Monday 8 October 2012

ಪ್ರೀತಿಸುವ ಮಕ್ಕಳು ಮತ್ತು ಕರೆಂಟ್ ಕೊಡುವ ಹೆತ್ತವರು

ಈ ಸುದ್ದಿಗಳನ್ನು ಓದಿ
1. ಚಿಕ್ಕಮಗಳೂರಿನಲ್ಲಿ ಮೇಲ್ಜಾತಿಯ ಯುವತಿ ಮತ್ತು ಕೆಳಜಾತಿಯ ಯುವಕನ ನಡುವಿನ ಪ್ರೇಮ ಪ್ರಕರಣವು ಮೂವರನ್ನು ಬಲಿ ಪಡೆದಿದೆ.                                               - ಮಾಧ್ಯಮ ಸುದ್ದಿ: 2012 ಅಕ್ಟೋಬರ್ 5
2. ಪರಸ್ಪರ ಪ್ರೀತಿಸುತ್ತಿದ್ದ ದಿಲ್ಲಿಯ ಮೇಲ್ಜಾತಿಯ ಆಶಾ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಯೋಗೀಶ್‍ರನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ ಆಶಾಳ ಹೆತ್ತವರ ಸಹಿತ 5 ಮಂದಿಗೆ ದಿಲ್ಲಿ ಹೈಕೋರ್ಟು ಮರಣ ದಂಡನೆ ವಿಧಿಸಿದೆ.-
        - ಮಾಧ್ಯಮ ಸುದ್ದಿ: 2012, ಅಕ್ಟೋಬರ್ 6
3. ಸಾವಿರ ಗಂಡು ಮಕ್ಕಳಿಗೆ 831 ಹೆಣ್ಣು ಮಕ್ಕಳಷ್ಟೇ ಇರುವ ಹರ್ಯಾಣದಲ್ಲಿ ಕಳೆದ 28 ದಿನಗಳಲ್ಲಿ 9ನೇ ಅತ್ಯಾಚಾರ ಪ್ರಕರಣ ನಡೆದಿದೆ.                                                                                             -                ಮಾಧ್ಯಮ ಸುದ್ದಿ: 2012, ಅಕ್ಟೋಬರ್ 8
ಕಳೆದ ಒಂದು ವಾರದಲ್ಲಿ ನಡೆದ ನೂರಾರು ಅಪರಾಧ ಸುದ್ದಿಗಳಲ್ಲಿ ಇಲ್ಲಿರುವುದು ಮೂರು ಮಾತ್ರ. ಒಂದು ವೇಳೆ ಕಳೆದೊಂದು ವಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ಎಲ್ಲ ಸುದ್ದಿಗಳನ್ನೂ ಒಟ್ಟು ಸೇರಿಸಿ ಪರಿಶೀಲಿಸಿದರೆ ಅವುಗಳಲ್ಲಿ ಅಪರಾಧ ಸುದ್ದಿಗಳ ಸಂಖ್ಯೆಯೇ ಹೆಚ್ಚಿದ್ದೀತು. ನಿಜವಾಗಿ, ಹದಿಹರೆಯದ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವುದಕ್ಕೆ ಪ್ರಚೋದನೆ ಕೊಡುವ ಯಾವುದಕ್ಕೂ ಈ ದೇಶದಲ್ಲಿ ನಿಷೇಧ ಇಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗುವ ವಾರದ ಕತೆ, ಕವಿತೆಗಳಲ್ಲಿ 'ಪ್ರೇಮ' ಇದ್ದೇ ಇರುತ್ತದೆ. ಹೆಣ್ಣು-ಗಂಡು ಪರಸ್ಪರ ಆಕರ್ಷಣೆಗೊಳ್ಳುವುದು, ಪರಾರಿಯಾಗಿಯೋ, ಊರಲ್ಲೇ ಇದ್ದುಕೊಂಡೋ ಮದುವೆಯಾಗುವುದು, ಬಳಿಕ ಆದರ್ಶ ದಂಪತಿಗಳಾಗುವುದೆಲ್ಲಾ ಕತೆ-ಕವನಗಳಲ್ಲಿ ಮಾಮೂಲು. ಇಲ್ಲಿ ಪ್ರಕಟವಾಗುವ ಸಾಕಷ್ಟು ಕಾದಂಬರಿಗಳು ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದೇ ಹದಿ ಹರೆಯವನ್ನು. ಟಿ.ವಿ. ಧಾರಾವಾಹಿಗಳಂತೂ ಪ್ರೀತಿ-ಪ್ರೇಮಗಳ ಹೊರತು ಬದುಕುಳಿಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿಗೆ ತಲುಪಿ ಬಿಟ್ಟಿವೆ. ಸಿನಿಮಾಗಳು  ತಯಾರಾಗುವುದೂ  ಪ್ರೇಮದ ಸುತ್ತಲೇ. ಸಿನಿಮಾ ತಯಾರಾಗುವುದಕ್ಕಿಂತ ಮೊದಲು ನಿರ್ಮಾಪಕ, ನಿರ್ದೇಶಕ, ನಟ-ನಟಿಯರೆಲ್ಲಾ ಪತ್ರಿಕಾಗೋಷ್ಠಿ ಕರೆಯುತ್ತಾರೆ. ಹೀರೋ ಮತ್ತು ಹೀರೋಯಿನ್ ತಂತಮ್ಮ ಪಾತ್ರಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಎಷ್ಟು ಪ್ರೇಮದ ಹಾಡು, ಎಷ್ಟು ವಿರಹದ ಹಾಡು, ಹೀರೋ ಮತ್ತು ಹೀರೋಯಿನ್ ಪರಸ್ಪರ ಪ್ರೇಮಿಗಳಾಗಿ ಕಾಣಿಸಿಕೊಳ್ಳುವ ರೊಮ್ಯಾಂಟಿಕ್ ಹಾಡುಗಳು ಹೇಗಿವೆ ಎಂಬುದನ್ನೆಲ್ಲಾ ಅವರು ವಿವರಿಸುತ್ತಾರೆ. ಇನ್ನು, ಕಾಲೇಜುಗಳ ಕ್ಯಾಂಪಸ್ಸುಗಳು ಹೇಗಿರುತ್ತವೆಯೆಂದರೆ, ಹದಿಹರೆಯವು ರೆಕ್ಕೆಗಳನ್ನು ಕಟ್ಟಿಕೊಂಡು ಹಾರಾಡುವುದಕ್ಕೆ ಧೈರ್ಯ ಮಾಡುವಷ್ಟು ಮುಕ್ತವಾಗಿರುತ್ತವೆ. ಪ್ರೀತಿ-ಪ್ರೇಮಕ್ಕೆ ನಿಷೇಧವಿದೆ ಎಂಬ ಬೋರ್ಡೇನೂ ಅಲ್ಲಿ ಇರುವುದೂ ಇಲ್ಲ. ಜಾತಿಗಳ ಬಗ್ಗೆ, ಪ್ರೀತಿ-ಪ್ರೇಮಗಳ ಬಗ್ಗೆ ಭಯಂಕರ ಕಟ್ಟುನಿಟ್ಟನ್ನು ಹೊಂದಿರುವ ಕುಟುಂಬದ ಮಕ್ಕಳಾಗಲಿ ಅಥವಾ ಈ ಬಗ್ಗೆ ಉದಾರ ನಿಲುವನ್ನು ಹೊಂದಿರುವ ಕುಟುಂಬದ ಮಕ್ಕಳಾಗಲಿ ಬೆಳೆಯುತ್ತಿರುವುದು ಇಂಥ ವಾತಾವರಣದಲ್ಲೇ. ಆ ಮಕ್ಕಳ ಮುಂದೆ ಶಿಸ್ತಿನ ಅಪ್ಪ ಇರುವಂತೆಯೇ, ಆತ ಯಾವುದನ್ನು ಅಶಿಸ್ತು ಅನ್ನುತ್ತಾನೋ ಅದನ್ನೇ ಆಧುನಿಕತೆ ಎಂದು ಕಲಿಸುವ ಪರಿಸರವೂ ಇರುತ್ತದೆ. ಜಾತಿಯನ್ನೇ ಪ್ರಬಲವಾಗಿ ಪ್ರತಿಪಾದಿಸುವ ತಂದೆಗೆ ಸಡ್ಡು ಹೊಡೆಯುವಂತೆ ಪ್ರೀತಿ-ಪ್ರೇಮದ ಎದುರು ದಯನೀಯವಾಗಿ ಸೋಲೊಪ್ಪುವ ಜಾತಿಯನ್ನು, ವಸ್ತುವಾಗಿಸಿಕೊಂಡು ಪ್ರದರ್ಶನವಾಗುವ ಸಿನಿಮಾಗಳೂ ಇರುತ್ತವೆ. ಹೀಗಿರುವಾಗ ಹದಿಹರೆಯ ಗೊಂದಲಕ್ಕೊಳಗಾಗುವುದನ್ನು ಹೇಗೆ ತಪ್ಪೂಂತ ಹೇಳುವುದು? ಒಂದು ಸಮಾಜ ಆರೋಗ್ಯಪೂರ್ಣ ಆಗಿರಬೇಕಾದರೆ ಆ ಸಮಾಜದ ಯಾವುದಾದರೊಂದು ಅಂಗ ಮಾತ್ರ ಆರೋಗ್ಯಪೂರ್ಣವಾಗಿದ್ದರೆ ಸಾಲುವುದಿಲ್ಲವಲ್ಲ. ನಳ್ಳಿಯಲ್ಲಿ ನೀರು ಬರಬೇಕಾದರೆ ನಳ್ಳಿ ಸಮರ್ಪಕವಾಗಿದ್ದರಷ್ಟೇ ಸಾಕೇ? ಟ್ಯಾಂಕ್‍ನಲ್ಲಿ ನೀರೂ ಇರಬೇಕಲ್ಲವೇ? ಆ ಟ್ಯಾಂಕ್‍ಗೆ ನೀರು ತುಂಬಿಸುವ ವ್ಯವಸ್ಥೆಯೂ ಆಗಬೇಕಲ್ಲವೇ? ಇನ್ನು, ನೀರು ಇದ್ದೂ ವಿದ್ಯುತ್ ಇಲ್ಲದಿದ್ದರೆ ಏನಾದೀತು? ಒಂದು ರೀತಿಯಲ್ಲಿ ಯುವ ಸಮೂಹ ನಮ್ಮದೇ ಸಮಾಜದ ಪ್ರತಿಬಿಂಬಗಳು. ಅನಾರೋಗ್ಯ ಪೀಡಿತ ಪರಿಸರವನ್ನು ಅವರ ಕೈಗಿತ್ತು, ಆರೋಗ್ಯಪೂರ್ಣ ಫಲಿತಾಂಶವನ್ನು ನಾವು ನಿರೀಕ್ಷಿಸುವುದಾದರೂ ಯಾಕೆ? ಜಾತಿಪದ್ಧತಿಯನ್ನು ಗೌರವ ಪೂರ್ವಕವಾಗಿ ಕಾಣುವ ಸ್ವಾಮೀಜಿಗಳು ನಮ್ಮ ನಡುವೆ ಇದ್ದಾರೆ. ಜಾತಿ ಪದ್ಧತಿಯ ಪ್ರಬಲ ಸಂಕೇತದಂತಿರುವ ಮಡೆ ಸ್ನಾನದಂಥ ಆಚರಣೆಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸರಕಾರಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕೋರ್ಟು ಶಿಕ್ಷೆ ವಿಧಿಸುವುದರಿಂದ ಯಾವ ಸೂಚನೆ ರವಾನೆಯಾಗುತ್ತದೆ?
         ನಿಜವಾಗಿ, ಅಪರಾಧಗಳಲ್ಲಿ ಯಾರು ಪಾಲುಗೊಳ್ಳುತ್ತಾರೋ ಅವರಷ್ಟೇ ಆ ಅಪರಾಧಕ್ಕೆ ಕಾರಣ ಆಗಿರುವುದಲ್ಲ. ಅವರ ಹಿಂದೆ ಸಮಾಜ ಇರುತ್ತದೆ. ಆ ಸಮಾಜದ ಭಾಗವಾಗಿರುವ ಸಿನಿಮಾ, ಪತ್ರಿಕೆ, ಟಿ.ವಿ. ಮುಂತಾದುವುಗಳಿರುತ್ತವೆ. ದುರಂತ ಏನೆಂದರೆ, ಯಾವುದೋ ಒಂದು ಸಿನಿಮಾದಿಂದಲೋ ಕಾದಂಬರಿಯಿಂದಲೋ ಪ್ರಚೋದಿತಗೊಂಡು ಹೆಣ್ಣು-ಗಂಡು ಪರಸ್ಪರ ಪ್ರೀತಿಸುತ್ತಾರೆ. ಆದರೆ ಜಾತಿ ಸಂಪ್ರದಾಯವನ್ನು ಬಲವಾಗಿ ಆಚರಿಸಿಕೊಂಡು ಬರುವ ಹೆತ್ತವರು ಕುಪಿತಗೊಂಡು ಆ ಪ್ರೇಮವನ್ನು  ವಿದ್ಯುತ್ ಹರಿಸಿ ಸಾಯಿಸುತ್ತಾರೆ. ಆದರೆ ಕೋರ್ಟು ಶಿಕ್ಷೆ ವಿಧಿಸುವುದು ಆ ಹೆತ್ತವರಿಗೇ ಹೊರತು ಆ ಸಿನಿಮಾಕ್ಕೋ ಅಥವಾ ಜಾತಿಯ ಪ್ರತಿಪಾದಕರಿಗೋ ಅಲ್ಲ. ಅಂದಹಾಗೆ, ಮದ್ಯಪಾನ ಮಾಡುವುದು ಅಥವಾ ಮದ್ಯ ಮಾರಾಟ ಮಾಡುವುದೆಲ್ಲ ಈ ದೇಶದಲ್ಲಿ ಅಪರಾಧ ಅಲ್ಲ. ಆದರೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಅಮಲೇರಿ ಕೊಲೆ ಕೃತ್ಯದಲ್ಲಿ ಭಾಗಿಯಾದರೆ ಆತ ಅಪರಾಧಿ ಎನಿಸಿಕೊಳ್ಳುತ್ತಾನಲ್ಲದೆ ಕೋರ್ಟು ಆತನಿಗೆ ಶಿಕ್ಷೆ ವಿಧಿಸುತ್ತದೆ. ವಿಶೇಷ ಏನೆಂದರೆ, ಆತನನ್ನು ಅಪರಾಧಕ್ಕೆ ಪ್ರಚೋದಿಸಿದ್ದೇ ಮದ್ಯಪಾನ. ಹಾಗಿದ್ದೂ ಕೋರ್ಟು ಶಿಕ್ಷೆ ವಿಧಿಸುವಾಗ ಆತನನ್ನು ಮಾತ್ರ ಪರಿಗಣಿಸುತ್ತದೆಯೇ ಹೊರತು ಮದ್ಯ ಸರಬರಾಜು ಮಾಡಿದ ಸರಕಾರವನ್ನಲ್ಲ. ಇಂಥ ಗೊಂದಲಗಳುಳ್ಳ ಸಮಾಜದಲ್ಲಿ ಮರ್ಯಾದಾ ಹತ್ಯೆಗಳು, ಅತ್ಯಾಚಾರಗಳೆಲ್ಲ ಇಲ್ಲವಾಗುವುದು ಹೇಗೆ? ಸಮಾಜದ ಒಟ್ಟು ರಚನೆಯೇ ಗೊಂದಲಗಳ ಮೇಲಿದೆ. ಆದ್ದರಿಂದ ಮೊತ್ತಮೊದಲು ಈ ಗೊಂದಲಗಳ ನಿವಾರಣೆಯ ಕುರಿತಂತೆ ಸಾರ್ವಜನಿಕ ಚರ್ಚೆಗಳು ನಡೆಯಬೇಕು. ಅಂದಹಾಗೆ, ಅನಾರೋಗ್ಯಪೂರ್ಣ ಸಮಾಜವನ್ನು ಕಟ್ಟಿ, ಆರೋಗ್ಯಪೂರ್ಣ ಸುದ್ದಿಗಳನ್ನು ನಾವು ನಿರೀಕ್ಷಿಸುವುದಕ್ಕೆ ಯಾವ ಅರ್ಥವೂ ಇಲ್ಲ..

No comments:

Post a Comment