇದ್ದರೆ, ಸರಕಾರ ಮಲೇರಿಯಾಕ್ಕೆ ಮದ್ದು ಸರಬರಾಜು ಮಾಡುವ ಕೆಲಸವನ್ನಷ್ಟೇ ಮಾಡುವುದಲ್ಲವಲ್ಲ. ಸೊಳ್ಳೆಗಳ ಮೇಲೆ ರಾಸಾಯನಿಕವನ್ನು ಸಿಂಪಡಿಸುವ ಕೆಲಸವನ್ನೂ ಮಾಡುತ್ತದಲ್ಲವೇ? ಗೆರಟೆ, ಟೈರುಗಳಲ್ಲಿ ನೀರು ನಿಂತು ಕ್ರಿಮಿಗಳು ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕೆಂಬ ಮುನ್ನೆಚ್ಚರಿಕೆಯನ್ನೂ ಕೊಡುತ್ತದಲ್ಲವೇ? ಹೀಗಿರುವಾಗ ಅತ್ಯಾಚಾರ ಇಲ್ಲವೇ ಭ್ರಷ್ಟಾಚಾರದಂಥ ಕೆಡುಕುಗಳ ನಿರ್ಮೂಲನವು ಬರೇ ಕಠಿಣ ಶಿಕ್ಷೆಯಿಂದ ಸಾಧ್ಯವಾಗಬಹುದೇ? ಅದಕ್ಕೆ ಪ್ರಚೋದಕವಾಗುವ ಮೂಲ ಅಂಶಗಳಿಗೆ ಕಡಿವಾಣ ಹಾಕದಿದ್ದರೆ, ರೋಗಕಾರಕ ಸೊಳ್ಳೆಗಳು ರೋಗವನ್ನು ಹಂಚುತ್ತಲೇ ಇರಲಾರದೇ?
  ಕಾನೂನು ಮತ್ತು ಪೊಲೀಸರ ಕಣ್ಣು ತಪ್ಪಿಸಿ ಬದುಕಲು ಮನುಷ್ಯನಿಗೆ ಖಂಡಿತ ಸಾಧ್ಯವಿದೆ. ಆದ್ದರಿಂದಲೇ ಭ್ರಷ್ಟ ಮತ್ತು ಅತ್ಯಾಚಾರಿ ಮನಸ್ಥಿತಿಯನ್ನು ಇಲ್ಲವಾಗಿಸಲು ದೇವವಿಶ್ವಾಸದ ಅಗತ್ಯ ಎದ್ದು ಕಾಣುವುದು. ತಾನು ಎಲ್ಲಿದ್ದರೂ ಯಾವ ಆಲೋಚನೆಯನ್ನೇ ಮಾಡಿದರೂ ಅದನ್ನು ದೇವನು ಅರಿಯುತ್ತಾನೆ ಎಂಬ ಪ್ರಜ್ಞೆ ಮತ್ತು ಭೂಮಿಯ ಕಾನೂನು ಶಿಕ್ಷಿಸದಿದ್ದರೂ ನಾಳೆ ದೇವನು ಖಂಡಿತ ಶಿಕ್ಷಿಸುತ್ತಾನೆ ಎಂಬ ಅರಿವು ಮನುಷ್ಯನಲ್ಲಿ ದೃಢವಾಗುತ್ತಾ ಹೋದಂತೆ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್‍ರ ಆತ್ಮಹತ್ಯೆಯನ್ನು ಕೆಡುಕುಗಳ ವಿರುದ್ಧದ ಒಂದು ಪ್ರತಿಭಟನೆಯಾಗಿ ನಾವು ಪರಿಗಣಿಸಬೇಕು. ಅವರದ್ದು ತಪ್ಪು ಹೆಜ್ಜೆ ನಿಜ. ಆದರೆ ಅವರು ಎತ್ತಿದ ಪ್ರಶ್ನೆ ಅತ್ಯಂತ ಸಕಾಲಿಕವಾದದ್ದು. ಓರ್ವ ಪ್ರಾಮಾಣಿಕ ಉಪನ್ಯಾಸಕನಲ್ಲಿ ಉಂಟಾಗುವ ಮಾನಸಿಕ ಗೊಂದಲದ ಸಂಕೇತವಾಗಿ ಅವರ ಆತ್ಮಹತ್ಯೆಯನ್ನು ನಾವು ಪರಿಗಣಿಸಬೇಕಾಗಿದೆ. ಹಾಗೆಯೇ, ಅವರ ಆತ್ಮಹತ್ಯೆಯನ್ನು ಎದುರಿಟ್ಟುಕೊಂಡು ಅವರೆತ್ತಿದ ಕೆಡುಕುಗಳ ನಿರ್ಮೂಲನೆಯ ಬಗ್ಗೆ ಪ್ರಾಮಾಣಿಕ ಚರ್ಚೆ ನಡೆಸಬೇಕಾಗಿದೆ.

Monday 17 December 2012

4 ರೂಪಾಯಿಯ `ಶ್ರೀಮಂತರೂ’ ಸಂಸ್ಕೃತಿ ರಕ್ಷಿಸುವ ಪ್ರತಿಭಟನಾಕಾರರೂ...


  ಬಡತನವನ್ನು ವಸ್ತುವಾಗಿಟ್ಟುಕೊಂಡು ಈ ಜಗತ್ತಿನಲ್ಲಿ ಅಸಂಖ್ಯ ಕತೆ, ಕಾದಂಬರಿಗಳು; ನಾಟಕ, ಸಿನಿಮಾಗಳು ಬಂದಿವೆ. ಮನುಷ್ಯರು ಮಾತ್ರವಲ್ಲ, ಪ್ರಾಣಿಗಳ ಹಸಿವನ್ನೂ ಕತೆ-ಕಾದಂಬರಿಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಯಾವ ಕತೆಯಲ್ಲೂ, ಸಿನೆಮಾದಲ್ಲೂ ಬಡತನವನ್ನು ವಿಡಂಬನೆಗೆ ಒಳಪಡಿಸಲಾಗಿಲ್ಲ. ಬಡವರನ್ನು ಜೋಕರ್‍ಗಳಂತೆ ಬಿಂಬಿಸಲಾಗಿಲ್ಲ. ಇಷ್ಟಕ್ಕೂ, ಹಾಗೆ ಮಾಡದಿರುವುದಕ್ಕೆ ಕಾರಣ, ಬಡವರು ಪ್ರತಿಭಟಿಸಿಯಾರು ಎಂದಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೇ ಸಾಮರ್ಥ್ಯ ಇಲ್ಲದವರು ಇನ್ನು, ಪ್ರತಿಭಟಿಸುವುದಾದರೂ ಹೇಗೆ? ನಿಜವಾಗಿ, ಬಡತನವನ್ನು ಮತ್ತು ಹಸಿವನ್ನು ಅವಮಾನಕ್ಕೆ ಒಳಪಡಿಸುವುದು ಅಮಾನವೀಯ ಎಂಬೊಂದು ಕಾಮನ್‍ಸೆನ್ಸು ಕತೆ, ಕಾದಂಬರಿಕಾರರಲ್ಲಿ ಇದ್ದಿರುವುದೇ ಇದಕ್ಕೆ ಕಾರಣ. ಆದರೆ ರಾಜಕಾರಣಿಗಳಿಗೆ ಕನಿಷ್ಠ ಈ ಕಾಮನ್‍ಸೆನ್ಸೂ ಇಲ್ಲ. ಬಹುಶಃ ಬಡತನಕ್ಕೆ ಅವರು 'ವಿರೋಧ ಪಕ್ಷ' ಎಂಬ ಅರ್ಥ ಕೊಟ್ಟಿರಬೇಕು. ಆದ್ದರಿಂದಲೇ, ತಮ್ಮ ವಿರೋಧಿಗಳನ್ನು ಅಗ್ಗದ ಭಾಷೆಯಲ್ಲಿ ಹೀಯಾಳಿಸುವಂತೆಯೇ ಅವರು 'ಬಡತನ'ವನ್ನೂ ಹೀಯಾಳಿಸುತ್ತಿದ್ದಾರೆ. ಇಲ್ಲದಿದ್ದರೆ, ಓರ್ವ ವ್ಯಕ್ತಿಯ ದಿನದ ಖರ್ಚಿಗೆ ನಾಲ್ಕು ರೂಪಾಯಿ ಧಾರಾಳ ಸಾಕು ಎಂದು ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್  ಹೇಳಲು ಸಾಧ್ಯವೇ? ಒಂದು ವೇಳೆ ಶೀಲಾ ದೀಕ್ಷಿತ್‍ರಿಗೆ 120 ರೂಪಾಯಿ ಕೊಟ್ಟು, ‘ನೀವು ಈ ಹಣದಲ್ಲಿ ಒಂದು ತಿಂಗಳು ಬದುಕಿ ತೋರಿಸಿ..’ ಅಂಥ ಹೇಳಿದರೆ ಅವರ ಪ್ರತಿಕ್ರಿಯೆಯಾದರೂ ಹೇಗಿದ್ದೀತು? ಯೋಜನಾ ಆಯೋಗದ ಉಪಾಧ್ಯಕ್ಷ  ಮಾಂಟೆಕ್ ಸಿಂಗ್ ಅಹ್ಲುವಾಲಿಯಾರು ಈ ಮೊದಲು ಶೀಲಾ ದೀಕ್ಷಿತ್‍ರಂತೆಯೇ ಮಾತಾಡಿದ್ದರು. ನಗರ ಪ್ರದೇಶದ ವ್ಯಕ್ತಿ ದಿನವೊಂದರಲ್ಲಿ 32 ರೂಪಾಯಿ ಮತ್ತು ಗ್ರಾಮೀಣ ವ್ಯಕ್ತಿ 26 ರೂಪಾಯಿಯಲ್ಲಿ ಜೀವನ ಸಾಗಿಸಬಹುದು ಎಂದಿದ್ದರು. ಆದರೆ ಈ ಹೇಳಿಕೆಯ ಕೆಲವು ದಿನಗಳಲ್ಲೇ ಅವರು ತಮ್ಮ ಕಚೇರಿಯ ಶೌಚಾಲಯದ ರಿಪೇರಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದರು.
  ನಿಜವಾಗಿ, ನಾವು ಸದ್ಯ ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲೇ ಸಾಕಷ್ಟು ಗೊಂದಲ ಇದೆ. ಅನೇಕ ವೈರುಧ್ಯಗಳಿವೆ. ಬಡತನವನ್ನು ಇಲ್ಲವಾಗಿಸಲು ಯಾರು ವಿಧಾನಸಭೆ ಇಲ್ಲವೇ ಪಾರ್ಲಿಮೆಂಟಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕೋ ಅವರಿಗೆ ಬಡತನದ ಕಾವು ಬಹುತೇಕ ತಟ್ಟಿರುವುದೇ ಇಲ್ಲ. ಅವರು ಬೆಳೆದಿರುವುದೇ ತುಂಬಿದ ಅನ್ನದ ಬಟ್ಟಲನ್ನು ನೋಡಿಕೊಂಡು. ಬಟ್ಟೆ ಒಗೆಯುವ ಸಾಬೂನನ್ನು ಸ್ನಾನಕ್ಕೆ ಬಳಸಿ ಅವರಿಗೆ ಗೊತ್ತಿರುವುದೇ ಇಲ್ಲ. ಬಿಸಿ ಊಟವಾಗಲಿ, ಹರಿದ ಬಟ್ಟೆ ತೊಟ್ಟು ಬರಿಗಾಲಲ್ಲಿ ನಡೆದ ಅನುಭವವಾಗಲಿ ಅವರಿಗೆ ಇರುವುದೂ ಇಲ್ಲ. ಅವರು ಶಾಲೆಗೆ ಹೋದದ್ದು ಕಾರಲ್ಲಿ. ಧರಿಸಿದ್ದು ಬಹುಬ್ರಾಂಡ್‍ಗಳ ಉಡುಪುಗಳನ್ನು. ಮನೆ ಮನೆಗೆ ಹಾಲು ಹಾಕಿಯೋ, ಪೇಪರ್ ಕೊಟ್ಟೋ ಅಥವಾ ಶಾಲಾ ರಜೆಯ ಸಂದರ್ಭದಲ್ಲಿ ದುಡಿದೋ ಗೊತ್ತಿಲ್ಲದೇ ಬೆಳೆದ ಇಂಥ ಮಂದಿಯೇ ಚುನಾವಣೆಗಳಲ್ಲಿ ಸ್ಪರ್ಧಿಸೋದು. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಸಾಮರ್ಥ್ಯ  ಇದ್ದವರಿಗೆ ಮಾತ್ರ ನಮ್ಮ ರಾಜಕೀಯ ಕ್ಷೇತ್ರವು ಮೀಸಲಾಗಿರುವುದರಿಂದ ಶೀಲಾ ದೀಕ್ಷಿತ್‍ರ '4 ರೂಪಾಯಿಯ ಶ್ರೀಮಂತ' ಸ್ಪರ್ಧಿಸುವುದು ಬಿಡಿ, ಅಭ್ಯರ್ಥಿಯ ಕೈ ಕುಲುಕುವುದಕ್ಕೂ ಅನರ್ಹನಾಗಿರುತ್ತಾನೆ.
  ರಾಜಕಾರಣಿ, ಇಂಜಿನಿಯರ್, ಡಾಕ್ಟರ್ ಏನೇ ಆಗಿದ್ದರೂ ಮನುಷ್ಯ ಎಂಬ ನೆಲೆಯಲ್ಲಿ ಕೆಲವು ಮೂಲಭೂತ ಗುಣಗಳು ನಮ್ಮಲ್ಲಿ ಇದ್ದೇ ಇರುತ್ತವೆ. ಬಡತನವನ್ನು ರೋಗ ಎಂದು ಚಿತ್ರಿಸಿ ಯಾರೂ ನಾಟಕ ರಚಿಸುವುದಿಲ್ಲ. ರೋಗಿಗಳನ್ನು 'ಪೀಡೆ' ಎಂದು ಬಿಂಬಿಸಿ ಯಾರೂ ಸಿನಿಮಾ ಮಾಡುವುದಿಲ್ಲ. ವೃದ್ಧರನ್ನು ದ್ವೇಷಿಸುವ, ಭ್ರಷ್ಟಾಚಾರವನ್ನು ಪ್ರೀತಿಸುವ, ಸಿನಿಮಾ, ಕಾದಂಬರಿಗಳೆಲ್ಲ ರಚನೆ ಆಗುವುದೂ ಇಲ್ಲ. ಭ್ರಷ್ಟಾಚಾರದಿಂದ ಕೋಟಿಗಟ್ಟಲೆ ದುಡ್ಡು ಮಾಡಿದವ ಕೂಡ ವೇದಿಕೆಯೇರಿ ಮಾತಾಡುವ ಪ್ರಸಂಗ ಎದುರಾದರೆ ಭ್ರಷ್ಟಾಚಾರದ ವಿರುದ್ಧವೇ ಮಾತಾಡುತ್ತಾನೆ. ರೋಗಿಯನ್ನು ಸುಲಿಯುವುದೇ ವೈದ್ಯ ಧರ್ಮ ಅಂತ ತಿಳಿದ ವೈದ್ಯನೂ ಮಾತಾಡುವಾಗ ಸುಲಿಗೆ ಧರ್ಮಕ್ಕೆ ವಿರುದ್ಧವಾಗಿಯೇ ಮಾತಾಡುತ್ತಾನೆ. ಯಾಕೆ ಹೀಗೆ ಅಂದರೆ, ಮನುಷ್ಯನ ಪ್ರಕೃತಿಯೇ ಹಾಗೆ. ಸುಳ್ಳು, ವಂಚನೆ, ವ್ಯಂಗ್ಯ, ಬೂಟಾಟಿಕೆಗಳನ್ನೆಲ್ಲ 'ಅಮೌಲ್ಯ'ದ ಪಟ್ಟಿಯಲ್ಲಿಡುವಂತೆ ಪ್ರಕೃತಿಯೇ ಆತನಿಗೆ ಕಲಿಸಿರುತ್ತದೆ. ಆದರೂ ಕೆಲವೊಮ್ಮೆ ರಾಜಕಾರಣಿಗಳ ವರ್ತನೆ ನೋಡಿದರೆ, ಅವರು ಪ್ರಕೃತಿ ಕಲಿಸುವ ಈ ಮೊಲಭೂತ ಪಾಠಗಳಿಂದಲೂ ತಪ್ಪಿಸಿಕೊಂಡಿರಬಹುದೇ ಎಂಬ ಅನುಮಾನ ಮೂಡುತ್ತದೆ. ಹುತಾತ್ಮ ಯೋಧರಿಗಾಗಿ ಸಿದ್ಧಪಡಿಸಲಾದ ಶವ ಮಂಚದಿಂದಲೂ ಅವರು ದುಡ್ಡು ಕಸಿಯುತ್ತಾರೆ. ವರ್ಷಂಪ್ರತಿ ತಮ್ಮ ಭತ್ತೆ, ಸಂಬಳಗಳನ್ನು ತಾವೇ ಏರಿಸಿಕೊಳ್ಳುತ್ತಾರೆ. ಮೊರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಬಡತನ ರೇಖೆಗಿಂತ ಕೆಳಗೆ ಎಂಬ ಪಟ್ಟಿಯಲ್ಲಿ ಗುರುತಿಸಿಕೊಂಡಿರುವವರನ್ನು 4 ರೂಪಾಯಿಯ ಸಿದ್ಧಾಂತ ಮಂಡಿಸಿ ಬಡವರಲ್ಲ ಅಂದುಬಿಡುತ್ತಾರೆ.. ಇಂಥ ವೈರುಧ್ಯಗಳು ನೂರಾರು ಇವೆ. ದುರಂತ ಏನೆಂದರೆ, ಹೆಣ್ಣು ಗಂಡು ಮಾತಾಡಿದ ನೆಪದಲ್ಲಿ, ದನ ಸಾಗಾಟದ ನೆಪದಲ್ಲಿ ಅಥವಾ ಇಂಥ ಇನ್ನೇನೋ ಜನಪ್ರಿಯ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಘೋಷಣೆಗಳನ್ನು ಹಮ್ಮಿಕೊಳ್ಳುವವರೆಲ್ಲ  ಬಡವರ ಇಂಥ ವಿಷಯಗಳ ಬಗ್ಗೆ  ಮಾತೇ ಆಡುವುದಿಲ್ಲ ಅನ್ನುವುದು. ಅಹ್ಲುವಾಲಿಯಾರ 26 ರೂಪಾಯಿ ಅಥವಾ ದೀಕ್ಷಿತ್‍ರ 4 ರೂಪಾಯಿ ಸಿದ್ಧಾಂತವನ್ನು ಖಂಡಿಸಿ ನಮ್ಮಲ್ಲಿ ಎಷ್ಟು ಪ್ರತಿಭಟನೆಗಳಾಗಿವೆ? ಜಿಲ್ಲಾಧಿಕಾರಿಗಳಿಗೆ, ರಾಜ್ಯಪಾಲರಿಗೆಲ್ಲ ಎಷ್ಟು ಮಂದಿ ಮನವಿ ಸಲ್ಲಿಸಿದ್ದಾರೆ? ಸಂಸ್ಕೃತಿ ಅಂದರೆ ದನ ಒಂದೇ ಅಲ್ಲವಲ್ಲ. ಬಡವರೂ ಸಂಸ್ಕೃತಿಯ ಭಾಗವೇ ಅಲ್ಲವೇ? ಆದರೆ ಸಂಸ್ಕೃತಿಯ ಹೆಸರಲ್ಲಿ ಬಡವರನ್ನು ಮತ್ತು ಮಧ್ಯಮ ವರ್ಗವನ್ನು ಪ್ರತಿ ಪ್ರತಿಭಟನೆಗಳಲ್ಲೂ ಬಳಸಿಕೊಳ್ಳುವ ಮಂದಿಯೇ ಬಡವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಒಂದೇ ಒಂದು ಪ್ರತಿಭಟನೆಯನ್ನೂ ಆಯೋಜಿಸುವುದಿಲ್ಲವಲ್ಲ, ಯಾಕೆ? ರಾಜಕಾರಣಿಗಳಂತೆಯೇ ಈ ವರ್ಗವೂ ಬಡವರ ವಿರೋಧಿಯಾಗಿ ಮಾರ್ಪಟ್ಟಿವೆ ಅನ್ನುವುದಕ್ಕೆ ಇದು ಪುರಾವೆಯಲ್ಲವೇ?
  4 ರೂಪಾಯಿಯ ಸಿದ್ಧಾಂತವನ್ನು ಶೀಲಾ ದೀಕ್ಷಿತ್ ಮಂಡಿಸುವಾಗ ಅವರ ಪಕ್ಕವೇ ಸೋನಿಯಾ ಗಾಂಧಿಯೂ ಇದ್ದರು. ಆದ್ದರಿಂದ ಇದನ್ನು  ಕಾಂಗ್ರೆಸ್ ಪಕ್ಷದ ನಿಲುವು ಎಂದೇ  ಹೇಳಬೇಕಾಗುತ್ತದೆ. ಹೀಗಿರುವಾಗ, ಇಂಥ ಪಕ್ಷ  ಬಡವರಿಂದ ಅಗ್ಗದ ಸಿಲಿಂಡರು, ಡೀಸೆಲ್ಲು, ಸೀಮೆ ಎಣ್ಣೆಯನ್ನು ಕಸಿದುಕೊಂಡದ್ದರಲ್ಲಿ ಅಚ್ಚರಿಯಾದರೂ ಏನಿದೆ? ಅಂದಹಾಗೆ, ಜನಪ್ರಿಯ ವಿಷಯಗಳ ಸುತ್ತ ಪ್ರತಿಭಟನೆಗಳನ್ನು  ಆಯೋಚಿಸುವವರೆಲ್ಲ ಇಂಥ ರಾಜಕೀಯದ ವಿರುದ್ಧ ಜನಜಾಗೃತಿ ಮೊಡಿಸದಿದ್ದರೆ ಭವಿಷ್ಯದಲ್ಲಿ, 'ಬಡತನ' ಎಂಬ ಪದವನ್ನೇ ರಾಜಕಾರಣಿಗಳು  ನಾಪತ್ತೆ ಮಾಡಿಯಾರು.

Monday 10 December 2012

ದಾದಿಯನ್ನು ಕೊಲೆಗೈದು ಅಡಗಿ ಕೂತ ಮಾಧ್ಯಮ

ಜೆಸಿಂತಾ

  ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಚರ್ಚೆಗೆ ಒಳಗಾಗಿದೆ. ಮೇಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಟಿಯನ್ ಎಂಬ ಆಸ್ಟ್ರೇಲಿಯದ ಇಬ್ಬರು ರೇಡಿಯೋ ನಿರೂಪಕರು ನಾಪತ್ತೆಯಾಗಿದ್ದಾರೆ. ‘ಇಂಗ್ಲೆಂಡಿನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೆಸಿಂತಾರನ್ನು ಕೊಂದ ಪಾಪಿಗಳು ನೀವು..' ಎಂದು ಫೇಸ್‍ಬುಕ್‍ನಲ್ಲಿ ಸಾವಿರಾರು ಮಂದಿ ಇವರನ್ನು ದೂಷಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಹದಿಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿ ಫೇಸ್ ಬುಕ್‍ನಲ್ಲಿ ಇವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ, ಮೇಲುನೋಟಕ್ಕೆ ಇವರಿಬ್ಬರು ಕೊಲೆಗಾರರೇ ಅಲ್ಲ. ಆಸ್ಟ್ರೇಲಿಯಾದ ಟುಡೇ ಎಫ್.ಎಂ. ಎಂಬ ರೇಡಿಯೋದ ನಿರೂಪಕರಾದ ಇವರು ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿದರು. ‘ನಿಮ್ಮಲ್ಲಿ ದಾಖಲಾಗಿರುವ ರಾಜಕುಮಾರ ವಿಲಿಯಮ್ಸ್ ರ  ಪತ್ನಿ ಕೇಟ್‍ಳ ಆರೋಗ್ಯ ಮಾಹಿತಿಯನ್ನು ಕೊಡಿ'.. ಅಂತ ವಿನಂತಿಸಿದರು. ತಾವು ಬ್ರಿಟನ್ನಿನ ರಾಣಿ ಎಲಿಜಬೆತ್ ಮತ್ತು ರಾಜಕುಮಾರ ವಿಲಿಯಮ್ಸ್ ರ  ತಂದೆ ಚಾರ್ಲ್ಸ್  ಮಾತಾಡುತ್ತಿರುವುದು ಅಂತಲೂ ಹೇಳಿದರು. ದೂರವಾಣಿ ಕರೆಯನ್ನು ಸ್ವೀಕರಿಸಬೇಕಿದ್ದ ರಿಸೆಪ್ಶನ್ ಕೆಲಸ ಮುಗಿಸಿ ಹೋಗಿದ್ದರಿಂದ ದಾದಿ ಜೆಸಿಂತಾ ಅದನ್ನು ಸ್ವೀಕರಿಸಿ ಕೇಟ್‍ಳನ್ನು ಆರೈಕೆ ಮಾಡುತ್ತಿದ್ದ ದಾದಿಗೆ ವರ್ಗಾಯಿಸಿದಳು. ಆಕೆ ಎಲ್ಲ ಮಾಹಿತಿಯನ್ನೂ ಅವರಿಗೆ ನೀಡಿದಳು. ಇದಾಗಿ ಎರಡು ದಿನಗಳ ಬಳಿಕ ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಳು.
  ಮಾಧ್ಯಮಗಳ ಮೇಲೆ ಇವತ್ತು ಇರುವ ಆರೋಪ ಏನೆಂದರೆ, ಅವು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತವೆ ಅನ್ನುವುದು. ಪತ್ರಿಕೆಯ ಮಾಲಿಕ, ಸಂಪಾದಕ ಮತ್ತು ವರದಿಗಾರನ ಮರ್ಜಿಗೆ ತಕ್ಕಂತೆ ಸುದ್ದಿಗಳು ತಯಾರಾಗುತ್ತವೆ ಎಂಬುದು. ಇವತ್ತು ಪತ್ರಿಕೆಯೊಂದಕ್ಕೆ ನಿರ್ದಿಷ್ಟ ಪಕ್ಷ  ಇಲ್ಲವೇ ವ್ಯಕ್ತಿಯ ಮೇಲೆ ಒಲವು ಇದ್ದರೆ, ಆ ಪಕ್ಷದ ಪರ ಜನರ ಅಲೆಯಿದೆ ಎಂಬಂತೆ ಸುದ್ದಿಗಳನ್ನು ರಚಿಸುವುದಿದೆ. ವ್ಯಕ್ತಿ ಎಷ್ಟೇ ಭ್ರಷ್ಟನಾಗಿದ್ದರೂ ಜನರ ಮಧ್ಯೆ ಅವು ಚರ್ಚೆಯಾಗದಂತೆ ನೋಡಿಕೊಳ್ಳುತ್ತಾ, ವ್ಯಕ್ತಿಯನ್ನು ಮೆರೆಸುವ, ಅನುಕಂಪ ಪೂರಿತ ಲೇಖನಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರಕಟಿಸುವುದೂ ಇದೆ. ವಿಶೇಷವಾಗಿ, ಬಾಬರಿ ಮಸೀದಿಯನ್ನು ಉರುಳಿಸಿದ ದಿನಗಳಲ್ಲಿ ಮತ್ತು ಆ ಬಳಿಕದ ಕೋಮು ಉದ್ವಿಘ್ನತೆಯ ವೇಳೆಯಲ್ಲೆಲ್ಲಾ ಕೆಲವೊಂದು ಪತ್ರಿಕೆಗಳು ಈ ಗುಣವನ್ನು ಧಾರಾಳ ಪ್ರದರ್ಶಿಸಿವೆ. ಗುಜರಾತ್ ಹತ್ಯಾಕಾಂಡವನ್ನು ಮೃದು ಪದಗಳಲ್ಲಿ ಖಂಡಿಸುವ ಲೇಖನಗಳನ್ನು ಪ್ರಕಟಿಸುತ್ತಲೇ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೋದಿಯ ಸಿದ್ಧಾಂತದಡಿಯಲ್ಲಿ ಹತ್ಯಾಕಾಂಡವನ್ನು ಸಮರ್ಥಿಸುವ ದುಪ್ಪಟ್ಟು ಲೇಖನಗಳನ್ನು ಪ್ರಕಟಿಸಿದ್ದೂ ಇವೆ. ಈ ಮನಃಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಬೇಕಾದರೆ ಎಲ್ಲಾದರೂ ಬಾಂಬ್ ಸ್ಫೋಟವಾಗಬೇಕು. ಆಗ ಕೆಲವು ಪತ್ರಿಕೆಗಳ ಸುದ್ದಿ ಮತ್ತು ವಿವರಗಳು ಎಷ್ಟು ಅಸಹ್ಯ ಆಗಿರುತ್ತವೆ ಅಂದರೆ, ಇತರ ಯಾವ ಪತ್ರಕರ್ತರಿಗೂ ಸಿಗದ 'ಮೂಲಗಳ ವಿವರಗಳು' ಅವಕ್ಕೆ ಸಿಕ್ಕಿರುತ್ತವೆ. ನಿಜವಾಗಿ, ಮಾಧ್ಯಮಗಳ ಈ ಮನಸ್ಥಿತಿಯು ಸಾರ್ವಜನಿಕವಾಗಿ ಚರ್ಚೆಯಲ್ಲಿರುವಾಗಲೇ ಜೆಸಿಂತಾ ಸಾವಿಗೀಡಾಗಿದ್ದಾಳೆ. ಇದು ಬರೇ ಆತ್ಮಹತ್ಯೆಯಲ್ಲ, ಸುಳ್ಳಿನ ಪತ್ರಿಕೋದ್ಯಮಕ್ಕೆ ಓರ್ವ ದುರ್ಬಲ ದಾದಿ ತೋರಿದ ಪ್ರತಿಭಟನೆ. ಆದ್ದರಿಂದಲೇ ಆತ್ಮಹತ್ಯೆ ಎಂಬ ನಾಲ್ಕಕ್ಷರಗಳಲ್ಲಿ ನಾವು ಈ ಸಾವಿಗೆ ಸಮಾಧಿಯನ್ನು ಕಟ್ಟಬಾರದು. ಅಂದಹಾಗೆ, ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ರಾಜಕುಮಾರಿ ಕೇಟ್ ದಾಖಲಾಗಿದ್ದುದು ಗರ್ಭದ ತಪಾಸಣೆಗಾಗಿ. ದೂರವಾಣಿ ಕರೆಯನ್ನು ದಾದಿಗೆ ವರ್ಗಾಯಿಸುವ ಸ್ವಾತಂತ್ರ್ಯ ಜೆಸಿಂತಾಳಿಗೆ ಇಲ್ಲದಿದ್ದರೂ ಕರೆ ಮಾಡಿದವರ ಸುಳ್ಳನ್ನು ನಂಬಿ ಆಕೆ ವರ್ಗಾಯಿಸಿದ್ದಳು. ಆದ್ದರಿಂದಲೇ ಆಕೆ ಆಸ್ಪತ್ರೆಯ ಅಧಿಕಾರಿಗಳ ತರಾಟೆಗೂ ಒಳಗಾದಳು..
  ಇಷ್ಟಕ್ಕೂ, ಗರ್ಭದಾರಣೆ ಎಂಬುದು ತೀರಾ ಖಾಸಗಿ ವಿಚಾರ. ರಾಜಕುಟುಂಬವಾದರೂ ಕೂಲಿ ಕಾರ್ಮಿಕನ ಕುಟುಂಬವಾದರೂ ಎಲ್ಲದಕ್ಕೂ ಖಾಸಗಿತನ ಎಂಬುದಿದೆ. ಅದಕ್ಕೆ ಕ್ಯಾಮರಾ ಇಡುವುದು ಎಷ್ಟು ಸರಿ?  ಪತ್ರಿಕೋದ್ಯಮಕ್ಕೆ ಸುಳ್ಳು ಅನಿವಾರ್ಯವೇ? ತಾನು ಇಂತಿಂಥ ಸುದ್ದಿಯನ್ನು, ಇಂತಿಂಥವರಲ್ಲಿ ಸುಳ್ಳು ಹೇಳಿ, ವಂಚಿಸಿ ಪಡಕೊಂಡೆ ಎಂದು ಯಾವ ಪತ್ರಕರ್ತರೇ ಆಗಲಿ ಬಹಿರಂಗವಾಗಿ ಹೇಳಿಕೊಳ್ಳಬಲ್ಲರೇ? ಅಂದಹಾಗೆ, ಭ್ರಷ್ಟಾಚಾರಕ್ಕೂ ಗರ್ಭಧಾರಣೆಯಂಥ ಖಾಸಗಿ ಸಂಗತಿಗಳಿಗೂ ಖಂಡಿತ ವ್ಯತ್ಯಾಸ ಇದೆ. ಭ್ರಷ್ಟಾಚಾರ ವ್ಯಕ್ತಿಯ ಖಾಸಗಿ ಸಂಗತಿಯಲ್ಲ. ಅಂತಹವರನ್ನು ಕಾನೂನಿನ ಮುಂದೆ ತರುವುದಕ್ಕಾಗಿ ಕೆಲವೊಮ್ಮೆ ಸ್ಟಿಂಗ್ ಆಪರೇಶನ್‍ನಂಥ ಚಟುವಟಿಕೆ ಅನಿವಾರ್ಯ ಆಗಿರಬಹುದು. ಹಾಗಂತ ತೀರಾ ಖಾಸಗಿ ವಿಚಾರಕ್ಕೂ ಸುಳ್ಳಿನ ಮುಖಾಂತರ ನುಸುಳತೊಡಗಿದರೆ ಅದನ್ನು ಹೇಗೆ ಸಮರ್ಥಿಸುವುದು?
  ಮಾಧ್ಯಮ ಪೈಪೋಟಿಯು ಇವತ್ತು ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ರೋಚಕ ಸುದ್ದಿಯನ್ನು ಕೊಡುವ ಧಾವಂತದಲ್ಲಿ ಸರಿ-ತಪ್ಪುಗಳನ್ನೇ ಕಡೆಗಣಿಸುವಷ್ಟು. ರೋಚಕ ಸುದ್ದಿ ಸಿಗದೇ ಹೋದರೆ ಅಂಥದ್ದೊಂದು ಸುದ್ದಿಯನ್ನು ಸೃಷ್ಟಿಸುವ ಸಣ್ಣತನ ಕೂಡ ಇವತ್ತು ಪತ್ರಿಕಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿವೆ. ದುಡ್ಡು ಪಡಕೊಂಡು ಸುದ್ದಿ ತಯಾರಿಸುವ ಪತ್ರಿಕೆಗಳೂ ಪತ್ರಕರ್ತರೂ ಇವತ್ತಿದ್ದಾರೆ. ಇಂಥ ಮನಸ್ಥಿತಿಯು ಕ್ರಮೇಣ ಪತ್ರಕರ್ತರು ಮತ್ತು ಪತ್ರಿಕೆಗಳ ಕುರಿತಂತೆ ಸಾರ್ವಜನಿಕರಲ್ಲಿ ಗೌರವವನ್ನು ಕಡಿಮೆಗೊಳಿಸಲಾರದೇ? ಒಂದಷ್ಟು ಕಾಸು ಕೊಟ್ಟರೆ ಆತ/ಕೆ ಯಾವ ಸುಳ್ಳನ್ನೂ ಗೀಚಬಹುದು ಎಂದು ಸಾರ್ವಜನಿಕರು ಪತ್ರಕರ್ತರನ್ನು ನೋಡಿ ಹೇಳುವಂಥ ಸನ್ನಿವೇಶ ಸೃಷ್ಟಿಯಾಗಿ ಬಿಟ್ಟರೆ ಏನಾಗಬಹುದು? ಈಗಾಗಲೇ ಝೀ ಟಿ.ವಿ.ಯ ಸಂಪಾದಕರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಿಜವಾಗಿ, ಪತ್ರಿಕಾರಂಗ  ಸುದ್ದಿಯಲ್ಲಿರಬೇಕಾದುದು ಕೊಲೆ ಆರೋಪಿಯಾಗಿಯೋ, ಭ್ರಷ್ಟಾಚಾರಿಯಾಗಿಯೋ ಅಲ್ಲ. ಸಮಾಜದ ಅಂಕು-ಡೊಂಕುಗಳಿಗೆ ಕನ್ನಡಿ ಹಿಡಿಯುವವರು ಸ್ವಯಂ ಅಂಕು-ಡೊಂಕಾಗಿದ್ದರೆ ಸಮಾಜ ಅವರ ಬಗ್ಗೆ ಯಾವ ಬಗೆಯ ಅಭಿಪ್ರಾಯವನ್ನು ಇಟ್ಟುಕೊಳ್ಳಬಹುದು?
  ಜೆಸಿಂತಾಳ ಸಾವು ಪ್ರತಿಯೋರ್ವ ಪತ್ರಕರ್ತೆ/ರ್ತನನ್ನೂ ಚಿಂತನೆಗೆ ಒಳಪಡಿಸಬೇಕು. 'ಸುಳ್ಳಿನ ಪತ್ರಿಕೋದ್ಯಮದಲ್ಲಿ ತನ್ನ ಪಾತ್ರ ಏನಿದೆ' ಎಂಬ ಬಗ್ಗೆ ಎದೆಗೆ ಕೈಯಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾಕೆಂದರೆ ಒಂದೇ ಒಂದು ಸುಳ್ಳು ವಾಕ್ಯವು ಸಾವಿರಾರು ಮಂದಿಯ ಸಾವಿಗೆ, ದುಃಖಕ್ಕೆ, ಕಣ್ಣೀರಿಗೆ ಕಾರಣವಾಗಬಹುದು. ಆದ್ದರಿಂದ ಪತ್ರಕರ್ತ/ರ್ತೆ ಸತ್ಯವಂತನಾಗಲಿ. ಜೆಸಿಂತಾಳ ಆತ್ಮಹತ್ಯೆ ಪತ್ರಿಕಾ ರಂಗವನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗಲಿ.

Monday 3 December 2012

ದೇವನಾಗುವ ಮಾನವ ಮತ್ತು ಮಾನವನಲ್ಲದ ದೇವ


  ಮನುಷ್ಯ ಮತ್ತು ದೇವರ ನಡುವೆ ಇರುವ ವ್ಯತ್ಯಾಸ ಏನು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಮನುಷ್ಯನಿಗಿರುವಂತೆ ದೇವನಿಗೆ ದೌರ್ಬಲ್ಯಗಳು ಇರುವುದಿಲ್ಲ. ದೌರ್ಬಲ್ಯಗಳಿರುವವ ದೇವನಾಗಲು ಸಾಧ್ಯವೂ ಇಲ್ಲ. ತಿನ್ನುವ, ಕುಡಿಯುವ, ಅನಾರೋಗ್ಯಕ್ಕೆ ಒಳಗಾಗುವ, ನಿದ್ದೆ ಮಾಡುವ, ಪತ್ನಿ ಮಕ್ಕಳನ್ನು ಹೊಂದುವ, ಸಾಯುವ.. ಹೀಗೆ ಒಂದು ಮಿತಿಯೊಳಗೆ ಮನುಷ್ಯ ಬದುಕುತ್ತಿರುತ್ತಾನೆ. ಆದರೆ ದೇವ ಹಾಗಲ್ಲ. ಅವನಿಗೆ ನಿದ್ದೆಯಿಲ್ಲ. ಮಕ್ಕಳಿಲ್ಲ. ಕುಟುಂಬ ಇಲ್ಲ. ಆತ ತಿನ್ನುವುದಿಲ್ಲ. ಬದುಕಿಸುವ ಮತ್ತು ಸಾಯಿಸುವ ಸಾಮರ್ಥ್ಯ  ಆತನಿಗೆ ಇದೆ. ಆತ ಏಕೈಕ. ಕಾಲಜ್ಞಾನಿ.. ಹೀಗೆ ದೇವನ ಗುರುತು ಮನುಷ್ಯನಿಗಿಂತ ಭಿನ್ನವಾಗಿರುತ್ತದೆ; ಇರಬೇಕು ಕೂಡ. ದುರಂತ ಏನೆಂದರೆ, ಕೆಲವೊಮ್ಮೆ ಮನುಷ್ಯರ ವರ್ತನೆ ಎಷ್ಟು ಬಾಲಿಶ  ಆಗಿರುತ್ತದೆಂದರೆ, ಮನುಷ್ಯರನ್ನೇ ದೇವರಾಗಿಸಿ ಬಿಡುವಷ್ಟು. ದೇವನಿಗೆ ಸಾವಿಲ್ಲ ಎಂದು ಗೊತ್ತಿರುವ ಮನುಷ್ಯರೇ, ಮನುಷ್ಯನನ್ನು ದೇವನ ಸ್ಥಾನದಲ್ಲಿ ಕೂರಿಸಿ ಕೈ ಮುಗಿಯುವಷ್ಟು. ಸದ್ಯ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‍ರು ದೇವನಾಗುವ ಸಿದ್ಧತೆಯಲ್ಲಿದ್ದಾರೆ.
  ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಾಗ್ಲಾಪಾಲಿಯಲ್ಲಿ ನ. 22ರಂದು ಮುಲಾಯಮ್‍ರ ದೇಗುಲಕ್ಕೆ ಶಿಲಾನ್ಯಾಸ ನಡೆದಿದೆ. ಮುಂದಿನ ವರ್ಷದ ಮಾರ್ಚ್ ಗೆ  ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿರುವ ದೇಗುಲಕ್ಕೆ 11 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ.. ಈ ಸುದ್ದಿಗಿಂತ ಒಂದೆರಡು ವಾರಗಳ ಮೊದಲಷ್ಟೇ ಬಾಳಾ ಠಾಕ್ರೆ ಸಾವಿಗೀಡಾಗಿದ್ದರು. ಅವರ ಅಂತ್ಯ ಸಂಸ್ಕಾರ ನಡೆಸಿದ ಜಾಗ ಅಯೋಧ್ಯಯಷ್ಟೇ ಪವಿತ್ರ ಎಂದು ಅವರ ಮಗ ಘೋಷಿಸಿದ್ದರು. ಇವಷ್ಟೇ ಅಲ್ಲ, ಜಯಲಲಿತಾಗೆ, ನಟಿ ಖುಷ್ಬೂಗೆ.. ಈ ಹಿಂದೆ ದೇಗುಲ ನಿರ್ಮಾಣ ಆಗಿದೆ. ಅವರು ಮನುಷ್ಯರಂತೆ ವರ್ತಿಸಿದಾಗ, ಕಟ್ಟಿದ ಮಂದಿಯೇ ಅದನ್ನು ಒಡೆದದ್ದೂ ಇದೆ. ನಿಜವಾಗಿ, ದೇವನಾಗಲು ಹೊರಟ ಎಲ್ಲ ಮನುಷ್ಯರೂ ಈ ಜಗತ್ತಿನಲ್ಲಿ ತೀವ್ರ ವೈಫಲ್ಯಕ್ಕೆ ಒಳಗಾಗಿದ್ದಾರೆ. ಸಾಯಿಬಾಬ ಜೀವಂತ ಇದ್ದಾಗ, ಅನೇಕರ ಪಾಲಿಗೆ ದೇವರಾಗಿದ್ದರು. ಅವರ ವ್ಯಕ್ತಿತ್ವ, ಸಮಾಜ ಸೇವೆ, ಪವಾಡವನ್ನು ನೋಡಿದ ಇಲ್ಲವೇ ಆಲಿಸಿದ ಮಂದಿ ಸಾಯಿಬಾಬ ಮನುಷ್ಯರಲ್ಲ ಅಂತ ತೀರ್ಮಾನಿಸಿದರು. ಫೋಟೋ ಇಟ್ಟು ಪೂಜಿಸತೊಡಗಿದರು. ಆದರೆ ಯಾವಾಗ ಅವರು ಅನಾರೋಗ್ಯ ಪೀಡಿತರಾದರೋ ಅದೇ ಜನ ಆಸ್ಪತ್ರೆಯ ಹೊರಗೆ ನಿಂತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸತೊಡಗಿದರು. ಒಂದು ರೀತಿಯಲ್ಲಿ, ಬಾಬಾ ದೇವ ಅಲ್ಲ ಅನ್ನುವುದನ್ನು ಅವರ ಪ್ರಾರ್ಥನೆಯೇ ಸಾಬೀತುಪಡಿಸುತ್ತಿತ್ತು. ಇಲ್ಲದಿದ್ದರೆ ಓರ್ವ ದೇವನಿಗೆ ಇನ್ನಾವುದೋ ದೇವನಲ್ಲಿ ಪ್ರಾರ್ಥಿಸುವುದಕ್ಕೆ ಅರ್ಥವಾದರೂ ಏನು? ಕೊನೆಗೆ ಬಾಬಾ ಸಾವಿಗೀಡಾದಾಗ ಅವರ ಬಗ್ಗೆ ಇದ್ದ 'ದೇವ' ಕಲ್ಪನೆಯ ಪ್ರಭಾವಳಿ ಇನ್ನಷ್ಟು ಚಿಕ್ಕದಾಯಿತು. ಅವರ ಖಾಸಗಿ ಕೋಣೆಯಲ್ಲಿ ಕೋಟಿಗಟ್ಟಲೆ ಸಂಪತ್ತು ಪತ್ತೆಯಾದಾಗ 'ದೇವ' ಮತ್ತೆ ಸಣ್ಣವನಾದ.
  ನಿಜವಾಗಿ, ಭ್ರಷ್ಟ ರಾಜಕಾರಣಿಗಳು ಈ ಸಮಾಜದ ಪಾಲಿಗೆ ಎಷ್ಟು ಅಪಾಯಕಾರಿಯೋ, ಅದಕ್ಕಿಂತಲೂ ಮನುಷ್ಯ ದೇವರುಗಳು ಅಪಾಯಕಾರಿಗಳಾಗಿದ್ದಾರೆ. ರಾಜಕಾರಣಿಗಳನ್ನು ಭ್ರಷ್ಟರು ಎಂದು ಕರೆಯುವುದಕ್ಕೆ, ಸಮಾಜದ ತೀರಾ ಕಟ್ಟಕಡೆಯ ವ್ಯಕ್ತಿಗೂ ಒಂದು ಹಂತದ ವರೆಗೆ ಸ್ವಾತಂತ್ರ್ಯ ಇದೆ. ಭ್ರಷ್ಟರನ್ನು ವೇದಿಕೆಯಲ್ಲಿ ನಿಂತು ತೀವ್ರವಾಗಿ ಟೀಕಿಸುವುದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಮನುಷ್ಯ ದೇವರುಗಳು ಹಾಗಲ್ಲ. ಅವರು ತಮ್ಮ ಸುತ್ತ ಒಂದು ಪ್ರಭಾವಳಿಯನ್ನು ಬೆಳೆಸಿಕೊಂಡಿರುತ್ತಾರೆ. ಪ್ರಶ್ನಿಸದೇ ಒಪ್ಪಿಕೊಳ್ಳುವಂಥ ಮುಗ್ಧ ಭಕ್ತಸಮೂಹವನ್ನು ಸೃಷ್ಟಿಸಿರುತ್ತಾರೆ. ಆದ್ದರಿಂದಲೇ ಕೆಲವರಿಗೆ ದೇವರಾಗಲು, ಕಾಲಿಗೆ ಬೀಳಿಸಿಕೊಳ್ಳಲು ವಿಪರೀತ ಆಸಕ್ತಿಯಿರುವುದು. ರಾಜಕಾರಣಿಗಳನ್ನೂ ಕಾಲಬುಡಕ್ಕೆ ಬರುವಂತೆ ಮಾಡುವ ಸಾಮರ್ಥ್ಯವಿರುವುದು ಮನುಷ್ಯ ದೇವರುಗಳಿಗೆ ಮಾತ್ರ. ಮುಲಾಯಂ ಸಿಂಗ್ ದೇವರಾಗುವುದರಿಂದ ಜನರಿಗೆ ಲಾಭ ಇದೆಯೋ ಇಲ್ಲವೋ ಆದರೆ ಅವರ ಪಕ್ಷಕ್ಕಂತೂ ಖಂಡಿತ ಲಾಭ ಇದೆ. ಅವರ ದೇಗುಲ, ಸಮಾಜವಾದಿ ಪಕ್ಷದ ಕಾರ್ಯಕರ್ತರ ಪ್ರತಿಜ್ಞಾ  ಸ್ಥಳವಾಗಿ ಮಾರ್ಪಡಲೂಬಹುದು. ಆದ್ದರಿಂದ ದೇವನ ನಿಜವಾದ ಪರಿಚಯ ಸಮಾಜಕ್ಕೆ ಆಗಬೇಕಾದ ಅಗತ್ಯ ಇದೆ. ಮನುಷ್ಯನಂತೆ ದೇವನಿಗೆ ಹಸಿವಾಗುತ್ತದೆಂದಾದರೆ ಅದು ದೇವನಾಗಲು ಸಾಧ್ಯವಿಲ್ಲ. ನಿದ್ದೆ ಮಾಡುವುದು ಮನುಷ್ಯನ ಸ್ವಭಾವ, ದುಡ್ಡು ಮಾಡುವುದೂ ಮನುಷ್ಯನ ಗುಣ. ಕಾಯಿಲೆ ಬಾಧಿಸುವುದು, ಸಾಯುವುದು, ನಾಳೆ ಏನಾಗುತ್ತದೆಂಬುದರ ಅರಿವಿರದಿರುವುದು.. ಎಲ್ಲವೂ ಮನುಷ್ಯನ ದೌರ್ಬಲ್ಯಗಳು. ಇವು ದೇವನಿಗೂ ಇದ್ದರೆ ಮತ್ತೆ ದೇವನ ಅಗತ್ಯವಾದರೂ ಏನಿರುತ್ತದೆ? ವಿಶೇಷ ಏನೆಂದರೆ, ಮುಲಾಯಮ್‍ರ ಸಹಿತ ನಮ್ಮ ನಡುವೆ ಯಾರೆಲ್ಲ ವಿಗ್ರಹಗಳಲ್ಲಿ ಇವತ್ತು ಬಂಧಿಸಲ್ಪಟ್ಟಿದ್ದಾರೋ ಅಥವಾ ದೇವನ ಫೋಸು ಕೊಟ್ಟು ಭಕ್ತ ಸಮೂಹವನ್ನು ಸೃಷ್ಟಿಸಿಕೊಂಡಿದ್ದಾರೋ ಅವರೆಲ್ಲರಿಗೂ ಈ ದೌರ್ಬಲ್ಯಗಳಿವೆ ಎಂಬುದು. ನಮ್ಮ ನಡುವೆ ಮನುಷ್ಯರಾಗಿ ಗುರುತಿಸಿಕೊಂಡು ಆ ಬಳಿಕ ದೇವರಾದವರೆಲ್ಲ ಆ ಪಟ್ಟಕ್ಕೆ ಏರಿದ ಬಳಿಕವೂ ಮೊದಲಿನ ಅಭ್ಯಾಸವನ್ನು ಬಿಟ್ಟಿದ್ದೇನೂ ಇಲ್ಲ. ಅವರು ದೇವರಾದ ಬಳಿಕವೂ ನಿದ್ದೆ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ.. ಇದುವೇ ಅವರು ದೇವರಲ್ಲ ಅನ್ನುವುದನ್ನು ಸಾಬೀತುಪಡಿಸುತ್ತದಲ್ಲವೇ?
  ದೇವನ ಫೋಸು ಕೊಟ್ಟು ಜನರನ್ನು ವಂಚಿಸುತ್ತಿರುವ ಕಪಟ ದೇವರುಗಳನ್ನೆಲ್ಲಾ ತಿರಸ್ಕರಿಸಿ, ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂದು ಬಲವಾಗಿ ಘೋಷಿಸಬೇಕಾದ ಅಗತ್ಯ ಇವತ್ತು ಸಾಕಷ್ಟಿದೆ. ಯಾಕೆಂದರೆ ಧರ್ಮ ಇಲ್ಲವೇ ದೇವರ ಹೆಸರಲ್ಲಿ ಜನಸಾಮಾನ್ಯರನ್ನು ವಂಚಿಸುವಷ್ಟು ಸುಲಭದಲ್ಲಿ ಇನ್ನಾವುದರಿಂದಲೂ ವಂಚಿಸಲು ಸಾಧ್ಯವಿಲ್ಲ ಎಂಬುದು ದೇವರಾಗಬಯಸುವ ಎಲ್ಲರಿಗೂ ಗೊತ್ತು. ದೇವರ ಬಗ್ಗೆ ದುರ್ಬಲ ಕಲ್ಪನೆಗಳನ್ನು ಇಟ್ಟುಕೊಂಡ ಮಂದಿಯನ್ನು ಇಂಥವರು ಸುಲಭದಲ್ಲಿ ಬಲೆಗೆ ಬೀಳಿಸುತ್ತಲೂ ಇರುತ್ತಾರೆ. ಮುಲಾಯಮ್‍ಗೆ ದೇಗುಲ ನಿರ್ಮಾಣವಾಗುವುದರ ಹಿಂದೆ ಇಂಥದ್ದೊಂದು ಉದ್ದೇಶ ಇರಲೂಬಹುದು. ಇಂಥ ನಕಲಿಗಳನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ ಗೊತ್ತಿರಬೇಕಾದುದು ಬಹಳ ಅಗತ್ಯ. ಆ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ ಜನರು ಯಶಸ್ವಿಯಾದರೆ ಆ ಬಳಿಕ ದೇವಮಾನವರಿಗೆ ಭಕ್ತರಿರುವುದಕ್ಕೆ ಸಾಧ್ಯವೂ ಇಲ್ಲ..

Tuesday 27 November 2012

ರೆಸ್ಟೋರೆಂಟ್ ಗಳೆಂಬ ಮನೆಯಲ್ಲಿ ಹೆತ್ತವರು ಮತ್ತು ಮಕ್ಕಳು


  ಈ ಪತ್ರಿಕಾ ಸುದ್ದಿಗಳನ್ನು ಓದಿ
1. ಪ್ರೀತಿಸಿದ ಯುವಕನ ಜೊತೆ ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧವೆಯಾದ ತನ್ನ ತಾಯಿಯನ್ನು ಪ್ರಿಯಕರನ ಜೊತೆ ಸೇರಿ ಮಗಳು ಕೊಂದು ಹಾಕಿದ ಘಟನೆ ರೋಹ್ಟಕ್‍ನಲ್ಲಿ ನಡೆದಿದೆ. ಯುವತಿಗೆ 16 ವರ್ಷ.                             - 2012 ನವೆಂಬರ್ 23
2. ಪತ್ನಿಯೊಂದಿಗೆ ಜಗಳವಾಡಿದ ಪತಿ, ತನ್ನ ಮೊವರು ಪುಟ್ಟ ಹೆಣ್ಣು ಮಕ್ಕಳನ್ನು ಗುಂಡಿಟ್ಟು ಕೊಂದಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಆರೋಪಿ ಮಾಜಿ ಯೋಧ.     - 2012 ನವೆಂಬರ್ 23
3. ಎಲ್‍ಕೆಜಿ ವಿದ್ಯಾರ್ಥಿಯಾಗಿರುವ 4 ವರ್ಷದ ಬಾಲಕನಿಗೆ ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಶಿಕ್ಷಕಿಯೊಬ್ಬಳು ಮೊತ್ರ ಕುಡಿಸಿದ ಘಟನೆ ನಡೆದಿದೆ.            - 2012 ನವೆಂಬರ್ 23
  ಕೇವಲ ಒಂದೇ ದಿನ ವರದಿಯಾದ ಘಟನೆಗಳಿವು. ಇಲ್ಲಿರುವ ಸುದ್ದಿಗಳಿಗೆ ವ್ಯಾಖ್ಯಾನದ ಅಗತ್ಯವಿಲ್ಲ. ರಾಜಕೀಯ, ಸಿನಿಮಾ ಅಥವಾ ಕ್ರೀಡಾ ಸುದ್ದಿಗಳನ್ನು ಓದಿದಂತೆ ಈ ಮೇಲಿನ ಸುದ್ದಿಗಳನ್ನು ಓದಿ ಮುಗಿಸುವುದಕ್ಕೆ ಸಾಧ್ಯವೂ ಆಗುತ್ತಿಲ್ಲ. ಅಷ್ಟಕ್ಕೂ, ಇಂಥ ಘಟನೆಗಳು ಇವತ್ತಿನ ದಿನಗಳಲ್ಲಿ ಯಾವಾಗಲಾದರೊಮ್ಮೆ ನಡೆಯುವ ಅಪರೂಪದ ಘಟನೆಗಳಾಗಿಯೇನೂ ಉಳಿದಿಲ್ಲವಲ್ಲವೇ? ದುರಂತ ಏನೆಂದರೆ, ಪರಿಸ್ಥಿತಿ ಈ ಮಟ್ಟದಲ್ಲಿದ್ದರೂ ಸಾರ್ವಜನಿಕ ಚರ್ಚೆಯಲ್ಲಿ ಇವು ಅಷ್ಟಾಗಿ ಪರಿಗಣಿತ ವಾಗುತ್ತಿಲ್ಲ ಅನ್ನುವುದು. ರಾಜಕೀಯ ಇಲ್ಲವೇ ಕೋಮು ವಿಷಯಗಳಿಗಾಗಿ ಇಲ್ಲಿ ಎಷ್ಟೆಷ್ಟು ವೇದಿಕೆಗಳು ನಿರ್ಮಾಣವಾಗುತ್ತಿವೆಯೋ ಅದರ 5 ಶೇಕಡದಷ್ಟು ವೇದಿಕೆಗಳೂ ಇಂಥ ವಿಷಯಗಳಿಗಾಗಿ ಸಿದ್ಧವಾಗುತ್ತಿಲ್ಲ ಅನ್ನುವುದು. ಒಂದು ರೀತಿಯಲ್ಲಿ, ಮನುಷ್ಯ ಸಂಬಂಧಗಳನ್ನು ಬೆಳೆಸುವಲ್ಲಿ, ಮೌಲ್ಯಗಳನ್ನು ಹೊಸ ತಲೆಮಾರಿಗೆ ವರ್ಗಾಯಿಸುವಲ್ಲಿ ಗಂಭೀರ ನಿರ್ಲಕ್ಷ್ಯವನ್ನು ತೋರುತ್ತಾ, ರಾಜಕೀಯದಂಥ ಜನಪ್ರಿಯ ಸುದ್ದಿಗಳ ಸುತ್ತ ಅಗತ್ಯಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೇನೋ ಎಂಬ ಅನುಮಾನ ಮೂಡುತ್ತಿದೆ.
  ಒಂದು ಮಗು, ತಾಯಿಯನ್ನು ಕೊಲೆ ಮಾಡುವುದು ಬಿಡಿ ಕನಿಷ್ಠ ಇತರರು ಆಕೆಯನ್ನು ಟೀಕಿಸುವುದನ್ನೂ ಇಷ್ಟಪಡುವುದಿಲ್ಲ. ತಾಯಿಯಂತೂ ತನ್ನೆಲ್ಲವನ್ನೂ ಮಗುವಿಗಾಗಿ ತ್ಯಾಗ ಮಾಡಲು ಸಿದ್ಧವಾಗುತ್ತಾಳೆ. ನಿಜವಾಗಿ, ರಾತ್ರಿಯ ಸಿಹಿ ನಿದ್ದೆಯ ಸಂದರ್ಭದಲ್ಲಿ ಅತ್ತು, ಕೂಗಿ ರಂಪಾಟ ನಡೆಸುವುದು ಮಕ್ಕಳೇ. ಮಗು ದೊಡ್ಡದಾಗುವ ವರೆಗೆ ತಾಯಿ ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದಿರುತ್ತಾಳೆ. ಮಗು ಮಾಡಿದ ಒಂದೆರಡನ್ನು ಅಸಂಖ್ಯ ಬಾರಿ ಸ್ವಚ್ಚ ಮಾಡಿರುತ್ತಾಳೆ. ಸಾಕಷ್ಟು ದುಡ್ಡು ಸುರಿದು ಮಾರುಕಟ್ಟೆಯಿಂದ ಖರೀದಿಸಿ ತಂದ ಬೆಲೆ ಬಾಳುವ ವಸ್ತುವನ್ನು ಮಗು ಒಡೆದು ಹಾಕುತ್ತದೆ. ಕಿಟಕಿಯ, ಶೋಕೇಸಿನ ಗಾಜು ಪುಡಿ ಮಾಡುತ್ತದೆ. ತಾಯಿ ಇಲ್ಲದ ಸಂದರ್ಭದಲ್ಲಿ ಗೋಡೆಯಲ್ಲಿಡೀ ಬಣ್ಣದ ಚಿತ್ತಾರ ಬಿಡಿಸಿರುತ್ತದೆ.. ಒಂದು ವೇಳೆ ಮಗುವನ್ನು ಕೊಲ್ಲುವ ಉದ್ದೇಶ ತಾಯಿಗಿದ್ದರೆ ಅದಕ್ಕಾಗಿ ನೂರಾರು ಕಾರಣಗಳು ಖಂಡಿತ ಮಗುವಿನಲ್ಲಿದೆ. ಆದರೆ ತಾಯಿ ಎಂದೂ ಅವನ್ನು 'ಕೊಲೆ'ಗಿರುವ ಕಾರಣವಾಗಿ ಪರಿಗಣಿಸುವುದೇ ಇಲ್ಲ. ಆದರೆ ಮಗು ಬೆಳೆಯುತ್ತಾ ಹೋದಂತೆ ತಾಯಿ ಮತ್ತು ಮಕ್ಕಳ ಮಧ್ಯೆ ಇರುವ ಈ ಭಾವನಾತ್ಮಕ ನೆಲೆಗಟ್ಟನ್ನು ಅಷ್ಟೇ ಭಾವ ಪೂರ್ಣವಾಗಿ ವ್ಯಕ್ತಪಡಿಸುವ ಸಂದರ್ಭಗಳು ಕಡಿಮೆಯಾಗುತ್ತಿವೆಯೇನೋ ಅನ್ನಿಸುತ್ತಿದೆ. ಇಂದಿನ ದಿನಗಳಲ್ಲಿ ಮನುಷ್ಯ ಸಂಬಂಧಕ್ಕಿಂತ ಹೆಚ್ಚು ಬೆಲೆಯಿರುವುದು ದುಡ್ಡಿಗೆ. ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಐಟಿ, ಬಿಟಿಗಳು ಯುವ ಸಮೂಹದಲ್ಲಿ ಒಂದು ಬಗೆಯ ಅಮಲನ್ನೂ ಉಂಟುಮಾಡುತ್ತಿವೆ. ರಕ್ತ ಸಂಬಂಧಗಳ ಆಚೆ ಭ್ರಾಮಕ ಜಗತ್ತಿನಲ್ಲಿ ಬದುಕುವ ಒಂದು ಪೀಳಿಗೆಗೆ ಅದು ಜನ್ಮ ಕೊಡುತ್ತಿದೆ. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಹೆತ್ತವರಿಗಿಂತ ಹೆಚ್ಚು ಗೊತ್ತಿರುವುದು ತನಗೇ ಎಂಬ ಹುಂಬ ಆಲೋಚನೆಗಳು ಯುವ ಸಮೊಹವನ್ನು ಸಲ್ಲದ ಕೃತ್ಯಗಳಿಗೆ ಕೈ ಹಾಕುವಂತೆ ಪ್ರಚೋದಿಸುತ್ತಿವೆ. ಅಂದಹಾಗೆ, ಇಲ್ಲಿ ಯುವ ಸಮೊಹವನ್ನಷ್ಟೇ ಆರೋಪಿ ಅನ್ನುವಂತಿಲ್ಲ. ಹೆತ್ತವರಿಗೂ ಶಿಕ್ಷಕರಿಗೂ ಮತ್ತು ಸಾಮಾಜಿಕ ವಾತಾವರಣಕ್ಕೂ ಇದರಲ್ಲಿ ಖಂಡಿತ ಪಾಲು ಇದೆ. ಕೆಲವೊಮ್ಮೆ ಹೆತ್ತವರು ತಮ್ಮ ಕರ್ತವ್ಯವನ್ನು ನಿಭಾಯಿಸದೇ ಇರುವುದೂ ಅದಕ್ಕೆ ಕಾರಣ ಆಗಿರುತ್ತದೆ. ಮೊತ್ರ ಕುಡಿಸುವಂಥ ಮನಸ್ಥಿತಿಯ ಶಿಕ್ಷಕರ ಮಧ್ಯೆ ಬೆಳೆಯುವ ಮಗು, ಆರೋಗ್ಯಪೂರ್ಣ ಆಲೋಚನೆಯನ್ನು ಹೊಂದಬೇಕು ಎಂದು ನಾವು ನಿರೀಕ್ಷಿಸುವುದಾದರೂ ಹೇಗೆ? ತನ್ನ ಮಡಿಲಲ್ಲೇ ಬೆಳೆದ ಮಕ್ಕಳನ್ನು ಓರ್ವ ಅಪ್ಪ ಕೊಲ್ಲುತ್ತಾನೆಂದಾದರೆ, ಆತನನ್ನು 'ಹೆತ್ತವರು' ಎಂಬ ಪಟ್ಟಿಯಲ್ಲಿ ಹೇಗೆ ಸೇರಿಸುವುದು? ಒಂದು ರೀತಿಯಲ್ಲಿ ಅಪ್ಪ, ಅಮ್ಮ ಮತ್ತು ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯಬೇಕೋ ಆ ವಾತಾವರಣ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿದೆ. ಮಕ್ಕಳು ಕೇಳಿದಷ್ಟು ಪಾಕೆಟ್ ಮನಿ ಕೊಡುವುದನ್ನೇ ಜವಾಬ್ದಾರಿ ಅಂದುಕೊಂಡಿರುವ ಹೆತ್ತವರು ಮತ್ತು ಅದನ್ನು ಖರ್ಚು ಮಾಡುವುದನ್ನೇ 'ಕರ್ತವ್ಯ' ಅಂದುಕೊಂಡಿರುವ ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿದೆ.
  ಏನೇ ಆಗಲಿ, ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣವಾಗಬೇಕಾದರೆ ಮೊತ್ತಮೊದಲು ಆರೋಗ್ಯಪೂರ್ಣ ‘ಮನೆಯ’ ನಿರ್ಮಾಣವಾಗಬೇಕು. ಮೌಲ್ಯಗಳನ್ನು ಪಾಲಿಸುವ, ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧದ ಪಾವಿತ್ರ್ಯವನ್ನು ಅರಿತಿರುವ ಮನೆ. ಹೆತ್ತವರು ಮತ್ತು ಮಕ್ಕಳು ಆಧ್ಯಾತ್ಮಿಕವಾಗಿ ತರಬೇತುಗೊಳ್ಳುತ್ತಿರುವ ಮನೆ. ಆದರೆ ಇವತ್ತಿನ ದಿನಗಳಲ್ಲಿ ಮನೆ ಎಂಬುದು ರೆಸ್ಟೋರೆಂಟ್‍ನ ಪಾತ್ರ ವಹಿಸುತ್ತಿದೆಯೇ ಹೊರತು ಮನೆಯ ಪಾತ್ರ ಅಲ್ಲ. ಆದ್ದರಿಂದಲೇ, ಮನೆಗಳಿಂದ ಬರಬಾರದ ಸುದ್ದಿಗಳು ಬರತೊಡಗಿವೆ. ಹೀಗಿರುವಾಗ, ಸಾರ್ವಜನಿಕವಾಗಿ ನಾವು ರಾಜಕೀಯವನ್ನೋ ಕ್ರೀಡೆಯನ್ನೋ ಗಂಭೀರ ಚರ್ಚೆಗೊಳಪಡಿಸುತ್ತಾ ಕೂತರೆ 'ಮನೆ' ಸುರಕ್ಷಿತವಾಗುವುದಾದರೂ ಹೇಗೆ? ನಿಜವಾಗಿ, ಇವತ್ತು ಹೆತ್ತವರು, ಮಕ್ಕಳು, ಕುಟುಂಬ.. ಮುಂತಾದ ವಿಷಯಗಳ ಸುತ್ತ ಹೆಚ್ಚು ಹೆಚ್ಚು ಚರ್ಚೆಗಳಾಗಬೇಕಾದ ಅಗತ್ಯ ಇದೆ. ಇಂದಿನ ಯುವ ಪೀಳಿಗೆಯು  ತಮ್ಮ ಹೆತ್ತವರ ಜೊತೆಗಿರುವ ಹಕ್ಕು-ಬಾಧ್ಯತೆಗಳನ್ನು ತಿಳಿಯುತ್ತಾ, ಆ ಬಗ್ಗೆ ಬದ್ಧತೆಯನ್ನು ಪ್ರಕಟಿಸುತ್ತಾ ಬೆಳೆಯಬೇಕಾದ ತುರ್ತಿದೆ. ಇಲ್ಲದಿದ್ದರೆ ಸಾಮಾಜಿಕ ನೆಲೆಗಟ್ಟೇ ಕುಸಿದು ಹೋದೀತು.

Monday 19 November 2012

ಅಡ್ಡಾದಿಡ್ಡಿ ಚಲಿಸಿ ಹೊರಟುಹೋದ ಠಾಕ್ರೆ


‘ದ್ವಂದ್ವ' ಎಂಬ ಪದಕ್ಕೆ ಅತ್ಯಂತ ಒಪ್ಪುವ ವ್ಯಕ್ತಿತ್ವ ಬಾಳಾ ಠಾಕ್ರೆಯದ್ದು. ‘ಫ್ರಿಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಬದುಕನ್ನು ಆರಂಭಿಸಿದ ಅವರು, ಬಳಿಕ ವ್ಯಂಗ್ಯ ಚಿತ್ರಕಾರರಿಗೇ ವಸ್ತುವಾಗಿ ಬಿಟ್ಟರು. ಜಲೀಲ್ ಪಾರ್ಕರ್ ಎಂಬ ಹೃದಯತಜ್ಞನನ್ನು ತನ್ನ ಖಾಸಗಿ ವೈದ್ಯರಾಗಿ ಇಟ್ಟುಕೊಂಡೇ, ಜಲೀಲ್‍ರ ಸಮುದಾಯದ ಮೇಲೆ ಕಟುವಾಗಿ ವರ್ತಿಸಿದರು. ಪಾಕ್ ಕ್ರಿಕೆಟಿಗ ಮಿಯಾಂದಾದ್‍ರನ್ನು ತನ್ನ ಮನೆಯಲ್ಲಿ ಕೂರಿಸಿ ಸತ್ಕರಿಸಿದ್ದೂ ಅವರೇ. ವಾಂಖೇಡೆ ಮೈದಾನದ ಕ್ರಿಕೆಟ್ ಪಿಚ್ ಅನ್ನು ತನ್ನ ಬೆಂಬಲಿಗರ ಮೂಲಕ ಅಗೆಸಿದ್ದೂ ಅವರೇ. ಒಂದು ರೀತಿಯಲ್ಲಿ ತನ್ನ ದ್ವಂದ್ವತನದಿಂದಾಗಿ ಬಾಳಾ ಠಾಕ್ರೆ ಎಂಬ ಮನುಷ್ಯ ಉದ್ದಕ್ಕೂ ಸುದ್ದಿಗೊಳಗಾಗುತ್ತಲೇ ಬದುಕಿದರು.
    ಸಾವು ಎಂಬ ಎರಡಕ್ಷರಕ್ಕೆ 'ಬದುಕು' ಎಂಬ ಅರ್ಥ ಇಲ್ಲ. ಸಾವಿನ ಬಳಿಕ ಏನು, ಪುನರ್ಜನ್ಮ ಇದೆಯೋ ಇಲ್ಲವೋ.. ಮುಂತಾದ ಚರ್ಚೆಗಳೆಲ್ಲ ಸಮಾಜದಲ್ಲಿ ಆಗಾಗ ಕಾಣಿಸಿಕೊಳ್ಳುವುದಕ್ಕೆ ಕಾರಣ ಕೂಡಾ ಸಾವೇ. ಸಾವು ನಿಶ್ಚಿತ ಎಂಬುದು ಸ್ಪಷ್ಟವಾಗಿರುವುದರಿಂದಲೇ ಸಾವಿನ ಬಳಿಕದ ಅವಸ್ಥೆಯ ಕುರಿತಂತೆ ಪ್ರಶ್ನೆಗಳೇಳುವುದು. ನಿಜವಾಗಿ ಕೆಲವರ ಸಾವು ಯಾವ ಮಟ್ಟದಲ್ಲಿರುತ್ತದೆಂದರೆ, ಅದು ಚರ್ಚೆಗೆ ಒಳಗಾಗಲೇ ಬೇಕು ಅನ್ನುವಷ್ಟು. ಠಾಕ್ರೆಯ ಸಾವು ಸಾಮಾಜಿಕವಾಗಿ ಅಂಥದ್ದೊಂದು ತುರ್ತನ್ನು ಸೃಷ್ಟಿಸಿಬಿಟ್ಟಿದೆ. ಈಗಾಗಲೇ ಮಾಧ್ಯಮಗಳಲ್ಲಿ ಠಾಕ್ರೆಯ ಕುರಿತಂತೆ ಧಾರಾಳ ಚರ್ಚೆಗಳಾಗಿವೆ. ಅವರ ಬಗ್ಗೆ ಬಂದಿರುವ ಎಲ್ಲ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ನೋಡಿದರೆ, ಅದು ಠಾಕ್ರೆಗೆ ಖುಷಿ ಕೊಡುವ ರೂಪದಲ್ಲೇನೂ ಇಲ್ಲ. ಠಾಕ್ರೆಯ ಸಾವಿಗೆ ಸಂತಾಪ ಸೂಚಿಸಿದವರು ಕೂಡ ತಮ್ಮ ಭಾಷೆ, ಶೈಲಿಯಲ್ಲಿ ಠಾಕ್ರೆಯನ್ನು ಅನುಸರಿಸಲೂ ಇಲ್ಲ. ಒಂದು ರಾಜಕೀಯ ಪಕ್ಷವನ್ನು ಕಟ್ಟಿ, 86 ವರ್ಷಗಳ ವರೆಗೆ ಅದನ್ನು ಮುನ್ನಡೆಸಿದ ವ್ಯಕ್ತಿಯೊಬ್ಬ ಮರಣ ಹೊಂದುವಾಗ ಕನಿಷ್ಠ ಭಾಷೆಯನ್ನೂ ಇತರರಿಗೆ ಮಾದರಿಯಾಗಿ ಬಿಟ್ಟು ಹೋಗದಿರಲು ಕಾರಣವೇನು? ಅವರ ಅಂತ್ಯ ಸಂಸ್ಕಾರದಲ್ಲಿ ಸೇರಿದ ಬೃಹತ್ ಜನಸ್ತೋಮದಲ್ಲಿ, ಠಾಕ್ರೆ ಏನಾಗಿದ್ದರು ಎಂದು ಕೇಳಿದರೆ ಹೀಗೆಯೇ ಎಂದು ನಿರ್ದಿಷ್ಟವಾಗಿ ಹೇಳಿಬಿಡುವಂಥ ವ್ಯಕ್ತಿತ್ವವೊಂದನ್ನು ಠಾಕ್ರೆ ಉಳಿಸಿ ಹೋಗಿದ್ದಾರೆಯೇ? ಠಾಕ್ರೆಯವರು ಮಾತಾಡುವಾಗಲೆಲ್ಲ ಈ ದೇಶದ ದೊಡ್ಡದೊಂದು ಜನಸಮೂಹ ಆತಂಕ, ಅನುಮಾನದೊಂದಿಗೇ  ಅವರನ್ನು ನೋಡುತ್ತಿದ್ದುದು ಎಲ್ಲರಿಗೂ ಗೊತ್ತು. ಆ ಆತಂಕ ಎಲ್ಲಿಯ ವರೆಗೆ ಮುಂದುವರಿಯಿತೆಂದರೆ, ಅವರ ಅಂತ್ಯಸಂಸ್ಕಾರದ ವರೆಗೂ. ಆಗ ವಾಹನ ಸಂಚಾರ ಸ್ಥಗಿತಗೊಂಡುವು. ಮುಂಬೈಯಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳೂ ರದ್ದುಗೊಂಡುವು. ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದರು. ಮುಂಬೈಯಲ್ಲಿ ಎಲ್ಲ ಟಿ.ವಿ. ಚಾನೆಲ್‍ಗಳೂ ಇತರೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬರೇ ಠಾಕ್ರೆಯನ್ನಷ್ಟೇ ತುಂಬಿಕೊಂಡವು. ಅಂದಹಾಗೆ, ಇದು ಠಾಕ್ರೆಗೆ ಸಲ್ಲಿಸಲಾದ ಗೌರವವೋ ಅಥವಾ ಅವರ ವ್ಯಕ್ತಿತ್ವದ ಪ್ರತಿಫಲನವೋ?
    ನಿಜವಾಗಿ 86ನೇ ವರ್ಷದಲ್ಲಿ ಸಾವಿಗೀಡಾಗುವಾಗ ಠಾಕ್ರೆಗೆ ಯಾವ ಇಮೇಜು ಇತ್ತೋ, ಅದು ಅವರದೇ ಆಯ್ಕೆ ಎಂದು ಹೇಳುವಂತಿಲ್ಲ. ಯಾಕೆಂದರೆ, ಮುಂಬೈಯ ಕೂಲಿ ಕಾರ್ಮಿಕರನ್ನು ಒಟ್ಟು ಸೇರಿಸಿ, ‘ಕಾರ್ಮಿಕ ಆಂದೋಲನ’ ನಡೆಸುವಾಗ, ಠಾಕ್ರೆಗೆ ಈಗಿನಂಥ ಗುರುತೇನೂ ಇರಲಿಲ್ಲ. ಬರಬರುತ್ತಾ ಅವರನ್ನು ಮನುಷ್ಯ ವಿರೋಧಿಗಳು ಬಳಸಿಕೊಂಡರೇನೋ ಎಂಬ ಅನುಮಾನ ಮೂಡುವುದು ಈ ಕಾರಣದಿಂದಲೇ. ಇದಕ್ಕೆ ಇನ್ನೊಂದು ಕಾರಣ, ಅವರ ದ್ವಂದ್ವ ನಿಲುವು. ಬಹುಶಃ ಈ ದೇಶವನ್ನು ತಮ್ಮ ಕನಸಿನ ಹಿಂದೂ ರಾಷ್ಟ್ರವಾಗಿಸಲು ಪ್ರಯತ್ನಿಸುತ್ತಿರುವ ‘ಪರಿವಾರ’ಗಳ ಕೈಯಲ್ಲಿ ಸಿಲುಕಿ ಠಾಕ್ರೆ ತನ್ನತನವನ್ನು ಕಳಕೊಂಡರೇನೋ ಅನ್ನಿಸುತ್ತಿದೆ. ರಾಜಕೀಯ ಮಹತ್ವಾಕಾಂಕ್ಷೆ ಉಳ್ಳವರನ್ನು ಭೇಟಿಯಾಗಿ ಅವರಲ್ಲಿ ವಿವಿಧ ಭ್ರಮೆಗಳನ್ನು ಹುಟ್ಟಿಸಿ, ತಮಗೆ ಬೇಕಾದಂತೆ ಪರಿವಾರ ದುಡಿಸಿಕೊಳ್ಳುವುದೇನೂ ಗುಟ್ಟಾಗಿಲ್ಲ. ಅಣ್ಣಾ ಹಜಾರೆಯರ ಮೇಲೂ ಇಂಥ ಪ್ರಯತ್ನ ನಡೆದಿದೆ. ಕೇಜ್ರಿವಾಲ್‍ರ ತಂಡದಲ್ಲಿ ಪರಿವಾರದ ಮಂದಿಯಿದ್ದಾರೆ ಎಂಬುದು ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಆದ್ದರಿಂದಲೇ ಕಾರ್ಮಿಕರನ್ನು ಒಟ್ಟು ಸೇರಿಸಿ ಏನೋ ಮಾಡಲು ಹೋದ ಠಾಕ್ರೆ ಎಂಬ ಯುವಕನನ್ನು ದ್ವಂದ್ವ ಮನುಷ್ಯನಾಗಿ ಪರಿವಾರ ಬೆಳೆಸಿರಬಹುದು ಅನ್ನುವ ಅನುಮಾನ ಬಲ ಪಡೆಯುವುದು. ಪರಿವಾರದ ಕನಸಿನ ರಾಷ್ಟ್ರ ಕಟ್ಟುವುದಕ್ಕೆ ಬಿಜೆಪಿ ಒಂದಕ್ಕೇ ಸಾಧ್ಯ ಎಂದು ಅದು ನಂಬಿರುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಆದ್ದರಿಂದಲೇ ಠಾಕ್ರೆಯಂಥ ಹತ್ತಾರು ಮಂದಿಯನ್ನು ಅದು ದೇಶದಲ್ಲೆಡೆ ತಯಾರಿಸುತ್ತಲೇ ಇರುತ್ತದೆ. ವಿವಿಧ ಭ್ರಮೆಗಳನ್ನು ಅವರ ತಲೆಯೊಳಗೆ ಹರಡಿ, ಅವರಿಂದ ವಿವಿಧ ಸಂದರ್ಭಗಳಲ್ಲಿ ಹೇಳಿಕೆಗಳನ್ನು ಹೊರಡಿಸುತ್ತಲೂ ಇರುತ್ತದೆ. ಸುಷ್ಮಾ ಸ್ವರಾಜ್, ಜೇಟ್ಲಿ, ಅಡ್ವಾಣಿಗೆ ಹೇಳಲು ಸಾಧ್ಯವಾಗದಂಥ ಅಗ್ಗದ ಮಾತುಗಳನ್ನು ಠಾಕ್ರೆಯಂಥವರಲ್ಲಿ ಹೇಳಿಸಿ ತಮ್ಮ ವಿಚಾರ ಚರ್ಚೆಯಲ್ಲಿರುವಂತೆ ನೋಡಿಕೊಳ್ಳುತ್ತಲೂ ಇರುತ್ತದೆ.
     ಏನೇ ಆಗಲಿ, ಠಾಕ್ರೆ ಹೊರಟು ಹೋಗಿದ್ದಾರೆ. ಅವರಾಡಿದ ಮಾತು, ವರ್ತನೆಗಳಲ್ಲಿ ಅವರದ್ದೆಷ್ಟು, ಬೇರೆಯವರದ್ದೆಷ್ಟು ಎಂದು ವಿಭಜಿಸಿ ನೋಡುವುದಕ್ಕೆ ಸಮಾಜದ ಬಳಿ ಉಪಕರಣವೇನೂ ಇಲ್ಲ. ಆದರೆ ಕೆಲವೊಮ್ಮೆ ಅವರು ತಮ್ಮ ಮಾತಿನ ಮೂಲಕ ಪರಿವಾರವನ್ನೇ ಮುಜುಗರಕ್ಕೆ ಸಿಲುಕಿಸುತ್ತಿದ್ದುದು ಮತ್ತು ಕೆಲವೊಮ್ಮೆ ನಿಷ್ಠನಂತೆ ವರ್ತಿಸುತ್ತಿದ್ದುದೆಲ್ಲ ಅವರೊಳಗಿನ ಗೊಂದಲವನ್ನು ಸೂಚಿಸುತ್ತದೆ. ಬಹುಶಃ ಇನ್ನೇನೋ ಆಗಲು ಬಯಸಿದ ಅವರನ್ನು ದುರ್ಬಳಕೆಗೆ ಒಳಪಡಿಸಲಾಯಿತೋ ಏನೋ? ಅಂತೂ ‘ರಾಜಕಾರಣ’ ಎಂಬ ವಿಶಾಲ ಹುಲ್ಲುಗಾವಲಿನಲ್ಲಿ ಅಡ್ಡಾದಿಡ್ಡಿ ಚಲಿಸಿ ಒಂದಷ್ಟು ಭೀತಿಯನ್ನು ಹುಟ್ಟಿಸಲು ಯಶಸ್ವಿಯಾಗಿರುವರೆಂಬುದನ್ನು ಬಿಟ್ಟರೆ ಉಳಿದಂತೆ ಗೌರವದಿಂದ ಸ್ಮರಿಸಿಕೊಳ್ಳುವುದಕ್ಕೆ ಠಾಕ್ರೆ ಇಲ್ಲಿ ಏನನ್ನೂ ಉಳಿಸಿ ಹೋಗಿಲ್ಲ. ಇದು ಠಾಕ್ರೆಯ ಸೋಲು ಮಾತ್ರವಲ್ಲ, ಅವರನ್ನು ಅನುಸರಿಸುವವರದ್ದೂ.

Monday 12 November 2012

ಬ್ಯಾಲೆನ್ಸ್ ಡ್ ವರದಿಗಾರರ ಮಧ್ಯೆ ನವೀನ್ ಎಂಬ ಪತ್ರಕರ್ತ..


     ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹೆಚ್ಚಿನೆಲ್ಲ ಪತ್ರಿಕೆಗಳು ಮಂಗಳೂರಿನಲ್ಲಿ ಮೊರು ತಿಂಗಳ ಹಿಂದೆ ನಡೆದ ಹೋಮ್ ಸ್ಟೇ  ದಾಳಿಯ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದುವು. ಸಂಪಾದಕೀಯ ಬರೆದಿದ್ದುವು. ಟಿ.ವಿ. ಚಾನೆಲ್ ಗಳಂತೂ ಸುದ್ದಿ ವಿಶ್ಲೇಷಣೆ, ಚಾವಡಿ ಚರ್ಚೆ, ತಜ್ಞರ ಸಂವಾದ ಸಹಿತ ಹತ್ತಾರು ಗಂಟೆಗಳ ಕಾರ್ಯಕ್ರಮವನ್ನು ವಾರಗಳ ತನಕ ಪ್ರಸಾರ ಮಾಡಿದ್ದುವು. ಆದ್ದರಿಂದಲೇ, ಜನಸಾಮಾನ್ಯರಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ ಆ ಪ್ರಕರಣ ಚರ್ಚೆಗೆ ಒಳಗಾದದ್ದು. ಆರೋಪಿಗಳು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರೇ ಆಗಿದ್ದರೂ, ಅವರ ಬಂಧನವಾದದ್ದು. ಒಂದು ರೀತಿಯಲ್ಲಿ, ಈ 'ನೈತಿಕ ಪೊಲೀಸ್ ಗಿರಿ'ಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದುವು. ಮಂಗಳೂರಿನಲ್ಲಂತೂ  ತಿಂಗಳ ಕಾಲ ಪ್ರತಿಭಟನೆ ನಡೆಯಿತು. ನಿಜವಾಗಿ, 'ನೈತಿಕ ಪೊಲೀಸರು' ಎಂಬ ಈ ಮನುಷ್ಯ ವಿರೋಧಿ ತಂಡದ ವಿರುದ್ಧ ಸಾರ್ವಜನಿಕರು ಸಿಡಿದೇಳುವಂತೆ, ಹೈಕೋರ್ಟೇ ಪ್ರತಿಕ್ರಿಯಿಸುವಂತೆ ಜಾಗೃತಿ ಮೂಡಿಸಿದ್ದು ನವೀನ್ ಸೂರಿಂಜೆ ಎಂಬ ಯುವ ಪತ್ರಕರ್ತ. ಅವರು ಸಕಾಲಕ್ಕೆ ಘಟನಾ ಸ್ಥಳಕ್ಕೆ ತಲುಪಿ ವರದಿ ತಯಾರಿಸದೇ ಇರುತ್ತಿದ್ದರೆ, ಇವತ್ತು ದಾಳಿ ನಡೆಸಿದವರು ಹೀರೋಗಳಾಗಿಯೂ ದಾಳಿಗೊಳಗಾದವರು, ‘ಮಾದಕ ವ್ಯಸನಿಗಳು’, ಹೆಣ್ಣಿನ ಮಾರಾಟಗಾರರು.. ಎಂಬೆಲ್ಲ ಬಿರುದು ಹೊತ್ತು ಖಳರಾಗಿಯೂ ಗುರುತಿಸಿಕೊಳ್ಳುವ ಎಲ್ಲ ಸಾಧ್ಯತೆಯೂ ಇತ್ತು. ಆದರೆ ಕಳೆದ ವಾರ ಈ ಪತ್ರಕರ್ತನನ್ನೇ ಹೋಮ್ ಸ್ಟೇ  ದಾಳಿಯ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಷಾದ ಏನೆಂದರೆ, ಸೂರಿಂಜೆ ಬಹಿರಂಗಪಡಿಸಿದ ಸುದ್ದಿಯನ್ನು ಮೊರು ತಿಂಗಳ ಹಿಂದೆ ಮುಖಪುಟದಲ್ಲಿ ಪ್ರಕಟಿಸಿ, ಅದರ ಆಧಾರದಲ್ಲಿ ವಿಶ್ಲೇಷಣೆ, ಚರ್ಚೆಗಳನ್ನು ನಡೆಸಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದ ಹೆಚ್ಚಿನ ಪತ್ರಿಕೆಗಳು ಈ ಬಂಧನಕ್ಕೆ ಅಷ್ಟು ಮಹತ್ವ ಕೊಟ್ಟಿಲ್ಲ ಅನ್ನುವುದು. ಸೂರಿಂಜೆಯ ಬಂಧನವನ್ನು ಮುಖಪುಟದ ಮುಖ್ಯ ಸುದ್ದಿಯಾಗಿಸುವಲ್ಲಿ ಅವೆಲ್ಲ ಬಹುತೇಕ ವಿಫಲವಾದುವು. ನಿಜವಾಗಿ, ಸೂರಿಂಜೆಯ ಬಂಧನ ವಿರುದ್ಧ ರಾಜ್ಯದ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ. ಪತ್ರಕರ್ತರೇ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಒಂದು ವೇಳೆ ಕನ್ನಡ ಪತ್ರಿಕೆಗಳೆಲ್ಲ ಒಂದು ದಿನದ ಮಟ್ಟಿಗೆ ಕೇಜ್ರಿವಾಲ್ ಗೋ  ಗಡ್ಕರಿಗೋ ಸೋನಿಯಾಗೋ ಒಳಪುಟವನ್ನು ಕರುಣಿಸಿ ಕನಿಷ್ಠ ಈ ಪ್ರತಿಭಟನೆಗಳಿಗೆ ಮುಖಪುಟವನ್ನು ನೀಡುತ್ತಿದ್ದರೆ, ಖಂಡಿತ ಅದು ಕನ್ನಡ ಪತ್ರಿಕೋದ್ಯಮದಲ್ಲಿಯೇ ಅಪೂರ್ವ ಸಾಧನೆಯಾಗುತ್ತಿತ್ತು. ರಾಜ್ಯಪಾಲರಿಂದ ಹಿಡಿದು ಜನಸಾಮಾನ್ಯರ ವರೆಗೆ ಪ್ರಕರಣ ಚರ್ಚೆಗೊಳಗಾಗುತ್ತಿತ್ತು. ಓರ್ವ ಪ್ರಾಮಾಣಿಕ ಪತ್ರಕರ್ತನನ್ನು ವ್ಯವಸ್ಥೆ ಹೇಗೆ ಮಟ್ಟ ಹಾಕುತ್ತದೆ ಎಂಬುದರ ವಿಶ್ಲೇಷಣೆ ನಡೆಯುತ್ತಿತ್ತು. ಅಂದ ಹಾಗೆ, ಹೋಮ್ ಸ್ಟೇ  ದಾಳಿಯನ್ನು ಪತ್ರಿಕೆಗಳು ಮುಖಪುಟದಲ್ಲಿಟ್ಟು ಚರ್ಚಿಸಿರದಿರುತ್ತಿದ್ದರೆ ಅದು ದೇಶದಾದ್ಯಂತ ಚರ್ಚೆಗೊಳಗಾಗುವ ಸಾಧ್ಯತೆ ಇತ್ತೇ? ದಾಳಿಕೋರರು ಬಂಧನಕ್ಕೆ ಒಳಗಾಗುತ್ತಿದ್ದರೇ? ಪ್ರಕರಣ ನಡೆದು 3 ತಿಂಗಳಾದರೂ ಬಂಧಿತ ಆರೋಪಿಗಳು ಇನ್ನೂ ಬಿಡುಗಡೆಗೊಳ್ಳದಿರುವುದಕ್ಕೆ ಆ ವರದಿಗಾರಿಕೆಯೇ ಕಾರಣವಲ್ಲವೇ? ಇಷ್ಟಿದ್ದೂ,  ನವೀನ್ ಸೂರಿಂಜೆಯ ದಿಟ್ಟತನಕ್ಕೆ ಹ್ಯಾಟ್ಸಾಪ್ ಹೇಳುವ ಮತ್ತು ಅವರ ಪರ ಜನಾಭಿಪ್ರಾಯವನ್ನು ರೂಪಿಸುವ  ಅವಕಾಶವನ್ನು ಪತ್ರಿಕೆಗಳೇಕೆ ಬಳಸಿಕೊಳ್ಳಲಿಲ್ಲ? ಪತ್ರಕರ್ತರ ಮೇಲಾದ ಅನ್ಯಾಯವನ್ನು ಮುಂಚೂಣಿಯಲ್ಲಿ ನಿಂತು ಖಂಡಿಸುವುದಕ್ಕೆ ಪತ್ರಿಕೆಗಳಿಗೇ ಸಾಧ್ಯವಾಗದಿದ್ದರೆ ಅದನ್ನು ಬೇಜವಾಬ್ದಾರಿ ಎಂದಲ್ಲದೆ ಇನ್ನೇನೆಂದು ಕರೆಯಬೇಕು?
    ನಿಜವಾಗಿ, ರಾಜ್ಯದ ಕರಾವಳಿ ಭಾಗದಲ್ಲಿ ಹೋಮ್ ಸ್ಟೇ  ದಾಳಿಯಂಥ ಪ್ರಕರಣಗಳು ಈ ಮೊದಲು ಹಲವಾರು ನಡೆದಿವೆ. ಮಾತ್ರವಲ್ಲ, ದಾಳಿಗೆ ಒಳಗಾದವರೆಲ್ಲ ಅಪರಾಧಿಗಳಾಗಿ ಮತ್ತು ದಾಳಿಕೋರರು ಮಹಾನ್ ಸಂಸ್ಕೃತಿ ರಕ್ಷಕರಾಗಿ ಬಿಂಬಿತಗೊಂಡದ್ದೂ ಇದೆ. ಯಾಕೆ ಹೀಗೆ ಅಂದರೆ, ಅಂಥ ಪ್ರಕರಣಗಳನ್ನು ವರದಿ ಮಾಡುವಾಗ ಪತ್ರಕರ್ತ ಅಪಾರ ಜಾಗರೂಕತೆ ವಹಿಸುತ್ತಿದ್ದ. ದಾಳಿಕೋರರ ನಿಜ ಮುಖವನ್ನು ಇದ್ದ ಹಾಗೆ ಬಿಂಬಿಸಿಬಿಟ್ಟರೆ ಎಲ್ಲಿ ಅಪಾಯ ಬಂದೊದಗುತ್ತೋ ಎಂಬ ಭೀತಿಯೂ ಅವನಲ್ಲಿತ್ತು.ಆದ್ದರಿಂದ ವರದಿಗಾರಿಕೆಯಲ್ಲಿ ಸಮತೋಲನ (Balance) ಕಾಯ್ದುಕೊಳ್ಳಲೇ ಬೇಕಾಗಿತ್ತು. ಹೀಗೆ ಒಂದು ಬಗೆಯ ಮುಲಾಜು, ರಾಜಿ ಮನೋಭಾವದೊಂದಿಗೆ ಕರಾವಳಿಯಲ್ಲಿ ನಡೆಯುತ್ತಿದ್ದ ವರದಿಗಾರಿಕೆಯನ್ನು ಜೋರು ದನಿಯಿಂದ ಪ್ರಶ್ನಿಸಿದ್ದೇ ನವೀನ್ ಸೂರಿಂಜೆ. ಕೆಲವು ವರ್ಷಗಳ ಹಿಂದೆ, ಉಡುಪಿ ಜಿಲ್ಲೆಯಲ್ಲಿ ಹಾಜಬ್ಬ, ಹಸನಬ್ಬ ಎಂಬ ತಂದೆ-ಮಗನನ್ನು ಸಂಘಪರಿವಾರದ ಮಂದಿ ದನ ಸಾಗಾಟದ ನೆಪದಲ್ಲಿ ನಡುಬೀದಿಯಲ್ಲಿ ಬೆತ್ತಲುಗೊಳಿಸಿದ್ದರು. ಮೈಯಲ್ಲಿ ಒಂಚೂರೂ ಬಟ್ಟೆಯಿಲ್ಲದೇ ನಡು ಬೀದಿಯಲ್ಲಿ ನಿಂತಿದ್ದ ಆ ತಂದೆ-ಮಗನನ್ನು ಎದುರಿಟ್ಟು ಪತ್ರಿಕೆಗಳು ಮಾಡಿದ ವರದಿಗಾರಿಕೆಯಲ್ಲಿ ಭಾರೀ ಜಾಗರೂಕತೆಯೂ ಇತ್ತು. ಬೆತ್ತಲೆ ಎಂಬ ಪದದ ಆಸುಪಾಸಿನಲ್ಲಿ ದನ ಸಾಗಾಟ ಎಂಬ ಪದ ಬರುವಂತೆ ನೋಡಿಕೊಂಡು ವರದಿಗಾರಿಕೆಯಲ್ಲಿ  ಸಮತೋಲನವನ್ನು  ಕಾಯ್ದುಕೊಳ್ಳಲಾಗಿತ್ತು. ಇದೊಂದೇ ಅಲ್ಲ, ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಹೆಣ್ಣು - ಗಂಡು ಪರಸ್ಪರ ಮಾತಾಡಿದ ಕಾರಣಕ್ಕಾಗಿ ಆಗುವ ದಾಳಿಗಳ ವರದಿಯಲ್ಲೂ ಇವು ಗೋಚರಿಸುತ್ತಿರುತ್ತವೆ. ಅಂಥ ಮಾತುಕತೆಗಳೇ ತಪ್ಪು ಎಂಬ ಸೂಚನೆಯನ್ನು ಶೀರ್ಷಿಕೆ, ವರದಿಗಾರಿಕೆಯು ಕೊಡುತ್ತಿರುತ್ತದೆ. ಆದರೆ ಇಂಥ ಸಿದ್ಧ ಮಾದರಿಯನ್ನು ಮುರಿದದ್ದೇ ನವೀನ್ ಸೂರಿಂಜೆ. ಅವರ ವರದಿಯಲ್ಲಿ ರಾಜಿ ಇರಲಿಲ್ಲ, ಮುಲಾಜೂ ಇರಲಿಲ್ಲ. ಅವರು ವರದಿ ಮಾಡಿದ್ದಷ್ಟೇ ಅಲ್ಲ, ತಾನು ಹೋಮ್ ಸ್ಟೇಯಲ್ಲಿ ಕಂಡದ್ದನ್ನೆಲ್ಲಾ ಆ ಬಳಿಕ ವಿವಿಧ ಇಂಟರ್ನೆಟ್ ತಾಣಗಳಲ್ಲಿ ಬಹಿರಂಗವಾಗಿಯೇ ಹಂಚಿಕೊಂಡರು. ದಾಳಿಕೋರರಲ್ಲಿ ಹೆಚ್ಚಿನ ಮಂದಿ ಮದ್ಯವ್ಯಸನಿಗಳಾಗಿದ್ದುದು, ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿದ್ದನ್ನೆಲ್ಲಾ.. ಧೈರ್ಯದಿಂದ ಬರೆದರು. ತನಿಖಾ ತಂಡಗಳ ಮುಂದೆ ಸಾಕ್ಷಿ ನುಡಿಯಲೂ ಸಿದ್ಧ ಅಂದರು. ಮಾತ್ರವಲ್ಲ, ಈ ವರದಿಗಾರಿಕೆಯಿಂದಾಗಿ ಸೂರಿಂಜೆಗೆ ಮಾಧ್ಯಮ ಜಗತ್ತಿನಲ್ಲಿ ದೊಡ್ಡ ಮಟ್ಟದ ಹೆಸರೂ ಬಂತು. ಒಂದು ರೀತಿಯಲ್ಲಿ ಇದು ಸಂಘಪರಿವಾರಕ್ಕೆ ಸೂರಿಂಜೆ ರವಾನಿಸಿದ ಪ್ರಬಲ ಸವಾಲಾಗಿತ್ತು. ಈತನನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಇತರ ಪತ್ರಕರ್ತರೂ ಇದೇ ಮಾದರಿಯನ್ನು ಅನುಸರಿಸಬಹುದು ಎಂಬ ಭೀತಿಯೂ ಸಂಘಪರಿವಾರವನ್ನು ಕಾಡಿರಬೇಕು. ಆದ್ದರಿಂದಲೇ ಸೂರಿಂಜೆಯನ್ನು ಬಂಧಿಸಲಾಗಿದೆ. ಈ ಮುಖಾಂತರ ಸಂಘ ಪರಿವಾರಕ್ಕೆ ಎದುರು ನಿಲ್ಲುವ ಪತ್ರಕರ್ತರಿಗೆಲ್ಲ ಅಪಾಯದ ಸೂಚನೆಯನ್ನೂ ರವಾನಿಸಲಾಗಿದೆ.  ಆದ್ದರಿಂದ, ಮುಂದೆ  ತಾವು ಏನಾಗಬೇಕೆಂಬುದನ್ನು ಪತ್ರಕರ್ತರೇ ನಿರ್ಧರಿಸಬೇಕು. ಈ ಸೂಚನೆಗೆ ತಲೆಬಾಗಬೇಕೋ  ಅಥವಾ ಪ್ರತಿಭಟಿಸಬೇಕೋ? ನವೀನ್ ಸೂರಿಂಜೆ ಆಗಬೇಕೋ ಅಥವಾ ಬೆತ್ತಲೆ ಪ್ರಕರಣದ ಬ್ಯಾಲೆನ್ಸ್ ಡ್  ಪತ್ರಕರ್ತ ಆಗಬೇಕೋ? ಆಯ್ಕೆ ಮುಕ್ತವಾಗಿದೆ. ಆದರೆ ಬೆತ್ತಲೆಯನ್ನು ಆಯ್ಕೆ ಮಾಡಿಕೊಳ್ಳಬೇಡಿ ಅನ್ನುವುದಷ್ಟೇ ಸಮಾಜ ಪ್ರೇಮಿಗಳ ಆಸೆ.

Tuesday 6 November 2012

ಅಹಿಂಸಾವಾದಿಗಳ ಹಿಂಸೆ ಮತ್ತು ಸೂಕಿಯ ಮೌನ


    ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಹೊರ ಜಗತ್ತಿಗೆ ಕಾಣಿಸದಂತೆ ಅಡಗಿಸಿಡಲಾಗಿದ್ದ  ಆಂಗ್ ಸ್ಯಾನ್   ಸೂಕಿಯ ಇನ್ನೊಂದು ಮುಖವನ್ನು ಮ್ಯಾನ್ಮಾರ್ ನ  ಬೌದ್ಧರು ಮತ್ತು ಮುಸ್ಲಿಮರು ಬಹಿರಂಗಕ್ಕೆ ತಂದಿದ್ದಾರೆ. ಸೂಕಿಗೆ ಬ್ರಿಟನ್, ಅಮೇರಿಕ ಮುಂತಾದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರೀ ಬೆಲೆಯಿದೆ. ಆಕೆಯ ಇಬ್ಬರು ಮಕ್ಕಳಿರುವುದು ಬ್ರಿಟನ್ನಿನಲ್ಲಿ. ಆಕೆಯನ್ನು ಪ್ರಜಾತಂತ್ರ ಪರ ನಾಯಕಿ ಎಂದು ಅವು ಕರೆದಿದೆ. ನೋಬೆಲ್ ಪ್ರಶಸ್ತಿ ಕೊಟ್ಟು ಪುರಸ್ಕರಿಸಿವೆ. ಆಕೆಯ ಹೋರಾಟಕ್ಕೆ ಬೆಂಬಲ ಸಾರುವುದಕ್ಕಾಗಿಯೇ ಈ ರಾಷ್ಟ್ರಗಳು ಮ್ಯಾನ್ಮಾರ್ ನ  ಮೇಲೆ ದಿಗ್ಬಂಧನವನ್ನೂ ವಿಧಿಸಿತ್ತು. ಅಂದಹಾಗೆ, ಮ್ಯಾನ್ಮಾರನ್ನು ಬೌದ್ಧ ಸರ್ವಾಧಿಕಾರಿಗಳಿಂದ ಬಿಡಿಸಿ ಪ್ರಜಾತಂತ್ರದೆಡೆಗೆ ತರುವುದಕ್ಕಾಗಿ ಹೋರಾಡುವುದು, ಅದಕ್ಕಾಗಿ ಹತ್ತಾರು ವರ್ಷಗಳ ಕಾಲ ಗೃಹಬಂಧನಕ್ಕೆ ಒಳಗಾಗುವುದೆಲ್ಲ ಸಣ್ಣ ಸಾಧನೆ ಖಂಡಿತ ಅಲ್ಲ. ಇವತ್ತು ಮ್ಯಾನ್ಮಾರ್ ನ  ಅಧ್ಯಕ್ಷ ತೇನ್ ಸೇನ್ ರ  ಮಾತಿಗಿಂತ ಸೂಕಿಯ ಅಭಿಪ್ರಾಯಕ್ಕೆ ಜಾಗತಿಕವಾಗಿ ಹೆಚ್ಚು ಮನ್ನಣೆಯೂ ಇದೆ. ಆದ್ದರಿಂದಲೇ, ಮ್ಯಾನ್ಮಾರ್ ನ  ರಾಖಿನೆ ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಮರು ಮತ್ತು ಬೌದ್ಧರ ನಡುವಿನ ಘರ್ಷಣೆಯ ಬಗ್ಗೆ ಸೂಕಿ ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಜಗತ್ತು ಆಸೆ ಪಟ್ಟದ್ದು. ಆದರೆ ಸೂಕಿ ಈ ಎಲ್ಲ ನಿರೀಕ್ಷೆಯನ್ನೂ  ಸುಳ್ಳು ಮಾಡಿದ್ದಾರೆ. ಬೌದ್ಧರು ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಬಗ್ಗೆ ತಾನು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲ್ಲ ಅಂದಿದ್ದಾರೆ.
     ನಿಜವಾಗಿ, ಜೈಲಲ್ಲಿದ್ದ ಸೂಕಿಗೂ ಇದೀಗ ರಾಜಕಾರಣಿಯಾಗಿ ಬದಲಾಗಿರುವ ಸೂಕಿಗೂ ಬಹಳ ವ್ಯತ್ಯಾಸವಿದೆ. ಜೈಲಲ್ಲಿರುವಾಗ ಸೂಕಿ ಮಾತಾಡುತ್ತಿದ್ದುದು ಮ್ಯಾನ್ಮಾರ್ ಜನತೆಯ ಬಗ್ಗೆ. ಮ್ಯಾನ್ಮಾರ್ ಜನತೆ ಅಂದರೆ ಬೌದ್ಧರು ಮಾತ್ರ ಎಂದು ಅವರು ಆಗ ವ್ಯಾಖ್ಯಾನಿಸಿಯೇ ಇರಲಿಲ್ಲ. ಅಲ್ಲಿನ ಮುಸ್ಲಿಮರು ಸೂಕಿಯ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲವನ್ನೂ ಸಾರಿದ್ದರು. ಆದರೆ ಇದೀಗ ರಾಜಕಾರಣಿಯಾಗಿ ಬದಲಾಗಿರುವ ಸೂಕಿ ಏನನ್ನೋ ಮುಚ್ಚಿಡುತ್ತಿದ್ದಾರೆ. ಇಲ್ಲದಿದ್ದರೆ, ಕಳೆದ ಜೂನ್ ಮತ್ತು ಅಕ್ಟೋಬರ್ ಗಳಲ್ಲಿ  ರಾಖಿನೆ ರಾಜ್ಯದಲ್ಲಿ ಮುಸ್ಲಿಮ್ ಮತ್ತು ಬೌದ್ಧರ ಮಧ್ಯೆ ಎರಡು ಬಾರಿ ಘರ್ಷಣೆಗಳು ನಡೆದಿವೆ. ಸರಕಾರವೇ ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಕೇವಲ ಅಕ್ಟೋಬರ್ ನಲ್ಲಿ ನಡೆದ ಘರ್ಷಣೆಯಲ್ಲೇ  5351 ಮನೆಗಳು ಭಸ್ಮವಾಗಿವೆ. 32 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. 89 ಮಂದಿ ಸಾವಿಗೀಡಾಗಿದ್ದಾರೆ. ‘5 ಸಾವಿರದಷ್ಟಿದ್ದ ಬೌದ್ಧರ ಗುಂಪು ನಮ್ಮ ಗ್ರಾಮಗಳಿಗೆ ನುಗ್ಗಿ ಮನೆಗಳಿಗೆ ಬೆಂಕಿ ಕೊಟ್ಟವು’ ಎಂದು ದಿ ಹಿಂದೂ ಪತ್ರಿಕೆಯ ಪ್ರತಿನಿಧಿಗೆ ಮರ್ಯಮ್ ಬೀಬಿ (5-11-2012) ತಿಳಿಸಿದ್ದಾಳೆ. ಮುಸ್ಲಿಮರು ಅಪಾರ ಸಂಖ್ಯೆಯಲ್ಲಿ ನಿರಾಶ್ರಿತರಾಗಿದ್ದು ಮೂಲ ಸೌಲಭ್ಯಗಳೂ ಇಲ್ಲದ ಮದ್ರಸಗಳಲ್ಲಿ, ಶಿಬಿರಗಳಲ್ಲಿ ತುಂಬಿ ಹೋಗಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ. ಇವೆಲ್ಲ ಕಣ್ಣೆದುರಿಗಿದ್ದೂ ಸೂಕಿ ಏನೂ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲವೆಂದರೆ ಹೇಗೆ? ಅದೇನನ್ನು ಸೂಚಿಸುತ್ತದೆ?
     ನೋಬೆಲ್ ಬಹುಮಾನಕ್ಕೆ ಸೂಕಿ ಆಯ್ಕೆಗೊಂಡಾಗ ಮ್ಯಾನ್ಮಾರ್ ನ  ಬೌದ್ಧ ನಾಯಕರನ್ನು ಬಿಟ್ಟರೆ, ಉಳಿದಂತೆ ಈ ಜಗತ್ತಿನ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಹಾಗಂತ, ಜಗತ್ತು ನೀಡಿದ ಈ ಬೆಂಬಲಕ್ಕೆ ಆಕೆಯ ಬಿಳಿ ಚರ್ಮವೋ ಇಂಗ್ಲಿಷ್ ಕುರಿತಾದ ಜ್ಞಾನವೋ  ಕಾರಣವೂ ಆಗಿರಲಿಲ್ಲ. ಜೈಲಿನಲ್ಲಿದ್ದಾಗ  ಸೂಕಿ ಮಾತಾಡುತ್ತಿದ್ದುದೆಲ್ಲ ಮನುಷ್ಯರ ಬಗ್ಗೆ, ಅವರ ಸ್ವಾತಂತ್ರ್ಯದ ಬಗ್ಗೆ. ಆದ್ದರಿಂದಲೇ ಜಗತ್ತಿನಾದ್ಯಂತ ದಮನಿತರಾಗಿರುವ ಮನುಷ್ಯರ ವಿಮೋಚನೆಯ ಸಂಕೇತವಾಗಿ ಮಾಧ್ಯಮಗಳು ಆಕೆಯನ್ನು ಬಿಂಬಿಸಿದುವು. ಮ್ಯಾನ್ಮಾರ್ ನ  ಮುಸ್ಲಿಮರು ಆಕೆಯ ಮಾತುಗಳನ್ನು ನಂಬಿದರು. ಆದರೆ ಇವತ್ತು ಸೂಕಿಯ ವರ್ತನೆಗಳನ್ನು ನೋಡಿದರೆ ನಿರಾಸೆಯಾಗುತ್ತದೆ. ಆಕೆ ಪಕ್ಕಾ ರಾಜಕಾರಣಿಯಂತೆ ಮಾತಾಡುತ್ತಿದ್ದಾರೆ. ಸತ್ಯ ಹೇಳಿ ಬಹುಸಂಖ್ಯಾತ ಬೌದ್ಧರ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಸುಮ್ಮನಿರುವುದು ಲಾಭದಾಯಕ ಎಂದು ಅವರು ಭಾವಿಸಿದ್ದಾರೆ. ವಿಶೇಷ ಏನೆಂದರೆ, ಬೌದ್ಧ ಗುಂಪುಗಳು ಮುಸ್ಲಿಮರನ್ನು ಕೊಲ್ಲುವುದಕ್ಕಿಂತ ಒಕ್ಕಲೆಬ್ಬಿಸಿ ಅತಂತ್ರ ರಾಗಿಸುವುದಕ್ಕೇ  ಹೆಚ್ಚು ಒತ್ತು ಕೊಟ್ಟಿರುವುದು. ಮನೆಗಳಿಗೆ ಬೆಂಕಿ ಹಚ್ಚಿ ಅವರ ಅಸ್ತಿತ್ವ ನಾಶ ಮಾಡುವುದನ್ನೇ ಅವು ಗುರಿಯಾಗಿಸಿಕೊಂಡಿವೆ. ಇದು ಘರ್ಷಣೆಯ ಕುರಿತಂತೆ ಅನುಮಾನಗಳನ್ನೂ  ಮೂಡಿಸುತ್ತಿದೆ. ಯಾಕೆಂದರೆ, ಪ್ರಜಾತಂತ್ರಕ್ಕೆ ಮರಳಿದ ಮ್ಯಾನ್ಮಾರ್ ನಲ್ಲಿ  ಬಂಡವಾಳ ಹೂಡಲು ಜಾಗತಿಕವಾಗಿ ಪೈಪೋಟಿಟಿಗಳು ಪ್ರಾರಂಭವಾಗಿವೆ. ದಶಕಗಳಿಂದ ಜಾರಿಯಲ್ಲಿದ್ದ ದಿಗ್ಬಂಧನ ಹೊರಟು ಹೋಗುತ್ತಿದ್ದು, ಬಂಡವಾಳ ಹೂಡುವಂತೆ ತೇನ್ ಸೇನ್ ರ  ಸರಕಾರ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುತ್ತಲೂ ಇದೆ. ಅಲ್ಲದೆ ಮ್ಯಾನ್ಮಾರ್ ನಲ್ಲಿ  ಅಪಾರ ಪ್ರಮಾಣದ ಪ್ರಾಕೃತಿಕ ಸಂಪನ್ಮೂಲಗಳೂ ಇವೆ ಎನ್ನಲಾಗುತ್ತಿದೆ. ಬಹುಶಃ ಬೃಹತ್ ಕಂಪೆನಿಗಳಿಗೆ ಭೂಮಿ ಒದಗಿಸಲು ಇಂಥದ್ದೊಂದು ಘರ್ಷಣೆಯನ್ನು ವ್ಯವಸ್ಥೆಯೇ ಹುಟ್ಟು ಹಾಕಿದ್ದಿರಬಹುದೇ? ಜನರನ್ನು ಒಕ್ಕಲೆಬ್ಬಿಸಿ ಆ ಜಾಗಗಳನ್ನು ಕಂಪೆನಿಗಳ ವಶಕ್ಕೆ ಒಪ್ಪಿಸುವುದಕ್ಕಾಗಿ ಮುಸ್ಲಿಮರ ಪೌರತ್ವದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಲಾಗಿದೆಯೇ? ಯಾಕೆಂದರೆ ಘರ್ಷಣೆ ಕಾಣಿಸಿಕೊಂಡಿರುವ ರಾಖಿನೆ ರಾಜ್ಯದ ಸಿಟ್ವೆ ನಗರದಲ್ಲಿ ಭಾರತದ ಎಸ್ಸಾರ್ ಕಂಪೆನಿಯ ದೊಡ್ಡದೊಂದು ಟ್ರಾನ್ಸ್ ಪೋರ್ಟ್ ನಿರ್ಮಾಣ ಯೋಜನೆಯು ಪ್ರಗತಿಯಲ್ಲಿದೆ. ಅಲ್ಲದೆ ಈ ನಗರದಲ್ಲಿ ಘರ್ಷಣೆಯ ಯಾವ ಕುರುಹುಗಳೂ ಇಲ್ಲ. ಹೀಗಿರುವಾಗ ಒಳಪ್ರದೇಶದಲ್ಲಿರುವ ಬೌದ್ಧರು ಮತ್ತು ಮುಸ್ಲಿಮರ ಮಧ್ಯೆ ಈ ಮಟ್ಟದ ದ್ವೇಷ ಹುಟ್ಟಿಕೊಳ್ಳಲು ಕಾರಣವಾದರೂ ಏನಿರಬಹುದು?
    ಸೂಕಿಗೆ ಮಾತಾಡುವುದಕ್ಕೆ ದಾರಾಳ ಸಂಗತಿಗಳಿವೆ. ಕನಿಷ್ಠ ನೋಬೆಲ್ ಪ್ರಶಸ್ತಿಯ ಗೌರವವನ್ನು ಉಳಿಸಿಕೊಳ್ಳುವುದಕ್ಕಾದರೂ ಅವರು ಮಾತಾಡಲೇಬೇಕಿದೆ. ಮ್ಯಾನ್ಮಾರ್ ನಲ್ಲಿ  ಸದ್ಯ ಕಾಣಿಸಿಕೊಂಡಿರುವ ಘರ್ಷಣೆಯ ಮೂಲ ಉದ್ದೇಶವಾದರೂ ಏನು? ಅಹಿಂಸೆಯ ಬುದ್ಧ ಧರ್ಮವು ಹಿಂಸಾತ್ಮಕವಾಗಿ ಪರಿವರ್ತನೆಗೊಂಡದ್ದು ಹೇಗೆ? ನೂರಾರು ವರ್ಷಗಳಿಂದ ರಾಖಿನೆಯಲ್ಲಿರುವ ಮುಸ್ಲಿಮರ ಪೌರತ್ವವನ್ನು ಅನುಮಾನಾಸ್ಪದ ಗೊಳಿಸಿರುವುದರಲ್ಲಿ ಸರಕಾರದ ಮತ್ತು ಬಂಡವಾಳಶಾಹಿಗಳ ಪಾತ್ರವೇನಾದರೂ ಇದೆಯೇ? ಅಷ್ಟಕ್ಕೂ ಮುಸ್ಲಿಮರ ಪೌರತ್ವದ ಕುರಿತು ಅನುಮಾನಗಳೇನೇ ಇರಲಿ, ಅದರ ನೆಪದಲ್ಲಿ ಒಂದು ಸಮೂಹವನ್ನೇ ಅತಂತ್ರಗೊಳಿಸುವುದನ್ನು ಕನಿಷ್ಠ ಖಂಡಿಸುವುದಕ್ಕೂ ಸೂಕಿಗೆ ಸಾಧ್ಯವಾಗುವುದಿಲ್ಲವೆಂದರೆ ಅವರನ್ನು ಶಾಂತಿದೂತೆ ಎಂದು ಹೇಗೆ ಕರೆಯುವುದು? ಒಂದು ವೇಳೆ ಸೂಕಿ ಇನ್ನೂ ಮೌನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆಂದಾದರೆ, ನೋಬೆಲ್ ಆಯ್ಕೆ ಮಂಡಳಿಯು ಆಕೆಯಿಂದ ಪ್ರಶಸ್ತಿಯನ್ನು ಹಿಂಪಡೆದು ಅದರ ಗೌರವವನ್ನಾದರೂ ಕಾಪಾಡಲಿ.

Monday 29 October 2012

ಮಾಧ್ಯಮ ಮುಖವನ್ನು ಬಿಚ್ಚಿಟ್ಟ 14 ನಿಮಿಷಗಳ ಸಿ.ಡಿ.


       ಕಳೆದ ವಾರ ದೆಹಲಿಯಲ್ಲಿ 14 ನಿಮಿಷಗಳ ಕುಟುಕು ಕಾರ್ಯಾಚರಣೆಯ ಸಿಡಿಯೊಂದು ಬಿಡುಗಡೆಗೊಂಡಿತು. ಬಿಡುಗಡೆಗೊಳಿಸಿದ್ದು ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ನವೀನ್ ಜಿಂದಾಲ್. ಝೀ ನ್ಯೂಸ್ ಟಿ.ವಿ. ಚಾನೆಲ್‍ನ ಸಂಪಾದಕ ಸುಧೀರ್ ಚೌಧರಿ ಮತ್ತು ಝೀ ಬಿಸಿನೆಸ್ ನ್ಯೂಸ್‍ನ ಸಂಪಾದಕ ಸಮೀರ್ ಅಹ್ಲುವಾಲಿಯ ಇದರಲ್ಲಿ ಮುಖ್ಯ ಪಾತ್ರಧಾರಿಗಳು. ಕಲ್ಲಿದ್ದಲು ಹಗರಣದಲ್ಲಿ ಜಿಂದಾಲ್ ಕಂಪೆನಿ ಭಾಗಿಯಾಗಿರುವ ಬಗ್ಗೆ ಝೀ ಚಾನೆಲ್‍ಗಳಲ್ಲಿ ಧಾರಾಳ ಸುದ್ದಿಗಳು ಈ ಮೊದಲು ಪ್ರಸಾರ ಆಗಿದ್ದುವು. ಈಗಲೂ ಆಗುತ್ತಿವೆ. ವರ್ಷಕ್ಕೆ 25 ಕೋಟಿಯಂತೆ 4 ವರ್ಷಗಳಲ್ಲಿ 100 ಕೋಟಿ ರೂಪಾಯಿಗಳನ್ನು ಕೊಟ್ಟರೆ ಈ ಸುದ್ದಿಗಳ ಪ್ರಸಾರವನ್ನು ನಿಲ್ಲಿಸುವುದಾಗಿ ಚೌಧರಿ ಮತ್ತು ಅಹ್ಲುವಾಲಿಯಾಗಳು ಜಿಂದಾಲ್ ಅಧಿಕಾರಿಗಳಿಗೆ ಭರವಸೆ ಕೊಡುತ್ತಾರೆ. ಈ ಕುರಿತಂತೆ ಕಳೆದ ಸೆಪ್ಟೆಂಬರ್‍ನಲ್ಲಿ ವಿವಿಧ ಕೆಪೆ, ರೆಸ್ಟೋರೆಂಟ್‍ಗಳಲ್ಲಿ ಮಾತುಕತೆಗಳು ನಡೆಯುತ್ತವೆ. ಈ ಮಾತುಕತೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಕಳೆದ ಕೆಲವು ದಿನಗಳಿಂದ ಹೇಗೆ ಸುದ್ದಿ ಪ್ರಸಾರವನ್ನು ಕಡಿಮೆಗೊಳಿಸುತ್ತಾ ಬರಲಾಗಿದೆ ಎಂಬ ವರದಿಯನ್ನು ಚೌಧರಿ ಅಧಿಕಾರಿಗಳ ಮುಂದಿಡುತ್ತಾನೆ. ಇಂಥ ವ್ಯವಹಾರಗಳನ್ನು ಝೀ ಮಾತ್ರ ಮಾಡುತ್ತಿಲ್ಲ, ಟೈಮ್ಸ್ ಆಫ್ ಇಂಡಿಯಾದ ದೆಹಲಿ ಆವೃತ್ತಿಯಾದ ದೆಹಲಿ ಟೈಮ್ಸ್, ಬಾಂಬೆ ಟೈಮ್ಸ್ ಗಳೆಲ್ಲಾ ಪಾವತಿ ಸುದ್ದಿಗಳಿಂದಲೇ ಬದುಕುತ್ತಿವೆ ಎಂದೂ ಆತ ವೀಡಿಯೋದಲ್ಲಿ ಸಮರ್ಥಿಸಿಕೊಳ್ಳುತ್ತಾನೆ..'
        ನಿಜವಾಗಿ, ನ್ಯೂಸ್ ಚಾನೆಲ್‍ಗಳೆಲ್ಲಾ ಕನಿಷ್ಠ 5 ನಿಮಿಷವಾದರೂ ತಮ್ಮ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಶೋಕ ಆಚರಿಸಬೇಕಾದಷ್ಟು ಗಂಭೀರ ಪ್ರಕರಣ ಇದು. ವಿಶೇಷ ಏನೆಂದರೆ, ಕುಟುಕು ಕಾರ್ಯಾಚರಣೆಗಳನ್ನು ಈ ವರೆಗೆ ಪ್ರಾಯೋಜಿಸುತ್ತಿದ್ದುದು ಮಾಧ್ಯಮಗಳೇ. ಕಾಳಿ ಮಠದ ಋಷಿಕುಮಾರ ಸ್ವಾಮಿಯ ಕಳ್ಳ ಮುಖವನ್ನು ಕುಟುಕು ಕಾರ್ಯಾಚರಣೆಯ ಮೂಲಕ ಇತ್ತೀಚೆಗೆ ಬಹಿರಂಗಗೊಳಿಸಿದ್ದೂ ಕನ್ನಡದ ಒಂದು ಟಿ.ವಿ. ಚಾನೆಲ್ಲೇ. ಆದರೆ ಇಲ್ಲಿ, ಕಂಪೆನಿಯೇ ಕುಟುಕು ಕಾರ್ಯಾಚರಣೆಗೆ ಇಳಿದಿದೆ. ಆ ಮುಖಾಂತರ ಟಿ.ವಿ. ಚಾನೆಲ್‍ಗಳ ಬ್ಲ್ಯಾಕ್‍ಮೇಲ್ ಪತ್ರಿಕೋದ್ಯಮವನ್ನು ಬಹಿರಂಗಪಡಿಸಿದೆ. ಸದ್ಯ ಝೀ ಚಾನೆಲ್‍ನ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದೆ. ಚೌಧರಿಯನ್ನು ಸಂಪಾದಕರುಗಳ ಸಂಘದಿಂದ ಉಚ್ಛಾಟಿಸಲಾಗಿದೆ. ಅಂದಹಾಗೆ, ಮಾಧ್ಯಮಗಳ ವಿಶ್ವಾಸಾರ್ಹತೆ ದಿನೇದಿನೇ ಕುಸಿಯುತ್ತಿರುವ ಈ ಹೊತ್ತಿನಲ್ಲಿ ಟಿ.ವಿ. ಚಾನೆಲ್‍ಗಳು ಈ ಪ್ರಕರಣಕ್ಕೆ ಕೊಡಬೇಕಾದ ಮಹತ್ವವಾದರೂ ಹೇಗಿರಬೇಕಿತ್ತು? ಗಡ್ಕರಿಯದ್ದೋ ವಾದ್ರಾರದ್ದೋ ಅಥವಾ ಇನ್ನಾರದ್ದೋ ಭ್ರಷ್ಟ ಮುಖವನ್ನು ಚರ್ಚಿಸುವುದಕ್ಕಿಂತ ಮೊದಲು ತಮ್ಮದೇ ಮುಖವನ್ನು ಚಂದಗೊಳಿಸುವುದು ಮಾಧ್ಯಮಗಳ ಅಗತ್ಯವೂ ಆಗಿತ್ತಲ್ಲವೇ? ನೀವು ವೀಕ್ಷಿಸುವ ಸುದ್ದಿ ಸ್ಪಾನ್ಸರ್ಡ್ ಅಲ್ಲ ಎಂದು ವೀಕ್ಷಕರನ್ನು ನಂಬಿಸುವ ಹೊಣೆಗಾರಿಕೆ ಇರುವುದು ಯಾರ ಮೇಲೆ? ಆದರೆ ಎಷ್ಟು ಚಾನೆಲ್‍ಗಳು ಇಂಥ ಪ್ರಯತ್ನ ಮಾಡಿವೆ? ಪ್ರಾಮಾಣಿಕತೆ, ಪಾರದರ್ಶಕತೆ.. ಮುಂತಾದ ಪದಗಳೆಲ್ಲ ರಾಜಕಾರಣಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲವಲ್ಲ. ಮಾಧ್ಯಮಗಳು ಈ ಪದಕ್ಕೆ ಮತ್ತು ಅವು ಧ್ವನಿಸುವ ಮೌಲ್ಯಗಳಿಗೆ ಬೆಲೆ ಕೊಡದಿದ್ದರೆ ಇತರರನ್ನು ದೂರುವ, ಪ್ರಶ್ನಿಸುವ ಅರ್ಹತೆಯಾದರೂ ಎಲ್ಲಿರುತ್ತದೆ? ಅದರಲ್ಲೂ ಋಷಿಕುಮಾರ ಸ್ವಾಮಿಯ ಬಗ್ಗೆ ಸತತ 3 ದಿನಗಳ ಕಾಲ ಲೈವ್  ಚರ್ಚೆಯನ್ನು ಹಮ್ಮಿ ಕೊಂಡ ಕನ್ನಡ ನ್ಯೂಸ್ ಚಾನೆಲ್‍ಗಳು ಝೀ ಪ್ರಕರಣದ ಕುರಿತಂತೆ ಬಹುತೇಕ ಚರ್ಚಿಸಿಯೇ ಇಲ್ಲ. ಇನ್ನಾರದ್ದೋ ದೌರ್ಬಲ್ಯಗಳಿಗೆ ಕ್ಯಾಮರಾ ಇಟ್ಟು ಅದನ್ನು ದಿನಗಟ್ಟಲೆ ಚರ್ಚಿಸುವ ಕನ್ನಡ ಚಾನೆಲ್‍ಗಳಿಗೆ ತಮ್ಮದೇ ದೌರ್ಬಲ್ಯಗಳು ಚರ್ಚೆಗೆ ಅನರ್ಹ ಅನ್ನಿಸಿಕೊಂಡದ್ದೇಕೆ?
       ಮಾಧ್ಯಮಗಳು ನೂರು ಶೇಕಡಾ ಪಾರದರ್ಶಕ ಆಗಿವೆ ಎಂದು ಸಾರ್ವಜನಿಕರು ಬಿಡಿ, ಪತ್ರಕರ್ತರೇ ಇವತ್ತು ನಂಬುವ ಸ್ಥಿತಿಯಲ್ಲಿಲ್ಲ. ಸುದ್ದಿಗಳ ವಿಶ್ವಾಸಾರ್ಹತೆ ಅಷ್ಟಂಶ ಕೆಟ್ಟು ಹೋಗಿವೆ. ಟಿ.ವಿ. ಚಾನೆಲ್‍ಗಳಂತೂ ತಮ್ಮ ವೀಕ್ಷಕ ವಲಯವನ್ನು ವಿಸ್ತರಿಸುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸುತ್ತಿಲ್ಲ. ಪ್ರಕರಣವೊಂದು ಕೋರ್ಟು ಮೆಟ್ಟಲು ಹತ್ತುವುದಕ್ಕಿಂತ ಮೊದಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ತೀರ್ಪು ಕೊಡುವ ಕೆಲಸವನ್ನು ಅವು ಮಾಡುತ್ತಲೇ ಇವೆ. ಕನ್ನಡ ಚಾನೆಲ್‍ಗಳ ಮಟ್ಟಿಗೆ ಋಷಿಕುಮಾರ ಪ್ರಕರಣ ಇದಕ್ಕೆ ಇತ್ತೀಚಿನ ಉದಾಹರಣೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಚಾನೆಲ್ ಒಂದು, ಎಲ್ಲರೆದುರೇ ಅವರನ್ನು ಪೀಠದಿಂದ ಕೆಳಗಿಳಿಸುತ್ತದೆ. ಆ ಬಳಿಕ ಅದನ್ನೇ ಮಹಾನ್ ಸಾಧನೆಯೆಂಬಂತೆ ಬಿಂಬಿಸುತ್ತದೆ. ಇಷ್ಟಕ್ಕೂ ಇಂಥ ಕಾರ್ಯಕ್ರಮಗಳು ಓರ್ವ ಋಷಿಕುಮಾರನಿಗೆ ಮಾತ್ರ ಸೀಮಿತವಾಗಬೇಕೆಂದೇನೂ ಇಲ್ಲವಲ್ಲ. ನಾಳೆ, ತಮಗಾಗದವರನ್ನು ಬೆದರಿಸಿಯೋ  ಮತ್ತುಬರಿಸಿಯೋ ಕ್ಯಾಮರಾದಲ್ಲಿ ಸೆರೆ ಹಿಡಿದು ಲೈವ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನಹರಣ ಮಾಡುವುದಕ್ಕೂ ಇವು ಮುಂದಾಗಲಾರದೆಂದು ಹೇಗೆ ಹೇಳುವುದು? ಭಯೋತ್ಪಾದನೆಯ ಹೆಸರಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಬಂಧಿತರಾದ ಯುವಕರ ಬಗ್ಗೆ ಕನ್ನಡ ಚಾನೆಲ್‍ಗಳು ನಡೆದುಕೊಂಡದ್ದಾದರೂ ಹೇಗೆ? ಅವು ಆ ಯುವಕರ ಬಗ್ಗೆ ಈಗಾಗಲೇ ತೀರ್ಪು ಕೊಟ್ಟಿಲ್ಲವೇ?
      ಮಾಧ್ಯಮಗಳು ತಾನೇ ತನಿಖೆ ನಡೆಸುವ ಮತ್ತು ತೀರ್ಪು ನೀಡುವ ಅಪಾಯಕಾರಿ ಪಾತ್ರವನ್ನು ನಿರ್ವಹಿಸುತ್ತಿರುವ ಈ ಹೊತ್ತಿನಲ್ಲಿಯೇ ಝೀ ಪ್ರಕರಣ ಬಯಲಿಗೆ ಬಂದಿದೆ. ಆ 14 ನಿಮಿಷಗಳ ಸಿ.ಡಿ.ಯಲ್ಲಿ ಮಾಧ್ಯಮಗಳು ಅವಲೋಕನ ನಡೆಸಿಕೊಳ್ಳುವುದಕ್ಕೆ ಧಾರಾಳ ವಿಷಯಗಳೂ ಇವೆ. ಸುಳ್ಳರು, ಭ್ರಷ್ಟರು, ಸೋಗಲಾಡಿಗಳೆಲ್ಲ ರಾಜಕೀಯದಲ್ಲಿ ಮಾತ್ರ ಇರುವುದಲ್ಲ, ಅವರು ಸುದ್ದಿ ಮನೆಯಲ್ಲೂ ಇದ್ದಾರೆ ಎಂಬುದನ್ನು ಆ ಸಿ.ಡಿ. ಬಲವಾಗಿ ಪ್ರತಿಪಾದಿಸುತ್ತಿದೆ. ಆದ್ದರಿಂದ ವೀಕ್ಷಕರಲ್ಲಿ ಭರವಸೆ ತುಂಬುವ ಹೊಣೆಗಾರಿಕೆಯನ್ನು ಚಾನೆಲ್‍ಗಳು ವಹಿಸಿಕೊಳ್ಳಲೇ ಬೇಕು. ತಮ್ಮನ್ನು ವಿಮರ್ಶೆಗೊಡ್ಡುವ ಅವಕಾಶದಿಂದ ಅವು ತಪ್ಪಿಸಿಕೊಳ್ಳಬಾರದು. ತಪ್ಪು ಮಾಧ್ಯಮಗಳಿಂದಾದರೂ ರಾಜಕಾರಣಿಗಳಿಂದಾದರೂ ತಪ್ಪು ತಪ್ಪೇ ಎಂದು ಸಾರಲು, ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಚಾನೆಲ್‍ಗಳು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವೀಕ್ಷಕರು ನ್ಯೂಸ್‍ಗಳಿಗೂ ಮನರಂಜನೆಯ ಸ್ಥಾನವನ್ನಷ್ಟೇ ಕೊಟ್ಟುಬಿಟ್ಟಾರು.

Monday 15 October 2012

ಪತ್ರಿಕೆಗಳ ಗಮನಕ್ಕೆ: ಭಟ್ಕಳದಲ್ಲಿ ಬಂದ್ ಆಚರಿಸಲಾಗಿದೆ..

ಮಾಧ್ಯಮಗಳು ಕಪೋಲಕಲ್ಪಿತ ಸುಳ್ಳು ಸುದ್ದಿಯನ್ನು ಪ್ರಕಟಿಸಿದರೆ ಓದುಗರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳವು ಕಳೆದ ವಾರ ಉತ್ತರ ನೀಡಿದೆ. ಅಕ್ಟೋಬರ್ 11ರಂದು ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದುಕೊಳ್ಳಲಿಲ್ಲ. ವಾಹನಗಳು ಓಡಾಡಲಿಲ್ಲ. ಭಟ್ಕಳದ ಕುರಿತಂತೆ ಸೆ. 2ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಖಂಡಿಸಿ ಜನರು ಬಂದ್ ಆಚರಿಸಿದರು. 'ಭಟ್ಕಳದ ಮಸೀದಿಗಳು ಭಯೋತ್ಪಾದನೆಯ ತಾಣಗಳಾಗಿದ್ದು, ಇಲ್ಲಿಂದಲೇ ಬಾಂಬುಗಳು, ಆರ್‍ಡಿಎಕ್ಸ್ ಗಳು ರವಾನೆಯಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆ ಭಯೋತ್ಪಾದಕರ ಅಡಗುತಾಣವಾಗುತ್ತಿದೆ..' ಎಂಬ ಕನ್ನಡ ಪ್ರಭದ ವರದಿಯ ಬಗ್ಗೆ ಪರಾಂಬರಿಸಿ ನೋಡುವುದಕ್ಕಾಗಿ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಊರ ಗಣ್ಯರನ್ನೆಲ್ಲಾ ಮಸೀದಿಗಳಿಗೆ ಆಹ್ವಾನಿಸಲಾಯಿತು. ಭೇಟಿ ಕೊಟ್ಟ ಅವರೆಲ್ಲ ಸುದ್ದಿಯ ವಿರುದ್ಧ ಸಿಟ್ಟು ವ್ಯಕ್ತಪಡಿಸಿದರು.
    ನಿಜವಾಗಿ, ಅಕ್ಷರ ಭಯೋತ್ಪಾದನೆಯನ್ನು ಖಂಡಿಸಿ ಒಂದು ಪ್ರದೇಶದ ಜನತೆ ಬಂದ್ ಆಚರಿಸಿದ್ದು ಬಹುಶಃ ಈ ದೇಶದಲ್ಲಿ ಇದೇ ಮೊದಲು. ಸಾಮಾನ್ಯವಾಗಿ ಬಂದ್ ಆಗಬೇಕಾದರೆ ಒಂದೋ ತೈಲ ಬೆಲೆ ಏರಬೇಕು ಅಥವಾ ಕೋಮುಗಲಭೆಯಾಗಬೇಕು ಎಂಬ ಅಲಿಖಿತ ನಿಯಮ ಈ ದೇಶದಲ್ಲಿದೆ. ಆದರೆ ಭಟ್ಕಳದ ಮಂದಿ ಇದನ್ನು ಸುಳ್ಳು ಮಾಡಿದ್ದಾರೆ. ಜೀವಿಸುವ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ಹಕ್ಕು ಮನುಷ್ಯರಿಗೆ ಎಷ್ಟು ಇದೆಯೋ, ಗೌರವಯುತವಾಗಿ ಬದುಕುವ ಹಕ್ಕೂ ಅಷ್ಟೇ ಇದೆ ಎಂಬುದನ್ನವರು ಘೋಷಿಸಿದ್ದಾರೆ. ಇಷ್ಟಕ್ಕೂ, ಭಟ್ಕಳದ ಬಂದ್‍ನಲ್ಲಿ ಭಾಗವಹಿಸಿದ್ದು ಮುಸ್ಲಿಮರು ಮಾತ್ರ ಅಲ್ಲ. ಆ ಬಂದ್‍ಗೆ ಹಿಂದೂ-ಮುಸ್ಲಿಮ್ ಎಂಬ ಬೇಧವೂ ಇರಲಿಲ್ಲ. ಆದ್ದರಿಂದಲೇ ಈ ಬಂದ್ ಚರ್ಚೆಗೆ ಯೋಗ್ಯ ಅನ್ನಿಸುವುದು. ಅಂದಹಾಗೆ, ಮಾಧ್ಯಮಗಳಲ್ಲಿರುವವರೇನೂ ಅನ್ಯಗ್ರಹ ಜೀವಿಗಳು ಅಲ್ಲವಲ್ಲ. ಸುಳ್ಳು, ಮೋಸ, ವಂಚನೆ, ಪಕ್ಷಪಾತ, ದರೋಡೆ.. ಮುಂತಾದ ಪದಗಳಿಗೆಲ್ಲಾ ಪತ್ರಕರ್ತರ ಡಿಕ್ಷನರಿಯಲ್ಲಿ 'ಗೌರವಾರ್ಹ ಪದಗಳು' ಎಂಬ ಅರ್ಥ ಇರಲು ಸಾಧ್ಯವೂ ಇಲ್ಲ. ಪತ್ರಕರ್ತನೂ ಸಮಾಜ ಜೀವಿ. ಸಂಪಾದಕನಾಗಲಿ, ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಮಿಕನಾಗಲಿ, ಓದುಗನಾಗಲಿ.. ಎಲ್ಲರೂ ಸಮಾಜದ ಒಂದು ಭಾಗವೇ. ಸಮಾಜದ ಪ್ರತಿ ಆಗು-ಹೋಗುಗಳೊಂದಿಗೆ  ಅವರಿಗೂ  ಸಂಬಂಧ ಇರುತ್ತದೆ. ಒಂದು ರೀತಿಯಲ್ಲಿ ಓದುಗರಿಗಿಂತ ಹೆಚ್ಚಿನ ಹೊಣೆಗಾರಿಕೆ ಇರುವುದು ಮಾಧ್ಯಮದವರ ಮೇಲೆ. ಪತ್ರಿಕೆಯ ಮುಖಪುಟ ಬಿಡಿ, ಒಳಪುಟದಲ್ಲಿ ಪ್ರಕಟವಾಗುವ ಸಣ್ಣದೊಂದು ಸುದ್ದಿಗೂ ಒಂದು ಊರನ್ನೇ ಹೊತ್ತಿಸಿ ಬಿಡುವ ಸಾಮರ್ಥ್ಯ  ಇರುತ್ತದೆ. ಟಿ.ವಿ.ಯಲ್ಲಿ ಬಿತ್ತರವಾಗುವ ಬ್ರೇಕಿಂಗ್ ನ್ಯೂಸ್‍ಗೆ ಹಲವರ ಬದುಕನ್ನೇ ಕಿತ್ತುಕೊಳ್ಳುವುದಕ್ಕೂ ಸಾಧ್ಯವಿರುತ್ತದೆ. ಹೀಗಿರುವಾಗ ಮಾಧ್ಯಮಗಳು ವಹಿಸಬೇಕಾದ ಎಚ್ಚರವಾದರೂ ಎಂಥದ್ದು?
      ಪತ್ರಿಕೆಗಳ ವಿಶ್ವಾಸಾರ್ಹತೆ ಇವತ್ತು ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ಓದುಗನೊಬ್ಬ ಒಂದು ಸುದ್ದಿಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಪತ್ರಿಕೆಗಳನ್ನು ಓದುವಷ್ಟು. ವಿಶೇಷ ಏನೆಂದರೆ ಕಳ್ಳ, ದರೋಡೆಕೋರ, ಅತ್ಯಾಚಾರಿಯೆಲ್ಲ ಒಂದು ಬಗೆಯ ಮುಚ್ಚುಮರೆಯೊಂದಿಗೆ ಸಮಾಜದಲ್ಲಿ ಬದುಕುತ್ತಿರುತ್ತಾರೆ. ತಾವು ಏನು ಮಾಡಿದ್ದೇವೋ ಅವೆಲ್ಲ ಗೌರವಾರ್ಹವಲ್ಲ ಎಂಬುದು ಅವರನ್ನು ಚುಚ್ಚುತ್ತಿರುತ್ತದೆ. ಆದರೆ ಪತ್ರಿಕೆಗಳಿಗೆ (ಪತ್ರಕರ್ತರಿಗೆ) ಇಂಥ ಪಾಪ ಪ್ರಜ್ಞೆಯೂ ಇಲ್ಲ. ಪತ್ರಿಕೆಯೊಂದು ಪರಮ ಸುಳ್ಳನ್ನು ಮುದ್ರಿಸಿದರೂ ಸುಭಗನಂತೆ ಫೋಸು ಕೊಡುವುದೇ ಹೆಚ್ಚು. ಇಂಥ ವೈರುಧ್ಯವನ್ನು ಸಮಾಜ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು?ಸಮಾಜದ ಆರೋಗ್ಯವನ್ನು ಕೆಡಿಸಬಲ್ಲಂಥ  ಸುದ್ದಿಯನ್ನು ಪ್ರಕಟಿಸಿಯೂ ಕನಿಷ್ಠ ಕ್ಷಮೆ ಯಾಚಿಸುವ ಸವ್ ಜನ್ಯವೂ  ಇಲ್ಲ ಅಂದರೆ ಏನರ್ಥ? ನಿಜವಾಗಿ, ಸುಳ್ಳು ಹೇಳುವ ವ್ಯಕ್ತಿಗೂ ಸುಳ್ಳು ಬರೆಯುವ ಪತ್ರಿಕೆಗೂ ಯಾವ ವ್ಯತ್ಯಾಸವೂ ಇಲ್ಲ. ಕೋಮುವಾದಿ ವ್ಯಕ್ತಿಗೂ ಪತ್ರಿಕೆಗೂ ಖಂಡಿತ ಅಂತರವಿಲ್ಲ. ಒಂದು ವೇಳೆ ಸುಳ್ಳನಿಗೆ ಸಮಾಜದಲ್ಲಿ ಯಾವ ಸ್ಥಾನವಿದೆಯೋ ಅದೇ ಸ್ಥಾನವನ್ನು ಸುಳ್ಳು ಬರೆಯುವ ಪತ್ರಿಕೆಗಳಿಗೂ ಸಮಾಜ ನೀಡತೊಡಗಿದರೆ ಖಂಡಿತ ಅದು ತನ್ನನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಿದೆ.
     ಅಂದಹಾಗೆ, ಪತ್ರಿಕೆಗಳಿಗೂ ಕೆಲವು ಹೊಣೆಗಾರಿಕೆಗಳಿವೆ. ಪ್ರತಿದಿನ ಹದಿನಾಲ್ಕೋ ಹದಿನೆಂಟೋ ಪುಟಗಳನ್ನು ತಯಾರಿಸುವ ಸಂಪಾದಕೀಯ ಬಳಗಕ್ಕೂ ಕೆಲವು ಜವಾಬ್ದಾರಿಗಳಿವೆ. ಪುಟಗಳನ್ನು ಅಕ್ಷರಗಳಿಂದ ತುಂಬಿಸುವುದಷ್ಟೇ ಪತ್ರಿಕೋದ್ಯಮ ಅಲ್ಲ. ಆ ಪ್ರತಿ ಅಕ್ಷರವೂ ಸಮಾಜದ ಆರೋಗ್ಯವನ್ನು ಕಾಪಾಡುವಷ್ಟು ಸತ್ಯ, ನ್ಯಾಯ ನಿಷ್ಠವೂ ಆಗಿರಬೇಕಾಗುತ್ತದೆ. ಎಲ್ಲೋ ಕಂಪ್ಯೂಟರಿನ ಮುಂದೆ ಕೂತು ಎಲೆಕ್ಟ್ರಿಕ್ ವಯರುಗಳನ್ನು ಜಿಲೆಟಿನ್ ಕಡ್ಡಿಗಳೆಂದೂ ಪಟಾಕಿಯನ್ನು ಬಾಂಬೆಂದೂ ಬರೆಯುವುದು ಸುಲಭ. ಮೂಲಗಳು ತಿಳಿಸಿವೆ ಎಂಬ ಎಂಟು ಅಕ್ಷರಗಳನ್ನು ಬಳಸಿ ಭಯೋ ತ್ಪಾದನೆಯ ಸ್ಕ್ರಿಪ್ಟ್ ರಚಿಸುವುದೇನೂ ಕಷ್ಟವಲ್ಲ.  ಆದರೆ, ಆ ಸುದ್ದಿ ಮಾಡುವ ಪರಿಣಾಮವೇನು ಸಣ್ಣದೇ? ಭಯೋತ್ಪಾದನೆಯ ಹೆಸರಲ್ಲಿ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಯುವಕರ ಬಂಧನವಾದಾಗ ಒಂದೆರಡು ಪತ್ರಿಕೆಗಳನ್ನು ಬಿಟ್ಟರೆ ಉಳಿದಂತೆ ಎಲ್ಲ ಕನ್ನಡ ಪತ್ರಿಕೆಗಳೂ ಧಾರಾಳ ಕತೆಗಳನ್ನು ಬರೆದಿದ್ದವು. ಅವರಲ್ಲಿ ಸಿಕ್ಕಿರುವುದು ಕೇವಲ ಎರಡೇ ಎರಡು ಬಂದೂಕುಗಳಾದರೂ, ಕೃಷ್ಣರಾಜ ಸಾಗರ ಅಣೆಕಟ್ಟು  ಸ್ಫೋಟ ಸಹಿತ ಹತ್ತಾರು ಭಯಾನಕ ವಿಧ್ವಂಸಕ ಕೃತ್ಯಗಳ ಪಟ್ಟಿಯನ್ನು ತಯಾರಿಸಿ ಅವು ಓದುಗರ ಮುಂದಿಟ್ಟಿದ್ದುವು. ಬಾಂಬು ಬಿಡಿ ಸಣ್ಣದೊಂದು ಗರ್ನಾಲನ್ನೂ ಸಂಗ್ರಹಿಸಿಡದ ಈ ಯುವಕರು ಕೃಷ್ಣರಾಜ ಸಾಗರವನ್ನು ಹೇಗೆ ಸ್ಫೋಟಿಸುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಕತೆ ಬರೆದ ಪತ್ರಕರ್ತರಿಗಿರಲಿಲ್ಲ. ಆದ್ದರಿಂದಲೇ ಭಟ್ಕಳದ ಬಂದ್ ಇಷ್ಟವಾಗುವುದು. ಅಲ್ಲಿನ ಓದುಗರು ಅಕ್ಷರ ಭಯೋತ್ಪಾದನೆಯ ವಿರುದ್ಧ ಹೊಸದೊಂದು ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ತಮ್ಮ ಪ್ರಸಾರ ಸಂಖ್ಯೆಯನ್ನೋ ಇನ್ನಾವುದನ್ನೋ ಗುರಿಯಿರಿಸಿಕೊಂಡು ಪರಮ ಸುಳ್ಳನ್ನು ಸುದ್ದಿಯ ಮುಖವಾಡದಲ್ಲಿ ಪ್ರಕಟಿಸುವ ಪತ್ರಿಕೆಗಳಿಗೆ ಅವರು ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಇಂಥ ಪ್ರತಿಭಟನೆಗಳು ಎಲ್ಲೆಡೆ ನಡೆಯಬೇಕು. ಜಾಗೃತ ಓದುಗರಿದ್ದಾಗ ಮಾತ್ರ ಮೌಲ್ಯ ನಿಷ್ಠ ಸುದ್ದಿಗಳು ಪ್ರಕಟವಾಗಲು ಸಾಧ್ಯ. ಆದ್ದರಿಂದ ಭಯೋತ್ಪಾದಕ ಪತ್ರಿಕೆಗಳನ್ನು ಕಂಬಿಯ ಹಿಂದಕ್ಕೆ ಕಳುಹಿಸುವ ಹೊಣೆಗಾರಿಕೆಯನ್ನು ಓದುಗರೇ ವಹಿಸಿಕೊಳ್ಳಲಿ.

Monday 8 October 2012

ಪ್ರೀತಿಸುವ ಮಕ್ಕಳು ಮತ್ತು ಕರೆಂಟ್ ಕೊಡುವ ಹೆತ್ತವರು

ಈ ಸುದ್ದಿಗಳನ್ನು ಓದಿ
1. ಚಿಕ್ಕಮಗಳೂರಿನಲ್ಲಿ ಮೇಲ್ಜಾತಿಯ ಯುವತಿ ಮತ್ತು ಕೆಳಜಾತಿಯ ಯುವಕನ ನಡುವಿನ ಪ್ರೇಮ ಪ್ರಕರಣವು ಮೂವರನ್ನು ಬಲಿ ಪಡೆದಿದೆ.                                               - ಮಾಧ್ಯಮ ಸುದ್ದಿ: 2012 ಅಕ್ಟೋಬರ್ 5
2. ಪರಸ್ಪರ ಪ್ರೀತಿಸುತ್ತಿದ್ದ ದಿಲ್ಲಿಯ ಮೇಲ್ಜಾತಿಯ ಆಶಾ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಯೋಗೀಶ್‍ರನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ ಆಶಾಳ ಹೆತ್ತವರ ಸಹಿತ 5 ಮಂದಿಗೆ ದಿಲ್ಲಿ ಹೈಕೋರ್ಟು ಮರಣ ದಂಡನೆ ವಿಧಿಸಿದೆ.-
        - ಮಾಧ್ಯಮ ಸುದ್ದಿ: 2012, ಅಕ್ಟೋಬರ್ 6
3. ಸಾವಿರ ಗಂಡು ಮಕ್ಕಳಿಗೆ 831 ಹೆಣ್ಣು ಮಕ್ಕಳಷ್ಟೇ ಇರುವ ಹರ್ಯಾಣದಲ್ಲಿ ಕಳೆದ 28 ದಿನಗಳಲ್ಲಿ 9ನೇ ಅತ್ಯಾಚಾರ ಪ್ರಕರಣ ನಡೆದಿದೆ.                                                                                             -                ಮಾಧ್ಯಮ ಸುದ್ದಿ: 2012, ಅಕ್ಟೋಬರ್ 8
ಕಳೆದ ಒಂದು ವಾರದಲ್ಲಿ ನಡೆದ ನೂರಾರು ಅಪರಾಧ ಸುದ್ದಿಗಳಲ್ಲಿ ಇಲ್ಲಿರುವುದು ಮೂರು ಮಾತ್ರ. ಒಂದು ವೇಳೆ ಕಳೆದೊಂದು ವಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ಎಲ್ಲ ಸುದ್ದಿಗಳನ್ನೂ ಒಟ್ಟು ಸೇರಿಸಿ ಪರಿಶೀಲಿಸಿದರೆ ಅವುಗಳಲ್ಲಿ ಅಪರಾಧ ಸುದ್ದಿಗಳ ಸಂಖ್ಯೆಯೇ ಹೆಚ್ಚಿದ್ದೀತು. ನಿಜವಾಗಿ, ಹದಿಹರೆಯದ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವುದಕ್ಕೆ ಪ್ರಚೋದನೆ ಕೊಡುವ ಯಾವುದಕ್ಕೂ ಈ ದೇಶದಲ್ಲಿ ನಿಷೇಧ ಇಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗುವ ವಾರದ ಕತೆ, ಕವಿತೆಗಳಲ್ಲಿ 'ಪ್ರೇಮ' ಇದ್ದೇ ಇರುತ್ತದೆ. ಹೆಣ್ಣು-ಗಂಡು ಪರಸ್ಪರ ಆಕರ್ಷಣೆಗೊಳ್ಳುವುದು, ಪರಾರಿಯಾಗಿಯೋ, ಊರಲ್ಲೇ ಇದ್ದುಕೊಂಡೋ ಮದುವೆಯಾಗುವುದು, ಬಳಿಕ ಆದರ್ಶ ದಂಪತಿಗಳಾಗುವುದೆಲ್ಲಾ ಕತೆ-ಕವನಗಳಲ್ಲಿ ಮಾಮೂಲು. ಇಲ್ಲಿ ಪ್ರಕಟವಾಗುವ ಸಾಕಷ್ಟು ಕಾದಂಬರಿಗಳು ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದೇ ಹದಿ ಹರೆಯವನ್ನು. ಟಿ.ವಿ. ಧಾರಾವಾಹಿಗಳಂತೂ ಪ್ರೀತಿ-ಪ್ರೇಮಗಳ ಹೊರತು ಬದುಕುಳಿಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿಗೆ ತಲುಪಿ ಬಿಟ್ಟಿವೆ. ಸಿನಿಮಾಗಳು  ತಯಾರಾಗುವುದೂ  ಪ್ರೇಮದ ಸುತ್ತಲೇ. ಸಿನಿಮಾ ತಯಾರಾಗುವುದಕ್ಕಿಂತ ಮೊದಲು ನಿರ್ಮಾಪಕ, ನಿರ್ದೇಶಕ, ನಟ-ನಟಿಯರೆಲ್ಲಾ ಪತ್ರಿಕಾಗೋಷ್ಠಿ ಕರೆಯುತ್ತಾರೆ. ಹೀರೋ ಮತ್ತು ಹೀರೋಯಿನ್ ತಂತಮ್ಮ ಪಾತ್ರಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಎಷ್ಟು ಪ್ರೇಮದ ಹಾಡು, ಎಷ್ಟು ವಿರಹದ ಹಾಡು, ಹೀರೋ ಮತ್ತು ಹೀರೋಯಿನ್ ಪರಸ್ಪರ ಪ್ರೇಮಿಗಳಾಗಿ ಕಾಣಿಸಿಕೊಳ್ಳುವ ರೊಮ್ಯಾಂಟಿಕ್ ಹಾಡುಗಳು ಹೇಗಿವೆ ಎಂಬುದನ್ನೆಲ್ಲಾ ಅವರು ವಿವರಿಸುತ್ತಾರೆ. ಇನ್ನು, ಕಾಲೇಜುಗಳ ಕ್ಯಾಂಪಸ್ಸುಗಳು ಹೇಗಿರುತ್ತವೆಯೆಂದರೆ, ಹದಿಹರೆಯವು ರೆಕ್ಕೆಗಳನ್ನು ಕಟ್ಟಿಕೊಂಡು ಹಾರಾಡುವುದಕ್ಕೆ ಧೈರ್ಯ ಮಾಡುವಷ್ಟು ಮುಕ್ತವಾಗಿರುತ್ತವೆ. ಪ್ರೀತಿ-ಪ್ರೇಮಕ್ಕೆ ನಿಷೇಧವಿದೆ ಎಂಬ ಬೋರ್ಡೇನೂ ಅಲ್ಲಿ ಇರುವುದೂ ಇಲ್ಲ. ಜಾತಿಗಳ ಬಗ್ಗೆ, ಪ್ರೀತಿ-ಪ್ರೇಮಗಳ ಬಗ್ಗೆ ಭಯಂಕರ ಕಟ್ಟುನಿಟ್ಟನ್ನು ಹೊಂದಿರುವ ಕುಟುಂಬದ ಮಕ್ಕಳಾಗಲಿ ಅಥವಾ ಈ ಬಗ್ಗೆ ಉದಾರ ನಿಲುವನ್ನು ಹೊಂದಿರುವ ಕುಟುಂಬದ ಮಕ್ಕಳಾಗಲಿ ಬೆಳೆಯುತ್ತಿರುವುದು ಇಂಥ ವಾತಾವರಣದಲ್ಲೇ. ಆ ಮಕ್ಕಳ ಮುಂದೆ ಶಿಸ್ತಿನ ಅಪ್ಪ ಇರುವಂತೆಯೇ, ಆತ ಯಾವುದನ್ನು ಅಶಿಸ್ತು ಅನ್ನುತ್ತಾನೋ ಅದನ್ನೇ ಆಧುನಿಕತೆ ಎಂದು ಕಲಿಸುವ ಪರಿಸರವೂ ಇರುತ್ತದೆ. ಜಾತಿಯನ್ನೇ ಪ್ರಬಲವಾಗಿ ಪ್ರತಿಪಾದಿಸುವ ತಂದೆಗೆ ಸಡ್ಡು ಹೊಡೆಯುವಂತೆ ಪ್ರೀತಿ-ಪ್ರೇಮದ ಎದುರು ದಯನೀಯವಾಗಿ ಸೋಲೊಪ್ಪುವ ಜಾತಿಯನ್ನು, ವಸ್ತುವಾಗಿಸಿಕೊಂಡು ಪ್ರದರ್ಶನವಾಗುವ ಸಿನಿಮಾಗಳೂ ಇರುತ್ತವೆ. ಹೀಗಿರುವಾಗ ಹದಿಹರೆಯ ಗೊಂದಲಕ್ಕೊಳಗಾಗುವುದನ್ನು ಹೇಗೆ ತಪ್ಪೂಂತ ಹೇಳುವುದು? ಒಂದು ಸಮಾಜ ಆರೋಗ್ಯಪೂರ್ಣ ಆಗಿರಬೇಕಾದರೆ ಆ ಸಮಾಜದ ಯಾವುದಾದರೊಂದು ಅಂಗ ಮಾತ್ರ ಆರೋಗ್ಯಪೂರ್ಣವಾಗಿದ್ದರೆ ಸಾಲುವುದಿಲ್ಲವಲ್ಲ. ನಳ್ಳಿಯಲ್ಲಿ ನೀರು ಬರಬೇಕಾದರೆ ನಳ್ಳಿ ಸಮರ್ಪಕವಾಗಿದ್ದರಷ್ಟೇ ಸಾಕೇ? ಟ್ಯಾಂಕ್‍ನಲ್ಲಿ ನೀರೂ ಇರಬೇಕಲ್ಲವೇ? ಆ ಟ್ಯಾಂಕ್‍ಗೆ ನೀರು ತುಂಬಿಸುವ ವ್ಯವಸ್ಥೆಯೂ ಆಗಬೇಕಲ್ಲವೇ? ಇನ್ನು, ನೀರು ಇದ್ದೂ ವಿದ್ಯುತ್ ಇಲ್ಲದಿದ್ದರೆ ಏನಾದೀತು? ಒಂದು ರೀತಿಯಲ್ಲಿ ಯುವ ಸಮೂಹ ನಮ್ಮದೇ ಸಮಾಜದ ಪ್ರತಿಬಿಂಬಗಳು. ಅನಾರೋಗ್ಯ ಪೀಡಿತ ಪರಿಸರವನ್ನು ಅವರ ಕೈಗಿತ್ತು, ಆರೋಗ್ಯಪೂರ್ಣ ಫಲಿತಾಂಶವನ್ನು ನಾವು ನಿರೀಕ್ಷಿಸುವುದಾದರೂ ಯಾಕೆ? ಜಾತಿಪದ್ಧತಿಯನ್ನು ಗೌರವ ಪೂರ್ವಕವಾಗಿ ಕಾಣುವ ಸ್ವಾಮೀಜಿಗಳು ನಮ್ಮ ನಡುವೆ ಇದ್ದಾರೆ. ಜಾತಿ ಪದ್ಧತಿಯ ಪ್ರಬಲ ಸಂಕೇತದಂತಿರುವ ಮಡೆ ಸ್ನಾನದಂಥ ಆಚರಣೆಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸರಕಾರಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕೋರ್ಟು ಶಿಕ್ಷೆ ವಿಧಿಸುವುದರಿಂದ ಯಾವ ಸೂಚನೆ ರವಾನೆಯಾಗುತ್ತದೆ?
         ನಿಜವಾಗಿ, ಅಪರಾಧಗಳಲ್ಲಿ ಯಾರು ಪಾಲುಗೊಳ್ಳುತ್ತಾರೋ ಅವರಷ್ಟೇ ಆ ಅಪರಾಧಕ್ಕೆ ಕಾರಣ ಆಗಿರುವುದಲ್ಲ. ಅವರ ಹಿಂದೆ ಸಮಾಜ ಇರುತ್ತದೆ. ಆ ಸಮಾಜದ ಭಾಗವಾಗಿರುವ ಸಿನಿಮಾ, ಪತ್ರಿಕೆ, ಟಿ.ವಿ. ಮುಂತಾದುವುಗಳಿರುತ್ತವೆ. ದುರಂತ ಏನೆಂದರೆ, ಯಾವುದೋ ಒಂದು ಸಿನಿಮಾದಿಂದಲೋ ಕಾದಂಬರಿಯಿಂದಲೋ ಪ್ರಚೋದಿತಗೊಂಡು ಹೆಣ್ಣು-ಗಂಡು ಪರಸ್ಪರ ಪ್ರೀತಿಸುತ್ತಾರೆ. ಆದರೆ ಜಾತಿ ಸಂಪ್ರದಾಯವನ್ನು ಬಲವಾಗಿ ಆಚರಿಸಿಕೊಂಡು ಬರುವ ಹೆತ್ತವರು ಕುಪಿತಗೊಂಡು ಆ ಪ್ರೇಮವನ್ನು  ವಿದ್ಯುತ್ ಹರಿಸಿ ಸಾಯಿಸುತ್ತಾರೆ. ಆದರೆ ಕೋರ್ಟು ಶಿಕ್ಷೆ ವಿಧಿಸುವುದು ಆ ಹೆತ್ತವರಿಗೇ ಹೊರತು ಆ ಸಿನಿಮಾಕ್ಕೋ ಅಥವಾ ಜಾತಿಯ ಪ್ರತಿಪಾದಕರಿಗೋ ಅಲ್ಲ. ಅಂದಹಾಗೆ, ಮದ್ಯಪಾನ ಮಾಡುವುದು ಅಥವಾ ಮದ್ಯ ಮಾರಾಟ ಮಾಡುವುದೆಲ್ಲ ಈ ದೇಶದಲ್ಲಿ ಅಪರಾಧ ಅಲ್ಲ. ಆದರೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಅಮಲೇರಿ ಕೊಲೆ ಕೃತ್ಯದಲ್ಲಿ ಭಾಗಿಯಾದರೆ ಆತ ಅಪರಾಧಿ ಎನಿಸಿಕೊಳ್ಳುತ್ತಾನಲ್ಲದೆ ಕೋರ್ಟು ಆತನಿಗೆ ಶಿಕ್ಷೆ ವಿಧಿಸುತ್ತದೆ. ವಿಶೇಷ ಏನೆಂದರೆ, ಆತನನ್ನು ಅಪರಾಧಕ್ಕೆ ಪ್ರಚೋದಿಸಿದ್ದೇ ಮದ್ಯಪಾನ. ಹಾಗಿದ್ದೂ ಕೋರ್ಟು ಶಿಕ್ಷೆ ವಿಧಿಸುವಾಗ ಆತನನ್ನು ಮಾತ್ರ ಪರಿಗಣಿಸುತ್ತದೆಯೇ ಹೊರತು ಮದ್ಯ ಸರಬರಾಜು ಮಾಡಿದ ಸರಕಾರವನ್ನಲ್ಲ. ಇಂಥ ಗೊಂದಲಗಳುಳ್ಳ ಸಮಾಜದಲ್ಲಿ ಮರ್ಯಾದಾ ಹತ್ಯೆಗಳು, ಅತ್ಯಾಚಾರಗಳೆಲ್ಲ ಇಲ್ಲವಾಗುವುದು ಹೇಗೆ? ಸಮಾಜದ ಒಟ್ಟು ರಚನೆಯೇ ಗೊಂದಲಗಳ ಮೇಲಿದೆ. ಆದ್ದರಿಂದ ಮೊತ್ತಮೊದಲು ಈ ಗೊಂದಲಗಳ ನಿವಾರಣೆಯ ಕುರಿತಂತೆ ಸಾರ್ವಜನಿಕ ಚರ್ಚೆಗಳು ನಡೆಯಬೇಕು. ಅಂದಹಾಗೆ, ಅನಾರೋಗ್ಯಪೂರ್ಣ ಸಮಾಜವನ್ನು ಕಟ್ಟಿ, ಆರೋಗ್ಯಪೂರ್ಣ ಸುದ್ದಿಗಳನ್ನು ನಾವು ನಿರೀಕ್ಷಿಸುವುದಕ್ಕೆ ಯಾವ ಅರ್ಥವೂ ಇಲ್ಲ..

Monday 1 October 2012

ಕಾವೇರಿಯನ್ನು ರಾಜಕಾರಣಿಗಳಿಂದ ಕಸಿದು ರೈತರಿಗೆ ಒಪ್ಪಿಸಿಬಿಡೋಣ

ರೈತ ಎಂಬ ಎರಡಕ್ಷರಕ್ಕೆ ಡಿಕ್ಷನರಿಯಲ್ಲಿರುವ ಅರ್ಥ ಬೇಸಾಯಗಾರ ಎಂದು. ಸಾಮಾನ್ಯವಾಗಿ ಯಾವುದೇ ಒಂದು ಪದಕ್ಕೆ ಡಿಕ್ಷನರಿಯಲ್ಲಿ ಒಂದಕ್ಕಿಂತ ಹೆಚ್ಚು ಅರ್ಥ, ವ್ಯಾಖ್ಯಾನಗಳಿರುತ್ತವೆ. ಆದರೆ ರೈತನಿಗೆ ಇಲ್ಲವೇ ಮನುಷ್ಯನಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳೇ ಇಲ್ಲ. ಮನುಷ್ಯನನ್ನು ಮನುಜ ಎಂದಷ್ಟೇ ಡಿಕ್ಷನರಿ ವ್ಯಾಖ್ಯಾನಿಸುತ್ತದೆ. ಒಂದು ರೀತಿಯಲ್ಲಿ ಮನುಷ್ಯ ಎಂದ ಕೂಡಲೇ ಕಾಲುಗಳಿಂದ ನಡೆಯುವ, ಕೈಗಳಿಂದ ಕೆಲಸ ಮಾಡುವ, ಬುದ್ಧಿ-ಭಾವ ಇರುವ, ಬಟ್ಟೆ ಧರಿಸುವ.. ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬರುವಂತೆಯೇ, ರೈತ ಎಂಬ ಪದವೂ, ಠಾಕು-ಠೀಕು ಇಲ್ಲದ, ನೇಗಿಲನ್ನೋ ಭತ್ತದ ಮೂಟೆಯನ್ನೋ ಹೊತ್ತು ನಡೆದಾಡುವ ಶ್ರಮಜೀವಿಗಳ ಗುಂಪೊಂದನ್ನು ಕಣ್ಣ ಮುಂದೆ ತರುತ್ತದೆ. ಹಸಿವು, ಬಾಯಾರಿಕೆ, ನೋವುಗಳ ವಿಷಯದಲ್ಲಿ ಭಾರತದ ಮನುಷ್ಯನಿಗೂ ಅಮೇರಿಕದ ಮನುಷ್ಯನಿಗೂ ನಡುವೆ ವ್ಯತ್ಯಾಸ ಇರಲು ಸಾಧ್ಯವಿಲ್ಲವಲ್ಲ. ಹಾಗೆಯೇ ಕರ್ನಾಟಕ ಮತ್ತು ತಮಿಳುನಾಡು ರೈತರ ಮಧ್ಯೆಯೂ ವ್ಯತ್ಯಾಸ ಇರಲು ಸಾಧ್ಯವಿಲ್ಲ. ಈ ರೈತರು ಬಳಸುತ್ತಿರುವ ನೀರಿನ ಮೂಲ ಒಂದೇ. ಭಾಷೆ ಭಿನ್ನ ಆದರೂ ದೇಶ ಒಂದೇ. ಗದ್ದೆಗಳಲ್ಲಿ ಬೆಳೆಯುತ್ತಿರುವುದೂ ಬಹುತೇಕ ಒಂದೇ. ಇಷ್ಟೆಲ್ಲ ಇದ್ದೂ ಕಾವೇರಿ ಎಂದ ಕೂಡಲೇ ಇವರೆಲ್ಲ 'ಅವರು', 'ಇವರು' ಆಗಿ ವಿಭಜನೆಗೊಳ್ಳುವುದೇಕೆ? ಈ ವಿಭಜನೆಗೂ ರಾಜಕೀಯಕ್ಕೂ ನಡುವೆ ಇರುವ ಸಂಬಂಧಗಳೇನು? ತಮಿಳುನಾಡು ಮತ್ತು ಕರ್ನಾಟಕದ ರೈತರು ಒಟ್ಟು ಸೇರಿ 2003ರಲ್ಲೇ ‘ಕಾವೇರಿ ಕುಟುಂಬ' ಎಂಬೊಂದು ತಂಡವನ್ನು ರಚಿಸಿಕೊಂಡಿದ್ದರು. ರೈತರು, ನೀರಾವರಿ ತಜ್ಞರೂ ಸೇರಿದಂತೆ 20ರಷ್ಟು ಸದಸ್ಯರಿರುವ ಆ ತಂಡ, ಉಭಯ ರಾಜ್ಯಗಳ ನೀರಾವರಿ ಪ್ರದೇಶಗಳಿಗೆ ಭೇಟಿ ನೀಡಿದೆ. ರೈತರ ಮಧ್ಯೆ ಮಾತುಕತೆಗಳನ್ನು ಏರ್ಪಡಿಸಿವೆ. ಶೀಘ್ರ ಸರಕಾರದ ಮುಂದೆ ವರದಿ ಇಡುವ ಸಾಧ್ಯತೆಯೂ ಇದೆ. ಆದರೆ 2002ರಲ್ಲಿ ಕಬಿನಿ ಜಲಾಶಯಕ್ಕೆ ಹಾರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ರಾಜಕೀಯ ಪಕ್ಷಗಳಾಗಲಿ ಅಥವಾ ತಮಿಳುನಾಡನ್ನು ನೀರು ಕೊಳ್ಳೆ ಹೊಡೆಯುವ ದರೋಡೆಕೋರನಂತೆ ಚಿತ್ರಿಸುವ ಇವತ್ತಿನ ರಾಜಕಾರಣಿಗಳಾಗಲಿ, ಈ ‘ಕಾವೇರಿ ಕುಟುಂಬದ' ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಕಳೆದ 9 ವರ್ಷಗಳಿಂದ ಈ ಕುಟುಂಬದ ಸದಸ್ಯರು ತಮ್ಮದೇ ಖರ್ಚಿನಲ್ಲಿ ಸಮೀಕ್ಷೆ ನಡೆಸಿದ್ದಾರೆ, ಮಾತುಕತೆ ಆಯೋಜಿಸಿದ್ದಾರೆ. ಒಂದು ವೇಳೆ ರಾಜಕಾರಣಿಗಳು 'ಕಾವೇರಿ ಕುಟುಂಬ'ಕ್ಕೆ ಸಂಪೂರ್ಣ ಬೆಂಬಲ ಸಾರಿರುತ್ತಿದ್ದರೆ, ಇವತ್ತು ಈ ಪರಿಸ್ಥಿತಿ ಬರುವ ಸಾಧ್ಯತೆ ಇತ್ತೇ? ಸುಪ್ರೀಮ್ ಕೋರ್ಟ್‍ನಲ್ಲಿ ಸರಕಾರ ಈ ವರೆಗೆ ಖರ್ಚು ಮಾಡಿರುವ ಮೊತ್ತದ ಸಣ್ಣದೊಂದು ಭಾಗವನ್ನು ಈ 'ಕುಟುಂಬಕ್ಕೆ' ರವಾನಿಸುತ್ತಿದ್ದರೆ ಇವತ್ತು 'ನೀರು' ಈ ಮಟ್ಟದಲ್ಲಿ ಸುದ್ದಿಗೊಳಗಾಗುತ್ತಿತ್ತೇ?
       ನಿಜವಾಗಿ, ನೀರು, ಮನುಷ್ಯರನ್ನು ತಮಿಳು, ಕನ್ನಡ, ಮರಾಠಿ.. ಎಂದೆಲ್ಲಾ ವಿಭಜಿಸುವುದೇ ಇಲ್ಲ. ಕಾವೇರಿ ನದಿಯು ಕರ್ನಾಟಕದ ರೈತರಿಗೆ ಗುಣಮಟ್ಟದ ನೀರನ್ನೂ ತಮಿಳುನಾಡು ರೈತರಿಗೆ ಕಳಪೆ ಮಟ್ಟದ ನೀರನ್ನೂ ಕೊಡುತ್ತಿರುವ ಬಗ್ಗೆ ಈ ವರೆಗೆ ಯಾರೂ ದೂರಿಕೊಂಡಿಲ್ಲ. ಇಷ್ಟಕ್ಕೂ, ಕರ್ನಾಟಕ ಮತ್ತು ತಮಿಳುನಾಡು ಎಂಬೆರಡು ರಾಜ್ಯಗಳಲ್ಲಿ ರೈತರು ಹಂಚಿಹೋಗದೇ ಇರುತ್ತಿದ್ದರೆ, ಕಾವೇರಿ ವಿವಾದವಾಗುತ್ತಿತ್ತೇ? ಇವು ಎರಡು ರಾಜ್ಯಗಲಾಗುವ  ಬದಲು ಒಂದೇ ರಾಜ್ಯವಾಗಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಪ್ರತಿಭಟನೆಗಳಾಗುತ್ತಿದ್ದವೇ? ಕೋರ್ಟಿನಲ್ಲಿ ಮೊಕದ್ದಮೆ ದಾಖಲಾಗುತ್ತಿತ್ತೇ? ಅಂದರೆ, ಸದ್ಯದ ವಿವಾದ ಏನಿದೆಯೋ ಅದಕ್ಕೆ ನೀರು ನೆಪ ಮಾತ್ರ. ನಿಜವಾದ ಕಾರಣ ಎರಡು  ರಾಜ್ಯಗಳಲ್ಲಿ ರೈತರು ಹಂಚಿಹೋದದ್ದು. ಅಂದಹಾಗೆ, ಕಾವೇರಿ ನೀರನ್ನು ಬಳಸಿ ದಶಕಗಳ ಕಾಲ ಉತ್ತು-ಬಿತ್ತ ಕರ್ನಾಟಕದ ರೈತನೊಬ್ಬ ತಮಿಳುನಾಡಿಗೆ ವಲಸೆ ಹೋದನೆಂದಿಟ್ಟುಕೊಳ್ಳಿ. ಅಲ್ಲಿ ಆತನ ನಿಲುವು ಏನಿದ್ದೀತು? ಆತ ತಮಿಳುನಾಡಿನಲ್ಲಿ ನಿಂತು ಕರ್ನಾಟಕದ ರೈತರ ಪರ ಮಾತಾಡುವ ಸಾಧ್ಯತೆ ಇದೆಯೇ? ನ್ಯಾಯ ಕರ್ನಾಟಕದ ಪರ ಇದ್ದರೂ ಅದನ್ನು ಬಹಿರಂಗವಾಗಿ ಹೇಳಿ ಆತನಿಗೆ ದಕ್ಕಿಸಿಕೊಳ್ಳುವುದು ಇವತ್ತು ಸಾಧ್ಯವಾ? ಯಾಕೆಂದರೆ, ಒಟ್ಟು ಪರಿಸ್ಥಿತಿಯನ್ನು ರಾಜಕಾರಣಿಗಳು ಅಷ್ಟಂಶ ಕೆಡಿಸಿಬಿಟ್ಟಿದ್ದಾರೆ. ಒಟ್ಟು ವಿವಾದವೇ ಭಾವನಾತ್ಮಕವಾಗಿ ಬಿಟ್ಟಿದೆ. ಇಂಥ ಹೊತ್ತಲ್ಲಿ ಈ ವಿವಾದವನ್ನು ರಾಜಕಾರಣಿಗಳು ಪರಿಹರಿಸಬಲ್ಲರೆಂದು ಹೇಗೆ ನಿರೀಕ್ಷಿಸುವುದು? ಅವರಾಡುವ ಪ್ರತಿ ಪದವೂ ಓಟಿನ ಲೆಕ್ಕಾಚಾರದಲ್ಲೇ ಇರುತ್ತದೆ. ಒಂದು ವೇಳೆ ಸುಪ್ರೀಮ್ ಕೋರ್ಟು ಮುಂದೊಂದು ದಿನ ನೀಡುವ ತೀರ್ಪನ್ನು ಎರಡೂ ರಾಜ್ಯಗಳ ರೈತರು ಸ್ವಾಗತಿಸಿದರೂ ರಾಜಕಾರಣಿಗಳು ಸ್ವಾಗತಿಸುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಸ್ವಾಗತಿಸುವುದಕ್ಕಿಂತ ವಿರೋಧಿಸುವುದರಲ್ಲೇ ಅವರಿಗೆ ಅವಕಾಶಗಳು ಹೆಚ್ಚಿರುತ್ತವೆ.
      ನಿಜವಾಗಿ ಕಾವೇರಿಯ ನದಿ ನೀರನ್ನು ಕನ್ನಡಿಗರು ಇಲ್ಲವೇ ತಮಿಳರು ಸಂಶೋಧನೆಯಿಂದ ಸೃಷ್ಟಿಸಿಕೊಂಡದ್ದೇನೂ ಅಲ್ಲ. ಇಂತಿಂಥ ಪ್ರದೇಶದಲ್ಲಿ ಮಾತ್ರ ಹರಿಯಬೇಕು ಎಂದು ಯಾರಾದರೂ ಕೇಳಿಕೊಂಡಿದ್ದರಿಂದಾಗಿ ಅದು ಹರಿಯುತ್ತಲೂ ಇಲ್ಲ. ನಾಲ್ಕು ರಾಜ್ಯಗಳ ಲಕ್ಷಾಂತರ ಮಂದಿಯ ಪಾಲಿಗೆ ಇವತ್ತು ಈ ನೀರು ಜೀವನಾಡಿಯಾಗಿದ್ದರೆ ಅದರ ಹಿಂದೆ ಪ್ರಕೃತಿಯ ದೊಡ್ಡದೊಂದು ಸಂದೇಶ ಇದೆ. ಅದು ಸರ್ವರೂ ಸಮಾನರು ಎಂಬ ಸಂದೇಶ. ನೀರಿಗೆ ಇಲ್ಲದ ಅಸೂಯೆ, ದ್ವೇಷ, ಹೊಟ್ಟೆಕಿಚ್ಚುತನಗಳೆಲ್ಲ ಅದನ್ನು ಬಳಸುವ ಮನುಷ್ಯರಲ್ಲಿ ಇರಬಾರದು ಎಂಬ ಸಂದೇಶ. ಈ ಸಂದೇಶವನ್ನು ಮೊತ್ತಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ರಾಜಕಾರಣಿಗಳು. ಒಂದು ವೇಳೆ ರಾಜಕಾರಣಿಗಳ ಬದಲು, ‘ಕಾವೇರಿ ಕುಟುಂಬದಂಥ’ ಗುಂಪುಗಳಿಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕರೆ, ಅವರ ಹೇಳಿಕೆಗಳಿಗೆ ಬ್ರೇಕಿಂಗ್ ನ್ಯೂಸ್ ಆಗುವ ಭಾಗ್ಯ ದಕ್ಕಿದರೆ ಖಂಡಿತ ಇವತ್ತಿಗಿಂತ ಭಿನ್ನವಾದ ವಾತಾವರಣ ನಿರ್ಮಾಣವಾದೀತು. ರೈತರನ್ನು ರೈತರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಲ್ಲವರಾದರೂ ಯಾರು? ಅಂದಹಾಗೆ, ಕಾವೇರಿ ಹೋರಾಟದ ನೊಗವನ್ನು ರಾಜಕಾರಣಿಗಳಿಂದ ಕಸಿದು ಉಭಯ ರಾಜ್ಯಗಳ ರೈತರಿಗೆ  ಕೊಟ್ಟುಬಿಟ್ಟರೆ ಸಾಕು, ಅರ್ಧ ಸಮಸ್ಯೆ ಪರಿಹಾರವಾದಂತೆ. ಆದ್ದರಿಂದ ಕಾವೇರಿ ವಿವಾದವನ್ನು ಮೊತ್ತಮೊದಲು ರಾಜಕೀಯ ಮುಕ್ತಗೊಳಿಸಿ ರೈತರ ಕೈಗೆ ಒಪ್ಪಿಸಿಬಿಡೋಣ. ಉಳುವ ರೈತನಿಗೆ ಹರಿವ ನೀರನ್ನು ಹಂಚಿಕೊಳ್ಳಲು ಖಂಡಿತ ಗೊತ್ತಿದೆ.

Tuesday 25 September 2012

ದೇಶಭಕ್ತರಿಗೆ ಮನುಷ್ಯಪ್ರೇಮದ ಪಾಠ ಹೇಳಿಕೊಟ್ಟ ರೇಶ್ಮ

      2011 ಜುಲೈ 16ರಂದು ರಾತ್ರಿ, ಗುಜರಾತ್‍ನ ರೇಷ್ಮಾ ಎಂಬ ಮುಸ್ಲಿಮ್ ಮಹಿಳೆ ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾಳೆ. ತನ್ನ ಗಂಡ ಮನೆಯಲ್ಲಿ ಬಾಂಬ್ ತಂದಿಟ್ಟಿದ್ದಾನೆ ಅನ್ನುತ್ತಾಳೆ. ಪೊಲೀಸರು ಶಹಝಾದ್‍ನನ್ನು ಬಂಧಿಸುತ್ತಾರೆ. 8 ಬಾಂಬುಗಳು ಸಿಗುತ್ತವೆ. ಅಹ್ಮದಾಬಾದ್‍ನಲ್ಲಿ ನಡೆಯ ಲಿರುವ ರಥ ಯಾತ್ರೆಯಲ್ಲಿ ಈ ಬಾಂಬುಗಳನ್ನು ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳುತ್ತಾರೆ. ತಕ್ಷಣ ರೇಷ್ಮಾಳಿಗೆ ಗುಜರಾತ್ ಸರಕಾರ 25 ಸಾವಿರ ರೂಪಾಯಿಯನ್ನು ಇನಾಮಾಗಿ ಕೊಡುತ್ತದೆ. ಇದಾಗಿ ಒಂದು ವರ್ಷದ ಬಳಿಕ ಕಳೆದ ವಾರ ಸೆ. 22ರಂದು ಆಕೆಗೆ  ಗಾಡ್‍ಫ್ರೆ  ಫಿಲಿಪ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. 4 ಲಕ್ಷ  ರೂಪಾಯಿಯನ್ನೂ ನೀಡಲಾಗುತ್ತದೆ..
       ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹೆಚ್ಚಿನೆಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಒಳಪುಟದಲ್ಲಿ ಪ್ರಕಟಿಸಿರುವುದರಿಂದ ಓದುಗರು ಗಮನಿಸಿರುವ ಸಾಧ್ಯತೆ ಕಡಿಮೆ. ಅಂದಹಾಗೆ, ಈ ಸುದ್ದಿಯು ಮಾಧ್ಯಮ ವಿಶ್ಲೇಷಣೆಗೆ ಒಳಗಾಗದಿರುವುದಕ್ಕೆ ಕಾರಣವೇನು? ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸಿ ಪುಟಗಟ್ಟಲೆ ಬರೆಯುವ ಮತ್ತು ಅವರಿಗೆ ದೇಶಭಕ್ತಿಯ ಪಾಠ ಮಾಡುತ್ತಾ ಆಗಾಗ ಹೇಳಿಕೆಗಳನ್ನು ಹೊರಡಿಸುತ್ತಿರುವ ಮಂದಿಯೆಲ್ಲ ಈ ಸುದ್ದಿಯನ್ನು ಎತ್ತಿಕೊಂಡು ಯಾಕೆ ಚರ್ಚಿಸಿಲ್ಲ? ಮುಸ್ಲಿಮನೊಬ್ಬ ಕಿಸೆಯಲ್ಲಿ ಪಟಾಕಿ ಇಟ್ಟುಕೊಂಡರೂ ಅದನ್ನು ಬಾಂಬೆಂದೇ ಸಾಬೀತುಪಡಿಸುವ ಚತುರರು ಮಾಧ್ಯಮಗಳಲ್ಲಿದ್ದಾರೆ. ಪಕ್ಷ  ಮತ್ತು ಸಂಘಟನೆಗಳಲ್ಲೂ ಅವರ ಸಂಖ್ಯೆ ಸಣ್ಣದಲ್ಲ. ಹೀಗಿರುವಾಗ, ಪತಿ-ಪತ್ನಿ ಎಂಬ ಪವಿತ್ರ ಸಂಬಂಧವನ್ನೂ ಲೆಕ್ಕಿಸದೇ ರಥ ಯಾತ್ರೆಯ ಕಾವಲಿಗೆ ನಿಂತ ಘಟನೆಯೇಕೆ ವಿಶ್ಲೇಷಣೆಗೆ ಒಳಗಾಗಲಿಲ್ಲ? ಘಟನೆ ನಡೆದಿರುವುದು ಗುಜರಾತ್‍ನಲ್ಲಿ. ಅದೇ ಗುಜರಾತ್‍ನಲ್ಲಿ ಮುಸ್ಲಿಮ್ ಕೇರಿಗಳಿಗೆ ನುಗ್ಗಿ ಮನುಷ್ಯರನ್ನು ಪೆಟ್ರೋಲು, ಸೀಮೆ ಎಣ್ಣೆ ಸುರಿದು ಜೀವಂತ ದಹಿಸಿದ ಅನೇಕ ಮಂದಿಯಿದ್ದಾರೆ. ಅವರು ಯಾರದ್ದೋ ಪತಿ, ಮಗ, ಅಪ್ಪ.. ಇನ್ನೇನೋ ಆಗಿದ್ದಾರೆ. ಆದರೆ ಗುಜರಾತ್‍ನಲ್ಲಿ ಒಬ್ಬಳೇ ಒಬ್ಬ ಮಹಿಳೆ ಪೊಲೀಸರಿಗೆ ಯಾಕೆ ಇಂಥ  ದೂರು ಕೊಟ್ಟಿಲ್ಲ, ತನ್ನ ಗಂಡ ಗುಲ್ಬರ್ಗ್ ಸೊಸೈಟಿಗೆ, ನರೋಡ ಪಾಟಿಯಾಕ್ಕೆ.. ನುಗ್ಗಿ ಮುಸ್ಲಿಮರನ್ನು ಕೊಂದಿದ್ದಾನೆ ಎಂದು ಯಾಕೆ ಹೇಳಿಲ್ಲ, ಇಷ್ಟಕ್ಕೂ ಬ್ಯಾಂಕ್‍ನಲ್ಲಿ ಒಂದು ಅಕೌಂಟೂ ಇಲ್ಲದ ರೇಷ್ಮಳು ಇಷ್ಟೊಂದು ಧೈರ್ಯ ಪ್ರದರ್ಶಿಸಿರುವಾಗ ದೇಶಭಕ್ತರೆಂದು ಸ್ವಯಂ ಘೋಷಿಸುತ್ತಾ ತಿರುಗುವವರಿಗೆ ಇವೇಕೆ ಕಾಣಿಸುತ್ತಿಲ್ಲ, ದೇಶನಿಷ್ಠೆ ಅಂದರೆ ಏನು, ಏನಲ್ಲ.. ಎಂದೆಲ್ಲಾ ಪ್ರಶ್ನಿಸುವ ಸಂದರ್ಭವನ್ನಾಗಿ ರೇಷ್ಮಳ ಘಟನೆಯನ್ನು ಮಾಧ್ಯಮಗಳು ಬಳಸಿಕೊಳ್ಳಬಹುದಿತ್ತಲ್ಲ?
       ನಿಜವಾಗಿ ದೇಶಪ್ರೇಮ, ಮನುಷ್ಯ ಪ್ರೀತಿ, ಮಾನವ ಸಂಬಂಧಗಳಿಗೆಲ್ಲ ಅದರದ್ದೇ ಆದ ತೂಕ ಇದೆ. ಭಾರತದ ಪತಾಕೆಯನ್ನು ತನ್ನ ಮನೆಯ ಮಾಡಿನಲ್ಲೋ ವಾಹನದಲ್ಲೋ ಸಿಕ್ಕಿಸಿದ ಮಾತ್ರಕ್ಕೇ ಯಾರೂ ಪರಮ ದೇಶಪ್ರೇಮಿ ಆಗುವುದಿಲ್ಲ. ಯಾರಿಗೆ ಮನುಷ್ಯರನ್ನು ಧರ್ಮಾತೀತವಾಗಿ ಪ್ರೀತಿಸಲು ಸಾಧ್ಯವಾಗುತ್ತದೋ ಆತನಿಗೆ/ಳಿಗೆ ಮಾತ್ರ ದೇಶವನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ರೇಶ್ಮಾಳ ಬಗ್ಗೆ ಮಾಧ್ಯಮಗಳಲ್ಲಿ  ಬಂದಿರುವ ಸುದ್ದಿ   ನಿಜವೇ ಆಗಿದ್ದರೆ, ಖಂಡಿತ, ದೇಶಭಕ್ತರಂತೆ ಫೋಸು ಕೊಡುವ ಸರ್ವರೂ ಆ ಸುದ್ದಿಯನ್ನು ಕತ್ತರಿಸಿ ತಮ್ಮ ಜೇಬಿನಲ್ಲಿಟ್ಟುಕೊಳ್ಳುವಷ್ಟು ಅದು ಅಮೂಲ್ಯವಾದದ್ದು. ಯಾಕೆಂದರೆ ಅವರ ಡಿಕ್ಷನರಿಯಲ್ಲಿ ರೇಶ್ಮಾಳಿಗೆ ದೇಶಭಕ್ತೆ ಎಂಬ ಬಿರುದಿಲ್ಲ. ಆಕೆ ಏನಿದ್ದರೂ ದೇಶದ್ರೋಹಿಗಳ (ಮುಸ್ಲಿಮರ) ಸಂಖ್ಯೆಯನ್ನು ಹೆಚ್ಚು ಮಾಡುವ, ದೇಶನಿಷ್ಠೆಯನ್ನು ಸದಾ ಪಾಕಿಸ್ತಾನಕ್ಕೆ ಅಡವಿಟ್ಟು ಬದುಕುತ್ತಿರುವ ಮಹಿಳೆ. ರಥ ಯಾತ್ರೆ, ಗಣೇಶೋತ್ಸವ, ಅಷ್ಟಮಿ.. ಹೀಗೆ ಯಾವುದೇ ಸಂಭ್ರಮವನ್ನೂ ಬಾಂಬಿಟ್ಟು ಹಾಳುಗೆಡಹುವುದಕ್ಕೆ ಹೊಂಚು ಹಾಕುತ್ತಿರುವ ಸಮಾಜವೊಂದರ ಸದಸ್ಯೆ. ಈ ದೇಶವನ್ನು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವಾಗಿ ಮಾರ್ಪಡಿಸುವುದಕ್ಕೆ ಶ್ರಮಿಸುತ್ತಿರುವ ಸಮುದಾಯವೊಂದರ ಸದಸ್ಯೆ.. ಹೀಗಿರುವಾಗ ರೇಷ್ಮ ತನ್ನ ವೈವಾಹಿಕ ಬದುಕನ್ನೇ ಪಣಕ್ಕಿಟ್ಟು ರಥ ಯಾತ್ರೆ ಸುಗಮವಾಗಿ ನಡೆಯುವಂತೆ ನೋಡಿಕೊಂಡದ್ದೇಕೆ ಸಣ್ಣ ಸಂಗತಿಯಾಗಬೇಕು?
        ದುರಂತ ಏನೆಂದರೆ, ಈ ದೇಶದಲ್ಲಿ ಎಲ್ಲವೂ, 'ಅವರು' ಮತ್ತು 'ಇವರು' ಆಗಿ ವಿಭಜನೆಗೊಂಡಿದೆ. ಹಿಂದೂ ಯುವತಿಯನ್ನು ಅತ್ಯಾಚಾರ ನಡೆಸಿದ್ದು ಮುಸ್ಲಿಮ್ ಹೆಸರಿನ ವ್ಯಕ್ತಿಯಾಗಿದ್ದರೆ, ತಕ್ಷಣ ಕೆಲವರ 'ಧರ್ಮ' ಜಾಗೃತಗೊಳ್ಳುತ್ತದೆ. ಅತ್ಯಾಚಾರಿಯನ್ನು ಹಿಡಿದು ಪಾಠ ಕಲಿಸಲಾಗುತ್ತದೆ. ಅದೇ ವೇಳೆ ಹಿಂದೂ ಯುವತಿಯನ್ನು ಹಿಂದೂ ಹೆಸರಿನ ವ್ಯಕ್ತಿಯೇ ಅತ್ಯಾಚಾರಕ್ಕೆ ಒಳಪಡಿಸಿದರೆ ಧರ್ಮ ಜಾಗೃತಗೊಳ್ಳುವುದೇ ಇಲ್ಲ. ಆತನಿಗೆ ಪಾಠ ಕಲಿಸುವುದಕ್ಕೆ ಪ್ರಯತ್ನಗಳೂ ನಡೆಯುವುದಿಲ್ಲ. ಮುಸ್ಲಿಮ್ ಹೆಣ್ಣು ಮಗಳ ಮೇಲೆ ಹಿಂದೂ ಹೆಸರಿನ ವ್ಯಕ್ತಿ ಅತ್ಯಾಚಾರ ನಡೆಸಿದರೂ ನಡೆಯುವುದು ಹೀಗೆಯೇ. ಒಂದು ರೀತಿಯಲ್ಲಿ, ಸರಿ-ತಪ್ಪುಗಳು, ಶಿಕ್ಷೆ-ಪುರಸ್ಕಾರಗಳೆಲ್ಲ ಅದನ್ನು ಎಸಗಿದವರ ಧರ್ಮದ ಆಧಾರದಲ್ಲಿ ನಿರ್ಧರಿಸಲ್ಪಡುತ್ತವೆ. ಅಂದಹಾಗೆ, ಧರ್ಮವನ್ನು ಇಷ್ಟು ಕೆಳಮಟ್ಟದಲ್ಲಿ ವ್ಯಾಖ್ಯಾನಿಸುವವರಿಂದ ದೇಶ ಪ್ರೇಮ, ಮನುಷ್ಯ ಪ್ರೇಮಗಳೆಲ್ಲ ನ್ಯಾಯಯುತ ವ್ಯಾಖ್ಯಾನಕ್ಕೆ ಒಳಗಾದೀತು ಎಂದು ಹೇಗೆ ನಿರೀಕ್ಷಿಸುವುದು? ನಿಜವಾಗಿ ಅತ್ಯಾಚಾರಕ್ಕೆ ಒಳಗಾದ ಯಾವ ಹೆಣ್ಣೂ ಆ ಕ್ರೌರ್ಯವನ್ನು ಧರ್ಮದ ಆಧಾರದಲ್ಲಿ ಖಂಡಿತ ವ್ಯಾಖ್ಯಾನಿಸಲಿಕ್ಕಿಲ್ಲ. ಅತ್ಯಾಚಾರ ಅನ್ನುವುದೇ ಭೀಕರ ಕ್ರೌರ್ಯ. ಅದನ್ನು ಅವರು ಇವರು ಎಂದು ವಿಂಗಡಿಸಿದ ಮಾತ್ರಕ್ಕೇ ಕ್ರೌರ್ಯದ ನೋವು ತಣ್ಣಗಾಗಲು ಸಾಧ್ಯವೇ?
         ಏನೇ ಆಗಲಿ, ತನ್ನ ಭಯೋತ್ಪಾದಕ ಗಂಡನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸ್ವಘೋಷಿತ ದೇಶ ಭಕ್ತರ ಅಸಲಿ ಮುಖವನ್ನು ರೇಷ್ಮ ಬೆತ್ತಲೆ ಮಾಡಿದ್ದಾಳೆ. ಒಂದು ವೇಳೆ ಆಕೆಯೂ, 'ಅವರು-ಇವರು' ಎಂಬ ಮನುಷ್ಯ ವಿರೋಧಿ ಸಿದ್ಧಾಂತವನ್ನು ನೆಚ್ಚಿಕೊಂಡಿರುತ್ತಿದ್ದರೆ ತನ್ನ ಗಂಡನ ವಿರುದ್ಧ ದೂರು ಕೊಡಲು ಸಾಧ್ಯವಿತ್ತೇ? ರಥ ಯಾತ್ರೆಯಲ್ಲಿ ಸಾಯುವವರು 'ನಮ್ಮವರಲ್ಲವಲ್ಲ' ಅಂದುಕೊಳ್ಳುತ್ತಿದ್ದರೆ ಏನಾಗುತ್ತಿತ್ತು? ವಿಷಾದ ಏನೆಂದರೆ, ಸಂಕುಚಿತವಾದಿಗಳು ಇಂಥ  ಘಟನೆಗಳನ್ನು ಸ್ವಯಂ ತಿದ್ದಿಕೊಳ್ಳುವುದಕ್ಕೆ ಬಳಸಿಕೊಳ್ಳುವುದರ ಬದಲು ಅವು ಸುದ್ದಿಯೇ ಆಗದಂತೆ ನೋಡಿಕೊಳ್ಳುವುದು. ಎಲ್ಲಿ ಸಾರ್ವಜನಿಕ ಚರ್ಚೆಗೆ ಒಳಗಾಗಿ ಬಿಡುತ್ತದೋ ಎಂದು ಆತಂಕಪಡುವುದು. ಆದ್ದರಿಂದಲೇ ರೇಷ್ಮ ಅಭಿನಂದನೆಗೆ ಅರ್ಹಳು. ಆತ್ಮ ಸಾಕ್ಷಿ ಇರುವ ಪ್ರತಿಯೋರ್ವ 'ದೇಶಭಕ್ತ'ರಿಗೂ ಆಕೆ ನಿಜವಾದ ದೇಶಪ್ರೇಮದ ಪಾಠವನ್ನು ಹೇಳಿಕೊಟ್ಟಿದ್ದಾಳೆ. ಈ ಪಾಠದಲ್ಲಿ 'ಅವರು-ಇವರು' ಇಲ್ಲ. ಇರುವುದು ನಾವು ಮತ್ತು ನಾವೆಲ್ಲರೂ ಮಾತ್ರ.

Monday 17 September 2012

ಆಧುನಿಕ ಸಂಸ್ಕೃತಿಯ ಪೊಳ್ಳುತನವನ್ನು ಬೆತ್ತಲೆ ಮಾಡಿದ ಒಂದು ಪೋಟೋ

ಫ್ರಾನ್ಸ್ ನ  ಕ್ಲೋಸರ್ ಮ್ಯಾಗಸಿನ್‍ನಲ್ಲಿ ಬ್ರಿಟನ್ನಿನ ರಾಜಕುಮಾರಿ ಕೇಟ್ ಮಿಡ್ಲ್ ಟನ್‍ಳ ಪೋಟೋ ಪ್ರಕಟವಾಗಿರುವುದು ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಬ್ರಿಟನ್‍ನ ರಾಜಕುಟುಂಬ ಮ್ಯಾಗಸಿನ್‍ನ ವಿರುದ್ಧ ಕೋರ್ಟಿಗೆ ಹೋಗಿದೆ. ಪ್ರಧಾನಿ ಕಚೇರಿಯು ಪೋಟೋ ಪ್ರಕಟಣೆಯನ್ನು ಖಂಡಿಸಿದೆ. ಒಂದು ರೀತಿಯಲ್ಲಿ ಕೇಟ್‍ಳ ಟಾಪ್‍ಲೆಸ್ ಪೋಟೋ, ಬ್ರಿಟನ್ನಿನಾದ್ಯಂತ ಒಂದು ಬಗೆಯ ಚರ್ಚೆಗೆ, ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ರಾಜಕುಮಾರ ವಿಲಿಯಮ್ಸ್ ಮತ್ತು ಪತ್ನಿ ಮಿಡ್ಲ್ ಟನ್‍ರು ರಜಾಕಾಲವನ್ನು ಕಳೆಯಲು ಫ್ರಾನ್ಸ್ ಗೆ ತೆರಳಿದ್ದರು. ಅಲ್ಲಿ ಟೆರೇಸ್‍ನ ಮೇಲೆ ನಿಂತಿದ್ದ ಮಿಡ್ಲ್ ಟನ್‍ಳ ಪೋಟೋವನ್ನು ಮ್ಯಾಗಸಿನ್‍ನ ಪೋಟೋಗ್ರಾಫರ್ ಕ್ಲಿಕ್ಕಿಸಿದ್ದಾನೆ. ಜಗತ್ತಿನಾದ್ಯಂತ ಪ್ರಕಟವಾಗುತ್ತಿರುವ ಕೋಟ್ಯಂತರ ಪೋಟೋಗಳಂತೆ ಇದೊಂದು ಸಾಮಾನ್ಯ ಪೋಟೋ. ಬೀಚ್‍ಗಳಲ್ಲಿ ಕ್ಲಿಕ್ಕಿಸಲಾಗುವ ಪೋಟೋಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಎಂದು ಮ್ಯಾಗಸಿನ್‍ನ ಸಂಪಾದಕ ಲಾರೆನ್ಸ್ ಸಮರ್ಥಿಸಿಕೊಂಡಿದ್ದಾರೆ.
       ನಿಜವಾಗಿ, ಆಧುನಿಕತೆ ಎಂಬ ಚಂದದ ಹೆಸರಿನಲ್ಲಿ ಹೆಣ್ಣು ಮಕ್ಕಳ ಉಡುಪಿನ ಉದ್ದಳತೆಯನ್ನು ಸಾಕಷ್ಟು ಕಿರಿದುಗೊಳಿಸಿ ಜಗತ್ತಿಗೆ ಹಂಚಿದ್ದೇ ಯುರೋಪಿಯನ್ ರಾಷ್ಟ್ರಗಳು. ಬ್ರಿಟನ್‍ಗೆ ಅದರಲ್ಲಿ ದೊಡ್ಡದೊಂದು ಪಾಲಿದೆ. ಒಂದು ರಾಷ್ಟ್ರದ ಅಭಿವೃದ್ಧಿಯ ಮಾನದಂಡವನ್ನಾಗಿ ಈ ಎಲ್ಲ ರಾಷ್ಟ್ರಗಳು ಪರಿಗಣಿಸುತ್ತಿರುವುದೂ ಹೆಣ್ಣು ಮಕ್ಕಳ ಬಟ್ಟೆಯ ಉದ್ದಳತೆಯನ್ನೇ. ಅಫಘಾನಿನ ಮೇಲೆ ಅಮೇರಿಕ ಸಾರಿದ ಅತಿಕ್ರಮಣವನ್ನು ವರದಿ ಮಾಡುವುದಕ್ಕಾಗಿ ಇವಾನ್ ರಿಡ್ಲಿ ಅನ್ನುವ ಬ್ರಿಟನ್ನಿನ `ಆಧುನಿಕ’ ಪತ್ರಕರ್ತೆ ಅಲ್ಲಿಗೆ ತೆರಳಿದ್ದರು. ತಾಲಿಬಾನಿಗಳಿಗೆ ಗೊತ್ತಾಗದಿರಲಿ ಎಂದು ಮೈಮುಚ್ಚುವ ಬಟ್ಟೆಯನ್ನೂ ಧರಿಸಿದ್ದರು. ಆದರೆ ತಾಲಿಬಾನಿಗಳು ಆಕೆಯನ್ನು ಬಂಧಿಸಿದಾಗ ಬ್ರಿಟನ್ ಅವರ ಬಂಧ ಮುಕ್ತಿಗೆ ತೀವ್ರವಾಗಿ ಪ್ರಯತ್ನಿಸಿತ್ತು. ತನ್ನ ಗೌರವಾನ್ವಿತ ಪತ್ರಕರ್ತೆ ಎಂದೇ ಅದು ಸಂಬೋಧಿಸಿತ್ತು. ಕೊನೆಗೂ ರಿಡ್ಲಿ ಬಿಡುಗಡೆಗೊಂಡು ಬ್ರಿಟನ್‍ಗೆ ಹಿಂತಿರುಗಿದರಲ್ಲದೆ ವರ್ಷದ ಬಳಿಕ ಮೈಮುಚ್ಚುವ ಉಡುಪನ್ನೇ ತನ್ನ ನಿಜವಾದ ಉಡುಪಾಗಿ ಆಯ್ಕೆ ಮಾಡಿಕೊಂಡರು. ತಕ್ಷಣ, ಅದೇ ಬ್ರಿಟನ್ ಆಕೆಗೆ ಕೊಟ್ಟಿದ್ದ ಗೌರವಾನ್ವಿತ ಪದವನ್ನು ಕಿತ್ತುಕೊಂಡಿತು. ಆಧುನಿಕತೆಯಿಂದ ಅನಾಗರಿಕತೆಯೆಡೆಗೆ ಮುಖ ಮಾಡಿದ ಹೆಣ್ಣೆಂಬಂತೆ ಅವರನ್ನು ಮಾಧ್ಯಮ ಜಗತ್ತೂ ಬಿಂಬಿಸಿತು. ಇದೊಂದೇ ಅಲ್ಲ, ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲೂ ಬಟ್ಟೆ ವಿವಾದದ ಸಂಗತಿಯಾಗಿತ್ತು. ಮೈಮುಚ್ಚುವ ಉಡುಪನ್ನು ಧರಿಸಿ ಕ್ರೀಡೆಯಲ್ಲಿ ಪಾಲುಗೊಳ್ಳುವುದನ್ನು ಒಲಿಂಪಿಕ್ಸ್ ಸಮಿತಿ ಕೊನೆವರೆಗೂ ತಡೆ ಹಿಡಿದಿತ್ತು. ಅಚ್ಚರಿ ಏನೆಂದರೆ, ಇದೇ ಬ್ರಿಟನ್‍ನಲ್ಲಿ, ರಾಜಕುಟುಂಬದ ಹೆಣ್ಣು ಮಕ್ಕಳು `ಆಧುನಿಕ’ ಉಡುಪಿನಲ್ಲಿ ಕಾಣಿಸಿಕೊಳ್ಳುವುದನ್ನು ಅಪರಾಧದಂತೆ ಕಾಣಲಾಗುತ್ತದೆ. ಬ್ರಿಟನ್ನೇ ಕಲಿಸಿದ ಮತ್ತು ಜಗತ್ತಿಗೆ ರಫ್ತು ಮಾಡಿದ `ಆಧುನಿಕ ಉಡುಪನ್ನು’ ರಾಜಕುಟುಂಬ ಧರಿಸುವುದನ್ನು ಅದು ಇಷ್ಟಪಡುತ್ತಿಲ್ಲ. ಇದರ ಅರ್ಥವಾದರೂ ಏನು? ಉಡುಪಿಗೂ ವ್ಯಕ್ತಿತ್ವಕ್ಕೂ ಸಂಬಂಧ ಇದೆ ಎಂದೇ ಅಲ್ಲವೇ?  ಆಧುನಿಕ ಬಟ್ಟೆ ಧರಿಸುವುದು ಗೌರವಾರ್ಹ ಎಂದಾಗಿದ್ದರೆ ಮಿಡ್ಲ್ ಟನ್ ಧರಿಸಿದ್ದರಲ್ಲಿ, ಅದನ್ನು ಕ್ಲಿಕ್ಕಿಸಿ ಮ್ಯಾಗಸಿನ್‍ನಲ್ಲಿ ಪ್ರಕಟಿಸಿದ್ದರಲ್ಲಿ ಏನು ತಪ್ಪಿದೆ? ಮಿಡ್ಲ್ ಟನ್‍ರ ಪೋಟೋ ಯಾವ ಭಂಗಿಯಲ್ಲಿ ಕಾಣಿಸಿಕೊಂಡಿತ್ತೋ ಅದಕ್ಕಿಂತಲೂ ಆಧುನಿಕ ರೂಪದಲ್ಲಿ ಹೆಣ್ಣು ಮಕ್ಕಳ ಪೋಟೋಗಳು ಬ್ರಿಟನ್‍ನಾದ್ಯಂತ ಪತ್ರಿಕೆಗಳಲ್ಲಿ ನಿತ್ಯ ಪ್ರಕಟವಾಗುತ್ತಿವೆ. ಅವಾವುದಕ್ಕೂ ರಾಜಕುಟುಂಬವಾಗಲಿ, ಪ್ರಧಾನಿ ಕಚೇರಿಯಾಗಲೀ ವಿರೋಧ ವ್ಯಕ್ತಪಡಿಸಿಲ್ಲ. ಹೀಗಿರುವಾಗ ಮಿಡ್ಲ್ ಟನ್‍ಳ ಪೋಟೋಕ್ಕೆ ಮಾತ್ರ ತಗಾದೆಯೇಕೆ? ಅದರರ್ಥ, ಕನಿಷ್ಠ  ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದು ಗೌರವಕ್ಕೆ ಕುಂದು ತರುತ್ತದೆ ಎಂದಲ್ಲವೇ? `ಆಧುನಿಕ’ ಬಟ್ಟೆಯಲ್ಲಿ ಮಿಡ್ಲ್ ಟನ್‍ಳನ್ನು ತೋರಿಸುವುದು ರಾಜಕುಟುಂಬಕ್ಕೆ ಅವಮರ್ಯಾದೆ ಎಂದಾದರೆ, ಬ್ರಿಟನ್ ರಫ್ತು ಮಾಡುತ್ತಿರುವ `ಆಧುನಿಕ’ ಸಂಸ್ಕ್ರಿತಿಯೇಕೆ ಅವಮಾನಕರ ಅನ್ನಿಸಿಕೊಳ್ಳುತ್ತಿಲ್ಲ?
        ನಿಜವಾಗಿ, ಮಿಡ್ಲ್ ಟನ್‍ಗೂ ಅವರಂತೆ ರಾಜಕುಟುಂಬದಲ್ಲಿ ಗುರುತಿಸಿಕೊಳ್ಳದ, ಆದರೆ ಅವರಂಥದ್ದೇ ಕೈ, ಕಾಲು, ಕಣ್ಣು, ದೇಹವನ್ನು ಹೊಂದಿರುವ ಜಗತ್ತಿನ ಇತರ ಕೋಟ್ಯಂತರ `ಮಿಡ್ಲ್ ಟನ್‍ಗಳಿಗೂ’ ಮರ್ಯಾದೆ, ವ್ಯಕ್ತಿತ್ವ, ಸ್ವಾಭಿಮಾನ.. ಎಲ್ಲವೂ ಒಂದೇ. ಮಿಡ್ಲ್ ಟನ್‍ಳನ್ನು `ಆಧುನಿಕ’ ಉಡುಪಿನಲ್ಲಿ ನೋಡುವುದನ್ನು ರಾಜಕುಟುಂಬ ಅಥವಾ ಬ್ರಿಟನ್ನಿನ ನಾಗರಿಕರು ಇಷ್ಟಪಡದಂತೆ ಇವರನ್ನು ಹಾಗೆ ನೋಡುವುದಕ್ಕೂ ಈ ಜಗತ್ತಿನಲ್ಲಿ ಇಷ್ಟಪಡದವರಿದ್ದಾರೆ. ಉಡುಪು ಎಂಬುದು ಮನುಷ್ಯರ ವ್ಯಕ್ತಿತ್ವವನ್ನು, ಅವರ ಘನತೆಯನ್ನು ಪ್ರತಿಬಿಂಬಿಸುವ ಸಂಕೇತ ಎಂದವರು ವಾದಿಸುತ್ತಿದ್ದಾರೆ. ಅದನ್ನು ಎಷ್ಟರ ಮಟ್ಟಿಗೆ ಕಿರಿದುಗೊಳಿಸಲಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಅವರ ಗೌರವಕ್ಕೆ ಧಕ್ಕೆ ಒದಗುತ್ತದೆ ಎಂದವರು ಅಂದುಕೊಂಡಿದ್ದಾರೆ. ದುರಂತ ಏನೆಂದರೆ, ರಾಜಕುಟುಂಬವು ಮಿಡ್ಲ್ ಟನ್‍ಳಿಗೆ ಯಾವ ನಿಯಮವನ್ನು ಹೇರುತ್ತದೋ ಅದೇ ನಿಯಮವನ್ನು ಜಗತ್ತಿನ ಇತರ ಕೋಟ್ಯಂತರ `ಮಿಡ್ಲ್ ಟನ್‍ಗಳು’ ತಮ್ಮ ಪಾಲಿಗೆ ಇಷ್ಟಪಟ್ಟುಕೊಂಡರೆ ಅದನ್ನು ಅನಾಗರಿಕತೆ ಎಂದು ಕರೆಯಲಾಗುತ್ತದೆ. ಯಾಕಿಂಥ ದ್ವಂದ್ವ?
      ನಿಜವಾಗಿ, ಈ ಜಗತ್ತನ್ನು ಇವತ್ತು ಆಳುತ್ತಿರುವುದೇ ಕೆಲವು ಇಬ್ಬಂದಿತನಗಳು. ಅಮೇರಿಕ ತನ್ನ ದೇಶದ ಸಾರ್ವಭೌಮತೆಗೆ ಯಾವ ಬಗೆಯ ಗೌರವವನ್ನು ಕಲ್ಪಿಸುತ್ತದೋ ಅದೇ ಗೌರವವನ್ನು ಅದು ಇತರ ದೇಶಗಳ ಸಾರ್ವಭೌಮತೆಗೆ ಕೊಡುವುದೇ ಇಲ್ಲ. ಕೃಷಿ ಸಬ್ಸಿಡಿಯನ್ನು ಕಡಿಮೆಗೊಳಿಸಿ ಎಂದು ಕರೆ ಕೊಡುವ ಅದೇ ಅಮೇರಿಕ ತನ್ನ ದೇಶದ ಕೃಷಿಕರಿಗೆ ಧಾರಾಳ ಸಬ್ಸಿಡಿಯನ್ನು ನೀಡುತ್ತದೆ. ಮಾನವ ಹಕ್ಕುಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಲೇ ನೂರಕ್ಕಿಂತಲೂ ಅಧಿಕ ಬಾರಿ ಬ್ರಿಟನ್ ಮತ್ತು ಅಮೇರಿಕಗಳು ಇಸ್ರೇಲ್ ಪರ ವೀಟೋ ಚಲಾಯಿಸುತ್ತವೆ. ನೂರಾರು ಅಣ್ವಸ್ತ್ರಗಳನ್ನು ಸ್ವಯಂ ಗೋದಾಮುಗಳಲ್ಲಿ ಪೇರಿಸಿಟ್ಟುಕೊಂಡೇ ಇತರ ರಾಷ್ಟ್ರಗಳು ಅವನ್ನು ಹೊಂದದಂತೆ ತಡೆಯುತ್ತವೆ. ಹೀಗಿರುವಾಗ, ಈ ರಾಷ್ಟ್ರಗಳಿಂದ ದ್ವಂದ್ವವನ್ನಲ್ಲದೇ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
       ಏನೇ ಆಗಲಿ, ಒಂದೊಳ್ಳೆಯ ಚರ್ಚೆಗೆ ವೇದಿಕೆ ಒದಗಿಸಿದ ಫ್ರಾನ್ಸಿನ ಕ್ಲೋಸರ್ ಮ್ಯಾಗಸಿನ್‍ಗೆ ಅಭಿನಂದನೆ ಸಲ್ಲಿಸಬೇಕು. ಬ್ರಿಟನ್‍ನ `ಆಧುನಿಕತೆಯ’ ಪೊಳ್ಳುತನವನ್ನು ಅದು ಒಂದು ಪೋಟೋದ ಮೂಲಕ ಬಹಿರಂಗಕ್ಕೆ ತಂದಿದೆ. ಮಿಡ್ಲ್ ಟನ್‍ಳಂತೆ ಜಗತ್ತಿನ ಎಲ್ಲ ಹೆಣ್ಣು ಮಕ್ಕಳೂ ಗೌರವಾರ್ಹರು ಎಂಬುದನ್ನು `ಆಧುನಿಕ’ ಜಗತ್ತು ಈ ಮೂಲಕ ಅರ್ಥ ಮಾಡಿಕೊಳ್ಳಲಿ...

Monday 10 September 2012

ಅವರೆಲ್ಲಾ ಆ ಪೋಟೋವನ್ನು ಜೇಬಿನಲ್ಲಿ ಇಟ್ಟುಕೊಳ್ಳಲಿ

ಮಾಯಾ ಕೊಡ್ನಾನಿ
ಈ ಟಿಪ್ಪಣಿಗಳನ್ನು ಓದಿ
1. ಜನಪ್ರತಿನಿಧಿಯಾಗಿ ಮಾಯಾ ಕೊಡ್ನಾನಿ ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ. ಆಕೆ ಪಾತಕದಲ್ಲಿ ಭಾಗಿಯಾಗಿದ್ದಾರೆ..
2. ಗಲಭೆಕೋರರ ಕೈಯಲ್ಲಿ ಕೊಲೆಗೀಡಾದ 20 ದಿನದ ಶುಐಬ್ ಎಂಬ ಶಿಶುವನ್ನು ನರೋಡ ಠಾಣೆಯ ಪೊಲೀಸರು 20 ವರ್ಷದ ಯುವಕ ಎಂದು ನಮೂದಿಸಿದ್ದಾರೆ.
3. ಘಟನಾ ಸ್ಥಳದಿಂದ ಒಬ್ಬನೇ ಒಬ್ಬ ಗಲಭೆಕೋರನನ್ನೂ ನರೋಡದ ಪೊಲೀಸರು ಬಂಧಿಸಿಲ್ಲ.
4. ಆಸ್ಪತ್ರೆಯಲ್ಲಿದ್ದ ಸಂತ್ರಸ್ತರಿಂದ ಹೇಳಿಕೆಗಳನ್ನೂ ಪಡಕೊಂಡಿಲ್ಲ.
5. ಆರೋಪಿಗಳನ್ನು ಗುರುತು ಹಚ್ಚುವ ಪೆರೇಡನ್ನೂ ನಡೆಸಲಾಗಿಲ್ಲ.
6. ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಕೆ.ಕೆ. ಮೈಸೂರ್‍ವಾಲ ಎಷ್ಟರ ಮಟ್ಟಿಗೆ ಕರ್ತವ್ಯಚ್ಯುತಿ ಎಸಗಿದರೆಂದರೆ, ಪ್ರದೇಶದಲ್ಲಿ ಸಾಮಾನ್ಯವಾಗಿ ಮಾಡಬೇಕಾಗಿದ್ದ ರೌಂಡನ್ನೂ ಮಾಡಿಲ್ಲ. ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ..
        ಜ್ಯೋತ್ಸ್ ನಾ  ಯಾಗ್ನಿಕ್ ಎಂಬ ನ್ಯಾಯಾಧೀಶೆಯ 1969 ಪುಟಗಳ ತೀರ್ಪಿನ ಉದ್ದಕ್ಕೂ ಇಂಥ ಸಾವಿರಾರು ಟಿಪ್ಪಣಿಗಳಿವೆ. ನಿಜವಾಗಿ, ಗುಜರಾತ್‍ನ ನರೋಡಾ-ಪಾಟಿಯಾ ಹತ್ಯಾಕಾಂಡದ ತನಿಖೆಯನ್ನು ಎರಡು ವರ್ಷಗಳ ಹಿಂದೆ ಇವರು ಎತ್ತಿಕೊಂಡಾಗ ಮಾಯಾ ಕೊಡ್ನಾನಿ, ಭಜರಂಗಿ, ಮೈಸೂರ್‍ವಾಲಾ.. ಮುಂತಾದ ಬೃಹತ್ ಆಲದ ಮರಗಳನ್ನೆಲ್ಲಾ ಉರುಳಿಸಿ ಬಿಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಂದಿಡೀ ವ್ಯವಸ್ಥೆಯೇ ಪಾತಕಿಗಳ, ರಕ್ಷಣೆಗೆ ಟೊಂಕಕಟ್ಟಿ ನಿಂತಿರುವಾಗ, ಯಾಗ್ನಿಕ್‍ಗೆ ಅದನ್ನು ಬೇಧಿಸಲು ಸಾಧ್ಯವಾ ಎಂಬ ಅನುಮಾನ,  ಅವರನ್ನು ಮೆಚ್ಚುವವರಲ್ಲೂ ಇತ್ತು. ಆದರೆ ಯಾಗ್ನಿಕ್ ಅವನ್ನೆಲ್ಲಾ ಸುಳ್ಳು ಮಾಡಿದ್ದಾರೆ.
           ಇಷ್ಟಕ್ಕೂ ಬಳ್ಳಾರಿಯ ಗಣಿ ಅಕ್ರಮಗಳ ಬಗ್ಗೆಯೋ, 2ಜಿ ಸ್ಪೆಕ್ಟ್ರಮ್‍ನ ಬಗ್ಗೆಯೋ ತನಿಖೆ ನಡೆಸುವುದಕ್ಕೂ ಹತ್ಯಾಕಾಂಡದ ತನಿಖೆ ನಡೆಸುವುದಕ್ಕೂ ಖಂಡಿತ ವ್ಯತ್ಯಾಸ ಇದೆ. ಯಾಕೆಂದರೆ, ಗಣಿಗೆ ಧರ್ಮದ ಹಂಗು ಇರುವುದಿಲ್ಲ. ರೆಡ್ಡಿಗಳು ಯಾವ ಜಾತಿಯವರು ಎಂಬುದು ತನಿಖೆಯ ಸಂದರ್ಭದಲ್ಲಿ ಮಹತ್ವ ಪಡಕೊಳ್ಳುವುದೂ ಇಲ್ಲ. ಸಮಾಜದ ಎಲ್ಲರೂ ಅಕ್ರಮವನ್ನು ವಿರೋಧಿಸುತ್ತಲೂ ಇರುತ್ತಾರೆ. ರಾಜಕಾರಣಿಗಳನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ಗಲಭೆ ಹಾಗಲ್ಲ. ನಡೆದಿರುವುದು ಮನುಷ್ಯರ ಹತ್ಯೆಯೇ ಆಗಿದ್ದರೂ ಆ ಮನುಷ್ಯರನ್ನು ಅವನು - ಇವನು ಎಂದು ಸಮಾಜವೇ ವಿಭಜಿಸುತ್ತದೆ. ಗಲಭೆಯನ್ನು ನಿಯಂತ್ರಿಸಬೇಕಾದ ಪೊಲೀಸರಲ್ಲೂ ಅವನು - ಇವನು ಇರುತ್ತಾರೆ. ಸಾವಿಗೆ ಮತ್ತು ಬಂಧನಕ್ಕೆ ಒಳಗಾಗುವ ಮನುಷ್ಯರಲ್ಲಿ ಅವರೆಷ್ಟು-ಇವರೆಷ್ಟು ಎಂದು ಸಮಾಜ ಚರ್ಚಿಸುತ್ತದೆ. ರಾಜಕೀಯದ ಮಂದಿಯಲ್ಲೂ ಅವರದ್ದೇ ಆದ ಲಾಭ-ನಷ್ಟಗಳ ಲೆಕ್ಕಾಚಾರ ಇರುತ್ತದೆ. ಇಷ್ಟೇ ಅಲ್ಲ, ಯಾರು ಅದರ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಾರೋ ಅವರಿಗೂ ಒಂದು ಧರ್ಮ ಇರುತ್ತದೆ. ಅವನು ಅಥವಾ ಇವನಲ್ಲಿ ಅವರೂ ಒಬ್ಬರಾಗಿರುತ್ತಾರೆ. ಹೀಗಿರುವಾಗ ಯಾಗ್ನಿಕ್ ಎಂದಲ್ಲ, ಕೋಮು ಹತ್ಯಾಕಾಂಡದ ವಿಚಾರಣೆಯನ್ನು ಎತ್ತಿಕೊಳ್ಳುವ ಯಾವುದೇ ನ್ಯಾಯಾಧೀಶರೂ ರಾಜಕಾರಣಿಗಳಿಂದ ಮಾತ್ರವಲ್ಲ, ಸಮಾಜ ಮತ್ತು ತನ್ನೊಳಗಿಂದಲೂ ಒತ್ತಡಕ್ಕೆ ಒಳಗಾಗುತ್ತಾರೆ. ಇಂಥ ಒತ್ತಡಗಳಿಂದ ತಪ್ಪಿಸಿಕೊಂಡು ನ್ಯಾಯದ ಮೇಲೆ ದೃಢವಾಗಿ ನಿಲ್ಲುವುದಕ್ಕೆ ಎಲ್ಲರಿಗೆ ಸಾಧ್ಯವೂ ಆಗುವುದಿಲ್ಲ. ಆದ್ದರಿಂದಲೇ ಯಾಗ್ನಿಕ್‍ರ ಬಗ್ಗೆ ಅಭಿಮಾನ ಮೂಡುವುದು. ತನ್ನ ಒಡ ಹುಟ್ಟಿದವರು ಸಹಿತ ಕುಟುಂಬದ 19 ಮಂದಿಯನ್ನು ಕಣ್ಣೆದುರಲ್ಲೇ ಕಳಕೊಂಡ ಇಮ್ರಾನ್ ಶೈಕ್‍ನ (ಘಟನೆ ನಡೆಯುವಾಗ 16 ವರ್ಷ) ಸಾಕ್ಷ್ಯವನ್ನು ಸರಕಾರಿ ವಕೀಲರು ತಡೆಯಲೆತ್ನಿಸಿದಾಗ ಅವರ ಬಾಯಿ ಮುಚ್ಚಿಸಿದ್ದೂ ಯಾಗ್ನಿಕ್‍ರೇ. ಪಾತಕಿಗಳಿಂದ ತಪ್ಪಿಸಿಕೊಂಡು ರಿಸರ್ವ್ ಪೊಲೀಸ್ ಠಾಣೆಯ ಎದುರು ಗೇಟ್ ತೆರೆಯುವಂತೆ ಅಂಗಲಾಚಿದ ಗುಂಪಿನಲ್ಲಿ ಆತನೂ ಇದ್ದ. ಆದರೆ ಗೇಟ್ ತೆರೆಯುವ ಬದಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಕಣ್ಣೆದುರೇ ತಾಯಿಯನ್ನು, 7 ವರ್ಷದ ಮಗಳನ್ನು, ಸಹೋದರಿಯನ್ನು ಕಳಕೊಂಡ ನಈಮುದ್ದೀನ್‍ನಂಥ ಅನೇಕಾರು ಮಂದಿಗೆ ಧೈರ್ಯದಿಂದ ಸಾಕ್ಷ್ಯ ಹೇಳಲು ಅವಕಾಶ ಒದಗಿಸಿದ್ದೂ ಯಾಗ್ನಿಕ್‍ರೇ.
         ನ್ಯಾಯವನ್ನು ಖರೀದಿಸಲು ಸಾಧ್ಯ ಎಂಬ ನಂಬಿಕೆ ನಿಜವಾಗುತ್ತಿರುವ ಇಂದಿನ ದಿನಗಳಲ್ಲಿ ಯಾಗ್ನಿಕ್‍ರಂಥವರು ಖಂಡಿತ ಅಪರೂಪ. ಸಾಮಾನ್ಯವಾಗಿ ಯಾವುದೇ ಕೋಮು ಗಲಭೆಯಲ್ಲೂ ರೂವಾರಿಗಳು ಶಿಕ್ಷೆಗೆ ಗುರಿಯಾಗುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆಲದ ಮರವನ್ನು ಹಾಗೆಯೇ ಬಿಟ್ಟು ಅದರ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಪ್ರಯತ್ನವನ್ನೇ ಹೆಚ್ಚಿನ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಪೆಟ್ರೋಲನ್ನೋ ಡೀಸಲನ್ನೋ ಸುರಿದು ಮನುಷ್ಯರನ್ನು ಕೊಂದವ ಜೈಲಿಗೆ ಹೋಗುವಾಗ ಅವನ್ನು ಒದಗಿಸಿದವ ವಿಧಾನಸೌಧದಲ್ಲೋ ಏ.ಸಿ. ಕಾರಲ್ಲೋ ಹಾಯಾಗಿ ತಿರುಗುತ್ತಿರುತ್ತಾನೆ. ಆದರೆ ಯಾಗ್ನಿಕ್‍ರು ಮಾಯಾ ಕೊಡ್ನಾನಿ, ಭಜರಂಗಿಯಂಥ ಆಲದ ಮರವನ್ನೇ ಉರುಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಹತಾಶ ಮುಖ ಭಾವದಲ್ಲಿದ್ದ, ಸಾಕ್ಷ್ಯ ಹೇಳುತ್ತಾ ಕಣ್ಣೀರು ಹಾಕುತ್ತಿದ್ದ ಸಂತ್ರಸ್ತರಿಗೆ ಮೊತ್ತಮೊದಲ ಬಾರಿ ಕೊಲೆಗಾರರು ಹತಾಶಭಾವದಲ್ಲಿ ಪೊಲೀಸ್ ವ್ಯಾನಿನಿಂದ ಇಣುಕುವುದನ್ನು ನೋಡಲು ಸಾಧ್ಯವಾಗಿದೆ.
        ನಿಜವಾಗಿ, ಕೊಡ್ನಾನಿ ಮತ್ತು ಯಾಗ್ನಿಕ್‍ರು ಸಮಾಜದ ಎರಡು ಮುಖಗಳ ಪ್ರತಿಬಿಂಬವಾಗಿದ್ದಾರೆ. ಸ್ತ್ರೀರೋಗ ತಜ್ಞೆಯಾದ ಕೊಡ್ನಾನಿಗೆ ತನ್ನಂತೇ ಇರುವ ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸುವುದು, ಹತ್ಯೆ ನಡೆಸುವುದೆಲ್ಲಾ ಧರ್ಮದ ರಕ್ಷಣೆಯಂತೆ ಕಾಣುವಾಗ ಕಾನೂನು ತಜ್ಞೆಯಾದ ಯಾಗ್ನಿಕ್‍ಗೆ, ಅದು ಧರ್ಮದ್ರೋಹದ ಕೃತ್ಯದಂತೆ ಕಾಣಿಸುತ್ತದೆ. ದುರಂತ ಏನೆಂದರೆ, ನಮ್ಮ ಸಮಾಜದಲ್ಲೂ ಕೊಡ್ನಾನಿಯಂಥವರು ಇದ್ದಾರೆ ಅನ್ನುವುದು. ಕೊಡ್ನಾನಿ ಯಾವ ಕ್ರೌರ್ಯಕ್ಕೆ ನೇತೃತ್ವ ನೀಡಿದ್ದರೋ ಅದನ್ನು ಈಗಲೂ ಅವರು ಧರ್ಮರಕ್ಷಣೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ ಅನ್ನುವುದು. ಆದ್ದರಿಂದ ಯಾಗ್ನಿಕ್‍ರ 1969 ಪುಟಗಳ ತೀರ್ಪಿನ ಸಂಕ್ಷಿಪ್ತ ರೂಪವನ್ನಾದರೂ ಕೊಡ್ನಾನಿಯ ಇಂಥ ಬೆಂಬಲಿಗರಿಗೆ ತಲುಪಿಸುವ  ವ್ಯವಸ್ಥೆಯಾಗಬೇಕು. ಯಾಕೆಂದರೆ ಈ ಸಮಾಜದಲ್ಲಿ ಹೆಚ್ಚಾಗಬೇಕಾದದ್ದು ಕೊಡ್ನಾನಿಗಳಲ್ಲ, ಯಾಗ್ನಿಕ್‍ಗಳು. ಪೊಲೀಸ್ ವ್ಯಾನ್‍ನಲ್ಲಿ ಗಲ್ಲಕ್ಕೆ ಕೈಯಿಟ್ಟು ಹತಾಶೆಯಿಂದ ನೋಡುತ್ತಿರುವ ಕೊಡ್ನಾನಿಯ ಪೊಟೋವನ್ನು ಮನುಷ್ಯ ವಿರೋಧಿಗಳೆಲ್ಲಾ ತಮ್ಮ ಜೇಬಿನಲ್ಲಿ ಕತ್ತರಿಸಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.

Monday 3 September 2012

ಭಯೋತ್ಪಾದನೆ ಅಂದರೆ ಲಾಡೆನ್ ನ ಪೊಟೋವಷ್ಟೇ ಅಲ್ಲವಲ್ಲ..

ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೆ ಒಳಗಾದ ಯುವಕರು ಉಗ್ರರು ಹೌದೋ ಅಲ್ಲವೋ, ಆದರೆ ಆಗಸ್ಟ್ 31ರಿಂದ ಹಿಡಿದು ಈ ವರೆಗೆ ಪ್ರಕಟವಾದ ಹೆಚ್ಚಿನ ಕನ್ನಡ ದಿನ ಪತ್ರಿಕೆಗಳ ಸುದ್ದಿಗಳನ್ನು ಓದುವಾಗ,  ಪತ್ರಿಕಾ  ಕಛೇರಿಗಳಲ್ಲಿ ಭಯೋತ್ಪಾದಕರ ತಂಡವೊಂದು  ಕಾರ್ಯಾಚರಿಸುತ್ತಿರಬಹುದೇ ಅನ್ನುವ ಶಂಕೆ ಮೂಡುವುದು ಸಹಜ. ಪೊಲೀಸ್ ಮೂಲಗಳು ತಿಳಿಸಿವೆ ಎಂಬ ಜುಜುಬಿ ವಾಕ್ಯವನ್ನು ಎದುರಿಟ್ಟುಕೊಂಡು ಆನೆ ಲದ್ದಿಯಷ್ಟು ದೊಡ್ಡದಾದ ಶೀರ್ಷಿಕೆಯ ಅಡಿಯಲ್ಲಿ ಪತ್ರಿಕೆಗಳೆಲ್ಲ ಕಳೆದೊಂದು ವಾರದಿಂದ  ಧಾರಾಳ ಸುದ್ದಿಗಳನ್ನು ಬರೆದಿವೆ. ಸುದ್ದಿಯ ಮೂಲ ಯಾವುದು, ಅದೆಷ್ಟು ಪ್ರಬಲ ಮತ್ತು ಪ್ರಾಮಾಣಿಕ, ಸುದ್ದಿ ಕೊಟ್ಟವರಿಗೂ ತನಿಖೆ ನಡೆಸುತ್ತಿರುವವರಿಗೂ ಏನು ಸಂಬಂಧ ಇದೆ, ಪೊಲೀಸ್ ಮುಖ್ಯಸ್ಥರಿಗೇ ಗೊತ್ತಿಲ್ಲದ ಸಂಗತಿಗಳೆಲ್ಲಾ ಯಾವುದೋ ಅಜ್ಞಾತ ಪೊಲೀಸರಿಗೆ ಗೊತ್ತಾಗುವುದಾದರೂ ಹೇಗೆ.. ಇಂಥ ಅನೇಕಾರು ಪ್ರಶ್ನೆಗಳು ಓದುಗರ ಮನದಲ್ಲಿ ಹುಟ್ಟಿ ದಿನಂಪ್ರತಿ ಸಾಯುತ್ತಿವೆ. 2007ರ ಜುಲೈಯಲ್ಲಿ ಬೆಂಗಳೂರಿನ ವೈದ್ಯ ಮುಹಮ್ಮದ್ ಹನೀಫನು ಆಸ್ಟ್ರೇಲಿಯಾದಲ್ಲಿ ಬಂಧನಕ್ಕೀಡಾದಾಗ ಪತ್ರಿಕೆಗಳು ಹೀಗೆಯೇ ಬರೆದಿದ್ದುವು. ಆತನನ್ನು ಅವು ಟೆರರ್ ಡಾಕ್ಟರ್ ಅಂದಿದ್ದವು. ಬಾಂಬು ಸ್ಫೋಟಿಸುವಲ್ಲಿ ಆತ ಹೆಣೆದ ತಂತ್ರ, ಆತನ ಧಾರ್ಮಿಕತೆ.. ಎಲ್ಲವನ್ನೂ ಕನ್ನಡ ಪತ್ರಿಕೆಗಳು ಪುಟ ತುಂಬ ಬರೆದಿದ್ದುವು. 2008 ಮೇಯಲ್ಲಿ ಹುಬ್ಬಳ್ಳಿ ಕೋರ್ಟ್‍ ನಲ್ಲಿ  ಸ್ಫೋಟ ನಡೆಯಿತು. ಅದಕ್ಕೆ ಸಿಮಿ ಕಾರಣ ಅಂದವು ಕನ್ನಡ ಪತ್ರಿಕೆಗಳು. ಆ ಸ್ಫೋಟದ ಆರೋಪವನ್ನು ಮುಸ್ಲಿಮ್ ಯುವಕರ ಮೇಲೆ ಹೊರಿಸಿ ಅದಕ್ಕೆ ಬೇಕಾದ ಪುರಾವೆಗಳನ್ನೆಲ್ಲಾ ಮೂಲಗಳಿಂದ ಇವು ಹುಡುಕಿ ತಂದುವು. ಕೊನೆಗೆ ನಾಗರಾಜ ಜಂಬಗಿ ಎಂಬ ಶ್ರೀರಾಮ ಸೇನೆಯ ಕಾರ್ಯಕರ್ತ ಅದರ ರೂವಾರಿ ಅನ್ನುವುದು ಬಹಿರಂಗವಾಯಿತು. ದುರಂತ ಏನೆಂದರೆ, 2007ರ ಡಿಸೆಂಬರ್‍ನಲ್ಲಿ ಮುಹಮ್ಮದ್ ಹನೀಫ್‍ನ ಬಿಡುಗಡೆಯಾದರೂ ಕೆಲವು ಪತ್ರಕರ್ತರು ಈಗಲೂ ತಮ್ಮ ಭಯೋತ್ಪಾದಕ ಮನಃಸ್ಥಿತಿಯಿಂದ ಬಿಡುಗಡೆಗೊಂಡಿಲ್ಲ. ನಿಜವಾಗಿ ಒಂದು ಪತ್ರಿಕೆ ಬಂಧಿತ ಯುವಕರ ಹೆಸರಲ್ಲಿ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುತ್ತದೆಂದರೆ ಅದು ಭಯೋತ್ಪಾದಕರಿಗಿಂತಲೂ  ಅಪಾಯಕಾರಿ. ಮನುಷ್ಯರನ್ನು ಕೊಲ್ಲುವ, ಸಾರ್ವಜನಿಕರು ನಿರೀಕ್ಷಿಸದೇ ಇರುವಂಥ ಅಪಾಯಕಾರಿ ಷಡ್ಯಂತ್ರಗಳನ್ನು ಓರ್ವ ಪತ್ರಕರ್ತ ಸುದ್ದಿ ಮನೆಯಲ್ಲಿ ಕೂತು ಬರೆಯುತ್ತಾನೆಂದರೆ ಆತನ ಮನಸ್ಥಿತಿಯಾದರೂ ಎಂಥದು? ಭಯೋತ್ಪಾದಕ ರಕ್ತ ಆತನೊಳಗೂ ಹರಿಯುತ್ತಿದೆ ಎಂದಲ್ಲವೇ ಇದರರ್ಥ? ಕೈಗಾದ ಅಣುಸ್ಥಾವರಕ್ಕೋ ದೇಗುಲಕ್ಕೋ ಬಾಂಬು ಹಾಕುವ ಬಗ್ಗೆ ಓರ್ವ ಸಾಮಾನ್ಯ ವ್ಯಕ್ತಿಗೆ ಊಹಿಸುವುದಕ್ಕೂ ಸಾಧ್ಯ ಇಲ್ಲ. ಒಂದು ವೇಳೆ ಹೀಗೆ ಪ್ರಕಟವಾಗುವ ಸುದ್ದಿಗಳಿಗೆಲ್ಲ ಯಾವ ಆಧಾರವೂ ಇಲ್ಲವೆಂದಾದರೆ, ಅದನ್ನು ಸೃಷ್ಟಿಸಿದವ ಭಯೋತ್ಪಾದಕನಷ್ಟೇ ಅಪಾಯಕಾರಿಯಲ್ಲವೇ? ಅವಕಾಶ ಸಿಕ್ಕರೆ ಇವರೂ ಅಂಥದ್ದೊಂದು ಕ್ರೌರ್ಯ ಎಸಗಿಯಾರು ಎಂಬುದಕ್ಕೆ ಇದು ಪುರಾವೆಯಲ್ಲವೇ?
           ಮನುಷ್ಯ ವಿರೋಧಿ, ದೇಶ ವಿರೋಧಿ, ಸಮಾಜ ವಿರೋಧಿ.. ಮುಂತಾದ ಪದಗಳೆಲ್ಲ ಯಾವುದಾದರೊಂದು ನಿರ್ದಿಷ್ಟ ಚಿಹ್ನೆಗೆ, ಧರ್ಮಕ್ಕೆ, ಹೆಸರಿಗೆ ಸೀಮಿತವಾದ ಪದಗಳೇನೂ ಆಗಬೇಕಿಲ್ಲ. ಮುಹಮ್ಮದ್ ಹನೀಫ್‍ನ ಮೇಲೆ, ಆತ ಮಾಡದೇ ಇರುವ ಮತ್ತು ಹೂಡದೇ ಇರುವ ಷಡ್ಯಂತ್ರಗಳನ್ನೆಲ್ಲಾ ಹೊರಿಸಿ ಭಯೋತ್ಪಾದಕರಾಗಿಸಿದವರೂ ಮನುಷ್ಯ ವಿರೋಧಿಗಳೇ. ಮೊನ್ನೆ ಬಂಧಿಸಲಾದ ಯುವಕರು ಅಂಥ ಅಪರಾಧ ಮಾಡಿದ್ದರೆ ಅವರನ್ನು ಕರೆಯಬೇಕಾದದ್ದೂ ಇಂಥ ಪದಗಳಿಂದಲೇ. ವಿಷಾದ ಏನೆಂದರೆ ಈ ವರೆಗೆ ಈ ದೇಶದಲ್ಲಿ ಇಂಥ ಮೌಲ್ಯಗಳು ಪಾಲನೆಯಾಗಿಲ್ಲ ಅನ್ನುವುದು. ಕೊಲ್ಲುವ, ಸ್ಫೋಟಿಸುವ, ಬಾಂಬು ತಯಾರಿಸುವ.. ಭೀಕರ ಸುದ್ದಿಗಳನ್ನು ಯಾವ್ಯಾವುದೋ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ ರೂಮಲ್ಲಿ ಸೃಷ್ಟಿಸಿದವ ಹೀರೋ ಆಗುತ್ತಾನೆ. ಮಾಡದ ತಪ್ಪನ್ನು ಹೊತ್ತುಕೊಂಡು ಜೈಲಿಗೆ ಹೋದವ, ಹೋಗುವಾಗಲೂ,  ಬಳಿಕ ಅಮಾಯಕನೆಂದು ಬಿಡುಗಡೆಯಾದಾಗಲೂ ಖಳನಂತೆ ಹೊರಬರುತ್ತಾನೆ.
       ನಿಜವಾಗಿ, ಮುಸ್ಲಿಮ್ ಪ್ರತಿಭೆಗಳನ್ನು ಮಾಧ್ಯಮದಿಂದ, ಸಾರ್ವಜನಿಕ ಸೇವಾ ಕ್ಷೇತ್ರಗಳಿಂದ ದೂರ ಇಡುವ ಶ್ರಮಗಳು ನಡೆಯುತ್ತಿವೆಯೋ ಅನ್ನುವ ಅನುಮಾನವೊಂದು ಕಾಡುತ್ತಿದೆ. ಪತ್ರಕರ್ತ, ವಿಜ್ಞಾನಿ, ವೈದ್ಯ, ಎಂ.ಬಿ.ಎ. ವಿದ್ಯಾರ್ಥಿ.. ಇವೆಲ್ಲ ಯಾವುದೋ ಮದ್ರಸ, ಮಸೀದಿಗಳಲ್ಲಿ ಕೆಲಸ ಮಾಡುವುದಕ್ಕೆ ಬೇಕಾದ ಪದವಿಗಳಲ್ಲ. ಮೊನ್ನೆ ಬಂಧನಕ್ಕೀಡಾದ ಯುವಕರಲ್ಲಿ ಇವರೆಲ್ಲ ಸೇರಿದ್ದಾರೆ. ಬಹುಶಃ ಮಾಧ್ಯಮ ಕ್ಷೇತ್ರದಿಂದ ಮುಸ್ಲಿಮ್ ಯುವಕರನ್ನು ಹೊರಗಿಡುವುದಕ್ಕೆ, ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾಗ ಸಿಗದಂತೆ ತಡೆಯುವುದಕ್ಕೆ ಒಂದು ನೆಪವಾಗಿ ಇವನ್ನೆಲ್ಲ ಬಳಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಈಗಾಗಲೇ ಮುಂಬೈಯಂಥ ಬೃಹತ್ ನಗರಗಳ ಅನೇಕ ಕಟ್ಟಡಗಳು, ಮುಸ್ಲಿಮ್ ನಿಷೇಧ ನೀತಿಯನ್ನು ಸ್ವಯಂ ಜಾರಿಗೊಳಿಸಿಕೊಂಡಿರುವುದನ್ನು ಶಬನಾ ಅಜ್ಮಿಯಂಥವರೇ ಬಹಿರಂಗಪಡಿಸಿದ್ದಾರೆ. ಹೀಗಿರುವಾಗ ರಾಜ್ಯದಲ್ಲಾದ ಬಂಧನ ಮತ್ತು ಅದರ ಸುತ್ತ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಕತೆಗಳು ಸಮಾಜವನ್ನು ನಕಾರಾತ್ಮಕ ಧೋರಣೆಯೆಡೆಗೆ ಕೊಂಡೊಯ್ಯಲಾರದೆಂದು ಹೇಗೆ ಹೇಳುವುದು?
       ಏನೇ ಆಗಲಿ, ಭಯವನ್ನು ಉತ್ಪಾದಿಸುವ ಮತ್ತು ಮಾರುವ ಎರಡೂ ಕೃತ್ಯಗಳೂ ಅತ್ಯಂತ ಖಂಡನಾರ್ಹವಾದದ್ದು. ಒಂದು ವೇಳೆ ವಿಜ್ಞಾನಿ, ಪತ್ರಕರ್ತ, ವೈದ್ಯ.. ಯಾರೇ ಅದರ ಹಿಂದೆ ಇದ್ದರೂ ಅವರನ್ನು ಅವರ ಧರ್ಮ, ಹೆಸರು, ಹುದ್ದೆಯನ್ನು ನೋಡದೇ ದಂಡಿಸಲೇಬೇಕು. ಕೊಲ್ಲುವುದನ್ನು ಯಾವುದಾದರೊಂದು ಸಮಸ್ಯೆಗೆ ಪರಿಹಾರ ಎಂದು ಭಾವಿಸುವುದೇ ಅತಿ ದೊಡ್ಡ ಕ್ರೌರ್ಯ. ಅಂಥವರನ್ನು ಹಿಡಿದು ಕಾನೂನಿನ ಕೈಗೆ ಒಪ್ಪಿಸುವ ಶ್ರಮಗಳು ಎಲ್ಲರಿಂದಲೂ ನಡೆಯಬೇಕು. ಅಷ್ಟಕ್ಕೂ ಸಮಾಜದ ಆರೋಗ್ಯವನ್ನು ಕೆಡಿಸುವುದಕ್ಕೆ, ಸಮಾಜವನ್ನು ಭೀತಿಯಲ್ಲಿ ಕೆಡಹುವುದಕ್ಕೆ ಬಾಂಬುಗಳೇ ಬೇಕಾಗಿಲ್ಲ. ಭಯೋತ್ಪಾದಕರ ಹೆಸರಲ್ಲಿ ಟಿ.ವಿ. ಚಾನೆಲ್‍ಗಳು ಪ್ರಸಾರ ಮಾಡುವ ಕ್ರೈಂ ವಾರ್ತೆಗಳು, ಬ್ರೇಕಿಂಗ್ ನ್ಯೂಸ್‍ಗಳೂ ಅವನ್ನು ಸಲೀಸಾಗಿ ಮಾಡಬಲ್ಲವು. ಆದ್ದರಿಂದ ಭಯೋತ್ಪಾದನೆಯ ಕುರಿತಂತೆ ಮಾಡಲಾಗುವ ಚರ್ಚೆಗಳು ಬರೇ ಬಾಂಬು, ಲಾಡೆನ್‍ನ ಪೋಟೋ, `ಜಿಹಾದಿ’ ಸಾಹಿತ್ಯಗಳಿಗೆ ಮಾತ್ರ ಸೀಮಿತಗೊಳ್ಳುವುದು ಬೇಡ. ಪತ್ರಿಕಾ ಸುದ್ದಿಗಳು ಮತ್ತು ಟಿ.ವಿ.ಗಳ ಬ್ರೇಕಿಂಗ್ ನ್ಯೂಸ್‍ಗಳ ವರೆಗೂ ಅದರ ವ್ಯಾಪ್ತಿ ವಿಸ್ತರಿಸಲಿ. ಅನಾರೋಗ್ಯ ಪೀಡಿತ ಸರ್ವ ಮನಸ್ಸುಗಳನ್ನೂ ಯಾವ ಹಂಗೂ ಇಲ್ಲದೆ ಖಂಡಿಸುವುದಕ್ಕೆ ನಮಗೆ ಸಾಧ್ಯವಾಗಲಿ.

Monday 27 August 2012

ಅಮೇರಿಕ ಅಂದರೆ ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ..

ನೀಲ್ ಆರ್ಮ್ ಸ್ಟ್ರಾಂಗ್
ಲ್ಯಾನ್ಸ್ ಆರ್ಮ್ ಸ್ಟ್ರಾಂಗ್
ಅಮೇರಿಕದ ಎರಡು ಮುಖಗಳಿಗೆ ಅತ್ಯಂತ ಪರಿಣಾಮಕಾರಿ ಉದಾಹರಣೆಗಳಾಗಬಹುದಾದ ಇಬ್ಬರು ವ್ಯಕ್ತಿಗಳು ಕಳೆದ ವಾರ ಜಾಗತಿಕವಾಗಿಯೇ ಸುದ್ದಿಗೊಳಗಾದರು. ಅವರೆಷ್ಟು ಪ್ರಭಾವಿಗಳೆಂದರೆ, ಜಗತ್ತಿನ ಮುಖ್ಯವಾಹಿನಿಯ ಪತ್ರಿಕೆಗಳು ಬಿಡಿ, ತೀರಾ ಭಾಷಾ ಪತ್ರಿಕೆಗಳು ಕೂಡಾ ಅವರಿಬ್ಬರಿಗೂ ಬಹುತೇಕ ಮುಖ ಪುಟಗಳಲ್ಲೇ ಜಾಗ ಕೊಟ್ಟು ಸುದ್ದಿ ಬರೆದುವು. ಅವರಿಬ್ಬರೂ ಅಮೇರಿಕದವರು. ಇಬ್ಬರ ಹೆಸರೂ ಆರ್ಮ್ ಸ್ಟ್ರಾಂಗ್ ಎಂದೇ. ಓರ್ವರು ಚಂದ್ರನ ಮೇಲೆ ಪ್ರಥಮವಾಗಿ ಹೆಜ್ಜೆ ಊರಿದ ನೀಲ್ ಆರ್ಮ್ ಸ್ಟ್ರಾಂಗ್ ಆದರೆ, ಇನ್ನೋರ್ವರು, ಸತತ ಏಳು ಬಾರಿ ವಿಶ್ವದ ಅತಿ ದೊಡ್ಡ ಟೂರ್ ಡಿ ಫ್ರಾನ್ಸ್ ಪ್ರಶಸ್ತಿಗಳನ್ನು ಗೆದ್ದು ವಿಶ್ವದಾಖಲೆ ಬರೆದ ಸೈಕ್ಲಿಂಗ್ ಪಟು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್. ದುರಂತ ಏನೆಂದರೆ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್‍ಗೆ ಆಗಸ್ಟ್ 24ರಂದು ಆಜೀವ ನಿಷೇಧ ಹೇರಲಾಯಿತು. ಸೈಕ್ಲಿಂಗ್ ರೇಸ್‍ನ ದಂತಕತೆ ಎನಿಸಿಕೊಂಡಿದ್ದ ಇವರು, ಉದ್ದೀಪನಾ ಮದ್ದು ಸೇವಿಸಿರುವುದೇ ಇದಕ್ಕೆ ಕಾರಣ. ಅವರ ಪ್ರಶಸ್ತಿಗಳನ್ನೆಲ್ಲಾ ಹಿಂತೆಗೆಯಲು ಕ್ರಮ ಕೈಗೊಳ್ಳುವುದಾಗಿ ತಪಾಸಣಾ ಸಂಸ್ಥೆ (USADA) ಘೋಷಿಸಿತು. ಇದರ ಮರುದಿನವೇ, ಮೊತ್ತಮೊದಲ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್  ಸಾವಿಗೀಡಾದರು.
            ನಿಜವಾಗಿ, ಇವರಿಬ್ಬರ ಬಗ್ಗೆ ಬರೆಯುವುದೆಂದರೆ ಅಮೇರಿಕದ ಬಗ್ಗೆ ಬರೆದಂತೆ. ಅಮೇರಿಕ ಈ ಜಗತ್ತಿನಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳಬಹುದಾದ ಅನೇಕಾರು ಸಾಧನೆಗಳನ್ನು ಖಂಡಿತ ಮಾಡಿದೆ. ಒಲಿಂಪಿಕ್ಸ್ ನಲ್ಲಿ ಈ ಬಾರಿಯೂ ಅಮೇರಿಕವೇ ಮೊದಲು. ಆಧುನಿಕ ಸಂಶೋಧನಾ ಕ್ಷೇತ್ರದಲ್ಲಿ ಅಮೇರಿಕಕ್ಕೆ ಬಹಳ ದೊಡ್ಡ ಹೆಸರಿದೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ನೀಡಲಾಗುವ ನೋಬೆಲ್ ಪ್ರಶಸ್ತಿಯ ಪಟ್ಟಿಯಲ್ಲಿ ಪ್ರತಿವರ್ಷ ಒಬ್ಬರಾದರೂ ಅಮೇರಿಕನ್ ವಿಜ್ಞಾನಿ ಇದ್ದೇ ಇರುತ್ತಾರೆ. ಕೈಗಾರಿಕಾ ಕ್ಷೇತ್ರದಲ್ಲೂ ಅಮೇರಿಕ ಬಹಳ ಮುಂದು.. ಈ ಪಟ್ಟಿ ತುಂಬಾ ಉದ್ದವಿದೆ. ಆದರೆ, ಅಮೇರಿಕಕ್ಕೆ ಇನ್ನೊಂದು ಮುಖವೂ ಇದೆ. ಅದು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್‍ನಂಥ ಮುಖ. ಅಮೇರಿಕದ ಯಶೋ ಗಾಥೆಯ ಬಗ್ಗೆ ಬರೆಯುತ್ತಾ ಹೋದಂತೆಲ್ಲಾ, ಮನುಷ್ಯ ರಕ್ತದ, ಕಪಟತನದ, ದೌರ್ಜನ್ಯದ ಇತಿಹಾಸವೂ ಬಿಚ್ಚುತ್ತಲೇ ಹೋಗುತ್ತದೆ. ಇವತ್ತು ಕೆ.ಜಿ. ಕ್ಲಾಸಿನ ಮಕ್ಕಳಿಂದ ಹಿಡಿದು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವರೆಗೆ ಎಲ್ಲರಿಗೂ ಅಮೇರಿಕವೇ ಕನಸಿನ ದೇಶ. ಅಮೇರಿಕದಲ್ಲೊಂದು ಉದ್ಯೋಗ ಗಿಟ್ಟಿಸಲು, ಅಲ್ಲೊಂದು ಮನೆ ಮಾಡಲು, ಅಲ್ಲಿನ ಪ್ರಜೆಯಾಗಿ ಗುರುತಿಸಿಕೊಳ್ಳಲು ಆಸೆ ಪಡುವ ಕೋಟ್ಯಂತರ ಮಂದಿ ಈ ಜಗತ್ತಿನಲ್ಲಿದ್ದಾರೆ. ಅಮೇರಿಕವು ತನ್ನ ಸಾಧನೆ, ಅಭಿವೃದ್ಧಿಗಳ ಮುಖಾಂತರ ಈ ಜಗತ್ತಿನ ಮಂದಿಗೆ ನೀಲ್ ಆರ್ಮ್ ಸ್ಟ್ರಾಂಗ್ ಗ್‍ನಂತೆ ಕಾಣಿಸುತ್ತಿದೆ. ಆದರೆ ಆ ಸಾಧನೆಗಳ ಹಿಂದೆ ಅಫಘನ್ನಿಗಳ, ಇರಾಕಿಗಳ, ಕ್ಯೂಬನ್ನರ ರಕ್ತ ಇರುವುದು ಕಾಣಿಸುತ್ತಲೇ ಇಲ್ಲ. ಆರ್ಥಿಕ ಕ್ಷೇತ್ರದಲ್ಲಿ ಅಮೇರಿಕ ಇವತ್ತು ಬಲಾಢ್ಯ ಆಗಿದ್ದರೆ ಅಥವಾ ಜಗತ್ತಿನ ಅರ್ಥ ಕ್ಷೇತ್ರವನ್ನು ಪಲ್ಲಟಗೊಳಿಸುವ ಸಾಮರ್ಥ್ಯ  ಅಮೇರಿಕಕ್ಕಿದ್ದರೆ ಅದರ ಹಿಂದೆ ಕೊಲ್ಲಿ ರಾಷ್ಟ್ರಗಳಿಂದ ದರೋಡೆಗೈದ ತೈಲದ ಪಾತ್ರ ಇದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಅರಬ್ ರಾಷ್ಟ್ರಗಳ ಬಗ್ಗೆ, ಅಲ್ಲಿರುವ ಮನುಷ್ಯರ ಬಗ್ಗೆ ಅಮೇರಿಕ ಇವತ್ತು ಅಪಾರ ಆಸಕ್ತಿ ತೋರಿಸುತ್ತಿರುವುದು, ಮಾನವ ಹಕ್ಕಿನ ಮೇಲಿನ ಕಾಳಜಿಯಿಂದ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ತನ್ನ ಹಿತವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅದು ಏನು ಮಾಡುವುದಕ್ಕೂ ಹೇಸುವುದಿಲ್ಲ. ಒಂದು ರೀತಿಯಲ್ಲಿ ಅದರ ಸಾಧನೆಯ ಹಿಂದೆ ಗೋಲದ ಬಡ ರಾಷ್ಟ್ರಗಳಿಂದ ಹಿಂಡಿ ತೆಗೆದ ಉದ್ದೀಪನ ಮದ್ದು ಇದೆ. ಒಂದು ವೇಳೆ ಅತ್ಲೀಟ್‍ಗಳಂತೆ, ಅಮೇರಿಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಒಂದೊಂದಾಗಿ ಪರೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿದ್ದರೆ, `ಬುಶ್‍ಗಳು’ ಇವತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನಂತೆ ತಲೆ ತಗ್ಗಿಸಿ ಬದುಕಬೇಕಾಗಿತ್ತು. ಅಫಘಾನ್-ಇರಾಕ್‍ಗಳ ಸಾವಿರಾರು ಮಂದಿಯ ರಕ್ತವೆಂಬ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಖಳರಾಗಿ ಅವರು ಗುರುತಿಸಿಕೊಳ್ಳಬೇಕಾಗಿತ್ತು. ವಿಷಾದ ಏನೆಂದರೆ, ಅತ್ಲೀಟ್‍ಗಳನ್ನು ಪರೀಕ್ಷಿಸುವುದಕ್ಕೆ ಉಪಕರಣಗಳಿರುವಂತೆ ಮನುಷ್ಯ ವಿರೋಧಿಗಳನ್ನು ಪರೀಕ್ಷಿಸುವುದಕ್ಕೆ ಈ ಜಗತ್ತಿನಲ್ಲಿ ಪರಿಣಾಮಕಾರಿ ಉಪಕರಣಗಳು ಇಲ್ಲ ಅನ್ನುವುದು. ನಿಜವಾಗಿ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್  ಉದ್ದೀಪನ ಮದ್ದು ಸೇವಿಸಿದುದರಿಂದ ಈ ಜಗತ್ತಿಗೆ ಯಾವ ಅನ್ಯಾಯವೂ ಆಗಿಲ್ಲ. ಹಾಗೇನೂ ಆಗಿದ್ದರೆ, ಅದು ಆತನ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವಾರು ಸ್ಪರ್ಧಿಗಳಿಗೆ ಮಾತ್ರ. ಆದರೆ ಅಷ್ಟು ಸಣ್ಣ ಅನ್ಯಾಯಕ್ಕಾಗಿ ಓರ್ವ ವ್ಯಕ್ತಿಯ ಪ್ರಶಸ್ತಿಗಳನ್ನು ಹಿಂಪಡೆಯುವುದು, ಸಾಧಕರ ಪಟ್ಟಿಯಿಂದ ಆತನ ಹೆಸರನ್ನು ಅಳಿಸುವುದು ಮಾಡುತ್ತೇವೆಂದಾದರೆ, ಸಾವಿರಾರು ಮಂದಿಗೆ ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ನಾವು ಕೊಡಬಹುದಾದ ಶಿಕ್ಷೆಯಾದರೂ ಯಾವುದಿದ್ದೀತು? ಆರ್ಮ್ ಸ್ಟ್ರಾಂಗ್ ನಿಂದ ಪದಕಗಳನ್ನು ಹಿಂಪಡೆದಂತೆ ಅನ್ಯಾಯಕ್ಕೊಳಗಾದ ರಾಷ್ಟ್ರಗಳಿಗೆ ಅಮೇರಿಕದಿಂದ ಪರಿಹಾರ ಕೊಡಿಸುವುದಾದರೆ ಅದರ ಖಜಾನೆಯ ಸ್ಥಿತಿ ಏನಾದೀತು? ಜಿಡಿಪಿ ಎಲ್ಲಿಗೆ ಮುಟ್ಟೀತು?
        ಅಂದಹಾಗೆ, ನೀಲ್ ಆರ್ಮ್ ಸ್ಟ್ರಾಂಗ್  ಮತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಎಂಬುದು ಅಮೇರಿಕದ ಎರಡು ವ್ಯಕ್ತಿತ್ವಗಳಷ್ಟೇ ಅಲ್ಲ, ಅದರ ಎರಡು ಮುಖಗಳು ಕೂಡ. ಇವತ್ತು ಯಾರೆಲ್ಲ ನೀಲ್ ಆರ್ಮ್ ಸ್ಟ್ರಾಂಗ್‍ನ ಬಗ್ಗೆ, ಆತನ ಸಾಧನೆಯ ಬಗ್ಗೆ ಹೊಗಳಿಕೆಯ ಮಾತಾಡುತ್ತಾರೋ ಅವರೆಲ್ಲ ಲ್ಯಾನ್ಸ್ ಆರ್ಮ್ ಸ್ಟ್ರಾಂಗ ನ್ನೂ  ನೆನಪಿಸಿಕೊಳ್ಳಬೇಕು. ಯಾಕೆಂದರೆ, ಅಮೇರಿಕ ಎಂಬುದು ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡ. ನಿಜವಾಗಿ ಜಗತ್ತಿನ ಬಡ ರಾಷ್ಟ್ರಗಳೆಲ್ಲ ಅಮೇರಿಕವನ್ನು ಇವತ್ತು ನೋಡುತ್ತಿರುವುದೇ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ಪ್ರತಿರೂಪದಂತೆ. ಯಾಕೆಂದರೆ, ಒಬಾಮ ಆಗಲಿ, ಕ್ಲಿಂಟನ್, ಬುಶ್‍ಗಳೇ ಆಗಲಿ.. ಎಲ್ಲರೂ ಉದ್ದೀಪನ ಮದ್ದು (ಮನುಷ್ಯ ರಕ್ತ) ಸೇವಿಸಿದವರೇ. ಜಗತ್ತಿಗೆ ಇವರು ಪಾಠ ಮಾಡುವಾಗಲೆಲ್ಲ, ಅದರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ನ ಪ್ರಾಮಾಣಿಕತೆಗಿಂತ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ವಂಚನೆಯನ್ನೇ ಜಗತ್ತು ಗುರುತಿಸುತ್ತಾ ಇದೆ. ಏನೇ ಆಗಲಿ, ಅಮೇರಿಕ ಅವಲೋಕನಕ್ಕೆ ಸಿದ್ಧವಾಗುವುದಾದರೆ ಈ ಇಬ್ಬರು ಆರ್ಮ್ ಸ್ಟ್ರಾಂಗ್ ಗಳಲ್ಲಿ ಅದಕ್ಕೆ ಖಂಡಿತ ಧಾರಾಳ ಪಾಠಗಳಿವೆ.

Saturday 18 August 2012

ಅವರೆಲ್ಲಾ ಮನುಷ್ಯರು,ಗುರುತು ಏನೇ ಆಗಿದ್ದರೂ..

ಈಶಾನ್ಯ ಭಾರತದ ಮಂದಿ ಈ ರಾಜ್ಯದಿಂದ ಸಾಮೂಹಿಕವಾಗಿ ವಲಸೆ ಹೋಗುವಾಗ ಕೆಲವು ಪ್ರಶ್ನೆಗಳನ್ನೂ ಬಿಟ್ಟು ಹೋಗಿದ್ದಾರೆ. ಅವರಾರೂ ಈ ರಾಜ್ಯದ ಯಾವುದಾದರೊಂದು ನಿರ್ದಿಷ್ಟ ಪ್ರದೇಶದಲ್ಲಿ ಗುಂಪಾಗಿ ವಾಸಿಸುತ್ತಿರಲಿಲ್ಲ. ಎಲ್ಲೆಂದರಲ್ಲಿ ಚದುರಿ ಹೋಗಿದ್ದ ಇವರೆಲ್ಲಾ ಬೆಂಗಳೂರಿನಲ್ಲಿ ಒಮ್ಮೆಲೇ ಒಟ್ಟುಗೂಡಿದ್ದು ಹೇಗೆ? ರಾಜ್ಯದಲ್ಲಿ ಅವರದ್ದೇ ಆದ ಒಂದು ಸಂಘಟನೆಯೂ ಇಲ್ಲ. ಹೀಗಿರುವಾಗ ಅವರನ್ನು ಸಂಪರ್ಕಿಸುವ ಮತ್ತು ಸಂಘಟಿತಗೊಳಿಸುವ ಕೆಲಸವನ್ನು ಮಾಡಿದ್ದು ಯಾರು? ಅಷ್ಟಕ್ಕೂ ಅವರ ಮೇಲೆ ಅಧಿಕೃತವಾಗಿ ಒಂದೇ ಒಂದು ದಾಳಿ ಆಗುವುದಕ್ಕಿಂತ ಮೊದಲೇ ಅವರೆಲ್ಲಾ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಟ್ಟುಗೂಡಿದ್ದಾರೆ. ಹತ್ತಾರು ವರ್ಷಗಳಿಂದ ಈ ರಾಜ್ಯದಲ್ಲಿರುವ ಇವರನ್ನು ಒಂದು ಎಸ್ಸೆಮ್ಮೆಸ್ಸು, ಇಮೇಲು, ಅಥವಾ ಫೇಸ್‍ಬುಕ್‍ನ ಬರಹವು ಅಷ್ಟೊಂದು ಪ್ರಮಾಣದಲ್ಲಿ ಬೆದರಿಸಲು ಸಾಧ್ಯವೇ?
    ನಿಜವಾಗಿ, ಈ ದಿಢೀರ್ ಬೆಳವಣಿಗೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿರುವಂತೆ ಕಾಣಿಸುತ್ತಿದೆ. 80ರ ದಶಕದಲ್ಲಿ ವಿ.ಪಿ. ಸಿಂಗ್‍ರು ಮಂಡಲ್ ವರದಿಯ ಜಾರಿಗೆ ಮುಂದಾದಾಗ, ಇಂಥದ್ದೇ ಸಮೂಹ ಸನ್ನಿ ನಿರ್ಮಾಣವಾಗಿತ್ತು. ದಲಿತರ ವಿರುದ್ಧ ಸಂಘಪರಿವಾರ ಮೇಲ್ವರ್ಗವನ್ನು ಎತ್ತಿ ಕಟ್ಟಿತ್ತು. ಆತ್ಮಾಹುತಿ ಪ್ರಕರಣಗಳೂ ನಡೆದಿದ್ದುವು. ಮಂಡಲ್ ವರದಿ ಜಾರಿಯಾದರೆ ಮೇಲ್ವರ್ಗದ ಮಂದಿ ದಲಿತರ ಗುಲಾಮರಂತೆ ಬದುಕಬೇಕಾದೀತು ಅನ್ನುವ ಸುಳ್ಳು ಭ್ರಮೆಯನ್ನು ಎಲ್ಲೆಡೆ ಹರಡಲಾಗಿತ್ತು. ಅದೊಂದೇ ಅಲ್ಲ, ಬಾಬರೀ ಮಸೀದಿಯನ್ನು ಉರುಳಿಸುವುದಕ್ಕೂ ಸಂಘಪರಿವಾರ ಆಯ್ಕೆ ಮಾಡಿಕೊಂಡಿದ್ದು ಇಂಥದ್ದೇ ತಂತ್ರವನ್ನು. ಬಿಜೆಪಿ ನೇತೃತ್ವದಲ್ಲಿ ಒಂದು ವರ್ಷಕ್ಕಿಂತ ಮೊದಲೇ ಅದು ಜನರಲ್ಲಿ ಒಂದು ಬಗೆಯ ಪ್ರಚೋದಕ ಮನಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸಿತ್ತು. ಆ ಕುರಿತಂತೆ ದೇಶದೆಲ್ಲೆಡೆ ಸಭೆ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸಿತ್ತು. ಹಿಂದೂ ಧರ್ಮ, ಅದರ ಆರಾಧನಾಲಯಗಳು, ಸಂಸ್ಕøತಿ.. ಎಲ್ಲವೂ ಮುಸ್ಲಿಮರಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿವೆ ಅನ್ನುವ ಪ್ರಚಾರದೊಂದಿಗೆ ಇಟ್ಟಿಗೆ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅಂದಹಾಗೆ, ಭಯದ ಸನ್ನಿವೇಶವನ್ನು ನಿರ್ಮಾಣ ಮಾಡಿ, ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವ ಕಲೆ ಸಂಘಪರಿವಾರಕ್ಕೆ ಚೆನ್ನಾಗಿಯೇ ಸಿದ್ದಿಸಿದೆ. ಹೀಗಿರುತ್ತಾ, ಈಶಾನ್ಯ ರಾಜ್ಯಗಳ ಮಂದಿಯ ವಲಸೆಯನ್ನು ನಾವು ಬರೇ ಭಾವನಾತ್ಮಕ ದೃಷ್ಟಿಯಿಂದ ನೋಡುವುದು ಎಷ್ಟು ಸರಿ? ಅಚ್ಚರಿ ಏನೆಂದರೆ, ಅಸ್ಸಾಮ್‍ನ ಘರ್ಷಣೆಗೆ ಅಕ್ರಮ ವಲಸಿಗರು ಕಾರಣ ಎಂದು ಹೇಳುತ್ತಾ ತಿರುಗಾಡುತ್ತಿರುವವರೇ ಬೆಂಗಳೂರಿನಲ್ಲಿ ಈಶಾನ್ಯ ಭಾರತದ ಮಂದಿಯ ರಕ್ಷಕರಾಗಿ ಕಾಣಿಸಿಕೊಂಡಿರುವುದು. ರೈಲ್ವೆ ನಿಲ್ದಾಣದಲ್ಲಿ ಅವರ ರಕ್ಷಣೆಗೆ ಲಾಠಿ ಹಿಡಿದು, ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡಿರುವುದು.
        ಅಂದಹಾಗೆ, ಗಲಭೆ ನಡೆಯುತ್ತಿರುವ ಪ್ರದೇಶಕ್ಕೆ ಗಲಭೆಯೇ ನಡೆಯದ ಪ್ರದೇಶದಿಂದ ವಲಸೆ ಹೋದುದು ಈ ದೇಶದಲ್ಲಿ ಇದೇ ಮೊದಲು. ಈ ರಾಜ್ಯದಿಂದ ಮಾತ್ರವಲ್ಲ, ಆಂಧ್ರ, ತಮಿಳ್ನಾಡು, ಮಹಾರಾಷ್ಟ್ರದಿಂದಲೂ ಇಂಥ ವಲಸೆಗಳು ನಡೆದಿವೆ. ಆದ್ದರಿಂದಲೇ  ಈ ಬೆಳವಣಿಗೆಯ ಕುರಿತಂತೆ ಅತ್ಯಂತ ಪರಿಣಾಮಕಾರಿ ತನಿಖೆ ನಡೆಯಬೇಕು. ಮನುಷ್ಯರ ನಡುವೆ ದ್ವೇಷವನ್ನು ಹುಟ್ಟು ಹಾಕುವ ಶಕ್ತಿಗಳು ಎಷ್ಟೇ ಬಲಿಷ್ಟವಾಗಿರಲಿ, ಅವರು ಮಾನವ ದ್ರೋಹಿಗಳು.
         ನಿಜವಾಗಿ, ಮನುಷ್ಯರನ್ನು ಅವರ ಚರ್ಮ, ಭಾಷೆ, ರಾಜ್ಯ, ದೇಶದ ಆಧಾರದಲ್ಲಿ ವಿಂಗಡಿಸುವುದೇ ದೊಡ್ಡ ಕ್ರೌರ್ಯ. ಕೊಕ್ರಾಜಾರ್‍ನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದರೆ, ಅದಕ್ಕೆ ಈ ರಾಜ್ಯದಲ್ಲಿರುವ ಬೋಡೋಗಳೋ ಮುಸ್ಲಿಮರೋ ಹೊಣೆಗಾರರಾಗುವುದಾದರೂ ಹೇಗೆ? ಅಲ್ಲಿ ಮುಸ್ಲಿಮನೊಬ್ಬನಿಗೆ ಏಟು ಬಿದ್ದರೆ, ಇಲ್ಲಿರುವ ಬೋಡೋ ವ್ಯಕ್ತಿಗೆ ಹೊಡೆಯುವುದು ನ್ಯಾಯವಾಗುತ್ತದಾ? ಒಂದು ಅನ್ಯಾಯವನ್ನು ಇನ್ನೊಂದು ಅನ್ಯಾಯದ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯವೇ? ನ್ಯಾಯ ನಿನ್ನ ಹೆತ್ತವರ ವಿರುದ್ಧವಾಗಿದ್ದರೂ ನೀನು ನ್ಯಾಯದ ಪರವಾಗಿಯೇ ನಿಲ್ಲಬೇಕು ಅನ್ನುತ್ತದೆ ಪವಿತ್ರ ಕುರ್‍ಆನ್ (4: 59). ಬಹುಶಃ ಅಸ್ಸಾಮ್‍ನ ಬೆಳವಣಿಗೆಯನ್ನು ಬಳಸಿಕೊಂಡು ಇಡೀ ದೇಶದಲ್ಲಿ `ಮುಸ್ಲಿಮ್ ಭೀತಿ’ಯ ವಾತಾವರಣವನ್ನು ಸೃಷ್ಟಿಸಲು ಖಂಡಿತ ಹುನ್ನಾರವೊಂದು ನಡೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಂದು ವರ್ಷದೊಳಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವುದಕ್ಕೆ ಇಶ್ಶೂ ಒಂದರ ಅಗತ್ಯ ಇತ್ತು . ಒಂದು ಕಡೆ ಬಾಬಾ ರಾಮ್‍ದೇವ್‍ರ ಮುಖಾಂತರ ಈ ಕೆಲಸ ನಡೆಯುತ್ತಿರುವಾಗ ಇನ್ನೊಂದು ಕಡೆಯಿಂದ ಇಂಥದ್ದೊಂದು ಸನ್ನಿವೇಶಕ್ಕೆ ಚಾಲನೆ ನೀಡಿರುವ ಸಾಧ್ಯತೆಯನ್ನು ಹೇಗೆ ಅಲ್ಲಗಳೆಯುವುದು?
        ಸ್ವಾತಂತ್ರೋತ್ಸವದ ವೇಳೆ ಧ್ವಜಸ್ತಂಭದ ಕೆಳಗೆ ನಿಂತು ನಾವೆಲ್ಲಾ ಭಾರತೀಯರು, ನಾವೆಲ್ಲ ಒಂದು ಎಂದು ಎಷ್ಟೇ ಗಟ್ಟಿಯಾಗಿ ಹೇಳಿದರೂ ಈ ದೇಶದಲ್ಲಿ ಅಂಥ ಸನ್ನಿವೇಶ ನಿರ್ಮಾಣವಾಗಬಾರದೆಂದು ಬಯಸುವವರು ಇದ್ದಾರೆನ್ನುವುದು ಸ್ಪಷ್ಟ. ಮುಸ್ಲಿಮರನ್ನು ದೇಶದ ವೈರಿಗಳು, ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಪ್ರತಿನಿತ್ಯ ನಡೆಯುತ್ತಲೂ ಇದೆ. ಯಾವುದಾದರೂ ಬಿಡಿ ಪ್ರಕರಣವನ್ನು ಎತ್ತಿಕೊಂಡು ಇಡೀ ಸಮುದಾಯವನ್ನೇ ನಿಂದಿಸುವ, ಅವರ ದೇಶನಿಷ್ಠೆಯನ್ನು ಪ್ರಶ್ನಿಸುವ ಶ್ರಮ ಪತ್ರಿಕೆ, ಟಿ.ವಿ. ಚಾನೆಲ್‍ಗಳಲ್ಲಿ ಧಾರಾಳ ನಡೆಯುತ್ತಿವೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದಾಗಲೂ ಮೊದಲು ಶಂಕಿಸಿದ್ದು ಮುಸ್ಲಿಮರನ್ನೇ. ಆದ್ದರಿಂದ ಅಸ್ಸಾಮ್‍ನ ಘರ್ಷಣೆಯನ್ನು ನೆಪವಾಗಿಸಿಕೊಂಡು ಭೀತಿಯನ್ನು ಸೃಷ್ಟಿಸುವ ಯಾರೇ ಇರಲಿ, ಅವರನ್ನು ಮತ್ತು ಅವರ ಮೂಲವನ್ನು ಪತ್ತೆ ಹಚ್ಚಿ, ಶಿಕ್ಷೆಗೊಳಪಡಿಸಲೇಬೇಕು. ಅಂಥ ಎಸ್ಸೆಮ್ಮೆಸ್‍ಗೆ ಯಾರು ಪ್ರಾಯೋಜಕರು ಅನ್ನುವುದು ಬಹಿರಂಗವಾಗಬೇಕು. ಅಸ್ಸಾಮಿನಲ್ಲಿ ಬೋಡೋಗಳು ಮತ್ತು ಬೋಡೋಯೇತರರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಲ್ಲಿಯದ್ದೇ ಆದ ಕಾರಣ ಇದೆ. ಅದನ್ನು ಒಂದು ಎಸ್ಸೆಮ್ಮೆಸ್‍ನ ಮೂಲಕ ಪರಿಹರಿಸಬಹುದೆಂದು ನಂಬುವವರನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಆದ್ದರಿಂದ ಆ ನೆಪದಲ್ಲಿ ಈ ರಾಜ್ಯವನ್ನು ಅಸ್ಸಾಮ್ ಮಾಡುವವರ ಬಗ್ಗೆ ಜಾಗೃತರಾಗಿರೋಣ. ಈಶಾನ್ಯ ರಾಜ್ಯಕ್ಕೆ ಮರಳಿದವರು ಮತ್ತೆ ಇಲ್ಲಿಗೆ ಮರಳಿ ಬರುವಂಥ ವಾತಾವರಣವನ್ನು ನಿರ್ಮಿಸೋಣ. ಯಾಕೆಂದರೆ ಅವರೆಲ್ಲ ಮನುಷ್ಯರು, ಗುರುತು ಏನೇ ಆಗಿದ್ದರೂ.

Sunday 12 August 2012

ಬಾಳೆಗೊನೆ ಮತ್ತು ಉಪವಾಸಿಗ


       ಓರ್ವ ಉಪವಾಸಿಗನ ನಿಜವಾದ ಉಪವಾಸ ಆರಂಭವಾಗುವುದೇ ಈದ್‍ನ ಬಳಿಕ. ಆದರೆ ಈ ಉಪವಾಸದಲ್ಲಿ ನೀರು ಕುಡಿಯಬಹುದು. ಊಟ ಮಾಡಬಹುದು. ಬೇಕಾದಾಗ ತಿನ್ನ ಬಹುದು. ಸಹ್ರಿ ಉಣ್ಣಬೇಕಿಲ್ಲ. ಇಫ್ತಾರ್ ಮಾಡಬೇಕಿಲ್ಲ. ತರಾವೀಹ್ ಇಲ್ಲ.. ಆದರೂ ಈ ಉಪವಾಸ ರಮಝಾನ್‍ನ ಉಪವಾಸಕ್ಕಿಂತ ಎಷ್ಟೋ ಪಾಲು ಕಠಿಣ. ಈ ಉಪವಾಸವನ್ನು ಭಂಗಪಡಿಸುವುದಕ್ಕೆ ನೂರಾರು ಆಮಿಷಗಳು ಎದುರಾಗುತ್ತಲೇ ಇರುತ್ತವೆ. ರಮಝಾನಿನ ಒಂದು ತಿಂಗಳಲ್ಲಿ ಯಾವೆಲ್ಲ ಕಟ್ಟುನಿಟ್ಟು, ಮೌಲ್ಯಗಳನ್ನು ಪಾಲಿಸಿದ್ದೆವೋ ಅವೆಲ್ಲವನ್ನೂ ಕೈಬಿಡುವಂತೆ ಸುತ್ತಲಿನ ಪ್ರಪಂಚ ಒತ್ತಾಯಿಸತೊಡಗುತ್ತದೆ. ರಮಝಾನ್ ಬೇರೆ, ಉಳಿದ 11 ತಿಂಗಳು ಬೇರೆ ಅನ್ನುತ್ತದೆ. ವರದಕ್ಷಿಣೆ ಪಡೆದುಕೋ, ವ್ಯಾಪಾರದಲ್ಲಿ ಸುಳ್ಳು ಹೇಳು, ನಮಾಝ್‍ನ ಜೊತೆ ರಾಜಿಯಾಗು, ಝಗಮಗಿಸುವ ಜಗತ್ತಿನಲ್ಲಿ ಜಾಲಿಯಾಗಿರು.. ಎಂದೆಲ್ಲಾ ಹೇಳತೊಡಗುತ್ತದೆ. ಒಂದು ರೀತಿಯಲ್ಲಿ ಉಪವಾಸಿಗ, ಬೆಳೆದ ಬಾಳೆಗೊನೆಯಷ್ಟೇ ಆಕರ್ಷಣೀಯ ವಸ್ತು. ಮೂರ್ನಾಲ್ಕು ವಾರಗಳ ಮೊದಲು ಯಾವ ಬೆಲೆಯೂ ಇಲ್ಲದೇ ನೇತಾಡಿಕೊಂಡಿದ್ದ, ಮಾಲಿಕನನ್ನೋ ವ್ಯಾಪಾರಿಯನ್ನೋ ಆಕರ್ಷಿಸದೇ ಇದ್ದ ಬಾಳೆಗೊನೆ ಪ್ರಬುದ್ಧವಾದಂತೆ ಮಾಲಿಕ, ವ್ಯಾಪಾರಿ.. ಎಲ್ಲರನ್ನೂ ಆಕರ್ಷಿಸತೊಡಗುತ್ತದೆ. ಮಾಲಿಕ ದುಡ್ಡು ಲೆಕ್ಕ ಹಾಕುತ್ತಾನೆ. ವ್ಯಾಪಾರಿ ಚೌಕಾಶಿಗಿಳಿಯುತ್ತಾನೆ. ವಿವಿಧ ಕಡೆಗಳಿಂದ ಆಮಿಷಗಳೂ ಬರತೊಡಗುತ್ತವೆ. ಒಂದು ದಿನ, ವ್ಯಾಪಾರಿಯು ಮಾಲಿಕನಿಂದ ಅದನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಿದರೆ, ಮಾರುಕಟ್ಟೆಯವ ಮದ್ದು ಸಿಂಪಡಿಸಿಯೋ ವಿವಿಧ ಕೃತಕ ವಿಧಾನಗಳನ್ನು ಬಳಸಿಯೋ ಹಣ್ಣಾಗಿಸುತ್ತಾನೆ. ಹೀಗೆ ಎಲ್ಲರ ಆಕರ್ಷಣೆಗೆ ಒಳಗಾದ ಬಾಳೆಗೊನೆಯು ಕೊನೆಗೊಂದು ದಿನ ಯಾರದೋ ಹೊಟ್ಟೆ ಸೇರಿ ತನ್ನ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತದೆ. ನಿಜವಾಗಿ, ಓರ್ವ ಉಪವಾಸಿಗ ಈದ್‍ನ ಬಳಿಕ ಎದುರಿಸುವ ಸವಾಲು ಇದು. ಆತ ಯಾಕೆ ಆಕರ್ಷಣೀಯ ಎಂದರೆ, ಆತನ ಜೊತೆ ರಮಝಾನಿನಲ್ಲಿ ಗಳಿಸಿದ ಬೆಲೆಬಾಳುವ ಮೌಲ್ಯ ಇರುತ್ತದೆ. ಕೆಡುಕಿನ ಜಗತ್ತು ಆ ಮೌಲ್ಯವನ್ನು ಖರೀದಿಸಲು ಈದ್‍ನ ಬಳಿಕ ಪ್ರತಿ ಸೆಕೆಂಡೂ ಕಾಯುತ್ತಿರುತ್ತದೆ. ಯಾರು ಬಾಳೆಗೊನೆಯಂತೆ ಖರೀದಿಗೆ ಒಳಗಾಗುತ್ತಾರೋ ಅವರು ಹಣ್ಣಾದ ಬಾಳೆ ಹಣ್ಣಿನಂತೆ ಕೊನೆಗೆ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತಾರೆ..
          ಆದ್ದರಿಂದ ಈದ್‍ನ ಪ್ರವಚನ ಕೇಳಿ, ಕಣ್ಣು ಮಂಜಾಗಿಸಿ, ಭಾರ ಹೃದಯದಿಂದ ರಮಝಾನ್‍ಗೆ ವಿದಾಯ ಕೋರುವ ಪ್ರತಿಯೋರ್ವರೂ ತಮ್ಮ ಕಣ್ಣ ಮುಂದೆ, ಬೆಳೆದ ಬಾಳೆಗೊನೆಯ ದೃಶ್ಯವನ್ನೊಮ್ಮೆ ತಂದುಕೊಳ್ಳಬೇಕು. ತಾನು ಎಂದೆಂದೂ ಈ ಆಕರ್ಷಣೆಯನ್ನು ಉಳಿಸಿಕೊಳ್ಳುವೆ, ಮಾರಾಟವಾಗಲಾರೆ ಎಂದು ಎದೆಗೆ ಕೈಯಿಟ್ಟು ತೀರ್ಮಾನಿಸಬೇಕು. ಇಲ್ಲದಿದ್ದರೆ ನಮ್ಮ ತಕ್ಬೀರ್‍ಗೆ, ಹೊಸ ಬಟ್ಟೆಗೆ, ಪಫ್ರ್ಯೂಮ್‍ಗೆ, ಮಂಜಾದ ಕಣ್ಣಿಗೆ ಯಾವ ಅರ್ಥವೂ ಇರುವುದಿಲ್ಲ.