Wednesday 29 July 2015

ಧರ್ಮವಿಲ್ಲದ ಅಪರಾಧ ಮತ್ತು ಯಾಕೂಬ್ ಮೆಮನ್ ನ ಧರ್ಮ..

  ಜುಲೈ 24ರಂದು ಪ್ರಕಟವಾದ ಭಾರತದ ಗುಪ್ತಚರ ವಿಭಾಗದ (ರಾ) ಮಾಜಿ ಮುಖ್ಯಸ್ಥ ಬಿ. ರಾಮನ್‍ರ ಲೇಖನವು ಯಾಕೂಬ್ ಮೇಮನ್ ಗಲ್ಲು ಶಿಕ್ಷೆಯ ಕುರಿತಾದ ಚರ್ಚೆಗೆ ಹೊಸ ತಿರುವನ್ನು ಕೊಟ್ಟಿದೆ. ಅಲ್ಲದೇ, ಯಾಕೂಬ್ ಮೇಮನ್‍ಗೆ ಕ್ಷಮಾದಾನ ನೀಡಬೇಕೆಂದು ವಿನಂತಿಸಿ ನಿವೃತ್ತ ನ್ಯಾಯಾಧೀಶರುಗಳಾದ ಪಿ.ಬಿ. ಸಾವಂತ್, ಎಸ್.ಎನ್. ಭಾರ್ಗವ, ಕೆ. ಚಂದ್ರು, ಖ್ಯಾತ ಪತ್ರಕರ್ತ ಎನ್. ರಾಮ್, ಬಿಜೆಪಿ ಸಂಸದ ಶತ್ರುಘ್ನ ಸಿನ್ಹ, ಖ್ಯಾತ ನ್ಯಾಯವಾದಿಗಳಾದ ರಾಮ್ ಜೇಠ್ಮಲಾನಿ, ಇಂದಿರಾ ಜೈಸಿಂಗ್, ಸಿನಿಮಾ ರಂಗದ ಮಹೇಶ್ ಭಟ್, ನಸೀರುದ್ದೀನ್ ಶಾ.. ಮುಂತಾದವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿರುವುದು- ಈ ಚರ್ಚೆಯನ್ನು ಹಿಂದೂ-ಮುಸ್ಲಿಮ್ ಆಗಿಸುವುದರಿಂದಲೂ ತಡೆದಿದೆ. ಅಪರಾಧಕ್ಕೆ ಧರ್ಮವಿಲ್ಲ. ಅಪರಾಧಿಗಳು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ, ಆಗಬಾರದು ಕೂಡ. ಈ ಮೌಲ್ಯವನ್ನು ಆಧಾರವಾಗಿಟ್ಟುಕೊಂಡೇ ನಾವು ಯಾಕೂಬ್ ಮೇಮನ್ ಪ್ರಕರಣವನ್ನು ಚರ್ಚೆಗೆತ್ತಿಕೊಳ್ಳಬೇಕಾಗಿದೆ. ಮೇಮನ್‍ನ ಅರ್ಜಿಯೊಂದನ್ನು (ಕ್ಯುರೇಟಿವ್) ಸುಪ್ರೀಮ್ ಕೋರ್ಟ್ ಇನ್ನೂ ಇತ್ಯರ್ಥಪಡಿಸುವುದಕ್ಕಿಂತ ಮೊದಲೇ, ಜುಲೈ 30ರಂದು ಆತನನ್ನು ಗಲ್ಲಿಗೇರಿಸುವುದಾಗಿ ಮಹಾರಾಷ್ಟ್ರದ ಬಿಜೆಪಿ ಸರಕಾರವು ಘೋಷಿಸಿತು. ಈ ತುರ್ತಿನ ಉದ್ದೇಶವೇನು? ಈ ಹಿಂದಿನ ಯಾವ ಪ್ರಕರಣದಲ್ಲಾದರೂ ಗಲ್ಲಿಗೇರಿಸಲು ಇಷ್ಟೊಂದು ಅವಸರವನ್ನು ತೋರಲಾಗಿತ್ತೇ? ಅಪರಾಧಿಗೆ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೋ ಅಥವಾ ಕ್ಷಮಾದಾನ ಪಡೆಯುವುದಕ್ಕೋ ಸಕಲ ಅವಕಾಶಗಳನ್ನೂ ಮುಕ್ತವಾಗಿಡುವುದು ನ್ಯಾಯದ ಬೇಡಿಕೆ. ಮಹಾರಾಷ್ಟ್ರ ಸರಕಾರ ಈ ಮೂಲಭೂತ ಸ್ವಾತಂತ್ರ್ಯವನ್ನೇ ಯಾಕೂಬ್‍ನಿಗೆ ನಿರಾಕರಿಸುವ ರೀತಿಯಲ್ಲಿ ವರ್ತಿಸಿದ್ದೇಕೆ? ಯಾಕೂಬ್‍ನ ಗಲ್ಲನ್ನು ನ್ಯಾಯಾಲಯಕ್ಕಿಂತ ನಿರ್ದಿಷ್ಟ ವರ್ಗದ ರಾಜಕಾರಣಿಗಳು ಬಯಸುತ್ತಿದ್ದಾರೆಯೇ? ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳು ‘ಗಲ್ಲನ್ನು' ನಿರ್ಧರಿಸುವ ಹಂತಕ್ಕೆ ತಲುಪುವುದು ಯಾವುದರ ಸೂಚನೆ? ಅಷ್ಟಕ್ಕೂ, ಮೊನ್ನೆ ಜುಲೈ 24ರಂದು ರಾಮನ್‍ರ ರೀಡಿಫ್ ಡಾಟ್ ಕಾಮ್‍ನಲ್ಲಿ ಲೇಖನ ಪ್ರಕಟವಾಗುವವರೆಗೆ ‘ಯಾಕೂಬ್‍ನನ್ನು ಮುಂಬೈಯ ರೈಲ್ವೆ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದರೆಂದೇ..’ ನಂಬಲಾಗಿತ್ತು. ಆತನ ವಿಚಾರಣೆಯ ಸಂದರ್ಭದಲ್ಲಿ, ಗಲ್ಲು ಶಿಕ್ಷೆಯನ್ನು ವಿಧಿಸುವಾಗ ಮತ್ತು ರಾಷ್ಟ್ರಪತಿಯವರು ಆತನ ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗಲೂ ಇದನ್ನೇ ಸತ್ಯವೆಂದು ನಂಬಲಾಗಿತ್ತು. ಆದರೆ ಆತ ಪಾಕಿಸ್ತಾನದಿಂದ ಬಂದು ಭಾರತದ ಅಧಿಕಾರಿಗಳ ಮುಂದೆ ಶರಣಾಗತನಾಗಿದ್ದ ಎಂದು ಆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ರಾಮನ್‍ರು ಇದೀಗ ಬಹಿರಂಗಪಡಿಸಿದ್ದಾರೆ. ಈ ಮೂಲಕ, ಕಳೆದ 21 ವರ್ಷಗಳಿಂದ ನಾವು ಸತ್ಯವೆಂದು ನಂಬಿಕೊಂಡಿದ್ದ ವಿಷಯವೊಂದು ಸುಳ್ಳು ಎಂಬುದು ಇದೀಗ ಗೊತ್ತಾಗಿದೆ. ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಪೊಲೀಸರ ಈ ಸುಳ್ಳನ್ನೂ ನ್ಯಾಯಾಲಯ ಪುರಾವೆಯಾಗಿ ಪರಿಗಣಿಸಿರಬಹುದಲ್ಲವೇ? ಅಲ್ಲದೇ, ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯವು 100 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. ಅದರಲ್ಲಿ ಯಾಕೂಬ್ ಮೇಮನ್ ಸೇರಿದಂತೆ 11 ಮಂದಿಗೆ ಮರಣ ದಂಡನೆಯನ್ನು ವಿಧಿಸಿತ್ತು. ಈ 11 ಮಂದಿಯಲ್ಲಿ ಯಾಕೂಬ್ ಹೊರತಾದ 10 ಮಂದಿಯ ಮೇಲೂ ಗುರುತರ ಆರೋಪಿಗಳಿದ್ದುವು. ಬಾಂಬ್ ಇರಿಸಿದ ಮತ್ತು ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರೆಂದು ಅವರನ್ನು ಗುರುತಿಸಲಾಗಿತ್ತು. ಅವರಲ್ಲಿ ಕೆಲವರು ಪಾಕಿಸ್ತಾನಕ್ಕೆ ತೆರಳಿ ಬಾಂಬ್ ಸ್ಫೋಟಿಸುವ ಬಗ್ಗೆ ತರಬೇತಿ ಪಡೆದವರೆಂದು ನ್ಯಾಯಾಲಯವೇ ಹೇಳಿತ್ತು. ಆದರೆ, ಯಾಕೂಬ್‍ನ ಮೇಲೆ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪವಿತ್ತೇ ಹೊರತು ನೇರವಾಗಿ ಭಾಗಿಯಾಗಿರುವ ಯಾವ ಆರೋಪವೂ ಇರಲಿಲ್ಲ. ಆದರೂ ಯಾಕೂಬ್‍ನ ಮರಣ ದಂಡನೆಯನ್ನು ಖಾಯಂಗೊಳಿಸಿದ ನ್ಯಾಯಾಲಯ ಉಳಿದ 10 ಮಂದಿಯ ಮರಣ ದಂಡನೆಯನ್ನು ಜೀವಾವಧಿ ಸಹಿತ ವಿವಿಧ ಶಿಕ್ಷೆಗಳಾಗಿ ತಗ್ಗಿಸಿತ್ತು. ಹಾಗಂತ, ಇಲ್ಲಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತಿಲ್ಲ. ಅದನ್ನು ಗೌರವಿಸುತ್ತಲೇ ಯಾಕೂಬ್‍ನ ಮರಣದಂಡನೆಯಲ್ಲಿ ಆತ ಟೈಗರ್ ಮೇಮನ್‍ನ ಸಹೋದರ ಎಂಬ ಅಂಶವು ಪರಿಣಾಮವನ್ನು ಬೀರಿರಬಹುದೇ ಅನ್ನುವ ಅನುಮಾನವೂ ಮೂಡುತ್ತದೆ. ‘ಟೈಗರ್ ಮೇಮನ್ ಮಾಡಿದ ಅಪರಾಧಕ್ಕೆ ತನ್ನನ್ನು ಗಲ್ಲಿಗೆ ಕೊಡಲಾಗುತ್ತಿದೆ’ ಎಂಬ ಭಾವವೊಂದು ಯಾಕೂಬ್ ಸಹಿತ ಸುಪ್ರೀಮ್ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜುರಂತಹವರಲ್ಲೂ ಇದೆ. ನಿಜವಾಗಿ, ಮುಂಬೈ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸಬಲ್ಲ ಏಕೈಕ ಸಾಕ್ಷ್ಯವೇ ಯಾಕೂಬ್ ಮೇಮನ್. ಆತ ಆ ಇಡೀ ಪ್ರಕರಣವನ್ನು ತನಿಖಾಧಿಕಾರಿಗಳ ಮುಂದೆ ವಿವರಿಸಿದ್ದ. ಆ ಸ್ಫೋಟದಲ್ಲಿ ಪಾಕ್ ಯಾವೆಲ್ಲ ನೆರವನ್ನು ನೀಡಿತ್ತು ಎಂಬುದನ್ನೂ ವಿವರಿಸಿದ್ದ. ಅಲ್ಲದೇ, ತನ್ನ ಕುಟುಂಬದ 8 ಮಂದಿ ಸದಸ್ಯರು ಪಾಕ್‍ನಿಂದ ಭಾರತಕ್ಕೆ ಬರುವಂತೆ ನೋಡಿಕೊಂಡಿದ್ದ. ಇವತ್ತು ಯಾಕೂಬ್‍ನನ್ನು ಗಲ್ಲಿಗೇರಿಸಿದುದರಿಂದ ಅತ್ಯಂತ ಸಂತಸಪಡುವವರಲ್ಲಿ ಪಾಕಿಸ್ತಾನವೂ ಒಂದಾಗಬಹುದು. ಯಾಕೆಂದರೆ, ಮುಂಬೈ ಸ್ಫೋಟದಲ್ಲಿ ಪಾಕ್ ಪಾತ್ರವನ್ನು ಸಾಬೀತುಪಡಿಸುವ ಸಾಕ್ಷ್ಯವನ್ನು ಭಾರತ ಈ ಮೂಲಕ ಶಾಶ್ವತವಾಗಿ ಕಳೆದುಕೊಂಡಿತು.
 ಯಾಕೂಬ್ ಮೇಮನ್‍ನು ಜೈಲಿನಲ್ಲಿ ಪವಿತ್ರ ಕುರ್‍ಆನನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದ, ಆತನಿಗೆ ಮರಣದಂಡನೆ ವಿಧಿಸದಂತೆ ಒತ್ತಾಯಿಸಿ ಆತನಿರುವ ನಾಗ್ಪುರ ಜೈಲಿನ ಇತರ ಕೈದಿಗಳು ಒಂದು ದಿನದ ಉಪವಾಸ ಆಚರಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು, ಜೈಲಿನಲ್ಲಿ ಆತನ ನಡವಳಿಕೆ ಅತ್ಯುತ್ತಮವಾಗಿತ್ತು, ಕಳೆದ ವರ್ಷ ನಕ್ಸಲೀಯ ನಂಟಿನ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಉಪನ್ಯಾಸಕ ಸಾಯಿಬಾಬರಿಗೆ ಆತ ಉರ್ದು ಕಲಿಸಿದ್ದ.. ಮುಂತಾದುವುಗಳೆಲ್ಲ ಯಾಕೂಬ್‍ನನ್ನು ನಿರಪರಾಧಿಯೆಂದು ಸಾಬೀತುಪಡಿಸುವುದಿಲ್ಲ, ನಿಜ. ಆದರೂ ಯಾಕೂಬ್ ಮೇಮನನ್ನು ಗಲ್ಲಿಗೇರಿಸಲು ನಮ್ಮ ವ್ಯವಸ್ಥೆ ತೋರುವ ಅವಸರವನ್ನು ನೋಡುವಾಗ ಹೀಗೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಯಾಕೂಬ್ ಶರಣಾಗತನಾದದ್ದು 1994ರಲ್ಲಿ. ಆದರೆ ಇದಕ್ಕಿಂತ 5 ವರ್ಷಗಳ ಮೊದಲೇ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಬಿಯಂತ್ ಸಿಂಗ್‍ರನ್ನು ಕೊಲ್ಲಲಾಗಿದೆ. ಪಂಜಾಬ್‍ನ ಖಾಲಿಸ್ತಾನ್ ಹೋರಾಟವೂ ತುಂಬಾ ಹಳೆಯದು. ಆದರೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ನಮ್ಮ ವ್ಯವಸ್ಥೆ ಈವರೆಗೂ ಜಾರಿಗೊಳಿಸಿಲ್ಲ. ರಾಷ್ಟ್ರಪತಿಯವರಿಂದ ಕ್ಷಮಾದಾನದ ಅರ್ಜಿಯು ತಿರಸ್ಕರಿಸಲ್ಪಟ್ಟ ಬಳಿಕವೂ ಅವರ ಸಹಿತ ಸುಮಾರು 25 ಮಂದಿ ಕೈದಿಗಳು ಇನ್ನೂ ಜೀವಂತವಾಗಿಯೇ ಇದ್ದಾರೆ. ಹೀಗಿರುವಾಗ ಸರದಿಯನ್ನು ತಪ್ಪಿಸಿ ಹಿಂದಿನವರನ್ನು  ಹಾಗೆಯೇ ಉಳಿಸಿಕೊಂಡು ಈತನನ್ನು  ಗಲ್ಲಿಗೆ ಕೊಡುವ ಆಸಕ್ತಿಯನ್ನು ಮಹಾರಾಷ್ಟ್ರದ ಸರಕಾರ ತೋರಲು ಏನು ಕಾರಣ? ಇತರ ಪ್ರಕರಣಗಳಲ್ಲಿ ಇಲ್ಲದ ಅವಸರವೊಂದು ಈ ಪ್ರಕರಣದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡಿರುವುದೇಕೆ? ಗಲ್ಲಿಗೇರಿಸುವುದನ್ನು ತಡ ಮಾಡಿದರೆ ಯಾಕೂಬ್‍ನಿಗೆ ಮುಂದೊಂದು ದಿನ ಕ್ಷಮಾದಾನ ಸಿಗಬಹುದೆಂಬ ಲೆಕ್ಕಾಚಾರವೊಂದು ಇದರ ಹಿಂದಿರಬಹುದೇ? ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಈ ಗಲ್ಲು ಪ್ರಕರಣದಲ್ಲಿ ಪಾತ್ರ ವಹಿಸಿವೆಯೇ? ಅಪರಾಧಿಗಳಿಗೆ ಧರ್ಮವಿಲ್ಲ ಎಂದು ಎಷ್ಟೇ ವಾದಿಸಿದರೂ ಮತ್ತು ಅಪರಾಧಕ್ಕೆ ಧರ್ಮವನ್ನು ಜೋಡಿಸುವುದನ್ನು ನಾವೆಷ್ಟೇ ಬಲವಾಗಿ ಖಂಡಿಸಿದರೂ ನಮ್ಮನ್ನಾಳುವವರ ನಡವಳಿಕೆಗಳು  ನಮ್ಮ ಅಂತರಾತ್ಮವನ್ನು ಚುಚ್ಚುತ್ತಲೇ ಇವೆ.
 ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಕೋಮುಗಲಭೆಗಳ ರೂವಾರಿಗಳು ಈ ದೇಶದಲ್ಲಿ ಈ ವರೆಗೂ ನೇಣುಗಂಭದ ಹತ್ತಿರವೂ ಸುಳಿದಿಲ್ಲ. ಗುಜರಾತ್‍ನ ನರೋಡಾ ಪಾಟಿಯಾದಲ್ಲಿ 97 ಮಂದಿಯ ಹತ್ಯೆಗೆ ನೇತೃತ್ವ ನೀಡಿದ್ದ ಮಾಯಾ ಕೊಡ್ನಾನಿಯ ಮರಣ ದಂಡನೆಯು ಜೀವಾವಧಿಯಾಗಿ ಪರಿವರ್ತನೆಯಾಗಿದೆ. ಮುಂಬೈ ಬಾಂಬ್ ಸ್ಫೋಟಕ್ಕಿಂತ ಮೊದಲು ನಡೆದ ಮುಂಬೈ ಕೋಮು ಗಲಭೆಯಲ್ಲಿ ಸಾವಿರಕ್ಕಿಂತ ಅಧಿಕ ಮಂದಿ ಸಾವಿಗೀಡಾಗಿದ್ದರು. ಈ ಗಲಭೆಯಲ್ಲಿ ಶಿವಸೇನೆ ಮತ್ತು ಬಿಜೆಪಿಯು ಪ್ರಮುಖ ಪಾತ್ರ ವಹಿಸಿದ್ದನ್ನು ಶ್ರೀ ಕೃಷ್ಣ ಆಯೋಗ ವಿವರವಾಗಿ ಹೇಳಿತ್ತು. ಆದರೆ ಶಿವಸೇನೆಯ ನಾಯಕ ಮಧುಕರ್ ಸರ್‍ಪೋತೆದಾರ್‍ರಿಗೆ ಕೆಳ ನ್ಯಾಯಾಲಯವು ಜುಜುಬಿ ಒಂದು ವರ್ಷದ ಶಿಕ್ಷೆ ಘೋಷಿಸಿದ್ದನ್ನು ಬಿಟ್ಟರೆ ಇನ್ನಾರೂ ಶಿಕ್ಷೆಯ ಹತ್ತಿರವೇ ಸುಳಿಯಲಿಲ್ಲ. ಅಲ್ಲದೇ ಮಧುಕರ್‍ರನ್ನು ಒಂದು ದಿನದ ಮಟ್ಟಿಗಾದರೂ ಜೈಲಿಗೆ ಕಳುಹಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ಅವರು ಮೇಲಿನ ಕೋರ್ಟಿಗೆ ಹೋದರು. ತೀರ್ಪು ಬರುವುದಕ್ಕಿಂತ ಮೊದಲೇ ಅವರು ಮೃತಪಟ್ಟರು. ಇದರ ಜೊತೆಗೇ, ಮಾಲೆಗಾಂವ್, ಸಮ್ಜೋತಾ, ಅಜ್ಮೀರ್ ಸ್ಫೋಟಗಳ ಕುರಿತಾದ ನಿಧಾನಗತಿಯ ತನಿಖೆಯನ್ನು ಇಟ್ಟು ನೋಡುವಾಗ ಯಾಕೂಬ್ ಮೇಮನ್ ಪ್ರಕರಣದಲ್ಲಿ ಸರಕಾರ ತೋರಿದ ಅವಸರವು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಯಾಕೂಬ್ ಅಪರಾಧಿಯೇ ಆಗಿರಬಹುದು. ಆದರೂ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ ಆತ ಭಾರತಕ್ಕೆ ಶರಣಾಗಿದ್ದ. ಆತನ ವಿಷಯದಲ್ಲಿ ನ್ಯಾಯಾಲಯದ ನಿಲುವು ಕಠಿಣವಾಯಿತೆಂಬ ಅಭಿಪ್ರಾಯವು ಪ್ರಮುಖ ನ್ಯಾಯತಜ್ಞರಲ್ಲೂ ಇದೆ. ಆದ್ದರಿಂದ, ಈ ಎಲ್ಲವೂ ಸಾವಧಾನವಾಗಿ ಚರ್ಚೆಗೀಡಾಗಬೇಕಿತ್ತು. ತಮ್ಮನ (ಟೈಗರ್ ಮೇಮನ್) ಕೃತ್ಯಕ್ಕೆ ಅಣ್ಣನನ್ನು ಗಲ್ಲಿಗೇರಿಸಲಾಯಿತೆಂಬ ಅಪವಾದವೊಂದು ಭಾರತೀಯ ನ್ಯಾಯಾಂಗದ ಮೇಲೆ ಹೊರಿಸದಿರುವುದಕ್ಕಾಗಿಯಾದರೂ ಈ ಪ್ರಕರಣ ಮರುಪರಿಶೀಲನೆಗೆ ಒಳಪಡಬೇಕಿತ್ತು.

No comments:

Post a Comment