Thursday 8 May 2014

ದಕ್ಷಿಣ ಕೊರಿಯದ ಹಡಗು ಮತ್ತು ಈಜಿಪ್ಟ್ ನ ನ್ಯಾಯಾಲಯ

   ಕಳೆದವಾರ ಎರಡು ಘಟನೆಗಳು ಜಾಗತಿಕ ಮಟ್ಟದಲ್ಲಿಯೇ ಸುದ್ದಿಗೀಡಾದುವು. ಒಂದು, ದಕ್ಷಿಣ ಕೊರಿಯಾದ ಹಡಗಿಗೆ ಸಂಬಂಧಿಸಿದ್ದದರೆ ಇನ್ನೊಂದು ಈಜಿಪ್ಟ್ ನ  ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದೆಡೆ, ಬಹುತೇಕ ವಿದ್ಯಾರ್ಥಿಗಳನ್ನೇ ತುಂಬಿಕೊಂಡಿದ್ದ ದಕ್ಷಿಣ ಕೊರಿಯಾದ ಪ್ರಯಾಣಿಕ ಹಡಗು ಸಮುದ್ರದಲ್ಲಿ ಮುಳುಗಿ ಸುಮಾರು 200ರಷ್ಟು ವಿದ್ಯಾರ್ಥಿಗಳು ಸಾವಿಗೀಡಾದರು. ಇನ್ನೊಂದೆಡೆ, ಕೇವಲ ಒಂದೇ ತಿಂಗಳೊಳಗೆ ಈಜಿಪ್ಟ್ ನ  ಪ್ರಮುಖ ನ್ಯಾಯಾಲಯವು 1212 ಮಂದಿಗೆ ಮರಣ ದಂಡನೆ ಶಿಕ್ಷೆಯನ್ನು ಘೋಷಿಸಿತು. ನಿಜವಾಗಿ, ಈ ಎರಡೂ ಘಟನೆಗಳನ್ನು ಜಗತ್ತು ವೀಕ್ಷಿಸಿದ್ದು ಆಘಾತದಿಂದಲೇ. ಮುಳುಗುತ್ತಿರುವ ಹಡಗಿನಿಂದ ಮಕ್ಕಳು ಹೆತ್ತವರಿಗೆ ಕರೆ ಮತ್ತು ಎಸ್.ಎಂ.ಎಸ್. ಮಾಡಿದ್ದನ್ನು ಓದುತ್ತಾ ಅಸಂಖ್ಯ ಮಂದಿ ಕಣ್ಣೀರಾದರು. ವಿಪರೀತ ಮಟ್ಟದಲ್ಲಿ ಸರಕನ್ನು ತುಂಬಿಸಿದ್ದೇ ಹಡಗು ಮುಳುಗಡೆಗೆ ಕಾರಣ ಎಂಬ ತನಿಖಾ ವರದಿಯನ್ನು ಕಂಡು ಜನರು ಆಕ್ರೋಶಿತಗೊಂಡರು. ಕೊರಿಯಾದ ಅಧ್ಯಕ್ಷರೇ ರಾಜೀನಾಮೆ ನೀಡಿದರು. ಮಾನಸಿಕ ಒತ್ತಡ ತಾಳಲಾರದೇ ಶಾಲೆಯ ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಂಡರು. ಇದೇ ವೇಳೆ, ಈಜಿಪ್ಟ್ ನ್ಯಾಯಾಲಯದ ತೀರ್ಪನ್ನು ಅಮೇರಿಕ ಸಹಿತ ಜಗತ್ತಿನ ಬಹುತೇಕ ರಾಷ್ಟ್ರಗಳು ಬಹಿರಂಗವಾಗಿಯೇ ಖಂಡಿಸಿದುವು. ನ್ಯಾಯದ ಅಪಹಾಸ್ಯ ಅಂದುವು. ನ್ಯಾಯಾಧೀಶ ಸಈದ್ ಯೂಸುಫುಲ್ ಗಝರ್‍ರನ್ನು ಅವಿವೇಕಿಯಂತೆ ಮತ್ತು ಮಿಲಿಟರಿಯ ಗುಲಾಮನಂತೆ ಕಂಡುವು.
   ಈಜಿಪ್ಟ್ ನ  ಚುನಾಯಿತ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರನ್ನು 2013 ಜುಲೈಯಲ್ಲಿ ಮಿಲಿಟರಿಯು ಪದಚ್ಯುತಗೊಳಿಸಿದಾಗ ಅದರ ವಿರುದ್ಧ ಅಲ್ಲಿ ತೀವ್ರ ಪ್ರತಿಭಟನೆಗಳು ಕಾಣಿಸಿಕೊಂಡಿದ್ದುವು. ಸೇನೆಯು ನೂರಾರು ಮುರ್ಸಿ ಬೆಂಬಲಿಗರನ್ನು ಗುಂಡಿಟ್ಟು ಕೊಂದಿತ್ತು. ಈಜಿಪ್ಟ್ ನ  ದಕ್ಷಿಣ ಭಾಗದ ಮಿನ್ಯಾ ಎಂಬಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಆಗಸ್ಟ್ 14ರಂದು ಸೇನೆಯು ಗುಂಡಿನ ಮಳೆಗರೆದಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಲ್ಲದೇ ಪೊಲೀಸರ ಹತ್ಯೆಗೂ ಕಾರಣರಾಗಿದ್ದಾರೆ ಎಂಬ ಆರೋಪವನ್ನು ಮುಸ್ಲಿಮ್ ಬ್ರದರ್‍ಹುಡ್‍ನ ಅಧ್ಯಕ್ಷ ಮುಹಮ್ಮದ್ ಬದೀಅï ಸೇರಿದಂತೆ ನೂರಾರು ಮಂದಿಯ ಮೇಲೆ ಹೊರಿಸಲಾಗಿತ್ತು. ಇದೀಗ ಬದೀಅï ಸೇರಿದಂತೆ 683 ಮಂದಿಯ ಮೇಲೆ ಎಪ್ರಿಲ್ 28ರಂದು ಮರಣ ದಂಡನೆಯನ್ನು ಘೋಷಿಸಲಾಗಿದೆ. ಇದೇ ನ್ಯಾಯಾಲಯವು ಇಂಥದ್ದೇ ಆರೋಪದಲ್ಲಿ ಮುರ್ಸಿ ಪರ ಇರುವ 529 ಮಂದಿಗೆ ಮಾರ್ಚ್ 24ರಂದು ಮರಣ ದಂಡನೆ ವಿಧಿಸಿತ್ತು. ಅಚ್ಚರಿಯ ಸಂಗತಿ ಏನೆಂದರೆ ಎಪ್ರಿಲ್ 28ರ ತೀರ್ಪು ನೀಡುವುದಕ್ಕಿಂತ 15 ನಿಮಿಷಗಳ ಮೊದಲಷ್ಟೇ ಆ ಪ್ರಕರಣಕ್ಕೆ ಸಂಬಂಧಿಸಿದ 3,500 ಪುಟಗಳ ವರದಿಯನ್ನು ನ್ಯಾಯಾಧೀಶರಿಗೆ (ದಿ ಹಿಂದೂ ಮೇ 3, 2014) ಸಲ್ಲಿಸಲಾಗಿತ್ತು. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 6000 ಪುಟಗಳ ವರದಿಯನ್ನು ಒಂದೆರಡು ದಿನಕ್ಕಿಂತ ಮೊದಲಷ್ಟೇ ಸಲ್ಲಿಸಲಾಗಿತ್ತು. ನ್ಯಾಯಾಧೀಶ ಸಈದ್ ಯೂಸುಫುಲ್ ಗಝರ್ ಎಂದಲ್ಲ, ಜಗತ್ತಿನ ಯಾವ ನ್ಯಾಯಾಧೀಶರಿಗೂ ಕೇವಲ 15 ನಿಮಿಷಗಳೊಳಗೆ ಮೂರೂವರೆ ಸಾವಿರದಷ್ಟು ಪುಟಗಳುಳ್ಳ ಒಂದು ವರದಿಯನ್ನು ಓದಿ ಮುಗಿಸಲು ಮತ್ತು ಆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವೇ? ಅಷ್ಟಕ್ಕೂ, ಈಜಿಪ್ಟ್ ಎಂಬುದು ಜಗತ್ತಿನ ಅತ್ಯಂತ ಅರಾಜಕ ರಾಷ್ಟ್ರಗಳ ಪಟ್ಟಿಯಲ್ಲೇನೂ ಇಲ್ಲವಲ್ಲ. ಪೆರು, ಕಾಂಬೋಡಿಯಾ, ನೈಜೀರಿಯಾ, ದಕ್ಷಿಣ ಸುಡಾನ್‍ನಂತೆ ಆಂತರಿಕ ಘರ್ಷಣೆಗಳೋ ಸಶಸ್ತ್ರ ಚಳವಳಿಗಳೋ ಅಲ್ಲಿ ನಡೆಯುತ್ತಿಲ್ಲ. ಕಳೆದ 80 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮುಸ್ಲಿಮ್ ಬ್ರದರ್‍ಹುಡ್ ಎಂದೂ ಕೂಡ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಬಲ್ಲ ಪ್ರತಿಭಟನಾ ಮಾದರಿಯನ್ನು ಅಳವಡಿಸಿಕೊಂಡೂ ಇಲ್ಲ. ಈಜಿಪ್ಟ್ ಅನ್ನು ಆಳುತ್ತಾ ಬಂದಿರುವ ಸರ್ವಾಧಿಕಾರಿಗಳ ವಿರುದ್ಧ ಅದು ಧ್ವನಿ ಎತ್ತಿದ್ದು ಕೂಡ ಸಂಪೂರ್ಣ ಪ್ರಜಾತಂತ್ರ ರೀತಿಯಲ್ಲಿ. ಮುರ್ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು ಕೂಡಾ ಇದೇ ಮಾದರಿಯಲ್ಲೇ. ಅವರ ಒಂದು ವರ್ಷದ ಹೃಸ್ವ ಅಧಿಕಾರಾವಧಿಯಲ್ಲಿ ಪ್ರಜಾತಂತ್ರಕ್ಕೆ ಅಪಾಯವೊಡ್ಡಬಲ್ಲ ಅಥವಾ ಈಜಿಪ್ಟ್ ನ  ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲ ಯಾವೊಂದು ಕ್ರಮವೂ ಜರುಗಿರಲಿಲ್ಲ. ಆದ್ದರಿಂದಲೇ ಮುರ್ಸಿಯವರ ಪತನವನ್ನು ಅಮೇರಿಕವೂ ಸೇರಿದಂತೆ ಸಾಕಷ್ಟು ರಾಷ್ಟ್ರಗಳು ಬಹಿರಂಗವಾಗಿಯೇ ಖಂಡಿಸಿದ್ದುವು. ಇಷ್ಟಿದ್ದೂ ನ್ಯಾಯಾಧೀಶ ಗಝರ್ ಅವರ ವಿಚಾರಣೆಯು ಎಷ್ಟು ಹಾಸ್ಯಾಸ್ಪದ ಆಗಿತ್ತೆಂದರೆ, ಆರೋಪಿಗಳ ಪರ ವಾದಿಸುವುದಕ್ಕೆ ಅವಕಾಶವನ್ನೇ ನಿರಾಕರಿಸಲಾಯಿತು. ಘಟನೆಯೊಂದಿಗೆ ಸಂಬಂಧವೇ ಇಲ್ಲದ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ದೂರದ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಶಿಕ್ಷಕರು, ವೈದ್ಯರಾಗಿ ದುಡಿಯುತ್ತಿದ್ದವರನ್ನೂ ಬಂಧಿಸಿ ಆರೋಪ ಹೊರಿಸಲಾಯಿತು. ಪ್ರತಿಭಟನಾ ಸ್ಥಳದಿಂದ 700 ಕಿ.ವಿೂ. ದೂರದಲ್ಲಿ ತನ್ನ ಪಾಡಿಗಿದ್ದ ವ್ಯಕ್ತಿಯ ಮೇಲೂ ಆರೋಪ ಹೊರಿಸಿರುವುದು ಇಂಥವುಗಳಲ್ಲಿ ಒಂದು. ನಿಜವಾಗಿ, ಯಾರೆಲ್ಲ ಮುಸ್ಲಿಮ್ ಬ್ರದರ್‍ಹುಡ್‍ನೊಂದಿಗೆ ಗುರುತಿಸಿಕೊಂಡಿದ್ದಾರೋ ಅಥವಾ ಅದರ ಬಗ್ಗೆ ಮೃದು ನಿಲುವು ತಾಳಿದ್ದಾರೋ ಅವರೆಲ್ಲರನ್ನೂ ಆರೋಪಿಗಳನ್ನಾಗಿಸಿ ದಂಡಿಸುವುದು ಮಿಲಿಟರಿ ವ್ಯವಸ್ಥೆಯ ಉದ್ದೇಶವಾಗಿದೆಯೆಂಬುದು ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ಮುಂದಿನ ದಿನಗಳಲ್ಲಿ ಈ ತೀರ್ಪು ಅಲ್ಲಿನ ಸರ್ವೋಚ್ಚ ಮುಸ್ಲಿಮ್ ವಿದ್ವಾಂಸರ(ಗ್ರ್ಯಾಂಡ್ ಮುಫ್ತಿ) ಪರಿಶೀಲನೆಗೆ ಒಳಪಡಲಿದ್ದು ಆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.
   ಏನೇ ಆಗಲಿ, 2011ರಲ್ಲಿ ಮುಬಾರಕ್ ವಿರುದ್ಧ ಕಾಣಿಸಿಕೊಂಡ ಪ್ರತಿಭಟನೆಯು 2014 ಎಪ್ರಿಲ್ 28ರಂದು 683 ಮಂದಿಯನ್ನು ನೇಣು ಶಿಕ್ಷೆಗೆ ದೂಡುವ ಮೂಲಕ ಒಂದು ಹಂತವನ್ನು ಮುಗಿಸಿದೆ. ಮಿಲಿಟರಿ ಆಡಳಿತದ ಈ ಕ್ರೌರ್ಯದಲ್ಲಿ ಅಕ್ಕಪಕ್ಕದ ಅರಬ್ ರಾಷ್ಟ್ರಗಳ ಕೊಡುಗೆಯೂ ಇದೆ. ಪ್ರತಿ ವರ್ಷ ಈಜಿಪ್ಟ್ ಗೆ  1.5 ಬಿಲಿಯನ್ ಡಾಲರ್ ನೆರವು ನೀಡುತ್ತಿರುವ ಅಮೇರಿಕವೇ ಇವತ್ತು ಆ ನೆರವನ್ನು ಕಡಿತಗೊಳಿಸಲು ಗಂಭೀರವಾಗಿ ಚಿಂತಿಸುತ್ತಿರುವಾಗ ಸೌದಿ, ಯು.ಎ.ಇ. ಮತ್ತು ಕುವೈಟ್‍ಗಳು ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ಗೆ  12 ಬಿಲಿಯನ್ ಡಾಲರ್ ಮೊತ್ತವನ್ನು ನೀಡಿವೆ. ಮಾತ್ರವಲ್ಲ, ನ್ಯಾಯಾಲಯದ ತೀರ್ಪಿಗೆ ಅವೆಲ್ಲ ಗಂಭೀರ ಮೌನವನ್ನೂ ತಾಳಿವೆ. ಒಂದು ಕಡೆ, ಮುಳುಗಿದ ಹಡಗಿಗಾಗಿ ಅಧ್ಯಕ್ಷನೇ ಪದತ್ಯಾಗ ಮಾಡುತ್ತಾರೆ. ಇನ್ನೊಂದು ಕಡೆ ನ್ಯಾಯದ ಕಗ್ಗೊಲೆಯನ್ನು ಕಂಡೂ ಅಧ್ಯಕ್ಷ ಅದ್ಲಿ ಮನ್ಸೂರ್ ಮಾತಾಡುವುದಿಲ್ಲ. ದಕ್ಷಿಣ ಕೊರಿಯಾ ಮತ್ತು ಈಜಿಪ್ಟನಲ್ಲಿ ನಡೆದ ಈ ಎರಡು ಘಟನೆಗಳು 2014ರ ಅಚ್ಚರಿಗಳಾಗಿ ಇತಿಹಾಸದಲ್ಲಿ ಗುರುತಿಗೀಡಾಗಬಹುದು


No comments:

Post a Comment