Monday 5 August 2013

ಗೋವನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸದಿರೋಣ

    ಗೋವಿನ ಸುತ್ತ ಈ ದೇಶದಲ್ಲಿ ಅತಿ ಅನ್ನಬಹುದಾದಷ್ಟು ಬಾರಿ ಚರ್ಚೆಗಳು ನಡೆದಿವೆ. ಗೋವನ್ನು ಆರಾಧ್ಯವಾಗಿ ಪರಿಗಣಿಸುವವರು ಇರುವಂತೆಯೇ ಆಹಾರವಾಗಿ ಪರಿಗಣಿಸುವವರೂ ಈ ದೇಶದಲ್ಲಿ ಧಾರಾಳ ಇದ್ದಾರೆ. ಹಾಗಂತ ಈ ಭಿನ್ನ ದೃಷ್ಟಿಕೋನಗಳನ್ನು ಸಮಾಜಘಾತುಕರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸುವುದನ್ನು ಯಾರೂ ಯಾವ ಕಾರಣಕ್ಕೂ ಬೆಂಬಲಿಸಬಾರದು. ಗೋವನ್ನು ಆರಾಧಿಸುವವರನ್ನು ಅವಮಾನಿಸುವುದಕ್ಕಾಗಿ ಯಾರಾದರೂ ಗೋಮಾಂಸ ಸೇವಿಸುತ್ತಾರಾದರೆ ಅಥವಾ ಜಾನುವಾರುಗಳ ಹತ್ಯೆ ನಡೆಸುತ್ತಾರಾದರೆ, ಅವರನ್ನು ಬಲವಾಗಿ ಖಂಡಿಸುವುದಕ್ಕೆ ನಮಗೆ ಸಾಧ್ಯವಾಗಬೇಕು. ಯಾಕೆಂದರೆ ಇನ್ನೊಬ್ಬರ ಆರಾಧ್ಯರನ್ನು ಅವಮಾನಿಸುವುದನ್ನು ಪವಿತ್ರ ಕುರ್‍ಆನ್ ಕಾನೂನುಬಾಹಿರವೆಂದು ಸಾರುತ್ತದೆ. (6:17)
   ರಾಜ್ಯ ಬಿಜೆಪಿ ಸರಕಾರವು 2010ರಲ್ಲಿ ಗೋ ಸಂರಕ್ಷಣಾ ಕಾಯ್ದೆಯನ್ನು ರೂಪಿಸಿದಾಗ ರಾಜ್ಯದಲ್ಲಿ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಗೋವು, ಕರು, ಎತ್ತು, ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವುದು 1 ಲಕ್ಷ ರೂ. ದಂಡಕ್ಕೆ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧವೆಂದು ಕಾಯ್ದೆಯಲ್ಲಿ ಉಲ್ಲೇಖಿಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾದುವು. ಬಳಕೆಗೆ ಯೋಗ್ಯವಲ್ಲದ ಎತ್ತು, ಕೋಣಗಳನ್ನು ಮತ್ತು ಬಂಜೆಯಾಗಿರುವ ಗೋವು, ಎಮ್ಮೆಗಳನ್ನು ರೈತರು ಏನು ಮಾಡಬೇಕು ಎಂದು ಅನೇಕರು ಪ್ರಶ್ನಿಸಿದರು. ಒಂದು ಹಸು ಅಥವಾ ಎಮ್ಮೆಯ ಆಯುಷ್ಯ ಸಾಮಾನ್ಯವಾಗಿ 25 ವರ್ಷ ಆಗಿದ್ದರೂ ಅದು ಹಾಲು ಕೊಡುವುದು 15 ವರ್ಷಗಳ ವರೆಗೆ ಮಾತ್ರ. ಉಳಿದ 10 ವರ್ಷಗಳ ವರೆಗೆ ಓರ್ವ ರೈತ ಅದನ್ನು ಸಾಕಬೇಕಾದರೆ ಸಾಕಷ್ಟು ದುಡ್ಡಿನ ಅಗತ್ಯ ಇದೆ. ಉಳುಮೆಗೆ ಯೋಗ್ಯವಲ್ಲದ ಎತ್ತು, ಕೋಣದ ಸ್ಥಿತಿಯೂ ಹೀಗೆಯೇ. ಅವುಗಳನ್ನು ಮಾರದೇ ಹೊಸತನ್ನು ಖರೀದಿಸುವುದಕ್ಕೆ ರೈತ ಎಲ್ಲಿಂದ ದುಡ್ಡು ಹೊಂದಿಸಬೇಕು? ಆದ್ದರಿಂದ ಸರಕಾರವು ಮುದಿ ಜಾನುವಾರುಗಳನ್ನು ಖರೀದಿಸುವುದಕ್ಕೆ ವ್ಯವಸ್ಥೆ ಮಾಡದೆ ಮತ್ತು ಮೇವು, ಹಿಂಡಿಗಾಗಿ ಬಜೆಟ್‍ ಅನ್ನು ರೂಪಿಸದೇ ಕೇವಲ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವುದು ತಪ್ಪು ಎಂದು ಅನೇಕರು ವಾದಿಸಿದರು. ಹೀಗಿರುತ್ತಾ, ಹಿಂದಿನ 1964 ರ ಕಾಯ್ದೆಯನ್ನೇ ಈಗಿನ ಕಾಂಗ್ರೆಸ್ ಸರಕಾರವು ಊರ್ಜಿತಗೊಳಿಸಿತು. ಹಾಗಂತ ಈ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ನಡೆದಿಲ್ಲ ಎಂದಲ್ಲ. ನಡೆದಿದೆ. ಆದರೆ ಈ ಪರ ಮತ್ತು ವಿರುದ್ಧ ನಿಲುವುಗಳನ್ನು ಗೌರವಿಸಬೇಕೇ ಹೊರತು ಒಂದನ್ನು ದೇಶಪ್ರೇಮಿಯೆಂದೂ ಇನ್ನೊಂದನ್ನು ದೇಶದ್ರೋಹಿಯೆಂದೂ ವಿಭಜಿಸುವುದು ಖಂಡಿತ ತಪ್ಪು.
   ಆದರೆ ಇತ್ತಿತ್ತಲಾಗಿ ಗೋ ಕಳ್ಳತನ ಎಂಬ ಶೀರ್ಷಿಕೆಯಲ್ಲಿ ಹೆಚ್ಚೆಚ್ಚು ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಗೋವನ್ನು ಕದಿಯುವವರಿಗೂ ಅದನ್ನು ಆಹಾರವಾಗಿಯೂ ಪರಿಗಣಿಸುವವರಿಗೆ ವ್ಯತ್ಯಾಸವಿದೆ. ಕದಿಯುವುದು ಯಾವ ವಸ್ತುವನ್ನೇ ಆದರೂ ಅಪರಾಧವೇ. ಕೇವಲ ಗೋವು ಎಂದಲ್ಲ, ಅಕ್ರಮವಾಗಿ ಜಾನು ವಾರುಗಳನ್ನು ಸಾಗಾಟ ಮಾಡುವುದು, ಮಾಂಸ ಮಾಡುವುದನ್ನು ಯಾವ ನಿಟ್ಟಿನಲ್ಲೂ ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ಹಾಲು ಕೊಡುವ ಆಕಳನ್ನು ಮತ್ತು ಕರುವನ್ನು ಮಾಂಸಕ್ಕಾಗಿ ಉಪಯೋಗಿಸುವುದನ್ನು ಇಸ್ಲಾಂ ಬಲವಾಗಿ ವಿರೋಧಿಸುತ್ತದೆ. ಅಂಥವರು  ಯಾರೇ ಆಗಿರಲಿ, ಯಾವ ಧರ್ಮಕ್ಕೇ ಸೇರಿರಲಿ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು.
   ಸಾರ್ವಜನಿಕವಾಗಿ ಇವತ್ತು ಒಂದು ಬಗೆಯ ಪೂರ್ವಗ್ರಹವಿದೆ. ಗೋ ಕಳ್ಳತನ ಅಥವಾ ಅಕ್ರಮ ಸಾಗಾಟಕ್ಕೆ ಮುಸ್ಲಿಮ್ ಸಮುದಾಯದ ಬೆಂಬಲವಿದೆ ಎಂದು ನಂಬಿಕೊಂಡವರು ಸಮಾಜದಲ್ಲಿದ್ದಾರೆ. ಅಕ್ರಮ ಕಸಾಯಿಖಾನೆಗಳ ಬಗ್ಗೆಯೂ ಇಂಥದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಿದ್ದಾರೆ. ನಿಜವಾಗಿ, ಕದಿಯುವುದು ಗೋವನ್ನಾದರೂ ಇನ್ನೇನನ್ನೇ ಆದರೂ ಅದು ಕಳ್ಳತನವೇ. ಗೋವನ್ನು ಕದ್ದರೆ ಅದನ್ನು ಬೆಂಬಲಿಸುವುದು, ಅಡಿಕೆ ಕದ್ದರೆ ವಿರೋಧಿಸುವುದನ್ನು ಯಾರಿಂದಲೂ ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ಇತರೆಲ್ಲ ವಸ್ತುಗಳ ಅಕ್ರಮ ಸಾಗಾಟ ಹೇಗೆ ತಪ್ಪೋ ಹಾಗೆಯೇ ಅಕ್ರಮ ಗೋಸಾಗಾಟವೂ. ದುರಂತ ಏನೆಂದರೆ, ಗೋವಿಗೆ ಸಂಬಂಧಿಸಿದ ಯಾವುದೇ ಚರ್ಚೆಯನ್ನು ಇವತ್ತು ಮುಸ್ಲಿಮ್ vs ಹಿಂದೂ ಎಂದು ವಿಭಜಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಗೋಹತ್ಯೆ ನಿಷೇಧಕ್ಕೆ ಮುಸ್ಲಿಮರೇ ಅಡ್ಡಗಾಲಾಗಿದ್ದಾರೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಿಜವಾಗಿ, ಗೋವು ಮುಸ್ಲಿಮರ ಅನಿವಾರ್ಯ ಆಹಾರವೇನೂ ಅಲ್ಲ. ಅದನ್ನು ತಿನ್ನದಿದ್ದರೆ ಮುಸ್ಲಿಮರ ವಿಶ್ವಾಸಕ್ಕೆ ಯಾವ ರೀತಿಯ ಧಕ್ಕೆಯೂ ತಗಲುವುದಿಲ್ಲ. ಅಲ್ಲದೇ, ಅದನ್ನು ಈ ದೇಶಕ್ಕೆ ಆಹಾರವಾಗಿ ಪರಿಚಯಿಸಿದ್ದೂ ಮುಸ್ಲಿಮರಲ್ಲ. ಹೌದು, ಎಂದಾಗಿದ್ದರೆ ಅದನ್ನು ತಿನ್ನುವವರು ಕೇವಲ ಮುಸ್ಲಿಮರಷ್ಟೇ ಆಗಿರಬೇಕಿತ್ತಲ್ಲವೇ? ಈ ದೇಶದಲ್ಲಿ ಗೋ ಮಾಂಸ ಇವತ್ತು ಆಹಾರವಾಗಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಮುಸ್ಲಿಮರಲ್ಲ, ಬಹುಸಂಖ್ಯಾತರೇ. ಅವರ ಬೇಡಿಕೆಯಿಂದಾಗಿಯೇ ಅದು ಈ ವರೆಗೆ ಆಹಾರವಾಗಿ ಉಳಿದುಕೊಂಡಿದೆ. ಒಂದುವೇಳೆ,  ಗೋಮಾಂಸ ಕೇವಲ ಮುಸ್ಲಿಮರ ಆಹಾರವಷ್ಟೇ ಆಗಿರುತ್ತಿದ್ದರೆ ಈ ದೇಶದಲ್ಲಿ ಎಂದೋ ಅದು ನಿಷೇದಕ್ಕೆ ಒಳಗಾಗುತ್ತಿತ್ತು.  ಅಷ್ಟೇ ಅಲ್ಲ, ಈ ದೇಶದಲ್ಲಿ ಇವತ್ತು 3500ಕ್ಕಿಂತಲೂ ಅಧಿಕ ವಧಾಗ್ರಹಗಳಿವೆ. ಅವನ್ನು ಸ್ಥಾಪಿಸಿದ್ದು, ಅದಕ್ಕೆ ಪರವಾನಿಗೆ ಕೊಟ್ಟದ್ದೆಲ್ಲ ಮುಸ್ಲಿಮರು ಅಲ್ಲವಲ್ಲ. ಇವತ್ತು ಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹಾಗೆಯೇ, 1998ರಿಂದಲೇ ಹಾಲುತ್ಪಾದನೆಯಲ್ಲೂ ಭಾರತ ಪ್ರಥಮ ಸ್ಥಾನದಲ್ಲಿದೆ. ಜೊತೆಗೇ, 2016-17ರ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲುತ್ಪಾದನೆಯ ಗುರಿಯನ್ನು ಕೇಂದ್ರ ಸರಕಾರ ಇಟ್ಟುಕೊಂಡಿದ್ದು ಮೇವಿಗಾಗಿ 2,242 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಜೊತೆಗೇ ಮಿಲಿಯಾಂತರ ಜಾನುವಾರುಗಳ ಸೃಷ್ಟಿಗೂ ಯೋಜನೆಯನ್ನು ರೂಪಿಸಿದೆ. (ದಿ ಹಿಂದೂ- ಅನುಷಾ ನಾರಾಯಣ್- 2013, ಮೇ 5) ಹೀಗಿರುತ್ತಾ, ಗೋವನ್ನು ಮುಸ್ಲಿಮ್ ಇಶ್ಶೂವಾಗಿ ಬಿಂಬಿಸುವುದಕ್ಕೆ ಏನೆನ್ನಬೇಕು?
   ಗೋವು ಗೌರವಾರ್ಹವಾಗಿ ಮತ್ತು ಆಹಾರವಾಗಿ ಈ ದೇಶದಲ್ಲಿ ಅನಾದಿ ಕಾಲದಿಂದಲೂ ಬಳಕೆಯಲ್ಲಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದ್ದರಿಂದ ಗೋ ಹತ್ಯೆಯನ್ನು ಮುಸ್ಲಿಮೀಕರಣ ಮಾಡಬೇಕಾದ ಅಗತ್ಯವಿಲ್ಲ. 1998ರಲ್ಲಿ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಅಧಿಕಾರದಲ್ಲಿದ್ದಾಗಲೇ ಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನವನ್ನು ಗಳಿಸಿಕೊಂಡದ್ದು. ಮಾಂಸ ರಫ್ತಿನಿಂದ ಈ ದೇಶ ದೊಡ್ಡ ಪ್ರಮಾಣದಲ್ಲೇ ಆದಾಯವನ್ನು ಗಳಿಸುತ್ತಿದೆ. ಈ ಸತ್ಯವನ್ನು ಅಡಗಿಸಿಟ್ಟು ಮುಸ್ಲಿಮ್ vs ಹಿಂದೂ ಎಂಬಂತೆ ಗೋವನ್ನು ವಿಭಜಿಸುವುದು ತಪ್ಪು. ಗೋ ಕಳ್ಳತನ ಅಥವಾ ಅಕ್ರಮ ಸಾಗಾಟವನ್ನು ಯಾರೇ ಮಾಡಿದರೂ ಅದು ಕಾನೂನುಬಾಹಿರವೇ. ಅದನ್ನು ಖಂಡಿಸೋಣ. ಆದರೆ ಗೋವನ್ನು ಹಿಂದೂ-ಮುಸ್ಲಿಮ್ ಆಗಿ ವರ್ಗೀಕರಿಸುವುದು ಬೇಡ.

No comments:

Post a Comment