Wednesday 21 May 2014

ಭಾರತ್ ಮಾತಾಕಿ ಜೈ, ಜೈ ಹಿಂದ್ ಮತ್ತು ಪ್ರಧಾನಿ ಮೋದಿ..

   ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್ ಎಂಬೆರಡು ಘೋಷಣೆಗಳು ಈ ದೇಶದಲ್ಲಿ ಪ್ರತಿದಿನ ನೂರಾರು ಬಾರಿ ಮೊಳಗುತ್ತಿರುತ್ತವೆ. ಸಭೆ-ಸಮಾರಂಭ, ಸೆಮಿನಾರ್, ಸಾಂಸ್ಕøತಿಕ ಕಾರ್ಯಕ್ರಮ.. ಮುಂತಾದ ಎಲ್ಲ ವೇದಿಕೆಗಳಲ್ಲೂ ಈ ಎರಡು ಘೋಷಣೆಗಳಿಗೆ ಜಾಗ ಇರುತ್ತವೆ. ಭಾರತ್ ಮಾತಾಕಿ ಜೈ ಎಂಬ ಘೋಷಣೆ ಈ ದೇಶದಲ್ಲಿ ಬಳಕೆಯಲ್ಲಿದ್ದಾಗಲೇ ಅದಕ್ಕೆ ಪರ್ಯಾಯವೆಂಬಂತೆ ‘ಜೈ ಹಿಂದ್' ಘೋಷಣೆಯನ್ನು ಈ ದೇಶಕ್ಕೆ ಪರಿಚಯಿಸಿದ್ದು ಸುಭಾಶ್‍ಚಂದ್ರ ಬೋಸ್. ನಿಜವಾಗಿ, ಈ ಎರಡೂ ಘೋಷಣೆಗಳಲ್ಲಿ ಮೂಲಭೂತವಾದ ವ್ಯತ್ಯಾಸ ಇದೆ. ಭಾರತ್ ಮಾತಾಕಿ ಜೈ ಎಂಬ ಘೋಷಣೆಯು ಭಾರತವನ್ನು ಹೆಣ್ಣಾಗಿ ಚಿತ್ರಿಸಿದರೆ, ಜೈ ಹಿಂದ್ ಇದನ್ನು ನಯವಾಗಿ ತಳ್ಳಿ ಹಾಕುತ್ತದೆ. ದೇಶವನ್ನು ‘ಹೆಣ್ಣು' ಎಂಬ ಖಚಿತ ರೂಪಕ್ಕಿಂತ ಭಿನ್ನವಾಗಿ, ಹೆಣ್ಣು-ಗಂಡು ಸಹಿತ ಸರ್ವ ವೈವಿಧ್ಯತೆಗಳೂ ಇರುವ ಒಂದು ರಮ್ಯ ತಾಣವಾಗಿ ಅದು ಭಾರತವನ್ನು ಕಟ್ಟಿಕೊಡುತ್ತದೆ. ಹಾಗಂತ, ಈ ಎರಡೂ ಘೋಷಣೆಗಳು ಈ ದೇಶದಲ್ಲಿ ಪರಸ್ಪರ ಸಂಘರ್ಷಕ್ಕೆ ಕಾರಣ ಆಗಿಲ್ಲ. ಜೈ ಹಿಂದನ್ನು ಇಷ್ಟಪಡುವವರು ಭಾರತ್ ಮಾತಾಕಿಯನ್ನು ಇಷ್ಟಪಡುವವರ ಮೇಲೆ ದಾಳಿ ಮಾಡಿಲ್ಲ. ಸುಭಾಶ್ ಚಂದ್ರ ಬೋಸ್‍ರನ್ನು ಯಾರೂ ದೇಶದ್ರೋಹಿಯಂತೆ ಕಂಡೂ ಇಲ್ಲ. ಈ ಎರಡೂ ಘೋಷಣೆಗಳ ನಡುವೆ ಇರುವ ಅಪಾರ ಅರ್ಥ ಮತ್ತು ಭಾವ ವ್ಯತ್ಯಾಸದ ಹೊರತಾಗಿಯೂ ಇವು ಈ ದೇಶದಲ್ಲಿ ಸೌಹಾರ್ದತೆಯಿಂದ ಮೊಳಗಿವೆ. ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುವ ಈ ಸಂದರ್ಭದಲ್ಲಿ ಈ ಎರಡು ಘೋಷಣೆಗಳ ನಡುವಿನ ಹೋಲಿಕೆ ಮತ್ತು ಚರ್ಚೆ ಅಗತ್ಯ ಅನಿಸುತ್ತದೆ. ಮೋದಿಯವರು ಚುನಾವಣಾ ಪ್ರಚಾರದ ಸಮಯದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ದೇಶದಲ್ಲಿ ಧಾರಾಳ ಚರ್ಚೆಗೊಳಗಾಗಿವೆ. ಅವರ ಮಾತಿನ ಧಾಟಿ, ದೇಹಭಾಷೆ, ವ್ಯಂಗ್ಯ.. ಎಲ್ಲದರಲ್ಲೂ ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಮಾತ್ರ ಒಪ್ಪುವ ಸೂಚನೆಯನ್ನು ಅನೇಕರು ಕಂಡುಕೊಂಡಿದ್ದಾರೆ. ಆದ್ದರಿಂದಲೇ, ಮೋದಿಯವರ ಬಗ್ಗೆ ಆತಂಕ ಮೂಡುವುದು. ಎರಡು ವಿಚಾರಧಾರೆಗಳನ್ನು ಪ್ರತಿನಿಧಿಸುವ ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್ ಘೋಷಣೆಗಳನ್ನು ಈ ದೇಶದ ಮಂದಿ ಸ್ಫೂರ್ತಿಯಿಂದಲೇ ಸ್ವೀಕರಿಸಿರುವಾಗ ಮೋದಿಯವರು ಈ ವೈಶಾಲ್ಯತೆಯನ್ನು ತಿರಸ್ಕರಿಸಲಾರರು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಲೇ ಆತಂಕದ ಬಗ್ಗೆ ಚರ್ಚಿಸಬೇಕಾಗಿದೆ. ಮೋದಿಯವರು ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿ, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಿಂದೂ ಮತ್ತು ಮುಸ್ಲಿಮ್ ನಿರಾಶ್ರಿತರ ಬಗ್ಗೆ ಭಿನ್ನ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಿಂದ ವಲಸೆ ಹೋಗಿರುವ ಹಿಂದೂ ಪಂಡಿತರ ಬಗ್ಗೆ ಮತ್ತು ಗೋದ್ರಾ, ಮುಝಫ್ಫರ್ ನಗರ್ ಅಥವಾ ಕೋಮುಗಲಭೆ ಪೀಡಿತ ದೇಶದ ಇನ್ನಾವುದೇ ಪ್ರದೇಶದಿಂದ ವಲಸೆ ಹೋಗಿರುವ ಮುಸ್ಲಿಮರ ಬಗ್ಗೆ ಅವರ ನಿಲುವು ಒಂದೇ ರೀತಿಯಾಗಿಲ್ಲ. ಪಂಡಿತರ ಬಗ್ಗೆ ವ್ಯಕ್ತಪಡಿಸುವ ಕಾಳಜಿಯನ್ನು ಅವರು ಮುಸ್ಲಿಮ್ ವಲಸಿಗರ ಬಗ್ಗೆ ವ್ಯಕ್ತಪಡಿಸುತ್ತಿಲ್ಲ. ಹೀಗೆ ಓರ್ವ ಪ್ರಧಾನಿಯ ನಿಲುವಿನಲ್ಲಿ ಇರಬೇಕಾದ ಸಂತುಲಿತತೆಯು ತನ್ನಲ್ಲಿಲ್ಲ ಎಂಬುದನ್ನು ಮೋದಿಯವರು ಅನೇಕ ಬಾರಿ ಸಾಬೀತುಪಡಿಸಿದ್ದಾರೆ. ಆದ್ದರಿಂದಲೇ, ಸುಭಾಶ್‍ಚಂದ್ರ ಬೋಸ್ ಮತ್ತು ಅವರ ಜೈ ಹಿಂದ್ ಘೋಷಣೆ ಮತ್ತೆ ಮತ್ತೆ ಪ್ರಸ್ತುತ ಎನಿಸುವುದು. ಸರ್ದಾರ್ ವಲ್ಲಭಾ ಭಾೈ ಪಟೇಲ್‍ರನ್ನು ಮೋದಿಯವರು ಅತ್ಯಂತ ಇಷ್ಟಪಡುತ್ತಾರೆ. ‘ಅವರು ಪ್ರಧಾನಿಯಾಗಿರುತ್ತಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು..’ ಎಂದು ಚುನಾವಣಾ ಭಾಷಣದಲ್ಲೂ ಹೇಳಿಕೊಂಡಿದ್ದಾರೆ. ಆದರೆ ಪಟೇಲ್‍ರು, ‘ಅಲ್ಪಸಂಖ್ಯಾತರಿಗಿರುವ ಶಾಸಕಾಂಗ ಸಭೆಗಳ ಸಮಿತಿಯ’ ಮುಖ್ಯಸ್ಥರಾಗಿದ್ದರು. ಭಾರತದ ಸಂವಿಧಾನವು ಶಿಕ್ಷಣ, ಸಂಸ್ಕøತಿ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಅಲ್ಪಸಂಖ್ಯಾತರಿಗೆ ನೀಡಿದ್ದರೆ ಅದರಲ್ಲಿ ಪಟೇಲ್‍ರ ಪಾತ್ರವೂ ಇದೆ. ಪಟೇಲ್‍ರಲ್ಲಿ ಭಿನ್ನ ವಿಚಾರಧಾರೆ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಗೌರವಿಸುವ ಗುಣವಿತ್ತು. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ಎದುರು, ‘ಅಲ್ಪಸಂಖ್ಯಾತ ಆಯೋಗ, ಬುಡಕಟ್ಟು ಆಯೋಗ, ಹಿಂದುಳಿದ ಜಾತಿ-ಜನಾಂಗಗಳ ಆಯೋಗ’ ಸಹಿತ ವಿವಿಧ ಆಯೋಗಗಳು ಮತ್ತು ಅವುಗಳ ಕಲ್ಯಾಣ ಕಾರ್ಯಕ್ರಮಗಳು ಚರ್ಚೆಗೆ ಬರಲಿವೆ. ಅಂಥ ಸಂದರ್ಭದಲ್ಲಿ ಪಟೇಲ್‍ರನ್ನು, ಸುಭಾಶ್‍ರನ್ನು ಅವರು ಗೌರವಿಸುತ್ತಾರೋ ಇಲ್ಲವೋ ಎಂಬ ಆತಂಕವೊಂದು ಸಹಜವಾಗಿ ನಿರ್ಮಾಣವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಇದ್ಯಾಗ್ಯೂ ಪಂಡಿತ್ ನೆಹರೂ ಅವರು ಷಣ್ಮುಗಂ ಚೆಟ್ಟಿ, ಜಾನ್ ಮಥಾಯಿ, ಕೆ.ಎಲ್. ರಾವ್, ದೇಶ್‍ಮುಖ್ ಮುಂತಾದ ರಾಜಕಾರಣಿಯೂ ಅಲ್ಲದ ಕಾಂಗ್ರೆಸಿಗರೂ ಅಲ್ಲದ ವ್ಯಕ್ತಿಗಳನ್ನು ತನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಭಿನ್ನ ವಿಚಾರಧಾರೆಯನ್ನು ಗೌರವಿಸಿದ್ದರು. ಭಾರತದಂತಹ ವೈವಿಧ್ಯತೆಯುಳ್ಳ ದೇಶದಲ್ಲಿ ಒಂದೇ ಸಂಸ್ಕøತಿ, ಒಂದೇ ಧರ್ಮ, ಒಂದೇ ವಿಚಾರಧಾರೆಯನ್ನು ಮಾತ್ರ ಪ್ರತಿನಿಧಿಸುವ ಮತ್ತು ಅವಲ್ಲದವುಗಳನ್ನು ದ್ವೇಷಿಸುವ ವಾತಾವರಣ ಸೃಷ್ಟಿಯಾಗಬಾರದೆಂಬುದೇ ಇದರ ಉದ್ದೇಶವಾಗಿತ್ತು. ಪೂರ್ಣ ಬಹುಮತದೊಂದಿಗೆ ಆಯ್ಕೆಯಾಗಿರುವ ಮೋದಿಯವರಲ್ಲಿ ಇಂಥದ್ದೊಂದು ವೈಶಾಲ್ಯತೆ ಇರಬೇಕೆಂಬುದು ಭಾರತೀಯರ ಆಸೆ. ಅಷ್ಟಕ್ಕೂ, ಬಿಜೆಪಿಗೆ ಈ ಬಾರಿ ಚಲಾವಣೆಯಾಗಿರುವ ಒಟ್ಟು ಮತಗಳು 31%. ಅದಕ್ಕೆ ವಿರುದ್ಧವಾಗಿ 69% ಮತಗಳು ಚಲಾವಣೆಯಾಗಿವೆ. ಬಿಜೆಪಿಗೆ ಪೂರ್ಣ ಬಹುಮತ ದೊರಕಿದ್ದರೂ ಆ ಪಕ್ಷವನ್ನು ಒಪ್ಪದವರ ಸಂಖ್ಯೆ ಒಪ್ಪಿದವರಿಗಿಂತ ಎರಡು ಪಟ್ಟು ಅಧಿಕ ಇದೆ ಎಂಬುದು ಮೋದಿಯವರನ್ನು ಸದಾ ನೆನಪಿಸುತ್ತಿರಬೇಕು. ಈ 69% ಮಂದಿಯನ್ನು ತನ್ನ ಬೆಂಬಲಿಗರಾಗಿ ಪರಿವರ್ತಿಸಿಕೊಳ್ಳುವಂತಹ ನಡೆ ಮತ್ತು ನುಡಿಯನ್ನು ಅವರು ತೋರ್ಪಡಿಸಬೇಕು. ವಿಷಾದ ಏನೆಂದರೆ, ಅವರ ಈ ವರೆಗಿನ ನಡೆ ಮತ್ತು ನುಡಿಗಳು ಇಂಥದ್ದೊಂದು ನಿರೀಕ್ಷೆಗೆ ಪೂರಕವಾಗಿಲ್ಲ. ಆದರೂ ಪ್ರಧಾನಿ ಮೋದಿಯು ಮುಖ್ಯಮಂತ್ರಿ ಮೋದಿಯಂತೆ ಆಗಿರಬೇಕಿಲ್ಲ ಎಂಬ ನಿರೀಕ್ಷೆಯನ್ನು ಇದರ ಜೊತೆಗೇ ಇಟ್ಟುಕೊಳ್ಳಬೇಕಾಗಿದೆ.
 'ಒಂದು ಕೈಯಲ್ಲಿ ಕುರ್‍ಆನ್ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ್‍ಟಾಪ್' (ಶಿಕ್ಷಣ) ಅನ್ನು ನೀಡುವುದಾಗಿ ಮೋದಿಯವರು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರಿಗೆ ಭರವಸೆ ಕೊಟ್ಟಿದ್ದರು. ಕೇಳಲು ತುಂಬಾ ಇಂಪಾಗಿರುವ ಮತ್ತು ಪರವಶತೆಗೆ ಒಳಪಡಿಸುವ ಈ ಭರವಸೆಯನ್ನು ಮುಸ್ಲಿಮರು ಅಷ್ಟೇ ಉತ್ಸಾಹದಿಂದ ಸ್ವೀಕರಿಸದೇ ಇದ್ದುದಕ್ಕೆ ಕಾರಣ ಮೋದಿಯವರ ಬೆಂಬಲಿಗರಾಗಿದ್ದರು. ಈ ಬೆಂಬಲಿಗರ ವರ್ತನೆಗಳು ಈ ಭರವಸೆಯನ್ನು ನಂಬುವುದಕ್ಕೆ ಪೂರಕ ಆಗಿಯೇ ಇರಲಿಲ್ಲ. ಅವರಲ್ಲಿ ಹೆಚ್ಚಿನವರು ಕುರ್‍ಆನ್‍ನ ಮೇಲೆ ಗೌರವವನ್ನೇ ಹೊಂದಿಲ್ಲ. ಭಗವದ್ಗೀತೆಯನ್ನು ಮುಸ್ಲಿಮರು ಎಷ್ಟು ಗೌರವಿಸಬೇಕೆಂದು ಅವರು ಬಯಸುತ್ತಾರೋ ಅಂಥದ್ದೊಂದು ಗೌರವವನ್ನು ಅವರಿಂದ ಮುಸ್ಲಿಮರೂ ಬಯಸುತ್ತಾರೆ. ಆದರೆ, ಕುರ್‍ಆನಿನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅದನ್ನು ಹೀನಾಯಗೊಳಿಸುತ್ತಿರುವುದು ಈ ಬೆಂಬಲಿಗರೇ. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಯನ್ನು ಅಪಹಾಸ್ಯಕ್ಕೆ ಒಳಪಡಿಸುತ್ತಿರುವುದೂ ಅವರೇ. ಸಾಚಾರ್ ಸಮಿತಿಯು ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿಯನ್ನು ದೇಶದ ಮುಂದಿಟ್ಟಾಗ ನ್ಯಾಯಮೂರ್ತಿ ರಾಜಿಂದರ್ ಸಾಚಾರ್‍ರನ್ನೇ ‘ಮುಸ್ಲಿಮ್' ಎಂಬಂತೆ ಚಿತ್ರಿಸಿ ಇಡೀ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದ್ದೂ ಅವರೇ. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಗೆ ಅವರು ಮುಸ್ಲಿಮರನ್ನೇ ಹೊಣೆಯೆಂದು ವಾದಿಸುತ್ತಿದ್ದಾರೆ. ಅವರಿಗೆ ನೀಡಲಾಗುವ ಸ್ಕಾಲರ್‍ಶಿಪ್ ಅನ್ನು ಸ್ವತಃ ಮೋದಿಯವರೇ ಗುಜರಾತ್‍ನಲ್ಲಿ ತಡೆಹಿಡಿದಿದ್ದಾರೆ. ಹೀಗಿರುವಾಗ, ಮೋದಿಯವರ ಕುರ್‍ಆನ್ ಮತ್ತು ಲ್ಯಾಪ್‍ಟಾಪ್ ಘೋಷಣೆಯಲ್ಲಿ ಮುಸ್ಲಿಮರು ನಂಬಿಕೆ ಇರಿಸುವುದಾದರೂ ಹೇಗೆ? ಅವರ ಬೆಂಬಲಿಗರ ಒಂದು ಕೈಯಲ್ಲಿ ಮುಸ್ಲಿಮ್ ದ್ವೇಷದ ಸಿಡಿ ಮತ್ತು ಇನ್ನೊಂದು ಕೈಯಲ್ಲಿ ಬೆದರಿಕೆಯ ಆಯುಧ ಇರುವಾಗ ಆ ಘೋಷಣೆಯನ್ನು ಮುಸ್ಲಿಮರು ಏನೆಂದು ಪರಿಗಣಿಸಿಯಾರು?
    ಏನೇ ಆಗಲಿ, ಚಾಯ್‍ವಾಲಾ ಮೋದಿಯವರು ಈ ದೇಶದ ಪ್ರಧಾನಿಯಾಗುವುದನ್ನು ನಾವೆಲ್ಲ ತುಂಬು ಹೃದಯದಿಂದ ಗೌರವಿಸಬೇಕಾಗಿದೆ. ಟೀ ಮಾರಾಟ ಮಾಡಿದ ವ್ಯಕ್ತಿ ಈ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುವುದು ಆ ಕೆಲಸದ ಗೌರವವನ್ನು ಹೆಚ್ಚಿಸುತ್ತದೆ. ಗುಜರಿ, ವಿೂನು, ಟೀ ಮಾರಾಟದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿರುವ ಮುಸ್ಲಿಮರ ಮಟ್ಟಿಗೆ, ಚಾಯ್‍ವಾಲಾ ಮೋದಿ ಆತಂಕ ಮತ್ತು ನಿರೀಕ್ಷೆ ಎರಡರ ಸಂಕೇತವೂ ಆಗಿದ್ದಾರೆ. ಮೋದಿಯವರು ಈ ಆತಂಕವನ್ನು ದೂರ ಮಾಡಿ ನಿರೀಕ್ಷೆಯನ್ನು ನಿಜವಾಗಿಸಲಿ ಹಾಗೂ ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್‍ನ ವೈಶಾಲ್ಯತೆಯನ್ನು ಅಳವಡಿಸಿಕೊಳ್ಳಲಿ ಎಂದೇ ಹಾರೈಸೋಣ.

No comments:

Post a Comment