Thursday 24 December 2015

ಸಮಸ್ಯೆ ವಯಸ್ಸಿನದ್ದೋ ವಾತಾವರಣದ್ದೋ?

      ಅಪ್ರಾಪ್ತ ವಯಸ್ಸಿನ ಅಪರಾಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅತ್ಯಾಚಾರದಲ್ಲಿ ಭಾಗಿಯಾದ ಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವಾಗ, ಅದೇ ಅತ್ಯಾಚಾರದಲ್ಲಿ ಭಾಗಿಯಾದವನನ್ನು ಅಪ್ರಾಪ್ತನೆಂಬ ನೆಲೆಯಲ್ಲಿ ಬಿಡುಗಡೆಗೊಳಿಸುವುದು ಎಷ್ಟು ಸಮರ್ಥನೀಯ? ಅದು ತಪ್ಪು ಸಂದೇಶವನ್ನು ರವಾನಿಸದೆ? ಅಪ್ರಾಪ್ತರಲ್ಲಿ ಹುಂಬ ಧೈರ್ಯವನ್ನು ತುಂಬದೇ? ಹಾಗಂತ, ಇದಕ್ಕೆ ಪರಿಹಾರ ಏನು? ಅಪ್ರಾಪ್ತ ವಯಸ್ಸಿನ ಮಿತಿಯನ್ನು ಈಗಿನ 18ರಿಂದ 16ಕ್ಕೋ 14ಕ್ಕೊ ಇಳಿಸುವುದು ಸೂಕ್ತವೇ? ಹಾಗೆ ಮಾಡುವುದರಿಂದ ಹಸುಳೆಗಳನ್ನು ಪ್ರೌಢರೊಂದಿಗೆ ಸಮಗೊಳಿಸಿದಂತಾಗದೆ? 16 ವರ್ಷದ ಎಳೆಯನೂ 50 ವರ್ಷದ ಪ್ರೌಢನೂ ಒಂದೇ ರೀತಿಯೇ? ತಿಳುವಳಿಕೆ, ಬುದ್ಧಿಮತ್ತೆ, ಸರಿ-ತಪ್ಪುಗಳ ಪ್ರಜ್ಞೆ ಎಲ್ಲದರಲ್ಲೂ ಇವರ ಮಧ್ಯೆ ಆಳ ವ್ಯತ್ಯಾಸ ಇರುವಾಗ ಇವರನ್ನು ಒಂದೇ ಕ್ರಿಮಿನಲ್ ನ್ಯಾಯ ಪ್ರಕ್ರಿಯೆಯೊಳಗೆ ತರುವುದು, ಒಟ್ಟಿಗೆ ಕಟಕಟೆಯಲ್ಲಿ ನಿಲ್ಲಿಸುವುದು ಮತ್ತು ಸಮಾನ ಜೈಲಿನಲ್ಲಿಡುವುದು ಸಮರ್ಥನೀಯವೇ? ಎಳೆಯನ ಮಟ್ಟಿಗೆ ಇದು ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡದ ಏಕಮುಖ ಕ್ರೌರ್ಯವಾಗಬಹುದೇ... ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ದೆಹಲಿಯ ಇಂಡಿಯಾ ಗೇಟ್ ಮತ್ತೊಮ್ಮೆ ವೇದಿಕೆ ಒದಗಿಸಿದೆ. `ನಿರ್ಭಯ' ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ 2012ರಲ್ಲಿ ಇಂಡಿಯಾ ಗೇಟ್‍ನಲ್ಲಿ ಪ್ರತಿಭಟನೆ ಆರಂಭಗೊಂಡಿತ್ತು. ಆ ಪ್ರತಿಭಟನೆ ಆ ಬಳಿಕ ಎಷ್ಟು ತೀವ್ರತೆಯನ್ನು ಪಡಕೊಂಡಿತ್ತೆಂದರೆ, ದೇಶವನ್ನು ಒಂದು ಚಳವಳಿಯಾಗಿ ಆವರಿಸಿಬಿಟ್ಟಿತು. ಸರಕಾರವೇ ಪ್ರತಿಭಟನೆಗೆ ಶರಣಾಗಿ, ಅತ್ಯಾಚಾರ ವಿರೋಧಿ ಕಾನೂನನ್ನು ರೂಪಿಸುವಷ್ಟು ಅದು ಪರಿಣಾಮಕಾರಿಯಾಯಿತು. ಇದೀಗ ಮತ್ತೊಮ್ಮೆ ಇಂಡಿಯಾ ಗೇಟ್ ಸದ್ದು ಮಾಡಿದೆ. ಆ ಪ್ರಕರಣದ ಬಾಲಾಪರಾಧಿ ಜೈಲಿನಿಂದ ಹೊರಬಂದಿರುವುದನ್ನು ಪ್ರತಿಭಟಿಸಿ ಜನರು ಇಂಡಿಯಾ ಗೇಟ್‍ನ ಬಳಿ ನೆರೆದಿದ್ದಾರೆ. ನಿರ್ಭಯಾಳ ತಾಯಿ ಆಶಾದೇವಿ ಮತ್ತು ತಂದೆ ಬದ್ರಿ ಸಿಂಗ್ ಪ್ರತಿಭಟನೆಯಲ್ಲಿ ಪಾಲುಗೊಂಡಿದ್ದಾರೆ. ಆತನನ್ನು ಬಿಡುಗಡೆಗೊಳಿಸಬಾರದೆಂದು ಅವರೆಲ್ಲ ಒತ್ತಾಯಿಸುತ್ತಿದ್ದಾರೆ. ಒಂದು ರೀತಿಯಲ್ಲಿ, ಇದು ಭಾರತೀಯ ನ್ಯಾಯ ಪ್ರಕ್ರಿಯೆ ಮತ್ತು ಜನರ ಭಾವನೆಗಳ ನಡುವಿನ ಸಂಘರ್ಷದಂತೆ ತೋರುತ್ತಿದೆ. ನ್ಯಾಯ ಸಂಹಿತೆಯ ಪ್ರಕಾರ ಬಾಲಾಪರಾಧಿಗೆ 3 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಿಲ್ಲ. ನಿರ್ಭಯಾಳ ಮೇಲೆ ಅತ್ಯಾಚಾರ ನಡೆಸುವಾಗ ಆತನಿಗೆ 18 ವರ್ಷ ತುಂಬಿರಲಿಲ್ಲ ಎಂಬುದೇ ಆತನ ಬಿಡುಗಡೆಗಿರುವ ಏಕೈಕ ಸಬೂಬು. ಈ ಸಬೂಬನ್ನು ಹೊರಗಿಟ್ಟು ನೋಡಿದರೆ, ಎಲ್ಲ ರೀತಿಯಲ್ಲೂ ಆತ ಪರಮ ಕ್ರೂರಿಯೇ. ಮರಣದಂಡನೆಗೆ ಒಳಗಾದ ಇತರ ಮೂವರಿಗಿಂತ ಹೆಚ್ಚು ಕ್ರೌರ್ಯವನ್ನು ಮೆರೆದಿದ್ದು ಈತನೇ ಎಂದು ಹೇಳಲಾಗುತ್ತದೆ. ವಯಸ್ಸಿನ ಹೊರತಾಗಿ ಆತನ ಮೇಲೆ ಕರುಣೆ ತೋರುವುದಕ್ಕೆ ಇನ್ನಾವ ಕಾರಣಗಳೂ ಇಲ್ಲ. ಇಂಡಿಯಾ ಗೇಟ್‍ನಲ್ಲಿ ನೆರೆದಿರುವವರ ವಾದವೂ ಇದುವೇ. ಒಂದು ಕಡೆ ಕಾನೂನು ಇನ್ನೊಂದು ಕಡೆ ಜನರ ಭಾವನೆ.. ಇವುಗಳ ನಡುವೆ ಬಾಲಾಪರಾಧಿ ಸಿಲುಕಿಕೊಂಡಿದ್ದಾನೆ.
   ನಿಜವಾಗಿ, ಅಪ್ರಾಪ್ತರನ್ನು ಮತ್ತು ಪ್ರಾಪ್ತ ವಯಸ್ಕರನ್ನು ಸಮಾನ ತಕ್ಕಡಿಯಲ್ಲಿಡುವುದೇ ತಪ್ಪು. ಇಬ್ಬರ ನಡುವೆ ಬೌದ್ಧಿಕ ಬೆಳವಣಿಗೆ, ಕಾನೂನಿನ ಅರಿವು, ತನ್ನ ಕೃತ್ಯದ ಪರಿಣಾಮದ ತಿಳುವಳಿಕೆ ಇತ್ಯಾದಿಗಳ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಪ್ರಾಪ್ತನ ಅರಿವಿನ ಮಟ್ಟವನ್ನು ಅಪ್ರಾಪ್ತ ಹೊಂದಿರುವುದಿಲ್ಲ. ಮಗುವಿನ ಕೈಗೆ ವಾಚ್ ಕೊಟ್ಟರೆ ಉಪಯೋಗದ ಹೊರತಾದ ಎಲ್ಲವನ್ನೂ ಅದು ಮಾಡುತ್ತದೆ. ಮಗುವಿನ ಮಟ್ಟಿಗೆ ಅದು ಒಂದು ಆಟದ ಸಾಮಾನು. ಅದನ್ನು ಒಡೆದೂ ಬಿಡಬಹುದು. ಎತ್ತಿ ಎಸೆದು ಬಿಡಲೂ ಬಹುದು. ಆದರೆ ಮಗುತನ ದಾಟಿ ಬಂದ ಮಕ್ಕಳು ವಾಚ್ ಅನ್ನು ನೋಡುವ ವಿಧಾನವೇ ಬೇರೆ. ಅದು ಅವರ ಪಾಲಿಗೆ ಫ್ಯಾಶನ್. ಗೆಳೆಯರೆದುರು ಆಗಾಗ ಟೈಮ್ ನೋಡುವ ನೆಪದಲ್ಲಿ ಪ್ರದರ್ಶಿಸುವ ಹೆಚ್ಚುಗಾರಿಕೆ. ಒಂದು ವೇಳೆ, ಮಗುವನ್ನು ಮತ್ತು ಮಕ್ಕಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನೋಡಿದರೆ ಏನಾಗಬಹುದು? ಬಹುಶಃ, ಹದಿಹರೆಯದವರು ಮತ್ತು ವಯಸ್ಕರನ್ನು ಈ ಮಾನದಂಡವನ್ನಿಟ್ಟುಕೊಂಡು ತೂಗಿದರೆ ಉತ್ತಮವೇನೋ ಅನಿಸುತ್ತದೆ. ಹಾಗಂತ, ಅತ್ಯಾಚಾರದಲ್ಲಿ ಭಾಗಿಯಾಗುವ ಅಪ್ರಾಪ್ತರು ವಾಚ್ ಪುಡಿ ಮಾಡುವ ಮಗುವಿನಷ್ಟೇ ಮುಗ್ಧರು ಎಂದು ಇದರರ್ಥವಲ್ಲ. ಹದಿಹರೆಯದವರಿಗೆ ಅತ್ಯಾಚಾರವು ತಪ್ಪು ಮತ್ತು ಅದಕ್ಕೆ ಶಿಕ್ಷೆ ಇದೆ ಎಂಬುದು ಗೊತ್ತಿರಲೂ ಬಹುದು. ಆದರೂ, ಅವರನ್ನು ವಯಸ್ಕರಿಗೆ ಸಮಾನವಾಗಿ ನೋಡುವುದು ಅಪ್ರಬುದ್ಧ ಮತ್ತು ದುಡುಕುತನದಂತೆ ತೋರುತ್ತದೆ.
      ನಿಜವಾಗಿ, ಆಧುನಿಕ ತಂತ್ರಜ್ಞಾನಗಳು ತೀರಾ ಬೆಳೆದಿರುವ ಮತ್ತು ಮೊಬೈಲ್‍ನಲ್ಲಿ `ಸರ್ವವೂ' ಲಭ್ಯವಾಗುತ್ತಿರುವ ಇಂದಿನ ದಿನಗಳು ಹದಿಹರೆಯವನ್ನು ಅಪಾಯಕಾರಿಯಾಗುವಂತೆ ತಯಾರುಗೊಳಿಸುತ್ತಿದೆ. 10 ವರ್ಷಗಳ ಹಿಂದಿನ ಹದಿಹರೆಯಕ್ಕೂ ಇವತ್ತಿನ ಹದಿಹರೆಯಕ್ಕೂ ಬೌದ್ಧಿಕವಾಗಿಯೂ ಭೌತಿಕವಾಗಿಯೂ ಧಾರಾಳ ಅಂತರಗಳಿವೆ. ಇವತ್ತು ಅಪ್ರಾಪ್ತನು/ಳು ಪ್ರಾಪ್ತ ವಯಸ್ಕನಷ್ಟು ಪ್ರಬುದ್ಧವಾಗಿ ಮಾತಾಡುತ್ತಾನೆ/ಳೆ. ಯಾವುದೇ ವಿಷಯದ ಮೇಲೆ ಪ್ರಾಪ್ತ ವಯಸ್ಕನಿಗೆ ಸರಿಸಮವಾದ ಮಾಹಿತಿಯನ್ನು ಪಡೆಯುವ ಎಲ್ಲ ಸೌಲಭ್ಯಗಳೂ ಇವತ್ತು ಅಪ್ರಾಪ್ತರಿಗಿವೆ. ಒಂದು ರೀತಿಯಲ್ಲಿ, ಇವತ್ತಿನ ತಂತ್ರಜ್ಞಾನಗಳು ಅಪ್ರಾಪ್ತರನ್ನು ಅಕಾಲಿಕ ಪ್ರಾಪ್ತ ವಯಸ್ಕರನ್ನಾಗಿ ಮಾಡುತ್ತಿವೆ. ಅವರು ಯಾವ ವಿಷಯದ ಮೇಲೆ ಕುತೂಹಲ ವ್ಯಕ್ತಪಡಿಸುತ್ತಾರೋ ಆ ಕುತೂಹಲವನ್ನು ತಣಿಸುವುದಕ್ಕೆ ಬೆರಳ ತುದಿಯಲ್ಲೇ ಅವಕಾಶವನ್ನು ಒದಗಿಸುತ್ತಿದೆ. 20 ವರ್ಷಗಳ ಹಿಂದೆ ಆಗಿದ್ದರೆ ನೀಲಿ ಚಿತ್ರವನ್ನು ವೀಕ್ಷಿಸುವುದಕ್ಕೆ ಚಿತ್ರ ಮಂದಿರಕ್ಕೆ ಹೋಗಬೇಕಿತ್ತು. ಅದೂ ಕದ್ದು ಮುಚ್ಚಿ- ರಾತ್ರಿಯ ವೇಳೆ ಹೋಗುವವರೇ ಹೆಚ್ಚಿದ್ದರು. ಇದೊಂದೇ ಅಲ್ಲ, `ತಪ್ಪು' ಎಂದು ಸಮಾಜ ಯಾವುದರ ಮೇಲೆಲ್ಲ ಮುದ್ರೆ ಹಾಕಿತ್ತೋ ಅವೆಲ್ಲವೂ ಸುಲಭವಾಗಿ ಲಭ್ಯವಾಗದಂಥ ವಾತಾವರಣ ಆಗೆಲ್ಲ ಇತ್ತು. ಆದರೆ ಇವತ್ತು ಆ ಬೇಲಿಯೇ ಕಿತ್ತು ಹೋಗಿದೆ. ಬೇಲಿಯೇ ಇಲ್ಲದ ವಿಶಾಲ ಜಗತ್ತೊಂದು ಇವತ್ತು ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರೂ ತೆರೆದುಕೊಂಡಿದೆ. ಕೆಟ್ಟದ್ದನ್ನು ಇವತ್ತು ಕದ್ದು-ಮುಚ್ಚಿ-ರಾತ್ರಿ ವೇಳೆ ನೋಡಬೇಕಾದ ಅಗತ್ಯವಿಲ್ಲ. ಎಲ್ಲವನ್ನೂ ಮೊಬೈಲ್ ಒದಗಿಸುತ್ತದೆ. ಅಪ್ರಾಪ್ತರಲ್ಲಿ ಪ್ರೌಢತನವನ್ನು ಹುಟ್ಟಿಸುವುದಕ್ಕೆ ಬೇಕಾದ ಎಲ್ಲವೂ ಇವತ್ತು ಮೊಬೈಲ್‍ನಲ್ಲಿ ಸುಲಭದಲ್ಲೇ ದಕ್ಕುತ್ತಿದೆ. ಇಂಥ ಸ್ಥಿತಿಯಲ್ಲಿ, ಅಪ್ರಾಪ್ತ ವಯಸ್ಸಿನ ಮಿತಿಯನ್ನು ತಗ್ಗಿಸುವುದೋ ಅಥವಾ ಅವರು ಭಾಗಿಯಾದ ಅತ್ಯಾಚಾರದಂಥ ಹೀನ ಕೃತ್ಯಗಳನ್ನು ಪ್ರಾಪ್ತ ವಯಸ್ಕರ

ಪರಿಚ್ಛೇದದಡಿಯಲ್ಲಿ ತಂದು ವಿಚಾರಣೆಗೆ ಒಳಪಡಿಸುವುದೋ ಸಮಸ್ಯೆಗೆ ಉತ್ತರವಾಗುವ ಸಾಧ್ಯತೆಯಿಲ್ಲ. ಇದರ ಬದಲು ಎಳೆ ಮನಸ್ಸನ್ನು ಚಂಚಲಗೊಳಿಸುವವುಗಳ ಅಧ್ಯಯನ ನಡೆಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಹೇಗೆ ಮತ್ತು ಯಾಕಾಗಿ ಬಳಸಬೇಕೆಂಬ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಎಳೆ ಮನಸ್ಸಿಗೆ ತಿಳಿಸಿಕೊಡಬೇಕು. ಇತರರನ್ನು ಹೇಗೆ ಕಾಣಬೇಕು ಮತ್ತು ಗೌರವಿಸಬೇಕು ಎಂಬುದನ್ನು ಆಗಾಗ ಹೇಳಿಕೊಡುತ್ತಲಿರಬೇಕು. ಇವು ಮತ್ತು ಇಂತಹ ಇನ್ನಿತರ ತಿದ್ದುವ ವಿಧಾನಗಳು ‘ಅಪ್ರಾಪ್ತ ಅಪರಾಧ’ವನ್ನು ತಡೆಗಟ್ಟುವುದಕ್ಕೆ ಪರಿಹಾರ ಆಗಬಹುದೇ ಹೊರತು ವಯಸ್ಸಿನ ಮಿತಿಯನ್ನು ಇಳಿಸುವುದಲ್ಲ. ಒಂದು ವೇಳೆ, ಇವತ್ತು ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಿದರೆ ಇನ್ನೈದು ವರ್ಷಗಳಲ್ಲಿ ಅದನ್ನು 14ಕ್ಕೆ ಇಳಿಸಬೇಕಾದ ಅಗತ್ಯವೂ ಕಂಡುಬರಬಹುದು. ಸಮಸ್ಯೆಯಿರುವುದು ವಯಸ್ಸಿನಲ್ಲಲ್ಲ, ಆ ವಯಸ್ಸಿಗೆ ನಾವೇನನ್ನು ತುಂಬಿಸುತ್ತಿದ್ದೇವೆ ಎಂಬುದರಲ್ಲಿ. ನಿರ್ಭಯ ಪ್ರಕರಣದ ಬಾಲಾಪರಾಧಿಯನ್ನು ನಾವು ಈ ಮಾನದಂಡದಿಂದಲೇ ವಿಶ್ಲೇಷಿಸಬೇಕಾಗಿದೆ.

Tuesday 15 December 2015

ಹೆಣ್ಣು-ಗಂಡು ಮತ್ತು ಸಮಾನತೆ

    
ಜಾತ್ಯತೀತತೆ (Secularism) ಮತ್ತು ಲಿಂಗ ಸಮಾನತೆ (Gender Equality) ಎಂಬೆರಡು ಪದಗಳು ದೇಶ, ಕಾಲ, ಸಂಸ್ಕ್ರಿತಿಗಳಿಗೆ ಹೊಂದಿಕೊಂಡು ಭಿನ್ನಭಿನ್ನ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಿವೆ. ಜಾತ್ಯತೀತತೆಗೆ ಯುರೋಪಿಯನ್ ರಾಷ್ಟ್ರಗಳು ಕೊಟ್ಟಿರುವ ಅರ್ಥವನ್ನು ಭಾರತೀಯ ಉಪಭೂಖಂಡದ ರಾಷ್ಟ್ರಗಳು ಒಪ್ಪಿಕೊಂಡಿಲ್ಲ. ಅವು ಈ ಪದವನ್ನು ತನ್ನದೇ ಆದ ಪರಿಭಾಷೆಯಲ್ಲಿ ಓದುತ್ತಿವೆ. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯೂ ಇದಕ್ಕಿಂತ ಭಿನ್ನವಲ್ಲ. ಅದು ಕೂಡ ಪ್ರಶ್ನೆ, ಟೀಕೆ, ವ್ಯಂಗ್ಯಕ್ಕೆ ಈಡಾಗಿದೆ. ಹೆಣ್ಣು-ಗಂಡು ಸಮಾನರೆಂದಾದರೆ ರಿಲೇ, ಟೆನ್ನಿಸ್, ಬಾಕ್ಸಿಂಗ್, ಕ್ರಿಕೆಟ್ ಮುಂತಾದ ಕ್ಷೇತ್ರಗಳೇಕೆ ಇವರನ್ನು ಅಸಮಾನವಾಗಿ ನೋಡುತ್ತಿವೆ ಎಂದು ಪ್ರಶ್ನಿಸುವವರಿದ್ದಾರೆ. ಟೆನ್ನಿಸ್‍ನಲ್ಲಿ ಪುರುಷನು 5 ಸೆಟ್‍ಗಳಲ್ಲಿ 5 ಗಂಟೆಗಳಷ್ಟು ದೀರ್ಘ ಕಾಲ ಆಡಬಲ್ಲ. ಆದರೆ ಮಹಿಳಾ ಟೆನ್ನಿಸ್‍ಗಿರುವುದೇ 3 ಸೆಟ್. ಹೆಚ್ಚೆಂದರೆ ಒಂದೂವರೆ ಎರಡು ಗಂಟೆಗಳ ಒಳಗೆ ಸೋಲು-ಗೆಲುವು ನಿರ್ಣಯವಾಗುತ್ತದೆ. 100 ವಿೂಟರ್ ಓಟದಲ್ಲಿ ಉಸೇನ್ ಬೋಲ್ಟ್ ನ ಸಾಧನೆಯನ್ನು ಯಾವ ಮಹಿಳಾ ಓಟಗಾರ್ತಿಗೂ ಸರಿಗಟ್ಟಲು ಸಾಧ್ಯವಾಗಿಲ್ಲ. ಬೋಲ್ಟ್ ಆ ದೂರವನ್ನು 9.57 ಸೆಕೆಂಡ್‍ಗಳಲ್ಲಿ ಓಡಿ ಮುಗಿಸಿದರೆ ಮಹಿಳಾ ಓಟಗಾರ್ತಿಯು 10 ಸೆಕೆಂಡ್‍ಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕ್ರಮಿಸಿರುವುದೇ ಈ ವರೆಗಿನ ದಾಖಲೆ. ಕ್ರಿಕೆಟ್ ಆಗಲಿ, ಟೆನಿಸ್, ಫುಟ್ಬಾಲ್, ರೇಸ್ ಸಹಿತ ಹತ್ತಾರು ಕ್ರೀಡಾ ಪ್ರಕಾರಗಳಲ್ಲಿ ಪುರುಷ ಕ್ರೀಡೆಯೇ ಹೆಚ್ಚು ಆಕರ್ಷಕ ಮತ್ತು ಜನಪ್ರಿಯ. ಲಿಂಗ ಸಮಾನತೆಯ ಬಗ್ಗೆ ಧಾರಾಳ ಮಾತಾಡುವ ಸಿನಿಮಾ ಕ್ಷೇತ್ರವಂತೂ ಅಸಮಾನತೆಯನ್ನೇ ಪ್ರತಿದಿನವೂ ಪೋಷಿಸುತ್ತಾ ಬರುತ್ತಿದೆ. ಶಾರುಖ್, ಅವಿೂರ್, ಬಚ್ಚನ್‍ಗಳು ಇಳಿಪ್ರಾಯದಲ್ಲೂ ಹೀರೋಗಳಾಗಿಯೇ ಮೆರೆಯುತ್ತಿದ್ದಾರೆ.  ಡಾ| ರಾಜ್‍ಕುಮಾರ್‍,ವಿಷ್ಣುವರ್ಧನ್ ರು ಕೊನೆವರೆಗೂ ಹೀರೋಗಳಾಗಿಯೇ ಪಾತ್ರ ನಿರ್ವಹಿಸಿದರು. ಆದರೆ ಇವರೆಲ್ಲರ ಯೌವನ ಕಾಲದಲ್ಲಿ ಇವರ ಜೊತೆ ಹೀರೋಯಿನ್‍ಗಳಾದವರು ಕೆಲ ವರ್ಷಗಳಲ್ಲೇ ಆ ಪಾತ್ರದಿಂದ ಕೆಳಗಿಳಿಯಬೇಕಾಯಿತು. ಆ ಬಳಿಕ ಇವರು ಈ ಹೀರೋಗಳ ಅತ್ತೆ, ತಾಯಿ, ಚಿಕ್ಕಮ್ಮ ಮುಂತಾದ ಪಾತ್ರಕ್ಕೆ ಸೀಮಿತಗೊಳ್ಳಬೇಕಾಯಿತು. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯು ಸಂಘರ್ಷಕ್ಕೆ ಒಳಗಾಗುವುದು ಇಲ್ಲಿ ಮತ್ತು ಇಂತಹ ಅನೇಕಾರು ವಿಷಯಗಳಲ್ಲಿ. ನಿಜವಾಗಿ, ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕವಾಗಿಯೇ ಕೆಲವು ವೈಶಿಷ್ಟ್ಯಗಳಿವೆ. ದುರಂತ ಏನೆಂದರೆ, ಆಧುನಿಕ ಜಗತ್ತಿನ ಲಿಂಗ ಸಮಾನತೆಯ ಕೂಗಿನಲ್ಲಿ ಈ ವೈಶಿಷ್ಟ್ಯತೆಯನ್ನೇ ನಿರ್ಲಕ್ಷಿಸುವ ಮತ್ತು ತಿರಸ್ಕರಿಸುವ ಆವೇಶ ಕಾಣಿಸುತ್ತದೆ. ಪುರುಷರನ್ನು ದ್ವೇಷಿಸುವುದೇ ಫೆಮಿನಿಸಂ ಆಗಿರಬೇಕು ಎಂದು ಅಂದುಕೊಳ್ಳುವಷ್ಟರ ಮಟ್ಟಿಗೆ ಲಿಂಗ ಸಮಾನತೆಯ ಹೋರಾಟವು ವೈರುಧ್ಯಗಳಿಂದ ಕೂಡಿವೆ. ಅಂದಹಾಗೆ, ಇಸ್ಲಾಮ್ ಲಿಂಗ ಸಮಾನತೆಯ ಕುರಿತಂತೆ ಈ ವೈರುಧ್ಯಗಳಾಚೆಗೆ ಸುಧಾರಿತ ವಿಧಾನವನ್ನು ಪ್ರಸ್ತುತಪಡಿಸುತ್ತದೆ. ಪ್ರಾಕೃತಿಕ ವೈಶಿಷ್ಟ್ಯವನ್ನು ಮಾನ್ಯ ಮಾಡುತ್ತಲೇ ಹೆಣ್ಣು-ಗಂಡಿನ ನಡುವೆ ಸಮಾನ ನ್ಯಾಯವನ್ನು ಅದು ಎತ್ತಿ ಹಿಡಿಯುತ್ತದೆ. ಆದ್ದರಿಂದಲೇ, ಹೆಣ್ಣಿಗೆ ಗಂಡಿಗಿಂತ ಹೆಚ್ಚು ಆಸ್ತಿ, ತಾಯಿಗೆ-ತಂದೆಗಿಂತ ಮೂರು ಪಟ್ಟು ಹೆಚ್ಚು ಸ್ಥಾನಮಾನ, ಹೆಣ್ಣಿಗೆ ವಿವಾಹ ಧನ ಇತ್ಯಾದಿ ವಿಶೇಷ ಪರಿಗಣನೆಯನ್ನು ನೀಡಿದೆ. ತಾಯಿ, ತಂಗಿ, ಪತ್ನಿ, ಸಹೋದರಿ, ಮಗಳು.. ಮುಂತಾದುವುಗಳನ್ನು ಇಸ್ಲಾಮ್ ಪ್ರಕೃತಿ ಸಹಜ ಪಾತ್ರಗಳಾಗಿ ಕಾಣುತ್ತದೆಯೇ ಹೊರತು ಅವುಗಳನ್ನು ಬಲಹೀನವಾಗಿಯೋ ಅಬಲೆಯಾಗಿಯೋ ಅಲ್ಲ ಅಥವಾ ಅವುಗಳು ಪತಿ, ತಂದೆ, ಅಣ್ಣ-ತಮ್ಮ ಮುಂತಾದ ಪಾತ್ರಗಳ ಗುಲಾಮವಾಗಿಯೂ ಅಲ್ಲ. ಅವರ ನಡುವಿನ ಸಮಾನತೆಯನ್ನು ಪವಿತ್ರ ಕುರ್‍ಆನ್ ವಿವಿಧ ಕಡೆ (3:195, 4:124, 16:97, 40:40) ಪ್ರಸ್ತಾಪಿಸುತ್ತದೆ. ನಿಜವಾಗಿ,
    ಇವತ್ತು, ಲಿಂಗ ಸಮಾನತೆ (Gender Equality) ಎಂಬ ಪದಕ್ಕೆ ಹೆಚ್ಚು ಸಂತುಲಿತ ಮತ್ತು ಪ್ರಕೃತಿ ಸಹಜವಾದ ಪರ್ಯಾಯ ಪದವನ್ನು ಹುಡುಕಬೇಕಾಗಿದೆ. ಜೊತೆಗೆ, ಪ್ರಕೃತಿ ಸಹಜ ವೈಶಿಷ್ಟ್ಯವನ್ನು ಹೆಣ್ಣಿನ ‘ದ್ವಿತೀಯ ದರ್ಜೆ’ಗೆ ಪುರಾವೆಯಾಗಿ ಮಂಡಿಸುವುದನ್ನು ಖಂಡಿಸಬೇಕಾಗಿದೆ.

Friday 11 December 2015

ಹಾರೆ, ಪಿಕ್ಕಾಸು, ಗುದ್ದಲಿಗಳನ್ನು ಎತ್ತಿಕೊಳ್ಳುವ ಮೊದಲು...

       ಕಳೆದವಾರ ಎರಡು ಮಸೀದಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಒಂದು; ಡಿ. 6ರ ಬಾಬರಿ ಮಸೀದಿಯಾದರೆ ಇನ್ನೊಂದು, ನಿರಾಶ್ರಿತರಿಗೆ ಆಶ್ರಯ ಒದಗಿಸಿದ ಚೆನ್ನೈಯ ಮಸೀದಿ. ಪ್ರವಾಹ ಪೀಡಿತರನ್ನು ತನ್ನೊಳಗೆ ತುಂಬಿಸಿಕೊಂಡು ಭಕ್ತರನ್ನು ಹೊರಗೆ ನಿಲ್ಲಿಸಿದ ಚೆನ್ನೈಯ ಮಸೀದಿಯ ಕುರಿತಂತೆ ಟು ಸರ್ಕಲ್ ಡಾಟ್ ನೆಟ್, ರೆಡಿಫ್ ಡಾಟ್ ಕಾಮ್ ಸಹಿತ ವಿವಿಧ ಇಂಟರ್‍ನೆಟ್ ಪತ್ರಿಕೆಗಳು ಸಚಿತ್ರವಾಗಿ ವರದಿ ಮಾಡಿವೆ. ನೆರೆಪೀಡಿತರು, ಮಸೀದಿಯ ಸಭಾಂಗಣದಲ್ಲಿ ನಿಂತು ಆಹಾರ ಪಡೆಯುತ್ತಿರುವ ದೃಶ್ಯಗಳು ಅತ್ಯಂತ ಭಾವನಾತ್ಮಕ. ಅಲ್ಲಿ ಮನುಷ್ಯರು ಮಾತ್ರ ಇದ್ದರು. ಹಿಂದೂ-ಮುಸ್ಲಿಮ್-ಕ್ರೈಸ್ತ ಇತ್ಯಾದಿಯಾಗಿ ವಿಭಜಿಸಲು ಸಾಧ್ಯವೇ ಆಗದಷ್ಟು ಸಮಾನಾಂಶಗಳು ಅವರೆಲ್ಲರಲ್ಲೂ ಇದ್ದುವು. ಸಾರಿ ಉಟ್ಟ ಮತ್ತು ಶಿರವಸ್ತ್ರ ಧರಿಸದ ಮಹಿಳೆಯರು; ಪಂಚೆ ಉಟ್ಟ ಪುರುಷರು, ಲಂಗ-ಧಾವಣಿಯಲ್ಲಿ ಯುವತಿಯರು.. ಹೀಗೆ ಮನುಷ್ಯರೆಲ್ಲ ಮಸೀದಿಯಲ್ಲಿದ್ದರು. ತಂತಮ್ಮ ಬದುಕನ್ನು ಕಟ್ಟಿಕೊಳ್ಳುವ ತುರ್ತಿನ ಹೊರತಾದ ಇನ್ನಾವುದೂ ಅವರಲ್ಲಿ ಕಂಡುಬರುತ್ತಿರಲಿಲ್ಲ. ಇದೇ ವೇಳೆ, ಚೆನ್ನೈಯ ಮಳೆಯಿಂದ ಯಾವ ತೊಂದರೆಗೂ ಒಳಗಾಗದ ಭಾರತದ ಇತರ ಭಾಗಗಳಲ್ಲಿ ಸಂತೋಷ ಕೂಟಗಳು ಏರ್ಪಾಡಾಗಿದ್ದುವು. ಆ ಸಂತೋಷ ಕೂಟಗಳಿಗೆ ‘ವಿಜಯ ದಿವಸ’ ಎಂಬ ಹೆಸರನ್ನೂ ಕೊಡಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ಉರುಳಿಸಿದುದೇ ಈ ಸಂತೋಷ ಕೂಟಕ್ಕೆ ಮುಖ್ಯ ಕಾರಣವಾಗಿತ್ತು. ಆ ಧ್ವಂಸ ಕೃತ್ಯವನ್ನು ಈ ಕೂಟಗಳಲ್ಲಿ ಮೆಚ್ಚಿಕೊಳ್ಳಲಾಯಿತು. ಅದಕ್ಕಾಗಿ ಹೆಮ್ಮೆ ಪಡಲಾಯಿತು. ಏನೆನ್ನಬೇಕು ಈ ವೈರುಧ್ಯಕ್ಕೆ? ನಿರಾಶ್ರಿತರಿಗೆ ಮಸೀದಿಯು ಸಮಸ್ಯೆಯಾಗಲಿಲ್ಲ. ಮಸೀದಿಗೂ ಅವರು ಸಮಸ್ಯೆಯಾಗಲಿಲ್ಲ. ನಿರಾಶ್ರಿತರ ಧರ್ಮ, ಜಾತಿ, ವರ್ಣ, ರಾಜಕೀಯ ಒಲವು, ಆಹಾರ ಕ್ರಮ.. ಯಾವುದನ್ನೂ ಪ್ರಶ್ನಿಸದೇ ಮಸೀದಿಯು ಎಲ್ಲರನ್ನೂ ತಬ್ಬಿಕೊಂಡಿತು. ಮನುಷ್ಯರು ಎಂಬ ಏಕ ಹೆಸರಿನ ಹೊರತಾದ ಇನ್ನಾವ ಗುರುತೂ ಅವರಿಗಿರಲಿಲ್ಲ. ಈ ನಿರಾಶ್ರಿತರಿಗೆ ಹಾರೆ, ಪಿಕ್ಕಾಸು, ಗುದ್ದಲಿಯನ್ನು ಕೊಟ್ಟು - ‘ಈ ಮಸೀದಿಯನ್ನು ಉರುಳಿಸಿ’ ಎಂದು ಆಜ್ಞಾಪಿಸಿದರೆ ಅವರ ಉತ್ತರ ಏನಿರಬಹುದು? ಆಜ್ಞಾಪಿಸಿದವರನ್ನು ಧರ್ಮದ್ರೋಹಿಗಳು ಎಂದು ಅವರು ಕರೆಯಲಾರರೇ? ಖಂಡಿಸಲಾರರೇ? ಉರುಳಿಸಬೇಕಾದದ್ದು ಮನದೊಳಗಿನ ದ್ವೇಷದ ಗೋಡೆಯನ್ನೇ ಹೊರತು ಮಸೀದಿಯನ್ನೋ ಮಂದಿರವನ್ನೋ ಅಲ್ಲ ಎಂದು ಸಾರಲಾರರೇ?  ಅಷ್ಟಕ್ಕೂ, ಒಬ್ಬರ ಆರಾಧ್ಯ ಕೇಂದ್ರವನ್ನು ಉರುಳಿಸುವುದು ಸಂತಸಕ್ಕೆ ಕಾರಣವಾಗುವುದಾದರೆ ಆ ಸಂತಸ ಹುಟ್ಟು ಪಡೆದದ್ದು ಎಲ್ಲಿ? ಅದರ ನಿರ್ಮಾತೃಗಳು ಯಾರು? ವಿಷಾದ ಪಡಬೇಕಾದ ಕೃತ್ಯವೊಂದನ್ನು ಸಂತಸ ಪಡುವ ಕೃತ್ಯವಾಗಿ ಮಾರ್ಪಡಿಸಲು ಅವರು ಯಶಸ್ವಿಯಾಗಿದ್ದು ಹೇಗೆ? ಇದಕ್ಕಾಗಿ ಅವರು ಹಂಚಿರಬಹುದಾದ ವಿಷದ ಪ್ರಮಾಣ ಎಷ್ಟು?
  ಅಂದಹಾಗೆ, ಮಂದಿರ, ಮಸೀದಿ, ಚರ್ಚ್ ಸಹಿತ ಧಾರ್ಮಿಕ ಕೇಂದ್ರಗಳು ಪ್ರಕೃತಿ ವಿರೋಧಿ ಬೇಲಿಗಳನ್ನು ಕಟ್ಟಿಕೊಂಡು ಸ್ವಯಂ ಬಂಧನಕ್ಕೆ ಒಳಗಾದಂತೆ ಗೋಚರಿಸುತ್ತಿರುವ ಇಂದಿನ ದಿನಗಳಲ್ಲಿ ಚೆನ್ನೈಯ ಮಳೆ ಮತ್ತು ಮಸೀದಿ ನಮ್ಮೊಳಗನ್ನು ಗಾಢವಾಗಿ ತಟ್ಟಬೇಕಿದೆ. ಮಳೆಯಿಂದಾಗಿ ಚೆನ್ನೈ ನದಿಯಂತೆ ತೇಲುತ್ತಿರುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದಲ್ಲಿ ಶುದ್ಧೀಕರಣವೊಂದು ನಡೆಯಿತು. ಮಹಿಳೆಯೋರ್ವರು ಶನಿ ದೇಗುಲದೊಳಕ್ಕೆ ತೆರಳಿ ಪೂಜೆಗೈದುದೇ ಈ ಶುದ್ಧೀಕರಣಕ್ಕೆ ಕಾರಣವಾಗಿತ್ತು. ಮಹಿಳೆ ದೇಗುಲ ಪ್ರವೇಶಿಸಿದುದನ್ನು ಅಶುದ್ಧ ಕಾರ್ಯವೆಂದು ಸಾರಲಾಯಿತಲ್ಲದೇ ಅದಕ್ಕೆ ಪ್ರಾಯಶ್ಚಿತ್ತವಾಗಿ ಶುದ್ಧೀಕರಣ ನಡೆಸಲಾಯಿತು. ಈ ಶುದ್ಧೀಕರಣದ ಎರಡು ದಿನಗಳ ಬಳಿಕ ಉತ್ತರ ಪ್ರದೇಶದ ದಾದ್ರಿಯಲ್ಲೂ ಶುದ್ಧೀಕರಣ ನಡೆಯಿತು. ಮುಹಮ್ಮದ್ ಅಖ್ಲಾಕ್‍ನನ್ನು ಥಳಿಸಿ ಕೊಂದ ಬಿಶಾರ ಗ್ರಾಮದಲ್ಲಿ ಗೋಮುತ್ರವನ್ನು ಸಿಂಪಡಿಸಿ ಶುದ್ಧೀಕರಣ ನಡೆಸಲಾಯಿತು. ಅಖ್ಲಾಕ್‍ನು ಗೋವನ್ನು ಕೊಂದುದರಿಂದ ಗ್ರಾಮವು ಅಶುದ್ಧವಾಗಿದೆ ಎಂದು ಶುದ್ಧೀಕರಣ ನಡೆಸಿದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಬಹುಶಃ ಧ್ವಂಸ ಮತ್ತು ಶುದ್ಧೀಕರಣಗಳು ಲಜ್ಜೆಯಿಲ್ಲದೇ ಸಮರ್ಥನೆಗೊಳಗಾಗುತ್ತಿರುವ ಈ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳು ಹಾಗೂ ಧಾರ್ಮಿಕ ನಿಲುವುಗಳು ಮರು ವ್ಯಾಖ್ಯಾನಕ್ಕೆ ಒಳಗಾಗಬೇಕಾದ ಅಗತ್ಯವಿದೆ. ಈ ಕುರಿತಂತೆ ಚೆನ್ನೈಯ ಮಸೀದಿ ಅತ್ಯಂತ ಪರಿಣಾಮಕಾರಿ ಮಾದರಿಯನ್ನು ದೇಶದ ಮುಂದಿಟ್ಟಿದೆ. ನಿಜವಾಗಿ, ಅನುಮಾನದ ದೊಡ್ಡದೊಂದು ಹುತ್ತವನ್ನು ಬಿಗಿದುಕೊಂಡಿರುವ ಜಾಗಗಳಾಗಿ ಧಾರ್ಮಿಕ ಕೇಂದ್ರಗಳು ಈ ದೇಶದಲ್ಲಿ ಗುರುತಿಸಿಕೊಂಡಿವೆ. ಮಸೀದಿ, ಮದ್ರಸಗಳು; ಚರ್ಚ್-ಮಂದಿರಗಳು ಈ ದೇಶದ ಎಲ್ಲರಿಗೂ ಸರಿಯಾಗಿ ಇನ್ನೂ ತೆರೆದುಕೊಂಡಿಲ್ಲ. ಮಸೀದಿ ಅಥವಾ ಮಂದಿರದ ಅನುಯಾಯಿಗಳಿಗೇ ಅನೇಕ ಬಾರಿ ಅವುಗಳ ಅಗತ್ಯ, ಕಾರ್ಯಕ್ಷೇತ್ರ, ಅವುಗಳ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯೂ ಇಲ್ಲ. ಮಸೀದಿಗೋ ಮಂದಿರಕ್ಕೋ ಕಲ್ಲೆಸೆಯುವುದು ಅಥವಾ ಹಂದಿಯದ್ದೋ ದನದ್ದೋ ತಲೆಯನ್ನು ಅವುಗಳ ಎದುರು ಬಿಸಾಡುವುದು ಮತ್ತು ಅದಕ್ಕೆ ಉನ್ಮಾದಗೊಳ್ಳುವುದೆಲ್ಲ ಈ ತಿಳುವಳಿಕೆಯ ಕೊರತೆಯಿಂದಲೇ. ದೇವನನ್ನು ಧ್ಯಾನಿಸುವ ಕೇಂದ್ರವೊಂದು ಹಿಂದೂವನ್ನೋ ಕ್ರೈಸ್ತರನ್ನೋ ದ್ವೇಷಿಸುವುದಕ್ಕೆ ಸಾಧ್ಯವೇ ಇಲ್ಲ. ದೇವನು ನಿರ್ದಿಷ್ಟ ಮನುಷ್ಯರ ಮಧ್ಯೆ ಹಂಚಿಹೋಗಿಲ್ಲ. ಆತ ಎಲ್ಲರ ದೇವ ಎಂದಾದರೆ ಮತ್ತು ನಾಮಗಳು ಮಾತ್ರ ಭಿನ್ನ ಅನ್ನುವುದಾದರೆ, ಮಸೀದಿಯನ್ನು ಧ್ವಂಸಗೊಳಿಸುವುದರಿಂದ ಸಂತಸ ಪಡುವುದಕ್ಕಾದರೂ ಏನಿದೆ? ದೇವಾಲಯಕ್ಕೆ ಕಲ್ಲೆಸೆದು ಜಂಭ ಕೊಚ್ಚಿಕೊಳ್ಳುವುದರಲ್ಲಿ ಏನರ್ಥವಿದೆ? ದುರಂತ ಏನೆಂದರೆ, ಇವತ್ತು ಭಕ್ತರಿಗಿಂತ ಭಕ್ತಿಯ ಕೇಂದ್ರಗಳೇ ಹೆಚ್ಚು ಸುದ್ದಿಗೊಳಗಾಗುತ್ತಿವೆ. ಮನುಷ್ಯರಿಗೆ ನೆಮ್ಮದಿ ನೀಡಬೇಕಾದ ಕೇಂದ್ರಗಳು ನೆಮ್ಮದಿ ರಹಿತವಾದ ಆಘಾತಕಾರಿ ಸುದ್ದಿಗಳನ್ನು ಹೊರತರುತ್ತಿವೆ. ಬಹಿಷ್ಕಾರ, ಹಾದರ, ಶುದ್ಧೀಕರಣ, ಅಸ್ಪೃಶ್ಯತೆಗಳಿಂದಾಗಿ ಧಾರ್ಮಿಕ ಕೇಂದ್ರಗಳೂ ವ್ಯಾವಹಾರಿಕ ಕಟ್ಟಡಗಳೆಂಬಂತೆ ವರ್ತಿಸತೊಡಗಿವೆ. ಇಂಥ ಸ್ಥಿತಿಯಲ್ಲಿ ಚೆನ್ನೈಯ ಮಸೀದಿಯನ್ನು
ಮುಂದಿಟ್ಟುಕೊಂಡು ಮಾಧ್ಯಮಗಳು ಗಂಭೀರ ಚರ್ಚೆಯೊಂದನ್ನು ಹಮ್ಮಿಕೊಳ್ಳಬೇಕಾಗಿದೆ. ಮಸೀದಿಯನ್ನು ಉರುಳಿಸಿ ಸಂತಸಪಡುವ ಮಂದಿಯ ಎದುರು ಜನರಿಗೆ ಆಶ್ರಯ ನೀಡಿದ ಮಸೀದಿಯನ್ನು ತಂದು ನಿಲ್ಲಿಸಬೇಕಾಗಿದೆ.
           ಒಂದು ರೀತಿಯಲ್ಲಿ ದೇವಾಲಯ ಮತ್ತು ಮಸೀದಿಯನ್ನು ಪರಮ ವೈರಿಗಳಂತೆ ಎದುರು-ಬದುರಾಗಿ ನಿಲ್ಲಿಸುವ ಶ್ರಮವು ಸ್ವಾತಂತ್ರ್ಯ ಪೂರ್ವದಿಂದಲೇ ಈ ದೇಶದಲ್ಲಿ ನಡೆಯುತ್ತಿದೆ. 80ರ ದಶಕದ ಬಳಿಕ ಈ ಪ್ರಯತ್ನ ಎಷ್ಟು ಪ್ರಾಬಲ್ಯ ಪಡೆಯಿತೆಂದರೆ, ಮಸೀದಿಯನ್ನು ಭಯಾನಕವಾಗಿ, ಹಿಂದೂ ವಿರೋಧಿಯಾಗಿ, ಷಡ್ಯಂತ್ರದ ತಾಣವಾಗಿ ವ್ಯಾಖ್ಯಾನಿಸುವಷ್ಟು. ಮದರಗಳನ್ನು ಭಯೋತ್ಪಾದಕ ಕೇಂದ್ರವಾಗಿ ಬಿಂಬಿಸಲಾದದ್ದೂ ಆ ಬಳಿಕವೇ. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಈ ಧ್ವಂಸ ಕೃತ್ಯಕ್ಕಿಂತಲೂ ಭೀಕರ ಏನೆಂದರೆ, ಆ ಕೃತ್ಯವನ್ನು ಎಲ್ಲರೆದುರೇ ಧ್ವಂಸಕರು ಸಮರ್ಥಿಸಿಕೊಂಡದ್ದು. ಇದಾಗಿ 23 ವರ್ಷಗಳ ಬಳಿಕ ಚೆನ್ನೈಯ ಮಸೀದಿಯು ಉರುಳಿಸಿದವರನ್ನೂ ಉರುಳಿದವರನ್ನೂ ಸಮಾನವಾಗಿ ತನ್ನೊಳಗೆ ಸೇರಿಸಿಕೊಂಡಿದೆ. ಆ ಮೂಲಕ 23 ವರ್ಷಗಳ ಹಿಂದೆ ಧ್ವಂಸಗೊಳಿಸಿದವರ ಕಾರ್ಯಶುದ್ಧತೆಯನ್ನು ಪ್ರಶ್ನಿಸಿದೆ. ಈಗ ಉತ್ತರಿಸಬೇಕಾದವರು ಬಾಬರಿಯನ್ನು ಉರುಳಿಸಿ ಸಿಹಿ ಹಂಚಿಕೊಂಡವರು. ವಿಜಯೋತ್ಸವ ಆಚರಿಸಿದವರು. ಮಸೀದಿಯನ್ನು ಉರುಳಿಸುವುದಕ್ಕಾಗಿ ಷಡ್ಯಂತ್ರ ರಚಿಸಿದವರು. ಆದರೆ ಅವರು ಈ ಕುರಿತಂತೆ ಮಾತನ್ನೇ ಆಡುತ್ತಿಲ್ಲ. ಚೆನ್ನೈಯ ಮಸೀದಿಯಲ್ಲಿ ನೀವೇಕೆ ತಂಗಿದಿರಿ ಎಂದು ತಂಗಿದವರನ್ನು ಪ್ರಶ್ನಿಸುತ್ತಿಲ್ಲ. ಅಂಥದ್ದೊಂದು ಘಟನೆ ನಡೆದೇ ಇಲ್ಲವೋ ಎಂಬಂತೆ ಅವರೆಲ್ಲ ವಿಜಯ ದಿವಸದಲ್ಲಿ ಮಗ್ನರಾಗಿದ್ದಾರೆ. ನಿಜವಾಗಿ, ಚೆನ್ನೈ ಮಳೆಯಲ್ಲಿ ಸಿಕ್ಕ ಹಲವಾರು ಪಾಠಗಳಲ್ಲಿ ಮನುಷ್ಯ ಪ್ರೇಮದ ಈ ಪಾಠವೂ ಒಂದು. ನಾವು-ಅವರು, ಮ್ಲೇಚ್ಛರು-ಶ್ರೇಷ್ಠರು ಎಂದೆಲ್ಲಾ ವಿಭಜಿಸಿಕೊಂಡು ಬದುಕುತ್ತಿರುವವರಿಗೆ ಮಳೆ ಅನೇಕಾರು ಪಾಠಗಳನ್ನು ಹೇಳಿದೆ. ಎಲ್ಲರೂ ಸಮಾನರು ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯೊಂದಿಗೆ ಬದುಕಬೇಕಾದವರು ಎಂಬುದೇ ಮಳೆ ಸಾರಿದ ಪ್ರಮುಖ ಸಂದೇಶ. ಧ್ವಂಸಕೋರರಿಗೆ ಇದು ಅರ್ಥವಾಗಲಿ.


Thursday 3 December 2015

ಅಸಹಿಷ್ಣುತೆಯ ಚರ್ಚೆ ಮತ್ತು ಮದ್ಯ

      ಅಸಹಿಷ್ಣುತೆಯ ಸುತ್ತ ‘ಉಗ್ರರೂಪ'ದ ಚರ್ಚೆಯೊಂದು ನಡೆಯುತ್ತಿರುವ ಹೊತ್ತಿನಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರು ಈ ಚರ್ಚೆಯ ವ್ಯಾಪ್ತಿಯನ್ನು ಒಂದಷ್ಟು ಹಿಗ್ಗಿಸಿದ್ದಾರೆ. ನಿಜಕ್ಕೂ ಅಸಹಿಷ್ಣುತೆ ಎಲ್ಲಿದೆ, ಯಾವ ರೂಪದಲ್ಲಿದೆ, ಅಸಹಿಷ್ಣುತೆಯ ನಿಜ ಸಂತ್ರಸ್ತರು ಹೇಗಿದ್ದಾರೆ, ಅವರಿಗೆ ರಾಜಕೀಯ ಪ್ರಾತಿನಿಧ್ಯ ಎಷ್ಟಿದೆ, ಅಸಹಿಷ್ಣುತೆಯಿಂದ ಅವರು ಅನುಭವಿಸಿದ ನೋವು-ಕಣ್ಣೀರುಗಳನ್ನು ಮುಖ್ಯ ವಾಹಿನಿಯ ಮಾಧ್ಯಮ ಮತ್ತು ‘ದೇಶಭಕ್ತಿ'ಯ ಗುಂಪು ಎಷ್ಟಂಶ ಗಂಭೀರವಾಗಿ ಪರಿಗಣಿಸಿವೆ, ಈ ದೇಶದಿಂದ ತೊಲಗಬೇಕಾದವರ ಪಟ್ಟಿಯೊಂದನ್ನು ಈ ಮಂದಿ ತಯಾರಿಸುವುದಾದರೆ ಆ ಪಟ್ಟಿಯ ಮುಂಚೂಣಿಯಲ್ಲಿ ಯಾರ ಹೆಸರಿರಬಹುದು.. ಇವು ಮತ್ತು ಇಂಥ ಅನೇಕಾರು ಪ್ರಶ್ನೆಗಳಿಗೆ ಉತ್ತರವಾಗಬಹುದಾದ ಒಂದು ಗುಂಪಿನ ಬಗ್ಗೆ ನಿತೀಶ್ ಕುಮಾರ್ ದೇಶದ ಗಮನ ಸೆಳೆದಿದ್ದಾರೆ. ಅವರೇ ಮಹಿಳೆಯರು. ಇವರು ‘ಮದ್ಯ' ಎಂಬ ಪರಮ ಅಸಹಿಷ್ಣುತೆಯಿಂದ ಪಡುತ್ತಿರುವ ಪಾಡನ್ನು ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ವರ್ಷದ ಎಪ್ರಿಲ್‍ನಿಂದ ಈ ಅಸಹಿಷ್ಣುತೆಗೆ ಸಂಪೂರ್ಣ ನಿಷೇಧ ವಿಧಿಸುವುದಾಗಿ ಘೋಷಿಸಿದ್ದಾರೆ.
  ಸಹಿಷ್ಣು ಮತ್ತು ಅಸಹಿಷ್ಣು ಎಂಬೆರಡು ಪದಗಳನ್ನು ಅವಿೂರ್ ಖಾನ್, ಶಾರುಖ್ ಖಾನ್ ಮತ್ತು ಪ್ರಶಸ್ತಿ ವಾಪಸು ಮಾಡಿದ ಸಾಹಿತಿಗಳಿಗೆ ಸೀಮಿತಗೊಳಿಸಿ ಈ ದೇಶದಲ್ಲಿ ಚರ್ಚೆಯೊಂದು ಆರಂಭವಾಗಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಪ್ರಧಾನಿ ಮೋದಿಯವರ ಬೆಂಬಲಿಗರ ‘ದೇಶಭಕ್ತಿ'ಗೆ ಇರುವ ಮಿತಿಗಳಷ್ಟೇ ಈ ಅಸಹಿಷ್ಣುತೆಯ ಚರ್ಚೆಗೂ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಿತಿಗಳನ್ನು ಹೇರಿಕೊಂಡು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇವೆ. ಆದರೆ, ಈ ಚರ್ಚೆಯ ಅಂತಿಮ ಹಂತದಲ್ಲಿ ಪ್ರವೇಶಿಸಿದ ನಿತೀಶ್ ಕುಮಾರ್ ಅವರು ಇಡೀ ಚರ್ಚೆಯನ್ನು ಇನ್ನೊಂದು ಮಗ್ಗುಲಿಗೆ ಕೊಂಡೊಯ್ಯಲು ಶ್ರಮಿಸಿದ್ದಾರೆ. ಈ ಮಗ್ಗುಲು ಮಹಿಳೆಯರದ್ದು. ಬಿಹಾರದಲ್ಲಿ ಈ ಬಾರಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಮಹಿಳೆಯರು. ಅದಕ್ಕೆ ನಿತೀಶ್ ಅವರ ‘ಮದ್ಯಪಾನ ನಿಷೇಧ' ಭರವಸೆಯೂ ಒಂದು ಕಾರಣವಾಗಿರಬಹುದು. ಅವಿೂರ್ ಖಾನ್‍ರ ‘ಅಸಹಿಷ್ಣು' ಹೇಳಿಕೆಯನ್ನು ಎತ್ತಿಕೊಂಡು ವಾರಗಟ್ಟಲೆ ಚರ್ಚಿಸಿದ ನಾವೆಲ್ಲ, ನಿತೀಶ್‍ರ ಹೇಳಿಕೆಯನ್ನು ಸ್ಪರ್ಷಿಸಲೇ ಇಲ್ಲ. 4 ಸಾವಿರ ಕೋಟಿ ರೂಪಾಯಿ ಆದಾಯ ತರುತ್ತಿದ್ದ ಮದ್ಯವನ್ನು ಬಿಹಾರದಂಥ ಹಿಂದುಳಿದ ಮತ್ತು ದಲಿತರೇ ಹೆಚ್ಚಿರುವ ರಾಜ್ಯವೊಂದರಲ್ಲಿ ನಿಷೇಧಕ್ಕೆ ಒಳಪಡಿಸುವುದು ತೀರಾ ಸವಾಲಿನದ್ದು. ಹೆಚ್ಚಿನೆಲ್ಲ ಸರಕಾರಗಳ ದೊಡ್ಡ ಆದಾಯ ಮೂಲವೇ ಮದ್ಯ. ಅಸಹಿಷ್ಣು ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸಿದ ಬಿಜೆಪಿ, ನಿಜವಾಗಿ ಈ ಘೋಷಣೆಯನ್ನು ಶ್ಲಾಘಿಸಬೇಕಿತ್ತು. ಮದ್ಯಪಾನವನ್ನು ದೇಶದಾದ್ಯಂತ ಚರ್ಚಾ ವಿಷಯವನ್ನಾಗಿ ಮಾರ್ಪಡಿಸಬೇಕಿತ್ತು. ಯಾಕೆಂದರೆ, ಮದ್ಯವು ಈ ದೇಶದ ಗೌರವವನ್ನು ಅಂತಾರಾಷ್ಟ್ರೀಯವಾಗಿ ಹರಾಜಿಗಿಟ್ಟಿದೆ. ದೆಹಲಿಯಲ್ಲಿ 2012ರಲ್ಲಿ ನಡೆದ ಅತ್ಯಾಚಾರ ಪ್ರಕರಣವು ಭಾರತದ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದಷ್ಟು ಚ್ಯುತಿಯನ್ನು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಇನ್ನಾವುದೂ ತಂದಿರಲಿಲ್ಲ. ಅವಿೂರ್, ಶಾರುಖ್‍ರ ಹೇಳಿಕೆಗಳು ಅಥವಾ ಸಾಹಿತಿಗಳ ಪ್ರತಿಭಟನೆಗಳು ಆ ಪ್ರಕರಣದ ಎದುರು ತೀರಾ ತೀರಾ ಜುಜುಬಿ. ಭಾರತದಲ್ಲಿ ಹೆಣ್ಣು ಮಕ್ಕಳು ಎಷ್ಟು ಅಸುರಕ್ಷಿತ ಎಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಕ್ಕೆ ಆ ಘಟನೆ ಕಾರಣವಾಗಿತ್ತು. ನಿಜವಾಗಿ, ಮದ್ಯಪಾನಿಗಳಿಗೆ ಬಲಿಯಾದವರ ಪಟ್ಟಿಯಲ್ಲಿ ದೆಹಲಿಯ ನಿರ್ಭಯ ಮೊದಲಿಗಳೂ ಅಲ್ಲ, ಕೊನೆಯವಳೂ ಆಗುವುದಿಲ್ಲ. ಆ ಘಟನೆಯಲ್ಲಿ ಅತ್ಯಾಚಾರವೇ ಪ್ರಮುಖ ಚರ್ಚಾ ವಿಷಯ ಆಗಿದ್ದರೂ ಆ ಅತ್ಯಾಚಾರದ ಹಿಂದೆ ಮದ್ಯಪಾನದ ಅಮಲು ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಕೂಡ ಅಷ್ಟೇ ನಿಜ. ಒಂದು ರೀತಿಯಲ್ಲಿ ನಿರ್ಭಯ ಪ್ರಕರಣದ ಚರ್ಚೆಯು ತೆರೆದುಕೊಳ್ಳಬೇಕಾದ ಮತ್ತೊಂದು ಮಗ್ಗುಲು ಇದಾಗಿತ್ತು. ದುರಂತ ಏನೆಂದರೆ, ಇಡೀ ಚರ್ಚೆ ಅತ್ಯಾಚಾರದ ಸುತ್ತ ಗಿರಕಿ ಹೊಡೆಯಿತೇ ಹೊರತು ಮದ್ಯಪಾನವನ್ನು ಬಹುತೇಕ ಸ್ಪರ್ಶಿಸಲೇ ಇಲ್ಲ. ‘ಮದ್ಯಪಾನದ ಹೊರತಾಗಿ ನಿರ್ಭಯಳ ಮೇಲೆ ಅತ್ಯಾಚಾರ ಮಾಡುವ ಧೈರ್ಯವನ್ನು ಆ ಆರೋಪಿಗಳು ತೋರುತ್ತಿದ್ದರೇ’ ಎಂಬ ಅಂಶವೂ ಚರ್ಚೆಗೊಳಗಾಗಲಿಲ್ಲ. ಮದ್ಯಪಾನದ ಬಗ್ಗೆ ಉದ್ದೇಶಪೂರ್ವಕವಾಗಿಯೇ ಅವಗಣನೆ ನಡೆಯುತ್ತಿದೆಯೇ ಎಂದು ಅನುಮಾನಿಸುವಷ್ಟು ಮದ್ಯವನ್ನು ಚರ್ಚಾವ್ಯಾಪ್ತಿಯಿಂದ ಹೊರಗಿಡಲಾಯಿತು. ಒಂದು ವೇಳೆ, ನಿರ್ಭಯ ಅತ್ಯಾಚಾರದ ಜೊತೆಜೊತೆಗೇ ಅದರಲ್ಲಿ ಮದ್ಯಪಾನದ ಪಾತ್ರದ ಬಗ್ಗೆಯೂ ಗಂಭೀರ ಚರ್ಚೆಯಾಗುತ್ತಿದ್ದರೆ, ಅದು ಬೀರಬಹುದಾದ ಪರಿಣಾಮಗಳು ಏನಾಗಿರುತ್ತಿದ್ದುವು? ದೆಹಲಿಯಲ್ಲಿ ನಿರ್ಭಯ ಎದುರಿಸಿದ ಹೃದಯವಿದ್ರಾವಕ ಪರಿಸ್ಥಿತಿಯ ಬೇರೆ ಬೇರೆ ರೂಪಗಳನ್ನು ದೆಹಲಿಯಿಂದ ಹೊರಗಿರುವ ವಿಶಾಲ ಭಾರತದ ನಗರ ಮತ್ತು ಹಳ್ಳಿಗಳ ಅಸಂಖ್ಯಾತ ‘ನಿರ್ಭಯರು' ಆವತ್ತೂ ಇವತ್ತೂ ಎದುರಿಸುತ್ತಲೇ ಇದ್ದಾರೆ. ಗಂಡ, ಮಾವ, ತಂದೆ, ಅಣ್ಣ ಮತ್ತಿತರರ ರೂಪದಲ್ಲಿ ಈ ‘ನಿರ್ಭಯರು' ದಿನಂಪ್ರತಿ ಹಿಂಸೆಯನ್ನು ಅನುಭವಿಸುತ್ತಲೇ ಇದ್ದಾರೆ. ಕೋಟ್ಯಂತರ ಮನೆಗಳು ಇವತ್ತು ಕೇವಲ ಮದ್ಯದಿಂದಾಗಿ ಮಸಣದಂತೆ ಬದುಕುತ್ತಿವೆ. ನಿತ್ಯ ಹಿಂಸೆ-ಜಗಳಗಳಿಗೆ ಅದು ಕಾರಣವಾಗುತ್ತಿದೆ. ಕುಡುಕ ಪತಿಯಿಂದ ಪತ್ನಿಯ ಕೊಲೆ, ಪತ್ನಿ ಆತ್ಮಹತ್ಯೆ, ಕುಡುಕ ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಕುಡಿದು ಅತ್ಯಾಚಾರಗೈದ ಯುವಕರು.. ಇಂಥ ಶೀರ್ಷಿಕೆಯಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗದ ದಿನಗಳೇ ಇಲ್ಲವೆಂಬಷ್ಟು ಅದು ಮಾಮೂಲಿಯಾಗಿದೆ. ಒಂದು ವೇಳೆ, ನಿರ್ಭಯ ಪ್ರಕರಣದ ಚರ್ಚೆಯನ್ನು ಮದ್ಯಪಾನದ ಮೇಲೆ ಕೇಂದ್ರೀಕರಿಸಿ ಮಾಡಿರುತ್ತಿದ್ದರೆ ಅದು ಈ ದೇಶದ ಪ್ರಜ್ಞೆಯನ್ನೇ ಕಲಕಿ ಬಿಡುವಷ್ಟು ಪರಿಣಾಮಕಾರಿಯಾಗುತ್ತಿತ್ತು. ಅಸಂಖ್ಯಾತ ನಿರ್ಭಯರ ಕರುಳು ಮಿಡಿಯುವ ಕತೆಗಳನ್ನು ಆ ಚರ್ಚೆ ಮುನ್ನೆಲೆಗೆ ತರುತ್ತಿತ್ತು. ಇನ್ನಷ್ಟು ನಿರ್ಭಯರನ್ನು ಅತ್ಯಾಚಾರದಿಂದ, ನೇಣಿನಿಂದ ಅಥವಾ ದೌರ್ಜನ್ಯದಿಂದ ಮುಕ್ತಗೊಳಿಸಲು ಯಶಸ್ವಿಯಾಗುತ್ತಿತ್ತು. ಆದರೆ, ನಿರ್ಭಯ ಚರ್ಚೆಯು ಅಂತಿಮವಾಗಿ ದುರ್ಬಲ ಕಾನೂನುಗಳನ್ನೇ ಅಪರಾಧಿ ಎಂದು ಸಾರಿಬಿಟ್ಟಿತು. ಅದಕ್ಕಾಗಿ ನಮ್ಮನ್ನಾಳುವವರು ಕೆಲವು ಕಾನೂನುಗಳನ್ನು ರಚಿಸಿ ಸಮಾಜದ ಆಕ್ರೋಶವನ್ನು ತಣಿಸಲೆತ್ನಿಸಿದರು. ನಿರ್ಭಯ ನಿಧಿಯನ್ನು ಸ್ಥಾಪಿಸಿದರು. ಆದರೆ, ಇದರಿಂದ ನಿರ್ಭಯರ ಸಂಖ್ಯೆಯಲ್ಲೇನೂ ಕಡಿಮೆ ಆಗಲಿಲ್ಲ.
  ನಿಜವಾಗಿ, ಕಾನೂನಿನ ಸಕಲ ಭಯವನ್ನೂ ಕಿತ್ತು ಹಾಕುವ ಸಾಮರ್ಥ್ಯವೊಂದು ಮದ್ಯದಲ್ಲಿದೆ. ಆ ಕ್ಷಣದಲ್ಲಿ ಅದು ಎಲ್ಲವನ್ನೂ ಮರೆಸುತ್ತದೆ. ಇಷ್ಟ ಬಂದದ್ದನ್ನು ಮಾಡುವಂತೆ ಪ್ರೇರೇಪಿಸುತ್ತದೆ. ‘ನಿರ್ಭಯ' ಪ್ರಕರಣದ ಬಳಿಕ ಈ ದೇಶದಲ್ಲಿ ನಡೆದ ಅಸಂಖ್ಯ ಅತ್ಯಾಚಾರ-ಹಿಂಸೆಯ ಘಟನೆಗಳೇ ಇದಕ್ಕೆ ಸ್ಪಷ್ಟ ಪುರಾವೆ. ಆದ್ದರಿಂದಲೇ, ನಿತೀಶ್ ಕುಮಾರ್‍ರ ಘೋಷಣೆಯನ್ನು ಅಸಹಿಷ್ಣು ಚರ್ಚೆಗೆ ಹೊಸತೊಂದು ತಿರುವಾಗಿ ಪರಿಗಣಿಸಲು ಮಾಧ್ಯಮಗಳು ಮತ್ತು ಮುಖ್ಯವಾಹಿನಿಯ ಪ್ರಮುಖರಿಗೆ ಸಾಧ್ಯ ಆಗಬೇಕಿತ್ತು. ‘ಅಸಹಿಷ್ಣು' ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸುವವರಿಗೂ ಇದರಲ್ಲಿ ಪಾಲುಗೊಳ್ಳಬಹುದಿತ್ತು. ಅಷ್ಟಕ್ಕೂ, ಮದ್ಯ ಎಂಬ ಅಸಹಿಷ್ಣುವಿನಿಂದ ಪ್ರತಿದಿನ ಈ ದೇಶದ ಅಸಂಖ್ಯ ಮಂದಿ ಕಿರುಕುಳ, ಹಿಂಸೆ, ಅವಮಾನ ಮತ್ತು ಮಾನಭಯವನ್ನು ಎದುರಿಸುತ್ತಿದ್ದರೂ ಅದು ಅಸಹಿಷ್ಣು ಪಟ್ಟಿಯಲ್ಲಿ ಸೇರದಿರುವುದು ಮತ್ತು ದೇಶದ ಗೌರವಕ್ಕೆ ಧಕ್ಕೆ ಎನಿಸದಿರುವುದು ಯಾವ ಕಾರಣದಿಂದ? ಮದ್ಯಪಾನದ ಬಗ್ಗೆ ಈ ಮಟ್ಟಿನ ಸಹಿಷ್ಣುತೆ ಏಕೆ? ಇದರ ಅಸಹಿಷ್ಣುತೆಗೆ ಅತ್ಯಂತ ಹೆಚ್ಚು ಗುರಿಯಾಗುವುದು ಮಹಿಳೆಯರೇ ಎಂಬುದು ಗೊತ್ತಿದ್ದೂ ಈ ಸಹಿಷ್ಣುತೆ ಯಾಕಾಗಿ?
  ನಿತೀಶ್ ಕುಮಾರ್‍ರ ಮದ್ಯಪಾನ ನಿಷೇಧ ಘೋಷಣೆಯು ಸಹಿಷ್ಣು ಭಾರತವನ್ನು ಕಟ್ಟುವಲ್ಲಿ ಮೈಲುಗಲ್ಲಾಗಲಿ.

Thursday 26 November 2015

ಗೋಡೆಯಲ್ಲಿ ತೂಗುವ 'ಚೌಕಟ್ಟಿನೊಳಗಿನ ಚಿತ್ರ'ವಾಗಿ ಕಳೆದುಹೋಗುವುದೇ ಗೋವು?


       ರಾಜಸ್ಥಾನದ ಜೈಪುರದಲ್ಲಿ ಕಳೆದ ವಾರ ನಡೆದ ಘಟನೆಯೊಂದು ಗೋವನ್ನು ಮತ್ತೊಮ್ಮೆ ಚರ್ಚೆಗೆ ಎಳೆದು ತಂದಿದೆ. ಜೈಪುರದ ಜವಾಹರ್ ಕಲಾ ಕೇಂದ್ರದಲ್ಲಿ ಕಲಾ ಸಮ್ಮೇಳನವೊಂದು ನಡೆಯುತ್ತಿತ್ತು. ಸಿದ್ಧಾರ್ಥ ಕರಾರ್‍ವಲ್ ಎಂಬ ಕಲಾವಿದರು ರಚಿಸಿದ ಪ್ಲಾಸ್ಟಿಕ್ ಗೋವನ್ನು ಅದರಲ್ಲಿ ಪ್ರದರ್ಶಿಸಲಾಯಿತು. ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅನಾಹುತಗಳನ್ನು ಬಿಂಬಿಸುವುದು ಅದರ ಉದ್ದೇಶವಾಗಿತ್ತು. ಪ್ಲಾಸ್ಟಿಕ್ ತಿಂದು ಗೋವುಗಳು ಸಾವನ್ನಪ್ಪುತ್ತಿರುವುದೂ ಸೇರಿದಂತೆ ಪ್ರಾಣಿಗಳ ಮೇಲೆ ಪ್ಲಾಸ್ಟಿಕ್ ಬೀರುವ ಅಡ್ಡ ಪರಿಣಾಮವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ ಗುರಿಯನ್ನು ಆ ಪ್ಲಾಸ್ಟಿಕ್ ಗೋವು ಹೊಂದಿತ್ತು. ಆ ಕಾರಣದಿಂದಲೇ ಆ ಗೋವಿಗೆ ಬಲೂನ್ ಕಟ್ಟಿ ಸುಮಾರು 50 ಅಡಿ ಎತ್ತರದಲ್ಲಿ ಹಾರಿಸಲಾಯಿತು. ಇದಾದ ಅರ್ಧ ಗಂಟೆಯೊಳಗೆ ಅಲ್ಲಿಗೆ ಬಲಪಂಥೀಯ ಗುಂಪುಗಳು ಆಗಮಿಸಿದುವು. ಪ್ಲಾಸ್ಟಿಕ್ ಗೋವಿನ ಹಾರಾಟವನ್ನು ಹಿಂಪಡೆಯುವಂತೆ ಆಗ್ರಹಿಸಿದುವು. ಅವರ ಹಿಂದೆಯೇ ಅಲ್ಲಿಗೆ ಮಹೇಂದ್ರ ಗುಪ್ತಾ ಎಂಬ ಅಧಿಕಾರಿಯ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು ಹಾರಾಡುತ್ತಿದ್ದ ಪ್ಲಾಸ್ಟಿಕ್ ಗೋವನ್ನು ಬಲವಂತದಿಂದ ಇಳಿಸಿದರು. ಅದನ್ನು ಕಲೆ ಎಂದು ಒಪ್ಪಲು ಮಹೇಂದ್ರ ಗುಪ್ತಾ ನಿರಾಕರಿಸಿದರು. ಅದು ಭಾವನೆಗೆ ಧಕ್ಕೆ ತರುತ್ತದೆ ಎಂದು ವಾದಿಸಿದರು. ಅಲ್ಲದೇ, ‘ಸಂದರ್ಭ್ ಇಂಟರ್‍ನ್ಯಾಶನಲ್ ಆರ್ಟಿಸ್ಟ್ ರೆಸಿಡೆನ್ಸಿ’ಯ ಅನಿಶ್ ಅಹ್ಲುವಾಲಿಯ ಮತ್ತು ಚಿಂತನ್ ಉಪಾಧ್ಯಾಯ ಎಂಬ ಕಲಾವಿದರನ್ನು ಅಲ್ಲಿಂದ ಬಂಧಿಸಿ ಕರೆದೊಯ್ದು 3 ಗಂಟೆಗಳ ಕಾಲ ಬಂಧನದಲ್ಲಿರಿಸಿದರು. ಘಟನೆ ವಿವಾದದ ಸ್ವರೂಪವನ್ನು ಪಡೆಯುತ್ತಿರುವಂತೆಯೇ ಮುಖ್ಯಮಂತ್ರಿ ವಸುಂಧರಾ ರಾಜೇ ಕ್ಷಮೆ ಯಾಚಿಸಿದರು. ಮಹೇಂದ್ರ ಗುಪ್ತಾರನ್ನು ಹುದ್ದೆಯಿಂದ ವಜಾಗೊಳಿಸಿದರು. ನಿಜವಾಗಿ, ಈ ಪ್ರಕರಣವು ಬಾಹ್ಯನೋಟಕ್ಕೆ ಇಲ್ಲಿಗೇ ಕೊನೆಗೊಂಡಂತೆ ಕಂಡರೂ ಒಂದು ರೀತಿಯಲ್ಲಿ ಈ ಕೊನೆಯೇ ಕೆಲವಾರು ಪ್ರಶ್ನೆಗಳಿಗೆ ಆರಂಭವನ್ನೂ ಒದಗಿಸುತ್ತದೆ. ಗೋವನ್ನು ಗೌರವಿಸುವ ಶಿಷ್ಠ ಮಾದರಿಗಳು ಯಾವುವು? ಪ್ಲಾಸ್ಟಿಕ್ ತಿಂದು ಗೋವುಗಳು ಸಾಯುತ್ತಿರುವುದನ್ನು ಅಭಿವ್ಯಕ್ತಪಡಿಸುವ ಕಲೆಯಲ್ಲಿ ಪೊಲೀಸ್ ಅಧಿಕಾರಿಯೋರ್ವರು ‘ಭಾವನೆಗೆ ಧಕ್ಕೆ’ಯನ್ನು ಪತ್ತೆ ಹಚ್ಚುತ್ತಾರಾದರೆ, ಅವರ ‘ಭಾವನೆ' ರೂಪ ಪಡೆದದ್ದಾದರೂ ಎಲ್ಲಿ? ಹಾಗಂತ, ಬಲಪಂಥೀಯ ಗುಂಪುಗಳಿಗೆ ಅವುಗಳದ್ದೇ ಆದ ರಾಜಕೀಯ ಮತ್ತು ಇನ್ನಿತರ ಉದ್ದೇಶಗಳಿರಬಹುದು. ಅವನ್ನು ಈಡೇರಿಸಿಕೊಳ್ಳುವಲ್ಲಿ ಸಂದರ್ಭಾನುಸಾರ ಅವು ಪ್ರಯತ್ನಗಳನ್ನೂ ನಡೆಸುತ್ತಿರಬಹುದು. ಆದರೆ, ಇಂಥ ಗುಂಪುಗಳ ಭಾವನೆಯು ಪೊಲೀಸ್ ಅಧಿಕಾರಿಯ ಭಾವನೆಯೂ ಆಗಿ ಪರಿವರ್ತನೆ ಆಗಬಾರದಲ್ಲವೇ? ಆ ಗುಂಪುಗಳು ಆಲೋಚಿಸಿದಂತೆಯೇ ಅಧಿಕಾರಿಯೂ ಆಲೋಚಿಸುವುದಾದರೆ, ಅದರ ಪರಿಣಾಮ ಏನಾಗಬಹುದು? ಅಂದಹಾಗೆ, ಇದು ಕೇವಲ ಈ ‘ಪ್ಲಾಸ್ಟಿಕ್ ಗೋವು’ ಪ್ರಕರಣಕ್ಕೆ ಮಾತ್ರ ಸಂಬಂಧಿಸಿ ಹುಟ್ಟಿಕೊಳ್ಳುವ ಪ್ರಶ್ನೆಗಳಲ್ಲ. ವಾರಗಳ ಹಿಂದಷ್ಟೇ ದೆಹಲಿಯ ಪೊಲೀಸರೂ ಹೀಗೆಯೇ ವರ್ತಿಸಿದ್ದರು. ಸಂಘಪರಿವಾರದ ದೂರನ್ನು ಯಥಾವತ್ತಾಗಿ ಸ್ವೀಕರಿಸಿ ‘ಕೇರಳ ಭವನದ' ಮೇಲೆ ದಾಳಿ ನಡೆಸಿದ್ದರು. ಅನೈತಿಕ ಗೂಂಡಾಗಿರಿ, ಮತಾಂತರ, ಕೋಮುಗಲಭೆ.. ಮುಂತಾದ ದೂರುಗಳ ಸಂದರ್ಭಗಳಲ್ಲೆಲ್ಲಾ ಪೊಲೀಸ್ ಇಲಾಖೆಯಿಂದ ಇಂಥ ವರ್ತನೆಗಳು ಪದೇ ಪದೇ ಮರುಕಳಿಸುತ್ತಿವೆ. ಯಾಕೆ ಹೀಗೆ? ಪೊಲೀಸ್ ಇಲಾಖೆಯು ಸನ್ನಿವೇಶವನ್ನು ತನ್ನ ಭಾವನೆಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆಯೇ ಅಥವಾ ಘಟನೆಯನ್ನು ಪರಾಮರ್ಶಿಸುವಲ್ಲಿ ಮತ್ತು ನ್ಯಾಯಕ್ಕೆ ನಿಷ್ಠವಾಗುವಲ್ಲಿ ಎಡವುತ್ತಿದೆಯೇ? ಅಷ್ಟಕ್ಕೂ,  
      ಬಲಪಂಥೀಯ ಗುಂಪುಗಳು ಗೋವಿನ ಸುತ್ತ ಈ ಬಗೆಯ ಬೇಲಿಯನ್ನು ಹಾಕತೊಡಗಿದರೆ, ಭವಿಷ್ಯದಲ್ಲಿ ಗೋವುಗಳ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನಾಗಿರಬಹುದು? ಗೋವನ್ನು ರೂಪಕವಾಗಿಯೋ ಕಲಾ ಪ್ರಕಾರದಲ್ಲೋ ಅಥವಾ ಇನ್ನಿತರ ರೂಪದಲ್ಲೋ ಅಭಿವ್ಯಕ್ತಗೊಳಿಸುವುದನ್ನೇ ತಡೆಯುವುದು ಗೋವುಗಳಿಗೆ ಲಾಭ ತಂದುಕೊಟ್ಟೀತೇ? ಗೋವಿನ ಕುರಿತಂತೆ ಗೌರವಾದರದ ಮತ್ತು ಆರಾಧನೆಯ ಮಾತುಗಳೇನೇ ಇರಲಿ, ಅದನ್ನು ಪ್ರಾಣಿಗಳ ಗುಂಪಿನಿಂದ ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ತನ್ನನ್ನು ಆರಾಧಿಸಲಾಗುತ್ತಿದೆ ಎಂಬುದನ್ನು ಅರಿಯದಷ್ಟೂ ಮುಗ್ಧತನ ಅವಕ್ಕಿದೆ. ಅದು ಗದ್ದೆಯನ್ನು ಉಳುತ್ತದೆ. ಹಾಲೂ ಕೊಡುತ್ತದೆ. ಆಹಾರವೂ ಆಗುತ್ತದೆ. ಹೈನುದ್ಯಮವು ಈ ದೇಶದಲ್ಲಿ ಇವತ್ತು ಬೃಹತ್ ಮಾರುಕಟ್ಟೆ ಸ್ವರೂಪವನ್ನು ಪಡೆದುಕೊಂಡಿದ್ದರೆ ಅದರ ಮೂಲ ಬಂಡವಾಳವೇ ಗೋವು. ಅದು ಅತ್ಯಂತ ಉಪಯುಕ್ತ ಪ್ರಾಣಿ ಎಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ಈ ಉಪಯುಕ್ತ ಪ್ರಾಣಿಯನ್ನು ಗೌರವಿಸುವ ವಿಧಾನ ಹೇಗೆ? ಪ್ಲಾಸ್ಟಿಕ್ ಗೋವನ್ನು ಹಾರಿಸುವುದಕ್ಕೆ ತಡೆ ಒಡ್ಡುವ ಮನಸ್ಥಿತಿಯು ಅಂತಿಮವಾಗಿ ಗೋವನ್ನು ಯಾವ ಸ್ಥಿತಿಗೆ ತಲುಪಿಸೀತು? ಗೋವನ್ನು ಮುಟ್ಟಿದರೂ ತಪ್ಪು, ಅದರ ಚಿತ್ರ ಬಿಡಿಸಿದರೂ ತಪ್ಪು, ಆಟಿಕೆಯಾಗಿ ಬಳಕೆಯಾದರೂ ತಪ್ಪು.. ಎಂಬ ವಾತಾವರಣ ಸೃಷ್ಟಿಯಾಗುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳಿ. ಅದು ಗೋವುಗಳಿಗೆ ಲಾಭ ತಂದುಕೊಡಬಹುದೇ?  
     ನಿಜವಾಗಿ, ಆರಾಧನೆಯ ಉಚ್ಛ್ರಾಯ ಹಂತಕ್ಕೆ ಪ್ರಾಣಿಯೊಂದು ತಲುಪುವುದೆಂದರೆ, ಅದರರ್ಥ ಆ ಪ್ರಾಣಿ ವಿನಾಶದ ಅಂಚಿಗೆ ತಲುಪುತ್ತಿದೆ ಎಂದೂ ಆಗುತ್ತದೆ. ಗೋವು ಅನಾದಿ ಕಾಲದಿಂದಲೇ ಭಾರತೀಯ ಉಪಭೂಖಂಡದ ಅತಿ ಉಪಯುಕ್ತ ಪ್ರಾಣಿ. ಅದು ಜನರ ಭಾವ ಮತ್ತು ಭಕುತಿಗೆ ತಕ್ಕಂತೆ ಉಪಯೋಗವಾಗುತ್ತಲೇ ಬಂದಿದೆ. ಆದರೆ ಇವತ್ತು ಗೋವಿನ ಸುತ್ತ ಒಂದು ಮಿಥ್ಯ ಪ್ರಭಾವಳಿಯನ್ನು ಸೃಷ್ಟಿಸಲಾಗಿದೆ. ಅತಿರಂಜಿತ ಕತೆಗಳನ್ನು ಹುಟ್ಟುಹಾಕಲಾಗಿದೆ. ಗೋವಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ವೈಭವೀಕರಿಸಿ ಹೇಳಲಾಗುತ್ತಿದೆ. ಇದರಿಂದ ಆಗುವ ಹಾನಿಯೆಂದರೆ, ಗೋವು ದಿನೇ ದಿನೇ ಜನರಿಂದ ದೂರವಾಗುತ್ತಾ ಹೋಗುವುದು. ಹಾಗಂತ, ಸಾಮಾನ್ಯ ಮಂದಿ ಗೋವನ್ನು ಸಾಕುವುದು ಬರೇ ಶ್ರದ್ಧಾ ಭಕ್ತಿಯಿಂದ ಖಂಡಿತ ಅಲ್ಲ. ಗೋವಿನ ನಾನಾ ಬಗೆಯ ಉಪಯೋಗಗಳೇ ಅದರ ಸಾಕಾಣಿಕೆಗೆ ಪ್ರಮುಖ ಪ್ರೇರಣೆ. ಗೋವನ್ನು ಖರೀದಿಸುವ, ಸಾಕುವ ಮತ್ತು ಮಾರುವ ಒಂದು ಪ್ರಕ್ರಿಯೆಯಿಂದಾಗಿಯೇ ಗೋವುಗಳು ಈವರೆಗೂ ಜನರ ನಡುವಿನ ಪ್ರಾಣಿಯಾಗಿ ಉಳಿದುಕೊಂಡಿದೆ. ಗೋವು ಸಂತತಿಯ ಉಳಿವು ಮತ್ತು ವೃದ್ಧಿಯಲ್ಲೂ ಈ ಪ್ರಕ್ರಿಯೆಯೇ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ಇವತ್ತು ಏಕಾಏಕಿ ಈ ಪ್ರಕ್ರಿಯೆಯನ್ನೇ ರದ್ದುಗೊಳಿಸಲು ಹೊರಟರೆ ಜನರು ಗೋವನ್ನು ನೋಡುವ ವಿಧಾನವೇ ಬದಲಾಗಬಹುದು. ಅದನ್ನು ಪ್ಲಾಸ್ಟಿಕ್ ಕಲಾಕೃತಿಯಾಗಿ ರಚಿಸುವುದಕ್ಕೂ ಅಡ್ಡಿಪಡಿಸುವಂತಹ ‘ಗೋಪ್ರೇಮ'ದಿಂದ ಅಡ್ಡಿಪಡಿಸುವವರಿಗೆ ರಾಜಕೀಯ ಲಾಭ ಎಷ್ಟು ಸಿಗುತ್ತದೋ ಗೊತ್ತಿಲ್ಲ, ಆದರೆ ಗೋವುಗಳಂತೂ ವಿನಾಶದ ಅಂಚಿಗೆ ತಲುಪಲೇಬೇಕಾದ ಅನಿವಾರ್ಯತೆಗೆ
ಸಿಲುಕಬಹುದು. ಸಾಮಾನ್ಯವಾಗಿ ಹಾಲು ಕೊಡುವುದನ್ನು ನಿಲ್ಲಿಸಿದ ಹಸುವು ಮುಂದಿನ 10 ವರ್ಷಗಳ ವರೆಗಾದರೂ ಬದುಕಿರುತ್ತದೆ. ಈ 10 ವರ್ಷ ಗೋವನ್ನು ಸಾಕುವ ಸಾಮರ್ಥ್ಯ ಮತ್ತು ಆರ್ಥಿಕ ಬಲ ಎಷ್ಟು ಮಂದಿಗೆ ಇರಬಹುದು? ಬರೇ ಶ್ರದ್ಧೆಯಿಂದ ಗೊಡ್ಡು ಹಸುವನ್ನು ಸಾಕುವ ಎಷ್ಟು ಮಂದಿ ಇವತ್ತು ಈ ದೇಶದಲ್ಲಿದ್ದಾರೆ? ಗೋ ಸಾಕಾಣಿಕೆದಾರರ ಮೇಲೆ ಗೊಡ್ಡು ಹಸುವನ್ನೂ ಸಾಕುವ ಮತ್ತು ಮಾರಾಟ ಮಾಡಲಾಗದಂಥ ಅನಿವಾರ್ಯತೆಯನ್ನು ಸೃಷ್ಟಿಸಿದರೆ ಅಂತಿಮವಾಗಿ ಅದು ಗೋವನ್ನು ಸಾಕುವವರೇ ಅಪರೂಪವಾಗುವಂತಹ ಹಂತಕ್ಕೆ ಕೊಂಡೊಯ್ಯಬಹುದು. ಕೊನೆಗೆ ಗೋವೂ ಚೌಕಟ್ಟಿನೊಳಗಿನ ಗೋಡೆಚಿತ್ರವಾಗಿ ಮಾತ್ರ ಉಳಿಯುವ ಮತ್ತು ಬೆಳಗ್ಗೆಯೋ ರಾತ್ರಿಯೋ ಪೂಜೆಗೊಳ್ಳುವ ಸ್ಥಿತಿಗೆ ತಲುಪಬಹುದು. ಇವತ್ತು ಗೋವಿನ ಹೆಸರಲ್ಲಿ ನಡೆಯುತ್ತಿರುವ ಉನ್ಮಾದಿತ ಪ್ರಕ್ರಿಯೆಗಳು ಈ ಅಪಾಯವನ್ನೇ ಸೂಚಿಸುತ್ತಿವೆ. ಜೈಪುರದ ‘ಪ್ಲಾಸ್ಟಿಕ್ ಗೋವು' ಇದರ ರೂಪಕ ಅಷ್ಟೇ.




Wednesday 18 November 2015

ಅಣ್ಣಂದಿರೇ, ಚೂರಿ ಎತ್ತಿಕೊಳ್ಳುವ ಮೊದಲು..

ಕೆ.ಪಿ. ಪೊನ್ನಾರ್ ಮತ್ತು ಕೃತಿಕಾ
      ಮಾನವ ಪ್ರಾಣದ ನೆಲೆ, ಬೆಲೆ ಮತ್ತು ಗೌರವದ ಕುರಿತಂತೆ ನಮ್ಮನ್ನು ಗಂಭೀರ ಚಿಂತನೆಗೆ ಒತ್ತಾಯಿಸುವ ಘಟನೆಗಳು ಕಳೆದವಾರ ಸಂಭವಿಸಿವೆ. ಕೆ.ಪಿ. ಪೊನ್ನಾರ್ ಎಂಬ 31 ವರ್ಷದ ಇಂಜಿನಿಯರ್ ಯುವಕ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಕಳೆದವಾರ ಲವಲವಿಕೆಯಿಂದ ಮಾತಾಡಿದ್ದಾನೆ. ಹೀಗೆ ಮಾತಾಡುವುದಕ್ಕಿಂತ ಮೊದಲು 6 ವರ್ಷಗಳ ವರೆಗೆ ಆತ ಬದುಕು ಭಾರವಾಗಿ ಮಲಗಿದ್ದ. ಸಾವನ್ನು ಗೆಲ್ಲಲಾರೆನೇನೋ ಅನ್ನುವ ಭೀತಿಯೊಂದಿಗೆ ಆಸ್ಪತ್ರೆಯ ಮಂಚದಲ್ಲಿ 6 ವರ್ಷಗಳನ್ನು ದೂಡಿದ್ದ. ಆತನ ಹೃದಯ ಮತ್ತು ಪಿತ್ತಕೋಶ ಎರಡೂ ಸಂಪೂರ್ಣ ನಿಷ್ಕ್ರಿಯಗೊಂಡಿದ್ದುವು. ಅದನ್ನು ಕಿತ್ತುಹಾಕಲೇಬೇಕಿತ್ತು ಮತ್ತು ದಾನಿಗಳಿಂದ ಪಡೆದ ಹೃದಯ ಮತ್ತು ಪಿತ್ತಕೋಶವನ್ನು ಬದಲಿಯಾಗಿ ಜೋಡಿಸಿದರೆ ಮಾತ್ರ ಆತ ಬದುಕುಳಿಯಬಹುದಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿ. ಜಾಗತಿಕವಾಗಿಯೇ ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಇಂಥ ದುಬಾರಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ಹೀಗಿರುತ್ತಾ, ಮೆದುಳು ಸತ್ತ ಓರ್ವ ರೋಗಿಯ ಹೃದಯ ಮತ್ತು ಪಿತ್ತಕೋಶವನ್ನು ಪಡೆದು ಅದನ್ನು ಪೊನ್ನಾರ್‍ಗೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಕಳೆದವಾರ ಕೈಗೊಳ್ಳಲಾಯಿತು. ಸರ್ಜನ್‍ಗಳ ನಾಲ್ಕು ತಂಡ ಸತತ 8 ಗಂಟೆಗಳ ದೀರ್ಘ ಅವಧಿಯ ವರೆಗೆ ಶಸ್ತ್ರಚಿಕಿತ್ಸೆಯಲ್ಲಿ ನಿರತವಾದುವು. ಆ 8 ಗಂಟೆಗಳ ಉದ್ದಕ್ಕೂ ಪೊನ್ನಾರ್‍ನ ಕುಟುಂಬದಲ್ಲಿ ಆತಂಕ ಮತ್ತು ಭೀತಿ ತುಂಬಿಕೊಂಡಿದ್ದುವು. ಆ ಒಂದು ಜೀವಕ್ಕಾಗಿ ಒಂದು ಕುಟುಂಬ ಮಾತ್ರವಲ್ಲ, ಇಡೀ ಆಸ್ಪತ್ರೆಯೇ ಪ್ರಾರ್ಥಿಸುವಷ್ಟರ ಮಟ್ಟಿಗೆ ವಾತಾವರಣ ಭಾವುಕವಾಗಿತ್ತು. ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಅಮೇರಿಕದಲ್ಲಿ 12 ಕೋಟಿ ರೂಪಾಯಿ ವೆಚ್ಚ ತಗಲಬಹುದಾದ ಶಸ್ತ್ರಚಿಕಿತ್ಸೆಯನ್ನು 43 ಲಕ್ಷಗಳಲ್ಲಿ ಮಾಡಿ ಮುಗಿಸಿರುವುದಾಗಿ ಆಸ್ಪತ್ರೆ ಹೇಳಿಕೊಂಡಿತು. ಪೊನ್ನಾರ್ ಮಾಧ್ಯಮಗಳೊಂದಿಗೆ ಮಾತಾಡಿದ. ತಂಗಿ ಕೃತಿಕಾ ತನ್ನಣ್ಣನ ಅರಳಿದ ಕಣ್ಣುಗಳನ್ನು ತುಂಬಿಕೊಂಡು ಭಾವುಕಳಾದಳು.
  ದುರಂತ ಏನೆಂದರೆ, ಅಣ್ಣ ಮರಳಿ ಸಿಕ್ಕಿದ ಖುಷಿಯನ್ನು ತಂಗಿಯೋರ್ವಳು ಅಪೋಲೋ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿರುವಾಗ ಇತ್ತ ಕರ್ನಾಟಕದಲ್ಲಿ ಇಂಥ ಅಣ್ಣಂದಿರನ್ನು ಸಾಯಿಸುವ ಚಳವಳಿ ನಡೆಯುತ್ತಿತ್ತು. ಮಡಿಕೇರಿ ಮತ್ತು ಮಂಗಳೂರಿನಲ್ಲಿ 4 ಮಂದಿ ಅಣ್ಣಂದಿರನ್ನು ಹತ್ಯೆ ಮಾಡಲಾಯಿತು. ಹಲವಾರು ಅಣ್ಣಂದಿರಿಗೆ ಚೂರಿ ಹಾಕಲಾಯಿತು. 43 ಲಕ್ಷ ತೆತ್ತು ಅಣ್ಣನನ್ನು ಉಳಿಸಿಕೊಂಡ ತಂಗಿ ಒಂದು ಕಡೆಯಾದರೆ ದ್ವೇಷದ ಅಮಲು ಹತ್ತಿಸಿಕೊಂಡವರಿಂದ ತಂಗಿ, ತಾಯಂದಿರನ್ನು ಅನಾಥಗೊಳಿಸುವ ಪ್ರಯತ್ನ ಇನ್ನೊಂದು ಕಡೆ. ಯಾಕೆ ಈ ದ್ವಂದ್ವ? ಹಾಗಂತ, ಪ್ರಾಣ ಎಷ್ಟು ಅಮೂಲ್ಯ ಅನ್ನುವುದಕ್ಕೆ ಕೇವಲ ಪೊನ್ನಾರ್ ಓರ್ವನೇ ಉದಾಹರಣೆ ಅಲ್ಲ, ನಮ್ಮ ಸುತ್ತ-ಮುತ್ತಲಿನ ಆಸ್ಪತ್ರೆಗಳಲ್ಲಿರುವ ಅಸಂಖ್ಯ ರೋಗಿಗಳೇ ಅದಕ್ಕೆ ಪರಮ ಪುರಾವೆ. ಹಿರಿ ಜೀವಗಳಿಂದ ಹಿಡಿದು ಪುಟಾಣಿಗಳ ವರೆಗೆ ಬದುಕುವುದಕ್ಕಾಗಿ ಎಲ್ಲೆಡೆ ಹೋರಾಟಗಳು ನಡೆಯುತ್ತಿವೆ. ಪ್ರತಿದಿನ ಕೋಟ್ಯಂತರ ರೂಪಾಯಿಗಳು ಈ ಒಂದೇ ಕಾರಣಕ್ಕಾಗಿ ಖರ್ಚಾಗುತ್ತಿವೆ. ‘ಇನ್ನು ಬದುಕಿ ಉಳಿಯುವುದಕ್ಕೆ ಸಾಧ್ಯವೇ ಇಲ್ಲ' ಎಂದು ಆಸ್ಪತ್ರೆಯಿಂದ ವೈದ್ಯರು ಮನೆಗೆ ಕಳುಹಿಸಿಕೊಟ್ಟ ರೋಗಿಯಲ್ಲೂ ಎಲ್ಲೋ ಒಂದು ಮೂಲೆಯಲ್ಲಿ ಬದುಕಿ ಉಳಿಯುವ ಭರವಸೆ ಇರುತ್ತದೆ. ಇನ್ನೂ ನಡೆಯಲಾರದ ಮತ್ತು ಮಾತನಾಡಲಾರದ ಶಿಶುವಿನ ಕಾಲಬುಡದಲ್ಲಿ ಕೂತು ತಾಯಿ ಮಗುವಿನ ರೋಗ ಶಮನಕ್ಕಾಗಿ ಕಣ್ಣೀರಿಳಿಸುತ್ತಾಳೆ. ‘ಗುಣಮುಖವಾದರೂ ಪತಿಯಿಂದ ಇನ್ನು ದುಡಿಯಲು ಸಾಧ್ಯವಿಲ್ಲ’ ಎಂದು ಗೊತ್ತಿದ್ದೂ ಪತಿ ಗುಣಮುಖವಾಗಲೆಂದು ಪತ್ನಿ ಪ್ರಾರ್ಥಿಸುತ್ತಾಳೆ. ನಮ್ಮ ಅಕ್ಕ-ಪಕ್ಕದಲ್ಲಿ, ಸಂಬಂಧಿಕರಲ್ಲಿ ಅಥವಾ ಆಸ್ಪತ್ರೆಗಳಲ್ಲಿ ನಿತ್ಯ ಕಾಣಸಿಗುವ ದೃಶ್ಯಗಳಿವು. ರಕ್ತ ಚೆಲ್ಲುವವರಿಗೆ ಇವು ಯಾಕೆ ಅರ್ಥವಾಗುತ್ತಿಲ್ಲ? ಮಾನವ ಪ್ರಾಣದ ಬೆಲೆ ಜುಜುಬಿ ಆಗಿರುತ್ತಿದ್ದರೆ ಅದನ್ನು ಉಳಿಸಿಕೊಳ್ಳುವುದಕ್ಕೇಕೆ ಆಸ್ಪತ್ರೆಗಳಲ್ಲಿ ಈ ಮಟ್ಟದ ಪ್ರಯತ್ನಗಳು ನಡೆಯುತ್ತಿತ್ತು? 43 ಲಕ್ಷದ ಹಂಗೇ ಇಲ್ಲದೆ ಕೃತಿಕಾ ಏಕೆ ತನ್ನನ್ನು ಕಣ್ತುಂಬಿಕೊಳ್ಳುತ್ತಿದ್ದಳು? ‘ಇನ್ನು ದುಡಿದು ಕೊಡಲಾರ' ಎಂದು ಖಚಿತವಾಗಿ ಗೊತ್ತಿದ್ದೂ ವೃದ್ಧ ಜೀವಕ್ಕಾಗಿ, ಅಂಗವಿಕಲ ಶಿಶುವಿಗಾಗಿ ಅಥವಾ ಜೀವಚ್ಛವವಾದ ಮಗನಿಗಾಗಿ ಓರ್ವ ತಾಯಿ, ಪತ್ನಿ, ಮಕ್ಕಳೇಕೆ ಪ್ರಾರ್ಥಿಸುತ್ತಾರೆ? ಚೂರಿಯನ್ನು ಹಿಡಿಯುವ ಕೈಗಳೇಕೆ ಹೀಗೆ ಆಲೋಚಿಸುತ್ತಿಲ್ಲ? ಚೂರಿಗೆ ಧರ್ಮ ಇಲ್ಲ. ಜೀವವೂ ಇಲ್ಲ. ಅದು ತನಗೆ ಒಪ್ಪಿಸಿದ ಕೆಲಸವನ್ನು ನಾಜೂಕಾಗಿ ಮಾಡುತ್ತದೆ. ಆದರೆ ಚೂರಿಯನ್ನು ಹಿಡಿಯುವ ಕೈ ಹಾಗಲ್ಲ. ಆ ಕೈಗೆ ಧರ್ಮ ಇದೆ. ಸರಿ-ತಪ್ಪುಗಳ ಪರಿಜ್ಞಾನ ಇದೆ. ಪಾಪ-ಪುಣ್ಯಗಳೇನೆಂಬುದೂ ಗೊತ್ತಿದೆ. ತಾನು ಹಾಕುವ ಚೂರಿಯಿಂದ ಓರ್ವ ಹೆಣ್ಣು ವಿಧವೆಯಾಗಬಹುದು. ಮಕ್ಕಳು ಅನಾಥರಾಗಬಹುದು. ಒಂದು ಮನೆಯ ಏಕೈಕ ಆದಾಯ ಮೂಲವೇ ಕಳೆದು ಹೋಗಬಹುದು. ಕೃತಿಕಾಳಂಥ ತಂಗಿಗೆ ಅಣ್ಣನೋರ್ವ ಶಾಶ್ವತವಾಗಿ ಇಲ್ಲವಾಗಬಹುದು.. ಇವೆಲ್ಲ ಇರಿಯುವ ಕೈಗಳಿಗೆ ಗೊತ್ತಿಲ್ಲವೇ? ಗೊತ್ತಿದ್ದೂ ಅವರು ಹೀಗೆಲ್ಲ ಮಾಡುತ್ತಿದ್ದಾರೆಂದರೆ, ಅವರೊಳಗೆ ತುಂಬಿಕೊಂಡಿರುವ ವಿಷ ಯಾವುದು? ಆ ವಿಷವನ್ನು ತುಂಬಿಸಿರುವವರು ಯಾರು? ಅವರ ಉದ್ದೇಶವೇನು? ಅವರು ಆ ವಿಷವನ್ನು ಎಲ್ಲಿಂದ ಪಡಕೊಂಡಿದ್ದಾರೆ? ಧರ್ಮದಿಂದಲೇ? ಹೌದು ಎಂದಾದರೆ, ಆ ಧರ್ಮವಾದರೂ ಯಾವುದು? ಯಾವ ತಂಗಿಯೂ ತಮ್ಮನೂ ತಾಯಿಯೂ ತಂದೆಯೂ ಪತಿಯೂ ಬಯಸದ ಮತ್ತು ಮನಸಾರೆ ದ್ವೇಷಿಸುವ ಆ ವಿಷವೇಕೆ ನಮ್ಮ ನಡುವೆ ಮತ್ತೆ ಮತ್ತೆ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ?
  ನಿಜವಾಗಿ, ಚೂರಿ ಹಾಕುವವರು ಮತ್ತು ಇರಿತಕ್ಕೊಳಗಾಗುವವರು ಇಬ್ಬರೂ ಈ ಸಮಾಜದ್ದೇ ಪ್ರತಿನಿಧಿಗಳು. ಅದರ ನಡುವೆ ಇರಬಹುದಾದ ವ್ಯತ್ಯಾಸ ಏನೆಂದರೆ, ಹೆಸರು, ನಂಬಿಕೆ ಮತ್ತು ವೇಷ ಭೂಷಣ ಮಾತ್ರ. ಅದರ ಹೊರತಾಗಿ ಚೂರಿ ಹಾಕುವವನ ರಕ್ತಕ್ಕೂ ಇರಿತಕ್ಕೊಳಗಾಗುವವರ ರಕ್ತಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಹಸಿವಾದಾಗ ಇಬ್ಬರೂ ಆಹಾರವನ್ನೇ ಸೇವಿಸುತ್ತಾರೆ. ಸೇವಿಸುವ ಆಹಾರದಲ್ಲಿ ವ್ಯತ್ಯಾಸ ಇರಬಹುದು. ಆದರೆ ಹಸಿವಿನಲ್ಲಿ ವ್ಯತ್ಯಾಸ ಇಲ್ಲ. ಬಾಯಾರಿದಾಗ ಇಬ್ಬರೂ ನೀರನ್ನೇ ಕುಡಿಯುತ್ತಾರೆ. ಕುಡಿಯುವ ನೀರಿನಲ್ಲಿ ವ್ಯತ್ಯಾಸ ಇರಬಹುದು. ಆದರೆ ಬಾಯಾರಿಕೆಯಲ್ಲಿ ವ್ಯತ್ಯಾಸ ಇಲ್ಲ. ಅಣ್ಣ, ತಂಗಿ, ತಮ್ಮ, ತಾಯಿ, ತಂದೆ, ಮಗು, ಪತ್ನಿ.. ಇಂಥದ್ದೊಂದು ಪರಿವಾರ ಇಬ್ಬರಿಗೂ ಇರುತ್ತದೆ. ತಂಗಿಯ ಕಣ್ಣೀರನ್ನು ಸಹಿಸಲು ಅಣ್ಣನಿಗೆ ಸಾಧ್ಯವಾಗುವುದಿಲ್ಲ. ಮಗ ಸಂಕಟ ಪಡುವುದನ್ನು ತಾಯಿಯಿಂದ ನೋಡಲಾಗುವುದಿಲ್ಲ. ಪತ್ನಿ-ಮಕ್ಕಳು ಸದಾ ನೆಮ್ಮದಿಯಿಂದಿರಬೇಕೆಂದು ಪತಿ ಬಯಸುತ್ತಾನೆ. ಇಂಥ ಬಯಕೆ ಮತ್ತು ಭಾವನೆಗಳು ಎಲ್ಲ ಕುಟುಂಬಗಳಲ್ಲೂ ಇರುತ್ತದೆ. ಅದಕ್ಕೆ ಹಿಂದೂ-ಮುಸ್ಲಿಮ್ ಎಂಬುದಿಲ್ಲ. ಕಳೆದ ವಾರ ಸಾವಿಗೀಡಾದ ಕುಟ್ಟಪ್ಪ, ರಾಜು, ಸುಹೈಲ್ ಮತ್ತು ಹರೀಶ್‍ರನ್ನೇ ಎತ್ತಿಕೊಳ್ಳಿ. ಅವರ ಕುಟುಂಬದ ಕಣ್ಣೀರಿನಲ್ಲಿ ನಮಗೆ ಯಾವ ಬಣ್ಣ ಕಾಣಿಸುತ್ತದೆ? ಗಾಯಗೊಂಡವರ ಸಂಕಟಗಳಲ್ಲಿ ಯಾವ ಧರ್ಮ ಕಾಣಿಸುತ್ತದೆ? ಒಂದು ವೇಳೆ ಅವರ ಹೆಸರನ್ನು ಉಲ್ಲೇಖಿಸದೆಯೇ ಅವರ ನೋವುಗಳನ್ನು ಮಾತ್ರ ದಾಖಲಿಸಿದರೆ ಅದನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಸಾಧ್ಯವೇ? ‘ಈ ಮಾತು ಹಿಂದೂವಿನದ್ದು, ಈ ಮಾತು ಮುಸ್ಲಿಮನದ್ದು’ ಎಂದು ವಿಷ ಕೊಟ್ಟವರು ಪತ್ತೆ ಹಚ್ಚಬಲ್ಲರೇ? ಅಷ್ಟಕ್ಕೂ, ಮಾನವರ ನೋವು, ಕಣ್ಣೀರು, ಭಾವನೆಗಳ ಮಧ್ಯೆ ವಿಭಜನೆಯೇ ಸಾಧ್ಯವಿಲ್ಲದಷ್ಟು ಸಾಮ್ಯತೆ ಇರುವಾಗ ಯಾಕೆ ಈ ದ್ವೇಷ? ಯಾಕೆ ಈ ರಕ್ತಪಾತ? ಮಾನವ ಪ್ರಾಣವನ್ನು ಉಳಿಸುವುದಕ್ಕಾಗಿ ಒಂದು ಕಡೆ ಸಂಶೋಧನೆಗಳ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ರಕ್ತದ ಕ್ಯಾನ್ಸರ್‍ಗೆ

ಬಂಟ್ವಾಳದ ಮೃತ ಹರೀಶ್ ನ ಪಾರ್ಶ್ವವಾಯು ಪೀಡಿತ ತಂದೆ ಮತ್ತು ತಾಯಿ
ಪರಿಣಾಮಕಾರಿ ಔಷಧವನ್ನು ಕಂಡು ಹುಡುಕಿರುವುದಾಗಿ ಲಂಡನ್ನಿನ ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಘೋಷಿಸಿದ್ದೂ ಕಳೆದ ವಾರವೇ. ಅದಕ್ಕಾಗಿ ಅವರು ಕಳೆದ ಮೂರು ವರ್ಷಗಳಿಂದ ಪ್ರಯತ್ನಪಟ್ಟಿದ್ದಾರೆ. ಇನ್ನೊಂದು ಕಡೆ ಹೆಸರು ಮತ್ತು ನಂಬಿಕೆ ಬೇರೆ ಎಂಬ ಏಕೈಕ ಕಾರಣಕ್ಕಾಗಿ ಈ ಬಹು ಅಮೂಲ್ಯ ಪ್ರಾಣವನ್ನೇ ಕಸಿಯುತ್ತಿದ್ದೇವೆ. ಹೊಂಚು ಹಾಕಿ ಇರಿಯುತ್ತಿದ್ದೇವೆ. ಒಂದು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಸಿದ್ಧವಿರುವ ನಾವೇ ಕೆಲವೊಮ್ಮೆ ಧರ್ಮದ ಹೆಸರಲ್ಲಿ ಇವೇ ಪ್ರಾಣವನ್ನು ಏಕಿಷ್ಟು ಅಗ್ಗಗೊಳಿಸುತ್ತಿದ್ದೇವೆ? ಧರ್ಮ ಅಷ್ಟೂ ಕ್ರೂರಿಯೇ, ಮನುಷ್ಯ ವಿರೋಧಿಯೇ? ಅಣ್ಣನ ಪ್ರಾಣ ಉಳಿಯಿತೆಂದು ಸಂತಸದಿಂದ ಕಣ್ತುಂಬಿಕೊಂಡ ಕೃತಿಕಾ ಮತ್ತೆ ಮತ್ತೆ ನೆನಪಾಗುತ್ತಾಳೆ. ಚೂರಿ ಹಿಡಿಯುವ ಅಣ್ಣಂದಿರಿಗೆ ಕೃತಿಕಾ ಅರ್ಥವಾಗಲಿ.

Wednesday 11 November 2015

ತಲಾಕ್, ಬಹುಪತ್ನಿತ್ವ ಮತ್ತು ಸಮಾನ ನಾಗರಿಕ ಸಂಹಿತೆ

     
     ಬಹುಪತ್ನಿತ್ವ, ತಲಾಕ್ ಮತ್ತು ಜಿಹಾದ್ ಎಂಬೀ ಮೂರು ಪದಗುಚ್ಛಗಳು ಈ ದೇಶದಲ್ಲಿ ಚರ್ಚೆಗೆ ಒಳಗಾದಷ್ಟು ಬಹುಶಃ ಮುಸ್ಲಿಮರಿಗೆ ಸಂಬಂಧಿಸಿದ ಇನ್ನಾವ ಪದ ಪ್ರಯೋಗಗಳೂ ಚರ್ಚೆಗೊಳಗಾಗಿರುವ ಸಾಧ್ಯತೆ ಇಲ್ಲ. ಇದರಲ್ಲಿ ಜಿಹಾದ್‍ನ ಚರ್ಚೆ ಬಹುತೇಕ ಮುಗಿದಿದೆ. ಇದಕ್ಕೆ ಮುಖ್ಯ ಕಾರಣ - ಮುಸ್ಲಿಮ್ ವಿದ್ವಾಂಸರು, ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಗಳು ಜಿಹಾದ್ ಏನು ಮತ್ತು ಏನಲ್ಲ ಎಂಬುದನ್ನು ಪದೇ ಪದೇ ಈ ದೇಶದಲ್ಲಿ ಸಾರಿದ್ದು. ಅದಕ್ಕಾಗಿ ಈ ದೇಶದಾದ್ಯಂತ ಅಸಂಖ್ಯ ಸೆಮಿನಾರ್‍ಗಳು ನಡೆದಿವೆ. ಸಂವಾದ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳಾಗಿವೆ. ಬಾಂಬ್ ಸ್ಫೋಟಿಸುವವರನ್ನು ‘ಜಿಹಾದಿ' ಅನ್ನುತ್ತಿದ್ದ ಮಾಧ್ಯಮಗಳು ಕ್ರಮೇಣ ಆ ಪದವನ್ನು ಕೈ ಬಿಡುವಷ್ಟು ಇವು ಪರಿಣಾಮಕಾರಿಯಾಗಿವೆ. ಆದರೆ ಬಹುಪತ್ನಿತ್ವ ಮತ್ತು ತಲಾಕ್‍ಗೆ ಸಂಬಂಧಿಸಿ ಹೀಗೆ ಹೇಳುವಂತಿಲ್ಲ. ಇವೆರಡರ ಬಗ್ಗೆ ತಪ್ಪು ಅಭಿಪ್ರಾಯಗಳು ಈ ದೇಶದ ಮುಸ್ಲಿಮೇತರರಲ್ಲಿ ಮಾತ್ರ ಇರುವುದಲ್ಲ, ಮುಸ್ಲಿಮರಲ್ಲಿಯೂ ಇದೆ. ಮುಸ್ಲಿಮೇತರರಲ್ಲಿ ಇದರ ಪ್ರಮಾಣ ‘ಭೀಕರ’ ಮಟ್ಟದಲ್ಲಿದ್ದರೆ, ಮುಸ್ಲಿಮರಲ್ಲಿ ತುಸು ಕಡಿಮೆಯಾದರೂ ಅಪಾಯಕಾರಿ ಮಟ್ಟದಲ್ಲಿಯೇ ಇದೆ. ತಲಾಕ್ ತಲಾಕ್ ತಲಾಕ್ ಎಂದು ಮೂರು ಬಾರಿ ಹೇಳಿಬಿಟ್ಟರೆ ದಾಂಪತ್ಯವೆಂಬ ಅತಿ ಪವಿತ್ರ ಮತ್ತು ಪಾವನ ಸಂಬಂಧವೊಂದು ಶಾಶ್ವತವಾಗಿ ಕಳಚಿಕೊಂಡು ಬಿಡುತ್ತದೆ ಎಂದು ನಂಬುವ ಮಂದಿ ಮುಸ್ಲಿಮರಲ್ಲೂ ಮುಸ್ಲಿಮೇತರರಲ್ಲೂ ಖಂಡಿತ ಇದ್ದಾರೆ. ‘ದೇವನು ಅತ್ಯಂತ ಹೆಚ್ಚು ಇಷ್ಟಪಡದ ಕಾರ್ಯ ತಲಾಕ್' ಎಂಬುದಾಗಿ ಪವಿತ್ರ ಕುರ್‍ಆನ್‍ನಲ್ಲಿ ಇದೆ ಎಂದು ಹೇಳಿದರೆ ಅಚ್ಚರಿಯಿಂದ ನೋಡುವಷ್ಟು ತಲಾಕ್‍ನ ಬಗ್ಗೆ ಅನುಮಾನಗಳಿವೆ. ಬಹುಪತ್ನಿತ್ವವನ್ನೂ ಇದರಿಂದ ಹೊರಗಿಟ್ಟು ನೋಡಬೇಕಿಲ್ಲ. ಒಂದು ಬಗೆಯ ಅನುಮಾನ, ಅಚ್ಚರಿ, ಆಘಾತಗಳನ್ನು ಹೊತ್ತುಕೊಂಡು ‘ತಲಾಕ್' ಮತ್ತು ‘ಬಹುಪತ್ನಿತ್ವ'ಗಳು ಈ ದೇಶದಲ್ಲಿ ಸುತ್ತಾಡುವಾಗ ಇದರ ಕುರಿತಂತೆ ಗುಜರಾತ್ ಹೈಕೋರ್ಟ್‍ನ ಅಭಿಪ್ರಾಯವನ್ನು ಅಚ್ಚರಿಯಿಂದ ನೋಡಬೇಕಿಲ್ಲ. ‘ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಇವೆರಡರ ದುರುಪಯೋಗಕ್ಕಿರುವ ಮದ್ದು' ಎಂದು ಅದು ಹೇಳಿರುವುದರಲ್ಲಿ ಕೆಲವು ಗಮನಾರ್ಹ ಅಂಶಗಳಿವೆ. ಮಾತ್ರವಲ್ಲ, ಅಷ್ಟೇ ಭ್ರಮೆಗಳೂ ಇವೆ. ಸಮಾನ ನಾಗರಿಕ ಸಂಹಿತೆ ಜಾರಿಗೊಂಡ ಕೂಡಲೇ ಈ ದೇಶದ ಸರ್ವ ಸಮಸ್ಯೆಗಳೂ ಪರಿಹಾರವಾಗಿ ಬಿಡುತ್ತವೆ ಎಂದು ವಾದಿಸುವುದು ಪರಮ ದಡ್ಡತನ. ಈ ದೇಶದಲ್ಲಿ ಹಲವಾರು ಧರ್ಮಗಳಿವೆ. ಜಾತಿ ಪಂಗಡಗಳಿವೆ. ಹಾಗೆಯೇ ಪ್ರತಿಯೊಂದಕ್ಕೂ ಅವುಗಳದ್ದೇ ಆದ ವೈಯಕ್ತಿಕ ನಿಯಮ-ನಿಬಂಧನೆಗಳಿವೆ. ಅವುಗಳಲ್ಲಿ ಮೌಢ್ಯ ಇದ್ದರೆ ಅಥವಾ ಮನುಷ್ಯ ವಿರೋಧಿ ನಂಬುಗೆಗಳಿದ್ದರೆ ಅವುಗಳಿಗೆ ಕಾನೂನು ರೀತಿಯಲ್ಲಿ ತಡೆ ಒಡ್ಡಬೇಕಾದುದು ತೀರಾ ಅಗತ್ಯ. ಸತಿ, ಬೆತ್ತಲೆ ಸೇವೆ, ದೇವದಾಸಿ, ಮಾನವ ಬಲಿ, ವರ್ಣ ವ್ಯವಸ್ಥೆಯಂತಹ ಹತ್ತು-ಹಲವು ಆಚರಣೆಗಳನ್ನು ಸಮಾನ ನಾಗರಿಕ ಸಂಹಿತೆಯ ಹಂಗಿಲ್ಲದೆಯೇ ನಿರ್ಬಂಧಿಸಲಾಗಿದೆ. ಒಂದು ವೇಳೆ, ತಲಾಕ್ ಮತ್ತು ಬಹುಪತ್ನಿತ್ವಗಳು ದುರುಪಯೋಗಕ್ಕೀಡಾಗುತ್ತಿದ್ದರೆ ಅದನ್ನು ಈಗಿರುವ ಕಾನೂನುಗಳ ಮೂಲಕವೇ ಪರಿಹರಿಸುವುದಕ್ಕೆ ಸಾಧ್ಯವಿದೆ. ಅಷ್ಟಕ್ಕೂ, ದುರುಪಯೋಗಕ್ಕೀಡಾದ ನಿಯಮಗಳಾದರೂ ಯಾವುವು? ಪುಟಾಣಿಗಳ ಬಿಸಿಯೂಟದಿಂದ ಹಿಡಿದು ವೃದ್ಧಾಪ್ಯ ವೇತನದ ವರೆಗೆ ಪ್ರತಿಯೊಂದನ್ನೂ ದುರುಪಯೋಗಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ಬಹುಪತ್ನಿತ್ವ ಅಥವಾ ತಲಾಕ್‍ಗಳು ದುರುಪಯೋಗವಾಗುತ್ತಿರುವುದನ್ನು ಅದ್ಭುತವೆಂಬಂತೆ ವ್ಯಾಖ್ಯಾನಿಸುವುದರಲ್ಲಿ ಏನರ್ಥವಿದೆ? ಸಮಾನ ನಾಗರಿಕ ಸಂಹಿತೆ ಜಾರಿಗೊಂಡ ಕೂಡಲೇ ವೈಯಕ್ತಿಕ ನಿಯಮಗಳ ದುರುಪಯೋಗಗಳೆಲ್ಲ ಸ್ಥಗಿತಗೊಳ್ಳಬಹುದೇ? ಇಲ್ಲಿನ ಸಮಸ್ಯೆಗಳಿಗೆ ಸಮಾನ ನಾಗರಿಕ ಸಂಹಿತೆ ಜಾರಿಯಾಗದಿರುವುದೇ ಕಾರಣವೇ ಅಥವಾ ಇರುವ ಕಾನೂನುಗಳನ್ನು ಸಮರ್ಪಕವಾಗಿ ಬಳಸದಿರುವುದೇ? ಹಾಗಂತ, ತಲಾಕ್ ಮತ್ತು ಬಹುಪತ್ನಿತ್ವಗಳು ದುರುಪಯೋಗವಾಗುತ್ತಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಆಗುವ ದುರುಪಯೋಗಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಅದರ ದುರುಪಯೋಗವನ್ನು ಉಬ್ಬಿಸಿ ಮತ್ತು ಉತ್ಪ್ರೇಕ್ಷಿಸಿ ಹೇಳಲಾಗುತ್ತಿದೆ. ಈ ದೇಶದಲ್ಲಿ ಪತ್ನಿಯ ಜೊತೆಗೇ ಅನಧಿಕೃತವಾಗಿ ಇನ್ನೋರ್ವಳನ್ನು ಇಟ್ಟುಕೊಳ್ಳುವುದು `ಭೀಕರ' ಅನ್ನಿಸುವುದಿಲ್ಲ. ಲಿವಿಂಗ್ ಟುಗೆದರ್‍ನ ಹೆಸರಲ್ಲಿ ಹೆಣ್ಣು ಮತ್ತು ಗಂಡು ಮನ ಬಂದಂತೆ ಜೊತೆಗಿರುವುದು ಮತ್ತು ವಿಚ್ಛೇದನಗೊಳ್ಳುವುದು ಅಸಮರ್ಪಕವಾಗಿ ಕಾಣಿಸುವುದಿಲ್ಲ ಅಥವಾ ಸಿನಿಮಾ ಪ್ರಪಂಚವೂ ಸೇರಿದಂತೆ ಆಧುನಿಕ ಸಮಾಜದಲ್ಲಿ ತೀರಾ ಮಾಮೂಲಾಗಿರುವ ವಿಚ್ಛೇದನಗಳೂ ಹುಬ್ಬೇರಿಸುತ್ತಿಲ್ಲ. ಆದರೆ ಅಧಿಕೃತವಾಗಿ ಇಬ್ಬರನ್ನು (ಅತ್ಯಂತ ಸೂಕ್ತ ಮತ್ತು ಅನಿವಾರ್ಯ ಕಾರಣಗಳಿಗಾಗಿ ಮಾತ್ರ) ಇಟ್ಟುಕೊಳ್ಳುವುದನ್ನು ಅತ್ಯಂತ ಅನಾಗರಿಕವಾಗಿ ಸನ್ನಿವೇಶವಾಗಿ ನೋಡಲಾಗುತ್ತಿದೆ. ಏನೆನ್ನಬೇಕು ಇದಕ್ಕೆ?  
        ನಿಜವಾಗಿ, ಬಹುಪತ್ನಿತ್ವಕ್ಕೆ ಅತ್ಯಂತ ಕಠಿಣವಾದ ಶರತ್ತುಗಳಿವೆ. ಬಹುಪತ್ನಿತ್ವ ಒಂದು ಅನಿವಾರ್ಯ ಸಂದರ್ಭದ ಆಯ್ಕೆಯೇ ಹೊರತು ಅದು ಶರತ್ತು ರಹಿತವೂ ಅಲ್ಲ, ಬೇಕಾಬಿಟ್ಟಿಯೂ ಅಲ್ಲ. ಈ ಕುರಿತಂತೆ ಮುಸ್ಲಿಮ್ ಸಮಾಜದಲ್ಲಿ ಒಂದು ಹಂತದವರೆಗೆ ಅಜ್ಞಾನವಿದೆ ಎಂದು ಒಪ್ಪಿಕೊಂಡರೂ ಅದು ಇವತ್ತು ಬಿಂಬಿಸುವಂತೆ ಅಪಾಯಕಾರಿ ಮಟ್ಟದಲ್ಲಿಲ್ಲ ಎಂಬುದಕ್ಕೆ ಈ ದೇಶದಲ್ಲಿ ನಡೆಸಲಾದ ಜನಗಣತಿ ಸಮೀಕ್ಷೆಗಳೇ ಸಾಕ್ಷಿ. ಬಹುಪತ್ನಿತ್ವವನ್ನು ಈ ದೇಶದ ಹೆಚ್ಚಿನ ಮುಸ್ಲಿಮರು ಅನಿವಾರ್ಯ ಆಯ್ಕೆಯಾಗಿಯೇ ಇವತ್ತೂ ಪರಿಗಣಿಸಿದ್ದಾರೆ. ಆದ್ದರಿಂದಲೇ ಮುಸ್ಲಿಮೇತರರಿಗೆ ಹೋಲಿಸಿದರೆ ಈ ದೇಶದಲ್ಲಿ ಮುಸ್ಲಿಮರಲ್ಲಿ ಬಹುಪತ್ನಿತ್ವ ಕಡಿಮೆ. ಮುಸ್ಲಿಮರಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ ಎಂದು ಹೇಳುವ ಮಂದಿಯಲ್ಲಿ ತಂತಮ್ಮ ಪ್ರದೇಶದಲ್ಲಿ ಎಷ್ಟೆಷ್ಟು ಮುಸ್ಲಿಮರಿಗೆ ಬಹುಪತ್ನಿಯರಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರಿಸಲು ತಡವರಿಸುತ್ತಾರೆ. ತಲಾಕ್‍ನ ಸ್ಥಿತಿಯೂ ಇದುವೇ. ನಿಜವಾಗಿ, ಮೂರು ಬಾರಿ ತಲಾಕ್ ತಲಾಕ್ ಎಂದು ಹೇಳಿದರೆ ವಿಚ್ಛೇದನ ಆಗಿ ಬಿಡುತ್ತದೆ ಮತ್ತು ಮುಸ್ಲಿಮರನ್ನು ವಿಚ್ಛೇದನ ಬಹಳ ಸುಲಭ ಎಂದು ಹೇಳುವುದನ್ನು ನೋಡಿದರೆ, ಮುಸ್ಲಿಮರನ್ನು ವಿಚ್ಛೇದಿತೆಯರೇ ತುಂಬಿಕೊಂಡಿದ್ದಾರೆಂದೇ ನಂಬಬೇಕು. ಅಂದಹಾಗೆ, ತಲಾಕ್‍ಗೆ ಅದರದ್ದೇ ಆದ ನಿಯಮ-ನಿಬಂಧನೆಗಳಿವೆ. ತಲಾಕ್‍ಗೆ ಮೂರು ಹಂತಗಳಿವೆ. ಮೂರು ಬಾರಿ ಪಟಪಟನೆ ತಲಾಕ್ ಹೇಳುವುದು ಅತ್ಯಂತ ಅತಾರ್ಕಿಕ ಮತ್ತು ಅಸಮರ್ಪಕ ವಿಧಾನ. ಒಂದು ಬಾರಿ ತಲಾಕ್ ಹೇಳಿದ ಬಳಿಕ ಪತ್ನಿಯ ಜೊತೆಗೆ ಪತಿ ಒಂದು ಮುಟ್ಟಿನ ಕಾಲದ ವರೆಗೆ ಬದುಕಬೇಕು. ಅದರ ನಡುವೆ ಅವರು ಸೇರಿಕೊಂಡರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಪುನಃ ತಲಾಕ್ ಹೇಳಿದರೆ ಪುನಃ ಮುಟ್ಟಿನ ವರೆಗೆ ಜೊತೆಗೆ ಬದುಕಬೇಕು ಮತ್ತು ಪರಸ್ಪರ ಸೇರಬಾರದು. ಹಾಗಾದರೆ ಅದು ಒಂದು ತಲಾಕ್ ಆಗುತ್ತದೆಯೇ ಹೊರತು ಸಂಪೂರ್ಣ ವಿಚ್ಛೇದನ ಅಲ್ಲ. ಹೀಗೆ ಮೂರು ಹಂತದಲ್ಲಿ ವಿಚ್ಛೇದನ ಕೋರುವುದು, ಅವುಗಳ ಮಧ್ಯೆ ಜೊತೆಯಾಗಿಯೇ ಬದುಕುವುದು ಮತ್ತು ಈ ಅವಧಿಯ ಮಧ್ಯೆ ಅವರು ಪರಸ್ಪರ ಸೇರದೇ ಇರುವುದು ನಡೆದರೆ ಪೂರ್ಣ ತಲಾಕ್ ಆಗುತ್ತದೆ. ಇದು ಒಂದು ನಿಮಿಷದ ಪ್ರಕ್ರಿಯೆ ಅಲ್ಲ. ಕನಿಷ್ಠ ಅಂದರೆ ಮೂರು ತಿಂಗಳು ಮತ್ತು ಗರಿಷ್ಠ ಅಂದರೆ ಎಷ್ಟು ತಿಂಗಳೂ ತಗಲಬಹುದಾದ ಒಂದು ದೀರ್ಘ ಪ್ರಕ್ರಿಯೆ. ಹಾಗಂತ, ಈ ಪ್ರಕ್ರಿಯೆಯನ್ನು ತೀರಾ ಹಾಸ್ಯಾಸ್ಪದಗೊಳಿಸುವವರು ಮುಸ್ಲಿಮರಲ್ಲಿ ವಿರಳ ಸಂಖ್ಯೆಯಲ್ಲಾದರೂ ಖಂಡಿತ ಇದ್ದಾರೆ. ಬಹುಪತ್ನಿತ್ವವನ್ನು ದುರುಪಯೋಗಿಸುವವರೂ ಇದ್ದಾರೆ. ಈ ಕುರಿತಂತೆ ಮುಸ್ಲಿಮರೊಳಗೆಯೇ ಜಾಗೃತಿ ಕಾರ್ಯಕ್ರಮ ಖಂಡಿತ ಆಗಲೇ ಬೇಕು. ಜಿಹಾದ್‍ನ ಬಗ್ಗೆ ಸಮಾಜಕ್ಕೆ ತಿಳಿಸಿಕೊಟ್ಟಂತೆಯೇ ಬಹುಪತ್ನಿತ್ವ ಮತ್ತು ತಲಾಕ್‍ಗಳ ನಿಜ ರೂಪವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಇವುಗಳನ್ನು ಭೀಕರವಾಗಿಯೋ ಅಪಾಯಕಾರಿಯಾಗಿಯೋ ಕಲ್ಪಿಸಿಕೊಂಡವರಿಗೆ ಇದನ್ನು ತಿಳಿಸಿ ಕೊಡುವ ಅಗತ್ಯ ಖಂಡಿತಕ್ಕೂ ಇದೆ. ಆ ಬಳಿಕವೂ ಅವರು ಅದನ್ನು ಭೀಕರವಾಗಿಯೇ ಚಿತ್ರಿಸುವುದಾದರೆ ಆ ಬಗ್ಗೆ ಚರ್ಚೆಗಳಾಗಲಿ. ಸಂವಾದಗಳಾಗಲಿ. ಅದಕ್ಕಿಂತಲೂ ಮೊದಲು ತೀರ್ಮಾನ ಆಗದಿರಲಿ.

Thursday 5 November 2015

ಆಗಬೇಕಾದ್ದು ಜನನ ನಿಯಂತ್ರಣವೋ ಅಲ್ಲ....

      ಜನಸಂಖ್ಯೆ ಸಂಪತ್ತೋ ಆಪತ್ತೋ ಎಂಬ ಗಂಭೀರ ಚರ್ಚೆಗೆ ಚೀನಾ ಉತ್ತರವೊಂದನ್ನು ನೀಡಿದೆ. ಈ ಉತ್ತರ ಯಾಕೆ ಮಹತ್ವಪೂರ್ಣ ಎಂದರೆ, ಈ ಉತ್ತರದ ಹಿಂದೆ 35 ವರ್ಷಗಳ ದೀರ್ಘ ಅನುಭವ ಇದೆ. ಜನಸಂಖ್ಯೆಯನ್ನು ಆಪತ್ತು ಎಂದು ಘೋಷಿಸಿ ‘ಕುಟುಂಬಕ್ಕೊಂದೇ ಮಗು’ ಎಂಬ ಕಾಯ್ದೆಯನ್ನು 1980ರಲ್ಲಿ ಕಡ್ಡಾಯವಾಗಿ ಜಾರಿಗೊಳಿಸಿದ ರಾಷ್ಟ್ರ ಚೀನಾ. ಆಗ ಚೀನಾವನ್ನು ಭಾರತ ಬೆರಗಿನಿಂದ ನೋಡಿತ್ತು. ಬರಬರುತ್ತಾ ಈ ಬೆರಗು ಅಭಿಮಾನವಾಗಿ ಮಾರ್ಪಟ್ಟಿತು. ಬಳಿಕ ಚೀನಾವೇ ಮಾದರಿಯಾಯಿತು. ಚೀನಾದ ಜನನ ನಿಯಂತ್ರಣ ಕಾಯ್ದೆಯನ್ನು ಕೊಂಡಾಡಿ ಈ ದೇಶದಲ್ಲಿ ಸಾಕಷ್ಟು ಬರಹಗಳು, ಭಾಷಣಗಳೂ ಕಾಣಿಸಿಕೊಂಡವು. ಮಾತ್ರವಲ್ಲ, ಇಲ್ಲಿಯ ಜನಸಂಖ್ಯೆಯನ್ನು ಹಿಂದೂ ಜನಸಂಖ್ಯೆ, ಮುಸ್ಲಿಮ್ ಜನಸಂಖ್ಯೆ, ಫಾರ್ಸಿ ಜನಸಂಖ್ಯೆ ಎಂದು ವಿಭಜಿಸಿ, ಇದರಲ್ಲಿ ಮುಸ್ಲಿಮ್ ಜನಸಂಖ್ಯೆ ಆಪತ್ತುಕಾರಿ ಎಂದು ಹೇಳುವ ಮತ್ತು ಅದರ ನಿಯಂತ್ರಣಕ್ಕಾಗಿ ಕರೆ ಕೊಡುವ ಸಂದರ್ಭಗಳೂ ಸೃಷ್ಟಿಯಾದುವು. ಈ ವಾತಾವರಣ ಈ ದೇಶದಲ್ಲಿ ಈಗಲೂ ಇದೆ. ಇದೇ ಸಂದರ್ಭದಲ್ಲಿ, ಜನನ ನಿಯಂತ್ರಣದ ಇನ್ನೊಂದು ಮುಖವನ್ನು ಚೀನಾ ಜಗತ್ತಿನ ಮುಂದೆ ತೆರೆದಿಟ್ಟಿದೆ. ಈ ಮುಖ ಅತ್ಯಂತ ಕರಾಳವಾದುದು. ‘ಕುಟುಂಬಕ್ಕೊಂದೇ ಮಗು’ ಎಂಬ ಕಾಯ್ದೆಯ ಜಾರಿಯ ಬಳಿಕ ಸುಮಾರು 400 ಮಿಲಿಯನ್ ಮಕ್ಕಳ ಹುಟ್ಟನ್ನು ತಡೆದಿರುವುದಾಗಿ ಚೀನಾ ಅಧಿಕೃತವಾಗಿಯೇ ಒಪ್ಪಿಕೊಂಡಿದೆ. ಇದೊಂದೇ ಅಲ್ಲ, ಅಸಂಖ್ಯಾತ ಗರ್ಭಪಾತಗಳು ಬಲವಂತದಿಂದ ನಡೆದಿವೆ. ಗರ್ಭಪಾತದ ಸಂದರ್ಭದಲ್ಲಿ ತಾಯಂದಿರ ಸಾವು, ಶಾಶ್ವತ ಅಂಗವೈಕಲ್ಯ ಮತ್ತು ಶಾಶ್ವತ ಕಾಯಿಲೆಗಳಿಗೆ ಅಸಂಖ್ಯ ತಾಯಂದಿರು ತುತ್ತಾಗಿದ್ದಾರೆ. ಬಲವಂತದಿಂದ ವ್ಯಾಸಕ್ಟಮಿ ಮತ್ತು ಟ್ಯುಬೆಕ್ಟಮಿ ಚಿಕಿತ್ಸೆಗಳು ನಡೆದಿವೆ. ಚೀನಾವು ಅಧಿಕೃತ ಅಂಕಿ-ಅಂಶಗಳನ್ನು ಜಗತ್ತಿನ ಮುಂದಿಡುವಾಗ ಅನಧಿಕೃತವಾಗಿ ನಡೆದ ಶಿಶುಹತ್ಯೆಗಳ ಪ್ರಮಾಣ ಈ ಅಧಿಕೃತಕ್ಕಿಂತ ದುಪ್ಪಟ್ಟು ಇದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕ್ರೌರ್ಯಗಳ ಒಟ್ಟು ಪರಿಣಾಮ ಏನೆಂದರೆ, ಯುವ ಸಮೂಹದ ತೀವ್ರ ಕುಸಿತ. ದುಡಿಯುವ ವರ್ಗ ಮತ್ತು ಈ ವರ್ಗವನ್ನು ಅವಲಂಬಿಸಿ ಬದುಕುವ ವೃದ್ಧರ ನಡುವಿನ ಅನುಪಾತದಲ್ಲಿ ಅಪಾಯಕಾರಿ ಏರಿಳಿತಗಳಾಗಿವೆ. 1950ರಲ್ಲಿ ದುಡಿಯುವ ವರ್ಗದ ಪ್ರಮಾಣ 63% ಇದ್ದರೆ 2010ರಲ್ಲಿ ಅದು 34%ಕ್ಕೆ ಕುಸಿದಿದೆ. ಅಂದರೆ ದುಡಿಯುವ ವರ್ಗಕ್ಕಿಂತ ಅವರನ್ನು ಅವಲಂಬಿಸಿಕೊಂಡ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದಲೇ ಚೀನಾ ಇವತ್ತು ತನ್ನ ಒಂದೇ ಮಗು ನಿಯಮವನ್ನು ಸಡಿಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮಾತ್ರವಲ್ಲ, ಪ್ರತಿ ಕುಟುಂಬ ಎರಡು ಮಕ್ಕಳನ್ನು ಹೊಂದಬಹುದು ಎಂದು ಘೋಷಿಸಿದೆ.
  ನಿಜವಾಗಿ, ಜನಸಂಖ್ಯೆಗೂ ಜನರ ಜೀವನ ಮಟ್ಟಕ್ಕೂ ಅಬೇಧ್ಯ ಸಂಬಂಧ ಇದೆ. ದುರಂತ ಏನೆಂದರೆ, ಜನರ ಜೀವನ ಮಟ್ಟವನ್ನು ಸುಧಾರಿಸಲು ವಿಫಲವಾದ ಪ್ರಭುತ್ವವು ತಾಯಂದಿರ ಹೊಟ್ಟೆಯನ್ನು ತೋರಿಸಿ ತನ್ನ ವೈಫಲ್ಯವನ್ನು ಅಡಗಿಸಿಕೊಳ್ಳಲು ಯತ್ನಿಸುತ್ತಿದೆ. ಹಸಿದ ಹೊಟ್ಟೆಗೆ ಅನ್ನವನ್ನು ಕೊಡುವ ಬದಲು ಹೊಟ್ಟೆಯಲ್ಲಿರುವ ಶಿಶುವನ್ನು ಕಿತ್ತುಕೊಳ್ಳಲು ಸಂಚು ರೂಪಿಸುವ ಈ ಕ್ರಮವನ್ನು ಕ್ರೌರ್ಯ ಎಂದಲ್ಲದೇ ಇನ್ನೇನೆಂದು ಕರೆಯಬೇಕು? ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇವತ್ತು ಜನಸಂಪತ್ತಿನ ಕೊರತೆಯನ್ನು ಎದುರಿಸುತ್ತಿವೆ. ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಅವು ಪಾರಿತೋಷಕಗಳನ್ನು ಘೋಷಿಸುತ್ತಿವೆ. ಮಕ್ಕಳೇ ಬೇಡ ಎಂದು ತೀರ್ಮಾನಿಸುವ ಯುವ ಪೀಳಿಗೆಯಿಂದಾಗಿ ಮುಂದೊಮ್ಮೆ ವೃದ್ಧರೇ ತುಂಬಿ ಹೋಗಬಹುದೆಂಬ ಅಂಜಿಕೆಯು ಅನೇಕ ರಾಷ್ಟ್ರಗಳನ್ನು ಇವತ್ತು ಕಾಡತೊಡಗಿದೆ. ಅದೇ ವೇಳೆ, ಹಿಂದುಳಿತ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನನ ನಿಯಂತ್ರಣದ ಬಗ್ಗೆ ಪ್ರಭುತ್ವದಿಂದಲೇ ಹೇಳಿಕೆಗಳು ಹೊರಬೀಳುತ್ತಿವೆ. ಜನಸಂಖ್ಯೆಯನ್ನು ಆಪತ್ತೋ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಷ್ಟಕ್ಕೂ ಮುಂದುವರಿದ ಮತ್ತು ಹಿಂದುಳಿದ ರಾಷ್ಟ್ರಗಳ ನಡುವೆ ಜನನ ಪ್ರಕ್ರಿಯೆಗೆ ಸಂಬಂಧಿಸಿ ಈ ವೈರುಧ್ಯಗಳೇಕೆ ಕಾಣಿಸುತ್ತಿವೆ? ಶೈಕ್ಷಣಿಕವಾಗಿ ಅತ್ಯಂತ ಮುಂದಿರುವ ಕೇರಳದಲ್ಲಿ ಜನನ ಅನುಪಾತ ದೇಶದಲ್ಲೇ ಅತ್ಯಂತ ಕಡಿಮೆಯಿದೆ. ಶೈಕ್ಷಣಿಕವಾಗಿ ಮುಂದಿರುವ ದಕ್ಷಿಣ ಭಾರತದಲ್ಲಿ ಜನನ ಪ್ರಕ್ರಿಯೆಯು ಉತ್ತರ ಭಾರತಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆ. ಯಾಕೆ ಹೀಗೆ? ಒಂದು ರೀತಿಯಲ್ಲಿ, ತಾಯಂದಿರ ಹೊಟ್ಟೆಗೂ ಅವರು ಬದುಕುತ್ತಿರುವ ಪರಿಸರ, ಜೀವನ ಮಟ್ಟ, ಶಿಕ್ಷಣ, ಉದ್ಯೋಗ.. ಮುಂತಾದುವುಗಳಿಗೂ ಸಂಬಂಧ ಇದೆ. ಹಾಗಂತ, ಇದು ಪ್ರಭುತ್ವಕ್ಕೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ಜನಸಂಖ್ಯೆಗೆ ಸಂಬಂಧಿಸಿ ಒಂದಕ್ಕಿಂತ ಹೆಚ್ಚು ಸವಿೂಕ್ಷೆಗಳಾಗಿವೆ. ಎಲ್ಲೆಲ್ಲಿ, ಯಾವ್ಯಾವ ಪ್ರದೇಶ ಮತ್ತು ಪರಿಸರದಲ್ಲಿ ಜನಸಂಖ್ಯೆ ಹೆಚ್ಚಿದೆ ಅಥವಾ ಕಡಿಮೆಯಿದೆ ಎಂಬುದನ್ನು ಅಂಥ ಸವಿೂಕ್ಷೆಗಳು ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಟ್ಟಿವೆ. ಆದರೆ, ಬಡವರ ಹೊಟ್ಟೆಯನ್ನು ಕತ್ತರಿಸಿದಷ್ಟು ಸುಲಭವಾಗಿ ಜನರ ಜೀವನ ಮಟ್ಟವನ್ನು ಎತ್ತರಿಸಲು ಸಾಧ್ಯವಿಲ್ಲ ಅನ್ನುವುದು ಪ್ರಭುತ್ವಕ್ಕೆ ಚೆನ್ನಾಗಿ ಗೊತ್ತು. ಎಲ್ಲರಿಗೂ ಉತ್ತಮ ಶಿಕ್ಷಣ, ಆಹಾರ, ಉದ್ಯೋಗವನ್ನು ಒದಗಿಸುವುದಕ್ಕೆ ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆಯ ಅಗತ್ಯವಿದೆ. ಅದಕ್ಕಿಂತ ತಾಯಂದಿರ ಹೊಟ್ಟೆಯನ್ನೇ ಅಪಾಯಕಾರಿಯಾಗಿ ಬಿಂಬಿಸುವುದು ಸುಲಭ ಮತ್ತು ಆಕರ್ಷಕ. ಅದನ್ನು ಪ್ರತಿಭಟಿಸುವ ಸಾಮರ್ಥ್ಯವಾಗಲಿ ಜ್ಞಾನವಾಗಲಿ ಬಡವರಲ್ಲಿರುವುದಿಲ್ಲ. ಸರಕಾರವು ಬಡವರನ್ನು ತೋರಿಸಿ ‘ಮಕ್ಕಳನ್ನು ಹುಟ್ಟಿಸುವ ಮೆಷೀನು’ಗಳೆಂದು ತಮಾಷೆ ಮಾಡುವಾಗ ಈ ವರ್ಗ ಒಳಗೊಳಗೇ ಅಪರಾಧಿ ಭಾವನೆಯಿಂದ ಕುಸಿಯತೊಡಗುತ್ತದೆ. ‘ನಿನಗೆಷ್ಟು ಮಕ್ಕಳು’ ಎಂದು ವೈದ್ಯರು ವ್ಯಂಗ್ಯದಿಂದ ಇರಿಯುತ್ತಾರೆ. ಜನಗಣತಿಗೆ ಬಂದವರು ‘ನಿಮ್ಮ ಮನೆ ಮಿನಿ ಅಂಗನವಾಡಿ’ ಎಂದು ಕುಟುಕುತ್ತಾರೆ. ಹಾಗೆಯೇ ಮಾಧ್ಯಮಗಳು ಕೂಡ ಜನನ ನಿಯಂತ್ರಣದ ಬಗ್ಗೆ ಮೇಲು ಮೇಲಿನ ವಿವರಣೆಗಳನ್ನು ನೀಡುತ್ತಿರುತ್ತವೆ. ಒಂದು ರೀತಿಯಲ್ಲಿ ಬಡವರನ್ನು ಅಣಕಿಸುವ ಸರಕಾರಿ ನಾಟಕವೇ ಜನಸಂಖ್ಯಾ ಸ್ಫೋಟ. ಬಡ ಹೊಟ್ಟೆಗೆ ಅನ್ನ ನೀಡುವ ಬದಲು ಹೊಟ್ಟೆಯನ್ನೇ ಅಪಾಯಕಾರಿ ಎಂದು ಘೋಷಿಸುವ ಕ್ರೌರ್ಯ ಇದು.
  ಜನನ ಮತ್ತು ಮರಣ ಎರಡೂ ಪ್ರಾಕೃತಿಕವಾದುದು. ಅದು ನಿರಂತರ ಮತ್ತು ಸಹಜ. ಇದರಲ್ಲಿ ಒಂದನ್ನು ಅಪಾಯಕಾರಿ ಮತ್ತು ಇನ್ನೊಂದನ್ನು ಸಜ್ಜನ ಎಂದು ವಿಂಗಡಿಸುವುದು ನಮ್ಮ ಅಪ್ರಬುದ್ಧತೆಯನ್ನೇ ಸೂಚಿಸುತ್ತದೆ. ಭೌತಿಕತೆಯನ್ನೇ ಮಾನದಂಡವಾಗಿಸಿಕೊಂಡು ಮಾಡಲಾಗುವ ಅಭಿವೃದ್ಧಿ ಎಷ್ಟು ಅಪಾಯಕಾರಿಯೋ ಬಡತನವನ್ನು ಉಳಿಸಿಕೊಂಡೇ ಅಥವಾ ಬಡತನ ನಿರ್ಮೂಲನಕ್ಕಾಗಿ ಕ್ರಮಗಳನ್ನು ಕೈಗೊಳ್ಳದೆಯೇ ತಾಯಂದಿರ ಹೊಟ್ಟೆಯನ್ನು ಆಪತ್ತು ಎಂದು ಘೋಷಿಸುವುದು ಕೂಡ ಅಷ್ಟೇ ಅಪಾಯಕಾರಿ. ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಜನನ ಪ್ರಕ್ರಿಯೆ ನಿಂತು ಹೋಗುತ್ತಿರುವುದಕ್ಕೆ ಪ್ರಮುಖ ಕಾರಣ ಅಲ್ಲಿನ ಜೀವನ ದೃಷ್ಟಿಕೋನ. ಗರ್ಭ ಧರಿಸುವುದು, ಮಕ್ಕಳ ಪಾಲನೆ, ಕುಟುಂಬ ನಿರ್ವಹಣೆ ಮುಂತಾದ ಜವಾಬ್ದಾರಿಗಳನ್ನು ಹೊರಲು ಮುಂದುವರಿದ ಪೀಳಿಗೆ ತಯಾರಾಗುತ್ತಿಲ್ಲ. ಬದುಕು ಅನುಭವಿಸಲಿಕ್ಕೇ ಹೊರತು ಜವಾಬ್ದಾರಿ ಹೊರಲಲ್ಲ ಎಂಬೊಂದು ವಾತಾವರಣ ಅಲ್ಲಿ ನಿರ್ಮಾಣವಾಗುತ್ತಿದೆ. ಗಂಡು-ಹೆಣ್ಣು ಇಬ್ಬರೂ ದುಡಿಯುವುದು ಮತ್ತು ಇಷ್ಟ ಬಂದಂತೆ ಬದುಕುವುದರ ಹೊರತಾಗಿ ಸಾಮಾಜಿಕ ಜವಾಬ್ದಾರಿಗಳು ಮುಂದುವರಿದ ರಾಷ್ಟ್ರಗಳ ಆಧುನಿಕ ಪೀಳಿಗೆಗಳಲ್ಲಿ ಕಡಿಮೆಗೊಳ್ಳುತ್ತಿದೆ. ಆದ್ದರಿಂದ, ಜನಸಂಖ್ಯೆಯ ಸುತ್ತ ಚರ್ಚೆ ನಡೆಸುವಾಗ ಈ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಪ್ರಭುತ್ವ ತನ್ನ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿದರೆ ಪ್ರಕೃತಿಯ ಧಾರಣಾ ಸಾಮರ್ಥ್ಯದಷ್ಟೇ ಮಕ್ಕಳು ಹುಟ್ಟಿಯಾವು. ನಾವು ಬೊಟ್ಟು ಮಾಡಬೇಕಾದದ್ದು ಬಡ ತಾಯಂದಿರ ಹೊಟ್ಟೆಯನ್ನಲ್ಲ, ಪ್ರಭುತ್ವದ ಅಸಾಮರ್ಥ್ಯವನ್ನು. ಇಲ್ಲದಿದ್ದರೆ, ಚೀನಾ ಇವತ್ತು ಎದುರಿಸುತ್ತಿರುವ ವೃದ್ಧರ ಸಮಸ್ಯೆಯನ್ನು ಮುಂದೆ ನಾವೂ ಎದುರಿಸಬೇಕಾದೀತು.

Thursday 29 October 2015

15 ವರ್ಷಗಳ ಪ್ರತಿಭಟನೆ ಮತ್ತು ಆತಂಕ

       ಇರೋಮ್ ಶರ್ಮಿಳಾ ಆತಂಕದಲ್ಲಿದ್ದಾರೆ. ತಾನು ಒಂಟಿಯಾಗುತ್ತಿರುವೆನೇ ಎಂಬ ಅನುಮಾನವೊಂದು ಅವರನ್ನು ಕಾಡತೊಡಗಿದೆ. ಮಾಧ್ಯಮಗಳ ಮುಂದೆ ತನ್ನ ಆತಂಕವನ್ನು ಅವರು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ತನ್ನ ನಿರಾಹಾರ ಸತ್ಯಾಗ್ರಹ ಪ್ರತಿಭಟನೆಯನ್ನು ಮುಂದುವರಿಸಬೇಕೋ ಕೈ ಬಿಡಬೇಕೋ ಎಂಬ ಕುರಿತು ಜನಮತ ಸಂಗ್ರಹ ನಡೆಸಬೇಕೆಂಬ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ. ಮಣಿಪುರದ ಮೇಲೆ ಹೇರಲಾಗಿರುವ ಸಶಸ್ತ್ರ ದಳದ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟಿಸುತ್ತಿರುವವರು ಈ ಶರ್ಮಿಳಾ. 1980 ಸೆ. 8ರಂದು ಕೇಂದ್ರ ಸರಕಾರವು ಮಣಿಪುರದಲ್ಲಿ ಈ ಕಾಯ್ದೆಯನ್ನು ಹೇರಿದಾಗ ಶರ್ಮಿಳಾ ಪುಟ್ಟ ಹುಡುಗಿ. ಈ ಕಾಯ್ದೆಯ ಬಗ್ಗೆ ಮತ್ತು ಅದು ಪೊಲೀಸರಿಗೆ ಒದಗಿಸುವ ಅಪರಿಮಿತ ಅಧಿಕಾರಗಳ ಬಗ್ಗೆ ತಿಳಿದುಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಆದರೆ 2000ನೇ ಇಸವಿ ನವೆಂಬರ್ 2ರಂದು ಸಶಸ್ತ್ರ ಪಡೆಯ ಯೋಧರು ಮಣಿಪುರದ ರಾಜಧಾನಿ ಇಂಫಾಲ್‍ನಿಂದ 8 ಕಿ.ವಿೂ. ದೂರದ ಮಲ್ಲಮ್‍ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 10 ಮಂದಿಯ ಗುಂಪನ್ನು ಸುತ್ತುವರಿದು ಗುಂಡಿಕ್ಕಿ ಹತ್ಯೆಗೈದಾಗ ಶರ್ಮಿಳಾ ಬೆಳೆದಿದ್ದರು. ಈ ಪರಿಸರದಲ್ಲಿ ಆ ಮೊದಲು ಸ್ಫೋಟಗೊಂಡಿದ್ದ ಬಾಂಬನ್ನು (ಅದರಲ್ಲಿ ಯಾರೂ ಗಾಯಗೊಂಡಿರಲೂ ಇಲ್ಲ) ಆ ಗುಂಡಿನ ದಾಳಿಗೆ ಯೋಧರು ಕಾರಣವಾಗಿ ಕೊಟ್ಟದ್ದನ್ನು ಶರ್ಮಿಳಾ ಒಪ್ಪಿಕೊಳ್ಳಲಿಲ್ಲ. ಈ ಘಟನೆಯ ಎರಡು ದಿನಗಳ ಬಳಿಕ ಆಕೆ ನಿರಾಹಾರ ಸತ್ಯಾಗ್ರಹವನ್ನು ಆರಂಭಿಸಿದರು. ಯೋಧರಿಗೆ ನಿರಂಕುಶ ಅಧಿಕಾರವನ್ನು ಕೊಡುವ ಕಾನೂನನ್ನು ಕೇಂದ್ರ ಸರಕಾರವು ರಾಜ್ಯದಿಂದ ಮರಳಿ ಪಡೆಯದೇ ತಾನು ಸತ್ಯಾಗ್ರಹವನ್ನು ನಿಲ್ಲಿಸಲಾರೆ ಎಂದು ಘೋಷಿಸಿದರು. ಆ ಸಂದರ್ಭದಲ್ಲಿ ಶರ್ಮಿಳಾ ತುಂಬು ಯೌವನೆ. ಎಲ್ಲರಂತೆ ಉದ್ಯೋಗ, ಮದುವೆ, ಮಕ್ಕಳು, ಕುಟುಂಬ ಎಂದು ಕನಸು ಕಾಣುವ ವಯಸ್ಸು. ಶರ್ಮಿಳಾ ದಿನಗಳೆದಂತೆ ರಾಷ್ಟ್ರೀಯ ಸುದ್ದಿಯಾದಳು. ಮಣಿಪುರದಲ್ಲಿ ಸಶಸ್ತ್ರ ಪಡೆಯ ಯೋಧರು ನಡೆಸುತ್ತಿರುವ ದೌರ್ಜನ್ಯಗಳನ್ನು ಮಾಧ್ಯಮಗಳು ವಿಶೇಷ ಆಸಕ್ತಿಯಿಂದ ಪ್ರಕಟಿಸತೊಡಗಿದುವು. ಶರ್ಮಿಳಾ ನಿಶ್ಶಕ್ತಳಾದಳು. ಸರಕಾರ ಆಕೆಯನ್ನು ಬಂಧಿಸಿ ಮೂಗಿನ ಮೂಲಕ ದ್ರವಾಹಾರ ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಮಾನವ ಹಕ್ಕು ಹೋರಾಟಗಾರರು ಶರ್ಮಿಳಾರ ಪರ ಧ್ವನಿಯೆತ್ತಿದರು. ‘ಸೇವ್ ಶರ್ಮಿಳಾ ಆರ್ಗನೈಝೇಶನ್' ಎಂಬ ಹೆಸರಲ್ಲಿ ತಂಡವೊಂದೂ ರಚನೆಯಾಯಿತು. ಶರ್ಮಿಳಾ ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ಸ್ವಾಗತಿಸುವುದಕ್ಕೆ ಸಾವಿರಾರು ಮಂದಿ ಸೇರುತ್ತಿದ್ದರು. ಆಕೆಯ ಸಂದರ್ಶನ, ವರದಿ, ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಆಗಾಗ ಪ್ರಕಟಗೊಳ್ಳುತ್ತಲೇ ಇದ್ದುವು. ಹೀಗೆ ಕಳೆದ 15 ವರ್ಷಗಳಿಂದ ಅತ್ಯಂತ ಬದ್ಧತೆಯಿಂದ ಸತ್ಯಾಗ್ರಹವನ್ನು ಮುಂದುವರಿಸಿಕೊಂಡು ಬಂದಿರುವ ಶರ್ಮಿಳಾರಿಗೆ ಈಗ ಒಂಟಿತನದ ಅನುಭವವಾಗುತ್ತಿದೆ. ಆಕೆ ಬಂಧನಕ್ಕೀಡಾದರೂ ಬಿಡುಗಡೆಗೊಂಡರೂ ಈಗ ಜನ ಸೇರುತ್ತಿಲ್ಲ. ಸೇವ್ ಶರ್ಮಿಳಾ ಆರ್ಗನೈಝೇಶನ್‍ನ ಮಂದಿಯೇ ಪ್ರತಿಭಟನೆಯಲ್ಲಿ ಆಸಕ್ತಿಯನ್ನು ಕಳಕೊಂಡಿದ್ದಾರೆ. ಮಾನವ ಹಕ್ಕು ಹೋರಾಟಗಾರರು ತಣ್ಣಗಾಗಿದ್ದಾರೆ. ಏರು ಯೌವನದಲ್ಲಿ ಹೋರಾಟವೊಂದನ್ನು ಹುಟ್ಟು ಹಾಕಿದ ಶರ್ಮಿಳಾರಿಗೆ ಈಗ ಮಧ್ಯವಯಸ್ಸು. ಜೊತೆಗಿದ್ದವರೆಲ್ಲ ಮದುವೆ, ಮಕ್ಕಳು, ಕುಟುಂಬ ಎಂದು ಚೆಲ್ಲಾಪಿಲ್ಲಿಯಾಗಿರುವಾಗ ಮತ್ತು ಹೊಸ ತಲೆಮಾರು ಈ ಸತ್ಯಾಗ್ರಹದಲ್ಲಿ ಆಕರ್ಷಣೆ ಕಳಕೊಂಡಿರುವಾಗ ಶರ್ಮಿಳಾ ಸಹಜವಾಗಿ ಮರು ಅವಲೋಕನಕ್ಕೆ ಇಳಿದಿದ್ದಾರೆ. ಈ ಪ್ರತಿಭಟನೆ ಎಲ್ಲಿಯ ವರೆಗೆ ಎಂಬೊಂದು ಪ್ರಶ್ನೆ ಅವರನ್ನು ಆಳವಾಗಿ ಇರಿಯತೊಡಗಿದೆ. ಅಷ್ಟಕ್ಕೂ,
  ಮಣಿಪುರದ ಜೆ.ಎನ್. ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಸುಸಜ್ಜಿತ ಕೋಣೆಯಲ್ಲಿ ಮೂಗಿನಲ್ಲಿ ದ್ರವಾಹಾರ ಸೇವಿಸುತ್ತಿರುವ ಶರ್ಮಿಳಾರಿಗಾಗಿ ಪ್ರತಿ ತಿಂಗಳು 80 ಸಾವಿರ ರೂಪಾಯಿ ಖರ್ಚು ಮಾಡುತ್ತಿರುವ ಅಲ್ಲಿನ ಸರಕಾರಕ್ಕೆ ಈ ಸುದ್ದಿ ಅತ್ಯಂತ ಇಷ್ಟ ಆಗಬಹುದು. ಶರ್ಮಿಳಾ ಸತ್ಯಾಗ್ರಹ ತ್ಯಜಿಸುವುದನ್ನು ಅದು ಎರಡೂ ಕೈಗಳಿಂದ ಸ್ವಾಗತಿಸಬಹುದು. ಆದರೆ ಈ ಬೆಳವಣಿಗೆ ಪ್ರತಿಭಟನೆಯ ಮೇಲೆ ಬೀರಬಹುದಾದ ಪರಿಣಾಮಗಳೇನು? ಪ್ರಜಾತಂತ್ರ ನೀಡಿರುವ ಪ್ರತಿಭಟನೆ ಎಂಬ ಅಸ್ತ್ರದ ಬಗ್ಗೆ ಯುವ ಪೀಳಿಗೆ ಹೊಂದಿರುವ ತೀವ್ರ ವೈರಾಗ್ಯದ ಸೂಚನೆಯಲ್ಲವೇ ಶರ್ಮಿಳಾರ ಆತಂಕ? ಶರ್ಮಿಳ ದ್ರವಾಹಾರ ಸೇವಿಸಿದರೂ ಘನಾಹಾರ ಸೇವಿಸಿದರೂ ಏನೂ ಬದಲಾವಣೆ ಆಗದು ಎಂಬೊಂದು ವಾತಾವರಣ ಸೃಷ್ಟಿಯಾಗಲು ಏನು ಕಾರಣ, ಯಾರು ಕಾರಣ? ಹಾಗಂತ, ವೈಯಕ್ತಿಕವಾಗಿ ಈ ಪ್ರತಿಭಟನೆಯ ಅಗತ್ಯ ಶರ್ಮಿಳಾರಿಗೆ ಖಂಡಿತಕ್ಕೂ ಇಲ್ಲ. ಮಲ್ಲಮ್‍ನಲ್ಲಿ ಸಾವಿಗೀಡಾಗ 16 ಮಂದಿಯಲ್ಲಿ ಆಕೆಯ ಮನೆಯವರು ಬಿಡಿ ಸಂಬಂಧಿಕರೂ ಇರುವ ಸಾಧ್ಯತೆ ಇಲ್ಲ. ಆಕೆ ಮನಸ್ಸು ಮಾಡಿದ್ದರೆ ಆಕೆಯ ವಯಸ್ಸಿನವರು ಇವತ್ತು ಆರಾಮವಾಗಿ ಬದುಕುತ್ತಿರುವಂತೆ, ಮಕ್ಕಳು, ಕುಟುಂಬ ಎಂದು ಎಲ್ಲೋ ಬದುಕುತ್ತಿರಬಹುದಿತ್ತು. ಇಷ್ಟಿದ್ದೂ, ಒಂದು ರಾಜ್ಯದ ಜನತೆಯ ಮೇಲಿನ ಕಾಳಜಿಯಿಂದ ಅತಿ ಕಷ್ಟಕರವಾದ ನಿರಾಹಾರ ಸತ್ಯಾಗ್ರಹಕ್ಕೆ ಮುಂದಾಗಿ ಇವತ್ತು ಆಕೆ ಜನ ಬೆಂಬಲದ ಕೊರತೆಯನ್ನು ಎದುರಿಸುತ್ತಿದ್ದರೆ ಅದಕ್ಕೆ ಹೊಸ ತಲೆಮಾರನ್ನೇ ಹೊಣೆಯಾಗಿಸಬೇಕಾಗುತ್ತದೆ. ಆಧುನಿಕ ಪೀಳಿಗೆಯ ಭಾಷೆಯಲ್ಲಿ ಹೇಳುವುದಾದರೆ ಪ್ರತಿಭಟನೆ ಎಂಬುದೇ ನಾಲಾಯಕ್ಕು. ಹೊಸ ತಲೆಮಾರು ಇವತ್ತು ಪ್ರತಿಭಟನೆಯಲ್ಲಿ ಆಸಕ್ತಿಯನ್ನೇ ಕಳಕೊಳ್ಳತೊಡಗಿದೆ. ಆಧುನಿಕ ಜೀವನ ಕ್ರಮವು ಎಂಜಾಯ್‍ಮೆಂಟ್ ಲೈಫ್‍ಸ್ಟೈಲ್ ಅನ್ನು ಕಲಿಸುತ್ತಿದೆಯೇ ಹೊರತು ಹೋರಾಟ ಮನೋಭಾವವನ್ನೇ ಸಮಾಜದಿಂದ ಕಿತ್ತುಕೊಳ್ಳುತ್ತಿದೆ. ‘ನಮ್ಮಷ್ಟಕ್ಕೆ ನಾವು' ಎಂಬೊಂದು ಸ್ವಹಿತಾಸಕ್ತಿ ಮನೋಭಾವವು ಯುವಪೀಳಿಗೆಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇನ್ನು, ಗೋವಿನ ವಿಷಯದಲ್ಲೋ ಭಿನ್ನ ಧರ್ಮದ ಯುವಕ-ಯುವತಿಯರ ಪ್ರೇಮದ ವಿಷಯದಲ್ಲೋ ಅಥವಾ ಮಸೀದಿ-ಮಂದಿರಕ್ಕೆ ಬಿದ್ದ ಕಲ್ಲಿನ ಹೆಸರಿನಲ್ಲೋ ತಕ್ಷಣಕ್ಕೆ ಸೇರುವ ನೂರಾರು ಯುವಕರಲ್ಲಿ ಬಹುತೇಕ ಯಾರೊಬ್ಬರೂ ಜನಪರ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ನೀರು, ವಿದ್ಯುತ್, ರಸ್ತೆ, ನಿರುದ್ಯೋಗ, ಬೆಲೆ ಏರಿಕೆ.. ಮುಂತಾದ ವಿಷಯಗಳನ್ನೆತ್ತಿಕೊಂಡು ಏರ್ಪಡಿಸಲಾಗುವ ಪ್ರತಿಭಟನೆಗಳಲ್ಲಿ ಜನಸಂಖ್ಯೆ ಶೂನ್ಯ ಅನ್ನುವಷ್ಟು ಕಡಿಮೆ. ಇಂಥ ಸ್ಥಿತಿಯಲ್ಲಿ ಶರ್ಮಿಳಾರ ಆತಂಕವನ್ನು ನಾವು ಕೇವರ ಅವರೊಬ್ಬರಿಗೇ ಸೀಮಿತಗೊಳಿಸಿ ನೋಡಬೇಕಿಲ್ಲ. ನಿಜವಾಗಿ, ಪ್ರತಿಭಟನೆಯಲ್ಲಿ ಜನರು ಆಸಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಅದರಿಂದ ಅತ್ಯಂತ ಖುಷಿಯಾಗುವುದು ಪ್ರಭುತ್ವಕ್ಕೆ. ಪ್ರತಿಭಟನೆಯನ್ನು ಪ್ರತಿ ಸಂದರ್ಭದಲ್ಲೂ ಸೋಲಿಸುವುದಕ್ಕೆ ಪ್ರಭುತ್ವ ಯಾವಾಗಲೂ ಹೊಂಚು ಹಾಕುತ್ತಲೇ ಇರುತ್ತದೆ. ಶರ್ಮಿಳಾ ಅದರ ಸೂಚನೆಯನ್ನು ನೀಡಿದ್ದಾರೆ. ಹಾಗಂತ, ಒಂದೂವರೆ ದಶಕದಿಂದ ನಿರಾಹಾರ ಸತ್ಯಾಗ್ರಹದಲ್ಲಿರುವ ಶರ್ಮಿಳಾ, ಇನ್ನೂ ಆಕೆಯೇ ಆ ಪ್ರತಿಭಟನೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಹೇಳುವುದು ಕ್ರೌರ್ಯವಾಗುತ್ತದೆ. ತನ್ನ ಬದುಕಿನ ಬಹು ಅಮೂಲ್ಯ ಸಮಯವನ್ನು ಆಕೆ ಆ ಹೋರಾಟಕ್ಕಾಗಿ ಅರ್ಪಿಸಿದ್ದಾರೆ. ಇವತ್ತು ಅವರು ಈ ಪ್ರತಿಭಟನೆಯಿಂದ ಬಿಡುವನ್ನು ಬಯಸುವುದಾದರೆ ಜನರು ಅದಕ್ಕೆ ಅವಕಾಶ ಮಾಡಿಕೊಡಬೇಕು. ಇತರರು ಆ ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಳ್ಳಬೇಕು. ಪ್ರತಿಭಟನೆಗೆ ಭಿನ್ನ ದಿಕ್ಕು, ಹೊಸ ಚೈತನ್ಯವನ್ನು ಒದಗಿಸಬೇಕು.
  ಏನೇ ಆಗಲಿ, ಪ್ರತಿಭಟನೆ ಎಂಬ ಪ್ರಜಾತಂತ್ರ್ಯದ ಬಹು ಅಮೂಲ್ಯ ಅಸ್ತ್ರವು ನಾಲಾಯಕ್ಕು ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಎಲ್ಲರ ಮೇಲೂ ಇದೆ. ಬದಲಾದ ಕಾಲಕ್ಕೆ ತಕ್ಕಂತೆ ಅದಕ್ಕೆ ಹೊಸ ರೂಪ, ಭಾವ, ಅಂದವನ್ನು ನೀಡಬೇಕಾಗಿದೆ. ಶರ್ಮಿಳಾರ ಆತಂಕವು ಸುಳ್ಳಾಗಲಿ ಮತ್ತು ಅವರಿಗೆ ಯಶಸ್ಸು ಸಿಗಲಿ ಎಂದೇ ಹಾರೈಸೋಣ.

Wednesday 21 October 2015

ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..

     ಛತ್ತೀಸ್‍ಗಢವು ಭಾರತದ ಭಾಗವೋ ಅಥವಾ ಪ್ರತ್ಯೇಕ ರಾಷ್ಟ್ರವೋ ಎಂದು ಪ್ರಶ್ನಿಸಬೇಕಾದಂಥ ಆತಂಕಕಾರಿ ಬೆಳವಣಿಗೆಯೊಂದು ಸೃಷ್ಟಿಯಾಗಿದೆ. ಅಲ್ಲಿನ ಹೈಕೋರ್ಟಿಗೂ ಇಂಥದ್ದೇ ಅನುಭವವಾಗಿದೆ. ಛತ್ತೀಸ್‍ಗಢದ ಬಸ್ತಾರ್ ಜಿಲ್ಲೆಯ ಸುಮಾರು 50 ಗ್ರಾಮಗಳು ಹಿಂದೂ ಅಲ್ಲದವರ ಪ್ರಾರ್ಥನೆ, ಭಾಷಣ ಮತ್ತು ಧರ್ಮ ಪ್ರಚಾರಗಳಿಗೆ ನಿಷೇಧವನ್ನು ಹೇರಿವೆ. ಈ ಗ್ರಾಮಗಳಲ್ಲಿ ಹಿಂದೂ ಅಲ್ಲದವರಿಗೆ ಕೂಲಿಯಾಳುಗಳು ಸಿಗುವುದಿಲ್ಲ. ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ತಡೆ ಒಡ್ಡಲಾಗುತ್ತದೆ. ಕುಡಿಯುವ ನೀರು, ಆಹಾರ ಖರೀದಿಗೂ ಅಘೋಷಿತ ಬಹಿಷ್ಕಾರವಿದೆ. ಛತ್ತೀಸ್‍ಗಢದ ಕ್ರೈಸ್ತ ಸಂಘಟನೆ ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಈ ಸಂಗತಿಯನ್ನು ಹೈಕೋರ್ಟ್‍ನ ಮುಂದಿಟ್ಟಾಗ ಅದು ಪರಿಸ್ಥಿತಿಗೆ ಅಸಹನೆ ವ್ಯಕ್ತಪಡಿಸಿದೆ. ಸರಕಾರದಿಂದ ವರದಿಯನ್ನೂ ಅಪೇಕ್ಷಿಸಿದೆ. ನಿಜವಾಗಿ, ಈ ಬಹಿಷ್ಕಾರದ ಹಿಂದೆ ಒಂದು ಕತೆಯಿದೆ. ಈ ಕತೆ ಸಂಪೂರ್ಣವಾಗಿ ಸಂಘಪರಿವಾರದಿಂದ ರಚಿತವಾದುದು. ಸಂಘಪರಿವಾರದ ಸಲಹೆಯಂತೆ ಈ ಬಹಿಷ್ಕಾರವನ್ನು ಹೇರಲಾಗಿದೆ ಎಂದು ಅದರ ಬಸ್ತಾರ್ ಜಿಲ್ಲಾಧ್ಯಕ್ಷ ಸುರೇಶ್ ಯಾದವ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಒಂದು ಕಡೆ, ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲಲಾಗುತ್ತಿದ್ದರೆ ಇನ್ನೊಂದೆಡೆ ಈ ಥಳಿಸಿ ಕೊಲ್ಲುವವರ ಮುಖವಾಣಿಯಾದ ಪಾಂಚಜನ್ಯ ಪತ್ರಿಕೆಯು, ‘ಗೋಹತ್ಯೆ ಮಾಡುವವರನ್ನು ಹತ್ಯೆ ನಡೆಸಬೇಕು’ ಎಂದು ಕರೆ ಕೊಡುತ್ತದೆ. ಮಗದೊಂದೆಡೆ, ಗುಜರಾತ್‍ನಲ್ಲಿ ಗಾರ್ಬಾ ನೃತ್ಯಕ್ಕೆ ಮುಸ್ಲಿಮರಿಗೆ ಬಹಿಷ್ಕಾರ ಹಾಕಲಾಗುತ್ತದೆ. ಅಷ್ಟಕ್ಕೂ, ಥಳಿತ, ಹತ್ಯೆ, ಬಹಿಷ್ಕಾರ, ದ್ವೇಷ ಭಾಷಣಗಳೇ ಇತ್ತೀಚೆಗೆ ಪ್ರತಿದಿನದ ಸುದ್ದಿಗಳಾಗಿರುವುದಕ್ಕೆ ಕಾರಣಗಳೇನು? ಈ ಎಲ್ಲದರಲ್ಲೂ ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಆರೋಪಿ ಸ್ಥಾನದಲ್ಲಿರುವುದರಿಂದ ಈ ಪ್ರಶ್ನೆಗೆ ಮತ್ತಷ್ಟು ಬಲ ಬರುತ್ತದೆ. ಅಭಿವೃದ್ಧಿಯ ಹೆಸರಲ್ಲಿ ಚುನಾವಣೆಯನ್ನು ಎದುರಿಸಿದ ನರೇಂದ್ರ ಮೋದಿಯವರು ಇಂಥದ್ದೊಂದು ಸನ್ನಿವೇಶವನ್ನು ಬಯಸಿದ್ದರೇ? ಅಭಿವೃದ್ಧಿ ಅವರ ನಿಜವಾದ ಗುರಿ ಆಗಿರಲಿಲ್ಲವೇ? ಒಂದು ಕಡೆ ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲುವಾಗ ಇನ್ನೊಂದು ಕಡೆ ಪ್ರತಿದಿನ ಟನ್ನುಗಟ್ಟಲೆ ಮಾಂಸವು ವಿದೇಶಕ್ಕೆ ರಫ್ತಾಗುತ್ತಾ ಇದೆ. ಆದರೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವ ಬೃಹತ್ ಕಂಪೆನಿಗಳ ವಿರುದ್ಧ ಥಳಿಸಿ ಕೊಲ್ಲುವ ಮಂದಿ ಯಾವ ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಅಲ್ಲಿಗೆ ಗೋವುಗಳನ್ನು ಸಾಗಿಸುವ ವಾಹನಗಳ ಮೇಲೆ ದಾಳಿ ನಡೆಸುತ್ತಿಲ್ಲ. ಅದರ ಮಾಲಿಕರು, ವ್ಯವಸ್ಥಾಪಕರು, ಕೆಲಸಗಾರರ ವಿರುದ್ಧ ಮೊಕದ್ದಮೆ ಹೂಡುತ್ತಿಲ್ಲ. ಮಾಂಸೋದ್ಯಮದಲ್ಲಿ ತೊಡಗಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಸಂಪೂರ್ಣ ಅಧಿಕಾರ ಇದ್ದರೂ ಅದಕ್ಕಾಗಿ ಈ ಮಂದಿ ಒತ್ತಾಯಿಸುತ್ತಿಲ್ಲ. ಈ ದ್ವಂದ್ವಕ್ಕೆ ಏನೆನ್ನಬೇಕು?
  ಬಹಿಷ್ಕಾರ ಎಂಬ ಪದಕ್ಕೆ ಈ ದೇಶದಲ್ಲಿ ಪ್ರಾಚೀನ ಇತಿಹಾಸ ಇದೆ. ಈ ಪದದ ತೀವ್ರತೆಯನ್ನು ಮೊಟ್ಟಮೊದಲು ಅನುಭವಿಸಿದವರು ದಲಿತರು. ಅಂಬೇಡ್ಕರ್‍ರಿಗೂ ಇದರ ಬಿಸಿ ತಟ್ಟಿದೆ. ಸಾರ್ವಜನಿಕ ಬಾವಿಯಿಂದ, ಅಂಗಡಿಯಿಂದ, ದೇವಸ್ಥಾನಗಳಿಂದ, ಸಾರ್ವಜನಿಕ ಸ್ಥಳಗಳಿಂದ ಬಹಿಷ್ಕೃತಗೊಂಡೇ ಶತಮಾನವನ್ನು ಅವರು ಕಳೆದಿದ್ದಾರೆ. ಅದರ ಪರಿಣಾಮ ಎಷ್ಟು ಭೀಕರ ಪ್ರಮಾಣದಲ್ಲಿ ಆಗಿದೆಯೆಂಬುದು ಇವತ್ತಿಗೂ ಸರಕಾರಿ ಕಚೇರಿಗಳು, ಮಾಧ್ಯಮದ ಆಯಕಟ್ಟಿನ ಜಾಗಗಳು, ಪೊಲೀಸ್ ಇಲಾಖೆ, ಪ್ರಭುತ್ವ, ರಾಜಕೀಯ ಪಕ್ಷಗಳ ಪ್ರಮುಖ ಸ್ಥಾನಗಳಲ್ಲಿ ಯಾರಿದ್ದಾರೆಂಬುದನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯಾನಂತರ ದಲಿತ ವರ್ಗಕ್ಕೆ ವಿೂಸಲಾತಿಯನ್ನು ಒದಗಿಸಿದ್ದರೂ ಅವರು ವ್ಯವಸ್ಥೆಯ ಆಯಕಟ್ಟಿನ ಜಾಗಕ್ಕೆ ತಲುಪಬೇಕಾದಷ್ಟು ಪ್ರಮಾಣದಲ್ಲಿ ತಲುಪಿಲ್ಲ. ರಾಜಕೀಯದಲ್ಲಿ ಅವರು ತಮ್ಮ ಸಂಖ್ಯೆಗೆ ಅನುಗುಣವಾಗಿ ಬಲಶಾಲಿಯಾಗಿಲ್ಲ. ಮಾಧ್ಯಮಗಳ ನೀತಿ ನಿರೂಪಣಾ ಹಂತಕ್ಕೆ ಅವರಿನ್ನೂ ಏರಿಲ್ಲ. ದಲಿತ ಸಬಲೀಕರಣಕ್ಕಾಗಿ ಸರಕಾರ ಸರಣಿ ಕಾನೂನುಗಳನ್ನು ರಚಿಸಿದ ಬಳಿಕವೂ ಇವತ್ತೂ ದಲಿತರೆಂಬ ಕಾರಣಕ್ಕಾಗಿ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದೀಗ, ದಲಿತರನ್ನು ಬಹಿಷ್ಕಾರದ ಮೂಲಕ ಸತಾಯಿಸಿದ ಅದೇ ಗುಂಪು ಬಹಿಷ್ಕಾರದ ಹೊಸ ನಮೂನೆಯನ್ನು ಪ್ರಸ್ತುತಪಡಿಸುತ್ತಿದೆ. ಆದಿವಾಸಿ-ಹಿಂದುಳಿದ ಮಂದಿಯೇ ಹೆಚ್ಚಿರುವ ಬಸ್ತಾರ್‍ನಂತಹ ಜಿಲ್ಲೆಯಿಂದಲೇ ಈ ಬಹಿಷ್ಕಾರವನ್ನು ಜಾರಿಗೊಳಿಸುವ ಅತ್ಯಂತ ಬುದ್ದಿsವಂತಿಕೆಯನ್ನು ಅದು ಪ್ರದರ್ಶಿಸುತ್ತಲೂ ಇದೆ. ಈ ಬಹಿಷ್ಕಾರ ದಲಿತ ಬಹಿಷ್ಕಾರಕ್ಕಿಂತ ಹೆಚ್ಚು ಭಯಾನಕವಾದುದು. ಗೋವಿನ ಹೆಸರಲ್ಲಿ, ಮತಾಂತರ, ಸಂಸ್ಕೃತಿ, ವಿದೇಶಿ ಮೂಲದ ಹೆಸರಲ್ಲಿ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಭಾರತೀಯತೆಯಿಂದ ಪ್ರತ್ಯೇಕಿಸಿ ಹೇಳುವುದು ಸುಲಭ ಮತ್ತು ಹೆಚ್ಚು ಭಾವನಾತ್ಮಕ. ‘ನಮ್ಮ ಪೂಜಾರ್ಹ ಪ್ರಾಣಿಯನ್ನು ಅವರು ಬೇಕೆಂದೇ ಅವಮಾನಿಸುತ್ತಾರೆ’ ಎಂದು ಹೇಳುವಾಗ ಅಲ್ಲೊಂದು ಭಾವುಕತೆ ಸೃಷ್ಟಿಯಾಗುತ್ತದೆ. ‘ಅವರಿಂದಾಗಿ ನಮ್ಮ ಸಂಸ್ಕøತಿ ಹಾಳಾಗಿದೆ, ನಮ್ಮ ಆಹಾರದಲ್ಲಿ ಧರ್ಮ ವಿರೋಧಿ ಅಂಶಗಳು ಸೇರಿಕೊಂಡಿವೆ..’ ಎಂದೆಲ್ಲಾ ಹೇಳುವಾಗ ಒಂದರ ವೈಭವೀಕರಣ ಮತ್ತು ಇನ್ನೊಂದರ ಅಸಹ್ಯೀಕರಣ ಕೂಡ ನಡೆಯುತ್ತದೆ. ಈ ಅಸಹ್ಯೀಕರಣವೇ ಅಂತಿಮವಾಗಿ ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸುವುದಕ್ಕೆ ನೀಲನಕ್ಷೆಯನ್ನು ಒದಗಿಸುತ್ತದೆ. ದಲಿತರನ್ನು ಈ ದೇಶದಲ್ಲಿ ಬಹಿಷ್ಕಾರಕ್ಕೆ ತುತ್ತಾಗಿಸಿದ್ದು ಅವರ ಆಹಾರ, ಸಂಸ್ಕೃತಿ, ವರ್ಣ, ವೇಷ-ಭೂಷಣಗಳನ್ನು ಅಸಹ್ಯಗೊಳಿಸುವ ಮೂಲಕವೇ ಆಗಿತ್ತು. ಅವರನ್ನು ಸಂಸ್ಕೃತಿಹೀನರಂತೆ ಕಾಣಲಾಯಿತು. ಪದೇ ಪದೇ ಅವರ ವರ್ಣವನ್ನು ಹೀನೈಸಲಾಯಿತು. ಅವರ ಆಹಾರ ಪದ್ಧತಿಯನ್ನು ತುಚ್ಛೀಕರಿಸಲಾಯಿತು. ಹೀಗೆ ನಿಧಾನವಾಗಿ ಅವರು ಸಮಾಜದ ಮುಖ್ಯ ಧಾರೆಯಿಂದ ಕಳೆದುಹೋಗುತ್ತಾ ಆತ್ಮವಿಶ್ವಾಸವನ್ನು ಕಳಕೊಳ್ಳತೊಡಗಿದರು. ಇದೀಗ ಅದೇ ಮಾದರಿಯ ಪ್ರಯೋಗವನ್ನು ದೇಶದಾದ್ಯಂತ ಜಾರಿಗೊಳಿಸುವ ಪ್ರಯತ್ನವೊಂದು ನಡೆಯುತ್ತಿರುವಂತೆ ತೋರುತ್ತಿದೆ. ನಾವು ಮತ್ತು ಅವರು ಎಂಬೊಂದು ವಿಭಜನೆ. ಅವರು ಗೋವು ತಿನ್ನುವವರು, ಮತಾಂತರ ಮಾಡುವವರು, ಹೆಣ್ಣು ಮಕ್ಕಳನ್ನು ದುರುಪಯೋಗಿಸುವವರು.. ಎಂದೆಲ್ಲಾ ಹೇಳುತ್ತಾ ‘ಅವರಿಂದ' ಮುಕ್ತವಾದ ಪ್ರದೇಶಗಳನ್ನು ಹುಟ್ಟು ಹಾಕುವುದು. ಅವರಿಲ್ಲದ ಸಮಾಜವನ್ನು ಕಟ್ಟಿಕೊಳ್ಳುವುದು. ಬಸ್ತಾರ್ ಇದರ ಮುನ್ಸೂಚನೆ ಎಂದೇ ಹೇಳಬೇಕಾಗುತ್ತದೆ.
  ಅಷ್ಟಕ್ಕೂ, ಈ ದೇಶದಲ್ಲಿ ಮಾಂಸಾಹಾರವನ್ನು ಪ್ರಾರಂಭಿಸಿದ್ದು ಮುಸ್ಲಿಮರೂ ಅಲ್ಲ, ಅದನ್ನು ವಿದೇಶಕ್ಕೆ ರಫ್ತು ಮಾಡುವಲ್ಲಿ ಅವರ ಕೈವಾಡವೂ ಇಲ್ಲ. ಈ ದೇಶದ ಒಟ್ಟು ಕಸಾಯಿಖಾನೆಗಳಲ್ಲಿ ಆಗುತ್ತಿರುವ ಮಾಂಸಕ್ಕಿಂತ ಹೆಚ್ಚು ಮಾಂಸವು ವಿದೇಶಕ್ಕೆ ರಫ್ತಾಗುತ್ತಿರುವುದನ್ನು ಮುಚ್ಚಿಟ್ಟು ಇವತ್ತು ಗೋಹತ್ಯೆಯನ್ನು ಮುಸ್ಲಿಮರ ತಲೆಗೆ ಕಟ್ಟಲಾಗುತ್ತಿದೆ. ಅವರನ್ನು ಭಯೋತ್ಪಾದಕರಂತೆ ಮತ್ತು ಅಸಹಿಷ್ಣುಗಳಂತೆ ಬಿಂಬಿಸಲಾಗುತ್ತಾ ಇದೆ. ಆದರೆ ಇದು ವಾಸ್ತವ ಅಲ್ಲ. ಈ ಪ್ರಚಾರದ ಹಿಂದೆ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ದಲಿತೀಕರಣಗೊಳಿಸುವ ಸಂಚೊಂದು ನಡೆಯುತ್ತಿರುವಂತೆ ತೋರುತ್ತಿದೆ. ಒಂದು ಕಡೆ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಲೇ ಇನ್ನೊಂದೆಡೆ ನಡೆಯುತ್ತಿರುವ ಈ ಸಂಚನ್ನು ಭಾರತೀಯರು ವಿಫಲಗೊಳಿಸಬೇಕು. ಈ ದೇಶ ಎಲ್ಲರದು. ಎಲ್ಲರೂ ಜೊತೆಯಾಗಿ ಬಾಳುವ ತಾರತಮ್ಯ ರಹಿತ ಭಾರತ ನಮ್ಮ ಗುರಿಯಾಗಬೇಕು. ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..

Wednesday 14 October 2015

ಅಖ್ಲಾಕ್‍ ನ ಮಾಂಸ, ಕಲ್ಬುರ್ಗಿ ವೈಚಾರಿಕತೆ ಮತ್ತು ಪ್ರಶಸ್ತಿಗಳ ಪ್ರತಿಭಟನೆ

      ಹಿಂಸೆ ಮತ್ತು ಪಾರಿತೋಷಕ ಜೊತೆಜೊತೆಗೇ ಸಾಗಲು ಸಾಧ್ಯವಿಲ್ಲ ಎಂಬ ಪ್ರತಿಭಟನಾ ಸಂದೇಶವೊಂದು ಸಾಹಿತ್ಯ
ವಲಯದಿಂದ ರವಾನೆಯಾಗಿದೆ. ಈ ಪ್ರತಿಭಟನೆಗೆ ನೇತೃತ್ವ ನೀಡಿರುವವರು 88 ವರ್ಷದ ಸಾಹಿತಿ ನಯನತಾರಾ ಸೆಹಗಲ್. ಅವರು ತಮಗೆ ಸಂದಿರುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. 1975ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಖಂಡಿಸಿ ಪ್ರತಿಭಟಿಸಿದವರು ಸೆಹಗಲ್. ಆಗ ಅವರ ಜೊತೆಗೆ ಅರುಣ್ ಶೌರಿ, ಕುಲದೀಪ್ ನಯ್ಯರ್, ರಜನಿ ಕೊಟಾರಿ, ಜಾರ್ಜ್ ಫರ್ನಾಂಡಿಸ್ ಮುಂತಾದವರು ಸೇರಿಕೊಂಡಿದ್ದರು. ಅವತ್ತು ಬಿಜೆಪಿಯ ಮಂದಿ ಸೆಹಗಲ್‍ರನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ ಅವರನ್ನು ಮಾದರಿ ಸಾಹಿತಿಯೆಂದು ಘೋಷಿಸಿದ್ದರು. ಅದೇ ಸೆಹಗಲ್‍ರು ಇವತ್ತು ನರೇಂದ್ರ ಮೋದಿಯವರ ವಿರುದ್ಧ ದನಿಯೆತ್ತಿದ್ದಾರೆ. ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಗೋವಿನ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ ಮತ್ತು ಪ್ರಗತಿಪರರ ಮೇಲಿನ ದಾಳಿಗೆ ಅವರು ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಈ ಪ್ರತಿಭಟನೆಯಲ್ಲಿ ಸೆಹಗಲ್ ಒಂಟಿಯಲ್ಲ. ಚಂಪಾ, ಕುಂವೀ, ಅರವಿಂದ ಮಾಲಗತ್ತಿ, ಅಮನ್ ಸೇಥಿ, ಅಶೋಕ್ ವಾಜಪೇಯಿ, ರಹಮತ್ ತರೀಕೆರೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸು ಮಾಡಿಯೋ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಯೋ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಸಾಹಿತಿ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿಯಲಾಗಿದೆ. ಪಾಕ್ ಗಾಯಕ ಗುಲಾಮ್ ಅಲಿಯವರ ಕಾರ್ಯಕ್ರಮವನ್ನು ಶಿವಸೇನೆಯ ಒತ್ತಡದ ಮೇರೆಗೆ ರದ್ದುಗೊಳಿಸಲಾಗಿದೆ. ಒಂದು ರೀತಿಯಲ್ಲಿ, ‘ದ್ವಿತೀಯ ತುರ್ತು ಪರಿಸ್ಥಿತಿಯೊಂದು’ ಭಾಗಶಃ ಜಾರಿಯಲ್ಲಿರುವಂತೆ ತೋರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರದ ಬಗ್ಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏನೆಲ್ಲ ಅನುಮಾನ ಪಡಲಾಗಿತ್ತೋ ಅವೆಲ್ಲವನ್ನೂ ನಿಜಗೊಳಿಸುವ ತುರ್ತೊಂದು ಇವತ್ತು ಎಲ್ಲೆಡೆಯೂ ಕಾಣಿಸುತ್ತಿದೆ. ಬಿಜೆಪಿ ಮತ್ತು ಅದರ ಬೆಂಬಲಿಗ ವಲಯವು ಹಿಂದೆಂದಿಗಿಂತಲೂ ಹೆಚ್ಚು ಆವೇಶಭರಿತವಾಗಿ ಮಾತಾಡುತ್ತಿದೆ. ಈ ಗುಂಪು ತಮಗೆ ವಿರುದ್ಧವಾದ ಯಾವುದನ್ನು ಸಹಿಸುತ್ತಿಲ್ಲ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಬೆಲೆಯನ್ನೇ ನೀಡುತ್ತಿಲ್ಲ. ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದುದನ್ನೆಲ್ಲ ದೇಶವಿರೋಧಿ ಮತ್ತು ಧರ್ಮ ವಿರೋಧಿಯಂತೆ ಚಿತ್ರೀಕರಿಸುತ್ತಿದೆ. ಅಖ್ಲಾಕ್‍ನ ಸಾವನ್ನೂ ಸಮರ್ಥಿಸುವಷ್ಟರ ಮಟ್ಟಿಗೆ ಈ ಗುಂಪು ಸಂವೇದನಾರಹಿತವಾಗಿ ವರ್ತಿಸುತ್ತಿದೆ. ಈ ಎಲ್ಲ ಸಂದರ್ಭಗಳಲ್ಲಿ ಮಾತಾಡಬೇಕಿದ್ದ ಪ್ರಧಾನಿಯವರು ದೀರ್ಘ ಮೌನಕ್ಕೆ ಜಾರಿದ್ದಾರೆ. ಅಡ್ಡಾದಿಡ್ಡಿಯಾಗಿ ಮಾತಾಡುತ್ತಿರುವ ತನ್ನ ಸಂಪುಟ ಸಹೋದ್ಯೋಗಿಗಳನ್ನು ಮತ್ತು ಕಾರ್ಯಕರ್ತ ಪಡೆಯನ್ನು ತರಾಟೆಗೆತ್ತಿಕೊಳ್ಳುವ ಯಾವ ಪ್ರಯತ್ನವನ್ನೂ ಅವರು ಮಾಡುತ್ತಿಲ್ಲ. ದುರಂತ ಏನೆಂದರೆ, 1975ರಲ್ಲಿ ಸೆಹಗಲ್‍ರನ್ನು ಬೆಂಬಲಿಸಿದ್ದ ಅದೇ ಬಿಜೆಪಿ ಈ 2015ರಲ್ಲಿ ಅವರನ್ನು ವಿರೋಧಿಯಂತೆ ಕಾಣುತ್ತಿದೆ. ಅವರ ನಿಲುವನ್ನು ಗೇಲಿ ಮಾಡುತ್ತಿದೆ. ಆದ್ದರಿಂದಲೇ, ಸದ್ಯದ ವಾತಾವರಣವನ್ನು ನಾವು `ತುರ್ತು ಸ್ಥಿತಿ ಮರಳುವ' ಸೂಚನೆಯೆಂದೇ ಪರಿಗಣಿಸಬೇಕಾಗಿದೆ.
ಸೆಹಗಲ್

 ಅಷ್ಟಕ್ಕೂ, ಅಸಹಿಷ್ಣು ಭಾಷೆಯಲ್ಲಿ ಮಾತಾಡುತ್ತಿರುವ ಗುಂಪಿನ ಎದುರು ಸೆಹಗಲ್‍ರ ಗುಂಪು ಸಂಖ್ಯೆಯಲ್ಲಿ ತೀರ ಸಣ್ಣದು. ಅಸಹಿಷ್ಣು ಗುಂಪಿನ ಭಾಷೆಗೆ ವ್ಯಾಕರಣ ಇಲ್ಲ. ಪದ ಬಳಕೆಯಲ್ಲಿ ವಿವೇಚನೆಯಿಲ್ಲ. ದೇಹ ಭಾಷೆಯಲ್ಲಿ ಪ್ರೀತಿಯಿಲ್ಲ. ಆ ಗುಂಪು ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನೂ ಎತ್ತಿಕೊಳ್ಳಬಲ್ಲುದು. ರಕ್ತವನ್ನೂ ಹರಿಸಬಲ್ಲುದು. ಅದು ದೇಶದ ಸಂವಿಧಾನವನ್ನು ಗೌರವಿಸುತ್ತಿಲ್ಲ. ಧಾರ್ಮಿಕ ವೈವಿಧ್ಯತೆಯನ್ನು ಇಷ್ಟಪಡುತ್ತಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ಮುಂತಾಗಿ ಅದು ವಿಭಜಿಸುತ್ತಿದೆಯಲ್ಲದೇ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ನೆಚ್ಚಿಕೊಂಡಿದೆ. ಇದಕ್ಕೆ ಹೋಲಿಸಿದರೆ ಸೆಹಗಲ್‍ರ ಗುಂಪು ತೀರಾ ಅಲ್ಪಸಂಖ್ಯಾಕ. ಅದರ ಮುಂದಿರುವ ಆಯ್ಕೆಗಳೂ ಅಷ್ಟೇ ಅಲ್ಪಸಂಖ್ಯಾಕ. ಈ ಗುಂಪಿನ ಅಸ್ತ್ರವೆಂದರೆ ಪೆನ್ನು ಮಾತ್ರ. ಅದು ಬಳಸುವ ಭಾಷೆಯಲ್ಲಿ ವ್ಯಾಕರಣ ಇದೆ. ಪದ ಸೌಂದರ್ಯವಿದೆ. ದೇಹಭಾಷೆಯಲ್ಲಿ ಆಕರ್ಷಣೆಯಿದೆ. ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನು ಎತ್ತಿಕೊಳ್ಳುವ ಮತ್ತು ದ್ವೇಷ ಕಾರುವ ಗುಣ ಈ ಗುಂಪಿಗೆ ಸಿದ್ಧಿಸಿಲ್ಲ. ಈ ಗುಂಪು ಹಿಂಸೆಗೆ ಕರೆ ಕೊಡುವುದಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಿಲ್ಲ. ಆದ್ದರಿಂದಲೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆ ನಡೆದ ಬಳಿಕವೂ ಈ ಗುಂಪು ಯಾರನ್ನೂ ಥಳಿಸಿ ಕೊಂದಿಲ್ಲ. ನಿಜವಾಗಿ, ಸಾಹಿತ್ಯ ವಲಯದ ಈ ಸಾತ್ವಿಕತೆಯು ಇವತ್ತು ಅಖ್ಲಾಕ್‍ನನ್ನು ಕೊಂದ ಮತ್ತು ಕಲ್ಬುರ್ಗಿಯಂತಹವರ ಕೊಲೆಯನ್ನು ಸಮರ್ಥಿಸುತ್ತಿರುವ ಗುಂಪಿನಿಂದ ಪ್ರಬಲ ಸವಾಲನ್ನು ಎದುರಿಸುತ್ತಿದೆ. ಈ ಸವಾಲು ಮಾನದ್ದು, ಪ್ರಾಣದ್ದು ಮತ್ತು ವೈಯಕ್ತಿಕ ಸ್ವಾತಂತ್ರ್ಯದ್ದು. ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಹೋದರೆ, ಆ ಬಳಿಕ ಸಾಹಿತ್ಯವೆಂಬುದು ಈ ಗುಂಪಿನ ಕರಪತ್ರವಾಗಿ ಬಿಡುವ ಅಪಾಯವಿದೆ. ಈ ಗುಂಪು ಪ್ರಬಲವಾಗಿ ಬಿಟ್ಟರೆ ಅಥವಾ ಈ ಗುಂಪಿನ ಬೆದರಿಕೆಗೆ ಸಾಮಾಜಿಕ ಮನ್ನಣೆ ದೊರಕಿಬಿಟ್ಟರೆ ಅದರಿಂದಾಗಿ ಕಳೆದು ಹೋಗುವುದು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವೂ ಕೂಡ. ಆ ಬಳಿಕ ಕುಂವೀ ಏನನ್ನು ಬರೆಯಬೇಕೆಂದು ಈ ಗುಂಪು ನಿರ್ಧರಿಸುತ್ತದೆ. ಸೆಹಗಲ್‍ರು ಪ್ರಶಸ್ತಿ ವಾಪಸು ಮಾಡಬೇಕೋ ಬೇಡವೋ ಎಂಬುದು ಈ ಗುಂಪಿನ ಅಭಿಪ್ರಾಯದ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಚಂಪಾ ಅವರು ಏನು ಮಾತಾಡಬೇಕೆಂಬುದನ್ನು ಅದು ನಿರ್ಧರಿಸುತ್ತದೆ. ಸರ್ವಾಧಿಕಾರಿಗಳ ಆಡಳಿತದಲ್ಲಿ ಉದ್ದಕ್ಕೂ ನಡೆದಿರುವುದು ಇದುವೇ. ತನ್ನ ವಿರೋಧಿಗಳ ಲಕ್ಷಾಂತರ ಪುಸ್ತಕಗಳನ್ನು ಸುಡುವ ಮೂಲಕವೇ ಹಿಟ್ಲರ್ ತನ್ನ ಆಡಳಿತಕ್ಕೆ ಚಾಲನೆ ಕೊಟ್ಟಿದ್ದ. ತನ್ನ ನಿರ್ದೇಶನವನ್ನು ಒಪ್ಪದ ಸಾಹಿತಿಗಳನ್ನು ಆತ ಒಂದೋ ಬಲವಂತದಿಂದ ಒಪ್ಪಿಸುತ್ತಿದ್ದ ಅಥವಾ ಕಲ್ಬುರ್ಗಿಯವರಂತೆ ನಡೆಸಿಕೊಳ್ಳುತ್ತಿದ್ದ. ಅಂದಹಾಗೆ,
      ಕಲ್ಬುರ್ಗಿ ಮತ್ತು ಅಖ್ಲಾಕ್‍ರ ಮಧ್ಯೆ ಖಂಡಿತ ವ್ಯತ್ಯಾಸಗಳಿವೆ. ಮಾತ್ರವಲ್ಲ, ಆ ವ್ಯತ್ಯಾಸಕ್ಕೆ ತಕ್ಕಂತೆಯೇ ಅವರನ್ನು ಹತ್ಯೆ ಗೈಯಲಾಗಿದೆ. ಆತಂಕ ಏನೆಂದರೆ, ಈ ಎರಡೂ ಹತ್ಯೆಗಳನ್ನು ಸಮರ್ಥಿಸುತ್ತಿರುವುದು ಒಂದೇ ಗುಂಪು. ಕಲ್ಬುರ್ಗಿಯವರ ಹತ್ಯೆಯನ್ನು ಸಮರ್ಥಿಸುವುದಕ್ಕೆ ಅವರ ನಿಲುವುಗಳನ್ನು  ಈ ಗುಂಪು ಕಾರಣವಾಗಿ ನೀಡುವಾಗ ಅಖ್ಲಾಕ್‍ನ ಹತ್ಯೆಗೆ ದನವನ್ನು ಕಾರಣವಾಗಿ ನೀಡುತ್ತಿದೆ. ಅಲ್ಲದೇ ಇಂಥ ಕೃತ್ಯಗಳಿಗೆ ‘ಹತ್ಯೆಯೇ ಸರಿ’ ಎಂಬ ಪರೋಕ್ಷ ಸೂಚನೆಯನ್ನು ಈ ಗುಂಪು ರವಾನಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಕ್ರೌರ್ಯವೊಂದಕ್ಕೆ ಸಾಮಾಜಿಕ ಮನ್ನಣೆಯನ್ನು ದೊರಕಿಸಿಕೊಳ್ಳುವ ಯತ್ನವನ್ನೂ ಮಾಡುತ್ತಿದೆ. ನಿಜವಾಗಿ, ಅತ್ಯಂತ ಅಪಾಯಕಾರಿ ಸನ್ನಿವೇಶ ಇದು. ಅಖ್ಲಾಕ್‍ರು ಕಾನೂನುಬಾಹಿರ ಆಹಾರವನ್ನು ಸೇವಿಸಿದ್ದರೆ ಅಥವಾ ಸಂಗ್ರಹಿಸಿದ್ದರೆ ಅದನ್ನು ಪ್ರಶ್ನಿಸಬೇಕಾದದ್ದು ಈ ನೆಲದ ನ್ಯಾಯಾಂಗ ವ್ಯವಸ್ಥೆ. ಕಲ್ಬುರ್ಗಿಯವರಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ಆದರೆ, ಅಖ್ಲಾಕ್‍ನ ಮಾಂಸ ಮತ್ತು ಕಲ್ಬುರ್ಗಿಯವರ ವೈಚಾರಿಕತೆಯನ್ನು ಈ ಗುಂಪು ಅಪರಾಧವಾಗಿ ತೋರಿಸುತ್ತಿದೆಯೇ ಹೊರತು ಅದನ್ನು ತೀರ್ಮಾನಿಸಬೇಕಾದವರು ಯಾರು ಎಂಬ ಮೂಲಭೂತ ಪ್ರಶ್ನೆಗೆ ಉತ್ತರಿಸುತ್ತಲೇ ಇಲ್ಲ. ಆದ್ದರಿಂದ ಈ ಗುಂಪಿನ ಸವಾಲನ್ನು ಸಾಹಿತ್ಯ ವಲಯ ಎದುರಿಸಲೇಬೇಕು. ಈ ಗುಂಪು ಪರ್ಯಾಯ ಸಂವಿಧಾನ ಆಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಾಹಿತಿಗಳ ಪ್ರತಿಭಟನೆಯು ಅತ್ಯಂತ ಯೋಗ್ಯ ಮತ್ತು ಸ್ವಾಗತಾರ್ಹ. ಈ ಪ್ರತಿಭಟನೆಗೆ ಗೆಲುವಾಗಲಿ.




Tuesday 13 October 2015

ಈ-ಮೇಲ್‍ನ ಜಾಡು ಹಿಡಿದು ವಿಶ್ಲೇಷಣೆ ನಡೆಸುವ ದೇಶದಲ್ಲಿ..

ಡಾ| ಅಥವಳೆ
       ಎಂ.ಎಂ. ಕಲಬುರ್ಗಿಯವರ ಹತ್ಯೆಯೊಂದಿಗೆ ‘ಸನಾತನ ಸಂಸ್ಥಾ' ಎಂಬ ಸಂಘಟನೆಯ ಸುತ್ತ ಚರ್ಚೆಯೊಂದು ಆರಂಭಗೊಂಡಿದೆ. ವಿಚಾರವಾದಿಗಳಾದ ಕಲಬುರ್ಗಿ ಮತ್ತು ಪನ್ಸಾರೆಯವರ ಹತ್ಯೆಯಲ್ಲಿ ಸಾಕಷ್ಟು ಸಾಮ್ಯತೆಗಳಿದ್ದುವು. ಮೋಟರ್ ಸೈಕಲ್‍ನಲ್ಲಿ ಬಂದ ಮುಸುಕುಧಾರಿಗಳು ಅವರಿಬ್ಬರನ್ನೂ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೀಗ ಪನ್ಸಾರೆಯವರ ಹತ್ಯೆಯ ಆರೋಪದಲ್ಲಿ ಸನಾತನ ಸಂಸ್ಥಾದ ಪೂರ್ಣಕಾಲಿಕ ಕಾರ್ಯಕರ್ತ ಸವಿೂರ್ ಗಾಯಕ್ವಾಡ್ ಸಹಿತ ಕೆಲವರನ್ನು ಬಂಧಿಸಲಾಗಿದೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ‘ಸವಿೂರ್ ಗಾಯಕ್ವಾಡ್‍ನನ್ನು ಕಳೆದ ವಾರ ಥಾಣೆಯ ಕೋರ್ಟಿಗೆ ಹಾಜರುಪಡಿಸಿದಾಗ 31 ವಕೀಲರು ಆತನ ಪರ ವಾದಿಸಲು ಕೋರ್ಟಿನಲ್ಲಿ ಸೇರಿದ್ದರು. ಆತನಲ್ಲಿ 31 ಸಿಮ್ ಕಾರ್ಡ್‍ಗಳು ಲಭಿಸಿವೆ. ದಂಪತಿಗಳಾದ ಡಾ| ಜಯಂತ್ ಮತ್ತು ಕುಂದಾ ಅಥವಳೆಯವರು ಸ್ಥಾಪಿಸಿದ ಈ ಸಂಘಟನೆಯ ಗುರಿ ಹಿಂದೂ ರಾಷ್ಟ್ರದ ಸ್ಥಾಪನೆ. 2016ರಿಂದ 2018ರ ನಡುವೆ ಮೂರನೇ ವಿಶ್ವಯುದ್ಧ ನಡೆಯುತ್ತದೆ ಮತ್ತು ‘ಸಮಾಜ ವಿರೋಧಿಗಳ’ ಅಂತ್ಯಕ್ಕೆ ಇದು ಮುಹೂರ್ತವಾಗುತ್ತದೆ ಎಂದೆಲ್ಲಾ ಅದು ತನ್ನ ಮುಖವಾಣಿ ಸನಾತನ ಪ್ರಭಾತ್‍ನಲ್ಲಿ ಹೇಳಿಕೊಂಡದ್ದಿದೆ. 2019ರಿಂದ 2022ರ ವರೆಗೆ ದೇವರ ಆಡಳಿತ ಪ್ರಾರಂಭವಾಗಲಿದ್ದು, 2023ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದೂ ಅದು ನಿರೀಕ್ಷೆ ಇಟ್ಟುಕೊಂಡಿದೆ. ಅದರ ವೈರಿಗಳ ಪಟ್ಟಿ ಬಹಳ ದೊಡ್ಡದು. ಅದರಲ್ಲಿ ವಿಚಾರವಾದಿಗಳಿದ್ದಾರೆ, ರಾಜಕೀಯ ಪಕ್ಷಗಳಿವೆ. ಮುಸ್ಲಿಮರು, ಕ್ರೈಸ್ತರಿದ್ದಾರೆ. ಥಾಣೆ ಮತ್ತು ಮಾರ್ಗೋವಾದಲ್ಲಿ ಬಾಂಬ್ ಸ್ಫೋಟಿಸಿದ ಆರೋಪಗಳೂ ಈ ಸಂಘಟನೆಯ ಮೇಲಿದೆ’ (ದಿ ಹಿಂದೂ ಸೆ. 27). ಬಹುಶಃ, ಒಂದು ಸಂಘಟನೆಯ ಬಗ್ಗೆ ನಮ್ಮ ಸರಕಾರ ಮತ್ತು ಅಧಿಕಾರಿಗಳು ಕುತೂಹಲಗೊಳ್ಳುವುದಕ್ಕೆ ಈ ಸಂಘಟನೆ 1995ರಿಂದ ಸಾಗಿ ಬಂದ ಹಾದಿ ಹಾಗೂ ನಿಗೂಢ ಚಟುವಟಿಕೆಗಳು ಧಾರಾಳ ಸಾಕು. ಅದಕ್ಕೆ ಚುನಾವಣಾ ರಾಜಕೀಯದಲ್ಲಿ ವಿಶ್ವಾಸವಿಲ್ಲ. ಚುನಾವಣೆಯಲ್ಲಿ ಭಾಗವಹಿಸದೆಯೇ ಯುದ್ಧದ ಮೂಲಕ ಸಾಮ್ರಾಜ್ಯ ಕಟ್ಟಿದ ಶಿವಾಜಿಯಂತೆ ತನ್ನ ಕನಸಿನ ರಾಷ್ಟ್ರ ಸ್ಥಾಪನೆಯ ಉದ್ದೇಶ ಅದರದ್ದು. ನಿಜವಾಗಿ, ಬಾಂಬ್ ತಯಾರಿ, ಸ್ಫೋಟ, ಹತ್ಯೆ.. ಮುಂತಾದುವುಗಳೆಲ್ಲ ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರ ಅಸ್ತ್ರ. ಜನರ ವಿಶ್ವಾಸವನ್ನು ಗಳಿಸಿಕೊಂಡು ಪ್ರಜಾತಂತ್ರದ ಮೂಲಕ ತಮ್ಮ ಗುರಿಯೆಡೆಗೆ ಸಾಗುವುದನ್ನು ಒಪ್ಪಿಕೊಳ್ಳದವರೇ ಬಾಂಬ್ ಎತ್ತಿಕೊಳ್ಳುತ್ತಾರೆ. ಬಂದೂಕು ಬಳಸುತ್ತಾರೆ. ಅಂದಹಾಗೆ, ಈ ದೇಶದಲ್ಲಿ ಹತ್ತಾರು ಸ್ಫೋಟಗಳು ನಡೆದಿವೆ. ಹತ್ಯಾಕಾಂಡ, ವಿಧ್ವಂಸಕಾರಿ ಕೃತ್ಯಗಳು ಘಟಿಸಿವೆ. ಈ ಎಲ್ಲ ಸಂದರ್ಭಗಳಲ್ಲಿ ಈ ದೇಶದ ಮಾಧ್ಯಮಗಳು ಮತ್ತು ರಾಜಕಾರಣಿಗಳು ಮಾತಾಡಿದ್ದಾರೆ. ಅವರ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತೆಂದರೆ, ಅನಾಮಿಕ ಮೂಲದಿಂದ ಬರುವ ಈಮೇಲ್‍ಗೂ ಅಪಾರ ಮಹತ್ವ ಲಭ್ಯವಾಗುತ್ತಿತ್ತು. ಆ ಈಮೇಲ್ ಅನ್ನು ಎತ್ತಿಕೊಂಡು ಅದನ್ನು ಕಳುಹಿಸಿರಬಹುದಾದ ವ್ಯಕ್ತಿ, ಸಂಘಟನೆ, ಕಂಪ್ಯೂಟರ್ ಮತ್ತಿತರ ಸರ್ವವನ್ನೂ ವಿಶ್ಲೇಷಿಸಲಾಗುತ್ತಿತ್ತು. ಆ ಈಮೇಲ್ ಅನ್ನು ಕಳುಹಿಸಿದವರ ಉದ್ದೇಶ, ಅದಕ್ಕೆ ಪ್ರಚೋದನೆ ನೀಡಿರುವ ಸಾಹಿತ್ಯ, ಅವರು ಪಡೆದಿರುವ ತರಬೇತಿ, ಅವರ ಸಂಖ್ಯೆ, ಹಣಕಾಸು ವಹಿವಾಟು.. ಸಹಿತ ಎಲ್ಲವನ್ನೂ ಮೂಲಗಳನ್ನು ಉದ್ಧರಿಸಿ ಈ ದೇಶದಲ್ಲಿ ಚರ್ಚಿಸಲಾಗುತ್ತಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಂತೂ ಭಯೋತ್ಪಾದನೆಯ ಬಗ್ಗೆ ಲೆಕ್ಕವಿಲ್ಲದಷ್ಟು ಬಾರಿ ಮಾತಾಡಿದೆ. ಭಯೋತ್ಪಾದನೆಯನ್ನು ನಿರ್ದಿಷ್ಟ ಧರ್ಮಕ್ಕೆ ಹೋಲಿಸಿ ಹೇಳಿಕೆ ಕೊಟ್ಟಿದೆ. ಜಾನುವಾರು ಮಾಂಸದ ಸೇವನೆಯು ಭಯೋತ್ಪಾದನೆಗೆ ಇಂಬು ನೀಡುತ್ತದೆ ಎಂಬ ರೀತಿಯಲ್ಲಿ ಅದರ ನಾಯಕರು ಮತ್ತು ಬೆಂಬಲಿಗರು ಮಾತಾಡಿದ್ದಾರೆ. ಆದರೆ ಸನಾತನ ಸಂಸ್ಥಾದ ಕುರಿತಂತೆ ಈ ಮಂದಿ ಈ ವರೆಗೆ ನೇರವಾಗಿ ಏನನ್ನೂ ಹೇಳಿಲ್ಲ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಬಲವಾದ ಅನುಮಾನಗಳಿದ್ದಾಗ್ಯೂ ಅದರ ನಿಷೇಧದ ಬಗ್ಗೆ ಮಾತಾಡುತ್ತಿಲ್ಲ. ಕೇಂದ್ರ ಸರಕಾರ ಈಗಾಗಲೇ ಸರಕಾರೇತರ ಸಂಸ್ಥೆಗಳಾದ ಗ್ರೀನ್‍ಪೀಸ್ ಮತ್ತು ತೀಸ್ತಾ ಸೆಟಲ್ವಾಡ್‍ರ ಸಂಸ್ಥೆಯ ಮೇಲೆ ಬಹುತೇಕ ನಿಷೇಧವನ್ನು ಹೇರಿದೆ. ಅವುಗಳ ಚಟುವಟಿಕೆಗಳನ್ನು ಪ್ರತಿಬಂಧಿಸಲಾಗಿದೆ. ಬಾಂಬ್ ಭಯೋತ್ಪಾದನೆಯಲ್ಲಿ ಭಾಗವಹಿಸದ ಈ ಸಂಸ್ಥೆಗಳ ಮೇಲೆ ಸರಕಾರಕ್ಕೆ ಈ ಮಟ್ಟದ ಭಯ ಇದೆಯೆಂದಾದರೆ, ಸನಾತನ ಸಂಸ್ಥಾದ ಕುರಿತಂತೆ ಯಾಕೆ ಯಾವ ಭಯವೂ ಆಗುತ್ತಿಲ್ಲ? ಅದರ ಉದ್ದೇಶದ ಬಗ್ಗೆ ಸರಕಾರದ ನಿಲುವೇನು?
   ಸಾಮಾನ್ಯವಾಗಿ ಭಯೋತ್ಪಾದನೆ ಅಥವಾ ದೇಶ ವಿರೋಧಿ ಚಟುವಟಿಕೆಗಳು ಎಂದ ಕೂಡಲೇ ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬ, ಐಸಿಸ್ ಮುಂತಾದ ಹೆಸರುಗಳೇ ಪ್ರತ್ಯಕ್ಷಗೊಳ್ಳುವಂತಹ ವಾತಾವರಣವೊಂದು ಈ ದೇಶದಲ್ಲಿದೆ. ಸಂವಿಧಾನ ವಿರೋಧಿಯಾಗಿ ಆಲೋಚಿಸುವುದಕ್ಕೆ ಇಂಥ ನಿರ್ದಿಷ್ಟ ತಂಡಗಳಿಗಷ್ಟೇ ಸಾಧ್ಯ ಎಂಬ ಭಾವನೆಯನ್ನು ಇಲ್ಲಿ ವ್ಯವಸ್ಥಿತವಾಗಿ ನೆಟ್ಟು ಬೆಳೆಸಲಾಗಿದೆ. ಅದರಲ್ಲಿ ರಾಜಕಾರಣಿಗಳ ಪಾತ್ರವಿದೆ. ಅಧಿಕಾರಿಗಳು ಮತ್ತು ಸಂಘಟನೆಗಳ ಪಾತ್ರವೂ ಇವೆ. ಈ ದೇಶದ ಎಲ್ಲಾದರೂ ಬಾಂಬ್ ಸ್ಫೋಟಗೊಂಡ ತಕ್ಷ

ಣ ಯಾವುದಾದರೂ ಪತ್ರಿಕಾ ಕಚೇರಿಗೆ ಈಮೇಲ್‍ಗಳು ಬರುತ್ತವೆ. ದೂರವಾಣಿ ಕರೆಗಳೂ ಬರುವುದಿದೆ. ಹಾಗೆ ಬಂದ ಕರೆಗಳೋ ಈಮೇಲ್‍ಗಳೋ ಅಥವಾ ಇನ್ನಿತರ ಯಾವುದಾದರೂ ಕುರುಹುಗಳ ಹೆಸರಲ್ಲೋ ನಿರ್ದಿಷ್ಟ ಮಂದಿಯನ್ನು ಹುಡುಕುವ ಪ್ರಯತ್ನಗಳು ನಡೆಯುತ್ತವೆ. ರಾಜಕಾರಣಿಗಳಿಂದ ಹೇಳಿಕೆಗಳ ಮಹಾಪೂರ ಹರಿಯತೊಡಗುತ್ತವೆ. ಆದರೆ, ಕಳೆದ 20 ವರ್ಷಗಳಿಂದ ಈ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯೊಂದರ ಕುರಿತು ಮಾಧ್ಯಮಗಳು ಮಾತಾಡಿದ್ದು ಶೂನ್ಯ ಎಂಬಷ್ಟು ಕಡಿಮೆ. ಈ ಸಂಘಟನೆಯ ಬಗ್ಗೆ ತನಿಖಾ ಬರಹಗಳು ಈ ವರೆಗೂ ಸರಿಯಾದ ರೀತಿಯಲ್ಲಿ ಪ್ರಕಟವಾಗಿಲ್ಲ. ನಮ್ಮ ರಾಜಕಾರಣಿಗಳಂತೂ ಸನಾತನ ಸಂಸ್ಥಾ ಎಂಬ ಸಂಘಟನೆ ಅಸ್ತಿತ್ವದಲ್ಲಿ ಇದೆಯೆಂದೇ ಒಪ್ಪಿಕೊಳ್ಳದಷ್ಟು ಈ ವಿಷಯದಲ್ಲಿ ಮೌನ ಪಾಲಿಸಿದ್ದಾರೆ. ಯಾಕೆ ಹೀಗೆ? ಸಂವಿಧಾನ ವಿರೋಧಿ ಚಿಂತನೆ ಯಾರಿಂದಲೇ ಬರಲಿ, ಆ ಬಗ್ಗೆ ಪ್ರತಿಕ್ರಿಯಿಸಬೇಕಾದದ್ದು ಮತ್ತು ಅದನ್ನು ಬಲವಾಗಿ ಖಂಡಿಸಬೇಕಾದದ್ದು ಎಲ್ಲರ ಕರ್ತವ್ಯ. ಸನಾತನ ಸಂಸ್ಥಾದ ಆಲೋಚನೆಯೇ ಸಂವಿಧಾನ ವಿರೋಧಿ. ಅದು ಈ ದೇಶದ ಸಂವಿಧಾನವನ್ನು ರದ್ದುಗೊಳಿಸಬಯಸುತ್ತದೆ. ಪ್ರಜಾತಂತ್ರದ ಬದಲು ಚುನಾವಣೆಗಳೇ ಇಲ್ಲದ ಸರ್ವಾಧಿಕಾರ ಆಡಳಿತವನ್ನು ಪ್ರತಿಪಾದಿಸುತ್ತದೆ. ತನ್ನ ನಿಲುವನ್ನು ಪ್ರಶ್ನಿಸುವವರನ್ನು ಅದು ಸಮಾಜ ವಿರೋಧಿಗಳೆಂದು ವರ್ಗೀಕರಿಸುತ್ತದೆ. ಒಂದು ಬಗೆಯ ಭ್ರಮೆಯ ಸುತ್ತ ಅದರ ಕಾರ್ಯಚಟುವಟಿಕೆ ಕೇಂದ್ರೀಕೃತವಾಗಿರುವಂತೆ ಗೋಚರಿಸುತ್ತಿದೆ. ಹೀಗಿರುವಾಗ, 2023ರ ಗುರಿಯನ್ನು ಯಶಸ್ವಿಯಾಗಿ ತಲುಪುವುದಕ್ಕಾಗಿ ಅದು ಯೋಜನೆಗಳನ್ನು ಹಾಕಿಕೊಂಡಿರುವುದಂತೂ ಖಂಡಿತ. ಆ ಯೋಜನೆಗಳು ಯಾವುವು, ಅದರ ಜಾರಿಯ ಹಂತಗಳು ಹೇಗೆ, ಅದು ತನ್ನ ಗುರಿಯ ಈಡೇರಿಕೆಗಾಗಿ ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಯುದ್ಧ ಸಾರುತ್ತದೆ.. ಇವೆಲ್ಲ ಬಹಿರಂಗವಾಗಬೇಕಿದೆ. ಕಲಬುಗಿರ್ಯವರ ಹತ್ಯೆಯು ಆ 2023ರ ನೀಲನಕ್ಷೆಯ ಭಾಗವೇ ಎಂಬುದೂ ಸ್ಪಷ್ಟವಾಗಬೇಕಿದೆ.

Saturday 26 September 2015

ಪ್ರಧಾನಿಯವರೇ, ಆಂಡರ್ಸನ್‍ಗಾಗಿ ಮಾತೆತ್ತಿದ ನೀವು ರಾಯಭಾರಿಯನ್ನು ಕಳುಹಿಸಿಕೊಟ್ಟದ್ದೇಕೆ?

     ಕೇಂದ್ರ ಸರಕಾರದ ಕಾರ್ಯಶುದ್ಧಿಯ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿ ಸೌದಿ ರಾಜತಾಂತ್ರಿಕ ಅಧಿಕಾರಿಯೋರ್ವರು ಭಾರತ ಬಿಟ್ಟು ಹೊರಟು ಹೋಗಿದ್ದಾರೆ. ಗುರ್ಗಾಂವ್‍ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯವೆಸಗಿದ ಆರೋಪವು ಮಜೀದ್ ಹಸನ್ ಅಶೂರ್ ಎಂಬ ಈ ಅಧಿಕಾರಿಯ ಮೇಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಈ ಆರೋಪಗಳು ಸಾಬೀತುಗೊಂಡಿರುವ ವರದಿಯೂ ಬಂದಿದೆ. ಇಷ್ಟಿದ್ದೂ, ಯಾವೊಂದು ತನಿಖೆಗೂ ಒಳಪಡಿಸದೇ ಈ ಅಧಿಕಾರಿಯನ್ನು ದೇಶಬಿಟ್ಟು ತೆರಳಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟದ್ದು ಹೇಗೆ ಮತ್ತು ಯಾಕೆ? ಭಾರತ ಮತ್ತು ಸೌದಿ ಸರಕಾರಗಳ ನಡುವೆ ಈ ಕುರಿತಂತೆ ಮಾತುಕತೆಗಳು ನಡೆದಿವೆಯೇ? ಅದರ ವಿವರಗಳು ಏನೆಲ್ಲ? ಗೃಹಸಚಿವಾಲಯ ಯಾಕೆ ಯಾವ ಮಾಹಿತಿಯನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುತ್ತಿಲ್ಲ? ಆರ್ಥಿಕ ಲೆಕ್ಕಾಚಾರಗಳು ಇದರ ಹಿಂದೆ ಕೆಲಸ ಮಾಡಿವೆಯೇ? ಜಿನೇವಾ ಒಡಂಬಡಿಕೆಯ ಕಟ್ಟಳೆಗಳೇನೇ ಇರಲಿ, ಮಹಿಳೆಯರ ಬಗ್ಗೆ ಅಪಾರ ಕಕ್ಕುಲಾತಿಯನ್ನು ತೋರ್ಪಡಿಸುವ ಸರಕಾರವೊಂದು ಈ ಮಟ್ಟದಲ್ಲಿ ತಗ್ಗಿ-ಬಗ್ಗಿ ನಡೆದದ್ದೇಕೆ? ಕೇರಳದ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ಈ ಹಿಂದೆ ಬಿಜೆಪಿ ತೀವ್ರ ತರಾಟೆಗೆ ಎತ್ತಿಕೊಂಡಿತ್ತು. ಆ ನಾವಿಕರನ್ನು ಇಟಲಿಗೆ ಬಿಟ್ಟು ಕೊಡಬಾರದೆಂದು ಪ್ರಬಲವಾಗಿ ವಾದಿಸಿತ್ತು. ಮನಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಮೃದು ನೀತಿಯನ್ನು ಹೊಂದಿದೆ ಎಂದು ಬಾರಿಬಾರಿಗೂ ಟೀಕಿಸಿತ್ತು. ಭೋಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್‍ನನ್ನು ಯಾವ ತನಿಖೆಗೂ ಒಳಪಡಿಸದೇ ಅಮೇರಿಕಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಅದು ಈಗಲೂ ಟೀಕಿಸುತ್ತಿದೆ. ಪಾಕಿಸ್ತಾನವು ಭಾರತೀಯ ಸೈನಿಕರ ಒಂದು ತಲೆಯನ್ನು ಉರುಳಿಸಿದರೆ ಪಾಕ್‍ನ ಹತ್ತು ತಲೆಯನ್ನು ಉರುಳಿಸುವೆವು ಎಂದು ಸಾರಿದ ಮತ್ತು ಸಾರುತ್ತಿರುವ ಪಕ್ಷ ಬಿಜೆಪಿ. ಇಂಥ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‍ನಂತೆಯೇ ಆಡುತ್ತಿರುವುದೇಕೆ? ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ 3 ವರ್ಷಗಳ ಹಿಂದೆ ದೊಡ್ಡದೊಂದು ಚಳವಳಿ ನಡೆದಿದೆ. ಆ ಚಳವಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಅತ್ಯಾಚಾರದ ವಿರುದ್ಧ ಪ್ರಬಲ ಕಾನೂನನ್ನೇ ರಚಿಸುವಷ್ಟು. ಆ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಳ ಸರಣಿ ಘೋಷಣೆಗಳು ನ್ಯಾಯಾಲಯಗಳಿಂದ ಪ್ರಕಟವಾದುವು. ಬಿಜೆಪಿಯನ್ನು ಬೆಂಬಲಿಸುವ ಸಂಘಪರಿವಾರವಂತೂ ಅತ್ಯಾಚಾರ ಬಿಡಿ, ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನೇ ಅಪರಾಧ ಎಂದು ಹೇಳುವಷ್ಟು ನಿಷ್ಠುರತೆಯನ್ನು ಪ್ರದರ್ಶಿಸುತ್ತಿದೆ. ಹೆಣ್ಣನ್ನು ರಕ್ಷಿಸುವ ಹೆಸರಲ್ಲಿ ಥಳಿತ, ಹಲ್ಲೆ, ಹತ್ಯೆಗಳಂತಹ ಕೃತ್ಯಕ್ಕೂ ಕೈ ಹಾಕುತ್ತಿದೆ. ಹೀಗಿರುವಾಗ, ಕೇಂದ್ರ ಸರಕಾರದ ಈ ನಡೆಗೆ ಏನೆನ್ನಬೇಕು? ಹಾಗಾದರೆ ಹೆಣ್ಣಿನ ಬಗ್ಗೆ ಬಿಜೆಪಿ ಮತ್ತು ಅದರ ಪರಿವಾರಗಳು ವ್ಯಕ್ತಪಡಿಸುತ್ತಿರುವ ಗೌರವಾದರದ ಮಾತುಗಳು ನಕಲಿಯೇ? ಕನಿಷ್ಠ ಅಮೇರಿಕದಲ್ಲಿ ಭಾರತದ ರಾಜತಾಂತ್ರಿಕೆಯಾಗಿದ್ದ ದೇವಯಾನಿ ಖೋಬ್ರಗದೆಯವರ ಬಗ್ಗೆ ಅಮೇರಿಕ ವರ್ಷಗಳ ಹಿಂದೆ ನಡೆದುಕೊಂಡಷ್ಟಾದರೂ ನಿಷ್ಠುರತೆಯನ್ನು ಭಾರತಕ್ಕೆ ತೋರಬಹುದಿಲ್ಲವೇ? ರಾಯಭಾರ ಕಚೇರಿಯ ಅಧಿಕಾರಿಯಾಗಿದ್ದರೂ ಖೋಬ್ರಗದೆಯವರನ್ನು ಅಮೇರಿಕ ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಜಿನೇವಾ ಒಡಂಬಡಿಕೆಯಲ್ಲಿ ಅಷ್ಟರ ಮಟ್ಟಿಗೆ ಅವಕಾಶ ಇದೆಯೆಂದಾದರೆ ಮೋದಿಯವರು ಅದನ್ನೇಕೆ ಬಳಸಿಕೊಳ್ಳಲಿಲ್ಲ? ಹಾಗಂತ, ಇದನ್ನು ಕೇಂದ್ರದ ರಾಜತಾಂತ್ರಿಕ ವೈಫಲ್ಯ ಎಂಬ ಷರಾದೊಂದಿಗೆ ಮುಚ್ಚಿಹಾಕಬಹುದು. ದಿ ಹಿಂದೂ ಸಹಿತ ಹೆಚ್ಚಿನೆಲ್ಲಾ ಪತ್ರಿಕೆಗಳು ತಮ್ಮ ಸಂಪಾದಕೀಯಕ್ಕೆ ಕೊಟ್ಟ ಶೀರ್ಷಿಕೆಯೂ ಇದುವೇ. ಆದರೆ ವಾರನ್ ಆಂಡರ್ಸನ್‍, ಇಟಲಿಯ ನಾವಿಕರು ಅಥವಾ ಖೋಬ್ರಗದೆಯ ವಿಷಯದಲ್ಲಿ ಧಾರಾಳ ಮಾತಾಡಿದ್ದ ಬಿಜೆಪಿಯು ಸೌದಿ ಅಧಿಕಾರಿಯ ಕುರಿತಂತೆ ಒಂದು ವಾಕ್ಯದ ಸ್ಪಷ್ಟೀಕರಣವನ್ನೂ ಕೊಡದಷ್ಟು ಮೌನಿಯಾಗಿರುವುದೇಕೆ? ಈ ಮೌನದ ಹಿಂದಿರುವುದು ಅಸಹಾಯಕೆಯೋ ಅನಿವಾರ್ಯತೆಯೋ?
  ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್‍ರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದ ಬಿಜೆಪಿಯು ಆಗ ಸ್ವಯಂ ತನಗೆ ತಾನೇ ಪೌರುಷದ ಇಮೇಜನ್ನು ಕೊಟ್ಟುಕೊಂಡಿತ್ತು. ಭಾರತದ ಒಂದು ತಲೆಗೆ ಪಾಕಿಸ್ತಾನದ ಹತ್ತು ತಲೆಗಳ ಸ್ಲೋಗನ್ ಉದುರಿದ್ದೂ ಆವಾಗಲೇ. ಮನಮೋಹನ್ ಸಿಂಗ್‍ರ ಮೃದುತನದ ಎದುರು ಮೋದಿಯವರು ಖಡಕ್ ವ್ಯಕ್ತಿಯಾಗಿ ಕಂಗೊಳಿಸಿದ್ದರು. ಅವರು ಸಕಲ ಸಮಸ್ಯೆಗಳಿಗೂ ಪರಿಹಾರವಾಗಿ ಕಂಡರು. ಅವರ ಮಾತುಗಾರಿಕೆ, ಬಾಡಿ ಲಾಂಗ್ವೇಜ್, ಪ್ರಾಸಬದ್ಧ ಪದಗಳು ಮತ್ತು ಮಾತಿನ ಅಬ್ಬರಗಳೆಲ್ಲ ನಿಷ್ಠುರತೆಯ ಸಂಕೇತಗಳಾಗಿ ಕಂಡವು. ಮುಸ್ಲಿಮ್ ಧರ್ಮಗುರುಗಳು ನೀಡಿದ ಟೋಪಿಯನ್ನು ನಿರಾಕರಿಸಿದ್ದು, ‘ಹಮ್ ಪಾಂಚ್, ಹಮಾರೆ ಪಚ್ಚೀಸ್’ ಎಂದು ಹೇಳಿದ್ದು, ತಾನು ‘ಸ್ವಯಂ ಸೇವಕ' ಎಂದು ಬಹಿರಂಗವಾಗಿಯೇ ಘೋಷಿಸಿದ್ದು.. ಎಲ್ಲವೂ ಅವರ ಸುತ್ತ ನಿಷ್ಠುರತೆಯ ಪ್ರಭಾವಳಿಯೊಂದನ್ನು ಸೃಷ್ಟಿಸಿತ್ತು. ‘ಮೋದಿಯವರು ಪ್ರಧಾನಿಯಾದರೆ ಪಾಕ್‍ಗೆ ಅಣುಬಾಂಬ್ ಹಾಕುತ್ತಾರೆ..' ಎಂದು ಅವರ ಅನುಯಾಯಿಗಳು ಹೇಳುವಷ್ಟು ಅವರ ಗಡಸು ಇಮೇಜು ಜನಪ್ರಿಯವಾಯಿತು. ಆದರೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯಾದ ಬಳಿಕ ಪೌರುಷದ ಪ್ರಭಾವಳಿ ನಿಧಾನಕ್ಕೆ ದೂರ ಸರಿಯುತ್ತಿದೆ. ಅವರು ಇನ್ನೋರ್ವ ಮನಮೋಹನ್ ಸಿಂಗ್ ಆಗುತ್ತಿದ್ದಾರೆಯೇ ಹೊರತು ನಿಷ್ಠುರ ನರೇಂದ್ರ ಮೋದಿಯಲ್ಲ ಎಂಬುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಅವರು ಪ್ರಧಾನಿಯಾದ ಒಂದು ವರ್ಷದಲ್ಲಿ ಪಾಕ್‍ನಿಂದ ಗಡಿ ಉಲ್ಲಂಘನೆಯ ಪ್ರಕರಣಗಳು ಈ ಹಿಂದೆಂದೂ ಆಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಭಾರತೀಯ ಸೈನಿಕರು ಆಗಾಗ ಸಾವನ್ನಪ್ಪುತ್ತಲೂ ಇದ್ದಾರೆ. ಮಾಧ್ಯಮಗಳು ಈ ಕುರಿತಂತೆ ಅಂಕಿ-ಅಂಶಗಳನ್ನೂ ಬಹಿರಂಗಪಡಿಸುತ್ತಲೂ ಇದೆ. ಆದರೆ ಮನಮೋಹನ್ ಸಿಂಗ್‍ರನ್ನು ಇದೇ ಗಡಿ ಪ್ರಶ್ನೆಯನ್ನು ಮುಂದಿಟ್ಟು ನಿಷ್ಕ್ರಿಯ ಸರಕಾರ ಎಂದು ಕರೆದಿದ್ದ ಬಿಜೆಪಿಯು ಇದೀಗ ಅದೇ ನಿಷ್ಕ್ರಿಯ ಪ್ರತಿಕ್ರಿಯೆಯನ್ನಷ್ಟೇ ತೋರುತ್ತಿದೆ. ಪೌರುಷದ ಮಾತುಗಳಾಚೆಗೆ ಪ್ರಾಯೋಗಿಕವಾಗಿ ಅದು ಏನನ್ನೂ ಮಾಡುತ್ತಿಲ್ಲ. ಸೌದಿ ರಾಜತಾಂತ್ರಿಕ ಪ್ರಕರಣವು ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
  ಹಾಗಂತ, ಸಾಮಾನ್ಯ ನಾಗರಿಕರನ್ನು ಹಿಡಿದು ಜೈಲಿಗಟ್ಟುವಂತೆ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ನಿಜ. ಜಿನೇವಾ ಒಡಂಬಡಿಕೆಯ ಪ್ರಕಾರವೇ ‘ರಾಜತಾಂತ್ರಿಕ' ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಆದರೆ ಕದ್ದು ಮುಚ್ಚಿ ವಿಮಾನದಲ್ಲಿ ಕಳುಹಿಸಿಕೊಡುವಷ್ಟು ಜಿನೇವಾ ಒಡಂಬಡಿಕೆ ಕ್ರೂರವೇ? ಹಾಗಿದ್ದರೆ ದೇವಯಾನಿ ಖೋಬ್ರಗದೆ ಪ್ರಕರಣದಲ್ಲಿ ಅಮೇರಿಕ ಅಷ್ಟು ನಿಷ್ಠುರವಾಗಿ ನಡೆದುಕೊಂಡದ್ದು ಹೇಗೆ? ಅವರನ್ನು ಅಮೇರಿಕದ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಗೂ ಒಳಪಡಿಸಿದ್ದರು. ಆದರೆ ಮೋದಿಯವರ ಸರಕಾರವು ಕನಿಷ್ಠ ತನಿಖೆಗೂ ಒಳಪಡಿಸದೇ ರಹಸ್ಯವಾಗಿ ಸೌದಿ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿದೆ. ಇದು ಯಾವುದರ ಸೂಚನೆ? ಮೋದಿಯವರು ಮಾತಿನಲ್ಲಿ ಮಾತ್ರ ನಿಷ್ಠುರವೇ, ಕೃತಿಯಲ್ಲಿ ಅವರೂ ಮನಮೋಹನ್ ಸಿಂಗೇ ಆಗಿರುವರೇ?

Tuesday 15 September 2015

ವರ್ತಮಾನದ ತಲ್ಲಣಗಳು ಮತ್ತು ಹಾಜಿ..

     ವರ್ತಮಾನದ ತಲ್ಲಣಗಳ ನಡುವಿನಿಂದ ಮಕ್ಕಾಕ್ಕೆ ಹೊರಟು ಹೋಗುವ ಹಾಜಿ ಅಲ್ಲಿ  ಮುಖಾಮುಖಿಗೊಳ್ಳುವುದು ಯಾರನ್ನು, ಯಾವುದನ್ನು ಮತ್ತು ಯಾತಕ್ಕಾಗಿ? ಸಫಾ-ಮರ್ವಾ, ಅರಫಾ, ಹಜರುಲ್ ಅಸ್ವದ್, ಜಮರಾತ್, ಮುಝ್ದಲಿಫಾ.. ಇತ್ಯಾದಿಗಳನ್ನು ಹಾಜಿ ಮಕ್ಕಾದಲ್ಲಿ ಮುಖಾಮುಖಿಯಾಗುತ್ತಾನೆ/ಳೆ. ಆತ ಅಲ್ಲಿ ಕಣ್ಣೀರಾಗಬಲ್ಲ, ಪ್ರಾರ್ಥಿಸಬಲ್ಲ, ತನ್ಮಯತೆಯಿಂದ ಜಗವನ್ನೇ ಮರೆಯಬಲ್ಲ. ಅಷ್ಟಕ್ಕೂ, ಈ ಬಗೆಯ ಭಾವತೀವ್ರತೆಯನ್ನು ಹಾಜಿಯೊಳಗೆ ಹುಟ್ಟುಹಾಕಲು ಈ ಸಂಕೇತಗಳಿಗೆ ಹೇಗೆ ಸಾಧ್ಯವಾಗುತ್ತದೆ? ಒಂದು ವೇಳೆ, ಈ ಸಂಕೇತಗಳಗೆ ಭೂತಕಾಲವೊಂದು ಇಲ್ಲ ಎಂದಿಟ್ಟುಕೊಳ್ಳಿ. ಹಾಗಾದರೆ, ಜಮರಾತ್ ಅನ್ನು, ಸಫಾ-ಮರ್ವಾವನ್ನು, ಮುಝ್ದಲಿಫಾವನ್ನು.. ಆತ/ಕೆ ಯಾವ ರೀತಿಯಲ್ಲಿ ಮುಖಾಮುಖಿಯಾಗಬಹುದು? ನಿಜವಾಗಿ, ಭೂತಕಾಲವೊಂದು ಇಲ್ಲದೇ ಇರುತ್ತಿದ್ದರೆ ಸಫಾ-ಮರ್ವಾಕ್ಕೆ ಈ ವರ್ತಮಾನ ಕಾಲದಲ್ಲಿ ಯಾವ ಮಹತ್ವವೂ ಲಭಿಸುತ್ತಿರಲಿಲ್ಲ. ಜಮಾರಾತ್‍ಗೂ ಮುಝ್ದಲಿಫಾಕ್ಕೂ ಅರಫಾ ಮೈದಾನಕ್ಕೂ ಒಂದು ಭೂತಕಾಲವಿದೆ. ಈ ಭೂತಕಾಲದಿಂದಾಗಿಯೇ ಈ ವರ್ತಮಾನದಲ್ಲೂ ಇವುಗಳು ಮತ್ತು ಇಬ್ರಾಹೀಮ್(ಅ), ಇಸ್ಮಾಈಲ್(ಅ), ಹಾಜಿರಾ.. ನಮ್ಮನ್ನು ಕಾಡುವುದು. ಗತ ಇತಿಹಾಸವನ್ನು ಪಕ್ಕಕ್ಕಿಟ್ಟು ನೋಡಿದರೆ ನಮ್ರೂದ್ ಎಂಬುದು ಈ ವರ್ತಮಾನದಲ್ಲಿ ಬರೇ ಒಂದು ಹೆಸರು ಮಾತ್ರ. ಆದರೆ ನಮ್ರೂದ್‍ಗೊಂದು ಇತಿಹಾಸವಿದೆ. ಆ ಇತಿಹಾಸವೇ ಇವತ್ತು ನಮ್ರೂದ್‍ನನ್ನು ಪ್ರಸ್ತುತಗೊಳಿಸುತ್ತದೆ. ಬಹುಶಃ, ಈ ಮೇಲೆ ಉಲ್ಲೇಖಿಸಲಾದ ಸಂಕೇತಗಳನ್ನು ಮುಖಾಮುಖಿಗೊಳ್ಳುವಾಗ ಹಾಜಿಯು ಭಾವುಕವಾಗುವುದಿದ್ದರೆ, ಅವುಗಳ ಗತ ಇತಿಹಾಸವನ್ನು ಸ್ಮರಿಸಿಯೇ ಹೊರತು ವರ್ತಮಾನದ ಬರೇ ಸ್ಥಳಗಳಾಗಿ ಅಲ್ಲ. ಇಂಥ ಬೆಟ್ಟಗಳು, ಮೈದಾನಗಳು ಜಗತ್ತಿನಲ್ಲಿ ನೂರಾರು ಇವೆ. ಇಬ್ರಾಹೀಮ್, ಇಸ್ಮಾಈಲ್, ಹಾಜಿರಾ.. ಮುಂತಾದ ಹೆಸರುಗಳು ಜಗತ್ತಿನಲ್ಲಿ ಕೋಟ್ಯಂತರ ಇರಬಹುದು. ಆದರೆ ಅವಾವುವೂ ಹಾಜಿಯನ್ನು ಭಾವುಕಗೊಳಿಸುವುದೋ ಉನ್ಮಾದಗೊಳಿಸುವುದೋ ಮಾಡುತ್ತಿಲ್ಲ. ನಿಜವಾಗಿ, ಹಾಜಿ ವರ್ತಮಾನದಲ್ಲಷ್ಟೇ ಬದುಕುತ್ತಿಲ್ಲ. ಆತನ ಎದುರು ಭೂತ(ಗತ)ಕಾಲವೊಂದಿದೆ. ಆ ಕಾಲದ ದಟ್ಟ ಪ್ರಭಾವವೇ ಈ ವರ್ತಮಾನದಲ್ಲೂ ಆತನನ್ನು ಹಾಜಿಯನ್ನಾಗಿಸುತ್ತದೆ. ಗತದ ಸ್ಮರಣೆಯು ಆತ/ಕೆಯನ್ನು ತಲ್ಲಣಗೊಳಿಸುತ್ತದೆ. ಜಮಾರಾತ್‍ನಲ್ಲಿ ಕಂಭಗಳಿಗೆ ಕಲ್ಲೆಸೆಯುವ ಹಾಜಿಯನ್ನು ಗತ ಇತಿಹಾಸ ಗೊತ್ತಿಲ್ಲದ ಪ್ರವಾಸಿಯೋರ್ವ ನೋಡಿದರೆ ಅಚ್ಚರಿ ಪಡಬಲ್ಲ. ಯಾಕೆಂದರೆ, ಬರೇ ವರ್ತಮಾನದಲ್ಲಷ್ಟೇ ಬದುಕುವ ವ್ಯಕ್ತಿಗೆ ಅದು ಬರೇ ಕಂಬ ಮಾತ್ರ. ಆದರೆ ಹಾಜಿ ಗತ ಕಾಲದಲ್ಲೂ ಬದುಕುತ್ತಾನೆ. ಆದ್ದರಿಂದಲೇ ಆತ ಎಸೆಯುವುದು ಕಲ್ಲುಗಳನ್ನಲ್ಲ, ಆತನ ಗುರಿಯಲ್ಲಿರುವುದು ಕಂಬಗಳೂ ಅಲ್ಲ. ಹೀಗೆ ಹಾಜಿಯು ವರ್ತಮಾನ ಮತ್ತು ಭೂತಕಾಲವನ್ನು ಸಮನ್ವಯಗೊಳಿಸಿದ ಒಂದು ಅಪೂರ್ವ ಮಾದರಿಯಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ, ಹಾಜಿ ಇಲ್ಲಿ ಉತ್ತರಿಸಬೇಕಾದ ಒಂದು ಪ್ರಶ್ನೆಯಿದೆ. ಈ ಸಮನ್ವಯತೆ ಕೇವಲ ಹಜ್ಜ್ ಗೆ ಮಾತ್ರ ಯಾಕೆ ಸೀಮಿತಗೊಳ್ಳಬೇಕು? ಬದುಕಿನ ಇತರ ಸಂದರ್ಭಗಳಲ್ಲೂ ಯಾಕೆ ಅದು ಕಾಣಿಸಿಕೊಳ್ಳಬಾರದು? ಅಂದಹಾಗೆ, ಹಾಜಿ ಬದುಕುವ ಈ ವರ್ತಮಾನ ಕಾಲದಲ್ಲಿ ನೂರಾರು ತಲ್ಲಣಗಳಿವೆ. ಬಡ್ಡಿಯಿದೆ, ವರದಕ್ಷಿಣೆಯಿದೆ, ವಂಚನೆಯಿದೆ, ಕೋಮುವಾದ, ಅನೈತಿಕತೆ, ಅಪನಂಬಿಕೆ, ಅನಾಚಾರ, ಅನೈಕ್ಯತೆ, ಶೋಷಣೆ.. ಇದೆ. ಹಸಿವು, ಕಣ್ಣೀರು ಇದೆ. ನಿಜವಾಗಿ, ಇವು ಮತ್ತು ಇನ್ನಿತರ ವರ್ತಮಾನದ ತಲ್ಲಣಗಳು ಹಾಜಿಯನ್ನು ತಟ್ಟಲೇ ಬೇಕು. ಸಫಾ-ಮರ್ವಾಗಳು ಅವುಗಳ ಗತ ಇತಿಹಾಸದಿಂದಾಗಿ ಹಾಜಿಯನ್ನು ಭಾವುಕಗೊಳಿಸುವುದಾದರೆ, ವರ್ತಮಾನದ ಈ ತಲ್ಲಣಗಳನ್ನು ಕೂಡ ಹಾಜಿಯು ಇತಿಹಾಸದ ಬೆಳಕಿನಲ್ಲಿ ಇಟ್ಟು ನೋಡಬೇಕು. ಹಾಗಾದಾಗ ಸಮಾಜದ ಬಡ್ಡಿಯಾಧಾರಿತ ಬದುಕು ಹಾಜಿಯೊಳಗೆ ತಲ್ಲಣಗಳನ್ನು ಹುಟ್ಟಿಸಬಹುದು. ಹಸಿವು, ಸೋರುವ ಮಾಡು, ವರದಕ್ಷಿಣೆ, ವಂಚನೆ.. ಎಲ್ಲವೂ ಹಾಜಿಯನ್ನು ಭಿನ್ನ ಭಾವದಲ್ಲಿ ತಟ್ಟಬಹುದು. ಇಬ್ರಾಹೀಮರ(ಅ) ಆಲೋಚನೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ಅವರು ಕಟ್ಟಬಯಸಿದ ಸಮಾಜವನ್ನು ಸ್ಥಾಪಿಸಲು ಹಾಜಿ ಪಣತೊಡಬಹುದು.
     ಓರ್ವ ವ್ಯಕ್ತಿ ಹಜ್ಜ್ ಗೆ ಕಡ್ಡಾಯವಾಗಿ ತೆರಳಬೇಕಾದುದು ಒಮ್ಮೆ ಮಾತ್ರ. ಹಾಗಂತ, ಆ ಬಳಿಕವೂ ಆತನಲ್ಲಿ ದುಡ್ಡು, ಆರೋಗ್ಯ, ಪ್ರತಿಭೆ ಎಲ್ಲವೂ ಇರಬಹುದು. ಆದರೂ ಆತ ಕಡ್ಡಾಯವಾಗಿ ಮತ್ತೊಮ್ಮೆ ಮಕ್ಕಾಕ್ಕೆ ತೆರಳಬೇಕಿಲ್ಲ. ಇದುವೇ ಓರ್ವ ಹಾಜಿಯ ಗುರಿಯನ್ನು ಸ್ಪಷ್ಟಪಡಿಸುತ್ತದೆ. ಹಾಜಿಯ ಚಟುವಟಿಕೆಯ ಕೇಂದ್ರ ಮಕ್ಕಾ ಅಲ್ಲ, ಆತನ ಊರು. ಆ ಊರನ್ನು ಮಕ್ಕಾ (ಶಾಂತಿಯ ಕೇಂದ್ರ) ಆಗಿಸುವುದೇ ಹಾಜಿಯ ಗುರಿ. ಅದಕ್ಕಾಗಿ ಪ್ರತಿಜ್ಞೆ ಕೈಗೊಳ್ಳುವ ಸಂದರ್ಭವೇ ಹಜ್ಜ್ ಯಾತ್ರೆ. ಒಂದು ವೇಳೆ, ಈ ಅರ್ಥದಲ್ಲಿ ನಮ್ಮ ಹಜ್ಜ್ ನಿರ್ವಹಣೆಯಾಗುವುದಾದರೆ ಒಂದು ದಿನ ಜಗತ್ತೇ `ಶಾಂತಿಯ ಕೇಂದ್ರ' ಆಗಬಹುದು. ಹಾಗಾಗಲಿ ಎಂದು ಹಾರೈಸೋಣ.

Tuesday 8 September 2015

‘ದೊಡ್ಡವರ’ ಹೃದಯ ಹೀನತೆಯನ್ನು ಪ್ರತಿಭಟಿಸಿ ಹೊರಟು ಹೋದ ಮಗು

ಅಯ್ಲಾನ್ ಕುರ್ದಿ
     ನಿಲೋಫರ್ ಡೆಮಿಕ್ ಎಂಬ ಪತ್ರಕರ್ತ ಕ್ಲಿಕ್ಕಿಸಿದ ಪೋಟೋವೊಂದು ಜಗತ್ತಿನ ಕಣ್ಣನ್ನೇ ಮಂಜಾಗಿಸಿದೆ. ಕೆಂಪು ಟೀ ಶರ್ಟ್, ನೀಲಿ ಚಡ್ಡಿ, ಶೂಸ್ ಧರಿಸಿರುವ 3 ವರ್ಷದ ಪುಟ್ಟ ಮಗುವೊಂದು ಟರ್ಕಿಯ ಬೋರ್ಡಮ್ ಸಮುದ್ರ ದಂಡೆಯಲ್ಲಿ ಬೋರಲಾಗಿ ಬಿದ್ದಿರುವ ಪೋಟೋವನ್ನು ನೋಡಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್‍ರು ಟರ್ಕಿಯ ಅಧ್ಯಕ್ಷ ಉರ್ದುಗಾನ್‍ರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆ ಪೋಟೋವು ನಿರಾಶ್ರಿತರ ಬಗ್ಗೆ ಜಗತ್ತಿನ ಹೊಣೆಗಾರಿಕೆಯನ್ನು ನೆನಪಿಸಿತು ಎಂದು ಹೇಳಿದ್ದಾರೆ. ಬ್ರಿಟನ್ನಿನ ಪ್ರಧಾನಿ ಡೇವಿಡ್ ಕ್ಯಾಮರೂನ್, ಐರಿಶ್ ಪ್ರಧಾನಿ ಎಂಡಾ ಕೆನ್ನಿ ಸಹಿತ ಎಲ್ಲರೂ ಸಹಿತ ಆ ಪೋಟೋಗೆ ಮರುಗಿದ್ದಾರೆ. ನಿರಾಶ್ರಿತರಿಗಾಗಿ ತನ್ನ ಎರಡನೇ ಮನೆಯನ್ನೇ ಬಿಟ್ಟು ಕೊಡುವುದಾಗಿ ಐರಿಶ್ ಪ್ರಧಾನಿಯವರು ಹೇಳಿಕೊಂಡಿದ್ದಾರೆ. ದಿ ಸ್ಪೆಕ್ಟೇಟರ್, ದಿ ಗಾರ್ಡಿಯನ್ ಸಹಿತ ಜಗತ್ತಿನ ಪ್ರಸಿದ್ಧ ಪತ್ರಿಕೆಗಳಿಂದ ಹಿಡಿದು ಸ್ಥಳೀಯ ಪತ್ರಿಕೆಗಳ ವರೆಗೆ ಎಲ್ಲವೂ ಅಯ್ಲಾನ್ ಕುರ್ದಿ ಎಂಬ ಆ ಮಗುವಿನ ಬಗ್ಗೆ ಬರೆದಿವೆ. ‘ಮೈಗ್ರಾಂಟ್ ಆಫ್‍ಶೋರ್ ಏಡ್ ಸ್ಟೇಷನ್’ (Migrant Offshore Aid Station) ಎಂಬ ಹೆಸರಲ್ಲಿ ನಿರಾಶ್ರಿತರಿಗೆ ನೆರವು ಸಂಗ್ರಹಿಸುವ ಪ್ರಯತ್ನಕ್ಕೆ ಈ ಪೋಟೋ ಕಾರಣವಾಗಿದೆ. ಒಂದು ರೀತಿಯಲ್ಲಿ, 2014ರಲ್ಲಿ ಪ್ರಕಟವಾಗಿದ್ದ ಪುಟ್ಟ ಫೆಲೆಸ್ತೀನಿ ಬಾಲಕನ ಪೋಟೋದ ಬಳಿಕ ಜಗತ್ತನ್ನು ತೀವ್ರವಾಗಿ ಕಾಡಿದ ಪೋಟೋ ಇದು. ಗುಂಡಿನ ದಾಳಿಯಿಂದ ತೂತು ತೂತಾಗಿದ್ದ ಕಪ್ಪು ಬೋರ್ಡಿನಲ್ಲಿಫೆಲೆಸ್ತೀನಿನ ಆ ಬಾಲಕ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿದ್ದ ದೃಶ್ಯ ಅದು. ಇಸ್ರೇಲ್‍ನ ದಾಳಿಯಿಂದ ಜರ್ಝರಿತಗೊಂಡ ಗಾಝಾದ ಬಗ್ಗೆ ಜಗತ್ತಿನ ಗಮನ ಸೆಳೆಯುವುದಕ್ಕೆ ಅಂದು ಆ ಬಾಲಕ ಕಾರಣವಾಗಿದ್ದರೆ ಇಂದು ಈ ಮಗು ಸಿರಿಯನ್ ನಿರಾಶ್ರಿತರ ಬಗ್ಗೆ ಜಾಗತಿಕ ಚರ್ಚೆ ನಡೆಯುವುದಕ್ಕೆ ಕಾರಣವಾಗಿದೆ. ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ವಲಸೆ ಸಮಸ್ಯೆ ಇದು. ತಮ್ಮ ಗಡಿಗಳಲ್ಲಿ ತುಂಬಿಕೊಂಡಿರುವ ನಿರಾಶ್ರಿತರನ್ನು ಒಳಗೆ ಸೇರಿಸಲು ನಿರಾಕರಿಸುತ್ತಿದ್ದ ಹಂಗರಿ, ಬ್ರಿಟನ್, ಇಟಲಿ, ಪೋರ್ಚುಗೀಸ್, ಸ್ಪೈನ್‍ಗಳು ಈ ಮಗುವನ್ನು ನೋಡಿ ಬೆಚ್ಚಿ ಬಿದ್ದಿವೆ. ಮಾತ್ರವಲ್ಲ, ಈ ಎಲ್ಲ ರಾಷ್ಟ್ರಗಳು ನಿರಾಶ್ರಿತರಿಗೆ ತಂತಮ್ಮ ಗಡಿಯನ್ನು ತೆರೆದು ಬಿಡುವಷ್ಟು ಆ ಪೋಟೋ ಒತ್ತಡವನ್ನು ಹೇರಿದೆ. ನಿಜವಾಗಿ, ನಮ್ಮ ಕಣ್ಣನ್ನು ಮಂಜಾಗಿಸಬೇಕಾದ ಮತ್ತು ಹೃದಯವನ್ನು ಗಾಢವಾಗಿ ತಟ್ಟಬೇಕಾದ ಪೋಟೋ ಅದು. ದೊಡ್ಡವರ ಅಹಂಕಾರ, ಸ್ವಾರ್ಥಗಳಿಗೆ ಎಂದೂ ಬಲಿಯಾಗುವುದು ಮಕ್ಕಳೇ. ಕತ್ತಿ, ಚೂರಿ, ಬಾಂಬು, ಬಂದೂಕು.. ಎಲ್ಲವೂ ದೊಡ್ಡವರ ಅಸ್ತ್ರಗಳು. ಅದನ್ನು ಮಕ್ಕಳು ತಯಾರಿಸಿರುವುದಿಲ್ಲ. ಬಳಸುವುದೂ ಇಲ್ಲ. ದುರಂತ ಏನೆಂದರೆ, ಅಧಿಕಾರಕ್ಕೋ ಸಂಪತ್ತಿಗೋ ಅಥವಾ ಇನ್ನಾವುದಾದರೂ ಸ್ವಾರ್ಥ ಉದ್ದೇಶಕ್ಕೋ 'ದೊಡ್ಡವರು' ಈ ಅಸ್ತ್ರಗಳನ್ನೆಲ್ಲ ಹಿಡಿದು ಕಾದಾಡುವಾಗ ಮಕ್ಕಳು ಅದರ ಎಲ್ಲ ನೋವುಗಳನ್ನೂ ಅನುಭವಿಸುತ್ತಾ ಬದುಕಬೇಕಾಗುತ್ತದೆ. ಏನೆನ್ನಬೇಕು ಇದಕ್ಕೆ? ದೊಡ್ಡವರ ಉದ್ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡುವುದು ಎಷ್ಟು ಸರಿ? ಮಕ್ಕಳಿಗೆ ಅಧಿಕಾರ ಬೇಕಿಲ್ಲ, ಸಂಪತ್ತು ಬೇಕಿಲ್ಲ, ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಅವುಗಳಿಗೆ ಬಾಲ್ಯವಷ್ಟೇ ಬೇಕು. ಅಮ್ಮ-ಅಪ್ಪನ ಬೆಚ್ಚನೆಯ ಪ್ರೀತಿ ಬೇಕು. ಶಾಲೆ ಬೇಕು, ಅಕ್ಷರ ಬೇಕು. ಅಪಾಯ ಮುಕ್ತ ಬಯಲು ಬೇಕು. ಆದರೆ ಇವೆಲ್ಲವನ್ನೂ ನಿರಾಕರಿಸಿದ ದೊಡ್ಡವರ ವರ್ತನೆಗೆ ಮುನಿಸಿಕೊಂಡು ಸಮುದ್ರ ದಂಡೆಯಲ್ಲಿ ಆ ಮಗು ಬೋರಲಾಗಿ ಮಲಗಿರುವಂತೆ ಅನಿಸುತ್ತಿದೆ. ಮರಳಿನಲ್ಲಿ ಆಟವಾಡಲು ಬಿಡದ ಹೆತ್ತವರೊಂದಿಗೆ ಮುನಿಸಿಕೊಳ್ಳುವಂತಹ ಹಠ. ಅಷ್ಟಕ್ಕೂ, ಪುಟ್ಟ ಅಯ್ಲಾನ್ ಕುರ್ದಿ ತನ್ನ ಹುಟ್ಟೂರು ಸಿರಿಯಾದಿಂದ ಟರ್ಕಿಗೆ ವಲಸೆ ಹೋಗಬೇಕೆಂದು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ‘ದೊಡ್ಡವರು’ ಸಿರಿಯಾದಲ್ಲಿ ಅಂಥದ್ದೊಂದು ವಾತಾವರಣವನ್ನು ನಿರ್ಮಿಸಿದ್ದರು. ಆದ್ದರಿಂದಲೇ, ಆತನ ತಂದೆ ಮತ್ತು ತಾಯಿ ಆತನನ್ನೂ ಆತನ ಅಣ್ಣ 5 ವರ್ಷದ ಗಾಲಿಬ್‍ನನ್ನೂ ಎತ್ತಿಕೊಂಡು ವರ್ಷಗಳ ಹಿಂದೆ ಸಿರಿಯದಿಂದ ಟರ್ಕಿಗೆ ಆಗಮಿಸಿದ್ದರು. ಅಲ್ಲಿ ಅಯ್ಲಾನ್ ಸುಖವಾಗಿರಲಿಲ್ಲ. ಎಲ್ಲೆಲ್ಲೂ ನಿರಾಶ್ರಿತರು. ಕೊನೆಗೆ ಅಲ್ಲಿಂದ 3 ಮೈಲುಗಳಷ್ಟು ದೂರ ಇರುವ ಗ್ರೀಸ್‍ಗೆ ತೆರಳಿ ಅಲ್ಲಿಂದ ಕೆನಡದಲ್ಲಿರುವ ಸಂಬಂಧಿಕರನ್ನು ಸೇರಲು  ಮಗುವಿನ ಹೆತ್ತವರು ತೀರ್ಮಾನಿಸಿದರು. ಪಾಸ್‍ಪೋರ್ಟ್, ನಿರ್ಗಮನ ವಿಸಾ ಮತ್ತು ದುಡ್ಡು ಇಲ್ಲದ ಕುಟುಂಬವು ವಿಮಾನ ಹತ್ತುವುದು ಸಾಧ್ಯವಿರಲಿಲ್ಲ. ಹಾಗಂತ, ಇದು ಕೇವಲ ಈ ಕುಟುಂಬವೊಂದರ ಸಮಸ್ಯೆ ಅಲ್ಲ, ಸಂಘರ್ಷ ಪೀಡಿತ ಪಶ್ಚಿಮೇಶ್ಯಾದ ಲಕ್ಷಾಂತರ ಕುಟುಂಬಗಳು ಇವೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದಲೇ, ಕಳೆದ ವಾರ ಅಯ್ಲಾನ್‍ನ ಹೆತ್ತವರು 3 ಮೈಲಿನ ಸಮುದ್ರ ಪ್ರಯಾಣಕ್ಕಾಗಿ ರಬ್ಬರ್ ದೋಣಿಯನ್ನು ಏರಿದರು. 8 ಮಂದಿ ಪ್ರಯಾಣಿಸಬಹುದಾದ ದೋಣಿಯಲ್ಲಿ 15 ಮಂದಿ ಇದ್ದುದರಿಂದಲೇ ಏನೋ ಸಮುದ್ರದಲೆಗೆ ದೋಣಿ ಮಗುಚಿ ಬಿತ್ತು. ಅಯ್ಲಾನ್‍ನ ತಂದೆಯ ಹೊರತು ಉಳಿದವರೆಲ್ಲರೂ ಸಾವಿಗೀಡಾದರು. ಅದೇ ದಿನ ಆ ಮಗುವಿನ ಮೃತದೇಹ ಬೋರ್ಡಮ್ ಸಮುದ್ರ ಕಿನಾರೆಯಲ್ಲಿ ಬೋರಲಾಗಿ ಬಿದ್ದಿರುವ ರೀತಿಯಲ್ಲಿ ಪತ್ತೆಯಾಯಿತು.
ಫೆಲೆಸ್ತೀನಿನ  ಬಾಲಕ
    ಅಷ್ಟಕ್ಕೂ, ಸಂಘರ್ಷ ಪೀಡಿತ ಪಶ್ಚಿಮೇಶ್ಯಕ್ಕೆ ಈ ಸಾವು ಹೊಸತಲ್ಲ. ಹೀಗೆ ಅನಧಿಕೃತವಾಗಿ ಸಮುದ್ರ ಮಾರ್ಗವಾಗಿ ಪ್ರಯಾಣಿಸಿದ 26 ಸಾವಿರಕ್ಕಿಂತಲೂ ಅಧಿಕ ನಿರಾಶ್ರಿತರು ಈಗಾಗಲೇ ಸಾವಿಗೀಡಾಗಿದ್ದಾರೆ. ಇದರಲ್ಲಿ ದೊಡ್ಡದೊಂದು ಭಾಗ ಮಕ್ಕಳದ್ದು. ಸಿರಿಯದಲ್ಲಿ ಪ್ರತಿ 4ರಲ್ಲಿ ಒಂದು ಶಾಲೆ ನಿರಾಶ್ರಿತರ ಶಿಬಿರವಾಗಿ ಮಾರ್ಪಟ್ಟಿವೆ. ಇರಾಕ್‍ನಲ್ಲಿ 3 ಮಿಲಿಯನ್ ಜನರು ಶಾಲೆಗಳಲ್ಲಿ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಸಿರಿಯ, ಇರಾಕ್, ಯಮನ್, ಲಿಬಿಯಗಳಲ್ಲಿ 13.4 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 8,850 ಶಾಲೆಗಳು ಉಪಯೋಗಶೂನ್ಯವಾಗಿ ಭಣಗುಟ್ಟುತ್ತಿದೆ. ಲಿಬಿಯದ ಶೇ. 73 ಶಾಲೆಗಳಲ್ಲಿ ತರಗತಿಗಳೇ ನಡೆಯುತ್ತಿಲ್ಲ. ಸಿರಿಯದ ಸುಮಾರು 56 ಸಾವಿರ ಶಿಕ್ಷಕರು ಮತ್ತು ಅಧಿಕಾರಿಗಳು ಕೆಲಸ ತೊರೆದಿದ್ದಾರೆ... ಮಕ್ಕಳ ಜಗತ್ತಿನ ಪುಟ್ಟ ಚಿತ್ರಣ ಇದು. ದೊಡ್ಡವರೇಕೆ ಇಷ್ಟು ಕ್ರೂರಿಗಳಾಗುತ್ತಿದ್ದಾರೆ? ಹೃದಯವೇ ಇಲ್ಲದಂತೆ ಮತ್ತು ಸಂವೇದನೆಯೇ ಸತ್ತಂತೆ ವರ್ತಿಸುತ್ತಿದ್ದಾರೆ? ಶಾಲೆ ಮಕ್ಕಳದ್ದು. ಬಯಲು ಮಕ್ಕಳದ್ದು. ಬಾಲ್ಯವೂ ಮಕ್ಕಳದ್ದೇ. ಅದನ್ನು ಆ ಮಕ್ಕಳಿಗೆ ಒದಗಿಸಬೇಕಾದ ದೊಡ್ಡವರು ಬಾಂಬು, ಬಂದೂಕುಗಳ ಮೂಲಕ ಅವನ್ನು ನಿರಾಕರಿಸುತ್ತಿರುವುದಕ್ಕೆ ಏನೆನ್ನಬೇಕು? ಅಂದಹಾಗೆ, ಜಗತ್ತಿನ ಸರ್ವ ಆಂತರಿಕ ಸಮಸ್ಯೆಗಳಲ್ಲೂ ಸುದ್ದಿಗೀಡಾಗದೇ ಇರುವುದು ಮಕ್ಕಳು ಮಾತ್ರ. ಯಾಕೆಂದರೆ, ಅವಕ್ಕೆ ಪ್ರತಿಭಟಿಸಲು ಬರುವುದಿಲ್ಲ. ಹುದುಗಿಸಿಟ್ಟ ಬಾಂಬುಗಳ ಪರಿಜ್ಞಾನ ಇರುವುದಿಲ್ಲ. ಐಸಿಸ್‍ನ ಉದ್ದೇಶ, ಅಮೇರಿಕದ ಗುರಿ, ಇಸ್ರೇಲ್ ಬಯಕೆ ಅಥವಾ ಇನ್ನಾರೋ ದೊಡ್ಡವರ ಹುನ್ನಾರಗಳು ಅರ್ಥವಾಗಿರುವುದಿಲ್ಲ. ಹೆತ್ತವರು ಓಡುವಾಗ ಅವೂ ಓಡುತ್ತವೆ. ಅವರು ಅಳುವಾಗ ಅವೂ ಅಳುತ್ತವೆ. ಹಸಿವಾದರೂ ಅಮ್ಮ ಯಾಕೆ ಊಟ ಕೊಡಲ್ಲ ಎಂದು ಕೊರಗುತ್ತವೆ. ಹೀಗೆ ಇತರರನ್ನೇ ಆಶ್ರಯಿಸಿ ಬದುಕುವ ಪೀಳಿಗೆ ಅದು. ಆದ್ದರಿಂದಲೇ, ಅಪ್ಪನೊಂದಿಗೆ ಅಯ್ಲಾನ್ ಕುರ್ದಿ ರಬ್ಬರ್ ದೋಣಿ ಏರಿದ್ದಾನೆ. ಒಂದು ರೀತಿಯಲ್ಲಿ, ದೊಡ್ಡವರೆಲ್ಲ ಸೇರಿ ಮಾಡಿದ ಅಮಾನುಷ ಹತ್ಯೆ ಇದು. ನಿರಾಶ್ರಿತರಾಗಿ ಬದುಕುವುದು, ದೋಣಿ ಏರುವುದು, ಗ್ರೀಸ್‍ಗೆ ತೆರಳುವುದೆಲ್ಲ ಆ ಮಗುವಿನ ಅನಿವಾರ್ಯತೆಗಳಲ್ಲವಲ್ಲ. ಅದನ್ನು ಅನಿವಾರ್ಯಗೊಳಿಸಿದ್ದು ಸಿರಿಯ, ಐಸಿಸ್, ಅಮೇರಿಕ... ಮುಂತಾದ ದೊಡ್ಡವರು. ಆದ್ದರಿಂದ ಈ ಸಾವಿನ ಹೊಣೆಯನ್ನು ಅವರೆಲ್ಲ ಹೊತ್ತುಕೊಳ್ಳಲಿ. ಇನ್ನಾದರೂ ಈ ಜಗತ್ತನ್ನು ಮಕ್ಕಳಿಂದ  ಕಸಿಯದಿರಲಿ.

Tuesday 1 September 2015

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಳ್ಳುತ್ತಲೇ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸೋಣ

    ವೈಚಾರಿಕ ಭಿನ್ನಾಭಿಪ್ರಾಯಗಳ ನೆಲೆ-ಬೆಲೆ ಮತ್ತು ಭವಿಷ್ಯವನ್ನು ಡಾ| ಕಲಬುರ್ಗಿಯವರ ಸಾವು ಮತ್ತೊಮ್ಮೆ ಪ್ರಶ್ನಾರ್ಹಗೊಳಿಸಿದೆ. ಈ ಪ್ರಶ್ನೆ ಮೊದಲಾಗಿ ಕಾಣಿಸಿಕೊಂಡದ್ದು ಅನಂತಮೂರ್ತಿಯವರ ಸಾವಿನೊಂದಿಗೆ. ಅವರ ಸಾವನ್ನು ಇಲ್ಲಿಯ ಒಂದು ವರ್ಗ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು. ಅವರ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಲಾಗಿತ್ತು. ಇದೀಗ ಕಲಬುರ್ಗಿಯವರನ್ನೂ ಅದೇ ರೀತಿಯಲ್ಲಿ ಸ್ವಾಗತಿಸಲಾಗಿದೆ. ವಿಶೇಷ ಏನೆಂದರೆ, ಅನಂತಮೂರ್ತಿಯವರ ಸಾವು ಸಹಜವಾಗಿದ್ದರೆ ಕಲಬುರ್ಗಿಯವರದ್ದು ಅಸಹಜ ಮತ್ತು ಅಮಾನುಷ. ಅವರಿಗೆ ಗುಂಡಿಕ್ಕಿದವರು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಇನ್ನೂ ಗೊತ್ತಾಗುವ ಮೊದಲೇ ಈ ಸಂಭ್ರಮಾಚರಣೆ ನಡೆದಿದೆ. ಆದ್ದರಿಂದಲೇ ಈ ಬೆಳವಣಿಗೆಯನ್ನು ನಾವು ಆತಂಕದಿಂದಲೇ ನೋಡಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಪ್ರಗತಿಪರ ಬ್ಲಾಗರುಗಳ (ಬರಹಗಾರರು) ಹತ್ಯೆ ನಡೆದಾಗ ‘ಶಂಕಿತ ಮುಸ್ಲಿಮ್ ಮೂಲಭೂತವಾದಿಗಳಿಂದ' ಎಂಬ ವಾಕ್ಯದ ಜೊತೆಗೇ ಆ ಸುದ್ದಿಯನ್ನು ಹೆಚ್ಚಿನ ಮಾಧ್ಯಮಗಳು ಪ್ರಕಟಿಸಿದ್ದುವು. ಕಲಬುರ್ಗಿಯವರ ಹತ್ಯೆಗೆ ಸಂಬಂಧಿಸಿ ಅಂತಹ ಯಾವ ‘ಶಂಕಿತ ಮೂಲಭೂತವಾದಿ’ ಪದಗಳೂ ಕನ್ನಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಹತ್ಯೆಯನ್ನು ಬೆಂಬಲಿಸಿ ಬಹಿರಂಗವಾಗಿಯೇ ಸಂತಸ ಹಂಚಿಕೊಂಡ ಘಟನೆಗಳು ಜರುಗಿದ ಹೊರತಾಗಿಯೂ ಹೀಗಾಗಿದೆ ಎಂಬುದು ಸ್ಪಷ್ಟ. ಹಾಗಂತ, ಇದು ಆರೋಪ ಅಲ್ಲ. ಮಾಧ್ಯಮಗಳ ಈ ಸಹನೆಯನ್ನು ನಾವು ಸದುದ್ದೇಶದಿಂದಲೇ ಸ್ವೀಕರಿಸೋಣ. ಹತ್ಯೆಕೋರರನ್ನೂ ಮತ್ತು ಹತ್ಯೆಗೆ ಸಂತೋಷ ವ್ಯಕ್ತಪಡಿಸಿದವರನ್ನೂ ಪ್ರತ್ಯೇಕವಾಗಿಯೇ ನೋಡುವ ಮಾಧ್ಯಮ ಎಚ್ಚರವನ್ನು ಗೌರವಿಸೋಣ ಮತ್ತು ಈ ಎಚ್ಚರ ಸದಾ ಇರುತ್ತದೆ ಎಂದು ನಿರೀಕ್ಷಿಸೋಣ.
   ಅಷ್ಟಕ್ಕೂ, ಕಲಬುರ್ಗಿಯವರ ಸಾವು ಮತ್ತು ಬದುಕನ್ನು ನಾವು ಈ ವಿಘ್ನ ಸಂತೋಷಿಗಳ ಗುಂಪಿನಿಂದ ಹೊರಗಿಟ್ಟು ನೋಡಬೇಕಾಗಿದೆ. ಅವರು ಬದುಕಿರುವಷ್ಟೂ ದಿನ ಪ್ರಶ್ನೆಗಳೊಂದಿಗೇ ಬದುಕಿದರು. ಆ ಪ್ರಶ್ನೆಗಳು ಎಷ್ಟು ಪ್ರಖರವಾಗಿದ್ದುವು ಎಂಬುದನ್ನು ನೂರಕ್ಕಿಂತಲೂ ಅಧಿಕಾರವಾಗಿರುವ ಅವರ ಸಾಹಿತ್ಯ ಕೃತಿಗಳೇ ಹೇಳುತ್ತವೆ. ಈ ಸಾಹಿತ್ಯ ಭಂಡಾರದಲ್ಲಿ ಇರುವುದೆಲ್ಲ ಸಂಶೋಧನಾತ್ಮಕ ಬರಹಗಳು ಮತ್ತು ಸಂಪಾದನೆಗಳೇ. ಬಹುಶಃ, ಅವರು ಕಾದಂಬರಿಯನ್ನು ಬರೆದೇ ಇಲ್ಲ. ಒಂದು ಕವನ, ಒಂದು ನಾಟಕ, ಒಂದು ಸಣ್ಣಾಟವನ್ನು ಬಿಟ್ಟರೆ ಉಳಿದಂತೆ ಕಲಬುರ್ಗಿಯವರ ಜೋಳಿಗೆಯ ತುಂಬ ಸಂಶೋಧನಾತ್ಮಕ ಬರಹಗಳೇ ತುಂಬಿಕೊಂಡಿದ್ದುವು. ಅವರೋರ್ವ ಪ್ರಶ್ನೆಗಳ ಸರದಾರ. ಅವರು ಮೂರ್ತಿಪೂಜೆಯನ್ನು ಪ್ರಶ್ನಿಸಿದರು. ನಾಗರ ಕಲ್ಲಿನ ಸುತ್ತ ಹರಡಿರುವ ಭಯವನ್ನು ದುರ್ಬಲಗೊಳಿಸಿದರು. ಚನ್ನ ಬಸವಣ್ಣನ ಹುಟ್ಟಿನ ಬಗ್ಗೆ ಬರೆದು ವೀರಶೈವರಿಂದ ವಿರೋಧ ಕಟ್ಟಿಕೊಂಡರು. ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆಗೀಡು ಮಾಡಿದರು. ಭಗವದ್ಗೀತೆಯನ್ನು ಧರ್ಮಗ್ರಂಥವೇ ಅಲ್ಲ ಎಂದರು. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಹೇಳಿದ ಅವರು, ವೀರಶೈವ ಧರ್ಮವನ್ನು ಧರ್ಮವೆಂದು ಒಪ್ಪಿಕೊಳ್ಳಲೇ ಇಲ್ಲ. ಅದೊಂದು ಆಚರಣೆ ಎಂದರು. ಸ್ಪಷ್ಟ ಮತ್ತು ನಂಬಲರ್ಹ ಇತಿಹಾಸವಿಲ್ಲದ ರೇಣುಕಾಚಾರ್ಯರು ಅದರ ಸ್ಥಾಪಕರೆನ್ನುವುದಕ್ಕೆ ಪುರಾವೆಯಿಲ್ಲ ಎಂದರು. ಅವರು ಪ್ರಶ್ನೆಯೊಂದಿಗೆ ಬೆಳೆದರು. 80ರ ದಶಕದಲ್ಲೇ ಅವರ ಮೇಲೆ ದಾಳಿಗಳಾಗಿದ್ದುವು. ಬೆದರಿಕೆಗಳಿದ್ದುವು. ಪೊಲೀಸರ ರಕ್ಷಣೆಯಲ್ಲೇ ಅವರು ಪಾಠ ಮಾಡಿದ್ದಿದೆ. ಕಳೆದ ವರ್ಷ ಅವರು ತೀವ್ರ ವಿವಾದಕ್ಕೆ ಒಳಗಾಗಿದ್ದರು. ನಾಗರಕಲ್ಲಿಗೆ ಮೂತ್ರ ವಿಸರ್ಜಿಸುವ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಒಂದು ವರ್ಗದ ತೀವ್ರ ಸಿಟ್ಟಿಗೆ ಕಾರಣವಾಗಿತ್ತು. ಅವರಿಗೆ ಸರಕಾರ ರಕ್ಷಣೆಯನ್ನೂ ಒದಗಿಸಿತ್ತು. ಇತ್ತೀಚೆಗಷ್ಟೇ ಅವರ ಕೋರಿಕೆಯ ಮೇರೆಗೆ ಸರಕಾರ ಭದ್ರತೆಯನ್ನು ಹಿಂದಕ್ಕೆ ಪಡೆದಿತ್ತು. ಅವರು ಸ್ವತಂತ್ರವಾಗಿಯೇ ಬದುಕಿದರು. ಸ್ವತಂತ್ರವಾಗಿಯೇ ಆಲೋಚಿಸಿದರು. ಸ್ವತಂತ್ರವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹೊರಟು ಹೋಗುವಾಗಲೂ ಭದ್ರತಾ ಪಡೆಗಳಿಂದ ಮುಕ್ತವಾಗಿ ಸ್ವಂತಿಕೆಯೊಂದಿಗೇ ಹೊರಟು ಹೋದರು.
  ನಿಜವಾಗಿ, ವೈಚಾರಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಘರ್ಷಣೆ ಮೊದಲಿನಿಂದಲೂ ನಡೆಯುತ್ತಲೇ ಇದೆ. ವೈಚಾರಿಕತೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಗೊಂದಲ ಇದೆ. ಸಹನೆ, ಅಸಹನೆ, ಸ್ಪಷ್ಟ-ಅಸ್ಪಷ್ಟ ಅಭಿಪ್ರಾಯಗಳಿವೆ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಹಿಂಸಾತ್ಮಕ ಪ್ರತಿಕ್ರಿಯೆಯೇ ಉತ್ತರವೆಂದು ವಾದಿಸುವ ಒಂದು ಗುಂಪೂ ಇವತ್ತಿನ ಸಮಾಜದಲ್ಲಿದೆ. ರುಶ್ದಿ, ತಸ್ಲೀಮಾ ಮುಂತಾದವರು ‘ಹೀರೋ'ಗಳಾದದ್ದು ಸಮಾಜದ ಈ ವೈಫಲ್ಯಗಳಿಂದಲೇ. ಕ್ರುದ್ಧಗೊಂಡ ಸಮಾಜದ ಅಪ್ರಬುದ್ಧ ಪ್ರತಿಕ್ರಿಯೆಗಳು ಅನೇಕ ಕೃತಿಗಳನ್ನು ವಿಶ್ವಮಾನ್ಯ ಮಾಡಿವೆ. ಅವುಗಳಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟಿವೆ. ಅಂದಹಾಗೆ, ವೈಚಾರಿಕತೆ, ಪ್ರಗತಿಪರ ಚಿಂತನೆ ಎಂಬುದೆಲ್ಲ ಯಾವ ಸಮಾಜದ ವೈರಿಯೂ ಅಲ್ಲ. ಸಮಾಜ ಎಂದ ಮೇಲೆ ಅಲ್ಲಿ ಒಂದಕ್ಕಿಂತ ಹೆಚ್ಚು ಅಭಿಪ್ರಾಯಗಳಿರಲೇಬೇಕು. ಹತ್ತು ಮಂದಿಯ ಗುಂಪನ್ನೇ ಎತ್ತಿಕೊಳ್ಳಿ. ಹತ್ತು ಮಂದಿಯೂ ಒಂದೇ ರೀತಿಯಲ್ಲಿರುವುದಕ್ಕೆ ಸಾಧ್ಯವೇ ಇಲ್ಲ. ರೂಪ, ಎತ್ತರ, ಉದ್ದ, ಅಗಲ, ಬಣ್ಣ, ನಗು, ಮಾತು, ಪ್ರತಿಭೆ, ಹವ್ಯಾಸ, ಅಭಿರುಚಿ.. ಎಲ್ಲದರಲ್ಲೂ ಹತ್ತು ಮಂದಿಯ ಮಧ್ಯೆಯೂ ವ್ಯತ್ಯಾಸ ಇರುತ್ತದೆ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಐಡೆಂಟಿಟಿಯಿರುತ್ತದೆ. ಅಂದಹಾಗೆ, ಒಂದೇ ಮನೆಯ ಒಂದೇ ರಕ್ತವನ್ನು ಹಂಚಿಕೊಂಡವರಲ್ಲೂ ಒಂದೇ ಅಭಿಪ್ರಾಯವನ್ನು ಕಾಣಲು ಸಾಧ್ಯವಿಲ್ಲದಿರುವಾಗ, ಸಮಾಜದಲ್ಲಿ ಅದು ಕಾಣಿಸಿಕೊಳ್ಳುವುದು ಹೇಗೆ? ಅನಂತಮೂರ್ತಿಯವರಿಗೆ ಧರ್ಮದ ಕುರಿತಂತೆ ಅವರದ್ದೇ ಆದ ಅಭಿಪ್ರಾಯಗಳಿವೆ. ನರೇಂದ್ರ ದಾಬೋಲ್ಕರ್‍ರಿಗೆ ಮೂಢನಂಬಿಕೆಗಳ ಬಗ್ಗೆ ತನ್ನದೇ ಆದ ನಿಲುವುಗಳಿವೆ. ಕಲಬುರ್ಗಿಯವರಾಗಲಿ, ತಸ್ಲೀಮಾ ಆಗಲಿ ಎಲ್ಲರಿಗೂ ಧರ್ಮ, ಸಂಸ್ಕ್ರಿತಿ, ಪುರಾಣ, ಇತಿಹಾಸ.. ಎಲ್ಲವುಗಳ ಬಗ್ಗೆಯೂ ಅವರವರದೇ ಆದ ಅಭಿಪ್ರಾಯಗಳಿರುವುದಕ್ಕೆ ಖಂಡಿತ ಸಾಧ್ಯವಿದೆ. ಆ ಅಭಿಪ್ರಾಯವನ್ನು ಪ್ರಶ್ನಿಸುವುದಕ್ಕೆ ಸಂಪ್ರದಾಯವಾದಿ ಸಮಾಜ ಯಾವುದನ್ನು ಆಯುಧವಾಗಿ ಎತ್ತಿಕೊಳ್ಳಬೇಕು ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಬಂದೂಕಂತೂ ಮನುಷ್ಯ ವಿರೋಧಿ. ತಲವಾರು, ಬಾಂಬು, ಕತ್ತಿ, ದೊಣ್ಣೆ ಮುಂತಾದ ಹಿಂಸಾ ಪ್ರತೀಕಗಳೆಲ್ಲ ವೈಚಾರಿಕ ಹೋರಾಟಕ್ಕೆ ಸೂಕ್ತ ಅಸ್ತ್ರಗಳಲ್ಲ. ಅವು ಜೀವಭಂಜಕ, ಕ್ರೌರ್ಯದ ಪ್ರತೀಕ ಮಾತ್ರವಲ್ಲ, ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸಲಾಗದವರ ಅಸ್ತ್ರ. ಪ್ರಶ್ನೆ ಪತ್ರಿಕೆಗೆ ಉತ್ತರ ಪತ್ರಿಕೆಗಳ ಮೂಲಕ ಹೇಗೆ ಉತ್ತರಿಸಲಾಗುವುದೋ ಹಾಗೆಯೇ ವೈಚಾರಿಕತೆಯನ್ನು ವಿಚಾರಗಳ ಮೂಲಕವೇ ಎದುರಿಸಬೇಕು. ಹಾಡಿಗೆ ಹಾಡುಗಳ ಮೂಲಕ, ಲೇಖನಕ್ಕೆ ಲೇಖನಗಳ ಮೂಲಕ, ಭಾಷಣಕ್ಕೆ ಭಾಷಣಗಳ ಮೂಲಕ, ಸಾಕ್ಷ್ಯ ಚಿತ್ರಕ್ಕೆ ಸಾಕ್ಷ್ಯ ಚಿತ್ರಗಳ ಮೂಲಕ, ಸಿನಿಮಾಕ್ಕೆ ಸಿನಿಮಾಗಳ ಮೂಲಕ.. ಹೀಗೆ ಪ್ರತಿಯೊಂದನ್ನೂ ಅತ್ಯಂತ ಸಭ್ಯ ಮತ್ತು ಕಾನೂನುಬದ್ಧ ದಾರಿಗಳ ಮೂಲಕ ಎದುರಿಸಬೇಕೇ ಹೊರತು ಅಸ್ತ್ರಗಳಿಂದ ಅಲ್ಲ. ಬಂದೂಕಿಗೆ ಆತ್ಮವಿಲ್ಲ. ಜೀವವೂ ಇಲ್ಲ. ಒಂದು ವೇಳೆ ಇಂಥ ಜೀವರಹಿತ ಅಸ್ತ್ರಗಳು ಜೀವಂತ ವ್ಯಕ್ತಿಯನ್ನು ಬಲಿ ಪಡೆಯಬಹುದಾದರೂ ಆತನ ಅಭಿಪ್ರಾಯವನ್ನು ಬಲಿ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಕಲಬುರ್ಗಿಯವರ ಮೇಲೆ ಗುಂಡು ಹಾರಿಸಿದವರು ಈ ಸತ್ಯವನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬೇಕಾಗಿದೆ.
  ಏನೇ ಆಗಲಿ, ವೈಚಾರಿಕ ಭಿನ್ನಾಭಿಪ್ರಾಯಗಳಿಗೆ ಹಿಂಸೆ ಎಂದೂ ಉತ್ತರವಲ್ಲ, ಆಗಬಾರದು ಕೂಡ. ಆದ್ದರಿಂದಲೇ, ಕಲಬುರ್ಗಿಯವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳುತ್ತಲೇ ಅವರ ಹತ್ಯೆಯನ್ನು ಪ್ರಬಲ ದನಿಯಲ್ಲಿ ಖಂಡಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗಬೇಕಿದೆ.

Friday 28 August 2015

ನಮ್ಮ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿರುವ ಕಪ್ಪು ಕತ್ತಿನ ಕೊಕ್ಕರೆ

     ಪರಿಸರ ಸಂರಕ್ಷಣೆ, ಪರಿಸರ ಹೋರಾಟಗಾರರು, ಪರಿಸರ ಇಲಾಖೆ.. ಮುಂತಾದುವುಗಳೆಲ್ಲ ಇವತ್ತು ಈ ದೇಶದಲ್ಲಿ ಯಾವ ಬಗೆಯ ತಿರಸ್ಕಾರಕ್ಕೆ ಈಡಾಗಿದೆಯೆಂಬುದು ಎಲ್ಲರಿಗೂ ಗೊತ್ತು. ಮೇಧಾ ಪಾಟ್ಕರ್, ವಿನಯಕುಮಾರ್, ಪದ್ಮನಾಭನ್, ಗೋಪಾಲ್ ದುಕಾಂಡೆ, ದೇಸರದ.. ಮುಂತಾದವರೆಲ್ಲ ಇವತ್ತು ಈ ದೇಶದಲ್ಲಿ ತಲೆ ತಪ್ಪಿಸಿಕೊಂಡು ಓಡಾಡಬೇಕಾದಂತಹ ಸ್ಥಿತಿಯಿದೆ. ಅವರನ್ನು ದೇಶದ್ರೋಹಿ ಎನ್ನಲಾಗುತ್ತಿದೆ. ಅಭಿವೃದ್ಧಿ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ‘ಬೃಹತ್ ಯೋಜನೆಗಳ ಹೊರತು ಅಭಿವೃದ್ಧಿ ಸಾಧ್ಯವಿಲ್ಲ..’ ಎಂಬೊಂದು ಪ್ರಚಾರದ ಮಧ್ಯೆ ಸಾಮಾಜಿಕ ಹೋರಾಟಗಾರರು, ಪರಿಸರ ಸ್ನೇಹಿಗಳೆಲ್ಲ ವಿಲನ್‍ಗಳಾಗಿ ಚಿತ್ರಿತರಾಗುತ್ತಿದ್ದಾರೆ. ಇಂಥದ್ದೊಂದು ಸ್ಥಿತಿಯಲ್ಲಿ, ವಿರಳ ಜಾತಿಯ ಹಲ್ಲಿ ಮತ್ತು ಹಾವುಗಳು ವಿಶ್ವದಲ್ಲಿಯೇ ಅತಿ ದೊಡ್ಡದಾದ ಅಭಿವೃದ್ಧಿ ಯೋಜನೆಯೊಂದನ್ನು ತಡೆದ ಸುದ್ದಿಯು ಹೊರಬಿದ್ದಿದೆ. ಇದು ಸಾಧ್ಯವಾದುದು ಆಸ್ಟ್ರೇಲಿಯಾದಲ್ಲಿ. 16.5 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಕಲ್ಲಿದ್ದಲು ಗಣಿಗಾರಿಕೆಯನ್ನು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ಪ್ರಾರಂಭಿಸಲು ಭಾರತದ ಅದಾನಿಯವರು ಮುಂದಾಗಿದ್ದರು. ಎರಡ್ಮೂರು ವರ್ಷಗಳ ಮೊದಲೇ ಅವರು ಈ ಯೋಜನೆಗಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ‘ಪಾರ್ಟಿ ಫಂಡ್' ಅನ್ನೂ ನೀಡಿದ್ದರು. ಮಾತ್ರವಲ್ಲ, ಅವರು ನಿರೀಕ್ಷಿಸಿದಂತೆಯೇ ಸರಕಾರ ಅನುಮತಿಯನ್ನೂ ನೀಡಿತ್ತು. ಆದರೆ ಅಲ್ಲಿನ ನ್ಯಾಯಾಲಯ ಇದೀಗ ಸರಕಾರದ ಈ ಅನುಮತಿಯನ್ನು ರದ್ದುಪಡಿಸಿದೆ. ‘ಈ ಯೋಜನೆಯಿಂದಾಗಿ ಕ್ವೀನ್ಸ್ ಲ್ಯಾಂಡ್‍ನಲ್ಲಿರುವ ಅಪರೂಪದ ಹಲ್ಲಿ ಮತ್ತು ಹಾವುಗಳ ಪ್ರಬೇಧಗಳು ನಾಶವಾಗುವ ಸಾಧ್ಯತೆಯಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಸೂಕ್ತವಲ್ಲ’ ಎಂದು ಅದು ಅಭಿಪ್ರಾಯಪಟ್ಟಿದೆ. ವಿಶೇಷ ಏನೆಂದರೆ, ಹಾವು, ಹಲ್ಲಿ, ಪಾರಿವಾಳ, ಜಿಂಕೆಗಳೆಲ್ಲ ಬರೇ ಆಸ್ಟ್ರೇಲಿಯಾದಲ್ಲಿ ಮಾತ್ರ ಇರುವುದಲ್ಲ. ಜಗತ್ತಿನೆಲ್ಲೆಡೆ ಇದೆ. ಭಾರತದ ಅರುಣಾಚಲ ಪ್ರದೇಶದಲ್ಲೂ ಇಂಥದ್ದೇ ಒಂದು ವಾತಾವರಣ ಇದೆ. ಝೆುಮಿತಾಂಗ್ ಎಂಬಲ್ಲಿ 780 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಯೋಜನೆಯೊಂದನ್ನು ಸರಕಾರ ಹಮ್ಮಿಕೊಂಡಿದೆ. ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಮೂಲಕ ಈ ವಿದ್ಯುತ್ ಅನ್ನು ಉತ್ಪಾದಿಸುವ ಗುರಿ ಸರಕಾರದ್ದಾದರೆ, ಪುಟ್ಟ ಕೊಕ್ಕರೆಗಳು ಇದನ್ನು ಪ್ರಶ್ನಿಸುತ್ತಿವೆ. ಚೀನಾ, ಭೂತಾನ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಕಪ್ಪು ಕತ್ತಿನ ಅಪರೂಪದ ಕೊಕ್ಕರೆಗಳು ಇವು. ಚಳಿಗಾಲದಲ್ಲಿ ಹೆಚ್ಚಾಗಿ ಅವು ಈ ಪ್ರದೇಶದಲ್ಲಿ ಠಿಕಾಣಿ ಹೂಡುತ್ತವೆ. ಒಂದು ವೇಳೆ, ಈ ಅಣೆಕಟ್ಟು ನಿರ್ಮಾಣಗೊಂಡರೆ ಕೊಕ್ಕರೆ ತನ್ನ ಅಸ್ತಿತ್ವವನ್ನು ಕಳಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ, ಇದು ಕೇವಲ ಕೊಕ್ಕರೆಯ ಪ್ರಶ್ನೆಯಲ್ಲ. ಒಂದು ಜೀವಿಯ ಅಸ್ತಿತ್ವದ ಪ್ರಶ್ನೆ. ಮನುಷ್ಯರಂತೆ ಮಾತಾಡುವ, ಬಂದೂಕು ಎತ್ತುವ ಅಥವಾ ಪ್ರತಿಭಟನೆ ಹಮ್ಮಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಒಂದು ಪಕ್ಷಿಯ ಜೀವಿಸುವ ಹಕ್ಕನ್ನು ಕಬಳಿಸುವ ಸ್ವಾತಂತ್ರ್ಯ ಮನುಷ್ಯರಿಗಿದೆಯೇ? ಅಣೆಕಟ್ಟು ಮನುಷ್ಯರ ಅಗತ್ಯ. ವಿದ್ಯುತ್ತೂ ಮನುಷ್ಯರದ್ದೇ ಬೇಡಿಕೆ. ಹೀಗೆ ಬರೇ ಮನುಷ್ಯರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕಾಲ ಕಾಲಗಳಿಂದ ವಾಸಿಸುತ್ತಿರುವ ಕೊಕ್ಕರೆಯ ಮನೆಯನ್ನು ನಾಶಪಡಿಸುವುದು ನೈತಿಕವೇ? ವಿದ್ಯುತ್ ಅನ್ನು ಕೊಕ್ಕರೆ ಉಪಯೋಗಿಸುವುದಿಲ್ಲ. ಪಕ್ಷಿಗಳು ನೀರಿಗಾಗಿ ಅಣೆಕಟ್ಟನ್ನು ಆಶ್ರಯಿಸುತ್ತಲೂ ಇಲ್ಲ. ಅವು ತಮ್ಮ ಪಾಡಿಗೆ ಮನುಷ್ಯರಿಂದ ದೂರ ಇದ್ದುಕೊಂಡು ಬದುಕುತ್ತವೆ. ಮನುಷ್ಯ ಮಾತ್ರ ತನ್ನ ಬದುಕನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅವುಗಳ ಬದುಕನ್ನು ನಾಶ ಮಾಡುತ್ತಾನೆ. ಪ್ರತಿಭಟಿಸುವ ಸಾಮರ್ಥ್ಯ ಇಲ್ಲದ ಅವು ಕ್ರಮೇಣ ಕಣ್ಮರೆಯಾಗುತ್ತವೆ. ಅಷ್ಟಕ್ಕೂ, ಅಭಿವೃದ್ಧಿಯ ಬೆನ್ನು ಹತ್ತಿರುವ ವ್ಯವಸ್ಥೆಯು ಈ ಕಣ್ಮರೆಯನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಭಿವೃದ್ಧಿಯ ಹೆಸರಲ್ಲಿ ಮನುಷ್ಯರನ್ನೇ ನಿರ್ಗತಿಕರನ್ನಾಗಿಸಲು ಹಿಂಜರಿಯದ ವ್ಯವಸ್ಥೆಯಲ್ಲಿ ಮನುಷ್ಯರೆದುರು ಏನೇನೂ ಅಲ್ಲದ ಪಕ್ಷಿಗಳು ಪ್ರಾಮುಖ್ಯತೆ ಪಡಕೊಳ್ಳುವುದಾದರೂ ಹೇಗೆ? ಅಧಿಕಾರದ ಬದಲಾವಣೆಯಲ್ಲಿ ಕೊಕ್ಕರೆಗಳ ಪಾತ್ರ ಶೂನ್ಯ. ಅವು ಓಟು ಹಾಕಲ್ಲ. ಧರಣಿ ಕೂರಲ್ಲ. ಪ್ರತಿಭಟಿಸಲ್ಲ. ಹೀಗಿರುವಾಗ ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಕುರಿತಾದ ಅವುಗಳ ಕಳವಳ ವ್ಯವಸ್ಥೆಗೆ ಅರ್ಥವಾಗುವುದು ಹೇಗೆ?
 ಅಭಿವೃದ್ಧಿಯ ಕುರಿತಂತೆ ನಮ್ಮಲ್ಲೊಂದು ಭ್ರಮೆಯಿದೆ. ಈ ಭ್ರಮೆ ಎಷ್ಟು ಅತಿರೇಕ ಮಟ್ಟದಲ್ಲಿ ಇದೆಯೆಂದರೆ, ಇದರ ಕುರಿತು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವವರೆಲ್ಲ ದೇಶದ್ರೋಹಿಗಳು ಎಂಬಷ್ಟು. ನರ್ಮದಾ ಯೋಜನೆಯಿಂದಾಗಿ ಮುಳುಗುವ ಪ್ರದೇಶಗಳು, ನಿರ್ಗತಿಕರಾಗುವ ಮನುಷ್ಯರು, ಗದ್ದೆಗಳು, ಅರಣ್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಕುರಿತಂತೆ ದನಿಯೆತ್ತಿದ ಮೇಧಾ ಪಾಟ್ಕರ್ ಇವತ್ತು ಗೊಂದಲಕಾರಿ ಎಂಬ ಹಣೆಪಟ್ಟಿಯೊಂದಿಗೆ ಓಡಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ಕುಡಂಕುಲಮ್ ಅಣುಸ್ಥಾವರವು ಪರಿಸರ ಮತ್ತು ನಾಗರಿಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದ ವಿನಯಕುಮಾರ್ ಇವತ್ತು ‘ದೇಶದ್ರೋಹಿ' ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಜೈತಾಪುರ್ ಅಣುಸ್ಥಾವರವನ್ನು ವಿರೋಧಿಸುತ್ತಿರುವ ಪದ್ಮನಾಭನ್, ಗೋಪಾಲ್ ದುಕಾಂಡೆ ಇವತ್ತು ವ್ಯವಸ್ಥೆ ದಾಖಲಿಸಿದ ವಿವಿಧ ಕೇಸುಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಅರುಂಧತಿ ರಾಯ್ ಕೂಡ ಈ ಪಟ್ಟಿಯಿಂದ ಹೊರತಾಗಿಲ್ಲ. ಅಂದಹಾಗೆ, ‘ಬೃಹತ್ ಉದ್ಯಮಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂಬ ಪ್ರಚಾರವೊಂದು ನಮ್ಮ ನಡುವೆಯಿದೆ. ಈ ಪ್ರಚಾರ ಎಷ್ಟು ಪ್ರಬಲವಾಗಿದೆಯೆಂದರೆ, ಆ ‘ಅಭಿವೃದ್ಧಿ'ಗಾಗಿ ರೈತನಲ್ಲಿ ಕೇಳದೆಯೇ ಆತನ ಭೂಮಿಯನ್ನು ವಶಪಡಿಸಬಹುದು (ಭೂ ಮಸೂದೆ) ಎಂದು 65% ರೈತರೇ ಇರುವ ದೇಶವೊಂದರ ಸರಕಾರವೇ ವಾದಿಸುತ್ತಿದೆ. ಅದಕ್ಕಾಗಿ ಕಾನೂನನ್ನು ರಚಿಸಲೂ ಪ್ರಯತ್ನಿಸುತ್ತಿದೆ. ಉದ್ಯಮಿಗಳಿಗೆ ಜುಜುಬಿ ಮೊತ್ತಕ್ಕೆ ಭೂಮಿಯನ್ನು ಕೊಡುತ್ತಿದೆ. ನೀರು, ವಿದ್ಯುತ್, ಸಾಲ, ತೆರಿಗೆ ಮನ್ನಾ ಮುಂತಾದ ಸೌಲಭ್ಯಗಳನ್ನು ತರಾತುರಿಯಿಂದ ನೀಡುತ್ತಿದೆ. ಹೀಗೆ ಕಾಂಕ್ರೀಟು ನಾಡನ್ನು ಕಟ್ಟುವ ಧಾವಂತ ನಮ್ಮದು. ಕಬ್ಬಿಣ, ಸಿಮೆಂಟು,  ಹೊೈಗೆ, ಜಲ್ಲಿಕಲ್ಲು.. ಮುಂತಾದುವುಗಳೇ ಸದ್ದು ಮಾಡುವ ಜಗತ್ತು. 24 ತಾಸು ವಿದ್ಯುತ್, 24 ತಾಸು ನೀರು, ಗ್ಯಾಸು, ನ್ಯೂಸುಗಳ ಆರಾಮದಾಯಕ ಜಗತ್ತನ್ನು ಕಟ್ಟುವ ಓಟದಲ್ಲಿ ನಾವಿದ್ದೇವೆ. ಈ ಓಟದ ಹಾದಿಯಲ್ಲಿ ನಾವು ಕಾಡು, ನದಿ, ಗದ್ದೆ, ಪ್ರಾಣಿ, ಪಕ್ಷಿ ಮತ್ತು ಕೆಲವೊಮ್ಮೆ ಮನುಷ್ಯರನ್ನೇ ತಡೆಯೆಂದು ಭಾವಿಸುತ್ತೇವೆ. ಈ ತಡೆಯನ್ನು ದಾಟುವುದಕ್ಕಾಗಿ ರೋಮಾಂಚನಕಾರಿ ಕತೆಗಳನ್ನು ಕಟ್ಟುತ್ತೇವೆ. ಆ ಕತೆಗಳ ತುಂಬ ದೇಶಪ್ರೇಮ ಇರುತ್ತದೆ. ಸಂತಸದಿಂದ ತುಂಬಿ ತುಳುಕುತ್ತಿರುವ ಜನಸಮೂಹವಿರುತ್ತದೆ. ಎಲ್ಲ ಸೌಲಭ್ಯಗಳೂ 24 ತಾಸೂ ಲಭ್ಯವಿರುವ ಅಭಿವೃದ್ಧಿಯಿರುತ್ತದೆ. ಇದನ್ನು ತಡೆಯುವ ಪಾತ್ರಧಾರಿಗಳಾಗಿ ಅರುಂಧತಿ, ಮೇಧಾ, ವಿನಯ್, ಗೋಪಾಲ್ ಕಾಣಿಸಿಕೊಳ್ಳುತ್ತಾರೆ. ಇವರನ್ನು ದೇಶದ್ರೋಹಿಗಳು ಎನ್ನಲಾಗುತ್ತದೆ. ಇವರ ವಿರುದ್ಧ ಮೊಕದ್ದಮೆಯನ್ನು ಹೂಡಲಾಗುತ್ತದೆ.
 ನಿಜವಾಗಿ, ಅದಾನಿಯ ವಿರುದ್ಧ ಆಸ್ಟ್ರೇಲಿಯಾದಲ್ಲಿ ಯಕಶ್ಚಿತ್ ಪುಟ್ಟ ಹಲ್ಲಿಗಳು ಸಾಧಿಸಿದ ವಿಜಯವು ನಮ್ಮ ಅಭಿವೃದ್ಧಿ (ಆDevelopment) ಕಲ್ಪನೆಯ ಸುತ್ತ ಮರು ಚರ್ಚೆಯೊಂದನ್ನು ಹುಟ್ಟು ಹಾಕಬೇಕಿದೆ. ‘ಬೃಹತ್ ಯೋಜನೆಗಳು ಎಲ್ಲಿಯ ವರೆಗೆ, ಯಾಕೆ ಮತ್ತು ಹೇಗೆ..’ ಎಂಬ ಗಂಭೀರ ಚಿಂತನೆಗೆ ಸಮಾಜ ತನ್ನನ್ನು ತೆರೆದುಕೊಳ್ಳಲು ಈ ಪ್ರಕರಣವನ್ನು ಕಾರಣವಾಗಿ ಬಳಸಿಕೊಳ್ಳಬೇಕಿದೆ. ಆಸ್ಟ್ರೇಲಿಯಾದ ಹಲ್ಲಿಯಂತೆ ಭಾರತದ ಕೊಕ್ಕರೆಗೂ ಜೀವಿಸುವ ಹಕ್ಕಿದೆ, ಅದು ಸದಾ ಇರಲಿ. ಅದರ 'ಮನೆ' ಯಾರ ಪಾಲೂ ಆಗದಿರಲಿ.