Monday 15 October 2012

ಪತ್ರಿಕೆಗಳ ಗಮನಕ್ಕೆ: ಭಟ್ಕಳದಲ್ಲಿ ಬಂದ್ ಆಚರಿಸಲಾಗಿದೆ..

ಮಾಧ್ಯಮಗಳು ಕಪೋಲಕಲ್ಪಿತ ಸುಳ್ಳು ಸುದ್ದಿಯನ್ನು ಪ್ರಕಟಿಸಿದರೆ ಓದುಗರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳವು ಕಳೆದ ವಾರ ಉತ್ತರ ನೀಡಿದೆ. ಅಕ್ಟೋಬರ್ 11ರಂದು ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದುಕೊಳ್ಳಲಿಲ್ಲ. ವಾಹನಗಳು ಓಡಾಡಲಿಲ್ಲ. ಭಟ್ಕಳದ ಕುರಿತಂತೆ ಸೆ. 2ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಖಂಡಿಸಿ ಜನರು ಬಂದ್ ಆಚರಿಸಿದರು. 'ಭಟ್ಕಳದ ಮಸೀದಿಗಳು ಭಯೋತ್ಪಾದನೆಯ ತಾಣಗಳಾಗಿದ್ದು, ಇಲ್ಲಿಂದಲೇ ಬಾಂಬುಗಳು, ಆರ್‍ಡಿಎಕ್ಸ್ ಗಳು ರವಾನೆಯಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆ ಭಯೋತ್ಪಾದಕರ ಅಡಗುತಾಣವಾಗುತ್ತಿದೆ..' ಎಂಬ ಕನ್ನಡ ಪ್ರಭದ ವರದಿಯ ಬಗ್ಗೆ ಪರಾಂಬರಿಸಿ ನೋಡುವುದಕ್ಕಾಗಿ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಊರ ಗಣ್ಯರನ್ನೆಲ್ಲಾ ಮಸೀದಿಗಳಿಗೆ ಆಹ್ವಾನಿಸಲಾಯಿತು. ಭೇಟಿ ಕೊಟ್ಟ ಅವರೆಲ್ಲ ಸುದ್ದಿಯ ವಿರುದ್ಧ ಸಿಟ್ಟು ವ್ಯಕ್ತಪಡಿಸಿದರು.
    ನಿಜವಾಗಿ, ಅಕ್ಷರ ಭಯೋತ್ಪಾದನೆಯನ್ನು ಖಂಡಿಸಿ ಒಂದು ಪ್ರದೇಶದ ಜನತೆ ಬಂದ್ ಆಚರಿಸಿದ್ದು ಬಹುಶಃ ಈ ದೇಶದಲ್ಲಿ ಇದೇ ಮೊದಲು. ಸಾಮಾನ್ಯವಾಗಿ ಬಂದ್ ಆಗಬೇಕಾದರೆ ಒಂದೋ ತೈಲ ಬೆಲೆ ಏರಬೇಕು ಅಥವಾ ಕೋಮುಗಲಭೆಯಾಗಬೇಕು ಎಂಬ ಅಲಿಖಿತ ನಿಯಮ ಈ ದೇಶದಲ್ಲಿದೆ. ಆದರೆ ಭಟ್ಕಳದ ಮಂದಿ ಇದನ್ನು ಸುಳ್ಳು ಮಾಡಿದ್ದಾರೆ. ಜೀವಿಸುವ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ಹಕ್ಕು ಮನುಷ್ಯರಿಗೆ ಎಷ್ಟು ಇದೆಯೋ, ಗೌರವಯುತವಾಗಿ ಬದುಕುವ ಹಕ್ಕೂ ಅಷ್ಟೇ ಇದೆ ಎಂಬುದನ್ನವರು ಘೋಷಿಸಿದ್ದಾರೆ. ಇಷ್ಟಕ್ಕೂ, ಭಟ್ಕಳದ ಬಂದ್‍ನಲ್ಲಿ ಭಾಗವಹಿಸಿದ್ದು ಮುಸ್ಲಿಮರು ಮಾತ್ರ ಅಲ್ಲ. ಆ ಬಂದ್‍ಗೆ ಹಿಂದೂ-ಮುಸ್ಲಿಮ್ ಎಂಬ ಬೇಧವೂ ಇರಲಿಲ್ಲ. ಆದ್ದರಿಂದಲೇ ಈ ಬಂದ್ ಚರ್ಚೆಗೆ ಯೋಗ್ಯ ಅನ್ನಿಸುವುದು. ಅಂದಹಾಗೆ, ಮಾಧ್ಯಮಗಳಲ್ಲಿರುವವರೇನೂ ಅನ್ಯಗ್ರಹ ಜೀವಿಗಳು ಅಲ್ಲವಲ್ಲ. ಸುಳ್ಳು, ಮೋಸ, ವಂಚನೆ, ಪಕ್ಷಪಾತ, ದರೋಡೆ.. ಮುಂತಾದ ಪದಗಳಿಗೆಲ್ಲಾ ಪತ್ರಕರ್ತರ ಡಿಕ್ಷನರಿಯಲ್ಲಿ 'ಗೌರವಾರ್ಹ ಪದಗಳು' ಎಂಬ ಅರ್ಥ ಇರಲು ಸಾಧ್ಯವೂ ಇಲ್ಲ. ಪತ್ರಕರ್ತನೂ ಸಮಾಜ ಜೀವಿ. ಸಂಪಾದಕನಾಗಲಿ, ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಮಿಕನಾಗಲಿ, ಓದುಗನಾಗಲಿ.. ಎಲ್ಲರೂ ಸಮಾಜದ ಒಂದು ಭಾಗವೇ. ಸಮಾಜದ ಪ್ರತಿ ಆಗು-ಹೋಗುಗಳೊಂದಿಗೆ  ಅವರಿಗೂ  ಸಂಬಂಧ ಇರುತ್ತದೆ. ಒಂದು ರೀತಿಯಲ್ಲಿ ಓದುಗರಿಗಿಂತ ಹೆಚ್ಚಿನ ಹೊಣೆಗಾರಿಕೆ ಇರುವುದು ಮಾಧ್ಯಮದವರ ಮೇಲೆ. ಪತ್ರಿಕೆಯ ಮುಖಪುಟ ಬಿಡಿ, ಒಳಪುಟದಲ್ಲಿ ಪ್ರಕಟವಾಗುವ ಸಣ್ಣದೊಂದು ಸುದ್ದಿಗೂ ಒಂದು ಊರನ್ನೇ ಹೊತ್ತಿಸಿ ಬಿಡುವ ಸಾಮರ್ಥ್ಯ  ಇರುತ್ತದೆ. ಟಿ.ವಿ.ಯಲ್ಲಿ ಬಿತ್ತರವಾಗುವ ಬ್ರೇಕಿಂಗ್ ನ್ಯೂಸ್‍ಗೆ ಹಲವರ ಬದುಕನ್ನೇ ಕಿತ್ತುಕೊಳ್ಳುವುದಕ್ಕೂ ಸಾಧ್ಯವಿರುತ್ತದೆ. ಹೀಗಿರುವಾಗ ಮಾಧ್ಯಮಗಳು ವಹಿಸಬೇಕಾದ ಎಚ್ಚರವಾದರೂ ಎಂಥದ್ದು?
      ಪತ್ರಿಕೆಗಳ ವಿಶ್ವಾಸಾರ್ಹತೆ ಇವತ್ತು ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ಓದುಗನೊಬ್ಬ ಒಂದು ಸುದ್ದಿಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಪತ್ರಿಕೆಗಳನ್ನು ಓದುವಷ್ಟು. ವಿಶೇಷ ಏನೆಂದರೆ ಕಳ್ಳ, ದರೋಡೆಕೋರ, ಅತ್ಯಾಚಾರಿಯೆಲ್ಲ ಒಂದು ಬಗೆಯ ಮುಚ್ಚುಮರೆಯೊಂದಿಗೆ ಸಮಾಜದಲ್ಲಿ ಬದುಕುತ್ತಿರುತ್ತಾರೆ. ತಾವು ಏನು ಮಾಡಿದ್ದೇವೋ ಅವೆಲ್ಲ ಗೌರವಾರ್ಹವಲ್ಲ ಎಂಬುದು ಅವರನ್ನು ಚುಚ್ಚುತ್ತಿರುತ್ತದೆ. ಆದರೆ ಪತ್ರಿಕೆಗಳಿಗೆ (ಪತ್ರಕರ್ತರಿಗೆ) ಇಂಥ ಪಾಪ ಪ್ರಜ್ಞೆಯೂ ಇಲ್ಲ. ಪತ್ರಿಕೆಯೊಂದು ಪರಮ ಸುಳ್ಳನ್ನು ಮುದ್ರಿಸಿದರೂ ಸುಭಗನಂತೆ ಫೋಸು ಕೊಡುವುದೇ ಹೆಚ್ಚು. ಇಂಥ ವೈರುಧ್ಯವನ್ನು ಸಮಾಜ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು?ಸಮಾಜದ ಆರೋಗ್ಯವನ್ನು ಕೆಡಿಸಬಲ್ಲಂಥ  ಸುದ್ದಿಯನ್ನು ಪ್ರಕಟಿಸಿಯೂ ಕನಿಷ್ಠ ಕ್ಷಮೆ ಯಾಚಿಸುವ ಸವ್ ಜನ್ಯವೂ  ಇಲ್ಲ ಅಂದರೆ ಏನರ್ಥ? ನಿಜವಾಗಿ, ಸುಳ್ಳು ಹೇಳುವ ವ್ಯಕ್ತಿಗೂ ಸುಳ್ಳು ಬರೆಯುವ ಪತ್ರಿಕೆಗೂ ಯಾವ ವ್ಯತ್ಯಾಸವೂ ಇಲ್ಲ. ಕೋಮುವಾದಿ ವ್ಯಕ್ತಿಗೂ ಪತ್ರಿಕೆಗೂ ಖಂಡಿತ ಅಂತರವಿಲ್ಲ. ಒಂದು ವೇಳೆ ಸುಳ್ಳನಿಗೆ ಸಮಾಜದಲ್ಲಿ ಯಾವ ಸ್ಥಾನವಿದೆಯೋ ಅದೇ ಸ್ಥಾನವನ್ನು ಸುಳ್ಳು ಬರೆಯುವ ಪತ್ರಿಕೆಗಳಿಗೂ ಸಮಾಜ ನೀಡತೊಡಗಿದರೆ ಖಂಡಿತ ಅದು ತನ್ನನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಿದೆ.
     ಅಂದಹಾಗೆ, ಪತ್ರಿಕೆಗಳಿಗೂ ಕೆಲವು ಹೊಣೆಗಾರಿಕೆಗಳಿವೆ. ಪ್ರತಿದಿನ ಹದಿನಾಲ್ಕೋ ಹದಿನೆಂಟೋ ಪುಟಗಳನ್ನು ತಯಾರಿಸುವ ಸಂಪಾದಕೀಯ ಬಳಗಕ್ಕೂ ಕೆಲವು ಜವಾಬ್ದಾರಿಗಳಿವೆ. ಪುಟಗಳನ್ನು ಅಕ್ಷರಗಳಿಂದ ತುಂಬಿಸುವುದಷ್ಟೇ ಪತ್ರಿಕೋದ್ಯಮ ಅಲ್ಲ. ಆ ಪ್ರತಿ ಅಕ್ಷರವೂ ಸಮಾಜದ ಆರೋಗ್ಯವನ್ನು ಕಾಪಾಡುವಷ್ಟು ಸತ್ಯ, ನ್ಯಾಯ ನಿಷ್ಠವೂ ಆಗಿರಬೇಕಾಗುತ್ತದೆ. ಎಲ್ಲೋ ಕಂಪ್ಯೂಟರಿನ ಮುಂದೆ ಕೂತು ಎಲೆಕ್ಟ್ರಿಕ್ ವಯರುಗಳನ್ನು ಜಿಲೆಟಿನ್ ಕಡ್ಡಿಗಳೆಂದೂ ಪಟಾಕಿಯನ್ನು ಬಾಂಬೆಂದೂ ಬರೆಯುವುದು ಸುಲಭ. ಮೂಲಗಳು ತಿಳಿಸಿವೆ ಎಂಬ ಎಂಟು ಅಕ್ಷರಗಳನ್ನು ಬಳಸಿ ಭಯೋ ತ್ಪಾದನೆಯ ಸ್ಕ್ರಿಪ್ಟ್ ರಚಿಸುವುದೇನೂ ಕಷ್ಟವಲ್ಲ.  ಆದರೆ, ಆ ಸುದ್ದಿ ಮಾಡುವ ಪರಿಣಾಮವೇನು ಸಣ್ಣದೇ? ಭಯೋತ್ಪಾದನೆಯ ಹೆಸರಲ್ಲಿ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಯುವಕರ ಬಂಧನವಾದಾಗ ಒಂದೆರಡು ಪತ್ರಿಕೆಗಳನ್ನು ಬಿಟ್ಟರೆ ಉಳಿದಂತೆ ಎಲ್ಲ ಕನ್ನಡ ಪತ್ರಿಕೆಗಳೂ ಧಾರಾಳ ಕತೆಗಳನ್ನು ಬರೆದಿದ್ದವು. ಅವರಲ್ಲಿ ಸಿಕ್ಕಿರುವುದು ಕೇವಲ ಎರಡೇ ಎರಡು ಬಂದೂಕುಗಳಾದರೂ, ಕೃಷ್ಣರಾಜ ಸಾಗರ ಅಣೆಕಟ್ಟು  ಸ್ಫೋಟ ಸಹಿತ ಹತ್ತಾರು ಭಯಾನಕ ವಿಧ್ವಂಸಕ ಕೃತ್ಯಗಳ ಪಟ್ಟಿಯನ್ನು ತಯಾರಿಸಿ ಅವು ಓದುಗರ ಮುಂದಿಟ್ಟಿದ್ದುವು. ಬಾಂಬು ಬಿಡಿ ಸಣ್ಣದೊಂದು ಗರ್ನಾಲನ್ನೂ ಸಂಗ್ರಹಿಸಿಡದ ಈ ಯುವಕರು ಕೃಷ್ಣರಾಜ ಸಾಗರವನ್ನು ಹೇಗೆ ಸ್ಫೋಟಿಸುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಕತೆ ಬರೆದ ಪತ್ರಕರ್ತರಿಗಿರಲಿಲ್ಲ. ಆದ್ದರಿಂದಲೇ ಭಟ್ಕಳದ ಬಂದ್ ಇಷ್ಟವಾಗುವುದು. ಅಲ್ಲಿನ ಓದುಗರು ಅಕ್ಷರ ಭಯೋತ್ಪಾದನೆಯ ವಿರುದ್ಧ ಹೊಸದೊಂದು ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ತಮ್ಮ ಪ್ರಸಾರ ಸಂಖ್ಯೆಯನ್ನೋ ಇನ್ನಾವುದನ್ನೋ ಗುರಿಯಿರಿಸಿಕೊಂಡು ಪರಮ ಸುಳ್ಳನ್ನು ಸುದ್ದಿಯ ಮುಖವಾಡದಲ್ಲಿ ಪ್ರಕಟಿಸುವ ಪತ್ರಿಕೆಗಳಿಗೆ ಅವರು ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಇಂಥ ಪ್ರತಿಭಟನೆಗಳು ಎಲ್ಲೆಡೆ ನಡೆಯಬೇಕು. ಜಾಗೃತ ಓದುಗರಿದ್ದಾಗ ಮಾತ್ರ ಮೌಲ್ಯ ನಿಷ್ಠ ಸುದ್ದಿಗಳು ಪ್ರಕಟವಾಗಲು ಸಾಧ್ಯ. ಆದ್ದರಿಂದ ಭಯೋತ್ಪಾದಕ ಪತ್ರಿಕೆಗಳನ್ನು ಕಂಬಿಯ ಹಿಂದಕ್ಕೆ ಕಳುಹಿಸುವ ಹೊಣೆಗಾರಿಕೆಯನ್ನು ಓದುಗರೇ ವಹಿಸಿಕೊಳ್ಳಲಿ.

1 comment:

  1. ಒಂದು ಪತ್ರಿಕಾ ಬರಹದ ವಿರುದ್ಧ ಊರಿನ ಎಲ್ಲ ಸಮುದಾಯದವರು ಬಂದ್ ಆಚರಿಸಿದ್ದು ನಿಜಕ್ಕೂ ಇದೇ ಮೊದಲು ಅನ್ನಬಹುದು. ಅವರು ಹಾಗೆ ಮಾಡಬೇಕಾದರೆ ಆ ಪತ್ರಿಕೆಯ ಬರಹವು ಎಷ್ಟು ಮಂದಿಯ ಮನಸ್ಸನ್ನು ನೋಯಿಸಿರಬಹುದು? ಈ ಬಂದ್ ಕುರಿತಂತೆ ರಾಜ್ಯದ ಪ್ರತಿಷ್ಟಿತ ವಾರಪತ್ರಿಕೆಯಾದ ಸನ್ಮಾರ್ಗವು ಸಂಪಾದಕೀಯ ಬರೆದು ತಾನು ಸಹ ಆ ಮುರಿದ ಮನಸ್ಸಿನ ಜನರೊಂದಿಗೆ ಇದ್ದೇನೆ ಎನ್ನುವುದು ಸಾಬೀತು ಮಾಡಿದೆ. ಒಂದು ಸುದ್ದಿಯ ಕುರಿತಂತೆ ಯಾವಾಗ ಸಂಪಾದಕೀಯ ಬರೆಯಲಾಗುತ್ತದೂ ಆ ಸುದ್ದಿ ಎಷ್ಟೊಂದು ಮಹತ್ವದ್ದು ಎನ್ನುವುದು ಸಾಬೀತಾಗುತ್ತದೆ.
    ನಿಜಕ್ಕೂ ಭಟ್ಕಳದಲ್ಲಿ ಅಂತಹದ್ದೇನೂ ಇಲ್ಲವೇ ಇಲ್ಲ. ಇದನ್ನು ಅಲ್ಲಿದ್ದು ಕಣ್ಣಾರೆ ಕಂಡ ಅಧಿಕಾರಿಗಳೇ ಹೇಳುತ್ತಾರೆ. ಮತ್ತು ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳೆ ಹಲವು ಬಾರಿ ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೂ ಒಂದು ಸುಳ್ಳನ್ನು ಸಾವಿರ ಸಲ ಹೇಳಿ ಅದನ್ನು ಸತ್ಯವನ್ನಾಗಿ ಮಾಡಲು ಹೊರಟಿರುವ ಮಾಧ್ಯಮಗಳ ನಿಲುವಿಗೆ ಏನೆನ್ನಬೇಕು ತಿಳಿಯದಾಗಿದೆ. ಭಟ್ಕಳ ಹಿಂದಿನಿಂದಲೂ ಮಾಧ್ಯಮಗಳ ವಕ್ರ ದೃಷ್ಟಿಗೆ ಬೀಳುತ್ತ ಬಂದಿದೆ. ಒಂದಿಲ್ಲೊಂದು ರೀತಿಯಲ್ಲಿ ಇದನ್ನು ಎತ್ತಿಕಟ್ಟಲು ತುದಿಗಾಲ ಮೇಲೆ ನಿಂತಿವೆ ನಮ್ಮ ಮಾಧ್ಯಮಗಳು. ಉಗ್ರ ಹೆಸರಿನಲ್ಲಿ ಭಟ್ಕಳವನ್ನು ಆಗಾಗ ಎಳೆದು ತರದಿದ್ದರೆ ಈ ವರದಿಗಾರ ಮಹಾಶಯರಿಗೆ ಊಟ ಸೇರುವುದಿಲ್ಲ ಅನ್ನಿಸುತ್ತೆ ಆದ್ದರಿಂದಲೆ ಪದೇ ಪದೇ ಇಲ್ಲಿ ಏನು ಇಲ್ಲ ಎಂದರೂ ಇಲ್ಲಿ ಆರ್.ಡಿ.ಎಕ್ಸ್ ಖಾರ್ಕನೆ ಇದೆ. ಇಲ್ಲಿನ ಮಸೀದಿಗಳಲ್ಲಿ ಬಾಂಬುಗಳು ಸಶಸ್ತ್ರಗಳು ತಯಾರಾಗುತ್ತವೆ ಎಂಬೆಲ್ಲ ಸುಳ್ಳು ವರದಿಗಳನ್ನು ಗೀಚಿ ತಮ್ಮ ತಿಟೆ ತೀರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇದರಿಂದ ತಮ್ಮ ಓದುಗರ ಸಂಖ್ಯೆ ಹೆಚ್ಚುವುದು ಎಂಬುದು ಅವರಿಗೆ ತಿಳಿದೇ ಇದೆ. ಆದರೆ ಓದುಗ ಈಗ ಪ್ರಜ್ಞವಂತನಾಗಿದ್ದಾನೆ. ಅವನಿಗೆ ಇಂತಹ ಸುಳ್ಳಿನ ಕಥೆಗಳನ್ನು ಓದಲು ಸಮಯ ಇಲ್ಲ. ಮತ್ತು ಈಗ ಅದನ್ನು ಜನ ಬಯಸುತ್ತಿಲ್ಲ. ಭಟ್ಕಳ ನಗರ ಹಿಂದೆಯೂ ಶಾಂತಿಯ ನಗರವಾಗಿತ್ತು. ಈಗಲೂ ಶಾಂತಿಯ ನಗರವಾಗಿದೆ. ಯಾರೂ ಏನೇ ಹೇಳಲಿ,ಯಾವುದನ್ನೇ ಬರೆಯಲಿ ಜನ ಮಾತ್ರ ನಂಬುವ ಸ್ಥಿತಿಯಲಿಲ್ಲ.ಸನ್ಮಾರ್ಗದಲ್ಲಿ ಸಂಪಾದಕೀಯ ಬರೆದು ತಾವು ಇಲ್ಲಿನ ಜನತೆಗೆ ಉಪಕಾರ ಮಾಡಿದ್ದೀರಿ ಧನ್ಯವಾದಗಳು.
    ರಮಾ ಭಟ್ಕಳ

    ReplyDelete