Tuesday 31 October 2017

ಮೌನಿ ಮತ್ತು ವಾಚಾಳಿಯ ನಡುವೆ ನೋಟು

       ನೋಟು ನಿಷೇಧ ಮಾಡಿದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚತುರ ಅರ್ಥ ತಜ್ಞನಾಗಿ ಮತ್ತು ಚಾಣಕ್ಯನಿಗೆ ಸಮವಾಗಿ ಕಂಡವರು ಹಾಗೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರ ಮಾತುಗಳನ್ನು ತಮಾಷೆ ಮಾಡಿದವರಲ್ಲಿ ಹೆಚ್ಚಿನವರು ಈಗ ತತ್ವಜ್ಞಾನಿಗಳಂತೆ ಆಡತೊಡಗಿದ್ದಾರೆ. ಅತ್ತ ನರೇಂದ್ರ ಮೋದಿಯವರನ್ನು ಬಿಡಲೂ ಆಗದ ಇತ್ತ ಅವರ `ಅರ್ಥಕ್ರಾಂತಿ’ಯನ್ನು ಬೆಂಬಲಿಸಲೂ ಆಗದ ಸ್ಥಿತಿಗೆ ತಲುಪಿದ್ದಾರೆ. ಭಾರತೀಯ ಸ್ಟೇಟ್‍ಬ್ಯಾಂಕ್ (ಎಸ್‍ಬಿಐ) ದೀರ್ಘ ಸಮಯದ ಬಳಿಕ ಮೌನ ಮುರಿದಿದೆ. ನೋಟು ಬದಲಾಯಿಸುವುದಕ್ಕಾಗಿ ಸರತಿ ಸಾಲಲ್ಲಿ ನಿಂತು ತನ್ನ ಗ್ರಾಹಕರು ಸಾವಿಗೆ ತುತ್ತಾಗಲೂ ಮಾತಾಡದಿದ್ದ ಎಸ್‍ಬಿಐ ಇದೀಗ ಜಿಡಿಪಿ ಕುಸಿತಕ್ಕೆ ತನ್ನ ನೇರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ಸರಕಾರ ಹೇಳುತ್ತಿರುವಂತೆ `ಇದು ತಾಂತ್ರಿಕ ದೋಷವಲ್ಲ, ವಾಸ್ತವಿಕ ಸಂಗತಿ’ ಎಂದು ಕಟುವಾಗಿ ಹೇಳಿದೆ. ಇದರ ನಡುವೆ ಬಿಜೆಪಿಗೆ ಆಪ್ತರಾಗಿರುವ ಮತ್ತು ಸದಾ ಬಿಜೆಪಿ ಪರ ವಕಾಲತ್ತು ವಹಿಸುವ ಡಾ| ಸುಬ್ರಹ್ಮಣಂ ಸ್ವಾಮಿ ಮತ್ತು ಎಸ್. ಗುರು ಮೂರ್ತಿಯವರು ಮೊದಲ ಬಾರಿ ಮನ್‍ಮೋಹನ್ ಸಿಂಗ್‍ರ ಭಾಷೆಯಲ್ಲಿ ಮಾತಾಡಿದ್ದಾರೆ. ಇಬ್ಬರಿಗೂ ದೇಶದ ಅರ್ಥವ್ಯವಸ್ಥೆ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ಇದೆ. `ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದತ್ತ ಸಾಗುತ್ತಿದೆ’ ಎಂಬ ಭಯ ಸುಬ್ರಹ್ಮಣ್ಯಂ ಸ್ವಾಮಿಯವರದ್ದು. ಇದು ಹೀಗೆ ಮುಂದುವರಿದರೆ ಬ್ಯಾಂಕ್‍ಗಳು ಕುಸಿಯಬಹುದು, ಕೈಗಾರಿಕೆಗಳು ಮುಚ್ಚಬಹುದು ಮತ್ತು ದೇಶ ‘ಬಿಕ್ಕಟ್ಟಿನತ್ತ ಸಾಗಬಹುದು..’ ಎಂದೂ ಅವರು ಹೇಳಿದ್ದಾರೆ. ಗುರುಮೂರ್ತಿಯವರ ಆತಂಕವೂ ಇದಕ್ಕಿಂತ ಕಡಿಮೆಯದ್ದಲ್ಲ. ಮನ್‍ಮೋಹನ್ ಸಿಂಗ್‍ರಂತೂ ನೋಟು ನಿಷೇಧದ ಆರಂಭದಲ್ಲಿಯೇ ಅದನ್ನು ಅನಗತ್ಯ ಮತ್ತು ಅಪಾಯಕಾರಿ ನಡೆ’ ಎಂದೇ ವ್ಯಾಖ್ಯಾನಿಸಿದ್ದರು. ಚಿದಂಬರಂ ಅವರೂ ನೋಟು ನಿಷೇಧವನ್ನು ‘ವಿಫಲ ಕ್ರಾಂತಿ’ ಎಂದು ಕರೆದಿದ್ದರು. ಆದರೆ ಸಾರ್ವಜನಿಕವಾಗಿ ಈ ಇಬ್ಬರು ಅರ್ಥ ತಜ್ಞರ ಮಾತುಗಳಿಗೆ ಭಾರೀ ಮಹತ್ವ ಲಭ್ಯವಾಗಿರಲಿಲ್ಲ. ಅವರ ಮಾತುಗಳಲ್ಲಿದ್ದ ಸಹಜ ಆತಂಕವನ್ನು ಬಿಜೆಪಿ ಮತ್ತು ಅದರ ಬೆಂಬಲಿಗ ಮಾಧ್ಯಮಗಳು ‘ವಿರೋಧ ಪಕ್ಷದ ಟೀಕೆ’ಯಾಗಿ ಕಡೆಗಣಿಸಿದುವು. ವ್ಯಂಗ್ಯಕ್ಕೂ ಬಳಸಿಕೊಂಡವು. ನೋಟು ನಿಷೇಧದ ಸುತ್ತ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಮಾಡಿರುವ ವರದಿ, ಚರ್ಚೆ ಮತ್ತು ವಿಶ್ಲೇಷಣೆಗಳು ಎಷ್ಟು ಏಕಮುಖವಾಗಿತ್ತು ಅಂದರೆ, ಬ್ಯಾಂಕ್‍ಗಳ ಎದುರು ಸರತಿ ಸಾಲಲ್ಲಿ ನಿಂತು ಸಾವಿಗೀಡಾದ ಪ್ರಕರಣಗಳನ್ನು ಕೂಡಾ ತೀರಾ ಹಗುರವಾಗಿ ಕಾಣಲಾಯಿತು. ‘ದೇಶಕ್ಕಾಗಿ, ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮತ್ತು ನಕಲಿ ನೋಟಿನ ಚಲಾವಣೆಯನ್ನು ತಡೆಯುವುದಕ್ಕಾಗಿ..’ ಎಂದೆಲ್ಲಾ ಸರಕಾರದ ನುಡಿಮುತ್ತನ್ನು ಮಾಧ್ಯಮಗಳು ಅಧ್ಯಯನಾತ್ಮಕ ವರದಿಯಂತೆ ಮಂಡಿಸಿದುವು. ಕಾಶ್ಮೀರದ ಕಲ್ಲೆಸೆತಕ್ಕೆ ನಕಲಿ ನೋಟುಗಳು ಕಾರಣ ಅಂದಿತು ಸರಕಾರ. ನಕ್ಸಲರನ್ನೂ ಅದೇ ಹಣ ಸಾಕುತ್ತಿದೆ ಅಂದಿತು. ಪಾಕಿಸ್ತಾನಕ್ಕೆ ಆಘಾತವಾಗಿದೆ ಎಂಬಂತೆ ಹೇಳಿಕೊಂಡಿತು. ನೋಟು ನಿಷೇಧದ ಸಮಯದಲ್ಲಿ 50 ದಿನಗಳ ಅವಧಿಯನ್ನು ಭಾರತೀಯರಿಂದ ಅಪೇಕ್ಷಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆ 50 ದಿನವನ್ನು ದಾಟಿ 150 ದಿನಗಳಾದರೂ ಯಾವ ಅಚ್ಛೇ ದಿನವನ್ನೂ ನೀಡದಿದ್ದಾಗ ಮತ್ತು ಕನಿಷ್ಠ ನೋಟು ನಿಷೇಧಕ್ಕಾಗಿ ಪಶ್ಚಾತ್ತಾಪವನ್ನೂ ಪಡದಿದ್ದಾಗ ಚಿದಂಬರಂ, ಮನಮೋಹನ್‍ರ ಮಾತುಗಳನ್ನು ಸಮಾಜ ನೆನಪಿಸತೊಡಗಿತು. ಈ ಅವಧಿಯಲ್ಲಿ ಕಾಶ್ಮೀರದಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚು ಕಲ್ಲೆಸೆತ ಮತ್ತು ಹಿಂಸಾಚಾರ ಪ್ರಕರಣಗಳು ನಡೆದುವು. ಸತತ 100ಕ್ಕಿಂತಲೂ ಅಧಿಕ ದಿನಗಳ ವರೆಗೆ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆದುವು. ನಕ್ಸಲರು ಸೇನೆಯ ವಿರುದ್ಧ ಅತ್ಯಂತ ಪ್ರಬಲ ದಾಳಿಗಳನ್ನು ಸಂಘಟಿಸಿದರು. ನೋಟು ನಿಷೇಧವು ಕಾಶ್ಮೀರದ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಿಲ್ಲ ಮತ್ತು ನಕ್ಸಲರನ್ನು ಅದು ಈ ಹಿಂದಿಗಿಂತಲೂ ಹೆಚ್ಚು ಚುರುಕುಗೊಳಿಸಿದೆ ಎಂಬ ಅಂಶಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾಗತೊಡಗಿದಾಗ ಸರಕಾರವು ನೋಟು ನಿಷೇಧಕ್ಕೆ ಇನ್ನೊಂದು ಕಾರಣವನ್ನು ಮುಂದಿಟ್ಟಿತು. ತೆರಿಗೆ ವಂಚಕರನ್ನು ಪತ್ತೆ ಹಚ್ಚುವುದು ಅದರ ಗುರಿಯಾಗಿತ್ತು ಅಂದಿತು. ಇದಾಗಿ ಕೆಲವೇ ಸಮಯದಲ್ಲಿ ಆರ್‍ಬಿಐ ಹೊರಡಿಸಿದ ಹೇಳಿಕೆಯು ಕೇಂದ್ರವನ್ನು ಮತ್ತೊಂದು ಆಘಾತ ತಳ್ಳಿತು. ನಿಷೇಧಿತ ನೋಟುಗಳಲ್ಲಿ 99% ನೋಟುಗಳೂ ಬ್ಯಾಂಕುಗಳಿಗೆ ಮರಳಿ ಬಂದಿವೆ ಎಂದು ಅದು ಹೇಳಿತು. ಈ ಮುಖಾಂತರ ನೋಟು ನಿಷೇಧ ಎಂಬ ಪ್ರಕ್ರಿಯೆಯೇ ಅತೀ ದೊಡ್ಡ ವಿಫಲ ಪ್ರಯೋಗ ಎಂಬುದಾಗಿ ಸಾಬೀತಾಯಿತು. ಇದರ ಬೆನ್ನಿಗೇ ಕೇಂದ್ರ ಸರಕಾರವು ಜಿಎಸ್‍ಟಿ ತೆರಿಗೆ ಪದ್ಧತಿಯನ್ನು ಜನರ ಮೇಲೆ ಹೇರಿತು. ಸದ್ಯ ನೋಟು ನಿಷೇಧ ಮತ್ತು ಜಿಎಸ್‍ಟಿಗಳು ಸೇರಿಕೊಂಡು ದೇಶದ ಅರ್ಥವ್ಯವಸ್ಥೆಯನ್ನೇ ಅಲುಗಾಡಿಸುವ ಹಂತಕ್ಕೆ ತಲುಪಿಬಿಟ್ಟಿದೆ. ಈ ವರೆಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ‘ಅಚ್ಛೇ ದಿನ್’ ಅನ್ನು ಕನವರಿಸುತ್ತಿದ್ದ ಮತ್ತು ಒಳಗೊಳಗೇ ಸುಖಿಸುತ್ತಿದ್ದವರಲ್ಲಿ ಅನೇಕರು ತಮ್ಮ ನಿರಾಶೆಯನ್ನು ಒಬ್ಬೊಬ್ಬರಾಗಿ ಹಂಚಿಕೊಳ್ಳತೊಡಗಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳು, ಉದ್ದಿಮೆದಾರರು ನೋಟು ನಿಷೇಧದ ಆರಂಭದಲ್ಲಿಯೇ ಅದರ ಪರಿಣಾಮವನ್ನು ಎದುರಿಸತೊಡಗಿದ್ದರು. ಇವರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿಲ್ಲದ ಮಂದಿ ಆರಂಭದಲ್ಲೇ ತಮ್ಮ ಆತಂಕವನ್ನು ಸಂದರ್ಭಾನುಸಾರ ಹಂಚಿಕೊಂಡೂ ಇದ್ದರು. ಆದರೆ, ಮೋದಿ ಬೆಂಬಲಿಗ ವರ್ತಕರು ಮತ್ತು ಜನಸಾಮಾನ್ಯರು ಅಷ್ಟು ಬೇಗ ಒಪ್ಪಿಕೊಳ್ಳಲು ಸಿದ್ಧರಾಗಿರಲಿಲ್ಲ. ವ್ಯಾಪಾರ-ವಹಿವಾಟುಗಳ ಮೇಲೆ ನೋಟು ನಿಷೇಧದಿಂದ ಅಡ್ಡ ಪರಿಣಾಮ ಉಂಟಾಗಿದ್ದರೂ ಮತ್ತು ವ್ಯವಹಾರಗಳಲ್ಲಿ ತೀವ್ರ ಹಿನ್ನಡೆ ಎದುರಾಗಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಅವರು ಹಿಂಜರಿಕೆ ತೋರಿದ್ದರು. ಇದಕ್ಕೆ ಇರುವ ಇನ್ನೊಂದು ಕಾರಣ, ಭ್ರಮೆ. ಮಾಧ್ಯಮಗಳು ಮೋದಿಯವರ ಸುತ್ತ ಅಂಥದ್ದೊಂದು ಭ್ರಮೆಯನ್ನು ಹುಟ್ಟು ಹಾಕಿದ್ದುವು. ಅಳೆದೂ ತೂಗಿ ಆಡುವ ಮನ್‍ಮೋಹನ್ ಸಿಂಗ್‍ರ ಮಾತಿಗಿಂತ ವಾಚಾಳಿಯಾಗಿರುವ ಮೋದಿಯವರನ್ನು ಅವು ಭಾರತದ ವಿಮೋಚಕನಂತೆ ಬಿಂಬಿಸಿದುವು. ಕಾಂಗ್ರೆಸ್‍ಗೆ 60 ವರ್ಷಗಳನ್ನು ಕೊಟ್ಟು ಕೆಟ್ಟೆವು ಎಂದು ಜನರು ಅಂದುಕೊಳ್ಳುವಷ್ಟರ ಮಟ್ಟಿಗೆ ದೇಶ ಭ್ರಮೆಯಲ್ಲಿ ತೇಲತೊಡಗಿತು. ಹೀಗೆ ಭ್ರಮೆ ಮತ್ತು ನಿರೀಕ್ಷೆಗಳ ಮೇಲೆ ಬದುಕತೊಡಗಿದ ಜನರನ್ನು ಅರ್ಥತಜ್ಞನೂ ಅಲ್ಲದ, ಪ್ರಬಲ ವೈಚಾರಿಕ ನೆಲೆಗಟ್ಟನ್ನೂ ಹೊಂದಿಲ್ಲದ ಮತ್ತು ಆರ್ಥಿಕ ಒಳ-ಹೊರಗನ್ನು ವಿಶ್ಲೇಷಣೆಗೆ ಒಳಪಡಿಸಲೂ ಶಕ್ತರಲ್ಲದ ಮೋದಿಯವರು ಪ್ರಯೋಗಕ್ಕೆ ಒಡ್ಡಿದರು.
     ಇದೀಗ ಆ ಭ್ರಮೆಯಲ್ಲಿ ನಿಧಾನಕ್ಕೆ ಬಿರುಕುಗಳು ಮೂಡತೊಡಗಿವೆ. ಕವಿದ ಪೊರೆ ಕಳಚಿಕೊಂಡು ವಾಸ್ತವ ಭಾರತ ಕಾಣತೊಡಗಿದೆ. ಸಣ್ಣ ಉದ್ದಿಮೆಗಳು ಈಗಲೂ ಸಾಧ್ಯವಾಗದೇ ಒದ್ದಾಡುತ್ತಿವೆ. ಕೈಗಾರಿಕೆಗಳಿಗೆ ಬಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ವ್ಯಾಪಾರ-ವಹಿವಾಟುಗಳಲ್ಲಿ ಕಾಣಿಸಿಕೊಂಡಿದ್ದ ನಿಧಾನತೆ ಹಾಗೆಯೇ ಮುಂದುವರಿದಿದೆ. ಉತ್ಪಾದನೆ ಕುಂಠಿತಗೊಂಡಿದೆ. ರಫ್ತು ವ್ಯವಹಾರಗಳಲ್ಲಿ ಕಾಣಿಸಿಕೊಂಡಿದ್ದ ಇಳಿಮುಖದಲ್ಲಿ ಏನೇನೂ ಬದಲಾವಣೆಯಾಗಿಲ್ಲ. ಸಣ್ಣ-ಪುಟ್ಟ ಬ್ಯಾಂಕ್‍ಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಭಯಮಿಶ್ರಿತ ಮಾತುಗಳೂ ಸಾರ್ವಜನಿಕವಾಗಿ ಕೇಳಿ ಬರತೊಡಗಿವೆ. ಸುಬ್ರಹ್ಮಣ್ಯ ಸ್ವಾಮಿಯವರ ಹೇಳಿಕೆಯೂ ಇಂಥ ಸಾಧ್ಯತೆಯೆಡೆಗೇ ಬೊಟ್ಟು ಮಾಡುತ್ತಿವೆ. ಆದ್ದರಿಂದ ಕೇಂದ್ರ ಸರಕಾರವು ಆಗಿರುವ ವೈಫಲ್ಯವನ್ನು ಒಪ್ಪಿಕೊಂಡು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗಿಮಿಕ್‍ಗಳು ಜನರನ್ನು ಮರುಳುಗೊಳಿಸಬಹುದು, ಆದರೆ ದೇಶವನ್ನಲ್ಲ. ದೇಶವೆಂಬ ವ್ಯವಸ್ಥೆ ಗಿಮಿಕ್‍ಗಳಾಚೆಗಿನ ವಾಸ್ತವ. ಈ ವಾಸ್ತವಕ್ಕೆ ಮುಖಾಮುಖಿಯಾಗಬೇಕಾದುದು ಇಂದಿನ ಅಗತ್ಯ.

ಗಂಗೆಯಲ್ಲಿ ಸ್ನಾನ ಮಾಡದ ಸಾಧುಗಳು ಮತ್ತು ಹಬ್ಬ

        ಹಿರಿಯ ಪರಿಸರತಜ್ಞ ಮತ್ತು ನ್ಯಾಯವಾದಿಯಾಗಿರುವ ಸಂಜಯ್‍ ಉಪಾಧ್ಯಾಯ ಎಂಬವರು ಕಳೆದ ತಿಂಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ದೂರು ಎಷ್ಟು ಮಹತ್ವಪೂರ್ಣವಾದುದುಎಂಬುದನ್ನು ಕಳೆದವಾರ ಗಂಗೆ ಸಾಬೀತು ಪಡಿಸಿದ್ದಾಳೆ. ದೇಶದ ಅನೇಕಾರು ಆಶ್ರಮಗಳ ಸಾಧುಗಳು ಗಂಗೆಯಲ್ಲಿ ಸ್ನಾನ ಮಾಡಲು ಕಳೆದವಾರ ನಿರಾಕರಿಸಿದರು. ವಿಜಯದಶಮಿಯಂದು ಸಾಧುಗಳು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನು ಪಾಲಿಸಲೂ ಸಾಧ್ಯವಾಗದಷ್ಟು ಗಂಗಾನದಿ ಮಾಲಿನ್ಯದಿಂದ ತುಂಬಿ ಹೋಗಿದೆ ಎಂದವರು ವಿಷಾದಿಸಿದರು. 9 ದಿನಗಳ ಕಾಲ ಆಚರಿಸಲಾದ ವಿಜಯದಶಮಿ ಹಬ್ಬ ಮತ್ತು ದುರ್ಗಾದೇವಿ ಮೂರ್ತಿಯ ವಿಸರ್ಜನೆಯಿಂದಾಗಿ ಗಂಗೆ ಕೊಳಕಾಗಿದ್ದಾಳೆ ಎಂಬುದು ಅವರ ದೂರು. ಗಂಗೆಯ ತಟದಲ್ಲಿರುವ ಕಂಪೆನಿಗಳ ತ್ಯಾಜ್ಯಕ್ಕೂ ಈ ಕೊಳಕಿನಲ್ಲಿ ಪಾತ್ರ ಇದೆ ಎಂಬುದೂ ಅಷ್ಟೇ ಸತ್ಯ. ಒಂದುಕಡೆ, ಸ್ವಚ್ಛ ಭಾರತ ಅಭಿಯಾನ ಮತ್ತು ಬಯಲು ಶೌಚಮುಕ್ತ ಭಾರತಕ್ಕಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಇನ್ನೊಂದೆಡೆ ನಂಬಿಕೆಯ ಹೆಸರಲ್ಲಿ ಪರಿಸರವನ್ನೇ ಕೊಳಕು ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಹಾಗಂತ, ಇದು ಹಿಂದೂ ಧರ್ಮದ ಸಮಸ್ಯೆ ಅಲ್ಲ. ಇದು ಧರ್ಮಾತೀತ. ಕಂಪೆನಿಗಳು ಹೊರ ಹಾಕುವ ಅಪಾರ ಪ್ರಮಾಣದ ತ್ಯಾಜ್ಯಗಳಿಗೆ ನಾವು ಯಾವ ಧರ್ಮವನ್ನು ಹೊಣೆ ಮಾಡಬಹುದು? ಆ ಕಂಪೆನಿಗಳಲ್ಲಿ ದುಡಿಯುವುದರಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರಾದಿಯಾಗಿ ಎಲ್ಲರೂ ಇರಬಹುದು. ಅದರ ಮಾಲಿಕ ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸುತ್ತಲೂ ಇರಬಹುದು. ಹಾಗಂತ, ಮಾಲಿಕನ ಧರ್ಮವೇ ತ್ಯಾಜ್ಯ ನಿರ್ವಹಣೆಯ ವೈಫಲ್ಯಕ್ಕೆ ಕಾರಣ ಎಂದು ವಾದಿಸುವುದು ಮೂರ್ಖತನವಾಗುತ್ತದೆ. ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸುವುದಕ್ಕಿಂತ ತ್ಯಾಜ್ಯವನ್ನು ನದಿಯಲ್ಲೋ ಭೂಮಿಯ ಮೇಲೋ ಎಸೆಯುವುದರಿಂದ ಲಾಭದಾಯಕ ಎಂಬ ವ್ಯಾವಹಾರಿಕ ಲೆಕ್ಕಾಚಾರವೇ ಇದಕ್ಕೆಕಾರಣವಾಗಿರುತ್ತದೆ. ಅಂದಹಾಗೆ, ಕಂಪೆನಿಗಳು ಪ್ರತಿದಿನ ಹೊರಹಾಕುವ ತ್ಯಾಜ್ಯದ ಎದುರು ಹಬ್ಬಗಳ ಸಮಯದಲ್ಲಿ ಉಂಟಾಗುವ ತ್ಯಾಜ್ಯದ ಪ್ರಮಾಣ ಕಡಿಮೆಯೇ ಆಗಿದ್ದರೂ ಪರಿಣಾಮದ ದೃಷ್ಟಿಯಿಂದ ಇದು ದೊಡ್ಡದೇ. ಯಾಕೆಂದರೆ, ಹಬ್ಬಗಳೆಂಬುದು ಧರ್ಮಸೂಚಕ. ಚೌತಿ, ವಿಜಯದಶಮಿ, ಕೃಷ್ಣಾಷ್ಟಮಿ, ಈದ್, ಕ್ರಿಸ್‍ಮಸ್‍ಗಳು ನಿರ್ದಿಷ್ಟ ಧರ್ಮದೊಂದಿಗೆ ತಳಕು ಹಾಕಿಕೊಂಡೇ ಆಚರಿಸಲ್ಪಡುತ್ತವೆ. ಹಬ್ಬಗಳೆಂಬುದು ಕಂಪೆನಿಗಳಂಥಲ್ಲ. ಕಂಪೆನಿಗಳೂ ಸಹಿತ ಸಮಾಜಕ್ಕೆ ಮೌಲ್ಯವನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತವೆ ಎಂಬುದು ಹಬ್ಬಗಳ ವಿಶೇಷತೆ. ಹೀಗಿರುವಾಗ ಸ್ವಚ್ಛತೆಯ ವಿಷಯದಲ್ಲಿಅಥವಾ ಪರಿಸರ ಕಾಳಜಿಯ ವಿಷಯದಲ್ಲಿ ಒಂದು ಧರ್ಮಕ್ಕೆ ಸ್ಪಷ್ಟ ನಿಲುವುಗಳು ಇಲ್ಲದೇಇರುವುದಕ್ಕೆ ಸಾಧ್ಯವೇಇಲ್ಲ. ಕಳೆದ ಗಣೇಶ ಚತುರ್ಥಿಯ ಸಮಯದಲ್ಲಿ ಸಂಜಯ್‍ ಉಪಾಧ್ಯಾಯರು ಹಸಿರು ನ್ಯಾಯಾಧಿಕರಣಕ್ಕೆಅರ್ಜಿ ಸಲ್ಲಿಸಿದ್ದು ಈ ಕಾರಣದಿಂದಲೇ. ರಾಜಧಾನಿ ದೆಹಲಿಯಲ್ಲಿ ಹರಿಯುವ ಯಮುನಾ ನದಿಯು ವಿಸರ್ಜಿತ ಗಣೇಶ ಮೂರ್ತಿಗಳಿಂದಾಗಿ ಮಾಲಿನ್ಯಗೊಂಡಿದೆ ಎಂದವರು ಹೇಳಿದ್ದರು. ಮಣ್ಣಿನಲ್ಲಿ ಮಾಡಿರುವ ಮೂರ್ತಿಗಳು ನೀರಿನಲ್ಲಿ ಕರಗುತ್ತವೆಯೇ ಹೊರತು ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಿದವುಗಳು ಕರಗುವುದಿಲ್ಲ. ವಿಷಾದ ಏನೆಂದರೆ, ಯಮುನೆಯಲ್ಲಿ ತೇಲುತ್ತಿರುವ ಅಸಂಖ್ಯ ಗಣೇಶ ಮೂರ್ತಿಗಳು ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಿದವುಗಳು. ಕೇವಲ ದೆಹಲಿ ನಗರವೊಂದರಲ್ಲೇ 200ರಷ್ಟು ದುರ್ಗಾಪೂಜಾ ಪೆಂಡಾಲ್‍ಗಳಿವೆ ಮತ್ತು ಅವುಗಳಿಂದ ಅನೇಕ ಮೂರ್ತಿಗಳು ಯಮುನೆಯಲ್ಲಿ ವಿಸರ್ಜಿಸಲ್ಪಡುತ್ತವೆಎಂದು ವರದಿಗಳು ಹೇಳುತ್ತವೆ. ಅಲ್ಲದೇ ಮನೆಗಳಿಂದಲೂ ಇಂಥ ಮೂರ್ತಿಗಳನ್ನು ತಂದು ಯಮುನೆಯಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ವಿಸರ್ಜಿಸಲಾಗುವ ಮೂರ್ತಿಗಳಲ್ಲಿ ಹೆಚ್ಚಿನವು ಪ್ಯಾರಿಸ್ ಪ್ಲಾಸ್ಟರ್‍ನಿಂದ ರಚಿಸಿದವುಗಳಾಗಿವೆ ಎಂದೂ ವರದಿಗಳು ಹೇಳುತ್ತಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವಂತೂ ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಲಾಗುವ ಮೂರ್ತಿಗಳನ್ನು 2015 ರಲ್ಲೇ ಸಂಪೂರ್ಣವಾಗಿ ನಿಷೇಧಿಸಿದೆ. ಈ ವಿಷಯದಲ್ಲಿ ಸಮಾಜ ಎಚ್ಚೆತ್ತುಕೊಂಡಿಲ್ ಲಅನ್ನುವುದಕ್ಕೆ ಯಮುನೆಯಲ್ಲಿ ತೇಲುತ್ತಿರುವ ಮೂರ್ತಿಗಳು ಮತ್ತುಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ನಿರಾಕರಿಸಿರುವ ಸಾಧುಗಳೇ ಸಾಕ್ಷಿ.
    ಸಮಾಜದ ಆರೋಗ್ಯವನ್ನು ಕೆಡಿಸುವರೂಪದಲ್ಲಿ ನಿಜವಾದ ಧಾರ್ಮಿಕ ಆಚರಣೆಯೊಂದು ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವು ವಾದಿಸುವಾಗುವಲ್ಲೆಲ್ಲ, ಹಾಗಾದರೆ ಇವೆಲ್ಲ ಏನು ಅನ್ನುವ ಪ್ರಶ್ನೆಯು ತಕ್ಷಣದ ಪ್ರತಿಕ್ರಿಯೆಯಾಗಿ ನಮ್ಮೆದುರು ನಿಲ್ಲುತ್ತದೆ. ಕೊಳಕು- ಧರ್ಮದ ಪ್ರತೀಕ ಅಲ್ಲ. ಅದು ಧರ್ಮವನ್ನು ಪಾಲಿಸದವರ ಪ್ರತೀಕ. ನಿಜವಾಗಿ, ಒಂದು ಧರ್ಮವನ್ನು ಅದು ಪ್ರತಿಪಾದಿಸುವ ವಿಷಯಗಳ ಆಧಾರದ ಮೇಲೆ ಅಳಿಯಬೇಕೆ ಹೊರತು ಅದರ ಅನುಯಾಯಿಗಳೆಂದು ಗುರುತಿಸಿಕೊಂಡವರ ನಡವಳಿಕೆಯ ಮೇಲೆ ಅಲ್ಲ. ಅನುಯಾಯಿಗಳ ಧರ್ಮನಿಷ್ಠೆ, ನಿಯಮ ಪಾಲನೆಗಳು ಸದಾಕಾಲ ಏಕ ಪ್ರಕಾರವಾಗಿರುತ್ತವೆ ಎಂದು ಹೇಳುವ ಹಾಗಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳು ಅವರನ್ನು ನಿಯಮ ಉಲ್ಲಂಘಕರಾಗಿ ಮಾರ್ಪಡಿಸಬಹುದು. ಧರ್ಮ ಅನುಯಾಯಿಗಳಾಗಿ ಗುರುತಿಸಿಕೊಂಡೇ ಸ್ವ ಲಾಭಕ್ಕಾಗಿ ಧರ್ಮದ ನಿಯಮಗಳನ್ನು ಅವರು ಉಲ್ಲಂಘಿಸಬಹುದು. ಹಾಗಂತ, ಅದಕ್ಕೆಧರ್ಮದ ಮೂಲ ತತ್ವಗಳು ಹೊಣೆಯಾಗುವುದಿಲ್ಲ. ಇಸ್ಲಾಮ್‍ ಧರ್ಮವು ಸ್ವಚ್ಛತೆಯನ್ನು ಧರ್ಮದ ಅರ್ಧಭಾಗವೆಂದು ಘೋಷಿಸಿದೆ. ಎಲ್ಲಿಯ ವರೆಗೆಂದರೆ ನಡೆಯುವ ದಾರಿಯಲ್ಲಿ ಸ್ವಚ್ಛತೆಗೆ ತಡೆ ಒಡ್ಡುವಂತದ್ದು ಇದ್ದರೆ ಅದನ್ನು ನೀಗಿಸುವುದೂ ಧರ್ಮ ಎಂದು ಅದು ಹೇಳಿದೆ. ಐದು ಬಾರಿಯ ಕಡ್ಡಾಯ ನಮಾಝïಗಿಂತ ಮೊದಲು ಐದು ಬಾರಿಯೂ ಕಡ್ಡಾಯವಾಗಿ ಅಂಗಾಂಗಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಬೇಕೆಂದು ಅದುಆದೇಶ ನೀಡಿದೆ. ಹಬ್ಬಗಳ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡುವ ಯಾವ ಆಚರಣೆಯನ್ನೂ ಅದು ಯಾರ ಮೇಲೆಯೂ ಹೇರಿಲ್ಲ. ದುರಂತ ಏನೆಂದರೆ, ಇವತ್ತು ಹಬ್ಬಗಳಿಗಿಂತ ಒಂದು ವಾರ ಮೊದಲೇ ಮಾಧ್ಯಮಗಳು ‘ಪರಿಸರ ಸ್ನೇಹಿ ಹಬ್ಬ’ದ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತವೆ. ಸರಕಾರದ ಜಾಹೀರಾತು ಪ್ರಕಟವಾಗುತ್ತದೆ. ವಿವಿಧ ಸಭೆ-ಸಮಾರಂಭಗಳಲ್ಲಿ ಪರಿಸರ ಸ್ನೇಹಿ ಹಬ್ಬದ ಅಗತ್ಯಗಳನ್ನು ಒತ್ತಿ ಹೇಳಲಾಗುತ್ತದೆ. ನಿಜವಾಗಿ, ಇದು ನಾವೆಲ್ಲ ಸೇರಿಕೊಂಡು ಹಬ್ಬಗಳಿಗೆ ಮತ್ತು ಅದು ಪ್ರತಿನಿಧಿಸುವ ಧರ್ಮಗಳಿಗೆ ಮಾಡುವ ಅವಮಾನ. ಹಬ್ಬಯಾವತ್ತೂ ಪರಿಸರ ವಿರೋಧಿಯಾಗಲು ಸಾಧ್ಯವೇ ಇಲ್ಲ. ಒಂದು ಹಬ್ಬದ ಆಚರಣೆಯು ಪರಿಸರ ವಿರೋಧಿಯಾಗಿದೆ ಎಂದು ಹೇಳುವುದು ಒಂದೋ ಆ ಹಬ್ಬವನ್ನು ಆಚರಿಸುವವರಲ್ಲಿ ಪರಿಸರ ಕಾಳಜಿ ಇಲ್ಲ ಅಥವಾ ಆ ಹಬ್ಬಯಾವ ಧರ್ಮವನ್ನು ಪ್ರತಿನಿಧಿಸುತ್ತದೋ ಆ ಧರ್ಮವು ಪರಿಸರ ವಿರೋಧಿಯಾಗಿದೆ ಎಂದು ಸಾರಿದಂತಾಗುತ್ತದೆ.
ಇವತ್ತಿನ ತುರ್ತುಅಗತ್ಯಏನೆಂದರೆ, ಹಬ್ಬಗಳು ಸಾಮಾಜೀಕರಣಗೊಳ್ಳುವುದು. ಪರಿಸರ ಸ್ನೇಹಿ, ಸಮಾಜ ಸ್ನೇಹಿ ಮತ್ತು ಮನುಷ್ಯ ಸ್ನೇಹಿಯಾಗುವುದು. ಹಬ್ಬದ ಸಂತೋಷವು ನಿರ್ದಿಷ್ಟಧರ್ಮದ ಅನುಯಾಯಿಗಳಿಗೆ ಮಾತ್ರ ಸೀಮಿತವಾಗದೇ ಸಮಾಜದ ಎಲ್ಲರ ಸಂತೋಷಕ್ಕೂ ಕಾರಣವಾಗುವುದು. ಆದರೆಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಸಾಧುಗಳು ನಿರಾಕರಿಸಿರುವ ಘಟನೆಯುಇಲ್ಲೆಲ್ಲೋ ತೂತಾಗಿರುವುದನ್ನು ಸೂಚಿಸುತ್ತಿದೆ. ಇದು ವಿಷಾದನೀಯ.

Monday 30 October 2017

ಟಿಪ್ಪು ಚರ್ಚೆ: ಯಾರ ಅಗತ್ಯ?

ಟಿಪ್ಪು ಆದ ಯಡಿಯೂರಪ್ಪ ಮತ್ತು ಶೆಟ್ಟರ್
           ಸಂಶೋಧಕ ಬಿ. ಶೇಖ್ ಅಲಿಯವರ `ಟಿಪ್ಪು ಸುಲ್ತಾನ್: ಎ ಕ್ರುಸೇಡರ್ ಫಾರ್ ಚೇಂಜ್' ಎಂಬ ಸಂಶೋಧನಾತ್ಮಕ ಕೃತಿಯೊಂದಿದೆ. ಸುಮಾರು 6 ವರ್ಷಗಳ ಹಿಂದೆ ಪ್ರಕಟವಾದ ಈ ಕೃತಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ಅನಿಸಿಕೆಗಳೂ ಇವೆ. ಈ ಅನಿಸಿಕೆಯಲ್ಲಿ ಅವರು ಟಿಪ್ಪುವನ್ನು ಮೈಸೂರು ಸಾಮ್ರಾಜ್ಯದ ಹುಲಿ ಎಂದು ಕರೆದಿದ್ದಾರೆ. ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಹೊಂದಿದ್ದ ಸುಧಾರಕ ಎಂದು ಕೊಂಡಾಡಿದ್ದಾರೆ. ಟಿಪ್ಪುವಿನ ರಾಷ್ಟ್ರ ಪರಿಕಲ್ಪನೆ, ಕೈಗಾರಿಕಾ ನೀತಿ ಮತ್ತು ಸೈನಿಕ ಕೌಶಲ್ಯಗಳನ್ನು ಹೊಗಳಿದ್ದಾರೆ. ಇನ್ನು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಯಡಿಯುರಪ್ಪನವರಂತೂ ಟಿಪ್ಪು ಗುಣಗಾನದಲ್ಲಿ ಜಗದೀಶ್ ಶೆಟ್ಟರನ್ನೂ ಮೀರಿಸಿದ್ದಾರೆ. ಟಿಪ್ಪುವಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಅವರು ಟಿಪ್ಪು ಪೇಟವನ್ನು ಮುಡಿಗೇರಿಸಿಕೊಂಡು ಥೇಟ್ ಟಿಪ್ಪು ಸುಲ್ತಾನನಂತೆ ಫೋಸು ಕೊಟ್ಟಿದ್ದಾರೆ. ಇದಂತೂ ಜಗದೀಶ್ ಶೆಟ್ಟರ್ ಅವರ ಅನಿಸಿಕೆಯ ಬಳಿಕ ನಡೆದ ಘಟನೆ. ಕಳೆದ ವರ್ಷ ಟಿಪ್ಪು ಪೇಟದಾರಿ ಯಡಿಯೂರಪ್ಪ ಅವರ ಚಿತ್ರವು ಮಾಧ್ಯಮಗಳಲ್ಲಿ ಪ್ರಕಟವೂ ಆಗಿತ್ತು. ಪ್ರಶ್ನೆಯಿರುವುದೂ ಇಲ್ಲೇ. ಐದಾರು ವರ್ಷಗಳ ಹಿಂದೆ ಟಿಪ್ಪುವಿನಲ್ಲಿ ಸಕಾರಾತ್ಮಕವಾದುದನ್ನು ಮಾತ್ರ ಕಂಡ ಬಿಜೆಪಿಗೆ ಈಗ ಏನಾಗಿದೆ? ಅದೇಕೆ ಮಾತು ಹೊರಳಿಸುತ್ತಿದೆ? ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ತನ್ನ ಹೆಸರನ್ನೇ ನಮೂದಿಸಬಾರದೆಂದು ಬಿಜೆಪಿಯ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳುವಷ್ಟು ಬದಲಾದದ್ದು ಏಕೆ? ಟಿಪ್ಪು ಸುಲ್ತಾನ್ ಗತಿಸಿ ಶತಮಾನವೊಂದು ಕಳೆದಿದೆ. ಈ ಅವಧಿಯೊಳಗೆ ಟಿಪ್ಪುವಿನ ಬಗ್ಗೆ ನೂರಾರು ಪುಸ್ತಕಗಳು ಬಿಡುಗಡೆಗೊಂಡಿವೆ. ಟಿಪ್ಪುವನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ಸಂಜಯ್ ಖಾನ್ ಅವರು ಟೆಲಿ ಧಾರಾವಾಹಿ ನಿರ್ಮಿಸಿದ್ದಾರೆ. ಅನೇಕಾರು ಕಂತುಗಳಲ್ಲಿ ದೂರದರ್ಶನವೇ ಅದನ್ನು ಪ್ರಸಾರ ಮಾಡಿದೆ. ಅದಲ್ಲದೇ ಅಸಂಖ್ಯ ಬೀದಿ ನಾಟಕಗಳು, ಜನಪದೀಯ ಹಾಡುಗಳು, ಪಾಡ್ಡನ ಗಳಲ್ಲಿ ಟಿಪ್ಪುವಿನ ಸ್ಮರಣೆ ಇದೆ. ಒಂದು ವೇಳೆ, ಬಿಜೆಪಿಗೆ ಟಿಪ್ಪುವಿನ ಬಗ್ಗೆ ತಕರಾರು ಇರುವುದು ನಿಜವೇ ಆಗಿದ್ದರೆ 6 ವರ್ಷಗಳ ಹಿಂದೆಯೂ ಅದು ಇರಬೇಕಿತ್ತು. ಯಡಿಯೂರಪ್ಪರು ಸ್ವತಃ ಟಿಪ್ಪು ವಿನಂತಾಗುವ ಸಂದರ್ಭದಲ್ಲೂ ಅದು ವ್ಯಕ್ತವಾಗಬೇಕಿತ್ತು. ಆದರೆ, 6 ವರ್ಷಗಳ ಹಿಂದೆ ಟಿಪ್ಪುವನ್ನು ಸುಧಾರಕನೆಂದು ಕರೆದ ಮತ್ತು ಸ್ವತಃ ಟಿಪ್ಪುವಿನಂತೆ ವೇಷ ತೊಟ್ಟ ಪಕ್ಷವೊಂದು ಕಳೆದ ಎರಡು ವರ್ಷಗಳಿಂದ ಟಿಪ್ಪುವನ್ನು ಕ್ರೂರಿ, ಮತಾಂಧ, ಹಿಂದೂ ವಿರೋಧಿ ಎಂದೆಲ್ಲಾ ಕರೆಯುತ್ತಿರು ವುದು ಏನನ್ನು ಸೂಚಿಸುತ್ತದೆ? ದ್ವಂದ್ವ, ಇತಿಹಾಸದ ವಿಸ್ಮøತಿ, ಅಗ್ಗದ ರಾಜಕೀಯ ಮತ್ತು...?
     ನಿಜವಾಗಿ ಈ ದ್ವಂದ್ವ ಇಲ್ಲಿಗೇ ಮುಗಿಯುವುದಿಲ್ಲ. 2014ರ ಆರಂಭದಲ್ಲಿ ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಕೂಟವು ನೋಟು ರದ್ಧತಿಯ ಬಗ್ಗೆ ಮಾತಾಡಿತ್ತು. 2005 ಮಾರ್ಚ್ 31ರ ಮೊದಲು ಪ್ರಕಟವಾದ ನೋಟುಗಳನ್ನು ರದ್ದುಪಡಿಸುವುದು ಅದರ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಮಾಧ್ಯಮಗಳೂ ಚರ್ಚೆ ನಡೆಸಿದ್ದುವು. ಆಗ ಈ ಚಿಂತನೆಗೆ ಪ್ರಬಲ ವಿರೋಧ ವ್ಯಕ್ತವಾದದ್ದೇ ಬಿಜೆಪಿಯಿಂದ. ಆಗ ಪಕ್ಷದ ವಕ್ತಾರೆಯಾಗಿದ್ದ ಮೀನಾಕ್ಷಿ ಲೇಖಿಯವರು ನೋಟು ರದ್ಧತಿ ಚಿಂತನೆಯನ್ನು `ಬಡವ ವಿರೋಧಿ ನಿಲುವು’ ಎಂದೇ ಟೀಕಿಸಿದ್ದರು. ವಿದೇಶದಿಂದ ಕಪ್ಪು ಹಣವನ್ನು ಮರಳಿ ತರಬೇಕೆಂಬ ಅಗ್ರಹವನ್ನು ಮರೆಸಲು ಯುಪಿಎ ಕೂಟವು ನಡೆಸುತ್ತಿರುವ ತಂತ್ರ ಇದು ಎಂದೂ ವಿಶ್ಲೇಷಿಸಿದ್ದರು. ನೋಟು ರದ್ಧತಿಯನ್ನು ವಿರೋಧಿಸಿ ಅವರು ಮಾತಾಡಿದ್ದ ವೀಡಿಯೋ ಕಳೆದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ನೊಂದು ಆಧಾರ್ ಕಾರ್ಡ್. ಅರುಣ್ ಜೇಟ್ಲಿಯವರು ಆಧಾರ್ ಕಾರ್ಡನ್ನು ತೀವ್ರವಾಗಿ ವಿರೋಧಿಸಿದ್ದರು. ಜಿಎಸ್ಟಿ ಮತ್ತು ಎಫ್‍ಡಿಐ (ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 100% ನೇರ ವಿದೇಶಿ ಹೂಡಿಕೆ)ಯನ್ನು ಖಂಡಿಸಿದ್ದರು. ದುರಂತ ಏನೆಂದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಮೂರೂ ವಿಷಯಗಳ ಮೇಲೆ ಗಾಢ ವಿಸ್ಮøತಿಯನ್ನು ತೋರಿದೆ. ಅಧಿಕಾರದಲ್ಲಿರುವಾಗ ಒಂದು ನಿಲುವು ಮತ್ತು ಅಧಿಕಾರ ಕೈ ತಪ್ಪಿದಾಗ ಇನ್ನೊಂದು ನಿಲುವು-ಇದಕ್ಕೆ ಸಂದರ್ಭ ಸಾಧಕತನ ಅನ್ನುವುದಕ್ಕಿಂತ ಉತ್ತಮ ಹೆಸರು ಬೇರೆ ಯಾವುದಿದೆ? ಒಂದು ವೇಳೆ, ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಅದು ಟಿಪ್ಪು ಜಯಂತಿ ಯನ್ನು ಸರಕಾರದ ಮತ್ತು ಪಕ್ಷದ ಅಧಿಕೃತ ಕಾರ್ಯಕ್ರಮವಾಗಿ ಘೋಷಿಸದೆಂದು ಹೇಗೆ ಹೇಳು ವುದು? ಟಿಪ್ಪು ಜಯಂತಿಯ ಪ್ರಯುಕ್ತ ಸರಕಾರಿ ರಜೆ ಸಾರದೆಂದು ಹೇಗೆ ನಂಬುವುದು?
     ನಿಜವಾಗಿ ಬಿಜೆಪಿಗೆ ಸದ್ಯ ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಇಶ್ಯೂವೊಂದರ ಅಗತ್ಯ ಇದೆ. ಟಿಪ್ಪು ಅದಕ್ಕೆ ಸೂಕ್ತ ವ್ಯಕ್ತಿ ಎಂದು ಅನಿಸಿದೆ. ಈ ಮೂಲಕ ಕೆಲವು ದಿನಗಳ ಮಟ್ಟಿಗೆ ಸುದ್ದಿಯಲ್ಲಿರುವುದನ್ನು ಅದು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು- ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಟಿಪ್ಪುವಿನ ನಿಜ ಇತಿಹಾಸವನ್ನು ಸಮಾಜದ ಮುಂದಿಡುವುದು. ಇನ್ನೊಂದು- ಟಿಪ್ಪುವಿನ ಕುರಿತಂತೆ ಯಾವುದೇ ಕಾರ್ಯಕ್ರಮ, ರಾಲಿ, ಚರ್ಚೆಗಳನ್ನು ಏರ್ಪಡಿಸದೇ ಮೌನವಾಗಿರುವುದು. ಟಿಪ್ಪು ಚರ್ಚೆಗೊಳಗಾಗಬೇಕಾದದ್ದು ಬಿಜೆಪಿಯ ಸದ್ಯದ ಅಗತ್ಯ. ಅದು ಸಕಾರಾತ್ಮಕವೋ ನಕಾರಾತ್ಮಕವೋ ಎಂಬುದು ಮುಖ್ಯ ಅಲ್ಲ. ಟಿಪ್ಪು ಚರ್ಚೆಯಲ್ಲಿರಬೇಕು ಮತ್ತು ಆ ಚರ್ಚೆಯ ಮರೆಯಲ್ಲಿ ಹಿಂದೂ ಧ್ರುವೀಕರಣ ನಡೆಸಬೇಕು. ಬಿಜೆಪಿ ಸಂಕಷ್ಟದಲ್ಲಿರುವಾಗಲೆಲ್ಲ ಅದನ್ನು ಪಾರುಗೊಳಿಸುತ್ತಿರುವುದು ಇಂಥ ಕೃತಕ ವಿಷಯಗಳೇ. ನೋಟು ರದ್ಧತಿ, ಜಿಎಸ್‍ಟಿ ಮತ್ತು ಉದ್ಯೋಗ ಕುಸಿತದ ಕಾರಣದಿಂದ ದೇಶದ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಈ ಸಮಯದಲ್ಲಿ ಅದು ತಾಜ್‍ಮಹಲ್ ಅನ್ನು ಚರ್ಚೆಗೆತ್ತಿಕೊಂಡಿದೆ. ಹಾಗಂತ ತಾಜ್‍ಮಹಲ್‍ನ ಇತಿಹಾಸ ಅದಕ್ಕೆ ಗೊತ್ತಿಲ್ಲ ಎಂದಲ್ಲ. ಅದೊಂದು ತಂತ್ರಗಾರಿಕೆ. ಬಿಜೆಪಿಗೆ ಇಂಥ ದೊಡ್ಡ ಇತಿಹಾಸವೇ ಇದೆ. ಆದ್ದರಿಂದ ಬಿಜೆಪಿ ತೋಡಿದ ಹಳ್ಳಕ್ಕೆ ಬೀಳದಂತೆ ಸಮಾಜ ಎಚ್ಚರಿಕೆ ವಹಿಸಬೇಕು. ಟಿಪ್ಪುವಿನ ಬಗ್ಗೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೊದಲು ಇದು ಎಷ್ಟು ಅಗತ್ಯ ಅನ್ನುವ ಬಗ್ಗೆ ಗಂಭೀರ ಅವಲೋಕನ ನಡೆಸಬೇಕು. ಟಿಪ್ಪುವಿನ ಇತಿಹಾಸವನ್ನು ಸಮಾಜಕ್ಕೆ ಪರಿಚಯಿಸಬೇಕು ಎಂಬ ಉಮೇದಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅಂತಿಮವಾಗಿ ಬಿಜೆಪಿ ಲಾಭ ಮಾಡಿ ಕೊಡಬಲ್ಲುದೇ ಎಂಬುದೂ ಚರ್ಚೆಗೆಗೊಳಗಾಗ ಬೇಕು. ಟಿ.ವಿ. ಚಾನೆಲ್‍ಗಳು ತಮ್ಮ ಒಂದಷ್ಟು ಪ್ರೈಮ್‍ಟೈಂ ಅನ್ನು ಟಿಪ್ಪು ಚರ್ಚೆಗಾಗಿ ಮೀಸಲಿಡಬೇಕೆಂದು ಬಿಜೆಪಿ ಮನಸಾರೆ ಬಯಸುತ್ತಿದೆ. ಮುದ್ರಣ ಮಾಧ್ಯಮಗಳಲ್ಲಿ ಧಾರಾಳ ಲೇಖನ ಮತ್ತು ಸುದ್ದಿಗಳು ಬರುವುದನ್ನು ಅದು ನಿರೀಕ್ಷಿಸುತ್ತಿದೆ. ಈ ಬಯಕೆ ಮತ್ತು ನಿರೀಕ್ಷೆಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುವುದೆಂದರೆ, ಅದು ಬಿಜೆಪಿಯ ಸೋಲು ಮತ್ತು ಟಿಪ್ಪುವಿನ ಗೆಲುವು. ಇದು ಸದ್ಯದ ಅಗತ್ಯವೂ ಹೌದು.

Saturday 21 October 2017

ಹಾಲಿವುಡ್‍ನ ಹೆಣ್ಣು ಎತ್ತಿರುವ ಪ್ರಶ್ನೆ

     ಕಳೆದ ಅಕ್ಟೋಬರ್ 12ರಂದು ದಿ ಹಿಂದೂ ಪತ್ರಿಕೆ ಎರಡು ಸುದ್ದಿಗಳನ್ನು ಒತ್ತು ಕೊಟ್ಟು ಪ್ರಕಟಿಸಿತು. ಒಂದು - ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸಚಿನ್ ತೆಂಡುಲ್ಕರ್ ಅವರು ಜೊತೆಯಾಗಿ ಭಾಗವಹಿಸಿದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ್ದರೆ, ಇನ್ನೊಂದು - ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೆನ್‍ಸ್ಟಿನ್‍ಗೆ ಸಂಬಂಧಿಸಿದ್ದು. ‘ಹೆಣ್ಣು ಸಮಸ್ಯೆಯಲ್ಲ, ಪರಿಹಾರ, ಆಕೆ ಸಮಾಜದ ಆಸ್ತಿ..’ ಎಂದೆಲ್ಲ ಸಚಿನ್ ಹೆಣ್ಣನ್ನು ಹೊಗಳಿದರು. `ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ’ ಪ್ರಯುಕ್ತ ನಡೆದ ಕಾರ್ಯಕ್ರಮವೆಂಬ ನೆಲೆಯಲ್ಲಿ ಆ ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಹೆಣ್ಣು ಆಗಿದ್ದಳು. ಅದೇ ವೇಳೆ, ಈ ಸುದ್ದಿಯ ತುಸು ಕೆಳಗೆ ಇಟಲಿಯ ಖ್ಯಾತ ನಟಿ ಆಸಿಯಾ ಅರ್ಜೆಂಟೋ ಮತ್ತು ಇತರ 10ಕ್ಕಿಂತಲೂ ಹೆಚ್ಚು ನಟಿಯರ ಮೇಲೆ ಹಾರ್ವೆ ವೆನ್‍ಸ್ಟಿನ್ ನಡೆಸಿದ ಲೈಂಗಿಕ ದೌರ್ಜನ್ಯದ ಸುದ್ದಿ ಇತ್ತು. ನ್ಯೂಯಾರ್ಕ್ ಪತ್ರಿಕೆಯ ವರದಿಗಾರ ರೋನನ್ ಫೆರ್ರೋ ಎಂಬವ 10 ತಿಂಗಳ ಕಾಲ ವಿವಿಧ ನಟಿಯರೊಂದಿಗೆ ಸಂದರ್ಶನ ನಡೆಸಿ ಈ ವರದಿಯನ್ನು ತಯಾರಿಸಿದ್ದ. ಈ ವರದಿ ಪ್ರಕಟಣೆಗಿಂತ ಕೆಲವು ಸಮಯಗಳ ಮೊದಲು ಹಾಲಿವುಡ್‍ನ ಖ್ಯಾತ ನಟಿಯರಾದ ಆ್ಯಂಜೆಲಿನಾ ಜೋಲಿ, ರೋಸನ್ನಾ ಅಕ್ರ್ವೆಟ್, ಗೆನೆತ್ ಪಾಲ್ಟ್ರೋ.. ಮುಂತಾದವರು ಹಾಲಿವುಡ್‍ನಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಾಯಿ ತೆರೆದಿದ್ದರು. ವಿಶೇಷ ಏನೆಂದರೆ, ಹಾರ್ವೆ ವೆನ್‍ಸ್ಟಿನ್‍ರ ಮೇಲೆ ಗಂಭೀರ ಲೈಂಗಿಕ ಪೀಡನೆಯ ಆರೋಪ ಹೊರಿಸಿದ ನಟಿ ಆಸಿಯಾ ಅರ್ಜೆಂಟೋಗೆ ಈಗ 42 ವರ್ಷ. ಆಕೆಯ ತಂದೆಯಾದರೋ ಖ್ಯಾತ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಡಾರಿಯೋ ಅರ್ಜೆಂಟೋ. 20 ವರ್ಷವಿz್ದÁಗಲೇ ಹಾರ್ವೆ ವೆನ್‍ಸ್ಟಿನ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಆಸಿಯಾ ಅರ್ಜೆಂಟೋ ಹೇಳಿದ್ದಾರೆ. ಈ ವರೆಗೂ ಈ ವಿಷಯವನ್ನು ಬಹಿರಂಗಗೊಳಿಸದೇ ಇದ್ದುದಕ್ಕೆ ಆತನ ಭಯ ಕಾರಣ ಎಂದೂ ಆಕೆ ಹೇಳಿದ್ದಾರೆ. ಆಶ್ಚರ್ಯವಾಗುವುದೂ ಇಲ್ಲೇ. ಮಹಿಳಾ ಸಮಾನತೆ, ಸ್ವಾತಂತ್ರ್ಯ, ಸ್ವೇಚ್ಛೆ, ಸ್ವಾಭಿಮಾನ ಇತ್ಯಾದಿ ಇತ್ಯಾದಿಗಳ ಬಗ್ಗೆ ಗಟ್ಟಿ ದನಿಯಲ್ಲಿ ಮಾತಾಡುವ ಕ್ಷೇತ್ರದಲ್ಲೂ ಹೆಣ್ಣು ಶೋಷಿತಳೇ? ಶೋಷಣೆಯನ್ನು 20 ವರ್ಷಗಳ ಕಾಲ ಮುಚ್ಚಿಡುವಷ್ಟು ಆ ಕ್ಷೇತ್ರ ಆಕೆಯ ಪಾಲಿಗೆ ಅಪಾಯಕಾರಿಯೇ? ನಾಗರಿಕ ಸಮಾಜದಲ್ಲಿ ಇರುವಂತೆಯೇ ಅಲ್ಲೂ ಹೆಣ್ಣು ಭಯದಿಂದಲೇ ಬದುಕುತ್ತಿರುವಳೇ? ಹಾಗಿದ್ದರೆ ಆ ಕ್ಷೇತ್ರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ತಯಾರಿಸುವ ಸಿನಿಮಾಗಳು ಮತ್ತು ಆ ಸಿನಿಮಾಗಳಲ್ಲಿ ಶೋಷಣೆಯ ವಿರುದ್ಧ ಮಾತಾಡುವ ಹಿರೋಯಿನ್‍ಗಳ ನಿಜ ಸ್ಥಿತಿ ಏನು?
      ಮಹಿಳಾ ಶೋಷಣೆಯ ವಿರುದ್ಧ ಸರಕಾರಗಳು ಎಷ್ಟು ಕಾನೂನುಗಳನ್ನು ರಚಿಸಿವೆಯೋ ಅವೆಲ್ಲಕ್ಕಿಂತ ಎಷ್ಟೋ ಪಟ್ಟು ಅಧಿಕ ಶೋಷಣೆ ವಿರೋಧಿ ಚಿತ್ರಗಳನ್ನು ಸಿನಿಮಾ ಕ್ಷೇತ್ರ ತಯಾರಿಸಿವೆ. ನಿಜವಾಗಿ, ಸರಕಾರದ ಕಾನೂನುಗಳಿಗಿಂತ ಹೆಚ್ಚು ಸಮಾಜವನ್ನು ಆಕರ್ಷಿಸುವುದು ಸಿನಿಮಾಗಳು. ಹೆಣ್ಣನ್ನು ಆಸ್ತಿಯೆಂದೋ ಪುರುಷರಿಗೆ ಸಮಾನವೆಂದೋ ಪ್ರತಿಭಾ ಸಂಪನ್ನಳೆಂದೋ ಓರ್ವ ರಾಜಕಾರಣಿ ಹೇಳುವುದಕ್ಕೂ ಸಿನಿಮಾ ನಿರ್ದೇಶಕ ಹೇಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಅಲ್ಲೊಂದು ಕತೆ ಇರುತ್ತದೆ. ಪಾತ್ರಧಾರಿಗಳಿರುತ್ತಾರೆ. ಕ್ಯಾಮರಾ ಕೈ ಚಳಕವಿರುತ್ತದೆ. ಡಯಲಾಗ್‍ಗಳಿರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಒಂದು ದೊಡ್ಡ ತಂಡದ ಶ್ರಮ ಇರುತ್ತದೆ. ನಾಗರಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಯಾತನೆ, ಹಕ್ಕು ಹರಣ, ಅಸ್ವಾತಂತ್ರ್ಯ, ಶೋಷಣೆಗಳನ್ನೆಲ್ಲ ಅತ್ಯಂತ ಸೊಗಸಾಗಿ ಹೇಳುವ ಮಾಧ್ಯಮವಾಗಿ ಸಿನಿಮಾ ಕ್ಷೇತ್ರ ಇವತ್ತು ಬೆಳೆದು ಬಿಟ್ಟಿದೆ. ವಿಶೇಷ ಏನೆಂದರೆ, ಸಿನಿಮಾ ಕ್ಷೇತ್ರದಿಂದ ಬಿಡುಗಡೆಯಾಗುವ ಚಿತ್ರಗಳು ಮಹಿಳಾ ವಿರೋಧಿ ಅನ್ನಿಸಿಕೊಂಡದ್ದು ಬಹಳ ಬಹಳ ಕಡಿಮೆ. ಭಾಷಾವಾರು ಚಿತ್ರಗಳು ಕೆಲವೊಮ್ಮೆ ಇಂಥ ಅಪವಾದಗಳನ್ನು ಹೊತ್ತಿರಬಹುದು. ಆದರೆ ಬಾಲಿವುಡ್ ಮತ್ತು ಹಾಲಿವುಡ್‍ಗಳು ಯಾವತ್ತೂ ಹೆಣ್ಣಿನ ಸ್ವಾತಂತ್ರ್ಯ, ಸ್ವೇಚ್ಛೆ, ಸ್ವಾಭಿಮಾನ, ಹಕ್ಕು, ಧೈರ್ಯಗಳ ಪರವೇ ನಿಂತಿದೆ. ಅತ್ಯಾಚಾರ ಯತ್ನದ ಸಮಯದಲ್ಲಿ ಆಕೆ ಹೇಗೆ ತಪ್ಪಿಸಿಕೊಳ್ಳಬೇಕು, ಬೆದರಿಕೆಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು, ಶೋಷಣೆಯನ್ನು ಹೇಗೆ ಎದುರಿಸಬೇಕು, ಕೋರ್ಟ್‍ನಲ್ಲಿ ಹೇಗೆ ವಾದಿಸಬೇಕು, ಅಧಿಕಾರಿಯಾಗಿ ಹೇಗೆ ಒತ್ತಡಗಳನ್ನು ಮೀರಿ ಹೊಣೆ ನಿಭಾಯಿಸಬೇಕು, ಶೋಷಕರನ್ನು ಹೇಗೆ ದಂಡಿಸಬೇಕು.. ಇಂಥ ನೂರಾರು ಪಾಠಗಳನ್ನು ಅವು ಹೇಳಿ ಕೊಟ್ಟಿವೆ ಮತ್ತು ಈಗಲೂ ಹೇಳಿ ಕೊಡುತ್ತಿವೆ. ಆದ್ದರಿಂದಲೇ, ಸಾಮಾನ್ಯ ಜನರು ಇವತ್ತಿಗೂ ಸಿನಿಮಾ ಕ್ಷೇತ್ರಗಳಲ್ಲಿರುವ ಹೆಣ್ಣನ್ನು ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪಡೆಯುತ್ತಿರುವ ಬಲಶಾಲಿಗಳು ಎಂದೇ ತಿಳಿದುಕೊಂಡಿದ್ದಾರೆ. ಅವರು ಶೋಷಣೆಗೆ ಒಳಗಾಗಲ್ಲ ಅಂದುಕೊಂಡಿದ್ದಾರೆ. ಒಂದು ವೇಳೆ, ಯಾರಾದರೂ ಆಕೆಯನ್ನು ಶೋಷಿಸುವ ಪ್ರಯತ್ನ ಮಾಡಿದಲ್ಲಿ ಆಕೆ ಸಿಡಿಯುವಳು ಎಂದೂ ನಂಬಿದ್ದಾರೆ.. ದುರಂತ ಏನೆಂದರೆ, ಪರದೆಯಲ್ಲಿ ಅದ್ಭುತವಾಗಿ ಮಹಿಳಾ ಹಕ್ಕಿನ ಬಗ್ಗೆ ಮಾತಾಡುವ ಹೀರೋಯಿನ್ ಪರದೆಯ ಹಿಂದೆ ಮೌನ ವಹಿಸುತ್ತಾಳೆ ಅಥವಾ ಮೌನಿಯಾಗಲೇಬೇಕಾದ ಭಯದ ವಾತಾವರಣ ಇದೆ. ಅಲ್ಲೂ ಲೈಂಗಿಕ ಶೋಷಣೆ ಇದೆ ಎಂಬುದನ್ನು ಇತ್ತೀಚೆಗಷ್ಟೇ ಕೇರಳದ ಪ್ರಮುಖ ನಟಿಯೊಬ್ಬರು ಬಹಿರಂಗಪಡಿಸಿದ್ದರು. ಇದು ಪರದೆಯಲ್ಲಿ ಹೀರೋಯಿನ್ ಆಗಿ ಮೆರೆಯುವ ಹೆಣ್ಣಿನ ಬದುಕು. ಹಾಲಿವುಡ್ ಅನ್ನುವುದು ಅಂತಾರಾಷ್ಟ್ರೀಯ ಸಿನಿಮಾ ಕ್ಷೇತ್ರ. ಆ ಕ್ಷೇತ್ರದಲ್ಲೇ ಇಷ್ಟು ಪ್ರಮಾಣದ ಮಹಿಳಾ ಶೋಷಣೆ ಇದೆ ಎಂದರೆ ಮತ್ತು ಅದನ್ನು ಹೇಳಿಕೊಳ್ಳಲಾಗದಷ್ಟು ಭಯದ ವಾತಾವರಣ ಇದೆ ಎಂದರೆ ಇನ್ನು ಈ ಸಮಾಜದ ಬಗ್ಗೆ ಹೇಳುವುದಕ್ಕೇನಿದೆ?     
       ನಿಜವಾಗಿ, ಈ ಜಗತ್ತು ಹೆಣ್ಣಿನ ಪಾಲಿಗೆ ಶೋಷಣೆ ಮುಕ್ತ ಮತ್ತು ಭಯಮುಕ್ತವಾಗಬೇಕಾಗಿದೆ. ಪುರುಷ ಹೇಗೆ ಶೋಷಣೆ ಮುಕ್ತ ವಾತಾವರಣವನ್ನು ಬಯಸುತ್ತಾನೋ ಹಾಗೆಯೇ ಹೆಣ್ಣೂ ಬಯಸುತ್ತಾಳೆ. ದುರಂತ ಏನೆಂದರೆ, ಹೆಣ್ಣನ್ನು ಬಳಸಿಕೊಂಡು ಶೋಷಣೆಮುಕ್ತ ಸಂದೇಶವನ್ನು ನೀಡುವ ವ್ಯಕ್ತಿಯೇ ಆಕೆಯನ್ನು ಶೋಷಿಸುತ್ತಾನೆ. ಚರ್ಚೆ ಹುಟ್ಟಿಕೊಳ್ಳಬೇಕಾದುದು ಇಲ್ಲೇ. ಹೆಣ್ಣಿನ ಸುರಕ್ಷಿತತೆಗೆ ಯಾರು ಅಡ್ಡಿ? ಯಾವುದು ಅಡ್ಡಿ? ಎಲ್ಲಿ ಅಡ್ಡಿ? ಶೋಷಣೆಯ ಬೇರುಗಳು ಎಲ್ಲೆಲ್ಲಿ ಇವೆ? ಅವನ್ನು ಗುರುತಿಸುವುದು ಹೇಗೆ? ಕಾನೂನು ಕಟ್ಟಳೆಗಳು ಹೆಣ್ಣಿನ ಪಾಲಿಗೆ ಒಂದು ಹಂತದ ವರೆಗೆ ನೆಮ್ಮದಿಯನ್ನು ಕೊಡಬಹುದು. ಆದರೆ, ಸಾಮಾಜಿಕ ಮನಸ್ಥಿತಿಯನ್ನು ಸಂಪೂರ್ಣವಾಗಿ ಅವು ಬದಲಿಸಲಾರವು. ಆದ್ದರಿಂದ ಹೆಣ್ಣು ಸ್ವತಃ ತನ್ನೊಳಗೆ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ತಾನು ಯಾಕೆ ಅಸುರಕ್ಷಿತೆ? ತನ್ನನ್ನು ಅಸುರಕ್ಷಿತೆಯನ್ನಾಗಿ ಮಾಡಿದುದು ಯಾರು? ಯಾವುದು? ಹೆಣ್ಣಿನಿಂದ ಶೋಷಣೆಯ ಭೀತಿಯನ್ನು ಪುರುಷನೇಕೆ ಅನುಭವಿಸುತ್ತಿಲ್ಲ? ಯಾಕೆ ಎಲ್ಲವೂ ಏಕಮುಖವಾಗಿದೆ? ಹೆಣ್ಣು ಸ್ನೇಹಿ ಜಗತ್ತನ್ನು ನಿರ್ಮಿಸುವುದಕ್ಕೆ ಏನೆಲ್ಲ ಬದಲಾವಣೆ ಆಗಬೇಕು? ಅದಕ್ಕೆ ಯಾವುದು ಆಧಾರವಾಗಬೇಕು? ಕಾನೂನುಗಳಾಚೆ ಮತ್ತು ಸಿನಿಮಾಗಳಾಚೆ ಒಂದು ಸಂತುಲಿತ ಮನಸ್ಥಿತಿಯನ್ನು ಸಮಾಜದಲ್ಲಿ ತಯಾರಿಸುವುದು ಹೇಗೆ? ಇದರಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರ ಹಾಗೂ ಹೊಣೆಗಾರಿಕೆಗಳು ಏನೇನು?
ಚರ್ಚೆ ನಡೆಯಲಿ.



Wednesday 18 October 2017

ಕಮ್ಯುನಿಸ್ಟ್ ನಾಡಿನ ದಲಿತ ಅರ್ಚಕ ಮತ್ತು ಬಿಜೆಪಿ ನಾಡಿನ ಮೀಸೆ ಚಳವಳಿ

      ಗುಜರಾತ್ ಮತ್ತು ಕೇರಳದಿಂದ ವರದಿಯಾಗಿರುವ ಸುದ್ದಿಗಳು `ಸಾಮಾಜಿಕ ನ್ಯಾಯ' ಮತ್ತು `ಸರ್ವರೂ ಸಮಾನರು' ಎಂಬ ಪರಿಕಲ್ಪನೆಯ ಸುತ್ತ ದೇಶದಲ್ಲಿ ಮತ್ತೊಂದು ಸುತ್ತಿನ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾದಷ್ಟು ಮಹತ್ವಪೂರ್ಣವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಳೆದವಾರ ಕೇರಳಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿ ನಡೆಯುತ್ತಿರುವ ರಾಜಕೀಯ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರು ಹೊರಟು ಹೋದ ಮರು ಘಳಿಗೆಯಲ್ಲೇ ಅಲ್ಲಿನ ನಿಜ ಸಮಸ್ಯೆ ಚರ್ಚೆಗೆ ಒಳಗಾಯಿತು. ತಿರುವಾಂಕೂರು ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ದೇವಾಲಯಗಳ ಅರ್ಚಕ ಹುದ್ದೆಗಳಲ್ಲಿ 32% ದಷ್ಟು ಹುದ್ದೆಯನ್ನು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಮೀಸಲಿಡುವ ರಾಜ್ಯ ಸರಕಾರದ ನಿರ್ಧಾರವನ್ನು ಅಲ್ಲಿನ ಬ್ರಾಹ್ಮಣ ಸಂಘಟನೆಯಾದ ನಂಬೂದರಿ ಯೋಗಕ್ಷೇಮ ಸಭಾವು ಖಂಡಿಸಿತು. ಹಾಗಂತೂ ಈ ವಿರೋಧವು ಕೇವಲ ಯೋಗಕ್ಷೇಮ ಸಭಾದ ವತಿಯಿಂದ ಮಾತ್ರ ಎದುರಾದುದಲ್ಲ. ಬೇರೆ ಬೇರೆ ಬ್ರಾಹ್ಮಣ ಸಂಘಗಳಿಂದಲೂ ಪ್ರತಿಭಟನೆ ಎದುರಾಯಿತು. ದಲಿತರ ಮೇಲೆ ಈ ಹಿಂದೆ ನಡೆದ ಮತ್ತು ಈಗಲೂ ನಡೆಯುತ್ತಿರುವ ಹಲ್ಲೆಗಳೂ ಚರ್ಚೆಯ ವೇಳೆ ಉಲ್ಲೇಖಕ್ಕೆ ಒಳಗಾದುವು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‍ಗೆ ಭೇಟಿಕೊಟ್ಟರು. ಅವರ ಈ ಭೇಟಿಯ ಸಮಯದಲ್ಲಿ ಗುಜರಾತ್‍ನಲ್ಲಿ `ಮೀಸೆ ನನ್ನ ಹಕ್ಕು' ಅನ್ನುವ ಚಳವಳಿಯೊಂದು ನಡೆಯುತ್ತಿತ್ತು. ದಲಿತ ಸಮುದಾಯದ ಮಂದಿ ಮೀಸೆ ತಿರುವಿ ಸೆಲ್ಫಿ ತೆಗೆದುಕೊಳ್ಳುವ ಚಳುವಳಿಯೊಂದಕ್ಕೆ ಚಾಲನೆ ಕೊಟ್ಟಿದ್ದರು. ಇದಕ್ಕೆ ಕಾರಣ ಅದೇ ಮೇಲ್ವರ್ಗ. ಮೀಸೆ ಬೆಳೆಸಿದ ಕಾರಣಕ್ಕೆ ದಲಿತ ಯುವಕರನ್ನು ಥಳಿಸಿದುದೇ ಈ ಮೀಸೆ ಚಳುವಳಿಯ ಹುಟ್ಟಿಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾದ ಈ ಚಳುವಳಿಯ ಕಾವು ಬೆಳೆಯುತ್ತಾ ಜನಪ್ರಿಯಾಗತೊಡಗಿತು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಲೇಬೇಕಾದ ಅನಿವಾರ್ಯತೆಗೂ ಒಳಗಾದುವು. ಆದರೆ ಪ್ರಧಾನಿಯವರು ಈ ಮೀಸೆ ಚಳವಳಿಯ ಬಗ್ಗೆ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಏನನ್ನೂ ಹೇಳಲಿಲ್ಲ. ಅವರೂ ಅಮಿತ್ ಷಾರಂತೆ ರಾಜಕೀಯವನ್ನಷ್ಟೇ ಆಡಿದರು.
     ದೇಶವನ್ನಾಳುವ ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿಯವರು ಎರಡು ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಡುವುದು ಮತ್ತು ಆ ಭೇಟಿಯ ವೇಳೆ ಆ ಎರಡೂ ರಾಜ್ಯಗಳಲ್ಲಿ ಇರುವ ಅಸ್ಪøಶ್ಯ ಮನಸ್ಥಿತಿಗಳ ಕುರಿತು ಏನನ್ನೂ ಆಡದಿರುವುದರ ಹಿನ್ನೆಲೆ ಏನು? `ಸರ್ವರೂ ಸಮಾನರು' ಅನ್ನುವ ಸಂವಿಧಾನ ಜಾರಿಯಾಗಿ 70 ವರ್ಷಗಳು ಕಳೆದ ಬಳಿಕವೂ ಕೆಲವರು ಹೆಚ್ಚು ಸಮಾನರಾಗಿರುವುದು ಯಾಕೆ ರಾಜಕೀಯ ಭಾಷಣಗಳಲ್ಲಿ ಪ್ರಾಮುಖ್ಯತೆ ಪಡಕೊಳ್ಳುವುದಿಲ್ಲ? ಓರ್ವ ವ್ಯಕ್ತಿಯ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದುದು ಏನೆಂದರೆ, ಘನತೆ, ಗೌರವ, ಸ್ವಾಭಿಮಾನ, ಹಕ್ಕು, ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ. ಯಾರೂ ಇದಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳಬಾರದು. ಸಂವಿಧಾನಕ್ಕಿಂತ ಮೊದಲು ಈ ದೇಶದಲ್ಲಿ ಆಚರಣೆಯಲ್ಲಿದ್ದ ಎಲ್ಲ ಅಸ್ಪೃಶ್ಯ ಪದ್ಧತಿಗಳನ್ನೂ ಸಂವಿಧಾನ ಅಮಾನ್ಯಗೊಳಿಸಿದೆ. ಮನುಷ್ಯರನ್ನು ಧರ್ಮ, ಚರ್ಮ, ಭಾಷೆ, ಹೆಸರು, ಜಾತಿ, ಆಹಾರ, ಆರಾಧನೆ, ಲಿಂಗದ ಹೆಸರಲ್ಲಿ ಅಸಮಾನವಾಗಿ ಕಾಣುವುದನ್ನು ಅನಾಗರಿಕವಾಗಿ ಕಾಣಲಾಗಿದೆ. ಅಚ್ಚರಿ ಏನೆಂದರೆ ಸಂವಿಧಾನ ಜಾರಿಯಾಗುವಾಗ ಇದ್ದ ತಲೆಮಾರು ಇವತ್ತು ಬಹುತೇಕ ನಿಧನ ಪಟ್ಟಿ ಸೇರಿಕೊಂಡಿದೆ ಅಥವಾ ವೃದ್ಧಾಪ್ಯ ಪಟ್ಟಿಯಲ್ಲಿದೆ. ಈಗ ದಲಿತ ಅರ್ಚಕರನ್ನು ವಿರೋಧಿಸುವುದು ಅಥವಾ ದಲಿತರು ಮೀಸೆ ಬೆಳೆಸುವುದಕ್ಕೆ ಅಡ್ಡಿಪಡಿಸುವುದು ಆ ಹಳೆ ತಲೆಮಾರು ಅಲ್ಲ. ಹೊಸ ಪೀಳಿಗೆ. ಆದ್ದರಿಂದ ಈ ಪೀಳಿಗೆಗೆ ಸಂವಿಧಾನ ಗೊತ್ತಿಲ್ಲ ಎಂದು ಹೇಳುವ ಹಾಗಿಲ್ಲ. ಇಷ್ಟಿದ್ದೂ ಈ ವರ್ಗ ಮನುಷ್ಯರಲ್ಲೇ ಕೆಲವರನ್ನು `ಅಸ್ಪೃಶ್ಯ'ರಾಗಿ ಕಾಣುತ್ತಾರಲ್ಲಾ, ಏನಿದರ ಮರ್ಮ? ಭಾರತೀಯ ರಾಜಕೀಯ ಚಟುವಟಿಕೆಗಳಿಗೂ ಇದರಲ್ಲಿ ಪಾತ್ರ ಇರಬಹುದೇ? ಯಾಕೆಂದರೆ, ರಾಜಕಾರಣಿಗಳು ಅಸ್ಪøಶ್ಯ ಆಚರಣೆಯನ್ನು ಖಂಡಿಸಿ ಅಥವಾ ಅದನ್ನೇ ಕೇಂದ್ರೀಯ ವಸ್ತುವಾಗಿಸಿಕೊಂಡು ಮಾತಾಡುವುದು ತೀರಾ ತೀರಾ ಕಡಿಮೆ. ಸ್ವಾತಂತ್ರ್ಯದ ಆರಂಭ ಕಾಲದಲ್ಲಿ ಇಂಥ ಭಾಷಣಗಳು ಆಗಿವೆಯೇ ಏನೋ. ಆದರೆ, ಬರ ಬರುತ್ತಾ ರಾಜಕಾರಣವೆಂಬುದು ಮತ ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತನೆ ಹೊಂದುತ್ತಲೇ, ಭಾಷಣಗಳ ಧಾಟಿಯೂ ಬದಲಾಯಿತು. ಅಜೆಂಡಾಗಳೂ ಬರಲಾದುವು. ಅಸ್ಪøಶ್ಯತೆಯನ್ನು ನಿವಾರಿಸುವುದಕ್ಕಿಂತ ಉಳಿಸಿಕೊಳ್ಳುವುದರಲ್ಲಿಯೇ ಲಾಭವನ್ನು ಕಂಡುಕೊಳ್ಳಲಾಯಿತು. ತಾತ್ಕಾಲಿಕ ಕೊಡುಗೆಗಳ ಮೂಲಕ ಅಸ್ಪøಶ್ಯರನ್ನು ತೃಪ್ತಿಪಡಿಸುವುದು ಮತ್ತು ಅಸ್ಪೃಶ್ಯತೆಯನ್ನು ಆಚರಿಸುವವರೊಂದಿಗೆ ಹೊಂದಿಕೊಂಡು ನಡೆಯುವುದನ್ನು ರಾಜಕೀಯ ಸ್ಟ್ರಾಟಜಿಯಾಗಿ ಕಂಡುಕೊಳ್ಳಲಾಯಿತು. ಅಮಿತ್ ಷಾರ ಕೇರಳ ಭೇಟಿಯಲ್ಲಿ ವ್ಯಕ್ತವಾಗಿರುವುದೂ ಇದುವೇ. ಅವರು ಕೇರಳಕ್ಕೆ ಭೇಟಿ ಕೊಡುವುದಕ್ಕಿಂತ ಮೊದಲೇ ಅರ್ಚಕ ಹುದ್ದೆಗೆ ಸಂಬಂಧಿಸಿ ಕೇರಳ ಸರಕಾರವು ತೀರ್ಮಾನವನ್ನು ಕೈಗೊಂಡಿತ್ತು. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಅದೊಂದು ಐತಿಹಾಸಿಕ ನಿರ್ಧಾರ. ರಾಷ್ಟ್ರವನ್ನಾಳುವ ಪಕ್ಷದ ಅಧ್ಯಕ್ಷ ಎಂಬ ನೆಲೆಯಲ್ಲಿ ಆ ಬಗ್ಗೆ ಮಾತಾಡುವುದು ಅಮಿತ್ ಷಾರ ಹೊಣೆಯಾಗಿತ್ತು. `ದಲಿತರು ಮತ್ತು ಬ್ರಾಹ್ಮಣರು' ಸಮಾನರು ಎಂಬುದನ್ನು ತಿರುವಾಂಕೂರು ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ದೇವಾಲಯ ಘೋಷಿಸುವುದೆಂದರೆ, ಅದು ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಸಂಘರ್ಷಕ್ಕಿಂತ ಎಷ್ಟೋ ಪಾಲು ದೊಡ್ಡದು. ಒಂದು ರೀತಿಯಲ್ಲಿ ಪರಸ್ಪರ ಹೋಲಿಕೆಗೆ ಒಳಗಾಗಬಾರದಷ್ಟು ದೊಡ್ಡದು. ಒಂದು ದೊಡ್ಡ ಸಮುದಾಯ ಸಮಾನತೆಯ ಸ್ವಾತಂತ್ರ್ಯವನ್ನು ಅನುಭವಿಸುವುದನ್ನು ರಾಜಕೀಯ ಮರೆತು ಶ್ಲಾಘಿಸಬೇಕಾದುದು ಮುತ್ಸದ್ದಿ ನಡೆ. ಒಂದು ವೇಳೆ, ಇದು ನಡೆಯುತ್ತಿದ್ದರೆ, ನಂಬೂದರಿ ಯೋಗಕ್ಷೇಮ ಸಭಾವು ಅಕ್ಷೇಪ ವ್ಯಕ್ತಪಡಿಸುವ ಧೈರ್ಯ ತೋರುತ್ತಿರಲಿಲ್ಲವೇನೋ. ಇದೇ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿಯೂ ಹೇಳಬಹುದು. ರಾಹುಲ್ ಗಾಂಧಿಗೂ ಇದೇ ಮಾತನ್ನು ಅನ್ವಯಿಸಬಹುದು. ದಮನಿತ ಸಮುದಾಯವೊಂದು ಘನತೆ, ಸ್ವಾಭಿಮಾನವನ್ನು ಆಗ್ರಹಿಸಿ `ಮೀಸೆ ಚಳವಳಿ' ನಡೆಸುತ್ತಿರುವಾಗ, ಅಲ್ಲೇ ಇದ್ದೂ ಆ ಬಗ್ಗೆ ಏನನ್ನೂ ಆಡದೇ ಇರುವುದೆಂದರೇನು? ಯಾಕೆ ನರೇಂದ್ರ ಮೋದಿಯವರು ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು ನಿರ್ಲಕ್ಷಿಸಿದರು? ಪ್ರಧಾನಿ ಎಂಬ ನೆಲೆಯಲ್ಲಿ ಅವರ ಮಾತಿಗೆ ವಿಶೇಷ ನೆಲೆ-ಬೆಲೆಯಿದೆ. ಅದು ರವಾನಿಸುವ ಸಂದೇಶಕ್ಕೆ ಮಹತ್ವ ಇದೆ. ಇದು ಪ್ರಧಾನಿಯವರಿಗೆ ಗೊತ್ತಿಲ್ಲವೆಂದಲ್ಲ. ಗೊತ್ತಿದ್ದೂ ಅವರೇಕೆ ಬರೇ ರಾಜಕೀಯವನ್ನಷ್ಟೇ ಮಾತಾಡಿದರು? ಒಂದು ಸಮುದಾಯದ ಸ್ವಾಭಿಮಾನದ ಪ್ರಶ್ನೆಯನ್ನು ಯಾಕೆ ಅವರು ನಿರ್ಲಕ್ಷಿಸಿದರು?
     ಕೇರಳವೇ ಇರಲಿ, ಗುಜರಾತೇ ಇರಲಿ, ದಲಿತರಿಗೆ ಸಂಬಂಧಿಸಿ ಮೇಲ್ವರ್ಗದ ನಿಲುವಿನಲ್ಲಿ ಭಾರೀ ವ್ಯತ್ಯಾಸವೇನೂ ಇಲ್ಲ ಅನ್ನುವುದನ್ನು ಅರ್ಚಕ ಮತ್ತು ಮೀಸೆ ಚಳವಳಿ ಸ್ಪಷ್ಟಪಡಿಸಿದೆ. ದಲಿತರನ್ನು ಈ ದೇಶ ಈಗಲೂ ಹೊರಗಿಟ್ಟೇ ನೋಡುತ್ತಿದೆ. ಈ ಬಗ್ಗೆ ರಾಜಕಾರಣಿಗಳಲ್ಲಿ ಗಾಢ ನಿರ್ಲಕ್ಷ್ಯವೂ ಇದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾರು ಇದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.