Monday 20 March 2017

ಪದೇ ಪದೇ ‘ಸರ್ತಾಜ್’ಗಳೇ ಯಾಕೆ ದೇಶನಿಷ್ಠೆಯನ್ನು ಪ್ರಕಟಿಸಬೇಕು?

      ಕಳೆದ ವಾರ ಎರಡು ಮಹತ್ವಪೂರ್ಣ ಘಟನೆಗಳು ನಡೆದುವು. 1. ಲಕ್ನೋದಲ್ಲಿ ಕೊಲ್ಲಲ್ಪಟ್ಟ ಶಂಕಿತ ಉಗ್ರ ಸೈಫುಲ್ಲಾನ ಬಗ್ಗೆ ಆತನ ತಂದೆ ಮುಹಮ್ಮದ್ ಸರ್ತಾಜ್‍ರ ನಿಷ್ಠುರ ನಿಲುವು. ಅವರು ತನ್ನ ಮಗನ ಮೃತದೇಹವನ್ನು ಪಡೆಯಲು ನಿರಾಕರಿಸಿದರು. ದೇಶಕ್ಕೆ ನಿಷ್ಠೆಯನ್ನು ತೋರದವನು ನಮಗೆ ನಿಷ್ಠೆ ತೋರಬಲ್ಲನೇ ಎಂದವರು ಪ್ರಶ್ನಿಸಿದರು. ಅವರ ಈ ನಿಲುವಿಗೆ ಎಲ್ಲೆಡೆಯಿಂದ ಸ್ವಾಗತ ಲಭಿಸಿತು. ಮಾಧ್ಯಮಗಳು ಹೊಗಳಿದುವು. ಗೃಹ ಸಚಿವ ರಾಜನಾಥ್ ಸಿಂಗ್ ಪ್ರಶಂಸಿಸಿದರು. ಸಂಸತ್ತು ಶ್ಲಾಘಿಸಿತು.
     2. ಇದೇ ಸೈಫುಲ್ಲಾ ಪ್ರಕರಣದಲ್ಲಿ ಕೆಲವರ ಬಂಧನವೂ ನಡೆಯಿತು. ಇದರಲ್ಲಿ ವಾಯು ದಳದ ಮಾಜಿ ಅಧಿಕಾರಿ ಜಿ.ಎಂ. ಖಾನ್ ಎಂಬವರೂ ಸೇರಿದ್ದರು. ಇವರ ಮಕ್ಕಳು ತಂದೆಯ ಬಗ್ಗೆ ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದರು. ಅಬ್ದುಲ್ ಕಾದಿರ್ ಅನ್ನುವ ಅವರ ಮಗ ಮಾಧ್ಯಮಗಳೊಂದಿಗೆ ಮಾತಾಡಿದರು. ದೇಶದ ಶತ್ರು ನಮ್ಮ ಶತ್ರುವೂ ಆಗಿದ್ದಾನೆ ಎಂದವರು ಪ್ರತಿಕ್ರಿಯಿಸಿದರು. ಈ ಹೇಳಿಕೆಯೂ ವ್ಯಾಪಕವಾಗಿ ಸ್ವಾಗತಿಸಲ್ಪಟ್ಟಿತು.
      ಮಾರ್ಚ್ 7ರಂದು ಮಧ್ಯ ಪ್ರದೇಶದ ಭೋಪಾಲ್‍ನಿಂದ ಉಜ್ಜೈನಿಗೆ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲಿನಲ್ಲಿ ಸ್ಫೋಟಕವೊಂದು ಸಿಡಿದು 8 ಮಂದಿ ಗಾಯಗೊಂಡ ಬಳಿಕ ನಡೆದ ಬೆಳವಣಿಗೆಗಳಿವು. ಘಟನೆ ಖಂಡನಾರ್ಹ. ಯಾವುದೇ ಒಂದು ಕೃತ್ಯ ಖಂಡನಾರ್ಹವೆನಿಸಿಕೊಳ್ಳುವುದಕ್ಕೆ ಆ ಕೃತ್ಯದಲ್ಲಿ ಭಾಗಿಯಾದವರು ಯಾರು, ಸಂತ್ರಸ್ತರ ಸಂಖ್ಯೆ ಎಷ್ಟು ಮತ್ತು ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯ ಆಗಬಾರದು. ಮನುಷ್ಯರನ್ನು ಕೊಲ್ಲುವ ಅಥವಾ ಬೆದರಿಸುವ ಅಥವಾ ಅವಮಾನಿಸುವ ಉದ್ದೇಶವು ಕೃತ್ಯವೊಂದರ ಹಿಂದಿದೆ ಎಂಬುದು ದಿಟವಾದ ತಕ್ಷಣ, ನಾವದನ್ನು ಪ್ರಶ್ನಿಸಬೇಕು. ಕೃತ್ಯದಲ್ಲಿ ಭಾಗಿಯಾದವರನ್ನು ಖಂಡಿಸಬೇಕು. ಶಂಕಿತ ಉಗ್ರ ಸೈಫುಲ್ಲಾನ ತಂದೆ ಸರ್ತಾಜ್ ಮತ್ತು ಜಿ.ಎಂ. ಖಾನ್‍ರ ಮಗ ಅಬ್ದುಲ್ ಕಾದಿರ್‍ರ ನಿಲುವು ಮುಖ್ಯವಾಗುವುದು ಈ ಹಿನ್ನೆಲೆಯಲ್ಲಿ. ರಾಜನಾಥ್ ಸಿಂಗ್ ಕೂಡಾ ಅದರ ಮಹತ್ವವನ್ನು ಗುರುತಿಸಿದ್ದಾರೆ. ಆದ್ದರಿಂದಲೇ, ಕೆಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಗುಜರಾತ್‍ನಲ್ಲಿ ಸಾವಿರಾರು ಮಂದಿಯ ಹತ್ಯೆ ನಡೆಯಿತು. ಅಸಂಖ್ಯ ಅತ್ಯಾಚಾರ ಪ್ರಕರಣಗಳು ನಡೆದುವು. ಆದರೆ ಒಬ್ಬನೇ ಒಬ್ಬ ಮುಹಮ್ಮದ್ ಸರ್ತಾಜ್ ಅಲ್ಲಿ ಕಾಣಿಸಿಕೊಳ್ಳಲಿಲ್ಲ, ಯಾಕೆ? ಉತ್ತರ ಪ್ರದೇಶದ ಮುಝಫ್ಫರ್ ನಗರ್‍ನಲ್ಲಿ 60ಕ್ಕಿಂತಲೂ ಹೆಚ್ಚು ಮಂದಿಯ ಹತ್ಯೆ ನಡೆಯಿತು. ಅತ್ಯಾಚಾರಗಳಾದುವು. ಕೊಲೆಗಾರರ ಪಟ್ಟಿಯನ್ನು ಪೊಲೀಸರು ಬಿಡುಗಡೆಗೊಳಿಸಿದರು. ಆದರೂ ಒಬ್ಬನೇ ಒಬ್ಬ ಸರ್ತಾಜ್ ಅಲ್ಲಿ ಈವರೆಗೂ ಕಾಣಿಸಿಕೊಂಡಿಲ್ಲವಲ್ಲ, ಏನಿದರ ಅರ್ಥ? ಮುಹಮ್ಮದ್ ಅಖ್ಲಾಕ್ ಎಂಬ ವೃದ್ಧನನ್ನು ತುಳಿದು ಹತ್ಯೆ ಮಾಡಲಾಯಿತು. ಅದರಲ್ಲಿ ಭಾಗಿಯಾದವರು ಯಾರೆಂಬುದನ್ನೂ ಪೊಲೀಸರು ಹೇಳಿದ್ದಾರೆ. ಆದರೂ ಆ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳುವ ಅಬ್ದುಲ್ ಕಾದಿರ್‍ಗಳು, ಸರ್ತಾಜ್‍ಗಳು ಇನ್ನೂ ಕಾಣಿಸಿಕೊಂಡಿಲ್ಲವೇಕೆ? ಒಂದು ಕಡೆ, ಮುಸ್ಲಿಮರ ದೇಶ ನಿಷ್ಠೆಯನ್ನು ಇದೇ ರಾಜನಾಥ್ ಸಿಂಗ್‍ರ ಬಳಗ ಆಗಾಗ ನಿಕಷಕ್ಕೆ ಒಡ್ಡುತ್ತಲೇ ಇದೆ. ಪಾಕಿಸ್ತಾನಕ್ಕೆ ಕಳುಹಿಸುವ ಬೆದರಿಕೆಯನ್ನು ಹಾಕುತ್ತಲೂ ಇರುತ್ತದೆ. ಈ ಹಿಂದೆ ಕೇರಳದಲ್ಲೂ ಸರ್ತಾಜ್‍ರಂಥದ್ದೇ  ಘಟನೆಯೊಂದು ನಡೆದಿತ್ತು. ಭಾರತ-ಪಾಕ್ ಗಡಿಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಕೇರಳದ ಯುವಕನ ತಂದೆಯೋರ್ವರು ಮಗನ ಮೃತದೇಹವನ್ನು ಪಡೆಯಲು ನಿರಾಕರಿಸಿದ್ದರು. ಯಾಕೆ ರಾಜ್‍ನಾಥ್ ಸಿಂಗ್‍ರ ಬಳಗದಿಂದ ‘ದೇಶನಿಷ್ಠೆ’ಯನ್ನು ಮತ್ತೆ ಮತ್ತೆ ಅನುಮಾನದ ಮೊನೆಯಲ್ಲಿರಿಸಿಕೊಂಡ ಸಮುದಾಯದಿಂದಲೇ ಗರಿಷ್ಠ ದೇಶನಿಷ್ಠೆಯ ನಿಲುವುಗಳು ಪ್ರಕಟವಾಗುತ್ತಿವೆ? ಇಂಥ ನಿಲುವುಗಳನ್ನು ಪ್ರದರ್ಶಿಸಬೇಕಾದ ನೂರಾರು ಸಂದರ್ಭಗಳು ಎದುರಾಗುತ್ತಿದ್ದರೂ ಒಂದೇ ಒಂದು ಬಾರಿ ಇಂಥ ದೇಶನಿಷ್ಠೆಯನ್ನು ಪ್ರದರ್ಶಿಸಲು ಸಿಂಗ್ ಬಳಗ ಮುಂದಾಗಿಲ್ಲವಲ್ಲ, ಇದು ಏನನ್ನು ಸೂಚಿಸುತ್ತದೆ? ಕೇವಲ 8 ಮಂದಿ ಗಾಯಗೊಂಡ ಪ್ರಕರಣಕ್ಕೆ ತಂದೆಯೋರ್ವ ಈ ಮಟ್ಟದಲ್ಲಿ ಪ್ರತಿಕ್ರಿಯಿಸುತ್ತಾರೆಂದಾದರೆ ಮತ್ತು ಅದು ರಾಜನಾಥ್ ಸಿಂಗ್‍ರು ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾಪಿಸಿ ಗೌರವಿಸುವಷ್ಟು ಪ್ರಾಮುಖ್ಯತೆ ಉಳ್ಳದ್ದೆಂದಾದರೆ ಇಂಥ ನಿಲುವನ್ನು ಅವರ ಬೆಂಬಲಿಗ ಗುಂಪಿನಿಂದ ನಾವು ಯಾಕೆ ನಿರೀಕ್ಷಿಸಬಾರದು? ಸರ್ತಾಜ್‍ರು ಬರೇ ಪೊಲೀಸರ ಹೇಳಿಕೆಯನ್ನೇ ನಂಬಿಕೊಂಡು ಇಂಥದ್ದೊಂದು ಕಠಿಣ ತೀರ್ಮಾನವನ್ನು ಕೈಗೊಂಡಿದ್ದಾರೆ. ನಿಜಕ್ಕೂ, ಕೊಲ್ಲಲ್ಪಟ್ಟ ಸೈಫುಲ್ಲಾ ಮತ್ತು ಬಂಧಿತ ಖಾನ್ ಉಗ್ರರು ಹೌದೋ ಅಲ್ಲವೋ ಅನ್ನುವುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ, ಮನುಷ್ಯ ವಿರೋಧಿ ಕ್ರೌರ್ಯದ ಆರೋಪದಲ್ಲಿ ಪೊಲೀಸರು ಬಂಧಿಸಿದ ಮತ್ತು ಅಪರಾಧಿಗಳಾಗಿ ಗುರುತಿಸಿದವರಲ್ಲಿ ರಾಜನಾಥ್ ಸಿಂಗ್ ಬಳಗಕ್ಕೆ ಸೇರಿದವರ ಸಂಖ್ಯೆ ಎಷ್ಟಿರಬಹುದು? ಬರೇ ಗುಜರಾತ್, ಮುಝಫ್ಫರ್ ನಗರ್, ಅಸ್ಸಾಂ ಎಂದಷ್ಟೇ ಅಲ್ಲ, ದೇಶದಾದ್ಯಂತ ಇಂಥ ಮನುಷ್ಯ ವಿರೋಧಿ ಪ್ರಕರಣಗಳು ಅಸಂಖ್ಯ ನಡೆದಿವೆ. ಕೋಮುಗಲಭೆಗಳ ಹೆಸರಲ್ಲಿ ನಡೆದ ಕ್ರೌರ್ಯಗಳು ಈ ದೇಶದಲ್ಲಿ ಎಷ್ಟು ಸರ್ತಾಜ್‍ಗಳನ್ನು ಕಣ್ಣೀರಿಗೊಳಪಡಿಸಿವೆ, ಎಷ್ಟು ವಿಧವೆಯರನ್ನು, ಅನಾಥರನ್ನು, ತಬ್ಬಲಿ ಮಕ್ಕಳನ್ನು ಸೃಷ್ಟಿಸಿವೆ ಎಂಬುದು ಎಲ್ಲರಿಗೂ ಗೊತ್ತು. ಕಳೆದವಾರವಷ್ಟೇ ರಂಗಕರ್ಮಿ ಯೋಗೇಶ್ ಮಾಸ್ಟರ್‍ರಿಗೆ ಮಸಿ ಬಳಿಯಲಾಗಿದೆ. ಹಲ್ಲೆ ನಡೆಸಲಾಗಿದೆ. ಇದರಲ್ಲಿ ಭಾಗಿಯಾದವರಿಗೂ ರಾಜ್‍ನಾಥ್ ಸಿಂಗ್‍ರ ಪಕ್ಷದ ಬೆಂಬಲಿಗರಿಗೂ ನಡುವೆ ಏನೇನು ಸಂಬಂಧ ಇವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ದಾಳಿ ನಡೆಸುವವರೂ ಬೆತ್ತಲೆಗೊಳಿಸಿ ಥಳಿಸಿವವರೂ ಈ ಬಳಗದಲ್ಲಿದ್ದಾರೆ. ಹೀಗಿದ್ದೂ ಯಾಕೆ ರಾಜನಾಥ್ ದೇಶಪ್ರೇಮಿ ಬಳಗದ ಒಬ್ಬನೇ ಒಬ್ಬ ತಂದೆ ‘ಸರ್ತಾಜ್’ ಆಗುತ್ತಿಲ್ಲ? ಬಾಂಬ್ ಸ್ಫೋಟಿಸುವ ಮೂಲಕ ಜನರನ್ನು ಸಾಯಿಸುವುದು ಹೇಗೆ ಸಂವಿಧಾನ ವಿರೋಧಿಯೋ ಬಂದೂಕು, ಬೆಂಕಿ, ತಲವಾರು.. ಇತ್ಯಾದಿ ಆಯುಧಗಳ ಮೂಲಕ ಜನರನ್ನು ಸಾಯಿಸುವುದು ಕೂಡ ಸಂವಿಧಾನ ವಿರೋಧಿಯೇ. ಮಸಿ ಬಳಿದು ಅವಮಾನಿಸುವುದು ಕೂಡ ಸಂವಿಧಾನ ವಿರೋಧಿಯೇ. ಅತ್ಯಾಚಾರವೂ ಇದೇ ಪಟ್ಟಿಯಲ್ಲಿ ಬರುತ್ತದೆ. ಮನುಷ್ಯರನ್ನು ಅನ್ಯಾಯವಾಗಿ ಸಾಯಿಸುವ ಎಲ್ಲವೂ ಎಲ್ಲರೂ ಮನುಷ್ಯ ವಿರೋಧಿಗಳೇ. ದೇಶದ್ರೋಹಿಗಳೇ. ಆದರೆ, ಮುಸ್ಲಿಮರ ದೇಶನಿಷ್ಠೆಯನ್ನು ಆಗಾಗ ಪ್ರಶ್ನಿಸುವ ರಾಜನಾಥ್ ಸಿಂಗ್‍ರ ಬಳಗ ಈ ವರೆಗೂ ಒಬ್ಬನೇ ಒಬ್ಬ ಸರ್ತಾಜ್‍ರನ್ನು ತಯಾರಿಸಿಲ್ಲ. ತಮ್ಮ ಮಕ್ಕಳಿಂದ ಅಂತರ ಕಾಯ್ದುಕೊಂಡ ದೇಶಪ್ರೇಮಿ ತಂದೆಯನ್ನು ಆ ಬಳಗ ಇನ್ನೂ ಸೃಷ್ಟಿಸಿಲ್ಲ. ಇಷ್ಟಿದ್ದೂ, ಆ ಬಳಗ ತಮ್ಮನ್ನು ದೇಶಪ್ರೇಮಿಯಾಗಿ ಗುರುತಿಸಿಕೊಳ್ಳುತ್ತಿದೆ. ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸುತ್ತಿದೆ. ಇದಕ್ಕೆ ಏನೆನ್ನಬೇಕು? ಇದು ಸತ್ಯದ್ರೋಹ, ನ್ಯಾಯದ್ರೋಹ, ಧರ್ಮದ್ರೋಹ, ದೇಶದ್ರೋಹ, ಆತ್ಮವಂಚನೆಯಲ್ಲವೇ? ಸರ್ತಾಜ್‍ರನ್ನು ಹೊಗಳುವ ನೈತಿಕ ಅರ್ಹತೆ ರಾಜ್‍ನಾಥ್ ಸಿಂಗ್ ಮತ್ತು ಅವರ ಬಳಗಕ್ಕೆ ನಿಜಕ್ಕೂ ಇದೆಯೇ? ಯಾಕೋ ವಿಷಾದವೆನಿಸುತ್ತಿದೆ.

No comments:

Post a Comment