Thursday 26 September 2013

ಪದ್ಮಲತಾರನ್ನು ಪ್ರೀತಿಸುವ ಚಂದ್ರಶೇಖರ್ ಗಳು ಹೆಚ್ಚಾಗಲಿ

‘ಪತಿ-ಪತ್ನಿ’ ಎಂಬ ಪದಗುಚ್ಛದಲ್ಲಿ ಇರುವ ಅಕ್ಷರಗಳು ನಾಲ್ಕೇ ಆದರೂ ಅದು ಪ್ರತಿನಿಧಿಸುವ ಮೌಲ್ಯಗಳು 4 ಸಾವಿರ ಅಕ್ಷರಗಳನ್ನೂ ವಿೂರಿಸುವಂಥದ್ದು. ಯುವಕನೋರ್ವ ಪತಿ ಆಗುವುದು ಮತ್ತು ಯುವತಿ ಪತ್ನಿ ಆಗುವುದೆಲ್ಲ ಸಿನಿಮಾವೊಂದರ ಪಾತ್ರದಷ್ಟು ಸರಳ ಅಲ್ಲ. ಅದೊಂದು ಕರಾರು. ಸಿನಿಮಾದ ಅವಧಿಯೇ ಎರಡೋ ಮೂರೋ ಗಂಟೆಗಳು. ಆ ಅವಧಿಗಷ್ಟೇ ಪತಿ-ಪತ್ನಿ ಪಾತ್ರಧಾರಿಗಳು ತಮ್ಮನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಅವಧಿ ಮುಗಿದ ಬಳಿಕ ಅವರು ಅದಾಗಿರುವುದಿಲ್ಲ. ಸಿನಿಮಾದಲ್ಲಿ ‘ಮೇಡ್ ಫಾರ್ ಈಚ್ ಅದರ್’ ಎಂಬಂತೆ ಕಂಡಿದ್ದರೂ ಹೊರಗೆ ಅವರು ಜಗಳಾಡಬಹುದು. ಪರಸ್ಪರರ ಕಾಲೆಳೆಯಬಹುದು. ಒಬ್ಬರ ಬೆಳವಣಿಗೆಯನ್ನು ತಡೆಯಲು ಇನ್ನೊಬ್ಬರು ಪ್ರಯತ್ನಿಸಬಹುದು. ಅಲ್ಲದೇ, ಸಿನಿಮಾದಲ್ಲಿ ಪತಿ-ಪತ್ನಿಯಾಗಿ ಅಭಿನಯಿಸಿದ ಹೀರೋ ಹೀರೋಯಿನ್‍ಗಳು ನಿಜ ಬದುಕಿನಲ್ಲೂ ಅದಾಗಲು ತೀರ್ಮಾನಿಸಿ, ಕೊನೆಗೆ ಸಂಬಂಧವನ್ನೇ ಮುರಿದುಕೊಂಡ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಯಾಕೆಂದರೆ, ದಾಂಪತ್ಯ ಎಂಬುದು ಸಿನಿಮಾದಂತೆ ಅಲ್ಲ. ಅದರಲ್ಲಿ ಕೆಲವು ಮೌಲ್ಯಗಳಿವೆ. ಆ ಮೌಲ್ಯಗಳೆಲ್ಲ ಅವಧಿ ರಹಿತವಾದದ್ದು. ಆದರೆ, ಪತಿ-ಪತ್ನಿಯರಾಗಲು ಯಾವಾಗ ಸೌಂದರ್ಯ ಮಾನದಂಡ ಆಗುತ್ತದೋ ಆಗ ನಿಜ ಬದುಕು ಕೂಡಾ ಸಿನಿಮಾ ಆಗುತ್ತದೆ. ಸಿನಿಮಾದಂತೆ ನಿರ್ದಿಷ್ಟ ಅವಧಿವರೆಗೆ ಮಾತ್ರ ಅದು ಬಾಳುತ್ತದೆ. ಕಳೆದ ವಾರ ಸುಪ್ರೀಮ್ ಕೋರ್ಟಿನ ಮುಂದೆ ಬಂದ ಪ್ರಕರಣವೊಂದು ದಾಂಪತ್ಯದ ಪಾವಿತ್ರ್ಯತೆಯ ಕುರಿತಂತೆ ಹತ್ತು-ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಓರ್ವರು ತನ್ನ ಪತ್ನಿಯನ್ನು ಯಾವೆಲ್ಲ ಕಾರಣಕ್ಕಾಗಿ ಪ್ರೀತಿಸಬೇಕು ಅಥವಾ ಕೈಬಿಡಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಅವಕಾಶ ಒದಗಿಸಿದೆ.
 ಆಂಧ್ರ ಪ್ರದೇಶದ ಕಾಕಿನಾಡದ ಡಾ| ಕೊಲ್ಲಂ ಚಂದ್ರಶೇಖರ್ ಎಂಬವರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಸ್ಕಿಝೋಪ್ರೇನಿಯಾ (ಮಾನಸಿಕ ಕಾಯಿಲೆ) ರೋಗದಿಂದ ಪತ್ನಿ ಕೊಲ್ಲಂ ಪದ್ಮಲತಾ ಬಳಲುತ್ತಿದ್ದು, ಅವರಿಂದ ತನಗೆ ವಿಚ್ಛೇದನ ಕೊಡಿಸಿ ಅಂದಿದ್ದರು. ನಿಜವಾಗಿ ಸ್ಕಿಝೋಪ್ರೇನಿಯಾ ಎಂಬುದು ಗುಣವಾಗದ ಕಾಯಿಲೆ ಅಲ್ಲ. ‘ಒಂದು ಮಗು ಇರುವ ನೀವು ಈ ಕಾರಣವನ್ನು ಮುಂದಿಟ್ಟು ವಿಚ್ಛೇದನ ಕೋರುತ್ತೀರಲ್ಲ, ನಿಮ್ಮ ಮನಃಸಾಕ್ಷಿ ಒಪ್ಪುತ್ತಾ..?’ ಅಂತ ನ್ಯಾಯಮೂರ್ತಿ ಸಿಂಘ್ವಿ ಮತ್ತು ಗೋಪಾಲ ಗೌಡರನ್ನೊಳಗೊಂಡ ನ್ಯಾಯಪೀಠ ಕಳೆದವಾರಅವರನ್ನು ಪ್ರಶ್ನಿಸಿತು.
 ನಿಜವಾಗಿ, ದಾಂಪತ್ಯವೆಂಬುದು ಒಂದು ರೋಗಕ್ಕೆ ಕುಸಿದು ಬೀಳುವಷ್ಟು ದುರ್ಬಲ ಆಗಬಾರದು. ಜಗತ್ತಿನಲ್ಲಿ ಎರಡು ಅಪರಿಚಿತ ಕುಟುಂಬಗಳು ತಮ್ಮ ಮಕ್ಕಳ ಕಾರಣಕ್ಕಾಗಿ ಹತ್ತಿರ ಆಗುವುದು ಮತ್ತು ಬಿಟ್ಟಿರಲಾರದಂಥ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಅವಕಾಶ ಇದ್ದರೆ ಅದು ದಾಂಪತ್ಯದಲ್ಲಿ ಮಾತ್ರ. ಅದು ಕುಟುಂಬದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ತಮಗೆ ಸಂಬಂಧವೇ ಇಲ್ಲದವರನ್ನು ಆಪ್ತರನ್ನಾಗಿ ಮಾರ್ಪಡಿಸುತ್ತದೆ. ಹೀಗಿರುವಾಗ, ಇಂಥ ಸಂಬಂಧವೊಂದನ್ನು ಬೆಳೆಸುವುದಕ್ಕೆ ಮಾನದಂಡವಾಗಬೇಕಾದದ್ದು ಯಾವುದು? ಸೌಂದರ್ಯವೋ, ಸಂಪತ್ತೋ, ಹುದ್ದೆಯೋ? ‘ಚಾರಿತ್ರ್ಯವೇ ಈ ಸಂಬಂಧದ ಮಾನದಂಡ ಆಗಿರಲಿ’ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ದುರಂತ ಏನೆಂದರೆ, ಚಾರಿತ್ರ್ಯದ ಹೊರತಾದ ಎಲ್ಲವೂ ಇವತ್ತು ದಾಂಪತ್ಯ ಸಂಬಂಧ ಕುದುರಿಸುವುದಕ್ಕೆ ಮಾನದಂಡ ಆಗುತ್ತಿದೆ. ಹೆಣ್ಣಿನ ಸೌಂದರ್ಯ, ದುಡ್ಡು, ಹುದ್ದೆಯನ್ನು ನೋಡಿಕೊಂಡು ಪ್ರಪೋಸಲ್  ಕಳುಹಿಸುವ ಮತ್ತು ಒಪ್ಪಿಕೊಳ್ಳುವ ಸಂದರ್ಭಗಳೇ ಅಧಿಕವಾಗುತ್ತಿವೆ. ಇಂಥ ವಾತಾವರಣದಲ್ಲಿ ಪದ್ಮಲತಾ ‘ಅನಗತ್ಯ’ ಆಗುವುದರಲ್ಲಿ ಅಚ್ಚರಿ ಏನಿದೆ?
 ಅಂದಹಾಗೆ, ಚಂದ್ರಶೇಖರ್ ಎಂಬುದು ಓರ್ವ ವ್ಯಕ್ತಿಯ ಹೆಸರಲ್ಲ. ಅದೊಂದು ಮನಸ್ಥಿತಿ. ಆಧುನಿಕ ಜೀವನ ಕ್ರಮಗಳು ಇಂಥ ಅಸಂಖ್ಯ ಚಂದ್ರಶೇಖರ್‍ರನ್ನು ಪ್ರತಿನಿತ್ಯ ಬೆಳೆಸುತ್ತಿವೆ. ಅವರು ಎಲ್ಲೆಲ್ಲೋ ಬೆಳೆಯುತ್ತಿಲ್ಲ. ನಮ್ಮ ನಮ್ಮ ಮನೆಯಲ್ಲಿ, ನೆರೆಯಲ್ಲಿ, ಪಕ್ಕದಲ್ಲೇ ಬೆಳೆಯುತ್ತಿದ್ದಾರೆ. ಅವರ ಪಾಲಿಗೆ ಪದ್ಮಲತಾ ಒಂದು ಸೌಂದರ್ಯ ಮಾತ್ರ. ಸೌಂದರ್ಯ ಇಲ್ಲದ ಪದ್ಮಲತಾರನ್ನು ಇಷ್ಟಪಡುವುದಕ್ಕೆ ಈ ಜಗತ್ತು ಅವರಿಗೆ ಇವತ್ತು ಕಲಿಸಿಕೊಡುತ್ತಿಲ್ಲ. ಸಿನಿಮಾ, ಟಿ.ವಿ. ಜಾಹೀರಾತುಗಳಲ್ಲಿ ಬರುವ ಹೆಣ್ಣು ಮಕ್ಕಳಿಗೆ ಆಧುನಿಕ ಜಗತ್ತು ಕೆಲವು ವಿಶೇಷ ಅರ್ಹತೆಗಳನ್ನು ನಿಗದಿಪಡಿಸಿದೆ. ನಿರ್ದಿಷ್ಟ ಚರ್ಮ, ಕಣ್ಣು, ನಗು, ಸುತ್ತಳತೆಯನ್ನು ಸೌಂದರ್ಯದ ಮಾನದಂಡವಾಗಿ ಮತ್ತು ಪುರುಷ ಇಷ್ಟಪಡುವುದಕ್ಕೆ ಬೇಕಾದ ಅರ್ಹತೆಗಳಾಗಿ ಹೇಳಿಕೊಟ್ಟು, ಇವು ಹೊಂದಿರುವ ಹೆಣ್ಣು ಮಾತ್ರ ಬದುಕನ್ನು ನೆಮ್ಮದಿಯಾಗಿಡಬಹುದು ಎಂಬ ಭ್ರಮೆಯನ್ನು ಹರಡುತ್ತಿದೆ. ಈ ಭ್ರಮೆಯ ಹಿಂದೆ ಅಸಂಖ್ಯ ‘ಚಂದ್ರಶೇಖರ್’ಗಳು ಇವತ್ತು ಸುತ್ತುತ್ತಿದ್ದಾರೆ. ಒಂದು ಕಡೆ ಸೌಂದರ್ಯವನ್ನು ಆರಾಧಿಸುತ್ತಿರುವ ಜಗತ್ತು, ಇನ್ನೊಂದು ಕಡೆ ಸ್ವಚ್ಛಂದತೆಯನ್ನು ಬದುಕಿನ ಸಹಜ ಭಾಗವಾಗಿ ಪ್ರತಿಪಾದಿಸುತ್ತಿರುವ ಮಾಧ್ಯಮಗಳು-ಇವೆರಡರ ಮಧ್ಯೆ 'ಚಂದ್ರಶೇಖರ್‍ಗಳು' ಹೇಗೇಗೋ ಬದುಕುತ್ತಿದ್ದಾರೆ. ಅತ್ಯಾಚಾರಗಳು, ಲೈಂಗಿಕ ಪೀಡನೆಗಳು, ವಿಚ್ಛೇದನಗಳ ಹಿಂದೆ ಈ ಮನಸ್ಥಿತಿಯ ಪ್ರಭಾವ ಧಾರಾಳ ಇದೆ. ಇಲ್ಲದಿದ್ದರೆ, ತನ್ನ ಹಾಸಿಗೆಯನ್ನು ಹಂಚಿಕೊಳ್ಳುವ, ತನಗಾಗಿ ಕಾಯುವ; ಮಕ್ಕಳ ಪಾಲನೆ, ಮನೆ ನಿರ್ವಹಣೆಯೆಂದೆಲ್ಲಾ ದಣಿವರಿಯದೇ ಕೆಲಸ ಮಾಡುವ ಪತ್ನಿಯನ್ನು ಕಾಯಿಲೆಯ ಕಾರಣಕ್ಕಾಗಿ ಕೈ ಬಿಡುವುದೆಂದರೇನು? ಕಾಯಿಲೆ ಎಂಬುದು ಅರ್ಜಿ ಹಾಕಿ ಪಡಕೊಳ್ಳುವಂಥದ್ದಲ್ಲವಲ್ಲ. ಯಾರನ್ನೂ ಯಾವ ಸಂದರ್ಭದಲ್ಲೂ ಕಾಯಿಲೆ ಕಾಡಬಹುದು. ಹಾಗಂತ ಕಾಯಿಲೆಗೆ ಮದ್ದು ಮಾಡದೇ ಸಂಗಾತಿಯನ್ನೇ ಕೈ ಬಿಡುವುದು ಯಾವ ಮನಸ್ಥಿತಿ?
   ಪತಿ-ಪತ್ನಿ ಪರಸ್ಪರ ಉಡುಪಾಗಿದ್ದಾರೆ ಎಂದು  ಸಾರಿದ ಪವಿತ್ರ ಕುರ್‍ಆನ್ (2: 187), ವಿಚ್ಚೇದನವು ದೇವನಿಗೆ ಅತ್ಯಂತ ಅಪ್ರಿಯವಾಗಿದೆ ಎಂದೂ  ಹೇಳಿದೆ.  ಉಡುಪಿಗೆ ನಮ್ಮ ದೇಹದೊಂದಿಗೆ ಎಷ್ಟು ಹತ್ತಿರದ ಬಾಂಧವ್ಯ ಇದೆಯೋ ಅಷ್ಟೇ ನಿಕಟ ಸಂಬಂಧ ದಂಪತಿಗಳ ಮಧ್ಯೆ ಇರಬೇಕು. ಉಡುಪಿನಲ್ಲಿ ಪುಟ್ಟ ಕೊಳೆ ಆದರೆ ನಾವು ಅದನ್ನು ತೊಳೆಯಲು ಪ್ರಯತ್ನಿಸುತ್ತೇವೆಯೇ ಹೊರತು ಹರಿಯಲಲ್ಲ. ರೋಗ ಎಂಬುದು ಇಂಥದ್ದೇ ಒಂದು ಕೊಳೆ. ಅದನ್ನು ತೊಳೆದರೆ ಬಟ್ಟೆ ಇನ್ನಷ್ಟು ಶುಭ್ರವಾಗುತ್ತದೆ. ಅಲ್ಲದೇ, ಸೌಂದರ್ಯ, ದುಡ್ಡು, ಸುತ್ತಳತೆಗಳೆಂಬ ಅನೇಕಾರು ಆಧುನಿಕ ಕೊಳೆಗಳೂ ಎಲ್ಲರ ಮನಸ್ಸಿನೊಳಗೂ ಇವತ್ತು ಸೇರಿಕೊಳ್ಳುತ್ತಿವೆ. ಅವುಗಳನ್ನು ತೊಳೆದು ಮನಸ್ಸನ್ನು ಶುಭ್ರಗೊಳಿಸಿದರೆ ವರದಕ್ಷಿಣೆ ತರದ ಹೆಣ್ಣೂ ಇಷ್ಟವಾಗಬಲ್ಲಳು. ಕಾಯಿಲೆ ಪೀಡಿತ ಪದ್ಮಲತಾರೂ ‘ಅಗತ್ಯವಾಗಿ’ ಕಾಣಿಸಬಲ್ಲರು. ಆದ್ದರಿಂದ 'ಚಂದ್ರಶೇಖರ್‍ಗಳ' ಸಂಖ್ಯೆ ಹೆಚ್ಚಳಗೊಳ್ಳದಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕಾಯಿಲೆ ಇಲ್ಲದ ಪದ್ಮಲತಾರಿಗಿಂತ ಕಾಯಿಲೆ ಪೀಡಿತ ಪದ್ಮಲತಾರನ್ನು ಹೆಚ್ಚು ಪ್ರೀತಿಸುವ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಪತಿಯಂದಿರನ್ನು ಸಮಾಜದಲ್ಲಿ ತಯಾರಿಸಬೇಕಾಗಿದೆ. ಇಲ್ಲದಿದ್ದರೆ ದಾಂಪತ್ಯ ಎಂಬುದು 'ರುಚಿ' ಇರುವ ವರೆಗೆ ಮಾತ್ರ ಚಾಲ್ತಿಯಲ್ಲಿರುವ ಮಾರುಕಟ್ಟೆ ವಸ್ತುವಾಗಿ ಮಾರ್ಪಟ್ಟೀತು.

No comments:

Post a Comment