Wednesday 25 March 2015

ನೀರು ಪಾಲಾಗುವ ಮಕ್ಕಳು ಮತ್ತು ದಡದಲ್ಲಿ ನಿಂತು ಕಾರಣ ಹುಡುಕುವ ನಾವು..

    ಮಕ್ಕಳು ಅತ್ಯಂತ ಹೆಚ್ಚು ಒತ್ತಡವನ್ನು ಎದುರಿಸುವುದು ಪರೀಕ್ಷೆಯ ಸಂದರ್ಭದಲ್ಲಿ. ಪರೀಕ್ಷೆ ಎಂಬುದು ಮಕ್ಕಳ ಪ್ರತಿಭೆಯ ಅಳತೆಗೋಲಷ್ಟೇ ಅಲ್ಲ, ಅವರ ಭವಿಷ್ಯವನ್ನು ಬರೆಯುವ ನಿರ್ಣಾಯಕ ಘಟ್ಟ ಕೂಡ. ಆದ್ದರಿಂದಲೇ, ಪರೀಕ್ಷೆ ಬರೆಯುವುದು  ಮಕ್ಕಳಾದರೂ ಅದಕ್ಕಾಗಿ ತಯಾರಿ ನಡೆಸುವವರಲ್ಲಿ ಮಕ್ಕಳಷ್ಟೇ ಇರುವುದಲ್ಲ. ಹೆತ್ತವರು, ಶಿಕ್ಷಕರು, ಸಮಾಜ ಎಲ್ಲರೂ ಇರುತ್ತಾರೆ. ಹೆತ್ತವರು ತಮ್ಮ ಮಕ್ಕಳ ಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ನಿಗದಿಪಡಿಸುತ್ತಾರೆ. ಮದುವೆ-ಮುಂಜಿ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುತ್ತಾರೆ. ಟಿ.ವಿ. ಆಫ್ ಆಗುತ್ತದೆ. ಶಿಕ್ಷಕರು ಹೆಚ್ಚುವರಿಯಾಗಿ ದುಡಿಯುತ್ತಾರೆ. ತಮ್ಮ ಕಾಲೇಜಿಗೆ ಹೆಚ್ಚಿನ ಫಲಿತಾಂಶ ಬರಬೇಕೆಂಬ ಉಮೇದೂ ಅವರಲ್ಲಿರುತ್ತದೆ.. ಹೀಗೆ ಹಲವರ ನಿರೀಕ್ಷೆಗಳನ್ನು ನಿಜಗೊಳಿಸುವುದಕ್ಕಾಗಿ ಮಗುವೊಂದು ಅಕ್ಷರಗಳ ಜೊತೆಗೆ ಹೋರಾಟಕ್ಕಿಳಿಯಬೇಕಾಗುತ್ತದೆ. ತನ್ನ ಮಗು ಸಾಫ್ಟ್ ವೇರ್ ಇಂಜಿನಿಯರೋ ಡಾಕ್ಟರೋ ಇನ್ನೇನೋ ಆಗಬೇಕೆಂದು ಅಪ್ಪ ಬಯಸಿರುತ್ತಾನೆ. ಅಮ್ಮನ ಆಸೆಯೇ ಬೇರೆ. ಸಂಬಂಧಿಕರು ಮಗುವಿನ ಬಗ್ಗೆ ಇನ್ನಾವುದೋ ಕಣಿಯನ್ನು ಹೇಳಿರುತ್ತಾರೆ. ಈ ಎಲ್ಲರ ಭಾರವನ್ನು ಹರೆಯದ ಮಗುವೊಂದು ಹೊತ್ತುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಪಠ್ಯಪುಸ್ತಕಗಳ ವಿರುದ್ಧ ಯುದ್ಧ ಹೂಡಬೇಕಾಗುತ್ತದೆ. ಇಂಥ ಒತ್ತಡದ ಸಂದರ್ಭದಲ್ಲಿ ಮಗುವೊಂದು ಎಡವಟ್ಟು ಮಾಡಿಕೊಳ್ಳುವ ಅಪಾಯವೂ ಇರುತ್ತದೆ. ಓದಿನ ಮೇಲಿನ ಗಮನವು ಕೆಲವೊಮ್ಮೆ ಸ್ವಶರೀರದ ಮೇಲೆಯೇ ಗಮನ ಕೊಡದಷ್ಟು ಅಥವಾ ಅಪಾಯವನ್ನು ಗಂಭೀರವಾಗಿ ಪರಿಗಣಿಸದಷ್ಟು ಆಳವಾಗಿರುತ್ತದೆ. ಮೊನ್ನೆ ನದಿದಂಡೆಯಲ್ಲಿ ಕುಳಿತು ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಮಕ್ಕಳ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪರಿಸರದ ಈ ಮಕ್ಕಳಿಗೆ ಈಜು ಬರುತ್ತಿಲ್ಲ ಎಂದಲ್ಲ. ನೀರಿನ ಸೆಳೆತದ ಬಗ್ಗೆ ಅರಿವಿರದ ಮಕ್ಕಳೂ ಇವಲ್ಲ. ಹೀಗಿದ್ದೂ ಈ ಮಕ್ಕಳು ನೀರು ಪಾಲಾದರೆಂದರೆ, ಪರೀಕ್ಷೆಯ ಒತ್ತಡವು ಆ ಸಂದರ್ಭದ ಅಪಾಯವನ್ನು ಕಡೆಗಣಿಸಿಬಿಡುವಷ್ಟು ತೀವ್ರವಾಗಿತ್ತೇನೋ ಎಂದು ಅನುಮಾನಿಸಬೇಕಾಗುತ್ತದೆ. ಹಾಗಂತ, ಇಂಥ ಸಾವುಗಳನ್ನು ನಾವು ಯಾವುದಾದರೊಂದು ಜಿಲ್ಲೆಗೆ ಸೀಮಿತಗೊಳಿಸಬೇಕಾಗಿಲ್ಲ. ಕಳೆದ ವರ್ಷ ಬಾವಿಕಟ್ಟೆಯಲ್ಲಿ ಕುಳಿತು ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಗುವೊಂದು ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿತ್ತು. ಆದ್ದರಿಂದ ಹೆತ್ತವರು ಮಕ್ಕಳ ಪರೀಕ್ಷಾ ತಯಾರಿಯ ಸಂದರ್ಭದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಪರೀಕ್ಷಾ ಸಿದ್ಧತೆಗಾಗಿ ಅವರು ಆಯ್ದುಕೊಳ್ಳುವ ಸ್ಥಳ, ಅವರ ಓಡಾಟ, ಹಾವ-ಭಾವಗಳ ಮೇಲೆ ಕಣ್ಣಿಟ್ಟಿರಬೇಕು. ಅಪಾಯಕ್ಕೆ ಅವಕಾಶವಾಗಬಲ್ಲ ಪರಿಸರವನ್ನು ಸಿದ್ಧತೆಗೆ ಆಯ್ದುಕೊಳ್ಳದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು.
 ಮಕ್ಕಳು ಸಾಮಾನ್ಯವಾಗಿ ಮಾಧ್ಯಮಗಳ ಮುಖಪುಟದಲ್ಲಿ ಬರುವುದು ಒಂದೋ ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಅಥವಾ ಪರೀಕ್ಷೆಯ ನಂತರ. ಇವೆರಡೂ ಒತ್ತಡದ ಸಂದರ್ಭಗಳು. ಪರೀಕ್ಷೆಯ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದ ಮಗು ಕೆಲವೊಮ್ಮೆ ಆ ಬಳಿಕದ ಫಲಿತಾಂಶದ ಒತ್ತಡವನ್ನು ಎದುರಿಸುವುದರಲ್ಲಿ ವಿಫಲವಾಗುವುದಿದೆ. ಮಾಧ್ಯಮಗಳಂತೂ ಅಂಥ ಸಾವುಗಳನ್ನು ಮುಖಪುಟದಲ್ಲಿಟ್ಟು ಹಿಂದಿನ ವರ್ಷಕ್ಕೂ ಆ ವರ್ಷಕ್ಕೂ ಆತ್ಮಹತ್ಯೆಯ ಅಂಕಿಸಂಖ್ಯೆಗಳಲ್ಲಿ ಎಷ್ಟು ವ್ಯತ್ಯಾಸಗಳಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತವೆ. ರಾಜಕಾರಣಿಗಳು ಹೇಳಿಕೆಗಳನ್ನು ಕೊಡುವುದರಲ್ಲಿ ಬ್ಯುಸಿಯಾಗುತ್ತಾರೆ. ಒಂದು ನಿರ್ದಿಷ್ಟ ಅವಧಿಯೊಳಗೆ ಕ್ಷಿಪ್ರವಾಗಿ ನಡೆಯುವ ಈ ಎಲ್ಲ ಬೆಳವಣಿಗೆಗಳ ಬಳಿಕ ಎಲ್ಲವೂ ತಣ್ಣಗಾಗುತ್ತದೆ. ದುರಂತ ಏನೆಂದರೆ, ಮಕ್ಕಳು ನಮ್ಮ ಚರ್ಚೆಯ ವ್ಯಾಪ್ತಿಗೆ ಬರಬೇಕೆಂದರೆ ಅವರು ಸಾಯಲೇಬೇಕು ಎಂಬ ಅಲಿಖಿತ ನಿಯಮವೊಂದನ್ನು ನಾವೆಲ್ಲ ಮಾಡಿಟ್ಟುಕೊಂಡಿರುವಂತಿದೆ. ಆದ್ದರಿಂದಲೇ, ಮಕ್ಕಳ ಬಗ್ಗೆ, ಅವರ ಮೇಲಿನ ಒತ್ತಡದ ಕುರಿತು, ಸಮಾಜ ಅವರ ಮೇಲೆ ಇರಿಸುವ ಅಸಮರ್ಪಕ ನಿರೀಕ್ಷೆಗಳ ಕುರಿತು.. ಚರ್ಚಿಸುವುದಕ್ಕೆ ನಮ್ಮ ಪತ್ರಿಕೆಗಳು ಮತ್ತು ಚಾನೆಲ್‍ಗಳು ತಮ್ಮ ಪ್ರೈಮ್ ಟೈಮ್‍ಗಳನ್ನೋ ಪೇಜ್‍ಗಳನ್ನೋ ವಿೂಸಲಿಡುವುದೇ ಇಲ್ಲ. ಮಗು ಕಲಿಯುತ್ತದೆ, ಪರೀಕ್ಷೆ ಬರೆಯುತ್ತದೆ, ಮುಂದಿನ ವ್ಯಾಸಂಗಕ್ಕೆ ಸೇರಿಕೊಳ್ಳುತ್ತದೆ.. ಎಂಬಂತಹ ಉಡಾಫೆಯ ವಾತಾವರಣವೊಂದು ಪ್ರೌಢರ ಜಗತ್ತಿನಲ್ಲಿದೆ. ಈ ಬಗೆಯ ಉಡಾಫೆಯೇ ಇಂದು ನಮ್ಮ ನಡುವಿನ ಮಕ್ಕಳು ಕಳೆದು ಹೋಗುವುದಕ್ಕೆ ಕಾರಣವಾಗುತ್ತಿದೆ.
 ನಿಜವಾಗಿ, ಇವತ್ತಿನ ಸಾಮಾಜಿಕ ವಾತಾವರಣ ಎಷ್ಟು ಪೈಪೋಟಿಯಿಂದ ಕೂಡಿದೆಯೆಂದರೆ, ಮಗುವೊಂದು ನಿರಾಳವಾಗಿ ಉಸಿರಾಡುವಂತಹ ವಾತಾವರಣವೇ ಇಲ್ಲ. ಪ್ರಕೃತಿಯೊಂದಿಗೆ ಆಡಿ, ಅನುಭವಿಸಿ ಓದುವ ವಾತಾವರಣವೂ ಇಲ್ಲ. ಲೈಂಗಿಕ ದೌರ್ಜನ್ಯದಿಂದ ಹಿಡಿದು ‘ಅಕ್ಷರ ದೌರ್ಜನ್ಯಗಳ' ವರೆಗೆ ವಿವಿಧ ರೀತಿಯ ದೌರ್ಜನ್ಯಗಳು ಮಕ್ಕಳನ್ನು ಇವತ್ತು ಸುತ್ತುವರಿದು ಬಿಟ್ಟಿವೆ. ಶಾಲೆಗಳು ಅಕ್ಷರಗಳನ್ನು ಉರು ಹೊಡೆವ ಯಂತ್ರಗಳನ್ನು ತಯಾರಿಸುತ್ತಿದ್ದರೆ ಮನೆಯಲ್ಲೂ ಮಕ್ಕಳಿಗೆ ಸುಖವಿಲ್ಲ. ಸಂಜೆ ಶಾಲೆಯಿಂದ ಮರಳಿದ ಮಗುವನ್ನು ಹೆತ್ತವರು ನೇರ ಟ್ಯೂಷನ್‍ಗೆ ಕಳುಹಿಸುತ್ತಾರೆ. ಅಲ್ಲಿಂದ ಮರಳಿದ ಮೇಲೆ ಪುನಃ ಓದುವ ಶಿಕ್ಷೆ. ಮಗುವಂತೂ ‘ಓದು, ಓದು ಮತ್ತೂ ಓದು..' ಎಂಬ ಒತ್ತಡದ ಕುಲುಮೆಯಲ್ಲಿ ಬೇಯುತ್ತಾ ಬೆಳೆಯುತ್ತಿರುತ್ತದೆ. ಹೀಗೆ ಓದಿಸದಿದ್ದರೆ ಮುಂದೆ ಸ್ಪರ್ಧೆಯನ್ನು ಎದುರಿಸುವುದು ಹೇಗೆ ಎಂಬ ಭೀತಿ ಹೆತ್ತವರದ್ದು. ಇಂಥ ಸ್ಥಿತಿಯಲ್ಲಿ, ಮಗುವಿನ ಮುಂದೆ ಹೆಚ್ಚು ಆಯ್ಕೆಗಳಿರುವುದಿಲ್ಲ. ಆಡುವ ಹಾಗೂ ಟಿ.ವಿ. ವೀಕ್ಷಿಸುವ ಆಸೆಗಳನ್ನೆಲ್ಲ ಹೆತ್ತವರು ಮತ್ತು ಶಿಕ್ಷಕರ ಮರ್ಜಿಗೆ ಬಿಟ್ಟುಕೊಡಬೇಕಾಗುತ್ತದೆ. ನಿಜವಾಗಿ, ಇದೂ ಒಂದು ರೀತಿಯ ಕ್ರೌರ್ಯವೇ. ಮಗುವಿಗೆ ಮಗುವಿನದ್ದೇ ಆದ ಒಂದು ಲೋಕವಿದೆ. ಅಲ್ಲಿ ಸ್ಪರ್ಧೆ, ಅಸೂಯೆ, ಒತ್ತಡ, ಭೀತಿಗಳೇನೂ ಇಲ್ಲ. ಇತರ ಮಕ್ಕಳೊಂದಿಗೆ ಸ್ವಚ್ಛಂದವಾಗಿ ಬೆಳೆಯಲು ಮಕ್ಕಳು ಇಷ್ಟಪಡುತ್ತವೆ. ಆದರೆ ಹೆತ್ತವರು ಮತ್ತು ಸಮಾಜ ಇಂಥ ಮಕ್ಕಳ ಮೇಲೆ ತಮ್ಮ ಬಯಕೆಗಳನ್ನು ಹೇರಿಬಿಡುತ್ತವೆ. ತಾವು ಏನಾಗಬೇಕೆಂದು ಬಯಸಿವೆಯೋ ಅದಾಗುವಂತೆ ಮಕ್ಕಳನ್ನು ಅವು ಬಲವಂತಪಡಿಸುತ್ತವೆ. ಒಂದು ರೀತಿಯಲ್ಲಿ, ಮಕ್ಕಳು ಅನುಭವಿಸುವ ಒತ್ತಡಕ್ಕೆ ಮಕ್ಕಳು ಕಾರಣವಲ್ಲ. ಹೆತ್ತವರು ಮತ್ತು ಶಿಕ್ಷಕರೇ ಅದಕ್ಕೆ ಕಾರಣವಾಗಿದ್ದಾರೆ. ಅವರು ತಮ್ಮ ಉದ್ದೇಶಕ್ಕಾಗಿ ಮಕ್ಕಳನ್ನು ಸಿದ್ಧಪಡಿಸುವಾಗ ಉಂಟಾಗುವ ಘರ್ಷಣೆಯೇ ಈ ಒತ್ತಡ. ಆದರೆ, ಬುದ್ಧಿವಂತರಾದ ನಾವು ಈ ಸತ್ಯವನ್ನು ಅಡಗಿಸಿಟ್ಟು ಮಕ್ಕಳನ್ನೇ ಆ ಒತ್ತಡಕ್ಕೆ ಹೊಣೆಗಾರರನ್ನಾಗಿ ಮಾಡುತ್ತೇವೆ. ಓದಿನ ನಿರ್ಲಕ್ಷ್ಯವನ್ನು ಅದಕ್ಕೆ ಕಾರಣವಾಗಿ ಮುಂದಿಡುತ್ತೇವೆ. ಕೊನೆಗೆ ಮಗುವೊಂದು ಈ ಎಲ್ಲ ಒತ್ತಡದಿಂದಾಗಿ ಬಾಡಿ ಹೋದರೆ ವ್ಯವಸ್ಥೆಯನ್ನೋ ಇನ್ನಾರನ್ನೋ ತಪ್ಪಿತಸ್ಥರನ್ನಾಗಿಸಿ ತಪ್ಪಿಸಿಕೊಳ್ಳುತ್ತೇವೆ.  
    ಮಗುವೊಂದು ಈ ಸಮಾಜದಲ್ಲಿ ಗೌರವದಿಂದ ಬಾಳುವುದಕ್ಕೆ ಪರೀಕ್ಷೆಯ ಫಲಿತಾಂಶವೊಂದೇ ಮಾನದಂಡವಲ್ಲ. ಮಗುವಿನ ಬುದ್ಧಿವಂತಿಕೆಯನ್ನು ಅಳೆಯುವುದಕ್ಕೆ ಅದು ಅಂತಿಮ ಆಧಾರವೂ ಅಲ್ಲ. ಮಗು ಓದಲಿ, ಪರೀಕ್ಷೆ ಬರೆಯಲಿ. ಅದರ ಜೊತೆಗೇ ಆಡುವ, ಟಿ.ವಿ. ವೀಕ್ಷಿಸುವ ಮತ್ತಿತರ ಹವ್ಯಾಸಗಳಲ್ಲೂ ತೊಡಗಿಸಿಕೊಳ್ಳಲಿ. ಓದು, ಪರೀಕ್ಷೆಗಳು ಅವರ ನಿರ್ಮಲ ಮನಸ್ಸಿನ ಮೇಲೆ ಗಾಯ ಮಾಡದಿರಲಿ. ಉಳ್ಳಾಲದಲ್ಲಿ ನೀರು ಪಾಲಾದ ಆದಿತ್ಯ ನಾಯಕ್, ಚಿರಾಗ್ ಬಂಗೇರ ಎಂಬ ವಿದ್ಯಾರ್ಥಿಗಳಿಗೆ ಸಂತಾಪ ವ್ಯಕ್ತಪಡಿಸುತ್ತಲೇ ಇಂಥ ಇತರ ಮಕ್ಕಳನ್ನು ಉಳಿಸುವುದಕ್ಕಾಗಿ ಒತ್ತಡ ರಹಿತ ಪರಿಸರವೊಂದನ್ನು ನಿರ್ಮಿಸುವ ಪ್ರತಿಜ್ಞೆಯನ್ನು ನಾವೆಲ್ಲ ಕೈಗೊಳ್ಳಬೇಕಾಗಿದೆ.

Monday 2 March 2015

ಮಸೀಹಳ ಫೇಸ್‍ಬುಕ್ ಪೇಜ್ ಮತ್ತು ಪಾಶ್ಚಾತ್ಯರ ಇಬ್ಬಂದಿತನ

    ಕಳೆದವಾರ ಮಾಧ್ಯಮಗಳಲ್ಲಿ ಎರಡು ಗಮನಾರ್ಹ ಸುದ್ದಿಗಳು ಒಂದೇ ದಿನ ಪ್ರಕಟವಾದುವು. ‘ಶಿರವಸ್ತ್ರ ಕಳಚಿ ಪೋಟೋ ಕಳುಹಿಸಿ' ಎಂಬ ಫೇಸ್‍ಬುಕ್ ಪುಟವನ್ನು ತೆರೆದು ಪ್ರಚಾರದಲ್ಲಿರುವ ಇರಾನ್ ಮೂಲದ  ಪತ್ರಕರ್ತೆ ಮಸೀಹ ಅಲಿ ನೆಜಾದ್‍ಗೆ ಮಾನವ ಹಕ್ಕು ಪ್ರಶಸ್ತಿ ಸಿಕ್ಕಿರುವುದು ಒಂದಾದರೆ, ಇನ್ನೊಂದು-  ಬ್ರಿಟನ್ನಿನಲ್ಲಿ ‘ಬಿಬಿಸಿ ರೇಡಿಯೋ 4' ನಡೆಸಿರುವ ಮುಸ್ಲಿಮ್ ಸವಿೂಕ್ಷೆ. ಹೊರ ನೋಟಕ್ಕೆ ಇವೆರಡೂ ಪರಸ್ಪರ ಸಂಬಂಧವಿಲ್ಲದ ಒಂಟಿ ಸುದ್ದಿಗಳಂತೆ ಕಾಣಿಸಬಹುದು. ಆಯ್ಕೆ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಮಸೀಹ ಅಲಿ ನೆಜಾದ್‍ಗೂ ಅಭದ್ರತೆಯನ್ನು ತೋಡಿಕೊಂಡ ಬ್ರಿಟನ್ನಿನ ಮುಸ್ಲಿಮರಿಗೂ ನಡುವೆ ಏನು ಸಂಬಂಧ ಎಂದು ಪ್ರಶ್ನಿಸಬಹುದು. ಆದರೆ, ಇವೆರಡನ್ನೂ ಮುಖಾಮುಖಿಗೊಳಿಸಿ ವಿಶ್ಲೇಷಿಸತೊಡಗಿದರೆ ಪ್ರಶ್ನೆಗಳು ಸಹಜವಾಗಿ ಕರಗುತ್ತಾ ಹೋಗುತ್ತವೆ. ಇವೆರಡೂ ಆಳದಲ್ಲಿ ಎಲ್ಲೋ ಪರಸ್ಪರ ಸಂಧಿಸುವಂತೆ ಕಾಣಿಸುತ್ತದೆ. ಹಾಗಂತ, ಮಸೀಹಳ ಫೇಸ್‍ಬುಕ್ ಪುಟವು ಪ್ರಶ್ನಾರ್ಹ ಎಂದಲ್ಲ. ಇರಾನ್‍ನಲ್ಲಿರುವ ಶಿರವಸ್ತ್ರ ನಿಯಮವನ್ನು ಪ್ರಶ್ನಿಸುವುದಕ್ಕಾಗಿ ಆಕೆ ಕಳೆದ ವರ್ಷ ‘ಶಿರವಸ್ತ್ರ ಕಳಚಿದ ಪೋಟೋವನ್ನು ಕಳುಹಿಸಿ ಕೊಡಿ' ಎಂಬ ಅಭಿಯಾನವನ್ನು ಆರಂಭಿಸಿದ್ದಳು. ಶಿರವಸ್ತ್ರವನ್ನು ಬಲವಂತದಿಂದ ಹೇರಬೇಡಿ ಅನ್ನುವ ಒತ್ತಾಯ ಆಕೆಯದು. ಕಳೆದ ಮೇ ತಿಂಗಳಲ್ಲಿ ಲಂಡನ್ನಿನ ಪ್ರಸಿದ್ಧ ಗಾರ್ಡಿಯನ್ ಪತ್ರಿಕೆಯು ಈ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಕಳೆದವಾರ ಜಿನೇವಾದಲ್ಲಿ ಸೇರಿದ ಮಾನವ ಹಕ್ಕುಗಳಿಗಾಗಿರುವ ಸರಕಾರೇತರ 20 ಸಂಘಟನೆಗಳ ಗುಂಪು ಮಸೀಹಳಿಗೆ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿತು. ಇದೇ ವೇಳೆ, ಬ್ರಿಟನ್ನಿನ ಮುಸ್ಲಿಮರನ್ನು ಗುರಿ ಮಾಡಿ ಬಿಬಿಸಿಯು ಒಂದು ಸವಿೂಕ್ಷೆಯನ್ನು ಕೈಗೊಂಡಿತ್ತು. ಬ್ರಿಟನ್‍ನ ಮುಸ್ಲಿಮರ ಮನದಿಂಗಿತವನ್ನು ಅರಿತುಕೊಳ್ಳುವ ಉದ್ದೇಶದಿಂದ ನಡೆಸಲಾದ ಈ ಸವಿೂಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಅಭದ್ರತೆಯ ಭಾವನೆಯನ್ನು ತೋಡಿಕೊಂಡರು. ಅದರಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚೇ ಈ ಭಾವನೆಯನ್ನು ವ್ಯಕ್ತಪಡಿಸಿದರು. ಬ್ರಿಟನ್‍ನಲ್ಲಿ ತಮ್ಮ ವಿಶ್ವಾಸದಂತೆ ಬದುಕುವುದಕ್ಕೆ ತಡೆ ಒಡ್ಡಲಾಗುತ್ತಿದೆ ಎಂಬ ನೋವನ್ನೂ ತೋಡಿಕೊಂಡರು.
 ಸಿರಿಯಾದಲ್ಲಿ ಸಕ್ರಿಯವಾಗಿರುವ ಐಸಿಸ್‍ನ (ಇಸ್ಲಾಮಿಕ್ ಸ್ಟೇಟ್ಸ್) ಪ್ರತಿ ಚಟುವಟಿಕೆಯೂ ಇವತ್ತು ಬ್ರಿಟನ್‍ನಲ್ಲಿ ದೊಡ್ಡ ಸದ್ದಿನೊಂದಿಗೆ ಸುದ್ದಿಯಾಗುತ್ತಿದೆ. ಬ್ರಿಟನ್ನಿನ ಮೂವರು ಕಾಲೇಜು ತರುಣಿಯರು ಐಸಿಸ್ ಸೇರುವುದಕ್ಕಾಗಿ ಸಿರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬೊಂದು ವದಂತಿ ಇತ್ತೀಚೆಗೆ ಹರಡಿಕೊಂಡಿತ್ತು. ಐಸಿಸ್ ಈಗಾಗಲೇ ಬಿಡುಗಡೆಗೊಳಿಸಿರುವ ಕತ್ತು ಸೀಳುವ ವೀಡಿಯೋಗಳಲ್ಲಿ ಕಾಣಿಸಿಕೊಂಡಿರುವವ (ಜಿಹಾದಿ ಜಾನ್) ಬ್ರಿಟನ್ ಪ್ರಜೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಪಾತಕ ಕೃತ್ಯಗಳಿಗೆ ಮುಸ್ಲಿಮರು ಹೊಣೆ ಅಲ್ಲದೇ ಇರಬಹುದು. ಆದರೆ ಫ್ರಾನ್ಸ್ ನಲ್ಲಿರುವಂತೆ ತೀವ್ರ ಬಲಪಂಥೀಯರು ಬ್ರಿಟನ್‍ನಲ್ಲೂ ಅಸಹನೆಯ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಬಿಬಿಸಿ ಸವಿೂಕ್ಷೆ ಕೈಗೊಳ್ಳುವುದಕ್ಕೆ ಇದ್ದ ಪ್ರಮುಖ ಕಾರಣವೂ ಇದುವೇ. ಇನ್ನೊಂದು ಕಡೆ, ಮಸೀಹರಂತಹವರು ಮಾನವ ಹಕ್ಕುಗಳ ಹೆಸರಲ್ಲೋ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲೋ ಪಾಶ್ಚಾತ್ಯರ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ‘ಇಸ್ಲಾಮಿನ ವಿರುದ್ಧ ನಾವು ಯುದ್ಧ ಮಾಡುತ್ತಿಲ್ಲ’ ಎಂದು ವಾರಗಳ ಹಿಂದೆ ಅಮೇರಿಕದ ಅಧ್ಯಕ್ಷ ಒಬಾಮ ಹೇಳಿರುವುದೇ ಸದ್ಯದ ಮುಸ್ಲಿಮ್ ಜಗತ್ತಿನ ಭಾವನೆಗಳೇನು ಎಂಬುದಕ್ಕೆ ಉತ್ತಮ ಉದಾಹರಣೆ. ಅಮೇರಿಕವು ಆರಂಭಿಸಿರುವ ಭಯೋತ್ಪಾದನಾ ವಿರೋಧಿ ಹೋರಾಟದ ಒಳಗುರಿ ಇಸ್ಲಾಮ್ ಎಂಬ ಭಾವನೆ ದೊಡ್ಡ ಮಟ್ಟದಲ್ಲಿದೆ. ಅದು ಎಷ್ಟು ತೀವ್ರವಾಗಿದೆಯೆಂದರೆ ಸ್ವತಃ ಒಬಾಮರೇ ಆ ಬಗ್ಗೆ ಸ್ಪಷ್ಟೀಕರಣ ಕೊಡಬೇಕಾಗಿ ಬಂದಿದೆ. ಇಸ್ಲಾಮಿನ ವಿರುದ್ಧ ಬಂಡಾಯ ಸಾರುವವರನ್ನು, ನಿಂದಿಸುವವರನ್ನು ಪಾಶ್ಚಾತ್ಯ ಜಗತ್ತು ಮುದ್ದಿಸುತ್ತದೆ ಎಂಬ ವಾದ ಮುಸ್ಲಿಮ್ ಜಗತ್ತಿನಲ್ಲಿದೆ. ಚಾರ್ಲಿ ಹೆಬ್ಡೋದ ನಿಂದನಾತ್ಮಕ ಕಾರ್ಟೂನುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸುವವರೇ ಹಾಲೋಕಾಸ್ಟ್(ಯಹೂದಿ ಹತ್ಯಾಕಾಂಡ)ನ ಬಗ್ಗೆ ಅನುಮಾನಿಸಿ ಹೇಳಿಕೆ ಕೊಡುವುದನ್ನೋ ಬರೆಯುವುದನ್ನೋ ಶಿಕ್ಷಾರ್ಹ ಅಪರಾಧವಾಗಿ ಕಾಣುತ್ತಾರೆ.  ಅಣ್ವಸ್ತ್ರ ಹೊಂದಬಾರದೆಂದು ಇರಾನ್ ನ ಮೇಲೆ ದಿಗ್ಬಂಧನ ಹಾಕುವವರೇ ಇಸ್ರೇಲ್‍ನ ಅಣ್ವಸ್ತ್ರಕ್ಕೆ ರಕ್ಷಣೆ ಒದಗಿಸುತ್ತಾರೆ.ಮಾನವ ಹಕ್ಕುಗಳ ಕುರಿತಂತೆ ಇತರರಿಗೆ ಭೋದಿಸುವವರೇ ಇಸ್ರೇಲನ್ನು ಸಮರ್ಥಿಸುತ್ತಾರೆ. ಅದರ ಪರವಾಗಿ ವಿಶ್ವಸಂಸ್ಥೆಯಲ್ಲಿ ವೀಟೋ ಚಲಾಯಿಸುತ್ತಾರೆ. ಇಂಥದ್ದೊಂದು ವಾತಾವರಣದಲ್ಲಿ ಮಸೀಹಳಿಗೆ ಸಂದ ಗೌರವವು ಕೆಲವೊಂದು ಅನುಮಾನಗಳನ್ನು ಸಹಜವಾಗಿಯೇ ಹುಟ್ಟು ಹಾಕುತ್ತದೆ. ಹಾಗಂತ, ಮುಸ್ಲಿಮರ ಶಿರವಸ್ತ್ರ, ಪರ್ದಾ, ಕುರ್‍ಆನ್, ಸಾಮಾಜಿಕ ನಿಯಮಗಳೆಲ್ಲ ಚರ್ಚೆಗೆ ಒಳಗಾಗಬಾರದು ಎಂದಲ್ಲ. ಮಸೀಹ ಸಹಿತ ಯಾರಿಗೂ ಆ ಕುರಿತಂತೆ ಪ್ರಶ್ನೆಗಳನ್ನೆತ್ತಬಹುದು. ಶಿರವಸ್ತ್ರ ಧಾರ್ಮಿಕ ಅಗತ್ಯವೋ ಅಥವಾ ವೈಯಕ್ತಿಕ ಆಯ್ಕೆಯೋ? ಧಾರ್ಮಿಕ ನಿಯಮಗಳನ್ನು ಎಲ್ಲಿ, ಯಾವ ವಾತಾವರಣದಲ್ಲಿ, ಎಷ್ಟರ ಮಟ್ಟಿಗೆ ಜಾರಿಗೊಳಿಸಬಹುದು? ಅದರಲ್ಲಿ ಬಲವಂತಕ್ಕೆ ಎಷ್ಟು ಅವಕಾಶವಿದೆ? ಆಯ್ಕೆಯ ಸ್ವಾತಂತ್ರ್ಯಕ್ಕೆ ಏನೇನೆಲ್ಲ ಮಿತಿಗಳಿವೆ? ಒಂದು ರಾಷ್ಟ್ರವಾಗಿ ಇರಾನ್‍ನ ಮಿತಿಗಳು ಏನೆಲ್ಲ.. ಮುಂತಾದುವುಗಳೆಲ್ಲ ಚರ್ಚೆಗೆ ಒಳಪಡುವುದು ಒಳ್ಳೆಯದೇ. ಮಸೀಹಳ ಫೇಸ್‍ಬುಕ್ ಪುಟ ಈ ಬಗೆಯ ಚರ್ಚೆಯ ಒಂದು ಭಾಗ ಎಂದೇ ವಾದಿಸುವುದಾದರೂ ಆ ವಾದ ಅಲ್ಲಿಗೇ ನಿಲ್ಲುವುದಿಲ್ಲ. ಒಂದು ವೇಳೆ, ‘ವ್ಯಾಟಿಕನ್ ನೀಡುವ ಸಂತ ಪದವಿಯನ್ನು ಪ್ರಶ್ನಿಸಿ ವೀಡಿಯೋವನ್ನು ರವಾನಿಸಿ’ ಎಂದು ಹೇಳುತ್ತಾ ಓರ್ವರು ಫೇಸ್‍ಬುಕ್ ಪೇಜ್ ತೆರೆದರೆ ಹೇಗಿರಬಹುದು? ‘ಹಾಲೋಕಾಸ್ಟನ್ನು ಅಲ್ಲಗಳೆದು ವೀಡಿಯೋ ಕಳುಹಿಸಿ' ಎಂಬ ಫೇಸ್‍ಬುಕ್ ಪೇಜ್‍ಗೆ ಇಸ್ರೇಲ್ ಸಹಿತ ಪಾಶ್ಚಾತ್ಯ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು? ಬ್ರಿಟನ್ನಿನ ರಾಣಿ ಸಂಪ್ರದಾಯವನ್ನು ಪ್ರಶ್ನಿಸುವ ಫೇಸ್‍ಬುಕ್ ಪೇಜ್‍ಗೆ ಯಾವ ಉತ್ತರ ಸಿಗಬಹುದು? ಹೀಗೆ ಮಾಡಿದವರಿಗೆಲ್ಲ ಪುರಸ್ಕಾರಗಳು ಸಿಗಬಹುದೇ ಅಥವಾ ಅತಿರೇಕ  ಎಂದು ತಿರಸ್ಕೃತಗೊಳ್ಳಬಹುದೇ? ಜರ್ಮನಿ, ಫ್ರಾನ್ಸ್ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಹಾಲೋಕಾಸ್ಟನ್ನು ಅಲ್ಲಗಳೆಯುವುದು ಶಿಕ್ಷಾರ್ಹ ಅಪರಾಧ. ಹಿಟ್ಲರ್ ಯಹೂದಿಯರನ್ನು  ಸಾಮೂಹಿಕ ಹತ್ಯೆಗೆ ಒಳಪಡಿಸಿರುವುದನ್ನು ‘ಇಲ್ಲ' ಅನ್ನಬಾರದೆಂಬ ತಾಕೀತು ಈ ಎಲ್ಲ ರಾಷ್ಟ್ರಗಳಲ್ಲಿವೆ. ಆ ಬಗ್ಗೆ ಪ್ರಶ್ನೆಗಳನ್ನೇ ಎತ್ತಬಾರದಂತೆ. ಇಲ್ಲೆಲ್ಲಾ ಏಳದ ಅಭಿವ್ಯಕ್ತಿ ಸ್ವಾತಂತ್ರ್ಯದ್ದೋ ಆಯ್ಕೆ ಸ್ವಾತಂತ್ರ್ಯದ್ದೋ ಕೂಗು ಇರಾನ್ ಮತ್ತಿತರ ರಾಷ್ಟ್ರಗಳ ಸುತ್ತ ಏಳುವುದೇಕೆ? ಶಿರವಸ್ತ್ರವು ಮಾನವ ಹಕ್ಕು ಹರಣದ ಸಂಕೇತವಾಗಿ ಫೇಸ್‍ಬುಕ್ ಪೇಜ್‍ಗೆ ವಸ್ತುವಾಗುವುದೂ ಪುರಸ್ಕಾರಕ್ಕೆ ಯೋಗ್ಯವಾಗುವುದೆಲ್ಲ ಏತಕ್ಕೆ?
 ಮಾನವ ಹಕ್ಕು ಮತ್ತು ಸ್ವಾತಂತ್ರ್ಯ ಎಂಬ ಪದಗಳು ಎಷ್ಟು ವಿಶಾಲಾರ್ಥವನ್ನು ಹೊಂದಿವೆಯೋ ಅಷ್ಟೇ ವಿಶಾಲ ಮನೋಭಾವ ಅವನ್ನು ಪ್ರತಿಪಾದಿಸುವ ಮತ್ತು ಅದಕ್ಕಾಗಿ ಪ್ರಶಸ್ತಿಗಳನ್ನು ಸ್ಥಾಪಿಸಿ ಹಂಚುವವರಲ್ಲಿವೆಯೇ ಎಂಬ ಪ್ರಶ್ನೆಯೊಂದು ಇತ್ತೀಚಿನ ವರ್ಷಗಳಲ್ಲಂತೂ ಗಂಭೀರವಾಗಿಯೇ ಎದುರಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಆಯ್ಕೆ ಸ್ವಾತಂತ್ರ್ಯ, ವೈಯಕ್ತಿಕ ಹಕ್ಕು, ವೈಚಾರಿಕ ಸ್ವಾತಂತ್ರ್ಯ ಮುಂತಾದುವುಗಳೆಲ್ಲ ಸಂದರ್ಭಕ್ಕೆ ತಕ್ಕಂತೆ ವಿರೂಪಗೊಂಡೋ ದುರುಪಯೋಗಕ್ಕೀಡಾಗಿಯೋ ಬಳಕೆಯಾಗುತ್ತಿರುವುದೇ ಹೆಚ್ಚು. ಸೆಟಾನಿಕ್ ವರ್ಸಸನ್ನು ಬರೆದ ಸಲ್ಮಾನ್ ರುಶ್ದಿಯವರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನೇಮಾಡೆಯವರ ಟೀಕೆಯನ್ನು ಸಹಿಸಲಾಗಲಿಲ್ಲ ಎಂಬುದೇ ಇದಕ್ಕಿರುವ ಇತ್ತೀಚಿನ ದೊಡ್ಡ ಪುರಾವೆ. ಪ್ರವಾದಿಯವರನ್ನು(ಸ) ನಿಂದಿಸುವ ಧಾಟಿಯಲ್ಲಿ ಕಾರ್ಟೂನನ್ನು ಪ್ರಕಟಿಸಿದ ಚಾರ್ಲಿ ಹೆಬ್ಡೋವು ಮೌರಿಸ್ ಸಿನೆ ಎಂಬ ತನ್ನ ವ್ಯಂಗ್ಯ ಚಿತ್ರಕಾರನನ್ನು ಯಹೂದಿ ವಿರೋಧಿ ಕಾರ್ಟೂನ್ ರಚಿಸಿದ್ದಕ್ಕಾಗಿ ಕೆಲಸದಿಂದಲೇ ತೆಗೆದು ಹಾಕಿದ್ದು ಇದಕ್ಕೆ ಇನ್ನೊಂದು ಪುರಾವೆ. ಇಂಥ ಇಬ್ಬಂದಿತನಗಳ ವಾತಾವರಣದಲ್ಲಿ ನಾವು ಬ್ರಿಟನ್ ಮುಸ್ಲಿಮರ ಅಭದ್ರತೆಯನ್ನೂ ಮಸೀಹಳಿಗೆ ಸಂದ ಪ್ರಶಸ್ತಿಯನ್ನೂ ಜೊತೆಗಿಟ್ಟು ನೋಡಬೇಕಾಗಿದೆ. ಮಸೀಹಳ ಫೇಸ್‍ಬುಕ್ ಪೇಜ್‍ನ ಉದ್ದೇಶ ಏನೇ ಇರಲಿ, ಆ ಬಗ್ಗೆ ಚರ್ಚೆಯಾಗುವುದನ್ನು ಸ್ವಾಗತಿಸುತ್ತಲೇ ಇಸ್ಲಾಮೊಫೋಬಿಯಾ(ಇಸ್ಲಾಮ್ ಭೀತಿ)ಯನ್ನು ಹರಡುವವರು ಮತ್ತು ಅದನ್ನು ಉತ್ಪಾದಿಸಿ ಮಾರುವವರ ಕುರಿತೂ ಚರ್ಚೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಅಂಥದ್ದೊಂದು ಫೋಬಿಯಾ ಯಾರಿಗೆ ಅಗತ್ಯವಿದೆ? ಅವರ ಉದ್ದೇಶವೇನು? ಅಲ್ ಖಾಯ್ದಾ, ಐಸಿಸ್ ಮುಂತಾದುವುಗಳೆಲ್ಲ ಯಾರ ಸೃಷ್ಟಿ, ಇವುಗಳ ಹಣಕಾಸು-ಶಸ್ತ್ರಾಸ್ತ್ರ ಮೂಲಗಳು ಎಲ್ಲಿವೆ.. ಎಲ್ಲವೂ ಚರ್ಚೆಗೆ ಒಳಪಡಲಿ. ಸಾಧ್ಯವಾಗುವುದಾದರೆ ಮಸೀಹಳೇ ಈ ಚರ್ಚೆಯನ್ನು ಪ್ರಾರಂಭಿಸಲಿ.