Monday 25 November 2013

ಅಮಲೇರಿಸುವ ಮದ್ಯವೂ ಹೆಜ್ಜೆ ತಪ್ಪುವ ‘ತರುಣ’ರೂ

    ತೆಹಲ್ಕಾದ ತರುಣ್ ತೇಜ್‍ಪಾಲ್ ಇವತ್ತು ಮಾಧ್ಯಮಗಳನ್ನಿಡೀ ತುಂಬಿಕೊಂಡಿದ್ದಾರೆ. ಪತ್ರಕರ್ತರು ಅವರ ಮನೆಯ ಗೋಡೆಗೆ ಕ್ಯಾಮರಾಗಳನ್ನಿಟ್ಟು ಕಾಯುತ್ತಿದ್ದಾರೆ. ಅವರ ಬಾಲ್ಯ, ಯೌವನ, ಪತ್ರಿಕೋದ್ಯಮದಲ್ಲಿ ಅವರು ನಡೆಸಿದ ವಿನೂತನ ಪ್ರಯೋಗಗಳೆಲ್ಲ ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಪಡುತ್ತಿವೆ. ಆದರೆ, ಹೆಣ್ಣನ್ನು ಲೈಂಗಿಕ ದೌರ್ಜನ್ಯದಿಂದ ಮುಕ್ತಗೊಳಿಸುವುದಕ್ಕೆ ಈ ಚರ್ಚೆಗಳು ಎಷ್ಟರ ಮಟ್ಟಿಗೆ ನೆರವಾಗಬಲ್ಲುದು? ಯಾಕೆಂದರೆ, ‘ಮದ್ಯದ ಅಮಲಿನಲ್ಲಿ ನಾನು ಹೆಜ್ಜೆ ತಪ್ಪಿದೆ..' ಎಂದು ತೇಜ್‍ಪಾಲ್‍ರೇ ಹೇಳಿದ್ದಾರೆ. ಹಾಗಂತ, ಮದ್ಯದಿಂದಾಗಿ ಹೀಗೆ ಹೆಜ್ಜೆ ತಪ್ಪುವವರಲ್ಲಿ ತೇಜ್‍ಪಾಲ್ ಮೊದಲಿಗರೇನೂ ಅಲ್ಲ. ಕೊನೆಯವರಾಗುವ ಸಾಧ್ಯತೆಯೂ ಇಲ್ಲ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಮಂದಿ ಮದ್ಯದಿಂದಾಗಿ ಹೆಜ್ಜೆ ತಪ್ಪುತ್ತಿದ್ದಾರೆ. ಮಾತ್ರವಲ್ಲ, ಈ ತಪ್ಪಿದ ಹೆಜ್ಜೆಗಳಿಗೆ ಸಾವಿರಾರು ಹೆಣ್ಣು ಮಕ್ಕಳು ನಿತ್ಯ ಬಲಿಯಾಗುತ್ತಲೂ ಇದ್ದಾರೆ. ಹೀಗಿರುವಾಗ, ನಮ್ಮ ಚರ್ಚೆಯ ಕೇಂದ್ರ ಬಿಂದುವಾದರೂ ಯಾರಾಗಿರಬೇಕು; ತೇಜ್‍ಪಾಲೋ, ಮದ್ಯವೋ? ಯಾಕೆ ಯಾರೂ ಮದ್ಯದ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಓರ್ವ ವ್ಯಕ್ತಿಯನ್ನು ಭೀಕರ ಅಪರಾಧ ಎಸಗುವಂತೆ ಮದ್ಯವು ಪ್ರೇರೇಪಿಸುತ್ತದೆಂದಾದರೆ ನಾವು ಮೊತ್ತಮೊದಲು ಶಿಕ್ಷೆಗೆ ಒಳ ಪಡಿಸಬೇಕಾದದ್ದು ಯಾರನ್ನು, ತೇಜ್‍ಪಾಲ್‍ರನ್ನೋ? ಒಂದು ಕ್ರೌರ್ಯದ ಪ್ರಮುಖ ರೂವಾರಿಯನ್ನು (ಮದ್ಯ) ಪ್ರೀತಿಸುತ್ತಾ ಅದರಿಂದ ಪ್ರಚೋದಿತರಾದವರನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುವುದು ಯಾವ ನೀತಿ, ಯಾವ ಬಗೆಯ ಪ್ರಾಮಾಣಿಕತೆ?
   ಮದ್ಯಕ್ಕೂ ಲೈಂಗಿಕ ದೌರ್ಜನ್ಯಗಳಿಗೂ ಬಲವಾದ ನಂಟಿದೆ. ದೆಹಲಿಯ ನಿರ್ಭಯಳಿಂದ ಹಿಡಿದು ಉಡುಪಿಯ ನಿರ್ಭಯಳ ವರೆಗೆ ಈ ದೇಶದಲ್ಲಿ ಎಷ್ಟೆಲ್ಲ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದಿವೆಯೋ ಅವೆಲ್ಲವುಗಳ ಜೊತೆ ಮದ್ಯಕ್ಕೆ ಸಂಬಂಧ ಇದೆ. ಒಂದು ಕಡೆ ಮಹಿಳೆಯರ ಸುರಕ್ಷಿತತೆ, ಸಬಲೀಕರಣದ ಬಗ್ಗೆ ನಾವೆಲ್ಲ ಭಾರೀ ಉತ್ಸಾಹದಿಂದ ಮಾತಾಡುತ್ತೇವೆ. ಮಾಧ್ಯಮಗಳು ಅಸಂಖ್ಯ ಪುಟಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿವೆ. ದೆಹಲಿಯಲ್ಲಿ ನಿರ್ಭಯಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಈ ದೇಶ ಒಂದಾಗಿ ಪ್ರತಿಭಟಿಸಿತ್ತು. ವಿದ್ಯಾರ್ಥಿಗಳಿಂದ ಹಿಡಿದು ಪತ್ರಕರ್ತರ ವರೆಗೆ ಎಲ್ಲರೂ ಅತ್ಯಾಚಾರ ಮುಕ್ತ ಭಾರತದ ಬಗ್ಗೆ ಮಾತಾಡಿದರು. ದುರಂತ ಏನೆಂದರೆ, ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಪಾನಮತ್ತರಾಗಿದ್ದರು ಎಂಬುದು ಗೊತ್ತಿದ್ದು ಕೂಡ ಯಾರೂ ಪಾನ ನಿಷೇಧಕ್ಕೆ ಒತ್ತಾಯಿಸಿಯೇ ಇಲ್ಲ! ಯಾಕೆ ಹೀಗೆ? ಮದ್ಯ ಸೇವಿಸುವುದರಿಂದ ಹೆಜ್ಜೆ ತಪ್ಪುತ್ತದೆ ಮತ್ತು ಅದು ಮಾಡಬಾರದ ಕೃತ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ ಎಂಬುದು ಕುಡಿಯುವವನಿಗೂ ಗೊತ್ತು, ಕುಡಿಸುವವನಿಗೂ ಗೊತ್ತು. ಹೀಗಿದ್ದೂ, ಮದ್ಯದ ಬಗ್ಗೆ ಮಾತಾಡದೇ ಅದು ಮಾಡಿಸುವ ಕ್ರೌರ್ಯಗಳ ಕುರಿತು ಮಾತ್ರ ಅಪಾರ ಆಕ್ರೋಶ ವ್ಯಕ್ತಪಡಿಸುವುದೇಕೆ?
   ಈ ದೇಶದಲ್ಲಿ ಕೋಟ್ಯಂತರ ಗುಡಿಸಲುಗಳು ಇವತ್ತು ಅತ್ಯಂತ ಆತಂಕದಲ್ಲಿ ದಿನದೂಡುತ್ತಿವೆ. ‘ಈ ದಿನ ಸಂಜೆಯಾಗದಿರಲಿ..’ ಎಂದು ಆಸೆಪಡುವ ಕೋಟ್ಯಂತರ ತಾಯಿ, ಮಕ್ಕಳು ಅಂಥ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸಂಜೆಯಾಗುವಾಗ ಗಂಡ ಕುಡಿದು ಬರುತ್ತಾನೆ. ಪತ್ನಿ, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾನೆ. ಮನೆಯಲ್ಲಿರುವವರ ಹೊಟ್ಟೆಗೆ ಏನನ್ನೂ ಕೊಡದೇ ತನ್ನ ಹೊಟ್ಟೆಯನ್ನು ಮದ್ಯದಿಂದ ತುಂಬಿಸಿಕೊಂಡು ಬರುವ ಅಸಂಖ್ಯ ಯಜಮಾನರಿಂದ ಈ ದೇಶದ ಕೋಟ್ಯಂತರ ಗುಡಿಸಲುಗಳು ತುಂಬಿ ಹೋಗಿವೆ. ಆ ಗುಡಿಸಲುಗಳಿಗೆ ಬಾಯಿ ಇಲ್ಲ. ಪ್ರತಿಭಟಿಸುವ ಸಾಮರ್ಥ್ಯ  ಇಲ್ಲ. ಪೇಟೆಯ ನಿರ್ಭಯರಂತೆ ಮಾತಾಡುವ ಕಲೆ ಗೊತ್ತಿಲ್ಲ. ಒಂದು ವೇಳೆ ಇಂಥ ಗುಡಿಸಲುಗಳಿಗೆ ಮಾತಾಡುವ ಸಾಮರ್ಥ್ಯಇರುತ್ತಿದ್ದರೆ, ಅಸಂಖ್ಯ ತೇಜ್‍ಪಾಲ್‍ರ ಕತೆಗಳನ್ನು ಅವು ಸಾರಿ ಸಾರಿ ಹೇಳುತ್ತಿದ್ದುವು. ನಮ್ಮ ಪೊಲೀಸ್ ಠಾಣೆಗಳು ಕೇಸು ದಾಖಲಿಸಿ ದಾಖಲಿಸಿ ಸುಸ್ತಾಗುತ್ತಿದ್ದುವು. ಹೀಗಿರುವಾಗ, ತೇಜ್‍ಪಾಲ್‍ರನ್ನು ಜೈಲಿಗಟ್ಟುವುದರಿಂದ ಇಂಥ ಗುಡಿಸಲುಗಳ ಸಂಕಟಗಳು ಕೊನೆಯಾಗಬಲ್ಲುದೇ? ಹಾಗಂತ, ತೇಜ್‍ಪಾಲ್‍ರನ್ನು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ಆದರೂ ತೇಜ್‍ಪಾಲ್ ಯಾರೆಂದೇ ಗೊತ್ತಿಲ್ಲದ ಆದರೆ ಮದ್ಯದಂಗಡಿಗಳು ಎಲ್ಲಿವೆಯೆಂದು ಖಚಿತವಾಗಿ ಗೊತ್ತಿರುವ ಮಂದಿ ಈ ದೇಶದಲ್ಲಿ ಅಸಂಖ್ಯ ಇದ್ದಾರಲ್ಲ, ಅವರೇಕೆ ನಮ್ಮ ಗಂಭೀರ ಚರ್ಚೆಯ ವ್ಯಾಪ್ತಿಗೆ ಒಳಪಡುತ್ತಿಲ್ಲ? ಅವರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ತಾಯಿ, ಮಕ್ಕಳ ಬಗ್ಗೆಯೇಕೆ ನಾವು ಕಾಳಜಿ ತೋರುತ್ತಿಲ್ಲ?
   ನಿಜವಾಗಿ, ನಾವು ಇವತ್ತು ಗಂಭೀರ ಚರ್ಚೆಗೆ ಒಳಪಡಿಸಬೇಕಾದದ್ದು ಲೈಂಗಿಕ ದೌರ್ಜನ್ಯ ಎಸಗಿದ ತೇಜ್‍ಪಾಲ್‍ರನ್ನಲ್ಲ. ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಮದ್ಯವನ್ನು. ಇವತ್ತು ಹೊಟ್ಟೆ ತುಂಬಿದವರ ಖಯಾಲಿಗಾಗಿ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಮದ್ಯಕ್ಕೆ ಪ್ರಮುಖ ಸ್ಥಾನವಿದೆ. ಅಂಥ ಕಡೆ ತೇಜ್‍ಪಾಲ್‍ರಂಥ ಧಾರಾಳ ಮಂದಿ ಹೆಜ್ಜೆ ತಪ್ಪುತ್ತಿರುತ್ತಾರೆ. ಅವು ಕೆಲವೊಮ್ಮೆ ಸುದ್ದಿಯಾಗುವುದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನವು ತಪ್ಪಿದ ಹೆಜ್ಜೆಗಳನ್ನು ಸಹಿಸಿಕೊಂಡು ಸುಮ್ಮ ನಾಗುತ್ತವೆ. ಆದ್ದರಿಂದ ತೇಜ್‍ಪಾಲ್‍ರನ್ನು ಶಿಕ್ಷಿಸುವುದರಿಂದ ಹೆಣ್ಣು ಮಕ್ಕಳು ಸುರಕ್ಷಿತರಾಗುತ್ತಾರೆ ಎಂದು ಖಂಡಿತ ಹೇಳುವಂತಿಲ್ಲ. ದೆಹಲಿಯ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಗಲ್ಲು ಶಿಕ್ಷೆಯ ಜಾರಿಯನ್ನು ಎದುರು ನೋಡುತ್ತಿದ್ದರೂ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೇನೂ ಕಡಿವಾಣ ಬಿದ್ದಿಲ್ಲವಲ್ಲವೇ? ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಿದೆ ಎಂದು ಗೊತ್ತಿದ್ದೂ ಒಂದು ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಅನ್ನುವುದು ಏನನ್ನು ಸೂಚಿಸುತ್ತದೆ? ಶಿಕ್ಷೆಯನ್ನು ಪ್ರೀತಿಸುವ ಸಮಾಜವೊಂದು ಇರಲು ಸಾಧ್ಯವೇ? ಇಲ್ಲ ಎಂದಾದರೆ, ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದೇಕೆ? ಹೆಜ್ಜೆ ತಪ್ಪಿಸುವ ಮದ್ಯದ ಹೊರತಾಗಿ ಬೇರೆ ಯಾವ ಕಾರಣಗಳನ್ನು ನಾವು ಇದಕ್ಕೆ ಕೊಡಬಲ್ಲೆವು?
   ಆದ್ದರಿಂದ, ತೇಜ್‍ಪಾಲ್ ಪ್ರಕರಣವು ನಮ್ಮ ಚರ್ಚೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಒಂದು ನೆಪವಾಗಬೇಕಾಗಿದೆ. ಹೆಜ್ಜೆ ತಪ್ಪಿಸುವ ಮದ್ಯವು ನಮ್ಮ ಚರ್ಚೆಯ ವ್ಯಾಪ್ತಿಗೆ ಒಳಪಟ್ಟರೆ ಅದಕ್ಕಾಗಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಸಂತಸಪಟ್ಟಾವು. ಒಂದು ರೀತಿಯಲ್ಲಿ, ಮದ್ಯವನ್ನು ಹೊರಗಿಟ್ಟು ಲೈಂಗಿಕ ದೌರ್ಜನ್ಯವನ್ನು ಚರ್ಚಿಸುವುದು ಅನಾಪೆsಲಿಸ್ ಸೊಳ್ಳೆಗಳನ್ನು ಹೊರಗಿಟ್ಟು ಮಲೇರಿಯಾ ರೋಗದ ಬಗ್ಗೆ ಚರ್ಚಿಸಿದಂತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

2 comments:

  1. ಈ ವಾರದ ಸನ್ಮಾರ್ಗದಲ್ಲಿ ಪ್ರಕಟವಾದ ಏ.ಕೆ. ಕುಕ್ಕಿಲರವರ ಲೇಖನ ಅತ್ಯಂತ ಚಿಂತನಾರ್ಹವಾದ ಲೇಖನವಾಗಿದೆ. ಸಮಸ್ಯೆಯ ಮೂಲವನ್ನು ಹುಡುಕದೆ, ಹೊರನೋಟಕ್ಕೆ ಕಂಡು ಬರುವಂತಹ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಪರಿಹಾರವನ್ನು ಕಂಡು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ನಿಜಕ್ಕೂ ತುಂಬಾ ಶೋಚನೀಯ.

    ReplyDelete
  2. ಮದ್ಯ ಪಾನ ಎಲ್ಲಾ ಕೆಡುಕುಗಳ ಮೂಲ -ರಸೂಲ್ ಕರೀಂ (ಸ. ಅ)

    ReplyDelete