Tuesday 28 October 2014

ಪ್ರಾಣಿಗಳು ತಯಾರಿಸುವ ಪಟ್ಟಿ ಮತ್ತು ಬಾಬಾ ರಾಮ್‍ದೇವ್

   ಆಸ್ಟ್ರೇಲಿಯಾದಿಂದ ಎರಡು ಸುದ್ದಿಗಳು ಹೊರಬಿದ್ದಿವೆ. ಎರಡು ಕೂಡ ಮನುಷ್ಯರಿಗೆ ಸಂಬಂಧಿಸಿದ್ದು. ಬಡಿತ ನಿಲ್ಲಿಸಿದ ಹೃದಯಕ್ಕೆ ಚೇತರಿಕೆ ನೀಡಿ ಅದನ್ನು ಮತ್ತೊಬ್ಬರಿಗೆ ಕಸಿ ಮಾಡಬಹುದು ಎಂಬುದನ್ನು ಅಲ್ಲಿನ ವೈದ್ಯರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ, ಹಾಗೆ ಕಸಿ ಮಾಡಿಸಿಕೊಂಡ ಮೂವರು ಹೃದ್ರೋಗಿಗಳು ಈಗ ಚೇತರಿಸುತ್ತಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನೂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೊಂದು ಸುದ್ದಿ ಕೂಡ ಅಲ್ಲಿಯದೇ. 13 ಮಿಲಿಯನ್ ವರ್ಷಗಳ ಮೊದಲು ಕಾಂಗರೂ ಪ್ರಾಣಿ ಮತ್ತು ಮನುಷ್ಯ ಮುಖಾಮುಖಿಯಾದ ಸುದ್ದಿಯದು. ಮನುಷ್ಯ ಆ ನಾಡನ್ನು ಪ್ರವೇಶಿಸುವ ಮೊದಲು ಕಾಂಗರೂಗಳು ನೆಗೆದು ಚಲಿಸುತ್ತಿರಲಿಲ್ಲ. ಮನುಷ್ಯನಂತೆಯೇ ನಡೆಯುತ್ತಿದ್ದುವು. ಅದು ಭಾರೀ ಗಾತ್ರ ಮತ್ತು ತೂಕವನ್ನು ಹೊಂದಿದ್ದುವು. ಆದರೆ ಮನುಷ್ಯನ ಪ್ರವೇಶವಾದ ಬಳಿಕ ಅವುಗಳು ನಿಧಾನಕ್ಕೆ ಅಳಿಯತೊಡಗಿದುವು. ಮನುಷ್ಯ ತನ್ನ ಸ್ವಾರ್ಥಕ್ಕೋ ದುರಾಸೆಗೋ ಅವುಗಳ ನಿರ್ನಾಮದಲ್ಲಿ ಸಕ್ರಿಯನಾದ. ಅಂತಿಮವಾಗಿ ಆ ಪ್ರಬೇಧವೇ ಅಳಿದು ಹೋಗಿ ಈಗಿನ ನೆಗೆಯುವ ಚಿಕ್ಕ ಗಾತ್ರದ ಕಾಂಗರೂಗಳು ಹೊಸ ರೂಪದಲ್ಲಿ ಜನ್ಮ ತಾಳಿದುವು ಎಂದು ವಿಜ್ಞಾನಿಗಳು ತಮ್ಮ ಸಂಶೋಧನಾ ವರದಿಯಲ್ಲಿ ವಿವರಿಸಿದ್ದಾರೆ.
 ನಿಜವಾಗಿ, ಮನುಷ್ಯ ಮತ್ತು ಪ್ರಾಣಿಗಳು ನಿತ್ಯ ಮುಖಾಮುಖಿಯಾಗಿಯೇ ಬದುಕುತ್ತಿವೆ. ಮಾತ್ರವಲ್ಲ, ಹೆಚ್ಚಿನೆಲ್ಲ ಮುಖಾಮುಖಿಗಳಲ್ಲಿ ಪ್ರಾಣಿಗಳು ಸೋಲನ್ನೊಪ್ಪಿಕೊಳ್ಳುತ್ತಲೂ ಇವೆ. ಪ್ರಾಣಿಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿಟ್ಟು ದುಡ್ಡು ಮಾಡುವವನೂ ಮನುಷ್ಯನೇ. ಬೃಹತ್ ಗಾತ್ರದ ಆನೆಗಳನ್ನು ಪಳಗಿಸಿ ತನ್ನ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುವವನೂ ಮನುಷ್ಯನೇ. ತನ್ನ ಸಂವಹನಕ್ಕಾಗಿ ಮೊಬೈಲ್ ಟವರ್‍ಗಳನ್ನು ನಿಲ್ಲಿಸಿ ಹಕ್ಕಿ ಸಂಕುಲಗಳನ್ನು ನಾಶ ಮಾಡುತ್ತಿರುವವನೂ ಮನುಷ್ಯನೇ. ಪ್ರಾಣಿಗಳು ಇವತ್ತಿನ ಜಗತ್ತಿನಲ್ಲಿ ಮನರಂಜನೆಗೆ ಬಳಕೆಯಾಗುತ್ತಿವೆ. ಅವುಗಳನ್ನು ಎದುರು-ಬದುರು ನಿಲ್ಲಿಸಿ ಹೊಡೆದಾಡಿಸಲಾಗುತ್ತದೆ. ಸ್ಪರ್ಧೆಗೆ ಕಟ್ಟಿ ಜೂಜು ನಡೆಸಲಾಗುತ್ತದೆ. ಜಲ್ಲಿಕಟ್ಟು, ಕೋಳಿಕಟ್ಟು, ಕಂಬಳಗಳಲ್ಲಿ ಅವು ಮನುಷ್ಯನ ಬಯಕೆಯಂತೆ ಓಡುತ್ತವೆ, ಕಾದಾಡುತ್ತವೆ, ಸಾಯುತ್ತವೆ. ಆದರೆ ಇದಕ್ಕೆ ಭಿನ್ನವಾದ ವಾತಾವರಣವೊಂದನ್ನು ಹುಟ್ಟು ಹಾಕಲು ಪ್ರಾಣಿಗಳಿಗೆ ಈ ವರೆಗೆ ಸಾಧ್ಯವಾಗಿಲ್ಲ. ಅವು ಮನುಷ್ಯನನ್ನು ಕೂಡಿ ಹಾಕುವ ಮನುಷ್ಯ ಸಂಗ್ರಹಾಲಯವನ್ನು ಸ್ಥಾಪಿಸಿಲ್ಲ. ಜಲ್ಲಿಕಟ್ಟು, ಕಂಬಳಗಳನ್ನು ಮನುಷ್ಯನಿಗಾಗಿ ಹುಟ್ಟು ಹಾಕಿಲ್ಲ. ಆತನನ್ನು ಎತ್ತಿಕೊಂಡು ಸರ್ಕಸ್ ಕಂಪೆನಿಯನ್ನೋ ಹೊಡೆದಾಟದ ಪಂದ್ಯಗಳನ್ನೋ ಅವು  ಏರ್ಪಡಿಸಿಲ್ಲ. ಒಂದು ವೇಳೆ,  ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಪ್ರಕೃತಿಯು ಪ್ರಾಣಿ ಜಗತ್ತಿಗೂ ಅನುಗ್ರಹಿಸಿರುತ್ತಿದ್ದರೆ ಪ್ರಪಂಚದ ಸ್ಥಿತಿ-ಗತಿಗಳು ಹೇಗಿರುತ್ತಿತ್ತು? ಮನುಷ್ಯನನ್ನು ಯಾವ ಪ್ರಾಣಿ ಯಾವೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತಿತ್ತು?
 ದುರಂತ ಏನೆಂದರೆ, ಮನುಷ್ಯ ಪ್ರಾಣಿಲೋಕವನ್ನು ಮಾತ್ರ ಮುಖಾಮುಖಿಗೊಳ್ಳುತ್ತಿರುವುದಲ್ಲ. ಆತ/ಕೆ ಪ್ರತಿದಿನ ಮನುಷ್ಯರನ್ನೂ ಮುಖಾಮುಖಿಯಾಗುತ್ತಿರುತ್ತಾನೆ. ಇಲ್ಲಿ ಪ್ರತಿಭಾವಂತರು, ಬುದ್ಧಿವಂತರು, ಕೋಮುವಾದಿಗಳು, ವಂಚಕರು, ಕ್ರೂರಿಗಳು, ಜನಾಂಗ ದ್ವೇಷಿಗಳು.. ಮುಂತಾದ ಅನೇಕ ರೀತಿಯ ಮನುಷ್ಯರಿದ್ದಾರೆ. ಮನುಷ್ಯ ಜಗತ್ತಿನ ದೌರ್ಬಲ್ಯ ಏನೆಂದರೆ, ಮನುಷ್ಯರ ನಡುವೆ ಇಷ್ಟೆಲ್ಲ ವಿಭಾಗಗಳಿದ್ದರೂ ಅವುಗಳನ್ನು ಪತ್ತೆ ಹಚ್ಚುವುದಕ್ಕೆ ಸರಿಯಾದ ಹೆಸರುಗಳಿಲ್ಲ ಎಂಬುದು. ಪ್ರಾಣಿ ಜಗತ್ತಿನಲ್ಲಿರುವ ಕ್ರೂರ ಪ್ರಾಣಿಗಳ ಬಗ್ಗೆ ಪ್ರಸ್ತಾಪವಾದ ಕೂಡಲೇ ಚಿರತೆ, ಹುಲಿ, ಸಿಂಹ, ಕರಡಿ ಮುಂತಾದ ಹೆಸರುಗಳು ಮುಂದೆ ಬರುತ್ತವೆ. ಹಾಗೆಯೇ ಬುದ್ಧಿವಂತ ಪ್ರಾಣಿ, ಸಾಧು ಪ್ರಾಣಿಗಳ ಪ್ರಸ್ತಾಪವಾದಾಗಲೂ ಕೆಲವು ಪ್ರಾಣಿಗಳು ನಮ್ಮ ಮುಂದೆ ಸುಳಿದಾಡುತ್ತವೆ. ಆದರೆ ಮನುಷ್ಯರಲ್ಲಿ ಭ್ರಷ್ಟ ಮನುಷ್ಯ, ಕೋಮುವಾದಿ ಮನುಷ್ಯ, ಕ್ರೂರಿ ಮನುಷ್ಯ... ಎಂದು ಮುಂತಾಗಿ ಪ್ರತ್ಯೇಕವಾಗಿ ಗುರುತಿಸಿಬಿಡುವುದಕ್ಕೆ ಯಾವ ಏರ್ಪಾಡುಗಳೂ ಇಲ್ಲ. ಮನುಷ್ಯರಲ್ಲಿ ಹುಲಿಯಂಥ ಮನುಷ್ಯ, ಚಿರತೆಯಂಥವ, ನರಿಯಂಥ ಮನುಷ್ಯ ಖಂಡಿತ ಇದ್ದಾರೆ. ಆದರೂ ಅವರು ಆ ಗುರುತನ್ನು ಮರೆಮಾಚಿಕೊಂಡು ಮನುಷ್ಯರ ಗುಂಪಿನಲ್ಲಿ ಸಹಜವಾಗಿ ಇದ್ದುಬಿಡುತ್ತಾರೆ. ಅಣ್ಣಾ ಹಜಾರೆ, ಬಾಬಾ ರಾಮ್‍ದೇವ್, ಸತ್ಯಾರ್ಥಿ, ಹಿರೇಮಠ್, ಮೋದಿ, ಮನ್‍ಮೋಹನ್ ಸಿಂಗ್, ಉಮಾ ಭಾರತಿ, ಮಮತಾ ಬ್ಯಾನರ್ಜಿ.. ಇವರೆಲ್ಲ ಮನುಷ್ಯರೇ. ಆದರೆ ಹುಲಿ, ಜಿಂಕೆ, ಇಲಿ, ಚಿರತೆಗಳನ್ನು ಅವುಗಳ ಸ್ವಭಾವಕ್ಕನುಗುಣವಾಗಿ ಹೆಸರಿಸಿದಂತೆ ಇವರನ್ನೂ ಹೆಸರಿಸಬಯಸಿದರೆ ಇವರೆಲ್ಲರೂ ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳಬೇಕಾದೀತು. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ‘ಕಪ್ಪು ಹಣ'ಕ್ಕಾಗಿ ಧರಣಿ ಕೂತ ಬಾಬಾ ರಾಮ್‍ದೇವ್‍ರನ್ನೇ ಎತ್ತಿಕೊಳ್ಳಿ. ಮನ್‍ಮೋಹನ್ ಸಿಂಗ್‍ರ ಸರಕಾರವನ್ನು ಅವರು ಯಾವೆಲ್ಲ ಪದಗಳಿಂದ ಟೀಕಿಸುತ್ತಿದ್ದರು? ಕಪ್ಪು ಹಣವನ್ನು ವಾಪಾಸು ಪಡೆಯುವುದರಿಂದ ಈ ದೇಶದಲ್ಲಿ ಆಗಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಷ್ಟೆಲ್ಲ ಮಾತಾಡಿದ್ದರು? ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತರಿಸದೇ ಹೋರಾಟ ಕಣದಿಂದ ವಿರಮಿಸುವುದಿಲ್ಲ ಎಂದು ಹೇಳಿದ್ದೂ ಅವರೇ. ತನ್ನ ಹೋರಾಟ ಬರೇ ದೇಶಹಿತದಿಂದ ರೂಪುಗೊಂಡಿದ್ದೇ ಹೊರತು ಇದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೊಂಡದ್ದೂ ಅವರೇ. ಆದರೆ, ಮೋದಿ ಸರಕಾರ ರಚನೆಯಾದಂದಿನಿಂದ ಅವರು ಹೋರಾಟ ಕಣದಲ್ಲಿ ಕಾಣಿಸಿಕೊಂಡೇ ಇಲ್ಲ. ಕಪ್ಪು ಹಣದ ವಿಷಯದಲ್ಲಿ ಮನ್‍ಮೋಹನ್ ಸರಕಾರದ ನಿಲುವನ್ನೇ ಮೋದಿ ಸರಕಾರ ತೋರುತ್ತಿರುವಾಗಲೂ ಅವರು ಮೌನ ಮುರಿಯುತ್ತಿಲ್ಲ. ಏನಿದರ ಅರ್ಥ? ಅವರ ಗುರಿ ಇದ್ದುದು ಕಪ್ಪು ಹಣದ ವಾಪಾಸಿನ ಮೇಲೋ ಅಥವಾ ಮನ್‍ಮೋಹನ್ ಸರಕಾರದ ಮೇಲೋ? ಅಷ್ಟಕ್ಕೂ, ಕಪ್ಪು ಹಣದ ವಿಷಯದಲ್ಲಿ ಅವರು ಕೇವಲ ಮಾತಾಡಿದ್ದಲ್ಲ. ರಾಮ್‍ಲೀಲಾ ಮೈದಾನದಲ್ಲಿ ಒಂದು ಜನಸಮೂಹವನ್ನು ಸೇರಿಸಿದ್ದರು. ಒಂದು ವೇಳೆ ತನ್ನ ಹೋರಾಟ ಮೋದಿಯವರನ್ನು ಅಧಿಕಾರಕ್ಕೇರಿಸುವುದೇ ಹೊರತು ಕಪ್ಪು ಹಣದ ವಾಪಸಲ್ಲ ಎಂದು ಹೇಳಿರುತ್ತಿದ್ದರೆ, ಅಂದು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಖಂಡಿತ ಸಾಧ್ಯವಿರಲಿಲ್ಲ. ಒಂದು ರೀತಿಯಲ್ಲಿ, ಅವರು ಹೊರಗೊಂದು ಮನುಷ್ಯರಾಗಿದ್ದುಕೊಂಡೇ ಒಳಗೊಂದು ಮನುಷ್ಯರೂ ಆಗಿದ್ದರು. ಹೊರಗಿನ ಮನುಷ್ಯ ಎಷ್ಟು ಸಾಧುವೋ ಅಷ್ಟೇ ಒಳಗಿನ ಮನುಷ್ಯ ವಂಚಕನಾಗಿದ್ದ. ಆದರೆ ಸೇರಿದ ಮಂದಿಗೆ ಹೊರಗಿನ ಮನುಷ್ಯನಷ್ಟೇ ಗೋಚರಿಸುತ್ತಿದ್ದ.
 ಒಂದು ಕಡೆ, ಮನುಷ್ಯನ ಬೌದ್ಧಿಕ ಸಾಮರ್ಥ್ಯವು ವಿಕಸಿಸುತ್ತಲೇ ಇದೆ. ಬಡಿತ ನಿಲ್ಲಿಸಿದ ಹೃದಯಕ್ಕೆ ಚೇತರಿಕೆ ಕೊಡುವಷ್ಟು ಆತ ಪ್ರತಿಭಾವಂತ. ಅದರ ಜೊತೆಗೇ ಅತ್ಯಂತ ಅವಿಕಸಿತ ಆಲೋಚನೆಗಳನ್ನೂ ಪೂರ್ವಗ್ರಹಗಳನ್ನೂ ಪೋಷಿಸಿಕೊಂಡು ಬರುತ್ತಿರುವವನೂ ಈತನೇ/ಈಕೆಯೇ. ಬುದ್ಧಿವಂತ ಪ್ರಾಣಿಯಾದ ಮನುಷ್ಯನ ಈ ದೌರ್ಬಲ್ಯಗಳೇ ಇವತ್ತು ರಕ್ತಪಾತಕ್ಕೂ ಮೌಲ್ಯಪತನಕ್ಕೂ ಕ್ರೌರ್ಯಕ್ಕೂ ಕಾರಣವಾಗಿದೆ. ಒಂದು ವೇಳೆ ಸ್ವಭಾವಕ್ಕೆ ಅನುಗುಣವಾಗಿ ಮನುಷ್ಯರಿಗೆ ಹೆಸರು ಕೊಡುವ ಹೊಣೆಯನ್ನು ಪ್ರಾಣಿ ಜಗತ್ತು ವಹಿಸಿಕೊಂಡಿರುತ್ತಿದ್ದರೆ ಬಾಬಾ ರಾಮ್‍ದೇವ್‍ರಿಗೆ ಅವು ಕೊಡಬಹುದಾದ ಹೆಸರು ಏನಾಗಿರುತ್ತಿತ್ತು? ‘ಕಪಟ ಪ್ರಾಣಿ'ಗಳು ಎಂಬೊಂದು ವಿಭಾಗವನ್ನು ತಯಾರಿಸಿ ಅದರಲ್ಲಿ ಮೊದಲ ಹೆಸರಾಗಿ ಅವರನ್ನೇ ನಮೂದಿಸುತ್ತಿತ್ತೋ ಏನೋ.

No comments:

Post a Comment