Tuesday 27 November 2012

ರೆಸ್ಟೋರೆಂಟ್ ಗಳೆಂಬ ಮನೆಯಲ್ಲಿ ಹೆತ್ತವರು ಮತ್ತು ಮಕ್ಕಳು


  ಈ ಪತ್ರಿಕಾ ಸುದ್ದಿಗಳನ್ನು ಓದಿ
1. ಪ್ರೀತಿಸಿದ ಯುವಕನ ಜೊತೆ ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧವೆಯಾದ ತನ್ನ ತಾಯಿಯನ್ನು ಪ್ರಿಯಕರನ ಜೊತೆ ಸೇರಿ ಮಗಳು ಕೊಂದು ಹಾಕಿದ ಘಟನೆ ರೋಹ್ಟಕ್‍ನಲ್ಲಿ ನಡೆದಿದೆ. ಯುವತಿಗೆ 16 ವರ್ಷ.                             - 2012 ನವೆಂಬರ್ 23
2. ಪತ್ನಿಯೊಂದಿಗೆ ಜಗಳವಾಡಿದ ಪತಿ, ತನ್ನ ಮೊವರು ಪುಟ್ಟ ಹೆಣ್ಣು ಮಕ್ಕಳನ್ನು ಗುಂಡಿಟ್ಟು ಕೊಂದಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಆರೋಪಿ ಮಾಜಿ ಯೋಧ.     - 2012 ನವೆಂಬರ್ 23
3. ಎಲ್‍ಕೆಜಿ ವಿದ್ಯಾರ್ಥಿಯಾಗಿರುವ 4 ವರ್ಷದ ಬಾಲಕನಿಗೆ ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಶಿಕ್ಷಕಿಯೊಬ್ಬಳು ಮೊತ್ರ ಕುಡಿಸಿದ ಘಟನೆ ನಡೆದಿದೆ.            - 2012 ನವೆಂಬರ್ 23
  ಕೇವಲ ಒಂದೇ ದಿನ ವರದಿಯಾದ ಘಟನೆಗಳಿವು. ಇಲ್ಲಿರುವ ಸುದ್ದಿಗಳಿಗೆ ವ್ಯಾಖ್ಯಾನದ ಅಗತ್ಯವಿಲ್ಲ. ರಾಜಕೀಯ, ಸಿನಿಮಾ ಅಥವಾ ಕ್ರೀಡಾ ಸುದ್ದಿಗಳನ್ನು ಓದಿದಂತೆ ಈ ಮೇಲಿನ ಸುದ್ದಿಗಳನ್ನು ಓದಿ ಮುಗಿಸುವುದಕ್ಕೆ ಸಾಧ್ಯವೂ ಆಗುತ್ತಿಲ್ಲ. ಅಷ್ಟಕ್ಕೂ, ಇಂಥ ಘಟನೆಗಳು ಇವತ್ತಿನ ದಿನಗಳಲ್ಲಿ ಯಾವಾಗಲಾದರೊಮ್ಮೆ ನಡೆಯುವ ಅಪರೂಪದ ಘಟನೆಗಳಾಗಿಯೇನೂ ಉಳಿದಿಲ್ಲವಲ್ಲವೇ? ದುರಂತ ಏನೆಂದರೆ, ಪರಿಸ್ಥಿತಿ ಈ ಮಟ್ಟದಲ್ಲಿದ್ದರೂ ಸಾರ್ವಜನಿಕ ಚರ್ಚೆಯಲ್ಲಿ ಇವು ಅಷ್ಟಾಗಿ ಪರಿಗಣಿತ ವಾಗುತ್ತಿಲ್ಲ ಅನ್ನುವುದು. ರಾಜಕೀಯ ಇಲ್ಲವೇ ಕೋಮು ವಿಷಯಗಳಿಗಾಗಿ ಇಲ್ಲಿ ಎಷ್ಟೆಷ್ಟು ವೇದಿಕೆಗಳು ನಿರ್ಮಾಣವಾಗುತ್ತಿವೆಯೋ ಅದರ 5 ಶೇಕಡದಷ್ಟು ವೇದಿಕೆಗಳೂ ಇಂಥ ವಿಷಯಗಳಿಗಾಗಿ ಸಿದ್ಧವಾಗುತ್ತಿಲ್ಲ ಅನ್ನುವುದು. ಒಂದು ರೀತಿಯಲ್ಲಿ, ಮನುಷ್ಯ ಸಂಬಂಧಗಳನ್ನು ಬೆಳೆಸುವಲ್ಲಿ, ಮೌಲ್ಯಗಳನ್ನು ಹೊಸ ತಲೆಮಾರಿಗೆ ವರ್ಗಾಯಿಸುವಲ್ಲಿ ಗಂಭೀರ ನಿರ್ಲಕ್ಷ್ಯವನ್ನು ತೋರುತ್ತಾ, ರಾಜಕೀಯದಂಥ ಜನಪ್ರಿಯ ಸುದ್ದಿಗಳ ಸುತ್ತ ಅಗತ್ಯಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೇನೋ ಎಂಬ ಅನುಮಾನ ಮೂಡುತ್ತಿದೆ.
  ಒಂದು ಮಗು, ತಾಯಿಯನ್ನು ಕೊಲೆ ಮಾಡುವುದು ಬಿಡಿ ಕನಿಷ್ಠ ಇತರರು ಆಕೆಯನ್ನು ಟೀಕಿಸುವುದನ್ನೂ ಇಷ್ಟಪಡುವುದಿಲ್ಲ. ತಾಯಿಯಂತೂ ತನ್ನೆಲ್ಲವನ್ನೂ ಮಗುವಿಗಾಗಿ ತ್ಯಾಗ ಮಾಡಲು ಸಿದ್ಧವಾಗುತ್ತಾಳೆ. ನಿಜವಾಗಿ, ರಾತ್ರಿಯ ಸಿಹಿ ನಿದ್ದೆಯ ಸಂದರ್ಭದಲ್ಲಿ ಅತ್ತು, ಕೂಗಿ ರಂಪಾಟ ನಡೆಸುವುದು ಮಕ್ಕಳೇ. ಮಗು ದೊಡ್ಡದಾಗುವ ವರೆಗೆ ತಾಯಿ ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದಿರುತ್ತಾಳೆ. ಮಗು ಮಾಡಿದ ಒಂದೆರಡನ್ನು ಅಸಂಖ್ಯ ಬಾರಿ ಸ್ವಚ್ಚ ಮಾಡಿರುತ್ತಾಳೆ. ಸಾಕಷ್ಟು ದುಡ್ಡು ಸುರಿದು ಮಾರುಕಟ್ಟೆಯಿಂದ ಖರೀದಿಸಿ ತಂದ ಬೆಲೆ ಬಾಳುವ ವಸ್ತುವನ್ನು ಮಗು ಒಡೆದು ಹಾಕುತ್ತದೆ. ಕಿಟಕಿಯ, ಶೋಕೇಸಿನ ಗಾಜು ಪುಡಿ ಮಾಡುತ್ತದೆ. ತಾಯಿ ಇಲ್ಲದ ಸಂದರ್ಭದಲ್ಲಿ ಗೋಡೆಯಲ್ಲಿಡೀ ಬಣ್ಣದ ಚಿತ್ತಾರ ಬಿಡಿಸಿರುತ್ತದೆ.. ಒಂದು ವೇಳೆ ಮಗುವನ್ನು ಕೊಲ್ಲುವ ಉದ್ದೇಶ ತಾಯಿಗಿದ್ದರೆ ಅದಕ್ಕಾಗಿ ನೂರಾರು ಕಾರಣಗಳು ಖಂಡಿತ ಮಗುವಿನಲ್ಲಿದೆ. ಆದರೆ ತಾಯಿ ಎಂದೂ ಅವನ್ನು 'ಕೊಲೆ'ಗಿರುವ ಕಾರಣವಾಗಿ ಪರಿಗಣಿಸುವುದೇ ಇಲ್ಲ. ಆದರೆ ಮಗು ಬೆಳೆಯುತ್ತಾ ಹೋದಂತೆ ತಾಯಿ ಮತ್ತು ಮಕ್ಕಳ ಮಧ್ಯೆ ಇರುವ ಈ ಭಾವನಾತ್ಮಕ ನೆಲೆಗಟ್ಟನ್ನು ಅಷ್ಟೇ ಭಾವ ಪೂರ್ಣವಾಗಿ ವ್ಯಕ್ತಪಡಿಸುವ ಸಂದರ್ಭಗಳು ಕಡಿಮೆಯಾಗುತ್ತಿವೆಯೇನೋ ಅನ್ನಿಸುತ್ತಿದೆ. ಇಂದಿನ ದಿನಗಳಲ್ಲಿ ಮನುಷ್ಯ ಸಂಬಂಧಕ್ಕಿಂತ ಹೆಚ್ಚು ಬೆಲೆಯಿರುವುದು ದುಡ್ಡಿಗೆ. ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಐಟಿ, ಬಿಟಿಗಳು ಯುವ ಸಮೂಹದಲ್ಲಿ ಒಂದು ಬಗೆಯ ಅಮಲನ್ನೂ ಉಂಟುಮಾಡುತ್ತಿವೆ. ರಕ್ತ ಸಂಬಂಧಗಳ ಆಚೆ ಭ್ರಾಮಕ ಜಗತ್ತಿನಲ್ಲಿ ಬದುಕುವ ಒಂದು ಪೀಳಿಗೆಗೆ ಅದು ಜನ್ಮ ಕೊಡುತ್ತಿದೆ. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಹೆತ್ತವರಿಗಿಂತ ಹೆಚ್ಚು ಗೊತ್ತಿರುವುದು ತನಗೇ ಎಂಬ ಹುಂಬ ಆಲೋಚನೆಗಳು ಯುವ ಸಮೊಹವನ್ನು ಸಲ್ಲದ ಕೃತ್ಯಗಳಿಗೆ ಕೈ ಹಾಕುವಂತೆ ಪ್ರಚೋದಿಸುತ್ತಿವೆ. ಅಂದಹಾಗೆ, ಇಲ್ಲಿ ಯುವ ಸಮೊಹವನ್ನಷ್ಟೇ ಆರೋಪಿ ಅನ್ನುವಂತಿಲ್ಲ. ಹೆತ್ತವರಿಗೂ ಶಿಕ್ಷಕರಿಗೂ ಮತ್ತು ಸಾಮಾಜಿಕ ವಾತಾವರಣಕ್ಕೂ ಇದರಲ್ಲಿ ಖಂಡಿತ ಪಾಲು ಇದೆ. ಕೆಲವೊಮ್ಮೆ ಹೆತ್ತವರು ತಮ್ಮ ಕರ್ತವ್ಯವನ್ನು ನಿಭಾಯಿಸದೇ ಇರುವುದೂ ಅದಕ್ಕೆ ಕಾರಣ ಆಗಿರುತ್ತದೆ. ಮೊತ್ರ ಕುಡಿಸುವಂಥ ಮನಸ್ಥಿತಿಯ ಶಿಕ್ಷಕರ ಮಧ್ಯೆ ಬೆಳೆಯುವ ಮಗು, ಆರೋಗ್ಯಪೂರ್ಣ ಆಲೋಚನೆಯನ್ನು ಹೊಂದಬೇಕು ಎಂದು ನಾವು ನಿರೀಕ್ಷಿಸುವುದಾದರೂ ಹೇಗೆ? ತನ್ನ ಮಡಿಲಲ್ಲೇ ಬೆಳೆದ ಮಕ್ಕಳನ್ನು ಓರ್ವ ಅಪ್ಪ ಕೊಲ್ಲುತ್ತಾನೆಂದಾದರೆ, ಆತನನ್ನು 'ಹೆತ್ತವರು' ಎಂಬ ಪಟ್ಟಿಯಲ್ಲಿ ಹೇಗೆ ಸೇರಿಸುವುದು? ಒಂದು ರೀತಿಯಲ್ಲಿ ಅಪ್ಪ, ಅಮ್ಮ ಮತ್ತು ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯಬೇಕೋ ಆ ವಾತಾವರಣ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿದೆ. ಮಕ್ಕಳು ಕೇಳಿದಷ್ಟು ಪಾಕೆಟ್ ಮನಿ ಕೊಡುವುದನ್ನೇ ಜವಾಬ್ದಾರಿ ಅಂದುಕೊಂಡಿರುವ ಹೆತ್ತವರು ಮತ್ತು ಅದನ್ನು ಖರ್ಚು ಮಾಡುವುದನ್ನೇ 'ಕರ್ತವ್ಯ' ಅಂದುಕೊಂಡಿರುವ ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿದೆ.
  ಏನೇ ಆಗಲಿ, ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣವಾಗಬೇಕಾದರೆ ಮೊತ್ತಮೊದಲು ಆರೋಗ್ಯಪೂರ್ಣ ‘ಮನೆಯ’ ನಿರ್ಮಾಣವಾಗಬೇಕು. ಮೌಲ್ಯಗಳನ್ನು ಪಾಲಿಸುವ, ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧದ ಪಾವಿತ್ರ್ಯವನ್ನು ಅರಿತಿರುವ ಮನೆ. ಹೆತ್ತವರು ಮತ್ತು ಮಕ್ಕಳು ಆಧ್ಯಾತ್ಮಿಕವಾಗಿ ತರಬೇತುಗೊಳ್ಳುತ್ತಿರುವ ಮನೆ. ಆದರೆ ಇವತ್ತಿನ ದಿನಗಳಲ್ಲಿ ಮನೆ ಎಂಬುದು ರೆಸ್ಟೋರೆಂಟ್‍ನ ಪಾತ್ರ ವಹಿಸುತ್ತಿದೆಯೇ ಹೊರತು ಮನೆಯ ಪಾತ್ರ ಅಲ್ಲ. ಆದ್ದರಿಂದಲೇ, ಮನೆಗಳಿಂದ ಬರಬಾರದ ಸುದ್ದಿಗಳು ಬರತೊಡಗಿವೆ. ಹೀಗಿರುವಾಗ, ಸಾರ್ವಜನಿಕವಾಗಿ ನಾವು ರಾಜಕೀಯವನ್ನೋ ಕ್ರೀಡೆಯನ್ನೋ ಗಂಭೀರ ಚರ್ಚೆಗೊಳಪಡಿಸುತ್ತಾ ಕೂತರೆ 'ಮನೆ' ಸುರಕ್ಷಿತವಾಗುವುದಾದರೂ ಹೇಗೆ? ನಿಜವಾಗಿ, ಇವತ್ತು ಹೆತ್ತವರು, ಮಕ್ಕಳು, ಕುಟುಂಬ.. ಮುಂತಾದ ವಿಷಯಗಳ ಸುತ್ತ ಹೆಚ್ಚು ಹೆಚ್ಚು ಚರ್ಚೆಗಳಾಗಬೇಕಾದ ಅಗತ್ಯ ಇದೆ. ಇಂದಿನ ಯುವ ಪೀಳಿಗೆಯು  ತಮ್ಮ ಹೆತ್ತವರ ಜೊತೆಗಿರುವ ಹಕ್ಕು-ಬಾಧ್ಯತೆಗಳನ್ನು ತಿಳಿಯುತ್ತಾ, ಆ ಬಗ್ಗೆ ಬದ್ಧತೆಯನ್ನು ಪ್ರಕಟಿಸುತ್ತಾ ಬೆಳೆಯಬೇಕಾದ ತುರ್ತಿದೆ. ಇಲ್ಲದಿದ್ದರೆ ಸಾಮಾಜಿಕ ನೆಲೆಗಟ್ಟೇ ಕುಸಿದು ಹೋದೀತು.

Monday 19 November 2012

ಅಡ್ಡಾದಿಡ್ಡಿ ಚಲಿಸಿ ಹೊರಟುಹೋದ ಠಾಕ್ರೆ


‘ದ್ವಂದ್ವ' ಎಂಬ ಪದಕ್ಕೆ ಅತ್ಯಂತ ಒಪ್ಪುವ ವ್ಯಕ್ತಿತ್ವ ಬಾಳಾ ಠಾಕ್ರೆಯದ್ದು. ‘ಫ್ರಿಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಬದುಕನ್ನು ಆರಂಭಿಸಿದ ಅವರು, ಬಳಿಕ ವ್ಯಂಗ್ಯ ಚಿತ್ರಕಾರರಿಗೇ ವಸ್ತುವಾಗಿ ಬಿಟ್ಟರು. ಜಲೀಲ್ ಪಾರ್ಕರ್ ಎಂಬ ಹೃದಯತಜ್ಞನನ್ನು ತನ್ನ ಖಾಸಗಿ ವೈದ್ಯರಾಗಿ ಇಟ್ಟುಕೊಂಡೇ, ಜಲೀಲ್‍ರ ಸಮುದಾಯದ ಮೇಲೆ ಕಟುವಾಗಿ ವರ್ತಿಸಿದರು. ಪಾಕ್ ಕ್ರಿಕೆಟಿಗ ಮಿಯಾಂದಾದ್‍ರನ್ನು ತನ್ನ ಮನೆಯಲ್ಲಿ ಕೂರಿಸಿ ಸತ್ಕರಿಸಿದ್ದೂ ಅವರೇ. ವಾಂಖೇಡೆ ಮೈದಾನದ ಕ್ರಿಕೆಟ್ ಪಿಚ್ ಅನ್ನು ತನ್ನ ಬೆಂಬಲಿಗರ ಮೂಲಕ ಅಗೆಸಿದ್ದೂ ಅವರೇ. ಒಂದು ರೀತಿಯಲ್ಲಿ ತನ್ನ ದ್ವಂದ್ವತನದಿಂದಾಗಿ ಬಾಳಾ ಠಾಕ್ರೆ ಎಂಬ ಮನುಷ್ಯ ಉದ್ದಕ್ಕೂ ಸುದ್ದಿಗೊಳಗಾಗುತ್ತಲೇ ಬದುಕಿದರು.
    ಸಾವು ಎಂಬ ಎರಡಕ್ಷರಕ್ಕೆ 'ಬದುಕು' ಎಂಬ ಅರ್ಥ ಇಲ್ಲ. ಸಾವಿನ ಬಳಿಕ ಏನು, ಪುನರ್ಜನ್ಮ ಇದೆಯೋ ಇಲ್ಲವೋ.. ಮುಂತಾದ ಚರ್ಚೆಗಳೆಲ್ಲ ಸಮಾಜದಲ್ಲಿ ಆಗಾಗ ಕಾಣಿಸಿಕೊಳ್ಳುವುದಕ್ಕೆ ಕಾರಣ ಕೂಡಾ ಸಾವೇ. ಸಾವು ನಿಶ್ಚಿತ ಎಂಬುದು ಸ್ಪಷ್ಟವಾಗಿರುವುದರಿಂದಲೇ ಸಾವಿನ ಬಳಿಕದ ಅವಸ್ಥೆಯ ಕುರಿತಂತೆ ಪ್ರಶ್ನೆಗಳೇಳುವುದು. ನಿಜವಾಗಿ ಕೆಲವರ ಸಾವು ಯಾವ ಮಟ್ಟದಲ್ಲಿರುತ್ತದೆಂದರೆ, ಅದು ಚರ್ಚೆಗೆ ಒಳಗಾಗಲೇ ಬೇಕು ಅನ್ನುವಷ್ಟು. ಠಾಕ್ರೆಯ ಸಾವು ಸಾಮಾಜಿಕವಾಗಿ ಅಂಥದ್ದೊಂದು ತುರ್ತನ್ನು ಸೃಷ್ಟಿಸಿಬಿಟ್ಟಿದೆ. ಈಗಾಗಲೇ ಮಾಧ್ಯಮಗಳಲ್ಲಿ ಠಾಕ್ರೆಯ ಕುರಿತಂತೆ ಧಾರಾಳ ಚರ್ಚೆಗಳಾಗಿವೆ. ಅವರ ಬಗ್ಗೆ ಬಂದಿರುವ ಎಲ್ಲ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ನೋಡಿದರೆ, ಅದು ಠಾಕ್ರೆಗೆ ಖುಷಿ ಕೊಡುವ ರೂಪದಲ್ಲೇನೂ ಇಲ್ಲ. ಠಾಕ್ರೆಯ ಸಾವಿಗೆ ಸಂತಾಪ ಸೂಚಿಸಿದವರು ಕೂಡ ತಮ್ಮ ಭಾಷೆ, ಶೈಲಿಯಲ್ಲಿ ಠಾಕ್ರೆಯನ್ನು ಅನುಸರಿಸಲೂ ಇಲ್ಲ. ಒಂದು ರಾಜಕೀಯ ಪಕ್ಷವನ್ನು ಕಟ್ಟಿ, 86 ವರ್ಷಗಳ ವರೆಗೆ ಅದನ್ನು ಮುನ್ನಡೆಸಿದ ವ್ಯಕ್ತಿಯೊಬ್ಬ ಮರಣ ಹೊಂದುವಾಗ ಕನಿಷ್ಠ ಭಾಷೆಯನ್ನೂ ಇತರರಿಗೆ ಮಾದರಿಯಾಗಿ ಬಿಟ್ಟು ಹೋಗದಿರಲು ಕಾರಣವೇನು? ಅವರ ಅಂತ್ಯ ಸಂಸ್ಕಾರದಲ್ಲಿ ಸೇರಿದ ಬೃಹತ್ ಜನಸ್ತೋಮದಲ್ಲಿ, ಠಾಕ್ರೆ ಏನಾಗಿದ್ದರು ಎಂದು ಕೇಳಿದರೆ ಹೀಗೆಯೇ ಎಂದು ನಿರ್ದಿಷ್ಟವಾಗಿ ಹೇಳಿಬಿಡುವಂಥ ವ್ಯಕ್ತಿತ್ವವೊಂದನ್ನು ಠಾಕ್ರೆ ಉಳಿಸಿ ಹೋಗಿದ್ದಾರೆಯೇ? ಠಾಕ್ರೆಯವರು ಮಾತಾಡುವಾಗಲೆಲ್ಲ ಈ ದೇಶದ ದೊಡ್ಡದೊಂದು ಜನಸಮೂಹ ಆತಂಕ, ಅನುಮಾನದೊಂದಿಗೇ  ಅವರನ್ನು ನೋಡುತ್ತಿದ್ದುದು ಎಲ್ಲರಿಗೂ ಗೊತ್ತು. ಆ ಆತಂಕ ಎಲ್ಲಿಯ ವರೆಗೆ ಮುಂದುವರಿಯಿತೆಂದರೆ, ಅವರ ಅಂತ್ಯಸಂಸ್ಕಾರದ ವರೆಗೂ. ಆಗ ವಾಹನ ಸಂಚಾರ ಸ್ಥಗಿತಗೊಂಡುವು. ಮುಂಬೈಯಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳೂ ರದ್ದುಗೊಂಡುವು. ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದರು. ಮುಂಬೈಯಲ್ಲಿ ಎಲ್ಲ ಟಿ.ವಿ. ಚಾನೆಲ್‍ಗಳೂ ಇತರೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬರೇ ಠಾಕ್ರೆಯನ್ನಷ್ಟೇ ತುಂಬಿಕೊಂಡವು. ಅಂದಹಾಗೆ, ಇದು ಠಾಕ್ರೆಗೆ ಸಲ್ಲಿಸಲಾದ ಗೌರವವೋ ಅಥವಾ ಅವರ ವ್ಯಕ್ತಿತ್ವದ ಪ್ರತಿಫಲನವೋ?
    ನಿಜವಾಗಿ 86ನೇ ವರ್ಷದಲ್ಲಿ ಸಾವಿಗೀಡಾಗುವಾಗ ಠಾಕ್ರೆಗೆ ಯಾವ ಇಮೇಜು ಇತ್ತೋ, ಅದು ಅವರದೇ ಆಯ್ಕೆ ಎಂದು ಹೇಳುವಂತಿಲ್ಲ. ಯಾಕೆಂದರೆ, ಮುಂಬೈಯ ಕೂಲಿ ಕಾರ್ಮಿಕರನ್ನು ಒಟ್ಟು ಸೇರಿಸಿ, ‘ಕಾರ್ಮಿಕ ಆಂದೋಲನ’ ನಡೆಸುವಾಗ, ಠಾಕ್ರೆಗೆ ಈಗಿನಂಥ ಗುರುತೇನೂ ಇರಲಿಲ್ಲ. ಬರಬರುತ್ತಾ ಅವರನ್ನು ಮನುಷ್ಯ ವಿರೋಧಿಗಳು ಬಳಸಿಕೊಂಡರೇನೋ ಎಂಬ ಅನುಮಾನ ಮೂಡುವುದು ಈ ಕಾರಣದಿಂದಲೇ. ಇದಕ್ಕೆ ಇನ್ನೊಂದು ಕಾರಣ, ಅವರ ದ್ವಂದ್ವ ನಿಲುವು. ಬಹುಶಃ ಈ ದೇಶವನ್ನು ತಮ್ಮ ಕನಸಿನ ಹಿಂದೂ ರಾಷ್ಟ್ರವಾಗಿಸಲು ಪ್ರಯತ್ನಿಸುತ್ತಿರುವ ‘ಪರಿವಾರ’ಗಳ ಕೈಯಲ್ಲಿ ಸಿಲುಕಿ ಠಾಕ್ರೆ ತನ್ನತನವನ್ನು ಕಳಕೊಂಡರೇನೋ ಅನ್ನಿಸುತ್ತಿದೆ. ರಾಜಕೀಯ ಮಹತ್ವಾಕಾಂಕ್ಷೆ ಉಳ್ಳವರನ್ನು ಭೇಟಿಯಾಗಿ ಅವರಲ್ಲಿ ವಿವಿಧ ಭ್ರಮೆಗಳನ್ನು ಹುಟ್ಟಿಸಿ, ತಮಗೆ ಬೇಕಾದಂತೆ ಪರಿವಾರ ದುಡಿಸಿಕೊಳ್ಳುವುದೇನೂ ಗುಟ್ಟಾಗಿಲ್ಲ. ಅಣ್ಣಾ ಹಜಾರೆಯರ ಮೇಲೂ ಇಂಥ ಪ್ರಯತ್ನ ನಡೆದಿದೆ. ಕೇಜ್ರಿವಾಲ್‍ರ ತಂಡದಲ್ಲಿ ಪರಿವಾರದ ಮಂದಿಯಿದ್ದಾರೆ ಎಂಬುದು ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಆದ್ದರಿಂದಲೇ ಕಾರ್ಮಿಕರನ್ನು ಒಟ್ಟು ಸೇರಿಸಿ ಏನೋ ಮಾಡಲು ಹೋದ ಠಾಕ್ರೆ ಎಂಬ ಯುವಕನನ್ನು ದ್ವಂದ್ವ ಮನುಷ್ಯನಾಗಿ ಪರಿವಾರ ಬೆಳೆಸಿರಬಹುದು ಅನ್ನುವ ಅನುಮಾನ ಬಲ ಪಡೆಯುವುದು. ಪರಿವಾರದ ಕನಸಿನ ರಾಷ್ಟ್ರ ಕಟ್ಟುವುದಕ್ಕೆ ಬಿಜೆಪಿ ಒಂದಕ್ಕೇ ಸಾಧ್ಯ ಎಂದು ಅದು ನಂಬಿರುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಆದ್ದರಿಂದಲೇ ಠಾಕ್ರೆಯಂಥ ಹತ್ತಾರು ಮಂದಿಯನ್ನು ಅದು ದೇಶದಲ್ಲೆಡೆ ತಯಾರಿಸುತ್ತಲೇ ಇರುತ್ತದೆ. ವಿವಿಧ ಭ್ರಮೆಗಳನ್ನು ಅವರ ತಲೆಯೊಳಗೆ ಹರಡಿ, ಅವರಿಂದ ವಿವಿಧ ಸಂದರ್ಭಗಳಲ್ಲಿ ಹೇಳಿಕೆಗಳನ್ನು ಹೊರಡಿಸುತ್ತಲೂ ಇರುತ್ತದೆ. ಸುಷ್ಮಾ ಸ್ವರಾಜ್, ಜೇಟ್ಲಿ, ಅಡ್ವಾಣಿಗೆ ಹೇಳಲು ಸಾಧ್ಯವಾಗದಂಥ ಅಗ್ಗದ ಮಾತುಗಳನ್ನು ಠಾಕ್ರೆಯಂಥವರಲ್ಲಿ ಹೇಳಿಸಿ ತಮ್ಮ ವಿಚಾರ ಚರ್ಚೆಯಲ್ಲಿರುವಂತೆ ನೋಡಿಕೊಳ್ಳುತ್ತಲೂ ಇರುತ್ತದೆ.
     ಏನೇ ಆಗಲಿ, ಠಾಕ್ರೆ ಹೊರಟು ಹೋಗಿದ್ದಾರೆ. ಅವರಾಡಿದ ಮಾತು, ವರ್ತನೆಗಳಲ್ಲಿ ಅವರದ್ದೆಷ್ಟು, ಬೇರೆಯವರದ್ದೆಷ್ಟು ಎಂದು ವಿಭಜಿಸಿ ನೋಡುವುದಕ್ಕೆ ಸಮಾಜದ ಬಳಿ ಉಪಕರಣವೇನೂ ಇಲ್ಲ. ಆದರೆ ಕೆಲವೊಮ್ಮೆ ಅವರು ತಮ್ಮ ಮಾತಿನ ಮೂಲಕ ಪರಿವಾರವನ್ನೇ ಮುಜುಗರಕ್ಕೆ ಸಿಲುಕಿಸುತ್ತಿದ್ದುದು ಮತ್ತು ಕೆಲವೊಮ್ಮೆ ನಿಷ್ಠನಂತೆ ವರ್ತಿಸುತ್ತಿದ್ದುದೆಲ್ಲ ಅವರೊಳಗಿನ ಗೊಂದಲವನ್ನು ಸೂಚಿಸುತ್ತದೆ. ಬಹುಶಃ ಇನ್ನೇನೋ ಆಗಲು ಬಯಸಿದ ಅವರನ್ನು ದುರ್ಬಳಕೆಗೆ ಒಳಪಡಿಸಲಾಯಿತೋ ಏನೋ? ಅಂತೂ ‘ರಾಜಕಾರಣ’ ಎಂಬ ವಿಶಾಲ ಹುಲ್ಲುಗಾವಲಿನಲ್ಲಿ ಅಡ್ಡಾದಿಡ್ಡಿ ಚಲಿಸಿ ಒಂದಷ್ಟು ಭೀತಿಯನ್ನು ಹುಟ್ಟಿಸಲು ಯಶಸ್ವಿಯಾಗಿರುವರೆಂಬುದನ್ನು ಬಿಟ್ಟರೆ ಉಳಿದಂತೆ ಗೌರವದಿಂದ ಸ್ಮರಿಸಿಕೊಳ್ಳುವುದಕ್ಕೆ ಠಾಕ್ರೆ ಇಲ್ಲಿ ಏನನ್ನೂ ಉಳಿಸಿ ಹೋಗಿಲ್ಲ. ಇದು ಠಾಕ್ರೆಯ ಸೋಲು ಮಾತ್ರವಲ್ಲ, ಅವರನ್ನು ಅನುಸರಿಸುವವರದ್ದೂ.

Monday 12 November 2012

ಬ್ಯಾಲೆನ್ಸ್ ಡ್ ವರದಿಗಾರರ ಮಧ್ಯೆ ನವೀನ್ ಎಂಬ ಪತ್ರಕರ್ತ..


     ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹೆಚ್ಚಿನೆಲ್ಲ ಪತ್ರಿಕೆಗಳು ಮಂಗಳೂರಿನಲ್ಲಿ ಮೊರು ತಿಂಗಳ ಹಿಂದೆ ನಡೆದ ಹೋಮ್ ಸ್ಟೇ  ದಾಳಿಯ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದುವು. ಸಂಪಾದಕೀಯ ಬರೆದಿದ್ದುವು. ಟಿ.ವಿ. ಚಾನೆಲ್ ಗಳಂತೂ ಸುದ್ದಿ ವಿಶ್ಲೇಷಣೆ, ಚಾವಡಿ ಚರ್ಚೆ, ತಜ್ಞರ ಸಂವಾದ ಸಹಿತ ಹತ್ತಾರು ಗಂಟೆಗಳ ಕಾರ್ಯಕ್ರಮವನ್ನು ವಾರಗಳ ತನಕ ಪ್ರಸಾರ ಮಾಡಿದ್ದುವು. ಆದ್ದರಿಂದಲೇ, ಜನಸಾಮಾನ್ಯರಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ ಆ ಪ್ರಕರಣ ಚರ್ಚೆಗೆ ಒಳಗಾದದ್ದು. ಆರೋಪಿಗಳು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರೇ ಆಗಿದ್ದರೂ, ಅವರ ಬಂಧನವಾದದ್ದು. ಒಂದು ರೀತಿಯಲ್ಲಿ, ಈ 'ನೈತಿಕ ಪೊಲೀಸ್ ಗಿರಿ'ಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದುವು. ಮಂಗಳೂರಿನಲ್ಲಂತೂ  ತಿಂಗಳ ಕಾಲ ಪ್ರತಿಭಟನೆ ನಡೆಯಿತು. ನಿಜವಾಗಿ, 'ನೈತಿಕ ಪೊಲೀಸರು' ಎಂಬ ಈ ಮನುಷ್ಯ ವಿರೋಧಿ ತಂಡದ ವಿರುದ್ಧ ಸಾರ್ವಜನಿಕರು ಸಿಡಿದೇಳುವಂತೆ, ಹೈಕೋರ್ಟೇ ಪ್ರತಿಕ್ರಿಯಿಸುವಂತೆ ಜಾಗೃತಿ ಮೂಡಿಸಿದ್ದು ನವೀನ್ ಸೂರಿಂಜೆ ಎಂಬ ಯುವ ಪತ್ರಕರ್ತ. ಅವರು ಸಕಾಲಕ್ಕೆ ಘಟನಾ ಸ್ಥಳಕ್ಕೆ ತಲುಪಿ ವರದಿ ತಯಾರಿಸದೇ ಇರುತ್ತಿದ್ದರೆ, ಇವತ್ತು ದಾಳಿ ನಡೆಸಿದವರು ಹೀರೋಗಳಾಗಿಯೂ ದಾಳಿಗೊಳಗಾದವರು, ‘ಮಾದಕ ವ್ಯಸನಿಗಳು’, ಹೆಣ್ಣಿನ ಮಾರಾಟಗಾರರು.. ಎಂಬೆಲ್ಲ ಬಿರುದು ಹೊತ್ತು ಖಳರಾಗಿಯೂ ಗುರುತಿಸಿಕೊಳ್ಳುವ ಎಲ್ಲ ಸಾಧ್ಯತೆಯೂ ಇತ್ತು. ಆದರೆ ಕಳೆದ ವಾರ ಈ ಪತ್ರಕರ್ತನನ್ನೇ ಹೋಮ್ ಸ್ಟೇ  ದಾಳಿಯ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಷಾದ ಏನೆಂದರೆ, ಸೂರಿಂಜೆ ಬಹಿರಂಗಪಡಿಸಿದ ಸುದ್ದಿಯನ್ನು ಮೊರು ತಿಂಗಳ ಹಿಂದೆ ಮುಖಪುಟದಲ್ಲಿ ಪ್ರಕಟಿಸಿ, ಅದರ ಆಧಾರದಲ್ಲಿ ವಿಶ್ಲೇಷಣೆ, ಚರ್ಚೆಗಳನ್ನು ನಡೆಸಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದ ಹೆಚ್ಚಿನ ಪತ್ರಿಕೆಗಳು ಈ ಬಂಧನಕ್ಕೆ ಅಷ್ಟು ಮಹತ್ವ ಕೊಟ್ಟಿಲ್ಲ ಅನ್ನುವುದು. ಸೂರಿಂಜೆಯ ಬಂಧನವನ್ನು ಮುಖಪುಟದ ಮುಖ್ಯ ಸುದ್ದಿಯಾಗಿಸುವಲ್ಲಿ ಅವೆಲ್ಲ ಬಹುತೇಕ ವಿಫಲವಾದುವು. ನಿಜವಾಗಿ, ಸೂರಿಂಜೆಯ ಬಂಧನ ವಿರುದ್ಧ ರಾಜ್ಯದ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ. ಪತ್ರಕರ್ತರೇ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಒಂದು ವೇಳೆ ಕನ್ನಡ ಪತ್ರಿಕೆಗಳೆಲ್ಲ ಒಂದು ದಿನದ ಮಟ್ಟಿಗೆ ಕೇಜ್ರಿವಾಲ್ ಗೋ  ಗಡ್ಕರಿಗೋ ಸೋನಿಯಾಗೋ ಒಳಪುಟವನ್ನು ಕರುಣಿಸಿ ಕನಿಷ್ಠ ಈ ಪ್ರತಿಭಟನೆಗಳಿಗೆ ಮುಖಪುಟವನ್ನು ನೀಡುತ್ತಿದ್ದರೆ, ಖಂಡಿತ ಅದು ಕನ್ನಡ ಪತ್ರಿಕೋದ್ಯಮದಲ್ಲಿಯೇ ಅಪೂರ್ವ ಸಾಧನೆಯಾಗುತ್ತಿತ್ತು. ರಾಜ್ಯಪಾಲರಿಂದ ಹಿಡಿದು ಜನಸಾಮಾನ್ಯರ ವರೆಗೆ ಪ್ರಕರಣ ಚರ್ಚೆಗೊಳಗಾಗುತ್ತಿತ್ತು. ಓರ್ವ ಪ್ರಾಮಾಣಿಕ ಪತ್ರಕರ್ತನನ್ನು ವ್ಯವಸ್ಥೆ ಹೇಗೆ ಮಟ್ಟ ಹಾಕುತ್ತದೆ ಎಂಬುದರ ವಿಶ್ಲೇಷಣೆ ನಡೆಯುತ್ತಿತ್ತು. ಅಂದ ಹಾಗೆ, ಹೋಮ್ ಸ್ಟೇ  ದಾಳಿಯನ್ನು ಪತ್ರಿಕೆಗಳು ಮುಖಪುಟದಲ್ಲಿಟ್ಟು ಚರ್ಚಿಸಿರದಿರುತ್ತಿದ್ದರೆ ಅದು ದೇಶದಾದ್ಯಂತ ಚರ್ಚೆಗೊಳಗಾಗುವ ಸಾಧ್ಯತೆ ಇತ್ತೇ? ದಾಳಿಕೋರರು ಬಂಧನಕ್ಕೆ ಒಳಗಾಗುತ್ತಿದ್ದರೇ? ಪ್ರಕರಣ ನಡೆದು 3 ತಿಂಗಳಾದರೂ ಬಂಧಿತ ಆರೋಪಿಗಳು ಇನ್ನೂ ಬಿಡುಗಡೆಗೊಳ್ಳದಿರುವುದಕ್ಕೆ ಆ ವರದಿಗಾರಿಕೆಯೇ ಕಾರಣವಲ್ಲವೇ? ಇಷ್ಟಿದ್ದೂ,  ನವೀನ್ ಸೂರಿಂಜೆಯ ದಿಟ್ಟತನಕ್ಕೆ ಹ್ಯಾಟ್ಸಾಪ್ ಹೇಳುವ ಮತ್ತು ಅವರ ಪರ ಜನಾಭಿಪ್ರಾಯವನ್ನು ರೂಪಿಸುವ  ಅವಕಾಶವನ್ನು ಪತ್ರಿಕೆಗಳೇಕೆ ಬಳಸಿಕೊಳ್ಳಲಿಲ್ಲ? ಪತ್ರಕರ್ತರ ಮೇಲಾದ ಅನ್ಯಾಯವನ್ನು ಮುಂಚೂಣಿಯಲ್ಲಿ ನಿಂತು ಖಂಡಿಸುವುದಕ್ಕೆ ಪತ್ರಿಕೆಗಳಿಗೇ ಸಾಧ್ಯವಾಗದಿದ್ದರೆ ಅದನ್ನು ಬೇಜವಾಬ್ದಾರಿ ಎಂದಲ್ಲದೆ ಇನ್ನೇನೆಂದು ಕರೆಯಬೇಕು?
    ನಿಜವಾಗಿ, ರಾಜ್ಯದ ಕರಾವಳಿ ಭಾಗದಲ್ಲಿ ಹೋಮ್ ಸ್ಟೇ  ದಾಳಿಯಂಥ ಪ್ರಕರಣಗಳು ಈ ಮೊದಲು ಹಲವಾರು ನಡೆದಿವೆ. ಮಾತ್ರವಲ್ಲ, ದಾಳಿಗೆ ಒಳಗಾದವರೆಲ್ಲ ಅಪರಾಧಿಗಳಾಗಿ ಮತ್ತು ದಾಳಿಕೋರರು ಮಹಾನ್ ಸಂಸ್ಕೃತಿ ರಕ್ಷಕರಾಗಿ ಬಿಂಬಿತಗೊಂಡದ್ದೂ ಇದೆ. ಯಾಕೆ ಹೀಗೆ ಅಂದರೆ, ಅಂಥ ಪ್ರಕರಣಗಳನ್ನು ವರದಿ ಮಾಡುವಾಗ ಪತ್ರಕರ್ತ ಅಪಾರ ಜಾಗರೂಕತೆ ವಹಿಸುತ್ತಿದ್ದ. ದಾಳಿಕೋರರ ನಿಜ ಮುಖವನ್ನು ಇದ್ದ ಹಾಗೆ ಬಿಂಬಿಸಿಬಿಟ್ಟರೆ ಎಲ್ಲಿ ಅಪಾಯ ಬಂದೊದಗುತ್ತೋ ಎಂಬ ಭೀತಿಯೂ ಅವನಲ್ಲಿತ್ತು.ಆದ್ದರಿಂದ ವರದಿಗಾರಿಕೆಯಲ್ಲಿ ಸಮತೋಲನ (Balance) ಕಾಯ್ದುಕೊಳ್ಳಲೇ ಬೇಕಾಗಿತ್ತು. ಹೀಗೆ ಒಂದು ಬಗೆಯ ಮುಲಾಜು, ರಾಜಿ ಮನೋಭಾವದೊಂದಿಗೆ ಕರಾವಳಿಯಲ್ಲಿ ನಡೆಯುತ್ತಿದ್ದ ವರದಿಗಾರಿಕೆಯನ್ನು ಜೋರು ದನಿಯಿಂದ ಪ್ರಶ್ನಿಸಿದ್ದೇ ನವೀನ್ ಸೂರಿಂಜೆ. ಕೆಲವು ವರ್ಷಗಳ ಹಿಂದೆ, ಉಡುಪಿ ಜಿಲ್ಲೆಯಲ್ಲಿ ಹಾಜಬ್ಬ, ಹಸನಬ್ಬ ಎಂಬ ತಂದೆ-ಮಗನನ್ನು ಸಂಘಪರಿವಾರದ ಮಂದಿ ದನ ಸಾಗಾಟದ ನೆಪದಲ್ಲಿ ನಡುಬೀದಿಯಲ್ಲಿ ಬೆತ್ತಲುಗೊಳಿಸಿದ್ದರು. ಮೈಯಲ್ಲಿ ಒಂಚೂರೂ ಬಟ್ಟೆಯಿಲ್ಲದೇ ನಡು ಬೀದಿಯಲ್ಲಿ ನಿಂತಿದ್ದ ಆ ತಂದೆ-ಮಗನನ್ನು ಎದುರಿಟ್ಟು ಪತ್ರಿಕೆಗಳು ಮಾಡಿದ ವರದಿಗಾರಿಕೆಯಲ್ಲಿ ಭಾರೀ ಜಾಗರೂಕತೆಯೂ ಇತ್ತು. ಬೆತ್ತಲೆ ಎಂಬ ಪದದ ಆಸುಪಾಸಿನಲ್ಲಿ ದನ ಸಾಗಾಟ ಎಂಬ ಪದ ಬರುವಂತೆ ನೋಡಿಕೊಂಡು ವರದಿಗಾರಿಕೆಯಲ್ಲಿ  ಸಮತೋಲನವನ್ನು  ಕಾಯ್ದುಕೊಳ್ಳಲಾಗಿತ್ತು. ಇದೊಂದೇ ಅಲ್ಲ, ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಹೆಣ್ಣು - ಗಂಡು ಪರಸ್ಪರ ಮಾತಾಡಿದ ಕಾರಣಕ್ಕಾಗಿ ಆಗುವ ದಾಳಿಗಳ ವರದಿಯಲ್ಲೂ ಇವು ಗೋಚರಿಸುತ್ತಿರುತ್ತವೆ. ಅಂಥ ಮಾತುಕತೆಗಳೇ ತಪ್ಪು ಎಂಬ ಸೂಚನೆಯನ್ನು ಶೀರ್ಷಿಕೆ, ವರದಿಗಾರಿಕೆಯು ಕೊಡುತ್ತಿರುತ್ತದೆ. ಆದರೆ ಇಂಥ ಸಿದ್ಧ ಮಾದರಿಯನ್ನು ಮುರಿದದ್ದೇ ನವೀನ್ ಸೂರಿಂಜೆ. ಅವರ ವರದಿಯಲ್ಲಿ ರಾಜಿ ಇರಲಿಲ್ಲ, ಮುಲಾಜೂ ಇರಲಿಲ್ಲ. ಅವರು ವರದಿ ಮಾಡಿದ್ದಷ್ಟೇ ಅಲ್ಲ, ತಾನು ಹೋಮ್ ಸ್ಟೇಯಲ್ಲಿ ಕಂಡದ್ದನ್ನೆಲ್ಲಾ ಆ ಬಳಿಕ ವಿವಿಧ ಇಂಟರ್ನೆಟ್ ತಾಣಗಳಲ್ಲಿ ಬಹಿರಂಗವಾಗಿಯೇ ಹಂಚಿಕೊಂಡರು. ದಾಳಿಕೋರರಲ್ಲಿ ಹೆಚ್ಚಿನ ಮಂದಿ ಮದ್ಯವ್ಯಸನಿಗಳಾಗಿದ್ದುದು, ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿದ್ದನ್ನೆಲ್ಲಾ.. ಧೈರ್ಯದಿಂದ ಬರೆದರು. ತನಿಖಾ ತಂಡಗಳ ಮುಂದೆ ಸಾಕ್ಷಿ ನುಡಿಯಲೂ ಸಿದ್ಧ ಅಂದರು. ಮಾತ್ರವಲ್ಲ, ಈ ವರದಿಗಾರಿಕೆಯಿಂದಾಗಿ ಸೂರಿಂಜೆಗೆ ಮಾಧ್ಯಮ ಜಗತ್ತಿನಲ್ಲಿ ದೊಡ್ಡ ಮಟ್ಟದ ಹೆಸರೂ ಬಂತು. ಒಂದು ರೀತಿಯಲ್ಲಿ ಇದು ಸಂಘಪರಿವಾರಕ್ಕೆ ಸೂರಿಂಜೆ ರವಾನಿಸಿದ ಪ್ರಬಲ ಸವಾಲಾಗಿತ್ತು. ಈತನನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಇತರ ಪತ್ರಕರ್ತರೂ ಇದೇ ಮಾದರಿಯನ್ನು ಅನುಸರಿಸಬಹುದು ಎಂಬ ಭೀತಿಯೂ ಸಂಘಪರಿವಾರವನ್ನು ಕಾಡಿರಬೇಕು. ಆದ್ದರಿಂದಲೇ ಸೂರಿಂಜೆಯನ್ನು ಬಂಧಿಸಲಾಗಿದೆ. ಈ ಮುಖಾಂತರ ಸಂಘ ಪರಿವಾರಕ್ಕೆ ಎದುರು ನಿಲ್ಲುವ ಪತ್ರಕರ್ತರಿಗೆಲ್ಲ ಅಪಾಯದ ಸೂಚನೆಯನ್ನೂ ರವಾನಿಸಲಾಗಿದೆ.  ಆದ್ದರಿಂದ, ಮುಂದೆ  ತಾವು ಏನಾಗಬೇಕೆಂಬುದನ್ನು ಪತ್ರಕರ್ತರೇ ನಿರ್ಧರಿಸಬೇಕು. ಈ ಸೂಚನೆಗೆ ತಲೆಬಾಗಬೇಕೋ  ಅಥವಾ ಪ್ರತಿಭಟಿಸಬೇಕೋ? ನವೀನ್ ಸೂರಿಂಜೆ ಆಗಬೇಕೋ ಅಥವಾ ಬೆತ್ತಲೆ ಪ್ರಕರಣದ ಬ್ಯಾಲೆನ್ಸ್ ಡ್  ಪತ್ರಕರ್ತ ಆಗಬೇಕೋ? ಆಯ್ಕೆ ಮುಕ್ತವಾಗಿದೆ. ಆದರೆ ಬೆತ್ತಲೆಯನ್ನು ಆಯ್ಕೆ ಮಾಡಿಕೊಳ್ಳಬೇಡಿ ಅನ್ನುವುದಷ್ಟೇ ಸಮಾಜ ಪ್ರೇಮಿಗಳ ಆಸೆ.

Tuesday 6 November 2012

ಅಹಿಂಸಾವಾದಿಗಳ ಹಿಂಸೆ ಮತ್ತು ಸೂಕಿಯ ಮೌನ


    ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಹೊರ ಜಗತ್ತಿಗೆ ಕಾಣಿಸದಂತೆ ಅಡಗಿಸಿಡಲಾಗಿದ್ದ  ಆಂಗ್ ಸ್ಯಾನ್   ಸೂಕಿಯ ಇನ್ನೊಂದು ಮುಖವನ್ನು ಮ್ಯಾನ್ಮಾರ್ ನ  ಬೌದ್ಧರು ಮತ್ತು ಮುಸ್ಲಿಮರು ಬಹಿರಂಗಕ್ಕೆ ತಂದಿದ್ದಾರೆ. ಸೂಕಿಗೆ ಬ್ರಿಟನ್, ಅಮೇರಿಕ ಮುಂತಾದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರೀ ಬೆಲೆಯಿದೆ. ಆಕೆಯ ಇಬ್ಬರು ಮಕ್ಕಳಿರುವುದು ಬ್ರಿಟನ್ನಿನಲ್ಲಿ. ಆಕೆಯನ್ನು ಪ್ರಜಾತಂತ್ರ ಪರ ನಾಯಕಿ ಎಂದು ಅವು ಕರೆದಿದೆ. ನೋಬೆಲ್ ಪ್ರಶಸ್ತಿ ಕೊಟ್ಟು ಪುರಸ್ಕರಿಸಿವೆ. ಆಕೆಯ ಹೋರಾಟಕ್ಕೆ ಬೆಂಬಲ ಸಾರುವುದಕ್ಕಾಗಿಯೇ ಈ ರಾಷ್ಟ್ರಗಳು ಮ್ಯಾನ್ಮಾರ್ ನ  ಮೇಲೆ ದಿಗ್ಬಂಧನವನ್ನೂ ವಿಧಿಸಿತ್ತು. ಅಂದಹಾಗೆ, ಮ್ಯಾನ್ಮಾರನ್ನು ಬೌದ್ಧ ಸರ್ವಾಧಿಕಾರಿಗಳಿಂದ ಬಿಡಿಸಿ ಪ್ರಜಾತಂತ್ರದೆಡೆಗೆ ತರುವುದಕ್ಕಾಗಿ ಹೋರಾಡುವುದು, ಅದಕ್ಕಾಗಿ ಹತ್ತಾರು ವರ್ಷಗಳ ಕಾಲ ಗೃಹಬಂಧನಕ್ಕೆ ಒಳಗಾಗುವುದೆಲ್ಲ ಸಣ್ಣ ಸಾಧನೆ ಖಂಡಿತ ಅಲ್ಲ. ಇವತ್ತು ಮ್ಯಾನ್ಮಾರ್ ನ  ಅಧ್ಯಕ್ಷ ತೇನ್ ಸೇನ್ ರ  ಮಾತಿಗಿಂತ ಸೂಕಿಯ ಅಭಿಪ್ರಾಯಕ್ಕೆ ಜಾಗತಿಕವಾಗಿ ಹೆಚ್ಚು ಮನ್ನಣೆಯೂ ಇದೆ. ಆದ್ದರಿಂದಲೇ, ಮ್ಯಾನ್ಮಾರ್ ನ  ರಾಖಿನೆ ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಮರು ಮತ್ತು ಬೌದ್ಧರ ನಡುವಿನ ಘರ್ಷಣೆಯ ಬಗ್ಗೆ ಸೂಕಿ ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಜಗತ್ತು ಆಸೆ ಪಟ್ಟದ್ದು. ಆದರೆ ಸೂಕಿ ಈ ಎಲ್ಲ ನಿರೀಕ್ಷೆಯನ್ನೂ  ಸುಳ್ಳು ಮಾಡಿದ್ದಾರೆ. ಬೌದ್ಧರು ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಬಗ್ಗೆ ತಾನು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲ್ಲ ಅಂದಿದ್ದಾರೆ.
     ನಿಜವಾಗಿ, ಜೈಲಲ್ಲಿದ್ದ ಸೂಕಿಗೂ ಇದೀಗ ರಾಜಕಾರಣಿಯಾಗಿ ಬದಲಾಗಿರುವ ಸೂಕಿಗೂ ಬಹಳ ವ್ಯತ್ಯಾಸವಿದೆ. ಜೈಲಲ್ಲಿರುವಾಗ ಸೂಕಿ ಮಾತಾಡುತ್ತಿದ್ದುದು ಮ್ಯಾನ್ಮಾರ್ ಜನತೆಯ ಬಗ್ಗೆ. ಮ್ಯಾನ್ಮಾರ್ ಜನತೆ ಅಂದರೆ ಬೌದ್ಧರು ಮಾತ್ರ ಎಂದು ಅವರು ಆಗ ವ್ಯಾಖ್ಯಾನಿಸಿಯೇ ಇರಲಿಲ್ಲ. ಅಲ್ಲಿನ ಮುಸ್ಲಿಮರು ಸೂಕಿಯ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲವನ್ನೂ ಸಾರಿದ್ದರು. ಆದರೆ ಇದೀಗ ರಾಜಕಾರಣಿಯಾಗಿ ಬದಲಾಗಿರುವ ಸೂಕಿ ಏನನ್ನೋ ಮುಚ್ಚಿಡುತ್ತಿದ್ದಾರೆ. ಇಲ್ಲದಿದ್ದರೆ, ಕಳೆದ ಜೂನ್ ಮತ್ತು ಅಕ್ಟೋಬರ್ ಗಳಲ್ಲಿ  ರಾಖಿನೆ ರಾಜ್ಯದಲ್ಲಿ ಮುಸ್ಲಿಮ್ ಮತ್ತು ಬೌದ್ಧರ ಮಧ್ಯೆ ಎರಡು ಬಾರಿ ಘರ್ಷಣೆಗಳು ನಡೆದಿವೆ. ಸರಕಾರವೇ ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಕೇವಲ ಅಕ್ಟೋಬರ್ ನಲ್ಲಿ ನಡೆದ ಘರ್ಷಣೆಯಲ್ಲೇ  5351 ಮನೆಗಳು ಭಸ್ಮವಾಗಿವೆ. 32 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. 89 ಮಂದಿ ಸಾವಿಗೀಡಾಗಿದ್ದಾರೆ. ‘5 ಸಾವಿರದಷ್ಟಿದ್ದ ಬೌದ್ಧರ ಗುಂಪು ನಮ್ಮ ಗ್ರಾಮಗಳಿಗೆ ನುಗ್ಗಿ ಮನೆಗಳಿಗೆ ಬೆಂಕಿ ಕೊಟ್ಟವು’ ಎಂದು ದಿ ಹಿಂದೂ ಪತ್ರಿಕೆಯ ಪ್ರತಿನಿಧಿಗೆ ಮರ್ಯಮ್ ಬೀಬಿ (5-11-2012) ತಿಳಿಸಿದ್ದಾಳೆ. ಮುಸ್ಲಿಮರು ಅಪಾರ ಸಂಖ್ಯೆಯಲ್ಲಿ ನಿರಾಶ್ರಿತರಾಗಿದ್ದು ಮೂಲ ಸೌಲಭ್ಯಗಳೂ ಇಲ್ಲದ ಮದ್ರಸಗಳಲ್ಲಿ, ಶಿಬಿರಗಳಲ್ಲಿ ತುಂಬಿ ಹೋಗಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ. ಇವೆಲ್ಲ ಕಣ್ಣೆದುರಿಗಿದ್ದೂ ಸೂಕಿ ಏನೂ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲವೆಂದರೆ ಹೇಗೆ? ಅದೇನನ್ನು ಸೂಚಿಸುತ್ತದೆ?
     ನೋಬೆಲ್ ಬಹುಮಾನಕ್ಕೆ ಸೂಕಿ ಆಯ್ಕೆಗೊಂಡಾಗ ಮ್ಯಾನ್ಮಾರ್ ನ  ಬೌದ್ಧ ನಾಯಕರನ್ನು ಬಿಟ್ಟರೆ, ಉಳಿದಂತೆ ಈ ಜಗತ್ತಿನ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಹಾಗಂತ, ಜಗತ್ತು ನೀಡಿದ ಈ ಬೆಂಬಲಕ್ಕೆ ಆಕೆಯ ಬಿಳಿ ಚರ್ಮವೋ ಇಂಗ್ಲಿಷ್ ಕುರಿತಾದ ಜ್ಞಾನವೋ  ಕಾರಣವೂ ಆಗಿರಲಿಲ್ಲ. ಜೈಲಿನಲ್ಲಿದ್ದಾಗ  ಸೂಕಿ ಮಾತಾಡುತ್ತಿದ್ದುದೆಲ್ಲ ಮನುಷ್ಯರ ಬಗ್ಗೆ, ಅವರ ಸ್ವಾತಂತ್ರ್ಯದ ಬಗ್ಗೆ. ಆದ್ದರಿಂದಲೇ ಜಗತ್ತಿನಾದ್ಯಂತ ದಮನಿತರಾಗಿರುವ ಮನುಷ್ಯರ ವಿಮೋಚನೆಯ ಸಂಕೇತವಾಗಿ ಮಾಧ್ಯಮಗಳು ಆಕೆಯನ್ನು ಬಿಂಬಿಸಿದುವು. ಮ್ಯಾನ್ಮಾರ್ ನ  ಮುಸ್ಲಿಮರು ಆಕೆಯ ಮಾತುಗಳನ್ನು ನಂಬಿದರು. ಆದರೆ ಇವತ್ತು ಸೂಕಿಯ ವರ್ತನೆಗಳನ್ನು ನೋಡಿದರೆ ನಿರಾಸೆಯಾಗುತ್ತದೆ. ಆಕೆ ಪಕ್ಕಾ ರಾಜಕಾರಣಿಯಂತೆ ಮಾತಾಡುತ್ತಿದ್ದಾರೆ. ಸತ್ಯ ಹೇಳಿ ಬಹುಸಂಖ್ಯಾತ ಬೌದ್ಧರ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಸುಮ್ಮನಿರುವುದು ಲಾಭದಾಯಕ ಎಂದು ಅವರು ಭಾವಿಸಿದ್ದಾರೆ. ವಿಶೇಷ ಏನೆಂದರೆ, ಬೌದ್ಧ ಗುಂಪುಗಳು ಮುಸ್ಲಿಮರನ್ನು ಕೊಲ್ಲುವುದಕ್ಕಿಂತ ಒಕ್ಕಲೆಬ್ಬಿಸಿ ಅತಂತ್ರ ರಾಗಿಸುವುದಕ್ಕೇ  ಹೆಚ್ಚು ಒತ್ತು ಕೊಟ್ಟಿರುವುದು. ಮನೆಗಳಿಗೆ ಬೆಂಕಿ ಹಚ್ಚಿ ಅವರ ಅಸ್ತಿತ್ವ ನಾಶ ಮಾಡುವುದನ್ನೇ ಅವು ಗುರಿಯಾಗಿಸಿಕೊಂಡಿವೆ. ಇದು ಘರ್ಷಣೆಯ ಕುರಿತಂತೆ ಅನುಮಾನಗಳನ್ನೂ  ಮೂಡಿಸುತ್ತಿದೆ. ಯಾಕೆಂದರೆ, ಪ್ರಜಾತಂತ್ರಕ್ಕೆ ಮರಳಿದ ಮ್ಯಾನ್ಮಾರ್ ನಲ್ಲಿ  ಬಂಡವಾಳ ಹೂಡಲು ಜಾಗತಿಕವಾಗಿ ಪೈಪೋಟಿಟಿಗಳು ಪ್ರಾರಂಭವಾಗಿವೆ. ದಶಕಗಳಿಂದ ಜಾರಿಯಲ್ಲಿದ್ದ ದಿಗ್ಬಂಧನ ಹೊರಟು ಹೋಗುತ್ತಿದ್ದು, ಬಂಡವಾಳ ಹೂಡುವಂತೆ ತೇನ್ ಸೇನ್ ರ  ಸರಕಾರ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುತ್ತಲೂ ಇದೆ. ಅಲ್ಲದೆ ಮ್ಯಾನ್ಮಾರ್ ನಲ್ಲಿ  ಅಪಾರ ಪ್ರಮಾಣದ ಪ್ರಾಕೃತಿಕ ಸಂಪನ್ಮೂಲಗಳೂ ಇವೆ ಎನ್ನಲಾಗುತ್ತಿದೆ. ಬಹುಶಃ ಬೃಹತ್ ಕಂಪೆನಿಗಳಿಗೆ ಭೂಮಿ ಒದಗಿಸಲು ಇಂಥದ್ದೊಂದು ಘರ್ಷಣೆಯನ್ನು ವ್ಯವಸ್ಥೆಯೇ ಹುಟ್ಟು ಹಾಕಿದ್ದಿರಬಹುದೇ? ಜನರನ್ನು ಒಕ್ಕಲೆಬ್ಬಿಸಿ ಆ ಜಾಗಗಳನ್ನು ಕಂಪೆನಿಗಳ ವಶಕ್ಕೆ ಒಪ್ಪಿಸುವುದಕ್ಕಾಗಿ ಮುಸ್ಲಿಮರ ಪೌರತ್ವದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಲಾಗಿದೆಯೇ? ಯಾಕೆಂದರೆ ಘರ್ಷಣೆ ಕಾಣಿಸಿಕೊಂಡಿರುವ ರಾಖಿನೆ ರಾಜ್ಯದ ಸಿಟ್ವೆ ನಗರದಲ್ಲಿ ಭಾರತದ ಎಸ್ಸಾರ್ ಕಂಪೆನಿಯ ದೊಡ್ಡದೊಂದು ಟ್ರಾನ್ಸ್ ಪೋರ್ಟ್ ನಿರ್ಮಾಣ ಯೋಜನೆಯು ಪ್ರಗತಿಯಲ್ಲಿದೆ. ಅಲ್ಲದೆ ಈ ನಗರದಲ್ಲಿ ಘರ್ಷಣೆಯ ಯಾವ ಕುರುಹುಗಳೂ ಇಲ್ಲ. ಹೀಗಿರುವಾಗ ಒಳಪ್ರದೇಶದಲ್ಲಿರುವ ಬೌದ್ಧರು ಮತ್ತು ಮುಸ್ಲಿಮರ ಮಧ್ಯೆ ಈ ಮಟ್ಟದ ದ್ವೇಷ ಹುಟ್ಟಿಕೊಳ್ಳಲು ಕಾರಣವಾದರೂ ಏನಿರಬಹುದು?
    ಸೂಕಿಗೆ ಮಾತಾಡುವುದಕ್ಕೆ ದಾರಾಳ ಸಂಗತಿಗಳಿವೆ. ಕನಿಷ್ಠ ನೋಬೆಲ್ ಪ್ರಶಸ್ತಿಯ ಗೌರವವನ್ನು ಉಳಿಸಿಕೊಳ್ಳುವುದಕ್ಕಾದರೂ ಅವರು ಮಾತಾಡಲೇಬೇಕಿದೆ. ಮ್ಯಾನ್ಮಾರ್ ನಲ್ಲಿ  ಸದ್ಯ ಕಾಣಿಸಿಕೊಂಡಿರುವ ಘರ್ಷಣೆಯ ಮೂಲ ಉದ್ದೇಶವಾದರೂ ಏನು? ಅಹಿಂಸೆಯ ಬುದ್ಧ ಧರ್ಮವು ಹಿಂಸಾತ್ಮಕವಾಗಿ ಪರಿವರ್ತನೆಗೊಂಡದ್ದು ಹೇಗೆ? ನೂರಾರು ವರ್ಷಗಳಿಂದ ರಾಖಿನೆಯಲ್ಲಿರುವ ಮುಸ್ಲಿಮರ ಪೌರತ್ವವನ್ನು ಅನುಮಾನಾಸ್ಪದ ಗೊಳಿಸಿರುವುದರಲ್ಲಿ ಸರಕಾರದ ಮತ್ತು ಬಂಡವಾಳಶಾಹಿಗಳ ಪಾತ್ರವೇನಾದರೂ ಇದೆಯೇ? ಅಷ್ಟಕ್ಕೂ ಮುಸ್ಲಿಮರ ಪೌರತ್ವದ ಕುರಿತು ಅನುಮಾನಗಳೇನೇ ಇರಲಿ, ಅದರ ನೆಪದಲ್ಲಿ ಒಂದು ಸಮೂಹವನ್ನೇ ಅತಂತ್ರಗೊಳಿಸುವುದನ್ನು ಕನಿಷ್ಠ ಖಂಡಿಸುವುದಕ್ಕೂ ಸೂಕಿಗೆ ಸಾಧ್ಯವಾಗುವುದಿಲ್ಲವೆಂದರೆ ಅವರನ್ನು ಶಾಂತಿದೂತೆ ಎಂದು ಹೇಗೆ ಕರೆಯುವುದು? ಒಂದು ವೇಳೆ ಸೂಕಿ ಇನ್ನೂ ಮೌನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆಂದಾದರೆ, ನೋಬೆಲ್ ಆಯ್ಕೆ ಮಂಡಳಿಯು ಆಕೆಯಿಂದ ಪ್ರಶಸ್ತಿಯನ್ನು ಹಿಂಪಡೆದು ಅದರ ಗೌರವವನ್ನಾದರೂ ಕಾಪಾಡಲಿ.