Monday 9 September 2013

ಸ್ವಾಮಿನಿಷ್ಠೆಯನ್ನು ಪ್ರತಿಭಟಿಸಿ ಹೊರಟುಹೋದ ರಾಕಸ್ ಮಿಶ್

ರಾಕಸ್ ಮಿಶ್
   ರಾಕಸ್ ಮಿಶ್ (Rochus Misch) ಎಂಬವರ ಸಾವಿನ ಸುದ್ದಿಯನ್ನು ಕಳೆದ ವಾರ ಎಲ್ಲ ಪತ್ರಿಕೆಗಳೂ ಪ್ರಕಟಿಸಿದ್ದುವು. ಹಾಗಂತ, 96 ವರ್ಷದ ಈ ವ್ಯಕ್ತಿ ಯಾವುದಾದರೂ ಬೃಹತ್ ಕಂಪೆನಿಯ ಮುಖ್ಯಸ್ಥರೋ ರಾಷ್ಟ್ರವೊಂದರ ಅಧ್ಯಕ್ಷರೋ ಆಗಿರಲಿಲ್ಲ. ಜರ್ಮನಿಯ ಅಡಾಲ್ಫ್ ಹಿಟ್ಲರನ ಅಂಗರಕ್ಷಕರಾಗಿದ್ದರು ಎಂಬುದನ್ನು ಬಿಟ್ಟರೆ ಈ ವ್ಯಕ್ತಿಗೆ ಬೇರೆ ಯಾವ ವಿಶೇಷತೆಯೂ ಇರಲಿಲ್ಲ. 1945 ಎಪ್ರಿಲ್ 30ರಂದು ಸೇನಾ ನೆಲೆಯೊಂದರಲ್ಲಿ ಹಿಟ್ಲರ್ ಮತ್ತು ಆತನ ಪತ್ನಿ ಈವಾ ಬ್ರೌನ್‍ರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮಿಶ್ ಹತ್ತಿರವೇ ಇದ್ದರು. ಹಿಟ್ಲರನ ಆಪ್ತ ಮಂತ್ರಿ ಗೋಬೆಲ್ ಮತ್ತು ಪತ್ನಿ ಮಗ್ದಾರು ತಮ್ಮ 6 ಮಕ್ಕಳಿಗೆ ವಿಷವುಣಿಸಿ 1945 ಮೇ ಒಂದರಂದು ಆತ್ಮಹತ್ಯೆ ಗೈದಾಗಲೂ ಮಿಶ್ ಜೊತೆಗಿದ್ದರು. ಬಳಿಕ ಅವರು ಸೇನಾ ನೆಲೆಯಿಂದ ತಪ್ಪಿಕೊಂಡು ಹೊರ ಬಂದರು. ರಶ್ಯನ್ ಸೇನೆಯಿಂದ ಬಂಧನಕ್ಕೀಡಾಗಿ 9 ವರ್ಷ ಸೆರೆಮನೆ ವಾಸ ಅನುಭವಿಸಿದರು. ಬಹುಶಃ ಮೊನ್ನೆ, ಮಿಶ್‍ರ ಸಾವನ್ನು ಮತ್ತು ಅವರನ್ನು ಸುತ್ತಿಕೊಂಡಿರುವ ಈ ಎಲ್ಲ ಸಂಗತಿಗಳನ್ನು ಅತ್ಯಂತ ಆಸಕ್ತಿಯಿಂದ ಓದಿರುವವರಲ್ಲಿ ಮುಂಬೈಯ ತಿಲೋಜ ಜೈಲಿನಲ್ಲಿರುವ ವಂಜಾರ, ದಿನೇಶ್ ಕುಮಾರ್, ಎನ್.ಕೆ. ಅವಿೂನ್.. ಮುಂತಾದವರೂ ಇರಬಹುದು. ಮಾತ್ರವಲ್ಲ, ತಮ್ಮ ಜೈಲು ವಾಸಕ್ಕಿರುವ ಕಾರಣಗಳ ಜೊತೆ ಹಿಟ್ಲರ್, ಮಿಶ್‍ರನ್ನು ಇಟ್ಟು ಹೋಲಿಸಿ ನೋಡಿರಲೂ ಬಹುದು.
   ನಿಜವಾಗಿ, ವಂಜಾರ ಮತ್ತು ಅವರ ತಂಡಕ್ಕೂ ರಾಕಸ್ ಮಿಶ್‍ರಿಗೂ ಖಂಡಿತ ಕೆಲವು ವ್ಯತ್ಯಾಸಗಳಿವೆ. ವಂಜಾರ ಮತ್ತು ತಂಡವನ್ನು ಈ ದೇಶದ ನ್ಯಾಯಾಲಯ ಈ ವರೆಗೂ ಅಪರಾಧಿ ಎಂದು ಘೋಷಿಸಿಲ್ಲ. ಅಮಾಯಕರನ್ನು ಹತ್ಯೆ ಮಾಡುವಂತೆ ಅವರಿಗೆ ಯಾರು ಆದೇಶಿಸಿದ್ದರೋ ಅವರ ಅಪರಾಧವೂ ಸಾಬೀತಾಗಿಲ್ಲ. ಆದರೆ, ಇವರೆಲ್ಲ ಅಪರಾಧಿಗಳಾಗಿ ಘೋಷಣೆಗೀಡಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂಬುದರಿಂದಲೇ ಮಿಶ್ ಮುಖ್ಯವಾಗುತ್ತಾರೆ. ಅಷ್ಟಕ್ಕೂ, ಎರಡನೇ ಜಾಗತಿಕ ಸಮರದಲ್ಲಿ ಹಿಟ್ಲರ್ ಜಯ ಗಳಿಸುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಮಿಶ್ ಜೈಲಿಗೆ ಹೋಗುತ್ತಿದ್ದರೇ? ಗೋಬೆಲ್, ಮಗ್ದಾ, ಈವಾ ಮುಂತಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ? ಹಿಟ್ಲರನ ಮೇಲೆ ಸಾವಿರಾರು ಯಹೂದಿಯರನ್ನು ಹತ್ಯೆ ಮಾಡಿರುವ ಆರೋಪ ಇದೆ. ಒಂದು ವೇಳೆ, ಆತ ಯುದ್ಧದಲ್ಲಿ ಜಯಿಸಿರುತ್ತಿದ್ದರೆ, ಸಾವಿಗೀಡಾದವರನ್ನೆಲ್ಲ ಭಯೋತ್ಪಾದಕರೆಂದೋ ದೇಶದ್ರೋಹಿಗಳೆಂದೋ ಘೋಷಿಸಿ ಬಿಡುವ ಸಾಧ್ಯತೆ ಖಂಡಿತ ಇತ್ತು. ಅಧಿಕಾರವು ಎಲ್ಲ ಕ್ರೌರ್ಯಗಳನ್ನೂ ಕಾಲದ ಅನಿವಾರ್ಯತೆಗಳಾಗಿ ಮಾರ್ಪಡಿಸಿ ಬಿಡುತ್ತದೆ. ದೇಶದ್ರೋಹಿ ಅಥವಾ ದೇಶ ಪ್ರೇಮದ ವ್ಯಾಖ್ಯಾನಗಳು ಅಧಿಕಾರಸ್ಥರನ್ನು ಹೊಂದಿಕೊಂಡು ಬದಲಾಗುತ್ತಿರುತ್ತದೆ. ಓರ್ವ ಸಾಮಾನ್ಯ ವ್ಯಕ್ತಿಯನ್ನು ಭಯೋತ್ಪಾದಕನೆಂದು ಬಿಂಬಿಸುವ ಮತ್ತು ಹತ್ಯೆ ಮಾಡುವ ಕೆಲಸವು ಓರ್ವ ಪ್ರಧಾನಿಗೋ ಮುಖ್ಯಮಂತ್ರಿಗೋ ಕಷ್ಟದ್ದಲ್ಲ. ಯಾಕೆಂದರೆ ಒಂದಿಡೀ ವ್ಯವಸ್ಥೆಯೇ ಅವರ ಅಧೀನದಲ್ಲಿರುತ್ತದೆ. ಅವರು ಕೆಲವು ನಂಬಿಗಸ್ಥ ಅಧಿಕಾರಿಗಳ ಮೂಲಕ ಆಡನ್ನು ನಾಯಿಯನ್ನಾಗಿಯೂ ನಾಯಿಯನ್ನು ಆಡನ್ನಾಗಿಯೂ ಪರಿವರ್ತಿಸಬಲ್ಲರು. ಈ ದೇಶದಲ್ಲಿ ನಡೆದ ಅನೇಕಾರು ಹತ್ಯಾ ಕಾಂಡಗಳ ಸುತ್ತ ಇಂಥದ್ದೊಂದು ಅನುಮಾನ ಇದ್ದೇ ಇದೆ. ಗುಜರಾತ್ ಹತ್ಯಾಕಾಂಡ ಮತ್ತು ಎನ್‍ಕೌಂಟರ್‍ಗಳು ಅವುಗಳಲ್ಲಿ ಒಂದು ಎಂದಷ್ಟೇ ಹೇಳಬಹುದಾಗಿದೆ. ಒಂದು ವೇಳೆ, ಗುಜರಾತನ್ನು ಆಳುತ್ತಿರುವ ಪಕ್ಷವೇ ಇವತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುತ್ತಿದ್ದರೆ ವಂಜಾರ ಮತ್ತು ತಂಡ ಜೈಲಿಗೆ ಹೋಗುವ ಸಾಧ್ಯತೆ ಇತ್ತೇ ಎಂಬ ಪ್ರಶ್ನೆ ಈ ದೇಶದ ಅಸಂಖ್ಯ ಮಂದಿಯನ್ನು ಇವತ್ತು ಕಾಡುತ್ತಿರಬಹುದು. ಮೋದಿ ಪ್ರಧಾನಿಯಾದರೆ ಗುಜರಾತ್  ಹತ್ಯಾಕಾಂಡದ ತನಿಖೆ ಯಾವ ಸ್ಥಿತಿಗೆ ಮುಟ್ಟಬಹುದು ಎಂಬ ಕುತೂಹಲವೂ ಇರಬಹುದು. ಒಂದು ರೀತಿಯಲ್ಲಿ, ಈ ದೇಶದಲ್ಲಿ ಬೆಳಕಿಗೆ ಬರುವ ಹತ್ಯಾಕಾಂಡಗಳಿಗೂ ರಾಜಕೀಯಕ್ಕೂ ಸಂಬಂಧ ಇದೆ. ಆಡಳಿತ ಪಕ್ಷ  ಬದಲಾಗುವಾಗ ಅದರ ಕ್ರೌರ್ಯಗಳೂ ಬಯಲಾಗತೊಡಗುತ್ತದೆ. ಮಾತ್ರವಲ್ಲ, ಕಾನೂನನ್ನು ಕಡೆಗಣಿಸಿ ಅವರ ಬಂಟರಂತೆ ಕೆಲಸ ಮಾಡಿದ ಅಧಿಕಾರಿಗಳ ಮುಖವೂ ಬಹಿರಂಗವಾಗುತ್ತದೆ.
   ಹಿಟ್ಲರನ ಜೊತೆಗಿದ್ದ ರಾಕಸ್ ಮಿಶ್‍ರು ಹತ್ಯಾಕಾಂಡದಲ್ಲೇನೂ ಭಾಗಿಯಾಗಿರಲಿಲ್ಲ. ಆದರೆ ಹಿಟ್ಲರನ ನಿಲುವನ್ನು, ಗೋಬೆಲ್‍ನ ತಂತ್ರವನ್ನು ಬೆಂಬಲಿಸುವಂಥ ಮನಸ್ಥಿತಿಯನ್ನು ಅವರು ಬೆಳೆಸಿಕೊಂಡಿದ್ದರು. ತನ್ನನ್ನು ಈ ಮಂದಿ ಕಾಪಾಡುತ್ತಾರೆ ಎಂಬ ಹುಂಬ ಧೈರ್ಯ ಅವರಲ್ಲಿತ್ತು. ವಂಜಾರ ಮತ್ತು ಅವರ 'ಎನ್‍ಕೌಂಟರ್' ತಂಡದ ಮನಸ್ಥಿತಿ ಬಹುತೇಕ ಹೀಗೆಯೇ ಇತ್ತು ಎಂಬುದನ್ನು 'ವಂಜಾರ' ಪತ್ರವೇ ಸ್ಪಷ್ಟಪಡಿಸುತ್ತದೆ. ಈ ತಂಡ ಮಿಶ್‍ಗಿಂತ ಸಾಕಷ್ಟು ಪಳಗಿತ್ತು. ತನ್ನ ನಾಯಕನಿಗಾಗಿ ಯಾವ ಮಟ್ಟಕ್ಕೆ ಹೋಗಲೂ ಅದು ಸಿದ್ಧವಿತ್ತು. ಸಂವಿಧಾನವನ್ನು ಉಲ್ಲಂಘಿಸಿ ಮಾಡುವ ಈ ಕಾರ್ಯದಲ್ಲಿ ನಾಯಕ ತಮ್ಮನ್ನು ರಕ್ಷಿಸುತ್ತಾನೆ ಎಂದು ಅದು ನಂಬಿತ್ತು. ಇದೀಗ ಈ ತಂಡ ಕುಪಿತಗೊಂಡಿದೆ. ನಾಯಕ ತಮ್ಮನ್ನು ರಕ್ಷಿಸುತ್ತಿಲ್ಲ ಎಂದು ಸಿಟ್ಟಾಗಿದೆ. ಈ ಸಂದರ್ಭದಲ್ಲೇ ಮಿಶ್ ಸಾವಿಗೀಡಾಗಿರುವುದು ಕಾಕತಾಳೀಯವಾಗಿದ್ದರೂ ಖಂಡಿತ ಆ ಸಾವಿನಲ್ಲಿ ದೊಡ್ಡದೊಂದು ಪಾಠವಿದೆ. ನಿಜವಾಗಿ, ರಾಕಸ್ ಮಿಶ್‍ನ ಬಗ್ಗೆ ನಾವು ಆಸಕ್ತಿ ತಾಳಬೇಕಾದದ್ದು ಆತನ ಸ್ವಾಮಿನಿಷ್ಠೆಯ ಪಾತ್ರಕ್ಕಾಗಿ. ಈ ದೇಶದಲ್ಲಿ ಮಿಶ್‍ನಂತೆ ಸ್ವಾಮಿನಿಷ್ಠೆಯೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಧಾರಾಳ ಇದ್ದಾರೆ. ಅವರಿಗೆ ಸಂವಿಧಾನಕ್ಕಿಂತ ಅಧಿಕಾರಸ್ಥರ ಆದೇಶವೇ ಮೇಲು. ಅವರಿಗಾಗಿ ಯಾರನ್ನು ಬೇಕಾದರೂ ಭಯೋತ್ಪಾದಕರಾಗಿಸಲು, ಆರೋಪ ಹೊರಿಸಿ ಜೈಲಿಗಟ್ಟಲು ಅವರು ಸಿದ್ಧರು. ವಂಜಾರ ಮತ್ತು ತಂಡವು ಈಗಾಗಲೇ ಇದನ್ನು ಒಪ್ಪಿಕೊಂಡಿದೆ. ಮಾತ್ರವಲ್ಲ, ನಾಯಕರನ್ನು ನಂಬಿ ಕಾನೂನನ್ನು ಉಲ್ಲಂಘಿಸಬೇಡಿ ಎಂದೂ ಅದು ಎಲ್ಲ ಅಧಿಕಾರಿಗಳಿಗೂ ಪರೋಕ್ಷವಾಗಿ ಮನವಿ ಮಾಡಿದೆ. ಆ ಮನವಿಯ ಬೆನ್ನಿಗೇ, 'ಇನ್ನು ನಾನು ಇಲ್ಲಿರಲಾರೆ' ಎಂದು ಘೋಷಿಸಿ ರಾಕಸ್ ಮಿಶ್  ಹೊರಟು ಹೋಗಿದ್ದಾರೆ.
ವಂಜಾರ

ಸರ್ವಾಧಿಕಾರಿಯಾಗಿದ್ದ  ಹಿಟ್ಲರ್ ನ ಕಾಲದಲ್ಲಿ ತಾನು ತೋರಿದ ಸ್ವಾಮಿನಿಷ್ಟೆಯನ್ನು ಈ ಪ್ರಜಾತಂತ್ರ ಯುಗದಲ್ಲೂ ಕೆಲವರು ಮುಂದುವರಿಸಿರುವುದಕ್ಕೆ ಅವರು ವ್ಯಕ್ತಪಡಿಸಿದ ಪ್ರತಿಭಟನೆಯೆಂದೇ ಈ ಸಾವನ್ನು ನಾವು  ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ಅವರ ಸಾವು ಸ್ವಾಮಿನಿಷ್ಠೆಯ ಬದಲು ಸಂವಿಧಾನ ನಿಷ್ಠೆಯನ್ನು ಆಯ್ಕೆ ಮಾಡಿಕೊಳ್ಳಲು ನಮ್ಮ ಅಧಿಕಾರಿಗಳಿಗೆ ಪ್ರೇರಕವಾಗಬೇಕಾಗಿದೆ.

No comments:

Post a Comment