Monday 27 August 2012

ಅಮೇರಿಕ ಅಂದರೆ ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ..

ನೀಲ್ ಆರ್ಮ್ ಸ್ಟ್ರಾಂಗ್
ಲ್ಯಾನ್ಸ್ ಆರ್ಮ್ ಸ್ಟ್ರಾಂಗ್
ಅಮೇರಿಕದ ಎರಡು ಮುಖಗಳಿಗೆ ಅತ್ಯಂತ ಪರಿಣಾಮಕಾರಿ ಉದಾಹರಣೆಗಳಾಗಬಹುದಾದ ಇಬ್ಬರು ವ್ಯಕ್ತಿಗಳು ಕಳೆದ ವಾರ ಜಾಗತಿಕವಾಗಿಯೇ ಸುದ್ದಿಗೊಳಗಾದರು. ಅವರೆಷ್ಟು ಪ್ರಭಾವಿಗಳೆಂದರೆ, ಜಗತ್ತಿನ ಮುಖ್ಯವಾಹಿನಿಯ ಪತ್ರಿಕೆಗಳು ಬಿಡಿ, ತೀರಾ ಭಾಷಾ ಪತ್ರಿಕೆಗಳು ಕೂಡಾ ಅವರಿಬ್ಬರಿಗೂ ಬಹುತೇಕ ಮುಖ ಪುಟಗಳಲ್ಲೇ ಜಾಗ ಕೊಟ್ಟು ಸುದ್ದಿ ಬರೆದುವು. ಅವರಿಬ್ಬರೂ ಅಮೇರಿಕದವರು. ಇಬ್ಬರ ಹೆಸರೂ ಆರ್ಮ್ ಸ್ಟ್ರಾಂಗ್ ಎಂದೇ. ಓರ್ವರು ಚಂದ್ರನ ಮೇಲೆ ಪ್ರಥಮವಾಗಿ ಹೆಜ್ಜೆ ಊರಿದ ನೀಲ್ ಆರ್ಮ್ ಸ್ಟ್ರಾಂಗ್ ಆದರೆ, ಇನ್ನೋರ್ವರು, ಸತತ ಏಳು ಬಾರಿ ವಿಶ್ವದ ಅತಿ ದೊಡ್ಡ ಟೂರ್ ಡಿ ಫ್ರಾನ್ಸ್ ಪ್ರಶಸ್ತಿಗಳನ್ನು ಗೆದ್ದು ವಿಶ್ವದಾಖಲೆ ಬರೆದ ಸೈಕ್ಲಿಂಗ್ ಪಟು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್. ದುರಂತ ಏನೆಂದರೆ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್‍ಗೆ ಆಗಸ್ಟ್ 24ರಂದು ಆಜೀವ ನಿಷೇಧ ಹೇರಲಾಯಿತು. ಸೈಕ್ಲಿಂಗ್ ರೇಸ್‍ನ ದಂತಕತೆ ಎನಿಸಿಕೊಂಡಿದ್ದ ಇವರು, ಉದ್ದೀಪನಾ ಮದ್ದು ಸೇವಿಸಿರುವುದೇ ಇದಕ್ಕೆ ಕಾರಣ. ಅವರ ಪ್ರಶಸ್ತಿಗಳನ್ನೆಲ್ಲಾ ಹಿಂತೆಗೆಯಲು ಕ್ರಮ ಕೈಗೊಳ್ಳುವುದಾಗಿ ತಪಾಸಣಾ ಸಂಸ್ಥೆ (USADA) ಘೋಷಿಸಿತು. ಇದರ ಮರುದಿನವೇ, ಮೊತ್ತಮೊದಲ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್  ಸಾವಿಗೀಡಾದರು.
            ನಿಜವಾಗಿ, ಇವರಿಬ್ಬರ ಬಗ್ಗೆ ಬರೆಯುವುದೆಂದರೆ ಅಮೇರಿಕದ ಬಗ್ಗೆ ಬರೆದಂತೆ. ಅಮೇರಿಕ ಈ ಜಗತ್ತಿನಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳಬಹುದಾದ ಅನೇಕಾರು ಸಾಧನೆಗಳನ್ನು ಖಂಡಿತ ಮಾಡಿದೆ. ಒಲಿಂಪಿಕ್ಸ್ ನಲ್ಲಿ ಈ ಬಾರಿಯೂ ಅಮೇರಿಕವೇ ಮೊದಲು. ಆಧುನಿಕ ಸಂಶೋಧನಾ ಕ್ಷೇತ್ರದಲ್ಲಿ ಅಮೇರಿಕಕ್ಕೆ ಬಹಳ ದೊಡ್ಡ ಹೆಸರಿದೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ನೀಡಲಾಗುವ ನೋಬೆಲ್ ಪ್ರಶಸ್ತಿಯ ಪಟ್ಟಿಯಲ್ಲಿ ಪ್ರತಿವರ್ಷ ಒಬ್ಬರಾದರೂ ಅಮೇರಿಕನ್ ವಿಜ್ಞಾನಿ ಇದ್ದೇ ಇರುತ್ತಾರೆ. ಕೈಗಾರಿಕಾ ಕ್ಷೇತ್ರದಲ್ಲೂ ಅಮೇರಿಕ ಬಹಳ ಮುಂದು.. ಈ ಪಟ್ಟಿ ತುಂಬಾ ಉದ್ದವಿದೆ. ಆದರೆ, ಅಮೇರಿಕಕ್ಕೆ ಇನ್ನೊಂದು ಮುಖವೂ ಇದೆ. ಅದು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್‍ನಂಥ ಮುಖ. ಅಮೇರಿಕದ ಯಶೋ ಗಾಥೆಯ ಬಗ್ಗೆ ಬರೆಯುತ್ತಾ ಹೋದಂತೆಲ್ಲಾ, ಮನುಷ್ಯ ರಕ್ತದ, ಕಪಟತನದ, ದೌರ್ಜನ್ಯದ ಇತಿಹಾಸವೂ ಬಿಚ್ಚುತ್ತಲೇ ಹೋಗುತ್ತದೆ. ಇವತ್ತು ಕೆ.ಜಿ. ಕ್ಲಾಸಿನ ಮಕ್ಕಳಿಂದ ಹಿಡಿದು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವರೆಗೆ ಎಲ್ಲರಿಗೂ ಅಮೇರಿಕವೇ ಕನಸಿನ ದೇಶ. ಅಮೇರಿಕದಲ್ಲೊಂದು ಉದ್ಯೋಗ ಗಿಟ್ಟಿಸಲು, ಅಲ್ಲೊಂದು ಮನೆ ಮಾಡಲು, ಅಲ್ಲಿನ ಪ್ರಜೆಯಾಗಿ ಗುರುತಿಸಿಕೊಳ್ಳಲು ಆಸೆ ಪಡುವ ಕೋಟ್ಯಂತರ ಮಂದಿ ಈ ಜಗತ್ತಿನಲ್ಲಿದ್ದಾರೆ. ಅಮೇರಿಕವು ತನ್ನ ಸಾಧನೆ, ಅಭಿವೃದ್ಧಿಗಳ ಮುಖಾಂತರ ಈ ಜಗತ್ತಿನ ಮಂದಿಗೆ ನೀಲ್ ಆರ್ಮ್ ಸ್ಟ್ರಾಂಗ್ ಗ್‍ನಂತೆ ಕಾಣಿಸುತ್ತಿದೆ. ಆದರೆ ಆ ಸಾಧನೆಗಳ ಹಿಂದೆ ಅಫಘನ್ನಿಗಳ, ಇರಾಕಿಗಳ, ಕ್ಯೂಬನ್ನರ ರಕ್ತ ಇರುವುದು ಕಾಣಿಸುತ್ತಲೇ ಇಲ್ಲ. ಆರ್ಥಿಕ ಕ್ಷೇತ್ರದಲ್ಲಿ ಅಮೇರಿಕ ಇವತ್ತು ಬಲಾಢ್ಯ ಆಗಿದ್ದರೆ ಅಥವಾ ಜಗತ್ತಿನ ಅರ್ಥ ಕ್ಷೇತ್ರವನ್ನು ಪಲ್ಲಟಗೊಳಿಸುವ ಸಾಮರ್ಥ್ಯ  ಅಮೇರಿಕಕ್ಕಿದ್ದರೆ ಅದರ ಹಿಂದೆ ಕೊಲ್ಲಿ ರಾಷ್ಟ್ರಗಳಿಂದ ದರೋಡೆಗೈದ ತೈಲದ ಪಾತ್ರ ಇದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಅರಬ್ ರಾಷ್ಟ್ರಗಳ ಬಗ್ಗೆ, ಅಲ್ಲಿರುವ ಮನುಷ್ಯರ ಬಗ್ಗೆ ಅಮೇರಿಕ ಇವತ್ತು ಅಪಾರ ಆಸಕ್ತಿ ತೋರಿಸುತ್ತಿರುವುದು, ಮಾನವ ಹಕ್ಕಿನ ಮೇಲಿನ ಕಾಳಜಿಯಿಂದ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ತನ್ನ ಹಿತವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅದು ಏನು ಮಾಡುವುದಕ್ಕೂ ಹೇಸುವುದಿಲ್ಲ. ಒಂದು ರೀತಿಯಲ್ಲಿ ಅದರ ಸಾಧನೆಯ ಹಿಂದೆ ಗೋಲದ ಬಡ ರಾಷ್ಟ್ರಗಳಿಂದ ಹಿಂಡಿ ತೆಗೆದ ಉದ್ದೀಪನ ಮದ್ದು ಇದೆ. ಒಂದು ವೇಳೆ ಅತ್ಲೀಟ್‍ಗಳಂತೆ, ಅಮೇರಿಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಒಂದೊಂದಾಗಿ ಪರೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿದ್ದರೆ, `ಬುಶ್‍ಗಳು’ ಇವತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನಂತೆ ತಲೆ ತಗ್ಗಿಸಿ ಬದುಕಬೇಕಾಗಿತ್ತು. ಅಫಘಾನ್-ಇರಾಕ್‍ಗಳ ಸಾವಿರಾರು ಮಂದಿಯ ರಕ್ತವೆಂಬ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಖಳರಾಗಿ ಅವರು ಗುರುತಿಸಿಕೊಳ್ಳಬೇಕಾಗಿತ್ತು. ವಿಷಾದ ಏನೆಂದರೆ, ಅತ್ಲೀಟ್‍ಗಳನ್ನು ಪರೀಕ್ಷಿಸುವುದಕ್ಕೆ ಉಪಕರಣಗಳಿರುವಂತೆ ಮನುಷ್ಯ ವಿರೋಧಿಗಳನ್ನು ಪರೀಕ್ಷಿಸುವುದಕ್ಕೆ ಈ ಜಗತ್ತಿನಲ್ಲಿ ಪರಿಣಾಮಕಾರಿ ಉಪಕರಣಗಳು ಇಲ್ಲ ಅನ್ನುವುದು. ನಿಜವಾಗಿ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್  ಉದ್ದೀಪನ ಮದ್ದು ಸೇವಿಸಿದುದರಿಂದ ಈ ಜಗತ್ತಿಗೆ ಯಾವ ಅನ್ಯಾಯವೂ ಆಗಿಲ್ಲ. ಹಾಗೇನೂ ಆಗಿದ್ದರೆ, ಅದು ಆತನ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವಾರು ಸ್ಪರ್ಧಿಗಳಿಗೆ ಮಾತ್ರ. ಆದರೆ ಅಷ್ಟು ಸಣ್ಣ ಅನ್ಯಾಯಕ್ಕಾಗಿ ಓರ್ವ ವ್ಯಕ್ತಿಯ ಪ್ರಶಸ್ತಿಗಳನ್ನು ಹಿಂಪಡೆಯುವುದು, ಸಾಧಕರ ಪಟ್ಟಿಯಿಂದ ಆತನ ಹೆಸರನ್ನು ಅಳಿಸುವುದು ಮಾಡುತ್ತೇವೆಂದಾದರೆ, ಸಾವಿರಾರು ಮಂದಿಗೆ ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ನಾವು ಕೊಡಬಹುದಾದ ಶಿಕ್ಷೆಯಾದರೂ ಯಾವುದಿದ್ದೀತು? ಆರ್ಮ್ ಸ್ಟ್ರಾಂಗ್ ನಿಂದ ಪದಕಗಳನ್ನು ಹಿಂಪಡೆದಂತೆ ಅನ್ಯಾಯಕ್ಕೊಳಗಾದ ರಾಷ್ಟ್ರಗಳಿಗೆ ಅಮೇರಿಕದಿಂದ ಪರಿಹಾರ ಕೊಡಿಸುವುದಾದರೆ ಅದರ ಖಜಾನೆಯ ಸ್ಥಿತಿ ಏನಾದೀತು? ಜಿಡಿಪಿ ಎಲ್ಲಿಗೆ ಮುಟ್ಟೀತು?
        ಅಂದಹಾಗೆ, ನೀಲ್ ಆರ್ಮ್ ಸ್ಟ್ರಾಂಗ್  ಮತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಎಂಬುದು ಅಮೇರಿಕದ ಎರಡು ವ್ಯಕ್ತಿತ್ವಗಳಷ್ಟೇ ಅಲ್ಲ, ಅದರ ಎರಡು ಮುಖಗಳು ಕೂಡ. ಇವತ್ತು ಯಾರೆಲ್ಲ ನೀಲ್ ಆರ್ಮ್ ಸ್ಟ್ರಾಂಗ್‍ನ ಬಗ್ಗೆ, ಆತನ ಸಾಧನೆಯ ಬಗ್ಗೆ ಹೊಗಳಿಕೆಯ ಮಾತಾಡುತ್ತಾರೋ ಅವರೆಲ್ಲ ಲ್ಯಾನ್ಸ್ ಆರ್ಮ್ ಸ್ಟ್ರಾಂಗ ನ್ನೂ  ನೆನಪಿಸಿಕೊಳ್ಳಬೇಕು. ಯಾಕೆಂದರೆ, ಅಮೇರಿಕ ಎಂಬುದು ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡ. ನಿಜವಾಗಿ ಜಗತ್ತಿನ ಬಡ ರಾಷ್ಟ್ರಗಳೆಲ್ಲ ಅಮೇರಿಕವನ್ನು ಇವತ್ತು ನೋಡುತ್ತಿರುವುದೇ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ಪ್ರತಿರೂಪದಂತೆ. ಯಾಕೆಂದರೆ, ಒಬಾಮ ಆಗಲಿ, ಕ್ಲಿಂಟನ್, ಬುಶ್‍ಗಳೇ ಆಗಲಿ.. ಎಲ್ಲರೂ ಉದ್ದೀಪನ ಮದ್ದು (ಮನುಷ್ಯ ರಕ್ತ) ಸೇವಿಸಿದವರೇ. ಜಗತ್ತಿಗೆ ಇವರು ಪಾಠ ಮಾಡುವಾಗಲೆಲ್ಲ, ಅದರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ನ ಪ್ರಾಮಾಣಿಕತೆಗಿಂತ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ವಂಚನೆಯನ್ನೇ ಜಗತ್ತು ಗುರುತಿಸುತ್ತಾ ಇದೆ. ಏನೇ ಆಗಲಿ, ಅಮೇರಿಕ ಅವಲೋಕನಕ್ಕೆ ಸಿದ್ಧವಾಗುವುದಾದರೆ ಈ ಇಬ್ಬರು ಆರ್ಮ್ ಸ್ಟ್ರಾಂಗ್ ಗಳಲ್ಲಿ ಅದಕ್ಕೆ ಖಂಡಿತ ಧಾರಾಳ ಪಾಠಗಳಿವೆ.

Saturday 18 August 2012

ಅವರೆಲ್ಲಾ ಮನುಷ್ಯರು,ಗುರುತು ಏನೇ ಆಗಿದ್ದರೂ..

ಈಶಾನ್ಯ ಭಾರತದ ಮಂದಿ ಈ ರಾಜ್ಯದಿಂದ ಸಾಮೂಹಿಕವಾಗಿ ವಲಸೆ ಹೋಗುವಾಗ ಕೆಲವು ಪ್ರಶ್ನೆಗಳನ್ನೂ ಬಿಟ್ಟು ಹೋಗಿದ್ದಾರೆ. ಅವರಾರೂ ಈ ರಾಜ್ಯದ ಯಾವುದಾದರೊಂದು ನಿರ್ದಿಷ್ಟ ಪ್ರದೇಶದಲ್ಲಿ ಗುಂಪಾಗಿ ವಾಸಿಸುತ್ತಿರಲಿಲ್ಲ. ಎಲ್ಲೆಂದರಲ್ಲಿ ಚದುರಿ ಹೋಗಿದ್ದ ಇವರೆಲ್ಲಾ ಬೆಂಗಳೂರಿನಲ್ಲಿ ಒಮ್ಮೆಲೇ ಒಟ್ಟುಗೂಡಿದ್ದು ಹೇಗೆ? ರಾಜ್ಯದಲ್ಲಿ ಅವರದ್ದೇ ಆದ ಒಂದು ಸಂಘಟನೆಯೂ ಇಲ್ಲ. ಹೀಗಿರುವಾಗ ಅವರನ್ನು ಸಂಪರ್ಕಿಸುವ ಮತ್ತು ಸಂಘಟಿತಗೊಳಿಸುವ ಕೆಲಸವನ್ನು ಮಾಡಿದ್ದು ಯಾರು? ಅಷ್ಟಕ್ಕೂ ಅವರ ಮೇಲೆ ಅಧಿಕೃತವಾಗಿ ಒಂದೇ ಒಂದು ದಾಳಿ ಆಗುವುದಕ್ಕಿಂತ ಮೊದಲೇ ಅವರೆಲ್ಲಾ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಟ್ಟುಗೂಡಿದ್ದಾರೆ. ಹತ್ತಾರು ವರ್ಷಗಳಿಂದ ಈ ರಾಜ್ಯದಲ್ಲಿರುವ ಇವರನ್ನು ಒಂದು ಎಸ್ಸೆಮ್ಮೆಸ್ಸು, ಇಮೇಲು, ಅಥವಾ ಫೇಸ್‍ಬುಕ್‍ನ ಬರಹವು ಅಷ್ಟೊಂದು ಪ್ರಮಾಣದಲ್ಲಿ ಬೆದರಿಸಲು ಸಾಧ್ಯವೇ?
    ನಿಜವಾಗಿ, ಈ ದಿಢೀರ್ ಬೆಳವಣಿಗೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿರುವಂತೆ ಕಾಣಿಸುತ್ತಿದೆ. 80ರ ದಶಕದಲ್ಲಿ ವಿ.ಪಿ. ಸಿಂಗ್‍ರು ಮಂಡಲ್ ವರದಿಯ ಜಾರಿಗೆ ಮುಂದಾದಾಗ, ಇಂಥದ್ದೇ ಸಮೂಹ ಸನ್ನಿ ನಿರ್ಮಾಣವಾಗಿತ್ತು. ದಲಿತರ ವಿರುದ್ಧ ಸಂಘಪರಿವಾರ ಮೇಲ್ವರ್ಗವನ್ನು ಎತ್ತಿ ಕಟ್ಟಿತ್ತು. ಆತ್ಮಾಹುತಿ ಪ್ರಕರಣಗಳೂ ನಡೆದಿದ್ದುವು. ಮಂಡಲ್ ವರದಿ ಜಾರಿಯಾದರೆ ಮೇಲ್ವರ್ಗದ ಮಂದಿ ದಲಿತರ ಗುಲಾಮರಂತೆ ಬದುಕಬೇಕಾದೀತು ಅನ್ನುವ ಸುಳ್ಳು ಭ್ರಮೆಯನ್ನು ಎಲ್ಲೆಡೆ ಹರಡಲಾಗಿತ್ತು. ಅದೊಂದೇ ಅಲ್ಲ, ಬಾಬರೀ ಮಸೀದಿಯನ್ನು ಉರುಳಿಸುವುದಕ್ಕೂ ಸಂಘಪರಿವಾರ ಆಯ್ಕೆ ಮಾಡಿಕೊಂಡಿದ್ದು ಇಂಥದ್ದೇ ತಂತ್ರವನ್ನು. ಬಿಜೆಪಿ ನೇತೃತ್ವದಲ್ಲಿ ಒಂದು ವರ್ಷಕ್ಕಿಂತ ಮೊದಲೇ ಅದು ಜನರಲ್ಲಿ ಒಂದು ಬಗೆಯ ಪ್ರಚೋದಕ ಮನಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸಿತ್ತು. ಆ ಕುರಿತಂತೆ ದೇಶದೆಲ್ಲೆಡೆ ಸಭೆ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸಿತ್ತು. ಹಿಂದೂ ಧರ್ಮ, ಅದರ ಆರಾಧನಾಲಯಗಳು, ಸಂಸ್ಕøತಿ.. ಎಲ್ಲವೂ ಮುಸ್ಲಿಮರಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿವೆ ಅನ್ನುವ ಪ್ರಚಾರದೊಂದಿಗೆ ಇಟ್ಟಿಗೆ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅಂದಹಾಗೆ, ಭಯದ ಸನ್ನಿವೇಶವನ್ನು ನಿರ್ಮಾಣ ಮಾಡಿ, ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವ ಕಲೆ ಸಂಘಪರಿವಾರಕ್ಕೆ ಚೆನ್ನಾಗಿಯೇ ಸಿದ್ದಿಸಿದೆ. ಹೀಗಿರುತ್ತಾ, ಈಶಾನ್ಯ ರಾಜ್ಯಗಳ ಮಂದಿಯ ವಲಸೆಯನ್ನು ನಾವು ಬರೇ ಭಾವನಾತ್ಮಕ ದೃಷ್ಟಿಯಿಂದ ನೋಡುವುದು ಎಷ್ಟು ಸರಿ? ಅಚ್ಚರಿ ಏನೆಂದರೆ, ಅಸ್ಸಾಮ್‍ನ ಘರ್ಷಣೆಗೆ ಅಕ್ರಮ ವಲಸಿಗರು ಕಾರಣ ಎಂದು ಹೇಳುತ್ತಾ ತಿರುಗಾಡುತ್ತಿರುವವರೇ ಬೆಂಗಳೂರಿನಲ್ಲಿ ಈಶಾನ್ಯ ಭಾರತದ ಮಂದಿಯ ರಕ್ಷಕರಾಗಿ ಕಾಣಿಸಿಕೊಂಡಿರುವುದು. ರೈಲ್ವೆ ನಿಲ್ದಾಣದಲ್ಲಿ ಅವರ ರಕ್ಷಣೆಗೆ ಲಾಠಿ ಹಿಡಿದು, ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡಿರುವುದು.
        ಅಂದಹಾಗೆ, ಗಲಭೆ ನಡೆಯುತ್ತಿರುವ ಪ್ರದೇಶಕ್ಕೆ ಗಲಭೆಯೇ ನಡೆಯದ ಪ್ರದೇಶದಿಂದ ವಲಸೆ ಹೋದುದು ಈ ದೇಶದಲ್ಲಿ ಇದೇ ಮೊದಲು. ಈ ರಾಜ್ಯದಿಂದ ಮಾತ್ರವಲ್ಲ, ಆಂಧ್ರ, ತಮಿಳ್ನಾಡು, ಮಹಾರಾಷ್ಟ್ರದಿಂದಲೂ ಇಂಥ ವಲಸೆಗಳು ನಡೆದಿವೆ. ಆದ್ದರಿಂದಲೇ  ಈ ಬೆಳವಣಿಗೆಯ ಕುರಿತಂತೆ ಅತ್ಯಂತ ಪರಿಣಾಮಕಾರಿ ತನಿಖೆ ನಡೆಯಬೇಕು. ಮನುಷ್ಯರ ನಡುವೆ ದ್ವೇಷವನ್ನು ಹುಟ್ಟು ಹಾಕುವ ಶಕ್ತಿಗಳು ಎಷ್ಟೇ ಬಲಿಷ್ಟವಾಗಿರಲಿ, ಅವರು ಮಾನವ ದ್ರೋಹಿಗಳು.
         ನಿಜವಾಗಿ, ಮನುಷ್ಯರನ್ನು ಅವರ ಚರ್ಮ, ಭಾಷೆ, ರಾಜ್ಯ, ದೇಶದ ಆಧಾರದಲ್ಲಿ ವಿಂಗಡಿಸುವುದೇ ದೊಡ್ಡ ಕ್ರೌರ್ಯ. ಕೊಕ್ರಾಜಾರ್‍ನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದರೆ, ಅದಕ್ಕೆ ಈ ರಾಜ್ಯದಲ್ಲಿರುವ ಬೋಡೋಗಳೋ ಮುಸ್ಲಿಮರೋ ಹೊಣೆಗಾರರಾಗುವುದಾದರೂ ಹೇಗೆ? ಅಲ್ಲಿ ಮುಸ್ಲಿಮನೊಬ್ಬನಿಗೆ ಏಟು ಬಿದ್ದರೆ, ಇಲ್ಲಿರುವ ಬೋಡೋ ವ್ಯಕ್ತಿಗೆ ಹೊಡೆಯುವುದು ನ್ಯಾಯವಾಗುತ್ತದಾ? ಒಂದು ಅನ್ಯಾಯವನ್ನು ಇನ್ನೊಂದು ಅನ್ಯಾಯದ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯವೇ? ನ್ಯಾಯ ನಿನ್ನ ಹೆತ್ತವರ ವಿರುದ್ಧವಾಗಿದ್ದರೂ ನೀನು ನ್ಯಾಯದ ಪರವಾಗಿಯೇ ನಿಲ್ಲಬೇಕು ಅನ್ನುತ್ತದೆ ಪವಿತ್ರ ಕುರ್‍ಆನ್ (4: 59). ಬಹುಶಃ ಅಸ್ಸಾಮ್‍ನ ಬೆಳವಣಿಗೆಯನ್ನು ಬಳಸಿಕೊಂಡು ಇಡೀ ದೇಶದಲ್ಲಿ `ಮುಸ್ಲಿಮ್ ಭೀತಿ’ಯ ವಾತಾವರಣವನ್ನು ಸೃಷ್ಟಿಸಲು ಖಂಡಿತ ಹುನ್ನಾರವೊಂದು ನಡೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಂದು ವರ್ಷದೊಳಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವುದಕ್ಕೆ ಇಶ್ಶೂ ಒಂದರ ಅಗತ್ಯ ಇತ್ತು . ಒಂದು ಕಡೆ ಬಾಬಾ ರಾಮ್‍ದೇವ್‍ರ ಮುಖಾಂತರ ಈ ಕೆಲಸ ನಡೆಯುತ್ತಿರುವಾಗ ಇನ್ನೊಂದು ಕಡೆಯಿಂದ ಇಂಥದ್ದೊಂದು ಸನ್ನಿವೇಶಕ್ಕೆ ಚಾಲನೆ ನೀಡಿರುವ ಸಾಧ್ಯತೆಯನ್ನು ಹೇಗೆ ಅಲ್ಲಗಳೆಯುವುದು?
        ಸ್ವಾತಂತ್ರೋತ್ಸವದ ವೇಳೆ ಧ್ವಜಸ್ತಂಭದ ಕೆಳಗೆ ನಿಂತು ನಾವೆಲ್ಲಾ ಭಾರತೀಯರು, ನಾವೆಲ್ಲ ಒಂದು ಎಂದು ಎಷ್ಟೇ ಗಟ್ಟಿಯಾಗಿ ಹೇಳಿದರೂ ಈ ದೇಶದಲ್ಲಿ ಅಂಥ ಸನ್ನಿವೇಶ ನಿರ್ಮಾಣವಾಗಬಾರದೆಂದು ಬಯಸುವವರು ಇದ್ದಾರೆನ್ನುವುದು ಸ್ಪಷ್ಟ. ಮುಸ್ಲಿಮರನ್ನು ದೇಶದ ವೈರಿಗಳು, ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಪ್ರತಿನಿತ್ಯ ನಡೆಯುತ್ತಲೂ ಇದೆ. ಯಾವುದಾದರೂ ಬಿಡಿ ಪ್ರಕರಣವನ್ನು ಎತ್ತಿಕೊಂಡು ಇಡೀ ಸಮುದಾಯವನ್ನೇ ನಿಂದಿಸುವ, ಅವರ ದೇಶನಿಷ್ಠೆಯನ್ನು ಪ್ರಶ್ನಿಸುವ ಶ್ರಮ ಪತ್ರಿಕೆ, ಟಿ.ವಿ. ಚಾನೆಲ್‍ಗಳಲ್ಲಿ ಧಾರಾಳ ನಡೆಯುತ್ತಿವೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದಾಗಲೂ ಮೊದಲು ಶಂಕಿಸಿದ್ದು ಮುಸ್ಲಿಮರನ್ನೇ. ಆದ್ದರಿಂದ ಅಸ್ಸಾಮ್‍ನ ಘರ್ಷಣೆಯನ್ನು ನೆಪವಾಗಿಸಿಕೊಂಡು ಭೀತಿಯನ್ನು ಸೃಷ್ಟಿಸುವ ಯಾರೇ ಇರಲಿ, ಅವರನ್ನು ಮತ್ತು ಅವರ ಮೂಲವನ್ನು ಪತ್ತೆ ಹಚ್ಚಿ, ಶಿಕ್ಷೆಗೊಳಪಡಿಸಲೇಬೇಕು. ಅಂಥ ಎಸ್ಸೆಮ್ಮೆಸ್‍ಗೆ ಯಾರು ಪ್ರಾಯೋಜಕರು ಅನ್ನುವುದು ಬಹಿರಂಗವಾಗಬೇಕು. ಅಸ್ಸಾಮಿನಲ್ಲಿ ಬೋಡೋಗಳು ಮತ್ತು ಬೋಡೋಯೇತರರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಲ್ಲಿಯದ್ದೇ ಆದ ಕಾರಣ ಇದೆ. ಅದನ್ನು ಒಂದು ಎಸ್ಸೆಮ್ಮೆಸ್‍ನ ಮೂಲಕ ಪರಿಹರಿಸಬಹುದೆಂದು ನಂಬುವವರನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಆದ್ದರಿಂದ ಆ ನೆಪದಲ್ಲಿ ಈ ರಾಜ್ಯವನ್ನು ಅಸ್ಸಾಮ್ ಮಾಡುವವರ ಬಗ್ಗೆ ಜಾಗೃತರಾಗಿರೋಣ. ಈಶಾನ್ಯ ರಾಜ್ಯಕ್ಕೆ ಮರಳಿದವರು ಮತ್ತೆ ಇಲ್ಲಿಗೆ ಮರಳಿ ಬರುವಂಥ ವಾತಾವರಣವನ್ನು ನಿರ್ಮಿಸೋಣ. ಯಾಕೆಂದರೆ ಅವರೆಲ್ಲ ಮನುಷ್ಯರು, ಗುರುತು ಏನೇ ಆಗಿದ್ದರೂ.

Sunday 12 August 2012

ಬಾಳೆಗೊನೆ ಮತ್ತು ಉಪವಾಸಿಗ


       ಓರ್ವ ಉಪವಾಸಿಗನ ನಿಜವಾದ ಉಪವಾಸ ಆರಂಭವಾಗುವುದೇ ಈದ್‍ನ ಬಳಿಕ. ಆದರೆ ಈ ಉಪವಾಸದಲ್ಲಿ ನೀರು ಕುಡಿಯಬಹುದು. ಊಟ ಮಾಡಬಹುದು. ಬೇಕಾದಾಗ ತಿನ್ನ ಬಹುದು. ಸಹ್ರಿ ಉಣ್ಣಬೇಕಿಲ್ಲ. ಇಫ್ತಾರ್ ಮಾಡಬೇಕಿಲ್ಲ. ತರಾವೀಹ್ ಇಲ್ಲ.. ಆದರೂ ಈ ಉಪವಾಸ ರಮಝಾನ್‍ನ ಉಪವಾಸಕ್ಕಿಂತ ಎಷ್ಟೋ ಪಾಲು ಕಠಿಣ. ಈ ಉಪವಾಸವನ್ನು ಭಂಗಪಡಿಸುವುದಕ್ಕೆ ನೂರಾರು ಆಮಿಷಗಳು ಎದುರಾಗುತ್ತಲೇ ಇರುತ್ತವೆ. ರಮಝಾನಿನ ಒಂದು ತಿಂಗಳಲ್ಲಿ ಯಾವೆಲ್ಲ ಕಟ್ಟುನಿಟ್ಟು, ಮೌಲ್ಯಗಳನ್ನು ಪಾಲಿಸಿದ್ದೆವೋ ಅವೆಲ್ಲವನ್ನೂ ಕೈಬಿಡುವಂತೆ ಸುತ್ತಲಿನ ಪ್ರಪಂಚ ಒತ್ತಾಯಿಸತೊಡಗುತ್ತದೆ. ರಮಝಾನ್ ಬೇರೆ, ಉಳಿದ 11 ತಿಂಗಳು ಬೇರೆ ಅನ್ನುತ್ತದೆ. ವರದಕ್ಷಿಣೆ ಪಡೆದುಕೋ, ವ್ಯಾಪಾರದಲ್ಲಿ ಸುಳ್ಳು ಹೇಳು, ನಮಾಝ್‍ನ ಜೊತೆ ರಾಜಿಯಾಗು, ಝಗಮಗಿಸುವ ಜಗತ್ತಿನಲ್ಲಿ ಜಾಲಿಯಾಗಿರು.. ಎಂದೆಲ್ಲಾ ಹೇಳತೊಡಗುತ್ತದೆ. ಒಂದು ರೀತಿಯಲ್ಲಿ ಉಪವಾಸಿಗ, ಬೆಳೆದ ಬಾಳೆಗೊನೆಯಷ್ಟೇ ಆಕರ್ಷಣೀಯ ವಸ್ತು. ಮೂರ್ನಾಲ್ಕು ವಾರಗಳ ಮೊದಲು ಯಾವ ಬೆಲೆಯೂ ಇಲ್ಲದೇ ನೇತಾಡಿಕೊಂಡಿದ್ದ, ಮಾಲಿಕನನ್ನೋ ವ್ಯಾಪಾರಿಯನ್ನೋ ಆಕರ್ಷಿಸದೇ ಇದ್ದ ಬಾಳೆಗೊನೆ ಪ್ರಬುದ್ಧವಾದಂತೆ ಮಾಲಿಕ, ವ್ಯಾಪಾರಿ.. ಎಲ್ಲರನ್ನೂ ಆಕರ್ಷಿಸತೊಡಗುತ್ತದೆ. ಮಾಲಿಕ ದುಡ್ಡು ಲೆಕ್ಕ ಹಾಕುತ್ತಾನೆ. ವ್ಯಾಪಾರಿ ಚೌಕಾಶಿಗಿಳಿಯುತ್ತಾನೆ. ವಿವಿಧ ಕಡೆಗಳಿಂದ ಆಮಿಷಗಳೂ ಬರತೊಡಗುತ್ತವೆ. ಒಂದು ದಿನ, ವ್ಯಾಪಾರಿಯು ಮಾಲಿಕನಿಂದ ಅದನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಿದರೆ, ಮಾರುಕಟ್ಟೆಯವ ಮದ್ದು ಸಿಂಪಡಿಸಿಯೋ ವಿವಿಧ ಕೃತಕ ವಿಧಾನಗಳನ್ನು ಬಳಸಿಯೋ ಹಣ್ಣಾಗಿಸುತ್ತಾನೆ. ಹೀಗೆ ಎಲ್ಲರ ಆಕರ್ಷಣೆಗೆ ಒಳಗಾದ ಬಾಳೆಗೊನೆಯು ಕೊನೆಗೊಂದು ದಿನ ಯಾರದೋ ಹೊಟ್ಟೆ ಸೇರಿ ತನ್ನ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತದೆ. ನಿಜವಾಗಿ, ಓರ್ವ ಉಪವಾಸಿಗ ಈದ್‍ನ ಬಳಿಕ ಎದುರಿಸುವ ಸವಾಲು ಇದು. ಆತ ಯಾಕೆ ಆಕರ್ಷಣೀಯ ಎಂದರೆ, ಆತನ ಜೊತೆ ರಮಝಾನಿನಲ್ಲಿ ಗಳಿಸಿದ ಬೆಲೆಬಾಳುವ ಮೌಲ್ಯ ಇರುತ್ತದೆ. ಕೆಡುಕಿನ ಜಗತ್ತು ಆ ಮೌಲ್ಯವನ್ನು ಖರೀದಿಸಲು ಈದ್‍ನ ಬಳಿಕ ಪ್ರತಿ ಸೆಕೆಂಡೂ ಕಾಯುತ್ತಿರುತ್ತದೆ. ಯಾರು ಬಾಳೆಗೊನೆಯಂತೆ ಖರೀದಿಗೆ ಒಳಗಾಗುತ್ತಾರೋ ಅವರು ಹಣ್ಣಾದ ಬಾಳೆ ಹಣ್ಣಿನಂತೆ ಕೊನೆಗೆ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತಾರೆ..
          ಆದ್ದರಿಂದ ಈದ್‍ನ ಪ್ರವಚನ ಕೇಳಿ, ಕಣ್ಣು ಮಂಜಾಗಿಸಿ, ಭಾರ ಹೃದಯದಿಂದ ರಮಝಾನ್‍ಗೆ ವಿದಾಯ ಕೋರುವ ಪ್ರತಿಯೋರ್ವರೂ ತಮ್ಮ ಕಣ್ಣ ಮುಂದೆ, ಬೆಳೆದ ಬಾಳೆಗೊನೆಯ ದೃಶ್ಯವನ್ನೊಮ್ಮೆ ತಂದುಕೊಳ್ಳಬೇಕು. ತಾನು ಎಂದೆಂದೂ ಈ ಆಕರ್ಷಣೆಯನ್ನು ಉಳಿಸಿಕೊಳ್ಳುವೆ, ಮಾರಾಟವಾಗಲಾರೆ ಎಂದು ಎದೆಗೆ ಕೈಯಿಟ್ಟು ತೀರ್ಮಾನಿಸಬೇಕು. ಇಲ್ಲದಿದ್ದರೆ ನಮ್ಮ ತಕ್ಬೀರ್‍ಗೆ, ಹೊಸ ಬಟ್ಟೆಗೆ, ಪಫ್ರ್ಯೂಮ್‍ಗೆ, ಮಂಜಾದ ಕಣ್ಣಿಗೆ ಯಾವ ಅರ್ಥವೂ ಇರುವುದಿಲ್ಲ.

Monday 6 August 2012

ಸಂಸ್ಕೃತಿ ರಕ್ಷಕರು ಮತ್ತು ವೃಂದಾವನದ ವಿಧವೆಯರು

ಮಂಗಳೂರಿನ ಹೋಮ್‍ಸ್ಟೇ ದಾಳಿ ಮತ್ತು ಅಣ್ಣಾ ಹಜಾರೆಯ ಜಂತರ್-ಮಂತರ್ ಪ್ಲಾಪ್ ಶೋನ ಮಧ್ಯೆ ನಾವು ನಿಜವಾಗಿಯೂ ಗಂಭೀರವಾಗಿ ಚರ್ಚಿಸಲೇಬೇಕಾಗಿದ್ದ ಸುದ್ದಿಯೊಂದು ಅಷ್ಟಾಗಿ ಯಾರ ಗಮನವನ್ನೂ ಸೆಳೆಯದೇ ಕಳೆದವಾರ ಕಣ್ಮರೆಯಾಯಿತು. `ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾದ ವೃಂದಾವನದಲ್ಲಿ 15 ಸಾವಿರದಷ್ಟು ವಿಧವೆಯರಿದ್ದು, ಸಾವಿಗೀಡಾಗುವ ವಿಧವೆಯರನ್ನು ಕತ್ತರಿಸಿ, ಗೋಣಿ ಚೀಲದಲ್ಲಿ ಹಾಕಿ ರಾತ್ರಿ ವೇಳೆ ಎಸೆಯಲಾಗುತ್ತದೆ, ಶವಸಂಸ್ಕಾರಕ್ಕೆ ದುಡ್ಡಿಲ್ಲದಿರುವುದೇ ಇದಕ್ಕೆ ಕಾರಣ’.. ಎಂಬ ಬೆಚ್ಚಿ ಬೀಳಿಸುವ ಸತ್ಯವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸುಪ್ರೀಮ್ ಕೋರ್ಟ್‍ ನ ಮುಂದೆ ತಂದಾಗ ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಮತ್ತು ಠಾಕೂರ್ ಆಘಾತಗೊಂಡರು. `ವೃಂದಾವನ ಮತ್ತು ಪರಿಸರದಲ್ಲಿ ಬದುಕುವ ವಿಧವೆಯರ ದುರವಸ್ಥೆ’ ಎಂಬ ಶೀರ್ಷಿಕೆಯ ವರದಿಯನ್ನು ಇಂಗ್ಲಿಷ್ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಇದರ ಆಧಾರದಲ್ಲಿ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ದುರಂತ ಏನೆಂದರೆ, ವೃಂದಾವನದ ಸುತ್ತಮುತ್ತಲಿರುವ ನೂರಾರು ದೇಗುಲಗಳಲ್ಲಿ ಈ ವಿಧವೆಯರು ನಿತ್ಯ ಭಿಕ್ಷಾಟನೆ ನಡೆಸುತ್ತಾರೆ. ತುತ್ತು ಅನ್ನಕ್ಕಾಗಿ ಭಜನೆ ಮಾಡುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ತಲಾ 4 ಗಂಟೆ ಶ್ರೀ ಕೃಷ್ಣನ ಭಜನೆ ಮಾಡಿದರೆ 4 ರೂ. ಮತ್ತು ಒಂದಿಷ್ಟು ಅಕ್ಕಿ ಸಿಗುತ್ತದೆ. ಪತಿಯ ನಿಧನದ ಬಳಿಕ, `ಪವಿತ್ರ ವಿಧವೆಯ ಬದುಕನ್ನು’ ವೃಂದಾವನದಲ್ಲಿ ನಡೆಸುವಂತೆ ಕುಟುಂಬಗಳು ಬಲಾತ್ಕರಿಸುತ್ತವೆ.. ಎಂದೆಲ್ಲಾ ಪ್ರಾಧಿಕಾರದ ವರದಿಯಲ್ಲಿ ಹೇಳಲಾಗಿದೆ. ನಿಜವಾಗಿ, ಸಂಸ್ಕೃತಿಯ ಹೆಸರಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸುವವರು ಬಿಡುವು ಮಾಡಿಕೊಂಡು ಒಮ್ಮೆ ವೃಂದಾವನಕ್ಕೆ ಹೋಗಬೇಕು. ಹೆಣ್ಣು-ಗಂಡು ಪರಸ್ಪರ ಮಾತಾಡುವುದು ಸಂಸ್ಕೃತಿಗೆ ಏಟು ಅನ್ನುವ ಮಂದಿಗೆ ಸಂಸ್ಕೃತಿಯ ಕೆಲಸ ಮಾಡುವುದಕ್ಕೆ ಅಲ್ಲಿ ಧಾರಾಳ ಅವಕಾಶವಿದೆ. ಅಷ್ಟಕ್ಕೂ ಈ ಸಂಸ್ಕೃತಿ ರಕ್ಷಕರು ವೃಂದಾವನಕ್ಕೆ ಉಚಿತ ಪಾಸ್ ಕೊಟ್ಟರೂ ಖಂಡಿತ ಹೋಗಲಾರರು. ಯಾಕೆಂದರೆ, ವೃಂದಾವನದಲ್ಲಿರುವುದು ಯುವತಿಯರು ಅಲ್ಲವಲ್ಲ.
     ಸಂಸ್ಕೃತಿ ಅಂದರೆ ಯಾರು ಎಷ್ಟು ಉದ್ದದ ಬಟ್ಟೆ ಧರಿಸಿದ್ದಾರೆ, ಯಾರ ಜೊತೆ ಮಾತಾಡುತ್ತಾರೆ, ಎಲ್ಲಿದ್ದಾರೆ ಅನ್ನುವುದನ್ನು ಪತ್ತೆ ಮಾಡುವುದಲ್ಲ. ಅದು ಅಸಂಸ್ಕೃತಿ ಅಷ್ಟೆ. ವೃಂದಾವನ ಎಂದಲ್ಲ, ಈ ದೇಶದ ಕೋಟ್ಯಂತರ ಮನೆಗಳಲ್ಲಿ, ಬೀದಿ, ಪಟ್ಟಣಗಳಲ್ಲಿ ವಿಧವೆಯರಿದ್ದಾರೆ. ಅವರ ತಪ್ಪು ಏನು ಅಂದರೆ, ಪತಿ ಸಾವಿಗೀಡಾಗಿರುವುದು. ವಿಧವೆಯರನ್ನು ಅಮಂಗಲ ಎಂದು ತೀರ್ಮಾನಿಸಿದ ಒಂದು ದೊಡ್ಡ ವರ್ಗ ಈ ದೇಶದಲ್ಲಿ ಈಗಲೂ ಬದುಕುತ್ತಾ ಇದೆ. ಅವರು ಮರು ಮದುವೆ ಆಗುವಂತಿಲ್ಲ. ಮದುವೆ, ಔತಣಗಳಲ್ಲಿ ಭಾಗವಹಿಸುವಂತಿಲ್ಲ. ಶೃಂಗಾರ ಮಾಡುವಂತಿಲ್ಲ.. ಇಂಥ 'ಇಲ್ಲ'ಗಳ ದೊಡ್ಡದೊಂದು ಪಟ್ಟಿಯನ್ನು ಸಮಾಜ ಅವರ ಕುತ್ತಿಗೆಗೆ ಕಟ್ಟಿ ಮೂಲೆಗೆ ತಳ್ಳಿ ಬಿಟ್ಟಿದೆ. ಅಂದಹಾಗೆ, ವಿಧವೆಯನ್ನು ಮರು ಮದುವೆಯಾಗಬೇಡ ಎಂದು ಹೇಳುವ ಸಮಾಜ ವಿಧುರನಿಗೆ ಆ ಅವಕಾಶ ಕೊಡುವುದಾದರೂ ಯಾಕೆ? ವಿಧವೆ ಅಮಂಗಲಳಾದರೆ ವಿಧುರ ಯಾಕೆ ಮಂಗಲನಾಗಬೇಕು? ಆತ ಮದುವೆ, ಔತಣಗಳಲ್ಲಿ ಭಾಗವಹಿಸುವುದು ಯಾಕೆ ಅಪರಾಧ ಅನ್ನಿಸುತ್ತಿಲ್ಲ? ಆತನೇಕೆ ವೃಂದಾವನದಲ್ಲಿ ಭಿಕ್ಷೆ ಬೇಡುವುದಿಲ್ಲ? ಜನನ ಮತ್ತು ಮರಣ ಎಂಬ ಪ್ರಕೃತಿಯ ಸಾಮಾನ್ಯ ಚಕ್ರವನ್ನು ಹೆಣ್ಣಿನ ಪಾಲಿಗೆ ಶಾಪಗೊಳಿಸಿದ್ದಾದರೂ ಯಾಕೆ?
      ಪ್ರವಾದಿ ಮುಹಮ್ಮದ್‍ರು(ಸ) ಮೊತ್ತಮೊದಲು ಮದುವೆಯಾದದ್ದೇ ತನಗಿಂತ 15 ವರ್ಷ ಹಿರಿಯಳಾದ, ಮೂರು ಮಕ್ಕಳ ತಾಯಿಯಾದ ವಿಧವೆಯನ್ನು. ಆವರೆಗೆ ಆ ಸಮಾಜದಲ್ಲಿ ಹೆಣ್ಣು ಅಪವಿತ್ರ, ಅಮಂಗಲಳೇ ಆಗಿದ್ದಳು. ವೈಧವ್ಯದ ಬದುಕು ಹೆಣ್ಣಿನ ಪಾಲಿಗೆ ಸಾಮಾನ್ಯ ಆಗಿತ್ತು. 6ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ಕೈಗೊಂಡ ಈ ಕ್ರಾಂತಿಕಾರಿ ನಿರ್ಧಾರ ಒಟ್ಟು ಸಮಾಜದ ಆಲೋಚನೆಯನ್ನೇ ಬದಲಿಸಿತು. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎಂದು ನಂಬಿದ್ದ ಸಮಾಜವನ್ನು ಪ್ರವಾದಿ ಮುಹಮ್ಮದ್‍ರು ಪ್ರಾಯೋಗಿಕವಾಗಿ ತಿದ್ದಲು ಮುಂದಾದರು. ಹೆಣ್ಣು ವಿಚ್ಛೇದನಗೊಂಡರೆ ಅಥವಾ ವಿಧವೆಯಾದರೆ ಆಕೆಯನ್ನು ಸಲಹುವ ಎಲ್ಲ ಹೊಣೆಗಾರಿಕೆಯನ್ನೂ ಅವರು ತವರು ಮನೆಗೇ ವಹಿಸಿಕೊಟ್ಟರು. ಆಸ್ತಿಯಲ್ಲಿ ಆಕೆಗೆ ಪಾಲು ಕೊಡಿಸಿದರು. ಯಾರಿಗಾದರೂ ಮೂವರು ಹೆಣ್ಣು ಮಕ್ಕಳಿದ್ದು, ಅವರು ಆ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ವಿದ್ಯೆ ನೀಡಿ, ಮದುವೆ ಮಾಡಿಸಿ ಕೊಟ್ಟರೆ ಅವರಿಗೆ ಸ್ವರ್ಗ ಇದೆ ಅಂದರು. ನಿಮ್ಮ ಸೇವೆಗೆ ಅತ್ಯಂತ ಅರ್ಹರು ಯಾರೆಂದರೆ ಅದು ತಾಯಿ ಅಂದರು. ವೃದ್ಧ ಹೆತ್ತವರು ಮನೆಯಲ್ಲಿದ್ದರೆ ಅವರನ್ನು ಹೊರ ಹಾಕುವುದು ಬಿಡಿ, ಛೆ ಎಂಬ ಉದ್ಘಾರ ಕೂಡ ನಿಮ್ಮ ಬಾಯಿಯಿಂದ ಬರಬಾರದು ಎಂದು ತಾಕೀತು ಮಾಡಿದರು. ಎಲ್ಲಿಯ ವರೆಗೆಂದರೆ, ಒಂದು ವೇಳೆ ನಿಮ್ಮ ತಾಯಿ ಅಥವಾ ತಂದೆ ಮುಸ್ಲಿಮೇತರರಾಗಿದ್ದರೂ ಇದೇ ವರ್ತನೆ ನಿಮ್ಮದಾಗಿರಬೇಕು ಎಂದು ಆದೇಶಿಸಿದರು. ಅಂದಹಾಗೆ ಓರ್ವ ವ್ಯಕ್ತಿ ನಮಾಝ್, ಉಪವಾಸ, ಹಜ್ಜ್ ಮುಂತಾದ ಎಲ್ಲವನ್ನೂ ಮಾಡುತ್ತಿರುವ ಮಾತ್ರವಲ್ಲ, ಸಾರ್ವಜನಿಕವಾಗಿ ಭಾರೀ ಗೌರವಾದರಗಳನ್ನು ಗಿಟ್ಟಿಸಿಕೊಂಡ ಭಕ್ತನೇ ಆಗಿದ್ದರೂ ಆತನ ವಿರುದ್ಧ ತಾಯಿ ಮುನಿಸಿಕೊಂಡಿದ್ದರೆ ಆತ ಸ್ವರ್ಗ ಪ್ರವೇಶಿಸಲಾರ ಅಂದದ್ದೂ ಪ್ರವಾದಿಯೇ.
      ಇವತ್ತು ವೃಂದಾವನದಲ್ಲಿರುವ ವಿಧವೆಯರ ದೊಡ್ಡ ದೂರೇನೆಂದರೆ, ತಮ್ಮ ಮಕ್ಕಳು ತಮ್ಮನ್ನು ಮನೆಯಿಂದ ಹೊರಗಟ್ಟಿದರು ಅನ್ನುವುದು. ಮುದಿ ಹೆತ್ತವರನ್ನು ಹೊರೆ ಎಂದು ಭಾವಿಸುವ ಮಕ್ಕಳಿರುವ ದೇಶವೊಂದರಲ್ಲಿ ಸಂಸ್ಕೃತಿ ರಕ್ಷಕರ ಪಾತ್ರವಾದರೂ ಏನಾಗಿರಬೇಕು? ತಾಯಿಯನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿಸಿ, ಸಫಾಯಿ ಕರ್ಮಾಚಾರಿಗಳು ಎಸೆಯುವ ದೃಶ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿ. ಯಾವ ಮಕ್ಕಳಿಗೆ ತಾನೇ ಅದು ಇಷ್ಟವಾದೀತು? ಇಷ್ಟಿದ್ದೂ ವಿಧವೆಯರ ಸಮಸ್ಯೆಯನ್ನು ಎತ್ತಿಕೊಂಡು ಎಷ್ಟು ಸಂಸ್ಕೃತಿ ರಕ್ಷಕರು ಪ್ರತಿಭಟಿಸಿದ್ದಾರೆ? ಅವರನ್ನು ಸಮಾಜದ ಇತರರಂತೆ ಕಾಣಬೇಕೆಂದು ಒತ್ತಾಯಿಸಿ ಎಷ್ಟು ಮನೆಗಳಿಗೆ ನುಗ್ಗಿದ್ದಾರೆ? ಸಂಸ್ಕೃತಿ ಎಂಬುದು ಹೆಣ್ಣು-ಗಂಡುಗಳ ಮಾತುಕತೆಗೆ ಮಾತ್ರ ಸೀಮಿತವಾ?
     ಹೊಡೆತ, ಬಡಿತ, ಥಳಿತದಿಂದ ಒಂದು ಸಮಾಜವನ್ನು ಬದಲಿಸಲು ಖಂಡಿತ ಸಾಧ್ಯವಿಲ್ಲ. ಅದಕ್ಕೆ ಪ್ರವಾದಿ ಮುಹಮ್ಮದರಂತೆ ಪ್ರಾಯೋಗಿಕ ವಿಧಾನದ ಅಗತ್ಯವಿದೆ. ಸಮಾಜದ ಸಮಸ್ಯೆಗೆ ಸೈದ್ಧಾಂತಿಕ ಪರಿಹಾರ ಇಲ್ಲದವರು ಮಾತ್ರ ದಾಂಧಲೆಗಿಳಿಯುತ್ತಾರೆ. ಇದೆಂದೂ ಪರಿಹಾರ ಆಗಲಾರದು.