Tuesday 25 September 2012

ದೇಶಭಕ್ತರಿಗೆ ಮನುಷ್ಯಪ್ರೇಮದ ಪಾಠ ಹೇಳಿಕೊಟ್ಟ ರೇಶ್ಮ

      2011 ಜುಲೈ 16ರಂದು ರಾತ್ರಿ, ಗುಜರಾತ್‍ನ ರೇಷ್ಮಾ ಎಂಬ ಮುಸ್ಲಿಮ್ ಮಹಿಳೆ ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾಳೆ. ತನ್ನ ಗಂಡ ಮನೆಯಲ್ಲಿ ಬಾಂಬ್ ತಂದಿಟ್ಟಿದ್ದಾನೆ ಅನ್ನುತ್ತಾಳೆ. ಪೊಲೀಸರು ಶಹಝಾದ್‍ನನ್ನು ಬಂಧಿಸುತ್ತಾರೆ. 8 ಬಾಂಬುಗಳು ಸಿಗುತ್ತವೆ. ಅಹ್ಮದಾಬಾದ್‍ನಲ್ಲಿ ನಡೆಯ ಲಿರುವ ರಥ ಯಾತ್ರೆಯಲ್ಲಿ ಈ ಬಾಂಬುಗಳನ್ನು ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳುತ್ತಾರೆ. ತಕ್ಷಣ ರೇಷ್ಮಾಳಿಗೆ ಗುಜರಾತ್ ಸರಕಾರ 25 ಸಾವಿರ ರೂಪಾಯಿಯನ್ನು ಇನಾಮಾಗಿ ಕೊಡುತ್ತದೆ. ಇದಾಗಿ ಒಂದು ವರ್ಷದ ಬಳಿಕ ಕಳೆದ ವಾರ ಸೆ. 22ರಂದು ಆಕೆಗೆ  ಗಾಡ್‍ಫ್ರೆ  ಫಿಲಿಪ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. 4 ಲಕ್ಷ  ರೂಪಾಯಿಯನ್ನೂ ನೀಡಲಾಗುತ್ತದೆ..
       ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹೆಚ್ಚಿನೆಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಒಳಪುಟದಲ್ಲಿ ಪ್ರಕಟಿಸಿರುವುದರಿಂದ ಓದುಗರು ಗಮನಿಸಿರುವ ಸಾಧ್ಯತೆ ಕಡಿಮೆ. ಅಂದಹಾಗೆ, ಈ ಸುದ್ದಿಯು ಮಾಧ್ಯಮ ವಿಶ್ಲೇಷಣೆಗೆ ಒಳಗಾಗದಿರುವುದಕ್ಕೆ ಕಾರಣವೇನು? ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸಿ ಪುಟಗಟ್ಟಲೆ ಬರೆಯುವ ಮತ್ತು ಅವರಿಗೆ ದೇಶಭಕ್ತಿಯ ಪಾಠ ಮಾಡುತ್ತಾ ಆಗಾಗ ಹೇಳಿಕೆಗಳನ್ನು ಹೊರಡಿಸುತ್ತಿರುವ ಮಂದಿಯೆಲ್ಲ ಈ ಸುದ್ದಿಯನ್ನು ಎತ್ತಿಕೊಂಡು ಯಾಕೆ ಚರ್ಚಿಸಿಲ್ಲ? ಮುಸ್ಲಿಮನೊಬ್ಬ ಕಿಸೆಯಲ್ಲಿ ಪಟಾಕಿ ಇಟ್ಟುಕೊಂಡರೂ ಅದನ್ನು ಬಾಂಬೆಂದೇ ಸಾಬೀತುಪಡಿಸುವ ಚತುರರು ಮಾಧ್ಯಮಗಳಲ್ಲಿದ್ದಾರೆ. ಪಕ್ಷ  ಮತ್ತು ಸಂಘಟನೆಗಳಲ್ಲೂ ಅವರ ಸಂಖ್ಯೆ ಸಣ್ಣದಲ್ಲ. ಹೀಗಿರುವಾಗ, ಪತಿ-ಪತ್ನಿ ಎಂಬ ಪವಿತ್ರ ಸಂಬಂಧವನ್ನೂ ಲೆಕ್ಕಿಸದೇ ರಥ ಯಾತ್ರೆಯ ಕಾವಲಿಗೆ ನಿಂತ ಘಟನೆಯೇಕೆ ವಿಶ್ಲೇಷಣೆಗೆ ಒಳಗಾಗಲಿಲ್ಲ? ಘಟನೆ ನಡೆದಿರುವುದು ಗುಜರಾತ್‍ನಲ್ಲಿ. ಅದೇ ಗುಜರಾತ್‍ನಲ್ಲಿ ಮುಸ್ಲಿಮ್ ಕೇರಿಗಳಿಗೆ ನುಗ್ಗಿ ಮನುಷ್ಯರನ್ನು ಪೆಟ್ರೋಲು, ಸೀಮೆ ಎಣ್ಣೆ ಸುರಿದು ಜೀವಂತ ದಹಿಸಿದ ಅನೇಕ ಮಂದಿಯಿದ್ದಾರೆ. ಅವರು ಯಾರದ್ದೋ ಪತಿ, ಮಗ, ಅಪ್ಪ.. ಇನ್ನೇನೋ ಆಗಿದ್ದಾರೆ. ಆದರೆ ಗುಜರಾತ್‍ನಲ್ಲಿ ಒಬ್ಬಳೇ ಒಬ್ಬ ಮಹಿಳೆ ಪೊಲೀಸರಿಗೆ ಯಾಕೆ ಇಂಥ  ದೂರು ಕೊಟ್ಟಿಲ್ಲ, ತನ್ನ ಗಂಡ ಗುಲ್ಬರ್ಗ್ ಸೊಸೈಟಿಗೆ, ನರೋಡ ಪಾಟಿಯಾಕ್ಕೆ.. ನುಗ್ಗಿ ಮುಸ್ಲಿಮರನ್ನು ಕೊಂದಿದ್ದಾನೆ ಎಂದು ಯಾಕೆ ಹೇಳಿಲ್ಲ, ಇಷ್ಟಕ್ಕೂ ಬ್ಯಾಂಕ್‍ನಲ್ಲಿ ಒಂದು ಅಕೌಂಟೂ ಇಲ್ಲದ ರೇಷ್ಮಳು ಇಷ್ಟೊಂದು ಧೈರ್ಯ ಪ್ರದರ್ಶಿಸಿರುವಾಗ ದೇಶಭಕ್ತರೆಂದು ಸ್ವಯಂ ಘೋಷಿಸುತ್ತಾ ತಿರುಗುವವರಿಗೆ ಇವೇಕೆ ಕಾಣಿಸುತ್ತಿಲ್ಲ, ದೇಶನಿಷ್ಠೆ ಅಂದರೆ ಏನು, ಏನಲ್ಲ.. ಎಂದೆಲ್ಲಾ ಪ್ರಶ್ನಿಸುವ ಸಂದರ್ಭವನ್ನಾಗಿ ರೇಷ್ಮಳ ಘಟನೆಯನ್ನು ಮಾಧ್ಯಮಗಳು ಬಳಸಿಕೊಳ್ಳಬಹುದಿತ್ತಲ್ಲ?
       ನಿಜವಾಗಿ ದೇಶಪ್ರೇಮ, ಮನುಷ್ಯ ಪ್ರೀತಿ, ಮಾನವ ಸಂಬಂಧಗಳಿಗೆಲ್ಲ ಅದರದ್ದೇ ಆದ ತೂಕ ಇದೆ. ಭಾರತದ ಪತಾಕೆಯನ್ನು ತನ್ನ ಮನೆಯ ಮಾಡಿನಲ್ಲೋ ವಾಹನದಲ್ಲೋ ಸಿಕ್ಕಿಸಿದ ಮಾತ್ರಕ್ಕೇ ಯಾರೂ ಪರಮ ದೇಶಪ್ರೇಮಿ ಆಗುವುದಿಲ್ಲ. ಯಾರಿಗೆ ಮನುಷ್ಯರನ್ನು ಧರ್ಮಾತೀತವಾಗಿ ಪ್ರೀತಿಸಲು ಸಾಧ್ಯವಾಗುತ್ತದೋ ಆತನಿಗೆ/ಳಿಗೆ ಮಾತ್ರ ದೇಶವನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ರೇಶ್ಮಾಳ ಬಗ್ಗೆ ಮಾಧ್ಯಮಗಳಲ್ಲಿ  ಬಂದಿರುವ ಸುದ್ದಿ   ನಿಜವೇ ಆಗಿದ್ದರೆ, ಖಂಡಿತ, ದೇಶಭಕ್ತರಂತೆ ಫೋಸು ಕೊಡುವ ಸರ್ವರೂ ಆ ಸುದ್ದಿಯನ್ನು ಕತ್ತರಿಸಿ ತಮ್ಮ ಜೇಬಿನಲ್ಲಿಟ್ಟುಕೊಳ್ಳುವಷ್ಟು ಅದು ಅಮೂಲ್ಯವಾದದ್ದು. ಯಾಕೆಂದರೆ ಅವರ ಡಿಕ್ಷನರಿಯಲ್ಲಿ ರೇಶ್ಮಾಳಿಗೆ ದೇಶಭಕ್ತೆ ಎಂಬ ಬಿರುದಿಲ್ಲ. ಆಕೆ ಏನಿದ್ದರೂ ದೇಶದ್ರೋಹಿಗಳ (ಮುಸ್ಲಿಮರ) ಸಂಖ್ಯೆಯನ್ನು ಹೆಚ್ಚು ಮಾಡುವ, ದೇಶನಿಷ್ಠೆಯನ್ನು ಸದಾ ಪಾಕಿಸ್ತಾನಕ್ಕೆ ಅಡವಿಟ್ಟು ಬದುಕುತ್ತಿರುವ ಮಹಿಳೆ. ರಥ ಯಾತ್ರೆ, ಗಣೇಶೋತ್ಸವ, ಅಷ್ಟಮಿ.. ಹೀಗೆ ಯಾವುದೇ ಸಂಭ್ರಮವನ್ನೂ ಬಾಂಬಿಟ್ಟು ಹಾಳುಗೆಡಹುವುದಕ್ಕೆ ಹೊಂಚು ಹಾಕುತ್ತಿರುವ ಸಮಾಜವೊಂದರ ಸದಸ್ಯೆ. ಈ ದೇಶವನ್ನು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವಾಗಿ ಮಾರ್ಪಡಿಸುವುದಕ್ಕೆ ಶ್ರಮಿಸುತ್ತಿರುವ ಸಮುದಾಯವೊಂದರ ಸದಸ್ಯೆ.. ಹೀಗಿರುವಾಗ ರೇಷ್ಮ ತನ್ನ ವೈವಾಹಿಕ ಬದುಕನ್ನೇ ಪಣಕ್ಕಿಟ್ಟು ರಥ ಯಾತ್ರೆ ಸುಗಮವಾಗಿ ನಡೆಯುವಂತೆ ನೋಡಿಕೊಂಡದ್ದೇಕೆ ಸಣ್ಣ ಸಂಗತಿಯಾಗಬೇಕು?
        ದುರಂತ ಏನೆಂದರೆ, ಈ ದೇಶದಲ್ಲಿ ಎಲ್ಲವೂ, 'ಅವರು' ಮತ್ತು 'ಇವರು' ಆಗಿ ವಿಭಜನೆಗೊಂಡಿದೆ. ಹಿಂದೂ ಯುವತಿಯನ್ನು ಅತ್ಯಾಚಾರ ನಡೆಸಿದ್ದು ಮುಸ್ಲಿಮ್ ಹೆಸರಿನ ವ್ಯಕ್ತಿಯಾಗಿದ್ದರೆ, ತಕ್ಷಣ ಕೆಲವರ 'ಧರ್ಮ' ಜಾಗೃತಗೊಳ್ಳುತ್ತದೆ. ಅತ್ಯಾಚಾರಿಯನ್ನು ಹಿಡಿದು ಪಾಠ ಕಲಿಸಲಾಗುತ್ತದೆ. ಅದೇ ವೇಳೆ ಹಿಂದೂ ಯುವತಿಯನ್ನು ಹಿಂದೂ ಹೆಸರಿನ ವ್ಯಕ್ತಿಯೇ ಅತ್ಯಾಚಾರಕ್ಕೆ ಒಳಪಡಿಸಿದರೆ ಧರ್ಮ ಜಾಗೃತಗೊಳ್ಳುವುದೇ ಇಲ್ಲ. ಆತನಿಗೆ ಪಾಠ ಕಲಿಸುವುದಕ್ಕೆ ಪ್ರಯತ್ನಗಳೂ ನಡೆಯುವುದಿಲ್ಲ. ಮುಸ್ಲಿಮ್ ಹೆಣ್ಣು ಮಗಳ ಮೇಲೆ ಹಿಂದೂ ಹೆಸರಿನ ವ್ಯಕ್ತಿ ಅತ್ಯಾಚಾರ ನಡೆಸಿದರೂ ನಡೆಯುವುದು ಹೀಗೆಯೇ. ಒಂದು ರೀತಿಯಲ್ಲಿ, ಸರಿ-ತಪ್ಪುಗಳು, ಶಿಕ್ಷೆ-ಪುರಸ್ಕಾರಗಳೆಲ್ಲ ಅದನ್ನು ಎಸಗಿದವರ ಧರ್ಮದ ಆಧಾರದಲ್ಲಿ ನಿರ್ಧರಿಸಲ್ಪಡುತ್ತವೆ. ಅಂದಹಾಗೆ, ಧರ್ಮವನ್ನು ಇಷ್ಟು ಕೆಳಮಟ್ಟದಲ್ಲಿ ವ್ಯಾಖ್ಯಾನಿಸುವವರಿಂದ ದೇಶ ಪ್ರೇಮ, ಮನುಷ್ಯ ಪ್ರೇಮಗಳೆಲ್ಲ ನ್ಯಾಯಯುತ ವ್ಯಾಖ್ಯಾನಕ್ಕೆ ಒಳಗಾದೀತು ಎಂದು ಹೇಗೆ ನಿರೀಕ್ಷಿಸುವುದು? ನಿಜವಾಗಿ ಅತ್ಯಾಚಾರಕ್ಕೆ ಒಳಗಾದ ಯಾವ ಹೆಣ್ಣೂ ಆ ಕ್ರೌರ್ಯವನ್ನು ಧರ್ಮದ ಆಧಾರದಲ್ಲಿ ಖಂಡಿತ ವ್ಯಾಖ್ಯಾನಿಸಲಿಕ್ಕಿಲ್ಲ. ಅತ್ಯಾಚಾರ ಅನ್ನುವುದೇ ಭೀಕರ ಕ್ರೌರ್ಯ. ಅದನ್ನು ಅವರು ಇವರು ಎಂದು ವಿಂಗಡಿಸಿದ ಮಾತ್ರಕ್ಕೇ ಕ್ರೌರ್ಯದ ನೋವು ತಣ್ಣಗಾಗಲು ಸಾಧ್ಯವೇ?
         ಏನೇ ಆಗಲಿ, ತನ್ನ ಭಯೋತ್ಪಾದಕ ಗಂಡನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸ್ವಘೋಷಿತ ದೇಶ ಭಕ್ತರ ಅಸಲಿ ಮುಖವನ್ನು ರೇಷ್ಮ ಬೆತ್ತಲೆ ಮಾಡಿದ್ದಾಳೆ. ಒಂದು ವೇಳೆ ಆಕೆಯೂ, 'ಅವರು-ಇವರು' ಎಂಬ ಮನುಷ್ಯ ವಿರೋಧಿ ಸಿದ್ಧಾಂತವನ್ನು ನೆಚ್ಚಿಕೊಂಡಿರುತ್ತಿದ್ದರೆ ತನ್ನ ಗಂಡನ ವಿರುದ್ಧ ದೂರು ಕೊಡಲು ಸಾಧ್ಯವಿತ್ತೇ? ರಥ ಯಾತ್ರೆಯಲ್ಲಿ ಸಾಯುವವರು 'ನಮ್ಮವರಲ್ಲವಲ್ಲ' ಅಂದುಕೊಳ್ಳುತ್ತಿದ್ದರೆ ಏನಾಗುತ್ತಿತ್ತು? ವಿಷಾದ ಏನೆಂದರೆ, ಸಂಕುಚಿತವಾದಿಗಳು ಇಂಥ  ಘಟನೆಗಳನ್ನು ಸ್ವಯಂ ತಿದ್ದಿಕೊಳ್ಳುವುದಕ್ಕೆ ಬಳಸಿಕೊಳ್ಳುವುದರ ಬದಲು ಅವು ಸುದ್ದಿಯೇ ಆಗದಂತೆ ನೋಡಿಕೊಳ್ಳುವುದು. ಎಲ್ಲಿ ಸಾರ್ವಜನಿಕ ಚರ್ಚೆಗೆ ಒಳಗಾಗಿ ಬಿಡುತ್ತದೋ ಎಂದು ಆತಂಕಪಡುವುದು. ಆದ್ದರಿಂದಲೇ ರೇಷ್ಮ ಅಭಿನಂದನೆಗೆ ಅರ್ಹಳು. ಆತ್ಮ ಸಾಕ್ಷಿ ಇರುವ ಪ್ರತಿಯೋರ್ವ 'ದೇಶಭಕ್ತ'ರಿಗೂ ಆಕೆ ನಿಜವಾದ ದೇಶಪ್ರೇಮದ ಪಾಠವನ್ನು ಹೇಳಿಕೊಟ್ಟಿದ್ದಾಳೆ. ಈ ಪಾಠದಲ್ಲಿ 'ಅವರು-ಇವರು' ಇಲ್ಲ. ಇರುವುದು ನಾವು ಮತ್ತು ನಾವೆಲ್ಲರೂ ಮಾತ್ರ.

Monday 17 September 2012

ಆಧುನಿಕ ಸಂಸ್ಕೃತಿಯ ಪೊಳ್ಳುತನವನ್ನು ಬೆತ್ತಲೆ ಮಾಡಿದ ಒಂದು ಪೋಟೋ

ಫ್ರಾನ್ಸ್ ನ  ಕ್ಲೋಸರ್ ಮ್ಯಾಗಸಿನ್‍ನಲ್ಲಿ ಬ್ರಿಟನ್ನಿನ ರಾಜಕುಮಾರಿ ಕೇಟ್ ಮಿಡ್ಲ್ ಟನ್‍ಳ ಪೋಟೋ ಪ್ರಕಟವಾಗಿರುವುದು ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಬ್ರಿಟನ್‍ನ ರಾಜಕುಟುಂಬ ಮ್ಯಾಗಸಿನ್‍ನ ವಿರುದ್ಧ ಕೋರ್ಟಿಗೆ ಹೋಗಿದೆ. ಪ್ರಧಾನಿ ಕಚೇರಿಯು ಪೋಟೋ ಪ್ರಕಟಣೆಯನ್ನು ಖಂಡಿಸಿದೆ. ಒಂದು ರೀತಿಯಲ್ಲಿ ಕೇಟ್‍ಳ ಟಾಪ್‍ಲೆಸ್ ಪೋಟೋ, ಬ್ರಿಟನ್ನಿನಾದ್ಯಂತ ಒಂದು ಬಗೆಯ ಚರ್ಚೆಗೆ, ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ರಾಜಕುಮಾರ ವಿಲಿಯಮ್ಸ್ ಮತ್ತು ಪತ್ನಿ ಮಿಡ್ಲ್ ಟನ್‍ರು ರಜಾಕಾಲವನ್ನು ಕಳೆಯಲು ಫ್ರಾನ್ಸ್ ಗೆ ತೆರಳಿದ್ದರು. ಅಲ್ಲಿ ಟೆರೇಸ್‍ನ ಮೇಲೆ ನಿಂತಿದ್ದ ಮಿಡ್ಲ್ ಟನ್‍ಳ ಪೋಟೋವನ್ನು ಮ್ಯಾಗಸಿನ್‍ನ ಪೋಟೋಗ್ರಾಫರ್ ಕ್ಲಿಕ್ಕಿಸಿದ್ದಾನೆ. ಜಗತ್ತಿನಾದ್ಯಂತ ಪ್ರಕಟವಾಗುತ್ತಿರುವ ಕೋಟ್ಯಂತರ ಪೋಟೋಗಳಂತೆ ಇದೊಂದು ಸಾಮಾನ್ಯ ಪೋಟೋ. ಬೀಚ್‍ಗಳಲ್ಲಿ ಕ್ಲಿಕ್ಕಿಸಲಾಗುವ ಪೋಟೋಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಎಂದು ಮ್ಯಾಗಸಿನ್‍ನ ಸಂಪಾದಕ ಲಾರೆನ್ಸ್ ಸಮರ್ಥಿಸಿಕೊಂಡಿದ್ದಾರೆ.
       ನಿಜವಾಗಿ, ಆಧುನಿಕತೆ ಎಂಬ ಚಂದದ ಹೆಸರಿನಲ್ಲಿ ಹೆಣ್ಣು ಮಕ್ಕಳ ಉಡುಪಿನ ಉದ್ದಳತೆಯನ್ನು ಸಾಕಷ್ಟು ಕಿರಿದುಗೊಳಿಸಿ ಜಗತ್ತಿಗೆ ಹಂಚಿದ್ದೇ ಯುರೋಪಿಯನ್ ರಾಷ್ಟ್ರಗಳು. ಬ್ರಿಟನ್‍ಗೆ ಅದರಲ್ಲಿ ದೊಡ್ಡದೊಂದು ಪಾಲಿದೆ. ಒಂದು ರಾಷ್ಟ್ರದ ಅಭಿವೃದ್ಧಿಯ ಮಾನದಂಡವನ್ನಾಗಿ ಈ ಎಲ್ಲ ರಾಷ್ಟ್ರಗಳು ಪರಿಗಣಿಸುತ್ತಿರುವುದೂ ಹೆಣ್ಣು ಮಕ್ಕಳ ಬಟ್ಟೆಯ ಉದ್ದಳತೆಯನ್ನೇ. ಅಫಘಾನಿನ ಮೇಲೆ ಅಮೇರಿಕ ಸಾರಿದ ಅತಿಕ್ರಮಣವನ್ನು ವರದಿ ಮಾಡುವುದಕ್ಕಾಗಿ ಇವಾನ್ ರಿಡ್ಲಿ ಅನ್ನುವ ಬ್ರಿಟನ್ನಿನ `ಆಧುನಿಕ’ ಪತ್ರಕರ್ತೆ ಅಲ್ಲಿಗೆ ತೆರಳಿದ್ದರು. ತಾಲಿಬಾನಿಗಳಿಗೆ ಗೊತ್ತಾಗದಿರಲಿ ಎಂದು ಮೈಮುಚ್ಚುವ ಬಟ್ಟೆಯನ್ನೂ ಧರಿಸಿದ್ದರು. ಆದರೆ ತಾಲಿಬಾನಿಗಳು ಆಕೆಯನ್ನು ಬಂಧಿಸಿದಾಗ ಬ್ರಿಟನ್ ಅವರ ಬಂಧ ಮುಕ್ತಿಗೆ ತೀವ್ರವಾಗಿ ಪ್ರಯತ್ನಿಸಿತ್ತು. ತನ್ನ ಗೌರವಾನ್ವಿತ ಪತ್ರಕರ್ತೆ ಎಂದೇ ಅದು ಸಂಬೋಧಿಸಿತ್ತು. ಕೊನೆಗೂ ರಿಡ್ಲಿ ಬಿಡುಗಡೆಗೊಂಡು ಬ್ರಿಟನ್‍ಗೆ ಹಿಂತಿರುಗಿದರಲ್ಲದೆ ವರ್ಷದ ಬಳಿಕ ಮೈಮುಚ್ಚುವ ಉಡುಪನ್ನೇ ತನ್ನ ನಿಜವಾದ ಉಡುಪಾಗಿ ಆಯ್ಕೆ ಮಾಡಿಕೊಂಡರು. ತಕ್ಷಣ, ಅದೇ ಬ್ರಿಟನ್ ಆಕೆಗೆ ಕೊಟ್ಟಿದ್ದ ಗೌರವಾನ್ವಿತ ಪದವನ್ನು ಕಿತ್ತುಕೊಂಡಿತು. ಆಧುನಿಕತೆಯಿಂದ ಅನಾಗರಿಕತೆಯೆಡೆಗೆ ಮುಖ ಮಾಡಿದ ಹೆಣ್ಣೆಂಬಂತೆ ಅವರನ್ನು ಮಾಧ್ಯಮ ಜಗತ್ತೂ ಬಿಂಬಿಸಿತು. ಇದೊಂದೇ ಅಲ್ಲ, ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲೂ ಬಟ್ಟೆ ವಿವಾದದ ಸಂಗತಿಯಾಗಿತ್ತು. ಮೈಮುಚ್ಚುವ ಉಡುಪನ್ನು ಧರಿಸಿ ಕ್ರೀಡೆಯಲ್ಲಿ ಪಾಲುಗೊಳ್ಳುವುದನ್ನು ಒಲಿಂಪಿಕ್ಸ್ ಸಮಿತಿ ಕೊನೆವರೆಗೂ ತಡೆ ಹಿಡಿದಿತ್ತು. ಅಚ್ಚರಿ ಏನೆಂದರೆ, ಇದೇ ಬ್ರಿಟನ್‍ನಲ್ಲಿ, ರಾಜಕುಟುಂಬದ ಹೆಣ್ಣು ಮಕ್ಕಳು `ಆಧುನಿಕ’ ಉಡುಪಿನಲ್ಲಿ ಕಾಣಿಸಿಕೊಳ್ಳುವುದನ್ನು ಅಪರಾಧದಂತೆ ಕಾಣಲಾಗುತ್ತದೆ. ಬ್ರಿಟನ್ನೇ ಕಲಿಸಿದ ಮತ್ತು ಜಗತ್ತಿಗೆ ರಫ್ತು ಮಾಡಿದ `ಆಧುನಿಕ ಉಡುಪನ್ನು’ ರಾಜಕುಟುಂಬ ಧರಿಸುವುದನ್ನು ಅದು ಇಷ್ಟಪಡುತ್ತಿಲ್ಲ. ಇದರ ಅರ್ಥವಾದರೂ ಏನು? ಉಡುಪಿಗೂ ವ್ಯಕ್ತಿತ್ವಕ್ಕೂ ಸಂಬಂಧ ಇದೆ ಎಂದೇ ಅಲ್ಲವೇ?  ಆಧುನಿಕ ಬಟ್ಟೆ ಧರಿಸುವುದು ಗೌರವಾರ್ಹ ಎಂದಾಗಿದ್ದರೆ ಮಿಡ್ಲ್ ಟನ್ ಧರಿಸಿದ್ದರಲ್ಲಿ, ಅದನ್ನು ಕ್ಲಿಕ್ಕಿಸಿ ಮ್ಯಾಗಸಿನ್‍ನಲ್ಲಿ ಪ್ರಕಟಿಸಿದ್ದರಲ್ಲಿ ಏನು ತಪ್ಪಿದೆ? ಮಿಡ್ಲ್ ಟನ್‍ರ ಪೋಟೋ ಯಾವ ಭಂಗಿಯಲ್ಲಿ ಕಾಣಿಸಿಕೊಂಡಿತ್ತೋ ಅದಕ್ಕಿಂತಲೂ ಆಧುನಿಕ ರೂಪದಲ್ಲಿ ಹೆಣ್ಣು ಮಕ್ಕಳ ಪೋಟೋಗಳು ಬ್ರಿಟನ್‍ನಾದ್ಯಂತ ಪತ್ರಿಕೆಗಳಲ್ಲಿ ನಿತ್ಯ ಪ್ರಕಟವಾಗುತ್ತಿವೆ. ಅವಾವುದಕ್ಕೂ ರಾಜಕುಟುಂಬವಾಗಲಿ, ಪ್ರಧಾನಿ ಕಚೇರಿಯಾಗಲೀ ವಿರೋಧ ವ್ಯಕ್ತಪಡಿಸಿಲ್ಲ. ಹೀಗಿರುವಾಗ ಮಿಡ್ಲ್ ಟನ್‍ಳ ಪೋಟೋಕ್ಕೆ ಮಾತ್ರ ತಗಾದೆಯೇಕೆ? ಅದರರ್ಥ, ಕನಿಷ್ಠ  ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದು ಗೌರವಕ್ಕೆ ಕುಂದು ತರುತ್ತದೆ ಎಂದಲ್ಲವೇ? `ಆಧುನಿಕ’ ಬಟ್ಟೆಯಲ್ಲಿ ಮಿಡ್ಲ್ ಟನ್‍ಳನ್ನು ತೋರಿಸುವುದು ರಾಜಕುಟುಂಬಕ್ಕೆ ಅವಮರ್ಯಾದೆ ಎಂದಾದರೆ, ಬ್ರಿಟನ್ ರಫ್ತು ಮಾಡುತ್ತಿರುವ `ಆಧುನಿಕ’ ಸಂಸ್ಕ್ರಿತಿಯೇಕೆ ಅವಮಾನಕರ ಅನ್ನಿಸಿಕೊಳ್ಳುತ್ತಿಲ್ಲ?
        ನಿಜವಾಗಿ, ಮಿಡ್ಲ್ ಟನ್‍ಗೂ ಅವರಂತೆ ರಾಜಕುಟುಂಬದಲ್ಲಿ ಗುರುತಿಸಿಕೊಳ್ಳದ, ಆದರೆ ಅವರಂಥದ್ದೇ ಕೈ, ಕಾಲು, ಕಣ್ಣು, ದೇಹವನ್ನು ಹೊಂದಿರುವ ಜಗತ್ತಿನ ಇತರ ಕೋಟ್ಯಂತರ `ಮಿಡ್ಲ್ ಟನ್‍ಗಳಿಗೂ’ ಮರ್ಯಾದೆ, ವ್ಯಕ್ತಿತ್ವ, ಸ್ವಾಭಿಮಾನ.. ಎಲ್ಲವೂ ಒಂದೇ. ಮಿಡ್ಲ್ ಟನ್‍ಳನ್ನು `ಆಧುನಿಕ’ ಉಡುಪಿನಲ್ಲಿ ನೋಡುವುದನ್ನು ರಾಜಕುಟುಂಬ ಅಥವಾ ಬ್ರಿಟನ್ನಿನ ನಾಗರಿಕರು ಇಷ್ಟಪಡದಂತೆ ಇವರನ್ನು ಹಾಗೆ ನೋಡುವುದಕ್ಕೂ ಈ ಜಗತ್ತಿನಲ್ಲಿ ಇಷ್ಟಪಡದವರಿದ್ದಾರೆ. ಉಡುಪು ಎಂಬುದು ಮನುಷ್ಯರ ವ್ಯಕ್ತಿತ್ವವನ್ನು, ಅವರ ಘನತೆಯನ್ನು ಪ್ರತಿಬಿಂಬಿಸುವ ಸಂಕೇತ ಎಂದವರು ವಾದಿಸುತ್ತಿದ್ದಾರೆ. ಅದನ್ನು ಎಷ್ಟರ ಮಟ್ಟಿಗೆ ಕಿರಿದುಗೊಳಿಸಲಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಅವರ ಗೌರವಕ್ಕೆ ಧಕ್ಕೆ ಒದಗುತ್ತದೆ ಎಂದವರು ಅಂದುಕೊಂಡಿದ್ದಾರೆ. ದುರಂತ ಏನೆಂದರೆ, ರಾಜಕುಟುಂಬವು ಮಿಡ್ಲ್ ಟನ್‍ಳಿಗೆ ಯಾವ ನಿಯಮವನ್ನು ಹೇರುತ್ತದೋ ಅದೇ ನಿಯಮವನ್ನು ಜಗತ್ತಿನ ಇತರ ಕೋಟ್ಯಂತರ `ಮಿಡ್ಲ್ ಟನ್‍ಗಳು’ ತಮ್ಮ ಪಾಲಿಗೆ ಇಷ್ಟಪಟ್ಟುಕೊಂಡರೆ ಅದನ್ನು ಅನಾಗರಿಕತೆ ಎಂದು ಕರೆಯಲಾಗುತ್ತದೆ. ಯಾಕಿಂಥ ದ್ವಂದ್ವ?
      ನಿಜವಾಗಿ, ಈ ಜಗತ್ತನ್ನು ಇವತ್ತು ಆಳುತ್ತಿರುವುದೇ ಕೆಲವು ಇಬ್ಬಂದಿತನಗಳು. ಅಮೇರಿಕ ತನ್ನ ದೇಶದ ಸಾರ್ವಭೌಮತೆಗೆ ಯಾವ ಬಗೆಯ ಗೌರವವನ್ನು ಕಲ್ಪಿಸುತ್ತದೋ ಅದೇ ಗೌರವವನ್ನು ಅದು ಇತರ ದೇಶಗಳ ಸಾರ್ವಭೌಮತೆಗೆ ಕೊಡುವುದೇ ಇಲ್ಲ. ಕೃಷಿ ಸಬ್ಸಿಡಿಯನ್ನು ಕಡಿಮೆಗೊಳಿಸಿ ಎಂದು ಕರೆ ಕೊಡುವ ಅದೇ ಅಮೇರಿಕ ತನ್ನ ದೇಶದ ಕೃಷಿಕರಿಗೆ ಧಾರಾಳ ಸಬ್ಸಿಡಿಯನ್ನು ನೀಡುತ್ತದೆ. ಮಾನವ ಹಕ್ಕುಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಲೇ ನೂರಕ್ಕಿಂತಲೂ ಅಧಿಕ ಬಾರಿ ಬ್ರಿಟನ್ ಮತ್ತು ಅಮೇರಿಕಗಳು ಇಸ್ರೇಲ್ ಪರ ವೀಟೋ ಚಲಾಯಿಸುತ್ತವೆ. ನೂರಾರು ಅಣ್ವಸ್ತ್ರಗಳನ್ನು ಸ್ವಯಂ ಗೋದಾಮುಗಳಲ್ಲಿ ಪೇರಿಸಿಟ್ಟುಕೊಂಡೇ ಇತರ ರಾಷ್ಟ್ರಗಳು ಅವನ್ನು ಹೊಂದದಂತೆ ತಡೆಯುತ್ತವೆ. ಹೀಗಿರುವಾಗ, ಈ ರಾಷ್ಟ್ರಗಳಿಂದ ದ್ವಂದ್ವವನ್ನಲ್ಲದೇ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
       ಏನೇ ಆಗಲಿ, ಒಂದೊಳ್ಳೆಯ ಚರ್ಚೆಗೆ ವೇದಿಕೆ ಒದಗಿಸಿದ ಫ್ರಾನ್ಸಿನ ಕ್ಲೋಸರ್ ಮ್ಯಾಗಸಿನ್‍ಗೆ ಅಭಿನಂದನೆ ಸಲ್ಲಿಸಬೇಕು. ಬ್ರಿಟನ್‍ನ `ಆಧುನಿಕತೆಯ’ ಪೊಳ್ಳುತನವನ್ನು ಅದು ಒಂದು ಪೋಟೋದ ಮೂಲಕ ಬಹಿರಂಗಕ್ಕೆ ತಂದಿದೆ. ಮಿಡ್ಲ್ ಟನ್‍ಳಂತೆ ಜಗತ್ತಿನ ಎಲ್ಲ ಹೆಣ್ಣು ಮಕ್ಕಳೂ ಗೌರವಾರ್ಹರು ಎಂಬುದನ್ನು `ಆಧುನಿಕ’ ಜಗತ್ತು ಈ ಮೂಲಕ ಅರ್ಥ ಮಾಡಿಕೊಳ್ಳಲಿ...

Monday 10 September 2012

ಅವರೆಲ್ಲಾ ಆ ಪೋಟೋವನ್ನು ಜೇಬಿನಲ್ಲಿ ಇಟ್ಟುಕೊಳ್ಳಲಿ

ಮಾಯಾ ಕೊಡ್ನಾನಿ
ಈ ಟಿಪ್ಪಣಿಗಳನ್ನು ಓದಿ
1. ಜನಪ್ರತಿನಿಧಿಯಾಗಿ ಮಾಯಾ ಕೊಡ್ನಾನಿ ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ. ಆಕೆ ಪಾತಕದಲ್ಲಿ ಭಾಗಿಯಾಗಿದ್ದಾರೆ..
2. ಗಲಭೆಕೋರರ ಕೈಯಲ್ಲಿ ಕೊಲೆಗೀಡಾದ 20 ದಿನದ ಶುಐಬ್ ಎಂಬ ಶಿಶುವನ್ನು ನರೋಡ ಠಾಣೆಯ ಪೊಲೀಸರು 20 ವರ್ಷದ ಯುವಕ ಎಂದು ನಮೂದಿಸಿದ್ದಾರೆ.
3. ಘಟನಾ ಸ್ಥಳದಿಂದ ಒಬ್ಬನೇ ಒಬ್ಬ ಗಲಭೆಕೋರನನ್ನೂ ನರೋಡದ ಪೊಲೀಸರು ಬಂಧಿಸಿಲ್ಲ.
4. ಆಸ್ಪತ್ರೆಯಲ್ಲಿದ್ದ ಸಂತ್ರಸ್ತರಿಂದ ಹೇಳಿಕೆಗಳನ್ನೂ ಪಡಕೊಂಡಿಲ್ಲ.
5. ಆರೋಪಿಗಳನ್ನು ಗುರುತು ಹಚ್ಚುವ ಪೆರೇಡನ್ನೂ ನಡೆಸಲಾಗಿಲ್ಲ.
6. ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಕೆ.ಕೆ. ಮೈಸೂರ್‍ವಾಲ ಎಷ್ಟರ ಮಟ್ಟಿಗೆ ಕರ್ತವ್ಯಚ್ಯುತಿ ಎಸಗಿದರೆಂದರೆ, ಪ್ರದೇಶದಲ್ಲಿ ಸಾಮಾನ್ಯವಾಗಿ ಮಾಡಬೇಕಾಗಿದ್ದ ರೌಂಡನ್ನೂ ಮಾಡಿಲ್ಲ. ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ..
        ಜ್ಯೋತ್ಸ್ ನಾ  ಯಾಗ್ನಿಕ್ ಎಂಬ ನ್ಯಾಯಾಧೀಶೆಯ 1969 ಪುಟಗಳ ತೀರ್ಪಿನ ಉದ್ದಕ್ಕೂ ಇಂಥ ಸಾವಿರಾರು ಟಿಪ್ಪಣಿಗಳಿವೆ. ನಿಜವಾಗಿ, ಗುಜರಾತ್‍ನ ನರೋಡಾ-ಪಾಟಿಯಾ ಹತ್ಯಾಕಾಂಡದ ತನಿಖೆಯನ್ನು ಎರಡು ವರ್ಷಗಳ ಹಿಂದೆ ಇವರು ಎತ್ತಿಕೊಂಡಾಗ ಮಾಯಾ ಕೊಡ್ನಾನಿ, ಭಜರಂಗಿ, ಮೈಸೂರ್‍ವಾಲಾ.. ಮುಂತಾದ ಬೃಹತ್ ಆಲದ ಮರಗಳನ್ನೆಲ್ಲಾ ಉರುಳಿಸಿ ಬಿಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಂದಿಡೀ ವ್ಯವಸ್ಥೆಯೇ ಪಾತಕಿಗಳ, ರಕ್ಷಣೆಗೆ ಟೊಂಕಕಟ್ಟಿ ನಿಂತಿರುವಾಗ, ಯಾಗ್ನಿಕ್‍ಗೆ ಅದನ್ನು ಬೇಧಿಸಲು ಸಾಧ್ಯವಾ ಎಂಬ ಅನುಮಾನ,  ಅವರನ್ನು ಮೆಚ್ಚುವವರಲ್ಲೂ ಇತ್ತು. ಆದರೆ ಯಾಗ್ನಿಕ್ ಅವನ್ನೆಲ್ಲಾ ಸುಳ್ಳು ಮಾಡಿದ್ದಾರೆ.
           ಇಷ್ಟಕ್ಕೂ ಬಳ್ಳಾರಿಯ ಗಣಿ ಅಕ್ರಮಗಳ ಬಗ್ಗೆಯೋ, 2ಜಿ ಸ್ಪೆಕ್ಟ್ರಮ್‍ನ ಬಗ್ಗೆಯೋ ತನಿಖೆ ನಡೆಸುವುದಕ್ಕೂ ಹತ್ಯಾಕಾಂಡದ ತನಿಖೆ ನಡೆಸುವುದಕ್ಕೂ ಖಂಡಿತ ವ್ಯತ್ಯಾಸ ಇದೆ. ಯಾಕೆಂದರೆ, ಗಣಿಗೆ ಧರ್ಮದ ಹಂಗು ಇರುವುದಿಲ್ಲ. ರೆಡ್ಡಿಗಳು ಯಾವ ಜಾತಿಯವರು ಎಂಬುದು ತನಿಖೆಯ ಸಂದರ್ಭದಲ್ಲಿ ಮಹತ್ವ ಪಡಕೊಳ್ಳುವುದೂ ಇಲ್ಲ. ಸಮಾಜದ ಎಲ್ಲರೂ ಅಕ್ರಮವನ್ನು ವಿರೋಧಿಸುತ್ತಲೂ ಇರುತ್ತಾರೆ. ರಾಜಕಾರಣಿಗಳನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ಗಲಭೆ ಹಾಗಲ್ಲ. ನಡೆದಿರುವುದು ಮನುಷ್ಯರ ಹತ್ಯೆಯೇ ಆಗಿದ್ದರೂ ಆ ಮನುಷ್ಯರನ್ನು ಅವನು - ಇವನು ಎಂದು ಸಮಾಜವೇ ವಿಭಜಿಸುತ್ತದೆ. ಗಲಭೆಯನ್ನು ನಿಯಂತ್ರಿಸಬೇಕಾದ ಪೊಲೀಸರಲ್ಲೂ ಅವನು - ಇವನು ಇರುತ್ತಾರೆ. ಸಾವಿಗೆ ಮತ್ತು ಬಂಧನಕ್ಕೆ ಒಳಗಾಗುವ ಮನುಷ್ಯರಲ್ಲಿ ಅವರೆಷ್ಟು-ಇವರೆಷ್ಟು ಎಂದು ಸಮಾಜ ಚರ್ಚಿಸುತ್ತದೆ. ರಾಜಕೀಯದ ಮಂದಿಯಲ್ಲೂ ಅವರದ್ದೇ ಆದ ಲಾಭ-ನಷ್ಟಗಳ ಲೆಕ್ಕಾಚಾರ ಇರುತ್ತದೆ. ಇಷ್ಟೇ ಅಲ್ಲ, ಯಾರು ಅದರ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಾರೋ ಅವರಿಗೂ ಒಂದು ಧರ್ಮ ಇರುತ್ತದೆ. ಅವನು ಅಥವಾ ಇವನಲ್ಲಿ ಅವರೂ ಒಬ್ಬರಾಗಿರುತ್ತಾರೆ. ಹೀಗಿರುವಾಗ ಯಾಗ್ನಿಕ್ ಎಂದಲ್ಲ, ಕೋಮು ಹತ್ಯಾಕಾಂಡದ ವಿಚಾರಣೆಯನ್ನು ಎತ್ತಿಕೊಳ್ಳುವ ಯಾವುದೇ ನ್ಯಾಯಾಧೀಶರೂ ರಾಜಕಾರಣಿಗಳಿಂದ ಮಾತ್ರವಲ್ಲ, ಸಮಾಜ ಮತ್ತು ತನ್ನೊಳಗಿಂದಲೂ ಒತ್ತಡಕ್ಕೆ ಒಳಗಾಗುತ್ತಾರೆ. ಇಂಥ ಒತ್ತಡಗಳಿಂದ ತಪ್ಪಿಸಿಕೊಂಡು ನ್ಯಾಯದ ಮೇಲೆ ದೃಢವಾಗಿ ನಿಲ್ಲುವುದಕ್ಕೆ ಎಲ್ಲರಿಗೆ ಸಾಧ್ಯವೂ ಆಗುವುದಿಲ್ಲ. ಆದ್ದರಿಂದಲೇ ಯಾಗ್ನಿಕ್‍ರ ಬಗ್ಗೆ ಅಭಿಮಾನ ಮೂಡುವುದು. ತನ್ನ ಒಡ ಹುಟ್ಟಿದವರು ಸಹಿತ ಕುಟುಂಬದ 19 ಮಂದಿಯನ್ನು ಕಣ್ಣೆದುರಲ್ಲೇ ಕಳಕೊಂಡ ಇಮ್ರಾನ್ ಶೈಕ್‍ನ (ಘಟನೆ ನಡೆಯುವಾಗ 16 ವರ್ಷ) ಸಾಕ್ಷ್ಯವನ್ನು ಸರಕಾರಿ ವಕೀಲರು ತಡೆಯಲೆತ್ನಿಸಿದಾಗ ಅವರ ಬಾಯಿ ಮುಚ್ಚಿಸಿದ್ದೂ ಯಾಗ್ನಿಕ್‍ರೇ. ಪಾತಕಿಗಳಿಂದ ತಪ್ಪಿಸಿಕೊಂಡು ರಿಸರ್ವ್ ಪೊಲೀಸ್ ಠಾಣೆಯ ಎದುರು ಗೇಟ್ ತೆರೆಯುವಂತೆ ಅಂಗಲಾಚಿದ ಗುಂಪಿನಲ್ಲಿ ಆತನೂ ಇದ್ದ. ಆದರೆ ಗೇಟ್ ತೆರೆಯುವ ಬದಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಕಣ್ಣೆದುರೇ ತಾಯಿಯನ್ನು, 7 ವರ್ಷದ ಮಗಳನ್ನು, ಸಹೋದರಿಯನ್ನು ಕಳಕೊಂಡ ನಈಮುದ್ದೀನ್‍ನಂಥ ಅನೇಕಾರು ಮಂದಿಗೆ ಧೈರ್ಯದಿಂದ ಸಾಕ್ಷ್ಯ ಹೇಳಲು ಅವಕಾಶ ಒದಗಿಸಿದ್ದೂ ಯಾಗ್ನಿಕ್‍ರೇ.
         ನ್ಯಾಯವನ್ನು ಖರೀದಿಸಲು ಸಾಧ್ಯ ಎಂಬ ನಂಬಿಕೆ ನಿಜವಾಗುತ್ತಿರುವ ಇಂದಿನ ದಿನಗಳಲ್ಲಿ ಯಾಗ್ನಿಕ್‍ರಂಥವರು ಖಂಡಿತ ಅಪರೂಪ. ಸಾಮಾನ್ಯವಾಗಿ ಯಾವುದೇ ಕೋಮು ಗಲಭೆಯಲ್ಲೂ ರೂವಾರಿಗಳು ಶಿಕ್ಷೆಗೆ ಗುರಿಯಾಗುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆಲದ ಮರವನ್ನು ಹಾಗೆಯೇ ಬಿಟ್ಟು ಅದರ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಪ್ರಯತ್ನವನ್ನೇ ಹೆಚ್ಚಿನ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಪೆಟ್ರೋಲನ್ನೋ ಡೀಸಲನ್ನೋ ಸುರಿದು ಮನುಷ್ಯರನ್ನು ಕೊಂದವ ಜೈಲಿಗೆ ಹೋಗುವಾಗ ಅವನ್ನು ಒದಗಿಸಿದವ ವಿಧಾನಸೌಧದಲ್ಲೋ ಏ.ಸಿ. ಕಾರಲ್ಲೋ ಹಾಯಾಗಿ ತಿರುಗುತ್ತಿರುತ್ತಾನೆ. ಆದರೆ ಯಾಗ್ನಿಕ್‍ರು ಮಾಯಾ ಕೊಡ್ನಾನಿ, ಭಜರಂಗಿಯಂಥ ಆಲದ ಮರವನ್ನೇ ಉರುಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಹತಾಶ ಮುಖ ಭಾವದಲ್ಲಿದ್ದ, ಸಾಕ್ಷ್ಯ ಹೇಳುತ್ತಾ ಕಣ್ಣೀರು ಹಾಕುತ್ತಿದ್ದ ಸಂತ್ರಸ್ತರಿಗೆ ಮೊತ್ತಮೊದಲ ಬಾರಿ ಕೊಲೆಗಾರರು ಹತಾಶಭಾವದಲ್ಲಿ ಪೊಲೀಸ್ ವ್ಯಾನಿನಿಂದ ಇಣುಕುವುದನ್ನು ನೋಡಲು ಸಾಧ್ಯವಾಗಿದೆ.
        ನಿಜವಾಗಿ, ಕೊಡ್ನಾನಿ ಮತ್ತು ಯಾಗ್ನಿಕ್‍ರು ಸಮಾಜದ ಎರಡು ಮುಖಗಳ ಪ್ರತಿಬಿಂಬವಾಗಿದ್ದಾರೆ. ಸ್ತ್ರೀರೋಗ ತಜ್ಞೆಯಾದ ಕೊಡ್ನಾನಿಗೆ ತನ್ನಂತೇ ಇರುವ ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸುವುದು, ಹತ್ಯೆ ನಡೆಸುವುದೆಲ್ಲಾ ಧರ್ಮದ ರಕ್ಷಣೆಯಂತೆ ಕಾಣುವಾಗ ಕಾನೂನು ತಜ್ಞೆಯಾದ ಯಾಗ್ನಿಕ್‍ಗೆ, ಅದು ಧರ್ಮದ್ರೋಹದ ಕೃತ್ಯದಂತೆ ಕಾಣಿಸುತ್ತದೆ. ದುರಂತ ಏನೆಂದರೆ, ನಮ್ಮ ಸಮಾಜದಲ್ಲೂ ಕೊಡ್ನಾನಿಯಂಥವರು ಇದ್ದಾರೆ ಅನ್ನುವುದು. ಕೊಡ್ನಾನಿ ಯಾವ ಕ್ರೌರ್ಯಕ್ಕೆ ನೇತೃತ್ವ ನೀಡಿದ್ದರೋ ಅದನ್ನು ಈಗಲೂ ಅವರು ಧರ್ಮರಕ್ಷಣೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ ಅನ್ನುವುದು. ಆದ್ದರಿಂದ ಯಾಗ್ನಿಕ್‍ರ 1969 ಪುಟಗಳ ತೀರ್ಪಿನ ಸಂಕ್ಷಿಪ್ತ ರೂಪವನ್ನಾದರೂ ಕೊಡ್ನಾನಿಯ ಇಂಥ ಬೆಂಬಲಿಗರಿಗೆ ತಲುಪಿಸುವ  ವ್ಯವಸ್ಥೆಯಾಗಬೇಕು. ಯಾಕೆಂದರೆ ಈ ಸಮಾಜದಲ್ಲಿ ಹೆಚ್ಚಾಗಬೇಕಾದದ್ದು ಕೊಡ್ನಾನಿಗಳಲ್ಲ, ಯಾಗ್ನಿಕ್‍ಗಳು. ಪೊಲೀಸ್ ವ್ಯಾನ್‍ನಲ್ಲಿ ಗಲ್ಲಕ್ಕೆ ಕೈಯಿಟ್ಟು ಹತಾಶೆಯಿಂದ ನೋಡುತ್ತಿರುವ ಕೊಡ್ನಾನಿಯ ಪೊಟೋವನ್ನು ಮನುಷ್ಯ ವಿರೋಧಿಗಳೆಲ್ಲಾ ತಮ್ಮ ಜೇಬಿನಲ್ಲಿ ಕತ್ತರಿಸಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.

Monday 3 September 2012

ಭಯೋತ್ಪಾದನೆ ಅಂದರೆ ಲಾಡೆನ್ ನ ಪೊಟೋವಷ್ಟೇ ಅಲ್ಲವಲ್ಲ..

ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೆ ಒಳಗಾದ ಯುವಕರು ಉಗ್ರರು ಹೌದೋ ಅಲ್ಲವೋ, ಆದರೆ ಆಗಸ್ಟ್ 31ರಿಂದ ಹಿಡಿದು ಈ ವರೆಗೆ ಪ್ರಕಟವಾದ ಹೆಚ್ಚಿನ ಕನ್ನಡ ದಿನ ಪತ್ರಿಕೆಗಳ ಸುದ್ದಿಗಳನ್ನು ಓದುವಾಗ,  ಪತ್ರಿಕಾ  ಕಛೇರಿಗಳಲ್ಲಿ ಭಯೋತ್ಪಾದಕರ ತಂಡವೊಂದು  ಕಾರ್ಯಾಚರಿಸುತ್ತಿರಬಹುದೇ ಅನ್ನುವ ಶಂಕೆ ಮೂಡುವುದು ಸಹಜ. ಪೊಲೀಸ್ ಮೂಲಗಳು ತಿಳಿಸಿವೆ ಎಂಬ ಜುಜುಬಿ ವಾಕ್ಯವನ್ನು ಎದುರಿಟ್ಟುಕೊಂಡು ಆನೆ ಲದ್ದಿಯಷ್ಟು ದೊಡ್ಡದಾದ ಶೀರ್ಷಿಕೆಯ ಅಡಿಯಲ್ಲಿ ಪತ್ರಿಕೆಗಳೆಲ್ಲ ಕಳೆದೊಂದು ವಾರದಿಂದ  ಧಾರಾಳ ಸುದ್ದಿಗಳನ್ನು ಬರೆದಿವೆ. ಸುದ್ದಿಯ ಮೂಲ ಯಾವುದು, ಅದೆಷ್ಟು ಪ್ರಬಲ ಮತ್ತು ಪ್ರಾಮಾಣಿಕ, ಸುದ್ದಿ ಕೊಟ್ಟವರಿಗೂ ತನಿಖೆ ನಡೆಸುತ್ತಿರುವವರಿಗೂ ಏನು ಸಂಬಂಧ ಇದೆ, ಪೊಲೀಸ್ ಮುಖ್ಯಸ್ಥರಿಗೇ ಗೊತ್ತಿಲ್ಲದ ಸಂಗತಿಗಳೆಲ್ಲಾ ಯಾವುದೋ ಅಜ್ಞಾತ ಪೊಲೀಸರಿಗೆ ಗೊತ್ತಾಗುವುದಾದರೂ ಹೇಗೆ.. ಇಂಥ ಅನೇಕಾರು ಪ್ರಶ್ನೆಗಳು ಓದುಗರ ಮನದಲ್ಲಿ ಹುಟ್ಟಿ ದಿನಂಪ್ರತಿ ಸಾಯುತ್ತಿವೆ. 2007ರ ಜುಲೈಯಲ್ಲಿ ಬೆಂಗಳೂರಿನ ವೈದ್ಯ ಮುಹಮ್ಮದ್ ಹನೀಫನು ಆಸ್ಟ್ರೇಲಿಯಾದಲ್ಲಿ ಬಂಧನಕ್ಕೀಡಾದಾಗ ಪತ್ರಿಕೆಗಳು ಹೀಗೆಯೇ ಬರೆದಿದ್ದುವು. ಆತನನ್ನು ಅವು ಟೆರರ್ ಡಾಕ್ಟರ್ ಅಂದಿದ್ದವು. ಬಾಂಬು ಸ್ಫೋಟಿಸುವಲ್ಲಿ ಆತ ಹೆಣೆದ ತಂತ್ರ, ಆತನ ಧಾರ್ಮಿಕತೆ.. ಎಲ್ಲವನ್ನೂ ಕನ್ನಡ ಪತ್ರಿಕೆಗಳು ಪುಟ ತುಂಬ ಬರೆದಿದ್ದುವು. 2008 ಮೇಯಲ್ಲಿ ಹುಬ್ಬಳ್ಳಿ ಕೋರ್ಟ್‍ ನಲ್ಲಿ  ಸ್ಫೋಟ ನಡೆಯಿತು. ಅದಕ್ಕೆ ಸಿಮಿ ಕಾರಣ ಅಂದವು ಕನ್ನಡ ಪತ್ರಿಕೆಗಳು. ಆ ಸ್ಫೋಟದ ಆರೋಪವನ್ನು ಮುಸ್ಲಿಮ್ ಯುವಕರ ಮೇಲೆ ಹೊರಿಸಿ ಅದಕ್ಕೆ ಬೇಕಾದ ಪುರಾವೆಗಳನ್ನೆಲ್ಲಾ ಮೂಲಗಳಿಂದ ಇವು ಹುಡುಕಿ ತಂದುವು. ಕೊನೆಗೆ ನಾಗರಾಜ ಜಂಬಗಿ ಎಂಬ ಶ್ರೀರಾಮ ಸೇನೆಯ ಕಾರ್ಯಕರ್ತ ಅದರ ರೂವಾರಿ ಅನ್ನುವುದು ಬಹಿರಂಗವಾಯಿತು. ದುರಂತ ಏನೆಂದರೆ, 2007ರ ಡಿಸೆಂಬರ್‍ನಲ್ಲಿ ಮುಹಮ್ಮದ್ ಹನೀಫ್‍ನ ಬಿಡುಗಡೆಯಾದರೂ ಕೆಲವು ಪತ್ರಕರ್ತರು ಈಗಲೂ ತಮ್ಮ ಭಯೋತ್ಪಾದಕ ಮನಃಸ್ಥಿತಿಯಿಂದ ಬಿಡುಗಡೆಗೊಂಡಿಲ್ಲ. ನಿಜವಾಗಿ ಒಂದು ಪತ್ರಿಕೆ ಬಂಧಿತ ಯುವಕರ ಹೆಸರಲ್ಲಿ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುತ್ತದೆಂದರೆ ಅದು ಭಯೋತ್ಪಾದಕರಿಗಿಂತಲೂ  ಅಪಾಯಕಾರಿ. ಮನುಷ್ಯರನ್ನು ಕೊಲ್ಲುವ, ಸಾರ್ವಜನಿಕರು ನಿರೀಕ್ಷಿಸದೇ ಇರುವಂಥ ಅಪಾಯಕಾರಿ ಷಡ್ಯಂತ್ರಗಳನ್ನು ಓರ್ವ ಪತ್ರಕರ್ತ ಸುದ್ದಿ ಮನೆಯಲ್ಲಿ ಕೂತು ಬರೆಯುತ್ತಾನೆಂದರೆ ಆತನ ಮನಸ್ಥಿತಿಯಾದರೂ ಎಂಥದು? ಭಯೋತ್ಪಾದಕ ರಕ್ತ ಆತನೊಳಗೂ ಹರಿಯುತ್ತಿದೆ ಎಂದಲ್ಲವೇ ಇದರರ್ಥ? ಕೈಗಾದ ಅಣುಸ್ಥಾವರಕ್ಕೋ ದೇಗುಲಕ್ಕೋ ಬಾಂಬು ಹಾಕುವ ಬಗ್ಗೆ ಓರ್ವ ಸಾಮಾನ್ಯ ವ್ಯಕ್ತಿಗೆ ಊಹಿಸುವುದಕ್ಕೂ ಸಾಧ್ಯ ಇಲ್ಲ. ಒಂದು ವೇಳೆ ಹೀಗೆ ಪ್ರಕಟವಾಗುವ ಸುದ್ದಿಗಳಿಗೆಲ್ಲ ಯಾವ ಆಧಾರವೂ ಇಲ್ಲವೆಂದಾದರೆ, ಅದನ್ನು ಸೃಷ್ಟಿಸಿದವ ಭಯೋತ್ಪಾದಕನಷ್ಟೇ ಅಪಾಯಕಾರಿಯಲ್ಲವೇ? ಅವಕಾಶ ಸಿಕ್ಕರೆ ಇವರೂ ಅಂಥದ್ದೊಂದು ಕ್ರೌರ್ಯ ಎಸಗಿಯಾರು ಎಂಬುದಕ್ಕೆ ಇದು ಪುರಾವೆಯಲ್ಲವೇ?
           ಮನುಷ್ಯ ವಿರೋಧಿ, ದೇಶ ವಿರೋಧಿ, ಸಮಾಜ ವಿರೋಧಿ.. ಮುಂತಾದ ಪದಗಳೆಲ್ಲ ಯಾವುದಾದರೊಂದು ನಿರ್ದಿಷ್ಟ ಚಿಹ್ನೆಗೆ, ಧರ್ಮಕ್ಕೆ, ಹೆಸರಿಗೆ ಸೀಮಿತವಾದ ಪದಗಳೇನೂ ಆಗಬೇಕಿಲ್ಲ. ಮುಹಮ್ಮದ್ ಹನೀಫ್‍ನ ಮೇಲೆ, ಆತ ಮಾಡದೇ ಇರುವ ಮತ್ತು ಹೂಡದೇ ಇರುವ ಷಡ್ಯಂತ್ರಗಳನ್ನೆಲ್ಲಾ ಹೊರಿಸಿ ಭಯೋತ್ಪಾದಕರಾಗಿಸಿದವರೂ ಮನುಷ್ಯ ವಿರೋಧಿಗಳೇ. ಮೊನ್ನೆ ಬಂಧಿಸಲಾದ ಯುವಕರು ಅಂಥ ಅಪರಾಧ ಮಾಡಿದ್ದರೆ ಅವರನ್ನು ಕರೆಯಬೇಕಾದದ್ದೂ ಇಂಥ ಪದಗಳಿಂದಲೇ. ವಿಷಾದ ಏನೆಂದರೆ ಈ ವರೆಗೆ ಈ ದೇಶದಲ್ಲಿ ಇಂಥ ಮೌಲ್ಯಗಳು ಪಾಲನೆಯಾಗಿಲ್ಲ ಅನ್ನುವುದು. ಕೊಲ್ಲುವ, ಸ್ಫೋಟಿಸುವ, ಬಾಂಬು ತಯಾರಿಸುವ.. ಭೀಕರ ಸುದ್ದಿಗಳನ್ನು ಯಾವ್ಯಾವುದೋ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ ರೂಮಲ್ಲಿ ಸೃಷ್ಟಿಸಿದವ ಹೀರೋ ಆಗುತ್ತಾನೆ. ಮಾಡದ ತಪ್ಪನ್ನು ಹೊತ್ತುಕೊಂಡು ಜೈಲಿಗೆ ಹೋದವ, ಹೋಗುವಾಗಲೂ,  ಬಳಿಕ ಅಮಾಯಕನೆಂದು ಬಿಡುಗಡೆಯಾದಾಗಲೂ ಖಳನಂತೆ ಹೊರಬರುತ್ತಾನೆ.
       ನಿಜವಾಗಿ, ಮುಸ್ಲಿಮ್ ಪ್ರತಿಭೆಗಳನ್ನು ಮಾಧ್ಯಮದಿಂದ, ಸಾರ್ವಜನಿಕ ಸೇವಾ ಕ್ಷೇತ್ರಗಳಿಂದ ದೂರ ಇಡುವ ಶ್ರಮಗಳು ನಡೆಯುತ್ತಿವೆಯೋ ಅನ್ನುವ ಅನುಮಾನವೊಂದು ಕಾಡುತ್ತಿದೆ. ಪತ್ರಕರ್ತ, ವಿಜ್ಞಾನಿ, ವೈದ್ಯ, ಎಂ.ಬಿ.ಎ. ವಿದ್ಯಾರ್ಥಿ.. ಇವೆಲ್ಲ ಯಾವುದೋ ಮದ್ರಸ, ಮಸೀದಿಗಳಲ್ಲಿ ಕೆಲಸ ಮಾಡುವುದಕ್ಕೆ ಬೇಕಾದ ಪದವಿಗಳಲ್ಲ. ಮೊನ್ನೆ ಬಂಧನಕ್ಕೀಡಾದ ಯುವಕರಲ್ಲಿ ಇವರೆಲ್ಲ ಸೇರಿದ್ದಾರೆ. ಬಹುಶಃ ಮಾಧ್ಯಮ ಕ್ಷೇತ್ರದಿಂದ ಮುಸ್ಲಿಮ್ ಯುವಕರನ್ನು ಹೊರಗಿಡುವುದಕ್ಕೆ, ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾಗ ಸಿಗದಂತೆ ತಡೆಯುವುದಕ್ಕೆ ಒಂದು ನೆಪವಾಗಿ ಇವನ್ನೆಲ್ಲ ಬಳಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಈಗಾಗಲೇ ಮುಂಬೈಯಂಥ ಬೃಹತ್ ನಗರಗಳ ಅನೇಕ ಕಟ್ಟಡಗಳು, ಮುಸ್ಲಿಮ್ ನಿಷೇಧ ನೀತಿಯನ್ನು ಸ್ವಯಂ ಜಾರಿಗೊಳಿಸಿಕೊಂಡಿರುವುದನ್ನು ಶಬನಾ ಅಜ್ಮಿಯಂಥವರೇ ಬಹಿರಂಗಪಡಿಸಿದ್ದಾರೆ. ಹೀಗಿರುವಾಗ ರಾಜ್ಯದಲ್ಲಾದ ಬಂಧನ ಮತ್ತು ಅದರ ಸುತ್ತ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಕತೆಗಳು ಸಮಾಜವನ್ನು ನಕಾರಾತ್ಮಕ ಧೋರಣೆಯೆಡೆಗೆ ಕೊಂಡೊಯ್ಯಲಾರದೆಂದು ಹೇಗೆ ಹೇಳುವುದು?
       ಏನೇ ಆಗಲಿ, ಭಯವನ್ನು ಉತ್ಪಾದಿಸುವ ಮತ್ತು ಮಾರುವ ಎರಡೂ ಕೃತ್ಯಗಳೂ ಅತ್ಯಂತ ಖಂಡನಾರ್ಹವಾದದ್ದು. ಒಂದು ವೇಳೆ ವಿಜ್ಞಾನಿ, ಪತ್ರಕರ್ತ, ವೈದ್ಯ.. ಯಾರೇ ಅದರ ಹಿಂದೆ ಇದ್ದರೂ ಅವರನ್ನು ಅವರ ಧರ್ಮ, ಹೆಸರು, ಹುದ್ದೆಯನ್ನು ನೋಡದೇ ದಂಡಿಸಲೇಬೇಕು. ಕೊಲ್ಲುವುದನ್ನು ಯಾವುದಾದರೊಂದು ಸಮಸ್ಯೆಗೆ ಪರಿಹಾರ ಎಂದು ಭಾವಿಸುವುದೇ ಅತಿ ದೊಡ್ಡ ಕ್ರೌರ್ಯ. ಅಂಥವರನ್ನು ಹಿಡಿದು ಕಾನೂನಿನ ಕೈಗೆ ಒಪ್ಪಿಸುವ ಶ್ರಮಗಳು ಎಲ್ಲರಿಂದಲೂ ನಡೆಯಬೇಕು. ಅಷ್ಟಕ್ಕೂ ಸಮಾಜದ ಆರೋಗ್ಯವನ್ನು ಕೆಡಿಸುವುದಕ್ಕೆ, ಸಮಾಜವನ್ನು ಭೀತಿಯಲ್ಲಿ ಕೆಡಹುವುದಕ್ಕೆ ಬಾಂಬುಗಳೇ ಬೇಕಾಗಿಲ್ಲ. ಭಯೋತ್ಪಾದಕರ ಹೆಸರಲ್ಲಿ ಟಿ.ವಿ. ಚಾನೆಲ್‍ಗಳು ಪ್ರಸಾರ ಮಾಡುವ ಕ್ರೈಂ ವಾರ್ತೆಗಳು, ಬ್ರೇಕಿಂಗ್ ನ್ಯೂಸ್‍ಗಳೂ ಅವನ್ನು ಸಲೀಸಾಗಿ ಮಾಡಬಲ್ಲವು. ಆದ್ದರಿಂದ ಭಯೋತ್ಪಾದನೆಯ ಕುರಿತಂತೆ ಮಾಡಲಾಗುವ ಚರ್ಚೆಗಳು ಬರೇ ಬಾಂಬು, ಲಾಡೆನ್‍ನ ಪೋಟೋ, `ಜಿಹಾದಿ’ ಸಾಹಿತ್ಯಗಳಿಗೆ ಮಾತ್ರ ಸೀಮಿತಗೊಳ್ಳುವುದು ಬೇಡ. ಪತ್ರಿಕಾ ಸುದ್ದಿಗಳು ಮತ್ತು ಟಿ.ವಿ.ಗಳ ಬ್ರೇಕಿಂಗ್ ನ್ಯೂಸ್‍ಗಳ ವರೆಗೂ ಅದರ ವ್ಯಾಪ್ತಿ ವಿಸ್ತರಿಸಲಿ. ಅನಾರೋಗ್ಯ ಪೀಡಿತ ಸರ್ವ ಮನಸ್ಸುಗಳನ್ನೂ ಯಾವ ಹಂಗೂ ಇಲ್ಲದೆ ಖಂಡಿಸುವುದಕ್ಕೆ ನಮಗೆ ಸಾಧ್ಯವಾಗಲಿ.