Thursday 9 July 2015

ಕ್ರಿಸ್ಟಿನಾ, ರೋಹಿಣಿ, ವ್ಯಾಪಂ ಮತ್ತು ಬಿಜೆಪಿ

    ಭ್ರಷ್ಟಾಚಾರದಲ್ಲಿ ಬಿಜೆಪಿಯು ಮತ್ತೊಂದು ಕಾಂಗ್ರೆಸ್ ಆಗುವ ಎಲ್ಲ ಲಕ್ಷಣಗಳನ್ನೂ ತೋರ್ಪಡಿಸತೊಡಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಪತ್ನಿ ಸಾಧನಾ ಸಿಂಗ್, ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್‍ಸಿಂಗ್ ಮತ್ತು ಪತ್ನಿ ವೀಣಾ, ರಾಜಸ್ಥಾನ ಮುಖ್ಯಮಂತ್ರಿ ವಿಜಯ ರಾಜೇ ಸಿಂಧಿಯಾ, ಮಹಾರಾಷ್ಟ್ರದ ಇಬ್ಬರು ಮಂತ್ರಿಗಳಾದ ಪಂಕಜಾ ಮುಂಡೆ ಮತ್ತು ವಿನೋದ್ ತಾವಡೆ.. ಎಲ್ಲರ ಮೇಲೂ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಲವಾದ ಆರೋಪಗಳು ಕೇಳಿ ಬಂದಿವೆ. ಅದರಲ್ಲೂ ಮಧ್ಯಪ್ರದೇಶದ ವ್ಯಾಪಂ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್ - ವ್ಯಾಪಂ) ಹಗರಣವಂತೂ ಅತ್ಯಂತ ಭಯಾನಕವಾದುದು. ಅದರಲ್ಲಿ ರಾಜ್ಯಪಾಲ ರಾಮ್‍ನರೇಶ್ ಯಾದವ್‍ರೇ ಭಾಗಿಯಾಗಿರುವ ಅನುಮಾನವಿದೆ. 2000ದಷ್ಟು ಆರೋಪಿಗಳನ್ನು ಬಂಧಿಸಲಾಗಿದೆ. 700 ಮಂದಿ ಆರೋಪಿಗಳನ್ನು ಹುಡುಕಲಾಗುತ್ತಿದೆ. ಆರೋಪಿಗಳು ಇಲ್ಲವೇ ಪ್ರಕರಣಕ್ಕೆ ಸಾಕ್ಷಿದಾರರಾದವರಲ್ಲಿ 45 ಮಂದಿ ಈಗಾಗಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ವಿಶೇಷ ಏನೆಂದರೆ, ಹೀಗೆ ಸಾವಿಗೀಡಾದವರಲ್ಲಿ 25-30 ವರ್ಷದೊಳಗಿನವರೇ ಹೆಚ್ಚಿನವರು. ಬಹುತೇಕರ ಸಾವಿಗೆ ರಸ್ತೆ ಅಪಘಾತ ಕಾರಣ! ವೈದ್ಯಕೀಯ ಪ್ರವೇಶ ಪರೀಕ್ಷೆ, ಪೊಲೀಸ್ ನೇಮಕಾತಿ, ಶಿಕ್ಷಕರು, ಬ್ಯಾಂಕ್ ಅಧಿಕಾರಿಗಳೂ ಸೇರಿದಂತೆ ವಿವಿಧ ಸರಕಾರಿ ಹುದ್ದೆಗಳಿಗೆ ಮಾಡಲಾಗುವ ನೇಮಕಾತಿ ಪೂರ್ವ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮ ನಡೆದಿರುವ ಹಗರಣ ಇದು. ಲಂಚ ಪಡೆದು ಅನರ್ಹರನ್ನು ನೇಮಕಗೊಳಿಸಿದ ಈ ಹಗರಣದಲ್ಲಿ ಉನ್ನತ ಅಧಿಕಾರಿಗಳು ಶಾವಿೂಲಾಗಿರುವುದು ಬಹುತೇಕ ದೃಢಪಟ್ಟಿದೆ. ಸಂಘಪರಿವಾರವು ಈ ಹಗರಣದಲ್ಲಿ ಭಾಗಿಯಾಗಿದೆ ಎಂಬ ಅನುಮಾನವೂ ಬಲವಾಗಿದೆ. 2007ರಿಂದ 2013ರ ವರೆಗೆ ನಡೆದ ಈ ಅಕ್ರಮ ವ್ಯವಹಾರದಲ್ಲಿ 2 ಸಾವಿರ ಕೋಟಿ ರೂಪಾಯಿ ಕೈ ಬದಲಾಗಿದೆ ಎನ್ನಲಾಗುತ್ತಿದೆ. ನಿಜವಾಗಿ, ಕೇವಲ ಭ್ರಷ್ಟಾಚಾರ ಎಂಬ ನಾಲ್ಕಕ್ಷರಕ್ಕೆ ಸೀಮಿತಗೊಳಿಸಬೇಕಾದ ಹಗರಣವಲ್ಲ ಇದು. ಇಲ್ಲಿ ಭ್ರಷ್ಟಾಚಾರಕ್ಕಿಂತ ಭೀಕರವಾದ ಕ್ರೌರ್ಯವಿದೆ. ಮನ್‍ಮೋಹನ್ ಸಿಂಗ್ ನೇತೃತ್ವದ ಸರಕಾರದಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಕಳೆದ ಲೋಕಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿದ್ದೇ ಈ ಭ್ರಷ್ಟಾಚಾರವನ್ನು ಎತ್ತಿಕೊಂಡು. ಆದರೆ, ಭ್ರಷ್ಟಾಚಾರದಲ್ಲಿ ಬಿಜೆಪಿಗೂ ಕಾಂಗ್ರೆಸ್‍ಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಏನೆಂಬುದನ್ನು ‘ವ್ಯಾಪಂ' ಹಗರಣ ಸ್ಪಷ್ಟಪಡಿಸಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸಾಕ್ಷ್ಯ ನುಡಿದವರನ್ನು, ತನಿಖೆ ನಡೆಸುವವರನ್ನು ಅಥವಾ ಆರೋಪಿಗಳನ್ನು ಹತ್ಯೆ ನಡೆಸುವಷ್ಟು ಕಾಂಗ್ರೆಸ್ ಕ್ರೂರವಾಗಿರಲಿಲ್ಲ. ಅಷ್ಟರ ಮಟ್ಟಿಗೆ ಅದು ಸಂವಿಧಾನ ಬದ್ಧತೆಯನ್ನು ಪ್ರದರ್ಶಿಸಿತ್ತು. ತನಿಖಾ ಪ್ರಕ್ರಿಯೆಗೆ ಅದು ಇಚ್ಛಿಸಿಯೋ ಇಚ್ಛಿಸದೆಯೋ ಸಹಕರಿಸುವ ಗುಣವನ್ನು ಪ್ರದರ್ಶಿಸಿತ್ತು. ಆದರೆ ಬಿಜೆಪಿಯಲ್ಲಿ ಈ ಗುಣವೇ ಕಾಣಿಸುತ್ತಿಲ್ಲ. ಅದು ಹಗರಣವನ್ನು ಸಾಬೀತುಪಡಿಸಬಲ್ಲ ಪುರಾವೆಗಳನ್ನೆಲ್ಲ ‘ಹತ್ಯೆ’ ಮಾಡತೊಡಗಿದೆ. ಕೇವಲ ‘ವ್ಯಾಪಂ’ ಒಂದೇ ಅಲ್ಲ, ಮಾನವ ಹಕ್ಕುಗಳ ಕುರಿತಂತೆ ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ಗಾಗಿ ಸಂಶೋಧನೆ ನಡೆಸುತ್ತಿದ್ದ ಭಾರತ ಮೂಲದ ಅಮೇರಿಕನ್ ಯುವತಿ ಕ್ರಿಸ್ಟಿನಾ ಮೆಹ್ತಾರನ್ನು ಮೋದಿ ಸರಕಾರವು ಭಾರತದಿಂದ ಗುಪ್ತವಾಗಿ ಗಡೀಪಾರು ಮಾಡಿರುವುದು ಕಳೆದ ವಾರ ಬಹಿರಂಗವಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಆಕೆ ಸಂಶೋಧನೆಗೆ ಇಳಿದಿರುವುದೇ ಇದಕ್ಕೆ ಕಾರಣವೆಂದು ಕ್ರಿಸ್ಟಿನಾ ಹೇಳಿದ್ದಾರೆ. 2012ರಿಂದ ಕ್ರಿಸ್ಟಿನಾ ಭಾರತದಲ್ಲಿದ್ದರು. ಮನ್‍ಮೋಹನ್ ಸಿಂಗ್ ಸರಕಾರವು ಆಕೆಯ ಸಂಶೋಧನಾ ಚಟುವಟಿಕೆಗಳಿಗೆ ಅಡ್ಡಿಪಡಿಸಿರಲಿಲ್ಲ. ಅಲ್ಲದೇ, ಹಾಗೇ ಅಡ್ಡಿಪಡಿಸುವುದು ಸಾಂವಿಧಾನಿಕವೂ ಅಲ್ಲ. ಜಾಗತಿಕವಾಗಿ ಭಾರತಕ್ಕೆ ‘ಪ್ರಬಲ ಪ್ರಜಾತಂತ್ರ ರಾಷ್ಟ್ರ' ಎಂಬೊಂದು ಗೌರವವಿದೆ. ಇದಕ್ಕೆ ಈ ರಾಷ್ಟ್ರದಲ್ಲಿರುವ ಪ್ರಜಾಸತ್ತೆ, ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು, ವಾಕ್ ಸ್ವಾತಂತ್ರ್ಯ.. ಮುಂತಾದುವುಗಳೇ ಕಾರಣ. ಹಾಗೆಂದ ತಕ್ಷಣ, ಈ ದೇಶದಲ್ಲಿ ಇವೆಲ್ಲವೂ ಇಲ್ಲಿನ ನಾಗರಿಕರಿಗೆ ಸರಿಯಾಗಿ ಲಭ್ಯವಾಗುತ್ತಿವೆ ಎಂದಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಇಲ್ಲಿ ಸಹಜವಾಗಿಯೇ ನಡೆಯುತ್ತಿದೆ. ಅಕ್ರಮ, ಅನ್ಯಾಯ, ದೌರ್ಜನ್ಯ, ಭ್ರಷ್ಟಾಚಾರ.. ಎಲ್ಲದಕ್ಕೂ ಈ ದೇಶದಲ್ಲಿ ಜಾಗ ಇದೆ. ಆದ್ದರಿಂದಲೇ, ಈ ಕುರಿತಂತೆ ಯಾರಾದರೂ ಸಂಶೋಧನೆಗೆ ಇಳಿದರೆ ಅದನ್ನು ದೇಶದ್ರೋಹದಂತೆ ನೋಡಬೇಕಾದ ಅಗತ್ಯವೂ ಇಲ್ಲ. ಆದರೆ, ಬಿಜೆಪಿ ಇದನ್ನೂ ಸಹಿಸುತ್ತಿಲ್ಲ. ಕಾಶ್ಮೀರದಲ್ಲಾದ ಮತ್ತು ಆಗುತ್ತಿರುವ ನಾಗರಿಕ ಹಕ್ಕುಗಳ ದಮನವು ಬಹಿರಂಗಕ್ಕೆ ಬರುವುದನ್ನು ಅದು ಸಹಿಸುತ್ತಿಲ್ಲ. ಕ್ರಿಸ್ಟಿನಾಳನ್ನು ತಕ್ಷಣದಿಂದ ದೇಶ ಬಿಟ್ಟು ತೊಲಗುವಂತೆ ಆದೇಶಿಸಿದ್ದು ಮತ್ತು ಆಕೆಯ ವೀಸಾವನ್ನು ರದ್ದುಪಡಿಸಿದ್ದೇ ಅದರ ‘ವ್ಯಾಪಂ’ ಗುಣವನ್ನು ಸ್ಪಷ್ಟಪಡಿಸುತ್ತದೆ.
 ನಿಜವಾಗಿ, ಬಿಜೆಪಿ ಹೊಸದೊಂದು ಆಡಳಿತ ವಿಧಾನವನ್ನು ಪರಿಚಯಿಸುತ್ತಿರುವಂತೆ ಕಾಣಿಸುತ್ತಿದೆ. ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೃದು ಧೋರಣೆಯನ್ನು ತಾಳುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ ಎಂಬುದನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಈ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಇಂದ್ರೇಶ್ ಕುಮಾರ್, ಶ್ರೀಕಾಂತ್ ಪುರೋಹಿತ್ ಮುಂತಾದವರು ಮುಖ್ಯ ಆರೋಪಿಗಳಾಗಿದ್ದಾರೆ. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‍ಳೊಂದಿಗೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದನೆಂದು ಹೇಳಲಾದ ಸುನೀಲ್ ಜೋಶಿಯ ನಿಗೂಢ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ತಂಡವು (ಎನ್.ಐ.ಎ.) ಇದೀಗ ಮಧ್ಯಪ್ರದೇಶ ಸರಕಾರಕ್ಕೆ ವಹಿಸಿಕೊಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೆ. ಇದರ ಜೊತೆಗೇ ವ್ಯಾಪಂ ಹಗರಣದ ‘ಸರಣಿ ಸಾವು'ಗಳನ್ನು ಇಟ್ಟು ನೋಡುವಾಗ, ಭಯಾನಕ ಆಡಳಿತ ಕ್ರಮವೊಂದು ರೂಪು ತಾಳುತ್ತಿರುವಂತೆ ಕಾಣಿಸುತ್ತಿದೆ. ಮೋದಿ ಸರಕಾರವು ತನ್ನ ವಿರುದ್ಧ ಬೆರಳು ತೋರಬಹುದಾದ ಅಥವಾ ತನಗೆ ಕಳಂಕ ತಟ್ಟಬಹುದಾದ ಯಾವ ‘ಸತ್ಯಗಳನ್ನೂ’ ಸಹಿಸುತ್ತಿಲ್ಲ. ಅಂದಹಾಗೆ, ಮನ್‍ಮೋಹನ್ ಸಿಂಗ್ ಸರಕಾರದಲ್ಲಿ ಭ್ರಷ್ಟಾಚಾರಿಗಳು ಇಷ್ಟು ಪ್ರಬಲರಾಗಿರಲಿಲ್ಲ. ಕಾಮನ್‍ವೆಲ್ತ್ ಮತ್ತು 2ಜಿ ಹಗರಣಗಳಂಥ ಬೃಹತ್ ಭ್ರಷ್ಟಾಚಾರದ ಆರೋಪವನ್ನು ಎದುರಿಸಿದ ಹೊರತಾಗಿಯೂ ಅದು ನ್ಯಾಯ ಪ್ರಕ್ರಿಯೆಯನ್ನು ಗೌರವಿಸಿತ್ತು. ನಿರ್ಭಯ ಪ್ರಕರಣದಲ್ಲಿ ನಾಗರಿಕ ಸಮೂಹವೇ ಜಂತರ್ ಮಂತರ್‍ನಲ್ಲಿ ಸೇರಿದಾಗಲೂ ಸರಕಾರ ಗರಿಷ್ಠ ಸಹನೆಯನ್ನು ತೋರಿತ್ತು. ಲೋಕ್‍ಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಪ್ರತಿಭಟನೆಯಲ್ಲಿ ತೊಡಗಿದಾಗ ಆ ಚಳವಳಿಯನ್ನೇ ನಾಶ ಮಾಡುವುದಕ್ಕಾಗಿ ‘ಹಜಾರೆ ಹತ್ಯೆ'ಗೆ ಅದು ಎಂದೂ ಮುಂದಾಗಲಿಲ್ಲ. ಅಷ್ಟರ ಮಟ್ಟಿಗೆ ಪ್ರಜಾತಂತ್ರಕ್ಕೆ ತಲೆಬಾಗುವ ಗುಣವನ್ನು ಅದು ಪ್ರದರ್ಶಿಸಿತ್ತು. ನಿಜವಾಗಿ, ಅಧಿಕಾರದಲ್ಲಿರುವವರಿಗೆ ಸಾಕ್ಷ್ಯ

ರೋಹಿಣಿ ಸಾಲ್ಯಾನ್
ಗಳನ್ನು ನಾಶಪಡಿಸುವುದು ಕಷ್ಟವೇನಲ್ಲ. ಅಪಘಾತದ ಮೂಲಕವೋ ಇನ್ನಿತರ ರೂಪದಲ್ಲೋ ಹತ್ಯೆ ನಡೆಸುವುದು ತ್ರಾಸದಾಯಕವೂ ಅಲ್ಲ. ಆದರೆ ಕಾಂಗ್ರೆಸ್ ತೋರಿದ ಈ ಸೌಜನ್ಯವನ್ನೂ ಬಿಜೆಪಿ ಇವತ್ತು ತೋರಿಸುತ್ತಿಲ್ಲ. ಅದು ತನ್ನ ಮುಖ ಉಳಿಸಿಕೊಳ್ಳುವುದಕ್ಕಾಗಿ ‘ಹತ್ಯೆ', ‘ಗಡೀಪಾರು' ಮತ್ತು ಒತ್ತಡಗಳ ತಂತ್ರವನ್ನು ಪ್ರಯೋಗಿಸತೊಡಗಿದೆ. ಭ್ರಷ್ಟಾಚಾರ ಮುಕ್ತ ಭಾರತದ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು ಭ್ರಷ್ಟಾಚಾರದ ಬದಲು ಅದನ್ನು ಪ್ರಶ್ನಿಸಿದವರನ್ನೇ ‘ಭಾರತ ಮುಕ್ತ’ಗೊಳಿಸಲು ಮುಂದಾಗಿರುವಂತಿದೆ. ಇದಕ್ಕೆ ಕ್ರಿಸ್ಟಿನಾ, ವ್ಯಾಪಂ ಹತ್ಯೆಗಳು ಮತ್ತು ರೋಹಿಣಿ ಸಾಲ್ಯಾನ್ ಅತ್ಯುತ್ತಮ ಉದಾಹರಣೆ.

No comments:

Post a Comment