Tuesday 31 October 2017

ಗಂಗೆಯಲ್ಲಿ ಸ್ನಾನ ಮಾಡದ ಸಾಧುಗಳು ಮತ್ತು ಹಬ್ಬ

        ಹಿರಿಯ ಪರಿಸರತಜ್ಞ ಮತ್ತು ನ್ಯಾಯವಾದಿಯಾಗಿರುವ ಸಂಜಯ್‍ ಉಪಾಧ್ಯಾಯ ಎಂಬವರು ಕಳೆದ ತಿಂಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ದೂರು ಎಷ್ಟು ಮಹತ್ವಪೂರ್ಣವಾದುದುಎಂಬುದನ್ನು ಕಳೆದವಾರ ಗಂಗೆ ಸಾಬೀತು ಪಡಿಸಿದ್ದಾಳೆ. ದೇಶದ ಅನೇಕಾರು ಆಶ್ರಮಗಳ ಸಾಧುಗಳು ಗಂಗೆಯಲ್ಲಿ ಸ್ನಾನ ಮಾಡಲು ಕಳೆದವಾರ ನಿರಾಕರಿಸಿದರು. ವಿಜಯದಶಮಿಯಂದು ಸಾಧುಗಳು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನು ಪಾಲಿಸಲೂ ಸಾಧ್ಯವಾಗದಷ್ಟು ಗಂಗಾನದಿ ಮಾಲಿನ್ಯದಿಂದ ತುಂಬಿ ಹೋಗಿದೆ ಎಂದವರು ವಿಷಾದಿಸಿದರು. 9 ದಿನಗಳ ಕಾಲ ಆಚರಿಸಲಾದ ವಿಜಯದಶಮಿ ಹಬ್ಬ ಮತ್ತು ದುರ್ಗಾದೇವಿ ಮೂರ್ತಿಯ ವಿಸರ್ಜನೆಯಿಂದಾಗಿ ಗಂಗೆ ಕೊಳಕಾಗಿದ್ದಾಳೆ ಎಂಬುದು ಅವರ ದೂರು. ಗಂಗೆಯ ತಟದಲ್ಲಿರುವ ಕಂಪೆನಿಗಳ ತ್ಯಾಜ್ಯಕ್ಕೂ ಈ ಕೊಳಕಿನಲ್ಲಿ ಪಾತ್ರ ಇದೆ ಎಂಬುದೂ ಅಷ್ಟೇ ಸತ್ಯ. ಒಂದುಕಡೆ, ಸ್ವಚ್ಛ ಭಾರತ ಅಭಿಯಾನ ಮತ್ತು ಬಯಲು ಶೌಚಮುಕ್ತ ಭಾರತಕ್ಕಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಇನ್ನೊಂದೆಡೆ ನಂಬಿಕೆಯ ಹೆಸರಲ್ಲಿ ಪರಿಸರವನ್ನೇ ಕೊಳಕು ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಹಾಗಂತ, ಇದು ಹಿಂದೂ ಧರ್ಮದ ಸಮಸ್ಯೆ ಅಲ್ಲ. ಇದು ಧರ್ಮಾತೀತ. ಕಂಪೆನಿಗಳು ಹೊರ ಹಾಕುವ ಅಪಾರ ಪ್ರಮಾಣದ ತ್ಯಾಜ್ಯಗಳಿಗೆ ನಾವು ಯಾವ ಧರ್ಮವನ್ನು ಹೊಣೆ ಮಾಡಬಹುದು? ಆ ಕಂಪೆನಿಗಳಲ್ಲಿ ದುಡಿಯುವುದರಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರಾದಿಯಾಗಿ ಎಲ್ಲರೂ ಇರಬಹುದು. ಅದರ ಮಾಲಿಕ ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸುತ್ತಲೂ ಇರಬಹುದು. ಹಾಗಂತ, ಮಾಲಿಕನ ಧರ್ಮವೇ ತ್ಯಾಜ್ಯ ನಿರ್ವಹಣೆಯ ವೈಫಲ್ಯಕ್ಕೆ ಕಾರಣ ಎಂದು ವಾದಿಸುವುದು ಮೂರ್ಖತನವಾಗುತ್ತದೆ. ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸುವುದಕ್ಕಿಂತ ತ್ಯಾಜ್ಯವನ್ನು ನದಿಯಲ್ಲೋ ಭೂಮಿಯ ಮೇಲೋ ಎಸೆಯುವುದರಿಂದ ಲಾಭದಾಯಕ ಎಂಬ ವ್ಯಾವಹಾರಿಕ ಲೆಕ್ಕಾಚಾರವೇ ಇದಕ್ಕೆಕಾರಣವಾಗಿರುತ್ತದೆ. ಅಂದಹಾಗೆ, ಕಂಪೆನಿಗಳು ಪ್ರತಿದಿನ ಹೊರಹಾಕುವ ತ್ಯಾಜ್ಯದ ಎದುರು ಹಬ್ಬಗಳ ಸಮಯದಲ್ಲಿ ಉಂಟಾಗುವ ತ್ಯಾಜ್ಯದ ಪ್ರಮಾಣ ಕಡಿಮೆಯೇ ಆಗಿದ್ದರೂ ಪರಿಣಾಮದ ದೃಷ್ಟಿಯಿಂದ ಇದು ದೊಡ್ಡದೇ. ಯಾಕೆಂದರೆ, ಹಬ್ಬಗಳೆಂಬುದು ಧರ್ಮಸೂಚಕ. ಚೌತಿ, ವಿಜಯದಶಮಿ, ಕೃಷ್ಣಾಷ್ಟಮಿ, ಈದ್, ಕ್ರಿಸ್‍ಮಸ್‍ಗಳು ನಿರ್ದಿಷ್ಟ ಧರ್ಮದೊಂದಿಗೆ ತಳಕು ಹಾಕಿಕೊಂಡೇ ಆಚರಿಸಲ್ಪಡುತ್ತವೆ. ಹಬ್ಬಗಳೆಂಬುದು ಕಂಪೆನಿಗಳಂಥಲ್ಲ. ಕಂಪೆನಿಗಳೂ ಸಹಿತ ಸಮಾಜಕ್ಕೆ ಮೌಲ್ಯವನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತವೆ ಎಂಬುದು ಹಬ್ಬಗಳ ವಿಶೇಷತೆ. ಹೀಗಿರುವಾಗ ಸ್ವಚ್ಛತೆಯ ವಿಷಯದಲ್ಲಿಅಥವಾ ಪರಿಸರ ಕಾಳಜಿಯ ವಿಷಯದಲ್ಲಿ ಒಂದು ಧರ್ಮಕ್ಕೆ ಸ್ಪಷ್ಟ ನಿಲುವುಗಳು ಇಲ್ಲದೇಇರುವುದಕ್ಕೆ ಸಾಧ್ಯವೇಇಲ್ಲ. ಕಳೆದ ಗಣೇಶ ಚತುರ್ಥಿಯ ಸಮಯದಲ್ಲಿ ಸಂಜಯ್‍ ಉಪಾಧ್ಯಾಯರು ಹಸಿರು ನ್ಯಾಯಾಧಿಕರಣಕ್ಕೆಅರ್ಜಿ ಸಲ್ಲಿಸಿದ್ದು ಈ ಕಾರಣದಿಂದಲೇ. ರಾಜಧಾನಿ ದೆಹಲಿಯಲ್ಲಿ ಹರಿಯುವ ಯಮುನಾ ನದಿಯು ವಿಸರ್ಜಿತ ಗಣೇಶ ಮೂರ್ತಿಗಳಿಂದಾಗಿ ಮಾಲಿನ್ಯಗೊಂಡಿದೆ ಎಂದವರು ಹೇಳಿದ್ದರು. ಮಣ್ಣಿನಲ್ಲಿ ಮಾಡಿರುವ ಮೂರ್ತಿಗಳು ನೀರಿನಲ್ಲಿ ಕರಗುತ್ತವೆಯೇ ಹೊರತು ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಿದವುಗಳು ಕರಗುವುದಿಲ್ಲ. ವಿಷಾದ ಏನೆಂದರೆ, ಯಮುನೆಯಲ್ಲಿ ತೇಲುತ್ತಿರುವ ಅಸಂಖ್ಯ ಗಣೇಶ ಮೂರ್ತಿಗಳು ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಿದವುಗಳು. ಕೇವಲ ದೆಹಲಿ ನಗರವೊಂದರಲ್ಲೇ 200ರಷ್ಟು ದುರ್ಗಾಪೂಜಾ ಪೆಂಡಾಲ್‍ಗಳಿವೆ ಮತ್ತು ಅವುಗಳಿಂದ ಅನೇಕ ಮೂರ್ತಿಗಳು ಯಮುನೆಯಲ್ಲಿ ವಿಸರ್ಜಿಸಲ್ಪಡುತ್ತವೆಎಂದು ವರದಿಗಳು ಹೇಳುತ್ತವೆ. ಅಲ್ಲದೇ ಮನೆಗಳಿಂದಲೂ ಇಂಥ ಮೂರ್ತಿಗಳನ್ನು ತಂದು ಯಮುನೆಯಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ವಿಸರ್ಜಿಸಲಾಗುವ ಮೂರ್ತಿಗಳಲ್ಲಿ ಹೆಚ್ಚಿನವು ಪ್ಯಾರಿಸ್ ಪ್ಲಾಸ್ಟರ್‍ನಿಂದ ರಚಿಸಿದವುಗಳಾಗಿವೆ ಎಂದೂ ವರದಿಗಳು ಹೇಳುತ್ತಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವಂತೂ ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಲಾಗುವ ಮೂರ್ತಿಗಳನ್ನು 2015 ರಲ್ಲೇ ಸಂಪೂರ್ಣವಾಗಿ ನಿಷೇಧಿಸಿದೆ. ಈ ವಿಷಯದಲ್ಲಿ ಸಮಾಜ ಎಚ್ಚೆತ್ತುಕೊಂಡಿಲ್ ಲಅನ್ನುವುದಕ್ಕೆ ಯಮುನೆಯಲ್ಲಿ ತೇಲುತ್ತಿರುವ ಮೂರ್ತಿಗಳು ಮತ್ತುಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ನಿರಾಕರಿಸಿರುವ ಸಾಧುಗಳೇ ಸಾಕ್ಷಿ.
    ಸಮಾಜದ ಆರೋಗ್ಯವನ್ನು ಕೆಡಿಸುವರೂಪದಲ್ಲಿ ನಿಜವಾದ ಧಾರ್ಮಿಕ ಆಚರಣೆಯೊಂದು ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವು ವಾದಿಸುವಾಗುವಲ್ಲೆಲ್ಲ, ಹಾಗಾದರೆ ಇವೆಲ್ಲ ಏನು ಅನ್ನುವ ಪ್ರಶ್ನೆಯು ತಕ್ಷಣದ ಪ್ರತಿಕ್ರಿಯೆಯಾಗಿ ನಮ್ಮೆದುರು ನಿಲ್ಲುತ್ತದೆ. ಕೊಳಕು- ಧರ್ಮದ ಪ್ರತೀಕ ಅಲ್ಲ. ಅದು ಧರ್ಮವನ್ನು ಪಾಲಿಸದವರ ಪ್ರತೀಕ. ನಿಜವಾಗಿ, ಒಂದು ಧರ್ಮವನ್ನು ಅದು ಪ್ರತಿಪಾದಿಸುವ ವಿಷಯಗಳ ಆಧಾರದ ಮೇಲೆ ಅಳಿಯಬೇಕೆ ಹೊರತು ಅದರ ಅನುಯಾಯಿಗಳೆಂದು ಗುರುತಿಸಿಕೊಂಡವರ ನಡವಳಿಕೆಯ ಮೇಲೆ ಅಲ್ಲ. ಅನುಯಾಯಿಗಳ ಧರ್ಮನಿಷ್ಠೆ, ನಿಯಮ ಪಾಲನೆಗಳು ಸದಾಕಾಲ ಏಕ ಪ್ರಕಾರವಾಗಿರುತ್ತವೆ ಎಂದು ಹೇಳುವ ಹಾಗಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳು ಅವರನ್ನು ನಿಯಮ ಉಲ್ಲಂಘಕರಾಗಿ ಮಾರ್ಪಡಿಸಬಹುದು. ಧರ್ಮ ಅನುಯಾಯಿಗಳಾಗಿ ಗುರುತಿಸಿಕೊಂಡೇ ಸ್ವ ಲಾಭಕ್ಕಾಗಿ ಧರ್ಮದ ನಿಯಮಗಳನ್ನು ಅವರು ಉಲ್ಲಂಘಿಸಬಹುದು. ಹಾಗಂತ, ಅದಕ್ಕೆಧರ್ಮದ ಮೂಲ ತತ್ವಗಳು ಹೊಣೆಯಾಗುವುದಿಲ್ಲ. ಇಸ್ಲಾಮ್‍ ಧರ್ಮವು ಸ್ವಚ್ಛತೆಯನ್ನು ಧರ್ಮದ ಅರ್ಧಭಾಗವೆಂದು ಘೋಷಿಸಿದೆ. ಎಲ್ಲಿಯ ವರೆಗೆಂದರೆ ನಡೆಯುವ ದಾರಿಯಲ್ಲಿ ಸ್ವಚ್ಛತೆಗೆ ತಡೆ ಒಡ್ಡುವಂತದ್ದು ಇದ್ದರೆ ಅದನ್ನು ನೀಗಿಸುವುದೂ ಧರ್ಮ ಎಂದು ಅದು ಹೇಳಿದೆ. ಐದು ಬಾರಿಯ ಕಡ್ಡಾಯ ನಮಾಝïಗಿಂತ ಮೊದಲು ಐದು ಬಾರಿಯೂ ಕಡ್ಡಾಯವಾಗಿ ಅಂಗಾಂಗಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಬೇಕೆಂದು ಅದುಆದೇಶ ನೀಡಿದೆ. ಹಬ್ಬಗಳ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡುವ ಯಾವ ಆಚರಣೆಯನ್ನೂ ಅದು ಯಾರ ಮೇಲೆಯೂ ಹೇರಿಲ್ಲ. ದುರಂತ ಏನೆಂದರೆ, ಇವತ್ತು ಹಬ್ಬಗಳಿಗಿಂತ ಒಂದು ವಾರ ಮೊದಲೇ ಮಾಧ್ಯಮಗಳು ‘ಪರಿಸರ ಸ್ನೇಹಿ ಹಬ್ಬ’ದ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತವೆ. ಸರಕಾರದ ಜಾಹೀರಾತು ಪ್ರಕಟವಾಗುತ್ತದೆ. ವಿವಿಧ ಸಭೆ-ಸಮಾರಂಭಗಳಲ್ಲಿ ಪರಿಸರ ಸ್ನೇಹಿ ಹಬ್ಬದ ಅಗತ್ಯಗಳನ್ನು ಒತ್ತಿ ಹೇಳಲಾಗುತ್ತದೆ. ನಿಜವಾಗಿ, ಇದು ನಾವೆಲ್ಲ ಸೇರಿಕೊಂಡು ಹಬ್ಬಗಳಿಗೆ ಮತ್ತು ಅದು ಪ್ರತಿನಿಧಿಸುವ ಧರ್ಮಗಳಿಗೆ ಮಾಡುವ ಅವಮಾನ. ಹಬ್ಬಯಾವತ್ತೂ ಪರಿಸರ ವಿರೋಧಿಯಾಗಲು ಸಾಧ್ಯವೇ ಇಲ್ಲ. ಒಂದು ಹಬ್ಬದ ಆಚರಣೆಯು ಪರಿಸರ ವಿರೋಧಿಯಾಗಿದೆ ಎಂದು ಹೇಳುವುದು ಒಂದೋ ಆ ಹಬ್ಬವನ್ನು ಆಚರಿಸುವವರಲ್ಲಿ ಪರಿಸರ ಕಾಳಜಿ ಇಲ್ಲ ಅಥವಾ ಆ ಹಬ್ಬಯಾವ ಧರ್ಮವನ್ನು ಪ್ರತಿನಿಧಿಸುತ್ತದೋ ಆ ಧರ್ಮವು ಪರಿಸರ ವಿರೋಧಿಯಾಗಿದೆ ಎಂದು ಸಾರಿದಂತಾಗುತ್ತದೆ.
ಇವತ್ತಿನ ತುರ್ತುಅಗತ್ಯಏನೆಂದರೆ, ಹಬ್ಬಗಳು ಸಾಮಾಜೀಕರಣಗೊಳ್ಳುವುದು. ಪರಿಸರ ಸ್ನೇಹಿ, ಸಮಾಜ ಸ್ನೇಹಿ ಮತ್ತು ಮನುಷ್ಯ ಸ್ನೇಹಿಯಾಗುವುದು. ಹಬ್ಬದ ಸಂತೋಷವು ನಿರ್ದಿಷ್ಟಧರ್ಮದ ಅನುಯಾಯಿಗಳಿಗೆ ಮಾತ್ರ ಸೀಮಿತವಾಗದೇ ಸಮಾಜದ ಎಲ್ಲರ ಸಂತೋಷಕ್ಕೂ ಕಾರಣವಾಗುವುದು. ಆದರೆಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಸಾಧುಗಳು ನಿರಾಕರಿಸಿರುವ ಘಟನೆಯುಇಲ್ಲೆಲ್ಲೋ ತೂತಾಗಿರುವುದನ್ನು ಸೂಚಿಸುತ್ತಿದೆ. ಇದು ವಿಷಾದನೀಯ.

No comments:

Post a Comment