Wednesday 21 March 2018

ನೋಟು ನಿಷೇಧದ ಫಲಿತಾಂಶ- ಮೋದಿ!

  
     ಪೊರೆಯೊಂದು ಕಳಚಿದೆ. ಸುಳ್ಳು ಸುಳ್ಳೇ ಹುಟ್ಟು ಹಾಕಲಾಗಿದ್ದ ಭ್ರಮೆಯೊಂದರ ಭಾಗವಾಗಿ ಬದುಕಿದ ಪ್ರಧಾನಿ ನರೇಂದ್ರ ಮೋದಿಯವರು ಸಧ್ಯ ಆ ಭ್ರಮೆಗಳಿಂದ ಮುಕ್ತವಾಗಿ ದೇಶದ ಮುಂದೆ ನಿಂತಿದ್ದಾರೆ. ಅವರ ಮಾತು ಕಟ್ಟಿದೆ. ಮುಖ ಬಿಳುಚಿದೆ. ವರ್ಷದ ಹಿಂದೆ ಅವರು ಈ ದೇಶದ ಕಟ್ಟ ಕಡೆಯ ನಾಗರಿಕನ ಜೇಬನ್ನು ಸ್ಪರ್ಶಿಸಿದ್ದರು. ಈ ಹಿಂದಿನ ಯಾವ ಪ್ರಧಾನ ಮಂತ್ರಿಗಳೂ ತೋರದ ಧೈರ್ಯವೋಂದು ಅದನ್ನು ಬಣ್ಣಿಸಲಾಗಿತ್ತು. ಬಡವನನ್ನು ಬಲವಂತವಾಗಿ ಅವರು ಬ್ಯಾಂಕಿನೆದುರು ಸರತಿ ಸಾಲಲ್ಲಿ ನಿಲ್ಲಿಸಿದರು. `50 ದಿನ ಕೊಡಿ, ಕ್ರಾಂತಿ ಮಾಡುತ್ತೇನೆ’ ಎಂದು ಬಡವನಲ್ಲಿ ಆಸೆ ಹುಟ್ಟಿಸಿದರು. ತಮ್ಮ ಕೈಯಲ್ಲಿರುವ ಹಣವನ್ನೆಲ್ಲ ಬ್ಯಾಂಕಿನಲ್ಲಿಟ್ಟು ಕ್ರಾಂತಿಗಾಗಿ ಕಾದ ಬಡವರಿಗೆ ವಿಜಯ್ ಮಲ್ಯ ಪ್ರಥಮವಾಗಿ ಆ ಕ್ರಾಂತಿಯ ದರ್ಶನ ಮಾಡಿದರು. ಇದೀಗ ನೀರವ್ ಮೋದಿ. ಈ ಎರಡು ಕ್ರಾಂತಿಕಾರಿ ಬೆಳವಣಿಗೆಗಳಿಂದ ಈ ದೇಶಕ್ಕಾದ ನಷ್ಟ 33 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಹೇಳಲಾಗುತ್ತದೆ. 2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ನೋಟ್ ನಿಷೇಧ ಮಾಡಿರುವುದರ ಹಿಂದೆ ನಿಜಕ್ಕೂ ಯಾರಿದ್ದಾರೆ? ಅವರಿಗೆ ಅಂಥದ್ದೊಂದು ಸಲಹೆಯನ್ನು ಕೊಟ್ಟವರು ಯಾರು? ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಈ ನೋಟ್ ನಿಷೇಧ ಕ್ರಾಂತಿಗೆ ವಿರೋಧವಾಗಿದ್ದರು ಎಂಬುದೇ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸದಿರುವುದಕ್ಕೆ ಕಾರಣವೇ? ಅವರ ವಿರೋಧವನ್ನು ನಿರ್ಲಕ್ಷಿಸುವಂತೆ ನರೇಂದ್ರ ಮೋದಿಯವರಿಗೆ ಸೂಚನೆ ಕೊಟ್ಟವರು ಯಾರು? ಆ ಸೂಚಕರಿಗೂ ಕೇಂದ್ರ ಸಚಿವ ಸಂಪುಟಕ್ಕೂ ಏನು ಸಂಬಂಧ ಇದೆ? ಅವರು ಸಂಪುಟದಿಂದ ಹೊರಗಿನವರೋ? ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಳ್ಳುವಾಗ ಜೊತೆಗೊಯ್ಯುವ ಉದ್ಯಮಿಗಳೇ ಈ ಸೂಚನೆ ನೀಡಿದ್ದರೋ? ಪ್ರಧಾನಿಯವರ ಜೊತೆ ತೆರಳುವ ಉದ್ಯಮಿಗಳ ಹೆಸರನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ ನಿರಾಕರಿಸುತ್ತಿರುವುದು ಯಾಕೆ? ನೀರವ್ ಮೋದಿಯಂಥ ಇನ್ನಷ್ಟು ಮೋದಿಗಳು ನೋಟ್ ನಿಷೇಧದ ಲಾಭ ಪಡೆದುಕೊಂಡಿದ್ದಾರೆಯೇ? ಸಿಬಿಐ ದಾಖಲಿಸಿದ ಎಫ್‍ಐಆರ್‍ನ ಆಧಾರದಲ್ಲಿ ಹೇಳುವುದಾದರೆ, ನೀರವ್‍ಗೆ ನೀಡಲಾದ ಸಾಲ ಸಂಬಂಧಿ ಎಲ್ಲ ತಿಳುವಳಿಕಾ ಪತ್ರಗಳಿಗೆ ಸಹಿ ಹಾಕಿದ್ದು 2017ರಲ್ಲಿ. ಪ್ರಧಾನಿಯವರ ಕಾರ್ಯಾಲಯದ ಗಮನಕ್ಕೆ ಬಂದ ಬಳಿಕವೂ ದಾವೋಸ್ ಶೃಂಗ ಸಭೆಗೆ ತೆರಳಿದ ನಿಯೋಗದಲ್ಲಿ ನೀರವ್ ಮೋದಿ ಇರಲ್ಲವೇ? ಇದು ಹೇಗೆ ಸಾಧ್ಯ?
ಇಲ್ಲೊಂದು ಕ್ರೂರ ತಮಾಷೆಯಿದೆ. ಮಲ್ಯ, ನೀರವ್‍ರಂಥ ಅನೇಕರು ಮೊದಲು ಉದ್ಯಮಿಗಳ ವೇಷ ಧರಿಸುತ್ತಾರೆ. ನಕಲಿ ಕಂಪೆನಿಗಳನ್ನು ಹುಟ್ಟು ಹಾಕುತ್ತಾರೆ. ಭಾರೀ ಗಾತ್ರದ ಯೋಜನೆಗಳನ್ನು ರೂಪಿಸುತ್ತಾರೆ. ಆ ಬಳಿಕ ಬ್ಯಾಂಕುಗಳಿಂದ ಬೃಹತ್ ಪ್ರಮಾಣದಲ್ಲಿ ಸಾಲ ಎತ್ತುವ ಹುನ್ನಾರ ನಡೆಸುತ್ತಾರೆ. ಸೂಟು-ಬೂಟು-ಟೈಗಳಿಂದ ಬಿಗಿದಿರುವ ಮನುಷ್ಯ ಎಂಬ ನೆಲೆಯಲ್ಲಿ ಇವರಿಗೆ ಬ್ಯಾಂಕುಗಳಲ್ಲೂ ವಿಶೇಷ ಆಕರ್ಷಣೆ ಮತ್ತು ಗೌರವ ಇರುತ್ತದೆ. ಇವರ ಗಾಂಭೀರ್ಯಕ್ಕೆ ಮತ್ತು ಕೋಟ್ಯಾಂತರ ರೂಪಾಯಿಗಳ ಯೋಜನೆಗೆ ಬ್ಯಾಂಕ್‍ಗಳಲ್ಲಿರುವ ‘ಗೋಕುಲ್ ನಾಥ್ ಶೆಟ್ಟಿ’ಯಂಥ ಉದ್ಯೋಗಿಗಳು ಬೇಗನೇ ಶರಣಾಗುತ್ತಾರೆ. ಹೀಗೆ ಸಾಲ ಪಡೆದುಕೊಂಡು ವಂಚಿಸಿದ ಬಳಿಕ ಬ್ಯಾಂಕುಗಳು ಅವರ ಆಸ್ತಿಯನ್ನು ಜಪ್ತಿ ಮಾಡುತ್ತವೆ. ಬಳಿಕ ಅದನ್ನು ಹರಾಜಿಗಿಡುತ್ತವೆ. ತಮಾಷೆ ಇರುವುದೂ ಇಲ್ಲೇ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು ಆ ಹರಾಜಿನಲ್ಲಿ ತೀರಾ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ ಅನ್ನುವುದು ಈ ಸಾಲಗಾರ ಉದ್ಯಮಿಗೆ ಗೊತ್ತು. ಆತ ಬೇನಾಮಿ ಹೆಸರಲ್ಲಿ ಪುನಃ ಆ ಆಸ್ತಿಗಳನ್ನು ಖರೀದಿಸುತ್ತಾನೆ. ವ್ಯಾಪಾರ ಆರಂಭಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಪುನಃ ಸಾಲ ಎತ್ತುವಳಿ ನಡೆಯುತ್ತದೆ. ಉದ್ಯಮ ಆರಂಭಿಸುವಾಗ ಅತನಲ್ಲಿದ್ದುದು ಸೂಟು-ಬೂಟು ಮಾತ್ರ. ಬ್ಯಾಂಕ್ ಸಾಲದಿಂದಲೇ ಉದ್ಯಮ ಆರಂಭವಾಗುತ್ತದೆ. ವಂಚನೆ ನಡೆಯುತ್ತದೆ. ಬ್ಯಾಂಕ್‍ನ ತನ್ನದೇ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ಕೂಗುತ್ತದೆ. ಆತ ಮತ್ತೊಂದು ಹೆಸರಲ್ಲಿ ಅದೇ ಬ್ಯಾಂಕ್‍ನ ವಂಚಿಸಿದ ಹಣದಿಂದ ಹರಾಜನ್ನು ಪಡೆದುಕೊಳ್ಳುತ್ತಾನೆ. ಇಲ್ಲಿ ಆತನಿಗೆ ನಯಾ ಪೈಸೆ ನಷ್ಟವಿಲ್ಲ. ನಷ್ಟ ಸಂಭವಿಸುವುದೆಲ್ಲ ಬ್ಯಾಂಕುಗಳಿಗೆ. ಹಾಗಂತ, ಬ್ಯಾಂಕ್‍ನಲ್ಲಿರುವ ಹಣವೂ ಬ್ಯಾಂಕ್‍ನದ್ದಲ್ಲ. ನರೇಂದ್ರ ಮೋದಿಯವರ `50 ದಿನಗಳ ಕ್ರಾಂತಿ’ಯಲ್ಲಿ ಹರಿದು ಬಂದ ನೋಟುಗಳು. ಇವೇ ನೋಟುಗಳನ್ನು ಓರ್ವ ರೈತ ಪಡಕೊಳ್ಳಬೇಕು ಎಂದರೆ ಬ್ಯಾಂಕುಗಳು ನೂರಾರು ತಕರಾರುಗಳನ್ನು ತೆಗೆಯುತ್ತವೆ. ಮೊದಲನೆಯದಾಗಿ ಉದ್ಯಮಿಯಂಥ ಸೂಟು-ಬೂಟು ರೈತನಲ್ಲಿಲ್ಲ. ಕೋಟ್ಯಾಂತರ ರೂಪಾಯಿಗಳ ಯೋಜನೆ ಮಾಡಲೂ ಅತನಿಗೆ ಬರಲ್ಲ. ಇಂಥ ಒರಟು ಚರ್ಮದ ಮನುಷ್ಯರಿಗೆ ಗೋಕುಲನಾಥ ಶೆಟ್ಟಿಯಂಥ ಬ್ಯಾಂಕ್ ಉದ್ಯೋಗಿಗಳು ಗೆಳೆಯರಾಗುವುದಕ್ಕೆ ಸಾಧ್ಯವೂ ಇಲ್ಲ. ಅಂದಹಾಗೆ, ಸರಕಾರಿ ಸ್ವಾಮ್ಯದ 21 ಬ್ಯಾಂಕುಗಳೇ ಈ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ನಿಯಂತ್ರಿಸುತ್ತವೆ. ಹಾಗಂತ, ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮಾತ್ರ ಈ ದೇಶದಲ್ಲಿರುವುದಲ್ಲ. ಧಾರಾಳ ಖಾಸಗಿ ಬ್ಯಾಂಕುಗಳಿವೆ. ಆದರೆ ಸಾಲ ಮರು ಪಾವತಿಸಿದ ಮೋದಿಯಂಥ ಉದ್ಯಮಿಗಳೆಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನೇ ಸಾಲಕ್ಕಾಗಿ ಆಶ್ರಹಿಸಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್‍ಗಳತ್ತ ಅವರು ಸುಳಿಯುವುದೇ ಇಲ್ಲ. ಇದರ ಅರ್ಥ ಇಷ್ಟೇ. ಉದ್ಯಮಿಗಳಿಗೂ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೂ ಉದ್ಯಮಕ್ಕಿಂತ ಹೊರತಾದ ತಿಳುವಳಿಕೆ ಇದೆ.
     ಈ ತಿಳುವಳಿಕೆಗೆ ಅವರ ಉದ್ಯಮವಷ್ಟೇ ಕಾರಣ ಅಲ್ಲ. ಅವರಿಗೂ ಆಡಳಿತದ ಮಂದಿಗೂ ಸಂಬಂಧ ಇದೆ. ಅವರು ದೊಡ್ಡ ಮಟ್ಟದಲ್ಲಿ ರಾಜಕೀಯ ಪಕ್ಷಗಳಿಗೆ ಪಾರ್ಟಿ ಫಂಡ್ ನೀಡುತ್ತಾರೆ. ಚುನಾವಣೆಯನ್ನು ಎದುರಿಸಬೇಕಾದರೆ ರಾಜಕೀಯ ಪಕ್ಷಗಳಿಗೆ ಹಣ ಬೇಕೇ ಬೇಕು. ಅದು ಶೂನ್ಯದಿಂದ ಹುಟ್ಟುವುದಿಲ್ಲ. ಮೋದಿ-ಮಲ್ಯರಂಥವರು ಅದನ್ನು ಉತ್ಪಾದಿಸಿ ಹಂಚುತ್ತಾರೆ. ಅವರಿಗೆ ಆ ಮೊತ್ತವನ್ನು ಬ್ಯಾಂಕುಗಳು ಕೊಡುತ್ತವೆ. ಹಾಗೆ, ಬ್ಯಾಂಕುಗಳು ಕೊಡುವಂತೆ ಮಾಡಲು ದೇಣಿಗೆ ಪಡೆದುಕೊಂಡವರು ಸಹರಿಸುತ್ತಾರೆ. ಹೀಗೆ ಪಡೆದುಕೊಂಡ ಹಣವನ್ನು ಈ ಉದ್ಯಮಿಗಳು ಪಾವತಿಸದೇ ವಂಚಿಸಿದಾಗ ಬ್ಯಾಂಕುಗಳು ದಿವಾಳಿಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಇದೇ ದೇಣಿಗೆ ಪಡಕೊಂಡವರು ವಹಿಸಿಕೊಳ್ಳುತ್ತಾರೆ. ಅವರು ಮತ್ತೆ ಬ್ಯಾಂಕಿಗೆ ಹಣಕಾಸು ಮರುಪೂರಣ ಮಾಡುವುದಕ್ಕಾಗಿ ತೆರಿಗೆದಾರರ ಹಣವನ್ನು ಬಳಸಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು 2016 ನವೆಂಬರ್ 8 ರಂದು ಮಾಡಿದ `ನೋಟ್ ನಿಷೇಧ ಕ್ರಾಂತಿ’ಯ ಹಿಂದಿನ ಉದ್ದೇಶಗಳಲ್ಲಿ ಇದೂ ಒಂದು ಅಥವಾ ಇದುವೇ. ಬ್ಯಾಂಕ್‍ಗಳಿಗೆ ಬೃಹತ್ ಪ್ರಮಾಣದಲ್ಲಿ ತೆರಿಗೆದಾರರ ಹಣವನ್ನು ಮರುಪೂರಣಗೊಳಿಸಿ ಬ್ಯಾಂಕ್‍ಗಳ ಹೊಟ್ಟೆ ತುಂಬಿಸುವುದು ಮತ್ತು ನೀರವ್‍ರಂಥ ದೇಣಿಗೆದಾರರಿಗೆ ಸಾಲ ಒದಗಿಸುವುದು. `ಮಲ್ಯ ವಂಚಿಸಿ ತಪ್ಪಿಸಿಕೊಂಡ ಬಳಿಕವೂ ನೀರವ್‍ರಂಥವರು ಹೇಗೆ ತಯಾರಾಗುತ್ತಾರೆ, ಬ್ಯಾಂಕ್‍ಗಳೇಕೆ ಜಾಗ್ರತೆ ಪಾಲಿಸುವುದಿಲ್ಲ’ ಎಂಬ ಪ್ರಶ್ನೆ ಇಂದು ನಾಗರಿಕರಲ್ಲಿದೆ. ನಿಜವಾಗಿ ದೇಣಿಗೆ ನೀಡುವ ಉದ್ಯಮಿಗಳು ಮತ್ತು ದೇಣಿಗೆ ಸ್ವೀಕರಿಸುವ ರಾಜಕೀಯ ಪಕ್ಷಗಳ ಮಟ್ಟಿಗೆ ಈ ಪ್ರಶ್ನೆಯೇ ಬಾರಿಶತನದ್ದು. ಅದು ಉಭಯತ್ರರ ನಡುವಿನ ತಿಳುವಳಿಕೆ.
   ನರೇಂದ್ರ ಮೋದಿ ಮತ್ತು ನೀರವ್ ಮೋದಿ ಎಂಬ ಹೆಸರುಗಳಲ್ಲಿ `ಮೋದಿ’ ಎಂಬ ಸಮಾನ ಪದವಿರುವುದಕ್ಕೆ ಕಾರ್ಯಕಾರಣ ಸಂಬಂಧ ಇಲ್ಲದೇ ಇರಬಹುದು. ಆದರೆ, ನರೇಂದ್ರ ಮೋದಿಯವರ ನೋಟ್ ನಿಷೇಧಕ್ಕೂ ಉದ್ಯಮಿಗಳಿಗೂ ಬಹುತೇಕ ಸಂಬಂಧ ಇದೆ. ಅವರು ಹೇಳಿದ 50 ದಿನಗಳು 10 ಬಾರಿ ಕಳೆದ ಬಳಿಕವೂ ನೋಟ್ ನಿಷೇಧದ ಪ್ರಯೋಜನಗಳನ್ನು ವಿವರಿಸಲು ಅವರು ವಿಫಲರಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಅವರನ್ನು ಸುತ್ತವರಿದಿದ್ದ ಭ್ರಮೆ ಕಳಚಿದೆ. ನೀರವ್ ಅದಕ್ಕೆ ನಿಮಿತ್ತ ಮಾತ್ರ.

ಕ್ಯಾಮರಾ ಪ್ಲೀಸ್…

ರಾಜಕೀಯ ಪಕ್ಷಗಳು ಓಲೈಸದ ಮತ್ತು ರಾಜಕೀಯ ಚರ್ಚೆಗಳಲ್ಲಿ ಬಹುತೇಕ ಆಸಕ್ತಿ ವಹಿಸಿಲ್ಲದ ಒಂದು ದೊಡ್ಡ ಗುಂಪು ಇವತ್ತು ಕಣ್ಣಿಗೆ ಎಣ್ಣೆ ಬಿಟ್ಟು ಓದಿನಲ್ಲಿ ತಲ್ಲೀನವಾಗಿದೆ. ಈ ಗುಂಪಿನ ಎದುರು ನಿರ್ಣಾಯಕವೆನ್ನಬಹುದಾದ ಒಂದು ಸವಾಲು ಇದೆ. ಎರಡು ವಾರಗಳೊಳಗೆ ಆ ಸವಾಲಿಗೆ ಈ ಗುಂಪು ಮುಖಾಮುಖಿಯಾಗಬೇಕು. ಅದಕ್ಕಿಂತ ಮೊದಲು ಈ ಸವಾಲಿಗೆ ತಮ್ಮನ್ನು ಸಿದ್ಧಗೊಳಿಸ ಬೇಕು. ಸದ್ಯ ಆಹೋರಾತ್ರಿ ಈ ಗುಂಪು ಸಿದ್ಧತೆಯಲ್ಲಿ ತೊಡಗಿದೆ. ಆದರೆ ಸುದ್ದಿ ಮಾಧ್ಯಮಗಳ ಗಮನ ಬಹುತೇಕ ಈ ವರೆಗೂ ಈ ಗುಂಪಿನ ಮೇಲೆ ಹರಿದಿಲ್ಲ. ಒಂದೋ ಎರಡೋ ಪ್ರಮುಖ ಪತ್ರಿಕೆಗಳಲ್ಲಿ ಬಿಟ್ಟರೆ ಉಳಿದಂತೆ ಯಾವುದೂ ಈ ಗುಂಪಿನ ತಯಾರಿಯ ಕುರಿತಂತೆ ವರದಿಯನ್ನು ಮಾಡಿಲ್ಲ. ಅಷ್ಟಕ್ಕೂ 15-16ರ ಹರೆಯವೆಂಬುದು ಅತ್ತ ವಯಸ್ಕರೊಂದಿಗೂ ಸೇರದ ಇತ್ತ ಮಕ್ಕಳೊಂದಿಗೂ ಸೇರದ ಅತಂತ್ರ ವಯಸ್ಸು. ರಾಜಕಾರಣಿಗೆ ಈ ವಯಸ್ಸಿನ ಮೇಲೆ ಭಾರೀ ಆಕರ್ಷಣೆಯೇನೂ ಇಲ್ಲ. ಯಾಕೆಂದರೆ ಅವರು ಓಟು ಅಲ್ಲ. ರಾಜಕೀಯ ಭಾಷಣಗಳಲ್ಲಿ ಈ ಗುಂಪಿಗೆ ಆಸಕ್ತಿ ಕಡಿಮೆ. ಇನ್ನು, ಮಾಧ್ಯಮ ಕ್ಷೇತ್ರವಂತೂ ಈ ಗುಂಪನ್ನು ಗಂಭೀರವಾಗಿ ಪರಿಗಣಿಸುವುದು ತೀರಾ ತೀರಾ ಕಡಿಮೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮುನ್ನಾದಿನ ಅಥವಾ ಪರೀಕ್ಷಾ ದಿನ ಕೆಲವೊಂದು ಸಲಹೆ-ಸೂಚನೆಗಳನ್ನು ಕೊಡುವುದು ಬಿಟ್ಟರೆ ಮಿಕ್ಕಂತೆ ಆ ಮಕ್ಕಳ ಮಾನಸಿಕ ಬೇಗುದಿ, ಕಲಿಕಾ ವಿಧಾನ, ಒತ್ತಡ, ಶಾಲೆಗಳು ಈ ಮಕ್ಕಳನ್ನು ಉತ್ತಮ ಫಲಿತಾಂಶಕ್ಕಾಗಿ ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಪೋಷಕರು ಹೊರಿಸುತ್ತಿರುವ ಭಾರ…
ಇತ್ಯಾದಿಗಳ ಕುರಿತಂತೆ ಗಂಭೀರ ಅವಲೋಕನ ನಡೆಸುವುದು ಅಪರೂಪ. ಯಾಕೆಂದರೆ, ಈ ವಯಸ್ಸಿನ ಮಕ್ಕಳು ಪತ್ರಿಕೆಗಳ ಗಂಭೀರ ಓದುಗರಲ್ಲ. ಪತ್ರಿಕೆಯೊಂದು ತನ್ನ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಲೆಕ್ಕ ಹಾಕುವಾಗ ಈ ಹರೆಯವನ್ನು ಗುರಿ ಮಾಡುವುದೂ ಇಲ್ಲ. ಒಂದು ರೀತಿಯಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಈ ಮಕ್ಕಳು ಇವತ್ತು ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಯಲ್ಲಿದ್ದಾರೆ. ಆದರೆ ಒತ್ತಡದಲ್ಲಿರುವುದು ಈ ಮಕ್ಕಳಷ್ಟೇ ಅಲ್ಲ. ಮಕ್ಕಳ ಪೋಷಕರು ಒತ್ತಡದ ಒಂದು ತುದಿಯಲ್ಲಿದ್ದರೆ, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಒತ್ತಡದ ಇನ್ನೊಂದು ತುದಿಯಲ್ಲಿವೆ. ಖಾಸಗಿ, ಸರಕಾರಿ ಮತ್ತು ಅನುದಾನಿತ ಶಾಲೆಗಳೆಲ್ಲವೂ ಉತ್ತಮ ಫಲಿತಾಂಶವೆಂಬ ಗುರಿಯೆಡೆಗೆ ತಲೆ ಯಿಟ್ಟು ಈ ಮಕ್ಕಳತ್ತ ನೋಡುತ್ತಿವೆ. ಈ ಗುರಿಯನ್ನು ತಲುಪುವುದಕ್ಕಾಗಿ ಬೇರೆ ಬೇರೆ ಶಾಲೆಗಳು ಬೇರೆ ಬೇರೆ ಯೋಜನೆಯನ್ನು ರೂಪಿಸಿವೆ ಮತ್ತು ವಿದ್ಯಾರ್ಥಿಗಳ ಮೇಲೆ ಅದನ್ನು ಪ್ರಯೋಗಿಸುತ್ತಿವೆ. ದುರಂತ ಏನೆಂದರೆ, ಈ ಪ್ರಯೋಗದ ಬಗ್ಗೆ ಆಸಕ್ತಿ ವಹಿಸಿ ವರದಿ ಮಾಡುವ ಪತ್ರಕರ್ತರು ಮತ್ತು ಕ್ಯಾಮರಾ ಮ್ಯಾನ್‍ಗಳ ದೊಡ್ಡ ಕೊರತೆಯಿದೆ. ಪರೀಕ್ಷೆಗಾಗಿ ತಯಾರಿ ನಡೆಸುವ ಪ್ರತಿ ಮಗುವೂ ಎದುರಿಸುವ ¸ ಸವಾಲುಗಳು ಒಂದೇ ರೀತಿಯದ್ದಲ್ಲ. ಅನುಭವಿಸುವ ಒತ್ತಡಗಳಲ್ಲೂ ಏಕರೂಪತೆಯಿಲ್ಲ. ಶ್ರೀಮಂತ ಮಗು, ಬಡವ ಮಗು, ಮಧ್ಯಮ ವರ್ಗದ ಮಗು, ಬಡತನರೇಖೆಗಿಂತ ಕೆಳಗೆ ಬದುಕುವ ಮಗು…. ಎಲ್ಲವೂ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ಪಡಕೊಳ್ಳುತ್ತವಾದರೂ ಅವು ನಡೆಸಿರುವ ತಯಾರಿಯಲ್ಲಿ ಏಕರೂಪತೆಯಿರುವುದಿಲ್ಲ. ಆರ್ಥಿಕ ಸಾಮಥ್ರ್ಯವನ್ನು ಅನುಸರಿಸಿ ಮಕ್ಕಳ ತಯಾರಿಯಲ್ಲಿ ಭಾರೀ ವ್ಯತ್ಯಾಸಗಳಿರುತ್ತವೆ. ಶಾಲೆಗಳ ಗುಣಮಟ್ಟವೂ ಈ ತಯಾರಿಯ ಮೇಲೆ ಪರಿಣಾಮ ಬೀರಿರುತ್ತದೆ. ಹೆತ್ತವರ ಶೈಕ್ಷಣಿಕ ಮಟ್ಟವೂ ಪರೀಕ್ಷಾ ತಯಾರಿಯಲ್ಲಿ ಪಾತ್ರ ವಹಿ¸ಸುತ್ತವೆ. ಕಲಿಕಾ ಸೌಲಭ್ಯಗಳಿಗೆ ಸಂಬಂಧಿಸಿ ಶ್ರೀಮಂತ ಮನೆಯ ಮಗುವಿಗೆ ಸಮಸ್ಯೆಗಳಿರುವುದಿಲ್ಲ. ಪರೀಕ್ಷೆಗಿಂತ ಮೊದಲೇ ಮತ್ತು ಕಲಿಕಾ ಅವಧಿಯಲ್ಲೇ ಅದು ಹೆಚ್ಚುವರಿ ಪಾಠ ಹೇಳಿಸಿಕೊಳ್ಳುತ್ತದೆ.
ಒಂದು ರೀತಿಯಲ್ಲಿ, ಅಂತಿಮ ಪರೀಕ್ಷೆಗೆ ವರ್ಷದ ಮೊದಲೇ ತಯಾರಿ ನಡೆಸಲಾರಂಭಿಸಿರುತ್ತದೆ. ಆದರೆ ಇದಕ್ಕೆ ತೀರಾ ವಿರುದ್ಧ ಧ್ರುವದಲ್ಲಿರುವ ಬಡ ಮಗುವಿಗೆ ಈ ಅವಕಾಶಗಳು ಲಭ್ಯವಾಗುವುದು ಶೂನ್ಯ ಅನ್ನುವಷ್ಟು ಕಡಿಮೆ. ಅದು ಸರಕಾರಿಯೋ ಅರೆ ಸರಕಾರಿಯೋ ಆಗಿರುವ ಶಾಲೆಗೆ ಸೇರುತ್ತದೆ. ತರಗತಿಯಲ್ಲಿ ನಡೆಯುವ ಪಾಠಗಳೇ ಅದರ ಬಾಳಬುತ್ತಿ. ಮನೆಯಲ್ಲಿ ಹೆತ್ತವರಿಗೆ ಚಿಂತಿಸಬೇಕಾದ ಸಂಗತಿಗಳು ಹಲವು ಇರುತ್ತವೆ. ಅದರಲ್ಲಿ ಈ ಮಗುವಿನ ಕಲಿಕೆಯು ಒಳಗೊಳ್ಳುವುದು ತೀರಾ ಕಡಿಮೆ. ಮಗುವಿನ ಓದು ಎಂಬುದು ತರಗತಿಯಿಂದ ತರಗತಿಗೆ ಮಾತ್ರ ಸೀಮಿತವಾಗಿರುತ್ತದೆ. ಹೀಗೆ ಎರಡು ಧ್ರುವಗಳಲ್ಲಿ ಬದುಕುವ ಇಬ್ಬರು ಮಕ್ಕಳು ವರ್ಷದ ಕೊನೆಯಲ್ಲಿ ಪಡೆದುಕೊಳ್ಳುವ ಪ್ರಶ್ನೆಪತ್ರಿಕೆ ಸಮಾನವಾದದ್ದು ಮತ್ತು ಉತ್ತರದಲ್ಲೂ ಸಮಾನತೆಯಿರಬೇಕಾಗುತ್ತದೆ.
ಇದೊಂದು ವಾಸ್ತವ ಮತ್ತು ಈ ವಾಸ್ತವವನ್ನು ಸುಲಭದಲ್ಲಿ ಬದಲಾಯಿಸುವುದಕ್ಕೆ ಸಾಧ್ಯವೂ ಇಲ್ಲ. ಇದರ ಹೊರತಾಗಿಯೂ ದೊಡ್ಡವರೆನಿ ಸಿಕೊಂಡ ನಮ್ಮ ಮುಂದೆ ಕೆಲವು ಅವಕಾಶಗಳಿವೆ. ಮಕ್ಕಳ ಪರೀಕ್ಷಾ ತಯಾರಿಯನ್ನು ಗಂಭೀರ ಸಾಮಾಜಿಕ ಸಂಗತಿಯಾಗಿ ಪರಿಗಣಿ¸ಸುವುದು. ಸಮಾಜಕ್ಕೂ ಈ ಮಕ್ಕಳಿಗೂ ಕೊಂಡಿಯೊಂದನ್ನು ನಿರ್ಮಿಸುವುದು. ಬಡತನ, ಹೆತ್ತವರ ಬೆಂಬಲದ ಕೊರತೆ ಮತ್ತು ಕಲಿಕೆಗೆ ಪೂರಕ ಸೌಲಭ್ಯಗಳಿಲ್ಲದಿರುವುದು ಇತ್ಯಾದಿಗಳನ್ನು ಎದುರಿಸುತ್ತಿರುವ ಮಕ್ಕಳನ್ನು ಸಮಾಜದ ಗಮನಕ್ಕೆ ತರುವುದು. ಈ ಮಕ್ಕಳಲ್ಲಿ ಆತ್ಮವಿಶ್ವಾ¸ ಸವನ್ನು ತುಂಬುವಂತೆ ನೋಡಿಕೊಳ್ಳುವುದು.
ನಿಜವಾಗಿ, ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವವರೆಂದರೆ ರಾಜಕಾರಣಿಗಳು. ಚುನಾವಣೆಯು ಸಮೀಪಿಸಿರುವ ಈ ಸಂದರ್ಭದಲ್ಲಂತೂ ಎಲ್ಲ ಪುಟಗಳನ್ನೂ ರಾಜಕೀಯಕ್ಕೆ ಮೀಸಲಿಡಲು ಪತ್ರಿಕೆ ಗಳು ತೀರ್ಮಾನಿಸಿರುವಂತೆ ಕಾಣುತ್ತಿದೆ. ಏನೇ ಆಗಲಿ, ಪ್ರತಿಭಟನೆ ಮಾಡಲು ಗೊತ್ತಿಲ್ಲದ, ಲಾಭಿ ನಡೆಸಲಾರದ, ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಸಾಮಥ್ರ್ಯ ಇಲ್ಲದ ಮತ್ತು ಭಾಷಣ-ಬರಹಗಳ ಮೂಲಕ ಸಮಾಜದ ಗಮನ ಸೆಳೆಯಲಾಗದ ಮಕ್ಕಳನ್ನು ಗಮನವಿಟ್ಟು ಪೋಷಿಸಬೇಕಾದುದು ಸಮಾಜದ ಕರ್ತವ್ಯ. ದೊಡ್ಡವರಾದರೋ ತಮ್ಮ ¨ ಬೇಡಿಕೆಗಳನ್ನು ಪ್ರತಿಭಟನೆಗಳ ಮೂಲಕ ವ್ಯವಸ್ಥೆಯ ಮುಂದಿಡುತ್ತಾರೆ. ಅವರಿಗೆ ಹೇಗೆ, ಯಾವ ರೀತಿಯಲ್ಲಿ ಪ್ರತಿಭಟಿಸಿದರೆ ವ್ಯವಸ್ಥೆ ಕಣ್ಣು ತೆರೆಯುತ್ತದೆ ಎಂಬುದು ಗೊತ್ತಿರುತ್ತದೆ. ಮಕ್ಕಳು ಹಾಗಲ್ಲವಲ್ಲ. ಅವರಿಗೆ ಇವೆಲ್ಲ ಗೊತ್ತಿಲ್ಲ. ಗೊತ್ತಿರುವ ದೊಡ್ಡವರು ಉದಾಸೀನ ತೋರಿದರೆ ಅದು ಆ ಮಕ್ಕಳ ಮೇಲೆ ಮಾಡುವ ಅನ್ಯಾಯವಾಗುತ್ತದೆ. ಮುಖ್ಯವಾಗಿ, ಪರೀಕ್ಷಾ ತಯಾರಿಯಲ್ಲಿರುವ ಈ ಮಕ್ಕಳ ಕುರಿತು ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸುತ್ತಿರಬೇಕು. ಅವರು ಎದುರಿಸುತ್ತಿರುವ ಒತ್ತಡ, ಸವಾಲು, ಸವಲತ್ತುರಹಿತ ಸ್ಥಿತಿಗಳ ಬಗ್ಗೆ ಸಮಾಜದ ಗಮನ ¸ಸೆಳೆಯಬೇಕು. ಮಕ್ಕಳಿಗೆ ಉತ್ತಮ ಮತ್ತು ನೆಮ್ಮದಿಯ ವಾತಾವರಣ ಉಂಟು ಮಾಡಬೇಕಾದುದು ಎಲ್ಲರ ಹೊಣೆಗಾರಿಕೆ. ಮಾಧ್ಯಮ ಕ್ಷೇತ್ರ ಈ ಬಗ್ಗೆ ಗಮನ ಕೊಡಲಿ.

Thursday 1 March 2018

ಹೃದಯ ಕದ್ದ ಶ್ರೀದೇವಿಯ ಭಾರತದಲ್ಲಿ ಮಧು

      ಎರಡು ಸಾವುಗಳು ಕಳೆದವಾರ ರಾಷ್ಟ್ರೀಯ ಗಮನವನ್ನು ಸೆಳೆದುವು. ಒಂದು- ಸಿನಿಪ್ರೇಮಿಗಳ ಹೃದಯವನ್ನು ಕದ್ದ ನಟಿ ಶ್ರೀದೇವಿಯದ್ದಾದರೆ, ಇನ್ನೊಂದು- ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ಒಂದಿಷ್ಟು ಅಕ್ಕಿಯನ್ನು ಕದ್ದ ಮಧು ಎಂಬ ಆದಿವಾಸಿಯದ್ದು. ಒಬ್ಬರ ಸಾವು ಹೃದಯಾಘಾತದಿಂದಾದರೆ (ಸ್ಪಷ್ಟತೆ ಇಲ್ಲ) ಇನ್ನೊಬ್ಬರ ಸಾವು ಹೃದಯ ವಿದ್ರಾವಕ ಕ್ರೌರ್ಯದ ಮೂಲಕವಾಯಿತು. ಶ್ರೀದೇವಿ ಬಾಲ್ಯದಲ್ಲೇ  ಚೆಲುವೆ. 4 ವರ್ಷವಿರುವಾಗಲೇ ಅವರು ಸಿನಿಮಾ ಪ್ರವೇಶಿಸಿದರು. ಚೆಲುವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡರು.  ಅವರ ಕಣ್ಣು, ಮೂಗು, ತುಟಿ, ಕೇಶ ರಾಶಿ, ದೈಹಿಕ ಆಕಾರ, ಪ್ರತಿಭೆ ಎಲ್ಲವೂ ಈ ದೇಶದಲ್ಲಿ ಅಸಂಖ್ಯ ಬಾರಿ ಚರ್ಚೆಗೊಳಗಾಗಿದೆ. ದಕ್ಷಿಣ ಭಾರತದ ಹೆಣ್ಣೊಬ್ಬಳು ಹಿಂದಿ ಚಿತ್ರರಂಗದಲ್ಲಿ ಮೇಲುಗೈ ಪಡೆದದ್ದು ಹೇಗೆ ಎಂಬ ಬಗ್ಗೆ ಅನೇಕ ಬರಹಗಳು ಪ್ರಕಟವಾಗಿವೆ. ಸಾವಿಗಿಂತ ಮೊದಲೂ ಮತ್ತು ಸಾವಿನ ಬಳಿಕವೂ ದೊಡ್ಡ ಮಟ್ಟದಲ್ಲಿ ಚರ್ಚೆಗೀಡಾದ ನಟಿ ಶ್ರೀದೇವಿ. ಇವರಿಗೆ ಹೋಲಿಸಿದರೆ ಮಧು ಏನೇನೂ ಅಲ್ಲ. ಶ್ರೀದೇವಿಯ ಫೋಟೋದ ಹತ್ತಿರ ಮಧುವಿನ ಫೋಟೋವನ್ನು ಇಟ್ಟರೆ ಯಾವ ಪ್ರತಿಕ್ರಿಯೆ ಲಭ್ಯವಾದೀತು ಎಂಬುದು ಎಲ್ಲರಿಗೂ ಗೊತ್ತು. ಚಿತ್ರರಂಗದ ತಿರಸ್ಕೃತ  ಪಟ್ಟಿಯಲ್ಲಿರುವ ಹಲವು ಕೊರತೆಗಳು ಆತನಲ್ಲಿವೆ. ಆತನ ಮೈಬಣ್ಣ, ಕಣ್ಣು, ಮುಖ, ದೇಹರಚನೆ, ಎತ್ತರ.. ಯಾವುದೂ ಆ ಕ್ಷೇತ್ರಕ್ಕೆ ಹೊಂದಿಕೆಯಾಗುವುದಿಲ್ಲ. ಮಾತ್ರವಲ್ಲ, ಆ ಕ್ಷೇತ್ರದಲ್ಲಿ ಈ ಚಹರೆ ಒಂದು ರೀತಿಯ ಅವಮಾನಕ್ಕೆ ಒಳಗಾಗುತ್ತಲೇ ಬಂದಿದೆ.
      ವಿಷಾದ ಏನೆಂದರೆ, ಶ್ರೀದೇವಿಯ ಭಾರತ, ಮಧುವಿನ ಭಾರತದ ಮೇಲೆ ಬಹಳ ಹಿಂದಿನಿಂದಲೂ ದಾಳಿ ಮಾಡುತ್ತಲೇ ಬಂದಿದೆ. ಶ್ರೀದೇವಿ ಪ್ರತಿನಿಧಿಸುವ ಭಾರತ ಬಹಳ ಚಿಕ್ಕದು. ಮಧು ಪ್ರತಿನಿಧಿಸುವ ಭಾರತವಾದರೋ ಬಹಳ ವಿಸ್ತಾರವಾದುದು. ಆ ಭಾರತ ಬಡತನದ್ದು. ದುಡಿಮೆಗಾರರದ್ದು. ಇಂಗ್ಲಿಷು, ಜರ್ಮನ್, ಚೀನಿ ಇತ್ಯಾದಿ ಭಾಷೆಗಳನ್ನು ಮಾತಾಡಲಾಗದ ಮತ್ತು ಗ್ರಾಮೀಣ ಭಾಷೆಯನ್ನಷ್ಟೇ ಮಾತಾಡಬಲ್ಲವರದ್ದು. ಟೈ-ಕೋಟು-ಬೂಟು ಧರಿಸಿ ಗೊತ್ತಿಲ್ಲದವರದ್ದು. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಅದರ ದುಪ್ಪಟ್ಟು ಗಳಿಸುವ ಸಾಮರ್ಥ್ಯ ಇಲ್ಲದವರದ್ದು. ಬ್ಯಾಂಕಿನಿಂದ ಜುಜುಬಿ ಸಾವಿರದಷ್ಟು ಸಾಲ ಪಡೆದುಕೊಳ್ಳುವುದಕ್ಕೂ ತಿಂಗಳುಗಟ್ಟಲೆ ಕಾದು ಬರಿಗೈಲಿ ವಾಪಸಾಗುವವರದ್ದು. ಅಗ್ಗದ ರೇಶನ್ ಅಕ್ಕಿಗಾಗಿ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಲ್ಲುವವರದ್ದು. ಈ ಪಟ್ಟಿ ತುಂಬಾ ಉದ್ದ ಇದೆ. ಪೊಲೀಸು ಠಾಣೆ, ಸರಕಾರಿ ಕಚೇರಿ, ನ್ಯಾಯಾಲಯ ಎಲ್ಲೆಡೆಯೂ ಕೈ ಮುಗಿದು ಕಾಯುವ ಗುಂಪು ಇದು. ಲಕ್ಪಣವಾಗಿ ಮಾತಾಡಲು ಮತ್ತು ಉಡುಪು ಧರಿಸಲು ಬರದ ಹಾಗೂ ಯಾವ ಆಕರ್ಷಕ ಚಹರೆಯೂ ಇಲ್ಲದ ದುರ್ಬಲ ವರ್ಗ ಇದು. ಆದರೆ ಶ್ರೀದೇವಿ ಪ್ರತಿನಿಧಿಸುವ ಭಾರತ ಇದಕ್ಕೆ ತೀರಾ ವಿರುದ್ಧ. ಅದಕ್ಕೆ ಮಾತಾಡಲು ಬರುತ್ತೆ. ಲಕ್ಪಣವಾಗಿ ಉಡುಪು ಧರಿಸಲು ಬರುತ್ತೆ. ಎಲ್ಲೆಡೆಯೂ ಕೆಂಪು ಹಾಸಿನ ಸ್ವಾಗತ ಸಿಗುತ್ತೆ. ಬ್ಯಾಂಕುಗಳು ಕರೆದೂ ಕರೆದೂ ಸಾಲ ಕೊಡುತ್ತವೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರೇ ಕೇಂದ್ರ ಬಿಂದುವಾಗಿರುತ್ತಾರೆ. ಪಡಕೊಂಡ ಸಾಲವನ್ನು ಮರುಪಾವತಿಸದೇ ವಂಚಿಸುವುದಕ್ಕೂ ಆ ಗುಂಪಿಗೆ ಗೊತ್ತಿದೆ. ದುರಂತ ಏನೆಂದರೆ, ಈ ಗುಂಪಿಗೆ ಸಿಗುವ ಗೌರವ ಮತ್ತು ಮಾನ್ಯತೆ ಮಧು ಪ್ರತಿನಿಧಿಸುವ ಜನ ಸಮೂಹಕ್ಕೆ ಸಿಗುವುದೇ ಇಲ್ಲ.
ನಿಜವಾಗಿ, ಮಧು ಬಣ್ಣರಹಿತ ಭಾರತದ ಪ್ರತೀಕ. ಶ್ರೀದೇವಿ ಬಣ್ಣ ಸಹಿತ ಭಾರತದ ಸಂಕೇತ. ಈ ದೇಶದಲ್ಲಿ ಇವತ್ತು ಬಣ್ಣಕ್ಕೆ ದೊಡ್ಡ ಮಾರುಕಟ್ಟೆಯಿದೆ. ವಾಸ್ತವವನ್ನು ಮರೆಮಾಚಿ ಅವಾಸ್ತವವನ್ನು ವಾಸ್ತವವೆಂಬಂತೆ ಬಿಂಬಿಸುವುದು ಬಣ್ಣದ ಗುಣ. ಬಣ್ಣ ಇಲ್ಲದೇ ಚಿತ್ರರಂಗವೇ ಇಲ್ಲ. ಬಣ್ಣರಹಿತ ಶ್ರೀದೇವಿಯ ಫೋಟೋ ಅವರ ಅಭಿಮಾನಿಗಳಲ್ಲಿ ಇರುವ ಸಾಧ್ಯತೆಯೂ ಇಲ್ಲ. ಚಿತ್ರರಂಗದಿಂದ ಹಿಡಿದು ರಾಜಕಾರಣದವರೆಗೆ, ನೀರವ್ ಮೋದಿಯಿಂದ ಹಿಡಿದು ರಾಮ್ ರಹೀಮ್ ಬಾಬಾರ ವರೆಗೆ ಎಲ್ಲರೂ ಈ ಬಣ್ಣದ ಸಹಾಯದಿಂದಲೇ ಇವತ್ತು ಬದುಕುತ್ತಿದ್ದಾರೆ. ‘ಪ್ರತಿ ಭಾರತೀಯನ ಖಾತೆಗೂ 15 ಲಕ್ಪ ರೂಪಾಯಿ ಜಮೆ ಮಾಡುವ’ ಬಣ್ಣದ ಮಾತಿನ ಮೂಲಕವೇ ನರೇಂದ್ರ ಮೋದಿಯು ಪ್ರಧಾನಿಯಾದರು. ನೋಟ್ ನಿಷೇಧವನ್ನು ‘ಬಣ್ಣ’ದ ಮಾತಿನ ಮೂಲಕ ಸಮರ್ಥಿಸಿಕೊಳ್ಳಲಾಯಿತು. ಕುಸಿದ ಜಿಡಿಪಿಯನ್ನು ‘ಬಣ್ಣ’ದ ಮಾತಿನ ಮೂಲಕ ಮೇಲೆತ್ತಲಾಯಿತು. ಜಿಎಸ್‍ಟಿಗೆ ಬಣ್ಣ ಬಳಿದು ಚಂದಗೊಳಿಸಲಾಯಿತು. ಬ್ಯಾಂಕ್‍ನಿಂದ ಕೋಟಿ ಕೋಟಿ ಲೂಟಿಯಾಗುವುದನ್ನೂ ಬಣ್ಣದ ಮಾತುಗಳಿಂದ ಸಂತೈಸಲಾಯಿತು. ಚಿತ್ರರಂಗವಂತೂ ಬದುಕುವುದೇ ಬಣ್ಣದೊಂದಿಗೆ. ರಾಜಕಾರಣಿಗೆ ಹೊರಗೊಂದು ಮತ್ತು ಒಳಗೊಂದು ಮುಖ ಇದೆ. ಚಿತ್ರರಂಗದ ನಟ-ನಟಿಯರಿಗೂ ಇಂಥದ್ದೊಂದು  ಮುಖ ಇದೆ. ಹಲವು ಬಾಬಾಗಳೂ ಈ ಎರಡು ಮುಖದೊಂದಿಗೇ ಬದುಕುತ್ತಿರುತ್ತಾರೆ. ಅವರ ಬಾಹ್ಯ ಮುಖ ಅತ್ಯಂತ ಸುಂದರವಾದುದು. ಜನರನ್ನು ಮಂತ್ರಮುಗ್ಧಗೊಳಿಸುವಷ್ಟು ಪ್ರಭಾವಶಾಲಿಯಾದುದು. ಮಧು ಪ್ರತಿನಿಧಿಸುವ ಭಾರತದ ದೊಡ್ಡ ಸಮಸ್ಯೆ ಇದು. ಆ ಭಾರತಕ್ಕೆ ಬಣ್ಣ ಹಚ್ಚಿ ಗೊತ್ತಿಲ್ಲ. ಹುಟ್ಟುವಾಗ ಯಾವ ಬಣ್ಣ ಇದೆಯೋ ಅದೇ ಬಣ್ಣದೊಂದಿಗೆ ಆ ಭಾರತ ಸಾಯುತ್ತದೆ. ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿ, ಅಧಿಕಾರಕ್ಕಾಗಿ ಆಕರ್ಷಕ ಸುಳ್ಳು, ಶ್ರೀಮಂತ ಬದುಕಿಗಾಗಿ ಜಾಣ್ಮೆಯ ವಂಚನೆ.. ಇತ್ಯಾದಿಗಳಿಗೆ ಈ ಭಾರತದಲ್ಲಿ ಜಾಗ ಇಲ್ಲ. ಈ ಭಾರತದಲ್ಲಿ ಬಡತನ ಇದೆ. ಅನಾರೋಗ್ಯ ಇದೆ. ಮೂರು ಹೊತ್ತು ಊಟ ಮಾಡುವ ಅಸಾಮರ್ಥ್ಯ ಇದೆ. ಶಿಕ್ಪಣದ ಕೊರತೆಯಿದೆ. ಆಧುನಿಕ ಸೌಲಭ್ಯಗಳು ಎಟುಕದ ಸ್ಥಿತಿಯಲ್ಲಿದೆ. ಮಧು ಆ ಭಾರತವನ್ನು ಪ್ರತಿನಿಧಿಸಿದ್ದಾನೆ. ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ಒಂದಿಷ್ಟು ಅಕ್ಕಿಯನ್ನು ಕದ್ದಿದ್ದಾನೆ. ನಿಜವಾಗಿ, ಆತ ಕದ್ದದ್ದಲ್ಲ. ಈ ವ್ಯವಸ್ಥೆ ಆತನನ್ನು ಕದಿಯುವಂತೆ ಮಾಡಿದೆ. ಆದರೆ ಈ ಬಣ್ಣದ ಜಗತ್ತು ಈ ಸಮಾಜವನ್ನು ಹೇಗೆ ನಂಬಿಸಿಬಿಟ್ಟಿದೆಯೆಂದರೆ, ಹೃದಯ ಕದಿಯುವ ಶ್ರೀದೇವಿಯ ಭಾರತವೇ ನಿಜ ಭಾರತ ಎಂದು ಹೇಳಿಬಿಟ್ಟಿದೆ. ಆ ಭಾರತದ ಆಚೆಗೆ ಇನ್ನೊಂದು ಬೃಹತ್ ಭಾರತ ಅಸ್ತಿತ್ವದಲ್ಲಿರುವುದನ್ನು ಅದು ಒಪ್ಪಿಕೊಳ್ಳುತ್ತಿಲ್ಲ. ಅಂಥದ್ದೊಂದು ಭಾರತವನ್ನು ಅದು ಅವಮಾನವೆಂದೇ ಭಾವಿಸಿದೆ.
ಆರ್ಯರು ತಮ್ಮ ಬಣ್ಣ, ಜ್ಞಾನ, ಶೈಕ್ಷಣಿಕ ಸಾಮರ್ಥ್ಯವನ್ನು ಬಳಸಿಕೊಂಡು ಈ ದೇಶದ ಬಹುಸಂಖ್ಯಾತ ಮೂಲ ನಿವಾಸಿಗಳ ಮೇಲೆ ಸವಾರಿ ನಡೆಸಿದರು. ಅವರ ಮೈಬಣ್ಣ ಶ್ರೇಷ್ಠವೂ ಮೂಲ ನಿವಾಸಿಗಳ ಮೈಬಣ್ಣ ಕನಿಷ್ಠವೂ ಆಗಿ ಬದಲಾಯಿತು. ಬಣ್ಣವೇ ಮನುಷ್ಯರ ಸ್ಥಾನಮಾನವನ್ನು ಅಳೆಯುವ ಹಂತಕ್ಕೆ ತಲುಪಿತು. ಸಣ್ಣ ಗುಂಪಿನ ಮೈಬಣ್ಣವು ದೊಡ್ಡ ಗುಂಪಿನ ಮೇಲೆ ಪ್ರಾಬಲ್ಯ ಸ್ಥಾಪಿಸಿತು. ಇವತ್ತಿಗೂ ಆ ಪರಂಪರೆ ಮುಂದುವರಿದಿದೆ. ಬಣ್ಣರಹಿತ ಬೃಹತ್ ಭಾರತದ ಮೇಲೆ ಬಣ್ಣ ಸಹಿತ ಪುಟ್ಟ ಭಾರತ ದೌರ್ಜನ್ಯ ನಡೆಸುತ್ತಲೇ ಇದೆ. ಮಧು ಮತ್ತು ಶ್ರೀದೇವಿಯ ಮೂಲಕ ಇದು ಮತ್ತೊಮ್ಮೆ ರುಜುವಾತುಗೊಂಡಿದೆ.