Wednesday 26 February 2014

'ಮತ್ತು' ಬರಿಸುವ ಚಹಾ ಮತ್ತು ಓಟು

   ಚಾಯ್ ಪೆ ಚರ್ಚಾ, ರಾಗಾ ಹಾಲು, ಮೆಹೆಂದಿ ಲಗಾವೋ... ಮುಂತಾದ ಹೊಸ ಹೊಸ ಪದಗುಚ್ಛಗಳು ಮಾಧ್ಯಮಗಳಲ್ಲಿ ಇವತ್ತು ಹೆಚ್ಚೆಚ್ಚು ಸುದ್ದಿ ಮಾಡುತ್ತಿವೆ. ಹೊಟೇಲು, ಬಸ್ಸು ನಿಲ್ದಾಣ, ಅಲ್ಲಿ-ಇಲ್ಲಿ ಇವು ತಮಾಷೆ ಮತ್ತು ಬಿಸಿಬಿಸಿ ಚರ್ಚೆಗೂ ಒಳಗಾಗುತ್ತಿದೆ. ಚಹಾ ಮಾರಾಟ ಮಾಡಿ ಬೆಳೆದ ಮೋದಿಯವರನ್ನು ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ವ್ಯಂಗ್ಯವಾಡಿದ್ದೇ ಚಾಯ್ ಪೆ ಚರ್ಚಾ ಪದಗುಚ್ಛ ಹುಟ್ಟಿಕೊಳ್ಳಲು ಕಾರಣ. ಅಯ್ಯರ್‍ರ ವ್ಯಂಗ್ಯವನ್ನೇ ನೆಪವಾಗಿಟ್ಟುಕೊಂಡು ಈ ದೇಶದ 300 ನಗರಗಳ 1000 ಕೇಂದ್ರಗಳಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸುವ ಯೋಜನೆಯನ್ನು ಮೋದಿ ಹಮ್ಮಿಕೊಂಡರು. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಮಾಡಲಾಗುವ ಈ ಸಂವಾದಕ್ಕೆ ಸ್ವತಃ ಮೋದಿಯೇ ಚಾಲನೆ ಕೊಟ್ಟರು. ಇದರ ಬೆನ್ನಿಗೇ ರಾಗಾ (ರಾಹುಲ್ ಗಾಂಧಿ) ಹಾಲು ಹುಟ್ಟಿಕೊಂಡಿತು. ಚಹಾವು ಆರೋಗ್ಯಕ್ಕೆ ಹಾನಿಕರವಾಗಿದ್ದು ಅದಕ್ಕಿಂತ ಹಾಲು ಉತ್ತಮ ಎಂದು ಹೇಳುತ್ತಾ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಗಾ ಹಾಲು ಮಾರಾಟ ಆರಂಭಿಸಿದರು. ಆ ಬಳಿಕ ಮೆಹಂದಿ ಲಗಾವೋ (ಮೆಹಂದಿ ಹಚ್ಚಿ) ಎಂಬ ಅಭಿಯಾನವನ್ನು ಜಾರ್ಖಂಡ್‍ನ ಬಿಜೆಪಿ ಮಹಿಳಾ ವಿಭಾಗವು ಹಮ್ಮಿಕೊಂಡಿತು. ಪ್ರತಿ ಮನೆಗೂ ಭೇಟಿ ಕೊಟ್ಟು ಮಹಿಳೆಯರ ಕೈಗಳಿಗೆ ಮೆಹಂದಿಯಲ್ಲಿ ತಾವರೆಯನ್ನು ಬಿಡಿಸುವ ಅಭಿಯಾನ ಇದು. ಇದೀಗ ಬಿಹಾರದಲ್ಲಿ ಲಾಲೂ ದುಕಾನ್ (ಅಂಗಡಿ) ಪ್ರಾರಂಭವಾಗಿದೆ. ಅಷ್ಟಕ್ಕೂ ಇಂಥ ಅಭಿಯಾನಗಳು ಇಲ್ಲಿಗೇ ಕೊನೆಗೊಳ್ಳುವ ಸಾಧ್ಯತೆ ಇಲ್ಲ. ಎದುರಾಳಿಗಳು ಹೊರಿಸುವ ಆರೋಪಗಳ ಗುಣಮಟ್ಟವನ್ನು ಹೊಂದಿಕೊಂಡು ಹೊಸಹೊಸ ಪದಗುಚ್ಛಗಳು ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ.
 ನಿಜವಾಗಿ, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಹೊಸತೇನೂ ಅಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಮಾಡಲಾಗುವ ಆರೋಪಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ವೇದಿಕೆಯಲ್ಲಿ ಹುಟ್ಟಿಕೊಂಡು ವೇದಿಕೆಯಲ್ಲೇ ಸಾವಿಗೀಡಾಗುವ ಇಂಥ ಆರೋಪಗಳು ಆ ದಿನದ ಮನರಂಜನೆಯಾಗಿ ಗುರುತಿಗೀಡಾಗುವುದೇ ಹೆಚ್ಚು. ಆದರೆ ಚಾಯ್ ಪೇ ಚರ್ಚಾ ಎಂಬ ಪದಗುಚ್ಛ ಮತ್ತು ಅದು ಚುನಾವಣಾ ಕಾರ್ಯತಂತ್ರವಾಗಿ ಬದಲಾಗಿರುವುದನ್ನು ನೋಡಿದರೆ, ಅಚ್ಚರಿ ಮತ್ತು ಆಘಾತವಾಗುತ್ತದೆ. ಯಾಕೆಂದರೆ, ಚುನಾವಣೆಗಳು ನಡೆಯಬೇಕಾದದ್ದು ಇಶ್ಶೂಗಳ ಆಧಾರದ ಮೇಲೆಯೇ ಹೊರತು ಗಿಮಿಕ್‍ಗಳ ಮೇಲಲ್ಲ. ಜನರ ಗಮನವನ್ನು ಸೆಳೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಚಹಾ, ಕಾಫಿ, ಹಾಲು, ಮೆಹಂದಿಗಳ ಮೊರೆ ಹೋಗಲು ಪ್ರಾರಂಭಿಸಿದರೆ, ಅದರ ಪರಿಣಾಮ ಏನಾದೀತು? ಅದು ಯಾವ ಫಲಿತಾಂಶಕ್ಕೆ ಕಾರಣವಾದೀತು? ಈ ದೇಶ ಇವತ್ತು ಎದುರಿಸುತ್ತಿರುವುದು ಚಹಾದ್ದೋ ಹಾಲಿನದ್ದೋ ಸಮಸ್ಯೆಯನ್ನು ಅಲ್ಲವಲ್ಲ. ಭ್ರಷ್ಟಾಚಾರ, ಮಂದ ಪ್ರಗತಿ, ಕೋಮುವಾದ, ಭಯೋತ್ಪಾದನೆ, ಔದ್ಯೋಗಿಕ ಸಮಸ್ಯೆಗಳಿಂದ ಸುತ್ತುವರಿದಿರುವ ದೇಶವೊಂದರಲ್ಲಿ ಹಾಲು ಚುನಾವಣಾ ಇಶ್ಶೂ ಆಗುವುದಕ್ಕೆ ಏನೆನ್ನಬೇಕು? ಮೆಹಂದಿಯ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು? ಚುನಾವಣೆಯು ಒಂದು ದೇಶದ ಪಾಲಿಗೆ ಮಹತ್ವಪೂರ್ಣ ಆಗಬೇಕಾದದ್ದು ಅಲ್ಲಿ ಚರ್ಚೆಗೀಡಾಗುವ ಇಶ್ಶೂಗಳು ಏನೇನು ಎಂಬುದರ ಆಧಾರದ ಮೇಲೆ. ಕೋಮುವಾದ ಯಾವುದೇ ದೇಶದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮತೋಲನವನ್ನೇ ಕೆಡಿಸಿಬಿಡುತ್ತದೆ. ಒಂದು ದೇಶದ ಪ್ರಗತಿಯನ್ನು ತಡೆಗಟ್ಟಬೇಕಾದರೆ ಕೋಮುಗಲಭೆ ಮತ್ತು ಭ್ರಷ್ಟಾಚಾರವನ್ನು ಆ ದೇಶದಲ್ಲಿ ಪೋಷಿಸಿದರೆ ಧಾರಾಳ ಸಾಕು. ಜೊತೆಗೇ ಬೆಲೆಯೇರಿಕೆ, ನಿರುದ್ಯೋಗ, ಅಸಮಾನತೆ, ಭಯೋತ್ಪಾದನೆಗಳು.. ಒಂದು ದೇಶದ ಜನರ ಜೀವನ ಪ್ರೀತಿಯನ್ನೇ ಕಸಿದುಕೊಳ್ಳುತ್ತವೆ. ಇಂಥ ಸ್ಥಿತಿಯಲ್ಲಿ, ಜನರು ರಾಜಕೀಯ ಪಕ್ಷಗಳಿಂದ ಜವಾಬ್ದಾರಿಯುತ ನಿಲುವನ್ನು ಬಯಸುತ್ತಾರೆ. ಇಂಥ ಸಮಸ್ಯೆಗಳಿಂದ ದೇಶವನ್ನು ಮುಕ್ತಗೊಳಿಸುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಯಾವ ಪರಿಹಾರ ಮಾರ್ಗವನ್ನು ಸೂಚಿಸುತ್ತವೆ ಎಂದು ನಿರೀಕ್ಷೆಯಿಂದ ಕಾಯುತ್ತಾರೆ. ಈ ಎಲ್ಲ ವಿಷಯಗಳ ಮೇಲೆ ರಾಜಕೀಯ ಪಕ್ಷಗಳು ಒಂದೊಳ್ಳೆಯ ಚರ್ಚೆಯನ್ನು ತಮ್ಮ ಚುನಾವಣಾ ವೇದಿಕೆಗಳ ಮೂಲಕ ನಡೆಸುವುದನ್ನು ಅವರು ಕಾಯುತ್ತಿರುತ್ತಾರೆ. ಅಮೇರಿಕದಲ್ಲಿ ಅಧ್ಯಕ್ಷ  ಸ್ಥಾನದ ಅಭ್ಯರ್ಥಿಗಳ ಮಧ್ಯೆ ನೇರ ಟಿ.ವಿ. ಚರ್ಚೆಗಳು ನಡೆಯುತ್ತವೆ. ಆ ದೇಶದ ಪ್ರಮುಖ ಸಮಸ್ಯೆಗಳ ಕುರಿತಂತೆ ಅವರು ನಡೆಸುವ ಸಂವಾದವನ್ನು ಮತದಾರರು ಆಸಕ್ತಿಯಿಂದ ವೀಕ್ಷಿಸಿ, ಯಾರು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಯೋಗ್ಯರು ಎಂದು ತೀರ್ಮಾನಿಸುತ್ತಾರೆ. ಹಾಗಂತ, ಈ ದೇಶವು ಅಮೇರಿಕನ್ ಮಾದರಿಗಿಂತ ಭಿನ್ನ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ, ನಿಜ. ಆದರೆ ಅದರರ್ಥ ಜನರಿಗೆ ಯಾವ ಲಾಭವನ್ನೂ ನೀಡದ ಚಹಾವೋ ಕಾಫಿಯೋ ಚರ್ಚೆಗೀಡಾಗಬೇಕು ಎಂದಲ್ಲವಲ್ಲ. ಚಾಯ್ ಪೆ ಚರ್ಚಾ ಅಭಿಯಾನದಿಂದ ನಮಗೆ ಮೋದಿಯ ಆರ್ಥಿಕ ನಿಲುವನ್ನೋ ವಿದೇಶಾಂಗ ನೀತಿಯನ್ನೋ ತಿಳಿಯಲು ಸಾಧ್ಯವೇ? ಎಲ್ಲೋ ಕುಳಿತ ಮೋದಿಯೊಂದಿಗೆ ಸಾರ್ವಜನಿಕರು ಚಾಯ್ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತಾಡುವುದು ಬರೇ ಕ್ರೇಜ್‍ಗಾಗಿ. ಅಲ್ಲಿ ದೇಶದ ಪ್ರಮುಖ ಇಶ್ಶೂಗಳಾಗಲಿ, ಪ್ರಗತಿಯ ಸಂಗತಿಗಳಾಗಲಿ ಗಂಭೀರ ಚರ್ಚೆಗೆ ಒಳಗಾಗಲು ಸಾಧ್ಯವೇ ಇಲ್ಲ. ತಾವರೆಯ ಮೆಹಂದಿ ಹಚ್ಚಿಕೊಂಡ ಮಹಿಳೆಯರು ಮೋದಿಗೆ ಓಟು ಹಾಕಲು ತೀರ್ಮಾನಿಸಿದರೆ ಅದಕ್ಕೆ ಆ ಕ್ಷಣದ ಪುಳಕ ಕಾರಣವೇ ಹೊರತು ಮೋದಿಯ ಯೋಗ್ಯತೆ ಅಲ್ಲ. ಹಾಲಿನಲ್ಲಿ ಓಟು ಹುಡುಕುತ್ತಿರುವ ರಾಹುಲ್ ಗಾಂಧಿಯ ಸ್ಥಿತಿಯೂ ಹೀಗೆಯೇ.
 ಅಸೋಸಿಯೇಟೆಡ್ ಪ್ರೆಸ್ (A P) ಕಳೆದ ವಾರ ಒಂದು ಸುದ್ದಿಯನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತ್ತು. ಇರಾನಿನ ನೂತನ ಅಧ್ಯಕ್ಷ  ಹಸನ್ ರೂಹಾನಿಯವರು ಕಳೆದ ವಾರ ತಮ್ಮ ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಅದರಲ್ಲಿ ಅವರು ವಿಶ್ವದಲ್ಲಿಯೇ ಅತಿದೊಡ್ಡ ಅರೋಮಿಹ್ ಸರೋವರವನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಣಯವನ್ನು ಕೈಗೊಂಡರು. ಸರೋವರವು ಮತ್ತೆ ಹಿಂದಿನ ವೈಭವಕ್ಕೆ ಮರಳುವುದಕ್ಕಾಗಿ ತಜ್ಞರು ನೀಡಿದ ಸಲಹೆಗಳನ್ನು ಸಂಪುಟದ ಮುಂದಿಟ್ಟು ಅನುಮೋದಿಸಿಕೊಂಡರು. ವಾತಾವರಣದ ಏರುಪೇರು, ನದಿಗಳ ತಪ್ಪು ಬಳಕೆ, ತಪ್ಪು ನೀರಾವರಿಯಿಂದಾಗಿ ಸರೋವರದ 80% ಭಾಗ ಬಂಜರಾಗಿರುವುದನ್ನು ಅವರು ಸಂಪುಟದ ಮುಂದಿಟ್ಟರು. ನಿಜವಾಗಿ, ತನ್ನ ಪರಮಾಣು ವಿವಾದವನ್ನು ಸರಿಪಡಿಸಿಕೊಳ್ಳುವಂತೆ ಜಾಗತಿಕ ರಾಷ್ಟ್ರಗಳು ಒತ್ತಡ ಹಾಕುತ್ತಿರುವ ಸಂದರ್ಭದಲ್ಲಿ ಅದಕ್ಕಿಂತ ತನ್ನ ಜೀವದ್ರವವಾದ ಸರೋವರವನ್ನು ಉಳಿಸಿಕೊಳ್ಳುವುದಕ್ಕೆ ರೂಹಾನಿ ಆದ್ಯತೆ ಕೊಟ್ಟಿರುವುದನ್ನು ಅಸೋಸಿಯೇಟೆಡ್ ಪ್ರೆಸ್ ವಿಶೇಷ ಒತ್ತು ಕೊಟ್ಟು ಉಲ್ಲೇಖಿಸಿತ್ತು. ಒಂದು ರೀತಿಯಲ್ಲಿ, ಓರ್ವ ಪ್ರಬುದ್ಧ ಮತ್ತು ದೂರದೃಷ್ಟಿಯುಳ್ಳ ನಾಯಕ ತೆಗೆದುಕೊಳ್ಳಬಹುದಾದ ನಿರ್ಧಾರ ಇದು. ಒಂದು ವೇಳೆ ಪರಮಾಣು ವಿವಾದದ ಕುರಿತಂತೆ ಭಾವನಾತ್ಮಕ ನಿರ್ಣಯವೊಂದನ್ನು ಸಂಪುಟ ಸಭೆಯಲ್ಲಿ ರೂಹಾನಿ ಅಂಗೀಕರಿಸಿದ್ದಿದ್ದರೆ ಇರಾನಿನ ನಾಗರಿಕರು ಮೆಚ್ಚಿಕೊಳ್ಳುವುದಕ್ಕೆ ಸಾಧ್ಯವಿತ್ತು. ರಾಜಕೀಯವಾಗಿ ಲಾಭ ತಂದುಕೊಡುವುದಕ್ಕೂ ಅವಕಾಶವಿತ್ತು. ಆದರೆ ರೂಹಾನಿ ತಾತ್ಕಾಲಿಕ ಲಾಭವನ್ನೋ ಗಿಮಿಕ್ ನೀತಿಯನ್ನೋ ಆಯ್ಕೆ ಮಾಡಿಕೊಳ್ಳಲಿಲ್ಲ.
   ಏನೇ ಆಗಲಿ, ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಮೇಲೆ ಚುನಾವಣೆಗಳು ನಡೆಯಬೇಕೇ ಹೊರತು ಚಹಾ, ಕಾಫಿ, ಹಾಲು, ಮೆಹಂದಿಗಳ ಮೇಲೆ ಅಲ್ಲ. ಇವು ದೇಶದ ನಿಜವಾದ ವಿಷಯಗಳನ್ನು ಮರೆಸುವುದಕ್ಕೆ ರಾಜಕೀಯ ಪಕ್ಷಗಳು ಹೊರತಂದಿರುವ ನಕಲಿ ವಿಷಯಗಳು. ನಾವು ಇವುಗಳ ಆಕರ್ಷಣೆಯಿಂದ ಹೊರಬಂದು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ. ಇಲ್ಲದಿದ್ದರೆ ನಾಳೆ `ಮತ್ತು' ಬರಿಸುವ ಚಹಾವನ್ನೋ ಹಾಲನ್ನೋ ಕೊಟ್ಟು ಅವರು ಓಟು ಕಸಿದುಕೊಂಡಾರು.

No comments:

Post a Comment