Thursday 23 June 2016

ಚೂರಿಯನ್ನು ಜೇಬೊಳಗಿಟ್ಟವರು ಮತ್ತು ಪದೇ ಪದೇ ಇರಿತಕ್ಕೊಳಗಾಗುವವರು..


     ಕಳೆದವಾರ ಫ್ರಾನ್ಸ್ ನ ನೇತೃತ್ವದಲ್ಲಿ 29 ರಾಷ್ಟ್ರಗಳು ಒಟ್ಟು ಸೇರಿ ನಡೆಸಿದ ಸಭೆಯ ಬಗ್ಗೆ ಫೆಲೆಸ್ತೀನ್ ವ್ಯಕ್ತಪಡಿಸಿರುವ ನಿರಾಶಾಜನಕ ಪ್ರತಿಕ್ರಿಯೆಯೇ ಅದರ ಸದ್ಯದ ಸ್ಥಿತಿ-ಗತಿಯನ್ನು ಹೇಳುತ್ತದೆ. ಫೆಲೆಸ್ತೀನಿಯರು ಯಾರ ಮೇಲೂ ನಂಬಿಕೆ ಇಡದಷ್ಟು ವಿಶ್ವಾಸ ದ್ರೋಹಕ್ಕೆ ಒಳಗಾಗಿದ್ದಾರೆ. ಗೆಳೆಯರ ವೇಷ ತೊಟ್ಟವರಲ್ಲಿ ಹೆಚ್ಚಿನವರೂ ಇರಿದಿದ್ದಾರೆ. ‘ಶಾಂತಿ ಮಾತುಕತೆ’, ‘ಶಾಂತಿ ಸಭೆ’, ‘ಶಾಂತಿ ಒಪ್ಪಂದ’.. ಮುಂತಾದುವುಗಳೆಲ್ಲ ಅವರನ್ನು ಎಷ್ಟರ ಮಟ್ಟಿಗೆ ಸಿನಿಕತನಕ್ಕೆ ತಳ್ಳಿಬಿಟ್ಟಿದೆಯೆಂದರೆ, ಇವೆಲ್ಲ ಫೆಲೆಸ್ತೀನನ್ನು ಇಂಚಿಂಚಾಗಿ ಇಸ್ರೇಲಿಗೆ ಒಪ್ಪಿಸಿಬಿಡುವ ಪ್ರಕ್ರಿಯೆಯ ಜಾಣ ನಡೆ ಎಂದೇ ಅಂದುಕೊಳ್ಳುವಷ್ಟು. ಆದ್ದರಿಂದಲೇ, ಕಳೆದ ವಾರ ಫ್ರಾನ್ಸ್ ನೇತೃತ್ವದಲ್ಲಿ ನಡೆದ 29 ರಾಷ್ಟ್ರಗಳ ಸಭೆಯಲ್ಲಿ ಫೆಲೆಸ್ತೀನ್ ಭಾಗಿಯಾಗಿಲ್ಲ. ಫೆಲೆಸ್ತೀನ್‍ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡುವುದು, ಇಸ್ರೇಲ್ ಮತ್ತು ಫೆಲೆಸ್ತೀನ್ ರಾಷ್ಟ್ರಗಳಿಗೆ ಜೆರುಸಲೇಮ್ ಅನ್ನೇ ರಾಜಧಾನಿಯಾಗಿಸುವುದು ಹಾಗೂ ಈ ವರ್ಷದ ಕೊನೆಯಲ್ಲಿ ಇನ್ನೊಂದು ಸಭೆಯನ್ನು ಏರ್ಪಡಿಸುವ ಗುರಿಯೊಂದಿಗೆ ಸಭೆ ಮುಕ್ತಾಯವನ್ನು ಕಂಡಿದೆ.
      ನಿಜವಾಗಿ, ಫೆಲೆಸ್ತೀನ್‍ನ ಪಾಲಿಗೆ ಸಭೆ ಮತ್ತು ಮಾತುಕತೆ ಹೊಸತಲ್ಲ. ಇಸ್ರೇಲ್ ಸ್ಥಾಪಿತಗೊಂಡಂದಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ಬಾರಿಯೂ ಸಭೆಯ ಮೊದಲು ಅಪಾರ ನಿರೀಕ್ಷೆಯನ್ನು ವ್ಯಕ್ತಪಡಿಸುವುದು ಮತ್ತು ಸಭೆಯ ಬಳಿಕ ಆ ನಿರೀಕ್ಷೆಯ ವ್ಯಾಪ್ತಿಯು ಕಿರಿದಾಗುತ್ತಾ ಹೋಗುವುದು ಫೆಲೆಸ್ತೀನ್‍ಗೆ ಅಭ್ಯಾಸವಾಗಿಬಿಟ್ಟಿದೆ. ಫೆಲೆಸ್ತೀನ್ ಮತ್ತು ಇಸ್ರೇಲ್‍ಗಳ ನಡುವೆ ಮಧ್ಯಸ್ಥಿಕೆದಾರರ ಮೂಲಕ ಅನೇಕ ಬಾರಿ ಮಾತುಕತೆ ನಡೆದಿದೆ. ಹೆಚ್ಚಿನ ಬಾರಿ ಮಧ್ಯಸ್ಥಿಕೆದಾರನೇ ಮನುಷ್ಯ ವೇಷದ ತೋಳ ಆಗಿದ್ದನ್ನೂ ಅದು ಗುರುತಿಸಿದೆ. ಯಾಸಿರ್ ಅರಾಫಾತ್‍ರು ಇಂಥ ತೋಳಗಳಿಂದ ಸಾಕಷ್ಟು ಅವಮಾನವನ್ನು ಎದುರಿಸಿದರು. ಸದ್ಯ 81 ವರ್ಷದ ಅಬ್ಬಾಸ್ ಇದ್ದಾರೆ. ‘ಇಸ್ರೇಲನ್ನು ಯಹೂದಿ ರಾಷ್ಟ್ರವೆಂದೂ ಮತ್ತು ಯಹೂದಿಗಳ ಮಾತೃಭೂಮಿ’ಯೆಂದೂ ಒಪ್ಪುವ ಫೆಲೆಸ್ತೀನ್ ಸರಕಾರದೊಂದಿಗೆ ಮಾತ್ರ ನೇರ ಮಾತುಕತೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳುತ್ತಿದ್ದಾರೆ. ನಿಜವಾಗಿ, ಫೆಲೆಸ್ತೀನ್‍ನೊಂದಿಗೆ ನೇರ ಮಾತುಕತೆ ಎಂಬುದೇ ಬೃಹತ್ ನಾಟಕ. ಇಸ್ರೇಲ್, ಬಲಿಷ್ಠ ರಾಷ್ಟ್ರ. ಇಡೀ ಪಶ್ಚಿಮೇಶ್ಯದಲ್ಲೇ  ಅಣ್ವಸ್ತ್ರ ಹೊಂದಿರುವ ಮತ್ತು ಅಮೇರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳ ಕೃಪಾಶೀರ್ವಾದ ಇರುವ ರಾಷ್ಟ್ರ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲನ್ನು ಖಂಡಿಸುವ ಯಾವ ನಿರ್ಣಯವನ್ನೂ ಅಂಗೀಕರಿಸಲು ಅಮೇರಿಕ ಈ ವರೆಗೆ ಅವಕಾಶ ಕೊಟ್ಟಿಲ್ಲ. ಡಜನ್‍ಗಟ್ಟಲೆ ವೀಟೋಗಳನ್ನು ಅದು ಇಸ್ರೇಲ್‍ನ ಕ್ರೌರ್ಯವನ್ನು ಮನ್ನಿಸುವುದಕ್ಕಾಗಿಯೇ ಚಲಾಯಿಸಿದೆ. ಶಾಂತಿ ಪ್ರಕ್ರಿಯೆಗೆ ಮರು ಚಾಲನೆ ಕೊಡಲು ಹೊರಟಿರುವ ಫ್ರಾನ್ಸ್ ಕೂಡಾ ಈ ವಿಷಯದಲ್ಲಿ ಹಿಂದೆಯೇನೂ ಅಲ್ಲ. ಕಳೆದ ಜನವರಿಯಲ್ಲಿ ಅದರ ವಿದೇಶಾಂಗ ಸಚಿವ ಲೆಫ್ಟಿನೆಂಟ್ ಪ್ಯಾರಿಸ್ ಅವರು ಫೆಲೆಸ್ತೀನಿಯರಿಗೆ ಬೆಂಬಲವಾಗಿ ಹೇಳಿಕೆಯೊಂದನ್ನು ಕೊಟ್ಟರು. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಫ್ರಾನ್ಸ್ ಪರಿಗಣಿಸುತ್ತದೆಂದು ಅವರು ಅಭಿಪ್ರಾಯ ಪಟ್ಟರು. ಈ ಹೇಳಿಕೆಯ ಬಳಿಕ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಆ ಬಳಿಕ ಈವರೆಗೆ ಸ್ವತಂತ್ರ ಫೆಲೆಸ್ತೀನ್‍ನ ಬಗ್ಗೆ ಫ್ರಾನ್ಸ್ ಈ ವರೆಗೆ ಹೇಳಿಕೆಯನ್ನೇ ಕೊಟ್ಟಿಲ್ಲ. ಇಷ್ಟೆಲ್ಲ ಅನುಕೂಲ ಇರುವ ಇಸ್ರೇಲ್ ಒಂದು ಕಡೆಯಾದರೆ, ಇನ್ನೊಂದು ಕಡೆ ರಾಷ್ಟ್ರದ ಸ್ಥಾನಮಾನವೂ ಇಲ್ಲದ ದುರ್ಬಲ ಫೆಲೆಸ್ತೀನ್. ಇಸ್ರೇಲ್ ಅನುಮತಿಸಿದರೆ ಮಾತ್ರ ಫೆಲೆಸ್ತೀನ್‍ಗೆ ವಿದ್ಯುತ್ ಇದೆ. ಇಸ್ರೇಲ್ ಒಪ್ಪಿದರೆ ಮಾತ್ರ ಆಹಾರ-ಸಾಮಗ್ರಿಗಳಿವೆ. ಪ್ರತಿಯೊಂದಕ್ಕೂ ಇಸ್ರೇಲ್‍ನ ಕೃಪೆಯನ್ನು ಅವಲಂಬಿಸಿಕೊಂಡಿರುವ ಫೆಲೆಸ್ತೀನ್ ಯಾವ ನೆಲೆಯಲ್ಲೂ ಇಸ್ರೇಲ್‍ಗೆ ಹೋಲಿಕೆಗೇ ಅರ್ಹವಲ್ಲ. ಇಂಥವರ ಮಧ್ಯೆ ನೇರ ಮಾತುಕತೆ ಅಂದರೇನು? ಅಂಥ ನೇರ ಮಾತುಕತೆಯಿಂದ ಆಗುವ ಪರಿಣಾಮಗಳು ಏನೇನು? ಅಲ್ಲಿಯ ನಿರ್ಣಯದಲ್ಲಿ ಯಾರ ಪ್ರಾಬಲ್ಯ ಇರಬಹುದು?
      ಇಸ್ರೇಲ್‍ನ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅನೇಕ ಬಾರಿ ನಿಯಮ ಉಲ್ಲಂಘನೆಗಳ ಪ್ರಸ್ತಾಪ ಆಗಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಅಮೇರಿಕದ ವೀಟೋ ಅದನ್ನು ರಕ್ಷಿಸುತ್ತಾ ಬಂದಿದೆ. ಗಾಝಾದಲ್ಲಿ ಯುದ್ಧಾಪರಾಧಗಳನ್ನು ಎಸಗಿದ ಗಂಭೀರ ಆರೋಪ ಅದರ ಮೇಲಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ವಿಧೇಯಕವನ್ನು ಪದೇ ಪದೇ ಉಲ್ಲಂಘಿಸಿ ಪಶ್ಚಿತ ದಂಡೆಯಲ್ಲಿ ಫೆಲೆಸ್ತೀನಿನ ಭೂಮಿಯನ್ನು ಅತಿಕ್ರಮಿಸುತ್ತಿರುವ ಆರೋಪವೂ ಇದೆ. ವಲಸಿಗ ಯಹೂದಿಯರಿಗಾಗಿ ವಸತಿಯನ್ನು ನಿರ್ಮಿಸುತ್ತಲೂ ಇದೆ. ಅಮೇರಿಕ ಸಹಿತ ಅದರ ಬೆಂಬಲಿಗ ರಾಷ್ಟ್ರಗಳ ವಿರೋಧದ ನಡುವೆಯೂ ಈ ವಸತಿ ನಿರ್ಮಾಣದಿಂದ ಅದು ಈಗಲೂ ಹಿಂದೆ ಸರಿದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಯಮಾನುಸಾರ ಇಸ್ರೇಲ್ ‘ಶಿಕ್ಷಾರ್ಹ’ ಅಪರಾಧಗಳನ್ನು ಎಸಗಿದೆ. ಹೀಗಿದ್ದೂ, ಇರಾನ್‍ನ ಮೇಲೆ ಮುಗಿಬಿದ್ದ ರಾಷ್ಟ್ರಗಳಾವುವೂ ಇಸ್ರೇಲ್‍ನ ಮೇಲೆ ಮುಗಿಬೀಳುತ್ತಿಲ್ಲವೇಕೆ? ಇರಾನ್‍ನ ಮೇಲೆ ಅಮೇರಿಕದ ನೇತೃತ್ವದಲ್ಲಿ ಹೇರಲಾದ ಒತ್ತಡಗಳ ಒಂದು ಶೇಕಡಾದಷ್ಟಾದರೂ ಇಸ್ರೇಲ್‍ನ ಮೇಲೆ ಹೇರಲು ಜಾಗತಿಕ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾದುದೇಕೆ? ವಿಶ್ವ ರಾಷ್ಟ್ರಗಳ ಒತ್ತಡ ಇರಾನ್‍ನ ಮೇಲೆ ಎಷ್ಟರ ಮಟ್ಟಿಗೆ ಇತ್ತೆಂದರೆ, ತನ್ನ ಉದ್ದೇಶಿತ  ಪರಮಾಣು ಚಟುವಟಿಕೆಯಲ್ಲಿ ಮೃದು ಧೋರಣೆಯನ್ನು ತಾಳಲೇಬೇಕಾದ ಅನಿವಾರ್ಯತೆಯೊಂದು ಅದಕ್ಕೆ ಎದುರಾಯಿತು. ತಾನು ವಿಶ್ವ ಭೂಪಟದಲ್ಲಿ ಒಂಟಿಯಾಗುವೆನೇ ಎಂದು ಭಯಪಡುವಷ್ಟು ಈ ಒತ್ತಡ ಇರಾನನ್ನು ಕಾಡಿತು. ವಿಶೇಷ ಏನೆಂದರೆ, ಈ ಒತ್ತಡ ಕಾರ್ಯಕ್ರಮದಲ್ಲಿ ಇರಾನ್‍ನ ಬೆಂಬಲಿಗ ರಾಷ್ಟ್ರಗಳಾದ ಚೀನಾ ಮತ್ತು ರಶ್ಯಾಗಳೇ ಅಮೇರಿಕದ ಜೊತೆ ಕೈ ಜೋಡಿಸಿದುವು. ಅಷ್ಟಕ್ಕೂ, ಇರಾನ್ ಅಣ್ವಸ್ತ್ರವನ್ನು ಉತ್ಪಾದಿಸಿಯೇ ಇರಲಿಲ್ಲ. ಅಣ್ವಸ್ತ್ರ ತಯಾರಿಸುವುದಕ್ಕೆ ಬೇಕಾಗುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಅದು ಅಭಿವೃದ್ಧಿಗೊಳಿಸುತ್ತಿದೆ ಎಂಬ ಆರೋಪವಷ್ಟೇ ಅದರ ಮೇಲಿತ್ತು. ಈ ನಡುವೆ ಇಸ್ರೇಲ್ ಅಭಿವೃದ್ಧಿಪಡಿಸಿರುವ ವೈರಸ್‍ಗಳು ಇರಾನ್‍ನ ಕೆಲವೊಂದು ಸೆಂಟ್ರಿಪ್ಯೂಜ್‍ಗಳನ್ನು ನಾಶ ಮಾಡುವಲ್ಲೂ ಯಶಸ್ವಿಯಾಗಿತ್ತು. ಇನ್ನೂ ಅಭಿವೃದ್ಧಿಪಡಿಸದ ಅಣ್ವಸ್ತ್ರದ ಹೆಸರಲ್ಲಿ ಇರಾನ್‍ನ ಮೇಲೆ ಒತ್ತಡ ಹೇರಲು ಮತ್ತು ಅದು ತನ್ನ ನೀತಿಯಲ್ಲಿ ಮೃದು ಧೋರಣೆಯನ್ನು ತಾಳುವಂತೆ ಮಾಡಲು ವಿಶ್ವ ರಾಷ್ಟ್ರಗಳಿಗೆ ಸಾಧ್ಯವಾಗುವುದಾದರೆ ಮತ್ತೇಕೆ ಫೆಲೆಸ್ತೀನಿನ ವಿಷಯದಲ್ಲಿ ಅದು ಸದಾ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಧೇಯಕವನ್ನು ಇಸ್ರೇಲ್ ಉಲ್ಲಂಘಿಸಿದಷ್ಟು ಸಂಖ್ಯೆಯಲ್ಲಿ ವಿಶ್ವದ ಇನ್ನಾವ ರಾಷ್ಟ್ರವೂ ಉಲ್ಲಂಘಿಸಿಲ್ಲ. ಪಶ್ಚಿಮೇಶ್ಯದಲ್ಲಿ ಅಣ್ವಸ್ತ್ರವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿರುವ ಏಕೈಕ ರಾಷ್ಟ್ರ ಅದೊಂದೇ. ಸಮೂಹನಾಶಕ ಅಸ್ತ್ರದ ಹೆಸರಲ್ಲಿ ಇರಾಕ್‍ನ ಮೇಲೆ ದಾಳಿ ನಡೆಸಿದ ಅಮೇರಿಕನ್ ನೇತೃತ್ವದ ವಿಶ್ವ ರಾಷ್ಟ್ರಗಳಿಗೆ ಇಸ್ರೇಲ್‍ನ ಮೇಲೆ ಕನಿಷ್ಠ ನಿರ್ಬಂಧವನ್ನೂ ಹೇರಲು ಅಸಾಧ್ಯವಾಗಿರುವುದು ಯಾಕೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಷ್ಟೇ ಎಚ್ಚರಿಕೆಯನ್ನು ಕೊಡಲಿ, ಅದಕ್ಕೆ ಕಿಮ್ಮತ್ತಿನ ಬೆಲೆಯನ್ನೂ ನೀಡದ ರಾಷ್ಟ್ರವೊಂದಿದ್ದರೆ ಅದು ಇಸ್ರೇಲೇ ಹೊರತು ಸಿರಿಯಾವೋ ಅಫಘಾನೋ ಇರಾನೋ ಅಲ್ಲ. ಆದರೆ ಇಸ್ರೇಲ್ ಹೊರತುಪಡಿಸಿದ ಉಳಿದೆಲ್ಲ ರಾಷ್ಟ್ರಗಳ ಮೇಲೆ ಮತ್ತೆ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಉದಾಹರಣೆಗಳಷ್ಟೇ ಸಿಗುತ್ತಿರುವುದೇಕೆ?. ಇಷ್ಟೆಲ್ಲ ನಗ್ನ ಸತ್ಯಗಳಿದ್ದೂ ಅವೇ ಹಳಸಲು ಶಾಂತಿ ಮಾತುಕತೆಗಳೇಕೆ? ಇವು ಯಾರನ್ನು ಸಂತೃಪ್ತಿಪಡಿಸಲು? ನಿಜಕ್ಕೂ ಇಂಥ ಪ್ರಕ್ರಿಯೆಗಳ ಹಿಂದಿರುವುದು ಸಮಸ್ಯೆಯನ್ನು ಬಗೆಹರಿಸುವ ಕಾಳಜಿಯೋ ಅಥವಾ ಇಸ್ರೇಲ್‍ನ ನಿಯಮ ಉಲ್ಲಂಘನೆಗಳು ಚರ್ಚೆಗೆ ಬರದಂತೆ ತಡೆಯುವುದೋ? ರಾಜಿ ಪಂಚಾಯಿತಿಕೆಯ ನೇತೃತ್ವವನ್ನು ಒಮ್ಮೆ ಅಮೇರಿಕ ವಹಿಸಿಕೊಂಡರೆ ಇನ್ನೊಮ್ಮೆ ಜರ್ಮನಿ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ವಹಿಸಿಕೊಳ್ಳುತ್ತವೆ. ಪ್ರತಿ ಬಾರಿಯೂ ಫೆಲೆಸ್ತೀನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಾಗ ಇಸ್ರೇಲ್ ಅಕ್ರಮ ವಸತಿ ನಿರ್ಮಾಣವನ್ನು ವಿಸ್ತರಿಸುವ ಮೂಲಕ ತಿರುಗೇಟು ನೀಡುತ್ತಲೇ ಬಂದಿದೆ. ಎಲ್ಲಿಯ ವರೆಗೆ ಈ ನಾಟಕ? ಅಂದಹಾಗೆ,
       ವಿಶ್ವರಾಷ್ಟ್ರಗಳು ಫೆಲೆಸ್ತೀನ್‍ಗೆ ಇರಿದೂ ಇರಿದೂ ಸದ್ಯ ಇರಿಯಲು ಜಾಗವೇ ಇಲ್ಲದಷ್ಟು ಗಾಯಗಳನ್ನು ಈಗಾಗಲೇ ಮಾಡಿಟ್ಟಿದೆ. ಈ ಇರಿತದ ನೋವನ್ನು ಅನುಭವಿಸಿ ಅನುಭವಿಸಿ ದಡ್ಡುಗಟ್ಟಿದ ಫೆಲೆಸ್ತೀನಿಗರ ದೇಹ ಸದ್ಯ ಮುಲಾಮನ್ನೂ ಚೂರಿಯೆಂದೇ ನಂಬುವಲ್ಲಿಗೆ ತಲುಪಿಬಿಟ್ಟಿದೆ. ಆದ್ದರಿಂದಲೇ, ಅದು ಕಳೆದವಾರ ನಡೆದ ಫ್ರಾನ್ಸ್ ನೇತೃತ್ವದ ಸಭೆಯಲ್ಲಿ ಭಾಗವಹಿಸಿಲ್ಲ. ಬಹುಶಃ ಅಲ್ಲಿ ಸೇರಿರುವ 29 ರಾಷ್ಟ್ರಗಳು ಅದರ ಪಾಲಿಗೆ 29 ಚೂರಿಗಳಾಗಿ ಕಾಣಿಸಿರುವ ಸಾಧ್ಯತೆ ಇದೆ. ಫೆಲೆಸ್ತೀನ್‍ಗಾಗಿರುವ ಇರಿತದ ಗಾಯಗಳನ್ನು ಎಣಿಸಿದರೆ ಅದರ ಈ ಗ್ರಹಿಕೆಯನ್ನು ಪ್ರಮಾದವೆನ್ನಲು ಸಾಧ್ಯವಿಲ್ಲ.

Thursday 16 June 2016

ಮನುಷ್ಯರ ಪ್ರಾಮುಖ್ಯತೆಯನ್ನು ಬಿಜೆಪಿಗೆ ಪರಿಚಯಿಸಿದ ಬಿಹಾರದ ದನ

          ಪ್ರಾಣಿಗಳು ಮುಖ್ಯವೋ ಅಥವಾ ಮನುಷ್ಯರೋ ಎಂಬೊಂದು ಚರ್ಚೆಗೆ ಕೇಂದ್ರದ ಸಚಿವರಿಬ್ಬರು ಚಾಲನೆಯನ್ನು ಕೊಟ್ಟಿದ್ದಾರೆ. ಈ ವಿಷಯವಾಗಿ ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಪ್ರಕಾಶ್ ಜಾವಡೇಕರ್ ಪರಸ್ಪರ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಾರೆ. ಮೇನಕಾ ಗಾಂಧಿ ಪ್ರಾಣಿಗಳ ಪರ ನಿಂತರೆ ಜಾವಡೇಕರ್ ಮನುಷ್ಯರ ಪರ ನಿಂತಿದ್ದಾರೆ. ಕೃಷಿ ಬೆಳೆಗಳನ್ನು ತಿಂದು ರೈತರಿಗೆ ನಷ್ಟ ಉಂಟು ಮಾಡುತ್ತಿರುವ ಪ್ರಾಣಿಗಳನ್ನು ಕೊಲ್ಲಬಹುದು ಎಂದು ಜಾವಡೇಕರ್ ವಾದಿಸಿದರೆ ಮೇನಕಾ ಅದನ್ನು ಖಂಡಿಸಿದ್ದಾರೆ. ಬಿಹಾರದಲ್ಲಿ ಕಾಡೆತ್ತು (ನೀಲ್‍ಗಾಯಿ), ಹಿಮಾಚಲ ಪ್ರದೇಶದಲ್ಲಿ ಮಂಗ, ಪಶ್ಚಿಮ ಬಂಗಾಲದಲ್ಲಿ ಆನೆ, ಗೋವಾದಲ್ಲಿ ನವಿಲುಗಳನ್ನು ಈ ಕಾರಣಕ್ಕಾಗಿ ಹತ್ಯೆ ನಡೆಸಲು ಜಾವಡೇಕರ್ ಅವರ ಪರಿಸರ ಮಂತ್ರಾಲಯ ಅನುಮತಿ ನೀಡಿದೆ ಎಂಬುದು ಮೇನಕಾರ ದೂರು. ಈ ಕಿತ್ತಾಟ ನಡೆದ ಮರುದಿನವೇ ಕೇಂದ್ರ ಸರಕಾರದ ಸ್ಯಾಂಪಲ್ ರಿಜಿಸ್ಟ್ರೇಶನ್ ಸರ್ವೆ(ಎಸ್.ಆರ್.ಎಸ್.)ಯು ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ದೇಶದಲ್ಲಿ 71% ಮಾಂಸಾಹಾರಿಗಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್‍ನಲ್ಲಿ ಪ್ರತಿ ಐವರಲ್ಲಿ ಇಬ್ಬರು (40%) ಮಾಂಸಾಹಾರಿಗಳು. ತೆಲಂಗಾಣ ಮತ್ತು ಪಶ್ಚಿಮ ಬಂಗಾಲದಲ್ಲಿ ಬಹುತೇಕ 99% ಮಂದಿಯೂ ಮಾಂಸಾಹಾರವನ್ನೇ ಸೇವಿಸುತ್ತಿದ್ದಾರೆ. ಒಡಿಶಾದಲ್ಲಿ ಮಾಂಸಾಹಾರಿಗಳ ಸಂಖ್ಯೆ 98%ವಾದರೆ, ಕೇರಳದಲ್ಲಿ 97% ಮಂದಿ ಮಾಂಸಾಹಾರಿಗಳಿದ್ದಾರೆ.
  ನಿಜವಾಗಿ ಪ್ರಾಣಿಹತ್ಯೆ, ಮಾಂಸಾಹಾರ, ಸಸ್ಯಾಹಾರ.. ಮುಂತಾದುವುಗಳ ಬಗ್ಗೆ ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಚರ್ಚೆಗಳು ನಡೆದಿವೆ. ಈಗಲೂ ನಡೆಯುತ್ತಲಿದೆ. ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್ ಎಂಬ ಪ್ರಾಯಸ್ಥರನ್ನು ಹತ್ಯೆ ನಡೆಸಿದ್ದು ಪ್ರಾಣಿ ಹತ್ಯೆಯ ಹೆಸರಲ್ಲಿ. ಆ ಇಡೀ ಕ್ರೌರ್ಯದ ನಾಯಕತ್ವವನ್ನು ಸ್ಥಳೀಯ ಬಿಜೆಪಿ ಮುಖಂಡನ ಪುತ್ರ ವಹಿಸಿಕೊಂಡಿದ್ದ. ಈ ದೇಶದಲ್ಲಿ ಪ್ರಾಣಿ ಸಾಗಾಟ ಮತ್ತು ಹತ್ಯೆಯ ಹೆಸರಲ್ಲಿ ಮನುಷ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆಗಳಲ್ಲಿ ಬಿಜೆಪಿಗೆ ಯಾವಾಗಲೂ ಒಂದು ಪಾತ್ರ ಇದ್ದೇ ಇರುತ್ತದೆ. ಅದರ ಕಾರ್ಯಕರ್ತರು ಪ್ರಾಣಿಗಳ ಹೆಸರಲ್ಲಿ ಮನುಷ್ಯರನ್ನು ಥಳಿಸುತ್ತಾರೆ, ಹತ್ಯೆ ನಡೆಸುತ್ತಾರೆ. ಮಾತ್ರವಲ್ಲ, ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿ ಈ ಹಲ್ಲೆಕೋರರ ವಕ್ತಾರನಂತೆ ಮಾತಾಡುತ್ತಲೂ ಇರುತ್ತದೆ. ಮನುಷ್ಯರನ್ನು ಕೊಂದಾದರೂ ಸರಿ, ಪ್ರಾಣಿಗಳನ್ನು ಉಳಿಸಿಕೊಳ್ಳಬೇಕು ಅನ್ನುವಷ್ಟು ಉಗ್ರ ಪ್ರಾಣಿ ಪ್ರೇಮವನ್ನು ಅದು ವ್ಯಕ್ತಪಡಿಸುತ್ತಲೂ ಇರುತ್ತದೆ. ಸಸ್ಯಾಹಾರದ ಪ್ರಯೋಜನ ಮತ್ತು ಮಾಂಸಾಹಾರದ ಅನಾಹುತಗಳನ್ನು ವಿವರಿಸುವ ಸಂದರ್ಭ ಎದುರಾದಾಗಲೆಲ್ಲ ಬಿಜೆಪಿ ಸಸ್ಯಾಹಾರದ ಪರ ನಿಲ್ಲುತ್ತದೆ. ಮಾಂಸಾಹಾರವು ಭಯೋತ್ಪಾದನೆಗೆ ಪ್ರೇರಕ ಎಂದು ಅದರ ಬೆಂಬಲಿಗರು ಹೇಳಿದ್ದೂ ಇದೆ. ದುರಂತ ಏನೆಂದರೆ, ಸಮಯ, ಸಂದರ್ಭ ಬಂದಾಗಲೆಲ್ಲ ಬಿಜೆಪಿಯ ಈ ನಿಲುವು ಕಸದ ಬುಟ್ಟಿಯನ್ನು ಸೇರಿಕೊಳ್ಳುತ್ತದೆ ಎಂಬುದು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಮಾಂಸಾಹಾರ ಅದರಲ್ಲೂ ಗೋಮಾಂಸವನ್ನು ಅತ್ಯಧಿಕವಾಗಿ ಪ್ರಶ್ನಾರ್ಹಗೊಳಿಸಿದ್ದು ಬಿಜೆಪಿಯೇ. ಗೋವುಗಳ ಸಾಧುತನದ ಬಗ್ಗೆ, ಅದರ ಹಾಲು, ಬೆಣ್ಣೆ, ಮೂತ್ರ, ಸೆಗಣಿ ಸಹಿತ ಸರ್ವಾಂತರ್ಯಾಮಿ ಉಪಯೋಗಗಳ ಬಗ್ಗೆ ಅದರ ನಾಯಕರು ಎಷ್ಟೆಷ್ಟು ಭಾಷಣಗಳನ್ನು ಬಿಗಿದರೆಂದರೆ, ಒಂದು ವೇಳೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಬಿಟ್ಟರೆ, ಕಸಾಯಿಖಾನೆಗಳೆಲ್ಲ ಗೋಶಾಲೆಗಳಾಗಿ ಮಾರ್ಪಾಡಾಗುತ್ತವೋ ಎಂದು ನಿರೀಕ್ಷಿಸುವಷ್ಟು. ಅಲ್ಲದೇ ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಆಧ್ಯಾತ್ಮ ಗುರುಗಳಂತೂ ಸಸ್ಯಾಹಾರವೇ ಶ್ರೇಷ್ಠ ಆಹಾರ ಎಂಬ ರೀತಿಯಲ್ಲಿ ಪ್ರವಚನ ನೀಡತೊಡಗಿದರು. ಪ್ರಾಣಿಯ ರಕ್ತ ಹರಿಯುವುದನ್ನು ಅತ್ಯಾಚಾರಕ್ಕೆ, ಅನಾಹುತಕ್ಕೆ, ದೇಶದ ಸಕಲ ಸಮಸ್ಯೆಗಳಿಗೆ ಕಾರಣವಾಗಿಯೂ ಪ್ರಸ್ತಾಪಿಸಿದರು. ಆದರೆ, ಇದೀಗ ಅಧಿಕಾರ ದೊರೆತ ಬಿಜೆಪಿ ಕಾಂಗ್ರೆಸ್‍ನಂತೆಯೇ ವರ್ತಿಸುತ್ತಿದೆ. ಕಸಾಯಿಖಾನೆಗಳನ್ನು ಅದು ರದ್ದುಪಡಿಸುತ್ತಲೂ ಇಲ್ಲ. ವಿದೇಶಕ್ಕೆ ರಫ್ತಾಗುವ ಗೋಮಾಂಸಗಳ ಮೇಲೆ ನಿಷೇಧವನ್ನೂ ಹೇರುತ್ತಿಲ್ಲ. ಕನಿಷ್ಠ ದೇಶದೊಳಗಡೆಯಾದರೂ ಮಾಂಸಾಹಾರ ಅಲಭ್ಯವಾಗುವಂತೆ ಮತ್ತು ಸಸ್ಯಾಹಾರ ವ್ಯಾಪಕವಾಗುವಂತೆಯೂ ನೋಡಿಕೊಳ್ಳುತ್ತಿಲ್ಲ. ಒಂದು ಕಡೆ, ಅದು ಪ್ರಾಣಿಗಳ ರಕ್ತವನ್ನು ಹರಿಸುತ್ತಲೇ ಇನ್ನೊಂದು ಕಡೆ ಅಚ್ಛೇ ದಿನ್‍ನ ಭರವಸೆಯನ್ನೂ ನೀಡುತ್ತಿದೆ. ಈ ಸೈದ್ಧಾಂತಿಕ ಗೊಂದಲಕ್ಕೆ ಏನೆನ್ನಬೇಕು? ಒಂದು ವೇಳೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವಾದರೂ ಮಾಂಸ ರಫ್ತಿನಲ್ಲಿ ಇಳಿಕೆಯಾಗಿದ್ದರೆ ಅಥವಾ ಮಾಂಸಾಹಾರಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದ್ದರೆ ಅದನ್ನಾದರೂ ದೇಶದ ಮುಂದೆ ಇಡಬೇಕಿತ್ತು. ಯಾಕೆ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆಂದರೆ, ಬಿಜೆಪಿ ಅಭಿವೃದ್ಧಿಯನ್ನು ಆಹಾರದ ಜೊತೆಗೆ ಬೆರೆಸಿಯೇ ಈ ವರೆಗೆ ಮಾತಾಡಿದೆ. ಇಂಥ ಪಕ್ಷ ಇವತ್ತು ಮಾಂಸಾಹಾರವನ್ನು ಒಳಗೊಂಡ ಅಭಿವೃದ್ಧಿಯ ಜೊತೆ ಸಾಗುತ್ತದೆಂದರೆ ಅದು ಸೈದ್ಧಾಂತಿಕವಾಗಿ ಅತಿ ದೊಡ್ಡ ಬದಲಾವಣೆ. ಈ ಬದಲಾವಣೆಯನ್ನು ತನ್ನ ಬೆಂಬಲಿಗರಿಗೆ ತಿಳಿಸಲು ಅದೇಕೆ ಮಡಿವಂತಿಕೆ ತೋರಿಸುತ್ತಿದೆ? ಅಥವಾ ಅಧಿಕಾರದಲ್ಲಿರುವಾಗ ಒಂದು ನೀತಿ ಮತ್ತು ಅಧಿಕಾರ ವಂಚಿತಗೊಂಡಾಗ ಇನ್ನೊಂದು ನೀತಿ ಎಂಬ ದ್ವಿಮುಖ ಸಿದ್ಧಾಂತವನ್ನು ಬಿಜೆಪಿ ಅಳವಡಿಸಿಕೊಂಡಿದೆಯೇ? ರಾಮಮಂದಿರವೂ ಈ ನೀತಿಯ ಭಾಗವೇ
  ನಿಜವಾಗಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಬಳಿಕ ಮೇನಕ ಮತ್ತು ಜಾವಡೇಕರ್ ಎಂಬ ಎರಡು ಮನುಷ್ಯ ಪ್ರಾಣಿಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಮನುಷ್ಯ ಪ್ರಾಣಿಗಳು ಪ್ರತಿನಿಧಿಸುವ ಪಕ್ಷದ ಸಿದ್ಧಾಂತ ಅನೇಕ ಬಾರಿ ಮನುಷ್ಯ ವಿರೋಧಿಯಾಗಿ ಗುರುತಿಸಿಕೊಂಡಿರುವುದರಿಂದ ಈ ಮುಖಾಮುಖಿ ಅತ್ಯಂತ ಮಹತ್ವಪೂಣರ್ವಾಗಿತ್ತು. ಈ ಮುಖಾಮುಖಿಯಲ್ಲಿ ಮನುಷ್ಯ ಮುಖ್ಯವಾಗುತ್ತಾನೋ ಅಥವಾ ಪ್ರಾಣಿಯೋ ಎಂಬೊಂದು ಕುತೂಹಲವೂ ಇತ್ತು. ಆದರೆ, ಅಂತಿಮವಾಗಿ ಮನುಷ್ಯನನ್ನೇ ಪರಮ ಪ್ರಧಾನ ಎಂದು ಈ ಮುಖಾಮುಖಿ ಸಾಬೀತುಪಡಿಸಿದೆ. ಶರಫತ್ ಖಾನ್ ಎಂಬ ತಜ್ಞರ ನೇತೃತ್ವದಲ್ಲಿ ಬಿಹಾರದಲ್ಲಿ ನೂರಾರು ಕಾಡೆತ್ತುಗಳ (ನೀಲ್‍ಗಾಯಿ) ಹತ್ಯೆ ನಡೆದಿದೆ. ಸಾಮಾನ್ಯವಾಗಿ ಬಿಹಾರದಲ್ಲಿ ಈ ಕಾಡೆತ್ತುಗಳನ್ನು ಗಾಯಿ (ದನ) ಎಂದು ಕರೆಯಲಾಗುತ್ತದೆ. ಗೋವಿನಷ್ಟೇ ಅವು ತಮಗೆ ಪವಿತ್ರ ಎಂದೂ ಅಲ್ಲಿನ ರೈತರು ಹೇಳುತ್ತಾರೆ. ಆದ್ದರಿಂದಲೇ, ಈ ದನಗಳನ್ನು ಹತ್ಯೆ ನಡೆಸದೆಯೇ ಗದ್ದೆಗಳಿಂದ ತಡೆಯುವ ಹಲವು ಉಪಕ್ರಮಗಳನ್ನು ಅವರು ಕೈಗೊಂಡಿದ್ದರು. ಪೂಜೆ-ಪುನಸ್ಕಾರಗಳನ್ನು ನಡೆಸಿದ್ದರು. ಆದರೆ ಈ ದನಗಳು ಜಗ್ಗಲಿಲ್ಲ. ಲಕ್ಷಾಂತರ ರೂಪಾಯಿಗಳ ವರೆಗಿನ ಬೆಳೆಗಳು ನಾಶವಾದುವು. ಕೊನೆಗೆ ಹತ್ಯೆಗೆ ಅನುಮತಿ ನೀಡಬೇಕೆಂದು ಕೋರಿ ಕೇಂದ್ರ ಪರಿಸರ ಇಲಾಖೆಗೆ ಬಿಹಾರ ಸರಕಾರ ಪತ್ರ ಬರೆಯಿತು. ಒಂದು ರೀತಿಯಲ್ಲಿ, ಅಧಿಕಾರವಿಲ್ಲದೇ ಇದ್ದಾಗ ಬಿಜೆಪಿಗೆ ಅತ್ಯಂತ ಪವಿತ್ರವಾಗಿದ್ದ ಗೋವು ಅಧಿಕಾರಕ್ಕೇರಿದ ಬಳಿಕ ಬೆಳೆನಾಶಕ ಮತ್ತು ಹತ್ಯೆಗೆ ಅರ್ಹ ಪ್ರಾಣಿಯಾಗಿ ಮಾರ್ಪಾಟಾಯಿತು!
  ಏನೇ ಆಗಲಿ, ದೇಶದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಕೇವಲ 29% ಮಾತ್ರ ಇರುವುದು ಮತ್ತು ಪ್ರಾಣಿ ಹತ್ಯೆಯ ವಿಷಯದಲ್ಲಿ ಬಿಜೆಪಿ ತನ್ನ ಘೋಷಿತ ನಿಲುವಿನಿಂದ ಹಿಂದೆ ಸರಿದಿರುವುದು ನರೇಂದ್ರ ಮೋದಿಯವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ನಡೆದ ಪ್ರಮುಖ ಸೈದ್ಧಾಂತಿಕ ಬದಲಾವಣೆ ಎನ್ನಬಹುದು. ಇದು ವಾಸ್ತವ ರಾಜಕಾರಣದ ಪ್ರತಿಬಿಂಬ. ಅಗತ್ಯ ಬಂದಾಗ ಪ್ರಾಣಿಯನ್ನು - ಅದು ಗಾಯಿ ಆಗಿದ್ದರೂ - ಕೊಲ್ಲಬಹುದು ಎಂಬುದನ್ನು ಈ ಸರಕಾರ ಜಾವಡೇಕರ್ ಮೂಲಕ ಸಾರಿಬಿಟ್ಟಿದೆ. ಮಾಂಸಾಹಾರವು ಈ ದೇಶದ 71% ಜನರ ಅಗತ್ಯ. ಆದ್ದರಿಂದ, ಅವರ ಅಗತ್ಯವನ್ನು ನಿರಾಕರಿಸುವ ಅಥವಾ ತುಚ್ಛೀಕರಿಸುವ ಧಾಟಿಯಲ್ಲಿ ಮಾತಾಡುವುದು ಮತ್ತು ಹಲ್ಲೆ-ಹತ್ಯೆಗಳಂತಹ ಉಗ್ರ ಪ್ರಾಣಿಪ್ರೇಮವನ್ನು ತೋರುವುದು ಕೂಡ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ, ಆಹಾರದ ಅಗತ್ಯಕ್ಕಾಗಿ ಪ್ರಾಣಿ ಹತ್ಯೆಯನ್ನು ಕೇಂದ್ರ ಸರಕಾರ ಪರೋಕ್ಷವಾಗಿ ಮಾನ್ಯ ಮಾಡಿದಂತಾಗಿದೆ. ರೈತರ ಅಗತ್ಯಕ್ಕಾಗಿ ಗಾಯಿ ಅನ್ನು ಹತ್ಯೆ ನಡೆಸಬಹುದಾದರೆ, ಆಹಾರದ ಅಗತ್ಯಕ್ಕಾಗಿ ನಿರುಪಯುಕ್ತ ಜಾನುವಾರುಗಳ ಹತ್ಯೆ ಅಪರಾಧವಾಗುವುದಾದರೂ ಹೇಗೆ?
  ಬಿಜೆಪಿಗೆ ಮನುಷ್ಯರ ಅಗತ್ಯವನ್ನು ತಿಳಿಸಿಕೊಟ್ಟ ಬಿಹಾರದ ರೈತರು ಮತ್ತು ನೀಲ್‍ಗಾಯಿಗಳಿಗೆ ಅಭಿನಂದನೆಗಳು.



Thursday 9 June 2016

  ಅಖ್ಲಾಕ್ ನ ಫ್ರಿಡ್ಜ್ ನಲ್ಲಿ ಮಾಂಸ ಹುಡುಕುವ ಬಿಜೆಪಿಯಿಂದ ಮಥುರಾದಲ್ಲಿ ಜೋಗುಳ

         1. ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್ ಮತ್ತು 60 ಲೀಟರ್ ಡೀಸೆಲ್ ಲಭ್ಯವಾಗಬೇಕು.
  2. ಚಿನ್ನದ ನಾಣ್ಯಗಳನ್ನು  ಮತ್ತೆ ಚಲಾವಣೆಗೆ ತರಬೇಕು.
  3. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿಯ ನಿಯಮ ಪುಸ್ತಕವನ್ನು ಭಾರತೀಯ ಕಾನೂನಾಗಿ ಮತ್ತು ಆಡಳಿತ ನಿಯಮವಾಗಿ ಪರಿಗಣಿಸಬೇಕು.
  4. ರೂಪಾಯಿ ಬದಲು ಆಝಾದಿ ಹಿಂದ್ ಫೌಜ್ ಎಂಬ ಕರೆನ್ಸಿ  ಚಾಲ್ತಿಗೆ ತರಬೇಕು. .
  5. ದೇಶಾದ್ಯಂತ ಮಾಂಸಾಹಾರವನ್ನು ನಿಷೇಧಿಸಬೇಕು. ಉಲ್ಲಂಘಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
  6. ಜವಾಹರ್ ಪಾರ್ಕನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕು..
  7. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ರದ್ದು ಮಾಡಬೇಕು.....
          ಎಂದು ಮುಂತಾದ ತಲೆತಿರುಕ ಬೇಡಿಕೆಯೊಂದಿಗೆ ಸುಮಾರು 3 ಸಾವಿರದಷ್ಟಿರುವ ಮಂದಿಯ ಗುಂಪು ಉತ್ತರ ಪ್ರದೇಶ ಸರಕಾರದ ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ಮತ್ತು 270 ಎಕರೆಯಷ್ಟು ವಿಸ್ತಾರವಾದ ಜವಾಹರ್ ಬಾಘ್ ಪಾರ್ಕ್ ಅನ್ನು ಸೇರಿಕೊಳ್ಳುವುದು ಮತ್ತು ಎರಡು ವರ್ಷಗಳ ವರೆಗೆ ಅಲ್ಲಿ ಕಾನೂನುಬಾಹಿರವಾಗಿ ತಂಗುವುದೆಲ್ಲ ಏನು? ಸ್ವಾಧೀನ್ ಭಾರತ್ ಸುಭಾಷ್ ಸೇನಾ ಎಂಬ ಗುಂಪನ್ನು ಕಟ್ಟಿಕೊಂಡ ರಾಮ್ ವೃಕ್ಷ ಯಾದವ್ ಮತ್ತು ಆತನ ಅನುಯಾಯಿಗಳಿಗೆ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು? ಉತ್ತರ ಪ್ರದೇಶದ ಮಥುರಾದಲ್ಲಿ ಕಳೆದ ವಾರ ನಡೆದ ಘಟನೆ ಈ ಪ್ರಶ್ನೆಯನ್ನು ನಮ್ಮೆದುರು ಮತ್ತೆ ಮತ್ತೆ ಮುಂದಿಡುತ್ತದೆ. ಒಂದು ವೇಳೆ, 2014 ಎಪ್ರಿಲ್‍ನಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಿಂದ ಹೊರಟ ಸ್ವಾಧೀನ್ ಭಾರತ್ ವಿದಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ತಂಡದ ನಾಯಕನ ಹೆಸರು ರಾಮ್ ವೃಕ್ಷ ಯಾದವ್ ಎಂಬುದರ ಬದಲು ಓರ್ವ ಮುಸ್ಲಿಮನದ್ದಾಗಿರುತ್ತಿದ್ದರೆ ಮತ್ತು ಆತ ಸುಭಾಷ್‍ರ ಬದಲು ಅಬ್ದುಲ್ ಕಲಾಮ್ ಆಝಾದ್‍ರ ಅನುಯಾಯಿಯಾಗಿ ಗುರುತಿಸಿ ಜವಾಹರ್ ಪಾರ್ಕ್‍ನಲ್ಲಿ ತನ್ನ ಗುಂಪಿನೊಂದಿಗೆ ಎರಡು ವರ್ಷಗಳ ವರೆಗೆ ತಂಗಿ, ಕೊನೆಗೆ ವ್ಯವಸ್ಥೆಯೊಂದಿಗೆ ಶಸ್ತ್ರಾಸ್ತ್ರ ಕಾದಾಟಕ್ಕೆ ಇಳಿದಿದ್ದರೆ ಆ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹೇಗಿರುತ್ತಿದ್ದುವು? ಈ ಪ್ರಶ್ನೆ ತುಸು ಉತ್ಪ್ರೇಕ್ಷೆಯದ್ದಾಗಿ ಕಂಡರೂ ಇವತ್ತಿನ ರಾಜಕೀಯ, ಸಾಮಾಜಿಕ ವಾತಾವರಣದಲ್ಲಿ ಅಸಂಬದ್ಧವೇನೂ ಅಲ್ಲ. 2014ರಲ್ಲಿ ಮಧ್ಯಪ್ರದೇಶದಿಂದ ಹೊರಟ ಸ್ವಾಧೀನ್ ಭಾರತ್ ಸೇನಾ ಎಂಬ ಈ ಗುಂಪು ಮಥುರಾದ ಜವಾಹರ್ ಪಾರ್ಕ್‍ನಲ್ಲಿ ಕೇವಲ ಎರಡು ದಿನಗಳ ಕಾಲ ತಂಗುವುದಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿಯನ್ನು ಪಡೆದುಕೊಂಡಿತ್ತು. ಅವರ ಆಧ್ಯಾತ್ಮ ಗುರು ಬಾಬಾ ಜೈ ಗುರುದೇವ್‍ರು 2012ರಲ್ಲಿ ಮೃತಪಟ್ಟಿದ್ದು, ಅವರು ಸುಮಾರು 12 ಸಾವಿರ ಕೋಟಿ ಆಸ್ತಿಯನ್ನು ಬಿಟ್ಟು ಹೋಗಿದ್ದರು. ಈ ಕುರಿತಂತೆ ರಾಮ್ ವೃಕ್ಷ ಯಾದವ್ ಸಹಿತ ಬಾಬಾರ ಮೂವರು ಪ್ರಮುಖ ಅನುಯಾಯಿ ನಾಯಕರಲ್ಲಿ ವಿವಾದವೂ ಬೆಳೆದಿತ್ತು. ಆದ್ದರಿಂದ ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆಸಲಿರುವ ಪ್ರತಿಭಟನೆಗಿಂತ ಮೊದಲು ಪಾರ್ಕ್‍ನಲ್ಲಿ ಎರಡು ದಿನಗಳ ಕಾಲ ತಂಗಿ ಹೋಗುವುದಾಗಿ ಈ ಗುಂಪು ಹೇಳಿಕೊಂಡಿತ್ತು. ಆದರೆ ಬಳಿಕ  ಈ ಗುಂಪು ಅಲ್ಲಿಂದ ಕದಲಲೇ ಇಲ್ಲ. ಜವಾಹರ್ ಪಾರ್ಕನ್ನು ವಾಸಯೋಗ್ಯಗೊಳಿಸುವುದಕ್ಕಾಗಿ 2400 ಮರಗಳನ್ನು ಅದು ಸುಟ್ಟು ಹಾಕಿತು. ತೋಟಗಾರಿಕಾ ಇಲಾಖೆಯ ಸಿಬಂದಿಗಳನ್ನು ಓಡಿಸಿತು. ಆ ಪಾರ್ಕ್‍ನೊಳಗೆ ಪ್ರವೇಶಿಸಲು ಬಯಸುವವರನ್ನು ಬಲವಂತದಿಂದ ಹೊರಹಾಕತೊಡಗಿತು. ಕ್ರಮೇಣ ಪರ್ಯಾಯ ಸರಕಾರವೇ ಅಲ್ಲಿ ಸ್ಥಾಪಿತವಾಯಿತು.ತಮ್ಮದೇ ಸ್ವಂತ ಕಾನೂನು, ಕಾರಾಗ್ರಹ, ಕೋರ್ಟು ತಲೆ ಎತ್ತಿತು. ಸಾವಿರ ಮಂದಿಯ ಪ್ರತ್ಯೇಕ ಸೇನೆ ತಯಾರಾಯಿತು. ಈ ಸಾಮ್ರಾಜ್ಯದ ಒಳಗಿರುವ ಪ್ರತಿ ವ್ಯಕ್ತಿಗೆ ಗುರುತಿನ ಚೀಟಿಯನ್ನು ನೀಡಲಾಯಿತಲ್ಲದೆ , ಇಲ್ಲಿಂದ ಹೊರಹೋಗಬೇಕಾದರೆ ಎಕ್ಸಿಟ್ ಪಾಸ್ ಪಡಕೊಳ್ಳುವುದು ಕಡ್ದಾಯವಾಯಿತು. ಈ ಕುರಿತಂತೆ ವಿಜಯಪಾಲ್ ಸಿಂಗ್ ತೋಮರ್ ಎಂಬವರು 2014ರಲ್ಲೇ ಕೋರ್ಟ್ ಮೆಟ್ಟಿಲೇರಿದ್ದರು. ಮಾತ್ರವಲ್ಲ, 2015 ಮೇ 20ರಂದೇ ಅಲಹಾಬಾದ್ ಹೈಕೋರ್ಟ್ ಈ ಗುಂಪನ್ನು ಆ ಪಾರ್ಕ್‍ನಿಂದ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿಯೂ ಇತ್ತು. ಇದಾಗಿ ಒಂದು ವರ್ಷದ ಬಳಿಕ ಕಳೆದ ವಾರ ಉತ್ತರ ಪ್ರದೇಶದ ಸರಕಾರ ಈ ಸ್ವಾಧೀನ್ ಭಾರತ್ ತಂಡವನ್ನು ಜವಾಹರ್ ಪಾರ್ಕ್‍ನಿಂದ ತೆರವುಗೊಳಿಸಲು ಮುಂದಾಯಿತು. ಆದರೆ ಅತಿಕ್ರಮಣಕೋರರು ಯಾವ ಮಟ್ಟದಲ್ಲಿ ಆಯುಧಧಾರಿಗಳಾಗಿದ್ದರೆಂದರೆ, ಅದು ಭಯೋತ್ಪಾದಕರ ಅಡಗುತಾಣವಾಗಿತ್ತೇನೋ ಎಂದು ಭಯಪಡುವಷ್ಟು. ಭಾರೀ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ವಶಪಡಿಸಿಕೊಳ್ಳಲಾಯಿತು. ಅಚ್ಚರಿಯ ಸಂಗತಿ ಏನೆಂದರೆ, ಕಳೆದ ಎರಡು ವರ್ಷಗಳಿಂದ 3 ಸಾವಿರ ಮಂದಿಯ ಗುಂಪು ಶಸ್ತ್ರಾಸ್ತ್ರಗಳ ಸಹಿತ ಸರಕಾರಿ ಉದ್ಯಾನದಲ್ಲಿ ಅಕ್ರಮವಾಗಿ ನೆಲೆಸಿದ್ದರೂ ಯಾವ ರಾಜಕೀಯ ಪಕ್ಷವೂ ಆ ಬಗ್ಗೆ ಮಾತನ್ನೇ ಆಡದಿರುವುದು.ಈ ನಡುವೆ ಲೋಕಸಭಾ ಚುನಾವಣೆ ನಡೆದಿದೆ. ರಾಜ್ಯ ವಿಧಾನಸಭೆಯು ಚುನಾವಣೆಯ ತಯಾರಿಯಲ್ಲಿದೆ. ಯಾಕೆ ಯಾವ ಪಕ್ಷಕ್ಕೂ ಇದು ಇಶ್ಯೂ ಆಗಿ ಕಾಣಲಿಲ್ಲ? ಒಂದು ವೇಳೆ ಸುಭಾಷ್ ಸೇನಾದ ಬದಲು ಅಬ್ದುಲ್ ಕಲಾಮ್ ಆಝಾದ್ ಸೇನಾ ಆಗಿರುತ್ತಿದ್ದರೆ ಪಕ್ಷಗಳು ಈ ಮಟ್ಟದಲ್ಲಿ ಮೌನ ವಹಿಸುತ್ತಿದ್ದುವೇ? ದಾದ್ರಿಯ ಅಖ್ಲಾಕ್ ಮನೆಯ ಫ್ರಿಡ್ಜ್ ನಲ್ಲಿದ್ದ  ಮಾಂಸದ ಬಗ್ಗೆ  ಇನ್ನೂ ಕುತೂಹಲ ವ್ಯಕ್ತಪಡಿಸುತ್ತಿರುವ ಮತ್ತು ಆ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿರುವ ಬಿಜೆಪಿಯ ನಿಲುವು ಏನಿರುತ್ತಿತ್ತು? ಮಾರಕ ಆಯುಧಗಳನ್ನು ಹೊಂದಿದ ಆಝಾದ್ ಗುಂಪನ್ನು ಅದು ದೇಶವಿರೋಧಿಯಾಗಿ ಕಾಣುತ್ತಿರಲಿಲ್ಲವೇ? ಪಾಕ್‍ನ ಐಎಸ್‍ಐನೊಂದಿಗೂ ಇರಾಕ್ ಮತ್ತು ಸಿರಿಯಾಗಳಲ್ಲಿರುವ ಐಎಸ್‍ಐನೊಂದಿಗೂ ಇಂಡಿಯನ್ ಮುಜಾಹಿದೀನ್‍ನೊಂದಿಗೂ ಈ ಗುಂಪಿಗಿರುವ ಸಂಬಂಧವನ್ನು ಅದು ಪತ್ತೆ ಹಚ್ಚುತ್ತಿರಲಿಲ್ಲವೇ? ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮುಖ್ಯ ವಿಷಯವಾಗಿ ಅದು ಈ ವಿಷಯವನ್ನೇ ಎತ್ತಿಕೊಳ್ಳುತ್ತಿರಲಿಲ್ಲವೇ? ಮುಸ್ಲಿಮರ ಒರಟುತನಕ್ಕೆ, ಅವರ ಭಯೋತ್ಪಾದಕ ಮನಸ್ಥಿತಿಗೆ, ದೇಶವಿರೋಧಿ ನಿಲುವಿಗೆ ಪುರಾವೆಯಾಗಿ ಈ ಘಟನೆಯನ್ನು ಉದಾಹರಿಸಿಕೊಂಡು ಎಷ್ಟು ಟಿ.ವಿ. ಡಿಬೆಟ್‍ಗಳು ನಡೆಯುತ್ತಿರಲಿಲ್ಲ? ಎಷ್ಟು ಲೇಖನಗಳು ಪ್ರಕಟವಾಗುತ್ತಿರಲಿಲ್ಲ? ಎಷ್ಟೆಷ್ಟು ಪತ್ರಿಕಾ ಹೇಳಿಕೆಗಳು, ಭಾಷಣಗಳು ನಡೆಯುತ್ತಿರಲಿಲ್ಲ?
  ನಿಜವಾಗಿ, 2012ರಲ್ಲಿ ಮೃತಪಟ್ಟ ಬಾಬಾ ಜೈ ಗುರುದೇವ್‍ರ ಅನುಯಾಯಿಗಳ ಪಟ್ಟಿಯಲ್ಲಿ ರಾಜನಾಥ್ ಸಿಂಗ್, ಮುಲಾಯಂ ಸಿಂಗ್‍ರಿಂದ ಹಿಡಿದು ಇಂದಿರಾ ಗಾಂಧಿಯ ವರೆಗೆ ಎಲ್ಲರೂ ಇದ್ದಾರೆ. ಅಧ್ಯಾತ್ಮ ಕ್ಷೇತ್ರವು ಈ ದೇಶದಲ್ಲಿ ಎಷ್ಟರ ಮಟ್ಟಿಗೆ ಕಲುಷಿತಗೊಂಡಿದೆ ಅನ್ನುವುದು ಪ್ರತಿದಿನದ ಬೆಳವಣಿಗೆಗಳು ಇಲ್ಲಿ ಸ್ಪಷ್ಟಪಡಿಸುತ್ತಲೇ ಇವೆ. ಸ್ವಘೋಷಿತ ದೇವಮಾನವರು, ಗುರುಗಳೆಲ್ಲ ತಮ್ಮ ಅನುಯಾಯಿಗಳ ಪಟ್ಟಿಯಲ್ಲಿ ರಾಜಕಾರಣಿಗಳನ್ನು ತಪ್ಪದೇ ಸೇರಿಸಿಕೊಳ್ಳುತ್ತಿರುತ್ತಾರೆ. ರಾಜಕಾರಣಿ ಮತ್ತು ಆಧ್ಯಾತ್ಮ ಗುರುಗಳ ನಡುವಿನ ಸಂಪರ್ಕ ಬಲಗೊಂಡಷ್ಟೂ ವಂಚನೆಗೆ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅಧ್ಯಾತ್ಮದ ಹೆಸರಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಉಡಾಫೆ ನಿಲುವು ಅನೇಕರಲ್ಲಿದೆ. ಅದಕ್ಕೆ ಪೂರಕವಾಗಿ ರಾಜಕಾರಣಿಗಳನ್ನು ಈ ಕ್ಷೇತ್ರ ಬಳಸಿಕೊಳ್ಳುತ್ತಿರುತ್ತದೆ. ಇಲ್ಲದಿದ್ದರೆ ಈ ಸ್ವಾಧೀನ್ ಭಾರತ್ ಗುಂಪನ್ನು ಜವಾಹರ್ ಪಾರ್ಕ್‍ನಿಂದ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ 2015ರಲ್ಲೇ ಆದೇಶಿಸಿದ್ದರೂ ಮತ್ತೂ ಒಂದು ವರ್ಷದ ವರೆಗೆ ಮಥುರಾ ಜಿಲ್ಲಾಡಳಿತ ಮೌನವಾದದ್ದು ಯಾಕೆ?  ಸರಕಾರಿ ಭೂಮಿಯಲ್ಲಿ ಸೋಗೆ ಮಾಡಿ ಗುಡಿಸಲನ್ನು ಕಟ್ಟಿಕೊಂಡ ಬಡವನ ಬಗ್ಗೆ ಜಿಲ್ಲಾಡಳಿತ ಇಷ್ಟು ಸಹನೆ ವಹಿಸುತ್ತಿತ್ತೇ?
  ಏನೇ ಆಗಲಿ, ಮಥುರಾದ ಜವಾಹರ್ ಉದ್ಯಾನವು ಈ ದೇಶವನ್ನಾಳುವ ಬಿಜೆಪಿಯ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಬಿಜೆಪಿಯೇ ಯಾಕೆ ಮುಖ್ಯ ಅಂದರೆ, ಬಿಜೆಪಿಯಷ್ಟು ಪ್ರಚ್ಛನ್ನವಾಗಿ
ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಬೇರೆ ರಾಷ್ಟ್ರೀಯ ಪಕ್ಷಗಳಿಲ್ಲ ಎಂಬುದರಿಂದ. ಮುಝಫ್ಫರ್ ನಗರಕ್ಕೆ ಬೆಂಕಿ ಕೊಟ್ಟು ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿಗೆ ಜವಾಹರ್ ಪಾರ್ಕ್‍ಗೆ ಬೆಂಕಿ ಕೊಟ್ಟು ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಕಷ್ಟವೇನೂ ಇರಲಿಲ್ಲ. ಆದರೆ ಮುಝಫ್ಫರ್ ನಗರಕ್ಕಿದ್ದ ಹಿಂದೂ-ಮುಸ್ಲಿಮ್ ವಿಶೇಷತೆ ಜವಾಹರ್ ಪಾರ್ಕ್‍ಕೆ ಇಲ್ಲ ಎಂಬುದೇ ಬಿಜೆಪಿಯ ಪಾಲಿನ ಬಹುದೊಡ್ಡ ಹಿನ್ನಡೆ. ಆದ್ದರಿಂದಲೇ ಅದು ಸ್ವಾಧೀನ್ ಭಾರತ್ ಗುಂಪಿನ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳ ಬಗ್ಗೆಯಾಗಲಿ, ಎರಡು ವರ್ಷಗಳ ವರೆಗೆ ಅಕ್ರಮವಾಗಿ ನೆಲೆಸಿರುವ ಬಗ್ಗೆಯಾಗಲಿ ಗಂಭೀರವಾಗಿ ಮಾತಾಡುತ್ತಲೇ ಇಲ್ಲ. ಅದನ್ನು ದೇಶದ್ರೋಹವಾಗಿಯೂ ಅದು ಕಾಣುತ್ತಿಲ್ಲ. ಸ್ವಾದೀನ್ ಭಾರತ್ ಗುಂಪನ್ನು ಖಂಡಿಸಲು ಬಿಜೆಪಿ ಬಳಸಿರುವ ಪದಗಳಲ್ಲಿ ಎಷ್ಟು ಮೃದುತನವಿದೆಯೆಂದರೆ, ಅವು ಜೋಗಳದಷ್ಟೇ ಇಂಪಾಗಿವೆ. ಈ ಬಗೆಯ ದ್ವಂದ್ವಕ್ಕೆ ಧಿಕ್ಕಾರವನ್ನಲ್ಲದೇ ಇನ್ನೇನು ತಾನೇ ಹೇಳಲು ಸಾಧ್ಯ?

Friday 3 June 2016

ಕಲ್ಯಾಣ ರಾಷ್ಟ್ರದ ಪ್ರಣಾಳಿಕೆ ಮತ್ತು ಟ್ರಾಫಿಕ್ ಲೈಟು

          ಇಸ್ಲಾಮ್ ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರದ ಸ್ವರೂಪ ಯಾವುದು? ಪ್ರಚಲಿತದಲ್ಲಿರುವ ಕಾನೂನುಗಳು, ನಿಯಮ ಸಂಹಿತೆಗಳು ಮತ್ತು ರೀತಿ-ರಿವಾಜುಗಳನ್ನೆಲ್ಲ ಅನಾಮತ್ತಾಗಿ ರದ್ದುಪಡಿಸಿ, ಬೇರೆಯದೇ ಆದ ಅಮಾನುಷ ನಿಯಮಗಳನ್ನು ಹೇರುವುದು ಅದರ ರೀತಿಯೇ? ಯಾಕೆ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆಂದರೆ, ಸಾಮಾನ್ಯವಾಗಿ ಇಸ್ಲಾಮೀ ಕಾನೂನು ಅಂದ ತಕ್ಷಣ ಶರೀಅತ್ ಎಂಬೊಂದು ಆಕೃತಿ ಪ್ರತ್ಯಕ್ಷಗೊಳ್ಳುತ್ತದೆ. ಈ ಆಕೃತಿಗೆ ಸಮಾಜ ಇವತ್ತು ಎಷ್ಟು ಕರ್ರಗಿನ ಬಣ್ಣವನ್ನು ಬಳಿದಿದೆಯೆಂದರೆ, ಈ ಆಕೃತಿ ಅಸ್ತಿತ್ವದಲ್ಲಿರುವುದೇ ಜನರ ತಲೆ ಕಡಿಯಲು, ಕಲ್ಲೆಸೆದು ಕೊಲ್ಲಲು, ಶೋಷಕರನ್ನು ರಕ್ಷಿಸಲು, ಹೆಣ್ಣನ್ನು ಗುಲಾಮಳನ್ನಾಗಿಸಲು, ಮಾನವ ಹಕ್ಕುಗಳನ್ನೆಲ್ಲ ಸಾರಾಸಗಟು ಉಲ್ಲಂಘಿಸಲು.. ಇತ್ಯಾದಿ ಇತ್ಯಾದಿಗಳಿಗಾಗಿ ಎಂದು ಅಂದುಕೊಳ್ಳುವಷ್ಟು. ಇಸ್ಲಾಮ್‍ಗೆ ಮತ್ತು ಅದು ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರದ ಪ್ರಣಾಳಿಕೆಗೆ ಸಂಬಂಧಿಸಿ ಸಾಕಷ್ಟು ಮಂದಿಯಲ್ಲಿ ಇಂಥ ತಿರುಚಿದ ಅಭಿಪ್ರಾಯಗಳಿವೆ. ಶರೀಅತ್ ಎಂಬುದು ಅವರ ಮಟ್ಟಿಗೆ ಅತ್ಯಂತ ಹಿಂಸಾತ್ಮಕ ಮತ್ತು ಬರ್ಬರವಾದುದು. ಕಲ್ಯಾಣ ರಾಷ್ಟ್ರವನ್ನು ಪರಿಚಯಿಸಲು ಇಸ್ಲಾಮ್‍ಗೆ ಸಾಧ್ಯವೇ ಇಲ್ಲ ಎಂದು ಪ್ರಾಮಾಣಿಕವಾಗಿ ನಂಬುವವರೂ ಈ ವರ್ಗದಲ್ಲಿದ್ದಾರೆ. ಹಾಗಂತ, ಈ ವರ್ಗದ ಈ ಬಗೆಯ ಅಭಿಪ್ರಾಯಗಳಿಗೆ ಅವರನ್ನೇ ಹೊಣೆಯಾಗಿಸುವುದು ಸಂಪೂರ್ಣ ಸರಿಯಾಗುವುದೂ ಇಲ್ಲ. ಇಸ್ಲಾಮ್‍ನ ಅನುಯಾಯಿಗಳೆಂದು ಗುರುತಿಸಿಕೊಂಡವರ ವರ್ತನೆಗೂ ಇದರಲ್ಲಿ ಪಾಲಿದೆ. ಅವರ ಕೆಲವು ಅಮಾನುಷ ಕೃತ್ಯಗಳು ಇಸ್ಲಾಮ್‍ನ ಟ್ಯಾಗ್‍ಲೈನ್‍ನೊಂದಿಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ನಾವು ಈ ಅಭಿಪ್ರಾಯದ ಜೊತೆಗಿಟ್ಟು ನೋಡಲೇಬೇಕಾಗುತ್ತದೆ. ನಿಜಕ್ಕೂ ಇಸ್ಲಾಮ್ ಪ್ರಸ್ತುಪಡಿಸುವ ಕಲ್ಯಾಣ ರಾಷ್ಟ್ರವು ಭೀಕರವೇ, ಮನುಷ್ಯ ವಿರೋಧಿಯೇ ಅಥವಾ ಸರ್ವರ ಹಿತಾಕಾಂಕ್ಷಿಯೇ? ಅದು ಮುಂದಿಡಬಯಸುವ ಪ್ರಣಾಳಿಕೆ ಯಾವುದು?
        ಇಸ್ಲಾಮ್ ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರವೆಂದರೆ, ಪ್ರಸ್ತುತ ಇರುವ ನಿಯಮಗಳನ್ನೆಲ್ಲ ರದ್ದುಪಡಿಸುವುದರ ಹೆಸರಲ್ಲ ಬದಲು ನಿಯಮಗಳಿಗೆ ಬದ್ಧವಾಗಿ ಬದುಕುವ ನಾಗರಿಕರನ್ನು ತಯಾರಿಸುವುದು. ಸರಿ ಮತ್ತು ತಪ್ಪುಗಳ ಬಗ್ಗೆ ಅತ್ಯಂತ ವಿವೇಚನೆಯಿಂದ ನಡಕೊಳ್ಳುವ ಸಮಾಜವನ್ನು ನಿರ್ಮಿಸುವುದು. ಟ್ರಾಫಿಕ್‍ನಲ್ಲಿ ಒಂದು ನಿಯಮವಿದೆ. ಕೆಂಪು ಲೈಟು ಉರಿದಾಗ ವಾಹನಗಳು ನಿಲ್ಲಬೇಕು. ಹಸಿರು ಲೈಟು ಉರಿದಾಗ ಚಲಿಸಬೇಕು. ನಿಯಮಕ್ಕೆ ಬದ್ಧವಾಗುವುದೆಂದರೆ ಹೀಗೆ. ಟ್ರಾಫಿಕ್ ಲೈಟ್ ಇಲ್ಲಿ ಒಂದು ಸಂಕೇತ ಮಾತ್ರ. ಪ್ರತಿ ವಿಷಯಕ್ಕೂ ಈ ನಿಯಮ ಅನ್ವಯಿಸುತ್ತದೆ. ಕಾನೂನಿಗೆ ಬದ್ಧವಾಗಿ, ನಿಯಮಗಳಿಗೆ ಅಧೀನವಾಗಿ ಬದುಕುವ ಒಂದು ಸಮಾಜದ ಹೆಸರೇ ಕಲ್ಯಾಣ ರಾಷ್ಟ್ರ. ದುರಂತ ಏನೆಂದರೆ, ಇಸ್ಲಾಮ್‍ಗೆ ಸಂಬಂಧಿಸಿ ಹೇಳುವಾಗ ಇಂಥ ನಿಯಮಗಳನ್ನು ಉಲ್ಲಂಘಿಸುವುದೇ ಅದರ ನಿಜ ಸ್ವರೂಪ ಎಂದು ಹೇಳಲಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಯಾವುದೆಲ್ಲ ಕಲ್ಯಾಣಕಾರಿ ನಿಯಮಗಳು ಇವೆಯೋ ಅವೆಲ್ಲವನ್ನೂ ಇಸ್ಲಾಮ್‍ನ ನಾಗರಿಕ ನಿಯಮಗಳು ಅಮಾನ್ಯಗೊಳಿಸುತ್ತವೆ ಎಂದೇ ನಂಬಿಬಿಡಲಾಗಿದೆ. ಈ ಅಪಾರ್ಥದ ಮಟ್ಟ ಹೇಗಿದೆಯೆಂದರೆ, ಟ್ರಾಫಿಕ್‍ನಲ್ಲಿ ಕೆಂಪು ಲೈಟು ಉರಿದರೆ ನಿಲ್ಲುವ ಬದಲು ಇಸ್ಲಾಮೀ ಪ್ರಣಾಳಿಕೆಯು ಚಲಿಸಲು ಹೇಳುತ್ತದೆ ಎಂದು ಹೇಳುವಷ್ಟು. ಪ್ರಸ್ತುತ ಅಸ್ತಿತ್ವದಲ್ಲಿರುವ ಸರ್ವ ನಿಯಮಗಳಿಗೆ ವಿರುದ್ಧವಾದುದೇ ಇಸ್ಲಾಮೀ ನಿಯಮಗಳು ಎಂದು ಅಂದುಕೊಳ್ಳಲಾಗಿದೆ. ನಿಜವಾಗಿ, ಇಸ್ಲಾಮ್ ಅತ್ಯಂತ ಪ್ರಗತಿಪರ ಅಥವಾ ಭಾರತೀಯ ಭಾಷೆಯಲ್ಲಿ ಹೇಳುವುದಾದರೆ ಅತ್ಯಂತ ಸೆಕ್ಯುಲರ್ ಪ್ರಣಾಳಿಕೆಯನ್ನು ಸಮಾಜದ ಮುಂದಿಡುತ್ತದೆ. ಅದು ಕೆಂಪು ಲೈಟು ಉರಿಯುವಾಗ ಚಲಿಸಲು ಆದೇಶಿಸುವ ಪ್ರಣಾಳಿಕೆಯಲ್ಲ. ಕೆಂಪು ಲೈಟು ಸೂಚಿಸುವ ನಿಯಮಕ್ಕೆ ಬದ್ಧವಾಗಿ ಬದುಕುವಂತೆ ಸಮಾಜವನ್ನು ತಿದ್ದುವ ಪ್ರಣಾಳಿಕೆ. ಕಾನೂನನ್ನು ಪ್ರೀತಿಸುವ ಮತ್ತು ಕಾನೂನು ಉಲ್ಲಂಘನೆಯನ್ನು ಇಷ್ಟಪಡದ ನಾಗರಿಕರನ್ನು ತಯಾರಿಸುವ ಪ್ರಣಾಳಿಕೆ. ಅದು ನಾಗರಿಕರನ್ನು ಶಿಕ್ಷಿಸಬಯಸುವ ಪ್ರಣಾಳಿಕೆಯಲ್ಲ, ನಾಗರಿಕರನ್ನು ಸಂಸ್ಕರಿಸ ಬಯಸುವ ಪ್ರಣಾಳಿಕೆ.
         ಈ ಪ್ರಣಾಳಿಕೆಯ ಕುರಿತಂತೆ ಅಸ್ತಿತ್ವದಲ್ಲಿರುವ ಸುಳ್ಳುಗಳಿಗೆ ಸೋಲಾಗಲಿ ಎಂದೇ ಪ್ರಾರ್ಥಿಸೋಣ.