Thursday 17 November 2016

ನುಡಿದ ಮಾತನು ನುಂಗಿ ನಡೆದರೆ ಮೆಚ್ಚನಾ ಪರಮಾತ್ಮನು....

ಮೀನಾಕ್ಷಿ ಲೇಖಿ
       ಕಮಲ (ತಾವರೆ) ಮತ್ತು ಊಸರವಳ್ಳಿ ಎರಡಕ್ಕೂ ಪ್ರತ್ಯೇಕ ಅಸ್ತಿತ್ವಗಳಿವೆ. ಕಮಲ ಅರಳುವುದೇ ನೀರಿನಲ್ಲಿ. ಅದು ಬಣ್ಣ ಬದಲಿಸುವುದಿಲ್ಲ. ನೋಡಿದ ತಕ್ಷಣ ಕಮಲ ಎಂದು ಗುರುತಿಸಬಹುದಾದಷ್ಟು ಸೀದಾಸಾದಾ ಗುಣ ಅದರದು. ಆದರೆ ಊಸರವಳ್ಳಿ ಇದಕ್ಕೆ ತದ್ವಿರುದ್ಧ. ಅದು ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತಿರುತ್ತದೆ. ಬಣ್ಣ ಬದಲಾವಣೆ ಎಂಬುದು ಅದರ ಪ್ರಾಕೃತಿಕ ನಿಯಮ. ನೋಡ ನೋಡುತ್ತಲೇ ಬಣ್ಣ ಬದಲಾಯಿಸುವುದನ್ನು ಅದು ಕರಗತ ಮಾಡಿಕೊಂಡಿದೆ. ಆದ್ದರಿಂದಲೇ, ಮನುಷ್ಯರಾರೂ ತಾವು ಊಸರವಳ್ಳಿಗೆ ಹೋಲಿಕೆಯಾಗುವುದನ್ನು ಇಷ್ಟಪಡುವುದಿಲ್ಲ. ನಮ್ಮ ನಡುವಿನ ಯಾವ ರಾಜಕೀಯ ಪಕ್ಷವೂ ಊಸರವಳ್ಳಿಯನ್ನು ತಮ್ಮ ಪಕ್ಷದ ಚಿಹ್ನೆಯಾಗಿ ಆಯ್ಕೆ ಮಾಡಿ ಕೊಂಡಿದ್ದೂ ಇಲ್ಲ. ದುರಂತ ಏನೆಂದರೆ, ಕಮಲವನ್ನು ಚಿಹ್ನೆಯಾಗಿ ಆಯ್ಕೆ ಮಾಡಿಕೊಂಡಿರುವ ಪಕ್ಷದ ವರ್ತನೆಯನ್ನು ನೋಡುವಾಗ ಕಮಲದ ಬದಲು ಅದಕ್ಕೆ ಊಸರವಳ್ಳಿ ಅತ್ಯಂತ ಸೂಕ್ತ ಆಯ್ಕೆಯಾಗುತ್ತಿತ್ತೇನೋ ಎಂದೆನಿಸುತ್ತದೆ. ಕಮಲ ಪಕ್ಷದ ನಾಯಕರ ಮಾತು-ಕೃತಿ-ಹಾವ-ಭಾವಗಳು ಯಾವ ರೀತಿಯಲ್ಲೂ ಕಮಲಕ್ಕೆ ಹೋಲಿಕೆಯಾಗುತ್ತಿಲ್ಲ. 2014ರ ಆರಂಭದಲ್ಲಿ ಕೈ ಪಕ್ಷದ ಆಡಳಿತವು ನೋಟು ರದ್ದತಿಯ ಬಗ್ಗೆ ಮಾತಾಡಿತ್ತು. 2005 ಮಾರ್ಚ್ 31ರಿಂದ ಮೊದಲು ಪ್ರಕಟವಾದ ನೋಟುಗಳನ್ನು ರದ್ದುಪಡಿಸುವುದಕ್ಕೆ ಕೈ ಆಡಳಿತ ಮುಂದಾಗಿತ್ತು. ದೇಶದಾದ್ಯಂತ ಈ ಕುರಿತಂತೆ ಚರ್ಚೆಗಳೂ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ನೋಟು ರದ್ಧತಿ ಚಿಂತನೆಯನ್ನು ಪ್ರಬಲವಾಗಿ ವಿರೋಧಿಸಿದ್ದು ಕಮಲ ಪಕ್ಷ. ಆ ಪಕ್ಷದ ಸಂಸದರಾಗಿದ್ದ ಮತ್ತು ವಕ್ತಾರೆಯಾಗಿದ್ದ ಮೀನಾಕ್ಷಿ ಲೇಖಿಯವರು ಅದನ್ನು ‘ಬಡವ ವಿರೋಧಿ ಚಿಂತನೆ’ ಎಂದು ಟೀಕಿಸಿದ್ದರು. ವಿದೇಶದಿಂದ ಕಪ್ಪು ಹಣವನ್ನು ವಾಪಸು ತರಬೇಕೆಂಬ ಕೂಗನ್ನು ಮರೆಸಲು ಕೈ ಪಕ್ಷವು ನಡೆಸುತ್ತಿರುವ ತಂತ್ರ ಇದು ಎಂದೂ ವಿಶ್ಲೇಷಿಸಿದ್ದರು. ನೋಟು ರದ್ಧತಿಯನ್ನು ವಿರೋಧಿಸಿ ಅವರು ಮಾತಾಡಿದ ವೀಡಿಯೋ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೊದಲು ಕಮಲ ಪಕ್ಷದ ಅರುಣ್ ಜೇಟ್ಲಿಯವರು ಆಧಾರ್ ಕಾರ್ಡನ್ನು ತೀವ್ರವಾಗಿ ವಿರೋಧಿಸಿದ್ದರು. ಜಿಎಸ್‍ಟಿ ಮತ್ತು ಎಫ್‍ಡಿಐ (ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 100% ನೇರ ವಿದೇಶಿ ಹೂಡಿಕೆ)ಯನ್ನೂ ಖಂಡಿಸಿದ್ದರು. ಅದು ಕಮಲ ಪಕ್ಷದ ಅಧಿಕೃತ ನಿಲುವೂ ಆಗಿತ್ತು. ಇದೀಗ ಕೈ ಪಕ್ಷ ಅಧಿಕಾರ ಕಳೆದುಕೊಂಡು ಎರಡೂವರೆ ವರ್ಷಗಳು ಕಳೆದಿವೆ. ಕಮಲ ಪಕ್ಷ ಅಧಿಕಾರದಲ್ಲಿದೆ. ವಿಷಾದ ಏನೆಂದರೆ, ಕಮಲ ಪಕ್ಷದಲ್ಲಿ ಕಮಲ ಒಂದು ಚಿಹ್ನೆಯಾಗಿ ಉಳಿದಿದೆಯೇ ಹೊರತು ಗುಣವಾಗಿ ಅಲ್ಲ. ಅದರ ವರ್ತನೆಯನ್ನು ಆಧಾರವಾಗಿಸಿ ಯಾರಾದರೂ ಚಿಹ್ನೆ ನಿರ್ಧರಿಸುವುದಾದರೆ ಅದಕ್ಕೆ ಕಮಲದ ಬದಲು ಊಸರವಳ್ಳಿಯನ್ನು ಚಿಹ್ನೆಯಾಗಿ ನೀಡುವ ಎಲ್ಲ ಸಾಧ್ಯತೆಯೂ ಇದೆ. ಇವತ್ತು ಕಮಲ ಪಕ್ಷ ಆಶ್ರಯಿಸಿಕೊಂಡಿರುವುದೇ ಆಧಾರ್ ಕಾರ್ಡ್ ಅನ್ನು. ಆಧಾರ್ ಕಾರ್ಡ್ ಇಲ್ಲದೇ ಇವತ್ತು ಯಾವುದೂ ನಡೆಯಲ್ಲ ಎಂಬ ಸ್ಥಿತಿ ಇದೆ. ವಿದೇಶಿ ನೇರ ಹೂಡಿಕೆಗೆ ಚಿಲ್ಲರೆ ಮಾರುಕಟ್ಟೆಯನ್ನು ಅದು ಮುಕ್ತವಾಗಿ ಇಟ್ಟಿದೆ. ಜಿಎಸ್‍ಟಿ ಇನ್ನೇನು ಜಾರಿಯಾಗುವ ಕೊನೆಯ ಹಂತದಲ್ಲಿದೆ. ಅಲ್ಲದೇ, 2014ರಲ್ಲಿ ಬಡವರ ವಿರೋಧಿಯಾಗಿದ್ದ ನೋಟು ರದ್ಧತಿಯು ಈಗ ‘ಬಡವ ಉದ್ಧಾರಕ’ ಆಗುತ್ತಿದೆ. ಇಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಅಂಶವೆಂದರೆ, ಟಿಪ್ಪು ಸುಲ್ತಾನ್. ಕರ್ನಾಟಕ ಸರಕಾರ ಪ್ರಕಟಿಸಿರುವ ‘ಟಿಪ್ಪು ಸುಲ್ತಾನ್: ಎ ಕ್ರುಸೇಡರ್ ಫಾರ್ ಚೇಂಜ್’ ಎಂಬ
ಬಿ. ಶೇಖ್ ಅಲಿಯವರ ಸಂಶೋಧನಾತ್ಮಕ ಕೃತಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರ ಅನಿಸಿಕೆಗಳಿವೆ. ಆ ಅನಿಸಿಕೆಯಲ್ಲಿ ಅವರು ಟಿಪ್ಪುವನ್ನು ಮೈಸೂರು ಸಾಮ್ರಾಜ್ಯದ ಹುಲಿ ಎಂದಿದ್ದಾರೆ. ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಹೊಂದಿದ್ದ ಸುಧಾರಕ ಎಂದು ಕೊಂಡಾಡಿದ್ದಾರೆ. ಟಿಪ್ಪುವಿನ ರಾಷ್ಟ್ರ ಪರಿಕಲ್ಪನೆ, ಕೈಗಾರಿಕಾ ನೀತಿ ಮತ್ತು ಸೈನಿಕ ಕೌಶಲ್ಯಗಳನ್ನು ಹೊಗಳಿದ್ದಾರೆ. ಮಾತ್ರವಲ್ಲ, ಪಕ್ಷದ ನಾಯಕರಾಗಿರುವ ಯಡಿಯೂರಪ್ಪನವರು ಟಿಪ್ಪುವಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಟಿಪ್ಪು ಪೇಟವನ್ನು ಮುಡಿಗೇರಿಸಿಕೊಂಡು ಥೇಟ್ ಟಿಪ್ಪು ಸುಲ್ತಾನ್‍ನಂತೆ ಫೋಸ್ ಕೊಟ್ಟದ್ದೂ ಈ ಹಿಂದೆ ನಡೆದಿದೆ, ಅದು ಚಿತ್ರಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಒಂದು ವೇಳೆ, ಕಮಲವು ಪಕ್ಷದ ಸೈದ್ಧಾಂತಿಕ ಮುಖದ ಅನ್ವರ್ಥ ರೂಪವೇ ಆಗಿರುತ್ತಿದ್ದರೆ, ಈ ಊಸರವಳ್ಳಿ ಗುಣಗಳೆಲ್ಲ ಆ ಪಕ್ಷಕ್ಕೆ ಸಿದ್ಧಿಸಿದ್ದು ಹೇಗೆ? ಹಾಗಂತ, ಈ ಪ್ರಶ್ನೆ ಕೇವಲ ಕಮಲ ಪಕ್ಷಕ್ಕೆ ಮಾತ್ರ ಮೀಸಲಿಡಬೇಕಾದ ಅಗತ್ಯವೇನೂ ಇಲ್ಲ. ಆದರೆ ಕಮಲ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಮತ್ತು ಈ ಹಿಂದಿನ ತನ್ನ ಎಲ್ಲ ನಿಲುವುಗಳಿಗೆ ತದ್ದಿರುದ್ಧವಾಗಿ ಇವತ್ತು  ವರ್ತಿಸುತ್ತಿರುವುದರಿಂದ ಪ್ರಶ್ನಿಸಲಾಗುತ್ತಿದೆ  ಅಷ್ಟೇ.
ಟಿಪ್ಪು ಆದ ಯಡಿಯೂರಪ್ಪ ಮತ್ತು ಶೆಟ್ಟರ್

        ನಿಜವಾಗಿ, ರಾಜಕೀಯ ಕ್ಷೇತ್ರಕ್ಕೆ ಮಾತ್ರವಲ್ಲ, ಬದುಕಿನ ಎಲ್ಲ ಕ್ಷೇತ್ರಕ್ಕೂ ಕಮಲ ಯೋಗ್ಯವಾದುದು. ಊಸರವಳ್ಳಿ ಅಯೋಗ್ಯವಾದುದು. ಒಂದು- ಪ್ರಾಮಾಣಿಕತೆಗೆ ಅನ್ವರ್ಥವಾದರೆ, ಇನ್ನೊಂದು- ಅಪ್ರಾಮಾಣಿಕತೆಗೆ ಅನ್ವರ್ಥ. ಆದ್ದರಿಂದಲೇ, ಯಾವ ಪಕ್ಷಕ್ಕೂ ಊಸರವಳ್ಳಿ ಬೇಡ. ಎಲ್ಲ ಪಕ್ಷಗಳೂ ಮೌಲ್ಯಗಳ ಬಗ್ಗೆ ಮಾತಾಡುತ್ತವೆ. ಪುಣ್ಯ ಪುರುಷರ ಮಹಾತ್ಮೆಗಳನ್ನು ಹಾಡುತ್ತವೆ. ಸಂತರು, ಋಷಿ ಗಳು, ಮಹಾತ್ಮರನ್ನು ಕ್ಷಣಕ್ಷಣಕ್ಕೂ ಸ್ಮರಿಸಿಕೊಳ್ಳುತ್ತವೆ. ಆದರೆ ವರ್ತನೆಯಲ್ಲಿ ಮಾತ್ರ ಪಕ್ಕಾ ಊಸರವಳ್ಳಿಯಾಗುತ್ತವೆ. ಈ ಸ್ವಭಾವದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವುದು ಕಮಲ ಪಕ್ಷ. ಟಿಪ್ಪುವನ್ನು ಇಂದ್ರ-ಚಂದ್ರ ಎಂದು ಹೊಗಳಿದವರೇ ಇವತ್ತು ಖಳ-ಮತಾಂಧ ಎಂದು ದೂರುತ್ತಿದ್ದಾರೆ. ಹಾಗಂತ, ಇವರು ಟಿಪ್ಪುವಿನಂತೆ ಪೇಟ ತೊಟ್ಟು ಟಿಪ್ಪುವೇ ಆದಾಗಲೂ ಟಿಪ್ಪು ಏನೂ ಜೀವಂತ ಇರಲಿಲ್ಲ. ಆಗ ಟಿಪ್ಪು ಏನಾಗಿದ್ದನೋ ಅದುವೇ ಈಗಲೂ ಆಗಿದ್ದಾನೆ. ಆದ್ದರಿಂದ ಆಗ ಆತ ವಿಝನರಿ ಆಗಿದ್ದರೆ ಈಗಲೂ ಅದುವೇ ಆಗಿರಬೇಕು. 2014ರಲ್ಲಿ ನೋಟು ರದ್ಧತಿ ಬಡವ ವಿರೋಧಿಯಾಗಿದ್ದರೆ ಈ 2016ರಲ್ಲೂ ಅದು ಬಡವ ವಿರೋಧಿಯಾಗುವುದಕ್ಕೇ ಹೆಚ್ಚು ಅರ್ಹ. ಆಧಾರ್ ಕಾರ್ಡ್ ಮತ್ತು ಎಫ್‍ಡಿಐಗಳು 2014ರಲ್ಲಿ ದೇಶಕ್ಕೆ ಕಂಟಕವೆಂದಾದರೆ 2016ರಲ್ಲಿ ಅದು ದೇಶಪ್ರೇಮಿಯಾಗುವುದಕ್ಕೆ ಸಾಧ್ಯವೇ ಇಲ್ಲ. ನಿಜವಾಗಿ, ಇದು ಕಮಲದ ಗುಣ. ಕಮಲ ಬಣ್ಣ ಬದಲಾಯಿಸುವುದಿಲ್ಲ. ನೋಡಿದ ತಕ್ಷಣ ಗುರುತು ಹಚ್ಚಬಹುದಾದಷ್ಟು ನಿಶ್ಚಿತ ರೂಪ ಅದಕ್ಕೆ ಇದೆ. ಆದರೆ ಅದನ್ನು ಚಿಹ್ನೆಯಾಗಿ ಒಪ್ಪಿಕೊಂಡ ಪಕ್ಷ ಉದ್ದಕ್ಕೂ ಊಸರವಳ್ಳಿಯ ಗುಣವನ್ನೇ ಪ್ರದರ್ಶಿಸುತ್ತಿದೆ. ಚಿಹ್ನೆ ಕಮಲದ್ದಾದರೂ ವರ್ತನೆ ಊಸರವಳ್ಳಿಯದ್ದು. ಟಿಪ್ಪುವಿನ ಪೇಟ ತೊಟ್ಟು ಸ್ವತಃ ಟಿಪ್ಪುವಿನಂತಾದ ಯಡಿಯೂರಪ್ಪ ಮತ್ತು ನೋಟು ರದ್ಧತಿ ಇದಕ್ಕೆ ಅತ್ಯುತ್ತಮ ಉದಾಹರಣೆ.

No comments:

Post a Comment