Monday, 25 February 2013

ಅಕ್ಷರ ಭಯೋತ್ಪಾದಕರನ್ನು ವಿಳಾಸ ಸಮೇತ ಪತ್ತೆಹಚ್ಚಿದ ಪತ್ರಕರ್ತ

   ಮುತೀಉರ್ರಹ್ಮಾನ್ ಸಿದ್ದೀಖಿ

   ಮುತೀಉರ್ರಹ್ಮಾನ್ ಸಿದ್ದೀಖಿ ಎಂಬ ಯುವ ಪತ್ರಕರ್ತ ಕೇವಲ 6 ತಿಂಗಳ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆಯೊಂದನ್ನು ನಡೆಸಿ ಗಮನ ಸೆಳೆದಿದ್ದಾನೆ. ಆ ಮೂಲಕ ಮಾಧ್ಯಮ ಮತ್ತು ಪೊಲೀಸ್  ಇಲಾಖೆಯಲ್ಲಿರುವ ಕೆಲವು ಅಪಾಯಕಾರಿ ಭಯೋತ್ಪಾದಕರನ್ನು ಆತ ವಿಳಾಸ ಸಮೇತ ಬಹಿರಂಗಪಡಿಸಿದ್ದಾನೆ. ಇದಕ್ಕಾಗಿ ಆತ ಪೆನ್ನು ಬಳಸಿಲ್ಲ. ಭಾಷಣ ಮಾಡಿಲ್ಲ. 6 ತಿಂಗಳ ಕಾಲ ಜೈಲಲ್ಲಿ ಕೂರುವ ಮುಖಾಂತರ ತಣ್ಣಗೆ ಈ ಕಾರ್ಯಾಚರಣೆಯನ್ನು ನಡೆಸಿದ್ದಾನೆ. 2012 ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಪೊಲೀಸರು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು. ಒಂದಿಬ್ಬರು ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆ ನಡೆಸುವ ಭಾರೀ ಭಯೋತ್ಪಾದಕ ಸಂಚನ್ನು ತಾವು ವಿಫಲಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ಬಂಧಿತ 15 ಮಂದಿಯಲ್ಲಿ ಇಬ್ಬರು ಇರಾನ್‍ಗೆ ಭೇಟಿ ಕೊಟ್ಟಿದ್ದು, ಆ ಬಳಿಕ ಪಾಕಿಸ್ತಾನಕ್ಕೆ ತೆರಳಿ ಐ.ಎಸ್.ಐ. ಏಜೆಂಟರೊಂದಿಗೆ ಮಾತುಕತೆ ನಡೆಸಿದ್ದನ್ನೂ ವಿವರಿಸಿದ್ದರು. ಅಲ್ಲದೇ 3 ತಿಂಗಳ ಸತತ ನಿಗಾದ ಬಳಿಕ ಈ 15 ಮಂದಿಯನ್ನು ಬಂಧಿಸಲಾಗಿದೆಯೆಂದೂ ಹೇಳಿಕೊಂಡಿದ್ದರು. ಅದರ ಮರುದಿನದಿಂದಲೇ ರಾಜ್ಯದಲ್ಲಿ ಅಕ್ಷರ ಭಯೋತ್ಪಾದನೆಗಳು ಪ್ರಾರಂಭವಾಗಿದ್ದುವು. ಬಂಧಿತ, ಡೆಕ್ಕನ್ ಹೆರಾಲ್ಡ್  ಪತ್ರಿಕೆಯ  ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿ ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಪತ್ರಕರ್ತನ ಸೋಗಿನಲ್ಲಿ ಆತ ಹೇಗೆ ವಿಧ್ವಂಸಕ ಕೃತ್ಯಕ್ಕೆ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಅವು ತನಿಖಾ ವರದಿಯನ್ನು ಪ್ರಕಟಿಸಿದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚಿನ ಹೊಣೆಯನ್ನೂ ಈ ಪತ್ರಕರ್ತನ ಮೇಲೆ ಹೊರಿಸಲಾಯಿತು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ, ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಮುತೀಉರ್ರಹ್ಮಾನ್‍ನ ಆ ವರೆಗಿನ ಪತ್ರಿಕಾ ವೃತ್ತಿಯಲ್ಲಿ ಅನುಮಾನಿತ ಅಂಶಗಳು ಕಂಡಿಲ್ಲವಾದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಪತ್ರಕರ್ತನನ್ನು ಸಮರ್ಥಿಸಿಕೊಳ್ಳುವುದಕ್ಕೆ ಅದು ಹಿಂದೇಟು ಹಾಕಿತು. ಆದರೆ ಮುತೀಉರ್ರಹ್ಮಾನ್ ತನ್ನ ಸಂಘಟನೆಯ ಸದಸ್ಯನೆಂದು ಎಸ್.ಐ.ಓ.(ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ)ನ ರಾಜ್ಯಾಧ್ಯಕ್ಷ ಅಶ್ಫಾಕ್ ಅಹ್ಮದ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಘೋಷಿಸಿದರು. ಮುತೀಉರ್ರಹ್ಮಾನ್ ಅಮಾಯಕ ಎಂದವರು ಸಾರಿದರು.
   ದುರಂತ ಏನೆಂದರೆ, ರಾಜ್ಯದ ಪತ್ರಕರ್ತ ಸಂಘಟನೆಗಳು ಮುತೀಉರ್ರಹ್ಮಾನ್‍ನ ಬಂಧನದ ಕುರಿತಂತೆ ಮೌನ ವಹಿಸಿದ್ದು. ಪತ್ರಕರ್ತ ನವೀನ್ ಸೂರಿಂಜೆಯ ಬಂಧನದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಅವು ಮುತೀಉರ್ರಹ್ಮಾನ್‍ನ ಬಂಧನದ ಸಂದರ್ಭದಲ್ಲಿ ತೋರಿಸಲೇ ಇಲ್ಲ. ಪ್ರತಿಭಟನೆ ನಡೆಸಬೇಕಾಗಿದ್ದ  ಅನೇಕ ಪತ್ರಕರ್ತರು ಯಾರೋ ಹೆಣೆದ ಷಡ್ಯಂತ್ರದ ದಾಳವಾಗಿ ಬಿಟ್ಟರು. ಆತನ ಮೇಲೆ ಹೊರಿಸಲಾದ ಆರೋಪಗಳೆಲ್ಲ ನಿಜವಾಗಿರಬಹುದು ಎಂದು ನಂಬುವ ಸ್ಥಿತಿಗೆ ಅನೇಕ ಪತ್ರಕರ್ತರು ತಲುಪಿ ಬಿಟ್ಟಿದ್ದರು. ಇಷ್ಟಕ್ಕೂ, ಕೆಲವು ಪತ್ರಿಕೆಗಳು ಕಲ್ಪಿತ ಸುದ್ದಿಗಳನ್ನು ಆಕರ್ಷಕ ಹೆಡ್‍ಲೈನ್‍ನೊಂದಿಗೆ ಪ್ರತಿದಿನವೂ ಪ್ರಕಟಿಸುತ್ತಿರುವಾಗ ಗೊಂದಲ ಉಂಟಾಗದಿರುವುದಾದರೂ ಹೇಗೆ? ಹೆಚ್ಚಿನೆಲ್ಲ ಪತ್ರಿಕೆಗಳು ಮುತೀಉರ್ರಹ್ಮಾನ್‍ನನ್ನು ಭಯೋತ್ಪಾದಕನಂತೆ ಚಿತ್ರಿಸಿ ಸಂಪಾದಕೀಯ ಬರೆಯುವಾಗ, ಆತನ ಬಗ್ಗೆ ನಾಲ್ಕು ಕೊಂಡಾಟದ ವಾಕ್ಯ ಬರೆಯುವುದಕ್ಕೆ ಸಾಮಾನ್ಯ ಪತ್ರಕರ್ತನಿಗೆ ಧೈರ್ಯ ಎಲ್ಲಿಂದ ಬರಬೇಕು? ನಿಜವಾಗಿ, ಮಾಧ್ಯಮಗಳಲ್ಲಿರುವ ಒಂದು ವರ್ಗವು ಭಯೋತ್ಪಾದನೆಯ ಭೂತವನ್ನು ಹಬ್ಬಿಸಿ, ಇಡೀ ಕನ್ನಡ ಪತ್ರಿಕೋದ್ಯಮವನ್ನೇ ಕುಲಗೆಡಿಸಿಬಿಟ್ಟಿತ್ತು. ಪತ್ರಕರ್ತನ ಬಂಧನದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ದೇಶದ್ರೋಹವಾದೀತೋ ಎಂದು ಪ್ರಮುಖ ಪತ್ರಕರ್ತರೂ  ಭಯಪಡುವಷ್ಟು ಈ ಭೂತ ಪ್ರಭಾವಶಾಲಿಯಾಗಿತ್ತು. ಆದ್ದರಿಂದಲೇ, ಮುತೀಉರ್ರಹ್ಮಾನ್‍ನ ಬಂಧನದ ವಿರುದ್ಧ ರಾಜ್ಯದಲ್ಲಿ ಪತ್ರಕರ್ತರಿಂದ ಒಂದೇ ಒಂದು ಪ್ರತಿಭಟನೆ ನಡೆಯಲಿಲ್ಲ. ಆತನ ಅಮಾಯಕತನವನ್ನು ಕನಿಷ್ಠ ಆತನ ಪತ್ರಕರ್ತ ಮಿತ್ರರು ಮತ್ತು ಸಂಪಾದಕರಿಗೂ ಘೋಷಿಸಲು ಸಾಧ್ಯವಾಗಲಿಲ್ಲ. ಇಷ್ಟಕ್ಕೂ, ಪತ್ರಕರ್ತರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಈ ಪತ್ರಕರ್ತರು ಮತ್ತು ಸಂಪಾದಕರು ಬರೆದ ಸುದ್ದಿಗಳನ್ನಲ್ಲವೇ ಅವರೂ ಓದುತ್ತಿರುವುದು? ಸುದ್ದಿಗಳೆಲ್ಲ ಮುತೀಉರ್ರಹ್ಮಾನ್‍ನನ್ನು ‘ಜಿಹಾದಿ ಪತ್ರಕರ್ತ' ಎಂದು ಕರೆಯುವಾಗ ಅವರು ಅದಕ್ಕಿಂತ ಭಿನ್ನವಾಗಿ ಆಲೋಚಿಸುವುದಕ್ಕೆ ಸಾಧ್ಯವಿದೆಯೇ?
   ಇದೀಗ ಮುತೀಉರ್ರಹ್ಮಾನ್‍ನ ಬಿಡುಗಡೆಗೆ ನ್ಯಾಯಾಲಯವೇ ಆದೇಶಿಸಿದೆ. ಆತನ ಮೇಲೆ ಯಾವೊಂದು ಆರೋಪವನ್ನೂ ಪೊಲೀಸರು ಹೊರಿಸಿಲ್ಲ. ವಿಷಾದ ಏನೆಂದರೆ, ಮುತೀಉರ್ರಹ್ಮಾನ್‍ನಿಗೆ ಖಳನಾಯಕನ ವೇಷ ತೊಡಿಸಿ, ಎರಡು ವಾರಗಳ ತನಕ ಮುಖಪುಟದಲ್ಲಿ ಕೂರಿಸಿದ ಪತ್ರಿಕೆಗಳು, ಆತನ ಬಿಡುಗಡೆಯ ಸುದ್ದಿಗೆ ಆ ಮಟ್ಟದ ಪ್ರಚಾರ ನೀಡದೇ ಇರುವುದು. ಆ ಕುರಿತಂತೆ ಸಂಪಾದಕೀಯ ಬರೆಯದೇ ಇರುವುದು. ಓರ್ವ ಅಮಾಯಕನನ್ನು ಭಯೋತ್ಪಾದಕನಂತೆ ಬಿಂಬಿಸಿದ ಪತ್ರಿಕೆಗಳು ಯಾಕಾಗಿ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡವು? ಈ ದೇಶದಲ್ಲಿ ಭಯೋತ್ಪಾದನೆಯ ಆರೋಪ ಹೊತ್ತುಕೊಂಡ ವ್ಯಕ್ತಿಯೊಬ್ಬ ಎದುರಿಸಬೇಕಾದ ಸಮಸ್ಯೆಗಳು ಏನೆಂಬುದು ಮಾಧ್ಯಮ ಮಿತ್ರರಿಗೆ ಗೊತ್ತಿಲ್ಲವೇ? ಭಯೋತ್ಪಾದನೆಯೆಂಬುದು ಕಳ್ಳತನದ ಆರೋಪದಂತೆ ಅಲ್ಲವಲ್ಲ. ನ್ಯಾಯಾಲಯವು ಅಮಾಯಕನೆಂದು ಬಿಡುಗಡೆಗೊಳಿಸಿದರೂ ಸಮಾಜ ಅಪರಾಧಿಯಂತೆಯೇ ನೋಡುತ್ತದಲ್ಲವೇ? ಸರಕಾರಿ ಇಲಾಖೆ ಇಲ್ಲವೇ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಸಿಗುವುದು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗುತ್ತದಲ್ಲವೇ? ಇಂಥ ವಾತಾವರಣದಲ್ಲಿ, ಸಮಾಜವನ್ನು ತಿದ್ದಬೇಕಾದ ಮಾಧ್ಯಮಗಳೇಕೆ ಬೆನ್ನು ತಿರುಗಿಸುತ್ತವೆ? ಸಮಾಜವನ್ನು ತಪ್ಪು ದಾರಿಗೆಳೆಯುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯೇ?
   ಏನೇ ಆಗಲಿ, ಮುತೀಉರ್ರಹ್ಮಾನ್ ಎಂಬ ಸಾಮಾನ್ಯ ಪತ್ರಕರ್ತನೋರ್ವ ಮಾಧ್ಯಮ ಕ್ಷೇತ್ರದಲ್ಲಿರುವ ಕೆಲವು ಭಯೋತ್ಪಾದಕರ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಅವರು ಯಾವ್ಯಾವ ಪತ್ರಿಕೆಯಲ್ಲಿ, ಯಾವ್ಯಾವ ಸ್ಥಾನದಲ್ಲಿದ್ದಾರೆಂಬುದನ್ನೂ ಬಹಿರಂಗಕ್ಕೆ ತಂದಿದ್ದಾನೆ. ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳು ಸುದ್ದಿಯ ಹೆಸರಲ್ಲಿ ಹೇಗೆ ಅಪ್ಪಟ ಸುಳ್ಳುಗಳನ್ನು ಹೇಳಬಲ್ಲವು ಎಂಬುದಕ್ಕೂ ಕನ್ನಡಿ ಹಿಡಿದಿದ್ದಾನೆ. ಆದ್ದರಿಂದ, 6 ತಿಂಗಳು ಜೈಲಲ್ಲಿದ್ದರೂ ಪರವಾಗಿಲ್ಲ, ಶಾಶ್ವತವಾಗಿ ಜೈಲಲ್ಲೇ ಇರಬೇಕಾದವರ ಪಟ್ಟಿಯೊಂದನ್ನು ಸಮಾಜದ ಮುಂದಿಟ್ಟನಲ್ಲ, ಅದಕ್ಕಾಗಿ ಆತನಿಗೆ ಅಭಿನಂದನೆ ಸಲ್ಲಿಸಬೇಕು.

Monday, 18 February 2013

`ಪಿಸ್ಟೋರಿಯಸ್’ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು...


   ಈ ಜಗತ್ತಿನಲ್ಲಿ ದಿನ ಬೆಳಗಾಗುವುದರೊಳಗೆ ರೋಲ್ ಮಾಡೆಲ್‍ಗಳು ಉದಯಿಸುವುದಿದೆ. ನೂರು ಮೀಟರ್ ಓಟವನ್ನು ವಿಶ್ವದಾಖಲೆಯ ಸಮಯದೊಂದಿಗೆ ಓಡಿ ಮುಗಿಸಿದರೆ; ಕಾರ್ ರೇಸ್, ಸೈಕ್ಲಿಂಗ್ ರೇಸ್‍ನಲ್ಲಿ ವಿಶ್ವದಾಖಲೆ ಮಾಡಿದರೆ; ಕ್ರಿಕೆಟ್ಟು, ಟೆನ್ನಿಸ್‍ನಲ್ಲಿ ಅಮೋಘ ಸಾಧನೆ ಮಾಡಿದರೆ.. ಕ್ರೀಡಾ ಪಟುಗಳು ಮಾಧ್ಯಮಗಳನ್ನಿಡೀ ತುಂಬಿಕೊಳ್ಳುತ್ತಾರೆ. ಬ್ರೇಕಿಂಗ್ ನ್ಯೂಸೂ ಅವರೇ. ಎಕ್ಸ್ ಕ್ಲೂಸಿವ್ ನ್ಯೂಸೂ ಅವರೇ. ಅವರ ಬದುಕು, ಹಿನ್ನೆಲೆ, ಶ್ರಮ ಇತ್ಯಾದಿಗಳೆಲ್ಲವೂ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತವೆ. ಕ್ರೀಡಾಪಟುಗಳೆಲ್ಲ ಯುವ ಪ್ರಾಯದವರೇ ಆಗಿರುವುದರಿಂದ ಯುವ ಸಮೂಹವು ಸಹಜವಾಗಿ ಈ ಚರ್ಚೆಗಳಿಂದ ಆಕರ್ಷಿತಗೊಳ್ಳುತ್ತದೆ. ಕ್ರಮೇಣ ಅವರೊಳಗೆ ಈ ಕ್ರೀಡಾಪಟುಗಳು ಚಿಕ್ಕದೊಂದು ಗೂಡು ಕಟ್ಟತೊಡಗುತ್ತಾರೆ. ಅವರನ್ನು ರೋಲ್ ಮಾಡೆಲ್‍ಗಳಂತೆ ಪ್ರೀತಿಸತೊಡಗುತ್ತಾರೆ. ತಮ್ಮ ಪುಸ್ತಕದಲ್ಲಿ, ಟೀ ಶರ್ಟು, ಫೇಸ್‍ಬುಕ್‍ನಲ್ಲಿ.. ಇವರನ್ನು ತುಂಬಿಸಿಕೊಳ್ಳುತ್ತಾರೆ. ಅವರ ಪ್ರಾಯ, ದೇಶ, ಸಾಧನೆಗಳು, ಅವರಿಗಿರುವ ಸಂಬಂಧಗಳು.. ಹೀಗೆ ಸಕಲ ಮಾಹಿತಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳುವ ಅಪ್ಪಟ ಫ್ಯಾನ್ ಕ್ಲಬ್‍ಗಳೂ ಇರುತ್ತವೆ. ಸೈಕ್ಲಿಂಗ್‍ನಲ್ಲಿ ನಿಬ್ಬೆರಗಾಗುವ ಸಾಧನೆ ಮಾಡಿದ ಅಮೇರಿಕದ ಆರ್ಮ್ ಸ್ಟ್ರಾಂಗ್ ನಿಂದ ಎಷ್ಟು ಮಂದಿ ಪ್ರಭಾವಿತವಾಗಿಲ್ಲ? ಕ್ಯಾನ್ಸರ್ ರೋಗಿಯಾಗಿದ್ದಾಗ ಅವರು ತೋರಿದ ಅಪಾರ ಆತ್ಮವಿಶ್ವಾಸ, ಕೆಚ್ಚೆದೆಯ ಬಗ್ಗೆ ಎಷ್ಟು ಬಾರಿ ಪತ್ರಿಕೆಗಳು ಬರೆದಿಲ್ಲ? ಅಂದ ಹಾಗೆ ಆತ ಕ್ಯಾನ್ಸರ್‍ನಿಂದ ಹೊರಬಂದು ಸೈಕ್ಲಿಂಗ್ ರೇಸ್‍ನಲ್ಲಿ ಎಲ್ಲ ದಾಖಲೆಗಳನ್ನೂ ಅಳಿಸಿ ಹಾಕಿದ್ದು ಸಣ್ಣ ಸಾಧನೆಯೇನೂ ಆಗಿರಲಿಲ್ಲ. ಆದರೆ ಆ ಸಾಧನೆಯ ಹಿಂದೆ ನಿಷೇಧಿತ ಔಷಧಿಗಳ (ಡ್ರಗ್ಸ್) ಪ್ರಭಾವವಿತ್ತು ಎಂಬುದನ್ನು ಆತ ಒಂದು ತಿಂಗಳ ಹಿಂದೆ ಬಹಿರಂಗವಾಗಿಯೇ ಒಪ್ಪಿಕೊಂಡ. ನಿಷೇಧಿತ ಔಷಧಗಳನ್ನು ಸೇವಿಸದೇ ತಾನು ಅಂಥ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ ಎಂದೂ ಹೇಳಿದ. ಇದೀಗ ಆಸ್ಕರ್ ಪಿಸ್ಟೋರಿಯಸ್ ಎಂಬ ‘ಬ್ಲೇಡ್ ರನ್ನರ್’ ತಪ್ಪು ಮಾಡಿ ಜೈಲು ಸೇರಿದ್ದಾನೆ.
  ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪಿಸ್ಟೋರಿಯಸ್ ಸಾಕಷ್ಟು ಸುದ್ದಿ ಮಾಡಿದ್ದ. ಎರಡೂ ಕಾಲುಗಳಿಲ್ಲದ ಈತ, ಕಾರ್ಬನ್ ಫೈಬರ್‍ನಿಂದ ತಯಾರಿಸಲಾದ ಕೃತಕ ಕಾಲುಗಳಿಂದ ಓಡಿ ಕಾಲುಳ್ಳವರನ್ನೂ ನಾಚಿಸಿದ್ದ. ಆತನ ಓಟ ಎಷ್ಟು ಆಕರ್ಷಣೀಯವೆಂದರೆ, ಕಾಲಿದ್ದವರೂ ಬೆರಗಾಗುವಷ್ಟು. ಆದ್ದರಿಂದಲೇ ನೂರು ಮೀಟರ್ ಓಟದ ವಿಶ್ವಚಾಂಪಿಯನ್ ಉಸೇನ್ ಬೋಲ್ಟ್ ನಂತೆಯೇ ಭಾರೀ ತಾರಾ ವರ್ಚಸ್ಸನ್ನು ಗಳಿಸಿಕೊಂಡ. ಬ್ಲೇಡ್‍ನಂತಹ ಕೃತಕ ಕಾಲುಗಳನ್ನು ಹೊಂದಿರುವುದರಿಂದ ‘ಬ್ಲೇಡ್ ರನ್ನರ್' ಅನ್ನುವ ಹೊಸ ಪದಪ್ರಯೋಗವೊಂದೂ ಆತನಿಗಾಗಿ ಹುಟ್ಟಿಕೊಂಡಿತು. ದಕ್ಷಿಣ ಆಫ್ರಿಕದಾದ್ಯಂತ ಆತನ ಬೃಹತ್ ಕಟೌಟ್‍ಗಳು, ಪ್ಲೆಕ್ಸ್ ಗಳೂ ಕಾಣಿಸಿಕೊಂಡವು. ಆತನ ಜೀವನೋತ್ಸಾಹ, ಆತ್ಮವಿಶ್ವಾಸಗಳೆಲ್ಲ ಭಾಷಣಗಳ ವಸ್ತುವಾಗಿ ಬಿಟ್ಟುವು. ಶಿಕ್ಷಕರು ಒಂದಲ್ಲ ಒಂದು ಸಂದರ್ಭದಲ್ಲಿ ಆತನನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಆತ ಖ್ಯಾತನಾಗಿ ಬಿಟ್ಟಿದ್ದ. ಆದರೆ ಇದೀಗ ಆತ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾನೆ. ಅದರ ಜೊತೆಗೇ ಆತನ ಬದುಕಿನ ಇನ್ನೊಂದು ಮಗ್ಗುಲೂ ತೆರೆದುಕೊಳ್ಳತೊಡಗಿದೆ. ತನ್ನ ಪ್ರೇಯಸಿ ರೀವಾ ಸ್ಟಿನ್‍ಕ್ಯಾಂಪ್‍ಳನ್ನು ಕಳೆದವಾರ ಗುಂಡಿಟ್ಟು ಕೊಂದ ಈ ಬ್ಲೇಡ್ ರನ್ನರ್‍ನ ವಯಸ್ಸು ಬರೇ 26. ಈ ಸಣ್ಣ ಪ್ರಾಯದಲ್ಲೇ ಈತನ ಬದುಕಿನಲ್ಲಿ 6 ಹೆಣ್ಣು ಮಕ್ಕಳ ಪ್ರವೇಶವಾಗಿದೆ. ಓರ್ವಳನ್ನು ಕೊಂದಿದ್ದಾನೆ. ಉಳಿದವರನ್ನು ಕೈಬಿಟ್ಟಿದ್ದಾನೆ. ಆತನ ಸಿಟ್ಟಿನ ಬಗ್ಗೆ, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿರುವುದರ ಬಗ್ಗೆಯೆಲ್ಲಾ ಮಾಧ್ಯಮಗಳಲ್ಲಿ ಇದೀಗ ಸುದ್ದಿಗಳು ಬರತೊಡಗಿವೆ..
   ನಿಜವಾಗಿ ಇವತ್ತು ರೋಲ್ ಮಾಡೆಲ್‍ಗಳ ಭಾರೀ ಕೊರತೆಯಿದೆ. ರಾಜಕಾರಣಿಗಳಂತೂ ರೋಲ್ ಮಾಡೆಲ್‍ಗಳ ಪಟ್ಟಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ. ಸತ್ಯ, ಪ್ರಾಮಾಣಿಕತೆ, ಮನುಷ್ಯತ್ವಕ್ಕೆಲ್ಲಾ ರಾಜಕಾರಣಿಗಳ ಪಟ್ಟಿಯಲ್ಲಿ ಮಾದರಿಗಳು ಸಿಗಲು ಸಾಧ್ಯವೇ ಇಲ್ಲ ಅನ್ನುವ ನಂಬಿಕೆ ಸಾರ್ವತ್ರಿಕವಾಗಿ ಬಿಟ್ಟಿದೆ. ಹೀಗಿರುವಾಗ ರಾಜಕಾರಣಿಗಳನ್ನು ಬಿಟ್ಟರೆ ಉಳಿದಂತೆ ಮಾಧ್ಯಮಗಳಲ್ಲಿ ಅತ್ಯಂತ ಸುದ್ದಿಯಲ್ಲಿರುವುದು ಒಂದೋ ಸಿನಿಮಾ ತಾರೆಯರು ಇಲ್ಲವೇ ಕ್ರೀಡಾಪಟುಗಳು. ಇವರಿಗಾಗಿ ಎಲ್ಲ ಪತ್ರಿಕೆಗಳು ಪ್ರತಿದಿನವೂ ಪುಟಗಳನ್ನು ಮೀಸಲಿಟ್ಟಿರುತ್ತವೆ. ಟಿ.ವಿ. ಚಾನೆಲ್‍ಗಳಲ್ಲೂ ಇವರಿಗಾಗಿ ಜಾಗ ಇರುತ್ತವೆ. ಇಂಥ ಹೊತ್ತಲ್ಲಿ, ಯುವ ಪೀಳಿಗೆಯು ಇವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಳ್ಳದೇ ಇನ್ನಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಇಷ್ಟಕ್ಕೂ, ಇಂಥ ಮಾದರಿಗಳು  ಪಿಸ್ಟೋರಿಯಸ್‍ನಂತೆ ತಲೆತಗ್ಗಿಸಿ ಕೂತರೆ ಅವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಂಡಿರುವ ಯುವ ಸಮೂಹದ ಮೇಲೆ ಅದು ಎಂಥ ಪರಿಣಾಮ ಬೀರಬಹುದು? ತಮ್ಮ ಮಾದರಿ ವ್ಯಕ್ತಿ ವಂಚನೆಯ ಮೂಲಕ ವಿಶ್ವದಾಖಲೆ ಮಾಡಿದ್ದಾನೆ ಎಂದು ಗೊತ್ತಾದರೆ ಅದು ಯುವ ಪೀಳಿಗೆಯನ್ನು, ‘ಎಲ್ಲರೂ ಹೀಗೆಯೇ’ ಅನ್ನುವ ಭಾವಕ್ಕೆ ಕೊಂಡೊಯ್ಯದೇ? ವಂಚನೆ, ಅನೈತಿಕ ಬದುಕು, ಕುಡಿತ.. ಮುಂತಾದುವುಗಳನ್ನೆಲ್ಲ ಹಗುರವಾಗಿ ಪರಿಗಣಿಸಲು, ಅವುಗಳನ್ನು ತಪ್ಪುಗಳ ಪಟ್ಟಿಯಿಂದ ಹೊರ ಹಾಕಿ ಬಿಡಲು ಕಾರಣವಾಗದೇ? ಪ್ರಸಿದ್ಧಿ ಪಡೆಯಬೇಕಾದರೆ ಸರಿ-ತಪ್ಪುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಅವು ತೀರ್ಮಾನಿಸದೇ?
   ಯಾವುದೇ ಒಂದು ಪೀಳಿಗೆ ದೇಶದ ಪಾಲಿಗೆ ಪ್ರಯೋಜನಕಾರಿಯಾಗಬೇಕಾದರೆ ಅದು ಆಯ್ಕೆ ಮಾಡಿಕೊಳ್ಳುವ ಮಾದರಿ ವ್ಯಕ್ತಿತ್ವಗಳು ಎಲ್ಲ ರೀತಿಯಲ್ಲೂ ಮಾದರಿಗಳಾಗಿರಬೇಕಾದುದು ಬಹಳ ಅಗತ್ಯ. ತಪ್ಪು ವ್ಯಕ್ತಿತ್ವಗಳು ಯುವ ಸಮೂಹದ ಮಾದರಿ ಪಟ್ಟಿಯಲ್ಲಿ ಸೇರಿಕೊಂಡರೆ ತಪ್ಪು ವ್ಯಕ್ತಿತ್ವಗಳ ತಯಾರಿಗಷ್ಟೇ ಅದು ಪ್ರೇರಕವಾದೀತು. ದುರಂತ ಏನೆಂದರೆ, ಇಂದಿನ ಜಗತ್ತಿನಲ್ಲಿ ಪಿಸ್ಟೋರಿಯಸ್‍ನಂಥ ತಪ್ಪು ವ್ಯಕ್ತಿತ್ವಗಳೇ ಯುವ ಸಮೂಹಕ್ಕೆ ಮಾದರಿಗಳಾಗುತ್ತಿದ್ದಾರೆ ಅನ್ನುವುದು. ಆದ್ದರಿಂದ ಯುವ ಪೀಳಿಗೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಬೇಕಾಗಿದೆ. ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಪ್ರಾಯದಲ್ಲಿ ಸಿನಿಮಾ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿರುವವರ ಮಿತಿಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಸಬೇಕಾಗಿದೆ. ಮಾಧ್ಯಮಗಳ ನಿರ್ದಿಷ್ಟ ಪುಟಗಳಲ್ಲಿ ಪ್ರತಿ ದಿನವೂ ಕಾಣಿಸಿಕೊಳ್ಳುವ ಮಾಡೆಲ್‍ಗಳು ಯಾವ ಸಂದರ್ಭದಲ್ಲೂ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಅವರಾಚೆಗಿನ ಚಾರಿತ್ರಿಕ ವ್ಯಕ್ತಿತ್ವಗಳನ್ನು ಮಾದರಿಯಾಗಿ ಯುವ ಸಮೂಹಕ್ಕೆ ಪರಿಚಯಿಸಬೇಕಾಗಿದೆ. ಇಲ್ಲದಿದ್ದರೆ ಯೌವನವನ್ನು ನಾಶಪಡಿಸಿಕೊಂಡ ಅನೇಕಾರು ಪಿಸ್ಟೋರಿಯಸ್‍ಗಳು ನಮ್ಮಲ್ಲೂ ಉದಯಿಸಿಯಾರು.

Monday, 11 February 2013

ನಮ್ಮ ನಮ್ಮ ತಲೆಗಳನ್ನು ರಕ್ಷಿಸಿಕೊಳ್ಳೋಣ

ಸರಬ್ಜಿತ್ ಸಿಂಗ್‍

   ಕಾಶ್ಮೀರಿಗಳನ್ನು ದೇಶದ್ರೋಹಿಗಳು, ಉಗ್ರವಾದಿಗಳೆಂದು ಕರೆಯುವುದಕ್ಕಾಗಿ ನೆಪಗಳನ್ನು ಹುಡುಕುತ್ತಾ ತಿರುಗಾಡುತ್ತಿರುವವರಿಗೆ ತೀವ್ರ ನಿರಾಶೆಯಾಗುವ ಸುದ್ದಿಯೊಂದು ಕಾಶ್ಮೀರದಿಂದ ಹೊರಬಿದ್ದಿದೆ. ‘ಅಫ್ಝಲ್ ಗುರುವಿಗೆ ನೇಣಾದುದನ್ನು ಪರಿಗಣಿಸಿ ಸರಬ್ಜಿತ್ ಸಿಂಗ್‍ಗೆ ನೇಣು ವಿಧಿಸಬಾರದು..' ಎಂದು ಜಮ್ಮು-ಕಾಶ್ಮೀರ್ ಲಿಬರೇಶನ್ ಫ್ರಂಟ್(ಜೆ.ಕೆ.ಎಲ್.ಎಫ್.)ನ ನಾಯಕ ಯಾಸಿನ್ ಮಲಿಕ್ ಪಾಕ್ ಸರಕಾರದೊಂದಿಗೆ ವಿನಂತಿಸಿದ್ದಾರೆ. ‘ಹಾಗೇನಾದರೂ ಮಾಡಿದರೆ, ಅದು ಒಂದು ಕೊಲೆ ಆಗಬಹುದೇ ಹೊರತು ಶಿಕ್ಷೆಯಲ್ಲ’ ಎಂದೂ ಅವರು ಹೇಳಿದ್ದಾರೆ. ಅಫ್ಝಲ್ ಗುರುವನ್ನು ನೇಣಿ ಗೇರಿಸಿದುದನ್ನು ಪ್ರತಿಭಟಿಸಿ 24 ಗಂಟೆ ಸತ್ಯಾಗ್ರಹ ನಡೆಸಿದ ಈ ವ್ಯಕ್ತಿಯಿಂದ ಇಂಥದ್ದೊಂದು ಹೇಳಿಕೆಯನ್ನು, 'ಲಡ್ಡು ತಿಂದು ಅಫ್ಝಲ್‍ನ ನೇಣಿಗೆ ಸಂತೋಷಪಟ್ಟ’ ಬಿಜೆಪಿ-ಸಂಘಪರಿವಾರವು ನಿರೀಕ್ಷಿಸಿರುವ ಸಾಧ್ಯತೆ ಖಂಡಿತ ಇಲ್ಲ.
   ನಿಜವಾಗಿ, ಅಫ್ಝಲ್ ಗುರುವಿಗೆ ಗಲ್ಲಾಗಿರುವುದರಿಂದ ಅತ್ಯಂತ ಆತಂಕಕ್ಕೆ ಒಳಗಾಗಿರುವುದು ಸರಬ್ಜಿತ್ ಸಿಂಗ್‍ನ ಕುಟುಂಬ. ಹರ್ಯಾಣದ ಈ ವ್ಯಕ್ತಿಗೆ ಪಾಕ್ ನ್ಯಾಯಾಲಯ ಈಗಾಗಲೇ ಮರಣ ದಂಡನೆ ವಿಧಿಸಿದೆ. ಪಾಕ್ ನೆಲದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಸರಬ್ಜಿತ್‍ನ ಮೇಲಿದೆ. ಅಫ್ಝಲ್ ಗುರುವಿಗೆ ಗಲ್ಲಾಗಲಿ ಎಂದು ಈ ದೇಶದಲ್ಲಿ ಯಾವಾಗೆಲ್ಲ ಕೂಗು ಕೇಳಿ ಬರುತ್ತದೋ ಆವಾಗೆಲ್ಲಾ ಸರಬ್ಜಿತ್ ಕುಟುಂಬದಲ್ಲಿ ಭೀತಿ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ, ಸರಬ್ಜಿತ್‍ನ ಗಲ್ಲು ಒಂದು ಹಂತದ ವರೆಗೆ ಅಫ್ಝಲ್ ಗುರುವಿನ ಗಲ್ಲಿನೊಂದಿಗೆ ತಳಕು ಹಾಕಿ ಕೊಂಡಿದೆ. ಅಫ್ಝಲ್‍ನನ್ನು ಭಾರತವು ನೇಣಿಗೇರಿಸಿದರೆ ಪಾಕಿಸ್ತಾನವು ಸರಬ್ಜಿತ್‍ನನ್ನು ನೇಣಿಗೇರಿಸಲಿದೆ ಎಂಬೊಂದು ಸುದ್ದಿಯು ಅನೇಕ ಬಾರಿ ಮಾಧ್ಯಮಗಳಲ್ಲಿ ಹರಿದಾಡಿದೆ. ಆ ಸುದ್ದಿಯನ್ನು ‘ವಿಳಾಸ ಇಲ್ಲದ ಸುದ್ದಿ' ಎಂದು ತಳ್ಳಿ ಹಾಕಿ ಬಿಡಬಹುದಾದರೂ ಆಳದಲ್ಲಿ, ‘ಇದ್ದರೂ ಇದ್ದೀತು' ಅನ್ನುವ ಅನುಮಾನ ಆ ಕುಟುಂಬ ದಲ್ಲಷ್ಟೇ ಅಲ್ಲ, ಜನಸಾಮಾನ್ಯರಲ್ಲೂ ಇದೆ. ಬಹುಶಃ ಸರಬ್ಜಿತ್ ಸಿಂಗ್ ಈ ವರೆಗೆ ಬದುಕುಳಿದಿರುವುದು ಅಫ್ಝಲ್ ಗುರುವಿನ ಕಾರಣದಿಂದಲೋ ಏನೋ. ಆದರೆ ‘ಲಡ್ಡು ತಿಂದು ಸಾವನ್ನು ಸಂಭ್ರಮಿಸುವ ವರ್ಗಕ್ಕೆ' ಇವೆಲ್ಲ ಮುಖ್ಯವಾಗುವ ಸಾಧ್ಯತೆಯೇ ಇಲ್ಲ. ಅಫ್ಝಲ್ ಗುರುವನ್ನು ಮುಂದಿಟ್ಟುಕೊಂಡು ಈ ವರ್ಗ ಈ ದೇಶದಲ್ಲಿ ಓಟು ಕೇಳಿದೆ. ಮುಸ್ಲಿಮರನ್ನು ದೇಶದ್ರೋಹಿಗಳೆಂದು ಚಿತ್ರಿಸುವುದಕ್ಕೆ ಗುರುವನ್ನು ಪರೋಕ್ಷವಾಗಿ ಬಳಸಿಕೊಂಡಿದೆ. ಮಾತ್ರವಲ್ಲ, ಕಸಬ್ ಮತ್ತು ಗುರು ಇನ್ನೂ ಜೀವಂತವಿರುತ್ತಿದ್ದರೆ, ಮುಂದಿನ ಚುನಾವಣೆಯಲ್ಲಿ ಅವರನ್ನು ದುರುಪಯೋಗಿಸುವ ಎಲ್ಲ ಸಾಧ್ಯತೆಯೂ ಇತ್ತು. ಈ ಅವಕಾಶವನ್ನು ಸದ್ಯ ಕಾಂಗ್ರೆಸ್ ಕಸಿದುಕೊಂಡಿರುವುದರಿಂದ ಈ ವರ್ಗವು ಇದೀಗ ಕಾಶ್ಮೀರದಲ್ಲಾಗುವ ಪ್ರತಿಭಟನೆಯನ್ನು ಭಾರೀ ಕುತೂಹಲದಿಂದ ವೀಕ್ಷಿಸುತ್ತಿದೆ. ಯಾಕೆಂದರೆ, ಮುಂದಿನ ಚುನಾವಣೆಯಲ್ಲಿ ದೇಶಭಕ್ತಿಯ ಭಾಷಣ ಬಿಗಿಯಲು ಒಂದಷ್ಟು ದೇಶದ್ರೋಹಿ ಕತೆಗಳ ಅಗತ್ಯವಿದೆ. ಒಂದು ವೇಳೆ ಸರಬ್ಜಿತ್‍ಗೆ ಗಲ್ಲಾಗಿ ಬಿಟ್ಟರೆ ಅದಕ್ಕಾಗಿ ಸಂಭ್ರಮಿಸುವ ಸಾಧ್ಯತೆಯಿರುವುದು ಈ ವರ್ಗ ಮಾತ್ರ. ಆ ಮೊಲಕ ಪಾಕಿಸ್ತಾನವನ್ನು ನಿಂದಿಸುವುದಕ್ಕೆ ಮತ್ತು ಸಾವನ್ನು ಓಟಾಗಿ ಪರಿವರ್ತಿಸುವುದಕ್ಕೆ ಅವಕಾಶವಿದೆಯಲ್ಲವೇ?
   ಅಂದಹಾಗೆ, ಕಸಬ್‍ನ ಬಳಿಕ ಇದೀಗ ಅಫ್ಝಲ್ ಗುರುವನ್ನು ನೇಣಿಗೇರಿಸುವ ಮೂಲಕ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಒಳ್ಳೆಯ ತಯಾರಿ ನಡೆಸಿದೆ. ಹತ್ಯಾಕಾಂಡದ ಆರೋಪಿಯೊಬ್ಬ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತಗೊಳ್ಳುತ್ತಿರುವಾಗ ಕೆಲವೊಂದು ತಲೆಗಳನ್ನು ಉರುಳಿಸದೇ ಆತನನ್ನು ಎದುರಿಸುವುದಕ್ಕೆ ಸಾಧ್ಯವಾಗಲಾರದು ಎಂದು ಕಾಂಗ್ರೆಸ್ ಭಾವಿಸಿರುವಂತಿದೆ. ಆದ್ದರಿಂದಲೇ ರಾಹುಲ್ ಗಾಂಧಿಯ ಕೈಯಲ್ಲಿ ಎರಡು ತಲೆಗಳನ್ನು ಕೊಟ್ಟು ಮೋದಿಯನ್ನು ಎದುರಿಸುವುದಕ್ಕೆ ಸಜ್ಜಾಗಿ ನಿಲ್ಲಿಸಿದೆ. ಇಷ್ಟಕ್ಕೂ, ಅಫ್ಝಲ್ ಮತ್ತು ಕಸಬ್ ಎಂಬ ಪ್ರಭಾವಿ ಅಸ್ತ್ರಗಳನ್ನು ಕಳಕೊಂಡು ಕುಸಿದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಮ ಮಂದಿರವನ್ನು ಆಯ್ಕೆ ಮಾಡಿಕೊಂಡರೆ ಕಾಂಗ್ರೆಸ್ ಇನ್ನೊಂದು ಹೆಜ್ಜೆ ಮುಂದಿಡಲೂ ಬಹುದು. ಬಿಜೆಪಿಗಿಂತ ಮೊದಲೇ ರಾಮಮಂದಿರಕ್ಕೆ ಅಡಿಗಲ್ಲನ್ನು ಹಾಕಿ ಬಿಜೆಪಿಯ ಬಾಯಿ ಮುಚ್ಚಿಸುವುದಕ್ಕೂ ಪ್ರಯತ್ನಿಸ ಬಹುದು. ಕಾಂಗ್ರೆಸ್‍ನ ಸದ್ಯದ ಧಾವಂತವನ್ನು ನೋಡಿದರೆ ಅದು ಯಾವುದಕ್ಕೂ ಹೇಸುವ ಸ್ಥಿತಿಯಲ್ಲಿಲ್ಲ. ಬಿಜೆಪಿಗೆ ಸದ್ಯ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಅರ್ಹತೆಯಿಲ್ಲ ಅನ್ನುವುದು ಕಾಂಗ್ರೆಸ್‍ಗೆ ಗೊತ್ತು. ಅಭಿವೃದ್ಧಿಯ ಮಾತಾಡಿದರೆ ಜನ ನಂಬುವ ಸಾಧ್ಯತೆಯೂ ಇಲ್ಲ. ಆದ್ದರಿಂದ ಬಿಜೆಪಿ ಭಯೋತ್ಪಾದನೆ ಮತ್ತು ರಾಮಮಂದಿರವನ್ನು ಮುಂದಿಟ್ಟುಕೊಂಡೇ ಮುಂದಿನ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯಿಂದ ಆ ಎರಡೂ ಅಸ್ತ್ರಗಳನ್ನು ಕಸಿದುಕೊಳ್ಳುವುದಕ್ಕೆ ಕಾಂಗ್ರೆಸ್ ತೀರ್ಮಾನಿಸಿರುವ ಸಾಧ್ಯತೆಯಿದೆ. ಅದರ ಭಾಗವಾಗಿಯೇ ಎರಡು ತಲೆಗಳನ್ನು ಉರುಳಿಸಲಾಗಿದೆ. ಒಂದು ವೇಳೆ ಬಿಜೆಪಿಯು ರಾಮಮಂದಿರದ ಬಗ್ಗೆ ಆಂದೋಲನ ನಡೆಸಿದರೆ ಆ ಅಸ್ತ್ರವನ್ನೂ ಕಸಿಯುವುದಕ್ಕೆ ತಂತ್ರ ರೂಪಿಸಬಹುದು.
   ದುರಂತ ಏನೆಂದರೆ, ಅಕ್ಕಿ, ಗೋಧಿ, ಸಕ್ಕರೆ ಸಹಿತ ದಿನ ನಿತ್ಯದ ಆಹಾರ ಪದಾರ್ಥಗಳು ಬೆಲೆ ಏರಿಸಿಕೊಂಡು ಜನಸಾಮಾನ್ಯರ ಕೊರಳು ಹಿಂಡುತ್ತಿರುವಾಗ ಈ ದೇಶದ ಪ್ರಮುಖ ಎರಡು ರಾಜಕೀಯ ಪಕ್ಷಗಳು ತಲೆಗಳನ್ನು ಉರುಳಿಸುವ ಲೆಕ್ಕಾಚಾರದಲ್ಲಿ ತೊಡಗಿವೆ ಅನ್ನುವುದು. ಒಂದು ಪಕ್ಷ ತಲೆ ಹಾರಿಸುವಾಗ ಇನ್ನೊಂದು ಪಕ್ಷ ಲಡ್ಡು ಹಂಚುತ್ತದೆ. ಇಂಥ ಪಕ್ಷಗಳು ಈ ದೇಶವನ್ನು ಎಲ್ಲಿಗೆ ಕೊಂಡೊಯ್ದಾವು? ತಲೆಗಳ ಹೊರತು ಜನರ ಮುಂದೆ ಹೇಳಿಕೊಳ್ಳುವುದಕ್ಕೆ ಅವುಗಳ ಬಳಿ ಬೇರೇನೂ ಇಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
   ಏನೇ ಆಗಲಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ಮೋದಿಗೆ ಪ್ರತಿ ಸವಾಲು ಎಸೆಯಲು ಕಾಂಗ್ರೆಸ್ ಗರಿಷ್ಠ ಶ್ರಮಿಸುತ್ತಾ ಇದೆ. ಮೋದಿಯ ಕೈಯಲ್ಲಿರುವ 2 ಸಾವಿರ ತಲೆಗಳಿಗಿಂತ ಪ್ರಭಾವಶಾಲಿಯಾದ ಎರಡು ತಲೆಗಳನ್ನು ಅದು ಈಗಾಗಲೇ ತನ್ನ ಬತ್ತಳಿಕೆಯಲ್ಲಿ ಪೇರಿಸಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಇನ್ನಷ್ಟು ತಲೆಗಳ ಅಗತ್ಯ ಬೀಳಲೂ ಬಹುದು. ಅಗತ್ಯ ಬಿದ್ದರೆ ಸರಬ್ಜಿತ್ ಸಿಂಗ್‍ನನ್ನು ಶೀಘ್ರ ಗಲ್ಲಿಗೇರಿಸುವಂತೆ ಒಳಗಿಂದೊಳಗೇ ಪಾಕ್‍ಗೆ ಒತ್ತಡ ಹೇರಲೂ ಬಹುದು. ಆದ್ದರಿಂದ ಓಟು ಮುಗಿಯುವ ವರೆಗೆ ನಮ್ಮ ನಮ್ಮ ತಲೆಗಳನ್ನು ಉರುಳದಂತೆ ಕಾಪಾಡಿಕೊಳ್ಳೋಣ.

Wednesday, 6 February 2013

‘ಪಾಶಿ’ಗೆ ಒಳಗಾಗುವ ಮಕ್ಕಳ ಮಧ್ಯೆ ನಾವು-ನೀವು?

ಸ್ನೇಹ

  ವಿದ್ಯಾರ್ಥಿ- ಯುವಸಮೂಹದ ಬಗ್ಗೆ ಈ ದೇಶದಲ್ಲಿ ದೊಡ್ಡದೊಂದು ನಿರೀಕ್ಷೆಯಿದೆ. ಹೆತ್ತವರು, ಶಿಕ್ಷಕರು, ಸಂಘಟನೆಗಳು, ರಾಜಕೀಯ ಪಕ್ಷಗಳು.. ಎಲ್ಲರೂ ಈ ವರ್ಗದ ಮೇಲೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಭ್ರಷ್ಟಮುಕ್ತ, ಅತ್ಯಾಚಾರಮುಕ್ತ, ಕೆಡುಕು ಮುಕ್ತ ದೇಶವಾಗಿ ಭಾರತವನ್ನು ಕಟ್ಟಲು ಈ ಸಮೂಹಕ್ಕೆ ಸಾಧ್ಯವಾಗಲಿದೆ ಎಂಬ ನಂಬುಗೆಯನ್ನು ಆಗಾಗ ವ್ಯಕ್ತಪಡಿಸಲಾಗುತ್ತಿದೆ. ಆದರೆ ಇವೇ ಯುವ ಸಮೂಹ ಕೆಲವೊಮ್ಮೆ ಸುದ್ದಿ ಮಾಡುತ್ತಿರುವ ರೀತಿಯನ್ನು ನೋಡುವಾಗ ಆಘಾತವಾಗುತ್ತದೆ. ದೇಶ ಇಂಥವರ ಕೈಯಲ್ಲಿ ಸುರಕ್ಷಿತವಾಗಿ ಉಳಿಯ ಬಲ್ಲುದೇ ಅನ್ನುವ ಅನುಮಾನಗಳೂ ಕಾಡುತ್ತವೆ. 1. ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯ ಮೂವರು ಪಿಯುಸಿ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಸಮುದ್ರ ಕಿನಾರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಯೇ ಈ ಸಾವಿಗೆ ಕಾರಣ. 2. ಹೈಸ್ಕೂಲ್ ಮಟ್ಟದಲ್ಲೇ ಮಾದಕ ಚಟವನ್ನು ಅಂಟಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸ್ನೇಹ ಎಂಬ ವಿಧ್ಯಾರ್ಥಿನಿ  ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಡ್ರಗ್ಸ್ ಗೆ ಹೆತ್ತವರು ದುಡ್ಡು ಕೊಡದಿರುವುದೇ ಆತ್ಮಹತ್ಯೆಗೆ ಕಾರಣ..
  ಕಳೆದ ವಾರದ ಹತ್ತಾರು ಸುದ್ದಿಗಳ ಮಧ್ಯೆ ಅತ್ಯಂತ ಆಳವಾಗಿ ಇರಿದ ಎರಡು ಸುದ್ದಿಗಳಿವು. ನಿಜವಾಗಿ, ಸಂಪಾದಕೀಯಕ್ಕೆ ಈ ಎರಡು ಸುದ್ದಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವೇನೂ ಇರಲಿಲ್ಲ. ಒಂದೇ ದಿನ ನಡೆದ ಈ ಎರಡು ಘಟನೆಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಕಟವಾಗಿಯೂ ಇರಲಿಲ್ಲ. ಆದರೆ ಸಾವಿಗೀಡಾದ ಈ ಮೂರು ಜೀವಗಳಿಗೆ 'ಮೂರು' ಎಂಬ ಗುರುತಿಗಿಂತ ಹೊರತಾದ ಮಗ್ಗುಲುಗಳಿವೆ. ಬದುಕಿನಲ್ಲಿ ಸಾಧನೆಗಳನ್ನೆಲ್ಲ ಮಾಡಿ ವೃದ್ಧಾಪ್ಯದಲ್ಲಿ ಸಾವಿಗೀಡಾಗುವ ಹಿರಿಯರಂಥಲ್ಲ ಈ ಮೂರು ಜೀವಗಳು. ನಿಜವಾಗಿ, ಪ್ರೇಮಕ್ಕೋ ಮಾದಕ ವ್ಯಸನಕ್ಕೋ ಬಲಿ ಬಿದ್ದು ಬದುಕನ್ನೇ ಕೊನೆಗೊಳಿಸುವ ದೊಡ್ಡದೊಂದು ಎಳೆಪ್ರಾಯದ ಗುಂಪು ನಮ್ಮ ಮಧ್ಯೆ ಇವೆ. ಅವು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡುವುದಿಲ್ಲ. ರಾಜಕೀಯ ವೇದಿಕೆಗಳಲ್ಲಿ ಚರ್ಚೆಗೊಳಗಾಗುವುದಿಲ್ಲ. ಸಂಪಾದಕೀಯಕ್ಕೆ ವಸ್ತುವಾಗುವುದಿಲ್ಲ.. ಹೀಗೆ ಯಾರ ಗಮನಕ್ಕೂ ಬಾರದೇ ಕಳೆದು ಹೋಗುವ ಮಕ್ಕಳ ಬಗ್ಗೆ ಗಂಭೀರ ಚರ್ಚೆಯಾಗಬೇಕಾದ ಅಗತ್ಯ ಇದೆ. ಅಂದಹಾಗೆ, ತಮಗೆ ತಾವೇ ಪಾಶಿ ಕೊಟ್ಟುಕೊಳ್ಳಬೇಕಾದಂಥ ಯಾವ ತಪ್ಪನ್ನೂ ಯಾವ ಮಕ್ಕಳೂ ಮಾಡಿರುವುದಿಲ್ಲ. ಹೆತ್ತವರು ಮಕ್ಕಳಿಗೆ ಬುದ್ಧಿವಾದ ಹೇಳುವುದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದೂ ಅಲ್ಲ. ಒಂದು ವೇಳೆ ತಮ್ಮ ಬುದ್ಧಿವಾದದಿಂದ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿಯಾರು ಎಂಬ ಸಣ್ಣ ಅನುಮಾನ ಬಂದರೂ ಸಾಕು, ಯಾವ ಹೆತ್ತವರೂ ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಲಾರರು. ಯಾಕೆಂದರೆ, ಎಳೆಪ್ರಾಯದ ಮಕ್ಕಳ ಸಾವು ಅತ್ಯಂತ ಹೆಚ್ಚು ಬಾಧಿಸುವುದು ಹೆತ್ತವರನ್ನು. ಅವರು ಮಕ್ಕಳ ಮೇಲೆ ದೊಡ್ಡದೊಂದು ಕನಸಿನ ಗೋಪುರವನ್ನೇ ಕಟ್ಟಿರುತ್ತಾರೆ. ತಮ್ಮ ಮಗು ಸಮಾಜದಲ್ಲಿ ಇಂತಿಂಥ ಪಾತ್ರವನ್ನು ನಿರ್ವಹಿಸಬೇಕು ಎಂದು ಆಸೆ ಪಟ್ಟಿರುತ್ತಾರೆ. ವೃದ್ಧಾಪ್ಯದಲ್ಲಿ ಆಸರೆಯಾಗಬಹುದು ಎಂದು ನಿರೀಕ್ಷಿಸಿರುತ್ತಾರೆ. ಹೀಗಿರುವಾಗ, ಬುದ್ಧಿವಾದವು ಮಗುವಿನ ಪ್ರಾಣವನ್ನೇ ಕಸಿದುಕೊಳ್ಳುವುದಾದರೆ ಯಾರು ತಾನೇ ಅಂಥ ಬುದ್ಧಿವಾದಕ್ಕೆ ಮುಂದಾದಾರು?
ರಾಜಕೀಯದ ಸುತ್ತ ಕೇಂದ್ರೀಕೃತಗೊಂಡಿರುವ ಮಾಧ್ಯಮ ಚರ್ಚೆಗಳು ಆಗಾಗ ಇಂಥ ಸಾವುಗಳ ಸುತ್ತವೂ ತಿರುಗಬೇಕಾದ ಅಗತ್ಯ ಇದೆ. ರಾಜಕೀಯವನ್ನು ಒಂದು ದಿನದ ಮಟ್ಟಿಗೆ ಬದಿಗಿರಿಸಿ, ಎಳೆಯರ ‘ಪಾಶಿ’ಗಳಿಗೆ ಮುಖಪುಟವನ್ನು ಮೀಸಲಿರಿಸಿದರೆ ಖಂಡಿತ ಓದುಗರ ಚರ್ಚಾವಸ್ತುವೇ ಬದಲಾಗುವುದಕ್ಕೆ ಸಾಧ್ಯವಿದೆ. ಇಷ್ಟಕ್ಕೂ, ದೆಹಲಿಯಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಮಾಧ್ಯಮಗಳು ವಾರಗಟ್ಟಲೆ ಮುಖಪುಟದಲ್ಲಿಟ್ಟು ಚರ್ಚಿಸಿದ್ದರಿಂದಲೇ ವ್ಯಾಪಕ ಪ್ರತಿಭಟನೆಗೆ, ವರ್ಮಾ ಆಯೋಗದ ನೇಮಕಕ್ಕೆ ಮತ್ತು ಅದರ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡುವುದಕ್ಕೆ ಕಾರಣವಾಗಿದೆಯಲ್ಲವೇ? ಒಂದು ವೇಳೆ, ಆ ಘಟನೆಗೆ ಆ ಮಟ್ಟದಲ್ಲಿ ಮಾಧ್ಯಮ ಪ್ರಚಾರ ಸಿಗದೇ ಇರುತ್ತಿದ್ದರೆ, ಇಷ್ಟು ಶೀಘ್ರವಾಗಿ ಕಾನೂನೊಂದು ನಿರ್ಮಾಣವಾಗುವುದಕ್ಕೆ ಸಾಧ್ಯವಿತ್ತೇ?
  ಯುವಸಮೂಹವನ್ನು ದೇಶದ ಭವಿಷ್ಯ ಎಂದು ಕೊಂಡಾಡುವಾಗ ಈ ಸಮೂಹವನ್ನು ಜವಾಬ್ದಾರಿಯುತ ವರ್ಗವಾಗಿ ಬೆಳೆಸಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಾಗಿದೆ. ಮದ್ಯ, ಡ್ರಗ್ಸ್, ಪ್ರೀತಿ-ಪ್ರೇಮಗಳ ಸುಳಿಯಲ್ಲಿ ಈ ಸಮೂಹ ಕಳೆದುಹೋಗದಂತೆ ಜಾಗರೂಕತೆ ಪಾಲಿಸಬೇಕಾದ ತುರ್ತಿದೆ. ಕೆಡುಕು, ಅಶ್ಲೀಲತೆಗಳು, ಜಾಗತಿಕವಾಗಿ ವ್ಯಾಪಿಸಿಕೊಂಡಿರುವ ಸಂದರ್ಭ ಇದು. ಮಕ್ಕಳು ಕೆಡುವುದಕ್ಕೆ ನೂರಾರು ದಾರಿಗಳು ನಮ್ಮ ಸುತ್ತ-ಮುತ್ತಲೇ ತೆರೆದುಕೊಂಡಿರುವಾಗ ಅವುಗಳಿಂದ ತಪ್ಪಿಸಿ ಬೆಳೆಸುವ ಹೆತ್ತವರ ಹೊಣೆಗಾರಿಕೆ ಸಣ್ಣದೇನಲ್ಲ. ಇಂಥ ಸಂದರ್ಭಗಳಲ್ಲಿ ಹೆತ್ತವರು ಮತ್ತು ಶಿಕ್ಷಕರು ಸಂಯಮದಿಂದ ವರ್ತಿಸಬೇಕು. ಯಾಕೆಂದರೆ ಮಕ್ಕಳಿಗೆ ತಪ್ಪು ಮಾಡಲು ಗೊತ್ತಿರುತ್ತದೆಯೇ ಹೊರತು, ಎದುರಾಗುವ ಸವಾಲುಗಳಿಗೆ ಉತ್ತರಿಸುವುದು ಗೊತ್ತಿರುವುದಿಲ್ಲ. ಒಂದು ರೀತಿಯಲ್ಲಿ ಹೆತ್ತವರ ಶಿಕ್ಷೆಯ ಬಗ್ಗೆ ಹತ್ತು-ಹಲವು 'ಭಯ'ಗಳನ್ನು ಮನದಲ್ಲಿ ಪೋಷಿಸುತ್ತಾ ಅವು ಬದುಕುತ್ತವೆ. ಅಂಥ ಭಯಗಳನ್ನು ಇಮ್ಮಡಿಗೊಳಿಸುವ ರೂಪದಲ್ಲಿ ಹೆತ್ತವರ ವರ್ತನೆ ಇರಬಾರದು. ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರೀತಿಯಿಂದ ಮಾತಾಡಿಸಿ ಆಪ್ತತೆ ಬೆಳೆಸಿಕೊಳ್ಳಬೇಕು.
  ಏನೇ ಆಗಲಿ, ಸಮುದ್ರ ಕಿನಾರೆಯಲ್ಲೋ ಫ್ಯಾನಿನಲ್ಲೋ  ನೇತಾಡಿಕೊಂಡು ಕಳೆದು ಹೋಗಬೇಕಾದವರಲ್ಲ ನಮ್ಮ ಮಕ್ಕಳು. ಅವರು ಈ ಸಮಾಜದ ಮುತ್ತುಗಳು. ಅವರನ್ನು ಈ ದೇಶ ಅವಲಂಬಿಸಿಕೊಂಡಿದೆ. ಹೆತ್ತವರು, ಸಮಾಜ, ಸಂಘಟನೆಗಳು.. ಎಲ್ಲವೂ ಅವರ ಮೇಲೆ ಭರವಸೆ ಇಟ್ಟು ಬದುಕುತ್ತಿವೆ. ಆದ್ದರಿಂದ, ಯುವ ಸಮೂಹವನ್ನು ಜತನದಿಂದ ಕಾಪಾಡಬೇಕಾದ ಹೊಣೆಗಾರಿಕೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕಿದೆ. ಹೆತ್ತವರಿಗೋ ಸಮಾಜಕ್ಕೋ ಹೆದರಿ ಪಾಶಿಗೆ ಮುಂದಾಗುವ ಮಕ್ಕಳಿಗೆ ಧೈರ್ಯ ತುಂಬಿ ತಿದ್ದಬೇಕಿದೆ. ‘ಸಾವು ಯಾವುದಕ್ಕೂ ಪರಿಹಾರ ಅಲ್ಲ..’ ಎಂಬ ಜಾಗೃತಿ ಪ್ರಜ್ಞೆಯನ್ನು ಯುವ ಪೀಳಿಗೆಯಲ್ಲಿ ತುಂಬಬೇಕಿದೆ.

Tuesday, 29 January 2013

ನಿಷ್ಠೆ ಬದಲಿಸುವ ರಾಜಕಾರಣಿಗಳೂ ಚರ್ಚೆಗೆ ಒಳಗಾಗದ ಭ್ರೂಣಗಳೂ


1. ಬಿಜೆಪಿ-ಆರೆಸ್ಸೆಸ್‍ಗಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದ ಗೃಹ ಸಚಿವ ಶಿಂಧೆ..
2. ಯಡಿಯೂರಪ್ಪ ನಿಷ್ಠ 13 ಶಾಸಕರಿಂದ ರಾಜ್ಯಪಾಲರ ಭೇಟಿ. ಸ್ಪೀಕರ್ ನಾಪತ್ತೆ..
3. ಟಿಪ್ಪು ಸುಲ್ತಾನ್ ವಿವಿಯನ್ನು ಬೆಂಬಲಿಸಿದ ಅನಂತಮೂರ್ತಿ..
4. ಬೆಳಗಾಂ ಜಿಲ್ಲೆಯ ಸಂಕೇಶ್ವರದ ಹಿರಣ್ಯಕೇಶಿ ನದಿದಡದಲ್ಲಿ ಹೂತಿಡಲಾಗಿದ್ದ 16 ಭ್ರೂಣಗಳು ಪತ್ತೆ..

   ಕಳೆದೊಂದು ವಾರದಲ್ಲಿ ಒಂದಲ್ಲ ಒಂದು ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಶೀರ್ಷಿಕೆಗಳಿವು. ವಿಶೇಷ ಏನೆಂದರೆ, ‘ಭ್ರೂಣ'ದ ಸುದ್ದಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸುದ್ದಿಗಳೂ ಪತ್ರಿಕೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಚರ್ಚೆಗೊಳಗಾಗಿವೆ. ಅವುಗಳಿಗೆ ಸಂಬಂದಿಸಿದ ಲೇಖನಗಳು ಪ್ರಕಟವಾಗಿವೆ. ಟಿ.ವಿ. ಗಳಂತೂ, ಶೆಟ್ಟರ್ ಸರಕಾರ ಉಳಿಯುತ್ತೋ ಉರುಳುತ್ತೋ ಅನ್ನುವ ಧಾಟಿಯಲ್ಲಿ ಗಂಟೆಗಟ್ಟಲೆ ಚರ್ಚಿಸಿವೆ. ಟಿಪ್ಪು ಸುಲ್ತಾನ್ ಎಷ್ಟು ಶೇಕಡಾ ಮತಾಂಧ ಮತ್ತು ಎಷ್ಟು ಶೇಕಡಾ ಅಲ್ಲ ಎಂಬ ಬಗ್ಗೆ ‘ಗಂಭೀರ' ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಆದರೆ ಪತ್ರಿಕೆಗಳಲ್ಲಾಗಲಿ, ಟಿ.ವಿ.ಗಲ್ಲಾಗಲಿ, ‘ಭ್ರೂಣ'ಗಳು ಚರ್ಚೆಗೆ ಒಳಗಾಗಿಯೇ ಇಲ್ಲ. ಭ್ರೂಣಕ್ಕೆ ಗಂಭೀರ ಚರ್ಚಾವಸ್ತುವಾಗುವ ಅರ್ಹತೆಯನ್ನು ಮಾಧ್ಯಮಗಳು ಬಿಡಿ, ಮಹಿಳಾವಾದಿಗಳು ಇಲ್ಲವೇ ಸಂಘಟನೆಗಳು ಕೂಡ  ಈ ವರೆಗೆ ನೀಡಿಲ್ಲ. ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನಾತ್ಮಕ ಮನಸ್ಥಿತಿಯನ್ನು ಹುಟ್ಟು ಹಾಕಿದಂತೆಯೇ ಭ್ರೂಣಹತ್ಯೆಯ ವಿರುದ್ಧ ಚಳವಳಿಯ ಪ್ರಜ್ಞೆಯನ್ನು ಹುಟ್ಟು ಹಾಕುವಲ್ಲಿ ಮಾಧ್ಯಮಗಳು ಮತ್ತು ಮಹಿಳಾ ಸಂಘಟನೆಗಳು ಮತ್ತೆ ಮತ್ತೆ ಸೋಲುತ್ತಲೇ ಇವೆ.
  ನಿಜವಾಗಿ, ಭ್ರೂಣ ಎಂಬುದು ಗೋವಿನಂತೆ ಅಲ್ಲ. ಭ್ರೂಣಕ್ಕೂ ಮನುಷ್ಯನಿಗೂ ಕರುಳ ಬಳ್ಳಿಯ ಸಂಬಂಧ ಇದೆ. ಭ್ರೂಣ ಹತ್ಯೆ ಎಂಬುದು ಓರ್ವ ಮನುಷ್ಯನ ದಾರುಣ ಹತ್ಯೆಗೆ, ಕೊಲೆಗೆ ಸಮಾನ. ದುರಂತ ಏನೆಂದರೆ, ಭ್ರೂಣಗಳಿಗೆ ರಾಜಕೀಯ ಇಮೇಜು ಇಲ್ಲದಿರುವುದು. ಆದರೆ ಗೋವಿಗೆ ಅದು ಲಭ್ಯವಾಗಿ ಬಿಟ್ಟಿದೆ. ಅಕ್ರಮವಾಗಿ ಗೋವಿನ ಸಾಗಾಟ ನಡೆಯುತ್ತದೋ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾಯುವ ತಂಡಗಳು ನಮ್ಮ ನಡುವೆ ಇವೆ. ಅಕ್ರಮ ಗೋ ಸಾಗಾಟದ ಆರೋಪ ಹೊರಿಸಿ  ನಡುಬೀದಿಯಲ್ಲೇ ಥಳಿಸುವ, ಬೆತ್ತಲೆಗೊಳಿಸುವ ಗೋ ಪ್ರೇಮಿಗಳೂ  ನಮ್ಮಲ್ಲಿದ್ದಾರೆ. ಗೋಹತ್ಯೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಗಲ್ಲಿಗಲ್ಲಿಗಳಲ್ಲಿ ಪ್ರತಿಭಟನೆ ನಡೆಯುತ್ತದೆ. ವಿಚಾರಗೊಷ್ಟಿಗಳೂ ಸಂವಾದಗಳೂ ನಡೆಯುತ್ತವೆ. ಆದರೆ ಭ್ರೂಣಗಳಿಗೆ ಗೋವಿನ ಸಾಮರ್ಥ್ಯ ಇಲ್ಲದೇ ಇರುವುದರಿಂದ ಗೋವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅವು ಹತ್ಯೆಗೆ ಒಳಗಾಗುತ್ತಿದ್ದರೂ  ಗಂಭೀರ ಸಮಸ್ಯೆಯಾಗಿ ಗುರುತಿಸಿಕೊಳ್ಳುತ್ತಲೇ ಇಲ್ಲ. ಒಂದು ವೇಳೆ ಭ್ರೂಣಗಳಿಗೆ ಮಾತಾಡುವ ಸಾಮರ್ಥ್ಯ  ಇರುತ್ತಿದ್ದರೆ, ಅವುಗಳ ಮಾತಿನ ಧಾಟಿಯಾದರೂ ಹೇಗಿರುತ್ತಿತ್ತು? ನಾಲ್ಕು ಕಾಲಿನ ಪ್ರಾಣಿಗೆ ಈ ದೇಶದಲ್ಲಿ ಇರುವ ಗೌರವ ಮತ್ತು ಆದರ, ಮನುಷ್ಯರಿಗೆ ಇಲ್ಲವೇ ಎಂದು ಅದು ಪ್ರಶ್ನಿಸುತ್ತಿತ್ತಲ್ಲವೇ? ಗೋ ಹತ್ಯೆಯನ್ನು ತಡೆಯುವ ಸ್ಪಷ್ಟವಾದ ಕಾನೂನು ಇನ್ನೂ ಜಾರಿಯಾಗಿಲ್ಲದಿದ್ದರೂ ಈಗಾಗಲೇ ಒಂದು ತಂಡ ಗೋವುಗಳ ಕಾವಲಿಗಾಗಿ ಬೀದಿಗಿಳಿದಿರುವುದನ್ನು ಉಲ್ಲೇಖಿಸುತ್ತಾ ‘ನೀವೇಕೆ ಹೀಗೆ’ ಎಂದು ಜನ ಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಹೋರಾಟಗಾರರನ್ನು ಅದು ಚುಚ್ಚುತ್ತಿತ್ತಲ್ಲವೇ? ತಮ್ಮ ರಕ್ಷಣೆಗಾಗಿ ಲೋಕಾಯುಕ್ತದಂಥ ಪ್ರಬಲ ಕಾನೂನನ್ನು ರಚಿಸುವಂತೆ ಒತ್ತಾಯಿಸುತ್ತಿತ್ತಲ್ಲವೇ?
   ಮನುಷ್ಯ ಹೆಚ್ಚೆಚ್ಚು ಆಧುನಿಕಗೊಂಡಂತೆಯೇ ಆಲೋಚನೆಗಳಲ್ಲಿ ಹೆಚ್ಚೆಚ್ಚು ವಿಕಾರಗಳು ತುಂಬಿಕೊಳ್ಳುತ್ತಲೂ ಇವೆ. ಆಧುನಿಕ ಯುವ ಪೀಳಿಗೆಯು ಇಂಗ್ಲಿಷ್ ಭಾಷೆಯನ್ನು ಮಾತ್ರವಲ್ಲ, ಇಂಗ್ಲಿಷ್ ಮೌಲ್ಯಗಳನ್ನು ಕೂಡ ಧಾರಾಳವಾಗಿ ಅಪ್ಪಿಕೊಳ್ಳುತ್ತಿವೆ. ತಮಗೆ ದೊರಕದ ಅವಕಾಶಗಳು ಮಕ್ಕಳಿಗೆ ದೊರಕಲಿ ಎಂಬ ಅಭಿಲಾಷೆಯಿಂದ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿರುವ ಪೋಷಕರು ಒಂದೆಡೆಯಾದರೆ; ನೈತಿಕ, ಅನೈತಿಕತೆಗಳ ಪರಿವೆಯೇ ಇಲ್ಲದೆ ‘ಆಧುನಿಕ' ವಾಗುತ್ತಿರುವ ಮಕ್ಕಳು ಇನ್ನೊಂದು ಕಡೆ. ಈ ಹಿಂದೆ ನಾವು ಖರೀದಿಸುತ್ತಿದ್ದ ವಸ್ತುಗಳೆಲ್ಲ ರಿಪೇರಿ ಆಗುತ್ತಿದ್ದುವು. ರೇಡಿಯೋ, ಸೈಕಲ್, ಚಪ್ಪಲಿ, ಟಾರ್ಚು, ವಾಚು... ಎಲ್ಲವೂ. ಆದರೆ ಇವತ್ತು ರಿಪೇರಿಗೆ ಒಗ್ಗುವಂಥ ವಸ್ತುಗಳು ತಯಾರಾಗುತ್ತಲೇ ಇಲ್ಲ. ಎಲ್ಲವೂ ಬಳಸಿ ಎಸೆಯುವಂಥದ್ದು. ‘ಆಧುನಿಕ' ಯುವ ಸಮೂಹ ಬೆಳೆಯುತ್ತಿರುವುದೂ ಬಹುತೇಕ ಈ ರೀತಿಯಲ್ಲೇ. ಅವು ರಿಪೇರಿಗೆ ಹೊಂದಿಕೊಳ್ಳುತ್ತಿಲ್ಲ. ನಿಜವಾಗಿ ರಿಪೇರಿ ಎಂಬುದು ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಹೆಚ್ಚೆಚ್ಚು ಪಕ್ವವಾಗುತ್ತಾ ಬೆಳೆಯುವುದರ ಹೆಸರು. ಹಾನಿಗೀಡಾದ ಸೈಕಲನ್ನು ಮೆಕ್ಯಾನಿಕ್ ರಿಪೇರಿ ಮಾಡುತ್ತಿರುವಾಗ, ಹತ್ತಿರವೇ ನಿಂತ ಮಾಲಿಕ ಅದನ್ನು ನೋಡುತ್ತಿರುತ್ತಾನೆ. ಸೈಕಲ್ ಹಾಳಾಗುವುದಕ್ಕಿರುವ  ಕಾರಣಗಳ ಬಗ್ಗೆ ಚರ್ಚಿಸುತ್ತಾನೆ. ಮುಂದೆ ಹೇಗೆಲ್ಲ ಸೈಕಲನ್ನು ಬಳಸಬಾರದು ಎಂಬುದನ್ನು ಕಲಿತುಕೊಳ್ಳು ತ್ತಾನೆ. ಒಂದು ರೀತಿಯಲ್ಲಿ ರಿಪೇರಿ ಎಂಬುದು ಮನುಷ್ಯನ ಪಾಲಿಗೆ ಒಂದು ಪುನರವಲೋಕನವಿದ್ದಂತೆ. ಆದರೆ ಆಧುನಿಕ ಇಂಗ್ಲಿಷ್ ಮೌಲ್ಯಗಳಲ್ಲಿ ಈ ‘ರಿಪೇರಿ'ಗೆ ಅವಕಾಶವೇ ಸಿಗುತ್ತಿಲ್ಲ. ಆದ್ದರಿಂದಲೇ ಗಂಡನ ವಿರುದ್ಧ ಪತ್ನಿ; ಮಕ್ಕಳ ವಿರುದ್ಧ ಹೆತ್ತವರು.. ವಿವಿಧ ಆರೋಪಗಳನ್ನು ಹೊರಿಸುತ್ತಾ ಕೋರ್ಟಿನ ಮೆಟ್ಟಲು ಹತ್ತುತ್ತಿರುವುದು. ದಿನಂಪ್ರತಿ ಅತ್ಯಾಚಾರದ, ಭ್ರಷ್ಟಾಚಾರದ ಸುದ್ದಿಗಳು ಕೇಳಿ ಬರುತ್ತಲೇ ಇರುವುದು.
   ಭ್ರಷ್ಟಾಚಾರ ಮತ್ತು ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನೆ ಕಾಣಿಸಿಕೊಂಡಂತೆಯೇ ಭ್ರೂಣ ಹತ್ಯೆಯ ವಿರುದ್ಧವೂ ಯೋಜಿತ ಚಳವಳಿಯೊಂದು ಹುಟ್ಟಿಕೊಳ್ಳಬೇಕಾದ ಅಗತ್ಯ ಇದೆ. ಆಸ್ಪತ್ರೆಗಳೆಂಬ ನಾಲ್ಕು ಗೋಡೆಗಳ ಒಳಗೆ ನಡೆಯುತ್ತಿರುವ ಮನುಷ್ಯ ಹತ್ಯೆಯನ್ನು, ‘ಪಾತಕ’ ಎಂದು ಆಧುನಿಕ ಜಗತ್ತಿಗೆ ಮನವರಿಕೆ ಮಾಡಿಸಬೇಕಾದ ಅನಿವಾರ್ಯತೆ  ಇದೆ. ಭ್ರೂಣಗಳಿಗೆ ಬಾಯಿ ಬರುವುದಿಲ್ಲ ಎಂಬುದು ಅವುಗಳ ಮೇಲಿನ ಕ್ರೌರ್ಯಕ್ಕೆ ಸಬೂಬು ಆಗಬಾರದು. ಇಷ್ಟಕ್ಕೂ ಪ್ರಾಣಿಗಳನ್ನು ಪ್ರೀತಿಸುವ, ಅವುಗಳ ಹಕ್ಕುಗಳಿಗಾಗಿ ಧರಣಿ ನಡೆಸುವ ಜಗತ್ತಿನಲ್ಲಿ, ಭ್ರೂಣಗಳಿಗಾಗಿ ಒಂದು ಗಂಟೆಯ ಪ್ರತಿಭಟನೆ ನಡೆಸುವುದಕ್ಕೂ ಜನರಿಲ್ಲ ಅನ್ನುವ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಯಾವುದರ ಸೂಚನೆ? ಮನುಷ್ಯನ ಅರಿವಿನ ಮಟ್ಟ ವಿಸ್ತಾರವಾಗುತ್ತಾ ಹೋದಂತೆಯೇ ನೈತಿಕ ಅರಿವಿನ ಮಟ್ಟದಲ್ಲಿ ಕುಸಿತವಾಗುತ್ತಾ ಬರುತ್ತಿರುವುದೇಕೆ? ಜಗಮಗಿಸುವ ಮಾಲ್‍ಗಳು, ನಗರಗಳು, ಸಿನಿಮಾಗಳ ಮಧ್ಯೆ ಮನುಷ್ಯರು ಮನುಷ್ಯತ್ವವನ್ನೇ ಕಳಕೊಳ್ಳುತ್ತಿರುವರೇ?
   ಏನೇ ಆಗಲಿ, ನಿಷ್ಠೆ ಬದಲಿಸಿದ 13 ಶಾಸಕರಿಗಿಂತ ಬೆಳಗಾವಿಯಲ್ಲಿ ಪತ್ತೆಯಾದ 16 ಭ್ರೂಣಗಳು ಖಂಡಿತ ಹೆಚ್ಚು ತೂಕವುಳ್ಳವು. ಒಂದು ವೇಳೆ ಈ ಭ್ರೂಣಗಳನ್ನು ಬೆಳೆಯಲು ಬಿಡುತ್ತಿದ್ದರೆ, 16 ಮೌಲ್ಯವಂತ ಮನುಷ್ಯರು ಈ ಸಮಾಜಕ್ಕೆ ದೊರಕುತ್ತಿದ್ದರೇನೋ. ಆದ್ದರಿಂದ ಭ್ರೂಣಹತ್ಯೆಯಂಥ ಕ್ರೌರ್ಯಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಲಿ. ನಿಷ್ಠೆ ಬದಲಿಸುವ ರಾಜಕಾರಣಿ ಮತ್ತು ಭ್ರೂಣಹತ್ಯೆ ಇವೆರಡರಲ್ಲಿ ಭ್ರೂಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿ.

Wednesday, 16 January 2013

ನರಕದ ಟಿಕೇಟನ್ನು ಖರೀದಿಸುತ್ತಿರುವ ‘ಶಿಕ್ಷಿತ’ ಮಕ್ಕಳು..


   ದೆಹಲಿ ಅತ್ಯಾಚಾರ ಪ್ರಕರಣದ ಸುತ್ತ ಪತ್ರಿಕೆಗಳು ಗಂಭೀರ ಚರ್ಚೆಯಲ್ಲಿ ತೊಡಗಿರುವಾಗಲೇ ದೆಹಲಿಯಲ್ಲೊಂದು ಆಘಾತಕಾರೀ ಘಟನೆ ನಡೆದಿತ್ತು. ಸುದ್ದಿ ಮಾಧ್ಯಮಗಳ ಮಂದಿ ತಮ್ಮ ಕ್ಯಾಮರಾ ಮತ್ತು ಪೆನ್ನನ್ನು ‘ಅತ್ಯಾಚಾರದ' ಸುತ್ತಲೇ ಕೇಂದ್ರೀಕರಿಸಿದ್ದರಿಂದ ಆ ಘಟನೆ ಅಷ್ಟಾಗಿ ಸುದ್ದಿಯಾಗಲಿಲ್ಲ. ಉನ್ನತ ಶಿಕ್ಷಣ ಪಡೆದ ದೆಹಲಿಯ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಯನ್ನು ಬೀದಿಗಟ್ಟಿದ್ದರು. ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗಬಹುದೆಂದು ನಂಬಿದ್ದ ಮಕ್ಕಳೇ ಹೊರಹಾಕಿದಾಗ, ಆ ತಾಯಿಯು ಹಿರಿಯ ನಾಗರಿಕರ ನ್ಯಾಯಾಧೀಕರಣವನ್ನು ಸಂಪರ್ಕಿಸಿದರು. ಇದೀಗ ಈ ನ್ಯಾಯಾಧೀಕರಣವು ಆ ಇಬ್ಬರೂ ‘ಸುಶಿಕ್ಷಿತ' ಮಕ್ಕಳನ್ನು ಕರೆದು ಛೀಮಾರಿ ಹಾಕಿದೆಯಲ್ಲದೇ ಇಬ್ಬರು ಮಕ್ಕಳೂ ಪ್ರತಿ ತಿಂಗಳು ತಲಾ 4 ಸಾವಿರ ರೂಪಾಯಿಯಂತೆ ತಾಯಿಗೆ ಕೊಡಬೇಕೆಂದೂ ಮಾತ್ರವಲ್ಲ, ತಾಯಿಗೆ ಮನೆಯಲ್ಲೇ ಆಸರೆ ಒದಗಿಸಬೇಕೆಂದೂ ನಿರ್ದೇಶನ ನೀಡಿದೆ..
  ಇಷ್ಟಕ್ಕೂ, ಇದೇನೂ ಒಂಟಿ ಪ್ರಕರಣ ಅಲ್ಲ. ಹೆಲ್ಪ್ ಏಜ್ ಇಂಡಿಯಾ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸರ್ವೇಯ ಪ್ರಕಾರ, ಈ ದೇಶದಲ್ಲಿ ಶೇ. 31ರಷ್ಟು ಹಿರಿಯರು ತಮ್ಮ ಮನೆಯಲ್ಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆತ್ತವರನ್ನು ಪೀಡಿಸುವುದರಲ್ಲಿ ಅತ್ಯಂತ ಮುಂದಿರುವುದು ಗಂಡು ಮಕ್ಕಳೇ. ಇವರ ಸಂಖ್ಯೆ ಶೇ. 56. ದುರಂತ ಏನೆಂದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಹೆತ್ತವರು ಭಾಗ್ಯಶಾಲಿಗಳು. ನಗರ ಪ್ರದೇಶದಲ್ಲಿ ವಾಸಿಸುವ, ಅತ್ಯಂತ ಸುಶಿಕ್ಷಿತ ಮಕ್ಕಳೇ ತಮ್ಮ ಹೆತ್ತವರನ್ನು ಪೀಡಿಸುತ್ತಿದ್ದಾರೆ. ಪತಿ, ಪತ್ನಿ, ಮಕ್ಕಳು ಎಂಬ ಆಧುನಿಕ ಜೀವನ ಶೈಲಿಗೆ ಅಂಟಿಕೊಂಡಿರುವ ಈ ಮಕ್ಕಳು ಹೆತ್ತವರನ್ನು ಒಂಟಿಯಾಗಿಸಿ ನಗರಗಳಲ್ಲಿ ವಾಸಿಸುತ್ತಿದ್ದಾರೆ.. ಎಂದೆಲ್ಲಾ ಸರ್ವೇ ಅಭಿಪ್ರಾಯ ಪಟ್ಟಿದೆ.
   ನಿಜವಾಗಿ, ಈ ದೇಶದಲ್ಲಿ ದುರ್ಬಲ ಮತ್ತು ರೋಗಪೀಡಿತರಾದ ಹೆತ್ತವರ ಸ್ಥಿತಿ ಹೇಗಿದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸರ್ವೇಯ ಅಗತ್ಯವೇನೂ ಇಲ್ಲ. ನಗರಗಳ ಬೀದಿ; ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವೃದ್ಧಾಶ್ರಮಗಳಿಗೆ ಒಮ್ಮೆ ಭೇಟಿ ಕೊಟ್ಟರೆ, ಹೆತ್ತವರಿಗೆ ಈ ದೇಶ ಕೊಡುತ್ತಿರುವ ಗೌರವ ಏನೆಂಬುದು ಗೊತ್ತಾಗುತ್ತದೆ. ಒಂದು ಕಡೆ ದೇಶ ವೈಜ್ಞಾನಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಲೇ ಇದೆ. ಹೆಚ್ಚೆಚ್ಚು ಶಾಲೆ, ಕಾಲೇಜುಗಳು ನಿರ್ಮಾಣವಾಗುತ್ತಿವೆ. ಟ್ಯಾಬ್ಲೆಟ್‍ನಂತಹ ಅಗ್ಗದ ಕಂಪ್ಯೂಟರ್‍ಗಳನ್ನು ಸರಕಾರವೇ ಮಕ್ಕಳಿಗೆ ಒದಗಿಸುವ ಮೂಲಕ, ಶೈಕ್ಷಣಿಕ ಕ್ರಾಂತಿಗೆ ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ, ಅದೇ ಆಧುನಿಕ ಮಕ್ಕಳ ಹೆತ್ತವರು ತುಸು ಪ್ರೀತಿ, ಕರುಣೆಗಾಗಿ ಕೋರ್ಟು ಮೆಟ್ಟಲು ಹತ್ತುತ್ತಿದ್ದಾರೆ. ಅಂದ ಹಾಗೆ, ಶಿಕ್ಷಿತರಾಗುವುದು ಅಭಿವೃದ್ಧಿಯ ಮಾನದಂಡ ಎಂದಾದರೆ, ಆ ಅಭಿವೃದ್ಧಿಯಲ್ಲಿ ಹೆತ್ತವರೇಕೆ ಪ್ರತಿದಿನ ಅಭದ್ರತೆ ಅನುಭವಿಸುತ್ತಿದ್ದಾರೆ? ಓರ್ವ ವ್ಯಕ್ತಿ ಉನ್ನತ ಶಿಕ್ಷಣ ಪೂರೈಸಿ ಎಂಜನಿಯರೋ, ಡಾಕ್ಟರೋ ಆದರೆ ಈ ದೇಶ ಆತನನ್ನು ಶಿಕ್ಷಿತ ಎಂದು ಗುರುತಿಸುತ್ತದೆ. ಆತನಿಗೊಂದು ವಿಶೇಷ ವರ್ಚಸ್ಸು, ಗೌರವಾದರ ದೊರೆಯುತ್ತದೆ. ಅದೇ ವೇಳೆ ಓರ್ವ 7ನೇ ಕ್ಲಾಸಿಗೇ ಕಲಿಕೆಯನ್ನು ಕೊನೆಗೊಳಿಸಿದರೆ ಆತನಿಗೆ ಈ ಎಂಜಿನಿಯರ್‍ನ ಮುಂದೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಶಾಲೆ ಕಲಿಯದ ಪಶ್ಚಾತ್ತಾಪದಲ್ಲಿ ಪ್ರತಿಕ್ಷಣವೂ ನರಳುವಂತಹ ಸನ್ನಿವೇಶವೊಂದು ಆತನ ಮುಂದೆ ನಿರ್ಮಾಣವಾಗಿರುತ್ತದೆ. ಶೈಕ್ಷಣಿಕ ಅಭಿವೃದ್ಧಿಯ ಮಾನದಂಡದಂತೆ, ಡಾಕ್ಟರ್ ಬಹಳ ಸುಖೀ ಮತ್ತು ಆಧುನಿಕ ಮನುಷ್ಯ. ಕೃಷಿಯನ್ನೋ ಕೂಲಿಯನ್ನೋ ಕೆಲಸವಾಗಿ ಆಯ್ಕೆ ಮಾಡಿಕೊಂಡಿರುವ 7ನೇ ತರಗತಿಯ ಮನುಷ್ಯ ಈ ಅಭಿವೃದ್ಧಿಯ ಮಾನದಂಡದಂತೆ ಅತ್ಯಂತ ದುರ್ದೈವಿ. ಆತ ಯಾರ ಪಾಲಿಗೂ ಮಾದರಿ ಅಲ್ಲ.. ಬಹುಶಃ ಇಂಥದ್ದೊಂದು ಮಾನಸಿಕತೆ ಬಲವಾಗಿ ಬೇರೂರುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಆ ತಾಯಿ ಮತ್ತು ಹೆಲ್ಪ್ ಏಜ್ ಇಂಡಿಯಾದ ಸರ್ವೇಯು ಇನ್ನೊಂದು ಸತ್ಯವನ್ನು ಬಹಿರಂಗಕ್ಕೆ ತಂದಿದೆ. ಆಧುನಿಕ ಶಿಕ್ಷಣವು ಸುಖೀಯಾಗಿಸುವುದು ಅದನ್ನು ಪಡೆದವರನ್ನೇ ಹೊರತು ಅವರನ್ನು ಅವಲಂಬಿಸಿದವರನ್ನು ಅಲ್ಲ ಅನ್ನುವ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ. ಆದ್ದರಿಂದಲೇ ನಮ್ಮ ಶಿಕ್ಷಣ ಕ್ಷೇತ್ರ ಪುನರವಲೋಕನಕ್ಕೆ ತೆರೆದುಕೊಳ್ಳಬೇಕಾಗಿದೆ. ನಮ್ಮ ಶಿಕ್ಷಣದಲ್ಲಿ ಎಲ್ಲೋ ಒಂದು ಕಡೆ ದೋಷ ಇದೆ. ಈ ಶಿಕ್ಷಣಕ್ಕೆ ಹೆತ್ತವರನ್ನು ಗೌರವಿಸುವಂತಹ ವಾತಾವರಣ ಬೆಳೆಸಲು ಸಾಧ್ಯವಾಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಸಹೋದರಿಯರಂತೆ ಕಾಣುವಲ್ಲೂ ಸೋಲುತ್ತಿದೆ.
   ಯಾವ ಹೆತ್ತವರೂ ತಮ್ಮ ಮಕ್ಕಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಇಷ್ಟಪಡುವುದಿಲ್ಲ. ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದೂ ಇಲ್ಲ. ಹೆತ್ತವರ ಈ ವಿಶಾಲ ಮನಸ್ಥಿತಿಯಿಂದಾಗಿಯೇ ಹೆಚ್ಚಿನ ಮಕ್ಕಳು ಇವತ್ತು ಸಮಾಜದಲ್ಲಿ ಮರ್ಯಾದೆಯನ್ನು ಉಳಿಸಿಕೊಂಡಿರುವುದು. ಒಂದು ವೇಳೆ ವೃದ್ಧ ಹೆತ್ತವರೇನಾದರೂ ಬಾಯಿ ತೆರೆದರೆ, ಜನರ ಮುಂದೆ ಸುಭಗರಂತೆ ಫೋಸು ಕೊಡುವ ಎಷ್ಟೋ ಮಕ್ಕಳ ಬಣ್ಣ ಖಂಡಿತ ಬಯಲಾದೀತು. ಆದ್ದರಿಂದ ಹೆತ್ತವರ ಈ ಹೃದಯ ವೈಶಾಲ್ಯತೆಗೆ ಆಧುನಿಕ ಶಿಕ್ಷಿತ ವರ್ಗ ಗೌರವ ನೀಡಬೇಕಾಗಿದೆ. ಮಕ್ಕಳು,  ಹೆತ್ತವರನ್ನು ಬೀದಿ ಪಾಲು ಮಾಡುವುದು ಬಿಡಿ, ‘ಛೆ' ಎಂಬ ಪದವನ್ನು ಕೂಡ ಪ್ರಯೋಗಿಸಬಾರದು (17:23) ಎಂದು ಪವಿತ್ರ ಕುರ್‍ಆನ್ ತಾಕೀತು ಮಾಡಿದೆ. ಓರ್ವರ ಸ್ವರ್ಗ ಇಲ್ಲವೇ ನರಕವನ್ನು ನಿರ್ಣಯಿಸುವುದು ಅವರ ಹೆತ್ತವರು ಎಂದಿದ್ದೂ ಇಸ್ಲಾಮ್. ಹೆತ್ತವರು ಮುನಿಸಿಕೊಂಡಿದ್ದರೆ ಎಷ್ಟೇ ನಮಾಝ್, ಹಜ್ಜ್ ನಿರ್ವಹಿಸಿದರೂ ಮಕ್ಕಳಿಗೆ ಸ್ವರ್ಗ ಸಿಗಲಾರದು ಎಂದಿದ್ದೂ ಇಸ್ಲಾಮೇ. ಪ್ರಸವದ ಸಂದರ್ಭದಲ್ಲಿ ತಾಯಿ ಅನುಭವಿಸಿದ ಒಂದು ಕ್ಷಣದ ನೋವಿಗೆ ಮಕ್ಕಳು ಜೀವನ ಪೂರ್ತಿ ಸೇವೆ ಮಾಡಿದರೂ ಸಾಟಿಯಾಗಲಾರದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಒಂದು ರೀತಿಯಲ್ಲಿ, ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್‍ರು(ಸ) ಹೆತ್ತವರ ಸೇವೆಯನ್ನು ಸ್ವರ್ಗದ ಟಿಕೇಟು ಎಂದು ಮಾತ್ರವಲ್ಲ, ಶಿಕ್ಷಣದ ಮೂಲ ಪಾಠವಾಗಿ ಕಲಿಸಿದ್ದಾರೆ. ಹೆತ್ತವರನ್ನು ಬಸ್ ನಿಲ್ದಾಣದಲ್ಲಿ ತೊರೆದು ಬಿಡುವ, ಹೊರೆಯೆಂದು ಪರಿಗಣಿಸಿ ವೃದ್ಧಾಶ್ರಮಕ್ಕೆ ಅಟ್ಟುವವರನ್ನು ‘ನರಕ'ದ ಮನುಷ್ಯರೆಂಬ ಕಟು ಪಾಠವನ್ನು ಮೂಲಭೂತ ಶಿಕ್ಷಣವಾಗಿ ಕಲಿಸಿದ್ದಾರೆ. ಈ ಶಿಕ್ಷಣ ಇವತ್ತು ಸಾರ್ವತ್ರೀಕರಣಗೊಳ್ಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಮುಂದೊಂದು ದಿನ ನ್ಯಾಯಾಲಯಗಳ ಕಟಕಟೆಯಲ್ಲಿ ಹೆತ್ತವರು ಮತ್ತು ಮಕ್ಕಳೇ ತುಂಬಿ ಹೋದಾರು.

Monday, 7 January 2013

'ನಿರ್ಭಯ' ತೆರೆದ ಬಾಗಿಲನ್ನು ಮುಚ್ಚದಿರೋಣ


ಹೆಣ್ಣು ಕಳೆದ ಮೊರ್ನಾಲ್ಕು  ವಾರಗಳಿಂದ ಮಾಧ್ಯಮಗಳ ಮುಖಪುಟದಲ್ಲಿದ್ದಾಳೆ. ಆಕೆಯನ್ನು ಕೇಂದ್ರೀಕರಿಸಿ ಪತ್ರಿಕೆಗಳಲ್ಲಿ ಸುದ್ದಿ ರಚನೆಯಾಗತೊಡಗಿವೆ. ರಾಜಕಾರಣಿಗಳು, ನ್ಯಾಯಾಧೀಶರು, ಟಿ.ವಿ. ಚಾನೆಲ್‍ಗಳು.. ಎಲ್ಲರೂ ಹೆಣ್ಣಿನ ಬಗ್ಗೆ ಮಾತಾಡತೊಡಗಿದ್ದಾರೆ. ಧರ್ಮಗಳಲ್ಲಿ ಹೆಣ್ಣಿನ ಸ್ಥಾನ-ಮಾನ, ಆಧುನಿಕ ಜಗತ್ತಿನಲ್ಲಿ ಹೆಣ್ಣು ಸಾಗುತ್ತಿರುವ ದಿಕ್ಕು, ಆಕೆಯ ಬಟ್ಟೆ, ವರ್ತನೆ, ಪಾಶ್ಚಾತ್ಯ ಸಂಸ್ಕ್ರಿತಿಯ ಸರಿ-ತಪ್ಪುಗಳು, ಸಡಿಲ ಕಾನೂನುಗಳು.. ಎಲ್ಲವೂ ಚರ್ಚೆಗೊಳಗಾಗುತ್ತಿವೆ. ನಿಜವಾಗಿ, ಹೆಣ್ಣು ಹೀಗೆ ದಿಢೀರ್ ಆಗಿ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡದ್ದು ಪುಕ್ಕಟೆಯಾಗಿ ಅಲ್ಲ. ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರಕ್ಕೆ ಒಳಗಾಗುತ್ತಾ, 'ಗಂಭೀರ ಸಮಸ್ಯೆಗಳ ಪಟ್ಟಿಯಲ್ಲಿ ತನ್ನನ್ನೂ ಸೇರಿಸಿಕೊಳ್ಳಿ..' ಎಂದು ದೀರ್ಘ ಸಮಯದಿಂದ ಹೆಣ್ಣು ಮೊರೆಯಿಡುತ್ತಿದ್ದಳು. ಸದ್ಯ ಆ 20 ನಿಮಿಷಗಳು 15 ನಿಮಿಷಗಳಾಗಿ ಬದಲಾಗಿವೆ. ಒಂದು ವೇಳೆ 'ನಿರ್ಭಯ'ಳ ಮೇಲಿನ ಅತ್ಯಾಚಾರವು ದೆಹಲಿ ಬಿಟ್ಟು ದೇಶದ ಇನ್ನಾವುದೋ ಭಾಗದಲ್ಲಿ ಆಗಿರುತ್ತಿದ್ದರೆ ಪತ್ರಿಕೆಗಳ ಮುಖಪುಟದಲ್ಲಿ ಅದಕ್ಕೆ ಜಾಗ ಸಿಗುವ ಸಾಧ್ಯತೆಯೇ ಇರಲಿಲ್ಲ. ಈ ಮಟ್ಟದ ಪ್ರತಿಭಟನೆಗಳಾಗಲಿ, ಕಾನೂನು ರಚನೆಯ ಪ್ರಯತ್ನಗಳಾಗಲೀ ಆಗುತ್ತಲೂ ಇರಲಿಲ್ಲ. ವಿಶೇಷ ಏನೆಂದರೆ, 'ನಿರ್ಭಯ' ಈಗ ಎಲ್ಲರನ್ನೂ ಎಚ್ಚರಗೊಳಿಸಿದ್ದಾಳೆ. ಹೆಣ್ಣು ಮತ್ತು ಗಂಡಿನ ನಡುವೆ ಇರುವ ವ್ಯತ್ಯಾಸ, ಇರಲೇಬೇಕಾದ ಅಂತರಗಳ ಬಗ್ಗೆ ಧೈರ್ಯದಿಂದ ಮಾತಾಡುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾಳೆ. ಈ ಮೊದಲು ಹೆಣ್ಣಿನ ಉಡುಪನ್ನು ವಿಮರ್ಶಿಸುವುದನ್ನು ಮಹಿಳಾ ಆಯೋಗಗಳು ಮತ್ತು ಫೆಮಿನಿಸ್ಟ್ ಗಳು ಅಪರಾಧವೆಂಬಂತೆ ಪರಿಗಣಿಸುತ್ತಿದ್ದರು.  ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹೆಣ್ಣಿನ ಪಾತ್ರವೂ ಇದೆ ಎಂಬ ಬರಹ, ಪತ್ರಗಳನ್ನು ಪ್ರಕಟಿಸುವ ಧೈರ್ಯವನ್ನು ಪತ್ರಿಕೆಗಳು ಮಾಡಿದ್ದೂ ಕಡಿಮೆ. ಹಾಗಂತ ಅಂಥ ಬರಹಗಳ ಬಗ್ಗೆ ಸಂಪಾದಕೀಯ ಮಂಡಳಿಗೆ ಸಹಮತ ಇಲ್ಲ ಎಂದಲ್ಲ. ಸುಮ್ಮನೆ ರಿಸ್ಕ್ ಯಾಕೆ, ಮಹಿಳಾ ವಿರೋಧಿಗಳೆಂಬ ಹಣೆಪಟ್ಟಿಯನ್ನು ಯಾಕೆ ಹಚ್ಚಿಕೊಳ್ಳಬೇಕು ಎಂಬ ‘ಸುರಕ್ಷಿತ’ ನಿಲುವಿಗೆ ಹೆಚ್ಚಿನ ಪತ್ರಿಕೆಗಳು ಅಂಟಿಕೊಂಡಿದ್ದವು. ಆದರೆ ಸದ್ಯ ಈ ಮಡಿವಂತಿಕೆಯನ್ನು 'ನಿರ್ಭಯ' ಮುರಿದು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ಮಹಿಳೆಯರೇ ಮಹಿಳೆಯರ ಜೀವನ ವಿಧಾನವನ್ನು ವಿಮರ್ಶಿಸುವ ಧೈರ್ಯವನ್ನು ತೋರುತ್ತಿದ್ದಾರೆ. 'ಲೈಂಗಿಕ ದೌರ್ಜನ್ಯಕ್ಕೆ ಪುರುಷರಷ್ಟೇ ಮಹಿಳೆಯರೂ ಜವಾಬ್ದಾರರು..' ಎಂದು ಛತ್ತೀಸ್‍ಗಢ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಭಾ ರಾವ್ ಅಭಿಪ್ರಾಯಪಟ್ಟಿದ್ದಾರೆ. ಹೆಣ್ಣಿನ ಉಡುಪು ಮತ್ತು ವರ್ತನೆಗಳು ಪುರುಷರಿಗೆ ತಪ್ಪು ಸಂದೇಶವನ್ನು ಕೊಡುವಂತಿರುತ್ತವೆ, ಹೆಣ್ಣು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ..' ಎಂದಿದ್ದಾರೆ. ಮಮತಾ ಬ್ಯಾನರ್ಜಿಯವರೂ ಇಂಥದ್ದೇ ಅರ್ಥ ಬರುವ ಮಾತಾಡಿದ್ದಾರೆ. ಪುದುಚೇರಿ ಸರಕಾರವಂತೂ ತನ್ನ ಶಿಕ್ಷಣ ನೀತಿಗಳಲ್ಲೇ ಬದಲಾವಣೆ ತರಲು ನಿರ್ಧರಿಸಿದೆ. ಹುಡುಗ ಮತ್ತು ಹುಡುಗಿಯರಿಗೆ ಬೇರೆ ಬೇರೆ ಶಾಲಾ ಬಸ್‍ಗಳನ್ನು ವ್ಯವಸ್ಥೆ ಮಾಡುವುದು; ಹೆಣ್ಣು ಮಕ್ಕಳು ಸಮವಸ್ತ್ರದ ಮೇಲೆ ಓವರ್ ಕೋಟನ್ನು (ಮೇಲು ಹೊದಿಕೆ) ಧರಿಸುವುದು; ಮೊಬೈಲನ್ನು ನಿರ್ಬಂಧಿಸುವುದು; ಹುಡುಗ, ಹುಡುಗಿಯರ ನಡುವಿನ ಸಂಪರ್ಕವನ್ನು ಸಾಕಷ್ಟು ಮಟ್ಟಿಗೆ ಕಡಿತಗೊಳಿಸುವುದು.. ಮುಂತಾದ ಸುಧಾರಣಾ ನೀತಿಗಳ ಜಾರಿಗಾಗಿ ಅದು ಗಂಭೀರ ಪ್ರಯತ್ನಕ್ಕಿಳಿದಿದೆ.
  ಒಂದು ರೀತಿಯಲ್ಲಿ ನಿರ್ಭಯಳ ಸಾವು ನಿರ್ಭಯ ಸಮಾಜವೊಂದರ ರಚನೆಯ ಬಗ್ಗೆ ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಲು ಯಶಸ್ವಿಯಾಗಿದೆ. ಇಷ್ಟಕ್ಕೂ ಹೆಣ್ಣಿಗೆ ಒಂದಷ್ಟು ಹಿತವಚನಗಳನ್ನು ಹೇಳುವುದು, ಪುರುಷರ ತಪ್ಪುಗಳನ್ನು ಖಂಡಿಸುತ್ತಲೇ ಹೆಣ್ಣಿನ ಅತಿರೇಕಗಳ ಬಗ್ಗೆಯೂ ಮಾತಾಡುವುದು ಯಾಕೆ ಪುರಾತನ ಅನ್ನಿಸಿಕೊಳ್ಳಬೇಕು? ಯಾವುದೇ ಒಂದು ಸಮಸ್ಯೆಯ ಬಗ್ಗೆ ಚರ್ಚಿಸುವಾಗ ಅದರ ಎರಡೂ ಮಗ್ಗುಲುಗಳನ್ನು ಚರ್ಚಿಸಬೇಕಾದುದು ಅಗತ್ಯವಲ್ಲವೇ? ಮತ್ತೇಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಮಗ್ಗುಲು ಮಾತ್ರ ಚರ್ಚೆಗೊಳಗಾಗುವುದು? ಹೆಣ್ಣಿನ ಉಡುಪು, ಜೀವನ ವಿಧಾನ, ಸ್ವಚ್ಛಂದ ಬೆರೆಯುವಿಕೆಗಳನ್ನೆಲ್ಲ ವಿಮರ್ಶೆಗೊಡ್ಡುವುದು ಮಹಿಳಾ ವಿರೋಧಿಯೆಂದು ಯಾಕೆ ಗುರುತಿಸಿಕೊಳ್ಳಬೇಕು?  ವಿಮರ್ಶೆ, ಟೀಕೆಗಳಿಗೆ ಎಲ್ಲರೂ ಎಲ್ಲ ಕ್ಷೇತ್ರಗಳೂ ಮುಕ್ತವಾಗಿರುವುದೇ ಸುಧಾರಣೆಯ ದೃಷ್ಟಿಯಿಂದ ಹೆಚ್ಚು ಉತ್ತಮವಲ್ಲವೇ?
  ಆದ್ದರಿಂದಲೇ, ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸದ್ಯ ಕಾಣಿಸಿಕೊಂಡಿರುವ ಚರ್ಚೆಗಳು ಹೆಚ್ಚು ಇಷ್ಟವಾಗುವುದು. ಈ ಮೊದಲು ಮಾಧ್ಯಮಗಳು ಹೆಣ್ಣನ್ನು ಸೌಂದರ್ಯದ ಕಾರಣಕ್ಕಾಗಿ ಮಾತ್ರ ಚರ್ಚೆಗೆತ್ತಿಕೊಳ್ಳುತ್ತಿದ್ದುವು. ಸೆಲೆಬ್ರಿಟಿಗಳಿಗಾಗಿ ಪ್ರತ್ಯೇಕ ಪುಟಗಳನ್ನು ಮೀಸಲಿಟ್ಟು, ಅಲ್ಲಿ ಅವರ ಕಾಲು, ಕೈ, ಮೊಗುಗಳನ್ನು ವರ್ಣಿಸುತ್ತಾ, ಅವರಿಗೆ ಯಾರ ಯಾರ ಜೊತೆ ಯಾವ್ಯಾವ ಬಗೆಯ ಅಫೇರ್‍ಗಳಿವೆ ಎಂಬುದನ್ನೆಲ್ಲಾ 'ಗಂಭೀರ' ಸುದ್ದಿಗಳಂತೆ ಪ್ರಕಟಿಸುತ್ತಿದ್ದುವು. ಒಂದು ವೇಳೆ ಪತ್ರಿಕೆಗಳ ಮುಖಪುಟದಲ್ಲಿ ಹೆಣ್ಣೊಬ್ಬಳು ಕಾಣಿಸಿಕೊಳ್ಳಬೇಕಾದರೆ ಒಂದೋ ಆಕೆ ಸೆಲೆಬ್ರಿಟಿಯಾಗಿರಬೇಕು ಇಲ್ಲವೇ ರಾಜಕಾರಣಿಯಾಗಿರಬೇಕು ಎಂಬಂಥ ವಾತಾವರಣವನ್ನು ಅವು ಸೃಷ್ಟಿಸಿದ್ದುವು. ಸೆಲೆಬ್ರಿಟಿಗಳು ಎಲ್ಲಾದರೂ ಸಿನಿಮಾ ಚಿತ್ರೀಕರಣಕ್ಕೆ ಹೋಗಿ ಅಲ್ಲಿ ಅಭಿಮಾನಿಯೊಬ್ಬ ಅಸಭ್ಯವಾಗಿ ವರ್ತಿಸಿದರೆ ಅದು ಮುಖಪುಟದಲ್ಲಿ ಸುದ್ದಿಯಾಗುತ್ತಿತ್ತೇ ಹೊರತು, ಸಾಮಾನ್ಯ ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೀಡಾಗಿ ಸಾವಿಗೀಡಾದರೂ ಒಳಪುಟದಲ್ಲಿ ಒಂದು ಕಾಲಮ್‍ನ ಸುದ್ದಿಯಾಗಿ ಪ್ರಕಟವಾಗುತ್ತಿತ್ತು. ಹೆಣ್ಣೆಂದರೆ, ಅದು ಸಿನಿಮಾ ತಾರೆ ಮತ್ತು ಹೆಣ್ಣಿನ ಸಮಸ್ಯೆ ಎಂದರೆ ಅದು ಸಿನಿಮಾ ತಾರೆಯರ ಸಮಸ್ಯೆ ಎಂಬ ವಾತಾವರಣ ಇದ್ದುದರಿಂದಲೇ ಸಾಮಾನ್ಯ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, 'ನಿರ್ಭಯ'ಳ ಸಾವಿನ ವರೆಗೆ ಸುದ್ದಿಯಾಗದೇ ಸತ್ತು ಹೋಗುತ್ತಿದ್ದುದು. ಇದೀಗ ಪತ್ರಿಕೆಗಳ ಧೋರಣೆಯಲ್ಲಿ ಯಾವ ಮಟ್ಟದ ಬದಲಾವಣೆಯಾಗಿದೆಯೆಂದರೆ, 8ನೇ ತರಗತಿಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಶಿಕ್ಷಣ ಪ್ರತ್ಯೇಕವಾಗಿ ನಡೆಯಬೇಕು ಎಂದು ಅಭಿಪ್ರಾಯ ಪಡುವ 'ಪತ್ರ'ಗಳು ‘ದಿ ಹಿಂದೂ'ವಿನಂಥ ಪತ್ರಿಕೆಗಳಲ್ಲಿ ಪ್ರಕಟವಾಗುವಷ್ಟು. ಇದನ್ನು ಖಂಡಿತ ಸ್ವಾಗತಿಸಬೇಕು.
  ಏನೇ ಆಗಲಿ, 'ನಿರ್ಭಯ'ಳ ಸಾವು, ಸಾವಿಗೀಡಾಗಿರುವ ಮೌಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಈ ವರೆಗೆ ಮಾತಾಡುವುದಕ್ಕೆ ಯಾರು ಮಡಿವಂತಿಕೆ ತೋರುತ್ತಿದ್ದರೋ ಅವರೆಲ್ಲ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಷ್ಟು ಈ ಚರ್ಚಾವಲಯ ವಿಸ್ತಾರವಾಗುತ್ತಿದೆ. ಮಾಧ್ಯಮಗಳ ಧೋರಣೆಯಲ್ಲೂ ಒಂದು ಬಗೆಯ ಬದಲಾವಣೆ ಕಾಣಿಸುತ್ತಿದೆ. ಸಾಮಾನ್ಯ ಹೆಣ್ಣು ಮಗಳು ಪತ್ರಿಕೆಗಳ ಮುಖಪುಟದಲ್ಲಿ ಚರ್ಚೆಗೊಳಗಾಗುತ್ತಿದ್ದಾಳೆ. ಆಕೆಯ ಮೇಲಿನ ದೌರ್ಜನ್ಯಗಳು ಮುಖಪುಟದ ವಸ್ತುವಾಗುವಷ್ಟು ಮಹತ್ವಪೂರ್ಣ ಅನ್ನಿಸಿಕೊಳ್ಳುತ್ತಿವೆ. ಆಧುನಿಕ ಮಹಿಳೆಯರ ಬಗ್ಗೆ ಆಧುನಿಕ ಮಹಿಳೆಯರೇ ಮಾತಾಡುವಂಥ; ಹೆಣ್ಣಿನ ಬಟ್ಟೆ, ಸಂಸ್ಕ್ರಿತಿ, ಜೀವನ ಕ್ರಮಗಳ ಬಗ್ಗೆ ಚರ್ಚಿಸುವಂಥ ಮುಕ್ತ ವಾತಾವರಣ ಸೃಷ್ಟಿಯಾಗುತ್ತಿದೆ. ನಿಜವಾಗಿ, ನಿರ್ಭಯ ಸಮಾಜವೊಂದು ತಯಾರಾಗಬೇಕಾದರೆ ಇಂಥದ್ದೊಂದು ಮುಕ್ತ ಚರ್ಚೆ ನಡೆಯಬೇಕಾದುದು ಅತೀ ಅಗತ್ಯ. 'ನಿರ್ಭಯ'ಳ ಮೊಲಕ ತೆರೆದುಕೊಂಡ ಈ ಚರ್ಚೆಯ ಬಾಗಿಲು ಇನ್ನಷ್ಟು ದಿನ ತೆರೆದಿರಲಿ ಮತ್ತು ನಿರ್ಮಲ ಸಮಾಜವನ್ನು ಕಟ್ಟುವಲ್ಲಿ ಈ ಚರ್ಚೆಗಳು ಸಹಾಯಕವಾಗಲಿ.