Thursday 18 February 2016

ಹೆಡ್ಲಿ ವಿಚಾರಣೆ ಮತ್ತು ಕಾಡುವ ಸಂದೇಹಗಳು

       ಡೇವಿಡ್ ಹೆಡ್ಲಿ ಎಂಬುದು ಅಮೇರಿಕದ ಇನ್ನೊಂದು ಹೆಸರೋ ಎಂದು ಸಂದೇಹಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ. 2008 ನವೆಂಬರ್ 26ರಂದು (26/11) ಮುಂಬೈಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಅತಿ ಪ್ರಮುಖ ಆರೋಪಿಯಾಗಿದ್ದಾನೆ ಹೆಡ್ಲಿ. ಆತ ಸದ್ಯ ಅಮೇರಿಕದ ಜೈಲಲ್ಲಿದ್ದಾನೆ. ಅಲ್ಲಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈಯ ಟಾಡಾ ಹೈಕೋರ್ಟ್‍ನ ವಿಚಾರಣೆಗೆ ಒಳಗಾಗಿದ್ದಾನೆ. ದಂಗುಬಡಿಸುವ ಸಾಕ್ಷ್ಯಗಳನ್ನು ನೀಡಿದ್ದಾನೆ. ಆ ಸಾಕ್ಷ್ಯಗಳು ಎಷ್ಟು ಪ್ರಬಲವಾಗಿವೆ ಎಂದರೆ, ಯಾರೇ ಆಗಲಿ ಪಾಕಿಸ್ತಾನದೊಂದಿಗೆ ಸಂಬಂಧ ಸ್ಥಾಪಿಸುವ ಮೊದಲು ಎರಡೆರಡು ಬಾರಿ ಆಲೋಚಿಸುವಷ್ಟು. ಮುಂಬೈ ದಾಳಿಯನ್ನು ಪ್ರಾಯೋಜಿಸಿದ್ದೇ ಪಾಕಿಸ್ತಾನ ಎಂದಾತ ಹೇಳಿದ್ದಾನೆ. ಐಎಸ್‍ಐ, ಲಖ್ವಿ, ಹಫೀಝï, ಸಾಜಿದ್ ಮೀರ್, ಲಷ್ಕರೆ ತ್ವಯ್ಯಿಬ.. ಮುಂತಾದುವುಗಳ ಜೊತೆಗೆ ತನಗಿದ್ದ ನಿಕಟ ಸಂಬಂಧ ಮತ್ತು ಇವರಿಗೂ ಪಾಕ್ ಆಡಳಿತಕ್ಕೂ ನಡುವೆ ಇದ್ದ ನಂಟನ್ನು ವಿವರಿಸಿದ್ದಾನೆ. ಹೀಗೆ, 160 ಮಂದಿಯನ್ನು ಬಲಿ ಪಡೆದ ಭಯಾನಕ ಭಯೋತ್ಪಾದನಾ ಕೃತ್ಯವೊಂದರ ಮೂಲವು ಪಾಕಿಸ್ತಾನದಲ್ಲಿದೆ ಎಂದು ಅಮೇರಿಕನ್ ಜೈಲಲ್ಲಿರುವ ಅಮೇರಿಕನ್ ಪ್ರಜೆಯೊಬ್ಬ ಸಾಕ್ಷ್ಯ ನುಡಿದ ಬೆನ್ನಿಗೇ ಅಮೇರಿಕವು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಯಂತ್ರಗಳೂ ಸೇರಿದಂತೆ 700 ಮಿಲಿಯನ್ ಡಾಲರ್ ಮೌಲ್ಯದ ಯುದ್ಧೋಪಕರಣಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಸಿದ್ಧವಾಗಿದೆ. ಇದರಲ್ಲಿ ಎಫ್-16 ಮಾದರಿಯ ಯುದ್ಧ ವಿಮಾನಗಳೂ ಸೇರಿವೆ. ಏನಿದರ ಅರ್ಥ? ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಝುವೇಲಾಗಳು ಒಂದಲ್ಲ ಒಂದು ರೀತಿಯಲ್ಲಿ ಅಮೇರಿಕದ ದಿಗ್ಬಂಧನಗಳಿಗೆ ಒಳಗಾಗುತ್ತಿರುವ ಈ ದಿನಗಳಲ್ಲಿ ಪಾಕಿಸ್ತಾನವು ಪುರಸ್ಕಾರಕ್ಕೆ ಒಳಗಾಗುವುದು ಯಾವುದರ ಕಾರಣದಿಂದ? ಭಾರತದ ವಿದೇಶಾಂಗ ನೀತಿಯ ವೈಫಲ್ಯಕ್ಕೆ ಇದರಲ್ಲಿ ಎಷ್ಟಂಶ ಪಾಲಿದೆ? ಕಾಂಗ್ರೆಸ್ ಸರಕಾರದ ಮೃದು ನೀತಿಯಿಂದಾಗಿ ಪಾಕ್ ಕೊಬ್ಬಿದೆ ಎಂದು ಹೇಳುತ್ತಿದ್ದ ಬಿಜೆಪಿಯು ಇದೀಗ ಅಧಿಕಾರದಲ್ಲಿದ್ದೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಕ್ಕೆ ಭೇಟಿ ಕೊಟ್ಟೂ ಅಮೇರಿಕದ ಈ ಧೋರಣೆಗೆ ಕಾರಣಗಳೇನು? ಬಿಜೆಪಿ ಕೂಡ ಅದೇ ಕಾಂಗ್ರೆಸ್‍ನ ವಿದೇಶಾಂಗ ನೀತಿಯನ್ನೇ ಅನುಸರಿಸುತ್ತಿದೆಯೇ ಅಥವಾ ಕಾಂಗ್ರೆಸ್‍ನ ವಿದೇಶಾಂಗ ನೀತಿಯಷ್ಟೂ ಪ್ರಭಾವ ಬೀರಲು ಬಿಜೆಪಿ ವಿಫಲವಾಗಿದೆಯೇ? ನರೇಂದ್ರ ಮೋದಿಯವರ ವಿದೇಶ ಪ್ರವಾಸವು ಒಂದು ‘ಜಾಲಿ ಟ್ರಿಪ್’ ಆಗುವುದಕ್ಕಷ್ಟೇ ಸೀಮಿತವಾಗಿದೆಯೇ? ಅಮೇರಿಕವೇಕೆ ಹೆಡ್ಲಿಯ ಸಾಕ್ಷ್ಯಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ? ಭಾರತೀಯ ಮುಖ್ಯಧಾರೆಯ ಪತ್ರಿಕೆಗಳಲ್ಲಿ ಸುಮಾರು ಒಂದು ವಾರಗಳ ತನಕ ಹೆಡ್ಲಿಯ ಸಾಕ್ಷ್ಯಗಳು ಮುಖಪುಟದಲ್ಲಿ ಪ್ರಧಾನ ಸುದ್ದಿಯಾಗಿ ಪ್ರಕಟವಾಗಿವೆ. ಆಂಗ್ಲಭಾಷೆಯ ಟಿ.ವಿ. ಮಾಧ್ಯಮಗಳು ಪ್ರೈಮ್ ಟೈಮ್‍ನಲ್ಲಿ ಈ ಸಾಕ್ಷ್ಯಗಳನ್ನೆತ್ತಿಕೊಂಡು ಒಂದಕ್ಕಿಂತ ಹೆಚ್ಚು ಬಾರಿ ಚರ್ಚಿಸಿವೆ. ಇವೆಲ್ಲ ಭಾರತದಲ್ಲಿರುವ ಅಮೇರಿಕನ್ ರಾಜತಾಂತ್ರಿಕರಿಗೆ ಮತ್ತು ಅವರ ಮೂಲಕ ಅಮೇರಿಕನ್ ಆಡಳಿತಕ್ಕೆ ತಲುಪದಿರುವುದಕ್ಕೆ ಸಾಧ್ಯವೇ ಇಲ್ಲ. ‘ಅಮೇರಿಕದ ಔಷಧ ಜಾರಿ ಸಂಸ್ಥೆಯ ಅಧಿಕಾರಿ’ ಎಂಬ ಮುಖವಾಡದಲ್ಲಿ ಹೆಡ್ಲಿಯು ಭಾರತಕ್ಕೆ ಏಳೆಂಟು ಬಾರಿ ಬಂದಿದ್ದ. ಆದರೆ ಹಾಗೆ ಬಂದ ಆತ ಮುಂಬೈ ದಾಳಿಗೆ ಬೇಕಾದ ತಯಾರಿಗಳನ್ನು ನಡೆಸಿದ್ದ. ಮಾಹಿತಿಗಳನ್ನು ಸಂಗ್ರಹಿಸಿದ್ದ. ನಕಾಶೆಗಳನ್ನು ತಯಾರಿಸಿದ್ದ. ಅಲ್ಲದೇ ಮುಂಬೈ ದಾಳಿಯ ಬಳಿಕವೂ ಆತ ಭಾರತಕ್ಕೆ ಭೇಟಿ ಕೊಟ್ಟಿದ್ದಾನೆ. ಇವೆಲ್ಲವೂ ಇದೀಗ ವಿಚಾರಣೆಯ ವೇಳೆ ಬಹಿರಂಗವಾಗಿದೆ. ಹಾಗಂತ, ಅಮೇರಿಕಕ್ಕೆ ಇವೆಲ್ಲವೂ ಗೊತ್ತಿರಲಿಲ್ಲವೇ? ತನ್ನ ಪ್ರಜೆಯೊಬ್ಬ ‘Drug Enforcement Administration Informer’ ಆಗಿ ಭಾರತಕ್ಕೆ ಪದೇ ಪದೇ ತೆರಳಿ ಏನೇನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯಲಾರದಷ್ಟು ಅಮೇರಿಕ ದುರ್ಬಲವಾಗಿತ್ತೇ? ಲಾಡೆನ್, ಅವ್ಲಾಕಿ, ಸದ್ದಾಮ್ ಹುಸೇನ್‍ರನ್ನು ಪತ್ತೆ ಹಚ್ಚುವಷ್ಟು ಅಥವಾ ಇರಾನಿನ ಅತಿ ರಹಸ್ಯ ಅಣುಸ್ಥಾವರಗಳಲ್ಲಿ ಏನೇನು ನಡೆಯುತ್ತಿವೆ ಮತ್ತು ಎಷ್ಟು ಪ್ರಮಾಣದಲ್ಲಿ ಯುರೇನಿಯಂ ಸಂವರ್ಧನೆಯ ಕಾರ್ಯ ನಡೆದಿದೆ ಎಂದೆಲ್ಲಾ ತಿಳಿದುಕೊಳ್ಳುವಷ್ಟು ಸಮರ್ಥವಾಗಿರುವ ರಾಷ್ಟ್ರವೊಂದಕ್ಕೆ ಹೆಡ್ಲಿ ಪದೇ ಪದೇ ಭಾರತ ಮತ್ತು ಪಾಕಿಸ್ತಾನಕ್ಕೆ ಯಾಕೆ ಹೋಗುತ್ತಿದ್ದಾನೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವೇ? ಅಮೇರಿಕದ ಬಗ್ಗೆ ಹೀಗೆ ಹೇಳುವುದು ಇವತ್ತಿನ ದಿನಗಳಲ್ಲಿ ಹಾಸ್ಯಾಸ್ಪದವಾದೀತು. ಒಂದೋ ಅಮೇರಿಕ ಈ ಎಲ್ಲವನ್ನೂ ಹೆಡ್ಲಿಯಿಂದ ಗೊತ್ತಿದ್ದೇ ಮಾಡಿಸಿದೆ ಅಥವಾ ವೀಡಿಯೋ ಕಾನ್ಫರೆನ್ಸ್ ನ ಮೂಲಕ ಇದೀಗ ವೈಭವೀಕೃತ ಸುಳ್ಳುಗಳನ್ನು ಹಂಚಲಾಗುತ್ತಿದೆ.
  ನಿಜವಾಗಿ, ಪಾಕಿಸ್ತಾನ ಎಂಬುದು ಭಾರತೀಯರಿಗೆ ಒಂದು ರಾಷ್ಟ್ರದ ಹೆಸರಾಗಿಯಷ್ಟೇ ಉಳಿದುಕೊಂಡಿಲ್ಲ ಎಂಬುದು ಅಮೇರಿಕಕ್ಕೆ ಚೆನ್ನಾಗಿ ಗೊತ್ತು. ಭಾರತೀಯ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ನಿರ್ಣಯಿಸುವ ಸಾಮರ್ಥ್ಯ ಪಾಕಿಸ್ತಾನ ಎಂಬ ಹೆಸರಿಗಿದೆ. ನರೇಂದ್ರ ಮೋದಿಯವರಂತೂ ‘ಪಾಕಿಸ್ತಾನ್’ನಿಂದ ಧಾರಾಳ ಫಸಲನ್ನು ಕೊಯ್ದಿದ್ದಾರೆ. ‘ಮಿಯಾಂ ಮುಷರ್ರಫ್’ ಎಂಬ ಪದಪುಂಜವನ್ನು ಅವರು ಉತ್ಪಾದಿಸಿದ್ದಾರೆ. ಗಡಿಯಲ್ಲಿ ಯೋಧರೋರ್ವರ ತಲೆ ಉರುಳಿಸಲಾದ ಘಟನೆಯನ್ನು ಮೋದಿಯವರ ಪಕ್ಷ ರಾಜಕೀಯ ಲಾಭಕ್ಕೆ ಎತ್ತಿಕೊಂಡಿತ್ತು. ಮುಂಬೈ ದಾಳಿಗೆ ಅತ್ಯಂತ ಪ್ರಚೋದನಾತ್ಮಕ ಶೈಲಿಯಲ್ಲಿ ಅದು ಪ್ರತಿಕ್ರಿಯಿಸಿತ್ತು. ಕಾಂಗ್ರೆಸ್ ಸರಕಾರವನ್ನು ‘ಷಂಡ’ ಎಂದು ಜರೆಯಲು ಆ ಘಟನೆಯನ್ನು ಅದು ಬಳಸಿಕೊಂಡಿತ್ತು. ಇಂಥ ಪಕ್ಷವೇ ಅಧಿಕಾರಕ್ಕೇರುವುದೆಂದರೆ ಒಂದು ರೀತಿಯಲ್ಲಿ ಕೆಂಡದ ಮೇಲೆ ಕಾಲಿಟ್ಟಂತೆ. ನಿರೀಕ್ಷೆಗಳ ಭಾರವೊಂದು ಆ ಸರಕಾರದ ಮೇಲಿರುತ್ತದೆ. ಈ ಕಾರಣದಿಂದಲೇ ಈಗಿನ ಬೆಳವಣಿಗೆಗಳ ಬಗ್ಗೆ ಅನುಮಾನ ಪಡಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕನ್ ಆಡಳಿತದ ಮಧ್ಯೆ ಸಹಕಾರದ ಮಾತುಕತೆಗಳೇನಾದರೂ ನಡೆದಿರಬಹುದೇ? ಮುಂಬೈ ದಾಳಿಯಲ್ಲಿ ಪಾಕ್ ಕೈವಾಡದ ಕುರಿತು ಅಮೇರಿಕದಲ್ಲಿದ್ದುಕೊಂಡೇ ಹೆಡ್ಲಿಯಿಂದ ಸಾಕ್ಷ್ಯಗಳನ್ನು ಹೇಳಿಸುವುದು ಮತ್ತು ಅದಕ್ಕೆ ಬದಲಾಗಿ ಭಾರತವು ಹೆಡ್ಲಿಗೆ ಕ್ಷಮಾದಾನ ನೀಡಿ ಆತನ ಗಡೀಪಾರಿಗೆ ಒತ್ತಾಯಿಸದಿರುವುದೂ ಈ ತಿಳುವಳಿಕೆಯಲ್ಲಿ ಸೇರಿರಬಹುದೇ? ಯಾಕೆಂದರೆ, ಹೀಗೆ ಮಾಡುವುದರಿಂದ ಅಮೇರಿಕಕ್ಕೆ ಎರಡು ರೀತಿಯ ಲಾಭಗಳಿವೆ ಮತ್ತು ನರೇಂದ್ರ ಮೋದಿಯವರಿಗೆ ಒಂದು ಲಾಭವಿದೆ. ಮೋದಿಯವರ ಲಾಭ ಏನೆಂದರೆ, ಅಮೇರಿಕದಲ್ಲಿರುವ ಮುಂಬೈ ದಾಳಿಯ ಆರೋಪಿಯನ್ನೇ ವಿಚಾರಣೆಗೊಳಪಡಿಸಿದ ಚಾಣಾಕ್ಷ ಎಂಬ ಇಮೇಜ್ ಅನ್ನು ಬೆಳೆಸಿಕೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಭಾರತದಲ್ಲಿ ಮತ್ತೊಮ್ಮೆ ಭಾವನಾತ್ಮಕ ವಾತಾವರಣವನ್ನು ಉಂಟು ಮಾಡಬಹುದು. ಹಫೀಝï ಸಈದ್, ಲಕ್ವಿ, ಹಾಮಿದ್ ಮೀರ್ ಸಹಿತ ಎಲ್ಲ ಆರೋಪಿಗಳನ್ನೂ ಭಾರತಕ್ಕೆ ಹಸ್ತಾಂತರಿಸಿ ಎಂದು ಪಾಕ್‍ಗೆ ಕರೆ ಕೊಡುತ್ತಾ ಭಾರತೀಯರ ‘ದೇಶಪ್ರೇಮ’ವನ್ನು ಬಡಿದೆಬ್ಬಿಸಬಹುದು. ಹಾಗಂತ, ಅಮೇರಿಕ ಬಯಸುವುದೂ ಇದೇ ವಾತಾವರಣವನ್ನು. ಹೆಡ್ಲಿಯಿಂದ ಸಾಕ್ಷ್ಯ ನುಡಿಸಿದರೆ ಒಂದು ಕಡೆ ಭಾರತದಲ್ಲಿ ಪಾಕ್ ವಿರೋಧಿ ಆವೇಶಗಳು ಕಾಣಿಸಿಕೊಳ್ಳುವಾಗ ಇನ್ನೊಂದು ಕಡೆ ಪಾಕ್‍ನ ಮೇಲೆಯೂ ಇದು ಒತ್ತಡವನ್ನು ಹೇರುತ್ತದೆ. ಭಾರತ ಎಲ್ಲಾದರೂ ಕಾಲು ಕೆರೆದು ಜಗಳಕ್ಕಿಳಿದರೆ ಎಂಬ ಅನುಮಾನವನ್ನು ಹುಟ್ಟಿಸುತ್ತದೆ. ಮೊದಲೇ ನರೇಂದ್ರ ಮೋದಿಯವರು ಪಾಕ್ ವಿರೋಧಿಯಾಗಿ ಗುರುತಿಸಿಕೊಂಡವರು. ಈ ಸಾಕ್ಷ್ಯದ ಕಾರಣದಿಂದಾಗಿ ಅವರು, ಅವರ ಪಕ್ಷ ಮತ್ತು ಮಾಧ್ಯಮಗಳು ಕೂಡ ಪಾಕ್‍ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬಹುದು. ಅಂಥ ಸಂದರ್ಭದಲ್ಲಿ ಪಾಕ್ ಸ್ವರಕ್ಷಣೆಯ ಬಗ್ಗೆ ಹೆಚ್ಚೆಚ್ಚು ಚಿಂತಿಸಬಹುದು. ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ಅಮೇರಿಕದೊಂದಿಗೆ ಈ ಹಿಂದೆ ನಡೆಸಲಾದ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ತುರ್ತಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವ ಒಡಂಬಡಿಕೆಯನ್ನು ಮಾಡಿಕೊಳ್ಳಲು ಅದು ಮುಂದಾಗಬಹುದು. ಬಹುಶಃ ಹೆಡ್ಲಿಯ ಸಾಕ್ಷ್ಯ ಮತ್ತು ಅದರ ಬೆನ್ನಿಗೇ ಪಾಕಿಸ್ತಾನಕ್ಕೆ ಅಮೇರಿಕದಿಂದ ಯುದ್ಧೋಪಕರಣಗಳ ಮಾರಾಟದ ಹಿಂದೆ ಇಂಥದ್ದೊಂದು ತಂತ್ರ ಇದ್ದಿರಬಹುದೇ? ಹೆಡ್ಲಿಯನ್ನು ಮುಂದಿಟ್ಟು ಭಾರತ ಮತ್ತು ಪಾಕ್‍ಗಳೆರಡನ್ನೂ ಪ್ರಚೋದಿಸಿ ಪಾಕ್‍ಗೆ ಯುದ್ಧಾಸ್ತ್ರಗಳನ್ನು ಮಾರುವ ಹಾಗೂ ಭಾರತದಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆಯಾಗದಂತೆ ಕಾಪಾಡುವ ಹುನ್ನಾರ ಇದರ ಹಿಂದಿರಬಹುದೇ? ಅಮೇರಿಕದ ನರಿಬುದ್ಧಿಯ ಪರಿಚಯ ಇರುವ ಯಾರೂ ಇಂಥದ್ದೊಂದು ಸಾಧ್ಯತೆಯನ್ನು ತಿರಸ್ಕರಿಸಲಾರರು.

No comments:

Post a Comment