Wednesday 22 February 2017

ಪಚ್ಚ ಚೆಡಿ ಎಂಬ ಎಲೆ ಮತ್ತು ಎತ್ತಿನಹೊಳೆ

        ಕಾಡು ಮತ್ತು ನಾಡು ಸದಾ ಸುದ್ದಿಯಲ್ಲಿರುವ ಎರಡು ಕ್ಷೇತ್ರಗಳು. ನಾಡಿನಲ್ಲಿರುವ ಮನುಷ್ಯರ ಕುತೂಹಲವು ಅವರನ್ನು ಕಾಡು ಪ್ರವೇಶಿಸುವಂತೆ ಮಾಡಿದರೆ, ಕಾಡಿನಲ್ಲಿರುವ ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡೋ ಅಥವಾ ದಾರಿ ತಪ್ಪಿಯೋ ನಾಡು ಪ್ರವೇಶಿಸುತ್ತವೆ. ಹೀಗೆ ಒಂದು ಕಡೆ ಕುತೂಹಲ ಮತ್ತು ಇನ್ನೊಂದು ಕಡೆ ಆಹಾರ ಹುಡುಕಾಟದ ಈ ಆಟ ನಡೆಯುತ್ತಲೇ ಇದೆ. ಇತ್ತೀಚೆಗೆ ವಿಜ್ಞಾನಿಗಳ ಒಂದು ತಂಡ ಕೇರಳದ ಪಶ್ಚಿಮ ಘಟ್ಟವನ್ನು ಪ್ರವೇಶಿಸಿತು. ಅದರ ನೇತೃತ್ವವನ್ನು ವಹಿಸಿದ್ದು ರಾಜಶೇಖರನ್ ಎಂಬವರು. ಆ ತಂಡದಲ್ಲಿ ಕಾಡುತ್ಪನ್ನಗಳ ಬಗ್ಗೆ, ಅಲ್ಲಿರುವ ಗಿಡಗಳ ಬಗ್ಗೆ ಮತ್ತು ಕಾಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕುತೂಹಲ ಇತ್ತೇ ಹೊರತು ಇದಮಿತ್ಥಂ ಅನ್ನುವ ಗುರಿಯೇನೂ ಇರಲಿಲ್ಲ. ಈ ತಂಡ ಕಾಡಿನಲ್ಲಿ ಬದುಕುತ್ತಿರುವ ಆದಿವಾಸಿಗಳನ್ನೂ ಭೇಟಿಯಾಯಿತು. ಕುಟ್ಟಮಲ ಕುಣಿಯನ್ ಎಂಬ ಹಿರಿಯ ಆದಿವಾಸಿ ಇವರಲ್ಲಿ ಒಬ್ಬರು. ಕೋಲಾನೈಕನ್ ಆದಿವಾಸಿ ಪಂಗಡಕ್ಕೆ ಸೇರಿರುವ ಆ ವ್ಯಕ್ತಿಯ ಎದೆಯ ಉದ್ದಕ್ಕೂ ಗಂಭೀರ ಗಾಯದ ಗುರುತು ಕಾಣಿಸುತ್ತಿತ್ತು. ವಿಜ್ಞಾನಿಗಳ ತಂಡ ಆ ಬಗ್ಗೆ ಕುತೂಹಲ ವ್ಯಕ್ತಪಡಿಸಿತು. ಆಗ ಆ ಹಿರಿಯ ವ್ಯಕ್ತಿ ಒಂದು ಘಟನೆಯನ್ನು ವಿವರಿಸಿದರು. ಆ ವ್ಯಕ್ತಿಯ ಮಟ್ಟಿಗೆ ಅದೊಂದು ಸಾಮಾನ್ಯ ಘಟನೆ. ಕೆಲವು ವರ್ಷಗಳ ಹಿಂದೆ ಅವರ ಮೇಲೆ ಕರಡಿಯೊಂದು ದಾಳಿ ನಡೆಸಿತ್ತು. ಪರಸ್ಪರ ಘರ್ಷಣೆಗಳೂ ನಡೆದುವು. ಒಂದು ಹಂತದಲ್ಲಿ ಕರಡಿಯು ಈ ಕುಟ್ಟುಮಲ ಕುಣಿಯನ್‍ರನ್ನು ನೆಲಕ್ಕೆ ಬೀಳಿಸಿತು. ಎದೆಯನ್ನು ಸೀಳುವ ಪ್ರಯತ್ನ ನಡೆಸಿತು. ಎದೆಗೆ ಚುಚ್ಚಿದ ಪರಿಣಾಮದಿಂದ ರಕ್ತ ಹರಿಯಿತು. ಆದರೂ ಕುಣಿಯನ್ ಮೇಲೆದ್ದು ನಿಂತರಲ್ಲದೇ ಪ್ರತಿ ಹೋರಾಟದ ಮೂಲಕ ಕರಡಿಯನ್ನು ಸಾಯಿಸಿದರು. ಬಳಿಕ ಎದೆಯ ಉದ್ದಕ್ಕೂ ಆದ ಆಳ ಗಾಯಕ್ಕೆ ‘ಪಚ್ಚ ಚೆಡಿ’ (Neurocalyx calycinus ) ಎಂಬ ಹೆಸರಿನ ಎಲೆಗಳಿಂದ ಮಾಡಲಾದ ನಾಟಿಮದ್ದನ್ನು ಹಚ್ಚಿದರು. ಗಾಯವು ಸಂಪೂರ್ಣವಾಗಿ ಗುಣವಾಯಿತು. ಕುಣಿಯನ್‍ರ ಮಾತಿನಿಂದ ಪ್ರಭಾವಿತವಾದ ಈ ತಂಡ, ಆ ಗಿಡಮೂಲಿಕೆಯ ಮೇಲೆ ಸಂಶೋಧನೆಯನ್ನು ಕೈಗೊಂಡಿತು. ಸಾಮಾನ್ಯವಾಗಿ ಸುಸಜ್ಜಿತ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಚಿಕಿತ್ಸೆಯನ್ನು ಪಡೆಯಬೇಕಿದ್ದ ವ್ಯಕ್ತಿಯೋರ್ವ ಕೇವಲ ಗಿಡಮೂಲಿಕೆಯಿಂದ ಗುಣಮುಖನಾಗುವುದನ್ನು ಆ ತಂಡಕ್ಕೆ ಸುಲಭದಲ್ಲಿ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಶೋಧನೆ ಮುಂದುವರಿದಂತೆ ವಿಜ್ಞಾನಿಗಳೂ ಅಚ್ಚರಿಪಟ್ಟರು. ಆ ಗಿಡಮೂಲಿಕೆಯ ಪೇಟೆಂಟ್‍ಗೆ ಅರ್ಜಿ ಹಾಕಿದರು. ವಿಶೇಷ ಏನೆಂದರೆ, ಆ ಗಿಡಮೂಲಿಕೆಯಲ್ಲಿ ಒಂದಕ್ಕಿಂತ ಹೆಚ್ಚು ರೋಗನಿವಾರಕ ಗುಣಗಳಿದ್ದುವು. ಅದರಲ್ಲಿ ಕ್ಯಾನ್ಸರ್ ವಿರೋಧಿ ಅಂಶವೂ ಒಂದು. ಗಾಯಗಳು, ಸುಟ್ಟ ಗಾಯಗಳನ್ನು ಒಣಗಿಸುವ ಪರಿಣಾಮಕಾರಿ ಅಂಶಗಳು ಈ ಗಿಡಮೂಲಿಕೆಯಲ್ಲಿದ್ದುವು. ರಾಸಾಯನಿಕಗಳನ್ನು ಬಳಸಿ ಮಾಡಲಾಗುವ ಔಷಧಿಗಳಷ್ಟೇ ಸಾಮರ್ಥ್ಯವು ಈ ಗಿಡಮೂಲಿಕೆಯಲ್ಲಿರುವುದನ್ನೂ ಆ ವಿಜ್ಞಾನಿಗಳ ಗುಂಪು ಪತ್ತೆ ಹಚ್ಚಿತು. ಕೇರಳದ ನೀಲಾಂಬರ ಅರಣ್ಯದಲ್ಲಿ ಪತ್ತೆ ಹಚ್ಚಲಾದ ಪಚ್ಚ ಚೆಡಿ ಎಂಬ ಹೆಸರಿನ ಈ ಗಿಡಮೂಲಿಕೆಯ ಮೇಲೆ ಸದ್ಯ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
     ಕಾಡಿನ ಕುರಿತಂತೆ ನಾಡಿನಲ್ಲಿರುವ ಅನೇಕರಲ್ಲಿ ಒಂದು ಉಡಾಫೆಯ ನಿಲುವು ಇದೆ. ಪಶ್ಚಿಮ ಘಟ್ಟ ನಾಶದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವಾಗಲೂ ಈ ಉಡಾಫೆತನ ವ್ಯಕ್ತಗೊಳ್ಳುವುದಿದೆ. ಅರಣ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡದ ಅಭಿವೃದ್ಧಿ ಪರಿಕಲ್ಪನೆ ಇವತ್ತಿನದು. ಎಲ್ಲವನ್ನೂ ಭೋಗದ ದೃಷ್ಟಿಯಿಂದ ವ್ಯಾಖ್ಯಾನಿಸುವ ಕಲೆ ನಾಡು ಜೀವಿಗೆ ಕರಗತವಾಗಿದೆ. ಕಾಂಕ್ರೀಟು ನಾಡಿಗಾಗಿ ಮರಗಳು ನಾಶವಾಗುತ್ತವೆ. ಭೂ ಸಂಪತ್ತಿಗಾಗಿ ಅರಣ್ಯವೇ ಬರಡಾಗುತ್ತದೆ. ಅರಣ್ಯಗಳ ದೌರ್ಬಲ್ಯ ಏನೆಂದರೆ, ಅವುಗಳಿಗೆ ಮಾತು ಬರದೇ ಇರುವುದು. ಪಶ್ಚಿಮ ಘಟ್ಟವನ್ನೇ ಎತ್ತಿಕೊಳ್ಳಿ. ಅಲ್ಲಿಯ ಪ್ರಾಕೃತಿಕ ಸಂಪತ್ತು ಯಾವ ಬಗೆಯದು? ಏನೆಲ್ಲ ಗಿಡಮೂಲಿಕೆಗಳು ಅಲ್ಲಿರಬಹುದು? ನಮ್ಮ ಅರಿವಿಗೆ ಬಾರದ ಎಷ್ಟೆಲ್ಲ ಪ್ರಾಣಿ ಸಂಕುಲಗಳು, ಸಸ್ಯ ಪ್ರಭೇದಗಳು ಅಲ್ಲಿರಬಹುದು? ಮನುಷ್ಯ ಪ್ರಕೃತಿಬದ್ಧವಾಗಿ ಬದುಕಿದರೆ, ಕಾಯಿಲೆಗಳಿಗೆ ಮದ್ದನ್ನೂ ಪ್ರಕೃತಿಯೇ ಒದಗಿಸಬಲ್ಲುದು. ನಾಡು ಮತ್ತು ಕಾಡು ಪರಸ್ಪರ ಪೂರಕವಾದುದು. ಒಂದು ಇನ್ನೊಂದನ್ನು ಅವಲಂಬಿಸಿಕೊಂಡೇ ಜೀವಿಸುತ್ತವೆ. ಅಷ್ಟಕ್ಕೂ, ಪಶ್ಚಿಮಘಟ್ಟವನ್ನು ಸೀಳಿ ಎತ್ತಿನಹೊಳೆ ಯೋಜನೆಯ ಜಾರಿಗೆ ನಾವೊಂದು ದಾರಿಯನ್ನು ಕಂಡುಕೊಂಡೆವು ಎಂದೇ ಇಟ್ಟುಕೊಳ್ಳೋಣ. ಆದರೆ ಈ ದಾರಿ ಎಷ್ಟೆಲ್ಲ ಸಸ್ಯ ಪ್ರಭೇದಗಳ ಕೊಲೆಗೆ ಕಾರಣವಾಗಬಹುದು? ಪ್ರಾಣಿ, ಕೀಟ ಪ್ರಬೇಧಗಳ ನಾಶಕ್ಕೆ ಹೇತುವಾಗಬಹುದು? ಅರಣ್ಯವೆಂದರೆ ನೀರಿನ ಉಗಮ ಭೂಮಿ. ಅರಣ್ಯವನ್ನೇ ಸೀಳುವುದರಿಂದ ಅಥವಾ ಅದರ ಮೇಲೆ ದಾಳಿ ಮಾಡುವುದರಿಂದ ಈ ನೀರ ಒರತೆಯ ಮೇಲೆ ಏನೆಲ್ಲ ಪರಿಣಾಮಗಳಾಗಬಹುದು? ಕಾಡು ಎಂಬುದು ನಾಡಿನಲ್ಲಿರುವ ಜೀವಿಗಳು ಬೇಕಾಬಿಟ್ಟಿಯಾಗಿ ಬಳಸಬಹುದಾದ ಉಂಬಳಿ ಭೂಮಿಯೇನೂ ಅಲ್ಲವಲ್ಲ.
     ತಂತ್ರಜ್ಞಾನಗಳ ಮೇಲೆ ಮಾನವನ ವಿಪರೀತ ಅವಲಂಬನೆಯು ಎರಡು ರೀತಿಯ ಅಡ್ಡ ಪರಿಣಾಮಗಳಿಗೆ ಕಾರಣವಾಯಿತು. ಒಂದು- ಅದು ಕಾಡು ನಾಶಕ್ಕೆ ವೇಗವನ್ನು ಒದಗಿಸಿದರೆ ಇನ್ನೊಂದು- ಕಾಂಕ್ರೀಟು ಜಗತ್ತಿಗೆ ದೊಡ್ಡ ರೀತಿಯಲ್ಲಿ ಅಡಿಪಾಯವನ್ನು ಹಾಕಿತು. ಕಾಂಕ್ರೀಟು ಜಗತ್ತಿಗೆ ಬೇಕಾದ ಸಂಪನ್ಮೂಲಗಳಿರುವುದು ಭೂಮಿಯ ಎದೆಯಲ್ಲಿ. ಅದನ್ನು ಸೀಳುವುದರ ಹೊರತು ಕಾಂಗ್ರೀಟು ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುಲಭ ಪರಿಹಾರವಾಗಿ ಕಾಣಿಸಿದ್ದು ಕಾಡುಗಳು. ಅವುಗಳ ಮೇಲೆ ದಾಳಿ ನಡೆಸಿದರೆ, ಸೀಳಿದರೆ ಅಥವಾ ಅದರೊಳಗಿರುವ ಸಂಪನ್ಮೂಲವನ್ನು ಕಿತ್ತುಕೊಂಡರೂ ಅದು ಪ್ರತಿಭಟಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದು ನಾಡುಜೀವಿಗಳಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಕಾಡು ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳು ಎಗ್ಗಿಲ್ಲದೇ ನಡೆದುವು. ಕಾಡನ್ನು ನಾಶ ಮಾಡಿ ನಾಡು ಕಟ್ಟುವ ನೀಲನಕ್ಷೆಗಳು ತಯಾರಾದುವು. ಈ ಅಭಿವೃದ್ಧಿಯ ಹೊಡೆತಕ್ಕೆ ಸಿಕ್ಕಿ ದಿಕ್ಕು ತಪ್ಪಿದ ಪ್ರಾಣಿಗಳನ್ನು ‘ಊರಿಗೆ ದಾಳಿಯಿಟ್ಟ ಪ್ರಾಣಿ’ಗಳ ಪಟ್ಟಿಗೆ ಸೇರಿಸಲಾಯಿತು. ಕ್ರಮೇಣ ಊರಿನ ವಾತಾವರಣ ಹದಗೆಡತೊಡಗಿತು. ಕಂಡೂ ಕೇಳರಿಯದ ಹೊಸ ಬಗೆಯ ರೋಗಗಳು ನಾಡಲ್ಲಿ ಕಾಣಿಸಿಕೊಳ್ಳತೊಡಗಿದುವು. ಈ ರೋಗವನ್ನು ಗುಣಪಡಿಸುವುದಕ್ಕಾಗಿ ಸಂಶೋಧನೆಗಳು ನಡೆದುವು. ದುಬಾರಿ ಬೆಲೆಯ ಔಷಧಿಗಳು ಮಾರುಕಟ್ಟೆಗೆ ಬಂದುವು. ಒಂದು ಕಡೆ ಮಾನವನೇ ತಂತ್ರಜ್ಞಾನದ ಬಲದಿಂದ ಕಾಡು ನಾಶದಲ್ಲಿ ತೊಡಗಿದ. ದುಡ್ಡು ಸಂಪಾದಿಸಿದ. ಇನ್ನೊಂದು ಕಡೆ, ಆ ನಾಶದ ಅಡ್ಡಪರಿಣಾಮವಾಗಿ ಕಾಣಿಸಿಕೊಂಡ ರೋಗಗಳಿಗೆ ಆ ದುಡ್ಡನ್ನು ವ್ಯಯ ಮಾಡುವ ಸಂದಿಗ್ಧಕ್ಕೂ ಸಿಲುಕಿದ. ಪ್ರಾಕೃತಿಕ ಸಮತೋಲನದ ಮೇಲೆ ಆಗುವ ಬಾಹ್ಯ ದಾಳಿಯ ಫಲಿತಾಂಶ ಇದು. ಆದ್ದರಿಂದ,
     ಕೇರಳದ ನೀಲಾಂಬರ ಅರಣ್ಯದಲ್ಲಿ ಸಿಕ್ಕ ‘ಪಚ್ಚ ಚೆಡಿ’ಯನ್ನು ನಮ್ಮ ಅಭಿವೃದ್ಧಿ ಪರಿಕಲ್ಪನೆಗೆ ಮುಖಾಮುಖಿಯಾಗಿಟ್ಟು ನೋಡಬೇಕಾಗಿದೆ. ಅರಣ್ಯವೆಂದರೆ ಬರೇ ಮರಗಳಲ್ಲ. ಅದು ನಾಡಿನ ಆರೋಗ್ಯವನ್ನು ಕಾಪಾಡುವ ಅಮೂಲ್ಯ ಸಂಪತ್ತು. ಮಾನವನು ಯಂತ್ರದ ಮುಷ್ಠಿಯಿಂದ ಹೊರಬಂದು ಚಿಂತಿಸಿದರೆ ಇದು ಖಂಡಿತ ಅರ್ಥವಾಗುತ್ತದೆ.


No comments:

Post a Comment