Monday 2 September 2013

‘ನಿರ್ಭಯ’ಳ ಮೇಲೆ ಮತ್ತೊಮ್ಮೆ ಅತ್ಯಾಚಾರ?

   ಅತ್ಯಾಚಾರಕ್ಕೆ ಪ್ರೇರಕವಾಗುವ ಅಂಶಗಳ ಬಗ್ಗೆ ಸಮಾಜದಲ್ಲಿ ಭಿನ್ನಾಭಿಪ್ರಾಯಗಳೇನೇ ಇರಲಿ, ಅತ್ಯಾಚಾರಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಬಗ್ಗೆ ಈ ದೇಶದಲ್ಲಿ ಬಹುತೇಕ ಒಮ್ಮತ ಇದೆ. ನೇಣಿಗಿಂತ ಕಡಿಮೆಯದಾದ ಶಿಕ್ಷೆಯನ್ನು ಯಾರೂ ಇವತ್ತು ಪ್ರತಿಪಾದಿಸುತ್ತಿಲ್ಲ. ಇಂಥ ಹೊತ್ತಲ್ಲಿ, ದೆಹಲಿಯ ನಿರ್ಭಯಳ ಮೇಲಿನ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾದ ಆರೋಪಿ ಮನೋಜ್ ನಿಗೆ ನ್ಯಾಯಮಂಡಳಿಯು 3 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ನಿಜವಾಗಿ, ಇದು ಸಂತ್ರಸ್ತ ಕುಟುಂಬವನ್ನು ಮಾತ್ರವಲ್ಲ, ಈ ಬರ್ಬರ ಘಟನೆಯ ವಿರುದ್ಧ ಸಿಡಿದು ನಿಂತ ಎಲ್ಲರನ್ನೂ ಆಘಾತಕ್ಕೆ ಒಳಪಡಿಸಿದೆ. ಆರೋಪಿ ಅಪ್ರಾಪ್ತನಾಗಿದ್ದು, ಇದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
   ಒಂದು ರೀತಿಯಲ್ಲಿ, ಈ ತೀರ್ಪು ನಿರ್ಭಯಳ ಮೇಲೆ ಮತ್ತೊಮ್ಮೆ ಎಸಗಲಾದ ಅತ್ಯಾಚಾರ. ಓರ್ವ ವ್ಯಕ್ತಿಗೆ ಅತ್ಯಾಚಾರ ಎಸಗುವ ಮತ್ತು ಬರ್ಬರವಾಗಿ ವರ್ತಿಸುವ ಸಾಮರ್ಥ್ಯ ಇದೆಯೆಂದಾದರೆ ಆತನನ್ನು ಅಪ್ರಾಪ್ತ ಎಂದು ಯಾಕೆ ಪರಿಗಣಿಸಬೇಕು? ಅಪ್ರಾಪ್ತಕ್ಕೆ ಇರುವ ಮಾನದಂಡ ಏನು? ಪ್ರಾಪ್ತ ವಯಸ್ಕ ಎಸಗುವ ಕ್ರೌರ್ಯಗಳನ್ನೇ ಓರ್ವ ಅಪ್ರಾಪ್ತನೂ ಎಸಗಬಲ್ಲನೆಂದಾದರೆ ಅವರನ್ನು ಪ್ರಾಪ್ತ ಮತ್ತು ಅಪ್ರಾಪ್ತ ಎಂದು ಯಾಕೆ ವಿಭಜಿಸಬೇಕು? ನಿರ್ಭಯಳ ಜೊತೆ ಅತ್ಯಂತ ಬರ್ಬರವಾಗಿ ವರ್ತಿಸಿದ್ದು ಈ ಅಪ್ರಾಪ್ತನೇ ಎಂದು ವರದಿಗಳು ಹೇಳಿವೆ. ಆದರೆ ಸದ್ಯ ಆತ ಜೈಲಿನ ಬದಲು ಸುಧಾರಣಾ ಕೇಂದ್ರದಲ್ಲಿ ದಿನ ಕಳೆಯುತ್ತಿದ್ದಾನೆ. ಟಿ.ವಿ., ಆಟಿಕೆಗಳು ಮುಂತಾದ ಸೌಲಭ್ಯಗಳನ್ನು ಆತನಿಗೆ ಒದಗಿಸಲಾಗಿದೆ. ಅಪ್ರಾಪ್ತನಾಗಿರುವುದರಿಂದ ಜೈಲು ಎಂಬುದು ಆತನ ಪಾಲಿಗೆ ಪುನರ್ ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ. ಕ್ರೌರ್ಯದಲ್ಲಿ ಪ್ರಾಪ್ತರನ್ನೂ ವಿೂರಿಸುವಂತೆ ವರ್ತಿಸಿದ್ದರೂ ಜುಜುಬಿ ಶಿಕ್ಷೆ ಪಡಕೊಂಡು ಪಾರಾಗಬಹುದಾದ ಇಂಥ ಕಾನೂನುಗಳು ಯಾಕೆ ಇನ್ನೂ ಜೀವಂತವಿವೆ? ನಿಜವಾಗಿ, ಓರ್ವನು ಪ್ರಾಪ್ತನೋ ಅಪ್ರಾಪ್ತನೋ ಎಂಬುದನ್ನು ನಿರ್ಧರಿಸುವುದಕ್ಕಿರುವ ಅತ್ಯುತ್ತಮ ಮಾನದಂಡ ಏನೆಂದರೆ, ಅದು ಆತನ ವರ್ತನೆ. ಶಾಲಾ ಮಕ್ಕಳು ಪೆನ್ಸಿಲೋ ಪೆನ್ನೋ, ಸ್ಕೇಲೋ ಕದಿಯಬಹುದು. ಟಿಫಿನ್ ಬಾಕ್ಸ್ ನಿಂದ ಕದ್ದು ಏನಾದರೂ ತಿನ್ನಬಹುದು. ಮಕ್ಕಳ ಪ್ರಾಯವನ್ನು ಹೊಂದಿಕೊಂಡು ಇವೆಲ್ಲ ಸಹಜ ಅನ್ನಿಸಿಕೊಳ್ಳುತ್ತದೆ. ಹಾಗಂತ, 20 ವರ್ಷದ ಯುವಕನೊಬ್ಬ ತನ್ನ ಸಹಪಾಠಿಯ ಪೆನ್ನು ಕದಿಯುವುದು, ಟಿಫಿನ್ ಬಾಕ್ಸ್ ನಿಂದ ಕದ್ದು ತಿನ್ನುವುದು ಸಾಧ್ಯವಿಲ್ಲ. ಯಾಕೆಂದರೆ, ಆ ಪ್ರಾಯದಲ್ಲಿ ಅದು ತೀರಾ ಅಸಹಜ. ಬಾಲ್ಯಕ್ಕೂ ಯೌವನಕ್ಕೂ ವ್ಯತ್ಯಾಸ ಇದೆ. ಮಧ್ಯ ವಯಸ್ಕರಿಗೂ ಹಿರಿಯರಿಗೂ ವ್ಯತ್ಯಾಸ ಇದೆ. ಹಿರಿಯರಾಡುವ ಅನುಭವದ ಮಾತುಗಳನ್ನು ಯುವಕರಿಂದ ನಿರೀಕ್ಷಿಸುವುದು ಖಂಡಿತ ತಪ್ಪು. ಮಧ್ಯ ವಯಸ್ಕರ ಆಲೋಚನಾ ವಿಧಾನವನ್ನು ಮಕ್ಕಳಲ್ಲಿ ಹುಡುಕುವುದು ತೀರಾ ಬಾಲಿಶತನ. 25 ವರ್ಷದ ಯುವತಿಯೊಬ್ಬಳು ಪೆನ್ಸಿಲ್ ಕದ್ದಿದ್ದಾಳೆ ಎಂದು ಯಾರಾದರೂ ಆರೋಪಿಸಿದರೆ, ಸಹಜವಾಗಿ, ಕದ್ದವಳ ಆರೋಗ್ಯದ ಬಗ್ಗೆ ಚರ್ಚೆಯಾಗಬಹುದೇ ಹೊರತು ಕಳ್ಳತನದ ಬಗ್ಗೆಯಲ್ಲ. ಯಾಕೆಂದರೆ, ಪೆನ್ಸಿಲ್ ಕದಿಯುವುದು ಆ ವಯಸ್ಸಿಗೆ ಸಂಬಂಧಿಸಿ ತೀರಾ ಅಸಹಜ. ಈ ಕಾರಣದಿಂದಲೇ ದೆಹಲಿ ಅತ್ಯಾಚಾರದ ಆರೋಪಿಯ ಅಪ್ರಾಪ್ತತನವನ್ನು ಚರ್ಚೆಗೆ ಒಳಪಡಿಸಬೇಕಾಗಿದೆ. ಅಂದಹಾಗೆ,  18 ವರ್ಷಕ್ಕಿಂತ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಿಲ್ಲ ಎಂದೇನೂ ಸಾಬೀತಾಗಿಲ್ಲವಲ್ಲ. 18 ವರ್ಷಕ್ಕಿಂತ ಕೆಳಗಿನ ಅಸಂಖ್ಯ ಮಂದಿ ಇವತ್ತು ಈ ದೇಶದಲ್ಲಿ ಕಾನೂನನ್ನು ವಂಚಿಸಿ ಮದುವೆಯಾಗುತ್ತಿದ್ದಾರೆ. ಮಕ್ಕಳೂ ಆಗುತ್ತಿವೆ. ವಿಜ್ಞಾನವು ಸಾಕಷ್ಟು ಬೆಳೆದಿರುವ ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ವಯಸ್ಸಿಗಿಂತಲೂ ಪ್ರೌಢವಾಗಿ ವರ್ತಿಸುವುದಕ್ಕೆ ಪ್ರಚೋದಕವಾಗುವಂಥವು ಧಾರಾಳ ಇವೆ. ಇಂಟರ್‍ನೆಟ್‍ನಲ್ಲಿ ಒಂದು ಗುಂಡಿ ಅದುಮಿದರೆ ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರು ಎಲ್ಲವೂ ತೆರೆದುಕೊಳ್ಳುತ್ತದೆ. ಅಪ್ರಬುದ್ಧರನ್ನು ಪ್ರಬುದ್ಧ ಮಾಡುವಷ್ಟು ವಿಷಯಗಳ ಖಜಾನೆಯೇ ಅದರೊಳಗಿದೆ. ಅಲ್ಲದೇ, ಇಂದಿನ ಯುವಪೀಳಿಗೆಯನ್ನು ಇವುಗಳಿಂದ ತಡೆದು ನಿಲ್ಲಿಸುವುದಕ್ಕೆ ಯಾವ ವ್ಯವಸ್ಥೆಯೂ ನಮ್ಮ ಬಳಿ ಇಲ್ಲ. ಹೀಗಿರುವಾಗ, 18 ವರ್ಷದ ಒಳಗಿನವರನ್ನು ಸಾರಾಸಗಟು ಅಪ್ರಾಪ್ತರೆಂದು ಮುದ್ರೆ ಒತ್ತಿ ಬಿಡುವುದು ಎಷ್ಟು ಸರಿಯೆನಿಸಬಹುದು? ಅಷ್ಟಕ್ಕೂ, ‘ನಿರ್ಭಯ’ ಪ್ರಕರಣದಲ್ಲಿ ಈ ಅಪ್ರಾಪ್ತನ ಮೇಲಿನ ಆರೋಪ ಸಾಬೀತಾಗಿದೆ. ಆತ ಕಾನೂನಿನ ಪ್ರಕಾರ ಅಪ್ರಾಪ್ತನಾಗಿದ್ದರೂ ದೈಹಿಕವಾಗಿ ಮತ್ತು ಲೈಂಗಿಕವಾಗಿ ಪ್ರಾಪ್ತನೇ ಆಗಿದ್ದ.  ಪ್ರಾಪ್ತರಲ್ಲಿ ಮೂಡಬಹುದಾದ ಎಲ್ಲ ಲೈಂಗಿಕ ಭಾವನೆಗಳೂ ಆತನಲ್ಲೂ ಮೂಡಿದ್ದುವು. ಅಲ್ಲದೇ, 17 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ ಎಂಬ ಸುದ್ದಿ ಇವತ್ತು ಸಮಾಜದಲ್ಲಿ ಅಚ್ಚರಿಯ ಸಂಗತಿಯಾಗಿಯೇನೂ ಉಳಿದಿಲ್ಲ. ಆ ಪ್ರಾಯದಲ್ಲಿ ಅಂಥದ್ದೊಂದು ಕ್ರೌರ್ಯ ಸಾಧ್ಯ ಎಂದು ಸಮಾಜವೇ ಇವತ್ತು ಒಪ್ಪಿಕೊಂಡಿದೆ. ಹೀಗಿರುವಾಗ, 18 ವರ್ಷ ಎಂಬ ಕಾನೂನಿನ ಮಿತಿಯನ್ನು ಬಲವಾಗಿ ಹಿಡಿದುಕೊಂಡು ನ್ಯಾಯ ತೀರ್ಮಾನ ಮಾಡುವ ವಾತಾವರಣವನ್ನು ಇನ್ನೂ ಯಾಕೆ ನಾವು ಮುಂದುವರಿಸಬೇಕು? ಪ್ರಾಪ್ತ ವಯಸ್ಸಿನ ಮಿತಿ ಹದಿನೆಂಟೇ ಇದ್ದರೂ ಅಪರೂಪದ ಪ್ರಕರಣಗಳಲ್ಲಿ ವಿವೇಚನಾಧಿಕಾರವನ್ನು ಬಳಸಿಕೊಂಡು ತೀರ್ಪು ನೀಡುವ ಅವಕಾಶವನ್ನು ನ್ಯಾಯಾಧೀಶರಿಗೆ ಕೊಡಬಹುದಲ್ಲವೇ?
   ಜಗತ್ತು ಇವತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಆಧುನಿಕ ಸೌಲಭ್ಯಗಳು ಯುವಪೀಳಿಗೆಯನ್ನು ಅತಿವೇಗವಾಗಿ ಪ್ರೌಢಗೊಳಿಸುತ್ತಿವೆ. ಇಂಥ ಹೊತ್ತಲ್ಲಿ, ಪ್ರಾಪ್ತ ಮತ್ತು ಅಪ್ರಾಪ್ತತೆಯನ್ನು ವಿಭಜಿಸುವುದು ಸುಲಭವಲ್ಲ. 25 ವರ್ಷಗಳ ಹಿಂದೆ 25 ವರ್ಷ ಪ್ರಾಯದ ಮಂದಿ ಹೇಗೆ ಆಲೋಚಿಸುತ್ತಿ ದ್ದರೋ ಹಾಗೆ ಇವತ್ತು 18 ವರ್ಷದ ಮಂದಿಯೇ ಆಲೋಚಿಸುತ್ತಾರೆ. ಕೆಲವೊಮ್ಮೆ ಅವರಿಗಿಂತಲೂ ಪ್ರೌಢವಾಗಿ ಅಥವಾ ಕ್ರೂರವಾಗಿ ವರ್ತಿಸುವಷ್ಟೂ ಬೆಳೆದಿರುತ್ತಾರೆ. ಆದ್ದರಿಂದ 18 ಎಂಬ ರೇಖೆಯೊಂದನ್ನು ಎಳೆದು ಎಲ್ಲ ಅಪರಾಧಗಳನ್ನೂ ಅದರ ಮೇಲೆ ಅಥವಾ ಕೆಳಗೆ ಎಂದು ವಿಂಗಡಿಸು
ವುದು ಅನೇಕ ಬಾರಿ ಹಾಸ್ಯಾಸ್ಪದವಾಗಿ ಬಿಡುತ್ತದೆ. ಬರ್ಬರ ಕ್ರೌರ್ಯವನ್ನು ಎಸಗಿದವರು ಕೂಡ ಕೆಲವೊಮ್ಮೆ ಇದರ ಲಾಭ ಪಡೆದು ಒಟ್ಟು ಕಾನೂನನ್ನೇ ನಗೆಪಾಟಲು ಮಾಡಿಬಿಡುತ್ತಾರೆ. ಮಾತ್ರವಲ್ಲ, ಸಂತ್ರಸ್ತರು ನ್ಯಾಯಾಂಗದ ಮೇಲೆಯೇ ವಿಶ್ವಾಸವನ್ನು ಕಳಕೊಂಡು ಬಿಡುವಷ್ಟು ಅದು ಅತಿರೇಕವಾಗಿ ಬಿಡುತ್ತದೆ. ‘ನಿರ್ಭಯ' ಪ್ರಕರಣದಲ್ಲಿ ಸಾಬೀತಾಗಿರುವುದು ಇದುವೇ.

No comments:

Post a Comment