Wednesday 19 February 2014

  ನಾಲ್ಕು ದಿನ ಸುದ್ದಿಗೀಡಾಗಿ ಮರೆತು ಹೋಗುವ ಕರೀಮ್ ಖಾನ್‍ಗಳು

   ಡ್ರೋನ್ ದಾಳಿಯಲ್ಲಿ ಮಗ ಝೆನುಲ್ಲಾ ಮತ್ತು ತಮ್ಮ ಆಸಿಫ್ ಇಕ್ಬಾಲ್‍ನನ್ನು ಕಳಕೊಂಡಿರುವ ಪಾಕಿಸ್ತಾನ ಕರೀಮ್ ಖಾನ್ ಎನ್ನುವ ವ್ಯಕ್ತಿ, ಫೆ. 15ರಂದು ವಿದೇಶಕ್ಕೆ ತೆರಳಬೇಕಿತ್ತು. ಅಲ್ಲಿ ಬ್ರಿಟನ್, ಡಚ್, ಜರ್ಮನಿಯ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿಯಾಗಿ ಡ್ರೋನ್ ಕುರಿತಾದ ತನ್ನ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಅದಕ್ಕಾಗಿ ವೇದಿಕೆಯೂ ಸಿದ್ಧವಾಗಿತ್ತು. ಆದರೆ ಫೆ. 5ರಂದು ಅವರನ್ನು ಅಪಹರಿಸಲಾಗುತ್ತದೆ. ಡ್ರೋನ್ ದಾಳಿಯ ವಿರುದ್ಧ ಪಾಕಿಸ್ತಾನದ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದ ಮತ್ತು ಡ್ರೋನ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಅವರ ಅಪಹರಣವು ಪಾಕ್‍ನಲ್ಲಿ ತೀವ್ರ ಕುತೂಹಲ ಕೆರಳಿಸುತ್ತದೆ. ಪಾಕ್‍ನ ಮಾನವ ಹಕ್ಕುಗಳ ಸಂಸ್ಥೆಯು ಲಾಹೋರ್ ಹೈಕೋರ್ಟ್‍ನಲ್ಲಿ ಈ ಬಗ್ಗೆ ದಾವೆ ಹೂಡುತ್ತದೆ. ಕರೀಮ್ ಖಾನ್‍ರನ್ನು ಪತ್ತೆ ಹಚ್ಚುವಂತೆ ನವಾಝ್ ಷರೀಫ್ ಸರಕಾರದ ಮೇಲೆ ಯುರೋಪಿಯನ್ ಯೂನಿಯನ್‍ನ ಹಲವು ಪಾರ್ಲಿಮೆಂಟ್ ಸದಸ್ಯರು ಒತ್ತಡ ಹಾಕುತ್ತಾರೆ. ಒಂದು ವಾರದೊಳಗೆ ಅವರನ್ನು ಕೋರ್ಟಿನಲ್ಲಿ ಹಾಜರುಗೊಳಿಸುವಂತೆ ಪೊಲೀಸರಿಗೆ ಕೋರ್ಟು ಆದೇಶಿಸುತ್ತದೆ. ಕೊನೆಗೂ ಫೆ. 14ರಂದು ಕರೀಮ್ ಖಾನ್ ಬಿಡುಗಡೆಗಳ್ಳುತ್ತಾರೆ. ಪೊಲೀಸ್ ಸಮವಸ್ತ್ರದಲ್ಲಿದ್ದವರು ತನ್ನನ್ನು ಅಪಹರಿಸಿದ್ದು ಮತ್ತು ಯುರೋಪಿನ ಸಂಸತ್ ಸದಸ್ಯರ ಮುಂದೆ ತಾನು ಹೇಳಲಿರುವ ವಿಷಯಗಳ ಬಗ್ಗೆ ವಿಚಾರಿಸಿದ್ದು.. ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.
 ನಿಜವಾಗಿ, ಕರೀಮ್ ಖಾನ್ ಅನ್ನುವ ಹೆಸರನ್ನು ನಾವು ಪಾಕಿಸ್ತಾನಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಾದ ಅಗತ್ಯ ಇಲ್ಲ. ಜಗತ್ತಿನ ಯಾವ ದೇಶದಲ್ಲೂ ನಡೆಯಬಹುದಾದ ಘಟನೆ ಇದು. ಮಾಹಿತಿ ಹಕ್ಕು ಕಾರ್ಯಕರ್ತರು ನಮ್ಮ ದೇಶದಲ್ಲಿ ಪಡುತ್ತಿರುವ ಪಾಡು ಮತ್ತು ಎದುರಿಸುತ್ತಿರುವ ಸವಾಲುಗಳನ್ನೊಮ್ಮೆ ಕಲ್ಪಿಸಿಕೊಳ್ಳಿ. ಕೆಲವರು ಕಾರ್ಯಕರ್ತರು ಈಗಾಗಲೇ ಹತ್ಯೆಗೀಡಾಗಿದ್ದಾರೆ. ಅನೇಕಾರು ಮಂದಿ ಜೀವ ಬೆದರಿಕೆಗೆ ಒಳಗಾಗಿದ್ದಾರೆ. ಮರಳು ಮಾಫಿಯಾ, ತೈಲ ಮಾಫಿಯಾದಂಥ ಹೊಸ ಹೊಸ ಪದಗುಚ್ಛಗಳನ್ನು ನಾವು ಆಗಾಗ ಆಲಿಸುತ್ತಿರುತ್ತೇವೆ. ಬಲಾಢ್ಯ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಎದುರಾಗಬಹುದಾದ ಅಪಾಯಗಳು ಇವು. ಅನೇಕ ಬಾರಿ ಅಪಘಾತಗಳು ನಿಜವಾಗಿ ಅಪಘಾತಗಳೇ ಆಗಿರುವುದಿಲ್ಲ. ಹೊರನೋಟಕ್ಕೆ ಸಹಜ ಸಾವಿನಂತೆ ಕಾಣುವ ಸಾವು ಸಹಜ ಸಾವೇ ಆಗಿರುವುದಿಲ್ಲ. ಎಲ್ಲದರ ಹಿಂದೆಯೂ ಕಾಣದ ಕೈಗಳು ಕೆಲಸ ಮಾಡಿರುತ್ತವೆ. ಕರೀಮ್ ಖಾನ್‍ರ ಪ್ರಕರಣವನ್ನೇ ಎತ್ತಿಕೊಳ್ಳಿ. ಡ್ರೋನ್‍ನ ವಿರುದ್ಧ ಪ್ರಬಲ ದನಿಯಲ್ಲಿ ಮಾತಾಡುತ್ತಲೇ ನವಾಝ್ ಷರೀಫ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಡ್ರೋನ್, ಭಯೋತ್ಪಾದನೆಯನ್ನು ನಾಶ ಮಾಡುವುದರ ಬದಲು ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿತ್ತು. ಒಂದು ರೀತಿಯಲ್ಲಿ, ಪಾಕಿಸ್ತಾನದಲ್ಲಿ ಆಗಾಗ ಸ್ಫೋಟಗೊಳ್ಳುವ ಬಾಂಬುಗಳ ಬಗ್ಗೆ ಮಾಧ್ಯಮಗಳಲ್ಲಿ ಯಾವ ಬಗೆಯ ಚರ್ಚೆಯಾಗುತ್ತದೋ ಅದರ ಅರ್ಧ ಭಾಗದಷ್ಟೂ ಡ್ರೋನ್‍ನ ಬಗ್ಗೆ ಮತ್ತು ಅದು ಉಂಟು ಮಾಡುವ ನಾಶದ ಬಗ್ಗೆ ಚರ್ಚೆಯಾಗುತ್ತಿಲ್ಲ. ಕಳೆದೈದು ವರ್ಷಗಳಲ್ಲಿ ಅಮೇರಿಕ ಹಾರಿಸಿದ ಡ್ರೋನ್ ಗಳಿಗೆ ಸಾವಿಗೀಡಾದ ಅಮಾಯಕ ನಾಗರಿಕರ ಸಂಖ್ಯೆಯನ್ನು ನೋಡಿದರೂ ಸಾಕು, ಕರೀಮ್ ಖಾನ್ ಯಾಕೆ ಅಪಹರಣಗೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಬಾಂಬ್ ಸ್ಫೋಟಗಳನ್ನು ಮನುಷ್ಯ ವಿರೋಧಿಯಾಗಿಯೂ ಡ್ರೋನ್ ದಾಳಿಯನ್ನು ಭಯೋತ್ಪಾದನಾ ವಿರೋಧಿಯಾಗಿಯೂ ಬಿಂಬಿಸುವಲ್ಲಿ ಯಶಸ್ವಿಯಾಗಿರುವ ಬಲಾಢ್ಯ ಶಕ್ತಿಗಳು, ಕರೀಮ್ ಖಾನ್‍ರಂಥವರನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ರಿಲಯನ್ಸ್ ವಿರುದ್ಧ ಮಾತಾಡಿರುವುದಕ್ಕೆ ತಾನು ಅಧಿಕಾರ ಕಳಕೊಳ್ಳಬೇಕಾಯಿತು ಎಂದು ಅರವಿಂದ್ ಕೇಜ್ರಿವಾಲ್ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 ಒಂದು ವೇಳೆ, ಬ್ರಿಟನ್‍ನ ಮಾಜಿ ರಕ್ಷಣಾ ಸಚಿವ ಟೋಮ್ ವಾಟ್ಸನ್ ಸಹಿತ ಜರ್ಮನಿ, ಡಚ್ ಇನ್ನಿತರ ಯುರೋಪಿಯನ್ ರಾಷ್ಟ್ರಗಳ ಪ್ರಮುಖ ಸಂಸದರು ಕರೀಮ್ ಖಾನ್‍ರ ಪರ ದನಿ ಎತ್ತದೇ ಇರುತ್ತಿದ್ದರೆ ಆ ವ್ಯಕ್ತಿಯ ಸ್ಥಿತಿ ಏನಾಗುತ್ತಿತ್ತು? ಹಾಗಂತ, ಪ್ರಕರಣ ಪಾಕಿಸ್ತಾನದಲ್ಲಿ ನಡೆದಿದೆಯೆಂದು ನಾವು ಸುಮ್ಮನಿರಬೇಕಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಜನವಿರೋಧಿ ಯೋಜನೆ ಗಳ ವಿರುದ್ಧ ನಮ್ಮ ದೇಶದಲ್ಲಿ ನಡೆದಿರುವ ಪ್ರತಿಭಟನೆಗಳನ್ನು ನಾವು ಅವಲೋಕನಕ್ಕೆ ಒಳಪಡಿಸುವುದಾದರೆ ಪಾಕ್‍ನ ಕರೀಮ್ ಖಾನ್ ನಮ್ಮವರೂ ಆಗಿಬಿಡುತ್ತಾರೆ. ಅಲ್ಲಿ ಕರೀಮ್ ಖಾನ್‍ರನ್ನು ಅಪಹರಿಸಿದಂತೆ ಇಲ್ಲಿ ಪ್ರತಿಭಟನೆಗಳನ್ನೇ ಬಗ್ಗುಬಡಿಯಲಾಗಿದೆ ಅಥವಾ ದಿಕ್ಕು ತಪ್ಪಿಸಲಾಗಿದೆ. ಭೋಪಾಲ್ ಅನಿಲ ದುರಂತದಿಂದ ಹಿಡಿದು ಇತ್ತೀಚಿನ ವಿಶೇಷ ಆರ್ಥಿಕ ವಲಯದವರೆಗೆ ಹೆಚ್ಚಿನ ಹೋರಾಟಗಳೆಲ್ಲ ವೈಫಲ್ಯಗಳಲ್ಲೇ ಅಂತ್ಯ ಕಂಡಿವೆ. ಕುಡಂಕುಲಂ ಅಣು ಯೋಜನೆಯ ವಿರುದ್ಧ ನಡೆದ ಹೋರಾಟವನ್ನು ವ್ಯವಸ್ಥೆ ಹೇಗೆ ಬಗ್ಗುಬಡಿಯಿತೆಂಬುದು ನಮಗೆ ಗೊತ್ತು. ಆ ಹೋರಾಟದ ನೇತೃತ್ವ ವಹಿಸಿದವರಿಗೆ ವಿದೇಶಿ ನೆರವಿನ ಆರೋಪವನ್ನು ಹೊರಿಸಿ ಪ್ರತಿಭಟನೆಯನ್ನೇ ಹತ್ತಿಕ್ಕಲಾಯಿತು. ನಿಜವಾಗಿ, ಬಲಾಢ್ಯ ಶಕ್ತಿಗಳು ಯಾವುದೇ ಯೋಜನೆಯ ನೀಲನಕ್ಷೆ ಮಾಡುವಾಗಲೇ ಅದರ ವಿರುದ್ಧ ನಡೆಯಬಹುದಾದ ಪ್ರತಿಭಟನೆ ಮತ್ತು ಹತ್ತಿಕ್ಕಬಹುದಾದ ಉಪಾಯಗಳನ್ನು ಲೆಕ್ಕ ಹಾಕಿರುತ್ತವೆ. ಎಷ್ಟು ವರ್ಷಗಳ ವರೆಗೆ ಪ್ರತಿಭಟನೆ ನಡೆಯಬಹುದು ಮತ್ತು ಅದಕ್ಕಾಗಿ ಮಾಡಿ ಕೊಳ್ಳಬೇಕಾದ ತಯಾರಿಗಳ ಬಗ್ಗೆಯೂ ಯೋಜನೆ ಹಾಕಿಕೊಂಡಿರುತ್ತವೆ. ಹೀಗೆ ಜನಪರ ಹೋರಾಟಗಳನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಅವು ಸಾಗುತ್ತವೆ. ರಾಜೀವ್ ಗಾಂಧಿಯವರ ಕಾಲದಲ್ಲಿ ಸಹಿ ಹಾಕಲಾದ ಕುಡಂಕುಲಂ ಯೋಜನೆ ಸಾಗಿ ಬಂದ ದಾರಿಯೇ ಇದನ್ನು ಸ್ಪಷ್ಟಪಡಿಸಬಲ್ಲುದು.  
   ಏನೇ ಆಗಲಿ, ಬಲಾಢ್ಯ ಶಕ್ತಿಗಳ ವಿರುದ್ಧ ದನಿ ಎತ್ತಿದರೆ ಏನಾಗಬಹುದು ಅನ್ನುವುದಕ್ಕೆ ಕರೀಮ್ ಖಾನ್ ಒಂದು ಉತ್ತಮ ಉದಾಹರಣೆ. ಇದು ಪಾಕಿಸ್ತಾನದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಇಂಥ ಕರೀಮ್ ಖಾನ್‍ಗಳು ಸೃಷ್ಟಿಯಾಗುತ್ತಲೇ ಇದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ, ಮರಳು ಮಾಫಿಯಾವನ್ನು ಎದುರಿಸುವವರಾಗಿ, ಜನಪರ ಹೋರಾಟಗಾರರಾಗಿ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದು ದಿನ ಅವರು ಕರೀಮ್ ಖಾನ್‍ರಂತೆ ಅಪಹರಣಕ್ಕೋ ಹತ್ಯೆಗೋ ಈಡಾಗುತ್ತಾರೆ. ನಾಲ್ಕು ದಿನ ಇಡೀ ಪ್ರಕರಣ ಸುದ್ದಿಗೀಡಾಗುತ್ತದೆ. ಬಳಿಕ ಸದ್ದಿಲ್ಲದೇ ಸರಿದು ಹೋಗುತ್ತದೆ. ನಿಜವಾಗಿ, ಕರೀಮ್ ಖಾನ್ ಅಂಥದ್ದೊಂದು ಸಾಧ್ಯತೆಯನ್ನು ಮತ್ತೊಮ್ಮೆ ನೆನಪಿಸಿದರು ಅಷ್ಟೇ.

1 comment:

  1. This time, I support Arvind Kejriwal and Aam Aadmi Party.
    Congress and BJP always play game with the common people of India. People, please wake up, we should change the system.

    ReplyDelete