Tuesday 7 February 2017

ಒಂದು ತಪರಾಕಿಯ ಸುತ್ತ..

      ಕಳೆದವಾರ ಮೂರು ವೀಡಿಯೋಗಳು ಬಿಡುಗಡೆಗೊಂಡುವು. ಚಿತ್ರೀಕರಣ, ಭಾಷಾ ಸ್ಪಷ್ಟತೆ ಮತ್ತು ಕ್ಯಾಮರಾ ಬಳಕೆಗೆ ಸಂಬಂಧಿಸಿ ಹೇಳುವುದಾದರೆ, ಇವು ಮೂರೂ ಕಳಪೆ ವೀಡಿಯೋಗಳೇ. ಪಾತ್ರಧಾರಿಗಳೂ ನಟರಾಗಿರಲಿಲ್ಲ. ತೇಜ್ ಬಹಾದ್ದೂರ್ ಯಾದವ್, ಯಜ್ಞ ಪ್ರತಾಪ್ ಸಿಂಗ್ ಮತ್ತು ನಾೈಕ್ ರಾಂ ಭಗತ್ ಎಂಬ ಮೂವರೂ ವೃತ್ತಿಪರ ನಟರೂ ಅಲ್ಲ, ಪರಿಣತ ವೀಡಿಯೋ ನಿರ್ಮಾಪಕರೂ ಅಲ್ಲ ಅಥವಾ ಪ್ರಸಿದ್ಧ ವ್ಯಕ್ತಿಗಳೂ ಅಲ್ಲ. ಆದರೆ ಈ ವೀಡಿಯೋಗಳು ಎಷ್ಟು ಜನಪ್ರಿಯ ಆಯಿತೆಂದರೆ, ತಾಂತ್ರಿಕವಾಗಿ ಅತ್ಯಂತ ಪರಿಣತ ತಂಡದವರು ನಿರ್ಮಿಸಿ ಬಿಡುಗಡೆಗೊಳಿಸುವ ಸಿನಿಮಾ ಟ್ರೇಲರ್‍ಗಿಂತಲೂ ಹೆಚ್ಚು. ಇದಕ್ಕಿರುವ ಏಕೈಕ ಕಾರಣ ಏನೆಂದರೆ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಕೆಲವು ಪರಮ ಸುಳ್ಳುಗಳು. ಈ ಸುಳ್ಳುಗಳನ್ನು ಚಾಲ್ತಿಗೆ ತಂದವರು ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರ. ಸೇನೆಯ ಬಗ್ಗೆ ಮಾತಾಡುವಾಗಲೆಲ್ಲ ಬಿಜೆಪಿ ಭಾವುಕವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗದ್ಗದಿತರಾಗುತ್ತಾರೆ. ‘ಗಡಿಯಲ್ಲಿ ಯೋಧರು ಎಚ್ಚರವಾಗಿರುವುದರಿಂದಲೇ ನಾವಿಲ್ಲಿ ಸುಖವಾಗಿ ನಿದ್ರಿಸುತ್ತೇವೆ..’ ಎಂಬ ಡಯಲಾಗು ಬಿಜೆಪಿಯ ಉನ್ನತ ನಾಯಕತ್ವದಿಂದ ಹಿಡಿದು ತಳಮಟ್ಟದ ಕಾರ್ಯಕರ್ತರ ವರೆಗೆ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ‘ಬಿಜೆಪಿಯು ಯೋಧರ ಪರ ಮತ್ತು ಕಾಂಗ್ರೆಸ್ ಯೋಧರ ವಿರೋಧಿ’ ಎಂಬ ಸಂದೇಶ ರವಾನೆಗೂ ಬಿಜೆಪಿಯ ವರ್ತನೆಗಳು ಸಾಕಷ್ಟು ನೆರವಾಗಿವೆ. ‘ನಮ್ಮ ಯೋಧರ ಒಂದು ತಲೆಯು ಪಾಕಿಸ್ತಾನದ 10 ಯೋಧರ ತಲೆಗೆ ಸಮ’ ಎಂಬ ರೀತಿಯಲ್ಲಿ ಆಡಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ. ಆದ್ದರಿಂದಲೇ, ಮೇಲಿನ ಮೂರು ವೀಡಿಯೋಗಳು ತಾಂತ್ರಿವಾಗಿ ಕಳಪೆ ಗುಣಮಟ್ಟದ ಹೊರತಾಗಿಯೂ ವೈರಲ್ ಆದುವು. ‘ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯುವ ಯೋಧರ ಅನ್ನದ ಬಟ್ಟಲಿನಿಂದ ಆಹಾರವನ್ನೂ ಕಸಿಯಲಾಗುತ್ತಿದೆ..’ ಅನ್ನುವುದನ್ನು ದೇಶದ ಜನತೆಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದಾರೆ. ರಕ್ಷಣಾ ಸಚಿವ ಪಾರಿಕ್ಕರ್ ಅವರೂ ಕಾಂಗ್ರೆಸಿನವರಲ್ಲ. ಯೋಧರ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸುವ ಪಕ್ಷ ಅಧಿಕಾರದಲ್ಲಿದ್ದೂ ಯೋಧರಿಗೇಕೆ ಈ ಸ್ಥಿತಿ ಬಂದೊದಗಿದೆ? ನಮ್ಮ ಯೋಧರು ಸರ್ಜಿಕಲ್ ದಾಳಿ ನಡೆಸಿದ್ದು ಈ ಕರಕಲು ಪರೋಟ, ಕಳಪೆ ದಾಲ್ ಅನ್ನು ಸೇವಿಸಿಯೇ? ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವವರಿಗೆ ಕನಿಷ್ಠ ಉತ್ತಮ ಆಹಾರವನ್ನು ಒದಗಿಸುವ ಹೊಣೆಗಾರಿಕೆಯನ್ನೂ ಈ ಸರಕಾರ ಪ್ರದರ್ಶಿಸುವುದಿಲ್ಲವೆಂದರೆ, ಅದರ ಭಾವುಕತನ, ‘ಹತ್ತು ತಲೆಯ’ ಡಯಲಾಗ್‍ಗಳಿಗೆಲ್ಲ ಏನು ನೆಲೆ-ಬೆಲೆ ಇದೆ ಎಂದು ವೀಕ್ಷಕರು ಅಚ್ಚರಿಪಟ್ಟರು.
      ವಿಷಾದ ಏನೆಂದರೆ, ಯೋಧರ ಬಗ್ಗೆ ಮತ್ತು ಗಡಿಯಲ್ಲಿ ಅವರು ಚಳಿ-ಮಳೆ-ಬಿಸಿಲನ್ನೂ ಲೆಕ್ಕಿಸದೇ ದೇಶ ಕಾಯುವುದರ ಬಗ್ಗೆ ಅದ್ಭುತ ಭಾಷಣಗಳನ್ನು ಬಿಗಿಯುವ ಬಿಜೆಪಿ ಮತ್ತು ಅದರ ಪರಿವಾರದ ನಾಯಕರಲ್ಲಿ ಒಬ್ಬರೂ ಈ ವೀಡಿಯೋಗಳ ಬಗ್ಗೆ ಮಾತಾಡುತ್ತಿಲ್ಲ. ಅದರ ಬದಲು ಈ ವೀಡಿಯೋಗಳ ಗಂಭೀರತೆಯನ್ನು ತಗ್ಗಿಸುವ ಶ್ರಮಗಳನ್ನು ವಿವಿಧ ಮೂಲಗಳ ಮೂಲಕ ಅವರು ನಿರ್ವಹಿಸುತ್ತಿದ್ದಾರೆ. ಪ್ರಥಮವಾಗಿ ವೀಡಿಯೋವನ್ನು ಬಿಡುಗಡೆಗೊಳಿಸಿದ ಬಿಎಸ್‍ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್‍ರನ್ನು ಮದ್ಯವ್ಯಸನಿ, ಅವಿಧೇಯ ಎಂದೆಲ್ಲಾ ಸೇನೆಯ ವತಿಯಿಂದ ಹೇಳಿಸಿರುವುದು ಇದಕ್ಕೆ ಉತ್ತಮ ಪುರಾವೆ. ಈ ಮೊದಲು ‘ಏಕಶ್ರೇಣಿ, ಏಕ ಪಿಂಚಣಿ’ಗೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನ ಬಗ್ಗೆಯೂ ಇಂಥದ್ದೇ ತಂತ್ರವನ್ನು ಇವೇ ಮಂದಿ ಪ್ರದರ್ಶಿಸಿದ್ದರು. ಆ ಯೋಧರನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದರು. ಒಂದು ರೀತಿಯಲ್ಲಿ, ಇದು ಆ ಯೋಧರಿಗೆ ಮಾತ್ರ ಅಲ್ಲ, ನಮ್ಮ ಸೇನೆಗೇ ಮಾಡಿದ ಅವಮಾನವಾಗಿತ್ತು. ನಿಜವಾಗಿ, ‘ಏಕಶ್ರೇಣಿ, ಏಕ ಪಿಂಚಣಿ’ ಎಂಬುದು ಯಾವುದಾದರೂ ನಿರ್ದಿಷ್ಟ ಧರ್ಮದ, ಜಾತಿಯ, ಪಂಗಡದ ಬೇಡಿಕೆಯೇನೂ ಆಗಿರಲಿಲ್ಲ. ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯ್ದ ‘ಯೋಧರು’ ಎಂಬ ವಿಶಾಲ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ನಿವೃತ್ತಿಯ ಬಳಿಕ ಅವರು ಸುಖವಾಗಿ ನಿದ್ದೆ ಮಾಡುವಂತೆ ಮತ್ತು ನೆಮ್ಮದಿಯಿಂದ ಬಾಳುವಂತೆ ಮಾಡುವ ಉದ್ದೇಶದ ಯೋಜನೆಯಾಗಿತ್ತು. ಆದರೆ ಬಿಜೆಪಿ ಈ ಬೇಡಿಕೆಯನ್ನು ಎಷ್ಟಂಶ ನಿರ್ಲಕ್ಷಿಸಿತೆಂದರೆ, ನಿವೃತ್ತ ಯೋಧ ಕೊನೆಗೆ ನಿರಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು. ಅಂದು ಆ ಯೋಧನ ಸಾವಿಗೆ ಬಿಜೆಪಿ ಒದಗಿಸಿದ ಕಾರಣವನ್ನೇ ಈಗ ಸೇನಾ ಮುಖ್ಯಸ್ಥರ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್‍ರ ಮುಖಾಂತರ ಯೋಧರಿಗೆ ಬೆದರಿಕೆಯನ್ನೂ ನೀಡಲಾಗಿದೆ.
      ಒಂದು ವೇಳೆ, ಸೇನೆಯಲ್ಲಿರುವ ಪ್ರತಿ ಯೋಧರ ಮನೆಗೆ ಭೇಟಿ ಕೊಡುವ ಯೋಜನೆಯನ್ನೇನೇದರೂ ನಾವು ಕೈಗೆತ್ತಿಕೊಂಡರೆ, ಹಳ್ಳಿ-ಗ್ರಾಮ-ತಾಲೂಕುಗಳ ಮೂಲೆಯಲ್ಲಿರುವ ಮನೆಯಂತಹ ಸಾಮಾನ್ಯ ಸೂರುಗಳೇ ನಮ್ಮನ್ನು ಸ್ವಾಗತಿಸಿಯಾವು. ರಾಜಕಾರಣಿಗಳು, ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳ ಮಕ್ಕಳು ಸೇನೆಯಲ್ಲಿ ಕಾಣಿಸುವುದು ತೀರಾ ಅಪರೂಪ. ಶ್ರೀಮಂತರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದು ಬಹಳ ಬಹಳ ಕಡಿಮೆ. ಆದ್ದರಿಂದಲೇ, ಭಾರತೀಯ ಸೇನೆ ಎಂಬುದು ಬಹುಸಂಖ್ಯಾತ ಭಾರತೀಯರ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುವುದು. ಅವರಿಗೆ ಬಡತನದ ಅರಿವಿದೆ. ಹಸಿವಿದ್ದು ಗೊತ್ತಿದೆ. ಹಳಸಲು ರೊಟ್ಟಿ, ದಾಲ್‍ಗಳ ಪರಿಚಯವೂ ಇದೆ. ಈ ಕಳಪೆಗಳನ್ನು ಸೇವಿಸಿಯೇ ಈ ಯೋಧರು ಅಂಬಾನಿ, ಅದಾನಿಗಳಿರುವ, ಶ್ರೀಮಂತ ರಾಜಕಾರಣಿಗಳಿರುವ; ಭ್ರಷ್ಟರು, ಕ್ರಿಮಿನಲ್‍ಗಳು, ಮನುಷ್ಯ ದ್ರೋಹಿಗಳೂ ಇರುವ ಭಾರತವೆಂಬ ವಿಶಾಲ ರಾಷ್ಟ್ರವನ್ನು ನಿದ್ದೆಗೆಟ್ಟು ಕಾಯುತ್ತಿದ್ದಾರೆ. ಈ ಸಹನೆಯನ್ನು ಶ್ರೀಮಂತರಿಂದ ನಿರೀಕ್ಷಿಸುವುದು ಬಹಳ ಕಷ್ಟ. ಚಿನ್ನದ ತಟ್ಟೆಯಲ್ಲಿ ಊಟ ಮಾಡಿದ ವ್ಯಕ್ತಿ, ಕರಕಲು ಪರೋಟವನ್ನು ಮತ್ತು ಕಳಪೆ ದಾಲ್ ಅನ್ನು ಹೊಟ್ಟೆಗಿಳಿಸುವುದಕ್ಕೆ ಒಪ್ಪಿಕೊಳ್ಳುತ್ತಾನೆಂದು ಹೇಳಲಾಗದು. ಬಹುಶಃ, ಭಾರತೀಯ ಸೇನೆಯಲ್ಲಿ ಶ್ರೀಮಂತ ಭಾರತೀಯರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಾಗಿರುವುದಕ್ಕೆ ಅದರಲ್ಲಿರುವ ಅಪಾಯ ಮತ್ತು ಸೌಲಭ್ಯಗಳ ಕೊರತೆಯೂ ಕಾರಣವಾಗಿರಬಹುದು. ಸಾಯುವುದಕ್ಕೆ ಸಿದ್ಧಗೊಳಿಸುವ ಮತ್ತು ಸಾವನ್ನು ವಿಜೃಂಭಿಸುವುದರ ಹೊರತಾಗಿ ಸೌಲಭ್ಯವಿಲ್ಲದ ಕ್ಷೇತ್ರವಾಗಿ ಅದು ಮಾರ್ಪಟ್ಟಿರುವುದೂ ಇನ್ನೊಂದು ಕಾರಣವಾಗಿರಬಹುದು. ಒಂದು ವೇಳೆ, ಶ್ರೀಮಂತರಿಗೆ ಸೇನೆ ಸೇರುವುದನ್ನು ಕಡ್ಡಾಯಗೊಳಿಸಿರುತ್ತಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತಿತ್ತು? ಕರಕಲು ಪರೋಟಗಳು ಯಾವ ಮಟ್ಟದ ಸುದ್ದಿಗೆ ಒಳಗಾಗುತ್ತಿತ್ತು ಅಥವಾ ಅಂತಹ ಪರೋಟಗಳು ಅಲ್ಲಿ ಲಭ್ಯವಿರುತ್ತಿತ್ತೇ? ಅಲ್ಲಿನ ಸೌಲಭ್ಯಗಳು ಎಷ್ಟು ಉನ್ನತ ಮಟ್ಟದವು ಆಗಿರುತ್ತಿತ್ತು? ಏಕಶ್ರೇಣಿ ಏಕ ಪಿಂಚಣಿಗಾಗಿ ನಿರಶನ ಕೈಗೊಳ್ಳಬೇಕಾದ ಅಗತ್ಯ ಬರುತ್ತಿತ್ತೇ?
      ಏನೇ ಆಗಲಿ, ಸದ್ಯ ಬಿಡುಗಡೆಗೊಂಡ ಮೂರು ವೀಡಿಯೋಗಳಲ್ಲಿ ಯೋಧರ ಸಂಕಟಗಳಷ್ಟೇ ಇರುವುದಲ್ಲ, ಯೋಧರಿಗಾಗಿ ಮೊಸಳೆ ಕಣ್ಣೀರು ಸುರಿಸಿದವರಿಗೆ ತಪರಾಕಿಯೂ ಇದೆ. ಯೋಧರ ಕತೆ ಹೇಳುತ್ತಾ ಭಾವುಕವಾಗುವ ಬಿಜೆಪಿ, ಅದರಾಚೆಗೆ ಅವರಿಗಾಗಿ ಏನನ್ನೂ ಮಾಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕನಿಷ್ಠ ಯೋಧರ ಸ್ಥಿತಿ-ಗತಿಯ ಬಗ್ಗೆ ಪರಿಶೀಲನೆ ನಡೆಸುವ ಪ್ರಯತ್ನವನ್ನೂ ಅದು ನಡೆಸಿಲ್ಲ. ಆದ್ದರಿಂದಲೇ, ಯೋಧರಿಗೆ ನಿರಾಶೆಯಾಗಿದೆ. ತಮ್ಮನ್ನು ಈ ಸರಕಾರ ದುರುಪಯೋಗಪಡಿಸುತ್ತಿದೆ ಎಂಬುದು ಅರಿವಾಗಿದೆ. ಆ ಕಾರಣದಿಂದಲೇ ವೀಡಿಯೋಗಳು ಬಿಡುಗಡೆಗೊಂಡಿವೆ. ಸದ್ಯ ಕೇಂದ್ರ ಸರಕಾರವು ಆ ಯೋಧರ ಬಾಯಿ ಮುಚ್ಚಿಸುವ ಬದಲು ಸ್ವತಃ ಆತ್ಮಾವಲೋಕನ ನಡೆಸಲಿ. ನಿz್ದÉಗೆಟ್ಟು ದೇಶ ಕಾಯುವವರಿಗೆ ನೆಮ್ಮದಿಯನ್ನು ಒದಗಿಸಲಿ.

No comments:

Post a Comment