Thursday 26 November 2015

ಗೋಡೆಯಲ್ಲಿ ತೂಗುವ 'ಚೌಕಟ್ಟಿನೊಳಗಿನ ಚಿತ್ರ'ವಾಗಿ ಕಳೆದುಹೋಗುವುದೇ ಗೋವು?


       ರಾಜಸ್ಥಾನದ ಜೈಪುರದಲ್ಲಿ ಕಳೆದ ವಾರ ನಡೆದ ಘಟನೆಯೊಂದು ಗೋವನ್ನು ಮತ್ತೊಮ್ಮೆ ಚರ್ಚೆಗೆ ಎಳೆದು ತಂದಿದೆ. ಜೈಪುರದ ಜವಾಹರ್ ಕಲಾ ಕೇಂದ್ರದಲ್ಲಿ ಕಲಾ ಸಮ್ಮೇಳನವೊಂದು ನಡೆಯುತ್ತಿತ್ತು. ಸಿದ್ಧಾರ್ಥ ಕರಾರ್‍ವಲ್ ಎಂಬ ಕಲಾವಿದರು ರಚಿಸಿದ ಪ್ಲಾಸ್ಟಿಕ್ ಗೋವನ್ನು ಅದರಲ್ಲಿ ಪ್ರದರ್ಶಿಸಲಾಯಿತು. ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅನಾಹುತಗಳನ್ನು ಬಿಂಬಿಸುವುದು ಅದರ ಉದ್ದೇಶವಾಗಿತ್ತು. ಪ್ಲಾಸ್ಟಿಕ್ ತಿಂದು ಗೋವುಗಳು ಸಾವನ್ನಪ್ಪುತ್ತಿರುವುದೂ ಸೇರಿದಂತೆ ಪ್ರಾಣಿಗಳ ಮೇಲೆ ಪ್ಲಾಸ್ಟಿಕ್ ಬೀರುವ ಅಡ್ಡ ಪರಿಣಾಮವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ ಗುರಿಯನ್ನು ಆ ಪ್ಲಾಸ್ಟಿಕ್ ಗೋವು ಹೊಂದಿತ್ತು. ಆ ಕಾರಣದಿಂದಲೇ ಆ ಗೋವಿಗೆ ಬಲೂನ್ ಕಟ್ಟಿ ಸುಮಾರು 50 ಅಡಿ ಎತ್ತರದಲ್ಲಿ ಹಾರಿಸಲಾಯಿತು. ಇದಾದ ಅರ್ಧ ಗಂಟೆಯೊಳಗೆ ಅಲ್ಲಿಗೆ ಬಲಪಂಥೀಯ ಗುಂಪುಗಳು ಆಗಮಿಸಿದುವು. ಪ್ಲಾಸ್ಟಿಕ್ ಗೋವಿನ ಹಾರಾಟವನ್ನು ಹಿಂಪಡೆಯುವಂತೆ ಆಗ್ರಹಿಸಿದುವು. ಅವರ ಹಿಂದೆಯೇ ಅಲ್ಲಿಗೆ ಮಹೇಂದ್ರ ಗುಪ್ತಾ ಎಂಬ ಅಧಿಕಾರಿಯ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು ಹಾರಾಡುತ್ತಿದ್ದ ಪ್ಲಾಸ್ಟಿಕ್ ಗೋವನ್ನು ಬಲವಂತದಿಂದ ಇಳಿಸಿದರು. ಅದನ್ನು ಕಲೆ ಎಂದು ಒಪ್ಪಲು ಮಹೇಂದ್ರ ಗುಪ್ತಾ ನಿರಾಕರಿಸಿದರು. ಅದು ಭಾವನೆಗೆ ಧಕ್ಕೆ ತರುತ್ತದೆ ಎಂದು ವಾದಿಸಿದರು. ಅಲ್ಲದೇ, ‘ಸಂದರ್ಭ್ ಇಂಟರ್‍ನ್ಯಾಶನಲ್ ಆರ್ಟಿಸ್ಟ್ ರೆಸಿಡೆನ್ಸಿ’ಯ ಅನಿಶ್ ಅಹ್ಲುವಾಲಿಯ ಮತ್ತು ಚಿಂತನ್ ಉಪಾಧ್ಯಾಯ ಎಂಬ ಕಲಾವಿದರನ್ನು ಅಲ್ಲಿಂದ ಬಂಧಿಸಿ ಕರೆದೊಯ್ದು 3 ಗಂಟೆಗಳ ಕಾಲ ಬಂಧನದಲ್ಲಿರಿಸಿದರು. ಘಟನೆ ವಿವಾದದ ಸ್ವರೂಪವನ್ನು ಪಡೆಯುತ್ತಿರುವಂತೆಯೇ ಮುಖ್ಯಮಂತ್ರಿ ವಸುಂಧರಾ ರಾಜೇ ಕ್ಷಮೆ ಯಾಚಿಸಿದರು. ಮಹೇಂದ್ರ ಗುಪ್ತಾರನ್ನು ಹುದ್ದೆಯಿಂದ ವಜಾಗೊಳಿಸಿದರು. ನಿಜವಾಗಿ, ಈ ಪ್ರಕರಣವು ಬಾಹ್ಯನೋಟಕ್ಕೆ ಇಲ್ಲಿಗೇ ಕೊನೆಗೊಂಡಂತೆ ಕಂಡರೂ ಒಂದು ರೀತಿಯಲ್ಲಿ ಈ ಕೊನೆಯೇ ಕೆಲವಾರು ಪ್ರಶ್ನೆಗಳಿಗೆ ಆರಂಭವನ್ನೂ ಒದಗಿಸುತ್ತದೆ. ಗೋವನ್ನು ಗೌರವಿಸುವ ಶಿಷ್ಠ ಮಾದರಿಗಳು ಯಾವುವು? ಪ್ಲಾಸ್ಟಿಕ್ ತಿಂದು ಗೋವುಗಳು ಸಾಯುತ್ತಿರುವುದನ್ನು ಅಭಿವ್ಯಕ್ತಪಡಿಸುವ ಕಲೆಯಲ್ಲಿ ಪೊಲೀಸ್ ಅಧಿಕಾರಿಯೋರ್ವರು ‘ಭಾವನೆಗೆ ಧಕ್ಕೆ’ಯನ್ನು ಪತ್ತೆ ಹಚ್ಚುತ್ತಾರಾದರೆ, ಅವರ ‘ಭಾವನೆ' ರೂಪ ಪಡೆದದ್ದಾದರೂ ಎಲ್ಲಿ? ಹಾಗಂತ, ಬಲಪಂಥೀಯ ಗುಂಪುಗಳಿಗೆ ಅವುಗಳದ್ದೇ ಆದ ರಾಜಕೀಯ ಮತ್ತು ಇನ್ನಿತರ ಉದ್ದೇಶಗಳಿರಬಹುದು. ಅವನ್ನು ಈಡೇರಿಸಿಕೊಳ್ಳುವಲ್ಲಿ ಸಂದರ್ಭಾನುಸಾರ ಅವು ಪ್ರಯತ್ನಗಳನ್ನೂ ನಡೆಸುತ್ತಿರಬಹುದು. ಆದರೆ, ಇಂಥ ಗುಂಪುಗಳ ಭಾವನೆಯು ಪೊಲೀಸ್ ಅಧಿಕಾರಿಯ ಭಾವನೆಯೂ ಆಗಿ ಪರಿವರ್ತನೆ ಆಗಬಾರದಲ್ಲವೇ? ಆ ಗುಂಪುಗಳು ಆಲೋಚಿಸಿದಂತೆಯೇ ಅಧಿಕಾರಿಯೂ ಆಲೋಚಿಸುವುದಾದರೆ, ಅದರ ಪರಿಣಾಮ ಏನಾಗಬಹುದು? ಅಂದಹಾಗೆ, ಇದು ಕೇವಲ ಈ ‘ಪ್ಲಾಸ್ಟಿಕ್ ಗೋವು’ ಪ್ರಕರಣಕ್ಕೆ ಮಾತ್ರ ಸಂಬಂಧಿಸಿ ಹುಟ್ಟಿಕೊಳ್ಳುವ ಪ್ರಶ್ನೆಗಳಲ್ಲ. ವಾರಗಳ ಹಿಂದಷ್ಟೇ ದೆಹಲಿಯ ಪೊಲೀಸರೂ ಹೀಗೆಯೇ ವರ್ತಿಸಿದ್ದರು. ಸಂಘಪರಿವಾರದ ದೂರನ್ನು ಯಥಾವತ್ತಾಗಿ ಸ್ವೀಕರಿಸಿ ‘ಕೇರಳ ಭವನದ' ಮೇಲೆ ದಾಳಿ ನಡೆಸಿದ್ದರು. ಅನೈತಿಕ ಗೂಂಡಾಗಿರಿ, ಮತಾಂತರ, ಕೋಮುಗಲಭೆ.. ಮುಂತಾದ ದೂರುಗಳ ಸಂದರ್ಭಗಳಲ್ಲೆಲ್ಲಾ ಪೊಲೀಸ್ ಇಲಾಖೆಯಿಂದ ಇಂಥ ವರ್ತನೆಗಳು ಪದೇ ಪದೇ ಮರುಕಳಿಸುತ್ತಿವೆ. ಯಾಕೆ ಹೀಗೆ? ಪೊಲೀಸ್ ಇಲಾಖೆಯು ಸನ್ನಿವೇಶವನ್ನು ತನ್ನ ಭಾವನೆಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆಯೇ ಅಥವಾ ಘಟನೆಯನ್ನು ಪರಾಮರ್ಶಿಸುವಲ್ಲಿ ಮತ್ತು ನ್ಯಾಯಕ್ಕೆ ನಿಷ್ಠವಾಗುವಲ್ಲಿ ಎಡವುತ್ತಿದೆಯೇ? ಅಷ್ಟಕ್ಕೂ,  
      ಬಲಪಂಥೀಯ ಗುಂಪುಗಳು ಗೋವಿನ ಸುತ್ತ ಈ ಬಗೆಯ ಬೇಲಿಯನ್ನು ಹಾಕತೊಡಗಿದರೆ, ಭವಿಷ್ಯದಲ್ಲಿ ಗೋವುಗಳ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನಾಗಿರಬಹುದು? ಗೋವನ್ನು ರೂಪಕವಾಗಿಯೋ ಕಲಾ ಪ್ರಕಾರದಲ್ಲೋ ಅಥವಾ ಇನ್ನಿತರ ರೂಪದಲ್ಲೋ ಅಭಿವ್ಯಕ್ತಗೊಳಿಸುವುದನ್ನೇ ತಡೆಯುವುದು ಗೋವುಗಳಿಗೆ ಲಾಭ ತಂದುಕೊಟ್ಟೀತೇ? ಗೋವಿನ ಕುರಿತಂತೆ ಗೌರವಾದರದ ಮತ್ತು ಆರಾಧನೆಯ ಮಾತುಗಳೇನೇ ಇರಲಿ, ಅದನ್ನು ಪ್ರಾಣಿಗಳ ಗುಂಪಿನಿಂದ ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ತನ್ನನ್ನು ಆರಾಧಿಸಲಾಗುತ್ತಿದೆ ಎಂಬುದನ್ನು ಅರಿಯದಷ್ಟೂ ಮುಗ್ಧತನ ಅವಕ್ಕಿದೆ. ಅದು ಗದ್ದೆಯನ್ನು ಉಳುತ್ತದೆ. ಹಾಲೂ ಕೊಡುತ್ತದೆ. ಆಹಾರವೂ ಆಗುತ್ತದೆ. ಹೈನುದ್ಯಮವು ಈ ದೇಶದಲ್ಲಿ ಇವತ್ತು ಬೃಹತ್ ಮಾರುಕಟ್ಟೆ ಸ್ವರೂಪವನ್ನು ಪಡೆದುಕೊಂಡಿದ್ದರೆ ಅದರ ಮೂಲ ಬಂಡವಾಳವೇ ಗೋವು. ಅದು ಅತ್ಯಂತ ಉಪಯುಕ್ತ ಪ್ರಾಣಿ ಎಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ಈ ಉಪಯುಕ್ತ ಪ್ರಾಣಿಯನ್ನು ಗೌರವಿಸುವ ವಿಧಾನ ಹೇಗೆ? ಪ್ಲಾಸ್ಟಿಕ್ ಗೋವನ್ನು ಹಾರಿಸುವುದಕ್ಕೆ ತಡೆ ಒಡ್ಡುವ ಮನಸ್ಥಿತಿಯು ಅಂತಿಮವಾಗಿ ಗೋವನ್ನು ಯಾವ ಸ್ಥಿತಿಗೆ ತಲುಪಿಸೀತು? ಗೋವನ್ನು ಮುಟ್ಟಿದರೂ ತಪ್ಪು, ಅದರ ಚಿತ್ರ ಬಿಡಿಸಿದರೂ ತಪ್ಪು, ಆಟಿಕೆಯಾಗಿ ಬಳಕೆಯಾದರೂ ತಪ್ಪು.. ಎಂಬ ವಾತಾವರಣ ಸೃಷ್ಟಿಯಾಗುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳಿ. ಅದು ಗೋವುಗಳಿಗೆ ಲಾಭ ತಂದುಕೊಡಬಹುದೇ?  
     ನಿಜವಾಗಿ, ಆರಾಧನೆಯ ಉಚ್ಛ್ರಾಯ ಹಂತಕ್ಕೆ ಪ್ರಾಣಿಯೊಂದು ತಲುಪುವುದೆಂದರೆ, ಅದರರ್ಥ ಆ ಪ್ರಾಣಿ ವಿನಾಶದ ಅಂಚಿಗೆ ತಲುಪುತ್ತಿದೆ ಎಂದೂ ಆಗುತ್ತದೆ. ಗೋವು ಅನಾದಿ ಕಾಲದಿಂದಲೇ ಭಾರತೀಯ ಉಪಭೂಖಂಡದ ಅತಿ ಉಪಯುಕ್ತ ಪ್ರಾಣಿ. ಅದು ಜನರ ಭಾವ ಮತ್ತು ಭಕುತಿಗೆ ತಕ್ಕಂತೆ ಉಪಯೋಗವಾಗುತ್ತಲೇ ಬಂದಿದೆ. ಆದರೆ ಇವತ್ತು ಗೋವಿನ ಸುತ್ತ ಒಂದು ಮಿಥ್ಯ ಪ್ರಭಾವಳಿಯನ್ನು ಸೃಷ್ಟಿಸಲಾಗಿದೆ. ಅತಿರಂಜಿತ ಕತೆಗಳನ್ನು ಹುಟ್ಟುಹಾಕಲಾಗಿದೆ. ಗೋವಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ವೈಭವೀಕರಿಸಿ ಹೇಳಲಾಗುತ್ತಿದೆ. ಇದರಿಂದ ಆಗುವ ಹಾನಿಯೆಂದರೆ, ಗೋವು ದಿನೇ ದಿನೇ ಜನರಿಂದ ದೂರವಾಗುತ್ತಾ ಹೋಗುವುದು. ಹಾಗಂತ, ಸಾಮಾನ್ಯ ಮಂದಿ ಗೋವನ್ನು ಸಾಕುವುದು ಬರೇ ಶ್ರದ್ಧಾ ಭಕ್ತಿಯಿಂದ ಖಂಡಿತ ಅಲ್ಲ. ಗೋವಿನ ನಾನಾ ಬಗೆಯ ಉಪಯೋಗಗಳೇ ಅದರ ಸಾಕಾಣಿಕೆಗೆ ಪ್ರಮುಖ ಪ್ರೇರಣೆ. ಗೋವನ್ನು ಖರೀದಿಸುವ, ಸಾಕುವ ಮತ್ತು ಮಾರುವ ಒಂದು ಪ್ರಕ್ರಿಯೆಯಿಂದಾಗಿಯೇ ಗೋವುಗಳು ಈವರೆಗೂ ಜನರ ನಡುವಿನ ಪ್ರಾಣಿಯಾಗಿ ಉಳಿದುಕೊಂಡಿದೆ. ಗೋವು ಸಂತತಿಯ ಉಳಿವು ಮತ್ತು ವೃದ್ಧಿಯಲ್ಲೂ ಈ ಪ್ರಕ್ರಿಯೆಯೇ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ಇವತ್ತು ಏಕಾಏಕಿ ಈ ಪ್ರಕ್ರಿಯೆಯನ್ನೇ ರದ್ದುಗೊಳಿಸಲು ಹೊರಟರೆ ಜನರು ಗೋವನ್ನು ನೋಡುವ ವಿಧಾನವೇ ಬದಲಾಗಬಹುದು. ಅದನ್ನು ಪ್ಲಾಸ್ಟಿಕ್ ಕಲಾಕೃತಿಯಾಗಿ ರಚಿಸುವುದಕ್ಕೂ ಅಡ್ಡಿಪಡಿಸುವಂತಹ ‘ಗೋಪ್ರೇಮ'ದಿಂದ ಅಡ್ಡಿಪಡಿಸುವವರಿಗೆ ರಾಜಕೀಯ ಲಾಭ ಎಷ್ಟು ಸಿಗುತ್ತದೋ ಗೊತ್ತಿಲ್ಲ, ಆದರೆ ಗೋವುಗಳಂತೂ ವಿನಾಶದ ಅಂಚಿಗೆ ತಲುಪಲೇಬೇಕಾದ ಅನಿವಾರ್ಯತೆಗೆ
ಸಿಲುಕಬಹುದು. ಸಾಮಾನ್ಯವಾಗಿ ಹಾಲು ಕೊಡುವುದನ್ನು ನಿಲ್ಲಿಸಿದ ಹಸುವು ಮುಂದಿನ 10 ವರ್ಷಗಳ ವರೆಗಾದರೂ ಬದುಕಿರುತ್ತದೆ. ಈ 10 ವರ್ಷ ಗೋವನ್ನು ಸಾಕುವ ಸಾಮರ್ಥ್ಯ ಮತ್ತು ಆರ್ಥಿಕ ಬಲ ಎಷ್ಟು ಮಂದಿಗೆ ಇರಬಹುದು? ಬರೇ ಶ್ರದ್ಧೆಯಿಂದ ಗೊಡ್ಡು ಹಸುವನ್ನು ಸಾಕುವ ಎಷ್ಟು ಮಂದಿ ಇವತ್ತು ಈ ದೇಶದಲ್ಲಿದ್ದಾರೆ? ಗೋ ಸಾಕಾಣಿಕೆದಾರರ ಮೇಲೆ ಗೊಡ್ಡು ಹಸುವನ್ನೂ ಸಾಕುವ ಮತ್ತು ಮಾರಾಟ ಮಾಡಲಾಗದಂಥ ಅನಿವಾರ್ಯತೆಯನ್ನು ಸೃಷ್ಟಿಸಿದರೆ ಅಂತಿಮವಾಗಿ ಅದು ಗೋವನ್ನು ಸಾಕುವವರೇ ಅಪರೂಪವಾಗುವಂತಹ ಹಂತಕ್ಕೆ ಕೊಂಡೊಯ್ಯಬಹುದು. ಕೊನೆಗೆ ಗೋವೂ ಚೌಕಟ್ಟಿನೊಳಗಿನ ಗೋಡೆಚಿತ್ರವಾಗಿ ಮಾತ್ರ ಉಳಿಯುವ ಮತ್ತು ಬೆಳಗ್ಗೆಯೋ ರಾತ್ರಿಯೋ ಪೂಜೆಗೊಳ್ಳುವ ಸ್ಥಿತಿಗೆ ತಲುಪಬಹುದು. ಇವತ್ತು ಗೋವಿನ ಹೆಸರಲ್ಲಿ ನಡೆಯುತ್ತಿರುವ ಉನ್ಮಾದಿತ ಪ್ರಕ್ರಿಯೆಗಳು ಈ ಅಪಾಯವನ್ನೇ ಸೂಚಿಸುತ್ತಿವೆ. ಜೈಪುರದ ‘ಪ್ಲಾಸ್ಟಿಕ್ ಗೋವು' ಇದರ ರೂಪಕ ಅಷ್ಟೇ.




Wednesday 18 November 2015

ಅಣ್ಣಂದಿರೇ, ಚೂರಿ ಎತ್ತಿಕೊಳ್ಳುವ ಮೊದಲು..

ಕೆ.ಪಿ. ಪೊನ್ನಾರ್ ಮತ್ತು ಕೃತಿಕಾ
      ಮಾನವ ಪ್ರಾಣದ ನೆಲೆ, ಬೆಲೆ ಮತ್ತು ಗೌರವದ ಕುರಿತಂತೆ ನಮ್ಮನ್ನು ಗಂಭೀರ ಚಿಂತನೆಗೆ ಒತ್ತಾಯಿಸುವ ಘಟನೆಗಳು ಕಳೆದವಾರ ಸಂಭವಿಸಿವೆ. ಕೆ.ಪಿ. ಪೊನ್ನಾರ್ ಎಂಬ 31 ವರ್ಷದ ಇಂಜಿನಿಯರ್ ಯುವಕ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಕಳೆದವಾರ ಲವಲವಿಕೆಯಿಂದ ಮಾತಾಡಿದ್ದಾನೆ. ಹೀಗೆ ಮಾತಾಡುವುದಕ್ಕಿಂತ ಮೊದಲು 6 ವರ್ಷಗಳ ವರೆಗೆ ಆತ ಬದುಕು ಭಾರವಾಗಿ ಮಲಗಿದ್ದ. ಸಾವನ್ನು ಗೆಲ್ಲಲಾರೆನೇನೋ ಅನ್ನುವ ಭೀತಿಯೊಂದಿಗೆ ಆಸ್ಪತ್ರೆಯ ಮಂಚದಲ್ಲಿ 6 ವರ್ಷಗಳನ್ನು ದೂಡಿದ್ದ. ಆತನ ಹೃದಯ ಮತ್ತು ಪಿತ್ತಕೋಶ ಎರಡೂ ಸಂಪೂರ್ಣ ನಿಷ್ಕ್ರಿಯಗೊಂಡಿದ್ದುವು. ಅದನ್ನು ಕಿತ್ತುಹಾಕಲೇಬೇಕಿತ್ತು ಮತ್ತು ದಾನಿಗಳಿಂದ ಪಡೆದ ಹೃದಯ ಮತ್ತು ಪಿತ್ತಕೋಶವನ್ನು ಬದಲಿಯಾಗಿ ಜೋಡಿಸಿದರೆ ಮಾತ್ರ ಆತ ಬದುಕುಳಿಯಬಹುದಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿ. ಜಾಗತಿಕವಾಗಿಯೇ ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಇಂಥ ದುಬಾರಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ಹೀಗಿರುತ್ತಾ, ಮೆದುಳು ಸತ್ತ ಓರ್ವ ರೋಗಿಯ ಹೃದಯ ಮತ್ತು ಪಿತ್ತಕೋಶವನ್ನು ಪಡೆದು ಅದನ್ನು ಪೊನ್ನಾರ್‍ಗೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಕಳೆದವಾರ ಕೈಗೊಳ್ಳಲಾಯಿತು. ಸರ್ಜನ್‍ಗಳ ನಾಲ್ಕು ತಂಡ ಸತತ 8 ಗಂಟೆಗಳ ದೀರ್ಘ ಅವಧಿಯ ವರೆಗೆ ಶಸ್ತ್ರಚಿಕಿತ್ಸೆಯಲ್ಲಿ ನಿರತವಾದುವು. ಆ 8 ಗಂಟೆಗಳ ಉದ್ದಕ್ಕೂ ಪೊನ್ನಾರ್‍ನ ಕುಟುಂಬದಲ್ಲಿ ಆತಂಕ ಮತ್ತು ಭೀತಿ ತುಂಬಿಕೊಂಡಿದ್ದುವು. ಆ ಒಂದು ಜೀವಕ್ಕಾಗಿ ಒಂದು ಕುಟುಂಬ ಮಾತ್ರವಲ್ಲ, ಇಡೀ ಆಸ್ಪತ್ರೆಯೇ ಪ್ರಾರ್ಥಿಸುವಷ್ಟರ ಮಟ್ಟಿಗೆ ವಾತಾವರಣ ಭಾವುಕವಾಗಿತ್ತು. ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಅಮೇರಿಕದಲ್ಲಿ 12 ಕೋಟಿ ರೂಪಾಯಿ ವೆಚ್ಚ ತಗಲಬಹುದಾದ ಶಸ್ತ್ರಚಿಕಿತ್ಸೆಯನ್ನು 43 ಲಕ್ಷಗಳಲ್ಲಿ ಮಾಡಿ ಮುಗಿಸಿರುವುದಾಗಿ ಆಸ್ಪತ್ರೆ ಹೇಳಿಕೊಂಡಿತು. ಪೊನ್ನಾರ್ ಮಾಧ್ಯಮಗಳೊಂದಿಗೆ ಮಾತಾಡಿದ. ತಂಗಿ ಕೃತಿಕಾ ತನ್ನಣ್ಣನ ಅರಳಿದ ಕಣ್ಣುಗಳನ್ನು ತುಂಬಿಕೊಂಡು ಭಾವುಕಳಾದಳು.
  ದುರಂತ ಏನೆಂದರೆ, ಅಣ್ಣ ಮರಳಿ ಸಿಕ್ಕಿದ ಖುಷಿಯನ್ನು ತಂಗಿಯೋರ್ವಳು ಅಪೋಲೋ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿರುವಾಗ ಇತ್ತ ಕರ್ನಾಟಕದಲ್ಲಿ ಇಂಥ ಅಣ್ಣಂದಿರನ್ನು ಸಾಯಿಸುವ ಚಳವಳಿ ನಡೆಯುತ್ತಿತ್ತು. ಮಡಿಕೇರಿ ಮತ್ತು ಮಂಗಳೂರಿನಲ್ಲಿ 4 ಮಂದಿ ಅಣ್ಣಂದಿರನ್ನು ಹತ್ಯೆ ಮಾಡಲಾಯಿತು. ಹಲವಾರು ಅಣ್ಣಂದಿರಿಗೆ ಚೂರಿ ಹಾಕಲಾಯಿತು. 43 ಲಕ್ಷ ತೆತ್ತು ಅಣ್ಣನನ್ನು ಉಳಿಸಿಕೊಂಡ ತಂಗಿ ಒಂದು ಕಡೆಯಾದರೆ ದ್ವೇಷದ ಅಮಲು ಹತ್ತಿಸಿಕೊಂಡವರಿಂದ ತಂಗಿ, ತಾಯಂದಿರನ್ನು ಅನಾಥಗೊಳಿಸುವ ಪ್ರಯತ್ನ ಇನ್ನೊಂದು ಕಡೆ. ಯಾಕೆ ಈ ದ್ವಂದ್ವ? ಹಾಗಂತ, ಪ್ರಾಣ ಎಷ್ಟು ಅಮೂಲ್ಯ ಅನ್ನುವುದಕ್ಕೆ ಕೇವಲ ಪೊನ್ನಾರ್ ಓರ್ವನೇ ಉದಾಹರಣೆ ಅಲ್ಲ, ನಮ್ಮ ಸುತ್ತ-ಮುತ್ತಲಿನ ಆಸ್ಪತ್ರೆಗಳಲ್ಲಿರುವ ಅಸಂಖ್ಯ ರೋಗಿಗಳೇ ಅದಕ್ಕೆ ಪರಮ ಪುರಾವೆ. ಹಿರಿ ಜೀವಗಳಿಂದ ಹಿಡಿದು ಪುಟಾಣಿಗಳ ವರೆಗೆ ಬದುಕುವುದಕ್ಕಾಗಿ ಎಲ್ಲೆಡೆ ಹೋರಾಟಗಳು ನಡೆಯುತ್ತಿವೆ. ಪ್ರತಿದಿನ ಕೋಟ್ಯಂತರ ರೂಪಾಯಿಗಳು ಈ ಒಂದೇ ಕಾರಣಕ್ಕಾಗಿ ಖರ್ಚಾಗುತ್ತಿವೆ. ‘ಇನ್ನು ಬದುಕಿ ಉಳಿಯುವುದಕ್ಕೆ ಸಾಧ್ಯವೇ ಇಲ್ಲ' ಎಂದು ಆಸ್ಪತ್ರೆಯಿಂದ ವೈದ್ಯರು ಮನೆಗೆ ಕಳುಹಿಸಿಕೊಟ್ಟ ರೋಗಿಯಲ್ಲೂ ಎಲ್ಲೋ ಒಂದು ಮೂಲೆಯಲ್ಲಿ ಬದುಕಿ ಉಳಿಯುವ ಭರವಸೆ ಇರುತ್ತದೆ. ಇನ್ನೂ ನಡೆಯಲಾರದ ಮತ್ತು ಮಾತನಾಡಲಾರದ ಶಿಶುವಿನ ಕಾಲಬುಡದಲ್ಲಿ ಕೂತು ತಾಯಿ ಮಗುವಿನ ರೋಗ ಶಮನಕ್ಕಾಗಿ ಕಣ್ಣೀರಿಳಿಸುತ್ತಾಳೆ. ‘ಗುಣಮುಖವಾದರೂ ಪತಿಯಿಂದ ಇನ್ನು ದುಡಿಯಲು ಸಾಧ್ಯವಿಲ್ಲ’ ಎಂದು ಗೊತ್ತಿದ್ದೂ ಪತಿ ಗುಣಮುಖವಾಗಲೆಂದು ಪತ್ನಿ ಪ್ರಾರ್ಥಿಸುತ್ತಾಳೆ. ನಮ್ಮ ಅಕ್ಕ-ಪಕ್ಕದಲ್ಲಿ, ಸಂಬಂಧಿಕರಲ್ಲಿ ಅಥವಾ ಆಸ್ಪತ್ರೆಗಳಲ್ಲಿ ನಿತ್ಯ ಕಾಣಸಿಗುವ ದೃಶ್ಯಗಳಿವು. ರಕ್ತ ಚೆಲ್ಲುವವರಿಗೆ ಇವು ಯಾಕೆ ಅರ್ಥವಾಗುತ್ತಿಲ್ಲ? ಮಾನವ ಪ್ರಾಣದ ಬೆಲೆ ಜುಜುಬಿ ಆಗಿರುತ್ತಿದ್ದರೆ ಅದನ್ನು ಉಳಿಸಿಕೊಳ್ಳುವುದಕ್ಕೇಕೆ ಆಸ್ಪತ್ರೆಗಳಲ್ಲಿ ಈ ಮಟ್ಟದ ಪ್ರಯತ್ನಗಳು ನಡೆಯುತ್ತಿತ್ತು? 43 ಲಕ್ಷದ ಹಂಗೇ ಇಲ್ಲದೆ ಕೃತಿಕಾ ಏಕೆ ತನ್ನನ್ನು ಕಣ್ತುಂಬಿಕೊಳ್ಳುತ್ತಿದ್ದಳು? ‘ಇನ್ನು ದುಡಿದು ಕೊಡಲಾರ' ಎಂದು ಖಚಿತವಾಗಿ ಗೊತ್ತಿದ್ದೂ ವೃದ್ಧ ಜೀವಕ್ಕಾಗಿ, ಅಂಗವಿಕಲ ಶಿಶುವಿಗಾಗಿ ಅಥವಾ ಜೀವಚ್ಛವವಾದ ಮಗನಿಗಾಗಿ ಓರ್ವ ತಾಯಿ, ಪತ್ನಿ, ಮಕ್ಕಳೇಕೆ ಪ್ರಾರ್ಥಿಸುತ್ತಾರೆ? ಚೂರಿಯನ್ನು ಹಿಡಿಯುವ ಕೈಗಳೇಕೆ ಹೀಗೆ ಆಲೋಚಿಸುತ್ತಿಲ್ಲ? ಚೂರಿಗೆ ಧರ್ಮ ಇಲ್ಲ. ಜೀವವೂ ಇಲ್ಲ. ಅದು ತನಗೆ ಒಪ್ಪಿಸಿದ ಕೆಲಸವನ್ನು ನಾಜೂಕಾಗಿ ಮಾಡುತ್ತದೆ. ಆದರೆ ಚೂರಿಯನ್ನು ಹಿಡಿಯುವ ಕೈ ಹಾಗಲ್ಲ. ಆ ಕೈಗೆ ಧರ್ಮ ಇದೆ. ಸರಿ-ತಪ್ಪುಗಳ ಪರಿಜ್ಞಾನ ಇದೆ. ಪಾಪ-ಪುಣ್ಯಗಳೇನೆಂಬುದೂ ಗೊತ್ತಿದೆ. ತಾನು ಹಾಕುವ ಚೂರಿಯಿಂದ ಓರ್ವ ಹೆಣ್ಣು ವಿಧವೆಯಾಗಬಹುದು. ಮಕ್ಕಳು ಅನಾಥರಾಗಬಹುದು. ಒಂದು ಮನೆಯ ಏಕೈಕ ಆದಾಯ ಮೂಲವೇ ಕಳೆದು ಹೋಗಬಹುದು. ಕೃತಿಕಾಳಂಥ ತಂಗಿಗೆ ಅಣ್ಣನೋರ್ವ ಶಾಶ್ವತವಾಗಿ ಇಲ್ಲವಾಗಬಹುದು.. ಇವೆಲ್ಲ ಇರಿಯುವ ಕೈಗಳಿಗೆ ಗೊತ್ತಿಲ್ಲವೇ? ಗೊತ್ತಿದ್ದೂ ಅವರು ಹೀಗೆಲ್ಲ ಮಾಡುತ್ತಿದ್ದಾರೆಂದರೆ, ಅವರೊಳಗೆ ತುಂಬಿಕೊಂಡಿರುವ ವಿಷ ಯಾವುದು? ಆ ವಿಷವನ್ನು ತುಂಬಿಸಿರುವವರು ಯಾರು? ಅವರ ಉದ್ದೇಶವೇನು? ಅವರು ಆ ವಿಷವನ್ನು ಎಲ್ಲಿಂದ ಪಡಕೊಂಡಿದ್ದಾರೆ? ಧರ್ಮದಿಂದಲೇ? ಹೌದು ಎಂದಾದರೆ, ಆ ಧರ್ಮವಾದರೂ ಯಾವುದು? ಯಾವ ತಂಗಿಯೂ ತಮ್ಮನೂ ತಾಯಿಯೂ ತಂದೆಯೂ ಪತಿಯೂ ಬಯಸದ ಮತ್ತು ಮನಸಾರೆ ದ್ವೇಷಿಸುವ ಆ ವಿಷವೇಕೆ ನಮ್ಮ ನಡುವೆ ಮತ್ತೆ ಮತ್ತೆ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ?
  ನಿಜವಾಗಿ, ಚೂರಿ ಹಾಕುವವರು ಮತ್ತು ಇರಿತಕ್ಕೊಳಗಾಗುವವರು ಇಬ್ಬರೂ ಈ ಸಮಾಜದ್ದೇ ಪ್ರತಿನಿಧಿಗಳು. ಅದರ ನಡುವೆ ಇರಬಹುದಾದ ವ್ಯತ್ಯಾಸ ಏನೆಂದರೆ, ಹೆಸರು, ನಂಬಿಕೆ ಮತ್ತು ವೇಷ ಭೂಷಣ ಮಾತ್ರ. ಅದರ ಹೊರತಾಗಿ ಚೂರಿ ಹಾಕುವವನ ರಕ್ತಕ್ಕೂ ಇರಿತಕ್ಕೊಳಗಾಗುವವರ ರಕ್ತಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಹಸಿವಾದಾಗ ಇಬ್ಬರೂ ಆಹಾರವನ್ನೇ ಸೇವಿಸುತ್ತಾರೆ. ಸೇವಿಸುವ ಆಹಾರದಲ್ಲಿ ವ್ಯತ್ಯಾಸ ಇರಬಹುದು. ಆದರೆ ಹಸಿವಿನಲ್ಲಿ ವ್ಯತ್ಯಾಸ ಇಲ್ಲ. ಬಾಯಾರಿದಾಗ ಇಬ್ಬರೂ ನೀರನ್ನೇ ಕುಡಿಯುತ್ತಾರೆ. ಕುಡಿಯುವ ನೀರಿನಲ್ಲಿ ವ್ಯತ್ಯಾಸ ಇರಬಹುದು. ಆದರೆ ಬಾಯಾರಿಕೆಯಲ್ಲಿ ವ್ಯತ್ಯಾಸ ಇಲ್ಲ. ಅಣ್ಣ, ತಂಗಿ, ತಮ್ಮ, ತಾಯಿ, ತಂದೆ, ಮಗು, ಪತ್ನಿ.. ಇಂಥದ್ದೊಂದು ಪರಿವಾರ ಇಬ್ಬರಿಗೂ ಇರುತ್ತದೆ. ತಂಗಿಯ ಕಣ್ಣೀರನ್ನು ಸಹಿಸಲು ಅಣ್ಣನಿಗೆ ಸಾಧ್ಯವಾಗುವುದಿಲ್ಲ. ಮಗ ಸಂಕಟ ಪಡುವುದನ್ನು ತಾಯಿಯಿಂದ ನೋಡಲಾಗುವುದಿಲ್ಲ. ಪತ್ನಿ-ಮಕ್ಕಳು ಸದಾ ನೆಮ್ಮದಿಯಿಂದಿರಬೇಕೆಂದು ಪತಿ ಬಯಸುತ್ತಾನೆ. ಇಂಥ ಬಯಕೆ ಮತ್ತು ಭಾವನೆಗಳು ಎಲ್ಲ ಕುಟುಂಬಗಳಲ್ಲೂ ಇರುತ್ತದೆ. ಅದಕ್ಕೆ ಹಿಂದೂ-ಮುಸ್ಲಿಮ್ ಎಂಬುದಿಲ್ಲ. ಕಳೆದ ವಾರ ಸಾವಿಗೀಡಾದ ಕುಟ್ಟಪ್ಪ, ರಾಜು, ಸುಹೈಲ್ ಮತ್ತು ಹರೀಶ್‍ರನ್ನೇ ಎತ್ತಿಕೊಳ್ಳಿ. ಅವರ ಕುಟುಂಬದ ಕಣ್ಣೀರಿನಲ್ಲಿ ನಮಗೆ ಯಾವ ಬಣ್ಣ ಕಾಣಿಸುತ್ತದೆ? ಗಾಯಗೊಂಡವರ ಸಂಕಟಗಳಲ್ಲಿ ಯಾವ ಧರ್ಮ ಕಾಣಿಸುತ್ತದೆ? ಒಂದು ವೇಳೆ ಅವರ ಹೆಸರನ್ನು ಉಲ್ಲೇಖಿಸದೆಯೇ ಅವರ ನೋವುಗಳನ್ನು ಮಾತ್ರ ದಾಖಲಿಸಿದರೆ ಅದನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಸಾಧ್ಯವೇ? ‘ಈ ಮಾತು ಹಿಂದೂವಿನದ್ದು, ಈ ಮಾತು ಮುಸ್ಲಿಮನದ್ದು’ ಎಂದು ವಿಷ ಕೊಟ್ಟವರು ಪತ್ತೆ ಹಚ್ಚಬಲ್ಲರೇ? ಅಷ್ಟಕ್ಕೂ, ಮಾನವರ ನೋವು, ಕಣ್ಣೀರು, ಭಾವನೆಗಳ ಮಧ್ಯೆ ವಿಭಜನೆಯೇ ಸಾಧ್ಯವಿಲ್ಲದಷ್ಟು ಸಾಮ್ಯತೆ ಇರುವಾಗ ಯಾಕೆ ಈ ದ್ವೇಷ? ಯಾಕೆ ಈ ರಕ್ತಪಾತ? ಮಾನವ ಪ್ರಾಣವನ್ನು ಉಳಿಸುವುದಕ್ಕಾಗಿ ಒಂದು ಕಡೆ ಸಂಶೋಧನೆಗಳ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ರಕ್ತದ ಕ್ಯಾನ್ಸರ್‍ಗೆ

ಬಂಟ್ವಾಳದ ಮೃತ ಹರೀಶ್ ನ ಪಾರ್ಶ್ವವಾಯು ಪೀಡಿತ ತಂದೆ ಮತ್ತು ತಾಯಿ
ಪರಿಣಾಮಕಾರಿ ಔಷಧವನ್ನು ಕಂಡು ಹುಡುಕಿರುವುದಾಗಿ ಲಂಡನ್ನಿನ ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಘೋಷಿಸಿದ್ದೂ ಕಳೆದ ವಾರವೇ. ಅದಕ್ಕಾಗಿ ಅವರು ಕಳೆದ ಮೂರು ವರ್ಷಗಳಿಂದ ಪ್ರಯತ್ನಪಟ್ಟಿದ್ದಾರೆ. ಇನ್ನೊಂದು ಕಡೆ ಹೆಸರು ಮತ್ತು ನಂಬಿಕೆ ಬೇರೆ ಎಂಬ ಏಕೈಕ ಕಾರಣಕ್ಕಾಗಿ ಈ ಬಹು ಅಮೂಲ್ಯ ಪ್ರಾಣವನ್ನೇ ಕಸಿಯುತ್ತಿದ್ದೇವೆ. ಹೊಂಚು ಹಾಕಿ ಇರಿಯುತ್ತಿದ್ದೇವೆ. ಒಂದು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಸಿದ್ಧವಿರುವ ನಾವೇ ಕೆಲವೊಮ್ಮೆ ಧರ್ಮದ ಹೆಸರಲ್ಲಿ ಇವೇ ಪ್ರಾಣವನ್ನು ಏಕಿಷ್ಟು ಅಗ್ಗಗೊಳಿಸುತ್ತಿದ್ದೇವೆ? ಧರ್ಮ ಅಷ್ಟೂ ಕ್ರೂರಿಯೇ, ಮನುಷ್ಯ ವಿರೋಧಿಯೇ? ಅಣ್ಣನ ಪ್ರಾಣ ಉಳಿಯಿತೆಂದು ಸಂತಸದಿಂದ ಕಣ್ತುಂಬಿಕೊಂಡ ಕೃತಿಕಾ ಮತ್ತೆ ಮತ್ತೆ ನೆನಪಾಗುತ್ತಾಳೆ. ಚೂರಿ ಹಿಡಿಯುವ ಅಣ್ಣಂದಿರಿಗೆ ಕೃತಿಕಾ ಅರ್ಥವಾಗಲಿ.

Wednesday 11 November 2015

ತಲಾಕ್, ಬಹುಪತ್ನಿತ್ವ ಮತ್ತು ಸಮಾನ ನಾಗರಿಕ ಸಂಹಿತೆ

     
     ಬಹುಪತ್ನಿತ್ವ, ತಲಾಕ್ ಮತ್ತು ಜಿಹಾದ್ ಎಂಬೀ ಮೂರು ಪದಗುಚ್ಛಗಳು ಈ ದೇಶದಲ್ಲಿ ಚರ್ಚೆಗೆ ಒಳಗಾದಷ್ಟು ಬಹುಶಃ ಮುಸ್ಲಿಮರಿಗೆ ಸಂಬಂಧಿಸಿದ ಇನ್ನಾವ ಪದ ಪ್ರಯೋಗಗಳೂ ಚರ್ಚೆಗೊಳಗಾಗಿರುವ ಸಾಧ್ಯತೆ ಇಲ್ಲ. ಇದರಲ್ಲಿ ಜಿಹಾದ್‍ನ ಚರ್ಚೆ ಬಹುತೇಕ ಮುಗಿದಿದೆ. ಇದಕ್ಕೆ ಮುಖ್ಯ ಕಾರಣ - ಮುಸ್ಲಿಮ್ ವಿದ್ವಾಂಸರು, ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಗಳು ಜಿಹಾದ್ ಏನು ಮತ್ತು ಏನಲ್ಲ ಎಂಬುದನ್ನು ಪದೇ ಪದೇ ಈ ದೇಶದಲ್ಲಿ ಸಾರಿದ್ದು. ಅದಕ್ಕಾಗಿ ಈ ದೇಶದಾದ್ಯಂತ ಅಸಂಖ್ಯ ಸೆಮಿನಾರ್‍ಗಳು ನಡೆದಿವೆ. ಸಂವಾದ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳಾಗಿವೆ. ಬಾಂಬ್ ಸ್ಫೋಟಿಸುವವರನ್ನು ‘ಜಿಹಾದಿ' ಅನ್ನುತ್ತಿದ್ದ ಮಾಧ್ಯಮಗಳು ಕ್ರಮೇಣ ಆ ಪದವನ್ನು ಕೈ ಬಿಡುವಷ್ಟು ಇವು ಪರಿಣಾಮಕಾರಿಯಾಗಿವೆ. ಆದರೆ ಬಹುಪತ್ನಿತ್ವ ಮತ್ತು ತಲಾಕ್‍ಗೆ ಸಂಬಂಧಿಸಿ ಹೀಗೆ ಹೇಳುವಂತಿಲ್ಲ. ಇವೆರಡರ ಬಗ್ಗೆ ತಪ್ಪು ಅಭಿಪ್ರಾಯಗಳು ಈ ದೇಶದ ಮುಸ್ಲಿಮೇತರರಲ್ಲಿ ಮಾತ್ರ ಇರುವುದಲ್ಲ, ಮುಸ್ಲಿಮರಲ್ಲಿಯೂ ಇದೆ. ಮುಸ್ಲಿಮೇತರರಲ್ಲಿ ಇದರ ಪ್ರಮಾಣ ‘ಭೀಕರ’ ಮಟ್ಟದಲ್ಲಿದ್ದರೆ, ಮುಸ್ಲಿಮರಲ್ಲಿ ತುಸು ಕಡಿಮೆಯಾದರೂ ಅಪಾಯಕಾರಿ ಮಟ್ಟದಲ್ಲಿಯೇ ಇದೆ. ತಲಾಕ್ ತಲಾಕ್ ತಲಾಕ್ ಎಂದು ಮೂರು ಬಾರಿ ಹೇಳಿಬಿಟ್ಟರೆ ದಾಂಪತ್ಯವೆಂಬ ಅತಿ ಪವಿತ್ರ ಮತ್ತು ಪಾವನ ಸಂಬಂಧವೊಂದು ಶಾಶ್ವತವಾಗಿ ಕಳಚಿಕೊಂಡು ಬಿಡುತ್ತದೆ ಎಂದು ನಂಬುವ ಮಂದಿ ಮುಸ್ಲಿಮರಲ್ಲೂ ಮುಸ್ಲಿಮೇತರರಲ್ಲೂ ಖಂಡಿತ ಇದ್ದಾರೆ. ‘ದೇವನು ಅತ್ಯಂತ ಹೆಚ್ಚು ಇಷ್ಟಪಡದ ಕಾರ್ಯ ತಲಾಕ್' ಎಂಬುದಾಗಿ ಪವಿತ್ರ ಕುರ್‍ಆನ್‍ನಲ್ಲಿ ಇದೆ ಎಂದು ಹೇಳಿದರೆ ಅಚ್ಚರಿಯಿಂದ ನೋಡುವಷ್ಟು ತಲಾಕ್‍ನ ಬಗ್ಗೆ ಅನುಮಾನಗಳಿವೆ. ಬಹುಪತ್ನಿತ್ವವನ್ನೂ ಇದರಿಂದ ಹೊರಗಿಟ್ಟು ನೋಡಬೇಕಿಲ್ಲ. ಒಂದು ಬಗೆಯ ಅನುಮಾನ, ಅಚ್ಚರಿ, ಆಘಾತಗಳನ್ನು ಹೊತ್ತುಕೊಂಡು ‘ತಲಾಕ್' ಮತ್ತು ‘ಬಹುಪತ್ನಿತ್ವ'ಗಳು ಈ ದೇಶದಲ್ಲಿ ಸುತ್ತಾಡುವಾಗ ಇದರ ಕುರಿತಂತೆ ಗುಜರಾತ್ ಹೈಕೋರ್ಟ್‍ನ ಅಭಿಪ್ರಾಯವನ್ನು ಅಚ್ಚರಿಯಿಂದ ನೋಡಬೇಕಿಲ್ಲ. ‘ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಇವೆರಡರ ದುರುಪಯೋಗಕ್ಕಿರುವ ಮದ್ದು' ಎಂದು ಅದು ಹೇಳಿರುವುದರಲ್ಲಿ ಕೆಲವು ಗಮನಾರ್ಹ ಅಂಶಗಳಿವೆ. ಮಾತ್ರವಲ್ಲ, ಅಷ್ಟೇ ಭ್ರಮೆಗಳೂ ಇವೆ. ಸಮಾನ ನಾಗರಿಕ ಸಂಹಿತೆ ಜಾರಿಗೊಂಡ ಕೂಡಲೇ ಈ ದೇಶದ ಸರ್ವ ಸಮಸ್ಯೆಗಳೂ ಪರಿಹಾರವಾಗಿ ಬಿಡುತ್ತವೆ ಎಂದು ವಾದಿಸುವುದು ಪರಮ ದಡ್ಡತನ. ಈ ದೇಶದಲ್ಲಿ ಹಲವಾರು ಧರ್ಮಗಳಿವೆ. ಜಾತಿ ಪಂಗಡಗಳಿವೆ. ಹಾಗೆಯೇ ಪ್ರತಿಯೊಂದಕ್ಕೂ ಅವುಗಳದ್ದೇ ಆದ ವೈಯಕ್ತಿಕ ನಿಯಮ-ನಿಬಂಧನೆಗಳಿವೆ. ಅವುಗಳಲ್ಲಿ ಮೌಢ್ಯ ಇದ್ದರೆ ಅಥವಾ ಮನುಷ್ಯ ವಿರೋಧಿ ನಂಬುಗೆಗಳಿದ್ದರೆ ಅವುಗಳಿಗೆ ಕಾನೂನು ರೀತಿಯಲ್ಲಿ ತಡೆ ಒಡ್ಡಬೇಕಾದುದು ತೀರಾ ಅಗತ್ಯ. ಸತಿ, ಬೆತ್ತಲೆ ಸೇವೆ, ದೇವದಾಸಿ, ಮಾನವ ಬಲಿ, ವರ್ಣ ವ್ಯವಸ್ಥೆಯಂತಹ ಹತ್ತು-ಹಲವು ಆಚರಣೆಗಳನ್ನು ಸಮಾನ ನಾಗರಿಕ ಸಂಹಿತೆಯ ಹಂಗಿಲ್ಲದೆಯೇ ನಿರ್ಬಂಧಿಸಲಾಗಿದೆ. ಒಂದು ವೇಳೆ, ತಲಾಕ್ ಮತ್ತು ಬಹುಪತ್ನಿತ್ವಗಳು ದುರುಪಯೋಗಕ್ಕೀಡಾಗುತ್ತಿದ್ದರೆ ಅದನ್ನು ಈಗಿರುವ ಕಾನೂನುಗಳ ಮೂಲಕವೇ ಪರಿಹರಿಸುವುದಕ್ಕೆ ಸಾಧ್ಯವಿದೆ. ಅಷ್ಟಕ್ಕೂ, ದುರುಪಯೋಗಕ್ಕೀಡಾದ ನಿಯಮಗಳಾದರೂ ಯಾವುವು? ಪುಟಾಣಿಗಳ ಬಿಸಿಯೂಟದಿಂದ ಹಿಡಿದು ವೃದ್ಧಾಪ್ಯ ವೇತನದ ವರೆಗೆ ಪ್ರತಿಯೊಂದನ್ನೂ ದುರುಪಯೋಗಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ಬಹುಪತ್ನಿತ್ವ ಅಥವಾ ತಲಾಕ್‍ಗಳು ದುರುಪಯೋಗವಾಗುತ್ತಿರುವುದನ್ನು ಅದ್ಭುತವೆಂಬಂತೆ ವ್ಯಾಖ್ಯಾನಿಸುವುದರಲ್ಲಿ ಏನರ್ಥವಿದೆ? ಸಮಾನ ನಾಗರಿಕ ಸಂಹಿತೆ ಜಾರಿಗೊಂಡ ಕೂಡಲೇ ವೈಯಕ್ತಿಕ ನಿಯಮಗಳ ದುರುಪಯೋಗಗಳೆಲ್ಲ ಸ್ಥಗಿತಗೊಳ್ಳಬಹುದೇ? ಇಲ್ಲಿನ ಸಮಸ್ಯೆಗಳಿಗೆ ಸಮಾನ ನಾಗರಿಕ ಸಂಹಿತೆ ಜಾರಿಯಾಗದಿರುವುದೇ ಕಾರಣವೇ ಅಥವಾ ಇರುವ ಕಾನೂನುಗಳನ್ನು ಸಮರ್ಪಕವಾಗಿ ಬಳಸದಿರುವುದೇ? ಹಾಗಂತ, ತಲಾಕ್ ಮತ್ತು ಬಹುಪತ್ನಿತ್ವಗಳು ದುರುಪಯೋಗವಾಗುತ್ತಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಆಗುವ ದುರುಪಯೋಗಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಅದರ ದುರುಪಯೋಗವನ್ನು ಉಬ್ಬಿಸಿ ಮತ್ತು ಉತ್ಪ್ರೇಕ್ಷಿಸಿ ಹೇಳಲಾಗುತ್ತಿದೆ. ಈ ದೇಶದಲ್ಲಿ ಪತ್ನಿಯ ಜೊತೆಗೇ ಅನಧಿಕೃತವಾಗಿ ಇನ್ನೋರ್ವಳನ್ನು ಇಟ್ಟುಕೊಳ್ಳುವುದು `ಭೀಕರ' ಅನ್ನಿಸುವುದಿಲ್ಲ. ಲಿವಿಂಗ್ ಟುಗೆದರ್‍ನ ಹೆಸರಲ್ಲಿ ಹೆಣ್ಣು ಮತ್ತು ಗಂಡು ಮನ ಬಂದಂತೆ ಜೊತೆಗಿರುವುದು ಮತ್ತು ವಿಚ್ಛೇದನಗೊಳ್ಳುವುದು ಅಸಮರ್ಪಕವಾಗಿ ಕಾಣಿಸುವುದಿಲ್ಲ ಅಥವಾ ಸಿನಿಮಾ ಪ್ರಪಂಚವೂ ಸೇರಿದಂತೆ ಆಧುನಿಕ ಸಮಾಜದಲ್ಲಿ ತೀರಾ ಮಾಮೂಲಾಗಿರುವ ವಿಚ್ಛೇದನಗಳೂ ಹುಬ್ಬೇರಿಸುತ್ತಿಲ್ಲ. ಆದರೆ ಅಧಿಕೃತವಾಗಿ ಇಬ್ಬರನ್ನು (ಅತ್ಯಂತ ಸೂಕ್ತ ಮತ್ತು ಅನಿವಾರ್ಯ ಕಾರಣಗಳಿಗಾಗಿ ಮಾತ್ರ) ಇಟ್ಟುಕೊಳ್ಳುವುದನ್ನು ಅತ್ಯಂತ ಅನಾಗರಿಕವಾಗಿ ಸನ್ನಿವೇಶವಾಗಿ ನೋಡಲಾಗುತ್ತಿದೆ. ಏನೆನ್ನಬೇಕು ಇದಕ್ಕೆ?  
        ನಿಜವಾಗಿ, ಬಹುಪತ್ನಿತ್ವಕ್ಕೆ ಅತ್ಯಂತ ಕಠಿಣವಾದ ಶರತ್ತುಗಳಿವೆ. ಬಹುಪತ್ನಿತ್ವ ಒಂದು ಅನಿವಾರ್ಯ ಸಂದರ್ಭದ ಆಯ್ಕೆಯೇ ಹೊರತು ಅದು ಶರತ್ತು ರಹಿತವೂ ಅಲ್ಲ, ಬೇಕಾಬಿಟ್ಟಿಯೂ ಅಲ್ಲ. ಈ ಕುರಿತಂತೆ ಮುಸ್ಲಿಮ್ ಸಮಾಜದಲ್ಲಿ ಒಂದು ಹಂತದವರೆಗೆ ಅಜ್ಞಾನವಿದೆ ಎಂದು ಒಪ್ಪಿಕೊಂಡರೂ ಅದು ಇವತ್ತು ಬಿಂಬಿಸುವಂತೆ ಅಪಾಯಕಾರಿ ಮಟ್ಟದಲ್ಲಿಲ್ಲ ಎಂಬುದಕ್ಕೆ ಈ ದೇಶದಲ್ಲಿ ನಡೆಸಲಾದ ಜನಗಣತಿ ಸಮೀಕ್ಷೆಗಳೇ ಸಾಕ್ಷಿ. ಬಹುಪತ್ನಿತ್ವವನ್ನು ಈ ದೇಶದ ಹೆಚ್ಚಿನ ಮುಸ್ಲಿಮರು ಅನಿವಾರ್ಯ ಆಯ್ಕೆಯಾಗಿಯೇ ಇವತ್ತೂ ಪರಿಗಣಿಸಿದ್ದಾರೆ. ಆದ್ದರಿಂದಲೇ ಮುಸ್ಲಿಮೇತರರಿಗೆ ಹೋಲಿಸಿದರೆ ಈ ದೇಶದಲ್ಲಿ ಮುಸ್ಲಿಮರಲ್ಲಿ ಬಹುಪತ್ನಿತ್ವ ಕಡಿಮೆ. ಮುಸ್ಲಿಮರಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ ಎಂದು ಹೇಳುವ ಮಂದಿಯಲ್ಲಿ ತಂತಮ್ಮ ಪ್ರದೇಶದಲ್ಲಿ ಎಷ್ಟೆಷ್ಟು ಮುಸ್ಲಿಮರಿಗೆ ಬಹುಪತ್ನಿಯರಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರಿಸಲು ತಡವರಿಸುತ್ತಾರೆ. ತಲಾಕ್‍ನ ಸ್ಥಿತಿಯೂ ಇದುವೇ. ನಿಜವಾಗಿ, ಮೂರು ಬಾರಿ ತಲಾಕ್ ತಲಾಕ್ ಎಂದು ಹೇಳಿದರೆ ವಿಚ್ಛೇದನ ಆಗಿ ಬಿಡುತ್ತದೆ ಮತ್ತು ಮುಸ್ಲಿಮರನ್ನು ವಿಚ್ಛೇದನ ಬಹಳ ಸುಲಭ ಎಂದು ಹೇಳುವುದನ್ನು ನೋಡಿದರೆ, ಮುಸ್ಲಿಮರನ್ನು ವಿಚ್ಛೇದಿತೆಯರೇ ತುಂಬಿಕೊಂಡಿದ್ದಾರೆಂದೇ ನಂಬಬೇಕು. ಅಂದಹಾಗೆ, ತಲಾಕ್‍ಗೆ ಅದರದ್ದೇ ಆದ ನಿಯಮ-ನಿಬಂಧನೆಗಳಿವೆ. ತಲಾಕ್‍ಗೆ ಮೂರು ಹಂತಗಳಿವೆ. ಮೂರು ಬಾರಿ ಪಟಪಟನೆ ತಲಾಕ್ ಹೇಳುವುದು ಅತ್ಯಂತ ಅತಾರ್ಕಿಕ ಮತ್ತು ಅಸಮರ್ಪಕ ವಿಧಾನ. ಒಂದು ಬಾರಿ ತಲಾಕ್ ಹೇಳಿದ ಬಳಿಕ ಪತ್ನಿಯ ಜೊತೆಗೆ ಪತಿ ಒಂದು ಮುಟ್ಟಿನ ಕಾಲದ ವರೆಗೆ ಬದುಕಬೇಕು. ಅದರ ನಡುವೆ ಅವರು ಸೇರಿಕೊಂಡರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಪುನಃ ತಲಾಕ್ ಹೇಳಿದರೆ ಪುನಃ ಮುಟ್ಟಿನ ವರೆಗೆ ಜೊತೆಗೆ ಬದುಕಬೇಕು ಮತ್ತು ಪರಸ್ಪರ ಸೇರಬಾರದು. ಹಾಗಾದರೆ ಅದು ಒಂದು ತಲಾಕ್ ಆಗುತ್ತದೆಯೇ ಹೊರತು ಸಂಪೂರ್ಣ ವಿಚ್ಛೇದನ ಅಲ್ಲ. ಹೀಗೆ ಮೂರು ಹಂತದಲ್ಲಿ ವಿಚ್ಛೇದನ ಕೋರುವುದು, ಅವುಗಳ ಮಧ್ಯೆ ಜೊತೆಯಾಗಿಯೇ ಬದುಕುವುದು ಮತ್ತು ಈ ಅವಧಿಯ ಮಧ್ಯೆ ಅವರು ಪರಸ್ಪರ ಸೇರದೇ ಇರುವುದು ನಡೆದರೆ ಪೂರ್ಣ ತಲಾಕ್ ಆಗುತ್ತದೆ. ಇದು ಒಂದು ನಿಮಿಷದ ಪ್ರಕ್ರಿಯೆ ಅಲ್ಲ. ಕನಿಷ್ಠ ಅಂದರೆ ಮೂರು ತಿಂಗಳು ಮತ್ತು ಗರಿಷ್ಠ ಅಂದರೆ ಎಷ್ಟು ತಿಂಗಳೂ ತಗಲಬಹುದಾದ ಒಂದು ದೀರ್ಘ ಪ್ರಕ್ರಿಯೆ. ಹಾಗಂತ, ಈ ಪ್ರಕ್ರಿಯೆಯನ್ನು ತೀರಾ ಹಾಸ್ಯಾಸ್ಪದಗೊಳಿಸುವವರು ಮುಸ್ಲಿಮರಲ್ಲಿ ವಿರಳ ಸಂಖ್ಯೆಯಲ್ಲಾದರೂ ಖಂಡಿತ ಇದ್ದಾರೆ. ಬಹುಪತ್ನಿತ್ವವನ್ನು ದುರುಪಯೋಗಿಸುವವರೂ ಇದ್ದಾರೆ. ಈ ಕುರಿತಂತೆ ಮುಸ್ಲಿಮರೊಳಗೆಯೇ ಜಾಗೃತಿ ಕಾರ್ಯಕ್ರಮ ಖಂಡಿತ ಆಗಲೇ ಬೇಕು. ಜಿಹಾದ್‍ನ ಬಗ್ಗೆ ಸಮಾಜಕ್ಕೆ ತಿಳಿಸಿಕೊಟ್ಟಂತೆಯೇ ಬಹುಪತ್ನಿತ್ವ ಮತ್ತು ತಲಾಕ್‍ಗಳ ನಿಜ ರೂಪವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಇವುಗಳನ್ನು ಭೀಕರವಾಗಿಯೋ ಅಪಾಯಕಾರಿಯಾಗಿಯೋ ಕಲ್ಪಿಸಿಕೊಂಡವರಿಗೆ ಇದನ್ನು ತಿಳಿಸಿ ಕೊಡುವ ಅಗತ್ಯ ಖಂಡಿತಕ್ಕೂ ಇದೆ. ಆ ಬಳಿಕವೂ ಅವರು ಅದನ್ನು ಭೀಕರವಾಗಿಯೇ ಚಿತ್ರಿಸುವುದಾದರೆ ಆ ಬಗ್ಗೆ ಚರ್ಚೆಗಳಾಗಲಿ. ಸಂವಾದಗಳಾಗಲಿ. ಅದಕ್ಕಿಂತಲೂ ಮೊದಲು ತೀರ್ಮಾನ ಆಗದಿರಲಿ.

Thursday 5 November 2015

ಆಗಬೇಕಾದ್ದು ಜನನ ನಿಯಂತ್ರಣವೋ ಅಲ್ಲ....

      ಜನಸಂಖ್ಯೆ ಸಂಪತ್ತೋ ಆಪತ್ತೋ ಎಂಬ ಗಂಭೀರ ಚರ್ಚೆಗೆ ಚೀನಾ ಉತ್ತರವೊಂದನ್ನು ನೀಡಿದೆ. ಈ ಉತ್ತರ ಯಾಕೆ ಮಹತ್ವಪೂರ್ಣ ಎಂದರೆ, ಈ ಉತ್ತರದ ಹಿಂದೆ 35 ವರ್ಷಗಳ ದೀರ್ಘ ಅನುಭವ ಇದೆ. ಜನಸಂಖ್ಯೆಯನ್ನು ಆಪತ್ತು ಎಂದು ಘೋಷಿಸಿ ‘ಕುಟುಂಬಕ್ಕೊಂದೇ ಮಗು’ ಎಂಬ ಕಾಯ್ದೆಯನ್ನು 1980ರಲ್ಲಿ ಕಡ್ಡಾಯವಾಗಿ ಜಾರಿಗೊಳಿಸಿದ ರಾಷ್ಟ್ರ ಚೀನಾ. ಆಗ ಚೀನಾವನ್ನು ಭಾರತ ಬೆರಗಿನಿಂದ ನೋಡಿತ್ತು. ಬರಬರುತ್ತಾ ಈ ಬೆರಗು ಅಭಿಮಾನವಾಗಿ ಮಾರ್ಪಟ್ಟಿತು. ಬಳಿಕ ಚೀನಾವೇ ಮಾದರಿಯಾಯಿತು. ಚೀನಾದ ಜನನ ನಿಯಂತ್ರಣ ಕಾಯ್ದೆಯನ್ನು ಕೊಂಡಾಡಿ ಈ ದೇಶದಲ್ಲಿ ಸಾಕಷ್ಟು ಬರಹಗಳು, ಭಾಷಣಗಳೂ ಕಾಣಿಸಿಕೊಂಡವು. ಮಾತ್ರವಲ್ಲ, ಇಲ್ಲಿಯ ಜನಸಂಖ್ಯೆಯನ್ನು ಹಿಂದೂ ಜನಸಂಖ್ಯೆ, ಮುಸ್ಲಿಮ್ ಜನಸಂಖ್ಯೆ, ಫಾರ್ಸಿ ಜನಸಂಖ್ಯೆ ಎಂದು ವಿಭಜಿಸಿ, ಇದರಲ್ಲಿ ಮುಸ್ಲಿಮ್ ಜನಸಂಖ್ಯೆ ಆಪತ್ತುಕಾರಿ ಎಂದು ಹೇಳುವ ಮತ್ತು ಅದರ ನಿಯಂತ್ರಣಕ್ಕಾಗಿ ಕರೆ ಕೊಡುವ ಸಂದರ್ಭಗಳೂ ಸೃಷ್ಟಿಯಾದುವು. ಈ ವಾತಾವರಣ ಈ ದೇಶದಲ್ಲಿ ಈಗಲೂ ಇದೆ. ಇದೇ ಸಂದರ್ಭದಲ್ಲಿ, ಜನನ ನಿಯಂತ್ರಣದ ಇನ್ನೊಂದು ಮುಖವನ್ನು ಚೀನಾ ಜಗತ್ತಿನ ಮುಂದೆ ತೆರೆದಿಟ್ಟಿದೆ. ಈ ಮುಖ ಅತ್ಯಂತ ಕರಾಳವಾದುದು. ‘ಕುಟುಂಬಕ್ಕೊಂದೇ ಮಗು’ ಎಂಬ ಕಾಯ್ದೆಯ ಜಾರಿಯ ಬಳಿಕ ಸುಮಾರು 400 ಮಿಲಿಯನ್ ಮಕ್ಕಳ ಹುಟ್ಟನ್ನು ತಡೆದಿರುವುದಾಗಿ ಚೀನಾ ಅಧಿಕೃತವಾಗಿಯೇ ಒಪ್ಪಿಕೊಂಡಿದೆ. ಇದೊಂದೇ ಅಲ್ಲ, ಅಸಂಖ್ಯಾತ ಗರ್ಭಪಾತಗಳು ಬಲವಂತದಿಂದ ನಡೆದಿವೆ. ಗರ್ಭಪಾತದ ಸಂದರ್ಭದಲ್ಲಿ ತಾಯಂದಿರ ಸಾವು, ಶಾಶ್ವತ ಅಂಗವೈಕಲ್ಯ ಮತ್ತು ಶಾಶ್ವತ ಕಾಯಿಲೆಗಳಿಗೆ ಅಸಂಖ್ಯ ತಾಯಂದಿರು ತುತ್ತಾಗಿದ್ದಾರೆ. ಬಲವಂತದಿಂದ ವ್ಯಾಸಕ್ಟಮಿ ಮತ್ತು ಟ್ಯುಬೆಕ್ಟಮಿ ಚಿಕಿತ್ಸೆಗಳು ನಡೆದಿವೆ. ಚೀನಾವು ಅಧಿಕೃತ ಅಂಕಿ-ಅಂಶಗಳನ್ನು ಜಗತ್ತಿನ ಮುಂದಿಡುವಾಗ ಅನಧಿಕೃತವಾಗಿ ನಡೆದ ಶಿಶುಹತ್ಯೆಗಳ ಪ್ರಮಾಣ ಈ ಅಧಿಕೃತಕ್ಕಿಂತ ದುಪ್ಪಟ್ಟು ಇದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕ್ರೌರ್ಯಗಳ ಒಟ್ಟು ಪರಿಣಾಮ ಏನೆಂದರೆ, ಯುವ ಸಮೂಹದ ತೀವ್ರ ಕುಸಿತ. ದುಡಿಯುವ ವರ್ಗ ಮತ್ತು ಈ ವರ್ಗವನ್ನು ಅವಲಂಬಿಸಿ ಬದುಕುವ ವೃದ್ಧರ ನಡುವಿನ ಅನುಪಾತದಲ್ಲಿ ಅಪಾಯಕಾರಿ ಏರಿಳಿತಗಳಾಗಿವೆ. 1950ರಲ್ಲಿ ದುಡಿಯುವ ವರ್ಗದ ಪ್ರಮಾಣ 63% ಇದ್ದರೆ 2010ರಲ್ಲಿ ಅದು 34%ಕ್ಕೆ ಕುಸಿದಿದೆ. ಅಂದರೆ ದುಡಿಯುವ ವರ್ಗಕ್ಕಿಂತ ಅವರನ್ನು ಅವಲಂಬಿಸಿಕೊಂಡ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದಲೇ ಚೀನಾ ಇವತ್ತು ತನ್ನ ಒಂದೇ ಮಗು ನಿಯಮವನ್ನು ಸಡಿಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮಾತ್ರವಲ್ಲ, ಪ್ರತಿ ಕುಟುಂಬ ಎರಡು ಮಕ್ಕಳನ್ನು ಹೊಂದಬಹುದು ಎಂದು ಘೋಷಿಸಿದೆ.
  ನಿಜವಾಗಿ, ಜನಸಂಖ್ಯೆಗೂ ಜನರ ಜೀವನ ಮಟ್ಟಕ್ಕೂ ಅಬೇಧ್ಯ ಸಂಬಂಧ ಇದೆ. ದುರಂತ ಏನೆಂದರೆ, ಜನರ ಜೀವನ ಮಟ್ಟವನ್ನು ಸುಧಾರಿಸಲು ವಿಫಲವಾದ ಪ್ರಭುತ್ವವು ತಾಯಂದಿರ ಹೊಟ್ಟೆಯನ್ನು ತೋರಿಸಿ ತನ್ನ ವೈಫಲ್ಯವನ್ನು ಅಡಗಿಸಿಕೊಳ್ಳಲು ಯತ್ನಿಸುತ್ತಿದೆ. ಹಸಿದ ಹೊಟ್ಟೆಗೆ ಅನ್ನವನ್ನು ಕೊಡುವ ಬದಲು ಹೊಟ್ಟೆಯಲ್ಲಿರುವ ಶಿಶುವನ್ನು ಕಿತ್ತುಕೊಳ್ಳಲು ಸಂಚು ರೂಪಿಸುವ ಈ ಕ್ರಮವನ್ನು ಕ್ರೌರ್ಯ ಎಂದಲ್ಲದೇ ಇನ್ನೇನೆಂದು ಕರೆಯಬೇಕು? ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇವತ್ತು ಜನಸಂಪತ್ತಿನ ಕೊರತೆಯನ್ನು ಎದುರಿಸುತ್ತಿವೆ. ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಅವು ಪಾರಿತೋಷಕಗಳನ್ನು ಘೋಷಿಸುತ್ತಿವೆ. ಮಕ್ಕಳೇ ಬೇಡ ಎಂದು ತೀರ್ಮಾನಿಸುವ ಯುವ ಪೀಳಿಗೆಯಿಂದಾಗಿ ಮುಂದೊಮ್ಮೆ ವೃದ್ಧರೇ ತುಂಬಿ ಹೋಗಬಹುದೆಂಬ ಅಂಜಿಕೆಯು ಅನೇಕ ರಾಷ್ಟ್ರಗಳನ್ನು ಇವತ್ತು ಕಾಡತೊಡಗಿದೆ. ಅದೇ ವೇಳೆ, ಹಿಂದುಳಿತ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನನ ನಿಯಂತ್ರಣದ ಬಗ್ಗೆ ಪ್ರಭುತ್ವದಿಂದಲೇ ಹೇಳಿಕೆಗಳು ಹೊರಬೀಳುತ್ತಿವೆ. ಜನಸಂಖ್ಯೆಯನ್ನು ಆಪತ್ತೋ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಷ್ಟಕ್ಕೂ ಮುಂದುವರಿದ ಮತ್ತು ಹಿಂದುಳಿದ ರಾಷ್ಟ್ರಗಳ ನಡುವೆ ಜನನ ಪ್ರಕ್ರಿಯೆಗೆ ಸಂಬಂಧಿಸಿ ಈ ವೈರುಧ್ಯಗಳೇಕೆ ಕಾಣಿಸುತ್ತಿವೆ? ಶೈಕ್ಷಣಿಕವಾಗಿ ಅತ್ಯಂತ ಮುಂದಿರುವ ಕೇರಳದಲ್ಲಿ ಜನನ ಅನುಪಾತ ದೇಶದಲ್ಲೇ ಅತ್ಯಂತ ಕಡಿಮೆಯಿದೆ. ಶೈಕ್ಷಣಿಕವಾಗಿ ಮುಂದಿರುವ ದಕ್ಷಿಣ ಭಾರತದಲ್ಲಿ ಜನನ ಪ್ರಕ್ರಿಯೆಯು ಉತ್ತರ ಭಾರತಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆ. ಯಾಕೆ ಹೀಗೆ? ಒಂದು ರೀತಿಯಲ್ಲಿ, ತಾಯಂದಿರ ಹೊಟ್ಟೆಗೂ ಅವರು ಬದುಕುತ್ತಿರುವ ಪರಿಸರ, ಜೀವನ ಮಟ್ಟ, ಶಿಕ್ಷಣ, ಉದ್ಯೋಗ.. ಮುಂತಾದುವುಗಳಿಗೂ ಸಂಬಂಧ ಇದೆ. ಹಾಗಂತ, ಇದು ಪ್ರಭುತ್ವಕ್ಕೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ಜನಸಂಖ್ಯೆಗೆ ಸಂಬಂಧಿಸಿ ಒಂದಕ್ಕಿಂತ ಹೆಚ್ಚು ಸವಿೂಕ್ಷೆಗಳಾಗಿವೆ. ಎಲ್ಲೆಲ್ಲಿ, ಯಾವ್ಯಾವ ಪ್ರದೇಶ ಮತ್ತು ಪರಿಸರದಲ್ಲಿ ಜನಸಂಖ್ಯೆ ಹೆಚ್ಚಿದೆ ಅಥವಾ ಕಡಿಮೆಯಿದೆ ಎಂಬುದನ್ನು ಅಂಥ ಸವಿೂಕ್ಷೆಗಳು ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಟ್ಟಿವೆ. ಆದರೆ, ಬಡವರ ಹೊಟ್ಟೆಯನ್ನು ಕತ್ತರಿಸಿದಷ್ಟು ಸುಲಭವಾಗಿ ಜನರ ಜೀವನ ಮಟ್ಟವನ್ನು ಎತ್ತರಿಸಲು ಸಾಧ್ಯವಿಲ್ಲ ಅನ್ನುವುದು ಪ್ರಭುತ್ವಕ್ಕೆ ಚೆನ್ನಾಗಿ ಗೊತ್ತು. ಎಲ್ಲರಿಗೂ ಉತ್ತಮ ಶಿಕ್ಷಣ, ಆಹಾರ, ಉದ್ಯೋಗವನ್ನು ಒದಗಿಸುವುದಕ್ಕೆ ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆಯ ಅಗತ್ಯವಿದೆ. ಅದಕ್ಕಿಂತ ತಾಯಂದಿರ ಹೊಟ್ಟೆಯನ್ನೇ ಅಪಾಯಕಾರಿಯಾಗಿ ಬಿಂಬಿಸುವುದು ಸುಲಭ ಮತ್ತು ಆಕರ್ಷಕ. ಅದನ್ನು ಪ್ರತಿಭಟಿಸುವ ಸಾಮರ್ಥ್ಯವಾಗಲಿ ಜ್ಞಾನವಾಗಲಿ ಬಡವರಲ್ಲಿರುವುದಿಲ್ಲ. ಸರಕಾರವು ಬಡವರನ್ನು ತೋರಿಸಿ ‘ಮಕ್ಕಳನ್ನು ಹುಟ್ಟಿಸುವ ಮೆಷೀನು’ಗಳೆಂದು ತಮಾಷೆ ಮಾಡುವಾಗ ಈ ವರ್ಗ ಒಳಗೊಳಗೇ ಅಪರಾಧಿ ಭಾವನೆಯಿಂದ ಕುಸಿಯತೊಡಗುತ್ತದೆ. ‘ನಿನಗೆಷ್ಟು ಮಕ್ಕಳು’ ಎಂದು ವೈದ್ಯರು ವ್ಯಂಗ್ಯದಿಂದ ಇರಿಯುತ್ತಾರೆ. ಜನಗಣತಿಗೆ ಬಂದವರು ‘ನಿಮ್ಮ ಮನೆ ಮಿನಿ ಅಂಗನವಾಡಿ’ ಎಂದು ಕುಟುಕುತ್ತಾರೆ. ಹಾಗೆಯೇ ಮಾಧ್ಯಮಗಳು ಕೂಡ ಜನನ ನಿಯಂತ್ರಣದ ಬಗ್ಗೆ ಮೇಲು ಮೇಲಿನ ವಿವರಣೆಗಳನ್ನು ನೀಡುತ್ತಿರುತ್ತವೆ. ಒಂದು ರೀತಿಯಲ್ಲಿ ಬಡವರನ್ನು ಅಣಕಿಸುವ ಸರಕಾರಿ ನಾಟಕವೇ ಜನಸಂಖ್ಯಾ ಸ್ಫೋಟ. ಬಡ ಹೊಟ್ಟೆಗೆ ಅನ್ನ ನೀಡುವ ಬದಲು ಹೊಟ್ಟೆಯನ್ನೇ ಅಪಾಯಕಾರಿ ಎಂದು ಘೋಷಿಸುವ ಕ್ರೌರ್ಯ ಇದು.
  ಜನನ ಮತ್ತು ಮರಣ ಎರಡೂ ಪ್ರಾಕೃತಿಕವಾದುದು. ಅದು ನಿರಂತರ ಮತ್ತು ಸಹಜ. ಇದರಲ್ಲಿ ಒಂದನ್ನು ಅಪಾಯಕಾರಿ ಮತ್ತು ಇನ್ನೊಂದನ್ನು ಸಜ್ಜನ ಎಂದು ವಿಂಗಡಿಸುವುದು ನಮ್ಮ ಅಪ್ರಬುದ್ಧತೆಯನ್ನೇ ಸೂಚಿಸುತ್ತದೆ. ಭೌತಿಕತೆಯನ್ನೇ ಮಾನದಂಡವಾಗಿಸಿಕೊಂಡು ಮಾಡಲಾಗುವ ಅಭಿವೃದ್ಧಿ ಎಷ್ಟು ಅಪಾಯಕಾರಿಯೋ ಬಡತನವನ್ನು ಉಳಿಸಿಕೊಂಡೇ ಅಥವಾ ಬಡತನ ನಿರ್ಮೂಲನಕ್ಕಾಗಿ ಕ್ರಮಗಳನ್ನು ಕೈಗೊಳ್ಳದೆಯೇ ತಾಯಂದಿರ ಹೊಟ್ಟೆಯನ್ನು ಆಪತ್ತು ಎಂದು ಘೋಷಿಸುವುದು ಕೂಡ ಅಷ್ಟೇ ಅಪಾಯಕಾರಿ. ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಜನನ ಪ್ರಕ್ರಿಯೆ ನಿಂತು ಹೋಗುತ್ತಿರುವುದಕ್ಕೆ ಪ್ರಮುಖ ಕಾರಣ ಅಲ್ಲಿನ ಜೀವನ ದೃಷ್ಟಿಕೋನ. ಗರ್ಭ ಧರಿಸುವುದು, ಮಕ್ಕಳ ಪಾಲನೆ, ಕುಟುಂಬ ನಿರ್ವಹಣೆ ಮುಂತಾದ ಜವಾಬ್ದಾರಿಗಳನ್ನು ಹೊರಲು ಮುಂದುವರಿದ ಪೀಳಿಗೆ ತಯಾರಾಗುತ್ತಿಲ್ಲ. ಬದುಕು ಅನುಭವಿಸಲಿಕ್ಕೇ ಹೊರತು ಜವಾಬ್ದಾರಿ ಹೊರಲಲ್ಲ ಎಂಬೊಂದು ವಾತಾವರಣ ಅಲ್ಲಿ ನಿರ್ಮಾಣವಾಗುತ್ತಿದೆ. ಗಂಡು-ಹೆಣ್ಣು ಇಬ್ಬರೂ ದುಡಿಯುವುದು ಮತ್ತು ಇಷ್ಟ ಬಂದಂತೆ ಬದುಕುವುದರ ಹೊರತಾಗಿ ಸಾಮಾಜಿಕ ಜವಾಬ್ದಾರಿಗಳು ಮುಂದುವರಿದ ರಾಷ್ಟ್ರಗಳ ಆಧುನಿಕ ಪೀಳಿಗೆಗಳಲ್ಲಿ ಕಡಿಮೆಗೊಳ್ಳುತ್ತಿದೆ. ಆದ್ದರಿಂದ, ಜನಸಂಖ್ಯೆಯ ಸುತ್ತ ಚರ್ಚೆ ನಡೆಸುವಾಗ ಈ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಪ್ರಭುತ್ವ ತನ್ನ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿದರೆ ಪ್ರಕೃತಿಯ ಧಾರಣಾ ಸಾಮರ್ಥ್ಯದಷ್ಟೇ ಮಕ್ಕಳು ಹುಟ್ಟಿಯಾವು. ನಾವು ಬೊಟ್ಟು ಮಾಡಬೇಕಾದದ್ದು ಬಡ ತಾಯಂದಿರ ಹೊಟ್ಟೆಯನ್ನಲ್ಲ, ಪ್ರಭುತ್ವದ ಅಸಾಮರ್ಥ್ಯವನ್ನು. ಇಲ್ಲದಿದ್ದರೆ, ಚೀನಾ ಇವತ್ತು ಎದುರಿಸುತ್ತಿರುವ ವೃದ್ಧರ ಸಮಸ್ಯೆಯನ್ನು ಮುಂದೆ ನಾವೂ ಎದುರಿಸಬೇಕಾದೀತು.