Friday 3 June 2016

ಕಲ್ಯಾಣ ರಾಷ್ಟ್ರದ ಪ್ರಣಾಳಿಕೆ ಮತ್ತು ಟ್ರಾಫಿಕ್ ಲೈಟು

          ಇಸ್ಲಾಮ್ ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರದ ಸ್ವರೂಪ ಯಾವುದು? ಪ್ರಚಲಿತದಲ್ಲಿರುವ ಕಾನೂನುಗಳು, ನಿಯಮ ಸಂಹಿತೆಗಳು ಮತ್ತು ರೀತಿ-ರಿವಾಜುಗಳನ್ನೆಲ್ಲ ಅನಾಮತ್ತಾಗಿ ರದ್ದುಪಡಿಸಿ, ಬೇರೆಯದೇ ಆದ ಅಮಾನುಷ ನಿಯಮಗಳನ್ನು ಹೇರುವುದು ಅದರ ರೀತಿಯೇ? ಯಾಕೆ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆಂದರೆ, ಸಾಮಾನ್ಯವಾಗಿ ಇಸ್ಲಾಮೀ ಕಾನೂನು ಅಂದ ತಕ್ಷಣ ಶರೀಅತ್ ಎಂಬೊಂದು ಆಕೃತಿ ಪ್ರತ್ಯಕ್ಷಗೊಳ್ಳುತ್ತದೆ. ಈ ಆಕೃತಿಗೆ ಸಮಾಜ ಇವತ್ತು ಎಷ್ಟು ಕರ್ರಗಿನ ಬಣ್ಣವನ್ನು ಬಳಿದಿದೆಯೆಂದರೆ, ಈ ಆಕೃತಿ ಅಸ್ತಿತ್ವದಲ್ಲಿರುವುದೇ ಜನರ ತಲೆ ಕಡಿಯಲು, ಕಲ್ಲೆಸೆದು ಕೊಲ್ಲಲು, ಶೋಷಕರನ್ನು ರಕ್ಷಿಸಲು, ಹೆಣ್ಣನ್ನು ಗುಲಾಮಳನ್ನಾಗಿಸಲು, ಮಾನವ ಹಕ್ಕುಗಳನ್ನೆಲ್ಲ ಸಾರಾಸಗಟು ಉಲ್ಲಂಘಿಸಲು.. ಇತ್ಯಾದಿ ಇತ್ಯಾದಿಗಳಿಗಾಗಿ ಎಂದು ಅಂದುಕೊಳ್ಳುವಷ್ಟು. ಇಸ್ಲಾಮ್‍ಗೆ ಮತ್ತು ಅದು ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರದ ಪ್ರಣಾಳಿಕೆಗೆ ಸಂಬಂಧಿಸಿ ಸಾಕಷ್ಟು ಮಂದಿಯಲ್ಲಿ ಇಂಥ ತಿರುಚಿದ ಅಭಿಪ್ರಾಯಗಳಿವೆ. ಶರೀಅತ್ ಎಂಬುದು ಅವರ ಮಟ್ಟಿಗೆ ಅತ್ಯಂತ ಹಿಂಸಾತ್ಮಕ ಮತ್ತು ಬರ್ಬರವಾದುದು. ಕಲ್ಯಾಣ ರಾಷ್ಟ್ರವನ್ನು ಪರಿಚಯಿಸಲು ಇಸ್ಲಾಮ್‍ಗೆ ಸಾಧ್ಯವೇ ಇಲ್ಲ ಎಂದು ಪ್ರಾಮಾಣಿಕವಾಗಿ ನಂಬುವವರೂ ಈ ವರ್ಗದಲ್ಲಿದ್ದಾರೆ. ಹಾಗಂತ, ಈ ವರ್ಗದ ಈ ಬಗೆಯ ಅಭಿಪ್ರಾಯಗಳಿಗೆ ಅವರನ್ನೇ ಹೊಣೆಯಾಗಿಸುವುದು ಸಂಪೂರ್ಣ ಸರಿಯಾಗುವುದೂ ಇಲ್ಲ. ಇಸ್ಲಾಮ್‍ನ ಅನುಯಾಯಿಗಳೆಂದು ಗುರುತಿಸಿಕೊಂಡವರ ವರ್ತನೆಗೂ ಇದರಲ್ಲಿ ಪಾಲಿದೆ. ಅವರ ಕೆಲವು ಅಮಾನುಷ ಕೃತ್ಯಗಳು ಇಸ್ಲಾಮ್‍ನ ಟ್ಯಾಗ್‍ಲೈನ್‍ನೊಂದಿಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ನಾವು ಈ ಅಭಿಪ್ರಾಯದ ಜೊತೆಗಿಟ್ಟು ನೋಡಲೇಬೇಕಾಗುತ್ತದೆ. ನಿಜಕ್ಕೂ ಇಸ್ಲಾಮ್ ಪ್ರಸ್ತುಪಡಿಸುವ ಕಲ್ಯಾಣ ರಾಷ್ಟ್ರವು ಭೀಕರವೇ, ಮನುಷ್ಯ ವಿರೋಧಿಯೇ ಅಥವಾ ಸರ್ವರ ಹಿತಾಕಾಂಕ್ಷಿಯೇ? ಅದು ಮುಂದಿಡಬಯಸುವ ಪ್ರಣಾಳಿಕೆ ಯಾವುದು?
        ಇಸ್ಲಾಮ್ ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರವೆಂದರೆ, ಪ್ರಸ್ತುತ ಇರುವ ನಿಯಮಗಳನ್ನೆಲ್ಲ ರದ್ದುಪಡಿಸುವುದರ ಹೆಸರಲ್ಲ ಬದಲು ನಿಯಮಗಳಿಗೆ ಬದ್ಧವಾಗಿ ಬದುಕುವ ನಾಗರಿಕರನ್ನು ತಯಾರಿಸುವುದು. ಸರಿ ಮತ್ತು ತಪ್ಪುಗಳ ಬಗ್ಗೆ ಅತ್ಯಂತ ವಿವೇಚನೆಯಿಂದ ನಡಕೊಳ್ಳುವ ಸಮಾಜವನ್ನು ನಿರ್ಮಿಸುವುದು. ಟ್ರಾಫಿಕ್‍ನಲ್ಲಿ ಒಂದು ನಿಯಮವಿದೆ. ಕೆಂಪು ಲೈಟು ಉರಿದಾಗ ವಾಹನಗಳು ನಿಲ್ಲಬೇಕು. ಹಸಿರು ಲೈಟು ಉರಿದಾಗ ಚಲಿಸಬೇಕು. ನಿಯಮಕ್ಕೆ ಬದ್ಧವಾಗುವುದೆಂದರೆ ಹೀಗೆ. ಟ್ರಾಫಿಕ್ ಲೈಟ್ ಇಲ್ಲಿ ಒಂದು ಸಂಕೇತ ಮಾತ್ರ. ಪ್ರತಿ ವಿಷಯಕ್ಕೂ ಈ ನಿಯಮ ಅನ್ವಯಿಸುತ್ತದೆ. ಕಾನೂನಿಗೆ ಬದ್ಧವಾಗಿ, ನಿಯಮಗಳಿಗೆ ಅಧೀನವಾಗಿ ಬದುಕುವ ಒಂದು ಸಮಾಜದ ಹೆಸರೇ ಕಲ್ಯಾಣ ರಾಷ್ಟ್ರ. ದುರಂತ ಏನೆಂದರೆ, ಇಸ್ಲಾಮ್‍ಗೆ ಸಂಬಂಧಿಸಿ ಹೇಳುವಾಗ ಇಂಥ ನಿಯಮಗಳನ್ನು ಉಲ್ಲಂಘಿಸುವುದೇ ಅದರ ನಿಜ ಸ್ವರೂಪ ಎಂದು ಹೇಳಲಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಯಾವುದೆಲ್ಲ ಕಲ್ಯಾಣಕಾರಿ ನಿಯಮಗಳು ಇವೆಯೋ ಅವೆಲ್ಲವನ್ನೂ ಇಸ್ಲಾಮ್‍ನ ನಾಗರಿಕ ನಿಯಮಗಳು ಅಮಾನ್ಯಗೊಳಿಸುತ್ತವೆ ಎಂದೇ ನಂಬಿಬಿಡಲಾಗಿದೆ. ಈ ಅಪಾರ್ಥದ ಮಟ್ಟ ಹೇಗಿದೆಯೆಂದರೆ, ಟ್ರಾಫಿಕ್‍ನಲ್ಲಿ ಕೆಂಪು ಲೈಟು ಉರಿದರೆ ನಿಲ್ಲುವ ಬದಲು ಇಸ್ಲಾಮೀ ಪ್ರಣಾಳಿಕೆಯು ಚಲಿಸಲು ಹೇಳುತ್ತದೆ ಎಂದು ಹೇಳುವಷ್ಟು. ಪ್ರಸ್ತುತ ಅಸ್ತಿತ್ವದಲ್ಲಿರುವ ಸರ್ವ ನಿಯಮಗಳಿಗೆ ವಿರುದ್ಧವಾದುದೇ ಇಸ್ಲಾಮೀ ನಿಯಮಗಳು ಎಂದು ಅಂದುಕೊಳ್ಳಲಾಗಿದೆ. ನಿಜವಾಗಿ, ಇಸ್ಲಾಮ್ ಅತ್ಯಂತ ಪ್ರಗತಿಪರ ಅಥವಾ ಭಾರತೀಯ ಭಾಷೆಯಲ್ಲಿ ಹೇಳುವುದಾದರೆ ಅತ್ಯಂತ ಸೆಕ್ಯುಲರ್ ಪ್ರಣಾಳಿಕೆಯನ್ನು ಸಮಾಜದ ಮುಂದಿಡುತ್ತದೆ. ಅದು ಕೆಂಪು ಲೈಟು ಉರಿಯುವಾಗ ಚಲಿಸಲು ಆದೇಶಿಸುವ ಪ್ರಣಾಳಿಕೆಯಲ್ಲ. ಕೆಂಪು ಲೈಟು ಸೂಚಿಸುವ ನಿಯಮಕ್ಕೆ ಬದ್ಧವಾಗಿ ಬದುಕುವಂತೆ ಸಮಾಜವನ್ನು ತಿದ್ದುವ ಪ್ರಣಾಳಿಕೆ. ಕಾನೂನನ್ನು ಪ್ರೀತಿಸುವ ಮತ್ತು ಕಾನೂನು ಉಲ್ಲಂಘನೆಯನ್ನು ಇಷ್ಟಪಡದ ನಾಗರಿಕರನ್ನು ತಯಾರಿಸುವ ಪ್ರಣಾಳಿಕೆ. ಅದು ನಾಗರಿಕರನ್ನು ಶಿಕ್ಷಿಸಬಯಸುವ ಪ್ರಣಾಳಿಕೆಯಲ್ಲ, ನಾಗರಿಕರನ್ನು ಸಂಸ್ಕರಿಸ ಬಯಸುವ ಪ್ರಣಾಳಿಕೆ.
         ಈ ಪ್ರಣಾಳಿಕೆಯ ಕುರಿತಂತೆ ಅಸ್ತಿತ್ವದಲ್ಲಿರುವ ಸುಳ್ಳುಗಳಿಗೆ ಸೋಲಾಗಲಿ ಎಂದೇ ಪ್ರಾರ್ಥಿಸೋಣ.

No comments:

Post a Comment