Wednesday 28 May 2014

ಹೀಗೆ ಮೋದಿಯವರು ಮತ್ತೆ ಮತ್ತೆ ಸುಳ್ಳಾಗಿಸುತ್ತಲೇ ಹೋಗಲಿ...

   ಬಿಜೆಪಿಗೆ ಚಲಾವಣೆಯಾದ ಒಟ್ಟು ಓಟುಗಳಲ್ಲಿ ಒಂದು ಓಟು ತಿರುಗಿಬಿದ್ದಿದೆ. ಆ ಓಟಿನ ಹೆಸರು ಧರ್ಮಾವತಿ. ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇತ್ತ ಉತ್ತರ ಪ್ರದೇಶದ ಮಥುರಾದಲ್ಲಿ ಧರ್ಮಾವತಿ ಎಂಬ ವಿಧವೆ ನಿರಶನ ಕೈಗೊಂಡಿದ್ದರು. ಮೋದಿಯವರ ಮಾತಿನಿಂದ ಪ್ರಭಾವಿತಗೊಂಡ ಅಸಂಖ್ಯ ಮಹಿಳೆಯರಲ್ಲಿ ಈಕೆಯೂ ಒಬ್ಬರು. ಕಾಶ್ಮೀರದ ಪೂಂಚ್ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಧರ್ಮಾವತಿಯವರ ಪತಿ ಹೇಮರಾಜ್‍ರನ್ನು 2013 ಜನವರಿ 8ರಂದು ಪಾಕ್ ಸೇನೆಯು ಹತ್ಯೆ ಮಾಡಿ ರುಂಡವನ್ನು ಹೊತ್ತೊಯ್ದಿತ್ತು. ಅಂದಿನಿಂದ ಇಂದಿನವರೆಗೆ ಪತಿಯ ರುಂಡಕ್ಕಾಗಿ ಧರ್ಮಾವತಿ ಕಾಯುತ್ತಿದ್ದಾರೆ. ಈ ಕ್ರೌರ್ಯಕ್ಕೆ ಕಾರಣವಾದ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಾ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೇಮರಾಜ್‍ರ ಹತ್ಯೆಯ ಕುರಿತಂತೆ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದರು. ಈ ವಿಷಯದಲ್ಲಿ ಮನ್‍ಮೋಹನ್ ಸಿಂಗ್ ಸರಕಾರದ ನಿಲುವನ್ನು ಅವರು ತೀವ್ರ ತರಾಟೆಗೂ ಎತ್ತಿಕೊಂಡಿದ್ದರು. ಮಾತ್ರವಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕ್‍ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಪತಿಯ ರುಂಡ ಕತ್ತರಿಸಿದ ಪಾಕ್‍ನ ಪ್ರಧಾನಿಯನ್ನೇ ತನ್ನ ಪ್ರಮಾಣ ವಚನಕ್ಕೆ ಮೋದಿ ಆಹ್ವಾನಿಸಿರುವುದು ಧರ್ಮಾವತಿಯನ್ನು ಸಿಟ್ಟಿಗೆಬ್ಬಿಸಿದೆ. ಮೋದಿಯವರನ್ನು ನಂಬಿ ಕೆಟ್ಟೆ ಅನ್ನುವ ಭಾವದಲ್ಲಿ ಆಕೆ ಮೇ 26ರಂದು ನಿರಶನ ಕೈಗೊಂಡಿದ್ದಾರೆ.
 ಆದರೂ, ಧರ್ಮಾವತಿಯ ನೋವು, ದುಗುಡ, ಆಕ್ರೋಶವನ್ನು ಗೌರವಿಸುತ್ತಲೇ ನಾವು ಮೋದಿಯವರ ನಡೆಯನ್ನು ಸ್ವಾಗತಿಸಬೇಕಾಗಿದೆ. ಪಾಕ್ ಪ್ರಧಾನಿ ನವಾಝ್ ಶರೀಫ್‍ರನ್ನು ಆಹ್ವಾನಿಸುವ ಮೂಲಕ ಚುನಾವಣಾ ರಾಜಕೀಯಕ್ಕೂ ವಾಸ್ತವ ರಾಜಕೀಯಕ್ಕೂ ನಡುವೆ ಇರುವ ಸೂಕ್ಷ್ಮ  ವ್ಯತ್ಯಾಸವನ್ನು ನರೇಂದ್ರ ಮೋದಿಯವರು ಸ್ಪಷ್ಟಪಡಿಸಿದ್ದಾರೆ. ಧರ್ಮಾವತಿ ಮುಗ್ಧೆ. ಯೌವನದಲ್ಲೇ ಪತಿಯನ್ನು ಕಳಕೊಂಡ ಆಕೆಯ ಪಾಲಿಗೆ ಪಾಕ್ ಅತಿದೊಡ್ಡ ಶತ್ರು. ಈ ಶತ್ರುವಿಗೆ ಪಾಠ ಕಲಿಸುವುದಕ್ಕಾಗಿ ಆಕೆಯ ಎದುರು ಹಲವು ಆಯ್ಕೆಗಳಿರಬಹುದು. ಪಾಕ್‍ಗೆ ಬಾಂಬ್ ಹಾಕುವುದು, ಸೇನಾ ದಾಳಿ, ಪಾಕ್‍ನೊಂದಿಗೆ ಎಲ್ಲ ವಿಧದ ಸಂಬಂಧ ಕಡಿದುಕೊಳ್ಳುವುದು, ರುಂಡವನ್ನು ಮರಳಿಸುವ ವರೆಗೂ ರಾಜಕೀಯ ಸಂಬಂಧವನ್ನು ಮುರಿದು ಬಿಡುವುದು.. ಇತ್ಯಾದಿ. ಆದರೆ, ನರೇಂದ್ರ ಮೋದಿಯವರು ರಾಜಕಾರಣಿ. ಅವರು ಧರ್ಮಾವತಿಯಂತೆ ಆಲೋಚಿಸುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೇ ಪಾಕ್ ಪ್ರಧಾನಿ ನವಾಝ್ ಶರೀಫ್‍ರನ್ನು ಅವರು ಭಾರತಕ್ಕೆ ಆಹ್ವಾನಿಸಿದ್ದಾರೆ. ಒಂದು ದೇಶ ಅಭಿವೃದ್ದಿ ಪಥದಲ್ಲಿ ಸಾಗಬೇಕಾದರೆ ಮೊತ್ತಮೊದಲು ಆ ದೇಶದಲ್ಲಿ ಶಾಂತಿ ನೆಲೆಗೊಂಡಿರಬೇಕು. ಪಶ್ಚಿಮ ಮತ್ತು ಪೂರ್ವ ಜರ್ಮನಿಯಾಗಿ ವಿಭಜನೆಗೊಂಡಿದ್ದ ಜರ್ಮನಿಯು ಮತ್ತೆ ಏಕೀಕೃತಗೊಳ್ಳಲು ಇದುವೇ ಕಾರಣ. ಇವತ್ತು ಉತ್ತರ ಮತ್ತು ದಕ್ಷಿಣ ಕೊರಿಯಾಗಳ ನಡುವಿನ ದ್ವೇಷವು ಆ ಇಡೀ ವಲಯವನ್ನು ಅಶಾಂತಿಯೆಡೆಗೆ ದೂಡಿರುವುದು ಎಲ್ಲರಿಗೂ ಗೊತ್ತು. ಅಂದಹಾಗೆ, ಅನಕ್ಷರತೆ ಮತ್ತು ಬಡತನಗಳಿಂದ ಭಾರತ ಮತ್ತು ಪಾಕ್‍ಗಳೆರಡೂ ಇವತ್ತು ತೀವ್ರ ತೊಂದರೆಯನ್ನು ಅನುಭವಿಸುತ್ತಿವೆ. ಭಯೋತ್ಪಾದನೆಯು ಎರಡೂ ರಾಷ್ಟ್ರಗಳ ಮೇಲೆ ಅಪಾರ ಹಾನಿಯನ್ನು ತಂದೊಡ್ಡುತ್ತಿವೆ. ಇಂಥ ಹೊತ್ತಲ್ಲಿ ಎರಡೂ ರಾಷ್ಟ್ರಗಳು ಯುದ್ಧದ ಭಾಷೆಯಲ್ಲಿ ಮಾತಾಡುವುದು ಮತ್ತು ಗಡಿಯಲ್ಲಿ ಯುದ್ಧಸ್ಥಿತಿ ನಿರ್ಮಿಸುವುದರಿಂದ ಶಸ್ತ್ರಾಸ್ತ್ರ ಕಂಪೆನಿಗಳಿಗೆ ಲಾಭವಾಗಬಹುದೇ ಹೊರತು ಭಾರತ-ಪಾಕ್‍ಗಲ್ಲ. ಒಂದು ವೇಳೆ ಯುರೋಪಿಯನ್ ಯೂನಿಯನ್‍ನಂತೆ ಭಾರತ-ಪಾಕ್-ಬಾಂಗ್ಲಾ ಸೇರಿದಂತೆ ನೆರೆಕರೆ ರಾಷ್ಟ್ರಗಳು ಒಂದಾಗಲು ಮನಸ್ಸು ಮಾಡಿದರೆ, ಅದರಿಂದಾಗುವ ಲಾಭ ಅಪಾರವಾದದ್ದು. ಧರ್ಮಾವತಿಗೆ ಇದು ಗೊತ್ತಿಲ್ಲದಿದ್ದರೂ ಮೋದಿಯವರಿಗೆ ಇದು ಖಂಡಿತ ಗೊತ್ತಿರಬಹುದು. ಆದ್ದರಿಂದಲೇ, ನವಾಝ್ ಶರೀಫ್‍ರನ್ನು ಮೋದಿ ಆಹ್ವಾನಿಸಿದ್ದಾರೆ. ಯೋಧನ ರುಂಡ ಹೊತ್ತೊಯ್ದ ರಾಷ್ಟ್ರದ ಪ್ರಧಾನಿಯನ್ನು ಆಲಿಂಗಿಸಿದ್ದಾರೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಅಂದಿದ್ದ ಮೋದಿಯವರೇ ನವಾಝ್‍ರೊಂದಿಗೆ ಮಾತುಕತೆ ನಡೆಸಿದ್ದಾರೆ.
 ನಿಜವಾಗಿ, ಪಾಕ್ ಪ್ರಧಾನಿಯನ್ನು ಆಹ್ವಾನಿಸುವ ಮೂಲಕ ಮೋದಿಯವರು ಬಿಜೆಪಿ ಕಾರ್ಯಕರ್ತರಿಗೆ ಮೊದಲ ಶಾಕ್ ಅನ್ನು ನೀಡಿದ್ದಾರೆ. ಮೋದಿಯನ್ನು ಇವರೆಲ್ಲ ಯುದ್ಧದಾಹಿಯಂತೆ ಚಿತ್ರಿಸಿದ್ದರು. ಮೋದಿ ಪ್ರಧಾನಿಯಾದರೆ ಪಾಕ್‍ಗೆ ಬಾಂಬ್ ಹಾಕುವುದು ಖಚಿತ ಎಂಬಂತೆ ವರ್ತಿಸಿದ್ದರು. ಮೋದಿಯನ್ನು ಒಪ್ಪದವರು ಪಾಕಿಸ್ತಾನಕ್ಕೆ ಹೋಗಿ ಅನ್ನುವಷ್ಟರ ಮಟ್ಟಿಗೆ ಅವರು ಆವೇಶ ವ್ಯಕ್ತಪಡಿಸಿದ್ದರು. ಮನ್‍ಮೋಹನ್ ಸಿಂಗ್ ಸರಕಾರವು ಪಾಕ್ ಪ್ರಜೆ ಕಸಬ್‍ಗೆ ಬಿರಿಯಾನಿ ಕೊಟ್ಟು ಸಾಕುತ್ತಿದೆ, ಹೇಮ್‍ರಾಜ್‍ನ ರುಂಡ ಹೊತ್ತೊಯ್ದ ಪಾಕ್‍ನ ಮೇಲೆ ದಾಳಿ ಮಾಡದ ಏ.ಕೆ. ಆ್ಯಂಟನಿ ನಿರ್ವೀರ್ಯ ರಕ್ಷಣಾ ಮಂತ್ರಿ.. ಎಂದೆಲ್ಲಾ ಟೀಕಿಸಿದ್ದರು. ಆದರೆ ಇವತ್ತು ಪಾಕ್ ಪ್ರಧಾನಿ ನವಾಝ್ ಶರೀಫ್‍ರಿಗೇ ಬಿರಿಯಾನಿ ಉಣಿಸುವಷ್ಟು ಮೋದಿ ಉದಾರಿಯಾಗಿದ್ದಾರೆ. ದ್ವೇಷದ ಭಾಷೆಗಿಂತ ವಿಶ್ವಾಸ ತುಂಬುವ ನಡೆಗಳೇ ಹೆಚ್ಚು ಸೂಕ್ತ ಎಂಬ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ. ಆದರೆ, ಪಾಕ್‍ನ ವಿರುದ್ಧ ಸದಾ ಕೆಂಡದ ಮಾತುಗಳನ್ನೇ ಉದುರಿಸುವ ಶಿವಸೇನೆಯು ಮೋದಿಯವರ ನಿಲುವಿನ ಬಗ್ಗೆ ಯಾವ ಹೇಳಿಕೆಯನ್ನೂ ಹೊರಡಿಸಿಲ್ಲ. ಮನಮೋಹನ್ ಸಿಂಗ್‍ರ ಸರಕಾರದ ವಿದೇಶಾಂಗ ನಿಲುವನ್ನು ಕಟುವಾಗಿ ಟೀಕಿಸುತ್ತಿದ್ದ ಮತ್ತು ಪಾಕ್ ಕ್ರಿಕೆಟ್ ತಂಡ ಭಾರತಕ್ಕೆ ಬರದಂತೆ, ಅಲ್ಲಿನ ಕಲಾವಿದರ ತಂಡ ಭಾರತದಲ್ಲಿ ಕಾರ್ಯಕ್ರಮ ನಡೆಸದಂತೆ ತಡೆಯೊಡ್ಡುತ್ತಿದ್ದ ಶಿವಸೇನೆಯು ಇದ್ದಕ್ಕಿದ್ದಂತೆ ಮೌನವಾಗಿರುವುದೇಕೆ?
   ಏನೇ ಆಗಲಿ, 151ರಷ್ಟು ಭಾರತೀಯ ವಿೂನುಗಾರರು ಪಾಕ್ ಜೈಲಿನಿಂದ ಬಿಡುಗಡೆಗೊಳ್ಳುವುದಕ್ಕೆ ಕಾರಣವಾದ ನವಾಝ್ ಶರೀಫ್‍ರ ಭಾರತ ಭೇಟಿ ಮತ್ತು ಅದಕ್ಕೆ ಕಾರಣವಾದ ನರೇಂದ್ರ ಮೋದಿಯವರ ನಡೆಯನ್ನು ನಾವೆಲ್ಲ ಸ್ವಾಗತಿಸಲೇಬೇಕಾಗಿದೆ. ನರೇಂದ್ರ ಮೋದಿಯವರ ಕುರಿತಂತೆ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ಕೈಗೊಳ್ಳುವ ಸಕಾರಾತ್ಮಕ ನಡೆಗಳನ್ನು ನಾವು ಬೆಂಬಲಿಸಲೇಬೇಕು. ಈ ದೇಶ ಇವತ್ತು ಹತ್ತಾರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೇ ಮೋದಿ ಮತ್ತು ಅವರ ಪಕ್ಷವು ಹೇರಿರುವ ಭೀತಿಯ ಅಜೆಂಡಾಗಳೂ ಇವೆ.
ಮೋದಿ ಪ್ರಧಾನಿಯಾದರೆ ಮುಸ್ಲಿಮರ
ನ್ನು ವಿಶ್ವಾಸದಿಂದ ನಡೆಸಿಕೊಳ್ಳಲಾರರು ಎಂಬುದೂ ಈ ಭೀತಿಯ ಅಜೆಂಡಾಗಳಲ್ಲಿ ಒಂದು. ಆದರೆ ಪಾಕ್‍ನ ವಿಷಯದಲ್ಲಿ ಅವರು ಈ ಅನುಮಾನವನ್ನು ಸದ್ಯದ ಮಟ್ಟಿಗಾದರೂ ಸುಳ್ಳು ಮಾಡಿದ್ದಾರೆ. ಧರ್ಮಾವತಿಯವರಿಗೆ ಇದು ಇಷ್ಟವಾಗದಿದ್ದರೂ ಈ ದೇಶದ ಬಹುಸಂಖ್ಯಾತ ಮಂದಿ ಖಂಡಿತ ಮೋದಿಯವರನ್ನು ಈ ನಡೆಗಾಗಿ ಮೆಚ್ಚಿಕೊಂಡಾರು. ಮುಂದಿನ ದಿನಗಳಲ್ಲಿ ಮೋದಿಯವರಿಂದ ಇಂಥ ಇನ್ನಷ್ಟು ಸಕಾರಾತ್ಮಕ ನಡೆಗಳನ್ನು ಈ ದೇಶ ಖಂಡಿತ ನಿರೀಕ್ಷಿಸುತ್ತದೆ. ತನ್ನ ಸುತ್ತ ಈಗಾಗಲೇ ವ್ಯಕ್ತವಾಗಿರುವ ಮತ್ತು ವ್ಯಕ್ತವಾಗುತ್ತಿರುವ ಅನುಮಾನಗಳನ್ನೆಲ್ಲ ಪ್ರಧಾನಿ ಮೋದಿಯವರು ಹೀಗೆ ಸುಳ್ಳು ಮಾಡುತ್ತಲೇ ಹೋಗಲಿ ಮತ್ತು ಮುಸ್ಲಿಮ್ ದ್ವೇಷಿ ನಿಲುವನ್ನು ಹೊಂದಿರುವ ಅವರ ಕೆಲವು ಬೆಂಬಲಿಗರನ್ನು ಮತ್ತೆ ಮತ್ತೆ ನಿರಾಶೆಗೆ ಒಳಪಡಿಸುತ್ತಲೇ ಇರಲಿ ಎಂದೇ ಈ ಸಂದರ್ಭದಲ್ಲಿ ಹಾರೈಸಬೇಕಾಗಿದೆ.

Wednesday 21 May 2014

ಭಾರತ್ ಮಾತಾಕಿ ಜೈ, ಜೈ ಹಿಂದ್ ಮತ್ತು ಪ್ರಧಾನಿ ಮೋದಿ..

   ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್ ಎಂಬೆರಡು ಘೋಷಣೆಗಳು ಈ ದೇಶದಲ್ಲಿ ಪ್ರತಿದಿನ ನೂರಾರು ಬಾರಿ ಮೊಳಗುತ್ತಿರುತ್ತವೆ. ಸಭೆ-ಸಮಾರಂಭ, ಸೆಮಿನಾರ್, ಸಾಂಸ್ಕøತಿಕ ಕಾರ್ಯಕ್ರಮ.. ಮುಂತಾದ ಎಲ್ಲ ವೇದಿಕೆಗಳಲ್ಲೂ ಈ ಎರಡು ಘೋಷಣೆಗಳಿಗೆ ಜಾಗ ಇರುತ್ತವೆ. ಭಾರತ್ ಮಾತಾಕಿ ಜೈ ಎಂಬ ಘೋಷಣೆ ಈ ದೇಶದಲ್ಲಿ ಬಳಕೆಯಲ್ಲಿದ್ದಾಗಲೇ ಅದಕ್ಕೆ ಪರ್ಯಾಯವೆಂಬಂತೆ ‘ಜೈ ಹಿಂದ್' ಘೋಷಣೆಯನ್ನು ಈ ದೇಶಕ್ಕೆ ಪರಿಚಯಿಸಿದ್ದು ಸುಭಾಶ್‍ಚಂದ್ರ ಬೋಸ್. ನಿಜವಾಗಿ, ಈ ಎರಡೂ ಘೋಷಣೆಗಳಲ್ಲಿ ಮೂಲಭೂತವಾದ ವ್ಯತ್ಯಾಸ ಇದೆ. ಭಾರತ್ ಮಾತಾಕಿ ಜೈ ಎಂಬ ಘೋಷಣೆಯು ಭಾರತವನ್ನು ಹೆಣ್ಣಾಗಿ ಚಿತ್ರಿಸಿದರೆ, ಜೈ ಹಿಂದ್ ಇದನ್ನು ನಯವಾಗಿ ತಳ್ಳಿ ಹಾಕುತ್ತದೆ. ದೇಶವನ್ನು ‘ಹೆಣ್ಣು' ಎಂಬ ಖಚಿತ ರೂಪಕ್ಕಿಂತ ಭಿನ್ನವಾಗಿ, ಹೆಣ್ಣು-ಗಂಡು ಸಹಿತ ಸರ್ವ ವೈವಿಧ್ಯತೆಗಳೂ ಇರುವ ಒಂದು ರಮ್ಯ ತಾಣವಾಗಿ ಅದು ಭಾರತವನ್ನು ಕಟ್ಟಿಕೊಡುತ್ತದೆ. ಹಾಗಂತ, ಈ ಎರಡೂ ಘೋಷಣೆಗಳು ಈ ದೇಶದಲ್ಲಿ ಪರಸ್ಪರ ಸಂಘರ್ಷಕ್ಕೆ ಕಾರಣ ಆಗಿಲ್ಲ. ಜೈ ಹಿಂದನ್ನು ಇಷ್ಟಪಡುವವರು ಭಾರತ್ ಮಾತಾಕಿಯನ್ನು ಇಷ್ಟಪಡುವವರ ಮೇಲೆ ದಾಳಿ ಮಾಡಿಲ್ಲ. ಸುಭಾಶ್ ಚಂದ್ರ ಬೋಸ್‍ರನ್ನು ಯಾರೂ ದೇಶದ್ರೋಹಿಯಂತೆ ಕಂಡೂ ಇಲ್ಲ. ಈ ಎರಡೂ ಘೋಷಣೆಗಳ ನಡುವೆ ಇರುವ ಅಪಾರ ಅರ್ಥ ಮತ್ತು ಭಾವ ವ್ಯತ್ಯಾಸದ ಹೊರತಾಗಿಯೂ ಇವು ಈ ದೇಶದಲ್ಲಿ ಸೌಹಾರ್ದತೆಯಿಂದ ಮೊಳಗಿವೆ. ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುವ ಈ ಸಂದರ್ಭದಲ್ಲಿ ಈ ಎರಡು ಘೋಷಣೆಗಳ ನಡುವಿನ ಹೋಲಿಕೆ ಮತ್ತು ಚರ್ಚೆ ಅಗತ್ಯ ಅನಿಸುತ್ತದೆ. ಮೋದಿಯವರು ಚುನಾವಣಾ ಪ್ರಚಾರದ ಸಮಯದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ದೇಶದಲ್ಲಿ ಧಾರಾಳ ಚರ್ಚೆಗೊಳಗಾಗಿವೆ. ಅವರ ಮಾತಿನ ಧಾಟಿ, ದೇಹಭಾಷೆ, ವ್ಯಂಗ್ಯ.. ಎಲ್ಲದರಲ್ಲೂ ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಮಾತ್ರ ಒಪ್ಪುವ ಸೂಚನೆಯನ್ನು ಅನೇಕರು ಕಂಡುಕೊಂಡಿದ್ದಾರೆ. ಆದ್ದರಿಂದಲೇ, ಮೋದಿಯವರ ಬಗ್ಗೆ ಆತಂಕ ಮೂಡುವುದು. ಎರಡು ವಿಚಾರಧಾರೆಗಳನ್ನು ಪ್ರತಿನಿಧಿಸುವ ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್ ಘೋಷಣೆಗಳನ್ನು ಈ ದೇಶದ ಮಂದಿ ಸ್ಫೂರ್ತಿಯಿಂದಲೇ ಸ್ವೀಕರಿಸಿರುವಾಗ ಮೋದಿಯವರು ಈ ವೈಶಾಲ್ಯತೆಯನ್ನು ತಿರಸ್ಕರಿಸಲಾರರು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಲೇ ಆತಂಕದ ಬಗ್ಗೆ ಚರ್ಚಿಸಬೇಕಾಗಿದೆ. ಮೋದಿಯವರು ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿ, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಿಂದೂ ಮತ್ತು ಮುಸ್ಲಿಮ್ ನಿರಾಶ್ರಿತರ ಬಗ್ಗೆ ಭಿನ್ನ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಿಂದ ವಲಸೆ ಹೋಗಿರುವ ಹಿಂದೂ ಪಂಡಿತರ ಬಗ್ಗೆ ಮತ್ತು ಗೋದ್ರಾ, ಮುಝಫ್ಫರ್ ನಗರ್ ಅಥವಾ ಕೋಮುಗಲಭೆ ಪೀಡಿತ ದೇಶದ ಇನ್ನಾವುದೇ ಪ್ರದೇಶದಿಂದ ವಲಸೆ ಹೋಗಿರುವ ಮುಸ್ಲಿಮರ ಬಗ್ಗೆ ಅವರ ನಿಲುವು ಒಂದೇ ರೀತಿಯಾಗಿಲ್ಲ. ಪಂಡಿತರ ಬಗ್ಗೆ ವ್ಯಕ್ತಪಡಿಸುವ ಕಾಳಜಿಯನ್ನು ಅವರು ಮುಸ್ಲಿಮ್ ವಲಸಿಗರ ಬಗ್ಗೆ ವ್ಯಕ್ತಪಡಿಸುತ್ತಿಲ್ಲ. ಹೀಗೆ ಓರ್ವ ಪ್ರಧಾನಿಯ ನಿಲುವಿನಲ್ಲಿ ಇರಬೇಕಾದ ಸಂತುಲಿತತೆಯು ತನ್ನಲ್ಲಿಲ್ಲ ಎಂಬುದನ್ನು ಮೋದಿಯವರು ಅನೇಕ ಬಾರಿ ಸಾಬೀತುಪಡಿಸಿದ್ದಾರೆ. ಆದ್ದರಿಂದಲೇ, ಸುಭಾಶ್‍ಚಂದ್ರ ಬೋಸ್ ಮತ್ತು ಅವರ ಜೈ ಹಿಂದ್ ಘೋಷಣೆ ಮತ್ತೆ ಮತ್ತೆ ಪ್ರಸ್ತುತ ಎನಿಸುವುದು. ಸರ್ದಾರ್ ವಲ್ಲಭಾ ಭಾೈ ಪಟೇಲ್‍ರನ್ನು ಮೋದಿಯವರು ಅತ್ಯಂತ ಇಷ್ಟಪಡುತ್ತಾರೆ. ‘ಅವರು ಪ್ರಧಾನಿಯಾಗಿರುತ್ತಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು..’ ಎಂದು ಚುನಾವಣಾ ಭಾಷಣದಲ್ಲೂ ಹೇಳಿಕೊಂಡಿದ್ದಾರೆ. ಆದರೆ ಪಟೇಲ್‍ರು, ‘ಅಲ್ಪಸಂಖ್ಯಾತರಿಗಿರುವ ಶಾಸಕಾಂಗ ಸಭೆಗಳ ಸಮಿತಿಯ’ ಮುಖ್ಯಸ್ಥರಾಗಿದ್ದರು. ಭಾರತದ ಸಂವಿಧಾನವು ಶಿಕ್ಷಣ, ಸಂಸ್ಕøತಿ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಅಲ್ಪಸಂಖ್ಯಾತರಿಗೆ ನೀಡಿದ್ದರೆ ಅದರಲ್ಲಿ ಪಟೇಲ್‍ರ ಪಾತ್ರವೂ ಇದೆ. ಪಟೇಲ್‍ರಲ್ಲಿ ಭಿನ್ನ ವಿಚಾರಧಾರೆ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಗೌರವಿಸುವ ಗುಣವಿತ್ತು. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ಎದುರು, ‘ಅಲ್ಪಸಂಖ್ಯಾತ ಆಯೋಗ, ಬುಡಕಟ್ಟು ಆಯೋಗ, ಹಿಂದುಳಿದ ಜಾತಿ-ಜನಾಂಗಗಳ ಆಯೋಗ’ ಸಹಿತ ವಿವಿಧ ಆಯೋಗಗಳು ಮತ್ತು ಅವುಗಳ ಕಲ್ಯಾಣ ಕಾರ್ಯಕ್ರಮಗಳು ಚರ್ಚೆಗೆ ಬರಲಿವೆ. ಅಂಥ ಸಂದರ್ಭದಲ್ಲಿ ಪಟೇಲ್‍ರನ್ನು, ಸುಭಾಶ್‍ರನ್ನು ಅವರು ಗೌರವಿಸುತ್ತಾರೋ ಇಲ್ಲವೋ ಎಂಬ ಆತಂಕವೊಂದು ಸಹಜವಾಗಿ ನಿರ್ಮಾಣವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಇದ್ಯಾಗ್ಯೂ ಪಂಡಿತ್ ನೆಹರೂ ಅವರು ಷಣ್ಮುಗಂ ಚೆಟ್ಟಿ, ಜಾನ್ ಮಥಾಯಿ, ಕೆ.ಎಲ್. ರಾವ್, ದೇಶ್‍ಮುಖ್ ಮುಂತಾದ ರಾಜಕಾರಣಿಯೂ ಅಲ್ಲದ ಕಾಂಗ್ರೆಸಿಗರೂ ಅಲ್ಲದ ವ್ಯಕ್ತಿಗಳನ್ನು ತನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಭಿನ್ನ ವಿಚಾರಧಾರೆಯನ್ನು ಗೌರವಿಸಿದ್ದರು. ಭಾರತದಂತಹ ವೈವಿಧ್ಯತೆಯುಳ್ಳ ದೇಶದಲ್ಲಿ ಒಂದೇ ಸಂಸ್ಕøತಿ, ಒಂದೇ ಧರ್ಮ, ಒಂದೇ ವಿಚಾರಧಾರೆಯನ್ನು ಮಾತ್ರ ಪ್ರತಿನಿಧಿಸುವ ಮತ್ತು ಅವಲ್ಲದವುಗಳನ್ನು ದ್ವೇಷಿಸುವ ವಾತಾವರಣ ಸೃಷ್ಟಿಯಾಗಬಾರದೆಂಬುದೇ ಇದರ ಉದ್ದೇಶವಾಗಿತ್ತು. ಪೂರ್ಣ ಬಹುಮತದೊಂದಿಗೆ ಆಯ್ಕೆಯಾಗಿರುವ ಮೋದಿಯವರಲ್ಲಿ ಇಂಥದ್ದೊಂದು ವೈಶಾಲ್ಯತೆ ಇರಬೇಕೆಂಬುದು ಭಾರತೀಯರ ಆಸೆ. ಅಷ್ಟಕ್ಕೂ, ಬಿಜೆಪಿಗೆ ಈ ಬಾರಿ ಚಲಾವಣೆಯಾಗಿರುವ ಒಟ್ಟು ಮತಗಳು 31%. ಅದಕ್ಕೆ ವಿರುದ್ಧವಾಗಿ 69% ಮತಗಳು ಚಲಾವಣೆಯಾಗಿವೆ. ಬಿಜೆಪಿಗೆ ಪೂರ್ಣ ಬಹುಮತ ದೊರಕಿದ್ದರೂ ಆ ಪಕ್ಷವನ್ನು ಒಪ್ಪದವರ ಸಂಖ್ಯೆ ಒಪ್ಪಿದವರಿಗಿಂತ ಎರಡು ಪಟ್ಟು ಅಧಿಕ ಇದೆ ಎಂಬುದು ಮೋದಿಯವರನ್ನು ಸದಾ ನೆನಪಿಸುತ್ತಿರಬೇಕು. ಈ 69% ಮಂದಿಯನ್ನು ತನ್ನ ಬೆಂಬಲಿಗರಾಗಿ ಪರಿವರ್ತಿಸಿಕೊಳ್ಳುವಂತಹ ನಡೆ ಮತ್ತು ನುಡಿಯನ್ನು ಅವರು ತೋರ್ಪಡಿಸಬೇಕು. ವಿಷಾದ ಏನೆಂದರೆ, ಅವರ ಈ ವರೆಗಿನ ನಡೆ ಮತ್ತು ನುಡಿಗಳು ಇಂಥದ್ದೊಂದು ನಿರೀಕ್ಷೆಗೆ ಪೂರಕವಾಗಿಲ್ಲ. ಆದರೂ ಪ್ರಧಾನಿ ಮೋದಿಯು ಮುಖ್ಯಮಂತ್ರಿ ಮೋದಿಯಂತೆ ಆಗಿರಬೇಕಿಲ್ಲ ಎಂಬ ನಿರೀಕ್ಷೆಯನ್ನು ಇದರ ಜೊತೆಗೇ ಇಟ್ಟುಕೊಳ್ಳಬೇಕಾಗಿದೆ.
 'ಒಂದು ಕೈಯಲ್ಲಿ ಕುರ್‍ಆನ್ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ್‍ಟಾಪ್' (ಶಿಕ್ಷಣ) ಅನ್ನು ನೀಡುವುದಾಗಿ ಮೋದಿಯವರು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರಿಗೆ ಭರವಸೆ ಕೊಟ್ಟಿದ್ದರು. ಕೇಳಲು ತುಂಬಾ ಇಂಪಾಗಿರುವ ಮತ್ತು ಪರವಶತೆಗೆ ಒಳಪಡಿಸುವ ಈ ಭರವಸೆಯನ್ನು ಮುಸ್ಲಿಮರು ಅಷ್ಟೇ ಉತ್ಸಾಹದಿಂದ ಸ್ವೀಕರಿಸದೇ ಇದ್ದುದಕ್ಕೆ ಕಾರಣ ಮೋದಿಯವರ ಬೆಂಬಲಿಗರಾಗಿದ್ದರು. ಈ ಬೆಂಬಲಿಗರ ವರ್ತನೆಗಳು ಈ ಭರವಸೆಯನ್ನು ನಂಬುವುದಕ್ಕೆ ಪೂರಕ ಆಗಿಯೇ ಇರಲಿಲ್ಲ. ಅವರಲ್ಲಿ ಹೆಚ್ಚಿನವರು ಕುರ್‍ಆನ್‍ನ ಮೇಲೆ ಗೌರವವನ್ನೇ ಹೊಂದಿಲ್ಲ. ಭಗವದ್ಗೀತೆಯನ್ನು ಮುಸ್ಲಿಮರು ಎಷ್ಟು ಗೌರವಿಸಬೇಕೆಂದು ಅವರು ಬಯಸುತ್ತಾರೋ ಅಂಥದ್ದೊಂದು ಗೌರವವನ್ನು ಅವರಿಂದ ಮುಸ್ಲಿಮರೂ ಬಯಸುತ್ತಾರೆ. ಆದರೆ, ಕುರ್‍ಆನಿನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅದನ್ನು ಹೀನಾಯಗೊಳಿಸುತ್ತಿರುವುದು ಈ ಬೆಂಬಲಿಗರೇ. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಯನ್ನು ಅಪಹಾಸ್ಯಕ್ಕೆ ಒಳಪಡಿಸುತ್ತಿರುವುದೂ ಅವರೇ. ಸಾಚಾರ್ ಸಮಿತಿಯು ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿಯನ್ನು ದೇಶದ ಮುಂದಿಟ್ಟಾಗ ನ್ಯಾಯಮೂರ್ತಿ ರಾಜಿಂದರ್ ಸಾಚಾರ್‍ರನ್ನೇ ‘ಮುಸ್ಲಿಮ್' ಎಂಬಂತೆ ಚಿತ್ರಿಸಿ ಇಡೀ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದ್ದೂ ಅವರೇ. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಗೆ ಅವರು ಮುಸ್ಲಿಮರನ್ನೇ ಹೊಣೆಯೆಂದು ವಾದಿಸುತ್ತಿದ್ದಾರೆ. ಅವರಿಗೆ ನೀಡಲಾಗುವ ಸ್ಕಾಲರ್‍ಶಿಪ್ ಅನ್ನು ಸ್ವತಃ ಮೋದಿಯವರೇ ಗುಜರಾತ್‍ನಲ್ಲಿ ತಡೆಹಿಡಿದಿದ್ದಾರೆ. ಹೀಗಿರುವಾಗ, ಮೋದಿಯವರ ಕುರ್‍ಆನ್ ಮತ್ತು ಲ್ಯಾಪ್‍ಟಾಪ್ ಘೋಷಣೆಯಲ್ಲಿ ಮುಸ್ಲಿಮರು ನಂಬಿಕೆ ಇರಿಸುವುದಾದರೂ ಹೇಗೆ? ಅವರ ಬೆಂಬಲಿಗರ ಒಂದು ಕೈಯಲ್ಲಿ ಮುಸ್ಲಿಮ್ ದ್ವೇಷದ ಸಿಡಿ ಮತ್ತು ಇನ್ನೊಂದು ಕೈಯಲ್ಲಿ ಬೆದರಿಕೆಯ ಆಯುಧ ಇರುವಾಗ ಆ ಘೋಷಣೆಯನ್ನು ಮುಸ್ಲಿಮರು ಏನೆಂದು ಪರಿಗಣಿಸಿಯಾರು?
    ಏನೇ ಆಗಲಿ, ಚಾಯ್‍ವಾಲಾ ಮೋದಿಯವರು ಈ ದೇಶದ ಪ್ರಧಾನಿಯಾಗುವುದನ್ನು ನಾವೆಲ್ಲ ತುಂಬು ಹೃದಯದಿಂದ ಗೌರವಿಸಬೇಕಾಗಿದೆ. ಟೀ ಮಾರಾಟ ಮಾಡಿದ ವ್ಯಕ್ತಿ ಈ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುವುದು ಆ ಕೆಲಸದ ಗೌರವವನ್ನು ಹೆಚ್ಚಿಸುತ್ತದೆ. ಗುಜರಿ, ವಿೂನು, ಟೀ ಮಾರಾಟದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿರುವ ಮುಸ್ಲಿಮರ ಮಟ್ಟಿಗೆ, ಚಾಯ್‍ವಾಲಾ ಮೋದಿ ಆತಂಕ ಮತ್ತು ನಿರೀಕ್ಷೆ ಎರಡರ ಸಂಕೇತವೂ ಆಗಿದ್ದಾರೆ. ಮೋದಿಯವರು ಈ ಆತಂಕವನ್ನು ದೂರ ಮಾಡಿ ನಿರೀಕ್ಷೆಯನ್ನು ನಿಜವಾಗಿಸಲಿ ಹಾಗೂ ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್‍ನ ವೈಶಾಲ್ಯತೆಯನ್ನು ಅಳವಡಿಸಿಕೊಳ್ಳಲಿ ಎಂದೇ ಹಾರೈಸೋಣ.

Thursday 8 May 2014

ದಕ್ಷಿಣ ಕೊರಿಯದ ಹಡಗು ಮತ್ತು ಈಜಿಪ್ಟ್ ನ ನ್ಯಾಯಾಲಯ

   ಕಳೆದವಾರ ಎರಡು ಘಟನೆಗಳು ಜಾಗತಿಕ ಮಟ್ಟದಲ್ಲಿಯೇ ಸುದ್ದಿಗೀಡಾದುವು. ಒಂದು, ದಕ್ಷಿಣ ಕೊರಿಯಾದ ಹಡಗಿಗೆ ಸಂಬಂಧಿಸಿದ್ದದರೆ ಇನ್ನೊಂದು ಈಜಿಪ್ಟ್ ನ  ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದೆಡೆ, ಬಹುತೇಕ ವಿದ್ಯಾರ್ಥಿಗಳನ್ನೇ ತುಂಬಿಕೊಂಡಿದ್ದ ದಕ್ಷಿಣ ಕೊರಿಯಾದ ಪ್ರಯಾಣಿಕ ಹಡಗು ಸಮುದ್ರದಲ್ಲಿ ಮುಳುಗಿ ಸುಮಾರು 200ರಷ್ಟು ವಿದ್ಯಾರ್ಥಿಗಳು ಸಾವಿಗೀಡಾದರು. ಇನ್ನೊಂದೆಡೆ, ಕೇವಲ ಒಂದೇ ತಿಂಗಳೊಳಗೆ ಈಜಿಪ್ಟ್ ನ  ಪ್ರಮುಖ ನ್ಯಾಯಾಲಯವು 1212 ಮಂದಿಗೆ ಮರಣ ದಂಡನೆ ಶಿಕ್ಷೆಯನ್ನು ಘೋಷಿಸಿತು. ನಿಜವಾಗಿ, ಈ ಎರಡೂ ಘಟನೆಗಳನ್ನು ಜಗತ್ತು ವೀಕ್ಷಿಸಿದ್ದು ಆಘಾತದಿಂದಲೇ. ಮುಳುಗುತ್ತಿರುವ ಹಡಗಿನಿಂದ ಮಕ್ಕಳು ಹೆತ್ತವರಿಗೆ ಕರೆ ಮತ್ತು ಎಸ್.ಎಂ.ಎಸ್. ಮಾಡಿದ್ದನ್ನು ಓದುತ್ತಾ ಅಸಂಖ್ಯ ಮಂದಿ ಕಣ್ಣೀರಾದರು. ವಿಪರೀತ ಮಟ್ಟದಲ್ಲಿ ಸರಕನ್ನು ತುಂಬಿಸಿದ್ದೇ ಹಡಗು ಮುಳುಗಡೆಗೆ ಕಾರಣ ಎಂಬ ತನಿಖಾ ವರದಿಯನ್ನು ಕಂಡು ಜನರು ಆಕ್ರೋಶಿತಗೊಂಡರು. ಕೊರಿಯಾದ ಅಧ್ಯಕ್ಷರೇ ರಾಜೀನಾಮೆ ನೀಡಿದರು. ಮಾನಸಿಕ ಒತ್ತಡ ತಾಳಲಾರದೇ ಶಾಲೆಯ ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಂಡರು. ಇದೇ ವೇಳೆ, ಈಜಿಪ್ಟ್ ನ್ಯಾಯಾಲಯದ ತೀರ್ಪನ್ನು ಅಮೇರಿಕ ಸಹಿತ ಜಗತ್ತಿನ ಬಹುತೇಕ ರಾಷ್ಟ್ರಗಳು ಬಹಿರಂಗವಾಗಿಯೇ ಖಂಡಿಸಿದುವು. ನ್ಯಾಯದ ಅಪಹಾಸ್ಯ ಅಂದುವು. ನ್ಯಾಯಾಧೀಶ ಸಈದ್ ಯೂಸುಫುಲ್ ಗಝರ್‍ರನ್ನು ಅವಿವೇಕಿಯಂತೆ ಮತ್ತು ಮಿಲಿಟರಿಯ ಗುಲಾಮನಂತೆ ಕಂಡುವು.
   ಈಜಿಪ್ಟ್ ನ  ಚುನಾಯಿತ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರನ್ನು 2013 ಜುಲೈಯಲ್ಲಿ ಮಿಲಿಟರಿಯು ಪದಚ್ಯುತಗೊಳಿಸಿದಾಗ ಅದರ ವಿರುದ್ಧ ಅಲ್ಲಿ ತೀವ್ರ ಪ್ರತಿಭಟನೆಗಳು ಕಾಣಿಸಿಕೊಂಡಿದ್ದುವು. ಸೇನೆಯು ನೂರಾರು ಮುರ್ಸಿ ಬೆಂಬಲಿಗರನ್ನು ಗುಂಡಿಟ್ಟು ಕೊಂದಿತ್ತು. ಈಜಿಪ್ಟ್ ನ  ದಕ್ಷಿಣ ಭಾಗದ ಮಿನ್ಯಾ ಎಂಬಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಆಗಸ್ಟ್ 14ರಂದು ಸೇನೆಯು ಗುಂಡಿನ ಮಳೆಗರೆದಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಲ್ಲದೇ ಪೊಲೀಸರ ಹತ್ಯೆಗೂ ಕಾರಣರಾಗಿದ್ದಾರೆ ಎಂಬ ಆರೋಪವನ್ನು ಮುಸ್ಲಿಮ್ ಬ್ರದರ್‍ಹುಡ್‍ನ ಅಧ್ಯಕ್ಷ ಮುಹಮ್ಮದ್ ಬದೀಅï ಸೇರಿದಂತೆ ನೂರಾರು ಮಂದಿಯ ಮೇಲೆ ಹೊರಿಸಲಾಗಿತ್ತು. ಇದೀಗ ಬದೀಅï ಸೇರಿದಂತೆ 683 ಮಂದಿಯ ಮೇಲೆ ಎಪ್ರಿಲ್ 28ರಂದು ಮರಣ ದಂಡನೆಯನ್ನು ಘೋಷಿಸಲಾಗಿದೆ. ಇದೇ ನ್ಯಾಯಾಲಯವು ಇಂಥದ್ದೇ ಆರೋಪದಲ್ಲಿ ಮುರ್ಸಿ ಪರ ಇರುವ 529 ಮಂದಿಗೆ ಮಾರ್ಚ್ 24ರಂದು ಮರಣ ದಂಡನೆ ವಿಧಿಸಿತ್ತು. ಅಚ್ಚರಿಯ ಸಂಗತಿ ಏನೆಂದರೆ ಎಪ್ರಿಲ್ 28ರ ತೀರ್ಪು ನೀಡುವುದಕ್ಕಿಂತ 15 ನಿಮಿಷಗಳ ಮೊದಲಷ್ಟೇ ಆ ಪ್ರಕರಣಕ್ಕೆ ಸಂಬಂಧಿಸಿದ 3,500 ಪುಟಗಳ ವರದಿಯನ್ನು ನ್ಯಾಯಾಧೀಶರಿಗೆ (ದಿ ಹಿಂದೂ ಮೇ 3, 2014) ಸಲ್ಲಿಸಲಾಗಿತ್ತು. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 6000 ಪುಟಗಳ ವರದಿಯನ್ನು ಒಂದೆರಡು ದಿನಕ್ಕಿಂತ ಮೊದಲಷ್ಟೇ ಸಲ್ಲಿಸಲಾಗಿತ್ತು. ನ್ಯಾಯಾಧೀಶ ಸಈದ್ ಯೂಸುಫುಲ್ ಗಝರ್ ಎಂದಲ್ಲ, ಜಗತ್ತಿನ ಯಾವ ನ್ಯಾಯಾಧೀಶರಿಗೂ ಕೇವಲ 15 ನಿಮಿಷಗಳೊಳಗೆ ಮೂರೂವರೆ ಸಾವಿರದಷ್ಟು ಪುಟಗಳುಳ್ಳ ಒಂದು ವರದಿಯನ್ನು ಓದಿ ಮುಗಿಸಲು ಮತ್ತು ಆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವೇ? ಅಷ್ಟಕ್ಕೂ, ಈಜಿಪ್ಟ್ ಎಂಬುದು ಜಗತ್ತಿನ ಅತ್ಯಂತ ಅರಾಜಕ ರಾಷ್ಟ್ರಗಳ ಪಟ್ಟಿಯಲ್ಲೇನೂ ಇಲ್ಲವಲ್ಲ. ಪೆರು, ಕಾಂಬೋಡಿಯಾ, ನೈಜೀರಿಯಾ, ದಕ್ಷಿಣ ಸುಡಾನ್‍ನಂತೆ ಆಂತರಿಕ ಘರ್ಷಣೆಗಳೋ ಸಶಸ್ತ್ರ ಚಳವಳಿಗಳೋ ಅಲ್ಲಿ ನಡೆಯುತ್ತಿಲ್ಲ. ಕಳೆದ 80 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮುಸ್ಲಿಮ್ ಬ್ರದರ್‍ಹುಡ್ ಎಂದೂ ಕೂಡ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಬಲ್ಲ ಪ್ರತಿಭಟನಾ ಮಾದರಿಯನ್ನು ಅಳವಡಿಸಿಕೊಂಡೂ ಇಲ್ಲ. ಈಜಿಪ್ಟ್ ಅನ್ನು ಆಳುತ್ತಾ ಬಂದಿರುವ ಸರ್ವಾಧಿಕಾರಿಗಳ ವಿರುದ್ಧ ಅದು ಧ್ವನಿ ಎತ್ತಿದ್ದು ಕೂಡ ಸಂಪೂರ್ಣ ಪ್ರಜಾತಂತ್ರ ರೀತಿಯಲ್ಲಿ. ಮುರ್ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು ಕೂಡಾ ಇದೇ ಮಾದರಿಯಲ್ಲೇ. ಅವರ ಒಂದು ವರ್ಷದ ಹೃಸ್ವ ಅಧಿಕಾರಾವಧಿಯಲ್ಲಿ ಪ್ರಜಾತಂತ್ರಕ್ಕೆ ಅಪಾಯವೊಡ್ಡಬಲ್ಲ ಅಥವಾ ಈಜಿಪ್ಟ್ ನ  ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲ ಯಾವೊಂದು ಕ್ರಮವೂ ಜರುಗಿರಲಿಲ್ಲ. ಆದ್ದರಿಂದಲೇ ಮುರ್ಸಿಯವರ ಪತನವನ್ನು ಅಮೇರಿಕವೂ ಸೇರಿದಂತೆ ಸಾಕಷ್ಟು ರಾಷ್ಟ್ರಗಳು ಬಹಿರಂಗವಾಗಿಯೇ ಖಂಡಿಸಿದ್ದುವು. ಇಷ್ಟಿದ್ದೂ ನ್ಯಾಯಾಧೀಶ ಗಝರ್ ಅವರ ವಿಚಾರಣೆಯು ಎಷ್ಟು ಹಾಸ್ಯಾಸ್ಪದ ಆಗಿತ್ತೆಂದರೆ, ಆರೋಪಿಗಳ ಪರ ವಾದಿಸುವುದಕ್ಕೆ ಅವಕಾಶವನ್ನೇ ನಿರಾಕರಿಸಲಾಯಿತು. ಘಟನೆಯೊಂದಿಗೆ ಸಂಬಂಧವೇ ಇಲ್ಲದ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ದೂರದ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಶಿಕ್ಷಕರು, ವೈದ್ಯರಾಗಿ ದುಡಿಯುತ್ತಿದ್ದವರನ್ನೂ ಬಂಧಿಸಿ ಆರೋಪ ಹೊರಿಸಲಾಯಿತು. ಪ್ರತಿಭಟನಾ ಸ್ಥಳದಿಂದ 700 ಕಿ.ವಿೂ. ದೂರದಲ್ಲಿ ತನ್ನ ಪಾಡಿಗಿದ್ದ ವ್ಯಕ್ತಿಯ ಮೇಲೂ ಆರೋಪ ಹೊರಿಸಿರುವುದು ಇಂಥವುಗಳಲ್ಲಿ ಒಂದು. ನಿಜವಾಗಿ, ಯಾರೆಲ್ಲ ಮುಸ್ಲಿಮ್ ಬ್ರದರ್‍ಹುಡ್‍ನೊಂದಿಗೆ ಗುರುತಿಸಿಕೊಂಡಿದ್ದಾರೋ ಅಥವಾ ಅದರ ಬಗ್ಗೆ ಮೃದು ನಿಲುವು ತಾಳಿದ್ದಾರೋ ಅವರೆಲ್ಲರನ್ನೂ ಆರೋಪಿಗಳನ್ನಾಗಿಸಿ ದಂಡಿಸುವುದು ಮಿಲಿಟರಿ ವ್ಯವಸ್ಥೆಯ ಉದ್ದೇಶವಾಗಿದೆಯೆಂಬುದು ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ಮುಂದಿನ ದಿನಗಳಲ್ಲಿ ಈ ತೀರ್ಪು ಅಲ್ಲಿನ ಸರ್ವೋಚ್ಚ ಮುಸ್ಲಿಮ್ ವಿದ್ವಾಂಸರ(ಗ್ರ್ಯಾಂಡ್ ಮುಫ್ತಿ) ಪರಿಶೀಲನೆಗೆ ಒಳಪಡಲಿದ್ದು ಆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.
   ಏನೇ ಆಗಲಿ, 2011ರಲ್ಲಿ ಮುಬಾರಕ್ ವಿರುದ್ಧ ಕಾಣಿಸಿಕೊಂಡ ಪ್ರತಿಭಟನೆಯು 2014 ಎಪ್ರಿಲ್ 28ರಂದು 683 ಮಂದಿಯನ್ನು ನೇಣು ಶಿಕ್ಷೆಗೆ ದೂಡುವ ಮೂಲಕ ಒಂದು ಹಂತವನ್ನು ಮುಗಿಸಿದೆ. ಮಿಲಿಟರಿ ಆಡಳಿತದ ಈ ಕ್ರೌರ್ಯದಲ್ಲಿ ಅಕ್ಕಪಕ್ಕದ ಅರಬ್ ರಾಷ್ಟ್ರಗಳ ಕೊಡುಗೆಯೂ ಇದೆ. ಪ್ರತಿ ವರ್ಷ ಈಜಿಪ್ಟ್ ಗೆ  1.5 ಬಿಲಿಯನ್ ಡಾಲರ್ ನೆರವು ನೀಡುತ್ತಿರುವ ಅಮೇರಿಕವೇ ಇವತ್ತು ಆ ನೆರವನ್ನು ಕಡಿತಗೊಳಿಸಲು ಗಂಭೀರವಾಗಿ ಚಿಂತಿಸುತ್ತಿರುವಾಗ ಸೌದಿ, ಯು.ಎ.ಇ. ಮತ್ತು ಕುವೈಟ್‍ಗಳು ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ಗೆ  12 ಬಿಲಿಯನ್ ಡಾಲರ್ ಮೊತ್ತವನ್ನು ನೀಡಿವೆ. ಮಾತ್ರವಲ್ಲ, ನ್ಯಾಯಾಲಯದ ತೀರ್ಪಿಗೆ ಅವೆಲ್ಲ ಗಂಭೀರ ಮೌನವನ್ನೂ ತಾಳಿವೆ. ಒಂದು ಕಡೆ, ಮುಳುಗಿದ ಹಡಗಿಗಾಗಿ ಅಧ್ಯಕ್ಷನೇ ಪದತ್ಯಾಗ ಮಾಡುತ್ತಾರೆ. ಇನ್ನೊಂದು ಕಡೆ ನ್ಯಾಯದ ಕಗ್ಗೊಲೆಯನ್ನು ಕಂಡೂ ಅಧ್ಯಕ್ಷ ಅದ್ಲಿ ಮನ್ಸೂರ್ ಮಾತಾಡುವುದಿಲ್ಲ. ದಕ್ಷಿಣ ಕೊರಿಯಾ ಮತ್ತು ಈಜಿಪ್ಟನಲ್ಲಿ ನಡೆದ ಈ ಎರಡು ಘಟನೆಗಳು 2014ರ ಅಚ್ಚರಿಗಳಾಗಿ ಇತಿಹಾಸದಲ್ಲಿ ಗುರುತಿಗೀಡಾಗಬಹುದು