Monday 26 December 2016

ಬಾಟಲಿಯ ಎದುರು ಜಯಗಳಿಸಬೇಕಾದ ಬಟ್ಟಲು

      ಒಂದು ಚೀಟಿಯಲ್ಲಿ ಸಾವು ಮತ್ತು ಇನ್ನೊಂದು ಚೀಟಿಯಲ್ಲಿ ಬದುಕು ಎಂದು ಬರೆದು, ನಿಮ್ಮ ಆಯ್ಕೆಯ ಚೀಟಿಯನ್ನು ಎತ್ತಿಕೊಳ್ಳಿ ಎಂದು ಜನರಲ್ಲಿ ವಿನಂತಿಸಿದರೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ. ಸಾವು ಯಾರ ಆಯ್ಕೆಯೂ ಅಲ್ಲ ಅಥವಾ ಅದು ಆಯ್ಕೆ ಎಂಬ ಚೌಕಟ್ಟಿನಿಂದ ಹೊರಗಿನದು. ಹೊಟ್ಟೆಯಲ್ಲಿರುವ ಮಗುವನ್ನೇ ಸಾಯಿಸುವ ಸ್ವಾತಂತ್ರ್ಯ ಅದರ ತಾಯಿಗಿಲ್ಲ. ನಿಜವಾಗಿ, ಇನ್ನೂ ಹುಟ್ಟದೇ ಇರುವ ಮಗುವಿನ ಸಾವು-ಬದುಕಿನ ತೀರ್ಮಾನದ ಸ್ವಾತಂತ್ರ್ಯ ತಾಯಿಗೆ ಇರಲೇಬೇಕಿತ್ತು. ಯಾಕೆಂದರೆ, ಆ ಮಗು ಇನ್ನೂ ಭೂಮಿಗೆ ಬಂದಿಲ್ಲ. ಜಗತ್ತು ಆ ಮಗುವನ್ನು ನೋಡಿಯೂ ಇಲ್ಲ. ಹೆಸರು, ಉದ್ಯೋಗ, ಆಧಾರ್ ಕಾರ್ಡ್, ಮತದಾನದ ಗುರುತು ಚೀಟಿ, ಚಾಲನಾ ಪರವಾನಿಗೆ, ಪಾಸ್‍ಪೋರ್ಟ್... ಇತ್ಯಾದಿಗಳೊಂದೂ ಇಲ್ಲದ ಮತ್ತು ಬಾಹ್ಯ ಜಗತ್ತಿಗೆ ಇನ್ನೂ ಬಾರದ ಮಗು.ಆದರೂ  ಮಗುವನ್ನು ಸಾಯಿಸುವ ಹಾಗಿಲ್ಲ. ಒಂದು ವೇಳೆ, ಗರ್ಭ ಧರಿಸಿರುವುದು ನಾನು ಮತ್ತು ಗರ್ಭವನ್ನು ಉಳಿಸಿಕೊಳ್ಳಬೇಕೋ ಅಳಿಸಬೇಕೋ ಎಂಬ ತೀರ್ಮಾನವೂ ನನ್ನದೇ ಎಂದು ಓರ್ವ ಮಹಿಳೆ ವಾದಿಸುವುದಾದರೆ ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಬದುಕು ಅಷ್ಟು ಅಮೂಲ್ಯವಾದುದು. ಆದ್ದರಿಂದಲೇ, ಆತ್ಮಹತ್ಯೆಯನ್ನು ಅಪರಾಧದ ಪಟ್ಟಿಯಲ್ಲಿಡಲಾಗಿದೆ. ಈ ಕಾರಣದಿಂದಲೇ ಇಲ್ಲಿ ಪ್ರಶ್ನೆಯೊಂದು ಉದ್ಭವಿಸುತ್ತದೆ. ಬದುಕನ್ನು ನಮ್ಮ ಕಾನೂನು ಇಷ್ಟು ಆಳವಾಗಿ ಪ್ರೀತಿಸುತ್ತಿರುವಾಗಲೂ ಮದ್ಯ ಹೇಗೆ ನಮ್ಮ ನಡುವೆ ಅಸ್ತಿತ್ವವನ್ನು ಉಳಿಸಿಕೊಂಡಿತು? ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಯಾವುದಾದರೂ ಜ್ಯೋತಿಷಿಗಳೋ ವಾಸ್ತು ತಜ್ಞರೋ ಹೇಳುವುದಲ್ಲ. ಹೆಂಡ-ಸಾರಾಯಿ ಸಹವಾಸ, ಪತ್ನಿ - ಮಕ್ಕಳ ಉಪವಾಸ... ಎಂಬ ಘೋಷಣೆಯೂ ಅವರದಲ್ಲ. ಸಿನಿಮಾಗಳಲ್ಲಿ ಮದ್ಯಪಾನದ ದೃಶ್ಯ ಪ್ರಸಾರವಾಗುವಾಗಲೆಲ್ಲ `ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಕಡ್ಡಾಯವಾಗಿ ಸಾರಬೇಕೆಂದು ಹೇಳಿದ್ದೂ ಇವರಲ್ಲ. ಎಲ್ಲವೂ ಸರಕಾರದ್ದೇ ಆದೇಶಗಳು. ಇಷ್ಟಿದ್ದೂ ಮದ್ಯವನ್ನೇಕೆ ನಮ್ಮ ವ್ಯವಸ್ಥೆ ಆಲಂಗಿಸುತ್ತಿದೆ? ಕರ್ನಾಟಕದ ಬೊಕ್ಕಸಕ್ಕೆ ವರ್ಷಕ್ಕೆ 16510 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂಬುದರ ಹೊರತು ಬೇರೆ ಯಾವ ಸಮರ್ಥನೆ ನಮ್ಮನ್ನಾಳುವವರಿಗಿದೆ? ಬರೇ ಆದಾಯವೊಂದೇ ಮದ್ಯಪಾನವನ್ನು ಕಾನೂನು ಸಮ್ಮತಗೊಳಿಸುವುದಕ್ಕೆ ಸಾಕಾಗಬಹುದೆ? ಓರ್ವರ ಆರೋಗ್ಯವನ್ನು ಕೆಡಿಸಿ ಬೊಕ್ಕಸ ತುಂಬಿಸುವುದು ಎಷ್ಟಂಶ ನೈತಿಕವಾದುದು? ಮದ್ಯಪಾನ ಸಂಬಂಧಿ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸಾಯುವವರ ಸಂಖ್ಯೆ ಒಂದೂವರೆ ಲಕ್ಷಕ್ಕಿಂತ ಅಧಿಕ ಎಂದು ಕಳೆದವಾರ ಸ್ವತಃ ಕೇಂದ್ರ ಸರಕಾರವೇ ಸುಪ್ರೀಮ್ ಕೋರ್ಟ್‍ನಲ್ಲಿ ಒಪ್ಪಿಕೊಂಡಿದೆ. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದರಿಂದ ಸ್ವತಃ ಮದ್ಯಪಾನಿಯಷ್ಟೇ ಅನಾಹುತಕ್ಕೆ ತುತ್ತಾಗುವುದಲ್ಲ, ಮದ್ಯಪಾನ ಮಾಡದೇ ಇರುವ ಮತ್ತು ಮದ್ಯವನ್ನು ಪ್ರಬಲವಾಗಿ ವಿರೋಧಿಸುವ ಜನರೂ ಅದರ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೇವಲ ಕರ್ನಾಟಕ ರಾಜ್ಯವೊಂದರಲ್ಲೇ 2016ರಲ್ಲಿ 82,049 ಮಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕೆ ದಂಡತೆತ್ತಿದ್ದಾರೆ. 2015ರಲ್ಲಿ ಈ ಸಂಖ್ಯೆ 80,479ಕ್ಕೆ ಕುಸಿದರೆ 2016 ಅಕ್ಟೋಬರ್‍ಗಾಗುವಾಗಲೇ ಹೀಗೆ ದಂಡ ತೆತ್ತವರ ಸಂಖ್ಯೆ 91,957ಕ್ಕೇರಿದೆ. ಈ ಕಾರಣದಿಂದಲೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ಒಳಗಡೆ ಇರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಮ್ ಕೋರ್ಟ್‍ನ ಕಳೆದವಾರದ ಆದೇಶ ಮುಖ್ಯವೆನಿಸುವುದು.
      ವಿಶೇಷ ಏನೆಂದರೆ, ಮದ್ಯ ನಿಷೇಧಕ್ಕೆ ಒತ್ತಾಯಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಅರ್ಜಿಯನ್ನು ದಾಖಲಿಸಿರುವುದು ಸರಕಾರ ಅಲ್ಲ, ಅಪಘಾತಕ್ಕೀಡಾಗಿ ವೀಲ್‍ಚೇರ್‍ಗೆ ಸೀಮಿತವಾದ ಹರ್ಮಾನ್ ಸಿಂಗ್ ಎಂಬ ವ್ಯಕ್ತಿ. ನಿಜವಾಗಿ ಮದ್ಯಪಾನವು ಚಾಲಕನ ನಿಯಂತ್ರಣವನ್ನು ಮಾತ್ರ ತಪ್ಪಿಸುವುದಲ್ಲ, ಈ ದೇಶದ ಕೋಟ್ಯಂತರ ಜನರ ನಾಡಿ ಬಡಿತವನ್ನೇ ತಪ್ಪಿಸುತ್ತದೆ. ಹಾಗಂತ, ಈ ಕುಡುಕರು ಆಶ್ರಯಿಸಿಕೊಂಡಿರುವುದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಅಸುಪಾಸಿನಲ್ಲಿರುವ ಮದ್ಯದಂಗಡಿಗಳನ್ನಲ್ಲ. ಈ ಹೆದ್ದಾರಿಗಳ ತೀರಾ ತೀರಾ ಹೊರಗಡೆ ರಾಜ ಠೀವಿಯಿಂದ ಫೋಸು ಕೊಡುತ್ತಿರುವ ಮದ್ಯದಂಗಡಿಗಳನ್ನು. ದಿನವಹೀ ದುಡಿದ ದುಡ್ಡನ್ನು ಮದ್ಯದಂಗಡಿಗೆ ಸುರಿದು ಮನವನ್ನೂ ಮನೆಯನ್ನೂ ನರಕ್ಕೆ ಮಾಡುವ ಕೋಟ್ಯಂತರ ಕುಡುಕರನ್ನು ತಯಾರಿಸುತ್ತಿರುವುದು ಈ ಮದ್ಯದಂಗಡಿಗಳೇ. ಸರಕಾರಗಳ ಸಚಿವ ಸಂಪುಟದಲ್ಲಿ ಅಬಕಾರಿ ಎಂಬ ಮದ್ಯಪಾನದ ಖಾತೆಯೇ ಇದೆ. ಆ ಖಾತೆಯ ಹೊಣೆಗಾರಿಕೆಯೇ ಜನರಿಗೆ ಕುಡಿತವನ್ನು ಸುಲಭಗೊಳಿಸುವುದು ಮತ್ತು ಆದಾಯವನ್ನು ಲೆಕ್ಕ ಹಾಕುವುದು. ಅಷ್ಟಕ್ಕೂ, ಇಂಥದ್ದೊಂದು ದ್ವಂದ್ವ ಬೇರೆ ಇರಲು ಸಾಧ್ಯವೇ? ಒಂದು ಕಡೆ ಕುಡಿತವನ್ನು ಆರೋಗ್ಯಕ್ಕೆ ಹಾನಿಕರ ಎಂದು ಸರಕಾರ ಘೋಷಿಸುತ್ತಲೇ ಇನ್ನೊಂದು ಕಡೆ ಅದನ್ನು ಮಾರುವುದಕ್ಕೆಂದೇ ಖಾತೆಯೊಂದನ್ನು ಇಟ್ಟುಕೊಳ್ಳುವುದಕ್ಕೆ ಏನೆನ್ನಬೇಕು? ತನ್ನದೇ ಪ್ರಜೆಗಳನ್ನು ಅಂಗವಿಕಲರನ್ನಾಗಿಸಿಯೋ ರೋಗಿಗಳಾಗಿಸಿಯೋ ಅಥವಾ ಸಾವಿಗೆ ದೂಡಿಯೋ ಸರಕಾರವೊಂದು ಅದಾಯ ಗಳಿಸಲು ಶ್ರಮಿಸುತ್ತದೆಂಬುದು ಏನನ್ನು ಸೂಚಿಸುತ್ತದೆ? ಅಂದಹಾಗೆ, ಯಾವುದೇ ಸರಕಾರಿ ನೀತಿಯನ್ನು ಜನಪರವೋ ಜನವಿರೋಧಿಯೋ ಎಂದು ತೀರ್ಮಾನಿಸುವುದಕ್ಕೆ ಒಂದು ಮಾನದಂಡ ಇದೆ. ಅದು ಆದಾಯವನ್ನು ಆಧಾರವಾಗಿಕೊಂಡ ಮಾನದಂಡ ಅಲ್ಲ. ಜನರ ಒಳಿತು ಮತ್ತು ಸಂತೋವನ್ನು ಆ ಮಾನದಂಡ ಅವಲಂಬಿಸಿರುತ್ತದೆ. ಮದ್ಯ ಯಾವ ರೀತಿಯಲ್ಲೂ ಜನರ ಒಳಿತನ್ನು ಬಯಸುತ್ತಿಲ್ಲ. ಅದರ ಚಟಕ್ಕೆ ತುತ್ತಾದವರು ಮನೆ ಮತ್ತು ಸಮಾಜದ ನೆಮ್ಮದಿಯನ್ನು ಕೆಡಿಸಿ ಬಿಡುತ್ತಾರೆ. ಅಂಗವಿಕಲ ಸಮಾಜದ ಹುಟ್ಟಿಗೆ ಕಾರಣರಾಗುತ್ತಾರೆ. ಅಪಘಾತದ ಮೂಲಕ ಸಾಮೂಹಿಕ ಹತ್ಯೆಗೆ ಕಾರಣರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಹೆದ್ದಾರಿಗಳಿಂದ ಮಾತ್ರ ಅಲ್ಲ, ಭೂಮಿಯಿಂದಲೇ ಮದ್ಯದಂಗಡಿಗಳು ತೆರವುಗೊಳ್ಳಲೇ ಬೇಕಾದ ಸರ್ವ ಅಗತ್ಯ ಇದೆ. ಇದರ ಆರಂಭ ಎಂಬ ನೆಲೆಯಲ್ಲಿ ಸುಪ್ರೀಮ್‍ಕೋರ್ಟ್‍ನ ಆದೇಶವನ್ನು ನಾವು ಸ್ವಾಗತಿಸಬೇಕಾಗಿದೆ. ಈ ಆದೇಶವು ಮುಂದಿನ ದಿನಗಳಲ್ಲಿ ಹೆದ್ದಾರಿಗಳ 500 ಮೀಟರ್ ಫಾಸಲೆಯನ್ನು ಮೀರಿ ಕಿಲೋ ಮೀಟರ್‍ಗಳಾಗಿ ಬಳಿಕ ದೇಶದಿಂದಲೇ ಮದ್ಯದಂಗಡಿಗಳನ್ನು ತೆರವುಗೊಳಿಸುವುದಕ್ಕೆ ಕಾರಣವಾಗಬೇಕಾಗಿದೆ.
       ಅಂದಹಾಗೆ, ಮದ್ಯ ಎಂಬುದು ಅನ್ನದಂತೆ ಅಲ್ಲ. ಅದೊಂದು ನಶೆ. ಅನ್ನ ನಶೆ ಅಲ್ಲ, ಆರೋಗ್ಯವರ್ಧಕ ಆಹಾರ. ಮದ್ಯವಂತೂ ಆರೋಗ್ಯವನ್ನು ಕೆಡಿಸುವ ಮತ್ತು ನಶೆಯಲ್ಲಿ ತೇಲಾಡಿಸುವ ಪಾನೀಯ. ಆದ್ದರಿಂದ ಅನ್ನದ ಬಟ್ಟಲು ಮತ್ತು ಮದ್ಯದ ಬಾಟಲು ಸರಿಸಮಾನವಾಗಿ ಗೌರವಕ್ಕೀಡಾಗಲು ಸಾಧ್ಯವೇ ಇಲ್ಲ. ಅನ್ನವನ್ನು ಗೌರವಿಸುವ ಸಮಾಜ ಆರೋಗ್ಯಪೂರ್ಣವಾಗಿರುತ್ತದೆ. ನಶೆಯನ್ನು ಬೆಂಬಲಿಸುವ ಸಮಾಜ ಅನಾರೋಗ್ಯವನ್ನು ಪ್ರತಿನಿಧಿಸುತ್ತದೆ. ಅನಾರೋಗ್ಯವು ಬಲಿಷ್ಠ ದೇಶವನ್ನು ಮತ್ತು ಆರೋಗ್ಯಪೂರ್ಣ ಚಿಂತನೆಗಳನ್ನು ಹೊಂದಿರಲು ಸಾಧ್ಯವಿಲ್ಲ. ಅತ್ಯಾಚಾರಕ್ಕೂ ಮದ್ಯಕ್ಕೂ ನಡುವೆ ನಂಟಿರುವುದೇ ಅನ್ನ ಮತ್ತು ನಶೆಯಲ್ಲಿ ನಮ್ಮ ಆಯ್ಕೆ ಯಾವುದಾಗಿರಬೇಕೆಂಬುದನ್ನು ಸೂಚಿಸುತ್ತದೆ. ನಶೆ ನಮ್ಮನ್ನು ಮತ್ತು ನಮ್ಮತನವನ್ನು ಕೊಂದರೆ ಅನ್ನ ನಮ್ಮನ್ನು ಮತ್ತು ದೇಶವನ್ನು ಬದುಕಿಸುತ್ತದೆ. ಆದ್ದರಿಂದ ಸಾವನ್ನು ತಿರಸ್ಕರಿಸೋಣ. ಬದುಕನ್ನು ಆರಿಸೋಣ.

Tuesday 20 December 2016

ಲಿಂಗಸುಗೂರಿನ ಗಂಗಮ್ಮ ಮತ್ತು ಕಾಡುವ ಪ್ರಶ್ನೆ

       ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ತಂದೆ ಮತ್ತು ಮಕ್ಕಳಿಗೆ ಸಂಬಂಧಿಸಿದ್ದು. ಒಂದು ಘಟನೆ ದೆಹಲಿಯ ಹೈಕೋರ್ಟ್‍ನಲ್ಲಿ ನಡೆದರೆ ಇನ್ನೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ನಡೆಯಿತು. ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ವೃದ್ಧೆ ಗಂಗಮ್ಮಳನ್ನು ಏಕೈಕ ಮಗ ಬಿಟ್ಟು ಹೋಗಿದ್ದ. ಎಂಟು ತಿಂಗಳ ಹಿಂದೆ ಬಿದ್ದು ಆಕೆಯ ಕಾಲು ಮುರಿದಿತ್ತು. ನಡೆಯುವುದಕ್ಕಾಗುತ್ತಿರಲಿಲ್ಲ. ತೆವಳಿಕೊಂಡು ಹೋಗಿ ಶೌಚ ಮತ್ತಿತರ ಕರ್ಮಗಳನ್ನು ಮಾಡಬೇಕಿತ್ತು. ತಾಯಿ ಮನೆಯೊಳಗೆ ಹೊಲಸು ಮಾಡುತ್ತಾಳೆಂಬ ಸಿಟ್ಟು ಮಗನಿಗೆ. ಏಕೈಕ ಮಗ ಎಂಬ ನೆಲೆಯಲ್ಲಿ ಮುದ್ದಿನಿಂದ ಬೆಳೆಸಿದ್ದ ಆಕೆ ತನ್ನ 5 ಎಕರೆ ಭೂಮಿಯನ್ನು ಮಗನ ಹೆಸರಲ್ಲಿ ಬರೆಸಿದ್ದಳು. ಇದೀಗ ಮಗ ಆಸ್ಪತ್ರೆಗೆಂದು ಹೇಳಿ ಕರಕೊಂಡು ಬಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ. ಆಕೆ ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಕಂಡಕಂಡವರಲ್ಲಿ ಅಂಗಲಾಚುತ್ತಿದ್ದಳು. ಇಂಥದ್ದೇ ಕರುಣ ಕತೆಯೊಂದು ದಿಲ್ಲಿಯಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ವೃದ್ಧ ಹೆತ್ತವರು ತಮ್ಮ ಮಗ ಮತ್ತು ಸೊಸೆಯ ವಿರುದ್ಧ ಕೋರ್ಟ್‍ಗೆ ದೂರು ಸಲ್ಲಿಸಿದ್ದರು. ತಮ್ಮ ಬದುಕನ್ನು ಮಗ ಮತ್ತು ಸೊಸೆ ನರಕವನ್ನಾಗಿ ಮಾಡಿದ್ದಾರೆ. ಕನಿಷ್ಠ ಮನೆಯ ವಿದ್ಯುತ್ ಬಿಲ್ ಅನ್ನು ಪಾವತಿಸುವುದಕ್ಕೂ ಅವರು ನಿರಾಕರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಮನೆಯ ಪ್ರಥಮ ಅಂತಸ್ತಿನಲ್ಲಿ  ಬಿಡಾರ ಹೂಡಿರುವ ಮಗ ಮತ್ತು ಕುಟುಂಬವನ್ನು ಮನೆಯಿಂದ ಹೊರಹೋಗುವಂತೆ ಆದೇಶಿಸಬೇಕು ಎಂದು ವಿನಂತಿಸಿದ್ದರು. ದೆಹಲಿಯ ಕೆಳ ಕೋರ್ಟು ಈ ಮನವಿಯನ್ನು ಪುರಸ್ಕರಿಸಿತು. ಅದರ ವಿರುದ್ಧ ಮಗ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ. ಹೈಕೋರ್ಟ್ ಕಳೆದವಾರ ಮಗನನ್ನು ತರಾಟೆಗೆ ತೆಗೆದುಕೊಂಡಿತಲ್ಲದೇ, ಪೋಷಕರ ಮನೆಯಲ್ಲಿ ವಾಸಿಸುವುದು ಪುತ್ರನ ಹಕ್ಕಲ್ಲ ಎಂದು ತೀರ್ಪಿತ್ತಿತು. ಮನೆ ಖಾಲಿ ಮಾಡು ಎಂದೂ ಆದೇಶಿಸಿತು.
      ಒಂದು ರೀತಿಯಲ್ಲಿ ದೆಹಲಿ ಮತ್ತು ಲಿಂಗಸುಗೂರಿನ ಘಟನೆಗಳ ಪಾತ್ರಧಾರಿಗಳ ಮಧ್ಯೆ ಯಾವ ಸಂಬಂಧವೂ ಇಲ್ಲ. ಅವರು ಪರಸ್ಪರ ಪರಿಚಿತರಲ್ಲ. ಭಾಷೆ ಬೇರೆ. ಅಂತಸ್ತು ಬೇರೆ. ದೆಹಲಿಯ ಹೆತ್ತವರಿಗೆ ಎರಡಂತಸ್ತಿನ ಮನೆಯಿದೆ. ಲಿಂಗಸುಗೂರಿನ ಗಂಗವ್ವ ಮುಗ್ಧೆ. ಆಸ್ತಿಯನ್ನೂ ಮಗನಿಗೆ ಬರೆದುಕೊಟ್ಟಾಕೆ. ಆದರೆ ಎರಡಂತಸ್ತಿನ ಮನೆಯ ಹೆತ್ತವರ ದೂರಿನಲ್ಲೂ ಬಡಪಾಯಿ ಗಂಗವ್ವನ ದೂರಿನಲ್ಲೂ ಭಾರೀ ವ್ಯತ್ಯಾಸವೇನೂ ಇಲ್ಲ. ಇಬ್ಬರಲ್ಲೂ ತಮ್ಮ ಮಕ್ಕಳ ಮೇಲೆಯೇ ಆರೋಪಗಳಿವೆ. ಆ ಕಾರಣದಿಂದಲೇ ಇದು ವಿಶ್ಲೇಷಣೆಗೆ ಅರ್ಹವೆನಿಸುತ್ತದೆ. ಇದರಲ್ಲಿ ಹೆತ್ತವರ ಪಾತ್ರವೇನು? ಮಕ್ಕಳ ಪಾತ್ರ ಏನು? ಆಧುನಿಕ ಜೀವನ ಕ್ರಮಗಳ ಕೊಡುಗೆ ಏನು? ಹಾಗಂತ, ಮಕ್ಕಳ ಮೇಲೆ ಸಕಲ ಆರೋಪವನ್ನೂ ಹೊರಿಸಿ ಪ್ರಕರಣಕ್ಕೆ ಇತಿಶ್ರೀ ಹಾಡುವುದು ಸುಲಭ. ಆದರೆ ಹೀಗೆ ಮಾಡುವುದು ನಿಜಕ್ಕೂ ನ್ಯಾಯಪೂರ್ಣವೇ? ಈ ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರು ಯಾವ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಅಂಶವನ್ನೂ ಇಲ್ಲಿ ಪರಿಗಣಿಸಬೇಡವೇ? ಮಕ್ಕಳಾಗದೇ ಹರಕೆ ಹೊತ್ತೂ ಹೊತ್ತೂ ಕೊನೆಗೆ ಹುಟ್ಟಿದ ಮಗನೇ ಹೀಗೆ ಬಸ್ಸು ನಿಲ್ದಾಣದಲ್ಲಿ ಎಸೆದು ಹೋದ ಎಂಬ ಕೊರಗು ಗಂಗಮ್ಮಳದ್ದು. ಆದರೆ ಹರಕೆ ಹೊತ್ತು ಸಿಕ್ಕ ಮಗನನ್ನು ಗಂಗಮ್ಮ ಬೆಳೆಸಿದ್ದು ಯಾವ ರೀತಿಯಲ್ಲಿ? ಕೊಟ್ಟ ಶಿಕ್ಷಣ ಯಾವುದು? ಶಿಶು ಪ್ರಾಯದಿಂದ ಹಿಡಿದು ಹದಿಹರೆಯ ಮತ್ತು ಪ್ರೌಢಾವಸ್ಥೆಯ ವರೆಗೆ ಒಂದು ಮಗು ತನ್ನಿಷ್ಟದಂತೆ ಬೆಳೆಯುವುದಕ್ಕೂ ಪ್ರತಿ ಹಂತದಲ್ಲೂ ಹೆತ್ತವರ ನಿಗಾದೊಂದಿಗೆ ಬೆಳೆಯುವುದಕ್ಕೂ ವ್ಯತ್ಯಾಸ ಇದೆ. ಮಗುವಿನ ಆರೋಗ್ಯಪೂರ್ಣ ಬೆಳವಣಿಗೆಯಲ್ಲಿ ಹೆತ್ತವರ ಸದುಪದೇಶಗಳ ಪಾತ್ರ ಬಹಳ ದೊಡ್ಡದು. ಮಗು ಕೇಳಿದ್ದನ್ನೆಲ್ಲ ಕೊಡುವುದಷ್ಟೇ ಹೆತ್ತವರ ಜವಾಬ್ದಾರಿಯಲ್ಲ. ಅದನ್ನು ಓರ್ವ ಪರಿಚಾರಕನೂ ಮಾಡಬಲ್ಲ. ಅದರಾಚೆಗೆ ಮಗು ಕೇಳದೇ ಇರುವ ಆದರೆ ಕೊಡಲೇಬೇಕಾದ ಅನೇಕಾರು ಅಂಶಗಳಿವೆ. ಮಗು ಬೆಳೆದಂತೆಲ್ಲ ಆ ಬೆಳವಣಿಗೆಗೆ ತಕ್ಕಂತೆ ಮೌಲ್ಯವನ್ನು ತುಂಬುತ್ತಾ ಸಾಗುವುದು ಬಹಳ ಮುಖ್ಯ. ಮಗು ಶೂವನ್ನೋ ಫುಟ್ಬಾಲನ್ನೋ ಕ್ರಿಕೆಟ್ ಬ್ಯಾಟ್ ಅನ್ನೋ ಅಥವಾ ಆಟಿಕೆಗಳು, ಸೈಕಲ್, ಉಡುಪುಗಳು.. ಇತ್ಯಾದಿಗಳನ್ನೋ ಖರೀದಿಸಿಕೊಡುವಂತೆ ಒತ್ತಾಯಿಸುವಾಗ, ಅವುಗಳಿಗೆ ತಾನು ವ್ಯಯಿಸುವ ಹಣ ಎಷ್ಟು ಅಮೂಲ್ಯವಾದುದು ಮತ್ತು ಎಷ್ಟು ಬೆವರಿನ ಫಲ ಎಂಬುದನ್ನು ಸಂದರ್ಭಕ್ಕೆ ತಕ್ಕಂತೆ ಹೆತ್ತವರು ಮನವರಿಕೆ ಮಾಡಿಸುತ್ತಿರಬೇಕು. ಹಾಗಂತ, ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಜಿಪುಣರಾಗಬೇಕಿಲ್ಲ. ಮಕ್ಕಳು ಒಂದಿಷ್ಟು ದೊಡ್ಡವರಾದ ಕೂಡಲೇ ಅವರೊಂದಿಗೆ ಭಾರತ-ಪಾಕ್‍ಗಳಂತೆ ಅಂತರವನ್ನು ಕಾಯ್ದುಕೊಳ್ಳಲೂಬೇಕಿಲ್ಲ. ಆದರೆ, ತಾವು ದುಡಿಯುತ್ತಿರುವುದು ನಿಮ್ಮ ಸಲುವಾಗಿ ಮತ್ತು ನಿಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಎಂಬ ಸಂದೇಶವನ್ನು ಮಕ್ಕಳಿಗೆ ಅರ್ಥವಾಗುವಂತೆ ಆಗಾಗ ರವಾನಿಸುತ್ತಿರಬೇಕು. ಅಷ್ಟಕ್ಕೂ, ಇವತ್ತಿನ ದಿನಗಳಲ್ಲಿ ಎಲ್ಲವನ್ನೂ ಬಾಯಿ ಮಾತಿನಿಂದಲೇ ಹೇಳಬೇಕಿಲ್ಲ. ಪರಿಣಾಮಕಾರಿ ವೀಡಿಯೋಗಳು ಧಾರಾಳ ಲಭ್ಯವಿವೆ. ಮಕ್ಕಳು ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಹೆತ್ತವರಿಗಿಂತಲೂ ಹೆಚ್ಚು ನಿಪುಣರಾಗಿರುವುದರಿಂದ ಅವರಿಗೆ ಮೌಲ್ಯಯುತ ವೀಡಿಯೋಗಳನ್ನು ತೋರಿಸುವುದು ಕಷ್ಟವಲ್ಲ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟುವ ಮಕ್ಕಳ ಬಗ್ಗೆ ಮತ್ತು ಹೆತ್ತವರು ಅದರಿಂದ ಅನುಭವಿಸುವ ನೋವುಗಳ ಬಗ್ಗೆ ಎಳೆ ಪ್ರಾಯದ ಮನಸ್ಸಿನಲ್ಲಿ ಭಾವನಾತ್ಮಕತೆಯನ್ನು ತುಂಬುವುದು ಉತ್ತಮ. ಒಂದು ಪುಟ್ಟ ವೀಡಿಯೋ ಒಂದು ಮಗುವನ್ನು ಜೀವನಪರ್ಯಂತ ಮೌಲ್ಯಯುತವಾಗಿ ಬದುಕುವಂತೆ ಮಾಡುವುದಕ್ಕೆ ಸಾಕಾಗಬಹುದು.
      ಮಕ್ಕಳ ಮನಸ್ಸು ತೀರಾ ಮೃದು. ಆ ಮೃದು ಮನಸ್ಸನ್ನು ಯಾವ ಆಕೃತಿಗೆ ಬೇಕಾದರೂ ಪಳಗಿಸುವ ಸಾಮರ್ಥ್ಯ ಹೆತ್ತವರಿಗಿದೆ. ದುರಂತ ಏನೆಂದರೆ, ಅನೇಕ ಬಾರಿ ಹೆತ್ತವರು ಇಂಥ ಸನ್ನಿವೇಶದಲ್ಲಿ ಎಡವುತ್ತಾರೆ. ಮಕ್ಕಳನ್ನು ಮೌಲ್ಯಯುತವಾಗಿ ಬೆಳೆಸುವ ಬದಲಾಗಿ ಕೇವಲ ಆರೋಗ್ಯಪೂರ್ಣವಾಗಿ ಬೆಳೆಸುವುದಕ್ಕೇ ಆದ್ಯತೆ ನೀಡುತ್ತಾರೆ. ಭವಿಷ್ಯದಲ್ಲಿ ಮಗು ಏನಾಗಬೇಕು ಎಂಬುದನ್ನು ಚರ್ಚಿಸುತ್ತಾ ಮತ್ತು ಚಿಂತಿಸುತ್ತಾ ದುಡ್ಡು ಕೂಡಿಡುತ್ತಾರೆ. ಖರ್ಚು ಮಾಡುತ್ತಾರೆ. ಮಗುವೇನೋ ಹುಲುಸಾಗಿ ಬೆಳೆಯುತ್ತದೆ. ಆದರೆ, ಮೌಲ್ಯಕ್ಕೆ ಸಂಬಂಧಿಸಿ ಟೊಳ್ಳಾಗಿರುತ್ತದೆ. ಹೆತ್ತವರ ಬೆವರಿನ ಅರಿವು ಮಗುವಿಗಿರುವುದಿಲ್ಲ. ನಿದ್ದೆಗೆಟ್ಟು ದುಡಿದು ಸಂಪಾದಿಸಿದ ಹಣದ ಬೆಲೆ ಗೊತ್ತಿರುವುದಿಲ್ಲ. ಬಹುತೇಕ ಬಾರಿ ಹೆತ್ತವರು ಅದನ್ನು ಮಗುವಿನಿಂದ ಅಡಗಿಸಿಡುವುದೂ ಇದೆ. ನಿಜವಾಗಿ, ತನ್ನ ಕೆಲಸ ಏನು, ಒಂದು ದಿನ ದುಡಿಯದಿದ್ದರೆ ಮನೆಯ ಪರಿಸ್ಥಿತಿ ಏನು, ತಾನು ಯಾಕಾಗಿ ದುಡಿಯುತ್ತೇನೆ.. ಎಂಬುದೆಲ್ಲ ಗಂಡ-ಹೆಂಡತಿಯರ ನಡುವಿನ ಖಾಸಗಿ ವಿಷಯಗಳಷ್ಟೇ ಆಗಬೇಕಿಲ್ಲ. ಮಗುವಿಗೂ ಅದು ಗೊತ್ತಿರಬೇಕು. ಆರೋಗ್ಯಪೂರ್ಣ ಮತ್ತು ಮೌಲ್ಯಯುತ, ಕುಟುಂಬದ ಅಡಿಪಾಯ ಇದು.
     ಅಂದಹಾಗೆ, ದೆಹಲಿಯ ಹೆತ್ತವರು ಮತ್ತು ಲಿಂಗಸುಗೂರಿನ ಗಂಗಮ್ಮ ಈ ವಿಷಯದಲ್ಲಿ ತಮ್ಮ ಪಾತ್ರವನ್ನು ಎಷ್ಟಂಶ ನಿಭಾಯಿಸಿದ್ದಾರೋ ಗೊತ್ತಿಲ್ಲ. ಒಂದು ವೇಳೆ ನಿಭಾಯಿಸಿದ್ದರೂ ಮಕ್ಕಳು ತಪ್ಪು ದಾರಿ ಹಿಡಿಯಬಾರದೆಂದೇನೂ ಇಲ್ಲವಲ್ಲ. ಆದರೂ ಮಕ್ಕಳ ಮೇಲೆಯೇ ಸಂಪೂರ್ಣ ಆರೋಪ ಹೊರಿಸುವ ಮೊದಲು ಹೆತ್ತವರ ಜವಾಬ್ದಾರಿಗಳೂ ಚರ್ಚೆಗೊಳಗಾಗಬೇಕು. ಪವಿತ್ರ ಕುರ್‍ಆನ್ ಅಂತೂ ವೃದ್ಧ ಹೆತ್ತವರ ಬಗ್ಗೆ ಛೆ ಎಂಬ ಪದವನ್ನೂ ಬಳಸಬಾರದು ಎಂದು ಮಕ್ಕಳಿಗೆ ತಾಕೀತು ಮಾಡಿದೆ. ಹೆತ್ತವರ ಅತೃಪ್ತಿಗೆ ಪಾತ್ರವಾದ ಮಕ್ಕಳಿಗೆ ಸ್ವರ್ಗವಿಲ್ಲ ಎಂಬ ಬೆದರಿಕೆಯನ್ನೂ ಒಡ್ಡಿದೆ. ಚಿಕ್ಕಂದಿನಲ್ಲಿ ಅವರು ನಿಮ್ಮನ್ನು ಸಾಕಿದಷ್ಟೇ ಮಮತೆಯಿಂದ ವೃದ್ಧಾಪ್ಯದಲ್ಲಿ ಅವರನ್ನು ನೀವು ಸಾಕಬೇಕೆಂದು ಮಕ್ಕಳಿಗೆ ಅದು ಆದೇಶಿಸಿದೆ. ಹೆತ್ತವರು ಖಂಡಿತ ಇಂಥ ಗೌರವಾದರಗಳಿಗೆ ಅರ್ಹರು. ಆದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ಅದನ್ನು ಮನವರಿಕೆ ಮಾಡಿಸುವ ಪ್ರಯತ್ನಗಳು ನಡೆಯಲಿ. ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಗಂಗಮ್ಮ ಎಲ್ಲರ ಹೃದಯವನ್ನೂ ತಟ್ಟಲಿ.

Thursday 15 December 2016

ಹೆಣ್ಣನ್ನು ದೂರ ಇಟ್ಟವರ ದೂರು


         ನಮ್ಮ ನಡುವೆ ಇವತ್ತು ಎರಡು ರೀತಿಯ ಜೀವನ ದೃಷ್ಟಿಕೋನಗಳಿವೆ.
1. ಸಾಧನೆಗೆ ಹೆಣ್ಣು ತೊಡಕು ಎಂಬ ದೃಷ್ಟಿಕೋನ.
2. ವಿಧವೆ ಮತ್ತು ವಿಚ್ಛೇದಿತೆಯರ ಮರು ವಿವಾಹ ಅನಪೇಕ್ಷಿತ ಎಂಬ ನಿಲುವು.
     ಮೊದಲ ದೃಷ್ಟಿಕೋನಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಜೊತೆ ಇದ್ದಾರೆ. ಇದಕ್ಕೆ ಇನ್ನಷ್ಟು ಸ್ಪಷ್ಟ ಉದಾಹರಣೆಯನ್ನು ಕೊಡಬೇಕೆಂದರೆ, ಆರೆಸ್ಸೆಸ್ ಇದೆ. ಇಬ್ಬರೂ ನೇರವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸುವ ನಿಲುವುಗಳು ಒಂದೇ- ಹೆಣ್ಣು ಸಾಧನೆಗೆ ಅಡ್ಡಿಯಾಗಿದ್ದಾಳೆ. ಆಕೆಯನ್ನು ಬದುಕಿನ ಭಾಗವಾಗಿ ಸ್ವೀಕರಿಸಿದರೆ ನಂಬಿದ ಸಿದ್ಧಾಂತವನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನರೇಂದ್ರ ಮೋದಿಯವರು ಜಶೋದಾ ಬೆನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಆರೆಸ್ಸೆಸ್‍ನ ಪ್ರಮುಖ ಹೊಣೆಗಾರರಂತೂ ಮದುವೆಯಾಗದೆಯೇ ಉಳಿಯುವುದನ್ನು ಮೌಲ್ಯವಾಗಿ ಸ್ವೀಕರಿಸಿಕೊಂಡರು. ಇನ್ನೊಂದು- ವಿಧವೆ ಮತ್ತು ವಿಚ್ಛೇದಿತೆಯರಿಗೆ ಸಂಬಂಧಿಸಿದ ನಿಲುವು. ಇಲ್ಲೂ ಘೋಷಿತ ಮತ್ತು ಅಘೋಷಿತ ನೀತಿ ಸಂಹಿತೆಗಳಿವೆ. ವಿಚ್ಛೇದಿತೆಯರು ಮತ್ತು ವಿಧವೆಯರು ಮರು ಮದುವೆಯಾಗುವುದು ಇವತ್ತಿನ ಸಮಾಜದಲ್ಲಿ ತೀರಾ ಸರಳ ಅಲ್ಲ. ಇವರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಆತಂಕ ಇದೆ. ಅಮಂಗಲೆಯರು, ಅಮಾನ್ಯರು, ಅಪಶಕುನರು.. ಮುಂತಾದ ಕಳಂಕಲೇಪಿತ ಬಿರುದುಗಳೊಂದಿಗೆ ಸಮಾಜ ಇವರನ್ನು ಮುಖ್ಯ ವಾಹಿನಿಯಿಂದ ಹೊರಗಿಟ್ಟಿದೆ ಮತ್ತು ಹೊರಗಿಡುತ್ತಿದೆ. ಅದೇ ವೇಳೆ ಪುರುಷನಿಗೆ ಈ ಸಮಸ್ಯೆ ಇಲ್ಲ. ಆತ ಅಮಂಗಲ ಆಗಲಾರ. ಬಹುಶಃ, ಭಾರತೀಯರ ಸಾಮಾಜಿಕ ಬದುಕನ್ನು ಅಧ್ಯಯನ ನಡೆಸುವ ಯಾರಿಗೇ ಆಗಲಿ ಸುಲಭದಲ್ಲೇ ಮನವರಿಕೆಯಾಗುವ ಅಂಶವಿದು. ಪ್ರವಾದಿ ಮುಹಮ್ಮದ್(ಸ) ಮುಖ್ಯವಾಗುವುದೂ ಇಲ್ಲೇ. ಅವರು ಈ ದೃಷ್ಟಿಕೋನಕ್ಕೆ ಪರ್ಯಾಯವಾದ ದೃಷ್ಟಿಕೋನವನ್ನು ಮಂಡಿಸಿದರು. ಮಾತ್ರವಲ್ಲ, ಪ್ರಯೋಗಕ್ಕೂ ಒಳಪಡಿಸಿದರು ಮತ್ತು ಯಶಸ್ವಿಯೂ ಆದರು. ಬಡ್ಡಿರಹಿತ ಮತ್ತು ಶೋಷಣೆರಹಿತ ಸಿದ್ಧಾಂತವನ್ನು ಅವರು ಮಕ್ಕಾ ಮತ್ತು ಮದೀನಾದಲ್ಲಿ ಪ್ರತಿಪಾದಿಸುವಾಗ ಅವರ ಜೊತೆ ಪತ್ನಿಯರಿದ್ದರು. ಮಕ್ಕಳಿದ್ದರು. ಅವರ ಈ ವಿಚಾರಧಾರೆಗೆ ಮೊದಲು ಬೆಂಬಲ ಸೂಚಿಸಿದ್ದೇ ಅವರ ಪತ್ನಿ. ಕೇವಲ 23 ವರ್ಷಗಳ ಸಣ್ಣ ಅವಧಿಯೊಳಗೆ  ಅವರು ತನ್ನ ಆ ವಿಚಾರಧಾರೆಯನ್ನು ಮಕ್ಕಾ-ಮದೀನಾದ ಲಕ್ಷಾಂತರ ಮಂದಿಯ ವಿಚಾರಧಾರೆಯಾಗಿ ಬದಲಾಯಿಸಿದರು. ಐತಿಹಾಸಿಕವಾಗಿ ಅತ್ಯಂತ ಹೃಸ್ವ ಅವಧಿಯಲ್ಲಿ ಸಾಧಿಸಲಾದ ಮನಃಪರಿವರ್ತನೆ ಇದು. ಅವರು ಹೆಣ್ಣನ್ನು ತೊಡಕಾಗಿ ಪರಿಗಣಿಸಲಿಲ್ಲ. ಬೆಳಕಾಗಿ ಪರಿಗಣಿಸಿದರು. ಹೆಣ್ಣನ್ನು ಹೊರತುಪಡಿಸಿದ ಜೀವನ ಕ್ರಮವನ್ನು ಅವರು ಅಮಾನ್ಯಗೊಳಿಸಿದರು. ಅವರು ಮೊದಲು ವಿವಾಹವಾದದ್ದೇ ತನಗಿಂತ 15 ವರ್ಷ ಹಿರಿಯಳಾದ, ವಿಚ್ಛೇದಿತಳಾದ ಮತ್ತು ಮೂವರು ಮಕ್ಕಳ ತಾಯಿಯಾದ ಹೆಣ್ಣನ್ನು. ಆ ಮೂವರು ಮಕ್ಕಳನ್ನು ಪ್ರವಾದಿ ಎಷ್ಟಂಶ ಪ್ರೀತಿಸಿದರೆಂದರೆ, ಪ್ರವಾದಿಯವರನ್ನು(ಸ) ವಿರೋಧಿಗಳ ಹಲ್ಲೆಯಿಂದ ರಕ್ಷಿಸುವ ಭರದಲ್ಲಿ ಹಾರಿಸ್ ಎನ್ನುವ ಮಗ ಪ್ರಾಣವನ್ನೇ ಒತ್ತೆ ಇಟ್ಟರು. ಪ್ರವಾದಿ ಮದುವೆಯಾದವರ ಪಟ್ಟಿಯಲ್ಲಿ ಕನ್ಯೆ ಇರುವುದು ಒಬ್ಬರೇ. ಉಳಿದವರೆಲ್ಲ ಯೌವನವನ್ನು ದಾಟಿದ ವಿಧವೆಯರೋ ವಿಚ್ಛೇದಿತೆಯರೋ ಆಗಿದ್ದರು. ಒಂದು ರೀತಿಯಲ್ಲಿ, ಅವರು ವಿಧವೆಯರು ಮತ್ತು ವಿಚ್ಛೇದಿತೆಯನ್ನು ತನ್ನ ಕೌಟುಂಬಿಕ ವ್ಯಾಪ್ತಿಯೊಳಗೆ ತಂದರು. ಭದ್ರತೆಯನ್ನು ಮತ್ತು ಆಶ್ರಯವನ್ನು ಒದಗಿಸಿದರು. ಇದು ಅಂದಿನ ಕಾಲದಲ್ಲಿ ಅತ್ಯಂತ ಅಚ್ಚರಿಯ ನಡೆ. ವಿಧವೆಯರು ಮತ್ತು ವಿಚ್ಛೇದಿತೆಯರ ಬಗೆಗಿನ ಪ್ರವಾದಿಯವರ ಈ ದೃಷ್ಟಿಕೋನ ಅಂದಿನ ಸಮಾಜವನ್ನು ಎಷ್ಟಂಶ ಪ್ರಭಾವಿಸಿತೆಂದರೆ, ಸಮಾಜದ ಒಟ್ಟು ಚಿಂತನೆಯ ಧಾಟಿಯೇ ಬದಲಾಯಿತು. ಅದು ವಿಧವೆಯರು ಮತ್ತು ವಿಚ್ಛೇದಿತೆಯರ ಮದುವೆಗೆ ಆದ್ಯತೆಯನ್ನು ನೀಡುವಲ್ಲಿ ವರೆಗೆ ಬೆಳೆಯಿತು. ಅವರು ಮಂಗಳೆಯರಾದರು. ಮುಖ್ಯವಾಹಿನಿಯ ಜೊತೆಗೇ ಗುರುತಿಸಿಕೊಂಡರು.
      ಸದ್ಯ ಹೆಣ್ಣು ಚರ್ಚೆಯಲ್ಲಿದ್ದಾಳೆ ಮತ್ತು ಈ ಚರ್ಚೆಯು ಪ್ರವಾದಿ ಮುಹಮ್ಮದ್‍ರನ್ನೇ(ಸ) ಅಪರಾಧಿ ಸ್ಥಾನದಲ್ಲಿ ಕೂರಿಸುವಷ್ಟು ಏಕಮುಖವಾಗಿ ನಡೆಯುತ್ತಿದೆ. ಹೆಣ್ಣನ್ನು ಅಡ್ಡಿಯೆಂದು ಪರಿಗಣಿಸಿ ದೂರ ತಳ್ಳಿದವರೇ ಪ್ರವಾದಿಯವರ ಮಹಿಳಾ ನಿಲುವನ್ನು ದೂರುತ್ತಿದ್ದಾರೆ. ವಿಧವೆ ಮತ್ತು ವಿಚ್ಛೇದಿತೆಯರನ್ನು ಅಮಂಗಲೆಯಾಗಿಸಿಕೊಂಡವರೇ ಈ ಮಹಿಳೆಯರಿಗೆ ಆಶ್ರಯವನ್ನು ನೀಡಿದ ವಿಚಾರಧಾರೆಯಲ್ಲಿ ಮಹಿಳಾ ಶೋಷಣೆಯನ್ನು ಹುಡುಕುತ್ತಿದ್ದಾರೆ.
ಸರಿ-ತಪ್ಪುಗಳನ್ನು ನೀವೇ ವಿಶ್ಲೇಷಿಸಿ.


ಭ್ರೂಣ ಎತ್ತಿರುವ ಪ್ರಶ್ನೆ

       ಕೇರಳದ ಕಾಸರಗೋಡು ಜಿಲ್ಲೆಯ ಯುವತಿಯೋರ್ವಳು ಅತ್ಯಾಚಾರದ ಇನ್ನೊಂದು ಮುಖವನ್ನು ಮತ್ತೊಮ್ಮೆ ನಮ್ಮ ಮುಂದೆ ತೆರೆದಿಟ್ಟಿದ್ದಾಳೆ. ಆ ಮುಖ ಅತ್ಯಂತ ಭಾವಾನಾತ್ಮಕವಾದುದು. `ಜೀವಿಸುವ ಹಕ್ಕು' ಎಂಬ ಸಹಜ ಸ್ವಾತಂತ್ರ್ಯದ ಅಸ್ತಿತ್ವವನ್ನೇ ಅಲುಗಾಡಿಸುವಂಥದ್ದು. ಇನ್ನಷ್ಟೇ ಕಣ್ಣು ಬಿಡಬೇಕಿರುವ ಮತ್ತು ಈ ಜಗತ್ತಿನಲ್ಲಿ ಬಾಳಿ-ಬದುಕುವುದಕ್ಕೆ ಸಕಲ ಹಕ್ಕುಗಳನ್ನೂ ಹೊಂದಿರುವ ಮಗುವನ್ನು (ಭ್ರೂಣ) ಉಳಿಸಿಕೊಳ್ಳಬೇಕೋ ಅಳಿಸಿಹಾಕಬೇಕೋ ಎಂಬುದಕ್ಕೆ ಸಂಬಂಧಿಸಿದ್ದು. ಕೇರಳದ ಹೈಕೋರ್ಟ್ ಕಳೆದವಾರ ಈ ಕುರಿತಂತೆ ತೀರ್ಪೊಂದನ್ನು ನೀಡಿದೆ. ಯುವತಿಯ ಮನವಿಯನ್ನು ಗೌರವಿಸುವ ಮೂಲಕ ಮಗುವಿಗೆ (ಭ್ರೂಣ) ಜೀವಿಸುವ ಹಕ್ಕನ್ನು ಅದು ನಿರಾಕರಿಸಿದೆ. ಹಾಗಂತ, ಇದು ಮೊಟ್ಟ ಮೊದಲ ಪ್ರಕರಣವೇನೂ ಅಲ್ಲ. ಕಳೆದ ವರ್ಷ ಗುಜರಾತ್‍ನ ಸಬರಕಾಂತ್ ಜಿಲ್ಲೆಯ ಪ್ರೌಢಶಾಲೆಯ ಹುಡುಗಿಯೊಬ್ಬಳು ಇದೇ ಪ್ರಶ್ನೆಯೊಂದಿಗೆ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದ್ದಳು. ಆಕೆಯ ಮೇಲೆ ವೈದ್ಯನೋರ್ವ ಅತ್ಯಾಚಾರ ಎಸಗಿದ್ದ. ಯಾರಲ್ಲೂ ಬಾಯಿ ಬಿಡಬಾರದೆಂದು ಬೆದರಿಸಿದ್ದ. ಮಲ ಹೊರುವ ಕಾರ್ಮಿಕನ ಮಗಳಾದ ಆ ಹುಡುಗಿ ಅತ್ಯಾಚಾರ ಮತ್ತು ಬೆದರಿಕೆ ಎಂಬ ಎರಡು ಅಲಗಿನ ಕತ್ತಿಯನ್ನು ಎದುರಿಸಲಾಗದೇ ಮೌನವಾಗಿದ್ದಳು. ಆ ಬಸಿರು ಆ ಅಪ್ಪನಿಗೂ ಗೊತ್ತಾಗಲಿಲ್ಲ. ಗೊತ್ತಾಗುವಾಗ ಭ್ರೂಣಕ್ಕೆ 24 ವಾರಗಳೇ ಸಂದಿದ್ದುವು. ಗರ್ಭಕ್ಕೆ ಸಂಬಂಧಿಸಿ 1971ರ ವೈದ್ಯಕೀಯ ಕಾಯ್ದೆಯ ಪ್ರಕಾರ, 20 ವಾರಗಳೊಳಗಿನ ಭ್ರೂಣವನ್ನಷ್ಟೇ ಕಿತ್ತು ಹಾಕಲು (ಅಬಾರ್ಷನ್) ಅನುಮತಿ ಇದೆ. ಈ ಅನುಮತಿಯೂ ಬೇಕಾಬಿಟ್ಟಿಯಲ್ಲ. ಗರ್ಭಿಣಿಯ ಆರೋಗ್ಯಕ್ಕೆ ಅಪಾಯವಿರುವುದಾದರೆ ಅಥವಾ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆಗಳಿದ್ದರೆ ಮಾತ್ರ ಅಬಾರ್ಷನ್ ಮಾಡಬಹುದು. ಆದರೆ ಆ ಹುಡುಗಿಗೆ ಸಂಬಂಧಿಸಿ ಈ ಯಾವ ತೊಂದರೆಯೂ ಇರಲಿಲ್ಲ. ಹುಡುಗಿಯೂ ಆರೋಗ್ಯದಿಂದಿದ್ದಳು. ಭ್ರೂಣವೂ ಆರೋಗ್ಯದಿಂದಿತ್ತು. ಆದ್ದರಿಂದಲೇ, ಭ್ರೂಣವನ್ನು ಕಿತ್ತು ಹಾಕಲು ಆಕೆ ಮಾಡಿಕೊಂಡ ಮನವಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ತಳ್ಳಿಹಾಕಿತ್ತು. ಹುಡುಗಿ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಆಗ ಸುಪ್ರೀಮ್ ಕೋರ್ಟು ಆ ಹುಡುಗಿಯ ಮನವಿಯನ್ನು ಪುರಸ್ಕರಿಸಿತ್ತು. ಕಳೆದವಾರ ಸುದ್ದಿಗೀಡಾದ ಕಾಸರಗೋಡಿನ ಪ್ರಕರಣವು ಈ ಕುರಿತಂತೆ ಎರಡನೆಯದ್ದು. ಈಕೆಯೂ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ಹೋಗಿದ್ದಳು. ತನ್ನ ಹೊಟ್ಟೆಯೊಳಗಿನ ಭ್ರೂಣವನ್ನು ಕಿತ್ತು ಹಾಕುವಂತೆ ವಿನಂತಿಸಿದ್ದಳು. ಆದರೆ, ಭ್ರೂಣಕ್ಕೆ 20 ವಾರಗಳಿಗಿಂತ ಹೆಚ್ಚು ಪ್ರಾಯವಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಆಸ್ಪತ್ರೆಯು ಅಬಾರ್ಷನ್‍ಗೆ ನಿರಾಕರಿಸಿತ್ತು. ಆಕೆ ಕೇರಳ ಹೈಕೋರ್ಟಿನ ಬಾಗಿಲು ತಟ್ಟಿದಳು. ಹೈಕೋರ್ಟು ಆಕೆಯ ಮನವಿಯನ್ನು ಪುರಸ್ಕರಿಸಿತು.
       ಇಲ್ಲೊಂದು ಮುಖ್ಯ ಪ್ರಶ್ನೆಯಿದೆ. ಯುವತಿಯ ಹೊಟ್ಟೆಯೊಳಗಿನ ಭ್ರೂಣದ ಹೊಣೆಗಾರಿಕೆಯನ್ನು ಯಾರು ವಹಿಸಿಕೊಳ್ಳಬೇಕು ಎಂಬುದು. ಕಾಸರಗೋಡಿನ ಈ ಯುವತಿಯ ಮೇಲೆ ಅತ್ಯಾಚಾರ ನಡೆಯಿತು. ಅತ್ಯಾಚಾರಿ ಮದುವೆಯಾಗುವುದಾಗಿ ಒಪ್ಪಿಕೊಂಡ. ಬಳಿಕ ಮಾತಿಗೆ ತಪ್ಪಿದ. ಆದರೆ ಭ್ರೂಣ ಬೆಳೆಯುತ್ತಿತ್ತು. ನಿಜವಾಗಿ, ಇಬ್ಬರು ಪ್ರೌಢ ವ್ಯಕ್ತಿಗಳ ನಡುವೆ ನಡೆದ ಪ್ರಕರಣ ಇದು. ಭ್ರೂಣವನ್ನು ಆಕೆ ಇಚ್ಛೆ ಪಟ್ಟು ಪಡೆದಿಲ್ಲದೇ ಇರಬಹುದು. ಅದು ಕ್ರೌರ್ಯವೊಂದು ಬಿಟ್ಟು ಹೋದ ಕುರುಹೇ ಆಗಿರಬಹುದು. ಆದರೆ ಇದರಲ್ಲಿ ಭ್ರೂಣದ ತಪ್ಪೇನಿದೆ? ತನ್ನನ್ನು ಬಸಿರಾಗು ಎಂದು ಆ ಭ್ರೂಣ ಕೇಳಿಕೊಂಡಿಲ್ಲ. ತಾಯಿ ಮುಗ್ಧೆ ಹೌದೋ ಅಲ್ಲವೋ ಭ್ರೂಣವಂತೂ ಮುಗ್ಧ. ಒಂದೊಮ್ಮೆ ಸಂತ್ರಸ್ತೆಯಷ್ಟೇ ಆ ಭ್ರೂಣವೂ ಪವಿತ್ರ. ಬಸಿರಿಗೆ ಕಾರಣ ಏನೇ ಇರಲಿ ಮತ್ತು ಅದರಿಂದಾಗಿ ಸಂತ್ರಸ್ತೆಗಾಗಿರುವ ಆಘಾತದ ಪ್ರಮಾಣವು ಎಷ್ಟೇ ತೀವ್ರವಾಗಿರಲಿ ಅದಕ್ಕೆ ಭ್ರೂಣವನ್ನು ಹೊಣೆಗಾರವನ್ನಾಗಿ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಭ್ರೂಣ ಬೇಡ ಅನ್ನುವ ಸಂತ್ರಸ್ತೆ ಮತ್ತು ಇನ್ನೊಂದು ಕಡೆ ಸಂತ್ರಸ್ತೆಯ ಜಗತ್ತನ್ನು ನೋಡುವ ಉತ್ಸಾಹದಿಂದ ಕಣ್ಣು ಮಿಟಕಿಸುತ್ತಿರುವ ಭ್ರೂಣ- ಇವುಗಳ ನಡುವಿನ ಈ ಸಂಘರ್ಷದಲ್ಲಿ ಇವತ್ತು ಯುವತಿ ಗೆದ್ದಿರಬಹುದು. ಆದರೆ ಈ ಗೆಲುವು ಒಂದು ಸಾವಿನೊಂದಿಗೆ ಲಭ್ಯವಾಗಿದೆ ಎಂಬಂಶವನ್ನೂ ನಾವು ಅರಿತುಕೊಳ್ಳಬೇಕಿದೆ.
        ನಿಜವಾಗಿ ಅತ್ಯಾಚಾರ, ಗರ್ಭಧಾರಣೆ, ಅಬಾರ್ಷನ್.. ಮುಂತಾದ ಸಹಜ ಪದಗಳಾಚೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಪ್ರಕರಣ ಇದು. ಓರ್ವ ಹೆಣ್ಣಿನ ಮೇಲೆ ಬಲಾತ್ಕಾರ ಮಾಡುವಲ್ಲಿಗೆ ಗಂಡಿನ ಹೋರಾಟ ಕೊನೆಗೊಳ್ಳುತ್ತದೆ. ಆದರೆ, ಹೆಣ್ಣಿನ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ. ಅತ್ಯಾಚಾರವು ಗಂಡಿನ ಪಾಲಿಗೆ ಎಷ್ಟು ಇಚ್ಚಿತವೋ ಹೆಣ್ಣಿನ ಪಾಲಿಗೆ ಅಷ್ಟೇ ಅಇಚ್ಚಿತ. ಆಕೆ ಅದನ್ನು ನಿರೀಕ್ಷಿಸಿಲ್ಲವಾದ್ದರಿಂದ ಅದು ಆಘಾತವನ್ನಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕವಾದ ಹಲವಾರು ಏರು-ಪೇರುಗಳಿಗೂ ಕಾರಣವಾಗುತ್ತದೆ. ಮನೆಯಲ್ಲಿ ಹೇಳಬೇಕೋ ಬೇಡವೋ ಅನ್ನುವ ತೊಳಲಾಟ ಒಂದು ಕಡೆಯಾದರೆ, ಹೇಳಿದರೆ ಏನೇನೆಲ್ಲ ಎದುರಿಸಬೇಕಾದೀತು ಎಂಬ ಭಯ ಇನ್ನೊಂದು ಕಡೆ. ಅತ್ಯಾಚಾರಿಯ ಬೆದರಿಕೆ ಮತ್ತೊಂದು ಕಡೆ. ಒಂದು ವೇಳೆ, ಇವೆಲ್ಲವನ್ನೂ ಮೀರಿ ತನ್ನ ಮೇಲಾದ ಕ್ರೌರ್ಯವನ್ನು ದಿಟ್ಟತನದಿಂದ ಬಹಿರಂಗಪಡಿಸಿದರೂ ಸಮಸ್ಯೆ ಅಲ್ಲಿಗೇ ಮುಗಿಯುವುದಿಲ್ಲ. `ಅತ್ಯಾಚಾರಕ್ಕೊಳಗಾದವಳು' ಎಂಬ ಪಟ್ಟಿಯೊಂದು ಆಕೆಯ ಹಣೆಯ ಮೇಲೆ ಸದಾ ತೂಗುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಆ ಪಟ್ಟಿ ಸದ್ದು ಮಾಡಬಹುದು. ನೆರೆಕರೆಯಲ್ಲಿ, ಸಮಾಜದಲ್ಲಿ ಆ ಪಟ್ಟಿಗೆ ಇನ್ನಿಲ್ಲದ ಮಹತ್ವ ಸಿಗಬಹುದು. ಅದರ ಜೊತೆಗೇ ಗರ್ಭಧರಿಸುವ ಸಾಧ್ಯತೆಯೂ ಇರುತ್ತದೆ. ಸಂತ್ರಸ್ತತೆಯು ಅತ್ಯಾಚಾರಿಗೋ, ಮನೆಯವರಿಗೋ ಅಥವಾ ಸಮಾಜಕ್ಕೋ ಹೆದರಿ ಎಲ್ಲವನ್ನೂ ಮುಚ್ಚಿಟ್ಟು ಕೂತರೆ ಅಥವಾ ಅತ್ಯಾಚಾರದ ಪರಿಣಾಮದ ಬಗ್ಗೆ ಅರಿವು ಇಲ್ಲದವಳಾಗಿದ್ದರೆ, ಭ್ರೂಣದ ರೂಪದಲ್ಲಿ ಅತ್ಯಾಚಾರ ಮತ್ತೆ ಕಾಡುತ್ತದೆ. ಕೊನೆಗೊಂದು ದಿನ ಅದು ಸಂತ್ರಸ್ತೆಗೆ ಸವಾಲೆಸೆಯುವ ಹಂತಕ್ಕೂ ತಲುಪುತ್ತದೆ. ಒಂದು ರೀತಿಯಲ್ಲಿ, ‘ಅತ್ಯಾಚಾರದ ಸಂತ್ರಸ್ತೆ’ ಎದುರಿಸುವ ಸವಾಲುಗಳ ಹಲವು ಮಜಲುಗಳಿವು. ಆಕೆ ಮೌನವಾದರೂ ಸಮಸ್ಯೆಯೇ, ಮಾತಾಡಿದರೂ ಸಮಸ್ಯೆಯೇ. ವಿಷಾದ ಏನೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳು ಸಹಜ `ಪ್ರಕರಣ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಜುಜುಬಿ ಅನ್ನಿಸಿಕೊಳ್ಳುತ್ತಿರುವುದು. ಸಂತ್ರಸ್ತೆಯ ಭಾವನಾತ್ಮಕ ಜಗತ್ತನ್ನು ಸ್ಪರ್ಶಿಸುವುದಕ್ಕೆ ನಮ್ಮ ಲೇಖನಿ, ಮೈಕುಗಳು ಆಸಕ್ತಿ ತೋರದೇ ಇರುವುದು.
      ಅಂದಹಾಗೆ, ಅತ್ಯಾಚಾರವೆಂಬುದು ಕ್ರೌರ್ಯವಷ್ಟೇ ಅಲ್ಲ, ಅದು ಒಂದು ನಿಷ್ಪಾಪಿ ಭ್ರೂಣದ ಹುಟ್ಟು ಮತ್ತು ಅದರ ಸಾವನ್ನು ಅನಿವಾರ್ಯಗೊಳಿಸುವ ಪಾತಕ ಕೂಡ. ಒಂದು ವೇಳೆ ಅತ್ಯಾಚಾರಿಯು ಸಂತ್ರಸ್ತೆಯನ್ನು ಕೊಲೆ ಮಾಡದೆ ಬಿಟ್ಟು ಬಿಡಲೂಬಹುದು. ಆದರೆ, ಅತ್ಯಾಚಾರದಿಂದಾಗಿ ಜೀವ ತಳೆಯಬಹುದಾದ ಭ್ರೂಣ(ಮಗು)ವನ್ನು ಸಂತ್ರಸ್ತೆ ಕೊಲ್ಲಲೇಬೇಕಾಗುತ್ತದೆ. ಅದಕ್ಕೆ ಆಕೆ ಹೊಣೆಗಾರಳಲ್ಲ. ಆದ್ದರಿಂದ, ಆ ಹತ್ಯೆಯ ಸಂಪೂರ್ಣ ಹೊಣೆಯನ್ನು ಅತ್ಯಾಚಾರಿಯೇ ಹೊರಬೇಕು. ಮಾತ್ರವಲ್ಲ, ಕೋರ್ಟಿನ ತೀರ್ಪುಗಳು ಈ ಕುರಿತಂತೆ ಇನ್ನಷ್ಟು ವಿಸ್ತಾರ ಚರ್ಚೆಗೆ ವೇದಿಕೆ ಒದಗಿಸಬೇಕು. ಅತ್ಯಾಚಾರಿಗೆ ಮರಣದಂಡನೆಯೇ ಯಾಕೆ ಸೂಕ್ತ ಎಂಬುದಕ್ಕೆ ಬಲವಾದ ಉತ್ತರವನ್ನು ಪಡೆಯುವುದಕ್ಕಾದರೂ ಇಂಥದ್ದೊಂದು ಮರು ಅವಲೋಕನ ಅನಿವಾರ್ಯ. 


Thursday 17 November 2016

ನುಡಿದ ಮಾತನು ನುಂಗಿ ನಡೆದರೆ ಮೆಚ್ಚನಾ ಪರಮಾತ್ಮನು....

ಮೀನಾಕ್ಷಿ ಲೇಖಿ
       ಕಮಲ (ತಾವರೆ) ಮತ್ತು ಊಸರವಳ್ಳಿ ಎರಡಕ್ಕೂ ಪ್ರತ್ಯೇಕ ಅಸ್ತಿತ್ವಗಳಿವೆ. ಕಮಲ ಅರಳುವುದೇ ನೀರಿನಲ್ಲಿ. ಅದು ಬಣ್ಣ ಬದಲಿಸುವುದಿಲ್ಲ. ನೋಡಿದ ತಕ್ಷಣ ಕಮಲ ಎಂದು ಗುರುತಿಸಬಹುದಾದಷ್ಟು ಸೀದಾಸಾದಾ ಗುಣ ಅದರದು. ಆದರೆ ಊಸರವಳ್ಳಿ ಇದಕ್ಕೆ ತದ್ವಿರುದ್ಧ. ಅದು ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತಿರುತ್ತದೆ. ಬಣ್ಣ ಬದಲಾವಣೆ ಎಂಬುದು ಅದರ ಪ್ರಾಕೃತಿಕ ನಿಯಮ. ನೋಡ ನೋಡುತ್ತಲೇ ಬಣ್ಣ ಬದಲಾಯಿಸುವುದನ್ನು ಅದು ಕರಗತ ಮಾಡಿಕೊಂಡಿದೆ. ಆದ್ದರಿಂದಲೇ, ಮನುಷ್ಯರಾರೂ ತಾವು ಊಸರವಳ್ಳಿಗೆ ಹೋಲಿಕೆಯಾಗುವುದನ್ನು ಇಷ್ಟಪಡುವುದಿಲ್ಲ. ನಮ್ಮ ನಡುವಿನ ಯಾವ ರಾಜಕೀಯ ಪಕ್ಷವೂ ಊಸರವಳ್ಳಿಯನ್ನು ತಮ್ಮ ಪಕ್ಷದ ಚಿಹ್ನೆಯಾಗಿ ಆಯ್ಕೆ ಮಾಡಿ ಕೊಂಡಿದ್ದೂ ಇಲ್ಲ. ದುರಂತ ಏನೆಂದರೆ, ಕಮಲವನ್ನು ಚಿಹ್ನೆಯಾಗಿ ಆಯ್ಕೆ ಮಾಡಿಕೊಂಡಿರುವ ಪಕ್ಷದ ವರ್ತನೆಯನ್ನು ನೋಡುವಾಗ ಕಮಲದ ಬದಲು ಅದಕ್ಕೆ ಊಸರವಳ್ಳಿ ಅತ್ಯಂತ ಸೂಕ್ತ ಆಯ್ಕೆಯಾಗುತ್ತಿತ್ತೇನೋ ಎಂದೆನಿಸುತ್ತದೆ. ಕಮಲ ಪಕ್ಷದ ನಾಯಕರ ಮಾತು-ಕೃತಿ-ಹಾವ-ಭಾವಗಳು ಯಾವ ರೀತಿಯಲ್ಲೂ ಕಮಲಕ್ಕೆ ಹೋಲಿಕೆಯಾಗುತ್ತಿಲ್ಲ. 2014ರ ಆರಂಭದಲ್ಲಿ ಕೈ ಪಕ್ಷದ ಆಡಳಿತವು ನೋಟು ರದ್ದತಿಯ ಬಗ್ಗೆ ಮಾತಾಡಿತ್ತು. 2005 ಮಾರ್ಚ್ 31ರಿಂದ ಮೊದಲು ಪ್ರಕಟವಾದ ನೋಟುಗಳನ್ನು ರದ್ದುಪಡಿಸುವುದಕ್ಕೆ ಕೈ ಆಡಳಿತ ಮುಂದಾಗಿತ್ತು. ದೇಶದಾದ್ಯಂತ ಈ ಕುರಿತಂತೆ ಚರ್ಚೆಗಳೂ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ನೋಟು ರದ್ಧತಿ ಚಿಂತನೆಯನ್ನು ಪ್ರಬಲವಾಗಿ ವಿರೋಧಿಸಿದ್ದು ಕಮಲ ಪಕ್ಷ. ಆ ಪಕ್ಷದ ಸಂಸದರಾಗಿದ್ದ ಮತ್ತು ವಕ್ತಾರೆಯಾಗಿದ್ದ ಮೀನಾಕ್ಷಿ ಲೇಖಿಯವರು ಅದನ್ನು ‘ಬಡವ ವಿರೋಧಿ ಚಿಂತನೆ’ ಎಂದು ಟೀಕಿಸಿದ್ದರು. ವಿದೇಶದಿಂದ ಕಪ್ಪು ಹಣವನ್ನು ವಾಪಸು ತರಬೇಕೆಂಬ ಕೂಗನ್ನು ಮರೆಸಲು ಕೈ ಪಕ್ಷವು ನಡೆಸುತ್ತಿರುವ ತಂತ್ರ ಇದು ಎಂದೂ ವಿಶ್ಲೇಷಿಸಿದ್ದರು. ನೋಟು ರದ್ಧತಿಯನ್ನು ವಿರೋಧಿಸಿ ಅವರು ಮಾತಾಡಿದ ವೀಡಿಯೋ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೊದಲು ಕಮಲ ಪಕ್ಷದ ಅರುಣ್ ಜೇಟ್ಲಿಯವರು ಆಧಾರ್ ಕಾರ್ಡನ್ನು ತೀವ್ರವಾಗಿ ವಿರೋಧಿಸಿದ್ದರು. ಜಿಎಸ್‍ಟಿ ಮತ್ತು ಎಫ್‍ಡಿಐ (ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 100% ನೇರ ವಿದೇಶಿ ಹೂಡಿಕೆ)ಯನ್ನೂ ಖಂಡಿಸಿದ್ದರು. ಅದು ಕಮಲ ಪಕ್ಷದ ಅಧಿಕೃತ ನಿಲುವೂ ಆಗಿತ್ತು. ಇದೀಗ ಕೈ ಪಕ್ಷ ಅಧಿಕಾರ ಕಳೆದುಕೊಂಡು ಎರಡೂವರೆ ವರ್ಷಗಳು ಕಳೆದಿವೆ. ಕಮಲ ಪಕ್ಷ ಅಧಿಕಾರದಲ್ಲಿದೆ. ವಿಷಾದ ಏನೆಂದರೆ, ಕಮಲ ಪಕ್ಷದಲ್ಲಿ ಕಮಲ ಒಂದು ಚಿಹ್ನೆಯಾಗಿ ಉಳಿದಿದೆಯೇ ಹೊರತು ಗುಣವಾಗಿ ಅಲ್ಲ. ಅದರ ವರ್ತನೆಯನ್ನು ಆಧಾರವಾಗಿಸಿ ಯಾರಾದರೂ ಚಿಹ್ನೆ ನಿರ್ಧರಿಸುವುದಾದರೆ ಅದಕ್ಕೆ ಕಮಲದ ಬದಲು ಊಸರವಳ್ಳಿಯನ್ನು ಚಿಹ್ನೆಯಾಗಿ ನೀಡುವ ಎಲ್ಲ ಸಾಧ್ಯತೆಯೂ ಇದೆ. ಇವತ್ತು ಕಮಲ ಪಕ್ಷ ಆಶ್ರಯಿಸಿಕೊಂಡಿರುವುದೇ ಆಧಾರ್ ಕಾರ್ಡ್ ಅನ್ನು. ಆಧಾರ್ ಕಾರ್ಡ್ ಇಲ್ಲದೇ ಇವತ್ತು ಯಾವುದೂ ನಡೆಯಲ್ಲ ಎಂಬ ಸ್ಥಿತಿ ಇದೆ. ವಿದೇಶಿ ನೇರ ಹೂಡಿಕೆಗೆ ಚಿಲ್ಲರೆ ಮಾರುಕಟ್ಟೆಯನ್ನು ಅದು ಮುಕ್ತವಾಗಿ ಇಟ್ಟಿದೆ. ಜಿಎಸ್‍ಟಿ ಇನ್ನೇನು ಜಾರಿಯಾಗುವ ಕೊನೆಯ ಹಂತದಲ್ಲಿದೆ. ಅಲ್ಲದೇ, 2014ರಲ್ಲಿ ಬಡವರ ವಿರೋಧಿಯಾಗಿದ್ದ ನೋಟು ರದ್ಧತಿಯು ಈಗ ‘ಬಡವ ಉದ್ಧಾರಕ’ ಆಗುತ್ತಿದೆ. ಇಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಅಂಶವೆಂದರೆ, ಟಿಪ್ಪು ಸುಲ್ತಾನ್. ಕರ್ನಾಟಕ ಸರಕಾರ ಪ್ರಕಟಿಸಿರುವ ‘ಟಿಪ್ಪು ಸುಲ್ತಾನ್: ಎ ಕ್ರುಸೇಡರ್ ಫಾರ್ ಚೇಂಜ್’ ಎಂಬ
ಬಿ. ಶೇಖ್ ಅಲಿಯವರ ಸಂಶೋಧನಾತ್ಮಕ ಕೃತಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರ ಅನಿಸಿಕೆಗಳಿವೆ. ಆ ಅನಿಸಿಕೆಯಲ್ಲಿ ಅವರು ಟಿಪ್ಪುವನ್ನು ಮೈಸೂರು ಸಾಮ್ರಾಜ್ಯದ ಹುಲಿ ಎಂದಿದ್ದಾರೆ. ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಹೊಂದಿದ್ದ ಸುಧಾರಕ ಎಂದು ಕೊಂಡಾಡಿದ್ದಾರೆ. ಟಿಪ್ಪುವಿನ ರಾಷ್ಟ್ರ ಪರಿಕಲ್ಪನೆ, ಕೈಗಾರಿಕಾ ನೀತಿ ಮತ್ತು ಸೈನಿಕ ಕೌಶಲ್ಯಗಳನ್ನು ಹೊಗಳಿದ್ದಾರೆ. ಮಾತ್ರವಲ್ಲ, ಪಕ್ಷದ ನಾಯಕರಾಗಿರುವ ಯಡಿಯೂರಪ್ಪನವರು ಟಿಪ್ಪುವಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಟಿಪ್ಪು ಪೇಟವನ್ನು ಮುಡಿಗೇರಿಸಿಕೊಂಡು ಥೇಟ್ ಟಿಪ್ಪು ಸುಲ್ತಾನ್‍ನಂತೆ ಫೋಸ್ ಕೊಟ್ಟದ್ದೂ ಈ ಹಿಂದೆ ನಡೆದಿದೆ, ಅದು ಚಿತ್ರಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಒಂದು ವೇಳೆ, ಕಮಲವು ಪಕ್ಷದ ಸೈದ್ಧಾಂತಿಕ ಮುಖದ ಅನ್ವರ್ಥ ರೂಪವೇ ಆಗಿರುತ್ತಿದ್ದರೆ, ಈ ಊಸರವಳ್ಳಿ ಗುಣಗಳೆಲ್ಲ ಆ ಪಕ್ಷಕ್ಕೆ ಸಿದ್ಧಿಸಿದ್ದು ಹೇಗೆ? ಹಾಗಂತ, ಈ ಪ್ರಶ್ನೆ ಕೇವಲ ಕಮಲ ಪಕ್ಷಕ್ಕೆ ಮಾತ್ರ ಮೀಸಲಿಡಬೇಕಾದ ಅಗತ್ಯವೇನೂ ಇಲ್ಲ. ಆದರೆ ಕಮಲ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಮತ್ತು ಈ ಹಿಂದಿನ ತನ್ನ ಎಲ್ಲ ನಿಲುವುಗಳಿಗೆ ತದ್ದಿರುದ್ಧವಾಗಿ ಇವತ್ತು  ವರ್ತಿಸುತ್ತಿರುವುದರಿಂದ ಪ್ರಶ್ನಿಸಲಾಗುತ್ತಿದೆ  ಅಷ್ಟೇ.
ಟಿಪ್ಪು ಆದ ಯಡಿಯೂರಪ್ಪ ಮತ್ತು ಶೆಟ್ಟರ್

        ನಿಜವಾಗಿ, ರಾಜಕೀಯ ಕ್ಷೇತ್ರಕ್ಕೆ ಮಾತ್ರವಲ್ಲ, ಬದುಕಿನ ಎಲ್ಲ ಕ್ಷೇತ್ರಕ್ಕೂ ಕಮಲ ಯೋಗ್ಯವಾದುದು. ಊಸರವಳ್ಳಿ ಅಯೋಗ್ಯವಾದುದು. ಒಂದು- ಪ್ರಾಮಾಣಿಕತೆಗೆ ಅನ್ವರ್ಥವಾದರೆ, ಇನ್ನೊಂದು- ಅಪ್ರಾಮಾಣಿಕತೆಗೆ ಅನ್ವರ್ಥ. ಆದ್ದರಿಂದಲೇ, ಯಾವ ಪಕ್ಷಕ್ಕೂ ಊಸರವಳ್ಳಿ ಬೇಡ. ಎಲ್ಲ ಪಕ್ಷಗಳೂ ಮೌಲ್ಯಗಳ ಬಗ್ಗೆ ಮಾತಾಡುತ್ತವೆ. ಪುಣ್ಯ ಪುರುಷರ ಮಹಾತ್ಮೆಗಳನ್ನು ಹಾಡುತ್ತವೆ. ಸಂತರು, ಋಷಿ ಗಳು, ಮಹಾತ್ಮರನ್ನು ಕ್ಷಣಕ್ಷಣಕ್ಕೂ ಸ್ಮರಿಸಿಕೊಳ್ಳುತ್ತವೆ. ಆದರೆ ವರ್ತನೆಯಲ್ಲಿ ಮಾತ್ರ ಪಕ್ಕಾ ಊಸರವಳ್ಳಿಯಾಗುತ್ತವೆ. ಈ ಸ್ವಭಾವದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವುದು ಕಮಲ ಪಕ್ಷ. ಟಿಪ್ಪುವನ್ನು ಇಂದ್ರ-ಚಂದ್ರ ಎಂದು ಹೊಗಳಿದವರೇ ಇವತ್ತು ಖಳ-ಮತಾಂಧ ಎಂದು ದೂರುತ್ತಿದ್ದಾರೆ. ಹಾಗಂತ, ಇವರು ಟಿಪ್ಪುವಿನಂತೆ ಪೇಟ ತೊಟ್ಟು ಟಿಪ್ಪುವೇ ಆದಾಗಲೂ ಟಿಪ್ಪು ಏನೂ ಜೀವಂತ ಇರಲಿಲ್ಲ. ಆಗ ಟಿಪ್ಪು ಏನಾಗಿದ್ದನೋ ಅದುವೇ ಈಗಲೂ ಆಗಿದ್ದಾನೆ. ಆದ್ದರಿಂದ ಆಗ ಆತ ವಿಝನರಿ ಆಗಿದ್ದರೆ ಈಗಲೂ ಅದುವೇ ಆಗಿರಬೇಕು. 2014ರಲ್ಲಿ ನೋಟು ರದ್ಧತಿ ಬಡವ ವಿರೋಧಿಯಾಗಿದ್ದರೆ ಈ 2016ರಲ್ಲೂ ಅದು ಬಡವ ವಿರೋಧಿಯಾಗುವುದಕ್ಕೇ ಹೆಚ್ಚು ಅರ್ಹ. ಆಧಾರ್ ಕಾರ್ಡ್ ಮತ್ತು ಎಫ್‍ಡಿಐಗಳು 2014ರಲ್ಲಿ ದೇಶಕ್ಕೆ ಕಂಟಕವೆಂದಾದರೆ 2016ರಲ್ಲಿ ಅದು ದೇಶಪ್ರೇಮಿಯಾಗುವುದಕ್ಕೆ ಸಾಧ್ಯವೇ ಇಲ್ಲ. ನಿಜವಾಗಿ, ಇದು ಕಮಲದ ಗುಣ. ಕಮಲ ಬಣ್ಣ ಬದಲಾಯಿಸುವುದಿಲ್ಲ. ನೋಡಿದ ತಕ್ಷಣ ಗುರುತು ಹಚ್ಚಬಹುದಾದಷ್ಟು ನಿಶ್ಚಿತ ರೂಪ ಅದಕ್ಕೆ ಇದೆ. ಆದರೆ ಅದನ್ನು ಚಿಹ್ನೆಯಾಗಿ ಒಪ್ಪಿಕೊಂಡ ಪಕ್ಷ ಉದ್ದಕ್ಕೂ ಊಸರವಳ್ಳಿಯ ಗುಣವನ್ನೇ ಪ್ರದರ್ಶಿಸುತ್ತಿದೆ. ಚಿಹ್ನೆ ಕಮಲದ್ದಾದರೂ ವರ್ತನೆ ಊಸರವಳ್ಳಿಯದ್ದು. ಟಿಪ್ಪುವಿನ ಪೇಟ ತೊಟ್ಟು ಸ್ವತಃ ಟಿಪ್ಪುವಿನಂತಾದ ಯಡಿಯೂರಪ್ಪ ಮತ್ತು ನೋಟು ರದ್ಧತಿ ಇದಕ್ಕೆ ಅತ್ಯುತ್ತಮ ಉದಾಹರಣೆ.

Friday 11 November 2016

.ತಲಾಕ್: ಮುಸ್ಲಿಂ ಸಮುದಾಯ ಹೆಣೆಯಬೇಕಾದ ಪ್ರತಿತಂತ್ರ

        ತಲಾಕ್ ಮತ್ತು ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಮುಸ್ಲಿಮ್ ಸಮುದಾಯದೊಳಗೆ ಹುಟ್ಟಿಕೊಂಡಿರುವ ಚರ್ಚೆಯನ್ನು ಎರಡು ರೀತಿಯಲ್ಲಿ ಕೊನೆಗೊಳಿಸಬಹುದು. ಒಂದು- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಸಕಲ ಆರೋಪವನ್ನೂ ಹೊರಿಸಿ ಸುಮ್ಮನಾಗುವುದು. ಇನ್ನೊಂದು- ಈ ಎರಡೂ ವಿಷಯಗಳನ್ನು ನೆಪ ಮಾಡಿಕೊಂಡು ಮುಸ್ಲಿಮ್ ಸಮುದಾಯದ ಆಂತರಿಕ ಅಭಿವೃದ್ಧಿಗೆ ನೀಲನಕ್ಷೆಯನ್ನು ರೂಪಿಸುವುದು. ಇವತ್ತು, ತಲಾಕ್‍ನ ಸುತ್ತ ಟಿ.ವಿ.ಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಉತ್ಪ್ರೇಕ್ಷೆ ಇರಬಹುದು. ಪತ್ರಿಕೆಗಳ ಬರಹಗಳಲ್ಲಿ ಸುದ್ದಿ ವೈಭವೀಕರಣ ನಡೆದಿರಬಹುದು. ಮುಸ್ಲಿಮ್ ಸಮುದಾಯದೊಳಗೆ ವಿಚ್ಛೇದಿತೆಯರೇ ತುಂಬಿಕೊಂಡಿರುವರೇನೋ ಎಂದು ನಂಬುವ ರೀತಿಯಲ್ಲಿ ಅವು ವರ್ತಿಸುತ್ತಿರಬಹುದು. ಇದು ಖಂಡಿತ ಖಂಡನಾರ್ಹ. ಹಾಗಂತ, ಮುಸ್ಲಿಮ್ ಸಮುದಾಯದೊಳಗೆ ತ್ರಿವಳಿ ತಲಾಕ್‍ನ ಅನುಪಾತ ಶೂನ್ಯಮಟ್ಟದಲ್ಲೇನೂ ಇಲ್ಲವಲ್ಲ ಅಥವಾ ಮುಸ್ಲಿಮ್ ಸಮುದಾಯದ ವಿಚ್ಛೇದಿತೆಯರನ್ನು ಇತರ ಸಮುದಾಯಗಳ ವಿಚ್ಛೇದಿತೆಯರಿಗೆ ಹೋಲಿಸಿ ಸಮರ್ಥಿಸಿಕೊಳ್ಳುವುದು ಇದಕ್ಕಿರುವ ಪರಿಹಾರವೂ ಅಲ್ಲವಲ್ಲ. ಮುಸ್ಲಿಮ್ ಸಮುದಾಯದ ಸದ್ಯದ ಸ್ಥಿತಿಗತಿಗಳು ಹೇಗಿವೆ? ಅವು ಉತ್ತಮವೇ, ಅತ್ಯುತ್ತಮವೇ, ಕೆಟ್ಟವೇ ಅಥವಾ ತೀರಾ ಗಂಭೀರವೇ? ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗಗಳು ಮುಸ್ಲಿಮ್ ಸಮುದಾಯದ ಮೇಲೆ ಅಧ್ಯಯನಗಳನ್ನು ನಡೆಸಿವೆ. ಮಾತ್ರವಲ್ಲ, ಈ ಸಮುದಾಯ ಅತೀ ಗಂಭೀರಾವಸ್ಥೆಯಲ್ಲಿ ಬದುಕುತ್ತಿದೆ ಎಂದೂ ಹೇಳಿವೆ. ಹಾಗಂತ ಈ ಗಂಭೀರಾವಸ್ಥೆಯಿಂದ ಸಮುದಾಯವನ್ನು ಹೊರತರುವುದಕ್ಕೆ ‘ಜಯಂತಿ’ಗಳಿಂದಂತೂ ಸಾಧ್ಯವಿಲ್ಲ.  ಏನಿದ್ದರೂ ಸರಕಾರದ ಮೇಲೆ ಪದೇಪದೇ ಆರೋಪಗಳನ್ನು ಹೊರಿಸುತ್ತಾ ಸಾಗುವುದರಿಂದ ಮುಸ್ಲಿಮ್ ಸಮುದಾಯದ ಅಭಿವೃದ್ಧಿ ಸಾಧ್ಯವೇ? ಆರೋಪಗಳ ಆಚೆಗೆ ಸಮುದಾಯ ಹೇಗೆಲ್ಲ ಸಕ್ರಿಯವಾಗಬಹುದು? ಅಭಿವೃದ್ಧಿಯನ್ನು ಗುರಿಯಾಗಿಸಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು?
         ಮುಸ್ಲಿಮ್ ಸಮುದಾಯದಲ್ಲಿ ಎರಡು ಬಹುಮುಖ್ಯ ನಿಧಿಗಳಿವೆ. ಒಂದು- ಮಸೀದಿಯಾದರೆ ಇನ್ನೊಂದು ಜನಸಂಪತ್ತು. ದುರಂತ ಏನೆಂದರೆ, ಇತರ ಸಮುದಾಯಗಳಿಗೆ ಹೋಲಿಸಿದರೆ ಅಮೂಲ್ಯವೆಂದೇ ಹೇಳಬಹುದಾದ ಈ ಎರಡು ನಿಧಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಸಮುದಾಯ ಪದೇ ಪದೇ ವಿಫಲವಾಗುತ್ತಿರುವುದು. ಇವತ್ತು ಮುಸ್ಲಿಮ್ ಸಮುದಾಯ ಮಸೀದಿಗಳ ಕೊರತೆಯಿಂದ ಬಳಲುತ್ತಿಲ್ಲ. ಆದರೆ ಈ ಮಸೀದಿಗಳ ಸದುಪಯೋಗದ ದೃಷ್ಟಿಯಿಂದ ಹೇಳುವುದಾದರೆ, ನಿಜಕ್ಕೂ ಬಳಲುತ್ತಿದೆ. ಮಸೀದಿ ಅಂದಮೇಲೆ ಅದಕ್ಕೊಂದು ಕಮಿಟಿ ಇರುತ್ತದೆ. ಅಧ್ಯಕ್ಷರಿರುತ್ತಾರೆ. ಕಾರ್ಯಕಾರಿ ಸದಸ್ಯರಿರುತ್ತಾರೆ. ಉಸ್ತಾದ್ (ಧರ್ಮಗುರು) ಇರುತ್ತಾರೆ. ಮಾತ್ರವಲ್ಲ, ಮಸೀದಿಯ ವ್ಯಾಪ್ತಿಗೆ ಒಳಪಟ್ಟು ಇಂತಿಷ್ಟು ಮನೆಗಳೂ ಇರುತ್ತವೆ. ಬಹುಶಃ, ಮುಸ್ಲಿಮ್ ಸಮುದಾಯದಲ್ಲಿ ಮಸೀದಿಗೆ ಒಳಪಡದ ಮತ್ತು ತಿಂಗಳು ತಿಂಗಳು ವಂತಿಗೆ ಕೊಡದ ಮನೆಗಳಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಮಸೀದಿ ಕೇಂದ್ರಿತ ಚಟುವಟಿಕೆಗಳು ನಡೆಯುತ್ತಿರುವಾಗ, ಸಮುದಾಯದ ಅಭಿವೃದ್ಧಿಗಾಗಿ ನೀಲನಕ್ಷೆಯನ್ನು ರೂಪಿಸುವುದು ಅಸಾಧ್ಯ ಏನಲ್ಲ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಎಷ್ಟು ಮನೆಗಳಿವೆ ಎಂಬುದು ಪ್ರತಿ ಮಸೀದಿಯ ವಂತಿಗೆ ಪಟ್ಟಿಯಲ್ಲಿ ದಾಖಲಾಗಿರುತ್ತದೆ. ಆದ್ದರಿಂದ, ಆ ಪಟ್ಟಿಯಲ್ಲಿ ದಾಖಲಾಗದ ಇತರ ಅಂಶಗಳ ಕಡೆಗೆ ಪ್ರತಿ ಮಸೀದಿಯೂ ಗಂಭೀರವಾಗಿ ಗಮನ ಹರಿಸುವ ಮನಸು ಮಾಡಿದರೆ ಸಮುದಾಯದ ಅಭಿವೃದ್ಧಿಯು ಸರಕಾರಗಳು ಅಚ್ಚರಿಪಡುವಷ್ಟು ವೇಗದಲ್ಲಿ ನಡೆದು ಬಿಡುವುದಕ್ಕೆ ಅವಕಾಶವಿದೆ. ಇದಕ್ಕೆ ಮಸೀದಿ ಕಮಿಟಿಗಳು ಮಾಡಬೇಕಾದ ಪುಟ್ಟ ಕೆಲಸವೇನೆಂದರೆ, ತುರ್ತಾಗಿ ಒಂದು ಸಭೆ ಕರೆಯುವುದು. ಸಮುದಾಯದ ಅಭಿವೃದ್ಧಿಯೇ ಸಭೆಯ ಮುಖ್ಯ ಅಜೆಂಡಾ ಆಗುವುದು ಮತ್ತು ಮಸೀದಿ ವ್ಯಾಪ್ತಿಯೊಳಗಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸುವುದು. ಸಮುದಾಯದ ಅಭಿವೃದ್ಧಿ ಎಂಬ ಏಕ ಅಜೆಂಡಾಕ್ಕಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು ಮುಂದುವರಿಯಲು ತೀರ್ಮಾನಿಸುವುದು. ಇಷ್ಟಾದರೆ, ತಲಾಕನ್ನು ‘ಚರ್ಚಾಸ್ಪದ’ವನ್ನಾಗಿ ಮಾಡಿದವರಿಗೆ ಪ್ರಾಯೋಗಿಕವಾಗಿ ಉತ್ತರ ಕೊಡುವ ಚಟುವಟಿಕೆ ಪ್ರಾರಂಭವಾಯಿತೆಂದೇ ಹೇಳಬಹುದು. ಒಂದು ಮನೆಯಿಂದ ವಂತಿಗೆಯನ್ನು ವಸೂಲು ಮಾಡುವುದೆಂದರೆ, ಆ ಮನೆಗೂ ಮಸೀದಿಗೂ ಸಂಬಂಧ ಇದೆ ಎಂದರ್ಥ. ಆದರೆ ಈ ಸಂಬಂಧ ತೀರಾ ತೆಳುವಾದುದು. ಮಸೀದಿಯೊಂದು ವಂತಿಗೆಯ ರೂಪದಲ್ಲಿ ಹಣವನ್ನು ಪಡಕೊಳ್ಳುತ್ತದೆಯೇ ಹೊರತು, ನಿಷ್ಠೆಯಿಂದ ವಂತಿಗೆ ಪಾವತಿಸುವ ಆ ವ್ಯಕ್ತಿಯ ಕ್ಷೇಮಕ್ಕಾಗಿ ಏನನ್ನೂ ಮರಳಿ ನೀಡುವುದಿಲ್ಲ. ಒಂದು ರೀತಿಯಲ್ಲಿ, ಇದು ಏಕಮುಖ ಸೇವೆ. ಮಸೀದಿ ಮೇಲಿನ ಗೌರವದಿಂದಾಗಿ ಈ ಸೇವೆ ಇವತ್ತಿನ ವರೆಗೂ ಯಾವ ಅಡ್ಡಿಯೂ ಇಲ್ಲದೇ ಮುಂದುವರಿಯುತ್ತಾ ಬಂದಿದೆ. ಸದ್ಯ ಮಸೀದಿಗಳು ಮಾಡಬೇಕಾದ ಕೆಲಸ ಏನೆಂದರೆ, ಈ ಏಕಮುಖ ಸೇವೆಯನ್ನು ದ್ವಿಮುಖಗೊಳಿಸುವುದು. ಮಸೀದಿಗಾಗಿ ವಂತಿಗೆ ಕೊಡುವ (ಕೊಡಲು ಅಶಕ್ತರಾದವರನ್ನೂ ಕೊಟ್ಟವರ ಪಟ್ಟಿಯಲ್ಲೇ ಸೇರಿಸಬೇಕು) ವ್ಯಕ್ತಿಯ ಕ್ಷೇಮಕ್ಕಾಗಿ ಯೋಜನೆಯನ್ನು ರೂಪಿಸುವುದು. ಒಂದು ಮಸೀದಿಯ ವ್ಯಾಪ್ತಿಗೆ ಒಳಪಟ್ಟ ಮನೆಗಳ ಸಂಪೂರ್ಣ ಸರ್ವೇ ನಡೆಸುವುದು. ಒಂದು ಮನೆಯಲ್ಲಿ ವಾಸಿಸುವವರ ಸಂಖ್ಯೆ, ಮನೆಯ ಸ್ವರೂಪ, ಗಂಡು-ಹೆಣ್ಣು, ವಿದ್ಯಾರ್ಹತೆ, ದುಡಿಯುವವರು, ನಿರುದ್ಯೋಗಿಗಳು, ವಿವಾಹಿತರು, ಅವಿವಾಹಿತರು, ವಿಕಲ ಚೇತನರು, ರೋಗಿಗಳು, ಶಿಕ್ಷಣ ಪಡೆಯುತ್ತಿರುವವರು.. ಮುಂತಾದುವುಗಳ ಸಮಗ್ರ ವಿವರ ಸಂಗ್ರಹಿಸುವುದು. ಪಡಿತರ ಚೀಟಿ, ಮತದಾನ ಚೀಟಿ, ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಶೌಚಾಲಯ, ಮನೆಯ ಒಟ್ಟು ವರಮಾನ, ವಿಧವೆಯರಿದ್ದರೆ, ಅನಾಥರು, ವಿಚ್ಛೇದಿತೆಯರಿದ್ದರೆ.. ಎಲ್ಲವನ್ನೂ ದಾಖಲಿಸಿಕೊಳ್ಳುವುದು. ನಿಜವಾಗಿ, ಒಂದು ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಇಂಥದ್ದೊಂದು ಸರ್ವೆ ಇವತ್ತಿನ ದಿನಗಳಲ್ಲಿ ಬಹಳ ಅಗತ್ಯ. ಈ ಸರ್ವೇಯಿಂದ ಆಗಬಹುದಾದ ಬಹಳ ದೊಡ್ಡ ಪ್ರಯೋಜನ ಏನೆಂದರೆ, ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದಕ್ಕೆ ಸುಲಭವಾಗುತ್ತದೆ. ಸರಕಾರದ ಸಾಕಷ್ಟು ಫಂಡ್‍ಗಳು ಅರ್ಹ ಫಲಾನುಭವಿಗಳ ಕೊರತೆಯನ್ನು ನೆಪ ಮಾಡಿಕೊಂಡು ಹಿಂದಕ್ಕೆ ಹೋಗುವುದಿದೆ. ಅವನ್ನು ಸದುಪಯೋಗಪಡಿಸುವುದಕ್ಕೂ ಈ ಸರ್ವೆ ನೆರವಾಗಬಹುದು. ಸರಕಾರಿ ಸೌಲಭ್ಯವನ್ನು ತನ್ನ ಮಸೀದಿ ವ್ಯಾಪ್ತಿಯ ಮನೆಗಳಿಗೆ ತಲುಪಿಸುವುದಕ್ಕಾಗಿ ಪ್ರತಿ ಮಸೀದಿಯೂ ಅರೆಕಾಲಿಕವೋ ಪೂರ್ಣಕಾಲಿಕವೋ ಆದ ನೌಕರರನ್ನು ನೇಮಿಸಿಕೊಳ್ಳುವುದು ಇನ್ನೂ ಉತ್ತಮ ಅಥವಾ ಮಸೀದಿಯ ಉಸ್ತಾದರು ಸ್ವಯಂ ಪ್ರೇರಿತರಾಗಿ ಈ ಕೆಲಸವನ್ನು ವಹಿಸಿಕೊಂಡರೂ ಆಗಬಹುದು. ಮಸೀದಿ ಉಸ್ತಾದರು ಸರಕಾರಿ ಸೌಲಭ್ಯವನ್ನು ತನ್ನ ಜನರಿಗೆ ತಲುಪಿಸುವುದಕ್ಕಾಗಿ ಸರಕಾರಿ ಅಧಿಕಾರಿಯನ್ನೋ ಶಾಸಕರನ್ನೋ ಭೇಟಿಯಾಗುವುದೆಂದರೆ ಅಲ್ಲೊಂದು ಗೌರವದ ವಾತಾವರಣವಿರುತ್ತದೆ. ತಕ್ಷಣಕ್ಕೆ ಅದು ಮಂಜೂರಾಗುವುದಕ್ಕೂ ಅವಕಾಶವಿರುತ್ತದೆ. ಹಾಗೆಯೇ ಪ್ರತಿ ಮಸೀದಿಗೆ ಒಳಪಟ್ಟವರಲ್ಲಿ ವಿದೇಶಿ ಉದ್ಯೋಗಿಗಳಿರಬಹುದು. ಅವರನ್ನು ಈ ಅಭಿವೃದ್ಧಿ ಅಜೆಂಡಾದಲ್ಲಿ ಭಾಗಿಯಾಗಿಸುವುದಕ್ಕೆ ಮಸೀದಿ ಉಸ್ತಾದರಿಗೆ ಸಾಧ್ಯವಿದೆ. ಅಲ್ಲದೇ, ಮುಸ್ಲಿಮ್ ಸಮುದಾಯದಲ್ಲೇ ವಿಶೇಷವಾದ ಝಕಾತ್ ವ್ಯವಸ್ಥೆಯಿದೆ. ಜೊತೆಗೇ ಅನೇಕಾರು ಎನ್‍ಜಿಓಗಳಿವೆ. ದಾನಿಗಳಿದ್ದಾರೆ. ಅವರೆಲ್ಲರಿಂದಲೂ ಸಮುದಾಯದ ಏಳಿಗೆಗಾಗಿ ದೇಣಿಗೆಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ, ಪ್ರತಿ ಮಸೀದಿಗೆ ತನ್ನ ವ್ಯಾಪ್ತಿಯೊಳಗಿನ ಮನೆಗಳ ಸಮಗ್ರ ಸರ್ವೇ ನಡೆಸುವುದಲ್ಲದೆ ಅದನ್ನು ದಾಖಲಿಸಿಕೊಂಡು ಅಭಿವೃದ್ಧಿಗೆ ಪೂರಕವಾದ ನೀಲನಕ್ಷೆಯನ್ನು ರೂಪಿಸಿದರೆ ಅಭೂತಪೂರ್ವವೆನ್ನಬಹುದಾದ ಬದಲಾವಣೆ ಖಂಡಿತ ಸಾಧ್ಯವಾಗಬಹುದು. ಮಾತ್ರವಲ್ಲ, ತಲಾಕ್, ಸಮಾನ ನಾಗರಿಕ ಸಂಹಿತೆ, ಬಹುಪತ್ನಿತ್ವ, ಭಯೋತ್ಪಾದನೆ.. ಮುಂತಾದುವುಗಳನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡವರು ತಮ್ಮ ಅಜೆಂಡಾವನ್ನೇ ಬದಲಿಸಿಕೊಳ್ಳುವಂತೆ ಮಾಡುವುದಕ್ಕೂ ಇದು ಕಾರಣವಾಗಬಹುದು

Saturday 5 November 2016

ಟಿಪ್ಪು ಜಯಂತಿ ಯಾರ ಅಗತ್ಯ?

ರೇಷ್ಮೆ
      ಟಿಪ್ಪು ಸುಲ್ತಾನ್ ಏನು ಮತ್ತು ಏನಲ್ಲ ಎಂಬ ಬಗ್ಗೆ ಹುಟ್ಟಿಕೊಂಡಿರುವ ಚರ್ಚೆ ಬಿರುಸನ್ನು ಪಡಕೊಳ್ಳತೊಡಗಿದೆ. ಟಿಪ್ಪು ಪರ ಮತ್ತು ವಿರುದ್ಧ ಮಾಹಿತಿಗಳ ವಿನಿಮಯ ಆಗುತ್ತಿದೆ. ಟಿ.ವಿ. ಚಾನೆಲ್‍ಗಳಲ್ಲಿ ಕಂಠಶೋಷಣೆ ಪ್ರಾರಂಭವಾಗಿದೆ. ಟಿಪ್ಪುವಿನ ಹೆಸರಲ್ಲಿ ನಡೆಯುತ್ತಿರುವ ಭಾಷಣ, ಪ್ರತಿಭಟನೆಗಳು ಸಹಜ ಶಬ್ದಮಾಲಿನ್ಯಕ್ಕೆ ಹೆಚ್ಚುವರಿ ಕೊಡುಗೆಗಳನ್ನೂ ನೀಡತೊಡಗಿದೆ. ಇವೆಲ್ಲದ ನಡುವೆ ನಿಜ ಟಿಪ್ಪು ಕಳೆದು ಹೋಗುತ್ತಿರುವನೇನೋ ಅನ್ನುವ ಆತಂಕವೂ ಕಾಡುತ್ತಿದೆ. ನಿಜಕ್ಕೂ ಟಿಪ್ಪು ಯಾರ ಪ್ರತಿನಿಧಿ? ವೈಯಕ್ತಿಕವಾಗಿ ಆತ ಯಾವ ಧರ್ಮವನ್ನೇ ಅನುಸರಿಸಲಿ, ಓರ್ವ ರಾಜನಾಗಿ ಆತನ ಕಾರ್ಯ ನಿರ್ವಹಣೆ ಹೇಗಿತ್ತು? ಆತನ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನದಲ್ಲಿದ್ದವರೆಲ್ಲ ಯಾರು? ಅವರು ಯಾವ ಧರ್ಮದ ಪ್ರತಿನಿಧಿಗಳು? ಟಿಪ್ಪು ಭಯಂಕರ ಮತಾಂಧನೇ ಆಗಿರುತ್ತಿದ್ದರೆ ಆತನ ಆಸ್ಥಾನದಲ್ಲಿ ದಿವಾನ್ ಕೃಷ್ಣರಾವ್ ವಿತ್ತಮಂತ್ರಿಯಾಗಿ, ಪೂರ್ಣಯ್ಯ ಕಂದಾಯ ಮಂತ್ರಿಯಾಗಿ, ಶಿವಾಜಿ ಮತ್ತು ರಾಮರಾವ್‍ರು ಅಶ್ವದಳದ ದಂಡನಾಯಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಿತ್ತೇ? ಲಾಲಾ ಮುಹ್ತಾಬ್ ರಾಯ್, ಹರಿಸಿಂಗ್, ನರಸಿಂಹ ರಾವ್, ಶ್ರೀನಿವಾಸ್ ರಾವ್, ಶ್ರೀಪತಿ ರಾವ್ ಮುಂತಾದವರು ಇಸ್ಲಾಮ್‍ಗೆ ಮತಾಂತರವಾಗದೆಯೇ ಮತ್ತು ಹಿಂದೂಗಳಾಗಿದ್ದುಕೊಂಡೇ ಟಿಪ್ಪುವಿನ ಮಂತ್ರಿಮಂಡಲದಲ್ಲಿ ಉನ್ನತ ಸ್ಥಾನವನ್ನು ಪಡೆದರಲ್ಲ, ಹೇಗೆ? 1791ರಲ್ಲಿ ರಘುನಾಥ ರಾವ್ ನೇತೃತ್ವದ ಮರಾಠಾ ದಾಳಿಕೋರರು ಶೃಂಗೇರಿಯ ಶಾರದಾ ಮಂದಿರಕ್ಕೆ ಹಾನಿ ಮಾಡಿ, ಸ್ವರ್ಣ ಪಲ್ಲಕ್ಕಿಯನ್ನು ಹೊತ್ತೊಯ್ದಾಗ ಮತ್ತು ಶಾರದಾ ಮೂರ್ತಿಯನ್ನು ಗರ್ಭ ಗುಡಿಯಿಂದೆತ್ತಿ ಹೊಸಕ್ಕೆಸೆದಾಗ, ಅದನ್ನು ಮರುಸ್ಥಾಪಿಸಿದ್ದು ಟಿಪ್ಪು. ಮರಾಠರ ದಾಳಿಯ ಸಂದರ್ಭದಲ್ಲಿ ಮಂದಿರದಿಂದ ತಪ್ಪಿಸಿಕೊಂಡು ಕಾರ್ಕಳದಲ್ಲಿ ಆಶ್ರಯ ಪಡೆದಿದ್ದ ಶಂಕರಾಚಾರ್ಯರನ್ನು ಮರಳಿ ಕರೆತಂದದ್ದು ಟಿಪ್ಪು. ಭವಿಷ್ಯದ ಸಂಭಾವ್ಯ ದಾಳಿಯಿಂದ ಮಂದಿರವನ್ನು ರಕ್ಷಿಸುವುದಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲಿಗೆ ನೇಮಿಸಿದ್ದೂ ಟಿಪ್ಪುವೇ. ನಂಜನಗೂಡು ತಾಲೂಕಿನ ಶ್ರೀಲಕ್ಷ್ಮೀಕಾಂತ್ ಮಂದಿರ ಮತ್ತು ಶ್ರೀ ಕಣ್ವೇಶ್ವರ ಮಂದಿರ, ಮೇಲುಕೋಟೆಯ ಶ್ರೀ ನಾರಾಯಣ ಸ್ವಾಮಿ ಮಂದಿರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮಂದಿರಕ್ಕೂ ಆತ ಸಂದರ್ಭಾನುಸಾರ ನೆರವನ್ನು ನೀಡಿದ್ದಾನೆ. ಕೇರಳದ ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195 ಹೆಕ್ಟೇರ್ ಜಮೀನು ಕೊಟ್ಟಿದ್ದು ಟಿಪ್ಪುವೇ. ಪೊನ್ನಾಣಿಯ ಗುರುವಾಯೂರ್ ಮಂದಿರಕ್ಕೆ 135 ಹೆಕ್ಟೇರ್ ಜಮೀನು ಮಂಜೂರು ಮಾಡಿರುವುದೂ ಆತನೇ. ಒಂದು ವೇಳೆ ಆತ ದೇಗುಲ ಭಂಜಕನೇ ಆಗಿರುತ್ತಿದ್ದರೆ ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ದೇಗುಲ ಇರುತ್ತಿತ್ತೇ? ಆತನ ಅರಮನೆಯ ಕೂಗಳತೆಯ ದೂರದಲ್ಲಿರುವ ನರಸಿಂಹ ಮತ್ತು ಗಂಗಾಧರ ಮಂದಿರಗಳು ಜೀವಂತ ಇರುವುದಕ್ಕೆ ಸಾಧ್ಯವಿತ್ತೇ?
      ಅಂದಹಾಗೆ, ಟಿಪ್ಪು ಸುಲ್ತಾನ್ ರಾಜ ಮಾತ್ರ ಅಲ್ಲ, ಮನುಷ್ಯ ಕೂಡ. ಆದ್ದರಿಂದ ಓರ್ವ ಮನುಷ್ಯನಲ್ಲಿರಬಹುದಾದ ಸಹಜ ದೌರ್ಬಲ್ಯಗಳಿಂದ ಹೊರತುಪಡಿಸಿ ಆತನನ್ನು ನೋಡಬೇಕಾದ ಯಾವ ಅಗತ್ಯವೂ ಇಲ್ಲ. ರಾಜನೆಂಬ ನೆಲೆಯಲ್ಲಿ ಆತ ಹಿಂದೂಗಳ ವಿರುದ್ಧವೂ ಕ್ರಮ ಕೈಗೊಂಡಿರಬಹುದು. ಕ್ರೈಸ್ತರ ವಿರುದ್ಧವೂ ಕ್ರಮ ಜರುಗಿಸಿರಬಹುದು. ಮುಸ್ಲಿಮರ ಮೊಹರಂ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೂ ಟಿಪ್ಪು ನಿಷೇಧಿಸಿದ್ದ. ಹಾಗಂತ ಆತನನ್ನು ಮುಸ್ಲಿಮ್ ವಿರೋಧಿ ಎಂದು ಕರೆಯಬಹುದೇ? ಆಡಳಿತದ ಭಾಗವಾಗಿ ಆತ ಕೈಗೊಂಡಿರಬಹುದಾದ ಕ್ರಮಗಳನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ವಿಭಜಿಸಿ ವಿಶ್ಲೇಷಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಅಷ್ಟಕ್ಕೂ, ಈ ಬಗೆಯ ಸೀಳು ವಿಶ್ಲೇಷಣೆಗಳು ಕೇವಲ ಟಿಪ್ಪುವಿಗೆ ಯಾಕೆ ಸೀಮಿತವಾಗಬೇಕು? ಶಿವಾಜಿ ಮತ್ತು ಒಡೆಯರ್‍ಗಳ ಸಹಿತ ಎಲ್ಲ ರಾಜರುಗಳನ್ನೂ ಈ ಬಗೆಯ ವಿಶ್ಲೇಷಣೆಗೆ ಒಳಪಡಿಸಬಹುದಲ್ಲವೇ? ಅದರ ಆಧಾರದಲ್ಲಿ ಅವರನ್ನು ಮತಾಂಧರು, ಮುಸ್ಲಿಮ್, ಹಿಂದೂ, ಕ್ರೈಸ್ತ ವಿರೋಧಿಗಳೆಂದು ಪಟ್ಟ ಕಟ್ಟಬಹುದಲ್ಲವೇ? ನಿಜವಾಗಿ, ಟಿಪ್ಪುವನ್ನು ಮತಾಂಧನೆಂದು ಬಿಂಬಿಸ ಬಯಸುವವರಿಗೆ ಆತನ ಒಂದೇ ಒಂದು ಉತ್ತಮ ಅಂಶವೂ ಕಾಣಿಸುತ್ತಿಲ್ಲ. ಕನ್ನಂಬಾಡಿ ಅಣೆಕಟ್ಟಿಗೆ ನೀಲನಕ್ಷೆಯನ್ನು ರೂಪಿಸಿದ್ದು, ನಾಡಿಗೆ ರೇಷ್ಮೆ ಬೆಳೆಯನ್ನು ಪರಿಚಯಿಸಿ ತಳ ಸಮುದಾಯದ ಮಂದಿಗೆ ಉದ್ಯೋಗ ಗಿಟ್ಟುವಂತೆ ಮಾಡಿದ್ದು, ಬೆಂಗಳೂರಿನಲ್ಲಿ ಲಾಲ್‍ಬಾಗ್ ಸ್ಥಾಪಿಸಿದ್ದು, ಜಮೀನ್ದಾರಿ ಪದ್ಧತಿಯ ನಿರ್ನಾಮಕ್ಕೆ ಕ್ರಮ ಕೈಗೊಂಡಿದ್ದು, ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕೃಷಿ ನೀತಿಯನ್ನು ಜಾರಿಗೆ ತಂದು ದಲಿತರನ್ನು ಸಬಲರಾಗಿಸಿದ್ದು, ನೀರಾವರಿಗಾಗಿ ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದು, ಸಂಪೂರ್ಣ ಪಾನನಿಷೇಧವನ್ನು ಜಾರಿಗೆ ತಂದಿದ್ದು.. ಇವು ಯಾವುದನ್ನೂ ಅವರು ತಪ್ಪಿಯೂ ಉಲ್ಲೇಖಿಸುತ್ತಿಲ್ಲ. ಭಾರತೀಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿ ದಲಿತರಿಗೆ ಕೃಷಿ ಭೂಮಿಯ ಒಡೆತನ ದಕ್ಕಿಸಿ ಕೊಟ್ಟದ್ದು ಟಿಪ್ಪು. ಇವತ್ತಿಗೂ ಉನಾ ಚಳವಳಿ, ಚಲೋ ಉಡುಪಿ ಚಳವಳಿಯ ಬೇಡಿಕೆಗಳಲ್ಲಿ ಇದೂ ಒಂದು. ದಲಿತ ಮಹಿಳೆಯರಿಗೆ ಸೊಂಟದಿಂದ ಮೇಲೆ ಉಡುಪು ಧರಿಸದಂತೆ ಕೊಡಗಿನಲ್ಲಿ ಮೇಲ್ಜಾತಿಯ ಮಂದಿ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿದ್ದು ಟಿಪ್ಪು. ಅಂದಿನ ದಮನಿತ ಸಮುದಾಯದ ಮಟ್ಟಿಗೆ ಅದು ಅತಿದೊಡ್ಡ ವಿಮೋಚನೆಯಾಗಿತ್ತು. ಮಾನ ಮುಚ್ಚುವುದು ಮನುಷ್ಯನ ಪ್ರಕೃತಿ ಸಹಜ ಬಯಕೆ. ಕೊಡಗಿನಲ್ಲಿ ಆ ಮೂಲ ಸ್ವಾತಂತ್ರ್ಯವನ್ನೇ ದಲಿತರ ಪಾಲಿಗೆ ನಿಷೇಧಿಸಲಾಗಿತ್ತು. ಟಿಪ್ಪುವಿನ ಮೇಲೆ ಮತಾಂತರದ ಆರೋಪ ಹೊರಿಸುವವರು ಆ ಮತಾಂತರಕ್ಕೆ ಸಾಮಾನ್ಯವಾಗಿ ಕೊಡಗನ್ನು ಪುರಾವೆಯಾಗಿ ತೋರಿಸುವುದಿದೆ. ಆದರೆ, ಅಲ್ಲಿ ಆಚರಣೆಯಲ್ಲಿದ್ದ ಕಟು ಜಾತಿ ವ್ಯವಸ್ಥೆ ಮತ್ತು ತಳ ಸಮುದಾಯದ ಮೇಲಿನ ಶೋಷಣೆಯನ್ನು ಅವರು ಉಲ್ಲೇಖಿಸುವುದೇ ಇಲ್ಲ. ಮಾತ್ರವಲ್ಲ, ಈ ಶೋಷಣೆಗಳಿಂದ ವಿಮೋಚನೆಗೊಳಿಸಿದ ಟಿಪ್ಪುವಿನ ಮೇಲೆ ಆ ಮಂದಿ ಆಕರ್ಷಿತರಾಗಿರಬಹುದೆಂಬ ಸಾಧ್ಯತೆಯ ಕಡೆಗೂ ಅವರು ಗಮನ ಹರಿಸುವುದಿಲ್ಲ. 1782ರ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಕ್ರೈಸ್ತರು ಗುಪ್ತವಾಗಿ ಬ್ರಿಟಿಷರಿಗೆ ನೆರವಾಗಿದ್ದರು, ಕರ್ನಲ್ ಮ್ಯಾಥ್ಯೂಸ್ ಮತ್ತು ಕ್ಯಾಂಬೆಲ್‍ಗೆ ಸಹಕರಿಸಿದ್ದರು ಎಂಬ ಶಂಕೆಯಲ್ಲಿ ಕ್ರೈಸ್ತರ ಮೇಲೆ ಆತ ಶಿಸ್ತಿನ ಕ್ರಮ ಕೈಗೊಂಡದ್ದೂ ಇದೆ. ಒಂದು ರೀತಿಯಲ್ಲಿ, ಓರ್ವ ರಾಜನಾಗಿ ಟಿಪ್ಪು ಆ ಕಾಲದಲ್ಲಿ ಏನನ್ನು ಮಾಡಬಹುದೋ ಅದನ್ನು ಮಾಡಿದ್ದಾನೆ. ಅದರಲ್ಲಿ ಸಾಮ್ರಾಜ್ಯ ವಿಸ್ತರಣೆಯ ಉದ್ದೇಶವೂ ಇರಬಹುದು. ಅಧಿಕಾರ ಉಳಿಸುವ ಗುರಿಯೂ ಇರಬಹುದು. ಒಂದು ವೇಳೆ ಮತಾಂತರವೇ ಆತನ ನಿಜ ಉದ್ದೇಶ ಆಗಿರುತ್ತಿದ್ದರೆ, ಆತನ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರುಗಳಲ್ಲಿ ಇವತ್ತು ಮುಸ್ಲಿಮರೇ ತುಂಬಿರಬೇಕಿತ್ತಲ್ಲವೇ? ಇಲ್ಲೆಲ್ಲ ಈಗ ಇರುವ ದೇವಸ್ಥಾನಗಳಿಂದ ಅದಾನ್‍ನ ಕರೆಯೇ ಮೊಳಗುತ್ತಿರಬೇಕಿತ್ತಲ್ಲವೇ?
      ದುರಂತ ಏನೆಂದರೆ, ನಿಜ ಟಿಪ್ಪುವನ್ನು ಓದುವ ಮತ್ತು ಅದನ್ನು ಹೇಳುವ ಸಹನೆ ಇವತ್ತು ಯಾರಲ್ಲೂ ಕಾಣಿಸುತ್ತಿಲ್ಲ. ಟಿಪ್ಪು ಬೆಂಬಲಿಗರಲ್ಲೂ ವಿರೋಧಿಗಳಲ್ಲೂ ಅನಗತ್ಯ ವೈಭವೀಕರಣದ ಮಾತುಗಳಷ್ಟೇ ಕೇಳಿಬರುತ್ತಿವೆ. ನಿಜವಾದ ಟಿಪ್ಪು ಖಂಡಿತ ಇದರಾಚೆಗೆ ಇದ್ದಾನೆ. ಆ ಟಿಪ್ಪುವನ್ನು ಬಣ್ಣದ ಕನ್ನಡಕವನ್ನು ಬಳಸೆದೆಯೇ ಅಧ್ಯಯನ ನಡೆಸುವ ಅಗತ್ಯ ಇದೆ. ಟಿಪ್ಪು ನಿರ್ದಿಷ್ಟ ಧರ್ಮಕ್ಕೆ ಸೇರಿದ ರಾಜನಲ್ಲ. ಆತ ಒಂದು ಸಾಮ್ರಾಜ್ಯದ ಎಲ್ಲರ ರಾಜ. ಆತನ ಸರಿ ಮತ್ತು ತಪ್ಪುಗಳನ್ನು ಓರ್ವ ರಾಜನೆಂಬ ನೆಲೆಯಲ್ಲಿ ಸಹಜವಾಗಿ ಸ್ವೀಕರಿಸುತ್ತಲೇ ಜಯಂತಿ ಆಚರಣೆಯ ಔಚಿತ್ಯ ಚರ್ಚೆಗೊಳಗಾಗಬೇಕಾಗಿದೆ. ಜಯಂತಿ ಆಚರಣೆಯಿಂದ ಮುಸ್ಲಿಮ್ ಸಮುದಾಯಕ್ಕೆ ಆಗುವ ಪ್ರಯೋಜನಗಳೇನು ಎಂಬ ಅವಲೋಕನವೂ ನಡೆಯಬೇಕಾಗಿದೆ. ಇದರೊಳಗಿನ ರಾಜಕೀಯವನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಟಿಪ್ಪು ಒಂದು ದಿನದ ‘ಮಹಾನ್' ಆಗುವುದು ಅಥವಾ ಮತಾಂಧ ಆಗುವುದು ಜನರ ಅಗತ್ಯವೋ ರಾಜಕೀಯದ ಅಗತ್ಯವೋ ಎಂಬುದನ್ನು ಜನರು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. 

Saturday 29 October 2016

ಬಾಲಿವುಡ್‍ನ ನೈತಿಕತೆಯನ್ನು ಪ್ರಶ್ನೆಗೊಳಪಡಿಸಿದ ಬ್ರಾಸ್‍ನನ್

       ಕಳೆದವಾರ ಅಪರೂಪದ ಕ್ಷಮಾಯಾಚನೆಯೊಂದು ನಡೆಯಿತು. ಕ್ಷಮೆ ಯಾಚಿಸಿದವರು ಜೇಮ್ಸ್ ಬಾಂಡ್ ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಪಿಯರ್ಸ್ ಬ್ರಾಸ್‍ನನ್. ‘ತನ್ನಿಂದಾಗಿ ಯಾರಿಗಾದರೂ ತೊಂದರೆ ಆಗಿದ್ದರೆ ದಯವಿಟ್ಟು ಕ್ಷಮಿಸಿ...’ ಎಂದವರು ಭಾರತೀಯರಲ್ಲಿ ವಿನಂತಿಸಿದ್ದಾರೆ. ಹಾಗಂತ, ಬ್ರಾಸ್‍ನನ್ ಪಾಕಿಸ್ತಾನದವರಲ್ಲ ಅಥವಾ ಹಿಂದಿ ಸಿನಿಮಾ ನಿರ್ದೇಶಕ ಕರಣ್ ಜೋಹರ್‍ರಿಂದ 5 ಕೋಟಿ ರೂಪಾಯಿಯನ್ನು ದರೋಡೆಗೈದು ಭಾರತೀಯ ಸೇನೆಗೆ ನೀಡಲು ಮುಂದಾದವರಲ್ಲಿ ಬ್ರಾಸ್‍ನನ್‍ಗೆ ಯಾವ ಪಾತ್ರವೂ ಇಲ್ಲ. ಪಾನ್ ಬಹಾರ್ ಎಂಬ ಪಾನ್ ಮಸಾಲದ ಉತ್ಪನ್ನದಲ್ಲಿ ಅವರ ಭಾವಚಿತ್ರ ಪ್ರಕಟವಾಗುತ್ತಿದೆ ಎಂಬುದಕ್ಕಾಗಿ ಅವರು ಭಾರತೀಯರ ಕ್ಷಮೆ ಕೋರಿದ್ದಾರೆ. ಕ್ಯಾನ್ಸರ್‍ಕಾರಕ ಅಂಶಗಳುಳ್ಳ ಪಾನ್ ಮಸಾಲದ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿರುವ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಕ್ಯಾನ್ಸರ್‍ನಿಂದಾಗಿ ಮೊದಲ ಪತ್ನಿ ಮತ್ತು ಮಗಳನ್ನು ಕಳಕೊಂಡಿರುವ ವ್ಯಕ್ತಿಯೋರ್ವ ಕ್ಯಾನ್ಸರ್‍ಕಾರಕ ಉತ್ಪನ್ನಕ್ಕೆ ರೂಪದರ್ಶಿಯಾದುದು ಎಷ್ಟು ಸಮರ್ಥನೀಯ ಎಂಬ ಆಕ್ಷೇಪಗಳೂ ಎದುರಾಗಿದ್ದುವು. ಇದಕ್ಕೆ ಬ್ರಾಸ್‍ನನ್ ಉತ್ತರಿಸಿದ್ದಾರೆ. ತಾನು ಪಾನ್ ಬಹಾರ್ ಉತ್ಪನ್ನಕ್ಕೆ ರೂಪದರ್ಶಿಯೇ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ಮಾತ್ರವಲ್ಲ, ತನ್ನ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡ ಕಂಪೆನಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕ್ಷಣದಿಂದ ತನ್ನ ಭಾವಚಿತ್ರ ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
       ಅಂದಹಾಗೆ, ಮಾಡದ ತಪ್ಪಿಗೆ ಕ್ಷಮೆ ಕೋರಿದ ಬ್ರಾಸ್‍ನನ್‍ರನ್ನು ನಮ್ಮ ಬಾಲಿವುಡ್‍ನಲ್ಲಿ (ಹಿಂದಿ ಸಿನಿಮಾ ರಂಗ) ತಂದು ಕೂರಿಸಿದರೆ ಏನಾಗಬಹುದು? ಬ್ರಾಸ್‍ನನ್ ದಡ್ಡ ಎನಿಸಿಕೊಳ್ಳಲಾರರೇ? ಕಳೆದ ವರ್ಷ ನಟ-ನಟಿಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾರಿಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿತ್ತು. ಮ್ಯಾಗಿ ಉತ್ಪನ್ನದ ಪ್ರಚಾರದಲ್ಲಿ ಅವರು ಭಾಗಿಯಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. ಹಾಗಂತ ಅವರು ಭಾರತೀಯರಲ್ಲಿ ಕ್ಷಮೆಯನ್ನೇನೂ ಕೋರಲಿಲ್ಲ. ನಿಜವಾಗಿ, 100 ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿರುವ ಈ ದೇಶವು ಉತ್ಪನ್ನಗಳ ಪಾಲಿಗೆ ಬಹುದೊಡ್ಡ ಮಾರುಕಟ್ಟೆ. ಯುರೋಪಿನ ಹತ್ತಾರು ರಾಷ್ಟ್ರಗಳನ್ನು ಒಗ್ಗೂಡಿಸಿದರೂ ಲಭ್ಯವಾಗದ ಬೃಹತ್ ಗ್ರಾಹಕ ವರ್ಗವೊಂದು ಭಾರತದಲ್ಲಿ ಲಭ್ಯವಿದೆ. ಈ ವರ್ಗವನ್ನು ತಲುಪಲು ಮತ್ತು ಅವರ ವಿಶ್ವಾಸ ಗಳಿಸಲು ಎರಡು ರೀತಿಯಲ್ಲಿ ಸಾಧ್ಯವಿದೆ ಎಂದು ಕಂಪೆನಿಗಳು ತಿಳಿದುಕೊಂಡಿವೆ. ಒಂದು- ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಇರುವುದು. ಇನ್ನೊಂದು- ಗುಣಮಟ್ಟಕ್ಕೆ ಕಡಿಮೆ ಮಹತ್ವವನ್ನು ಕೊಟ್ಟು ಜನರನ್ನು ತಲುಪುವ ಸುಲಭ ದಾರಿಗಳನ್ನು ಕಂಡುಕೊಳ್ಳುವುದು. ದುರಂತ ಏನೆಂದರೆ, ಈ ಎರಡನೇ ವಿಧಾನ ಇವತ್ತು ಅತ್ಯಂತ ಫಲಪ್ರದವಾಗಿದೆ. ಸಿನಿಮಾ ನಟರು ಮತ್ತು ಕ್ರೀಡಾಪಟುಗಳನ್ನು ಮದ್ಯ ಕಂಪೆನಿಗಳು ಧಾರಾಳ ಬಳಸಿಕೊಳ್ಳುತ್ತಿವೆ. ತಂಬಾಕು ಕಂಪೆನಿಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ವಿಸ್ಕಿಯ ಜಾಹೀರಾತಿನಲ್ಲಿ ಶಾರುಕ್ ಖಾನ್, ಪ್ರಿಯಾಂಕ ಚೋಪ್ರಾ ಮತ್ತಿತರರಿದ್ದಾರೆ. ಪಾನ್ ಮಸಾಲಾಗಳ ಜಾಹೀರಾತಿನಲ್ಲಿ ಅಜಯ್ ದೇವ್‍ಗನ್, ಸೈಫ್ ಅಲಿ ಖಾನ್ ಮುಂತಾದವರಿದ್ದಾರೆ. ಇವರಲ್ಲದೇ, ಆರೋಗ್ಯಕ್ಕೆ ಹಾನಿಕರವೆಂದು ಬಗೆಯಲಾದ ತಂಬಾಕುಜನ್ಯ ಉತ್ಪನ್ನಗಳ ಜಾಹೀರಾತಿನಲ್ಲಿ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಭಾಗಿಯಾಗಿದ್ದಾರೆ. ಈ ಕಾರಣದಿಂದಲೇ, ಅವು ಶರವೇಗದಲ್ಲಿ ಜನರ ನಡುವೆ ಪರಿಚಿತವೂ ಜನಪ್ರಿಯವೂ ಆಗುತ್ತಿದೆ. ಜನರು ತಮ್ಮ ಹೀರೋಗಳ ಹುಚ್ಚು ಅಭಿಮಾನದಲ್ಲಿ ಆ ಉತ್ಪನ್ನಗಳ ಗ್ರಾಹಕರಾಗುತ್ತಾರೆ. ಬಳಿಕ ದಾಸರಾಗುತ್ತಾರೆ. ಇದು ಕಂಪೆನಿಗಳಿಗೂ ಗೊತ್ತು. ನಟಿಸುವವರಿಗೂ ಗೊತ್ತು. ಆದ್ದರಿಂದಲೇ, ಬ್ರಾಸ್‍ನನ್‍ರ ಕ್ಷಮೆ ಕೋರುವಿಕೆ ಮುಖ್ಯವಾಗುವುದು. ಓರ್ವ ‘ಪ್ರಸಿದ್ಧ’ರ ಹೊಣೆಗಾರಿಕೆಗಳು ಏನೇನು? ಅವರು ಬರಿದೇ ರೂಪದರ್ಶಿಗಳು ಮಾತ್ರವೇ? ಸಮಾಜಕ್ಕೂ ಅವರಿಗೂ ಸಂಬಂಧ ಇಲ್ಲವೇ? ಸಾಮಾಜಿಕ ಬದ್ಧತೆ, ಸಾಮಾಜಿಕ ಆರೋಗ್ಯ, ರೋಗಮುಕ್ತ ಸಮಾಜ.. ಮುಂತಾದುವುಗಳಿಗೆ ಅವರ ಕೊಡುಗೆಗಳೇನು? ಇವುಗಳಲ್ಲಿ ಅವರು ವಹಿಸುವ ಪಾತ್ರ ಯಾವುದು? ನಿಜವಾಗಿ, ಬಾಲಿವುಡ್ ಕ್ಷೇತ್ರ ಇವತ್ತು ಅಸ್ತಿತ್ವದಲ್ಲಿರುವುದೇ ಜನರಿಂದಾಗಿ. ಈ ಜನರಲ್ಲಿ ಬಡವರಿದ್ದಾರೆ, ಶ್ರೀಮಂತರಿದ್ದಾರೆ, ಮಹಿಳೆಯರಿದ್ದಾರೆ, ಯುವಕರಿದ್ದಾರೆ. ಈ ಜನರ ಬೆಂಬಲದಿಂದಾಗಿಯೇ ಈ ದೇಶದಲ್ಲಿ ಸಾಮಾನ್ಯನೋರ್ವ ಹೀರೋ ಆಗಿದ್ದಾನೆ/ಳೆ. ಬಾಲಿವುಡ್ ಕ್ಷೇತ್ರದಲ್ಲಿ ಇವತ್ತು ಕೋಟ್ಯಂತರ ರೂಪಾಯಿ ಹೂಡಿಕೆಯಾಗುತ್ತಿದ್ದರೆ, ಅದರ ಹಿಂದಿನ ಧೈರ್ಯ ಈ ಬೃಹತ್ ಬಡವ-ಶ್ರೀಮಂತರನ್ನೊಳಗೊಂಡ ಭಾರತೀಯರೇ. ಹೀಗಿರುವಾಗ, ಈ ಕ್ಷೇತ್ರ ತನ್ನ ಈ ಬೃಹತ್ ಗ್ರಾಹಕ ವರ್ಗವನ್ನು ಏನೆಂದು ಪರಿಗಣಿಸಬೇಕು? ಇವರ ಬಗ್ಗೆ ಯಾವ ನಿಲುವನ್ನು ಹೊಂದಬೇಕು? ತಂಬಾಕು ಉತ್ಪನ್ನಗಳಲ್ಲಿ ಕ್ಯಾನ್ಸರ್‍ಕಾರಕ ಅಂಶಗಳಿವೆ ಎಂಬುದು ತೀರಾ ಬಡ ಭಾರತೀಯನಿಗೆ ಗೊತ್ತಿಲ್ಲದೇ ಇರಬಹುದು. ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕರ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಅಥವಾ ಅದಕ್ಕೆ ಮಹತ್ವ ಕೊಡದ ಭಾರತೀಯ ಇರಬಹುದು. ಆದರೆ ಇವುಗಳ ಪ್ರಚಾರದಲ್ಲಿ ಭಾಗಿಯಾಗುವ ಸಿನಿಮಾ ತಾರೆಯರಿಗೆ ಇದು ಖಂಡಿತ ಗೊತ್ತು. ಗೊತ್ತಿದ್ದೂ ಅದರ ಪ್ರಚಾರದಲ್ಲಿ ಭಾಗಿಯಾಗುತ್ತಾರೆಂದರೆ ಅದನ್ನು ಜನರಿಗೆ ಮಾಡುವ ದ್ರೋಹ ಎಂದಲ್ಲದೇ ಬೇರೇನೆಂದು ಕರೆಯಬೇಕು? ಹಾಗಂತ, ಈ ದ್ರೋಹವನ್ನು ಬರೇ ಉತ್ಪನ್ನಗಳ ಜಾಹೀರಾತಿಗೆ ಮಾತ್ರ ಸೀಮಿತಗೊಳಿಸಬೇಕಾಗಿಲ್ಲ. ಕಲೆಯ ಹೆಸರಲ್ಲಿ ಮೌಲ್ಯಗಳ ಕೊಲೆಯನ್ನೂ ಇಲ್ಲಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಸಿನಿಮಾಗಳ ಮೇಲೆ ಪತ್ರಿಕೆಗಳಲ್ಲಿ ವಿಶ್ಲೇಷಣೆ ನಡೆಸುವವರು, ‘ಸದಭಿರುಚಿ’ಯ ಸಿನಿಮಾ ಎಂದು ಬರೆಯುವುದಿದೆ. ‘ಕುಟುಂಬ ಸಮೇತ ಹೋಗಿ ನೋಡಬಹುದಾದ ಚಿತ್ರ’ ಎಂಬ ಸರ್ಟಿಫಿಕೇಟನ್ನೂ ನೀಡುವುದಿದೆ. ಅಂದಹಾಗೆ, ಇಂಥ ಪದ ಬಳಕೆಗಳು ಕೊಡುವ ಸೂಚನೆಯೇನು? ಕುಟುಂಬ ಸಮೇತ ನೋಡಲು ಅಸಾಧ್ಯವಾದ ಮತ್ತು ಸದಭಿರುಚಿಗೆ ವಿರುದ್ಧವಾದ ಸಿನಿಮಾಗಳೂ ತಯಾರಾಗುತ್ತವೆ ಎಂಬುದನ್ನೇ ಅಲ್ಲವೇ?
        ನಿಜವಾಗಿ, ಮಾಡದ ತಪ್ಪಿಗೆ ಬ್ರಾಸ್‍ನನ್ ಕ್ಷಮೆ ಕೋರುವ ಮೂಲಕ ಕೆಲವು ಪ್ರಶ್ನೆಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಆ ಪ್ರಶ್ನೆ ನೈತಿಕತೆಯದ್ದು. ಸಾಮಾಜಿಕ ಬದ್ಧತೆಯದ್ದು. ವ್ಯಕ್ತಿಯ ಹೊಣೆಗಾರಿಕೆಯದ್ದು. ಓರ್ವ ನಟ ಅಥವಾ ನಟಿ ಅಥವಾ ರೂಪದರ್ಶಿ ಬರೇ ಅಷ್ಟೆಯೇ ಅಥವಾ ಅದರಾಚೆಗೆ ಅವರಿಗೂ ಸಮಾಜಕ್ಕೂ ಸಂಬಂಧ ಇದೆಯೇ? ಒಂದು ಉತ್ಪನ್ನ ಜನರ ಆರೋಗ್ಯವನ್ನು ಕೆಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾದಲ್ಲಿ ಪ್ರಚಾರಕ ಏನು ಮಾಡಬೇಕು? ‘ತಾನು ಬರೇ ಪ್ರಚಾರಕ, ಉತ್ಪನ್ನದ ಗುಣಮಟ್ಟಕ್ಕೂ ತನಗೂ ಸಂಬಂಧ ಇಲ್ಲ..’ ಎಂಬುದು ಆತನ ನಿಲುವಾಗಬಹುದೇ? ಈ ನಿಲುವು ಸಮರ್ಥನೀಯವೇ? ಅನಾರೋಗ್ಯಕಾರಿಯಾದ ಉತ್ಪನ್ನವನ್ನು ಖರೀದಿಸುವಂತೆ ಆತ ಜನರೊಂದಿಗೆ ವಿನಂತಿಸುವುದು ಅಪರಾಧ ಅಲ್ಲವೇ? ಜನರು ಆ ಉತ್ಪನ್ನದ ಮೇಲೆ ಭರವಸೆ ತಾಳುವಂತೆ ನಟಿಸುವುದು ಜನದ್ರೋಹವಲ್ಲವೇ? ತಮ್ಮನ್ನು ಬೆಳೆಸಿದ ಜನರನ್ನೇ ಈ ಮಟ್ಟದಲ್ಲಿ ಮೂರ್ಖರಾಗಿಸುವುದು ಯಾಕೆ ಕೊಲೆ ಸಂಚು ಎನಿಸಿಕೊಳ್ಳಬಾರದು? ಅಸಂಖ್ಯ ಮಂದಿ ಇವತ್ತು ನಿರ್ದಿಷ್ಟ ಮದ್ಯದ ಬ್ರಾಂಡ್‍ಗೆ, ತಂಬಾಕು ಉತ್ಪನ್ನಗಳಿಗೆ ಅಥವಾ ಜಂಕ್ ಫುಡ್‍ಗಳಿಗೆ ಗ್ರಾಹಕರಾಗಿರುವುದು ಅದರ ಪ್ರಚಾರಕರಾದ ನಟ-ನಟಿಯರಿಂದಾಗಿ. ಅವರೇ ಆ ಉತ್ಪನ್ನದ ವಿಶ್ವಾಸ. ಅವರೇ ಆ ಉತ್ಪನ್ನದ ಗುಣಮಟ್ಟಕ್ಕೆ ಖಾತರಿ. ಅವರ ಮೇಲಿನ ಅಭಿಮಾನದಿಂದಾಗಿ ಆ ಉತ್ಪನ್ನ ಜನರ ಮನೆ ಸೇರುತ್ತದೆ. ಹೊಟ್ಟೆ ತುಂಬುತ್ತದೆ ಮತ್ತು ನಿಧಾನಕ್ಕೆ ಅವರನ್ನೇ ಬಲಿ ಪಡೆಯುತ್ತದೆ. ಆದ್ದರಿಂದಲೇ ಬ್ರಾಸ್‍ನನ್ ಮುಖ್ಯವಾಗುತ್ತಾರೆ.

Friday 21 October 2016

ಶೇ.16ರ ಮೇಲೆ ಶೇ. 80ರಷ್ಟು ಶಂಕೆ

        ಸಮಾನ ನಾಗರಿಕ ಸಂಹಿತೆಯ ಸ್ವರೂಪವನ್ನು ಸಿದ್ಧಗೊಳಿಸುವ ಉದ್ದೇಶದಿಂದ ರಚಿತವಾದ ಕೇಂದ್ರ ಕಾನೂನು ಆಯೋಗದ ಎದುರು ಹೈದರಾಬಾದ್‍ನ 13ರ ಬಾಲೆಯೋರ್ವಳು ದೊಡ್ಡದೊಂದು ಪ್ರಶ್ನೆಯನ್ನು ಬಿಟ್ಟು ಹೋಗಿದ್ದಾಳೆ. ಹೆಸರು ಆರಾಧನಾ. ಜೈನ ಧರ್ಮಿಯಳು. ಜೈನ ಧರ್ಮದ ಸಂಪ್ರದಾಯದಂತೆ ಪವಿತ್ರ ‘ಚೌಮಾಸ’ದ ಅವಧಿಯಲ್ಲಿ ಈಕೆ 68 ದಿವಸಗಳ ವರೆಗೆ ಉಪವಾಸ ಕೂರುತ್ತಾಳೆ. ಈ ಉಪವಾಸ ಜೈನ ಸಮುದಾಯದಲ್ಲಿ ವೈಭವೀಕರಣಗೊಳ್ಳುತ್ತದೆ. ಭಕ್ತರು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಮದುಮಗಳಂತೆ ಆಕೆಯನ್ನು ಶೃಂಗರಿಸಲಾಗುತ್ತದೆ. ಆಕೆ ಇವುಗಳಿಂದ ರೋಮಾಂಚಿತಳಾಗುತ್ತಾಳೆ. ಜೈನ ಧರ್ಮದ ಹಿರಿಯರು ಅನ್ನ, ನೀರನ್ನು ತ್ಯಜಿಸಿ ಸ್ವಇಚ್ಛೆಯಿಂದ ದೇಹ ತ್ಯಾಗಮಾಡುವುದಕ್ಕಾಗಿ ‘ಸಲ್ಲೇಖನಾ ವೃತ’ ಕೈಗೊಳ್ಳುವುದು ಸಹಜವಾಗಿದ್ದರೂ ಮತ್ತು ವೈಯಕ್ತಿಕ ಹಕ್ಕಾಗಿ ಅದು ಪರಿಗಣಿತವಾಗಿದ್ದರೂ ಬಾಲೆಯೋರ್ವಳು ದೀರ್ಘ ಉಪವಾಸಕ್ಕೆ ಮುಂದಾಗುವುದು ಹೊಸತು. ಸ್ವಧರ್ಮೀಯರ ಗೌರವ ಮತ್ತು ಭಾವುಕತೆಯು ಆ ಬಾಲೆಯನ್ನು ನಿಗದಿತ 68 ದಿನಗಳ ಕಾಲ ಉಪವಾಸ ಪೂರ್ತಿಗೊಳಿಸುವಂತೆ ಒತ್ತಡಕ್ಕೆ ತಳ್ಳುತ್ತದೆ. ಆಕೆ ಉಪವಾಸ ಪೂರ್ತಿಗೊಳಿಸುತ್ತಾಳೆ. ಈ ಧಾರ್ಮಿಕ ಉಪವಾಸವನ್ನು ಪ್ರಶಂಸಿಸಿ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗುತ್ತದೆ. ಸಮಾರಂಭ ಏರ್ಪಾಡಾಗುತ್ತದೆ. ಗಣ್ಯರು ಭಾಗವಹಿಸುತ್ತಾರೆ. ಇದಾಗಿ ಎರಡು ದಿನಗಳಲ್ಲಿ ಈಕೆ ಅಸ್ವಸ್ಥಗೊಳ್ಳುತ್ತಾಳೆ. ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಸಾವಿಗೀಡಾಗುತ್ತಾಳೆ. ಆದರೆ ಈ ಸಾವೂ ವೈಭವೀಕರಣಗೊಳ್ಳುತ್ತದೆ. ‘ಬಾಲ ತಪಸ್ವಿ’ ಎಂದು ಕೊಂಡಾಡಲಾಗುತ್ತದೆ. ಅಂತಿಮ ಸಂಸ್ಕಾರದ ಮೆರವಣಿಗೆಯಲ್ಲಿ 600ಕ್ಕಿಂತಲೂ ಅಧಿಕ ಮಂದಿ ಪಾಲುಗೊಳ್ಳುತ್ತಾರಲ್ಲದೇ ಅಂತಿಮ ಮೆರವಣಿಗೆಗೆ ‘ಶೋಭಾಯಾತ್ರೆ’ ಎಂದು ಹೆಸರಿಸಲಾಗುತ್ತದೆ. ದುರಂತ ಏನೆಂದರೆ, ಈ ಬಾಲೆಯ ಸಾವಿನ ಒಂದು ವಾರದ ಬಳಿಕ ಬಿಡುಗಡೆಗೊಂಡ ಕಾನೂನು ಆಯೋಗದ 16 ಪ್ರಶ್ನೆಗಳಲ್ಲಿ ಈ ಮಗು ಎತ್ತಿದ ಬಹುಮುಖ್ಯ ಪ್ರಶ್ನೆಗೆ ಯಾವ ಸ್ಥಾನವನ್ನೂ ಕೊಟ್ಟಿಲ್ಲ. ನನ್ನ ಮೃತ್ಯುವನ್ನು ಯಾವ ಪಟ್ಟಿಯಲ್ಲಿ ಸೇರಿಸುತ್ತೀರಿ? ಇದು ವೈಯಕ್ತಿಕ ಹಕ್ಕೋ ಅಥವಾ ಹಿಂಸೆಯೋ ಅಥವಾ ಆತ್ಮಹತ್ಯೆಯೋ? ನನ್ನ ಹಿರಿಯರು ಕೈಗೊಳ್ಳುವ ಸಲ್ಲೇಖನಾ ವೃತದ ವ್ಯಾಖ್ಯಾನ ಏನು? ಅದು ಜೈನ ಧರ್ಮೀಯರ ವೈಯಕ್ತಿಕ ಹಕ್ಕುಗಳ ಚೌಕಟ್ಟಿನೊಳಗೆ ಬರುತ್ತದೋ ಅಥವಾ ಅದನ್ನು ಆತ್ಮಹತ್ಯೆಯ ಪ್ರಯತ್ನ ಎಂದು ಪರಿಗಣಿಸುತ್ತೀರೋ? ಹಾಗಂತ, ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಹಿಂದೂ ಸಮುದಾಯದಲ್ಲಿ ವಿಧವೆಯರು ಅಸಹಜ ಬದುಕನ್ನು ಬದುಕುತ್ತಿದ್ದಾರೆ. ಪ್ರತಿ ವರ್ಷ ಹೋಳಿ, ದೀಪಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ವೃಂದಾವನದಲ್ಲಿ ವಿಧವೆಯರು ಸುದ್ದಿಗೀಡಾಗುವುದಿದೆ. ಪತಿಯನ್ನು ಕಳೆದುಕೊಂಡು ವಿಧವೆಯಾದವರು ತಮ್ಮ ಉಳಿದ ಬದುಕನ್ನು ಶ್ರೀಕೃಷ್ಣನ ಭಜನೆ ಮಾಡುತ್ತಾ ವೃಂದಾವನದಲ್ಲಿ ಕಳೆಯುವುದು ಮೋಕ್ಷಾರ್ಹ ಎಂದು ಹಿಂದೂ ಧರ್ಮೀಯರಲ್ಲಿ ನಂಬಿಕೆಯಿದೆ. ಇಂಥ ಸಾವಿರಾರು ವಿಧವೆಯರ ದಯನೀಯ ಬದುಕಿನ ಕುರಿತಂತೆ ಮೂರ್ನಾಲ್ಕು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟ್ ತೀವ್ರ ಅಘಾತವನ್ನು ವ್ಯಕ್ತಪಡಿಸಿತ್ತು. ವೃಂದಾವನದಲ್ಲಿ ಸಾವಿಗೀಡಾಗುವ ವಿಧವೆಯರನ್ನು ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ಎಸೆಯುತ್ತಿರುವ ಘಟನೆಗಳ ಕುರಿತಂತೆ ಓರ್ವ ಅರ್ಜಿದಾರರು ಕೋರ್ಟ್‍ನ ಗಮನಕ್ಕೆ ತಂದಿದ್ದರು. ಕೃಷ್ಣನ ಭಜನೆ ಮಾಡುತ್ತಾ ತುತ್ತು ಅನ್ನಕ್ಕಾಗಿ ಪರದಾಡುವ ಅವರ ಸ್ಥಿತಿಯನ್ನು ಅರ್ಜಿಯಲ್ಲಿ ವಿವರಿಸಲಾಗಿತ್ತು. ಎಷ್ಟೋ ವಿಧವೆಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬಲವಂತದಿಂದ ಅಲ್ಲಿ ಬಿಟ್ಟು ಹೋಗುತ್ತಿದ್ದರು. ಈ ಬಗ್ಗೆ ಕೋರ್ಟು ತನಿಖೆಗೂ ಆದೇಶಿಸಿತ್ತು. ಪ್ರಶ್ನೆ ಇದಲ್ಲ. ಇದು ಮಹಿಳೆಯರ ಮೇಲೆ ಎಸಗಲಾಗುವ ದೌರ್ಜನ್ಯವೋ, ಹಕ್ಕು ಹರಣವೋ, ಗೌರವವೋ ಆಥವಾ ಧಾರ್ಮಿಕ ವಿಧಿಯೋ? ಕಾನೂನು ಆಯೋಗದ ನಿಲುವೇನು? ಅದು ಬಿಡುಗಡೆಗೊಳಿಸಿದ 16 ಪ್ರಶ್ನೆಗಳಲ್ಲಿ ಅರಾಧನಳ ಪ್ರಶ್ನೆಗಳಿಗೆ, ವೃಂದಾವನದ ವಿಧವೆಯರ ಪ್ರಶ್ನೆಗಳಿಗೆ ಮತ್ತು ಮಠ-ಮಂದಿರಗಳಲ್ಲಿರುವ ಪಂಕ್ತಿಬೇಧ, ಮಡೆಸ್ನಾನದಂಥ ಹತ್ತಾರು ಸಂಪ್ರದಾಯಗಳಿಗೆ ಸಂಬಂಧಿಸಿ ಯಾವ ಪ್ರಶ್ನೆಯನ್ನೂ ಕೇಳಿಲ್ಲವಲ್ಲ, ಯಾಕೆ? 16 ಪ್ರಶ್ನೆಗಳಲ್ಲಿ ಮುಸ್ಲಿಮರ ವೈಯಕ್ತಿಕ ಹಕ್ಕುಗಳನ್ನೇ ಹೆಚ್ಚಾಗಿ ಶಂಕೆಯ ಮೊನೆಯಲ್ಲಿ ನಿಲ್ಲಿಸಿರುವುದೇಕೆ? ಈ ದೇಶದಲ್ಲಿ ಮುಸ್ಲಿಮರಿರುವುದು ಕೇವಲ 18 ಕೋಟಿ. ಇವರಿಗೆ ಹೋಲಿಸಿದರೆ ಹಿಂದೂಗಳ ಜನಸಂಖ್ಯೆ 80 ಕೋಟಿಯಷ್ಟಿದೆ. ಆದರೆ, ಕಾನೂನು ಆಯೋಗದ ಶಂಕೆಗೆ ಒಳಗಾಗಿರುವ ಪ್ರಶ್ನೆಗಳಲ್ಲಿ 80%ವೂ ನೇರವಾಗಿಯೋ ಪರೋಕ್ಷವಾಗಿಯೋ ಮುಸ್ಲಿಮರಿಗೇ ಸಂಬಂಧಿದವು. ಯಾಕೆ ಹೀಗೆ? ಕೇಂದ್ರದ ಉದ್ದೇಶವು ಶುದ್ಧವಾಗಿದ್ದರೆ ವಿವಾಹ, ತಲಾಕ್, ಜೀವನಾಂಶ, ದತ್ತು ಸ್ವೀಕಾರ, ಬಹುಪತ್ನಿತ್ವ... ಮುಂತಾದ ಮುಸ್ಲಿಮ್ ವೈಯಕ್ತಿಕ ನಿಯಮಗಳಡಿಯಲ್ಲಿ ಬರುವ ವಿಷಯಗಳೇ ಯಾಕೆ ಕಾಣಿಸಿಕೊಳ್ಳುತ್ತಿತ್ತು? ಅಷ್ಟಕ್ಕೂ, ಈ 16 ಪ್ರಶ್ನೆಗಳು ಕೊಡುವ ಸೂಚನೆಯೇನು? ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆ ಇಷ್ಟು ವಿಷಯಗಳಿಗೆ ಸಂಬಂಧಿಸಿ ಮಾತ್ರ ರಚನೆಗೊಳ್ಳುತ್ತದೆ ಎಂದೇ ಅಲ್ಲವೇ? ಯಾಕೆ ಮುಸ್ಲಿಮರ ವೈಯಕ್ತಿಕ ನಿಯಮಗಳಿಗೆ ಸಂಬಂಧಿಸಿದಂತೆ ಮಾತ್ರ ಸಮಾನ ನಾಗರಿಕ ಸಂಹಿತೆ ರಚನೆಯಾಗಬೇಕು? ಇತರೆಲ್ಲ ವಿಷಯಗಳನ್ನು ಯಾಕೆ ಇದರಿಂದ ಹೊರಗಿಡಲಾಗಿದೆ? 16 ಪ್ರಶ್ನೆಗಳಲ್ಲಿ ಪಂಕ್ತಿಬೇಧ, ಮಡೆಸ್ನಾನ, ವಿಧವೆಯರ ಸಂಕಟ, ಸಲ್ಲೇಖನಾ ವ್ರತ... ಸಹಿತ ಈ ದೇಶದ ವಿವಿಧ ಜಾತಿ-ಧರ್ಮಗಳಲ್ಲಿರುವ ನೂರಾರು ವೈಯಕ್ತಿಕ ನಿಯಮಗಳ ಬಗ್ಗೆ ಯಾವ ಉಲ್ಲೇಖವೂ ಇಲ್ಲವೇಕೆ? ಮುಸ್ಲಿಮರ ವೈಯಕ್ತಿಕ ಹಕ್ಕನ್ನು ರದ್ದು ಪಡಿಸುವುದೇ ಈ ಸಂಹಿತೆಯ ಮುಖ್ಯ ಉದ್ದೇಶ ಎಂಬುದೇ ಇದು ಕೊಡುವ ಸೂಚನೆಯಲ್ಲವೇ? ಸಮತೋಲನಕ್ಕಾಗಿ ಮಾತ್ರ ಪ್ರಶ್ನಾವಳಿಯಲ್ಲಿ ಕೈಸ್ತರ ಕ್ಯೂರಿಂಗ್ ಪದ್ಧತಿಯನ್ನು, ಅಂತರ್ಜಾತಿ ಮದುವೆಯಂಥ ಒಂದೆರಡು ವಿಷಯಗಳನ್ನು ಸೇರಿಸಲಾಗಿದೆ ಎಂದು ಅನಿಸುವುದಿಲ್ಲವೇ? 20%ಕ್ಕಿಂತ ಕಡಿಮೆ ಇರುವ ಸಮುದಾಯದಲ್ಲಿ 80%ಕ್ಕಿಂತ ಅಧಿಕ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಮತ್ತು 80% ಇರುವ ಸಮುದಾಯದಲ್ಲಿ ಗಂಭೀರವಾದ ಸಮಸ್ಯೆಗಳೇ ಕಾಣದಿರುವುದು ಏನನ್ನು ಸೂಚಿಸುತ್ತದೆ? ಅಂದಹಾಗೆ,
      ಮುಸ್ಲಿಮರ ವಿವಾಹ, ತಲಾಕ್, ಬಹುಪತ್ನಿತ್ವ, ಜೀವನಾಂಶ, ದತ್ತು ಸ್ವೀಕಾರ ಮುಂತಾದುವುಗಳ ಬಗ್ಗೆ ಪ್ರಶ್ನೆ ಕೇಳುವುದಕ್ಕಿಂತ ಮೊದಲು ಉತ್ತರಿಸುವವರ ಅರ್ಹತೆಯನ್ನೂ ಪರಿಶೀಲಿಸಬೇಡವೇ? ಕ್ರೈಸ್ತರ ವಿಚ್ಛೇದನ ಪ್ರಕ್ರಿಯೆಯ ಭಾಗವಾಗಿರುವ ಎರಡು ವರ್ಷಗಳ ಕ್ಯೂರಿಂಗ್ ಅವಧಿಯ ಕುರಿತು ಈ ದೇಶದಲ್ಲಿ ಎಷ್ಟಂಶ ಮಾಹಿತಿಯಿದೆ? ಕಾನೂನು ಆಯೋಗ ಬಿಡುಗಡೆಗೊಳಿಸಿರುವ 16 ಪ್ರಶ್ನೆಗಳಿಗೆ ದೇಶದ ಧಾರ್ಮಿಕ, ಸಾಮಾಜಿಕ, ಸ್ವಯಂಸೇವಾ ಸಂಘಟನೆಗಳು, ಅಲ್ಪಸಂಖ್ಯಾತ ವಿಭಾಗಗಳು, ರಾಜಕೀಯ ಪಕ್ಷಗಳು, ಸರಕಾರಿ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳು 45 ದಿನಗಳೊಳಗೆ ಉತ್ತರಿಸಬೇಕೆಂದು ಗಡುವು ವಿಧಿಸುವಾಗ ಅವು ಉತ್ತರಿಸುವುದಕ್ಕೆ ಎಷ್ಟು ಅರ್ಹ ಎಂಬುದನ್ನೂ ನೋಡಬೇಡವೇ? 20% ದಷ್ಟು ಇರುವ ಅಲ್ಪಸಂಖ್ಯಾತ ವಿಭಾಗಗಳ ಸಂಘ ಸಂಸ್ಥೆಗಳು ಎಷ್ಟಿರಬಹುದು? 80% ಜನಸಂಖ್ಯೆಯಿರುವ ಸಮುದಾಯದಲ್ಲಿ ಸಂಘ ಸಂಸ್ಥೆಗಳು ಎಷ್ಟಿರಬಹುದು? ತಲಾಕ್, ಜೀವನಾಂಶ, ಕ್ಯೂರಿಂಗ್... ಮುಂತಾದುವುಗಳ ಬಗ್ಗೆ ಇವುಗಳಿಂದ ವ್ಯಕ್ತವಾಗುವ ಉತ್ತರಗಳು ಹೇಗಿರಬಹುದು? ಯಾವುದು ಬಹುಮತವನ್ನು ಪಡೆಯಬಹುದು?
       ಈ ದೇಶದಲ್ಲಿ ಮುಸ್ಲಿಮ್ ವೈಯಕ್ತಿಕ ನಿಯಮಗಳ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದಕ್ಕೆ ತಲಾಕ್‍ನ ಸುತ್ತ ಹೆಚ್ಚಿನ ಟಿವಿ ವಾಹಿನಿಗಳಲ್ಲಿ ನಡೆಯುತ್ತಿರುವ ಚರ್ಚೆಗಳೇ ಸಾಕ್ಷಿ. ವಿಚ್ಛೇದನ ಎಂಬ ಕನ್ನಡ ಪದದ ಪರ್ಯಾಯ ಪದ ತಲಾಕ್ ಎಂಬುದೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ತ್ರಿವಳಿ ತಲಾಕ್‍ನ ಬಗ್ಗೆ ಎಷ್ಟು ಘೋರ ತಪ್ಪು ತಿಳುವಳಿಕೆಯಿದೆಯೆಂದರೆ, ಪತಿ-ಪತ್ನಿ ಮೂರ್ನಾಲ್ಕು ವರ್ಷಗಳಿಂದ ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೊನೆಗೆ ತಲಾಕ್, ತಲಾಕ್, ತಲಾಕ್ ಎಂದು ಹೇಳಿ ಬಿಟ್ಟರೆ ಅದನ್ನೇ ತ್ರಿವಳಿ ತಲಾಕ್ ಎಂದು ಹೇಳಿಬಿಡುವಷ್ಟು. ನಿಜವಾಗಿ, ತಲಾಕ್‍ನ ದುರುಪಯೋಗವಾಗಿರುವುದಕ್ಕಿಂತ ಹೆಚ್ಚು ಈ ದೇಶದಲ್ಲಿ ಸತ್ಯದ ದುರುಪಯೋಗವಾಗಿದೆ. ಸುಳ್ಳಿನ ವೈಭವೀಕರಣವಾಗಿದೆ. ಇದಕ್ಕೆ ಕಾನೂನು ಆಯೋಗದ 16 ಪ್ರಶ್ನೆಗಳು ಪರಿಹಾರ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇವತ್ತು ಸುಧಾರಣಾ ಕ್ರಾಂತಿಯೊಂದು ಚಾಲನೆಯಲ್ಲಿದೆ. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಜಾಗೃತಿಯನ್ನು ಮೂಡಿಸುವಲ್ಲಿ ಈ ಕ್ರಾಂತಿ ಇವತ್ತು ಯಶಸ್ವಿಯಾಗಿದೆ. ತಲಾಕ್ ದುರುಪಯೋಗದ ವಿಷಯದಲ್ಲೂ ಇದು ಖಂಡಿತ ಸಾಧ್ಯವಾಗುತ್ತದೆ. 30 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇವತ್ತಿಗೂ ನಡುವೆ ಹೋಲಿಸಿದರೆ ಈ ಕ್ಷೇತ್ರದಲ್ಲಾದ ಮಹತ್ತರ ಸುಧಾರಣೆ ಬರಿಗಣ್ಣಿಗೂ ಕಾಣುವಂತಹದ್ದು. ಇದು ಕಾನೂನಿನ ಸಮಸ್ಯೆಯಲ್ಲ. ಆಂತರಿಕ ಸುಧಾರಣೆಗೆ ಸಂಬಂಧಿಸಿದ್ದು. ಆದರೆ ರಾಜಕೀಯಕ್ಕೆ ಇವೆಲ್ಲ ಬೇಕಿಲ್ಲ, ಅಷ್ಟೇ.

Monday 17 October 2016

ಆಧುನಿಕ ಜೀವನ ವಿಧಾನವನ್ನು ಪ್ರಶ್ನೆಗೊಳಪಡಿಸಿದ ಮಗು

      ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟೊಯೋಟಾ ಮೋಟಾರು ಕಂಪೆನಿಯು ಕಳೆದವಾರ ಜಪಾನ್‍ನಲ್ಲಿ ತನ್ನ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸಿತು. ಹೆಸರು ಕಿರೋಬೋ ಮಿನಿ. ರೊಬೋಟ್ ಮಗು. ಈ ಮಗು ಕಣ್ಣು ಮಿಟುಕಿಸುತ್ತದೆ. ಮಗುವಿನ ಭಾಷೆಯಲ್ಲಿ ಮುದ್ದಾಗಿ ಮಾತಾಡುತ್ತದೆ. ಅತ್ತಿತ್ತ ಜೋಲಿ ಹೊಡೆಯುತ್ತದೆ. ಪುಟ್ಟ ಮಗುವಿನ ಆಕಾರದಲ್ಲಿ ಅದನ್ನು ವಿನ್ಯಾಸ ಮಾಡಲಾಗಿದೆ. ಮಕ್ಕಳಿಲ್ಲದವರಿಗೆ ಒಂದು ಮಗುವನ್ನು ಒದಗಿಸುವ ಪ್ರಯತ್ನ ಟೊಯೋಟಾ ಕಂಪೆನಿಯದು. ಜೀವಂತ ಮಗುವಿಗೆ ಹೋಲಿಸಿದರೆ ಈ ಮಗು ತಾಂತ್ರಿಕವಾಗಿ ಹೆಚ್ಚು ಮುಂದು. ಕ್ಯಾಮರಾ, ಬ್ಲೂಟೂತ್ ಮತ್ತು ಮೈಕ್ರೋಫೋನ್‍ಗಳಿಂದ ಈ ಮಗು ಸಜ್ಜಿತವಾಗಿದೆ. ಮುಂದಿನ ವರ್ಷ ಈ ಮಗುವಿನಲ್ಲಿ ಇನ್ನಷ್ಟು ಮಗುತನವನ್ನು ಅಳವಡಿಸಿ ಬಿಡುಗಡೆಗೊಳಿಸುವುದು ಕಂಪೆನಿಯ ಗುರಿ. ಜಪಾನ್‍ನಲ್ಲಿ ಸದ್ಯ ಕಿರೋಬೋ ಮಿನಿ ಸುದ್ದಿಯಲ್ಲಿದೆ. ಅದರ ಮಗುತನ ಮತ್ತು ಬೆಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಪ್ರಾರಂಭವಾಗಿದೆ. ಅಷ್ಟಕ್ಕೂ, ಈ ಕಿರೋಬೋ ಮಿನಿಯನ್ನು ಬಿಡುಗಡೆಗೊಳಿಸಲು ಟೊಯೋಟಾ ಕಂಪೆನಿ ಭಾರತದ ಬದಲು ಜಪಾನನ್ನು ಯಾಕೆ ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆ ಸಹಜವಾದುದು. ಅತ್ಯಧಿಕ ಜನಸಂಖ್ಯೆ ಇರುವ ದೇಶ ನಮ್ಮದು. ಜನಸಂಖ್ಯೆ ಹೆಚ್ಚಿದ್ದ ಕಡೆ ವ್ಯಾಪಾರವೂ ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ ತೀರಾ ಅತ್ಯಲ್ಪವೆನ್ನಬಹುದಾದ ಜನಸಂಖ್ಯೆ ಜಪಾನ್‍ನದ್ದು. ಆದರೂ ಕಿರೋಬೋ ಮಿನಿ ಜಪಾನ್‍ನಲ್ಲೇ ಯಾಕೆ ಬಿಡುಗಡೆಗೊಂಡಿದೆ ಎಂಬ ಪ್ರಶ್ನೆಗೆ ಉತ್ತರವೂ ಈ ಜನಸಂಖ್ಯೆಯೇ. ಜಪಾನ್‍ನಲ್ಲಿ ಮಕ್ಕಳು ಹುಟ್ಟುತ್ತಿಲ್ಲ. ಯುವ ತಲೆಮಾರಿನಲ್ಲಿ ಮಗು ಜನಪ್ರಿಯವಾಗುತ್ತಿಲ್ಲ. ಜಪಾನ್‍ನ ಪ್ರತಿ 10 ಯುವತಿಯರಲ್ಲಿ ಓರ್ವಳು ಮದುವೆಯೇ ಆಗುತ್ತಿಲ್ಲ. ಇನ್ನು, ಮದುವೆಯಾದವರಲ್ಲೂ ಮಕ್ಕಳ ಬಗ್ಗೆ ತೀವ್ರ ನಿರಾಸಕ್ತಿ ಬೆಳೆಯುತ್ತಿದೆ. ಮಕ್ಕಳು ರಹಿತ ಕುಟುಂಬ ಎಂಬುದು ಜಪಾನ್‍ನಲ್ಲಿ ಇವತ್ತು ಅಚ್ಚರಿಯ ವಿಷಯವಲ್ಲ. ಹೆರಿಗೆಯನ್ನು ಇಷ್ಟಪಡದ ಜೀವನ ವಿಧಾನ ಅಲ್ಲಿ ಜನಪ್ರಿಯವಾಗತೊಡಗಿದೆ. ಕಿರೋಬೋ ಮಿನಿಯನ್ನು ಬಿಡುಗಡೆಗೊಳಿಸಲು ಟೊಯೋಟಾ ಕಂಪೆನಿ ಜಪಾನ್ ಅನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಹಿನ್ನೆಲೆಯಾಗಿರುವುದೂ ಇದುವೇ. ಜಪಾನಿಗರಿಗೆ ಮಗು ಬೇಕು. ಅದರ ತುಂಟಾಟಗಳೂ ಬೇಕು. ಆದರೆ ಆ ಮಗುವನ್ನು ಹೊಂದುವ ಪ್ರಕ್ರಿಯೆಯನ್ನು ಅವರು ಇಷ್ಟಪಡುವುದಿಲ್ಲ. ಗರ್ಭಧಾರಣೆ, ಪ್ರಸವ, ಮಗುವಿನ ಲಾಲನೆ-ಪಾಲನೆ ಇವೆಲ್ಲವನ್ನೂ ಅವರು ಅತ್ಯಂತ ತ್ರಾಸದಾಯಕವಾಗಿ ಪರಿಗಣಿಸತೊಡಗಿದ್ದಾರೆ. ಬಹುಶಃ, ಆಧುನಿಕ ಮತ್ತು ಸಾಂಪ್ರದಾಯಿಕ ಜೀವನ ದೃಷ್ಟಿಕೋನಗಳ ನಡುವಿನ ಸಂಘರ್ಷ ಇದು. ಸಾಂಪ್ರದಾಯಿಕ ಜೀವನ ಕ್ರಮದಲ್ಲಿ ಮದುವೆ ಒಂದು ಹೊಣೆಗಾರಿಕೆ. ಪ್ರೌಢರಾದ ಹೆಣ್ಣು ಮತ್ತು ಗಂಡನ್ನು ಶಾಸ್ತ್ರೋಕ್ತವಾಗಿ ಒಂದಾಗಿಸುವುದನ್ನು ತಮ್ಮ ಧಾರ್ಮಿಕ ಹೊಣೆಗಾರಿಕೆ ಎಂದು ಸಮಾಜ ಭಾವಿಸುತ್ತದೆ. ಆ ಪ್ರಕ್ರಿಯೆಯಲ್ಲಿ ಕೆಲವು ನಿಯಮಗಳಿವೆ. ಗಂಡು-ಹೆಣ್ಣಿನ ಪ್ರಕೃತಿ ಸಹಜ ಆಕರ್ಷಣೆಯನ್ನು ಮಾನ್ಯ ಮಾಡುವುದಷ್ಟೇ ಈ ಜೋಡಿಯಾಗಿಸುವುದರ ಉದ್ದೇಶ ಅಲ್ಲ. ಅಲ್ಲಿ ಮಗುವಿನ ಬೇಡಿಕೆಯೂ ಇರುತ್ತದೆ. ಆವರೆಗೆ ಬರೇ ಹೆಣ್ಣು ಮತ್ತು ಗಂಡು ಆಗಿದ್ದವರು ಈ ಮದುವೆಯ ಮೂಲಕ ಪತಿ-ಪತ್ನಿಯರಾಗುತ್ತಾರೆ. ಆ ಬಳಿಕ ತಂದೆ ಮತ್ತು ತಾಯಿಯಾಗಬೇಕು. ಆ ಬಳಿಕ ಅಜ್ಜ-ಅಜ್ಜಿಯಾಗಬೇಕು. ಹೀಗೆ ಮಗುತನದಿಂದ ಮಾಗಿ, ಪ್ರೌಢರಾಗಿ, ದಂಪತಿಗಳೆನಿಸಿಕೊಂಡು, ಹೆತ್ತವರಾಗಿ ಮತ್ತು ಕೊನೆಗೆ ಮಗುವನ್ನು ಲಾಲಿಸುವ ಹಿರಿಯರಾಗಿ ವಿಕಾಸ ಹೊಂದುತ್ತಾ ಹೋಗುವುದನ್ನು ಸಾಂಪ್ರದಾಯಿಕ ಜೀವನ ಕ್ರಮದಲ್ಲಿ ಪ್ರಕೃತಿ ಸಹಜ ಪ್ರಕ್ರಿಯೆಯಾಗಿ ಒಪ್ಪಿಕೊಳ್ಳಲಾಗಿದೆ. ಬಹುಶಃ, ಈ ಜೀವನ ದೃಷ್ಟಿಕೋನವನ್ನು ಇವತ್ತಿನ ತಂತ್ರಜ್ಞಾನಾಧಾರಿತ ಜೀವನ ವಿಧಾನ ಪ್ರಶ್ನೆಗೊಳಪಡಿಸುತ್ತಿದೆ. ಕಿರೋಬೋ ಮಿನಿ ಈ ಪ್ರಶ್ನೆಯಿಂದ ಹುಟ್ಟಿಕೊಂಡ ಕೂಸು. ಜಪಾನ್‍ನ ಜನಸಂಖ್ಯೆಯ ಕಾಲುಭಾಗದಷ್ಟು ಮಂದಿ ಇವತ್ತು 65 ವರ್ಷವನ್ನು ದಾಟಿದವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ ಜನಸಂಪತ್ತಿನ ಬರವನ್ನು ಎದುರಿಸುತ್ತಿದೆ. ಜಗತ್ತಿನಲ್ಲಿಯೇ ಇಂಡಸ್ಟ್ರಿಯಲ್ ರೋಬೋಟ್ ಅನ್ನು ಬಳಸುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಅತ್ಯಂತ ಮುಂದಿದೆ. ಮನುಷ್ಯರ ಬದಲಿಗೆ ರೋಬೋಟ್‍ಗಳನ್ನು ಮನೆ, ಕಚೇರಿ, ಉತ್ಪಾದನಾ ರಂಗದಲ್ಲಿ ಬಳಸುವುದಕ್ಕೆ ಮುಂದಾಗಲೇಬೇಕಾದ ಅನಿವಾರ್ಯತೆಯನ್ನು ಅದು ಇವತ್ತು ಎದುರಿಸುತ್ತಿದೆ.   
       
     ನಿಜವಾಗಿ, ಕಿರೋಬೋ ಮಿನಿಯನ್ನು ನಾವು ಕಂಪ್ಯೂಟರ್, ಮೊಬೈಲ್, ಟಿ.ವಿ., ರೇಡಿಯೋಗಳಂತೆ ಬರೇ ಒಂದು ಉತ್ಪನ್ನವಾಗಿ ಪರಿಗಣಿಸುವಂತಿಲ್ಲ. ಈ ಉತ್ಪನ್ನಗಳಿಂದಾಗಿ ಮಾನವನ ಬಳಕೆಯು ಕಡಿಮೆಯಾಗಿರಬಹುದು. ಒಂದು ಕಂಪ್ಯೂಟರ್‍ಗೆ 10 ಮಂದಿಯ ಕೆಲಸವನ್ನು ಮಾಡುವ ಸಾಮರ್ಥ್ಯ ಇರಬಹುದು. ಆದರೆ ಅದು ಮಗುರಹಿತ ಪರ್ಯಾಯ ಜಗತ್ತನ್ನು ಕಲ್ಪಿಸಿಕೊಂಡು ಬಂದಿರುವುದಲ್ಲ. ಆದರೆ ಕಿರೋಬೋ ಮಿನಿಯ ಹುಟ್ಟೇ ಮಗುರಹಿತ ಜಗತ್ತನ್ನು ಗುರಿಯಾಗಿಸಿಕೊಂಡಿದೆ. ಆದ್ದರಿಂದಲೇ, ಕಿರೋಬೋ ಮಿನಿಯನ್ನು ನಾವು ನಮ್ಮ ಜೀವನ ಪದ್ಧತಿಯ ಬಗ್ಗೆ ಅವಲೋಕನ ನಡೆಸಲು ಅವತರಿಸಿರುವ ಮಗು ಎಂಬ ನೆಲೆಯಲ್ಲಿ ಪರಿಗಣಿಸಬೇಕಾಗಿದೆ. ತಂತ್ರಜ್ಞಾನಾಧಾರಿತ ಜೀವನ ಕ್ರಮದಲ್ಲಿ ಒಂದು ಕರ್ಣಾನಂದಕರ ಘೋಷಣೆ ಇದೆ. ಎಲ್ಲರೂ ದುಡಿಯುವುದು ಮತ್ತು ಅವರಿಷ್ಟದಂತೆ ಬದುಕುವುದು. ಬಾಹ್ಯನೋಟಕ್ಕೆ ಈ ಘೋಷಣೆಯಲ್ಲಿ ಅನಾಹುತಕಾರಿಯಾದುದೇನೂ ಇಲ್ಲ. ಆದರೆ ಈ ಜೀವನ ಕ್ರಮದ ಬಹುದೊಡ್ಡ ದೋಷ ಏನೆಂದರೆ, ಹೊಣೆಗಾರಿಕೆ ರಹಿತ ಬದುಕನ್ನು ಪ್ರಚೋದಿಸುವುದು. ನನಗಿಷ್ಟ ಬಂದಂತೆ, ಇಷ್ಟವಾದವರ ಜೊತೆ, ಇಷ್ಟವಾದಷ್ಟು ದಿನ ಇರುವೆ.. ಎಂಬ ಅತಿ ಸ್ವತಂತ್ರವಾದವನ್ನು ಅದು ಪ್ರತಿಪಾದಿಸುತ್ತದೆ. ಈ ನಿಲುವಿನಲ್ಲಿ ಹೊಣೆರಹಿತವಾದ ಎಲ್ಲವೂ ಇದೆ. ಮಗು ಎಂಬುದು ಹೊಣೆರಹಿತ ಜೀವನ ವಿಧಾನದ ಉತ್ಪನ್ನ ಅಲ್ಲ. ಅದರಲ್ಲಿ ಜವಾಬ್ದಾರಿಯುತ ಹೆಣ್ಣು-ಗಂಡಿನ ಪಾತ್ರ ಇರುತ್ತದೆ. ಮದುವೆಯ ಮೂಲಕ ಈ ಜವಾಬ್ದಾರಿಗೆ ಆರಂಭವನ್ನು ನೀಡಲಾಗುತ್ತದೆ. ಒಂದಷ್ಟು ಮಂದಿ ಆ ಜವಾಬ್ದಾರಿಗೆ ಸಾಕ್ಷಿಯಾಗಿರುತ್ತಾರೆ. ದಾಂಪತ್ಯವು ಇಷ್ಟವಿದ್ದಷ್ಟು ದಿನ ಒಟ್ಟಾಗಿ ಇರುವ ಸಂಬಂಧವೇ ಆಗಿದ್ದರೂ ಅದರ ಆರಂಭ ಅಂಥದ್ದೊಂದು ಘೋಷಣೆಯ ಮೂಲಕ ಆಗಿರುವುದಿಲ್ಲ. ಮದುವೆಯನ್ನು ಒಂದು ಪವಿತ್ರ ಒಪ್ಪಂದವಾಗಿ ಇಲ್ಲಿ ಪರಿಗಣಿಸಲಾಗುತ್ತದೆ. ಹೆಣ್ಣು ಮತ್ತು ಗಂಡು ದೈಹಿಕ ಆಕರ್ಷಣೆಯಾಚೆಗೆ ಜವಾಬ್ದಾರಿಯಿಂದ ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ಬದುಕು ಸಾಗಿಸಿಕೊಂಡು ಹೋಗುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತದೆ. ಅಲ್ಲಿ ದುಡಿತವೂ ಇದೆ. ತ್ಯಾಗವೂ ಇದೆ. ಪತಿಗಾಗಿ ಪತ್ನಿಯೂ ಪತ್ನಿಗಾಗಿ ಪತಿಯೂ ಅಭಿಪ್ರಾಯಗಳನ್ನು ಬಿಟ್ಟು ಕೊಡುವ ಮತ್ತು ಸಂಬಂಧವನ್ನು ಎಂದೂ ಬಿಟ್ಟು ಕೊಡದ ಪ್ರಬುದ್ಧತೆಯೂ ಇದೆ. ಈ ಜವಾಬ್ದಾರಿಯುತ ಬದುಕಿನ ಭಾಗವೇ ಮಗು. ಆದ್ದರಿಂದಲೇ ಕಿರೋಬೋ ಮಿನಿಯ ಹುಟ್ಟಿಗೆ ನಾವು ಸಂಭ್ರಮಿಸುವುದಕ್ಕಿಂತ ಹೆಚ್ಚು ಆತಂಕ ಪಡಬೇಕಾಗಿದೆ. ನಮ್ಮ ಬೇಜವಾಬ್ದಾರಿಯನ್ನು ಸೂಚಿಸುವ ಮಗು ಅದು. ಆಧುನಿಕ ಜಗತ್ತಿನಲ್ಲಿ ದಾಂಪತ್ಯ ದೃಷ್ಟಿಕೋನ ಎಷ್ಟು ಹೊಣೆರಹಿತವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ಸಾರುವ ಮಗುವೂ ಅದುವೇ.


Tuesday 11 October 2016

ಎರಡು ಅಡಿ ಉದ್ದ ಬೆಳೆದ ಗೋಡ್ಸೆ

        ಗಾಂಧೀಜಿಯವರ ಭಾರತ ಸದ್ಯ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಕಳೆದ ಅಕ್ಟೋಬರ್ 2 ಸಾಕ್ಷಿಯಾಯಿತು. ಉತ್ತರ ಪ್ರದೇಶದ 98 ವರ್ಷದ ಹಿರಿಯ ಗಾಂಧಿವಾದಿ ಚಮನ್‍ಲಾಲ್ ಜೈನ್ ಎಂಬವರು ಗಾಂಧಿ ಜಯಂತಿ ದಿನವಾದ  ಅಕ್ಟೋಬರ್ 2 ರಂದು ಯಮುನಾ ನದಿಗೆ ಹಾರಿ ಪ್ರಾಣ ಕಳಕೊಳ್ಳಲು ಮುಂದಾದರು. ಉತ್ತರ ಪ್ರದೇಶವನ್ನು ಮದ್ಯಮುಕ್ತಗೊಳಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಪ್ರೇರೇಪಣೆಯಾಗಿ ಅವರ ಜೊತೆ ಗಾಂಧೀಜಿ ಇದ್ದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ್ದೇ ಆದ ಮೀರತ್‍ನಲ್ಲಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಹಿಂದೂ ಮಹಾಸಭಾ ಅನಾವರಣಗೊಳಿಸಿತು. ಗಾಂಧಿ ಜಯಂತಿಯನ್ನು ಅದು `ಧಿಕ್ಕಾರ ದಿನ'ವಾಗಿ ಆಚರಿಸಿತು. ಗಾಂಧೀಜಿಯವರ ಹತ್ಯೆ ನಡೆದ ಜನವರಿ 30ನ್ನು ಅದು ಸಂಭ್ರಮದ ದಿನವಾಗಿಯೂ ಆಚರಿಸುತ್ತಿದೆ. ಆ ದಿನ ಸಿಹಿ ಹಂಚಿ ಸಂತೋಷಪಡುತ್ತದೆ. ವಿಶೇಷ ಏನೆಂದರೆ, ಗಾಂಧೀಜಿಯವರ ತತ್ವವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರಾಣ ತೆರಲು ಸಿದ್ಧವಾದ ವಯೋವೃದ್ಧ ಗಾಂಧಿವಾದಿಯನ್ನು ಪೊಲೀಸರು ಇತ್ತ ಠಾಣೆಗೆ ಒಯ್ಯುವಾಗ ಅತ್ತ ಮೀರತ್‍ನಲ್ಲಿ ಗೋಡ್ಸೆ ನಗುತ್ತಿದ್ದ. ಗೋಡ್ಸೆ ಪ್ರತಿಮೆ ಅನಾವರಣವನ್ನು ತಡೆಯಲು ಪೊಲೀಸರಿಂದ ಸಾಧ್ಯವಾಗಲಿಲ್ಲ. ಇದು ಹೇಗೆಂದರೆ, ಗಾಂಧಿವಾದಿಯನ್ನು ಠಾಣೆಯಲ್ಲಿ ಕೂರಿಸಿ ಗೋಡ್ಸೆಯನ್ನು ಸಾರ್ವಜನಿಕವಾಗಿ ಗೌರವಿಸಿದಂತೆ.
     ನಿಜವಾಗಿ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವೆಂದರೆ ಗಾಂಧಿ ಮತ್ತು ಗೋಡ್ಸೆ ನಡುವಿನ ಇತಿಹಾಸ. ಗಾಂಧಿತತ್ವ ಮತ್ತು ಗೋಡ್ಸೆ ತತ್ವಗಳು ಈ ಏಳು ದಶಕಗಳ ಉದ್ದಕ್ಕೂ ಮುಖಮುಖಿಯಾಗುತ್ತಲೇ ಬಂದಿವೆ. ಸ್ವಾತಂತ್ರ್ಯ ಪೂರ್ವದಲ್ಲೇ ಗಾಂಧಿ ಅಂದರೆ ಒಂದು ಪ್ರಖರ ತತ್ವ-ಸಿದ್ಧಾಂತದ ಪರ್ಯಾಯ ಹೆಸರಾಗಿತ್ತು. ಅವರ ತತ್ವ ಚಿಂತನೆಯೊಳಗೆ ಎಲ್ಲ ಭಾರತೀಯರೂ ಸೇರಿದ್ದರು. ಧರ್ಮ-ಚರ್ಮ-ಜಾತಿ-ಭಾಷೆಗಳ ಹಂಗಿಲ್ಲದೇ ಎಲ್ಲರನ್ನೂ ಒಪ್ಪಿಕೊಳ್ಳುವ ವಿಶಾಲ ವಿಚಾರಧಾರೆಯನ್ನು ಅವರು ಪ್ರತಿನಿಧಿಸಿದ್ದರು. ಆದ್ದರಿಂದಲೇ ಅವರ ಜೊತೆ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದ ಯಾವ ನಾಯಕರೂ ಗಾಂಧಿಯವರ ಈ ವಿಚಾರಧಾರೆಯ ಔಚಿತ್ಯವನ್ನು ಪ್ರಶ್ನಿಸಿರಲಿಲ್ಲ. ಅವರ ನಡುವಿನ ವೈಚಾರಿಕ ಸಂಘರ್ಷಕ್ಕೂ ಈ ತತ್ವಕ್ಕೂ ಯಾವ ಪಾತ್ರವೂ ಇರಲಿಲ್ಲ. ಇವರಿಗೆ ಹೋಲಿಸಿದರೆ ನಾಥೂರಾಮ್ ಮತ್ತು ಆತ ಪ್ರತಿನಿಧಿಸುವ ವಿಚಾರಧಾರೆಯು ಸಂಪೂರ್ಣ ಭಿನ್ನವಾಗಿತ್ತು. ಆತನ ದೃಷ್ಟಿಯಲ್ಲಿ `ವೈವಿಧ್ಯತೆ'ಯಲ್ಲಿ ಏಕತೆ ಎಂಬುದೇ ಅತಿ ದೊಡ್ಡ ವೈರಿಯಾಗಿತ್ತು. ಏಕ ಧರ್ಮ, ಏಕ ಸಂಸ್ಕ್ರತಿ, ಏಕ ಭಾಷೆ, ಏಕ ವಿಚಾರಧಾರೆ... ಹೀಗೆ ಅನೇಕತೆಯನ್ನು ಪೂರ್ಣವಾಗಿ ತಿರಸ್ಕರಿಸುವ ತತ್ವ ಸಿದ್ಧಾಂತದ ಪ್ರಬಲ ಪ್ರತಿಪಾದನೆ ಆತನದ್ದಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಾಗಲಿ, ಸ್ವಾತಂತ್ರ್ಯಾ ನಂತರದ ಆರಂಭದ ಕಾಲದಲ್ಲಾಗಲಿ ಈ ತತ್ವ ಚಿಂತನೆಯ ಮೇಲೆ ಸಮಾಜ ಎಷ್ಟಂಶ ವಿರೋಧವನ್ನು ವ್ಯಕ್ತಪಡಿಸಿತ್ತೆಂದರೆ, ಆತನ ಪ್ರತಿಮೆ ಅನಾವರಣ ಬಿಡಿ, ನಾಥೂರಾಂ ಗೋಡ್ಸೆ ಎಂಬ ಹೆಸರನ್ನೇ ಅಸಹ್ಯಪಡುವಷ್ಟು. ಯಾವ ಹೆತ್ತವರೂ ತಮ್ಮ ಮಕ್ಕಳಿಗೆ ನಾಥೂರಾಂ ಎಂದು ನಾಮಕರಣ ಮಾಡಲಿಲ್ಲ. ನಾಥೂರಾಂ ಎಂಬ ಹೆಸರಲ್ಲಿ ಬರುವ `ಥೂ'ವನ್ನು ಈ ದೇಶದ ಬಹುಸಂಖ್ಯಾತ ಮಂದಿ ಆತನ ಮೇಲೆ ಪ್ರಯೋಗಿಸುವಷ್ಟರ ಮಟ್ಟಿಗೆ ಆತ ಛೀಮಾರಿಗೆ ಒಳಗಾದ. ಆದರೆ ಇವತ್ತು ಗೋಡ್ಸೆ ಮೀರತ್‍ನ ಬೀದಿಯಲ್ಲಿ ನಗುತ್ತಿದ್ದಾನೆ. ಹಿಂದೂ ಮಹಾಸಭವು ಆತನನ್ನು ಬಹಿಂರಗವಾಗಿಯೇ ಕೊಂಡಾಡುತ್ತಿದೆ. ನಟಿ ರಮ್ಯರಲ್ಲಿ, ಕನ್ನಯ್ಯ, ಸಾಯಿಬಾಬ ಮತ್ತಿತರರಲ್ಲಿ ದೇಶದ್ರೋಹವನ್ನು ಕಂಡವರೆಲ್ಲ ಹಿಂದೂ ಮಹಾಸಭಾದ ಈ ಖುಷಿಯಲ್ಲಿ ಯಾವ ದೇಶದ್ರೋಹವನ್ನೂ ಕಾಣುತ್ತಿಲ್ಲ.
       ನಿಜವಾಗಿ, ಪ್ರತಿಮೆಯಾದ ಗೋಡ್ಸೆ ಮತ್ತು ಠಾಣೆ ಪಾಲಾದ ಚಮನ್ ಲಾಲ್ ಜೈನ್- ಪ್ರಸಕ್ತ ಭಾರತವನ್ನು ವ್ಯಾಖ್ಯಾನಿಸುವ ಎರಡು ರೂಪಕಗಳಾಗಿದ್ದಾರೆ. ಗಾಂಧಿ ನಿಧಾನಕ್ಕೆ ನಾಲಾಯಕ್ಕುಗೊಳ್ಳುತ್ತಿದ್ದಾರೆ. ಗಾಂಧಿವಾದವನ್ನು ಗೇಲಿ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಅಹಿಂಸೆಯನ್ನು ಪ್ರತಿಪಾದಿಸಿದ ಬೌದ್ಧಮತವನ್ನು ದೇಶದಿಂದಲೇ ಓಡಿಸುವ ಪ್ರಯತ್ನ ಈ ಹಿಂದೆ ನಡೆದಂತೆಯೇ, ಗಾಂಧೀಜಿಯ ಅಹಿಂಸೆಯ ತತ್ವ ಚಿಂತನೆಯನ್ನು ದೇಶದಿಂದಲೇ ಗಡಿಪಾರುಗೊಳಿಸುವ ಮಾತು-ಕೃತಿಗಳು ಮುಕ್ತವಾಗಿಯೇ ನಡೆಯುತ್ತಿವೆ. ಬುದ್ಧನನ್ನು ಅತಿಯಾಗಿ ಪ್ರೀತಿಸಿದ್ದು ಅಂಬೇಡ್ಕರ್. ಅದಕ್ಕೆ ಪ್ರಮುಖ ಕಾರಣ-ಬುದ್ದಿಸಂ ಎಂಬುದು ಸಮಾನತೆಯ ಮತ್ತು ಅಹಿಂಸೆಯ ಧರ್ಮ ಎಂದಾಗಿತ್ತು. ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ಹಿಂಸೆಯಿಂದ ಅವರು ಅಪಾರವಾಗಿ ನೊಂದಿದ್ದರು. ಹಾಗೆಯೇ ಗಾಂಧೀಜಿಯರೂ ಹಿಂಸೆಯ ಕಟು ವಿರೋಧಿಯಾಗಿದ್ದರು. ಅಂಬೇಡ್ಕರ್ ಮತ್ತು ಗಾಂಧಿಯವರ ನಡುವೆ ದಲಿತ್ ಸಬಲೀಕರಣದ ವಿಷಯದಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇದ್ದಿದ್ದರೂ ದಲಿತ ದೌರ್ಜನ್ಯ, ಹಿಂಸೆ, ಅವಮಾನಗಳನ್ನು ಖಂಡಿಸುವಲ್ಲಿ ಅವರಿಬ್ಬರ ನಿಲುವೂ ಒಂದೇ ಆಗಿತ್ತು. ಅವರಿಬ್ಬರೂ ಹಿಂಸಾತ್ಮಕ ಭಾರತದ ವೈರಿಯಾಗಿದ್ದರು. ಅಂಬೇಡ್ಕರ್ ಅಂತೂ ಹಿಂಸೆಯನ್ನು ಎಷ್ಟಂಶ ವಿರೋಧಿಸಿದರೆಂದರೆ, ಅಹಿಂಸೆಯನ್ನು ಅತಿಯಾಗಿ ಸಾರುವ ಬೌದ್ಧಮತವನ್ನೇ ತನ್ನ ನಂಬಿಕೆಯಾಗಿ ಪರಿವರ್ತಿಸಿಕೊಂಡರು. ಅದೇ ಭಾರತ ಇವತ್ತು ಅವರಿಬ್ಬರ ಚಿಂತನೆಯಿಂದ ಬಹುದೂರ ಸರಿಯುತ್ತಿದೆ. ಎಷ್ಟರವರೆಗೆಂದರೆ, ಹಿಂಸೆಯ ಪ್ರತೀಕವಾದ ಗೋಡ್ಸೆಯನ್ನೇ ಗೌರವಿಸುವಷ್ಟು.
       ಅಕ್ಟೋಬರ್ 2 ರಂದು ಎರಡು ಪ್ರತ್ಯೇಕ ಕಾರಣಗಳಿಗಾಗಿ ಸುದ್ದಿಯಾದ ಚಮನ್ ಲಾನ್ ಜೈನ್ ಮತ್ತು ಗೋಡ್ಸೆಯು ಈ ಸುದ್ದಿಯ ಆಚೆಗೆ ನಮ್ಮಲ್ಲಿ ಚರ್ಚೆಗೆ ಒಳಗಾಗಲೇಬೇಕಾದವರಾಗಿದ್ದಾರೆ. ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಗಾಂಧಿ ಮತ್ತು ಗೋಡ್ಸೆ ವೈಚಾರಿಕ ಸಂಘರ್ಷವನ್ನು ಆರಂಭಿಸಿದ್ದಾರೆ. ಗೋಡ್ಸೆಯದ್ದು ಭಿನ್ನ ವಿಚಾರವನ್ನು ಬಲವಂತದಿಂದ ಹತ್ಯೆ ಮಾಡುವ ಆತಂಕಕಾರಿ ನಿಲುವಾದರೆ ಗಾಂಧಿಯದ್ದು ಎಲ್ಲ ವಿಚಾರಧಾರೆಯನ್ನೂ ಪ್ರೀತಿಸುವ ಮನುಷ್ಯ ಪ್ರೇಮಿ ನಿಲುವು. ಹಾಗಂತ, ಸ್ವಾತಂತ್ರ್ಯಾ ನಂತರದ ಈ 7 ದಶಕಗಳಲ್ಲಿ ಈ ಎರಡು ನಿಲುವುಗಳ ಪ್ರಭಾವವೇನು? ಗಾಂಧಿಯನ್ನು ನಿಧಾನಕ್ಕೆ ಗೋಡ್ಸೆ ಆಹುತಿ ಪಡೆಯುತ್ತಿದ್ದಾನೆಯೇ? ಭಾರತೀಯರನ್ನು ವಿವಿಧ ಧರ್ಮ, ಜಾತಿಗಳಾಗಿ ವಿಂಗಡಿಸುವ ಮತ್ತು ಬೆನ್ನಟ್ಟಿ ಹೊಡೆಯುವ ಘಟನೆಗಳು ಹೇಳುತ್ತಿರುವುದೇನನ್ನು? ಈಗಿನ ಭಾರತದಲ್ಲಿ ದೇಶಪ್ರೇಮದ ವ್ಯಾಖ್ಯಾನ ಬದಲಾಗಿದೆ. ಧರ್ಮ, ಆಹಾರ, ಆಚಾರ, ಆರಾಧನೆ, ಉಡುಪು, ಸಂಸ್ಕøತಿ... ಎಲ್ಲದರ ಬಗ್ಗೆಯೂ ಗಾಂಧಿ ರಹಿತ ಮಾತುಗಳಿಗೆ ಮಾನ್ಯತೆ ದಕ್ಕುತ್ತಿವೆ. ದೇಶಪ್ರೇಮವನ್ನು ವಿವರಿಸುವುದಕ್ಕೂ, ಸಂಸ್ಕ್ರತಿಯನ್ನು ವಿಶ್ಲೇಷಿಸುವುದಕ್ಕೂ ಗೋಡ್ಸೆಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗುತ್ತಿದೆ. ಒಪ್ಪದವರನ್ನು ಗೋಡ್ಸೆ ಶೈಲಿಯಲ್ಲೇ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಹಿಂಸೆಯನ್ನು ಪ್ರಬಲವಾಗಿ ವಿರೋಧಿಸಿದ ಗಾಂಧಿ ಭಾರತವು ಸದ್ಯ ಸಾಗುತ್ತಿರುವ ಹಾದಿ ಇದು. ಅಹಿಂಸೆ ಮತ್ತು ಹಿಂಸೆಯ 7 ದಶಕಗಳ ಈ ಮುಖಾಮುಖಿಯಲ್ಲಿ ಚಮನ್ ಲಾಲ್ ಜೈನ್ ನಿಧಾನಕ್ಕೆ ಸೋಲುತ್ತಿರುವಂತೆ ಅನಿಸುತ್ತಿದೆ. ಗೋಡ್ಸೆ ನಗುತ್ತಿರುವಂತೆ ತೋರುತ್ತಿದೆ. ಮೀರತ್‍ನಲ್ಲಿ ತಲೆಎತ್ತಿ ನಿಂತ ಗೋಡ್ಸೆಯ ಪ್ರತಿಮೆಯ ಉದ್ದ ಮತ್ತು ಅಗಲ ಕೇವಲ ಎರಡು ಅಡಿಯಷ್ಟೇ ಆಗಿರಬಹುದು. ಆದರೆ ಗಾಂಧಿಯ ಭಾರತದಲ್ಲಿ ಗೋಡ್ಸೆಗೆ ಇಷ್ಟುದ್ದ ಬೆಳೆಯಲು ಸಾಧ್ಯವಾಯಿತೆಂಬುದೇ ಆತಂಕಕಾರಿ. ಭಾರತದ ಭವಿಷ್ಯದ ದೃಷ್ಟಿಯಿಂದ ಈ ಉದ್ದ ಮತ್ತು ಅಗಲ ಇನ್ನಷ್ಟು ಅಪಾಯಕಾರಿ.

Thursday 29 September 2016

ದಲಿತ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಹುಟ್ಟಿಕೊಂಡಿತೇ ಗೋಮಾತೆ?

       ಸತ್ತ ಹಸುವಿನ ಕಳೇಬರವನ್ನು ಎತ್ತಲು ನಿರಾಕರಿಸಿದುದಕ್ಕೆ ಗುಜರಾತ್‍ನ ಅಹ್ಮದಾಬಾದ್ ಸಮೀಪದ ಕರ್ಜಾ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ನಡೆಸಲಾದ ಹಲ್ಲೆಯು ಸಾರುವ ಸಂದೇಶ ಏನು? ಹಸು ಸತ್ತಿರುವುದು ದಲಿತರ ಮನೆಯಲ್ಲಲ್ಲ. ಆ ಹಸುವಿನ ಸಾವಿಗೂ ಈ ದಲಿತ ಕುಟುಂಬಕ್ಕೂ ಯಾವ ಸಂಬಂಧವೂ ಇಲ್ಲ. ಆ ಹಸುವನ್ನು ಅವಮಾನಿಸಿದ್ದೊ, ಅದನ್ನು ಕಳ್ಳತನ ಮಾಡಿದ್ದೋ ಅಥವಾ ಆ ಹಸುವಿನ ಮಾಲಕರೊಂದಿಗೆ ಹಸು ಸಂಬಂಧಿ ಜಗಳ ನಡೆಸಿದ್ದೋ ಯಾವುದೂ ಈ ದಲಿತ ಕುಟುಂಬದಿಂದ ನಡೆದಿಲ್ಲ. ಸತ್ತ ಹಸುವಿಗೂ ಅದು ಇರುವ ಪ್ರದೇಶಕ್ಕೂ ಮತ್ತು ಈ ದಲಿತ ಕುಟುಂಬಕ್ಕೂ ಏನೇನೂ ಸಂಬಂಧ ಇಲ್ಲದಿದ್ದರೂ ಗರ್ಭಿಣಿಯ ಹೊಟ್ಟೆಗೆ ತುಳಿಯಲು ಹಾಗೂ ಗಂಟೆಗಳ ಕಾಲ ಆ ಕುಟುಂಬದ ಸದಸ್ಯರನ್ನು ಥಳಿಸಲು ಹಲ್ಲೆಕೋರರನ್ನು ಪ್ರಚೋದಿಸಿದ್ದು ಯಾವುದು? ತಾವು ಮೇಲ್ಜಾತಿಯಾದ ಠಾಕೂರರು ಎಂಬುದೇ ಮತ್ತು ಅವರು ದಲಿತರು ಎಂಬುದೇ? ನಿಜವಾಗಿ, ಗೋವಿನ ವಿಷಯದಲ್ಲಿ ಠಾಕೂರ್ ಸಮುದಾಯಕ್ಕೂ ದಲಿತ ಸಮುದಾಯಕ್ಕೂ ನಡುವೆ ವೈಚಾರಿಕ ಭಿನ್ನತೆಗಳಿವೆ. ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂಬ ಧ್ವನಿಯು ಠಾಕೂರ್‍ರಂಥ ಮೇಲ್ಜಾತಿ ಸಮುದಾಯವನ್ನು ಪ್ರತಿನಿಧಿಸುತ್ತದೆ. ಗೋವಿನ ವೈಭವೀಕರಣದಲ್ಲಿ ಈ ಗುಂಪಿನ ಪಾತ್ರ ಬಹಳ ದೊಡ್ಡದು. ಗೋವಿನ ಹೆಸರಲ್ಲಿ ಆಗುತ್ತಿರುವ ಥಳಿತ, ಹಲ್ಲೆ, ಹತ್ಯೆಗಳನ್ನೆಲ್ಲ ‘ಗೋಮಾತೆ’ ಎಂಬ ಏಕೈಕ ಭಾವುಕ ಚೌಕಟ್ಟಿನೊಳಗಿಟ್ಟು ಬಹಿರಂಗವಾಗಿಯೋ ಆಂತರಿಕವಾಗಿಯೋ ಸಮರ್ಥಿಸುತ್ತಾ ಬಂದಿರುವುದು ಇದೇ ಗುಂಪು.ಗೋವಿನ ದೇಹದಲ್ಲಿ ಎಷ್ಟು ಕೋಟಿ ದೇವತೆಗಳಿವೆ, ಅದರ ಹಾಲು, ಸೆಗಣಿ, ಮೂತ್ರ ಮುಂತಾದುವುಗಳು ಹೇಗೆ ಜನೋಪಯೋಗಿ ಎಂಬುದನ್ನೆಲ್ಲ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿರುವ ಶ್ರೇಯವೂ ಈ ಗುಂಪಿಗೇ ಸಲ್ಲುತ್ತದೆ. ಒಂದು ರೀತಿಯಲ್ಲಿ, ಈ ಗುಂಪು ಗೋವನ್ನು ಪೂಜಾರ್ಹವಾಗಿ ಬಿಂಬಿಸಿದೆ. ಆರಾಧ್ಯವನ್ನಾಗಿ ಮಾಡಿದೆ. ತಾಯಿಗೆ ಸಮನಾರ್ಥದಲ್ಲಿ ವ್ಯಾಖ್ಯಾನಿಸಿದೆ. ಇದಕ್ಕೆ ಹೋಲಿಸಿದರೆ, ದಲಿತರು ಈ ನಂಬಿಕೆಯ ಸನಿಹಕ್ಕೂ ಬರುವುದಿಲ್ಲ. ಅವರಿಗದು ಆಹಾರ. ಹಾಗೆಯೇ ಸತ್ತ ದನದ ಚರ್ಮ ಸುಲಿಯುವುದು, ಅದರ ಕಳೇಬರವನ್ನು ವಿಲೇವಾರಿ ಮಾಡುವುದೆಲ್ಲ ಅವರ ಪಾಲಿಗೆ ಬರೇ ಒಂದು ಉದ್ಯೋಗ. ನಿಜವಾಗಿ, ಗೋವನ್ನು ತಾಯಿಯೆಂದು ಪರಿಗಣಿಸುವವರಿಗೆ ಸ್ವತಃ ಅದರ ಚರ್ಮ ಸುಲಿಯುವಾಗ ಆಗಬಹುದಾದ ಅನುಭವಕ್ಕೂ ಹಣಕ್ಕಾಗಿ ಚರ್ಮ ಸುಲಿಯುವವರಿಗೆ ಆಗಬಹುದಾದ ಅನುಭವಕ್ಕೂ ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ಆಧ್ಯಾತ್ಮಿಕ ಅಂತರ ಇದೆ. ದಲಿತನೋರ್ವ ಭಾವನೆಗಳಿಲ್ಲದೇ ಅದರ ಚರ್ಮವನ್ನು ಸುಲಿಯಬಲ್ಲ. ಮಣ್ಣು ಮಾಡಬಲ್ಲ. ಆದರೆ ಗೋವನ್ನು ಮಾತೆಯಾಗಿ ಪರಿಗಣಿಸುವವರಿಗೆ ಅದು ಅಷ್ಟು ಸುಲಭ ಅಲ್ಲ. ಅವರು ಚರ್ಮ ಸುಲಿಯುವ ಮತ್ತು ಮಣ್ಣು ಮಾಡುವ ಪ್ರತಿ ಸಂದರ್ಭವನ್ನೂ ಪೂರ್ಣ ಆಧ್ಯಾತ್ಮಿಕ ತೃಪ್ತಿಯೊಂದಿಗೆ ಅನುಭವಿಸಬಲ್ಲರು. ಇಷ್ಟಿದ್ದೂ, ಸಾವಿಗೀಡಾಗುವ ಮಾತೆ(ಗೋವು)ಯನ್ನು ಈ ಗುಂಪು ದಲಿತರ ಕೈಗೆ ಒಪ್ಪಿಸುವುದೇಕೆ? ಅವರ ಕೈಯಲ್ಲಿ ಚರ್ಮ ಸುಲಿಸುವುದೇಕೆ? ಅವರಿಂದಲೇ ಮಣ್ಣು ಮಾಡಿಸುವುದೇಕೆ? ಜೀವಂತ ಇರುವಾಗ ಗೋವಿನ ಮೇಲೆ ತೋರಲಾಗುವ ಗೌರವ ಮತ್ತು ಆದರವು ಸತ್ತ ಕೂಡಲೇ ಅನಾದರವಾಗಿ ಪಲ್ಲಟವಾಗುವುದು ಯಾಕಾಗಿ? ಗೋವನ್ನು ಮಾತೆಯಾಗಿ ಗೌರವಿಸುವವರು ಅದನ್ನು ಅಷ್ಟೇ ಗೌರವದಿಂದ ಮಣ್ಣು ಮಾಡುವುದರಿಂದ ಯಾಕೆ ತಪ್ಪಿಸಿಕೊಳ್ಳುತ್ತಾರೆ?
       ನಿಜವಾಗಿ, ದುರಂಹಕಾರ ಮತ್ತು ಮೇಲರಿಮೆ ಎಂಬೆರಡು ಮನುಷ್ಯ ವಿರೋಧಿ ದುರ್ಗುಣಗಳೇ ಈ ನಿಲುವುಗಳಿಗೆ ಮೂಲ ಕಾರಣ. ಈ ದೇಶದಲ್ಲಿ ಯಾರು ಯಾವ ವೃತ್ತಿಯನ್ನು ಮಾಡಬೇಕು, ಯಾರು ಯಾವ ಆಹಾರವನ್ನು ಸೇವಿಸಬೇಕು, ಯಾವುದು ಸಂಸ್ಕೃತಿ, ಯಾವುದು ಇತಿಹಾಸ, ಯಾವುದು ದೇಶಪ್ರೇಮ.. ಮುಂತಾದುವುಗಳನ್ನೆಲ್ಲ ನಿರ್ಧರಿಸುವುದೂ ಈ ಚಿಂತನೆಗಳೇ. ಈ ದೇಶದಲ್ಲಿ ದಲಿತರ ಪಾಲಿಗೆ ಗೋಮಾಂಸ ಪರಂಪರಾಗತ ಆಹಾರ. ಸತ್ತ ಗೋವಿನ ಚರ್ಮ ಸುಲಿಯುವುದನ್ನು ಮತ್ತು ವಿಲೇವಾರಿ ಮಾಡುವುದನ್ನು ಕೂಡ ಅವರು ಪರಂಪರಾಗತ ವೃತ್ತಿಯಂತೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೊಂದು ದೀರ್ಘ ಇತಿಹಾಸವಿದೆ. ಆದರೆ ಕಳೆದ ಶತಮಾನದಿಂದ ಈಚೆಗೆ ಈ ಮೇಲ್ಜಾತಿ ಗುಂಪು ಗೋವನ್ನು ತಮ್ಮ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಯುಧವಾಗಿ ಬಳಸುವ ತಂತ್ರಕ್ಕೆ ಇಳಿಯಿತು. ಈ ತಂತ್ರಕ್ಕೆ ದಲಿತ ಸಮುದಾಯದಲ್ಲಿ ಜಾಗೃತವಾಗುತ್ತಿರುವ ಸ್ವಾಭಿಮಾನ ಪ್ರಜ್ಞೆಯೂ ಒಂದು ಕಾರಣವಾಗಿರಬಹುದು. ಮಂಡಲ್ ವರದಿ ಮತ್ತಿತರ ದಲಿತ ಕೇಂದ್ರಿತ ಸಬಲೀಕರಣ ಚಳವಳಿಗಳಿಗೂ ಪಾತ್ರ ಇರಬಹುದು. ಇಂಥ ಸ್ಥಿತಿಯಲ್ಲಿ, ದಲಿತರ ಈ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಈ ಗುಂಪು ಗೋವನ್ನು ಅಖಾಡಕ್ಕೆ ಇಳಿಸಿತು. ದಲಿತ ಸಮೂಹದಲ್ಲಿ ಬೆಳೆಯುತ್ತಿರುವ ಜಾಗೃತಿಯನ್ನು ಪರಿಗಣಿಸಿದರೆ, ಇಂಥದ್ದೊಂದು ನಿರ್ಧಾರ ಈ ಗುಂಪಿನ ಪಾಲಿಗೆ ಅನಿವಾರ್ಯವಾಯಿತು ಎಂದೂ ಹೇಳಬಹುದು. ತಲೆತಲಾಂತರದಿಂದ ದಲಿತ ಸಮುದಾಯವನ್ನು ರಸ್ತೆಯಿಂದ, ದೇವಾಲಯದಿಂದ, ಸಾರ್ವಜನಿಕ ಬಾವಿಯಿಂದ ಮತ್ತು ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬಹುದಾದ ಸರ್ವ ಸಂದರ್ಭಗಳಿಂದಲೂ ತಡೆದ ಈ ಗುಂಪು ಕ್ರಮೇಣ ತಮ್ಮ ಈ ಕ್ರೌರ್ಯಕ್ಕೆ ಪ್ರಬಲ ಪ್ರತಿರೋಧ ಎದುರಾಗತೊಡಗಿದಾಗ ಪ್ರತಿಯಾಗಿ ಆವಿಷ್ಕರಿಸಿಕೊಂಡ ಆಯುಧವೇ ಗೋವು. ವಿಶೇಷ ಏನೆಂದರೆ, ಗೋವನ್ನು ಮಾತೆಯಾಗಿ ಪ್ರತಿಷ್ಠಾಪಿಸುವ ಮೂಲಕ ಆ ಗುಂಪು ದಲಿತರ ಮೇಲಷ್ಟೇ ಅಧಿಕಾರ ಸ್ಥಾಪಿಸುವ ಸಾಮರ್ಥ್ಯವನ್ನು ಪಡಕೊಂಡದ್ದಲ್ಲ, ಗೋಮಾಂಸವನ್ನು ಸೇವಿಸುವ ಸಮಾಜದ ಬಡವರು, ದಮನಿತರು ಮತ್ತು ಇತರ ಧರ್ಮೀಯರ ಮೇಲೂ ದಮನಕಾರಿ ನೀತಿಯನ್ನು ಪ್ರಯೋಗಿಸುವ ಪರವಾನಿಗೆಯನ್ನು ಪಡಕೊಂಡಿತು. ಒಂದು ವೇಳೆ, ಗೋವಿನ ಮೇಲೆ ಅವರಿಗೆ ಆದರ ಇರುವುದೇ ಆಗಿರುತ್ತಿದ್ದರೆ, ಕನಿಷ್ಠ ಅದನ್ನು ಚರ್ಮ ಸುಲಿಯದೆಯೇ ಸ್ವತಃ ಮಣ್ಣು ಮಾಡುವುದನ್ನು ಪುಣ್ಯ ಕಾರ್ಯ ಎಂದು ಪರಿಗಣಿಸಬೇಕಿತ್ತು. ಎಲ್ಲೇ ಗೋವು ಸತ್ತರೂ ಅಲ್ಲಿಗೆ ಧಾವಿಸಿ ಬಂದು ಅದರ ಮಣ್ಣು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಈ ಗುಂಪಿಗೆ ತಮ್ಮ ದಮನ ನೀತಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಒಂದು ಪ್ರಾಣಿಯಾಗಿ ಗೋವು ಬೇಕಿತ್ತೇ ಹೊರತು ‘ಮಾತೆ’ಯಾಗಿ ಅಲ್ಲ. ಆದ್ದರಿಂದಲೇ, ಅದರ ಚರ್ಮ ಸುಲಿಯುವುದನ್ನು ಅವರು ವಿರೋಧಿಸಲಿಲ್ಲ. ಸ್ವತಃ ಮಣ್ಣು ಮಾಡುವುದಕ್ಕೂ ಮುಂದಾಗಲಿಲ್ಲ. ಇವೆರಡನ್ನೂ ಪರಂಪರಾಗತ ದಲಿತ ವೃತ್ತಿಗಳಾಗಿಯೇ ಇರಗೊಟ್ಟರು. ಆದರೆ ದಲಿತರ ಮೆನುವಿನಲ್ಲಿ ಗೋಮಾಂಸ ಇರಬಾರದು ಎಂದು ಆದೇಶಿಸಿದರು. ಈ ಹಿಂದೆ ದಲಿತರನ್ನು ಹೇಗೆ ಪರಾವಲಂಬಿಗಳಾಗಿ ನಡೆಸಿಕೊಂಡು ಬರಲಾಗಿತ್ತೋ ಅದರದ್ದೇ ಮುಂದುವರಿಕೆ ಇದು. ತಾವು ಏನನ್ನು ತಿನ್ನಬಾರದೆಂದು ಆದೇಶಿಸುತ್ತೇವೋ ಅದನ್ನು ಅನುಸರಿಸಬೇಕು. ಯಾವ ವೃತ್ತಿಯಲ್ಲಿ ಮುಂದುವರಿಯಬೇಕೆಂದು ಹೇಳುತ್ತೇವೋ ಅದಕ್ಕೆ ವಿರುದ್ಧ ನಡೆಯಬಾರದು. ಶತಮಾನಗಳ ಹಿಂದೆಯೂ ಮತ್ತು ಈಗಲೂ ದಲಿತರಿಗೆ ಸ್ವತಃ ತೀರ್ಮಾನಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬ ಧಾರ್ಷ್ಟ್ಯ ಇದು. ಗುಜರಾತ್‍ನ ಕರ್ಜಾ ಗ್ರಾಮದ ಘಟನೆ ನೀಡುತ್ತಿರುವ ಸಂದೇಶವೂ ಇದುವೇ. ಉನಾ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತು ಅದನ್ನು ಕೇಂದ್ರೀಕರಿಸಿ ಚಳವಳಿಗಳು ಹುಟ್ಟಿಕೊಳ್ಳುತ್ತಿರುವ ಈ ಸಂದರ್ಭದಲ್ಲೂ ಅದೇ ಉನಾ ಇರುವ ಗುಜರಾತ್‍ನಲ್ಲೇ ಇಂಥ ಘಟನೆ ನಡೆದಿರುವುದು ಆ ಮನಃಸ್ಥಿತಿಯು ಎಷ್ಟು ಕ್ರೂರ, ಎಷ್ಟು ನಿರ್ಭಯ ಮತ್ತು ಎಷ್ಟು ಅಪಾಯಕಾರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸದ್ಯದ ತುರ್ತು ಏನೆಂದರೆ, ಗೋವನ್ನು ಅವರ ಒತ್ತೆಯಿಂದ ಬಿಡಿಸಿಕೊಂಡು ಸಮಾಜಕ್ಕೆ ಅರ್ಪಿಸುವುದು. ಗೋವಿನ ಪೇಟೆಂಟನ್ನು ಯಾವೊಬ್ಬ ಖಾಸಗಿ ವ್ಯಕ್ತಿಗೂ ಗುಂಪಿಗೂ ಸಂಘಟನೆಗೂ ನೀಡಲಾಗಿಲ್ಲ ಎಂಬುದಾಗಿ ಸಮಾಜಕ್ಕೆ ಸ್ಪಷ್ಟಪಡಿಸುವುದು. ಅದಕ್ಕಾಗಿ ಪರಿಣಾಮಕಾರಿ ಚಳವಳಿ, ರಾಲಿ, ಪ್ರದರ್ಶನಗಳನ್ನು ಏರ್ಪಡಿಸುವುದು. ಅಂದಹಾಗೆ,
        ಗೋವು ಸ್ವತಂತ್ರಗೊಳ್ಳುವುದೆಂದರೆ, ದಲಿತರೂ ಸ್ವತಂತ್ರಗೊಂಡಂತೆ. ಉನಾ ಮತ್ತು ಕರ್ಜಾಗಳು ಸಾರುತ್ತಿರುವುದೂ ಇದನ್ನೇ.

Friday 23 September 2016

ಹಿಂದೂ ಮುಖಂಡರ ಹತ್ಯೆಗೆ ಸಂಚು ಹೆಣೆದವರು ಮತ್ತು ನ್ಯಾಯ

       ನ್ಯಾಯ ಎಂಬ ಪದದ ಆರಂಭದಲ್ಲಿ ‘ಅ’ವನ್ನು ಸೇರಿಸಿದರೆ ಆಗುವ ಅರ್ಥವ್ಯತ್ಯಾಸ (ಅನ್ಯಾಯ) ಬಹಳ ದೊಡ್ಡದು. ಹಾಗಂತ, ಒಂದು ಬಿಡಿ ಅಕ್ಷರವಾಗಿ ‘ಅ’ದಲ್ಲಿ ಯಾವ ತಪ್ಪಿತಸ್ಥ ಗುಣವೂ ಇಲ್ಲ. ಕನ್ನಡ ಅಕ್ಷರಮಾಲೆಯ ಇತರೆಲ್ಲ ಅಕ್ಷರಗಳಂತೆ ‘ಅ’ವೂ ಒಂದು. ಅದನ್ನು ನಾವು ಎಲ್ಲಿ ಮತ್ತು ಹೇಗೆಲ್ಲ ಬಳಸುತ್ತೇವೋ ಅದನ್ನು ಹೊಂದಿಕೊಂಡು ಅದು ತನ್ನನ್ನು ಪ್ರಸ್ತುತಪಡಿಸುತ್ತದೆ. ನ್ಯಾಯಾಲಯದ ಮಟ್ಟಿಗೂ ನಾವು ಇದೇ ಮಾತನ್ನು ಹೇಳಬಹುದು. ನ್ಯಾಯವನ್ನು ನೀಡುವ ಮಂದಿರ ಎಂಬ ನೆಲೆಯಲ್ಲಿ ನ್ಯಾಯಾಲಯ ಅತ್ಯಂತ ಗೌರವಾರ್ಹವಾದುದು. ಆದ್ದರಿಂದಲೇ, ಅಲ್ಲಿನ ಚಟುವಟಿಕೆಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅನ್ಯಾಯದಿಂದ ನ್ಯಾಯವನ್ನು ಪಡಕೊಳ್ಳುವ ಏಕೈಕ ಆಲಯ ಎಂಬುದಾಗಿ ಭರವಸೆ ಇಟ್ಟು ಬದುಕುತ್ತಾರೆ. ಒಂದು ವೇಳೆ, ಈ ಭರವಸೆಯನ್ನು ಸುಳ್ಳು ಮಾಡುವ ಸನ್ನಿವೇಶಗಳು ಮತ್ತೆ ಮತ್ತೆ ಸಂಭವಿಸತೊಡಗಿದರೆ, ಜನರ ಪ್ರತಿಕ್ರಿಯೆ ಏನಿದ್ದೀತು? ನ್ಯಾಯವನ್ನು ನಿರೀಕ್ಷಿಸುತ್ತಾ ದಿನಗಳನ್ನು ಕಳೆದೂ ಕಳೆದೂ ಸುಸ್ತಾದವವರು ಕೊನೆಗೆ ನ್ಯಾಯಾಲಯಕ್ಕೆ ‘ಅ’ವನ್ನು ಸೇರಿಸುವುದಕ್ಕೆ ತೀರ್ಮಾನಿಸಿದರೆ ಅದರ ಹೊಣೆಗಾರಿಕೆಯನ್ನು ಯಾರ ಮೇಲೆ ಹೊರಿಸಬೇಕು? ಕಳೆದ ವಾರ ಎನ್‍ಐಎ(ರಾಷ್ಟ್ರೀಯ ತನಿಖಾ ದಳ)ಯ ವಿಶೇಷ ನ್ಯಾಯಾಲಯವು ನೀಡಿದ ನ್ಯಾಯವು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ, ಪ್ರಮೋದ್ ಮುತಾಲಿಕ್, ಪತ್ರಕರ್ತ ಪ್ರತಾಪ್ ಸಿಂಹ, ಉದ್ಯಮಿ ವಿಜಯ ಸಂಕೇಶ್ವರ.. ಮುಂತಾದವರ ಹತ್ಯೆ ನಡೆಸಲು ಸಂಚು ರೂಪಿಸಿದ್ದರೆಂದು ಆರೋಪಿಸಿ 2012ರಲ್ಲಿ ಸುಮಾರು 13 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಐದು ವರ್ಷಗಳ ಸಾದಾ ಶಿಕ್ಷೆಯನ್ನು ಘೋಷಿಸಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿರುವುದೇ ಈ ಶಿಕ್ಷೆಗೆ ಆಧಾರ ಎಂದೂ ಅದು ಹೇಳಿದೆ. ಅಂದಹಾಗೆ, ಹೊರನೋಟಕ್ಕೆ ಈ ವಿಚಾರಣಾ ಪ್ರಕ್ರಿಯೆಯಲ್ಲಿ ಅಸಹಜವಾದುದು ಯಾವುದೂ ಇಲ್ಲ. ಆರೋಪಿಗಳು ತಪ್ಪೊಪ್ಪಿಕೊಳ್ಳುವುದು ಮತ್ತು ನ್ಯಾಯಾಲಯ ನ್ಯಾಯ ತೀರ್ಮಾನ ಕೈಗೊಳ್ಳುವುದೆಲ್ಲ ನ್ಯಾಯ ಪ್ರಕ್ರಿಯೆಯ ಸಹಜ ವಿಧಾನ. ಕಳೆದವಾರ ಪತ್ರಿಕೆಗಳು ಕೂಡ, ‘ಹಿಂದೂ ಮುಖಂಡರ ಹತ್ಯಾ ಸಂಚು: ಆರೋಪಿಗಳಿಗೆ ಶಿಕ್ಷೆ..’ ಎಂಬ ಧಾಟಿಯಲ್ಲೇ ಸುದ್ದಿ ಪ್ರಕಟಿಸಿದ್ದುವು. ದುರಂತ ಏನೆಂದರೆ, ಈ ಪ್ರಕರಣಕ್ಕೆ ಈ ಬಾಹ್ಯಮುಖವಷ್ಟೇ ಇರುವುದಲ್ಲ. ಆಂತರಿಕವಾದ ಇನ್ನೊಂದು ಮುಖವೂ ಇದೆ. ಆ ಮುಖ
ಅತ್ಯಂತ ಆಘಾತಕಾರಿಯಾದುದು. ಈ ಪ್ರಕರಣದ ಆರೋಪಿಗಳು 4 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಜೈಲಲ್ಲಿದ್ದಾರೆ. ಆದರೂ ಅವರಿಗೆ ಜಾಮೀನಿನಲ್ಲಿ ಹೊರಬರುವ ಅವಕಾಶವನ್ನು ನ್ಯಾಯಾಲಯ ನೀಡಿಲ್ಲ. ಜಾಮೀನು ಪಡೆದು ಹೊರಬರುವ ಪ್ರಕರಣ ಇದಾಗಿದ್ದರೂ ಅವರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ ಎಂಬ ಅಭಿಪ್ರಾಯ ನ್ಯಾಯತಜ್ಞರದು. ಈ ಪ್ರಕರಣವನ್ನು ವಿಚಾರಣೆ ನಡೆಸಲೆಂದೇ ಎನ್.ಐ.ಎ.ಯು ವಿಶೇಷ ನ್ಯಾಯಾಲಯವನ್ನು ರಚಿಸಿತು. ತ್ವರಿತಗತಿಯಲ್ಲಿ ವಿಚಾರಣೆ ನಡೆದು ತೀರ್ಪು ಹೊರಬರಬೇಕೆಂಬುದೇ ಇದರ ಉದ್ದೇಶವಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರಕರಣದ ವಿಚಾರಣೆ ಎಷ್ಟು ಆಮೆಗತಿಯಲ್ಲಿ ನಡೆಯಿತೆಂದರೆ, ಆರೋಪಿಗಳು ನ್ಯಾಯಾಂಗದ ಮೇಲೆಯೇ ಭರವಸೆ ಕಳಕೊಳ್ಳುವಷ್ಟು. ಈವರೆಗೆ ಬರೇ 23 ಸಾಕ್ಷಿಗಳ ವಿಚಾರಣೆಯಷ್ಟೇ ನಡೆದಿದೆ. ಒಟ್ಟು 350ರಷ್ಟು ಸಾಕ್ಷಿಗಳಲ್ಲಿ ಬರೇ 23 ಸಾಕ್ಷಿಗಳ ವಿಚಾರಣೆಯಷ್ಟೇ ಈ 4 ವರ್ಷಗಳಲ್ಲಿ ನಡೆದಿದೆ ಎಂಬುದರ ಅರ್ಥ ಏನು? ಇದು ಸಹಜವೋ ಅಸಹಜವೋ? ಈ ಗತಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆದರೆ ಉಳಿದ 327 ಮಂದಿ ಸಾಕ್ಷಿಗಳ ವಿಚಾರಣೆ ಮುಗಿಯಲು ಎಷ್ಟು ವರ್ಷಗಳು ಬೇಕಾದೀತು? 5 ವರ್ಷಗಳ ಸಾದಾ ಶಿಕ್ಷೆಗೆ ಅರ್ಹವಾದಂತಹ ಆರೋಪವನ್ನು ಹೊತ್ತುಕೊಂಡವರು ಜೀವನಪರ್ಯಂತ ಜೈಲಲ್ಲಿರಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತಲ್ಲವೇ? ಯಾವುದೇ ವ್ಯಕ್ತಿಯನ್ನು ಮಾನಸಿಕವಾಗಿ ಹಿಂಸಿಸುವ ಪ್ರಶ್ನೆ ಇದು. ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವುದಕ್ಕಿಂತ ತಪ್ಪೊಪ್ಪಿಕೊಂಡು ಜೈಲಿನಿಂದ ಹೊರಬರುವುದೇ ಬುದ್ಧಿವಂತಿಕೆ ಎಂದು ತೀರ್ಮಾನಿಸುವುದಕ್ಕೆ ಒತ್ತಾಯಿಸುವ ಸನ್ನಿವೇಶ ಇದು. ಆದ್ದರಿಂದಲೇ, ಈ 13 ಮಂದಿ ಆರೋಪಿಗಳು ಸನ್ನಿವೇಶದ ಒತ್ತಡಕ್ಕೆ ಒಳಗಾಗಿದ್ದಾರೆ. ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ಈ ತಪ್ಪೊಪ್ಪಿಕೊಳ್ಳುವಿಕೆಯ ಹಿಂದೆಯೂ ಅನುಮಾನವಿದೆ. ಆರೋಪಿಗಳು ಮತ್ತು ವ್ಯವಸ್ಥೆಯ ನಡುವೆ ಚೌಕಾಶಿ ಮಾತುಕತೆಗಳು ನಡೆದಿವೆ ಎಂದೂ ಹೇಳಲಾಗುತ್ತದೆ. ಇವೆಲ್ಲ ನಿಜ ಎಂದಾದರೆ, ಕಳೆದವಾರ ತೀರ್ಪು ನೀಡಲಾದ ದಿನವನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ಅತ್ಯಂತ ವಿಷಾದಕರ ದಿನವಾಗಿ ಪರಿಗಣಿಸಬೇಕಾಗುತ್ತದೆ. ಅಷ್ಟಕ್ಕೂ, ವಿಶೇಷ ನ್ಯಾಯಾಲಯದ ರಚನೆಯ ಬಳಿಕವೂ ವಿಚಾರಣಾ ಪ್ರಕ್ರಿಯೆ ಇಷ್ಟು ನಿಧಾನಗೊಳ್ಳಲು ಕಾರಣವೇನು? ಈ ನಿಧಾನ ಸಹಜವೇ ಅಥವಾ ಉದ್ದೇಶಪೂರ್ವಕವೇ?
       ಯಾವುದೇ ಒಂದು ಪ್ರಕರಣವೂ ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ದಾಟಿ ಹೋಗಬೇಕಾಗುತ್ತದೆ. ಸಾಕ್ಷಿಗಳ ವಿಚಾರಣೆ, ವಕೀಲರು ಮತ್ತು ಪ್ರಾಸಿಕ್ಯೂಟರ್‍ಗಳ ನಡುವೆ ವಾದ, ನ್ಯಾಯಾಧೀಶರ ವಿಶ್ಲೇಷಣೆ.. ಇವೆಲ್ಲ ತೀರ್ಪಿನ ಮೊದಲು ನಡೆಯುವ ಸಾಮಾನ್ಯ ಚಟುವಟಿಕೆಗಳು. ಆದರೆ, ಈ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಸಾಮಾನ್ಯವಾಗಿ ಓರ್ವರನ್ನು ಅಪರಾಧಿ ಮತ್ತು ನಿರಪರಾಧಿ ಎಂದು ಕೋರ್ಟು ತೀರ್ಮಾನಿಸುವುದೇ ಸಾಕ್ಷಿಯ ಆಧಾರದಲ್ಲಿ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾಕ್ಷಿಗೆ ಅತೀ ಪ್ರಮುಖ ಪಾತ್ರ ಇದೆ. ಕೇರಳದ ಸೌಮ್ಯ ಪ್ರಕರಣದಲ್ಲಿ ಹೈಕೋರ್ಟ್‍ನಿಂದ ಮರಣ ದಂಡನೆಗೆ ಗುರಿಯಾಗಿದ್ದ ಗೋವಿಂದ ಚಾಮಿಯ ಶಿಕ್ಷೆಯನ್ನು ಸುಪ್ರೀಮ್ ಕೋರ್ಟ್ ಕಳೆದವಾರ ಜೀವಾವಧಿ ಶಿಕ್ಷೆಗೆ ಇಳಿಸಿರುವುದಕ್ಕೆ ಪ್ರಮುಖ ಆಧಾರವೇ ಸಾಕ್ಷ್ಯದ ಕೊರತೆ. ಇಷ್ಟೊಂದು ಪ್ರಮುಖ ಆಧಾರವನ್ನೇ ಬುಡಮೇಲು ಮಾಡಬಲ್ಲಂತಹ ಪ್ರಕ್ರಿಯೆಯೊಂದು ವಿಶೇಷ ನ್ಯಾಯಾಲಯದಲ್ಲಿ ನಡೆದಿರುವುದು ಎಲ್ಲಿಯ ವರೆಗೆ ಸಮರ್ಥನೀಯ? ಇದನ್ನೇ ಮಾದರಿಯಾಗಿಸಿಕೊಂಡು ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಬೆಳವಣಿಗೆಗಳು ನಡೆದರೆ ಅದರ ಪರಿಣಾಮ ಏನಾದೀತು? ಆರೋಪಿಗಳನ್ನು ಸತಾಯಿಸಲಿಕ್ಕೆಂದೇ ನೂರಾರು ಸಾಕ್ಷಿಗಳನ್ನು ಪಟ್ಟಿ ಮಾಡುವುದು ಮತ್ತು ಆಮೆಗತಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದೆಲ್ಲ ನಡೆದರೆ ಏನು ಮಾಡುವುದು? ಅದರಿಂದ ನಮ್ಮ ನ್ಯಾಯ ವ್ಯವಸ್ಥೆಗೆ ಅಂಟಬಹುದಾದ ಕಳಂಕ ಯಾವ ರೀತಿಯದು?
      ನಿಜವಾಗಿ, ಆರೋಪಿಗಳು ತಪ್ಪೊಪ್ಪಿಕೊಳ್ಳುವುದಕ್ಕೂ ತಪ್ಪೊಪ್ಪಿಸುವುದಕ್ಕೂ ನ್ಯಾಯ-ಅನ್ಯಾಯದಷ್ಟೇ ವ್ಯತ್ಯಾಸವಿದೆ. ತಪ್ಪೊಪ್ಪಿಸುವುದು ಎಂಬ ಪದದಲ್ಲಿ ಬಲವಂತ ಇದೆ. ಇದು ನ್ಯಾಯಾಂಗದ ಕೆಲಸ ಅಲ್ಲ. ತಮ್ಮ ವಿಚಾರಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಮನ ಸೋತು ಆರೋಪಿಗಳು ಪಶ್ಚಾತ್ತಾಪದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡುವುದೇ ನಿಜವಾದ ನ್ಯಾಯ ಪ್ರಕ್ರಿಯೆ ಆದರೆ, ವಿಶೇಷ ನ್ಯಾಯಾಲಯವು ಈ ಹಿನ್ನೆಲೆಯಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ.

Sunday 18 September 2016

ಗಣೇಶ ವಿಸರ್ಜನೆ ಮತ್ತು ಸಾದಾತ್ ಖಾನ್: ನಮ್ಮೆಲ್ಲರ ಜೇಬಲ್ಲಿ ಇರಲೇಬೇಕಾದ ದೃಶ್ಯ

        ವಾರದ ಹಿಂದೆ ಗಣೇಶ ವಿಸರ್ಜನೆಯ ವೇಳೆ ತೆಪ್ಪ ಮುಳುಗಿ 12 ಮಂದಿ ಯುವಕರು ತುಂಗಭದ್ರಾ ನದಿ ಪಾಲಾದ ಘಟನೆಯಿಂದ ದುಃಖತಪ್ತವಾದ ಶಿವಮೊಗ್ಗದ ಹಾಡೋನಹಳ್ಳಿ ಗ್ರಾಮವು ಆ ಶೋಕದಲ್ಲೂ ಸಾದಾತ್ ಖಾನ್ ನೇತೃತ್ವದ ಮುಳುಗು ತಜ್ಞರ ತಂಡವನ್ನು ಶ್ಲಾಘಿಸಿದೆ. ಯುವಕರನ್ನು ಕಳೆದುಕೊಂಡು ಗ್ರಾಮವು ನದಿದಂಡೆಯಲ್ಲಿ ಬೀಡು ಬಿಟ್ಟಿದ್ದರೆ, ಸಾದಾತ್ ಖಾನ್ ನೇತೃತ್ವದ ತಂಡ ನದಿಯಲ್ಲಿತ್ತು. ಬಹುಶಃ, ಮನುಷ್ಯ ಪ್ರೇಮಕ್ಕೆ ಸಾಕ್ಷಿಯಾದ ಅಪೂರ್ವ ಕ್ಷಣ ಅದು. ದಂಡೆಯಲ್ಲಿರುವವರು ಮತ್ತು ನದಿಯಲ್ಲಿರುವವರ ನಡುವೆ ಮನುಷ್ಯರು ಎಂಬೊಂದು ಸಮಾನ ಅಂಶವನ್ನು ಬಿಟ್ಟರೆ ಉಳಿದಂತೆ ಧರ್ಮ, ಸಂಸ್ಕೃತಿ, ಆಚರಣೆ, ಭಾಷೆ, ಪೂಜಾ ಮಾದರಿ.. ಎಲ್ಲದರಲ್ಲೂ ಎತ್ತಿ ಹೇಳಬಹುದಾದಷ್ಟು ವ್ಯತ್ಯಾಸಗಳಿದ್ದುವು. ಸ್ಪಷ್ಟವಾಗಿ ಹೇಳಬೇಕೆಂದರೆ, ವಿಗ್ರಹವನ್ನು ಪೂಜಿಸುವ ಯುವಕರಿಗಾಗಿ ವಿಗ್ರಹವನ್ನು ಪೂಜಿಸದ ತಂಡ ನದಿಯಲ್ಲಿತ್ತು. ಧರ್ಮದ ನೆಪದಲ್ಲಿ ಥಳಿಸುವ, ದ್ವೇಷಿಸುವ ಮತ್ತು ಕೊಲೆಗೈಯುವವರ ಪಾಲಿಗೆ ಫ್ರೇಮ್ ಹಾಕಿ ಕೊರಳಲ್ಲಿ ತೂಗು ಹಾಕಿಕೊಳ್ಳಬೇಕಾದ ದೃಶ್ಯ ಇದು. ಧರ್ಮ ಮತ್ತು ಅದರ ಆಚರಣಾ ಪದ್ಧತಿಗಳು ಮನುಷ್ಯ ವಿಭಜನೆಯ ಸಂಕೇತವಲ್ಲ ಎಂದು ಬಲವಾಗಿ ಮತ್ತೆ ಮತ್ತೆ ಸಾರಿದ ಸಂದರ್ಭವೂ ಹೌದು. ಈ ಕಾರಣದಿಂದಲೇ ಕಣ್ಣೀರಿನ ಮಧ್ಯೆಯೂ ಸಾದಾತ್ ಖಾನ್ ತಂಡವನ್ನು ಆ ಗ್ರಾಮ ಅಭಿನಂದಿಸಿದೆ. ಮನಸಾರೆ ಕೊಂಡಾಡಿದೆ.
       ನಿಜವಾಗಿ, ಹಬ್ಬಗಳು ಇವತ್ತು ಸಂಭ್ರಮದ ಕ್ಷಣಗಳಾಗಿಯಷ್ಟೇ ಉಳಿದಿಲ್ಲ. ಹಬ್ಬಗಳಿಗೆ ಬೇಲಿಗಳನ್ನು ಹಾಕಲಾಗಿದೆ. ಹಬ್ಬ ಎಂದರೆ ಒಂದಷ್ಟು ಭಯ, ಒಂದಷ್ಟು ಆತಂಕ ಮತ್ತು ಒಂದಷ್ಟು ಅನುಮಾನಗಳ ಸಂಗ್ರಹ ರೂಪವಾಗಿಯೂ ಸಮಾಜದಲ್ಲಿ ಗುರುತಿಗೀಡಾಗಿದೆ. ಸದ್ಯ ಹಬ್ಬಕ್ಕೆ ಎರಡು ರೀತಿಯ ಪೂರ್ವ ತಯಾರಿಗಳನ್ನು ಮಾಡಲಾಗುತ್ತದೆ. ಒಂದು- ಆಹಾರ, ಉಡುಪು ಮತ್ತಿತರ ವಿಷಯಗಳಿಗೆ ಸಂಬಂಧಿಸಿದ್ದರೆ ಇನ್ನೊಂದು ಹಬ್ಬದ ದಿನಕ್ಕೆ ಸಂಬಂಧಿಸಿದ್ದು. ಒಂದು ಧರ್ಮದ ಹಬ್ಬದ ದಿನದಂದು ಇನ್ನೊಂದು ಧರ್ಮದ ಮಂದಿ ತುಸು ಆತಂಕದಿಂದಲೇ ಬೀದಿಗಿಳಿಯುವ ವಾತಾವರಣ ನಿರ್ಮಾಣವಾಗುತ್ತಿದೆ. ಹಬ್ಬಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ಎಂದು ಪೊಲೀಸರನ್ನು ವಿನಂತಿಸಿಕೊಳ್ಳುವುದು ನಡೆಯುತ್ತದೆ. ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಬಾರಿಕೊಡ್‍ಗಳನ್ನು ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಇಡಲಾಗುತ್ತದೆ. ‘ಶಾಂತಿಯುತ ಹಬ್ಬಾಚರಣೆಗೆ ಕರೆ..’ ಎಂಬ ಶೀರ್ಷಿಕೆಯಲ್ಲಿ ಜಿಲ್ಲಾಧಿಕಾರಿಯದ್ದೋ ಪೊಲೀಸ್ ಕಮೀಷನರ್‍ರದ್ದೋ ವಿನಂತಿಯನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ಬಹುಶಃ ಆಚರಿಸುವುದು ಹಬ್ಬವನ್ನೋ ಅಲ್ಲ, ಕುಸ್ತಿಯನ್ನೋ ಎಂದು ಅನುಮಾನಿಸುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಘಟನೆ ನಮಗೆ ಮುಖ್ಯವಾಗಬೇಕು. ಅಲ್ಲಿ ನಡೆದಿರುವುದು ದುರಂತವೊಂದೇ ಅಲ್ಲ. ದುರಂತದ ನೋವನ್ನೂ ಮರೆಸುವ ಮಾನವೀಯ ಘಟನೆಯೂ ನಡೆದಿದೆ. ಗಣೇಶ ವಿಸರ್ಜನೆ ಎಂಬುದು ಹಿಂದೂಗಳಿಗೆ ಸಂಬಂಧಿಸಿದ್ದು. ಗಣೇಶ ವಿಗ್ರಹದ ವಿಸರ್ಜನೆಯನ್ನು ನದಿ ಮಧ್ಯದಲ್ಲಿ ನಡೆಸಬೇಕೋ ಅಲ್ಲ ದಂಡೆಯಲ್ಲಿ ಮಾಡಿದರೆ ಸಾಕೋ, ಧಾರ್ಮಿಕ ಆಚರಣೆಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯ ಇದೆಯೇ.. ಎಂಬುದೆಲ್ಲ ಆ ಧರ್ಮದ ಒಳಗಡೆಯೇ ಚರ್ಚೆಗೊಳಗಾಗಬೇಕಾದದ್ದು. ಇದು ಕೇವಲ ಗಣೇಶ ವಿಸರ್ಜನೆಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ, ಮೊಸರು ಕುಡಿಕೆಯನ್ನು ಒಡೆಯುವ ಸಂದರ್ಭಕ್ಕೂ ಅನ್ವಯಿಸಿ ಇದನ್ನು  ಹೇಳಬೇಕಾಗಿದೆ. ಶಿವಮೊಗ್ಗ ದುರಂತಕ್ಕಿಂತ ವಾರಗಳ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಓರ್ವ ಹದಿಹರೆಯದ ಯುವಕ ಮಡಿಕೆ ಒಡೆಯುವ ಭರದಲ್ಲಿ ಆಯತಪ್ಪಿ ಕೆಳಬಿದ್ದು ಸಾವಿಗೀಡಾಗಿದ್ದಾನೆ. ಇವು ಮತ್ತು ಇಂಥ ಇನ್ನಿತರ ಅನಾಹುತಗಳು ಹಬ್ಬಗಳ ಬಾಹ್ಯ ಆತಂಕಗಳಾದರೆ, ಆಂತರಿಕ ಆತಂಕಗಳಂತೂ ಇದನ್ನೂ ಮೀರುವಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿವೆ. ಹಬ್ಬಗಳನ್ನು ಇವತ್ತು ಸಮಾಜ ಹೇಗೆ ವರ್ಗೀಕರಿಸಿಕೊಳ್ಳುತ್ತಿವೆಯೆಂದರೆ, ಅದರ ಸುಖ ಮತ್ತು ಆನಂದದಲ್ಲಿ ತನ್ನ ಧರ್ಮದವರ ಹೊರತು ಇನ್ನಾರೂ ಪಾಲುದಾರರಾಗಬಾರದೆಂಬಂತೆ ವರ್ತಿಸುತ್ತಿದೆ. ‘ದೀಪಾವಳಿಯ ಖುಷಿ ಹಿಂದೂಗಳಲ್ಲಿ ಮಾತ್ರ ಇರಬೇಕು, ಆ ಖುಷಿಯನ್ನು ಮುಸ್ಲಿಮರೊಂದಿಗೆ ಹಂಚಿಕೊಳ್ಳುವ ಸನ್ನಿವೇಶಗಳು ನಿರ್ಮಾಣವಾಗಬಾರದು, ಒಟ್ಟಾಗಿ ಒಂದು ಕಡೆ ಕೂತು ಹಬ್ಬ ಮತ್ತು ಅದು ಸಾರುವ ಮೌಲ್ಯಗಳ ಕುಶಲೋಪರಿ ನಡೆಸುವಂತಾಗಬಾರದು..’ ಎಂದು ಅಲಿಖಿತವಾಗಿಯೇ ತೀರ್ಮಾನಿಸಿಕೊಂಡಂತಹ ವಾತಾವರಣ ಬಲಪಡೆಯತೊಡಗಿದೆ. ಈದ್‍ಗೆ ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ಈದ್‍ನ ಖುಷಿಯನ್ನು ಮುಸ್ಲಿಮನೋರ್ವ ತನ್ನ ಹಿಂದೂ ನೆರೆಯವರೊಂದಿಗೆ ಹಂಚಿಕೊಳ್ಳುವುದಕ್ಕೂ ತಾನು ಮತ್ತು ತನ್ನ ಧರ್ಮದವರ ಜೊತೆಗೂಡಿ ಮಾತ್ರ ಆಚರಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಮುಸ್ಲಿಮರ ಟೊಪ್ಪಿ, ಗಡ್ಡ, ಹೊಸ ಉಡುಪು, ಪ್ರಾಣಿ ಹತ್ಯೆ, ಆಲಿಂಗನ, ಅಲ್ಲಾಹು ಅಕ್ಬರ್, ನಮಾಝ.. ಇತ್ಯಾದಿಗಳೆಲ್ಲವೂ ಇನ್ನೋರ್ವ ಮುಸ್ಲಿಮರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಈದ್ ಅಂದರೆ ಏನು ಮತ್ತು ಅದರ ಆಚರಣಾ ವಿಧಾನ ಹೇಗೆ ಎಂಬುದನ್ನು ಓರ್ವ ಮುಸ್ಲಿಮ್ ಇನ್ನೋರ್ವ ಮುಸ್ಲಿಮನಿಗೆ ಹೇಳಿಕೊಡಬೇಕಿಲ್ಲ. ಆದರೆ ಹಿಂದೂ ಧರ್ಮಾನುಯಾಯಿಗೆ ಇದರ ಅರಿವು ಸ್ಪಷ್ಟವಾಗಿ ಇರಬೇಕಿಲ್ಲ. ಆತ/ಕೆ ಅಲ್ಲಾಹು ಅಕ್ಬರ್‍ಗೆ, ಪ್ರಾಣಿ ಹತ್ಯೆಗೆ, ಟೊಪ್ಪಿಗೆ.. ಎಲ್ಲಕ್ಕೂ ಅವರದೇ ಆದ ಅಥವಾ ಯಾರಿಂದಲೋ ಕೇಳಿದ ಅರ್ಥವನ್ನು ಕೊಟ್ಟಿರಬಹುದು. ಆ ಅರ್ಥದಲ್ಲಿ ಅಪಾಯಕಾರಿ ಅಂಶಗಳೂ ಇರಬಹುದು. ಇವು ಮತ್ತು ಇಂಥ ಇನ್ನಿತರ ಅನೇಕಾರು ಕಲ್ಪಿತ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಅತ್ಯುತ್ತಮ ಸಂದರ್ಭವೇ ಪರಸ್ಪರ ಖುಷಿಯ ವಿನಿಮಯ ಮಾಡಿಕೊಳ್ಳುವುದು. ಆಗ ಗಣೇಶ ವಿಸರ್ಜನೆಯನ್ನು ನದಿಯ ಮಧ್ಯದಲ್ಲಿ ಯಾಕೆ ವಿಸರ್ಜಿಸಬೇಕು ಎಂಬುದೂ ಚರ್ಚೆಗೊಳಗಾಗುತ್ತದೆ. ಈದ್‍ನ ದಿನದಂದು ಪ್ರಾಣಿಯನ್ನು ಯಾಕೆ ಹತ್ಯೆ ಮಾಡುತ್ತೀರಿ ಎಂಬುದು ಅವಲೋಕನಕ್ಕೆ ಒಳಗಾಗುತ್ತದೆ. ಇಂಥ ಕುಶಲೋಪರಿಯಿಂದ ಆಗುವ ಪ್ರಮುಖ ಬದಲಾವಣೆ ಏನೆಂದರೆ, ಕಲ್ಪಿತ ಅರ್ಥಗಳು ಸಾವಿಗೀಡಾಗಿ ನಿಜ ಅರ್ಥಗಳು ಉಸಿರು ಪಡಕೊಳ್ಳುವುದು. ದುರಂತ ಏನೆಂದರೆ, ಸದ್ಯ ಈ ಬಗೆಯ ಕೊಡು ಕೊಳ್ಳುವಿಕೆಯ ವಾತಾವರಣ ಕಡಿಮೆಗೊಳ್ಳುತ್ತಿದೆ. ನನ್ನ ಹಬ್ಬ ಮತ್ತು ನಿನ್ನ ಹಬ್ಬ ಎಂಬುದಾಗಿ ಹಬ್ಬವನ್ನೂ ಅದರ ಆನಂದವನ್ನೂ ಸಮಾಜ ವಿಭಜಿಸತೊಡಗಿದೆ. ಕಣ್ಣೀರು ಮತ್ತು ಸಂತಾಪಗಳಲ್ಲೂ ವಿಭಜನೆಗಳಾಗುತ್ತಿವೆ. ಆದ್ದರಿಂದಲೇ, ಶಿವಮೊಗ್ಗದ ತುಂಗಭದ್ರೆಯಲ್ಲಿ ದುರಂತ ಸಾವನ್ನು ಕಂಡ 12 ಯುವಕರೂ ಮತ್ತು ಅವರ ಮೃತದೇಹವನ್ನು ಹುಡುಕಾಡಿ ನದಿ ದಂಡೆಗೆ ತಲುಪಿಸಿದ ಸಾದಾತ್ ಖಾನ್ ನೇತೃತ್ವದ ತಂಡವೂ ನಮ್ಮೊಳಗೆ ಚರ್ಚೆಗೆ ಅರ್ಹವಾಗುವುದು. ಮೃತದೇಹಕ್ಕೆ ಜನರನ್ನು ಭಾವುಕಗೊಳಿಸುವ ಸಾಮಥ್ರ್ಯವಿದೆ. ಹೆಣ್ಣು-ಗಂಡು, ಹಿಂದೂ-ಮುಸ್ಲಿಮ್ ಎಂಬ ವಿಭಜನೆಯಿಲ್ಲದೆಯೇ ಸರ್ವರಲ್ಲೂ ಕಣ್ಣೀರು ತರಿಸುವ ಶಕ್ತಿ ಮೃತದೇಹಕ್ಕಿದೆ. ಬಹುಶಃ, ಮನುಷ್ಯರೆಲ್ಲರನ್ನೂ ಒಂದೇ ಎಂದು ಘಂಟಾಘೋಷವಾಗಿ ಸಾರುವ ಪ್ರಾಕೃತಿಕ ಕುರುಹು ಇದು. ಆದರೆ ನಾವು ಖುಷಿಯಲ್ಲಿರುವಾಗ ಈ ಪ್ರಾಕೃತಿಕ ಸತ್ಯವನ್ನು ನಿರ್ಲಕ್ಷಿಸಿಕೊಂಡು ಬದುಕುತ್ತೇವೆ. ಅವರನ್ನು ದ್ವೇಷಿಸುತ್ತೇವೆ. ಅವರ ದುಃಖವನ್ನು ಕೆಲವೊಮ್ಮೆ ಖುಷಿಯಂತೆ ಅನುಭವಿಸುತ್ತೇವೆ. ಆದರೆ ಇದು ಪ್ರಕೃತಿ ವಿರೋಧಿ ಎಂಬುದನ್ನು ಶಿವಮೊಗ್ಗದ ದುರಂತ ನಮಗೆ ನೆನಪಿಸಿದೆ. ಪರಸ್ಪರ ಸುಖ ಮತ್ತು ದುಃಖದಲ್ಲಿ ಭಾಗಿಗಳಾಗುವುದೇ ಧರ್ಮದ ತಿರುಳು ಎಂಬುದನ್ನು ಈ ಘಟನೆ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿದೆ. ಆದ್ದರಿಂದ, ಸಾದಾತ್ ಮತ್ತು ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಲೇ ದುಃಖಿತ ಕುಟುಂಬಕ್ಕೆ ನಾವೆಲ್ಲ ಸಾಂತ್ವನವನ್ನು ಹೇಳಬೇಕಾಗಿದೆ.      

Saturday 10 September 2016

ದುಡ್ಡು, ಹಜ್ಜ್ ಮತ್ತು ಪ್ರಶ್ನೆ

       ಈ ವರ್ತಮಾನದ ಹತ್ತು ಹಲವು ಸವಾಲುಗಳ ಎದುರು ಹಜ್ಜ್ ನ ಪ್ರಸ್ತುತತೆ ಏನು? ಜಗತ್ತಿನ 160 ಕೋಟಿ ಮುಸ್ಲಿಮರಲ್ಲಿ ಬರೇ ಲಕ್ಷಾಂತರ ಮಂದಿ ಮುಸ್ಲಿಮರು ಮಾತ್ರ ತವಾಫ್‍ನಲ್ಲಿ, ಸಈಯಲ್ಲಿ, ಅರಫಾ, ಮುಝ್ದಲಿಫಾದಲ್ಲಿ... ಹೀಗೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಒಟ್ಟು ಸೇರುವುದು, ಪ್ರಾರ್ಥಿಸುವುದು, ಕಣ್ಣೀರಾಗುವುದೆಲ್ಲ ಏನು? ದುಡ್ಡಿದ್ದವ ಹಜ್ಜ್ ನಿರ್ವಹಿಸಬೇಕು ಅನ್ನುವುದು ತೀರಾ ಸರಳ ಮಾತು. ಆದರೆ ಈ ಮಾತನ್ನು ತೀರಾ ಗಂಭೀರ ಮತ್ತು ಚಿಂತನಾರ್ಹಗೊಳಿಸುವುದಕ್ಕೆ ಕೆಲವು ಪ್ರಶ್ನೆಗಳಿವೆ. ದುಡ್ಡಿದ್ದವ ಯಾಕೆ ಹಜ್ಜ್ ನಿರ್ವಹಿಸಲೇಬೇಕು? ಹಜ್ಜ್ ನಿರ್ವಹಣೆ ಎಂಬುದು ಇವತ್ತಿನ ದಿನಗಳಲ್ಲಿ ತೀರಾ ಸಲೀಸಿನದ್ದಲ್ಲ. ಹೋಗಬೇಕೆಂದು ತೀರ್ಮಾನಿಸಿದರೂ ಅಡೆ-ತಡೆಗಳಿರುವ ನಿಯಮ ನಿಬಂಧನೆಗಳು ಇವತ್ತಿನದು. ಅರ್ಜಿ ಹಾಕಿ ಕಾಯಬೇಕು. ಲಕ್ಷಾಂತರ ರೂಪಾಯಿ ಪ್ರಯಾಣಕ್ಕೆ ತೆರಬೇಕು. ವ್ಯಾಪಾರ, ಉದ್ಯೋಗ, ಕುಟುಂಬ, ಮಕ್ಕಳು, ಪತ್ನಿ... ಎಲ್ಲವನ್ನೂ ಮತ್ತು ಎಲ್ಲರನ್ನೂ ಬಿಟ್ಟು ಕೆಲವಾರು ದಿನಗಳ ಕಾಲ ಒಂಟಿಯಾಗಬೇಕು. ಅಲ್ಲದೆ, ಮಕ್ಕಾದ ವಾತಾವರಣ ಪರಿಚಿತವಲ್ಲ. ಆರೋಗ್ಯ ಕೈ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷಾಂತರ ಮಂದಿ ಸೇರುವ ಸ್ಥಳವಾಗಿರುವುದರಿಂದ ಅನಾಹುತಗಳ ಸಾಧ್ಯತೆಯೂ ಇರುತ್ತದೆ. ಇಷ್ಟೆಲ್ಲ ಅಪಾಯ-ಅಭದ್ರತೆಯನ್ನು ಎದುರಿಸಿಕೊಂಡು ಯಾತ್ರೆ ಹೋಗುವುದಕ್ಕಿಂತ ಅಷ್ಟೇ ಮೊತ್ತವನ್ನು ಇಲ್ಲಿನ ಅರ್ಹರಿಗೆ ಕೊಟ್ಟು ನಿಶ್ಚಿಂತೆಯಿಂದ ಇರಬಹುದಲ್ಲ... ಎಂಬ ಪ್ರಶ್ನೆಯೊಂದು ಮೂಡುವುದು ಅಪರಾಧವಾಗಬೇಕಿಲ್ಲ. ನಿಜವಾಗಿ, ಹಜ್ಜ್ ಮಹತ್ವಪೂರ್ಣ ಎನಿಸಿಕೊಳ್ಳುವುದು ಇಂಥ ಪ್ರಶ್ನೆಗಳಿಂದ. ದುಡ್ಡಿದ್ದವ ಹಜ್ಜ್ ನಿರ್ವಹಿಸಲೇಬೇಕು ಅನ್ನುವುದು ಆರಾಧನೆಯ ಬಾಹ್ಯ ವ್ಯಾಖ್ಯಾನವೇ ಹೊರತು ದುಡ್ಡಿಗೂ ಹಜ್ಜ್ ಗೂ ನಡುವೆ ಆಳ ಸಂಬಂಧವೇನೂ ಇಲ್ಲ. ದುಡ್ಡು ಹಜ್ಜ್ ಅನ್ನು ಕಡ್ಡಾಯಗೊಳಿಸಬಹುದು. ಆದರೆ, ಹಜ್ಜ್ ಅನ್ನು ಫಲಪ್ರದಗೊಳಿಸುವುದು ದುಡ್ಡು ಅಲ್ಲ. ದುಡ್ಡಿಗೂ ಹಜ್ಜ್ ಗೂ ನಡುವೆ ಇರುವ ಸಂಬಂಧ ಇಷ್ಟೇ. ಹಜ್ಜ್ ಗೆ ಸಂಬಂಧಿಸಿ ಹಣ ಕೇವಲ ಒಂದು ನಿಮಿತ್ತ ಮಾತ್ರ. ಹಜ್ಜ್ ಈ ದುಡ್ಡಿನಾಚೆಗೆ ವಿಶಾಲವಾದದ್ದೊಂದು ಜಗತ್ತನ್ನು ತೆರೆದುಕೊಡುತ್ತದೆ. ಆ ಜಗತ್ತಿನಲ್ಲಿ ನಡೆದ ಘಟನೆಗಳಿಗೂ ದುಡ್ಡಿಗೂ ಎಷ್ಟು ತೆಳುವಾದ ಸಂಬಂಧ ಎಂದರೆ, ದುಡ್ಡು ಆ ಜಗತ್ತಿನ ಇಡೀ ಪ್ರಕ್ರಿಯೆಯಲ್ಲಿ ಅತೀ ಕೊನೆಯ ಸ್ಥಾನದಲ್ಲಷ್ಟೇ ನಿಲ್ಲುವಷ್ಟು. ಆ ಜಗತ್ತಿನ ನಾಯಕ ಪ್ರವಾದಿ ಇಬ್ರಾಹೀಮ್(ಅ). ಅವರ ಯೋಚನೆ, ಯೋಜನೆ, ಪ್ರಯಾಣ, ವಿಶ್ವಾಸ... ಪ್ರತಿಯೊಂದರಲ್ಲೂ ಸಿದ್ಧ ಚೌಕಟ್ಟನ್ನು ಒಡೆಯುವ ಹೊಸತನವಿದೆ. ಅವರು ಅಗರ್ಭ ಶ್ರೀಮಂತರಾಗಿದ್ದುಕೊಂಡು ಇರಾಕ್‍ನಿಂದ ಮಕ್ಕಾಕ್ಕೆ ಆಗಮಿಸಲಿಲ್ಲ. ತನ್ನ ಪತ್ನಿ- ಮಗನನ್ನು ಮಕ್ಕಾದಲ್ಲಿ ಕೂರಿಸಿ ಹೋಗುವಾಗ ಚೀಲ ತುಂಬ ಹಣವನ್ನು ಒಪ್ಪಿಸಿ ಹೋಗಲಿಲ್ಲ. ಸ್ವಲ್ಪ ಖರ್ಜೂರ ಮತ್ತು ಸ್ವಲ್ಪ ನೀರು ಇದ್ದ ಬಡವ. ಅವರು ಅಂದಿನ ಸುಪರಿಚಿತ ಆರಾಧನಾ ಕ್ರಮವನ್ನು ಪ್ರಶ್ನಿಸುವಾಗಲೂ ದುಡ್ಡಿದ್ದವ ಆಗಿರಲಿಲ್ಲ. ಆದರೆ ಜಗತ್ತಿನ ಸರ್ವ ಶ್ರೀಮಂತರನ್ನೂ ಮಕ್ಕಾಕ್ಕೆ ಆಕರ್ಷಿಸುವಷ್ಟು ಮತ್ತು ಆ ಆಕರ್ಷಣೆ ಕಡ್ಡಾಯವಾಗುವಷ್ಟು ಅಪೂರ್ವ ವ್ಯಕ್ತಿತ್ವ ಅವರೊಳಗಿತ್ತು. ಅವರು ಆ ವರೆಗಿನ ಅಲೋಚನಾ ಪದ್ಧತಿಯನ್ನೇ ಒಡೆದರು. ಅವರು ಚರ್ಚಿಸಿದ್ದು ಅಲ್ಲಾಹನನ್ನೇ ಆಗಿದ್ದರೂ ಅವರು ಆ ಅಲ್ಲಾಹನನ್ನು ಚರ್ಚಿಸಿದ ವಿಧಾನ ತೀರಾ ನವೀನವಾದದ್ದು. ಸೂರ್ಯ, ಚಂದ್ರ, ನಕ್ಷತ್ರಗಳ ಕುರಿತಂತೆ ಅವರು ಆಡಿದ ಮಾತು ಮತ್ತು ಚಿಂತಿಸಿದ ವಿಧಾನ ಅತ್ಯಂತ ಜಾಣತನದ್ದು. ಅವರು ತಮ್ಮ ಬದುಕಿನುದ್ದಕ್ಕೂ ಒಂದು ವಿಶಿಷ್ಟ ಆಲೋಚನಾ ಪದ್ಧತಿ, ಧೈರ್ಯ ಮತ್ತು ಅಚಲ ಸೈದ್ಧಾಂತಿಕ ಬದ್ಧತೆಯನ್ನು ಪ್ರದರ್ಶಿಸಿದರು. ನಿಜವಾಗಿ, ಶ್ರೀಮಂತರಲ್ಲದ ಅವರು ಮತ್ತು ಅವರ ಪತ್ನಿ, ಮಗ ಜಗತ್ತಿನ ಸರ್ವ ಶ್ರೀಮಂತರಿಗೆ ಕಡ್ಡಾಯವಾಗಿರುವುದು ಈ ಎಲ್ಲ ಕಾರಣಗಳಿಂದಾಗಿ. ಒಂದು ರೀತಿಯಲ್ಲಿ, ಏಕ ಕಾಲದಲ್ಲಿ ಶ್ರೀಮಂತಿಕೆಯನ್ನು ನಗಣ್ಯಗೊಳಿಸುವುದೂ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಅಗ್ರಗಣ್ಯ ಗೊಳಿಸುವುದೂ ಇಲ್ಲಿ ನಡೆಯುತ್ತದೆ. ತನ್ನ ವಿಚಾರದ ಮೇಲೆ ಅಚಲ ವಿಶ್ವಾಸವನ್ನು ಇಟ್ಟುದುದಕ್ಕಾಗಿ ಹುಟ್ಟಿದೂರು ಉರ್‍ನಿಂದ ಹೊರಬಿದ್ದು, ಬಳಿಕ ತನ್ನ ಸುಖ, ಆನಂದ, ಖುಷಿ ಎಲ್ಲವೂ ಆಗಿರುವ ಪತ್ನಿ-ಮಗನನ್ನು ಮಕ್ಕಾದಲ್ಲಿ ಬಿಟ್ಟು ಖಾಲಿ ಕೈಯಲ್ಲಿ ಹೊರಟು ಹೋದ ಓರ್ವ ವಿಚಾರಶೀಲ ದೇವ ಪ್ರೇಮಿ ಅವರು. ಇವತ್ತಿನ ಹಾಜಿಯ ಮುಂದಿರುವ ಗಂಭೀರ ಸವಾಲು ಇದು. ತಾನು ಆ ದೇವ ಪ್ರೇಮಿ ಇಬ್ರಾಹೀಮರ(ಅ) ಎಷ್ಟು ಶೇಕಡಾ ಇದ್ದೇನೆ, ಸೈದ್ಧಾಂತಿಕ ಬದ್ಧತೆಯಲ್ಲಿ ಅವರು ಮತ್ತು ತಾನು ಎಲ್ಲೆಲ್ಲಿ ಇದ್ದೇವೆ?
     ಲಕ್ಷಾಂತರ ಖರ್ಚು ಮಾಡುವುದೊಂದೇ ಹಜ್ಜ್ ಅಲ್ಲ, ಈ ಪ್ರಶ್ನೆಗೆ ಉತ್ತರವಾಗುವುದೇ ಹಜ್ಜ್.

Sunday 4 September 2016

ನಮ್ಮೊಳಗನ್ನು ತಟ್ಟಬೇಕಾದ ಮೂರು ಚಿತ್ರಗಳು

ಗೊಟ್‍ಚಕ್ ಮತ್ತು ಅನಿತಾ ದಂಪತಿ


       ಕಳೆದವಾರ ಮಾಧ್ಯಮಗಳಲ್ಲಿ ಪ್ರಕಟವಾದ 3 ಚಿತ್ರಗಳು ಮನಸ್ಸನ್ನು ಬಿಡದೇ ಕಾಡಿದುವು. ಕಣ್ಣನ್ನು ಮಂಜಾಗಿಸಿದುವು. ಈ ಮೂರು ಚಿತ್ರಗಳಲ್ಲಿ ಒಂದು, ಒಡಿಸ್ಸಾದ ದನಾ ಮಾಂಝಿಯದು. ಇನ್ನೊಂದು, ಕೆನಡಾದ ಆರೈಕೆ ಕೇಂದ್ರ(ವೃದ್ಧಾಶ್ರಮ)ದಲ್ಲಿರುವ 83 ವರ್ಷದ ಓಫ್ರಾಂ ಗೊಟ್‍ಚಕ್ ಮತ್ತು 81 ವರ್ಷದ ಅನಿತಾ ಎಂಬ ದಂಪತಿಗಳದು. ಮತ್ತೊಂದು, ಸಿರಿಯದ ಅಲೆಪ್ಪೋದಲ್ಲಿ ಓರ್ವ ತಂದೆ ತನ್ನ ಗಾಯಗೊಂಡ ಮಗಳನ್ನು ಎತ್ತಿಕೊಂಡು ಓಡುವ ಚಿತ್ರ. ಇವು ಬರೇ ಚಿತ್ರಗಳಲ್ಲ. ನೂರಾರು ಪುಟಗಳಲ್ಲಿ ಮತ್ತು ಅಸಂಖ್ಯ ಅಕ್ಷರಗಳೊಂದಿಗೆ ಹೇಳುವ ಜೀವನ ಪಾಠದ 3 ಕೃತಿಗಳಿವು. ಯಾರಾದರೂ ಈ 3 ಚಿತ್ರಗಳನ್ನು ಜೋಡಿಸಿ ತಮ್ಮ ಪಕ್ಕದಲ್ಲೋ  ಅಲಮಾರಿನಲ್ಲೋ  ಕಚೇರಿಯಲ್ಲೋ  ಇಟ್ಟುಬಿಟ್ಟರೆ ಅದು ಅವರನ್ನು ಮನುಷ್ಯ ದ್ರೋಹಿಯಾಗುವುದರಿಂದ ಸದಾ ಕಾಪಾಡಬಹುದು.
      ಕೆನಡದ ಆರೈಕೆ ಕೇಂದ್ರದಲ್ಲಿ ಪರಸ್ಪರ ಭೇಟಿಯಾದ ಗೊಟ್‍ಚಕ್ ಮತ್ತು ಅನಿತಾ ದಂಪತಿಗಳ ಚಿತ್ರವನ್ನು ಅವರ ಮೊಮ್ಮಗಳು ಆ್ಯಶ್ಲೆ ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಆ್ಯಶ್ಲೆಯ ಅಜ್ಜ ಗೊಟ್‍ಚಕ್‍ರಿಗೆ ಮರೆವು ರೋಗವಿತ್ತು. ಅಜ್ಜಿ ಅನಿತಾ ವಯೋವೃದ್ಧರಾದುದರಿಂದ ಪತಿಯ ಆರೈಕೆ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ಇವರ ಮಗಳು ಅಥವಾ ಆ್ಯಶ್ಲೆಯ ತಾಯಿ ಡಯಾನ ರಿಗೂ ಇತ್ತೀಚೆಗೆ ಹೃದಯ ಸಂಬಂಧಿ ಚಿಕಿತ್ಸೆ ನಡೆದಿತ್ತು. ಹೀಗೆ ಗೊಟ್‍ಚಕ್ ಅನಿವಾರ್ಯವಾಗಿ 8 ತಿಂಗಳ ಹಿಂದೆ ಕಳೆದ ಜನವರಿಯಲ್ಲಿ ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಂಡರು. ಇದಾಗಿ ನಾಲ್ಕು ತಿಂಗಳಾದ ಬಳಿಕ ಅನಿತಾರ ಆರೋಗ್ಯವೂ ಕೈಕೊಟ್ಟಿತು. ಆದರೆ ಅವರಿಗೆ ಪತಿ ಗೊಟ್‍ಚಕ್‍ರ ಆರೈಕೆ ಕೇಂದ್ರದಲ್ಲಿ ಸ್ಥಳಾವಕಾಶ ಅಲಭ್ಯವಾದುದರಿಂದಾಗಿ ಸುಮಾರು 30 ಕಿ.ವಿೂ. ದೂರದ ಇನ್ನೊಂದು ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಳಿಸಬೇಕಾಯಿತು. ಇದು ಅವರಿಬ್ಬರ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ವಾರದಲ್ಲಿ ಒಂದು ಬಾರಿ ಮಾತ್ರ ಭೇಟಿಯಾಗಬಹುದಾದ ಆ ವಾತಾವರಣದಿಂದ ಅವರಿಬ್ಬರೂ ತೀವ್ರ ನೊಂದರು. ಅವರ ಮಗಳು ಮತ್ತು ಮೊಮ್ಮಗಳು ಸೇರಿಕೊಂಡು ವಾರದಲ್ಲೊಮ್ಮೆ ಗೊಟ್‍ಚಾಕ್‍ರನ್ನು ಅನಿತಾರ ಹತ್ತಿರ ತರುತ್ತಾರೆ. ಅವರು ಭೇಟಿಯಾಗುತ್ತಾರೆ. ಮಾತುಕತೆಯಾಗುತ್ತದೆ. ಹೀಗೆ ಮಾತುಕತೆಯಲ್ಲಿ ಏರ್ಪಟ್ಟಾಗ ಆ್ಯಶ್ಲೆ ಕ್ಲಿಕ್ಕಿಸಿದ ಆ ಚಿತ್ರ ಫೇಸ್ ಬುಕ್‍ನಲ್ಲಿ ಸಾವಿರಾರು ಬಾರಿ ಶೇರ್ ಆಯಿತು. ಅಸಂಖ್ಯ ಮಂದಿ ಪ್ರತಿಕ್ರಿಯಿಸಿದರು. ಗಡಿ, ಭಾಷೆ, ಧರ್ಮ, ಚರ್ಮಗಳ ಹಂಗಿಲ್ಲದೇ ಜನರು ಆ ಚಿತ್ರಕ್ಕಾಗಿ ಮರುಗಿದರು. ಭೇಟಿಯಾಗಿ ಪರಸ್ಪರ ಬೇರ್ಪಡಲೆಬೇಕಾದ ಸಂದರ್ಭ ಬಂದಾಗ ಆ ದಂಪತಿಗಳಿಬ್ಬರೂ ಒದ್ದೆ ಕಣ್ಣನ್ನು ಒರೆಸಿಕೊಳ್ಳುವ ಚಿತ್ರ ಅದು. ಈ ಇಳಿ ವಯಸ್ಸಲ್ಲೂ ತನ್ನ ಪತ್ನಿಯನ್ನು ಪುಟ್ಟ ಮೊಲವೇ ಎಂದು ಕರೆಯುವಷ್ಟು ಪ್ರೇಮಮಯಿ ಆ ಅಜ್ಜ. ಪ್ರತಿ ವಾರವೂ ಅವರಿಬ್ಬರೂ ಮಾತುಕತೆಯಾಡುತ್ತಾರೆ. ಬೇರ್ಪಡುವಾಗ ಕಣ್ಣೀರಿಳಿಸುತ್ತಾರೆ. ಈ ಚಿತ್ರದಿಂದ ಜಗತ್ತು ಎಷ್ಟು ಪ್ರಭಾವಿತವಾಯಿತು ಎಂದರೆ, ಅವರಿಬ್ಬರನ್ನೂ ಒಟ್ಟಿಗೆ ಇರಿಸುವಂತೆ ಆ ಆರೈಕೆ ಕೇಂದ್ರವನ್ನು ನಡೆಸುತ್ತಿರುವ ಸಂಸ್ಥೆಯೊಂದಿಗೆ ಕೇಳಿಕೊಂಡಿತು.
ಸಿರಿಯದ ತಂದೆ ಮತ್ತು ಮಗಳು
      ಇನ್ನೊಂದು ಚಿತ್ರ, ಸಿರಿಯದ ತಂದೆ ಮತ್ತು ಮಗಳದ್ದು. ಅಮೇರಿಕ, ಟರ್ಕಿ, ರಶ್ಯಾ ಮತ್ತು ಸಿರಿಯಾಗಳು ಸುರಿಸುವ ಬಾಂಬುಗಳಿಗೆ ಸಿಕ್ಕ ಮಗಳನ್ನು ಓರ್ವ ಅಪ್ಪ ಎತ್ತಿಕೊಂಡು ಓಡುವ ದೃಶ್ಯ. ವಿವರಣೆಯ ಅಗತ್ಯವೇ ಇಲ್ಲದಷ್ಟು ಆ ಚಿತ್ರ ಹೃದಯವನ್ನು ತಟ್ಟುತ್ತದೆ. 5 ವರ್ಷಗಳ ಹಿಂದೆ ಸಿರಿಯನ್ನರು ಇಂಥದ್ದೊಂದು  ಪಟವನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ  ಇವತ್ತು ಅವರೇ ಇಂಥ ಹೃದಯ ವಿದ್ರಾವಕ ಪಟಕ್ಕೆ ಪಾತ್ರವಾಗುತ್ತಿದ್ದಾರೆ.
      ಮೂರನೆಯದು, ಒಡಿಸ್ಸಾದ ದನಾ ಮಾಂಜಿಯದು. ಪತ್ನಿಯ ಶವವನ್ನು ಹೊತ್ತುಕೊಂಡು ನಡೆವ ಆತನ ಪಕ್ಕವೇ ಕೈ ಚೀಲವನ್ನು ಹಿಡಿದುಕೊಂಡು ಹಿಂಬಾಲಿಸುವ ಆತನ ಮಗಳು. ಸಾವು ಎಂಬುದೇ ಭಾವುಕ. ಇಂಥದ್ದರಲ್ಲಿ ಈ ದೃಶ್ಯವನ್ನು ನಾವು ಹೇಗೆ ವಿಶ್ಲೇಷಿಸಬಹುದು? ಶವಕ್ಕೆ ಸಂಬಂಧವೇ ಇಲ್ಲದ ಅಜ್ಞಾತ ವ್ಯಕ್ತಿಯೊಬ್ಬ ಶವ ಸಾಗಿಸುವುದಕ್ಕೂ ಸ್ವತಃ ಪತಿ ಮತ್ತು ಮಗಳು ಒಂದು ಹೊರೆಯಂತೆ ಹೊತ್ತುಕೊಂಡು ಸಾಗುವುದಕ್ಕೂ ನಡುವೆ ಇರುವ ಅಂತರವೇನು? ಆ ತಂದೆ ಮತ್ತು ಮಗಳು ಆ ಸಂದರ್ಭದಲ್ಲಿ ಅನುಭವಿಸಿರಬಹುದಾದ ನೋವು ಏನಿದ್ದೀತು? ತನ್ನ ತಾಯಿಯನ್ನು ಗೌರವಯುತವಾಗಿ ಮಣ್ಣು ಮಾಡುವುದಕ್ಕೆ ಈ 125 ಕೋಟಿ ಜನಸಂಖ್ಯೆಯಲ್ಲಿ ಒಂದು ನರಪಿಳ್ಳೆಯೂ ಇಲ್ಲವಲ್ಲ ಎಂಬುದು ಆ ಮಗುವನ್ನು ಹೇಗೆಲ್ಲ ಕಾಡಿರಬಹುದು?
ಕಣ್ಣೀರಿಳಿಸುವ ದಂಪತಿ, ತಾಯಿಯ ಮೃತದೇಹದ ಜೊತೆಗೆ ಕಣ್ಣೀರಿಳಿಸುತ್ತಾ ನಡೆಯುವ ಮಗಳು ಮತ್ತು ತನ್ನ ಮಗಳನ್ನು ಎತ್ತಿಕೊಂಡು ಓಡುವ ಅಪ್ಪ.. ಈ ಮೂರನ್ನೂ ನಾವು ಬರೇ ಬಿಡಿ ಚಿತ್ರಗಳಾಗಿಯಷ್ಟೇ ಕಾಣಬೇಕಿಲ್ಲ. ಇವು ನಾವು ಬದುಕುವ ಸಮಾಜದ ಪ್ರತಿಬಿಂಬಗಳು. ನಾವು ಏನಾಗಿದ್ದೇವೆ ಮತ್ತು ಏನಾಗಬೇಕಿದೆ ಎಂಬುದನ್ನು ಸೂಚ್ಯವಾಗಿ ಹೇಳುವ
ದನಾ ಮಾಂಝಿ
ದೃಶ್ಯಕಾವ್ಯಗಳು. ನಮ್ಮ ಮನುಷ್ಯ ದ್ರೋಹಿ, ಜೀವ ವಿರೋಧಿ ನಿಲುವುಗಳನ್ನು ತತ್ತರಗೊಳಿಸುವುದಕ್ಕೆ ಈ ಮೂರು ಚಿತ್ರಗಳು ದಾರಾಳ ಸಾಕು. ಸಿರಿಯಾದ ಆ ಅಪ್ಪ-ಮಗಳ ಜಾಗದಲ್ಲಿ ನಾವು ನಮ್ಮನ್ನೊಮ್ಮೆ ಕಲ್ಪಿಸಿಕೊಳ್ಳೋಣ. ಗೊಟ್‍ಚಾಕ್ ಮತ್ತು ಅನಿತಾರನ್ನು ಆ ಪಟದಿಂದ ಅಳಿಸಿ ಅಲ್ಲಿ ನಮ್ಮನ್ನು ಇಟ್ಟು ನೋಡೋಣ. ಮಾಂಜಿಯಂತೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಳ್ಳುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳೋಣ. ನಿಜವಾಗಿ, ಕಡಿ-ಕೊಲ್ಲು-ದ್ವೇಷಿಸು ಎಂದೆಲ್ಲಾ ವಿಭಜಿಸುವವರನ್ನು ತಲುಪಬೇಕಾದ ಚಿತ್ರಗಳಿವು. ಬದುಕು ಎಷ್ಟು ಅಶಾಶ್ವತ, ಹೃಸ್ವ ಮತ್ತು ಭಾವನಾತ್ಮಕ ಎಂಬುದನ್ನು ಇವು ಹೇಳಿಕೊಡಬಲ್ಲುದು. ಅಷ್ಟಕ್ಕೂ, ಬ್ರಿಟನ್, ಭಾರತ ಮತ್ತು ಸಿರಿಯಾಗಳು ಪರಸ್ಪರ ದೂರದೂರದ ರಾಷ್ಟ್ರಗಳಾಗಿದ್ದರೂ ಮತ್ತು ಜನರ ಬಣ್ಣ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ಅಪಾರ ವ್ಯತ್ಯಾಸಗಳಿದ್ದರೂ ಆ ಮೂರು ಚಿತ್ರಗಳು ನಮ್ಮ ಅಂತಃಕರಣವನ್ನು ಒಂದೇ ರೀತಿಯಲ್ಲಿ ತಟ್ಟುವುದಕ್ಕೆ ಮತ್ತು ಭಾವನಾತ್ಮಕವಾಗಿ ನಮ್ಮೆಲ್ಲರನ್ನೂ ಒಂದೇ ದಾರದಲ್ಲಿ ಪೋಣಿಸುವುದಕ್ಕೆ ಕಾರಣವೇನು? ನಾವು ಮನುಷ್ಯರಾಗಲು ಕೇವಲ ಇಷ್ಟು ಮತ್ತು ಇಷ್ಟೇ ಆಲೋಚಿಸಿದರೆ ದಾರಾಳ ಸಾಕು.

Friday 26 August 2016

ಕಾಶ್ಮೀರಕ್ಕೆ ಬಲೂಚಿಸ್ತಾನ ಉತ್ತರವೇ?

       ಆಗಸ್ಟ್  15ರಂದು ಕೆಂಪು ಕೋಟೆಯಿಂದ ನೀಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಬಲೂಚಿಸ್ತಾನವನ್ನು ಪ್ರಸ್ತಾಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಪ್ರಬಲ ಎದಿರೇಟನ್ನು ನೀಡಿದ್ದಾರೆ ಎಂದು ಅವರ ಬೆಂಬಲಿಗರು ಮತ್ತು ಮಾಧ್ಯಮದ ಒಂದು ವಿಭಾಗವು ಕೊಂಡಾಡುತ್ತಿರುವುದು ಪರ ವಿರುದ್ಧ ಅಭಿಪ್ರಾಯಕ್ಕೆ ಕಾರಣವಾಗಿದೆ. ಕಾಶ್ಮೀರ ಮತ್ತು ಬಲೂಚಿಸ್ತಾನ ಪರಸ್ಪರ ಹೋಲಿಕೆಗೆ ಅರ್ಹವೇ? ಎರಡೂ ಕಡೆಯ ವಾತಾವರಣ ಒಂದೇ ರೀತಿಯದೇ? ಇಂಥದ್ದೊಂದು ಹೋಲಿಕೆಯಿಂದ ಆಗಬಹುದಾದ ದೂರಗಾಮಿ ಪರಿಣಾಮಗಳೇನು? ಕಳೆದ 65-70 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಗಳಿಸಿಕೊಂಡು ಬಂದ ವಿಶ್ವಾಸ ಮತ್ತು ವರ್ಚಸ್ಸಿನ ಮೇಲೆ ಮೋದಿಯವರ `ಬಲೂಚಿಸ್ತಾನ’ ಯಾವ ಬಗೆಯ ಪರಿಣಾಮ ಬೀರಬಹುದು?
     ನಾವು ಈ ಹೋಲಿಕೆಯ ಲಾಭ-ನಷ್ಟಗಳನ್ನು ಲೆಕ್ಕ ಹಾಕುವುದಕ್ಕೆ ನೆಹರೂ, ಇಂದಿರಾ, ವಾಜಪೇಯಿ ಮತ್ತು ಮನಮೋಹನ್ ಸಿಂಗ್‍ರ ಆಡಳಿತ ಕಾಲದಲ್ಲಿ ಕಾಶ್ಮೀರಿ ಸಮಸ್ಯೆಯನ್ನು ಪರಿಹರಿಸಲು ನೀಡಲಾದ ಒತ್ತು ಮತ್ತು ಪ್ರಯತ್ನದ ವಿವರಗಳನ್ನು ಇಲ್ಲಿ ಕಲೆ ಹಾಕಬೇಕಾಗಿಲ್ಲ ಅಥವಾ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟದ ರಕ್ತ ಸಿಕ್ತ ಅಧ್ಯಾಯವನ್ನು ಎಣಿಸಿ ಎಣಿಸಿ ಹೇಳಬೇಕಾಗಿಯೂ ಇಲ್ಲ. ಕೇವಲ ಕಳೆದ ಎರಡು ತಿಂಗಳಲ್ಲಿ ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಗೆ ಪಾಕಿಸ್ತಾನವು ಬರೆದಿರುವ ಕಾಶ್ಮೀರ ಸಂಬಂಧಿ ಪತ್ರಗಳೇ ಇದಕ್ಕೆ ಧಾರಾಳ ಸಾಕು. ಪಾಕಿಸ್ತಾನದ ಈ ಪತ್ರಗಳಿಗೆ ಜಗತ್ತಿನ ಯಾವ ರಾಷ್ಟ್ರವೂ ತನ್ನ ಬೆಂಬಲವನ್ನು ವ್ಯಕ್ತಪಡಿಸಿಲ್ಲ. ನರೇಂದ್ರ ಮೋದಿಯವರು ಬಲೂಚಿಸ್ತಾನವನ್ನು ಪ್ರಸ್ತಾಪ ಮಾಡಿದ ಈ ಹೊತ್ತಿನ ವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತೀರಾ ತೀರಾ ಒಂಟಿ. ಇದು ಸಾಧ್ಯವಾಗಿರುವುದು ನರೇಂದ್ರ ಮೋದಿಯವರಿಂದಲ್ಲ. ಈ ದೇಶವನ್ನು ಈ ಮೊದಲು ಆಳಿದ ಪ್ರಧಾನಿಗಳ ದೂರದೃಷ್ಟಿ ಮತ್ತು ಚತುರ ವಿದೇಶ ನೀತಿಯಿಂದ. ಕಾಶ್ಮೀರವನ್ನು ಭಾರತದ ಭಾಗವಾಗಿ ಜಗತ್ತಿಗೆ ಮನದಟ್ಟು ಮಾಡುವುದಕ್ಕೆ ಅವರೆಲ್ಲ ಅತ್ಯಂತ ಯಶಸ್ವಿಯಾಗಿದ್ದರು. ಅಪರೂಪಕ್ಕೆ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಪ್ರಸ್ತಾಪ ಎತ್ತುತ್ತಿದ್ದರೂ ಜಗತ್ತು ಅದಕ್ಕೆ ಕಿವಿಗೊಡದಷ್ಟು ಭಾರತದ ವಿದೇಶಾಂಗ ನೀತಿ ಪ್ರಭಾವಶಾಲಿಯಾಗಿತ್ತು. ಸದ್ಯ ನರೇಂದ್ರ ಮೋದಿಯವರು ಈ ಪರಂಪರೆಯಿಂದ ಹೊರಬಂದಿದ್ದಾರೆ. ಪಾಕಿಸ್ತಾನದ ಕಾಶ್ಮೀರ ಮಂತ್ರಕ್ಕೆ ಪ್ರತಿಮಂತ್ರವಾಗಿ ಅವರು ಬಲೂಚಿಸ್ತಾನವನ್ನು ಜಪಿಸಿದ್ದಾರೆ. ಬಹುಶಃ ಸ್ವಾತಂತ್ರ್ಯದ 70 ವರ್ಷಗಳಲ್ಲೇ ಭಾರತೀಯ ವಿದೇಶಾಂಗ ನೀತಿಯಲ್ಲಾದ ಬಹುದೊಡ್ಡ ಪಲ್ಲಟ ಇದು. ಇದನ್ನು ಅವರ ಬೆಂಬಲಿಗರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಪಾಕ್‍ನಿಂದ ದೇಶಭ್ರಷ್ಟರಾಗಿ ಬದುಕುತ್ತಿರುವ ಬಲೂಚಿಗಳು ಮೋದಿಯವರನ್ನು ಅಭಿನಂದಿಸಿರುವುದನ್ನು ವೈಭವೀಕರಿಸಿ ಪ್ರಸಾರ ಮಾಡುತ್ತಿದ್ದಾರೆ. ಇದಕ್ಕೆ ಹೊರತಾಗಿ ಬಲೂಚಿಸ್ತಾನಕ್ಕೂ ಕಾಶ್ಮೀರಕ್ಕೂ ನಡುವೆ ಹೋಲಿಕೆ ಸಿಂಧುವೇ ಎಂಬ ಮುಖ್ಯ ಪ್ರಶ್ನೆಯನ್ನು ಯಾರೂ ಮುನ್ನೆಲೆಗೆ ತರುತ್ತಿಲ್ಲ. ಇವತ್ತು ನರೇಂದ್ರ ಮೋದಿಯವರನ್ನು ಅಭಿನಂದಿಸಿ ಹೊರಬರುತ್ತಿರುವ ವೀಡಿಯೋ ಕ್ಲಿಪ್ಪಿಂಗ್‍ಗಳು ಮತ್ತು ಹೇಳಿಕೆಗಳೆಲ್ಲ ಪಾಕ್‍ನಲ್ಲಿ ನಿಷೇಧಕ್ಕೆ ಒಳಗಾಗಿರುವ ಬಲೂಚಿಸ್ತಾನದ ಬಲೂಚ್ ರಿಪಬ್ಲಿಕನ್ ಪಾರ್ಟಿಯ ನಾಯಕರದ್ದು ಅಥವಾ ಬೆಂಬಲಿಗರದ್ದು. ಭಯೋತ್ಪಾದನಾ ಚಟುವಟಿಕೆಯ ಆರೋಪದಲ್ಲಿ ಈ ಪಕ್ಷವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಅದರ ನಾಯಕರು ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ, ಅವರ ಮೋದಿ ಗುಣಗಾನಕ್ಕೆ ನಾವು ಹಿಗ್ಗುವುದು ಮತ್ತು ಮೋದಿಯವರ ವಿದೇಶ ನೀತಿಗೆ ಸಿಕ್ಕ ಮಾನ್ಯತೆ ಇದು ಎಂದು ಬಿಂಬಿಸಿಕೊಳ್ಳುವುದು ಎಷ್ಟು ಅಪ್ರಬುದ್ಧ ಮತ್ತು ಅಪಾಯಕಾರಿ ನಿಲುವು ಎಂದರೆ, ಇದು ಈಶಾನ್ಯ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ನಿಷೇಧಿತ ಸಂಘಟನೆಗಳ ನಾಯಕರ ಹೇಳಿಕೆಗಳನ್ನು ಪಾಕಿಸ್ತಾನ ಮೆಚ್ಚಿಕೊಂಡಂತೆ. ಮಣಿಪುರ, ಮೇಘಾಲಯ ಅಥವಾ ಒಟ್ಟು ಈಶಾನ್ಯ ಭಾರತದಲ್ಲಿ ಪ್ರತ್ಯೇಕತೆಗಾಗಿ ಸಶಸ್ತ್ರ ಹೋರಾಟಗಳು ನಡೆಯುತ್ತಿವೆ. ಒಂದಕ್ಕಿಂತ ಹೆಚ್ಚು ಸಂಘಟನೆಗಳು ನಿಷೇಧಕ್ಕೆ ಒಳಗಾಗಿವೆ. ಅದರ ನಾಯಕರು ದೇಶಭ್ರಷ್ಟರಾಗಿ ಬರ್ಮಾ, ಚೀನಾ, ಬಂಗ್ಲಾದೊಳಗೆ ಬದುಕುತ್ತಿದ್ದಾರೆ. ಬಲೂಚಿಸ್ತಾನದ ಪರಿಸ್ಥಿತಿ ಬಹುತೇಕ ಹೀಗೆಯೇ. ಆದ್ದರಿಂದ, ನರೇಂದ್ರ ಮೋದಿಯವರು ಬಲೂಚಿಸ್ತಾನವನ್ನು ಪ್ರಸ್ತಾಪಿಸುವ ಮೂಲಕ ಪಾಕ್‍ನ ಕಾಶ್ಮೀರವೆಂಬ ದುರ್ಬಲ ಅಸ್ತ್ರಕ್ಕೆ ಈಶಾನ್ಯ ರಾಜ್ಯಗಳನ್ನು ಕೊಟ್ಟುಬಿಟ್ಟು ಅವರ ಅಸ್ತ್ರವನ್ನು ಪ್ರಬಲಗೊಳಿಸುವ ಪ್ರಯತ್ನ ನಡೆಸಿದಂತಾಗಿದೆ. ನಾಳೆ ವಿಶ್ವಸಂಸ್ಥೆಯಲ್ಲಿ, ಕಾಶ್ಮೀರದ ಜೊತೆಗೇ ಈಶಾನ್ಯ ಭಾರತದಲ್ಲಾಗುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ಪಾಕ್ ಧ್ವನಿ ಎತ್ತಬಹುದು. ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಅದು ಉಲ್ಲೇಖಿಸಬಹುದು. ಆಗ ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿ ಸಂಘಟನೆಗಳು ಪಾಕಿಸ್ತಾನವನ್ನು ಅಭಿನಂದಿಸಿ ವೀಡಿಯೋ ಕ್ಲಿಪ್ಪಿಂಗ್‍ಗಳನ್ನು ಕಳುಹಿಸಬಹುದು. ಪಾಕ್‍ನ ಮಾಧ್ಯಮಗಳು ಅದನ್ನು ಪಾಕ್‍ನ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಬಿಂಬಿಸಬಹುದು. ಇದರಿಂದ ಭಾರತ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಒಂದು ಕಾಶ್ಮೀರವನ್ನು ಹಿಡಿದು ಒದ್ದಾಡುತ್ತಿರುವ ಪಾಕ್‍ನ ಕೈಗೆ ಪುಕ್ಕಟೆಯಾಗಿ ಈಶಾನ್ಯ ಭಾರತವನ್ನೇ ಕೊಡುವ ದೂರದೃಷ್ಟಿ ರಹಿತ ಉದ್ವೇಗದ ನಿಲುವು ಇದು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಲು ಮೋದಿಯವರ ಪಕ್ಷ ಚಿಂತಿಸುತ್ತಿರುವಾಗ ಪಾಕಿಸ್ತಾನವು 2009ರಲ್ಲೇ ಬಲೂಚಿಸ್ತಾನಕ್ಕೆ ಸ್ವಯಮಾಡಳಿತದ ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿದೆ. ಆದ್ದರಿಂದ, ಬಲೂಚ್‍ನಲ್ಲಿರುವಂತೆ ಕಾಶ್ಮೀರದಲ್ಲೂ ಸ್ವಯಮಾಡಳಿತಕ್ಕೆ ಅವಕಾಶ ಮಾಡಿಕೊಡಿ ಎಂದು ಕಾಶ್ಮೀರೀಗಳು ಮುಂದಿನ ದಿನಗಳಲ್ಲಿ ಒತ್ತಾಯಿಸಿದರೆ ಮೋದಿಯವರು ಏನು ಮಾಡಬಲ್ಲರು? 370ನೇ ವಿಧಿಯನ್ನೇ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಪಕ್ಷವೊಂದು ಸ್ವಯಮಾಡಳಿತ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಾಗುತ್ತದೆಯೇ? ನರೇಂದ್ರ ಮೋದಿಯವರ ಪ್ರಸ್ತಾಪವನ್ನು ಪರಿಗಣಿಸಿ ಬಲೂಚಿಸ್ತಾನದಲ್ಲಾಗುತ್ತಿರುವ  ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ವಿಶ್ವರಾಷ್ಟ್ರಗಳು ಅಧ್ಯಯನಕ್ಕೆ ಮುಂದಾದರೆ ಅದರ ಪರಿಣಾಮ ಭಾರತದ ಮೇಲೂ ಆಗದೇ? ಭಾರತವೂ ಅಂಥದ್ದೊಂದು ವಿದೇಶಿ ಹಸ್ತಕ್ಷೇಪಕ್ಕೆ ಬಾಗಿಲು ತೆರೆದು ಕೊಡಬೇಕಾದ ಅನಿವಾರ್ಯತೆಗೆ ಒಳಗಾಗದೇ? ಹಾಗಂತ,
        ಕಳೆದೆರಡು ವರ್ಷಗಳಲ್ಲಿ ನರೇಂದ್ರ ಮೋದಿಯವರು ಭಾರತ ಮತ್ತು ಪಾಕ್‍ಗಳ ನಡುವೆ ಸಂಬಂಧ ಸುಧಾರಣೆಗೆ ಪ್ರಯತ್ನಿಸಿರುವುದನ್ನು ನಾವು ತೃಣೀಕರಿಸಬೇಕಿಲ್ಲ. ತನ್ನ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೇ ಅವರು ಪಾಕ್ ಪ್ರಧಾನಿ ನವಾಝ ಶರೀಫ್‍ರನ್ನು ಆಹ್ವಾನಿಸಿದರು. ಮಾತುಕತೆಗೂ ಆಹ್ವಾನ ನೀಡಿದರು. ಪಠಾಣ್‍ಕೋಟ್ ದಾಳಿಯ ತರುವಾಯ ಪಾಕ್‍ನ ಭಯೋತ್ಪಾದನಾ ತನಿಖಾ ತಂಡಕ್ಕೆ ಪಠಾಣ್‍ಕೋಟ್‍ಗೆ ಬಂದು ತನಿಖಿಸಲು ಅವಕಾಶ ಮಾಡಿಕೊಟ್ಟರು. ಶರೀಫ್‍ರ ಹುಟ್ಟು ಹಬ್ಬದಲ್ಲಿ ದಿಢೀರ್ ಭಾಗಿಯಾದರು.. ಆದರೂ ಪಾಕ್‍ನಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ಆಕ್ರೋಶ ಅವರಲ್ಲಿದ್ದರೆ ಅದನ್ನು ಅಸಾಧು ಎನ್ನುವಂತಿಲ್ಲ. ಆದರೆ, ವಿದೇಶಾಂಗ ನೀತಿಯೆಂಬುದು ಎರಡೂವರೆ ಗಂಟೆಗಳಲ್ಲಿ ಎಲ್ಲವೂ ಮುಗಿದು ಹೋಗುವ ಸಿನಿಮಾದಂತೆ ಅಲ್ಲವಲ್ಲ. ಅದು  ಆಕ್ರೋಶಕ್ಕಿಂತ ಹೊರತಾದುದು.  ಅದು ಬುದ್ಧಿವಂತಿಕೆ, ಜಾಣತನ, ಸಂಯಮ, ಚತುರತೆಯನ್ನು ಬಯಸುತ್ತದೆ. ದೂರಗಾಮಿ ಗುರಿಯನ್ನು ಇಟ್ಟುಕೊಂಡು ಅತ್ಯಂತ ನಾಜೂಕಿನಿಂದ ನಡೆಯಬೇಕಾದ ಕ್ಷೇತ್ರ ಇದು.  ಭವಿಷ್ಯದ ಅಸಂಖ್ಯ ಗಂಟೆಗಳನ್ನು ಗಮನದಲ್ಲಿಟ್ಟು ಚಿತ್ರಕತೆ ಹೆಣೆಯಬೇಕಾದ ಕ್ಷೇತ್ರ. ಇಲ್ಲಿನ ಪ್ರತಿ ಡಯಲಾಗಿಗೂ ಎಷ್ಟು ವರ್ಷಗಳು ಕಳೆದರೂ ಪ್ರಸ್ತುತ ಅನಿಸಿಕೊಳ್ಳಬೇಕಾದ ಚರಿಷ್ಮಾ ಇರಬೇಕಾಗುತ್ತದೆ. ಹೀರೋನ (ನಾಯಕ) ಮಾತು, ಕೃತಿ, ವರ್ತನೆಗಳೂ ಅಷ್ಟೇ ಪ್ರೌಢವಾಗಿರಬೇಕಾಗುತ್ತದೆ. ವಿಷಾದ ಏನೆಂದರೆ, ನರೇಂದ್ರ ಮೋದಿಯವರಲ್ಲಿ ಆ ಹೀರೋಯಿಸಂ ಕಾಣಿಸುತ್ತಿಲ್ಲ. ಅವರಲ್ಲೀಗ ಎರಡೂವರೆ ಗಂಟೆಗಳಲ್ಲಿ ಮುಗಿಯುವ ಸಿನಿಮಾದ ಹೀರೋತನವಷ್ಟೇ ಇದೆ.

Wednesday 24 August 2016

ನಾಗರಿಕತೆ ಮತ್ತು ಅನಾಗರಿಕತೆಯ ಮುಖಾಮುಖಿ

       ಅನಾಗರಿಕತೆ ಎಂಬ ಪದದಿಂದ ‘ಅ’ವನ್ನು ಕಿತ್ತು ಹಾಕಿದರೆ ಉಳಿಯುವ ಪದದಲ್ಲಿ ಒಂದು ಸೌಖ್ಯ ಭಾವವಿದೆ. ಕಿತ್ತು ಹಾಕುವುದು ‘ಅ’ ಎಂಬ ಏಕೈಕ ಶಬ್ದವನ್ನಾದರೂ ಅದರಿಂದಾಗಿ ಒಂದು ಪದಗುಚ್ಛದಲ್ಲಿ ಆಗುವ ವ್ಯತ್ಯಾಸ ಅಪಾರವಾದುದು. ಜನರ ಗುಂಪನ್ನು ನಾವು ನಾಗರಿಕ ಮತ್ತು ಅನಾಗರಿಕ ಎಂದು ವಿಭಜಿಸುವಾಗ ಅಲ್ಲಿ ಮನುಷ್ಯರ ಎರಡು ತಂಡಗಳಷ್ಟೇ ತಯಾರಾಗುವುದಲ್ಲ. ಎರಡು ಮನಸ್ಥಿತಿಯನ್ನು ಪ್ರತಿನಿಧಿಸುವ ಎರಡು ತಂಡಗಳು ತಯಾರಾಗುತ್ತವೆ. ನಾಗರಿಕತೆ ಎಂಬುದು ಮೌಲ್ಯಗಳನ್ನು ಪ್ರತಿನಿಧಿಸುವ ಪದ. ಶಾಂತಿ, ಮಾನವೀಯತೆ, ಕರುಣೆ, ನ್ಯಾಯ, ಸತ್ಯ, ಪ್ರಾಮಾಣಿಕತೆ, ಸಹಿಷ್ಣು.. ಮುಂತಾದ ಗುಣಗಳು ತುಂಬಿ ತುಳುಕುವ ಒಂದು ಸಾಮಾಜಿಕ ಜೀವನ ವಿಧಾನದ ಗುರುತು ಇದು. ಅನಾಗರಿಕತೆ ಈ ಎಲ್ಲವುಗಳ ವಿರೋಧಿ. ಅದು ಅಶಾಂತವಾಗಿರುತ್ತದೆ, ಅಮಾನವೀಯವಾಗಿರುತ್ತದೆ, ಅಸಹಿಷ್ಣುವಾಗಿರುತ್ತದೆ. ಇನ್ನೊಂದು ಆಗಸ್ಟ್ 15 ಈ ದೇಶಕ್ಕೆ ವಿದಾಯ ಕೋರುತ್ತಿರುವ ಈ ಹೊತ್ತಿನಲ್ಲಿ, ಅನಾಗರಿಕತೆ ಮತ್ತು ನಾಗರಿಕತೆಯನ್ನು ಮುಖಾಮುಖಿಯಾಗಿಸಿ ನಾವು ವಿಶ್ಲೇಷಿಸಬೇಕಾಗಿದೆ. ಅಷ್ಟಕ್ಕೂ, ಒಂದು ದೇಶ ಸಂಪೂರ್ಣ ನಾಗರಿಕ ಗುಣಗಳಿಂದ ಮಾತ್ರವೇ ತುಂಬಿ ತುಳುಕುತ್ತಿರುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲೆಲ್ಲೂ ಶಾಂತಿ, ಎಲ್ಲೆಲ್ಲೂ ಮಾನವೀಯತೆ ಎಂಬಂತಹ ವಾತಾವರಣ ಮಾತ್ರವೇ ನೆಲೆಸಿರುವ ಭೂಭಾಗ ಜಗತ್ತಿನಲ್ಲಿರುವುದು ಅಸಾಧ್ಯ. ಮನುಷ್ಯರಿರುವಲ್ಲೆಲ್ಲಾ ಶಾಂತಿಯೂ ಇರುತ್ತದೆ. ಅಶಾಂತಿಯೂ ಇರುತ್ತದೆ. ಮಾನವೀಯತೆಯೂ ಇರುತ್ತದೆ. ಅಮಾನವೀಯತೆಯೂ ಇರುತ್ತದೆ. ಆದರೆ ಯಾವ ಹಂತದಲ್ಲೂ ಅಮಾನವೀಯತೆ ವಿಜ್ರಂಭಿಸುವುದನ್ನು ಮತ್ತು ಅದು ಪ್ರಾಬಲ್ಯ ಸಾಧಿಸುವುದನ್ನು ನಾಗರಿಕ ಸಮಾಜ ಇಷ್ಟಪಡುವುದಿಲ್ಲ. 28ನೇ ವರ್ಷದಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವ ಮೊದಲು ಇರೋಮ್ ಶರ್ಮಿಳಾರ ಮುಂದೆ ಎರಡು ಆಯ್ಕೆಗಳಿದ್ದುವು. ಒಂದು, ಭೂಗತವಾಗಿದ್ದುಕೊಂಡು, ನಾಗರಿಕ ಸಮಾಜ ಒಪ್ಪಿಕೊಂಡಿರುವ ಎಲ್ಲ ಹೋರಾಟ ಮಾದರಿಗಳನ್ನೂ ತಿರಸ್ಕರಿಸಿ ಗೆರಿಲ್ಲಾ ಮಾರ್ಗವನ್ನು ಆಯ್ದುಕೊಳ್ಳುವುದು. ಇನ್ನೊಂದು, ಅನಾಗರಿಕ ಅನ್ನಬಹುದಾದ ಎಲ್ಲ ಹೋರಾಟ ದಾರಿಗಳಿಂದಲೂ ದೂರ ಇದ್ದುಕೊಂಡು ನ್ಯಾಯಯುತ ಹೋರಾಟ ಮಾದರಿಯನ್ನು ಆಯ್ಕೆ ಮಾಡುವುದು. 16 ವರ್ಷಗಳ ಕಾಲ ಸತತ ಉಪವಾಸ ಸತ್ಯಾಗ್ರಹದಿಂದ ಇದೀಗ ಇರೋಮ್ ಹೊರಬಂದರೂ ಆಕೆ ಇವತ್ತು ಸರ್ವರ ಗೌರವಕ್ಕೆ ಪಾತ್ರವಾಗಿರುವುದೇ ಆಕೆಯ ವಿಧಾನ ಎಷ್ಟು ಮಾನವೀಯವಾದುದು ಎಂಬುದಕ್ಕೆ ಸ್ಪಷ್ಟ ಪುರಾವೆ. ಇದಕ್ಕೆ ತೀರಾ ವಿರುದ್ಧವಾದ ಹೋರಾಟ ಮಾದರಿಯನ್ನು ನಾವು ಗುಜರಾತ್‍ನ ಉನಾದಲ್ಲಿ ಕಂಡಿದ್ದೇವೆ. ದಲಿತರನ್ನು ಬೆತ್ತಲೆಗೊಳಿಸಿ ಥಳಿಸಿದವರು ಅವನ್ನು ಒಂದು ಹೋರಾಟ ಮಾದರಿಯಾಗಿ ಬಿಂಬಿಸುತ್ತಾರೆ. ಕೇವಲ ಉನಾದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶದ ದಾದ್ರಿಯಲ್ಲಿ, ಕರ್ನಾಟಕದ ಕರಾವಳಿ ಭಾಗಗಳಲ್ಲಿ, ಮಧ್ಯ ಪ್ರದೇಶದಲ್ಲಿ, ದೆಹಲಿಯಲ್ಲಿ.. ಸಹಿತ ಎಲ್ಲೆಡೆಯೂ ಅವರು ಇದೇ ಮಾದರಿಯನ್ನು ತಮ್ಮ ಐಡೆಂಟಿಟಿಯಾಗಿ ಬಿಂಬಿಸುತ್ತಲೂ ಇದ್ದಾರೆ. ಆದ್ದರಿಂದಲೇ, ಇವೆರಡೂ ಮುಖಾಮುಖಿ ವಿಶ್ಲೇಷಣೆಗೆ ಒಳಪಡಬೇಕೆಂದು ಬಯಸುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪುತ್ರ ವಿಯೋಗವಾದುದನ್ನು ಸಂಭ್ರಮಿಸಿದ ಮಂದಿ ಕೂಡ ಇದೇ ‘ಥಳಿಸುವ’ ಗುಂಪಿನ ಬೆಂಬಲಿಗರಾಗಿದ್ದಾರೆ. ಸಾಹಿತಿಗಳಾದ ಅನಂತಮೂರ್ತಿ ಮತ್ತು ಕಲ್ಬುರ್ಗಿಯವರ ಸಾವಿಗೂ ಸಂಭ್ರಮಿಸಿದ್ದು ಇದೇ ಮನಸ್ಥಿತಿ. ಅಷ್ಟಕ್ಕೂ, ಸಾವನ್ನು ಆನಂದಿಸುವಂತಹ ಈ ಮನಸ್ಥಿತಿಯ ಹುಟ್ಟು ಎಲ್ಲಿ? ನಾಗರಿಕ ಸಮಾಜದ ಪಾಲಿಗೆ ಆ ಮನಸ್ಥಿತಿ ಎಲ್ಲಿಯವರೆಗೆ ಸಹ್ಯ? ವಿಷಾದ ಏನೆಂದರೆ, ಇಂಥ ಮನಸ್ಥಿತಿಯ ಹುಟ್ಟು ಅಲ್ಲ, ಆ ಮನಸ್ಥಿತಿಯನ್ನು ಪೋಷಿಸಿ ಬೆಳೆಸುವವರು ಈ ನಾಗರಿಕ ಸಮಾಜದಲ್ಲಿ ನಾಗರಿಕತೆಯ ಪೋಷಾಕಿನಲ್ಲೇ ಬದುಕುತ್ತಿದ್ದಾರೆ ಎಂಬುದು. 120 ಕೋಟಿ ಜನಸಂಖ್ಯೆಯಲ್ಲಿ ಸರ್ವರೂ ಶಾಂತಿ ಮತ್ತು ಮಾನವೀಯತೆಯ ಕಟ್ಟಾಳುವಾಗಿರುತ್ತಾರೆ ಎಂದು ನಿರೀಕ್ಷಿಸುವುದು ಬಾಲಿಶ. ಆದರೆ ಶಾಂತಿ ಮತ್ತು ಮಾನವೀಯ ಗುಣಗಳನ್ನು ಪ್ರೀತಿಸುವ ಸಮಾಜದ ಲಕ್ಷಣ ಏನೆಂದರೆ, ಅಮಾನವೀಯವಾದುದನ್ನು ಲಾಭ-ನಷ್ಟಗಳ ತಕ್ಕಡಿಯಲ್ಲಿಟ್ಟು ನೋಡದೇ ವಿರೋಧಿಸುವುದು. ಈ ಪ್ರಕ್ರಿಯೆ ಜೀವಂತವಾಗಿರುವಷ್ಟು ದಿನ ಸಮಾಜದಲ್ಲಿ ಅನಾಗರಿಕರು ಪ್ರಾಬಲ್ಯ ಪಡೆಯುವುದಕ್ಕೆ ಸಾಧ್ಯವಿಲ್ಲ. ಸಿದ್ಧರಾಮಯ್ಯನವರ ಮಗನ ಸಾವನ್ನು ಆನಂದಿಸಿದವರು ತಮ್ಮ ಕೃತ್ಯಕ್ಕೆ ಸ್ವತಃ ನಾಚಿಕೊಳ್ಳುವಂತಹ ವಾತಾವರಣ ಯಾಕೆ ನಿರ್ಮಾಣವಾಯಿತೆಂದರೆ, ನಾಗರಿಕ ಸಮಾಜದಲ್ಲಿ ಆ ಮನಸ್ಥಿತಿಗೆ ತೀವ್ರ ಖಂಡನೆ ವ್ಯಕ್ತವಾದುದರಿಂದ. ಪಕ್ಷ-ಬೇಧ ಮರೆತು ರಾಜಕೀಯ ನಾಯಕರು ಸಿದ್ಧರಾಮಯ್ಯನವರ ನೋವಿನಲ್ಲಿ ಭಾಗಿಯಾದುದರಿಂದ. ಇದು ಅನಾಗರಿಕ ಮನಸ್ಥಿತಿಗೆ ಸಡ್ಡು ಹೊಡೆವ ಪ್ರತಿಕ್ರಿಯೆ. ಸಿದ್ಧರಾಮಯ್ಯರನ್ನು ಆಲಿಂಗಿಸಿಕೊಂಡು ಡಿ.ವಿ. ಸದಾನಂದ ಗೌಡ ಹರಿಸಿದ ಕಣ್ಣೀರು  ಅತ್ಯಂತ ಪ್ರಬಲ ಸಂದೇಶವನ್ನು ರವಾನಿಸಿತು. ಆನಂದಿಸಿದವರು ಸ್ವತಃ ಆ ಸಂದೇಶಕ್ಕೆ ತತ್ತರಿಸಿ ಹೋದರು. ಇಂಥ ಪ್ರಕ್ರಿಯೆ ಪ್ರಾಬಲ್ಯಕ್ಕೆ ಬರುತ್ತಿರುವಷ್ಟು ದಿನ ಯಾವ ಅನಾಗರಿಕತೆಯೂ ಸಾಮಾಜಿಕ ಮನ್ನಣೆ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಉನಾ ಆಗಲಿ ದಾದ್ರಿ ಆಗಲಿ ಎಲ್ಲವೂ ಇವತ್ತು ಸಾಧ್ಯ ಆಗಿರುವುದರ ಹಿಂದೆ ನಮ್ಮನ್ನಾಳುವವರ ಮೌನಕ್ಕೆ ಪಾತ್ರ ಇದೆ. ಅವರ ಕುಮ್ಮಕ್ಕಿಗೆ ಪಾಲು ಇದೆ.
       ನಾಗರಿಕತೆ ಮತ್ತು ಅನಾಗರಿಕತೆಯ ನಡುವಿನ ವ್ಯತ್ಯಾಸದ ಗೆರೆಯನ್ನು ತೀರಾ ತೀರಾ ತೆಳುವಾಗಿಸುವ ಪೀಳಿಗೆಯೊಂದರ ಬಗ್ಗೆ ಆಗಸ್ಟ್ 15ರ ನಂತರ ಭಾರತ ಗಂಭೀರವಾಗಿ ಆಲೋಚಿಸಬೇಕು. ಒಂದು ದೇಶದ ಐಡೆಂಟಿಟಿಯು ಆ ದೇಶದಲ್ಲಿ ಅಸ್ತ್ತಿತ್ವದಲ್ಲಿರುವ ಶಾಂತಿ ಮತ್ತು ಮಾನವೀಯತೆಯನ್ನು ಆಧಾರವಾಗಿಸಿಕೊಂಡಿರುತ್ತದೆ. ದೇಶ ಎಷ್ಟೇ ದೊಡ್ಡದಿರಲಿ ಮತ್ತು ಜನಸಂಖ್ಯೆ ಎಷ್ಟೇ ಕೋಟಿಗಳ ಲೆಕ್ಕದಲ್ಲಿರಲಿ, ಅವೆಲ್ಲವನ್ನೂ ನಕಾರಾತ್ಮಕಗೊಳಿಸುವುದಕ್ಕೆ ಒಂದು ಉನಾ, ಒಂದು ದಾದ್ರಿ ಧಾರಾಳ ಸಾಕು. ಈ ದೇಶದಲ್ಲಂತೂ ಉನಾದಂತಹ ಘಟನೆ ಮಾಮೂಲಿ ಪಟ್ಟಿಯನ್ನು ಸೇರುವಷ್ಟು ಪರಿಚಿತವೆನಿಸಿಕೊಳ್ಳುತ್ತಿದೆ. ದಲಿತರು, ಮುಸ್ಲಿಮರು ಮತ್ತು ದುರ್ಬಲ ವರ್ಗದವರು ಪದೇ ಪದೇ ಆಹಾರ, ಮೈಬಣ್ಣ, ಜಾತಿ, ಆಚಾರಗಳ ನೆಪದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಸಮಾಜದಿಂದ ಶಾಂತಿ ಮರೆಯಾಗುತ್ತಿದೆ. ನಗರಗಳು, ಗ್ರಾಮಗಳು, ಹಳ್ಳಿಗಳೆಲ್ಲ ಅಮಾನವೀಯ ಕೃತ್ಯಗಳಿಗೆ ಸಾಕ್ಷಿಯಾಗುತ್ತಿವೆ. ಸೆಗಣಿ ತಿನ್ನಿಸುವವರು, ಥಳಿಸುವವರು ಮತ್ತು ಜಾತಿಯ ಕಾರಣಕ್ಕಾಗಿಯೇ ದೇವಾಲಯಗಳಿಂದ ಹೊರ ದಬ್ಬುವವರು ಹೆಚ್ಚುತ್ತಿದ್ದಾರೆ. ಒಂದು ದೇಶದ ಪಾಲಿಗೆ ಇದು ಅತ್ಯಂತ ಹೀನ ಕೃತ್ಯ. ಇದು ಬದಲಾಗಬೇಕು. ಈ ವಾತಾವರಣಕ್ಕೆ ತಡೆ ಬೀಳದೇ ಹೋದರೆ ಇದನ್ನೇ ನೋಡಿಕೊಂಡು ಬೆಳೆಯುವ ಪೀಳಿಗೆಯೊಂದು ಮುಂದೆ ಇದನ್ನೇ ನಾಗರಿಕತೆಯಾಗಿ ಪರಿಭಾವಿಸುವುದಕ್ಕೆ ಅವಕಾಶವಾಗುತ್ತದೆ. ಶಾಂತ ಮತ್ತು ಮಾನವೀಯ ಸಮಾಜದ ನಿರ್ಮಾಣ ಯಾವುದಾದರೊಂದು ನಿರ್ದಿಷ್ಟ ಧರ್ಮ-ಜಾತಿ-ಪಂಗಡದ ಬಯಕೆಯಲ್ಲ, ಅದು ಎಲ್ಲರ ಅಗತ್ಯ.
ಆದ್ದರಿಂದ ಅಂಥದ್ದೊಂದು ಸುಖೀ ಭಾವದ ಸಮಾಜದ ಕಟ್ಟುವಲ್ಲಿ ವ್ಯವಸ್ಥೆ ಮುತುವರ್ಜಿ ತೋರಬೇಕು. ಅನಾಗರಿಕರನ್ನು ಮತ್ತು ಅಮಾನವೀಯತೆಯ ಪ್ರತಿಪಾದಕರನ್ನು ದುರ್ಬಲಗೊಳಿಸಬೇಕು. ಕಾನೂನು ಪ್ರಾಬಲ್ಯಕ್ಕೆ ಬರಲಿ. ಶಾಂತಿ-ಮಾನವೀಯತೆ ನೆಲೆಗೊಳ್ಳಲಿ.