Tuesday 29 January 2013

ನಿಷ್ಠೆ ಬದಲಿಸುವ ರಾಜಕಾರಣಿಗಳೂ ಚರ್ಚೆಗೆ ಒಳಗಾಗದ ಭ್ರೂಣಗಳೂ


1. ಬಿಜೆಪಿ-ಆರೆಸ್ಸೆಸ್‍ಗಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದ ಗೃಹ ಸಚಿವ ಶಿಂಧೆ..
2. ಯಡಿಯೂರಪ್ಪ ನಿಷ್ಠ 13 ಶಾಸಕರಿಂದ ರಾಜ್ಯಪಾಲರ ಭೇಟಿ. ಸ್ಪೀಕರ್ ನಾಪತ್ತೆ..
3. ಟಿಪ್ಪು ಸುಲ್ತಾನ್ ವಿವಿಯನ್ನು ಬೆಂಬಲಿಸಿದ ಅನಂತಮೂರ್ತಿ..
4. ಬೆಳಗಾಂ ಜಿಲ್ಲೆಯ ಸಂಕೇಶ್ವರದ ಹಿರಣ್ಯಕೇಶಿ ನದಿದಡದಲ್ಲಿ ಹೂತಿಡಲಾಗಿದ್ದ 16 ಭ್ರೂಣಗಳು ಪತ್ತೆ..

   ಕಳೆದೊಂದು ವಾರದಲ್ಲಿ ಒಂದಲ್ಲ ಒಂದು ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಶೀರ್ಷಿಕೆಗಳಿವು. ವಿಶೇಷ ಏನೆಂದರೆ, ‘ಭ್ರೂಣ'ದ ಸುದ್ದಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸುದ್ದಿಗಳೂ ಪತ್ರಿಕೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಚರ್ಚೆಗೊಳಗಾಗಿವೆ. ಅವುಗಳಿಗೆ ಸಂಬಂದಿಸಿದ ಲೇಖನಗಳು ಪ್ರಕಟವಾಗಿವೆ. ಟಿ.ವಿ. ಗಳಂತೂ, ಶೆಟ್ಟರ್ ಸರಕಾರ ಉಳಿಯುತ್ತೋ ಉರುಳುತ್ತೋ ಅನ್ನುವ ಧಾಟಿಯಲ್ಲಿ ಗಂಟೆಗಟ್ಟಲೆ ಚರ್ಚಿಸಿವೆ. ಟಿಪ್ಪು ಸುಲ್ತಾನ್ ಎಷ್ಟು ಶೇಕಡಾ ಮತಾಂಧ ಮತ್ತು ಎಷ್ಟು ಶೇಕಡಾ ಅಲ್ಲ ಎಂಬ ಬಗ್ಗೆ ‘ಗಂಭೀರ' ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಆದರೆ ಪತ್ರಿಕೆಗಳಲ್ಲಾಗಲಿ, ಟಿ.ವಿ.ಗಲ್ಲಾಗಲಿ, ‘ಭ್ರೂಣ'ಗಳು ಚರ್ಚೆಗೆ ಒಳಗಾಗಿಯೇ ಇಲ್ಲ. ಭ್ರೂಣಕ್ಕೆ ಗಂಭೀರ ಚರ್ಚಾವಸ್ತುವಾಗುವ ಅರ್ಹತೆಯನ್ನು ಮಾಧ್ಯಮಗಳು ಬಿಡಿ, ಮಹಿಳಾವಾದಿಗಳು ಇಲ್ಲವೇ ಸಂಘಟನೆಗಳು ಕೂಡ  ಈ ವರೆಗೆ ನೀಡಿಲ್ಲ. ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನಾತ್ಮಕ ಮನಸ್ಥಿತಿಯನ್ನು ಹುಟ್ಟು ಹಾಕಿದಂತೆಯೇ ಭ್ರೂಣಹತ್ಯೆಯ ವಿರುದ್ಧ ಚಳವಳಿಯ ಪ್ರಜ್ಞೆಯನ್ನು ಹುಟ್ಟು ಹಾಕುವಲ್ಲಿ ಮಾಧ್ಯಮಗಳು ಮತ್ತು ಮಹಿಳಾ ಸಂಘಟನೆಗಳು ಮತ್ತೆ ಮತ್ತೆ ಸೋಲುತ್ತಲೇ ಇವೆ.
  ನಿಜವಾಗಿ, ಭ್ರೂಣ ಎಂಬುದು ಗೋವಿನಂತೆ ಅಲ್ಲ. ಭ್ರೂಣಕ್ಕೂ ಮನುಷ್ಯನಿಗೂ ಕರುಳ ಬಳ್ಳಿಯ ಸಂಬಂಧ ಇದೆ. ಭ್ರೂಣ ಹತ್ಯೆ ಎಂಬುದು ಓರ್ವ ಮನುಷ್ಯನ ದಾರುಣ ಹತ್ಯೆಗೆ, ಕೊಲೆಗೆ ಸಮಾನ. ದುರಂತ ಏನೆಂದರೆ, ಭ್ರೂಣಗಳಿಗೆ ರಾಜಕೀಯ ಇಮೇಜು ಇಲ್ಲದಿರುವುದು. ಆದರೆ ಗೋವಿಗೆ ಅದು ಲಭ್ಯವಾಗಿ ಬಿಟ್ಟಿದೆ. ಅಕ್ರಮವಾಗಿ ಗೋವಿನ ಸಾಗಾಟ ನಡೆಯುತ್ತದೋ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾಯುವ ತಂಡಗಳು ನಮ್ಮ ನಡುವೆ ಇವೆ. ಅಕ್ರಮ ಗೋ ಸಾಗಾಟದ ಆರೋಪ ಹೊರಿಸಿ  ನಡುಬೀದಿಯಲ್ಲೇ ಥಳಿಸುವ, ಬೆತ್ತಲೆಗೊಳಿಸುವ ಗೋ ಪ್ರೇಮಿಗಳೂ  ನಮ್ಮಲ್ಲಿದ್ದಾರೆ. ಗೋಹತ್ಯೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಗಲ್ಲಿಗಲ್ಲಿಗಳಲ್ಲಿ ಪ್ರತಿಭಟನೆ ನಡೆಯುತ್ತದೆ. ವಿಚಾರಗೊಷ್ಟಿಗಳೂ ಸಂವಾದಗಳೂ ನಡೆಯುತ್ತವೆ. ಆದರೆ ಭ್ರೂಣಗಳಿಗೆ ಗೋವಿನ ಸಾಮರ್ಥ್ಯ ಇಲ್ಲದೇ ಇರುವುದರಿಂದ ಗೋವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅವು ಹತ್ಯೆಗೆ ಒಳಗಾಗುತ್ತಿದ್ದರೂ  ಗಂಭೀರ ಸಮಸ್ಯೆಯಾಗಿ ಗುರುತಿಸಿಕೊಳ್ಳುತ್ತಲೇ ಇಲ್ಲ. ಒಂದು ವೇಳೆ ಭ್ರೂಣಗಳಿಗೆ ಮಾತಾಡುವ ಸಾಮರ್ಥ್ಯ  ಇರುತ್ತಿದ್ದರೆ, ಅವುಗಳ ಮಾತಿನ ಧಾಟಿಯಾದರೂ ಹೇಗಿರುತ್ತಿತ್ತು? ನಾಲ್ಕು ಕಾಲಿನ ಪ್ರಾಣಿಗೆ ಈ ದೇಶದಲ್ಲಿ ಇರುವ ಗೌರವ ಮತ್ತು ಆದರ, ಮನುಷ್ಯರಿಗೆ ಇಲ್ಲವೇ ಎಂದು ಅದು ಪ್ರಶ್ನಿಸುತ್ತಿತ್ತಲ್ಲವೇ? ಗೋ ಹತ್ಯೆಯನ್ನು ತಡೆಯುವ ಸ್ಪಷ್ಟವಾದ ಕಾನೂನು ಇನ್ನೂ ಜಾರಿಯಾಗಿಲ್ಲದಿದ್ದರೂ ಈಗಾಗಲೇ ಒಂದು ತಂಡ ಗೋವುಗಳ ಕಾವಲಿಗಾಗಿ ಬೀದಿಗಿಳಿದಿರುವುದನ್ನು ಉಲ್ಲೇಖಿಸುತ್ತಾ ‘ನೀವೇಕೆ ಹೀಗೆ’ ಎಂದು ಜನ ಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಹೋರಾಟಗಾರರನ್ನು ಅದು ಚುಚ್ಚುತ್ತಿತ್ತಲ್ಲವೇ? ತಮ್ಮ ರಕ್ಷಣೆಗಾಗಿ ಲೋಕಾಯುಕ್ತದಂಥ ಪ್ರಬಲ ಕಾನೂನನ್ನು ರಚಿಸುವಂತೆ ಒತ್ತಾಯಿಸುತ್ತಿತ್ತಲ್ಲವೇ?
   ಮನುಷ್ಯ ಹೆಚ್ಚೆಚ್ಚು ಆಧುನಿಕಗೊಂಡಂತೆಯೇ ಆಲೋಚನೆಗಳಲ್ಲಿ ಹೆಚ್ಚೆಚ್ಚು ವಿಕಾರಗಳು ತುಂಬಿಕೊಳ್ಳುತ್ತಲೂ ಇವೆ. ಆಧುನಿಕ ಯುವ ಪೀಳಿಗೆಯು ಇಂಗ್ಲಿಷ್ ಭಾಷೆಯನ್ನು ಮಾತ್ರವಲ್ಲ, ಇಂಗ್ಲಿಷ್ ಮೌಲ್ಯಗಳನ್ನು ಕೂಡ ಧಾರಾಳವಾಗಿ ಅಪ್ಪಿಕೊಳ್ಳುತ್ತಿವೆ. ತಮಗೆ ದೊರಕದ ಅವಕಾಶಗಳು ಮಕ್ಕಳಿಗೆ ದೊರಕಲಿ ಎಂಬ ಅಭಿಲಾಷೆಯಿಂದ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿರುವ ಪೋಷಕರು ಒಂದೆಡೆಯಾದರೆ; ನೈತಿಕ, ಅನೈತಿಕತೆಗಳ ಪರಿವೆಯೇ ಇಲ್ಲದೆ ‘ಆಧುನಿಕ' ವಾಗುತ್ತಿರುವ ಮಕ್ಕಳು ಇನ್ನೊಂದು ಕಡೆ. ಈ ಹಿಂದೆ ನಾವು ಖರೀದಿಸುತ್ತಿದ್ದ ವಸ್ತುಗಳೆಲ್ಲ ರಿಪೇರಿ ಆಗುತ್ತಿದ್ದುವು. ರೇಡಿಯೋ, ಸೈಕಲ್, ಚಪ್ಪಲಿ, ಟಾರ್ಚು, ವಾಚು... ಎಲ್ಲವೂ. ಆದರೆ ಇವತ್ತು ರಿಪೇರಿಗೆ ಒಗ್ಗುವಂಥ ವಸ್ತುಗಳು ತಯಾರಾಗುತ್ತಲೇ ಇಲ್ಲ. ಎಲ್ಲವೂ ಬಳಸಿ ಎಸೆಯುವಂಥದ್ದು. ‘ಆಧುನಿಕ' ಯುವ ಸಮೂಹ ಬೆಳೆಯುತ್ತಿರುವುದೂ ಬಹುತೇಕ ಈ ರೀತಿಯಲ್ಲೇ. ಅವು ರಿಪೇರಿಗೆ ಹೊಂದಿಕೊಳ್ಳುತ್ತಿಲ್ಲ. ನಿಜವಾಗಿ ರಿಪೇರಿ ಎಂಬುದು ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಹೆಚ್ಚೆಚ್ಚು ಪಕ್ವವಾಗುತ್ತಾ ಬೆಳೆಯುವುದರ ಹೆಸರು. ಹಾನಿಗೀಡಾದ ಸೈಕಲನ್ನು ಮೆಕ್ಯಾನಿಕ್ ರಿಪೇರಿ ಮಾಡುತ್ತಿರುವಾಗ, ಹತ್ತಿರವೇ ನಿಂತ ಮಾಲಿಕ ಅದನ್ನು ನೋಡುತ್ತಿರುತ್ತಾನೆ. ಸೈಕಲ್ ಹಾಳಾಗುವುದಕ್ಕಿರುವ  ಕಾರಣಗಳ ಬಗ್ಗೆ ಚರ್ಚಿಸುತ್ತಾನೆ. ಮುಂದೆ ಹೇಗೆಲ್ಲ ಸೈಕಲನ್ನು ಬಳಸಬಾರದು ಎಂಬುದನ್ನು ಕಲಿತುಕೊಳ್ಳು ತ್ತಾನೆ. ಒಂದು ರೀತಿಯಲ್ಲಿ ರಿಪೇರಿ ಎಂಬುದು ಮನುಷ್ಯನ ಪಾಲಿಗೆ ಒಂದು ಪುನರವಲೋಕನವಿದ್ದಂತೆ. ಆದರೆ ಆಧುನಿಕ ಇಂಗ್ಲಿಷ್ ಮೌಲ್ಯಗಳಲ್ಲಿ ಈ ‘ರಿಪೇರಿ'ಗೆ ಅವಕಾಶವೇ ಸಿಗುತ್ತಿಲ್ಲ. ಆದ್ದರಿಂದಲೇ ಗಂಡನ ವಿರುದ್ಧ ಪತ್ನಿ; ಮಕ್ಕಳ ವಿರುದ್ಧ ಹೆತ್ತವರು.. ವಿವಿಧ ಆರೋಪಗಳನ್ನು ಹೊರಿಸುತ್ತಾ ಕೋರ್ಟಿನ ಮೆಟ್ಟಲು ಹತ್ತುತ್ತಿರುವುದು. ದಿನಂಪ್ರತಿ ಅತ್ಯಾಚಾರದ, ಭ್ರಷ್ಟಾಚಾರದ ಸುದ್ದಿಗಳು ಕೇಳಿ ಬರುತ್ತಲೇ ಇರುವುದು.
   ಭ್ರಷ್ಟಾಚಾರ ಮತ್ತು ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನೆ ಕಾಣಿಸಿಕೊಂಡಂತೆಯೇ ಭ್ರೂಣ ಹತ್ಯೆಯ ವಿರುದ್ಧವೂ ಯೋಜಿತ ಚಳವಳಿಯೊಂದು ಹುಟ್ಟಿಕೊಳ್ಳಬೇಕಾದ ಅಗತ್ಯ ಇದೆ. ಆಸ್ಪತ್ರೆಗಳೆಂಬ ನಾಲ್ಕು ಗೋಡೆಗಳ ಒಳಗೆ ನಡೆಯುತ್ತಿರುವ ಮನುಷ್ಯ ಹತ್ಯೆಯನ್ನು, ‘ಪಾತಕ’ ಎಂದು ಆಧುನಿಕ ಜಗತ್ತಿಗೆ ಮನವರಿಕೆ ಮಾಡಿಸಬೇಕಾದ ಅನಿವಾರ್ಯತೆ  ಇದೆ. ಭ್ರೂಣಗಳಿಗೆ ಬಾಯಿ ಬರುವುದಿಲ್ಲ ಎಂಬುದು ಅವುಗಳ ಮೇಲಿನ ಕ್ರೌರ್ಯಕ್ಕೆ ಸಬೂಬು ಆಗಬಾರದು. ಇಷ್ಟಕ್ಕೂ ಪ್ರಾಣಿಗಳನ್ನು ಪ್ರೀತಿಸುವ, ಅವುಗಳ ಹಕ್ಕುಗಳಿಗಾಗಿ ಧರಣಿ ನಡೆಸುವ ಜಗತ್ತಿನಲ್ಲಿ, ಭ್ರೂಣಗಳಿಗಾಗಿ ಒಂದು ಗಂಟೆಯ ಪ್ರತಿಭಟನೆ ನಡೆಸುವುದಕ್ಕೂ ಜನರಿಲ್ಲ ಅನ್ನುವ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಯಾವುದರ ಸೂಚನೆ? ಮನುಷ್ಯನ ಅರಿವಿನ ಮಟ್ಟ ವಿಸ್ತಾರವಾಗುತ್ತಾ ಹೋದಂತೆಯೇ ನೈತಿಕ ಅರಿವಿನ ಮಟ್ಟದಲ್ಲಿ ಕುಸಿತವಾಗುತ್ತಾ ಬರುತ್ತಿರುವುದೇಕೆ? ಜಗಮಗಿಸುವ ಮಾಲ್‍ಗಳು, ನಗರಗಳು, ಸಿನಿಮಾಗಳ ಮಧ್ಯೆ ಮನುಷ್ಯರು ಮನುಷ್ಯತ್ವವನ್ನೇ ಕಳಕೊಳ್ಳುತ್ತಿರುವರೇ?
   ಏನೇ ಆಗಲಿ, ನಿಷ್ಠೆ ಬದಲಿಸಿದ 13 ಶಾಸಕರಿಗಿಂತ ಬೆಳಗಾವಿಯಲ್ಲಿ ಪತ್ತೆಯಾದ 16 ಭ್ರೂಣಗಳು ಖಂಡಿತ ಹೆಚ್ಚು ತೂಕವುಳ್ಳವು. ಒಂದು ವೇಳೆ ಈ ಭ್ರೂಣಗಳನ್ನು ಬೆಳೆಯಲು ಬಿಡುತ್ತಿದ್ದರೆ, 16 ಮೌಲ್ಯವಂತ ಮನುಷ್ಯರು ಈ ಸಮಾಜಕ್ಕೆ ದೊರಕುತ್ತಿದ್ದರೇನೋ. ಆದ್ದರಿಂದ ಭ್ರೂಣಹತ್ಯೆಯಂಥ ಕ್ರೌರ್ಯಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಲಿ. ನಿಷ್ಠೆ ಬದಲಿಸುವ ರಾಜಕಾರಣಿ ಮತ್ತು ಭ್ರೂಣಹತ್ಯೆ ಇವೆರಡರಲ್ಲಿ ಭ್ರೂಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿ.

Wednesday 16 January 2013

ನರಕದ ಟಿಕೇಟನ್ನು ಖರೀದಿಸುತ್ತಿರುವ ‘ಶಿಕ್ಷಿತ’ ಮಕ್ಕಳು..


   ದೆಹಲಿ ಅತ್ಯಾಚಾರ ಪ್ರಕರಣದ ಸುತ್ತ ಪತ್ರಿಕೆಗಳು ಗಂಭೀರ ಚರ್ಚೆಯಲ್ಲಿ ತೊಡಗಿರುವಾಗಲೇ ದೆಹಲಿಯಲ್ಲೊಂದು ಆಘಾತಕಾರೀ ಘಟನೆ ನಡೆದಿತ್ತು. ಸುದ್ದಿ ಮಾಧ್ಯಮಗಳ ಮಂದಿ ತಮ್ಮ ಕ್ಯಾಮರಾ ಮತ್ತು ಪೆನ್ನನ್ನು ‘ಅತ್ಯಾಚಾರದ' ಸುತ್ತಲೇ ಕೇಂದ್ರೀಕರಿಸಿದ್ದರಿಂದ ಆ ಘಟನೆ ಅಷ್ಟಾಗಿ ಸುದ್ದಿಯಾಗಲಿಲ್ಲ. ಉನ್ನತ ಶಿಕ್ಷಣ ಪಡೆದ ದೆಹಲಿಯ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಯನ್ನು ಬೀದಿಗಟ್ಟಿದ್ದರು. ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗಬಹುದೆಂದು ನಂಬಿದ್ದ ಮಕ್ಕಳೇ ಹೊರಹಾಕಿದಾಗ, ಆ ತಾಯಿಯು ಹಿರಿಯ ನಾಗರಿಕರ ನ್ಯಾಯಾಧೀಕರಣವನ್ನು ಸಂಪರ್ಕಿಸಿದರು. ಇದೀಗ ಈ ನ್ಯಾಯಾಧೀಕರಣವು ಆ ಇಬ್ಬರೂ ‘ಸುಶಿಕ್ಷಿತ' ಮಕ್ಕಳನ್ನು ಕರೆದು ಛೀಮಾರಿ ಹಾಕಿದೆಯಲ್ಲದೇ ಇಬ್ಬರು ಮಕ್ಕಳೂ ಪ್ರತಿ ತಿಂಗಳು ತಲಾ 4 ಸಾವಿರ ರೂಪಾಯಿಯಂತೆ ತಾಯಿಗೆ ಕೊಡಬೇಕೆಂದೂ ಮಾತ್ರವಲ್ಲ, ತಾಯಿಗೆ ಮನೆಯಲ್ಲೇ ಆಸರೆ ಒದಗಿಸಬೇಕೆಂದೂ ನಿರ್ದೇಶನ ನೀಡಿದೆ..
  ಇಷ್ಟಕ್ಕೂ, ಇದೇನೂ ಒಂಟಿ ಪ್ರಕರಣ ಅಲ್ಲ. ಹೆಲ್ಪ್ ಏಜ್ ಇಂಡಿಯಾ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸರ್ವೇಯ ಪ್ರಕಾರ, ಈ ದೇಶದಲ್ಲಿ ಶೇ. 31ರಷ್ಟು ಹಿರಿಯರು ತಮ್ಮ ಮನೆಯಲ್ಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆತ್ತವರನ್ನು ಪೀಡಿಸುವುದರಲ್ಲಿ ಅತ್ಯಂತ ಮುಂದಿರುವುದು ಗಂಡು ಮಕ್ಕಳೇ. ಇವರ ಸಂಖ್ಯೆ ಶೇ. 56. ದುರಂತ ಏನೆಂದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಹೆತ್ತವರು ಭಾಗ್ಯಶಾಲಿಗಳು. ನಗರ ಪ್ರದೇಶದಲ್ಲಿ ವಾಸಿಸುವ, ಅತ್ಯಂತ ಸುಶಿಕ್ಷಿತ ಮಕ್ಕಳೇ ತಮ್ಮ ಹೆತ್ತವರನ್ನು ಪೀಡಿಸುತ್ತಿದ್ದಾರೆ. ಪತಿ, ಪತ್ನಿ, ಮಕ್ಕಳು ಎಂಬ ಆಧುನಿಕ ಜೀವನ ಶೈಲಿಗೆ ಅಂಟಿಕೊಂಡಿರುವ ಈ ಮಕ್ಕಳು ಹೆತ್ತವರನ್ನು ಒಂಟಿಯಾಗಿಸಿ ನಗರಗಳಲ್ಲಿ ವಾಸಿಸುತ್ತಿದ್ದಾರೆ.. ಎಂದೆಲ್ಲಾ ಸರ್ವೇ ಅಭಿಪ್ರಾಯ ಪಟ್ಟಿದೆ.
   ನಿಜವಾಗಿ, ಈ ದೇಶದಲ್ಲಿ ದುರ್ಬಲ ಮತ್ತು ರೋಗಪೀಡಿತರಾದ ಹೆತ್ತವರ ಸ್ಥಿತಿ ಹೇಗಿದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸರ್ವೇಯ ಅಗತ್ಯವೇನೂ ಇಲ್ಲ. ನಗರಗಳ ಬೀದಿ; ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವೃದ್ಧಾಶ್ರಮಗಳಿಗೆ ಒಮ್ಮೆ ಭೇಟಿ ಕೊಟ್ಟರೆ, ಹೆತ್ತವರಿಗೆ ಈ ದೇಶ ಕೊಡುತ್ತಿರುವ ಗೌರವ ಏನೆಂಬುದು ಗೊತ್ತಾಗುತ್ತದೆ. ಒಂದು ಕಡೆ ದೇಶ ವೈಜ್ಞಾನಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಲೇ ಇದೆ. ಹೆಚ್ಚೆಚ್ಚು ಶಾಲೆ, ಕಾಲೇಜುಗಳು ನಿರ್ಮಾಣವಾಗುತ್ತಿವೆ. ಟ್ಯಾಬ್ಲೆಟ್‍ನಂತಹ ಅಗ್ಗದ ಕಂಪ್ಯೂಟರ್‍ಗಳನ್ನು ಸರಕಾರವೇ ಮಕ್ಕಳಿಗೆ ಒದಗಿಸುವ ಮೂಲಕ, ಶೈಕ್ಷಣಿಕ ಕ್ರಾಂತಿಗೆ ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ, ಅದೇ ಆಧುನಿಕ ಮಕ್ಕಳ ಹೆತ್ತವರು ತುಸು ಪ್ರೀತಿ, ಕರುಣೆಗಾಗಿ ಕೋರ್ಟು ಮೆಟ್ಟಲು ಹತ್ತುತ್ತಿದ್ದಾರೆ. ಅಂದ ಹಾಗೆ, ಶಿಕ್ಷಿತರಾಗುವುದು ಅಭಿವೃದ್ಧಿಯ ಮಾನದಂಡ ಎಂದಾದರೆ, ಆ ಅಭಿವೃದ್ಧಿಯಲ್ಲಿ ಹೆತ್ತವರೇಕೆ ಪ್ರತಿದಿನ ಅಭದ್ರತೆ ಅನುಭವಿಸುತ್ತಿದ್ದಾರೆ? ಓರ್ವ ವ್ಯಕ್ತಿ ಉನ್ನತ ಶಿಕ್ಷಣ ಪೂರೈಸಿ ಎಂಜನಿಯರೋ, ಡಾಕ್ಟರೋ ಆದರೆ ಈ ದೇಶ ಆತನನ್ನು ಶಿಕ್ಷಿತ ಎಂದು ಗುರುತಿಸುತ್ತದೆ. ಆತನಿಗೊಂದು ವಿಶೇಷ ವರ್ಚಸ್ಸು, ಗೌರವಾದರ ದೊರೆಯುತ್ತದೆ. ಅದೇ ವೇಳೆ ಓರ್ವ 7ನೇ ಕ್ಲಾಸಿಗೇ ಕಲಿಕೆಯನ್ನು ಕೊನೆಗೊಳಿಸಿದರೆ ಆತನಿಗೆ ಈ ಎಂಜಿನಿಯರ್‍ನ ಮುಂದೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಶಾಲೆ ಕಲಿಯದ ಪಶ್ಚಾತ್ತಾಪದಲ್ಲಿ ಪ್ರತಿಕ್ಷಣವೂ ನರಳುವಂತಹ ಸನ್ನಿವೇಶವೊಂದು ಆತನ ಮುಂದೆ ನಿರ್ಮಾಣವಾಗಿರುತ್ತದೆ. ಶೈಕ್ಷಣಿಕ ಅಭಿವೃದ್ಧಿಯ ಮಾನದಂಡದಂತೆ, ಡಾಕ್ಟರ್ ಬಹಳ ಸುಖೀ ಮತ್ತು ಆಧುನಿಕ ಮನುಷ್ಯ. ಕೃಷಿಯನ್ನೋ ಕೂಲಿಯನ್ನೋ ಕೆಲಸವಾಗಿ ಆಯ್ಕೆ ಮಾಡಿಕೊಂಡಿರುವ 7ನೇ ತರಗತಿಯ ಮನುಷ್ಯ ಈ ಅಭಿವೃದ್ಧಿಯ ಮಾನದಂಡದಂತೆ ಅತ್ಯಂತ ದುರ್ದೈವಿ. ಆತ ಯಾರ ಪಾಲಿಗೂ ಮಾದರಿ ಅಲ್ಲ.. ಬಹುಶಃ ಇಂಥದ್ದೊಂದು ಮಾನಸಿಕತೆ ಬಲವಾಗಿ ಬೇರೂರುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಆ ತಾಯಿ ಮತ್ತು ಹೆಲ್ಪ್ ಏಜ್ ಇಂಡಿಯಾದ ಸರ್ವೇಯು ಇನ್ನೊಂದು ಸತ್ಯವನ್ನು ಬಹಿರಂಗಕ್ಕೆ ತಂದಿದೆ. ಆಧುನಿಕ ಶಿಕ್ಷಣವು ಸುಖೀಯಾಗಿಸುವುದು ಅದನ್ನು ಪಡೆದವರನ್ನೇ ಹೊರತು ಅವರನ್ನು ಅವಲಂಬಿಸಿದವರನ್ನು ಅಲ್ಲ ಅನ್ನುವ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ. ಆದ್ದರಿಂದಲೇ ನಮ್ಮ ಶಿಕ್ಷಣ ಕ್ಷೇತ್ರ ಪುನರವಲೋಕನಕ್ಕೆ ತೆರೆದುಕೊಳ್ಳಬೇಕಾಗಿದೆ. ನಮ್ಮ ಶಿಕ್ಷಣದಲ್ಲಿ ಎಲ್ಲೋ ಒಂದು ಕಡೆ ದೋಷ ಇದೆ. ಈ ಶಿಕ್ಷಣಕ್ಕೆ ಹೆತ್ತವರನ್ನು ಗೌರವಿಸುವಂತಹ ವಾತಾವರಣ ಬೆಳೆಸಲು ಸಾಧ್ಯವಾಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಸಹೋದರಿಯರಂತೆ ಕಾಣುವಲ್ಲೂ ಸೋಲುತ್ತಿದೆ.
   ಯಾವ ಹೆತ್ತವರೂ ತಮ್ಮ ಮಕ್ಕಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಇಷ್ಟಪಡುವುದಿಲ್ಲ. ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದೂ ಇಲ್ಲ. ಹೆತ್ತವರ ಈ ವಿಶಾಲ ಮನಸ್ಥಿತಿಯಿಂದಾಗಿಯೇ ಹೆಚ್ಚಿನ ಮಕ್ಕಳು ಇವತ್ತು ಸಮಾಜದಲ್ಲಿ ಮರ್ಯಾದೆಯನ್ನು ಉಳಿಸಿಕೊಂಡಿರುವುದು. ಒಂದು ವೇಳೆ ವೃದ್ಧ ಹೆತ್ತವರೇನಾದರೂ ಬಾಯಿ ತೆರೆದರೆ, ಜನರ ಮುಂದೆ ಸುಭಗರಂತೆ ಫೋಸು ಕೊಡುವ ಎಷ್ಟೋ ಮಕ್ಕಳ ಬಣ್ಣ ಖಂಡಿತ ಬಯಲಾದೀತು. ಆದ್ದರಿಂದ ಹೆತ್ತವರ ಈ ಹೃದಯ ವೈಶಾಲ್ಯತೆಗೆ ಆಧುನಿಕ ಶಿಕ್ಷಿತ ವರ್ಗ ಗೌರವ ನೀಡಬೇಕಾಗಿದೆ. ಮಕ್ಕಳು,  ಹೆತ್ತವರನ್ನು ಬೀದಿ ಪಾಲು ಮಾಡುವುದು ಬಿಡಿ, ‘ಛೆ' ಎಂಬ ಪದವನ್ನು ಕೂಡ ಪ್ರಯೋಗಿಸಬಾರದು (17:23) ಎಂದು ಪವಿತ್ರ ಕುರ್‍ಆನ್ ತಾಕೀತು ಮಾಡಿದೆ. ಓರ್ವರ ಸ್ವರ್ಗ ಇಲ್ಲವೇ ನರಕವನ್ನು ನಿರ್ಣಯಿಸುವುದು ಅವರ ಹೆತ್ತವರು ಎಂದಿದ್ದೂ ಇಸ್ಲಾಮ್. ಹೆತ್ತವರು ಮುನಿಸಿಕೊಂಡಿದ್ದರೆ ಎಷ್ಟೇ ನಮಾಝ್, ಹಜ್ಜ್ ನಿರ್ವಹಿಸಿದರೂ ಮಕ್ಕಳಿಗೆ ಸ್ವರ್ಗ ಸಿಗಲಾರದು ಎಂದಿದ್ದೂ ಇಸ್ಲಾಮೇ. ಪ್ರಸವದ ಸಂದರ್ಭದಲ್ಲಿ ತಾಯಿ ಅನುಭವಿಸಿದ ಒಂದು ಕ್ಷಣದ ನೋವಿಗೆ ಮಕ್ಕಳು ಜೀವನ ಪೂರ್ತಿ ಸೇವೆ ಮಾಡಿದರೂ ಸಾಟಿಯಾಗಲಾರದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಒಂದು ರೀತಿಯಲ್ಲಿ, ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್‍ರು(ಸ) ಹೆತ್ತವರ ಸೇವೆಯನ್ನು ಸ್ವರ್ಗದ ಟಿಕೇಟು ಎಂದು ಮಾತ್ರವಲ್ಲ, ಶಿಕ್ಷಣದ ಮೂಲ ಪಾಠವಾಗಿ ಕಲಿಸಿದ್ದಾರೆ. ಹೆತ್ತವರನ್ನು ಬಸ್ ನಿಲ್ದಾಣದಲ್ಲಿ ತೊರೆದು ಬಿಡುವ, ಹೊರೆಯೆಂದು ಪರಿಗಣಿಸಿ ವೃದ್ಧಾಶ್ರಮಕ್ಕೆ ಅಟ್ಟುವವರನ್ನು ‘ನರಕ'ದ ಮನುಷ್ಯರೆಂಬ ಕಟು ಪಾಠವನ್ನು ಮೂಲಭೂತ ಶಿಕ್ಷಣವಾಗಿ ಕಲಿಸಿದ್ದಾರೆ. ಈ ಶಿಕ್ಷಣ ಇವತ್ತು ಸಾರ್ವತ್ರೀಕರಣಗೊಳ್ಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಮುಂದೊಂದು ದಿನ ನ್ಯಾಯಾಲಯಗಳ ಕಟಕಟೆಯಲ್ಲಿ ಹೆತ್ತವರು ಮತ್ತು ಮಕ್ಕಳೇ ತುಂಬಿ ಹೋದಾರು.

Monday 7 January 2013

'ನಿರ್ಭಯ' ತೆರೆದ ಬಾಗಿಲನ್ನು ಮುಚ್ಚದಿರೋಣ


ಹೆಣ್ಣು ಕಳೆದ ಮೊರ್ನಾಲ್ಕು  ವಾರಗಳಿಂದ ಮಾಧ್ಯಮಗಳ ಮುಖಪುಟದಲ್ಲಿದ್ದಾಳೆ. ಆಕೆಯನ್ನು ಕೇಂದ್ರೀಕರಿಸಿ ಪತ್ರಿಕೆಗಳಲ್ಲಿ ಸುದ್ದಿ ರಚನೆಯಾಗತೊಡಗಿವೆ. ರಾಜಕಾರಣಿಗಳು, ನ್ಯಾಯಾಧೀಶರು, ಟಿ.ವಿ. ಚಾನೆಲ್‍ಗಳು.. ಎಲ್ಲರೂ ಹೆಣ್ಣಿನ ಬಗ್ಗೆ ಮಾತಾಡತೊಡಗಿದ್ದಾರೆ. ಧರ್ಮಗಳಲ್ಲಿ ಹೆಣ್ಣಿನ ಸ್ಥಾನ-ಮಾನ, ಆಧುನಿಕ ಜಗತ್ತಿನಲ್ಲಿ ಹೆಣ್ಣು ಸಾಗುತ್ತಿರುವ ದಿಕ್ಕು, ಆಕೆಯ ಬಟ್ಟೆ, ವರ್ತನೆ, ಪಾಶ್ಚಾತ್ಯ ಸಂಸ್ಕ್ರಿತಿಯ ಸರಿ-ತಪ್ಪುಗಳು, ಸಡಿಲ ಕಾನೂನುಗಳು.. ಎಲ್ಲವೂ ಚರ್ಚೆಗೊಳಗಾಗುತ್ತಿವೆ. ನಿಜವಾಗಿ, ಹೆಣ್ಣು ಹೀಗೆ ದಿಢೀರ್ ಆಗಿ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡದ್ದು ಪುಕ್ಕಟೆಯಾಗಿ ಅಲ್ಲ. ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರಕ್ಕೆ ಒಳಗಾಗುತ್ತಾ, 'ಗಂಭೀರ ಸಮಸ್ಯೆಗಳ ಪಟ್ಟಿಯಲ್ಲಿ ತನ್ನನ್ನೂ ಸೇರಿಸಿಕೊಳ್ಳಿ..' ಎಂದು ದೀರ್ಘ ಸಮಯದಿಂದ ಹೆಣ್ಣು ಮೊರೆಯಿಡುತ್ತಿದ್ದಳು. ಸದ್ಯ ಆ 20 ನಿಮಿಷಗಳು 15 ನಿಮಿಷಗಳಾಗಿ ಬದಲಾಗಿವೆ. ಒಂದು ವೇಳೆ 'ನಿರ್ಭಯ'ಳ ಮೇಲಿನ ಅತ್ಯಾಚಾರವು ದೆಹಲಿ ಬಿಟ್ಟು ದೇಶದ ಇನ್ನಾವುದೋ ಭಾಗದಲ್ಲಿ ಆಗಿರುತ್ತಿದ್ದರೆ ಪತ್ರಿಕೆಗಳ ಮುಖಪುಟದಲ್ಲಿ ಅದಕ್ಕೆ ಜಾಗ ಸಿಗುವ ಸಾಧ್ಯತೆಯೇ ಇರಲಿಲ್ಲ. ಈ ಮಟ್ಟದ ಪ್ರತಿಭಟನೆಗಳಾಗಲಿ, ಕಾನೂನು ರಚನೆಯ ಪ್ರಯತ್ನಗಳಾಗಲೀ ಆಗುತ್ತಲೂ ಇರಲಿಲ್ಲ. ವಿಶೇಷ ಏನೆಂದರೆ, 'ನಿರ್ಭಯ' ಈಗ ಎಲ್ಲರನ್ನೂ ಎಚ್ಚರಗೊಳಿಸಿದ್ದಾಳೆ. ಹೆಣ್ಣು ಮತ್ತು ಗಂಡಿನ ನಡುವೆ ಇರುವ ವ್ಯತ್ಯಾಸ, ಇರಲೇಬೇಕಾದ ಅಂತರಗಳ ಬಗ್ಗೆ ಧೈರ್ಯದಿಂದ ಮಾತಾಡುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾಳೆ. ಈ ಮೊದಲು ಹೆಣ್ಣಿನ ಉಡುಪನ್ನು ವಿಮರ್ಶಿಸುವುದನ್ನು ಮಹಿಳಾ ಆಯೋಗಗಳು ಮತ್ತು ಫೆಮಿನಿಸ್ಟ್ ಗಳು ಅಪರಾಧವೆಂಬಂತೆ ಪರಿಗಣಿಸುತ್ತಿದ್ದರು.  ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹೆಣ್ಣಿನ ಪಾತ್ರವೂ ಇದೆ ಎಂಬ ಬರಹ, ಪತ್ರಗಳನ್ನು ಪ್ರಕಟಿಸುವ ಧೈರ್ಯವನ್ನು ಪತ್ರಿಕೆಗಳು ಮಾಡಿದ್ದೂ ಕಡಿಮೆ. ಹಾಗಂತ ಅಂಥ ಬರಹಗಳ ಬಗ್ಗೆ ಸಂಪಾದಕೀಯ ಮಂಡಳಿಗೆ ಸಹಮತ ಇಲ್ಲ ಎಂದಲ್ಲ. ಸುಮ್ಮನೆ ರಿಸ್ಕ್ ಯಾಕೆ, ಮಹಿಳಾ ವಿರೋಧಿಗಳೆಂಬ ಹಣೆಪಟ್ಟಿಯನ್ನು ಯಾಕೆ ಹಚ್ಚಿಕೊಳ್ಳಬೇಕು ಎಂಬ ‘ಸುರಕ್ಷಿತ’ ನಿಲುವಿಗೆ ಹೆಚ್ಚಿನ ಪತ್ರಿಕೆಗಳು ಅಂಟಿಕೊಂಡಿದ್ದವು. ಆದರೆ ಸದ್ಯ ಈ ಮಡಿವಂತಿಕೆಯನ್ನು 'ನಿರ್ಭಯ' ಮುರಿದು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ಮಹಿಳೆಯರೇ ಮಹಿಳೆಯರ ಜೀವನ ವಿಧಾನವನ್ನು ವಿಮರ್ಶಿಸುವ ಧೈರ್ಯವನ್ನು ತೋರುತ್ತಿದ್ದಾರೆ. 'ಲೈಂಗಿಕ ದೌರ್ಜನ್ಯಕ್ಕೆ ಪುರುಷರಷ್ಟೇ ಮಹಿಳೆಯರೂ ಜವಾಬ್ದಾರರು..' ಎಂದು ಛತ್ತೀಸ್‍ಗಢ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಭಾ ರಾವ್ ಅಭಿಪ್ರಾಯಪಟ್ಟಿದ್ದಾರೆ. ಹೆಣ್ಣಿನ ಉಡುಪು ಮತ್ತು ವರ್ತನೆಗಳು ಪುರುಷರಿಗೆ ತಪ್ಪು ಸಂದೇಶವನ್ನು ಕೊಡುವಂತಿರುತ್ತವೆ, ಹೆಣ್ಣು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ..' ಎಂದಿದ್ದಾರೆ. ಮಮತಾ ಬ್ಯಾನರ್ಜಿಯವರೂ ಇಂಥದ್ದೇ ಅರ್ಥ ಬರುವ ಮಾತಾಡಿದ್ದಾರೆ. ಪುದುಚೇರಿ ಸರಕಾರವಂತೂ ತನ್ನ ಶಿಕ್ಷಣ ನೀತಿಗಳಲ್ಲೇ ಬದಲಾವಣೆ ತರಲು ನಿರ್ಧರಿಸಿದೆ. ಹುಡುಗ ಮತ್ತು ಹುಡುಗಿಯರಿಗೆ ಬೇರೆ ಬೇರೆ ಶಾಲಾ ಬಸ್‍ಗಳನ್ನು ವ್ಯವಸ್ಥೆ ಮಾಡುವುದು; ಹೆಣ್ಣು ಮಕ್ಕಳು ಸಮವಸ್ತ್ರದ ಮೇಲೆ ಓವರ್ ಕೋಟನ್ನು (ಮೇಲು ಹೊದಿಕೆ) ಧರಿಸುವುದು; ಮೊಬೈಲನ್ನು ನಿರ್ಬಂಧಿಸುವುದು; ಹುಡುಗ, ಹುಡುಗಿಯರ ನಡುವಿನ ಸಂಪರ್ಕವನ್ನು ಸಾಕಷ್ಟು ಮಟ್ಟಿಗೆ ಕಡಿತಗೊಳಿಸುವುದು.. ಮುಂತಾದ ಸುಧಾರಣಾ ನೀತಿಗಳ ಜಾರಿಗಾಗಿ ಅದು ಗಂಭೀರ ಪ್ರಯತ್ನಕ್ಕಿಳಿದಿದೆ.
  ಒಂದು ರೀತಿಯಲ್ಲಿ ನಿರ್ಭಯಳ ಸಾವು ನಿರ್ಭಯ ಸಮಾಜವೊಂದರ ರಚನೆಯ ಬಗ್ಗೆ ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಲು ಯಶಸ್ವಿಯಾಗಿದೆ. ಇಷ್ಟಕ್ಕೂ ಹೆಣ್ಣಿಗೆ ಒಂದಷ್ಟು ಹಿತವಚನಗಳನ್ನು ಹೇಳುವುದು, ಪುರುಷರ ತಪ್ಪುಗಳನ್ನು ಖಂಡಿಸುತ್ತಲೇ ಹೆಣ್ಣಿನ ಅತಿರೇಕಗಳ ಬಗ್ಗೆಯೂ ಮಾತಾಡುವುದು ಯಾಕೆ ಪುರಾತನ ಅನ್ನಿಸಿಕೊಳ್ಳಬೇಕು? ಯಾವುದೇ ಒಂದು ಸಮಸ್ಯೆಯ ಬಗ್ಗೆ ಚರ್ಚಿಸುವಾಗ ಅದರ ಎರಡೂ ಮಗ್ಗುಲುಗಳನ್ನು ಚರ್ಚಿಸಬೇಕಾದುದು ಅಗತ್ಯವಲ್ಲವೇ? ಮತ್ತೇಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಮಗ್ಗುಲು ಮಾತ್ರ ಚರ್ಚೆಗೊಳಗಾಗುವುದು? ಹೆಣ್ಣಿನ ಉಡುಪು, ಜೀವನ ವಿಧಾನ, ಸ್ವಚ್ಛಂದ ಬೆರೆಯುವಿಕೆಗಳನ್ನೆಲ್ಲ ವಿಮರ್ಶೆಗೊಡ್ಡುವುದು ಮಹಿಳಾ ವಿರೋಧಿಯೆಂದು ಯಾಕೆ ಗುರುತಿಸಿಕೊಳ್ಳಬೇಕು?  ವಿಮರ್ಶೆ, ಟೀಕೆಗಳಿಗೆ ಎಲ್ಲರೂ ಎಲ್ಲ ಕ್ಷೇತ್ರಗಳೂ ಮುಕ್ತವಾಗಿರುವುದೇ ಸುಧಾರಣೆಯ ದೃಷ್ಟಿಯಿಂದ ಹೆಚ್ಚು ಉತ್ತಮವಲ್ಲವೇ?
  ಆದ್ದರಿಂದಲೇ, ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸದ್ಯ ಕಾಣಿಸಿಕೊಂಡಿರುವ ಚರ್ಚೆಗಳು ಹೆಚ್ಚು ಇಷ್ಟವಾಗುವುದು. ಈ ಮೊದಲು ಮಾಧ್ಯಮಗಳು ಹೆಣ್ಣನ್ನು ಸೌಂದರ್ಯದ ಕಾರಣಕ್ಕಾಗಿ ಮಾತ್ರ ಚರ್ಚೆಗೆತ್ತಿಕೊಳ್ಳುತ್ತಿದ್ದುವು. ಸೆಲೆಬ್ರಿಟಿಗಳಿಗಾಗಿ ಪ್ರತ್ಯೇಕ ಪುಟಗಳನ್ನು ಮೀಸಲಿಟ್ಟು, ಅಲ್ಲಿ ಅವರ ಕಾಲು, ಕೈ, ಮೊಗುಗಳನ್ನು ವರ್ಣಿಸುತ್ತಾ, ಅವರಿಗೆ ಯಾರ ಯಾರ ಜೊತೆ ಯಾವ್ಯಾವ ಬಗೆಯ ಅಫೇರ್‍ಗಳಿವೆ ಎಂಬುದನ್ನೆಲ್ಲಾ 'ಗಂಭೀರ' ಸುದ್ದಿಗಳಂತೆ ಪ್ರಕಟಿಸುತ್ತಿದ್ದುವು. ಒಂದು ವೇಳೆ ಪತ್ರಿಕೆಗಳ ಮುಖಪುಟದಲ್ಲಿ ಹೆಣ್ಣೊಬ್ಬಳು ಕಾಣಿಸಿಕೊಳ್ಳಬೇಕಾದರೆ ಒಂದೋ ಆಕೆ ಸೆಲೆಬ್ರಿಟಿಯಾಗಿರಬೇಕು ಇಲ್ಲವೇ ರಾಜಕಾರಣಿಯಾಗಿರಬೇಕು ಎಂಬಂಥ ವಾತಾವರಣವನ್ನು ಅವು ಸೃಷ್ಟಿಸಿದ್ದುವು. ಸೆಲೆಬ್ರಿಟಿಗಳು ಎಲ್ಲಾದರೂ ಸಿನಿಮಾ ಚಿತ್ರೀಕರಣಕ್ಕೆ ಹೋಗಿ ಅಲ್ಲಿ ಅಭಿಮಾನಿಯೊಬ್ಬ ಅಸಭ್ಯವಾಗಿ ವರ್ತಿಸಿದರೆ ಅದು ಮುಖಪುಟದಲ್ಲಿ ಸುದ್ದಿಯಾಗುತ್ತಿತ್ತೇ ಹೊರತು, ಸಾಮಾನ್ಯ ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೀಡಾಗಿ ಸಾವಿಗೀಡಾದರೂ ಒಳಪುಟದಲ್ಲಿ ಒಂದು ಕಾಲಮ್‍ನ ಸುದ್ದಿಯಾಗಿ ಪ್ರಕಟವಾಗುತ್ತಿತ್ತು. ಹೆಣ್ಣೆಂದರೆ, ಅದು ಸಿನಿಮಾ ತಾರೆ ಮತ್ತು ಹೆಣ್ಣಿನ ಸಮಸ್ಯೆ ಎಂದರೆ ಅದು ಸಿನಿಮಾ ತಾರೆಯರ ಸಮಸ್ಯೆ ಎಂಬ ವಾತಾವರಣ ಇದ್ದುದರಿಂದಲೇ ಸಾಮಾನ್ಯ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, 'ನಿರ್ಭಯ'ಳ ಸಾವಿನ ವರೆಗೆ ಸುದ್ದಿಯಾಗದೇ ಸತ್ತು ಹೋಗುತ್ತಿದ್ದುದು. ಇದೀಗ ಪತ್ರಿಕೆಗಳ ಧೋರಣೆಯಲ್ಲಿ ಯಾವ ಮಟ್ಟದ ಬದಲಾವಣೆಯಾಗಿದೆಯೆಂದರೆ, 8ನೇ ತರಗತಿಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಶಿಕ್ಷಣ ಪ್ರತ್ಯೇಕವಾಗಿ ನಡೆಯಬೇಕು ಎಂದು ಅಭಿಪ್ರಾಯ ಪಡುವ 'ಪತ್ರ'ಗಳು ‘ದಿ ಹಿಂದೂ'ವಿನಂಥ ಪತ್ರಿಕೆಗಳಲ್ಲಿ ಪ್ರಕಟವಾಗುವಷ್ಟು. ಇದನ್ನು ಖಂಡಿತ ಸ್ವಾಗತಿಸಬೇಕು.
  ಏನೇ ಆಗಲಿ, 'ನಿರ್ಭಯ'ಳ ಸಾವು, ಸಾವಿಗೀಡಾಗಿರುವ ಮೌಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಈ ವರೆಗೆ ಮಾತಾಡುವುದಕ್ಕೆ ಯಾರು ಮಡಿವಂತಿಕೆ ತೋರುತ್ತಿದ್ದರೋ ಅವರೆಲ್ಲ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಷ್ಟು ಈ ಚರ್ಚಾವಲಯ ವಿಸ್ತಾರವಾಗುತ್ತಿದೆ. ಮಾಧ್ಯಮಗಳ ಧೋರಣೆಯಲ್ಲೂ ಒಂದು ಬಗೆಯ ಬದಲಾವಣೆ ಕಾಣಿಸುತ್ತಿದೆ. ಸಾಮಾನ್ಯ ಹೆಣ್ಣು ಮಗಳು ಪತ್ರಿಕೆಗಳ ಮುಖಪುಟದಲ್ಲಿ ಚರ್ಚೆಗೊಳಗಾಗುತ್ತಿದ್ದಾಳೆ. ಆಕೆಯ ಮೇಲಿನ ದೌರ್ಜನ್ಯಗಳು ಮುಖಪುಟದ ವಸ್ತುವಾಗುವಷ್ಟು ಮಹತ್ವಪೂರ್ಣ ಅನ್ನಿಸಿಕೊಳ್ಳುತ್ತಿವೆ. ಆಧುನಿಕ ಮಹಿಳೆಯರ ಬಗ್ಗೆ ಆಧುನಿಕ ಮಹಿಳೆಯರೇ ಮಾತಾಡುವಂಥ; ಹೆಣ್ಣಿನ ಬಟ್ಟೆ, ಸಂಸ್ಕ್ರಿತಿ, ಜೀವನ ಕ್ರಮಗಳ ಬಗ್ಗೆ ಚರ್ಚಿಸುವಂಥ ಮುಕ್ತ ವಾತಾವರಣ ಸೃಷ್ಟಿಯಾಗುತ್ತಿದೆ. ನಿಜವಾಗಿ, ನಿರ್ಭಯ ಸಮಾಜವೊಂದು ತಯಾರಾಗಬೇಕಾದರೆ ಇಂಥದ್ದೊಂದು ಮುಕ್ತ ಚರ್ಚೆ ನಡೆಯಬೇಕಾದುದು ಅತೀ ಅಗತ್ಯ. 'ನಿರ್ಭಯ'ಳ ಮೊಲಕ ತೆರೆದುಕೊಂಡ ಈ ಚರ್ಚೆಯ ಬಾಗಿಲು ಇನ್ನಷ್ಟು ದಿನ ತೆರೆದಿರಲಿ ಮತ್ತು ನಿರ್ಮಲ ಸಮಾಜವನ್ನು ಕಟ್ಟುವಲ್ಲಿ ಈ ಚರ್ಚೆಗಳು ಸಹಾಯಕವಾಗಲಿ.