Wednesday 23 October 2013

ಕಾರು ಎಂಬ ಸೌoದರ್ಯ ಮತ್ತು ಸೈಕಲ್ ಎಂಬ ಕುರೂಪ


ಈ ಸುದ್ದಿಗಳನ್ನು ಓದಿ
  1. 174 ದೊಡ್ಡ ಮತ್ತು ಸಣ್ಣ ರಸ್ತೆಗಳಲ್ಲಿ ಸೈಕಲ್ ಸಂಚಾರವನ್ನು ನಿಷೇಧಿಸುವ ಪಶ್ಚಿಮ ಬಂಗಾಲ ಸರಕಾರದ ತೀರ್ಮಾನದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
  2. ಕಳೆದ 10 ವರ್ಷಗಳಲ್ಲಿ ಸ್ಲಮ್ ನಿವಾಸಿಗಳ ಸಂಖ್ಯೆಯಲ್ಲಿ 25% ಹೆಚ್ಚಳವಾಗಿದ್ದು, ಸ್ಲಮ್ ಮುಕ್ತ ನಗರ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.
  ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾದ ಈ ಎರಡೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆಯಿದೆ. ಅದೇನೆಂದರೆ, ಇವೆರಡೂ ಜನಸಾಮಾನ್ಯರಿಗೆ ಸಂಬಂಧಿಸಿದವು. ಸೈಕಲ್ ಶ್ರೀಮಂತರ ಸಂಕೇತ ಅಲ್ಲ. ಅದು ಬಡವರಷ್ಟೇ ತೆಳ್ಳಗೆ. ತೂಕವೂ ಕಡಿಮೆ. ಆಧುನಿಕ ಕಾರುಗಳ ಯಾವ ಥಳಕು-ಬಳುಕೂ ಜನಸಾಮಾನ್ಯರ ಸೈಕಲ್‍ಗಳಿಗಿಲ್ಲ. ಕೂಲಿ ಕಾರ್ಮಿಕರ ನರಗಳಂತೆ ಅದರ ಚಕ್ರದ ಸರಿಗೆಗಳು ಎದ್ದು ಕಾಣುತ್ತವೆ. ಮಳೆಗೆ ಒದ್ದೆಯಾಗದೇ ಬಿಸಿಲಿಗೆ ಬೆವರದೇ ಇರುವ ವ್ಯವಸ್ಥೆ ಶ್ರೀಮಂತರ ವಾಹನಗಳಲ್ಲಿರುವಾಗ ಸೈಕಲ್‍ನಲ್ಲಿ ಅಂಥ ವ್ಯವಸ್ಥೆಯೇ ಇಲ್ಲ. ಭೂಮಿಯಿಂದ ಅಗೆದು ತೆಗೆದ ತೈಲವನ್ನು ಸೈಕಲ್ ಸ್ವೀಕರಿಸುವುದಿಲ್ಲ. ಶ್ರೀಮಂತರು ಆಧುನಿಕ ಕಾರುಗಳಲ್ಲಿ ಆರಾಮವಾಗಿ ಪ್ರಯಾಣಿಸುವಾಗ, ಬಡವರು ಸೈಕಲನ್ನು ತುಳಿದುಕೊಂಡೋ ದೂಡಿಕೊಂಡೋ ಸಂಚರಿಸುತ್ತಾರೆ. ಕಾರು, ರಿಕ್ಷಾ, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳಿರುವಂತೆ ಸೈಕಲ್‍ಗೆಂದೇ ಅಂಥ ಪಾರ್ಕಿಂಗ್‍ಗಳಿರುವುದು ತೀರಾ ಕಡಿಮೆ. ಒಂದು ರೀತಿಯಲ್ಲಿ, ಸೈಕಲ್ ಮತ್ತು ಅದರಲ್ಲಿ ಸಂಚರಿಸುವವರ ಈ ಕೊರತೆಗಳನ್ನು ಆಧುನಿಕ ಆಲೋಚನೆಗಳು ಇವತ್ತು ದೌರ್ಬಲ್ಯ ಎಂದು ತೀರ್ಮಾನಿಸುವ ಹಂತಕ್ಕೆ ತಲುಪಿಬಿಟ್ಟಿವೆ. ನಗರ ಸುಂದರವಾಗಿ ಕಾಣಿಸಬೇಕಾದರೆ ಸೈಕಲ್‍ಗಳು ಇಲ್ಲವಾಗಬೇಕು, ತಳ್ಳುಗಾಡಿಗಳು ತೊಲಗಬೇಕು, ಕೈಗಾಡಿಗಳು ಕಾಣಿಸಿಕೊಳ್ಳಬಾರದು.. ಎಂದೆಲ್ಲಾ ಅವು ಅಂದುಕೊಂಡಿವೆ. ಅದಕ್ಕೆ ಪೂರಕವಾಗಿ ಕಾನೂನು ರೂಪಿಸುವಂತೆ ಅವು ಸರಕಾರಗಳ ಮೇಲೆ ಒತ್ತಡ ಹೇರುತ್ತಿವೆ.
  ದುರಂತ ಏನೆಂದರೆ, ಉತ್ತರ ಪ್ರದೇಶದ ದೌಂಡಿಯಾ ಖೇರಾ ಗ್ರಾಮದಲ್ಲಿ ನಡೆಯುತ್ತಿರುವ ನಿಧಿ ಶೋಧವು ಹುಟ್ಟು ಹಾಕಿರುವ ಕುತೂಹಲ. ಮಾಧ್ಯಮಗಳಲ್ಲಿ ಪ್ರತಿದಿನದ ಚಟುವಟಿಕೆಗಳು ವರದಿಯಾಗುತ್ತಿವೆ. ಎಷ್ಟು ಅಗಲ, ಉದ್ದದಲ್ಲಿ, ಎಷ್ಟು ಸೆಂಟಿ ವಿೂಟರ್ ಜಾಗವನ್ನು ಅಗೆಯಲಾಯಿತು ಎಂಬೆಲ್ಲಾ ಮಾಹಿತಿಗಳನ್ನು ಅವು ಭಾರೀ ಆಸಕ್ತಿಯಿಂದ ಪ್ರಕಟಿಸುತ್ತಿವೆ. ನಿಜವಾಗಿ, ಇನ್ನೂ ಖಚಿತವಲ್ಲದ ನಿಧಿಯ ಬಗ್ಗೆ ನಮ್ಮ ವ್ಯವಸ್ಥೆ ತೋರ್ಪಡಿಸುತ್ತಿರುವ ಆಸಕ್ತಿಯ ಸಣ್ಣ ಪ್ರಮಾಣವನ್ನಾದರೂ ಬಡವರ ಬಗ್ಗೆ ತೋರಿಸುತ್ತಿದ್ದರೆ, ಸೈಕಲ್ ಇವತ್ತು ನಿಷೇಧಕ್ಕೆ ಅರ್ಹವಾಗುವಷ್ಟು ಅಪಾಯಕಾರಿ ವಾಹನ ಆಗುತ್ತಿರಲಿಲ್ಲ. ಕನಿಷ್ಠ, ಪರ್ಯಾಯ ರಸ್ತೆಯ ವ್ಯವಸ್ಥೆಯನ್ನೇ ಮಾಡದೆ ಸೈಕಲನ್ನು ನಿಷೇಧಿಸಲಾಗುತ್ತದೆಂದರೆ, ಅದನ್ನು ‘ಬಡವರಿಗೆ ನಿಷೇಧ’ ಎಂದಲ್ಲದೇ ಬೇರೇನೆಂದು ವ್ಯಾಖ್ಯಾನಿಸಲು ಸಾಧ್ಯ? ಹಾಗಾದರೆ, ಜಾಗದ ದುರುಪಯೋಗ ಎಂದು ವಾದಿಸಿ ಶ್ರೀಮಂತರ ಬೃಹತ್ ಬಂಗಲೆಗಳನ್ನು ನಮ್ಮ ವ್ಯವಸ್ಥೆ ನಿಷೇಧಿಸಬಲ್ಲುದೇ? ತಾನು, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮುಖೇಶ್ ಅಂಬಾನಿ ಕಟ್ಟಿದ 27 ಅಂತಸ್ತಿನ ಮನೆಯ ಬಗ್ಗೆ ವ್ಯವಸ್ಥೆಯ ನಿಲುವೇನು? ಆ ದುಡ್ಡಿನಲ್ಲಿ ಸ್ಲಂನಲ್ಲಿ ಜೀವಿಸುವ ಅನೇಕಾರು ಮಂದಿಗೆ ಮನೆಗಳನ್ನು ನಿರ್ಮಿಸಿಕೊಡಬಹುದಿತ್ತು ಎಂದು ಅದು ಹೇಳುತ್ತದೆಯೇ? 5 ಮಂದಿಯ ಕುಟುಂಬವು 10ಕ್ಕಿಂತಲೂ ಹೆಚ್ಚು ಆಧುನಿಕ ವಾಹನಗಳನ್ನು ಪೇರಿಸಿಕೊಟ್ಟುಕೊಂಡು ಬದುಕುತ್ತಿರುವುದು ನಮ್ಮ ವ್ಯವಸ್ಥೆಗೇಕೆ ಅಸಂಗತ ಅನ್ನಿಸುತ್ತಿಲ್ಲ? ವಾಹನ ದಟ್ಟಣೆಗೆ, ತೈಲದ ದುರ್ಬಲಕೆಗೆ ಇಂಥ ಐಶಾರಾಮದ ಬದುಕು ಕಾರಣ ಎಂದು ಹೇಳಿ ಅವನ್ನು ನಿಷೇಧಿಸುವುದಕ್ಕೇಕೆ ಮುಂದಾಗುತ್ತಿಲ್ಲ? ಒಂದು ಕಡೆ, ನಮ್ಮ ವ್ಯವಸ್ಥೆ ಓರ್ವ ಸಾಧುವಿನ ಕನಸನ್ನು ಬೆನ್ನಟ್ಟಿಕೊಂಡು ಬುಲ್ಡೋಜರ್‍ನೊಂದಿಗೆ ಅಗೆಯಲು ಪ್ರಾರಂಭಿಸುತ್ತದೆ. ಇನ್ನೊಂದು ಕಡೆ, ಇದೇ ವ್ಯವಸ್ಥೆ ಇದೇ ಬುಲ್ಡೋಜರನ್ನು ಸ್ಲಂಗಳ ಧ್ವಂಸಕ್ಕಾಗಿ ಕಳುಹಿಸುತ್ತದೆ. ನಮ್ಮ ವ್ಯವಸ್ಥೆಗೆ ದುಡ್ಡು, ಶ್ರೀಮಂತರು ಅಗತ್ಯವೇ ಹೊರತು ಬಡವರು, ಸೈಕಲ್‍ಗಳು ಅಲ್ಲ ಎಂಬುದನ್ನಲ್ಲವೇ ಇವು ಸಮರ್ಥಿಸುತ್ತಿರುವುದು?
  ನಿಜವಾಗಿ, ಸ್ಲಮ್‍ಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚಳವಾಗುತ್ತಿದೆಯೆಂದರೆ ನಮ್ಮನ್ನಾಳುವವರ ಆಲೋಚನೆಗಳು ದಿನೇ ದಿನೇ ಶ್ರೀಮಂತರಿಂದ ಪ್ರಭಾವಿತಗೊಳ್ಳುತ್ತಿವೆ ಎಂದೇ ಅರ್ಥ. ಅವರು ಬೇಕೆಂದ ಕಡೆ ನಮ್ಮ ವ್ಯವಸ್ಥೆ ಭೂಮಿಯನ್ನು ಒದಗಿಸುತ್ತದೆ. ಅವರಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡುತ್ತದೆ. ಒಂದು ಹಂತದ ವರೆಗೆ ಉಚಿತವಾಗಿ ನೀರು, ವಿದ್ಯುತ್ ಒದಗಿಸುತ್ತದೆ. ಅವರ ಕೈಯಲ್ಲಿ ಈ ದೇಶದ ಭವಿಷ್ಯವಿದೆ ಎಂದು ನಮ್ಮನ್ನಾಳುವವರು ತೀರ್ಮಾನಿಸಿರುವುದರಿಂದ ಅವರಿಗಾಗಿ ಈ 'ಸೈಕಲ್ ಮನುಷ್ಯರನ್ನು' ಒಕ್ಕಲೆಬ್ಬಿಸಬೇಕಾಗುತ್ತದೆ. ತಮ್ಮದೇ ಆದ ತುಂಡು ಭೂಮಿ, ಕೆಲಸಗಳನ್ನು ತೊರೆದು ಈ ಮಂದಿ ಎಲ್ಲೆಲ್ಲಿಗೋ ಹೋಗಬೇಕಾಗುತ್ತದೆ. ಅನೇಕ ಬಾರಿ ಪರಿಹಾರದ ಹೆಸರಲ್ಲಿ ಅವರ ಕೈಗೆ ಬರುವ ದುಡ್ಡು ಹೊಸತೊಂದು ಮನೆ ಖರೀದಿಸುವುದಕ್ಕೋ ವ್ಯಾಪಾರ ಆರಂಭಿಸುವುದಕ್ಕೋ ಸಾಲುವುದಿಲ್ಲ. ಪ್ರತಿಭಟನೆ, ಅದು-ಇದು ಎಂದು ಅತ್ತಿತ್ತ ಓಡಾಡಿಯೇ ದುಡ್ಡಿನ ದೊಡ್ಡದೊಂದು ಪಾಲು ಅದಾಗಲೇ ಮುಗಿದಿರುತ್ತದೆ. ಇಂಥವರು ಕೊನೆಗೆ ಸ್ಲಮ್‍ಗಳಂಥ ಪ್ರದೇಶಗಳಲ್ಲಿ ಬಿಡಾರ ಹೂಡುವ ಅನಿವಾರ್ಯತೆ ತಲೆದೋರುತ್ತದೆ. ಸರಿಯಾದ ಉದ್ಯೋಗವಾಗಲಿ, ಮನೆಯಾಗಲಿ ಇಲ್ಲದೇ ಅಪರಿಚಿತ ಪ್ರದೇಶದಲ್ಲಿ ಬದುಕುವ ಓರ್ವ ಬಡವನನ್ನು ಊಹಿಸಿ.. ಆತನನ್ನು ಮತ್ತು ಅಂಥ ಅಸಂಖ್ಯ ಸಂತ್ರಸ್ತರನ್ನು ನಗರದ ಸೌಂದರ್ಯಕ್ಕೆ ಕಳಂಕ ಎಂದು ನಾವು ತೀರ್ಮಾನಿಸುವಾಗ ಅಂಥದ್ದೊಂದು ಪರಿಸ್ಥಿತಿಯನ್ನು ನಿರ್ಮಿಸಿದವರ ಬಗ್ಗೆ ನಮ್ಮಲ್ಲೇಕೆ ಆಕ್ರೋಶ ವ್ಯಕ್ತವಾಗುತ್ತಿಲ್ಲ? ಅಭಿವೃದ್ಧಿ ಎಂಬುದು ಬಡವನ ಮನೆ, ಗದ್ದೆ, ಸೈಕಲನ್ನು ಧ್ವಂಸ ಮಾಡಿ ಸಾಧಿಸುವಂಥದ್ದೇ? ಸ್ಲಮ್ ಮುಕ್ತ ನಗರ, ಸೈಕಲು ಮುಕ್ತ ರಸ್ತೆ ಎಂಬೆಲ್ಲ ಪ್ರಾಸಬದ್ಧ ವಾಕ್ಯಗಳನ್ನು ರಚಿಸುವುದು ಸುಲಭ. ಅದು ಕೇಳಲೂ ಇಂಪಾಗಿರುತ್ತದೆ. ಆದರೆ, ಎಲ್ಲ ಅಭಿವೃದ್ಧಿ ಮತ್ತು ಸೌಂದರ್ಯದ ಕಲ್ಪನೆ ಬಡವರನ್ನು ಗುರಿಯಾಗಿಸಿಕೊಂಡೇ ಯಾಕೆ ಬರುತ್ತವೆ? ಬಡತನ ಎಂಬುದು ಖಂಡಿತ ಕುರೂಪದ ಹೆಸರಲ್ಲ. ಅದನ್ನು ನಮ್ಮ ವ್ಯವಸ್ಥೆ ಕುರೂಪ ಎಂದು ಭಾವಿಸುತ್ತದಾದರೆ ಆ ಕುರೂಪತನದ ಹೊಣೆಯನ್ನು ವ್ಯವಸ್ಥೆಯೇ ವಹಿಸಿಕೊಳ್ಳಬೇಕು. ಆ ಕುರೂಪತನವನ್ನು ಸೌಂದರ್ಯವಾಗಿ ಮಾರ್ಪಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಅದು ಬಿಟ್ಟು, ಬಡವರ ಅಸ್ತಿತ್ವ, ಸಂಕೇತಗಳನ್ನೇ ನಿಷೇಧಿಸುವುದು ವ್ಯವಸ್ಥೆಯ ಕುರೂಪತನವನ್ನಷ್ಟೇ ತೋರಿಸುತ್ತದೆ.
  ನಿಜವಾಗಿ, ಶ್ರೀಮಂತರು ಮತ್ತು ಬಡವರು ಒಂದು ವ್ಯವಸ್ಥೆಯ ಎರಡು ಕಣ್ಣುಗಳೇ ಹೊರತು ಅದರಲ್ಲಿ ಒಂದನ್ನು ಸುಂದರ ಮತ್ತು ಇನ್ನೊಂದನ್ನು ಕುರೂಪ ಎಂದು ವಿಭಜಿಸುವುದೇ ತಪ್ಪು. ಒಂದು ಪ್ರದೇಶದ ಶ್ರೀಮಂತರು ಒಟ್ಟು ಸೇರಿ ತಮ್ಮ ಪ್ರದೇಶದ ಬಡವರ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತಹ ಪ್ರಯತ್ನಗಳು ನಡೆದರೆ ಶ್ರೀಮಂತರನ್ನು ಬಡವರು ಅಸೂಯೆಯಿಂದ ನೋಡುವ ಸಂದರ್ಭಗಳು ಕೊನೆಗೊಂಡೀತು. ಮನಸ್ಸು ಮಾಡಿದರೆ ಬಡವರನ್ನು ಸಬಲರನ್ನಾಗಿಸುವುದಕ್ಕೆ ಹತ್ತು-ಹಲವು ಅವಕಾಶಗಳು ಖಂಡಿತ ಇವೆ. ವರ್ಷಕ್ಕೊಮ್ಮೆ ತಮ್ಮ ಲಾಭದ ಒಂದಂಶವನ್ನು ಒಟ್ಟು ಸೇರಿಸಿ ತಮ್ಮ ಪ್ರದೇಶದ ಬಡವನನ್ನು ಸಬಲನನ್ನಾಗಿಸುವುದಕ್ಕೆ ಶ್ರೀಮಂತರು ವಿನಿಯೋಗಿಸಬಹುದು. ಆತ ಆ ದುಡ್ಡನ್ನು ವ್ಯಾಪಾರದಲ್ಲೋ ಇನ್ನಿತರ ಮಾರ್ಗದಲ್ಲೋ ಹೂಡಿ ಸಬಲನಾಗುವಂತೆ ನೋಡಿಕೊಳ್ಳಬಹುದು. ಇಂಥ ಕ್ರಮಕ್ಕೆ ಯಾರಾದರೂ ಚಾಲನೆ ಕೊಟ್ಟರೆ ಖಂಡಿತ ಮುಂದೊಂದು ದಿನ ಅದು ಚಳವಳಿಯಾಗಿ ಮಾರ್ಪಾಡಬಹುದಲ್ಲದೇ ಶ್ರೀಮಂತರನ್ನು ಅಭಿಮಾನದಿಂದ ನೋಡುವ ವರ್ಗವೊಂದು ಬೆಳೆದು ಬಂದೀತು. ಆದ್ದರಿಂದ, ಸೈಕಲ್ ಇಲ್ಲದ ರಸ್ತೆ ಮತ್ತು ಸ್ಲಂಗಳಿಲ್ಲದ ಪಟ್ಟಣವನ್ನು ನಿರ್ಮಿಸಲು ಹೊರಟಿರುವ ವ್ಯವಸ್ಥೆಯು, `ಸೈಕಲ್‍ಗಳನ್ನೂ' `ಸ್ಲಂಗಳನ್ನೂ' ಸುಂದರಗೊಳಿಸಲು ಪ್ರಯತ್ನಿಸಬೇಕಾಗಿದೆ. ಸ್ಲಂಗಳಲ್ಲಿ ವಾಸಿಸುವವರು ಮತ್ತು ಸೈಕಲ್‍ನಲ್ಲಿ ಪ್ರಯಾಣಿಸುವವರು ದ್ವಿತೀಯ ದರ್ಜೆಯ ನಾಗರಿಕರಲ್ಲ ಎಂದು ಸಾರಬೇಕಾಗಿದೆ.

Thursday 17 October 2013

 ಇಂಥ ಗೆಲುವನ್ನು ಈ ಮಗು ಮತ್ತೆ ಮತ್ತೆ ದಾಖಲಿಸುತ್ತಲೇ ಇರಲಿ..

   ನಾರ್ವೆಯ ನೋಬೆಲ್ ಶಾಂತಿ ಪ್ರತಿಷ್ಠಾನವು ಮಲಾಲ ಎಂಬ ಮಗುವನ್ನು ರಣಹದ್ದುಗಳ ಕೈಯಿಂದ ಒಂದು ವರ್ಷದ ಮಟ್ಟಿಗಾದರೂ ರಕ್ಷಿಸಿದೆ. ಮಲಾಲ ಯಾರು, ಆಕೆ ಎಲ್ಲಿದ್ದಾಳೆ, ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾಳೆ.. ಎಂಬುದೆಲ್ಲಾ ಶಾಲೆಯ ಮೆಟ್ಟಲು ಹತ್ತದ ಜನಸಾಮಾನ್ಯರಿಗೂ ಇವತ್ತು ಗೊತ್ತು. ಹಾಗಂತ, ಮಲಾಲ ಅಪಾರ ಪ್ರತಿಭಾವಂತೆ ಏನಲ್ಲ. ಸಣ್ಣ ಪ್ರಾಯದಲ್ಲೇ ಅಸಾಮಾನ್ಯ ಸಾಧನೆ ಮಾಡಿದ ಗುರುತೂ ಆಕೆಗಿಲ್ಲ. ಪಾಕ್ ಮತ್ತು ಅಫಘಾನಿಸ್ತಾನದ ಗಡಿಭಾಗದಲ್ಲಿ ತಣ್ಣಗೆ ಕಲಿಯುತ್ತಿದ್ದ ಈ ಮಗುವಿನ ಮೇಲೆ ಆದ ಗುಂಡಿನ ದಾಳಿಯು ಆಕೆಯನ್ನು ಪ್ರಸಿದ್ಧಿಗೆ ಒಯ್ದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿಸುವಷ್ಟು, ವೈಟ್ ಹೌಸ್‍ಗೆ ಭೇಟಿ ಕೊಡಿಸುವಷ್ಟು, ಜಾಗತಿಕ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವಷ್ಟು ಆಕೆಯನ್ನು ಅದು ಎತ್ತರಕ್ಕೆ ಏರಿಸಿದೆ. ಪಾಶ್ಚಾತ್ಯ ಯುದ್ಧದಾಹಿ ರಾಷ್ಟ್ರಗಳು ತಮ್ಮ ಮಾತುಗಳನ್ನು ಈ ಮಗುವಿನ ಬಾಯಿಯಲ್ಲಿ ಇವತ್ತು ಹೇಳಿಸುತ್ತಿವೆ. ಜಗತ್ತಿನ ಸಕಲ ಆಗು-ಹೋಗುಗಳ ಬಗ್ಗೆಯೂ ಹೇಳಿಕೆ ಕೊಡುವಂಥ ಸ್ಥಿತಿಗೆ ಅವು ಆ ಮಗುವನ್ನು ನೂಕಿಬಿಟ್ಟಿವೆ. ಪಾಕ್‍ನ ಬೆನಝೀರ್ ಆಗಬೇಕು ಎಂದು ಒಮ್ಮೆ ಆ ಮಗು ಹೇಳಿದರೆ, ಇನ್ನೊಮ್ಮೆ ಪಾಕ್-ಅಫಘನ್ನಿನ ಮಹಿಳೆಯರ ಬಗ್ಗೆ ಮಾತಾಡುತ್ತದೆ. ಮಕ್ಕಳ ಹಕ್ಕು, ಶಿಕ್ಷಣದ ಅಗತ್ಯ, ಮಹಿಳಾ ಸಬಲೀಕರಣ.. ಎಂದೆಲ್ಲಾ ತನ್ನ ವಯಸ್ಸಿಗೆ ವಿೂರಿದ ಮಾತುಗಳನ್ನು ಆ ಮಗು ಹೇಳುತ್ತಿದೆ. ಇಂಥ ಹೊತ್ತಲ್ಲೇ ಆಕೆಯ ಹೆಸರು ನೋಬೆಲ್ ಶಾಂತಿ ಪ್ರಶಸ್ತಿಯ ಪಟ್ಟಿಗೂ ಸೇರ್ಪಡೆಗೊಂಡಿತು. ರಶ್ಯಾದ ಅಧ್ಯಕ್ಷ  ಪುಟಿನ್ ಮತ್ತು ರಾಸಾಯನಿಕ ಅಸ್ತ್ರ ತಡೆ ಸಂಸ್ಥೆ (ಓ.ಪಿ.ಸಿ.ಡಬ್ಲ್ಯು)ಯು ಪ್ರಶಸ್ತಿಯ ಪಟ್ಟಿಯಲ್ಲಿದ್ದರೂ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾದದ್ದು ಈ ಮಗುವೇ. ಅಷ್ಟಕ್ಕೂ, ನೋಬೆಲ್ ಪ್ರಶಸ್ತಿಯನ್ನು ನೀಡುವುದಕ್ಕೆ ಪರಿಗಣಿಸಲಾಗುವ ಅರ್ಹತೆಗಳೇನು, ಮಲಾಲ ಆ ಪ್ರಶಸ್ತಿಗೆ ಎಷ್ಟು ಅರ್ಹ, ಆಕೆಯ ಯಾವ ಸಾಧನೆಯನ್ನು ಪ್ರಶಸ್ತಿ ಪ್ರತಿಷ್ಠಾನವು ಪರಿಗಣಿಸಬೇಕು.. ಎಂಬೆಲ್ಲ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಮಾಧ್ಯಮಗಳು ಶ್ರಮಿಸಿದ್ದು ತೀರಾ ಕಡಿಮೆ.  ಇದೀಗ ರಾಸಾಯನಿಕ ಅಸ್ತ್ರ ತಡೆ ಸಂಸ್ಥೆಯನ್ನು ನೋಬೆಲ್ ಪ್ರತಿಷ್ಠಾನವು ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಮೂಲಕ ಅದು ಮಾಡಿದ ಅತಿ ದೊಡ್ಡ ಸಾಧನೆಯೇನೆಂದರೆ, ಮಲಾಲಳನ್ನು ರಕ್ಷಿಸಿದ್ದು. ಒಂದು ವೇಳೆ ಶಾಂತಿ ಪ್ರಶಸ್ತಿಗೆ ಮಲಾಲ ಆಯ್ಕೆಯಾಗುತ್ತಿದ್ದರೆ ಆ ಪ್ರಶಸ್ತಿಯ ಮೌಲ್ಯವಷ್ಟೇ ಅಲ್ಲ, ಆ ಮಗುವಿನ ಆಯುಷ್ಯವೂ ಕುಸಿಯುವ ಸಾಧ್ಯತೆಯಿತ್ತು. ಯಾಕೆಂದರೆ, ಆಕೆಯನ್ನು ಸಾಕುತ್ತಿರುವ ರಾಷ್ಟ್ರಗಳಿಗೆ ಆ ಮಗು ಒಂದು ಆಯುಧ. ಆ ಆಯುಧವನ್ನು ಬಳಸಿಕೊಂಡು ಕಳೆದೊಂದು ವರ್ಷದಲ್ಲಿ ಅವು ಪಾಕ್ ಮತ್ತು ಅಫಘಾನ್‍ಗಳ ಮೇಲೆ ಅನೇಕಾರು ಡ್ರೋನ್‍ಗಳನ್ನು ಎಸೆದಿವೆ. ಈ ಮಗುವಿನ ಬೆನ್ನ ಹಿಂದೆ ಕೂತು ಅವು ತಾಲಿಬಾನ್‍ಗಳ ವಿರುದ್ಧ ಬಂದೂಕು ಸಿಡಿಸಿವೆ. ಈ ಎರಡು ರಾಷ್ಟ್ರಗಳಲ್ಲಿ ತಮ್ಮ ಸೈನಿಕರು ಎಸಗಿರುವ ಮತ್ತು ಎಸಗುತ್ತಿರುವ ಮನುಷ್ಯ ವಿರೋಧಿ ಕೃತ್ಯಗಳನ್ನೆಲ್ಲ ಸಮರ್ಥಿಸಿಕೊಳ್ಳಲು ಅವರಿಗೆ ಈ ಮಗು ಬೇಕೇ ಬೇಕು. ಅಫಘನ್ನಿನಲ್ಲೋ ಪಾಕ್‍ನಲ್ಲೋ ಸ್ಫೋಟಗಳು ನಡೆದಾಗಲೆಲ್ಲ ಅವು ಈ ಮಗುವಿನಲ್ಲಿ ಹೇಳಿಕೆಯನ್ನು ಹೊರಡಿಸುತ್ತವೆ. ಆ ಮಗು ಹೇಳಿಕೆ ಕೊಡುವುದು ಶಿಕ್ಷಣದ ಬಗ್ಗೆಯಾದರೂ ಪತ್ರಿಕೆಗಳು ಅದನ್ನು ಪ್ರಕಟಿಸುವಾಗ  ‘ತಾಲಿಬಾನ್ ಗುಂಡನ್ನು’ ಸಹಜವಾಗಿ ಪ್ರಸ್ತಾಪಿಸುತ್ತವೆ. ಟಿ.ವಿ. ಆ್ಯಂಕರ್‍ಗಳು, ‘ಗುಂಡು ಪ್ರಕರಣವನ್ನು’ ಉಲ್ಲೇಖಿಸದೆ ಮತ್ತು ಆಕೆಯನ್ನು ಚಿಕಿತ್ಸೆಗೆ ತುರ್ತಾಗಿ ಇಂಗ್ಲೆಂಡಿಗೆ ಹೊತ್ತೊಯ್ದ ದೃಶ್ಯವನ್ನು ತೋರಿಸದೆ ಸುದ್ದಿಯನ್ನು ಮುಗಿಸುವುದಿಲ್ಲ. ಹೀಗಿರುವಾಗ, ಈ ಮಗುವಿಗೆ ನೋಬೆಲ್ ಬರುತ್ತಿದ್ದರೆ ಪ್ರಚಾರದ ಅಬ್ಬರದಲ್ಲಿ ಅದು ಖಂಡಿತ ಕಳೆದು ಹೋಗುತ್ತಿತ್ತು. ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಲಾಗದೇ ಮಗು ಕುಸಿದು ಹೋಗುವ ಸಾಧ್ಯತೆಯೂ ಇತ್ತು. ಅಲ್ಲದೆ, ಪ್ರಶಸ್ತಿಯ ಭಾರವನ್ನು ತಡೆಯಲಾಗದೇ ಮಗು ಬಾಡಿ ಹೋಗಿ ಚಲಾವಣೆಗೊಳ್ಳದ ನಾಣ್ಯದಂತಾಗಿದ್ದರೆ ಈ ಯುದ್ಧದಾಹಿಗಳು ತಾವೇ ಗುಂಡು ಪ್ರಕರಣವೊಂದನ್ನು ಸೃಷ್ಟಿಸಿ ಅದನ್ನು ತಾಲಿಬಾನ್‍ಗಳ ತಲೆಗೆ ಕಟ್ಟಿ ಮಗುವನ್ನು ಬಲಿ ಕೊಡುವುದಕ್ಕೂ ಹೇಸುತ್ತಿರಲಿಲ್ಲ.
 ನಿಜವಾಗಿ, ಮಲಾಲ ಎಂಬ ಮಗುವನ್ನು ಪಾಶ್ಚಾತ್ಯ ಯುದ್ಧದಾಹಿಗಳಿಂದ ತುರ್ತಾಗಿ ರಕ್ಷಿಸಬೇಕಾದ ಅಗತ್ಯವಿದೆ. ಆಕೆಯ ಮೇಲೆ ನಡೆದ ಗುಂಡಿನ ದಾಳಿಗಿಂತ ವರ್ಷಗಳ ಮೊದಲೇ ಆ್ಯಡಮ್ ಗಿಲ್ಲಿಕ್ ಎಂಬ ಪತ್ರಕರ್ತ ಮಾರುವೇಷದಲ್ಲಿ ಈ ಕುಟುಂಬವನ್ನು ಸಂಪರ್ಕಿಸಿ ಚಿತ್ರಿಸಿದ ಡಾಕ್ಯುಮೆಂಟರಿಯನ್ನು ನೋಡುವಾಗ ಇಡೀ ಗುಂಡು ಪ್ರಕರಣದ ಬಗ್ಗೆಯೇ ಅನುಮಾನ ಮೂಡುತ್ತದೆ. ತಮ್ಮ ಯೋಜನೆಗಳನ್ನು ಜಾರಿಗೊಳಿಸಲಿಕ್ಕಾಗಿ ಈ ಮಗುವನ್ನು ಬಳಸಿಕೊಳ್ಳಲು ಬೃಹತ್ ರಾಷ್ಟ್ರಗಳು ಮುಂಚಿತವಾಗಿಯೇ ತೀರ್ಮಾನಿಸಿದ್ದುವೇ ಎಂದು ಸಂಶಯವಾಗುತ್ತದೆ. ಬಹುಶಃ, ಆ ಮಗುವಿಗೆ ಈ ವಾಸ್ತವ ಗೊತ್ತಿರಬೇಕೆಂದೇನೂ ಇಲ್ಲ. ತನ್ನ ಪ್ರಾಯೋಜಕರು ಏನೆಂದು ಹೇಳಿಕೊಡುತ್ತಿದ್ದಾರೋ ಅದನ್ನೇ ನಂಬುವಂಥ ವಯಸ್ಸು ಅದು. ತನ್ನ ಮೇಲೆ ತಾಲಿಬಾನ್ ದಾಳಿ ನಡೆಸಿದೆ ಎಂದು ಆ ಮಗು ಬಲವಾಗಿ ನಂಬಿದೆ. ಜಗತ್ತನ್ನೂ ಹಾಗೆಯೇ ನಂಬಿಸಲಾಗಿದೆ. ಅದುವೇ ನಿಜ ಎಂದು ನಾವು ಗಟ್ಟಿಯಾಗಿ ಹೇಳುವಾಗಲೂ ಅನುಮಾನದ ಪುಟ್ಟದೊಂದು ಗೆರೆ ನಮ್ಮಂಥ ಅಸಂಖ್ಯ ಮಂದಿಯ ಎದೆಯಲ್ಲಿ ಹಾದುಹೋಗುತ್ತಿರುವುದು ಸುಳ್ಳೇನೂ ಅಲ್ಲ. ಆಕೆಯನ್ನು ಯಾರು ಇವತ್ತು ಸಾಕುತ್ತಿದ್ದಾರೋ ಅವರು ಈ ಹಿಂದೆ ಮಾಡಿರುವ ವಂಚನೆಗಳನ್ನು ಸ್ಮರಿಸುವಾಗ ಮಲಾಲ ಗುಂಡು ಪ್ರಕರಣವು ಈ ವಂಚನೆಯ ಮುಂದುವರಿದ ಭಾಗವಾಗಿರಬಹುದೇ ಎಂಬ ಸಂಶಯ ಬಂದೇ ಬರುತ್ತದೆ. 1953ರಲ್ಲಿ ಇರಾನಿನ ಪ್ರಜಾತಂತ್ರ ಸರಕಾರವನ್ನು ಉರುಳಿಸುವಲ್ಲಿ ಮತ್ತು ಅಮೇರಿಕನ್ ಪರವಾಗಿದ್ದ ಶಾ ಪಹ್ಲವಿ ಎಂಬವರನ್ನು ರಾಜನಾಗಿ ನೇಮಕ ಮಾಡುವಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ್ದು ಅಮೇರಿಕವೇ ಎಂದು ಎರಡು ತಿಂಗಳ ಹಿಂದೆ ಅದುವೇ ಒಪ್ಪಿಕೊಂಡಿತ್ತು. ಅಮೇರಿಕವನ್ನು ವಿರೋಧಿಸುತ್ತಿರುವ ಲ್ಯಾಟಿನ್ ಅಮೇರಿಕದ ರಾಷ್ಟ್ರಗಳ ಅಧ್ಯಕ್ಷರುಗಳಿಗೆ ಅದು ಕ್ಯಾನ್ಸರ್ ವೈರಸನ್ನು ಚುಚ್ಚುತ್ತಿದೆ ಎಂಬ ಅನುಮಾನ ಅಲ್ಲಿಯ ಜನರಲ್ಲಿ ಇವತ್ತು ವ್ಯಾಪಕವಾಗಿದೆ. ಹ್ಯೂಗೋ ಚಾವೇಝ್‍ರ ಸಾವು ಈ ಅನುಮಾನವನ್ನು ಇನ್ನಷ್ಟು ಬಲಪಡಿಸಿದೆ. ಕಳೆದ ವಾರವಷ್ಟೇ ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ ಕಿರ್ಚನರ್ ಅವರ ಮೆದುಳಿನಲ್ಲಿದ್ದ ಕ್ಯಾನ್ಸರ್‍ಕಾರಕ ಗಡ್ಡೆಯನ್ನು ತೆಗೆದು ಹಾಕಲಾಗಿದೆ. ಹೀಗಿರುವಾಗ, ಮಲಾಲಳನ್ನು 'ತಾಲಿಬಾನ್ ಸಂತ್ರಸ್ತೆ' ಎಂದು ಬಿಂಬಿಸಲು ಅಮೇರಿಕಕ್ಕೆ ಅಸಾಧ್ಯವೆಂದು ಹೇಗೆ ನಂಬುವುದು? ಮಗುವನ್ನು ಮುಂದಿಟ್ಟುಕೊಂಡು ತಮ್ಮ ಯುದ್ಧದಾಹಿ ಕಾರ್ಯಾಚರಣೆಯನ್ನು ಮುಂದುವರಿಸಲು ಈ ಶಕ್ತಿಗಳು ಪ್ರಯತ್ನಿಸಲಾರವು ಎಂದು ಅನುಮಾನಿಸದಿರುವುದು ಹೇಗೆ?
   ಏನೇ ಆಗಲಿ, ಗುಂಡು ಪ್ರಕರಣದಿಂದ ಜರ್ಝರಿತವಾಗಿರುವ ಮಗುವನ್ನು ನೋಬೆಲ್ ಮೂಲಕ ಗಲ್ಲಿಗೇರಿಸುವ ಯುದ್ಧದಾಹಿಗಳ ತಂತ್ರವನ್ನು ವಿಫಲಗೊಳಿಸಿದ್ದಕ್ಕಾಗಿ ನಾವೆಲ್ಲ ನೋಬೆಲ್ ಶಾಂತಿ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ನೋಬೆಲ್‍ನ ಹಿನ್ನೆಲೆ, ಅದರ ಮೌಲ್ಯ, ಉದ್ದೇಶ, ಇತಿಹಾಸ.. ಮುಂತಾದುವುಗಳನ್ನೆಲ್ಲ ಅರಗಿಸಿಕೊಳ್ಳುವಷ್ಟು ಪ್ರಬುದ್ಧವಲ್ಲದ ಮಗುವಿನ ಕುತ್ತಿಗೆಗೆ ಅದನ್ನು ನೇತು ಹಾಕುವುದರಿಂದ ಮಗು ಶಾಶ್ವತವಾಗಿ ಬಾಡಿ ಹೋಗುವ ಅವಕಾಶ ಖಂಡಿತ ಇತ್ತು. ಆ ಬಳಿಕ ಅಂಥ ಮಗುವನ್ನು ಸಾಕುವ ಔದಾರ್ಯವನ್ನು ಪಾಶ್ಚಾತ್ಯ ಪೋಷಕರು ತೋರ್ಪಡಿಸುವ ಸಾಧ್ಯತೆಯೂ ಇರಲಿಲ್ಲ.ಇದೀಗ ಮಗು ಗೆದ್ದಿದೆ. ಮಾತ್ರವಲ್ಲ, ಆ ಮಗುವನ್ನು ಬಳಸಿಕೊಂಡು ತನ್ನ ಮನುಷ್ಯ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವವರ ತಂತ್ರ ತಾತ್ಕಾಲಿಕವಾಗಿ ವಿಫಲವಾಗಿದೆ. ಈ ವೈಫಲ್ಯ ಇನ್ನೂ ಮುಂದುವರಿಯಲಿ ಮತ್ತು ಈ ಮಗು ಇವರ ವಿರುದ್ಧ ಮತ್ತೆ ಮತ್ತೆ ಇಂಥ ಗೆಲುವನ್ನು ದಾಖಲಿಸುತ್ತಲೇ ಇರಲಿ ಎಂದೇ ಹಾರೈಸೋಣ.

Monday 7 October 2013

ನಮ್ಮ ಮುಖವಾಡದ ಬದುಕಿಗೆ ಕೀಟನಾಶಕ ಎಸೆದ ದಂಪತಿಗಳು..

   ಲಿಂಗಪ್ಪ ಗೌಡ ಮತ್ತು ತಿಮ್ಮಕ್ಕ ಎಂಬೆರಡು ಹೆಸರುಗಳು ಮೋದಿ, ರಾಹುಲ್, ಲಾಲೂ, ಸೋನಿಯಾ.. ಮುಂತಾದ ಹೆಸರುಗಳ ಮುಂದೆ ಏನೇನೂ ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಈ ಇಬ್ಬರ ದೂರುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಲಿಂಗಪ್ಪರದು ಸರಿಸುಮಾರು ಮೋದಿಯ ವಯಸ್ಸು - 65. ತಿಮ್ಮಕ್ಕರದು ಸೋನಿಯಾರ ವಯಸ್ಸು - 60. ಈ ಎರಡು ಸಾಮ್ಯತೆಗಳನ್ನು ಬಿಟ್ಟರೆ ಉಳಿದಂತೆ ಮೋದಿ ಮತ್ತು ಸೋನಿಯಾರೊಂದಿಗೆ ಹೋಲಿಸಿಕೊಳ್ಳುವುದಕ್ಕೆ ಈ ಇಬ್ಬರಲ್ಲಿ ಯಾವುದೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್‍ರ ಊರಾದ ಸುಳ್ಯದಲ್ಲಿ ವಾಸಿಸುತ್ತಿರುವ ಈ ದಂಪತಿಗಳಿಗೆ ಮಕ್ಕಳಿಲ್ಲ. ಇವರನ್ನು ಯಾವ ಕುಟುಂಬಗಳು ಆರೈಕೆ ಮಾಡಬೇಕಿತ್ತೋ, ಅವೇ ತಿರಸ್ಕರಿಸಿವೆ. ದೊಡ್ಡಿಯಲ್ಲಿ ಕೂಡಿಟ್ಟು, ಉಪವಾಸ ಕೂರಿಸಿವೆ. ಕೊನೆಗೆ ನೆರೆಯವರೊಂದಿಗೆ ಸಾಲ ಪಡೆದು ಕೀಟನಾಶಕ ಖರೀದಿಸಿ ತಂದು, ಸೇವಿಸಿ ಈ ಹಿರಿ ಜೀವಗಳು ಕಳೆದ ವಾರ ಆತ್ಮಹತ್ಯೆಗೆ ಯತ್ನಿಸಿವೆ.
   ನಿಜವಾಗಿ, ಲಿಂಗಪ್ಪ ಮತ್ತು ತಿಮ್ಮಕ್ಕರನ್ನು ಇಬ್ಬರು ವ್ಯಕ್ತಿಗಳಾಗಿಯಷ್ಟೇ ನಾವು ಪರಿಗಣಿಸಬೇಕಾದ್ದಲ್ಲ. ಇವರು ಅಸಂಖ್ಯ ವ್ಯಕ್ತಿಗಳ ಎರಡು ಜೀವಂತ ಪ್ರತಿನಿಧಿಗಳು ಮಾತ್ರ. ಇವರ ದೌರ್ಬಲ್ಯ ಯಾವುದೆಂದರೆ ಪ್ರಾಯ. ಹಾಗಂತ, ಪ್ರಾಯ ಎಂಬುದು ಕೆಲವೇ ಕೆಲವು ನಿರ್ದಿಷ್ಟ ಜಾತಿ, ಧರ್ಮ, ಭಾಷೆಯ ಮಂದಿಯನ್ನು ಹುಡುಕಿಕೊಂಡು ಬರುವ ಕಾಯಿಲೆ ಏನಲ್ಲ. ಮುಪ್ಪು ಎಂಬುದು ಬದುಕಿನ ಸಹಜ ಪ್ರಕ್ರಿಯೆ. ವೃದ್ಧರಿಗೆ ಹಿಂಸೆ ಕೊಡುವವರು ಒಂದು ಕಾಲದಲ್ಲಿ ಖಂಡಿತ ವೃದ್ಧಾಪ್ಯಕ್ಕೆ ತಲುಪುತ್ತಾರೆ. ಇವು ಅವರಿಗೂ ಗೊತ್ತು. ಹಾಗಿದ್ದೂ ನಮ್ಮ ನಡುವಿನ ಈ ‘ಅನುಭವಿಗಳನ್ನು' ಆತ್ಮಹತ್ಯೆಗೆ ಪ್ರಚೋದಿಸುವಷ್ಟು ನಾವು ಕ್ರೂರರಾಗುತ್ತೇವಲ್ಲ, ಯಾಕೆ? ಯಾವುದು ನಮ್ಮನ್ನು ಇಂಥ ವರ್ತನೆಗೆ ಪ್ರೇರೇಪಿಸುತ್ತಿವೆ? ಆಧುನಿಕತೆಯೇ, ಓದೇ, ಜೀವನ ಕ್ರಮಗಳೇ..? ಇಷ್ಟಕ್ಕೂ, ಲಿಂಗಪ್ಪರನ್ನೋ ತಿಮ್ಮಕ್ಕರನ್ನೋ ಎತ್ತಿಕೊಂಡು ಗಂಭೀರ ಚರ್ಚೆಯೊಂದು ಆರಂಭವಾಗುವಂತಹ ವಾತಾವರಣ ನಮ್ಮ ಸುತ್ತ-ಮುತ್ತ ಇವತ್ತು ಕಾಣಿಸುತ್ತಾ ಇಲ್ಲ. ಯಾಕೆಂದರೆ, ವೃದ್ಧರಿಗೆ ಪ್ರತಿಭಟನೆ ಮಾಡುವಷ್ಟು ಆರೋಗ್ಯ ಇಲ್ಲ. ಪತ್ರಿಕಾಗೋಷ್ಠಿ ಕರೆಯುವ ಸಾಮರ್ಥ್ಯ  ಇಲ್ಲ. ತಮ್ಮಂತೆ ಸಂಕಟಪಡುವ ವೃದ್ಧರನ್ನೆಲ್ಲಾ ಒಟ್ಟು ಸೇರಿಸುವ ಸಂಪರ್ಕ ಜಾಲವೂ ಅವರಲ್ಲಿಲ್ಲ. ಒಂದು ವೇಳೆ, ಇಂಥ ಸಾಮರ್ಥ್ಯ ಬಂದರೂ ಅವರು ಪ್ರತಿಭಟಿಸುವುದಾದರೂ ಯಾರ ವಿರುದ್ಧ? ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದಕ್ಕೆ ಯಾವ ಹೆತ್ತವರು ಇಷ್ಟಪಡುತ್ತಾರೆ? ತಮ್ಮ ಮಕ್ಕಳು ಸಮಾಜದಲ್ಲಿ ಸದಾ ಘನತೆಯಿಂದ ಬಾಳಬೇಕೆಂಬುದನ್ನು ಬಯಸಿಯೇ ಅವರು ಹಗಲಿರುಳು ದುಡಿದಿರುತ್ತಾರಲ್ಲವೇ? ಇಂಥವರು ವೃದ್ಧಾಪ್ಯಕ್ಕೆ ತಲುಪಿದ ಕೂಡಲೇ ನಮಗೆ ‘ಅನಗತ್ಯ'ವಾಗಿ ಕಾಣಿಸುವುದು ಯಾವ ಮನಸ್ಥಿತಿ? ‘ನಿರ್ಭಯ'ಳ ಪರವಾಗಿ ವಾರಗಟ್ಟಲೆ ಪ್ರತಿಭಟನೆ ಮಾಡುವ ನಾವು ಲಿಂಗಪ್ಪರನ್ನು ಸೃಷ್ಟಿಸುವ ಮನಸ್ಥಿತಿಯ ವಿರುದ್ಧವೇಕೆ ಗಂಭೀರವಾಗಿ ಧ್ವನಿಯೆತ್ತುತ್ತಿಲ್ಲ? ನಿಜವಾಗಿ, ಅತ್ಯಾಚಾರದ ವಿರುದ್ಧ ವೇದಿಕೆಯೇರಿಯೋ ಪತ್ರಿಕೆಗಳಲ್ಲಿ ಬರೆದೋ ಆಕ್ರೋಶ ವ್ಯಕ್ತಪಡಿಸುವುದು ಸುಲಭ. ಅತ್ಯಾಚಾರವೆಂಬುದು ಇವತ್ತು ಪಾರ್ಲಿಮೆಂಟಿನಿಂದ ಹಿಡಿದು ಕ್ಲಾಸ್‍ರೂಮ್‍ಗಳ ವರೆಗೆ ಭಾರೀ ಬೆಲೆಬಾಳುವ ವಿಷಯ. ದೇಶದ ಯಾವುದಾದರೊಂದು ಮೂಲೆಯಲ್ಲಿ ಅದರ ವಿರುದ್ಧ ಪ್ರತಿದಿನವೆಂಬಂತೆ ಪ್ರತಿಭಟನೆಗಳಾಗುತ್ತಲೇ ಇವೆ. ಆದರೆ ಔಷಧಗಳಿಂದ ದಿನದೂಡುತ್ತಿರುವ ಮತ್ತು ದೈಹಿಕ ಆಕರ್ಷಣೆ ಕಳಕೊಂಡಿರುವ ಒಂದು ಬೃಹತ್ ವರ್ಗ ಅತ್ಯಾಚಾರಕ್ಕೆ (ಆಚಾರವನ್ನು ವಿೂರಿದ ನಡವಳಿಕೆ) ಒಳಗಾಗುತ್ತಿದ್ದರೂ ಅವರನ್ನು ರಾಜಕೀಯ ವಾಗಿಯೋ ಶೈಕ್ಷಣಿಕವಾಗಿಯೋ ಯಾರೂ ಪ್ರತಿನಿಧಿಸುತ್ತಿಲ್ಲ. ಅವರ ಸಂಕಟಗಳು ಮನೆಯ ನಾಲ್ಕು ಗೋಡೆಗಳಿಂದ ಹೊರಗೆ ಒಂದು ಇಶ್ಶೂವಾಗಿ ಗುರುತಿಸಿಕೊಳ್ಳುತ್ತಲೂ ಇಲ್ಲ. ಅವರು ಲಿಂಗಪ್ಪರಂತೆ ಏನಾದರೂ ಎಡವಟ್ಟು ಮಾಡಿಕೊಂಡರೂ ಅದು ಆಯಾ ಊರಿನ ಒಂದು ದಿನದ ಸುದ್ದಿಯಾಗಿ ಬಿಡುತ್ತದೆಯೇ ಹೊರತು ಸರ್ವ ಊರಿನ ಬಹುದಿನಗಳ ಇಶ್ಶೂವಾಗಿ ಬದಲಾಗುವುದಿಲ್ಲ.
   ಹಿರಿಯರನ್ನು ಆತ್ಮಹತ್ಯೆಗೆ ದೂಡುವಷ್ಟು ಒಂದು ಸಮಾಜದಲ್ಲಿ ನೈತಿಕ ಮೌಲ್ಯ ಕುಸಿದಿದೆಯೆಂಬುದು ಖಂಡಿತ ಆಘಾತಕಾರಿಯಾದದ್ದು. ಹಿರಿಯರು ಯುವ ಸಮೂಹದಂತೆ ಅಲ್ಲ. ಅವರಲ್ಲಿ ಅನುಭವದ ಕಣಜವೇ ಇರುತ್ತದೆ. ಆದ್ದರಿಂದಲೇ, ಪುಟ್ಟದೊಂದು ಸಮಸ್ಯೆ ಎದುರಾದರೂ ಹಿಂದು-ಮುಂದು ನೋಡದೇ ಆತ್ಮಹತ್ಯೆಗೆ ಯತ್ನಿಸುವ ಯುವ ಸಮೂಹದೊಂದಿಗೆ ಲಿಂಗಪ್ಪರ ಆತ್ಮಹತ್ಯೆಯನ್ನು ಹೋಲಿಸುವಂತಿಲ್ಲ. ನಿಜವಾಗಿ, ಹಿರಿಯರ ಜಗತ್ತಿನಿಂದ ಬರುವ ದೂರುಗಳು ಹೆಚ್ಚು ತೂಕದ್ದಾಗಿ ಕಾಣಿಸುವುದು ಈ ಕಾರಣದಿಂದಲೇ. ಅತ್ಯಾಚಾರಕ್ಕೆ ಕಾರಣವಾಗಿರುವ ವಿವಿಧ ಮಗ್ಗುಲುಗಳ ಬಗ್ಗೆ ನಾವು ಹೇಗೆ ಚರ್ಚಿಸುತ್ತೇವೆಯೋ ಅದೇ ರೀತಿಯಲ್ಲಿ ಹಿರಿಯರ ಸಮಸ್ಯೆಗಳು ಮತ್ತು ಅದರ ಪರಿಹಾರಗಳ ಸುತ್ತ ಚರ್ಚಿಸುವ ಅಗತ್ಯ ಇದೆ. ಹಿರಿಯರೆಂದರೆ, ಕೀಟನಾಶ ಸೇವಿಸಿಯೋ ಭಿಕ್ಷೆ ಬೇಡಿಯೋ ಗಮನ ಸೆಳೆಯಬೇಕಾದ ವ್ಯಕ್ತಿತ್ವಗಳಲ್ಲ. ಅವರು ಮನೆಯ ಕಿರೀಟಗಳು. ಆ ಕಿರೀಟಗಳನ್ನು ಅನಗತ್ಯವೆಂದು ಸಾರಿ ಬೀದಿಗೆ ಅಟ್ಟುವವರು ನಿಜವಾಗಿ ಕಿರೀಟದ ಮಹತ್ವ ಅರಿಯದವರಾಗಿದ್ದಾರೆ. ಅಂಥವರಿಗೆ ಹಿರಿಯರೆಂಬ ಕಿರೀಟದ ಮೌಲ್ಯವನ್ನು ಮತ್ತೆ ಮತ್ತೆ ಮನವರಿಕೆ ಮಾಡಿಸುತ್ತಲೇ ಇರಬೇಕಾದ ಹೊಣೆಗಾರಿಕೆ-ಅತ್ಯಾಚಾರ, ಮೋದಿ, ರಾಹುಲ್, ಲಾಲೂ.. ಎಂದೆಲ್ಲಾ ದಿನವಿಡೀ ಸಮಯ ಕಳೆಯವ ನಮ್ಮೆಲ್ಲರ ಮೇಲಿದೆ. ವೃದ್ಧರಾದ ಹೆತ್ತವರ ಬಗ್ಗೆ ಛೆ ಎಂಬ ಪದ ಕೂಡ ಬಳಸಬಾರದು ಎಂದು ಪವಿತ್ರ ಕುರ್‍ಆನ್ (17:23) ಎಚ್ಚರಿಸಿದೆ. ಹೆತ್ತವರ ಕೋಪಕ್ಕೆ ಗುರಿಯಾದ ಮಕ್ಕಳು ಎಷ್ಟೇ ಧರ್ಮಿಷ್ಟರಾಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ' ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. 
   ವೃದ್ಧಾಶ್ರಮಗಳು ಜನಪ್ರಿಯತೆ ಗಳಿಸುತ್ತಿರುವ ಇಂದಿನ ದಿನಗಳಲ್ಲಿ ಹಿರಿಯರು ದಿನೇ ದಿನೇ ಗೌರವ ಕಳಕೊಳ್ಳತೊಡಗಿದ್ದಾರೆ. ಅವರನ್ನು ‘ಭಾರ'ವಾಗಿ ನೋಡುವ ಆಧುನಿಕ ಪೀಳಿಗೆಗಳು ಬೆಳೆದು ಬರುತ್ತಿವೆ. ಇಂಥ ಹೊತ್ತಲ್ಲಿ, ಲಿಂಗಪ್ಪ ಮತ್ತು ತಿಮ್ಮಕ್ಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಆತ್ಮಹತ್ಯೆಯನ್ನು ಇಬ್ಬರು ಕೈಲಾಗದವರ ದಡ್ಡ ಪ್ರಯತ್ನ ಎಂದು ನಾವು ತಳ್ಳಿ ಹಾಕದೇ ನಮ್ಮ ಮೌಲ್ಯ ವಿರೋಧಿ ಮುಖವಾಡದ ಬದುಕಿಗೆ ಅವರು ಸಲ್ಲಿಸಿದ ಪ್ರತಿಭಟನೆ ಎಂದೇ ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ನಮ್ಮ ನಮ್ಮ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ, ಆರೈಕೆ ಮಾಡುವ ಮೂಲಕ ಈ ಪ್ರತಿಭಟನೆಗೆ ಉತ್ತರವನ್ನು ನೀಡಬೇಕಾಗಿದೆ.