Wednesday 28 May 2014

ಹೀಗೆ ಮೋದಿಯವರು ಮತ್ತೆ ಮತ್ತೆ ಸುಳ್ಳಾಗಿಸುತ್ತಲೇ ಹೋಗಲಿ...

   ಬಿಜೆಪಿಗೆ ಚಲಾವಣೆಯಾದ ಒಟ್ಟು ಓಟುಗಳಲ್ಲಿ ಒಂದು ಓಟು ತಿರುಗಿಬಿದ್ದಿದೆ. ಆ ಓಟಿನ ಹೆಸರು ಧರ್ಮಾವತಿ. ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇತ್ತ ಉತ್ತರ ಪ್ರದೇಶದ ಮಥುರಾದಲ್ಲಿ ಧರ್ಮಾವತಿ ಎಂಬ ವಿಧವೆ ನಿರಶನ ಕೈಗೊಂಡಿದ್ದರು. ಮೋದಿಯವರ ಮಾತಿನಿಂದ ಪ್ರಭಾವಿತಗೊಂಡ ಅಸಂಖ್ಯ ಮಹಿಳೆಯರಲ್ಲಿ ಈಕೆಯೂ ಒಬ್ಬರು. ಕಾಶ್ಮೀರದ ಪೂಂಚ್ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಧರ್ಮಾವತಿಯವರ ಪತಿ ಹೇಮರಾಜ್‍ರನ್ನು 2013 ಜನವರಿ 8ರಂದು ಪಾಕ್ ಸೇನೆಯು ಹತ್ಯೆ ಮಾಡಿ ರುಂಡವನ್ನು ಹೊತ್ತೊಯ್ದಿತ್ತು. ಅಂದಿನಿಂದ ಇಂದಿನವರೆಗೆ ಪತಿಯ ರುಂಡಕ್ಕಾಗಿ ಧರ್ಮಾವತಿ ಕಾಯುತ್ತಿದ್ದಾರೆ. ಈ ಕ್ರೌರ್ಯಕ್ಕೆ ಕಾರಣವಾದ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಾ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೇಮರಾಜ್‍ರ ಹತ್ಯೆಯ ಕುರಿತಂತೆ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದರು. ಈ ವಿಷಯದಲ್ಲಿ ಮನ್‍ಮೋಹನ್ ಸಿಂಗ್ ಸರಕಾರದ ನಿಲುವನ್ನು ಅವರು ತೀವ್ರ ತರಾಟೆಗೂ ಎತ್ತಿಕೊಂಡಿದ್ದರು. ಮಾತ್ರವಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕ್‍ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಪತಿಯ ರುಂಡ ಕತ್ತರಿಸಿದ ಪಾಕ್‍ನ ಪ್ರಧಾನಿಯನ್ನೇ ತನ್ನ ಪ್ರಮಾಣ ವಚನಕ್ಕೆ ಮೋದಿ ಆಹ್ವಾನಿಸಿರುವುದು ಧರ್ಮಾವತಿಯನ್ನು ಸಿಟ್ಟಿಗೆಬ್ಬಿಸಿದೆ. ಮೋದಿಯವರನ್ನು ನಂಬಿ ಕೆಟ್ಟೆ ಅನ್ನುವ ಭಾವದಲ್ಲಿ ಆಕೆ ಮೇ 26ರಂದು ನಿರಶನ ಕೈಗೊಂಡಿದ್ದಾರೆ.
 ಆದರೂ, ಧರ್ಮಾವತಿಯ ನೋವು, ದುಗುಡ, ಆಕ್ರೋಶವನ್ನು ಗೌರವಿಸುತ್ತಲೇ ನಾವು ಮೋದಿಯವರ ನಡೆಯನ್ನು ಸ್ವಾಗತಿಸಬೇಕಾಗಿದೆ. ಪಾಕ್ ಪ್ರಧಾನಿ ನವಾಝ್ ಶರೀಫ್‍ರನ್ನು ಆಹ್ವಾನಿಸುವ ಮೂಲಕ ಚುನಾವಣಾ ರಾಜಕೀಯಕ್ಕೂ ವಾಸ್ತವ ರಾಜಕೀಯಕ್ಕೂ ನಡುವೆ ಇರುವ ಸೂಕ್ಷ್ಮ  ವ್ಯತ್ಯಾಸವನ್ನು ನರೇಂದ್ರ ಮೋದಿಯವರು ಸ್ಪಷ್ಟಪಡಿಸಿದ್ದಾರೆ. ಧರ್ಮಾವತಿ ಮುಗ್ಧೆ. ಯೌವನದಲ್ಲೇ ಪತಿಯನ್ನು ಕಳಕೊಂಡ ಆಕೆಯ ಪಾಲಿಗೆ ಪಾಕ್ ಅತಿದೊಡ್ಡ ಶತ್ರು. ಈ ಶತ್ರುವಿಗೆ ಪಾಠ ಕಲಿಸುವುದಕ್ಕಾಗಿ ಆಕೆಯ ಎದುರು ಹಲವು ಆಯ್ಕೆಗಳಿರಬಹುದು. ಪಾಕ್‍ಗೆ ಬಾಂಬ್ ಹಾಕುವುದು, ಸೇನಾ ದಾಳಿ, ಪಾಕ್‍ನೊಂದಿಗೆ ಎಲ್ಲ ವಿಧದ ಸಂಬಂಧ ಕಡಿದುಕೊಳ್ಳುವುದು, ರುಂಡವನ್ನು ಮರಳಿಸುವ ವರೆಗೂ ರಾಜಕೀಯ ಸಂಬಂಧವನ್ನು ಮುರಿದು ಬಿಡುವುದು.. ಇತ್ಯಾದಿ. ಆದರೆ, ನರೇಂದ್ರ ಮೋದಿಯವರು ರಾಜಕಾರಣಿ. ಅವರು ಧರ್ಮಾವತಿಯಂತೆ ಆಲೋಚಿಸುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೇ ಪಾಕ್ ಪ್ರಧಾನಿ ನವಾಝ್ ಶರೀಫ್‍ರನ್ನು ಅವರು ಭಾರತಕ್ಕೆ ಆಹ್ವಾನಿಸಿದ್ದಾರೆ. ಒಂದು ದೇಶ ಅಭಿವೃದ್ದಿ ಪಥದಲ್ಲಿ ಸಾಗಬೇಕಾದರೆ ಮೊತ್ತಮೊದಲು ಆ ದೇಶದಲ್ಲಿ ಶಾಂತಿ ನೆಲೆಗೊಂಡಿರಬೇಕು. ಪಶ್ಚಿಮ ಮತ್ತು ಪೂರ್ವ ಜರ್ಮನಿಯಾಗಿ ವಿಭಜನೆಗೊಂಡಿದ್ದ ಜರ್ಮನಿಯು ಮತ್ತೆ ಏಕೀಕೃತಗೊಳ್ಳಲು ಇದುವೇ ಕಾರಣ. ಇವತ್ತು ಉತ್ತರ ಮತ್ತು ದಕ್ಷಿಣ ಕೊರಿಯಾಗಳ ನಡುವಿನ ದ್ವೇಷವು ಆ ಇಡೀ ವಲಯವನ್ನು ಅಶಾಂತಿಯೆಡೆಗೆ ದೂಡಿರುವುದು ಎಲ್ಲರಿಗೂ ಗೊತ್ತು. ಅಂದಹಾಗೆ, ಅನಕ್ಷರತೆ ಮತ್ತು ಬಡತನಗಳಿಂದ ಭಾರತ ಮತ್ತು ಪಾಕ್‍ಗಳೆರಡೂ ಇವತ್ತು ತೀವ್ರ ತೊಂದರೆಯನ್ನು ಅನುಭವಿಸುತ್ತಿವೆ. ಭಯೋತ್ಪಾದನೆಯು ಎರಡೂ ರಾಷ್ಟ್ರಗಳ ಮೇಲೆ ಅಪಾರ ಹಾನಿಯನ್ನು ತಂದೊಡ್ಡುತ್ತಿವೆ. ಇಂಥ ಹೊತ್ತಲ್ಲಿ ಎರಡೂ ರಾಷ್ಟ್ರಗಳು ಯುದ್ಧದ ಭಾಷೆಯಲ್ಲಿ ಮಾತಾಡುವುದು ಮತ್ತು ಗಡಿಯಲ್ಲಿ ಯುದ್ಧಸ್ಥಿತಿ ನಿರ್ಮಿಸುವುದರಿಂದ ಶಸ್ತ್ರಾಸ್ತ್ರ ಕಂಪೆನಿಗಳಿಗೆ ಲಾಭವಾಗಬಹುದೇ ಹೊರತು ಭಾರತ-ಪಾಕ್‍ಗಲ್ಲ. ಒಂದು ವೇಳೆ ಯುರೋಪಿಯನ್ ಯೂನಿಯನ್‍ನಂತೆ ಭಾರತ-ಪಾಕ್-ಬಾಂಗ್ಲಾ ಸೇರಿದಂತೆ ನೆರೆಕರೆ ರಾಷ್ಟ್ರಗಳು ಒಂದಾಗಲು ಮನಸ್ಸು ಮಾಡಿದರೆ, ಅದರಿಂದಾಗುವ ಲಾಭ ಅಪಾರವಾದದ್ದು. ಧರ್ಮಾವತಿಗೆ ಇದು ಗೊತ್ತಿಲ್ಲದಿದ್ದರೂ ಮೋದಿಯವರಿಗೆ ಇದು ಖಂಡಿತ ಗೊತ್ತಿರಬಹುದು. ಆದ್ದರಿಂದಲೇ, ನವಾಝ್ ಶರೀಫ್‍ರನ್ನು ಮೋದಿ ಆಹ್ವಾನಿಸಿದ್ದಾರೆ. ಯೋಧನ ರುಂಡ ಹೊತ್ತೊಯ್ದ ರಾಷ್ಟ್ರದ ಪ್ರಧಾನಿಯನ್ನು ಆಲಿಂಗಿಸಿದ್ದಾರೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಅಂದಿದ್ದ ಮೋದಿಯವರೇ ನವಾಝ್‍ರೊಂದಿಗೆ ಮಾತುಕತೆ ನಡೆಸಿದ್ದಾರೆ.
 ನಿಜವಾಗಿ, ಪಾಕ್ ಪ್ರಧಾನಿಯನ್ನು ಆಹ್ವಾನಿಸುವ ಮೂಲಕ ಮೋದಿಯವರು ಬಿಜೆಪಿ ಕಾರ್ಯಕರ್ತರಿಗೆ ಮೊದಲ ಶಾಕ್ ಅನ್ನು ನೀಡಿದ್ದಾರೆ. ಮೋದಿಯನ್ನು ಇವರೆಲ್ಲ ಯುದ್ಧದಾಹಿಯಂತೆ ಚಿತ್ರಿಸಿದ್ದರು. ಮೋದಿ ಪ್ರಧಾನಿಯಾದರೆ ಪಾಕ್‍ಗೆ ಬಾಂಬ್ ಹಾಕುವುದು ಖಚಿತ ಎಂಬಂತೆ ವರ್ತಿಸಿದ್ದರು. ಮೋದಿಯನ್ನು ಒಪ್ಪದವರು ಪಾಕಿಸ್ತಾನಕ್ಕೆ ಹೋಗಿ ಅನ್ನುವಷ್ಟರ ಮಟ್ಟಿಗೆ ಅವರು ಆವೇಶ ವ್ಯಕ್ತಪಡಿಸಿದ್ದರು. ಮನ್‍ಮೋಹನ್ ಸಿಂಗ್ ಸರಕಾರವು ಪಾಕ್ ಪ್ರಜೆ ಕಸಬ್‍ಗೆ ಬಿರಿಯಾನಿ ಕೊಟ್ಟು ಸಾಕುತ್ತಿದೆ, ಹೇಮ್‍ರಾಜ್‍ನ ರುಂಡ ಹೊತ್ತೊಯ್ದ ಪಾಕ್‍ನ ಮೇಲೆ ದಾಳಿ ಮಾಡದ ಏ.ಕೆ. ಆ್ಯಂಟನಿ ನಿರ್ವೀರ್ಯ ರಕ್ಷಣಾ ಮಂತ್ರಿ.. ಎಂದೆಲ್ಲಾ ಟೀಕಿಸಿದ್ದರು. ಆದರೆ ಇವತ್ತು ಪಾಕ್ ಪ್ರಧಾನಿ ನವಾಝ್ ಶರೀಫ್‍ರಿಗೇ ಬಿರಿಯಾನಿ ಉಣಿಸುವಷ್ಟು ಮೋದಿ ಉದಾರಿಯಾಗಿದ್ದಾರೆ. ದ್ವೇಷದ ಭಾಷೆಗಿಂತ ವಿಶ್ವಾಸ ತುಂಬುವ ನಡೆಗಳೇ ಹೆಚ್ಚು ಸೂಕ್ತ ಎಂಬ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ. ಆದರೆ, ಪಾಕ್‍ನ ವಿರುದ್ಧ ಸದಾ ಕೆಂಡದ ಮಾತುಗಳನ್ನೇ ಉದುರಿಸುವ ಶಿವಸೇನೆಯು ಮೋದಿಯವರ ನಿಲುವಿನ ಬಗ್ಗೆ ಯಾವ ಹೇಳಿಕೆಯನ್ನೂ ಹೊರಡಿಸಿಲ್ಲ. ಮನಮೋಹನ್ ಸಿಂಗ್‍ರ ಸರಕಾರದ ವಿದೇಶಾಂಗ ನಿಲುವನ್ನು ಕಟುವಾಗಿ ಟೀಕಿಸುತ್ತಿದ್ದ ಮತ್ತು ಪಾಕ್ ಕ್ರಿಕೆಟ್ ತಂಡ ಭಾರತಕ್ಕೆ ಬರದಂತೆ, ಅಲ್ಲಿನ ಕಲಾವಿದರ ತಂಡ ಭಾರತದಲ್ಲಿ ಕಾರ್ಯಕ್ರಮ ನಡೆಸದಂತೆ ತಡೆಯೊಡ್ಡುತ್ತಿದ್ದ ಶಿವಸೇನೆಯು ಇದ್ದಕ್ಕಿದ್ದಂತೆ ಮೌನವಾಗಿರುವುದೇಕೆ?
   ಏನೇ ಆಗಲಿ, 151ರಷ್ಟು ಭಾರತೀಯ ವಿೂನುಗಾರರು ಪಾಕ್ ಜೈಲಿನಿಂದ ಬಿಡುಗಡೆಗೊಳ್ಳುವುದಕ್ಕೆ ಕಾರಣವಾದ ನವಾಝ್ ಶರೀಫ್‍ರ ಭಾರತ ಭೇಟಿ ಮತ್ತು ಅದಕ್ಕೆ ಕಾರಣವಾದ ನರೇಂದ್ರ ಮೋದಿಯವರ ನಡೆಯನ್ನು ನಾವೆಲ್ಲ ಸ್ವಾಗತಿಸಲೇಬೇಕಾಗಿದೆ. ನರೇಂದ್ರ ಮೋದಿಯವರ ಕುರಿತಂತೆ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ಕೈಗೊಳ್ಳುವ ಸಕಾರಾತ್ಮಕ ನಡೆಗಳನ್ನು ನಾವು ಬೆಂಬಲಿಸಲೇಬೇಕು. ಈ ದೇಶ ಇವತ್ತು ಹತ್ತಾರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೇ ಮೋದಿ ಮತ್ತು ಅವರ ಪಕ್ಷವು ಹೇರಿರುವ ಭೀತಿಯ ಅಜೆಂಡಾಗಳೂ ಇವೆ.
ಮೋದಿ ಪ್ರಧಾನಿಯಾದರೆ ಮುಸ್ಲಿಮರ
ನ್ನು ವಿಶ್ವಾಸದಿಂದ ನಡೆಸಿಕೊಳ್ಳಲಾರರು ಎಂಬುದೂ ಈ ಭೀತಿಯ ಅಜೆಂಡಾಗಳಲ್ಲಿ ಒಂದು. ಆದರೆ ಪಾಕ್‍ನ ವಿಷಯದಲ್ಲಿ ಅವರು ಈ ಅನುಮಾನವನ್ನು ಸದ್ಯದ ಮಟ್ಟಿಗಾದರೂ ಸುಳ್ಳು ಮಾಡಿದ್ದಾರೆ. ಧರ್ಮಾವತಿಯವರಿಗೆ ಇದು ಇಷ್ಟವಾಗದಿದ್ದರೂ ಈ ದೇಶದ ಬಹುಸಂಖ್ಯಾತ ಮಂದಿ ಖಂಡಿತ ಮೋದಿಯವರನ್ನು ಈ ನಡೆಗಾಗಿ ಮೆಚ್ಚಿಕೊಂಡಾರು. ಮುಂದಿನ ದಿನಗಳಲ್ಲಿ ಮೋದಿಯವರಿಂದ ಇಂಥ ಇನ್ನಷ್ಟು ಸಕಾರಾತ್ಮಕ ನಡೆಗಳನ್ನು ಈ ದೇಶ ಖಂಡಿತ ನಿರೀಕ್ಷಿಸುತ್ತದೆ. ತನ್ನ ಸುತ್ತ ಈಗಾಗಲೇ ವ್ಯಕ್ತವಾಗಿರುವ ಮತ್ತು ವ್ಯಕ್ತವಾಗುತ್ತಿರುವ ಅನುಮಾನಗಳನ್ನೆಲ್ಲ ಪ್ರಧಾನಿ ಮೋದಿಯವರು ಹೀಗೆ ಸುಳ್ಳು ಮಾಡುತ್ತಲೇ ಹೋಗಲಿ ಮತ್ತು ಮುಸ್ಲಿಮ್ ದ್ವೇಷಿ ನಿಲುವನ್ನು ಹೊಂದಿರುವ ಅವರ ಕೆಲವು ಬೆಂಬಲಿಗರನ್ನು ಮತ್ತೆ ಮತ್ತೆ ನಿರಾಶೆಗೆ ಒಳಪಡಿಸುತ್ತಲೇ ಇರಲಿ ಎಂದೇ ಈ ಸಂದರ್ಭದಲ್ಲಿ ಹಾರೈಸಬೇಕಾಗಿದೆ.

No comments:

Post a Comment