Monday, 25 March 2013

ಹೋಳಿ ಆಚರಿಸುವ ವಿಧವೆಯರ ಮಧ್ಯೆ ಆ ಪ್ರವಾದಿ

ವೃಂದಾವನದ ಓರ್ವ ವಿಧವೆ
   ಮಥುರಾದ ವೃಂದಾವನದಲ್ಲಿರುವ ವಿಧವೆಯರು ಹೋಳಿ  ಆಚರಿಸಿದ ಸುದ್ದಿಯನ್ನು ಮಾಧ್ಯಮಗಳು ಭಾರೀ ಒತ್ತು ಕೊಟ್ಟು ಪ್ರಕಟಿಸಿವೆ. ದಿ ಹಿಂದೂವಿನಂಥ ಪ್ರಮುಖ ಪತ್ರಿಕೆಗಳು ಸುದ್ದಿಯನ್ನು ಪೋಟೋ ಸಹಿತ ಮುಖಪುಟದಲ್ಲೇ ಪ್ರಕಟಿಸಿವೆ. ನಿಜವಾಗಿ ಹೋಳಿಯಂಥ ಹಬ್ಬಗಳ ಆಚರಣೆಯು ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಯಾಗುವುದು ತೀರಾ ಕಡಿಮೆ. ಯಾಕೆಂದರೆ ಹಬ್ಬಾಚರಣೆ ತೀರ ಸಾಮಾನ್ಯ ಸುದ್ದಿ. ಅದು ಅಸಾಮಾನ್ಯವಾಗುವುದು ಯಾವಾಗ ಎಂದರೆ, ಆಚರಣೆಯ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಬೇಕು. ಆದರೆ ವೃಂದಾವನದಲ್ಲಿ ಅಂಥದ್ದೇನೂ ಸಂಭವಿಸಿಲ್ಲ. ಮಹಿಳೆಯರು ಒಟ್ಟು ಸೇರಿ ತೀರಾ ಸಾಮಾನ್ಯವಾಗಿ ಹೋಳಿ ಆಚರಿಸಿದ್ದಾರೆ. ಬಣ್ಣ ಎರಚಿಕೊಂಡಿದ್ದಾರೆ. ಆದರೂ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆಂದರೆ, ಅದರ ಸಂಪೂರ್ಣ ಹೊಣೆಯನ್ನು ಈ ನಾಗರಿಕ ಸಮಾಜ ಹೊತ್ತುಕೊಳ್ಳಬೇಕು. ಒಂದು ವೇಳೆ ಆ ಮಹಿಳೆಯರು ವಿಧವೆಯರು ಆಗದಿರುತ್ತಿದ್ದರೆ, ಅದು ಪತ್ರಿಕೆಗಳ ಮುಖಪುಟಕ್ಕೆ ಬರುತ್ತಿತ್ತೇ? ವಿಧವೆಯರನ್ನು ಅಮಂಗಲೆಯರು, ಸಂತೋಷಪಡುವುದಕ್ಕೆ ಅನರ್ಹರು ಎಂದು ತೀರ್ಪಿತ್ತು, ಅಪರಾಧಿಗಳಂತೆ ಜೀವನ ಪೂರ್ತಿ ಬಾಳುವುದಕ್ಕೆ ಪ್ರಚೋದನೆ ಕೊಟ್ಟವರಾದರೂ ಯಾರು? ವಿಧವೆ ಆಗುವುದು ಯಾಕೆ ಅಪರಾಧ ಅನ್ನಿಸಿಕೊಳ್ಳಬೇಕು? ಹಾಗಾದರೆ ವಿಧುರತನವೂ ಅಪರಾಧವೇ ಆಗಬೇಕಲ್ಲವೇ? ಆದರೆ ಈ ನಾಗರಿಕ ಸಮಾಜದಲ್ಲಿ ವಿಧವೆಯರಿಗೆ ವೃಂದಾವನ ಇರುವಂತೆ ವಿಧುರರಿಗೆ ಯಾವ ನಿರ್ದಿಷ್ಟ ಜಾಗವೂ ಇಲ್ಲ. ಅವರು ಮತ್ತೆ ಮದುವೆಯಾಗುತ್ತಾರೆ. ಸಂತೋಷ ಕೂಟಗಳಲ್ಲಿ ಭಾಗಿಯಾಗುತ್ತಾರೆ. ಅವರನ್ನು ಅಮಂಗಲ ಎಂದು ಯಾರೂ ಪರಿಗಣಿಸುವುದಿಲ್ಲ. ಹೀಗಿರುವಾಗ ಹೆಣ್ಣು ಮಾತ್ರ ಗಂಡನನ್ನು ಕೊಂದ ಪಾತಕಿಯಂತೆ ತಲೆ ತಗ್ಗಿಸಿ, ಯಾಕೆ ಪರಿತ್ಯಾಗಿ ಜೀವನ ನಡೆಸಬೇಕು? ಈ 21ನೇ ಶತಮಾನದಲ್ಲೂ ವಿಧವೆಯರು ಹಬ್ಬ ಆಚರಿಸುವುದು ಬ್ರೇಕಿಂಗ್ ನ್ಯೂಸ್ ಆಗುತ್ತದೆಂದರೆ ಅದರ ಅರ್ಥವೇನು? ಒಂದು ಕಡೆ ಮಹಿಳಾ ದೌರ್ಜನ್ಯದ ವಿರುದ್ಧ ತಿಂಗಳುಗಟ್ಟಲೆ ಪ್ರತಿಭಟನೆ ನಡೆಯುತ್ತದೆ. ದೌರ್ಜನ್ಯ ನಡೆಸುವವರನ್ನು ನೇಣಿಗೇರಿಸಬೇಕು ಎಂದು ಒತ್ತಾಯಿಸಲಾಗುತ್ತದೆ. ಇನ್ನೊಂದು ಕಡೆ ಅದೇ ಮಹಿಳೆಗೆ ಸಹಜ ಬದುಕಿನ ಸ್ವಾತಂತ್ರ್ಯವನ್ನೂ ನಿಷೇಧಿಸಲಾಗುತ್ತದೆ. ಇಷ್ಟಕ್ಕೂ ವೃಂದಾವನದಲ್ಲಿ ಇದೇ ಮೊದಲ ಬಾರಿ 800ರಷ್ಟು ವಿಧವೆಯರು ಹೋಳಿ ಆಚರಿಸಿದ್ದಾರೆ. 16-17 ವರ್ಷಗಳಲ್ಲೇ ವಿಧವೆಯರಾದ ಹೆಣ್ಣು ಮಕ್ಕಳು ಆ ಬಳಿಕ ಜೀವನಪೂರ್ತಿ ಶ್ರೀ ಕೃಷ್ಣನ ಜನ್ಮ ಸ್ಥಾನವಾದ ವೃಂದಾವನದ ಆಶ್ರಮಗಳಲ್ಲೇ ಭಜನೆ, ಭಿಕ್ಷೆ ಬೇಡುತ್ತಾ ಬದುಕುವ ಪರಿಸ್ಥಿತಿ ಇದೆ. ಇವರ ದಾರುಣ ಬದುಕಿನ ಕತೆಯನ್ನು ಕಳೆದ ವರ್ಷ ಆಲಿಸಿದ ಸುಪ್ರೀಮ್ ಕೋರ್ಟು ತಲೆ ತಗ್ಗಿಸಿತ್ತು. ಸಾವಿಗೀಡಾಗುವ ವಿಧವೆಯರನ್ನು ಅಂತ್ಯಸಂಸ್ಕಾರ ಮಾಡಲು ದುಡ್ಡು ಸಾಕಾಗದೇ ಮೃತದೇಹವನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಎಸೆಯುತ್ತಿರುವ ಪತ್ರಿಕಾ ವರದಿಯನ್ನು ಓದಿ ಕೋರ್ಟು ದಿಗಿಲುಗೊಂಡಿತ್ತು. ವಿಧುರರಿಗಿಲ್ಲದ ಕ್ರೂರ ಕಟ್ಟುಪಾಡುಗಳನ್ನು ಕೇವಲ ವಿಧವೆಯರಿಗೆ ಮಾತ್ರ ಅಳವಡಿಸಿ ಈ ಸಮಾಜ ತಣ್ಣಗೆ ಕೂತಿರುವಾಗಲೇ, ಹೋಳಿಯ ಮೂಲಕ ವಿಧವೆಯರೆಂಬ ನಿಷ್ಪಾಪಿ ಮಹಿಳೆಯರು ಮತ್ತೆ ಸುದ್ದಿಗೊಳಗಾಗಿದ್ದಾರೆ. ಅವರನ್ನು ಆ ಕಟು ಬಂಧನದಿಂದ ಹೊರತರುವ ಎನ್‍ಜಿಓಗಳ ಪ್ರಯತ್ನದ ಫಲ ಈ ಆಚರಣೆಯೆಂದು ಮಾಧ್ಯಮಗಳು ಹೇಳುತ್ತಿವೆ.
   ಇಷ್ಟಕ್ಕೂ, ಹೆಣ್ಣಿನ ಕುರಿತಂತೆ ಅನೇಕಾರು ಗೌರವಪೂರ್ಣ ಪದಗಳು, ಕೊಂಡಾಟದ ನುಡಿಮುತ್ತುಗಳು, ಕೌತುಕಪೂರ್ಣ ಕತೆಗಳು ಈ ದೇಶದಲ್ಲಿ ಧಾರಾಳ ಇವೆ. ದುರಂತ ಏನೆಂದರೆ, ಅವ್ಯಾವುವೂ ಪ್ರಾಯೋಗಿಕವಾಗಿ ಜಾರಿಯಲ್ಲಿಲ್ಲ ಅನ್ನುವುದು. ವೈಧವ್ಯ ಕೂಡ ಹಾಗೆಯೇ. ಗಂಡ ಮೃತಪಟ್ಟರೆ ಪತ್ನಿಯಾದವಳು ಆ ಬಳಿಕ ಜೀವನಪೂರ್ತಿ ಅಲಂಕಾರ ರಹಿತಳಾಗಿ, ಮರು ಮದುವೆಯಿಲ್ಲದೇ ಬಾಳಬೇಕು ಎಂಬ ನಿಯಮ ಸಮಾಜದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವರ್ಷದ ಹಿಂದೆ ವಿಧವೆಯರಿಂದಲೇ ವಿಗ್ರಹದ ತೇರು ಎಳೆಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಿತು. ಇದೀಗ ‘ಹೋಳಿ' ಮೂಲಕ ಇನ್ನೊಂದು ಪ್ರಯತ್ನವನ್ನು ನಡೆಸಲಾಗಿದೆ.
   ನಿಜವಾಗಿ, ಓರ್ವ ಹೆಣ್ಣು ಮಗಳು ವಿಧವೆಯಾಗುವುದು ಅಪರಾಧವೋ, ಅಮಂಗಲವೋ ಖಂಡಿತ ಅಲ್ಲ. ಪ್ರಕೃತಿ ಸಹಜವಾದ ಸಾವು-ಬದುಕನ್ನು ಅಮಂಗಲ-ಮಂಗಲ ಎಂದು ವಿಭಜಿಸುವುದೇ ತಪ್ಪು. ಇಸ್ಲಾಮ್ ಇಂಥದ್ದೊಂದು ವಿಭಜನೆಯನ್ನೇ ತಿರಸ್ಕರಿಸುತ್ತದೆ. ವಿಧುರನಿಗೆ ಏನೆಲ್ಲ ಅವಕಾಶಗಳು ಇವೆಯೋ ಅವೆಲ್ಲವನ್ನೂ ವಿಧವೆಗೂ ಅದು ನೀಡುತ್ತದೆ. ವಿಧವೆ ಮಹಿಳೆಗೂ ಇತರ ಮಹಿಳೆಯರಂತೆ ಮರು ಮದುವೆಯಾಗುವ, ಅಲಂಕಾರ ಭೂಷಿತಳಾಗುವ, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಸಕಲ ಹಕ್ಕುಗಳನ್ನೂ ಅದು ನೀಡುತ್ತದೆ. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಮೊತ್ತಮೊದಲು ಮದುವೆಯಾದದ್ದೇ ತನಗಿಂತ 14 ವರ್ಷ ಹಿರಿಯಳಾದ, ಮೂರು ಮಕ್ಕಳ ತಾಯಿಯಾದ ವಿಧವೆಯನ್ನು. ಅವರು ಮದುವೆಯಾಗುವ ಸಂದರ್ಭದಲ್ಲಿ ಆ ಸಮಾಜ ವಿಧವೆಯರನ್ನು ಅಮಂಗಲೆ ಎಂದೇ ಪರಿಗಣಿಸುತ್ತಿತ್ತು. ಮದುವೆ ನಿಶ್ಚಿತಾರ್ಥಕ್ಕೋ ಗೃಹ ಪ್ರವೇಶಕ್ಕೋ ಅವಳು ಆಗಮಿಸುವುದನ್ನು ಅನಿಷ್ಠ ಎಂದು ಸಾರಿತ್ತು. ಪ್ರವಾದಿ ಮುಹಮ್ಮದರು(ಸ) ವಿಧವೆ ಖದೀಜರನ್ನು ವರಿಸುವ ಮೂಲಕ ಆ ಸಂಪ್ರದಾಯವನ್ನು ಮುರಿದರು. ಖದೀಜ ನಿಧನರಾಗುವ ವರೆಗೆ ಅವರು ಇನ್ನೊಂದು ಮದುವೆಯಾಗಲಿಲ್ಲ. ಪ್ರವಾದಿಯವರು 50 ವರ್ಷಗಳನ್ನು ದಾಟಿದ ಬಳಿಕ 10 ಮದುವೆಯಾದರಾದರೂ ಅವರಲ್ಲಿ ಒಂಬತ್ತು ಮಂದಿಯೂ ವಿಧವೆಯರಾಗಿದ್ದರು. ಅವರ ಪತ್ನಿಯರಲ್ಲಿ ಕನ್ಯೆಯಾಗಿದ್ದವರು ಒಬ್ಬರೇ. ಆ ಮೂಲಕ ಪ್ರವಾದಿ(ಸ) ಒಂದಿಡೀ ಸಮಾಜದ ಆಲೋಚನೆಯನ್ನೇ ಬದಲಿಸಿದರು. ಅಮಂಗಲೆಯರನ್ನು ಮಂಗಲೆಯರನ್ನಾಗಿಸಿದರು. ಯಾರಿಗಾದರೂ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಆ ಮಕ್ಕಳನ್ನು ಮೌಲ್ಯವಂತರಾಗಿ ಬೆಳೆಸಿ, ವಿವಾಹ ಮಾಡಿ ಕೊಟ್ಟರೆ ಆ ಹೆತ್ತವರು ಸ್ವರ್ಗ ಪಡೆಯುತ್ತಾರೆ ಎಂದರು. ಹೆಣ್ಣಿನ ಸೇವೆ ಮಾಡಿದವರು ಸ್ವರ್ಗ ಪ್ರವೇಶಿಸುತ್ತಾರೆ ಅಂದರು. ಒಂದು ರೀತಿಯಲ್ಲಿ ಪ್ರವಾದಿ ಮುಹಮ್ಮದ್‍ರು(ಸ), ತೇರು ಎಳೆಸದೆಯೇ ‘ಹೋಳಿ' ಆಚರಿಸದೆಯೇ ವಿಧವೆಯರಿಗೆ ಗೌರವವನ್ನು ಮರಳಿ ದೊರಕಿಸಿಕೊಟ್ಟರು. ಮಹಿಳೆಯರನ್ನು ದೌರ್ಜನ್ಯದಿಂದ ಮುಕ್ತಗೊಳಿಸುವ ಹತ್ತು-ಹಲವು ‘ಕ್ರಾಂತಿ' ಮಾರ್ಗಗಳನ್ನು ಪರಿಚಯಿಸಿದರು. ಆಸ್ತಿಯಲ್ಲಿ ಹಕ್ಕನ್ನು ಒದಗಿಸಿಕೊಟ್ಟರು.
   ಆದ್ದರಿಂದ ಮಹಿಳೆಯರನ್ನು ಮತ್ತು ವಿಧವೆಯರನ್ನು ದೌರ್ಜನ್ಯ ಮುಕ್ತಗೊಳಿಸುವುದಕ್ಕಾಗಿ ಪ್ರವಾದಿ ಮುಹಮ್ಮದ್‍ರ(ಸ) ‘ಕ್ರಮಗಳು' ಪ್ರಸ್ತುತವೇ ಎಂಬ ಬಗ್ಗೆ ಈ ಸಮಾಜ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಅಂದಹಾಗೆ, 14ನೇ ಶತಮಾನದಲ್ಲಿ ಅವರ ಆಲೋಚನೆಗಳು ಮಹಿಳೆಗೆ ಗೌರವ, ಸುರಕ್ಷಿತತೆಯನ್ನು ತಂದು ಕೊಟ್ಟಿದ್ದರೆ ಈ 21ನೇ ಶತಮಾನದಲ್ಲಿ ಯಾಕೆ ಅದು ಅನ್ಯ ಅನ್ನಿಸಿಕೊಳ್ಳಬೇಕು?

ಅತ್ಯಾಚಾರಕ್ಕೆ `ಸಹಮತದ ಸೆಕ್ಸ್’ ಪರಿಹಾರವಲ್ಲ


   ಕೇವಲ ಕಾನೂನೊಂದರಿಂದಲೇ ಸಮಾಜದಲ್ಲಿ ಮೌಲ್ಯ, ನೈತಿಕತೆಯನ್ನು ಜಾರಿಗೊಳಿಸಲು ಸಾಧ್ಯ ಎಂಬ ವಾದವನ್ನು ಯಾರೂ  ಮಂಡಿಸುತ್ತಿಲ್ಲ. ಕಾನೂನುಗಳಿಗೆ ಅದರದ್ದೇ ಆದ ಮಿತಿಗಳಿವೆ, ದೌರ್ಬಲ್ಯಗಳಿವೆ. ಆದರೆ ಜನರನ್ನು ಅಮೌಲ್ಯ, ಅನೈತಿಕತೆಯೆಡೆಗೆ ಸಾಗಿಸಲು ಕಾನೂನೇ ಪ್ರೋತ್ಸಾಹ ನೀಡುವಂತಿದ್ದರೆ ಏನು ಮಾಡಬೇಕು? ಅಪರಾಧವನ್ನು ತಡೆಯುವ ಉದ್ದೇಶದಿಂದಲೇ ಕಾನೂನಿನ ನಿಮಾರ್ಣವಾಗುತ್ತದೆ ಎಂದಾದರೆ, ಸಹಮತದ ಲೈಂಗಿಕ ಕ್ರಿಯೆಯ ವಯಸ್ಸನ್ನು ಇಳಿಸಿ, ಅನೈತಿಕತೆಯನ್ನು ಕಾನೂನುಬದ್ಧ ಗೊಳಿಸಲು ಕೇಂದ್ರ ಸರಕಾರ ಮುಂದಾಗಿರುವುದೇಕೆ? ವಿವಾಹಿತರಲ್ಲದ ಹೆಣ್ಣು-ಗಂಡು ಪರಸ್ಪರ ಲೈಂಗಿಕತೆಯಲ್ಲಿ ಏರ್ಪಡುವುದೇ ಅನೈತಿಕವಾಗಿರುವಾಗ, ಅದಕ್ಕೆ ವಯಸ್ಸನ್ನು ನಿಗದಿಪಡಿಸುವುದಾದರೂ ಎಷ್ಟು ಸರಿ? 16 ವಯಸ್ಸು ತುಂಬಿದ ಯುವಕ-ಯುವತಿಯರು ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವುದು ಅಪರಾಧವಲ್ಲ ಎಂಬ ಕಾನೂನನ್ನು ತರಲು ಕೇಂದ್ರ ಸರಕಾರವು ಹೊರಟಿದೆ. ಒಂದು ಕಡೆ ಅತ್ಯಾಚಾರದ ಘಟನೆಗಳು ಪತ್ರಿಕೆಗಳ ಮುಖಪುಟದಿಂದ ಹಿಡಿದು ಕೊನೆಪುಟದ ವರೆಗೆ ತುಂಬಿಕೊಂಡಿರುವ ಸಂದರ್ಭ ಇದು. ಅತ್ಯಾಚಾರವನ್ನು ತಡೆಯುವುದಕ್ಕೆ ಪ್ರಬಲ ಕಾನೂನನ್ನು ಒತ್ತಾಯಿಸಿ ತಿಂಗಳುಗಟ್ಟಲೆ ಈ ದೇಶದಲ್ಲಿ ಪ್ರತಿಭಟನೆ ನಡೆದಿದೆ. ಇಂಥ ಸಂದರ್ಭದಲ್ಲಿ ‘ಸಹಮತದ ಸೆಕ್ಸ್’ (Consensual  Sex) ಎಂಬ ಮುದ್ದಿನ ಪದವನ್ನು ಬಳಸಿಕೊಂಡು ‘ಲೈಂಗಿಕ ದೌರ್ಜನ್ಯ’ವನ್ನು ಕಾನೂನು ಬದ್ಧಗೊಳಿಸಲು ಹೊರಟಿರುವುದೇಕೆ?
  ನಿಜವಾಗಿ, ಅತ್ಯಾಚಾರಕ್ಕೂ ಸಹಮತದ ಸೆಕ್ಸ್ ಎಂಬ ಲೈಂಗಿಕ ಕ್ರಿಯೆಗೂ ಭಾರೀ ಅಂತರವೇನೂ ಇಲ್ಲ. ಸಹಮತದ ಸೆಕ್ಸ್ ನಲ್ಲಿ ಭಾಗಿಯಾಗುವ ಯುವಕ ಮತ್ತು ಯುವತಿ ಪರಸ್ಪರ ಮುನಿಸಿಕೊಂಡರೆ, ಅದು ಅತ್ಯಾಚಾರ ಪ್ರಕರಣವಾಗಿ ಬದಲಾಗಿ ಬಿಡುತ್ತದೆ. ಯುವಕನ ಮೇಲೆ ಯುವತಿ ಅತ್ಯಾಚಾರದ ಕೇಸು ದಾಖಲಿಸಿ ಬಿಡುವುದಿದೆ. ಇಷ್ಟಕ್ಕೂ ಈ ದೇಶದಲ್ಲಿ ಇವತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು, ಸಹಮತದ ಸೆಕ್ಸ್ ನ ವಯಸ್ಸನ್ನು 18 ರಿಂದ 16ಕ್ಕೆ ಇಳಿಸದಿದ್ದುದೆ? ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಿದ ಕೂಡಲೇ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿ ಬಿಡಬಲ್ಲುದೇ? ಒಂದು ರೀತಿಯಲ್ಲಿ ಸಹಮತದ ಸೆಕ್ಸ್ ಗಿರುವ ಮಾನ್ಯತೆಯೇ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವೆನ್ನಬಹುದು. ಯಾಕೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ಯಾರೆಲ್ಲ ಬಂಧನಕ್ಕೆ ಒಳಪಡುತ್ತಿದ್ದಾರೋ ಅವರಲ್ಲಿ ಬಹುತೇಕರೂ ಬಡತನದ ಹಿನ್ನೆಲೆಯ, ತೀರಾ ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಮತ್ತು ಕಠಿಣ ಶ್ರಮದ ಕೆಲಸಗಳನ್ನು ಮಾಡುತ್ತಿರುವ ಯುವಕರೇ ಹೆಚ್ಚು. ಇವರನ್ನು ಲೈಂಗಿಕವಾಗಿ ಪ್ರಚೋದಿಸುವುದಕ್ಕೆ ಈ ನಾಗರಿಕ ಸಮಾಜದಲ್ಲಿ ಏನೆಲ್ಲ ಬೇಕೋ ಅವೆಲ್ಲವೂ ಇವೆ. ಸಿನಿಮಾದಲ್ಲಿ ನಾಯಕಿಯನ್ನು ನಾಯಕನು ಕಾನೂನು ಬದ್ಧವಾಗಿ ಎಲ್ಲರೆದುರೇ ‘ಅತ್ಯಾಚಾರ’ ಮಾಡುತ್ತಾನೆ. ಸೆಕ್ಸ್ ಅಫೀಲ್ ಇಲ್ಲದ ಸಿನಿಮಾ ಕಟೌಟುಗಳು ಇವತ್ತು ಹುಡುಕಿದರೂ ಸಿಗುತ್ತಿಲ್ಲ. ಮೊಬೈಲ್‍ಗಳೂ ಅಷ್ಟೇ, ಖಾಸಗಿಯಾಗಿ ಸೆಕ್ಸನ್ನು ಅನುಭವಿಸುವುದಕ್ಕೆ ಬೇಕಾದುದೆಲ್ಲವನ್ನೂ ಒದಗಿಸಿ ಕೊಡುತ್ತಿವೆ. ಹೀಗಿರುವಾಗ, ಮೌಲ್ಯ, ನೈತಿಕತೆ ಮುಂತಾದುವುಗಳನ್ನು ಗೌರವಿಸದ ವ್ಯಕ್ತಿಯೊಬ್ಬ ಇಂಥವುಗಳಿಂದ ಪ್ರಚೋದಿತವಾಗುವುದಕ್ಕೆ ಸಾಧ್ಯವಿಲ್ಲವೇ? ಅಂದಹಾಗೆ, ಸಹಮತದ ಸೆಕ್ಸ್ ನಲ್ಲಿ ಏರ್ಪಡುವ ಅಂದರೆ ಇಂಥ ಬಡ, ಒರಟು ಮನುಷ್ಯರಿಗೆ ಅವಕಾಶಗಳು ತೀರಾ ಕಡಿಮೆ. ಲಿವಿಂಗ್ ಟುಗೆದರ್, ಪ್ರೀತಿ-ಪ್ರೇಮ ಮುಂತಾದುವುಗಳೆಲ್ಲ ಈ ವರ್ಗದ ಪಾಲಿಗೆ ಲಭ್ಯವಿರುವುದಿಲ್ಲ. ಹೀಗಿರುವಾಗ ಸಹಮತದ ಲೈಂಗಿಕತೆಯಲ್ಲಿ ತೊಡಗಿರುವ, ಬಾಯ್‍ಫ್ರೆಂಡ್-ಗರ್ಲ್ ಫ್ರೆಂಡ್ ಎಂದು ಸುತ್ತಾಡುವ, ಪ್ರೀತಿ-ಪ್ರೇಮದಲ್ಲಿ ಮುಳುಗಿರುವ ಯುವಕ-ಯುವತಿಯರು ಇವರಲ್ಲಿ ಅಸೂಯೆ ಹುಟ್ಟಿಸಲು ಸಾಧ್ಯವಿದೆ. ಆ ಅಸೂಯೆ, ಅಸಹನೆಯೇ ಇವರನ್ನು ಲೈಂಗಿಕ ಬಲಾತ್ಕಾರದೆಡೆಗೂ ಕೊಂಡೊಯ್ಯುತ್ತಿರಬಹುದು. ಇಲ್ಲದಿದ್ದರೆ, ಪತಿಯೊ, ಬಾಯ್ ಫ್ರೆಂಡೋ ಜೊತೆಗಿರುವಾಗಲೂ ಹೆಣ್ಣು ಅತ್ಯಾಚಾರಕ್ಕೆ ಒಳಗಾಗಲು ಕಾರಣವೇನು? ಅತ್ಯಾಚಾರಿಗಳನ್ನು ಆ ಬಗೆಯ ದುಸ್ಸಾಹಸಕ್ಕೆ ನೂಕುವ ಸಂಗತಿಗಳು ಯಾವುವು?
   ನಿಜವಾಗಿ, ಅನೈತಿಕ ಕ್ರಿಯೆಗೆ ಪ್ರಚೋದಕವಾಗುವ ಮಾರ್ಗಗಳನ್ನು ಮುಚ್ಚದೇ ಅತ್ಯಾಚಾರವನ್ನು ತಡೆಗಟ್ಟಲು ಖಂಡಿತ ಸಾಧ್ಯವಿಲ್ಲ. ಅತ್ಯಾಚಾರ ಎಂಬುದು ದಿಢೀರ್ ಆಗಿ ಉದ್ಭವವಾಗುವ ಒಂದು ಮನಸ್ಥಿತಿಯಲ್ಲ. ಹತ್ತು-ಹಲವು ಪ್ರಚೋದನೆಗಳ ಒಟ್ಟು ಮೊತ್ತವೇ ಅತ್ಯಾಚಾರ. ದುರಂತ ಏನೆಂದರೆ, ಇವತ್ತು ಈ ದೇಶದಲ್ಲಿ ಅತ್ಯಾಚಾರವನ್ನು ‘ಭೀಕರ ಪಾಪ’ ಎಂದು ಪರಿಗಣಿಸಲಾಗುತ್ತಿದೆಯೇ ಹೊರತು ಅದಕ್ಕೆ ಪ್ರಚೋದನೆ ಕೊಡುವ ವಿಷಯಗಳನ್ನಲ್ಲ. ಇದು ಹೇಗೆಂದರೆ, ರೋಗ ಉತ್ಪತ್ತಿ ಮಾಡುವ ಪರಿಸರ, ಸೊಳ್ಳೆಗಳನ್ನು ಹಾಗೆಯೇ ಬಿಟ್ಟು ರೋಗಕ್ಕೆ ಔಷಧಿ ಕೊಟ್ಟಂತೆ. ಹೀಗಾದರೆ ರೋಗಿಗಳ ಸಂಖ್ಯೆ ಹೆಚ್ಚಬಹುದೇ ಹೊರತು ರೋಗ ನಿರ್ಮೂಲನೆ ಸಾಧ್ಯವಿಲ್ಲ. ಆದ್ದರಿಂದ, ಸರಕಾರ ‘ಅತ್ಯಾಚಾರ’ವನ್ನು ಉತ್ಪತ್ತಿ ಮಾಡುವ ಪರಿಸರವನ್ನು ಸ್ವಚ್ಛಗೊಳಿಸಬೇಕಾಗಿದೆ. ವಿವಾಹರಹಿತ ಲೈಂಗಿಕ ಕ್ರಿಯೆಯನ್ನು ಕಾನೂನು ಬಾಹಿರವೆಂದು ಸಾರಬೇಕಾಗಿದೆ. ಅನೈತಿಕತೆಯನ್ನು ‘ಸಹಮತ’ವೆಂದೋ ‘ಅತ್ಯಾಚಾರ’ವೆಂದೋ ವಿಭಜಿಸುವುದೇ ದೊಡ್ಡ ಅಪರಾಧ. ಅತ್ಯಾಚಾರವನ್ನು ಹೇಗೆ ನಾವು ಕ್ರೌರ್ಯವೆಂದು ಪರಿಗಣಿಸುತ್ತೇವೋ ಹಾಗೆಯೇ ಸಹಮತದ ಹೆಸರಲ್ಲಿ ನಡೆಯುವ ಅನೈತಿಕತೆಯನ್ನೂ ಸಮಾಜ ವಿರೋಧಿಯಾಗಿ ಗುರುತಿಸಬೇಕಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ದೃಷ್ಟಿಕೋನಗಳೇನೇ ಇರಲಿ, ಸಮೃದ್ಧ ಧಾರ್ಮಿಕ ಮೌಲ್ಯಗಳಿರುವ ಈ ದೇಶಕ್ಕೆ ಅವನ್ನು ಖರೀದಿಸಿ ತರಬೇಕಾದ ಅಗತ್ಯವೇನೂ ಇಲ್ಲ. ಮೌಲ್ಯಗಳನ್ನು ಕೈಬಿಟ್ಟ ದೇಶಗಳೆಲ್ಲ ಇವತ್ತು ‘ಅತೃಪ್ತ’ ಯುವ ಸಮೂಹದ ಸಮಸ್ಯೆಯನ್ನು ಎದುರಿಸುತ್ತಿವೆ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು.
   ಏನೇ ಆಗಲಿ, ಅನೈತಿಕತೆಯನ್ನು ಸಹಮತದ ಹೆಸರಲ್ಲಿ ನೈತಿಕಗೊಳಿಸುವುದರಿಂದ ಅಪರಾಧಗಳಷ್ಟೇ ಹೆಚ್ಚಾಗಬಹುದು. ಪವಿತ್ರ ಕುರ್‍ಆನ್, ವಿವಾಹರಹಿತ ಲೈಂಗಿಕ ಕ್ರಿಯೆಯನ್ನು ಘೋರ ಪಾಪವಾಗಿ ಪರಿಗಣಿಸಿದೆ (17:28). ಆದ್ದರಿಂದ ಅತ್ಯಾಚಾರಕ್ಕೆ ಪೂರಕವಾಗುವ ಎಲ್ಲ ಬಾಗಿಲುಗಳನ್ನು ಮುಚ್ಚುವುದೇ ನೈತಿಕ ಸಮಾಜವನ್ನು ಕಟ್ಟುವುದಕ್ಕಿರುವ ಸಭ್ಯ ಮಾರ್ಗ. ‘ಸಹಮತದ ಸೆಕ್ಸ್’ ಅದಕ್ಕೆ ಉತ್ತರವಲ್ಲ.

Wednesday, 13 March 2013

36ನೇ ಹೆಜ್ಜೆಯಲ್ಲಿ ಖುಷಿಪಡುವುದಕ್ಕೆ ಕೆಲವು ಕಾರಣಗಳು


   36ನೇ ವರ್ಷದ ಈ ಪ್ರಥಮ ಸಂಚಿಕೆಯನ್ನು ಸನ್ಮಾರ್ಗ ಅತೀವ ಖುಷಿಯಿಂದ ಓದುಗರ ಕೈಗಿಡುತ್ತಿದೆ. ಸನ್ಮಾರ್ಗಕ್ಕೆ 35 ವರ್ಷಗಳು ತುಂಬಿತು ಎಂಬ ಕಾರಣಕ್ಕಾಗಿ ಪತ್ರಿಕೆ ಖುಷಿಪಡುತ್ತಿಲ್ಲ. ವರ್ಷಗಳು ಮನುಷ್ಯರಿಗೂ, ಪ್ರಾಣಿಗಳಿಗೂ ಕಲ್ಲು-ಮರಗಳಿಗೂ ತುಂಬುತ್ತಲೇ ಇರುತ್ತವೆ. ವರ್ಷಗಳು ತುಂಬಿದಂತೆಲ್ಲಾ ಜೀವ ವಿರೋಧಿ, ಮನುಷ್ಯ ವಿರೋಧಿ ಸ್ವಭಾವವನ್ನು ಹೆಚ್ಚುಗೊಳಿಸುತ್ತಾ ಹೋಗುವ ಮನುಷ್ಯರು ಸಮಾಜದಲ್ಲಿ ಧಾರಾಳ ಇದ್ದಾರೆ. ಆದ್ದರಿಂದಲೇ ಸನ್ಮಾರ್ಗ ಪ್ರಾಯ ತುಂಬುವುದನ್ನೇ ಸಾಧನೆಯೆಂದು ಎಂದೂ ಹೇಳಿಕೊಂಡಿಲ್ಲ. ಪ್ರಾಯ ಸಂಭ್ರಮಾರ್ಹ ಆಗುವುದು ಸಾಧನೆಯಿಂದ. ಸನ್ಮಾರ್ಗ ತನ್ನ ಹುಟ್ಟಿನ ಮೊದಲಿನಿಂದಲೂ ಒಂದು ಖಚಿತ ಅಭಿಪ್ರಾಯದೊಂದಿಗೆ ಓದುಗರ ಜೊತೆ ಮಾತಾಡಿದೆ. ಫ್ಯಾಸಿಝಮ್‍ನ ಬಗ್ಗೆ, ಕೋಮುವಾದ, ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ನಿರ್ಮೂಲನ, ಕೋಮು ಸೌಹಾರ್ದ, ಧರ್ಮ.. ಎಲ್ಲದರ ಬಗ್ಗೆಯೂ ಸನ್ಮಾರ್ಗ ಅತ್ಯಂತ ತಾರ್ಕಿಕವಾಗಿ ಮತ್ತು ಮೌಲ್ಯಯುತವಾಗಿ ತನ್ನ ಪುಟಗಳಲ್ಲಿ ಚರ್ಚಿಸಿದೆ. ಫ್ಯಾಸಿಝಮ್ ಮತ್ತು ಭ್ರಷ್ಟಾಚಾರದ ನಡುವೆ ಆಯ್ಕೆಯ ಸಂದರ್ಭ ಬಂದಾಗ ಫ್ಯಾಸಿಝಮ್ ಅನ್ನು ಅದು ಪ್ರಥಮ ಶತ್ರುವಾಗಿ ಪರಿಗಣಿಸಿದೆ. ಭಯೋತ್ಪಾದನೆ, ಜಿಹಾದ್..ಗಳ ಬಗ್ಗೆ ಸಮಾಜದಲ್ಲಿರುವ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ಸನ್ಮಾರ್ಗ ಅನೇಕಾರು ಲೇಖನ, ಸಂಪಾದಕೀಯಗಳನ್ನು ಪ್ರಕಟಿಸಿದೆ. ನಿಜವಾಗಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಸನ್ಮಾರ್ಗಕ್ಕೆ ದೊಡ್ಡದೊಂದು ಸವಾಲು ಎದುರಾಯಿತು. ಆ ವರೆಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರದ ರುಚಿ ಪಡೆದಿರದ ಫ್ಯಾಸಿಸ್ಟ್, ಕೋಮುವಾದಿ ವಿಚಾರಧಾರೆಗೆ ಈ ಸಂದರ್ಭದಲ್ಲಿ ಅದು ಲಭ್ಯವಾಯಿತು. ಸನ್ಮಾರ್ಗ ನಿರಂತರವಾಗಿ ಈ ವಿಚಾರಧಾರೆಯ ಅಪಾಯವನ್ನು ಓದುಗರ ಮುಂದಿಡುತ್ತಲೇ ಬಂದಿತು. ಫ್ಯಾಸಿಝಮ್ ವಿಚಾರಧಾರೆಯಿಂದ ಪ್ರಭಾವಿತವಾಗಿರುವ ಒಂದು ಸಚಿವ ಸಂಪುಟ, ಹೇಗೆ ತನ್ನ ಅಧಿಕಾರಿ ವರ್ಗವನ್ನು ಮತ್ತು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಎಚ್ಚರಿಸುತ್ತಾ ಬಂದಿತು. 6 ತಿಂಗಳ ಹಿಂದೆ ಮುತೀಉರ್ರಹ್ಮಾನ್ ಎಂಬ ಪತ್ರಕರ್ತನನ್ನು ಭಯೋತ್ಪಾದನೆಯ ನೆಪದಲ್ಲಿ ಬಂಧಿಸಿದಾಗ ಸನ್ಮಾರ್ಗ ಪ್ರಬಲವಾಗಿ ಪ್ರತಿಭಟಿಸಿದ್ದೂ ಇದೇ ಕಾರಣದಿಂದ. ಅದಕ್ಕಿಂತ ತುಸು ಸಮಯ ಮೊದಲು ಪ್ರವೀಣ್ ಸೂರಿಂಜೆ ಎಂಬ ಯುವ ಪತ್ರಕರ್ತರನ್ನೂ ಇದೇ ಮಾನಸಿಕತೆ ಜೈಲಿಗೆ ತಳ್ಳಿತ್ತು. ಫ್ಯಾಸಿಸ್ಟ್ ವಿಚಾರಧಾರೆಯ ಮಂದಿ ಹೆಣ್ಣು ಮಕ್ಕಳ ಮೇಲೆ ಮಾಡಿದ ದೌರ್ಜನ್ಯವನ್ನು (ಮಂಗಳೂರು ಹೋಮ್‍ಸ್ಟೇ ದಾಳಿ ಪ್ರಕರಣ) ಧೈರ್ಯದಿಂದ ವರದಿ ಮಾಡಿದ ತಪ್ಪಿಗೆ ಸೂರಿಂಜೆಯನ್ನು ಜೈಲಿಗೆ ಕಳುಹಿಸಲಾಯಿತು. ಸನ್ಮಾರ್ಗ ಈ ಎಲ್ಲ ಸಂದರ್ಭಗಳಲ್ಲೂ ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತ ಪಡಿಸಿತು. ಮಾತ್ರವಲ್ಲ, ಈ ವಿಚಾರಧಾರೆಗೆ ಕನ್ನಡಿಗರನ್ನು ಪ್ರತಿನಿಧಿಸುವ ಮತ್ತು ಆಳುವ ಅರ್ಹತೆಯಿಲ್ಲ ಎಂದು ಪುಟಪುಟಗಳಲ್ಲೂ ಪ್ರತಿಪಾದಿಸುತ್ತಾ ಬಂದಿತು. ಭ್ರಷ್ಟಾಚಾರಕ್ಕಿಂತ ಈ ವಿಚಾರಧಾರೆ ಹೆಚ್ಚು ಅಪಾಯಕಾರಿಯಾಗಿರುವುದರಿಂದ ಜನರು ಈ ವಿಚಾರಧಾರೆಯನ್ನು ಅಧಿಕಾರದಿಂದ ಕಿತ್ತು ಹಾಕಬೇಕೆಂದು ನಿರಂತರ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಸನ್ಮಾರ್ಗಕ್ಕೆ ಖುಷಿಪಡುವ ಸಂದರ್ಭ ಒದಗಿ ಬಂದಿದೆ. ತನ್ನ 36ನೇ ವರ್ಷದ ಈ ಪ್ರಥಮ ಸಂಚಿಕೆಯಲ್ಲೇ ಫ್ಯಾಸಿಸ್ಟ್ ವಿಚಾರ ಧಾರೆಗೆ ಚುನಾವಣೆಯಲ್ಲಿ ಸೋಲಾಗಿರುವ ಸುದ್ದಿಯನ್ನು ಹಂಚಿಕೊಳ್ಳುವಂತಾಗಿದೆ. ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಜನರು ಈ ವಿಚಾರಧಾರೆಯಿಂದ ಕಳಚಿಕೊಳ್ಳಲು ನಿರ್ಧರಿಸಿರುವುದನ್ನು ಫಲಿತಾಂಶಗಳೇ ಸ್ಪಷ್ಟಪಡಿಸುತ್ತಿವೆ. ಈ ಫಲಿತಾಂಶದೊಂದಿಗೆ ಸನ್ಮಾರ್ಗದ 35 ವರ್ಷಗಳ ಲೇಖನಿ ಸಮರಕ್ಕೂ ಪಾಲು ಇದೆ ಎಂದೇ ಪತ್ರಿಕೆ ನಂಬುತ್ತದೆ.
   ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಪರಸ್ಪರ ‘ದೋಸ್ತ್' ಆಗಿಬಿಟ್ಟರೆ ಅದರಿಂದಾಗಿ ದೊಡ್ಡ ಹಾನಿ ತಟ್ಟುವುದು ಓದುಗರಿಗೆ. ಓದುಗರು ಒಂದು ಪತ್ರಿಕೆಯನ್ನು ಓದುವುದು ಸತ್ಯ ಸುದ್ದಿಗಾಗಿ. ಆದರೆ ಕೆಲವೊಂದು ಪತ್ರಿಕೆಗಳು ಸತ್ಯವನ್ನು ಕೊಂದೇ ಇವತ್ತು ಬದುಕುತ್ತಿವೆ ಎಂಬುದೇನೂ ಗುಟ್ಟಾಗಿಲ್ಲ. ದುರಂತ ಏನೆಂದರೆ, ಓದುಗರಿಗೆ ಈ ಕೊಲೆಗಾರ ಪತ್ರಿಕೆಗಳನ್ನು ಗುರುತಿಸಲು ಸಾಧ್ಯವಾಗದೇ ಹೋಗಿರುವುದು. ಅಕ್ಷರ ಲೋಕವನ್ನು ಅವು ಎಷ್ಟು ಕಲುಷಿತಗೊಳಿಸಿಬಿಟ್ಟಿವೆ ಎಂದರೆ ಒಂದು ಸುದ್ದಿಯನ್ನು ಸತ್ಯವೋ ಸುಳ್ಳೋ ಎಂದು ತಿಳಿದುಕೊಳ್ಳುವುದಕ್ಕೆ ಒಂದಕ್ಕಿಂತ ಹೆಚ್ಚು ಪತ್ರಿಕೆಯನ್ನು ಓದಿ ಖಚಿತಪಡಿಸಿಕೊಳ್ಳಬೇಕಾದಂಥ ಪರಿಸ್ಥಿತಿ ಬಂದಿದೆ. ಕೋಮುವಾದಿಗಳು, ಮನುಷ್ಯ ವಿರೋಧಿಗಳೆಲ್ಲ ಅಕ್ಷರ ಜಗತ್ತಿನಲ್ಲಿರುವ ಈ ‘ಅಡ್ಡ ಕಸುಬಿನ' ಪತ್ರಿಕೋದ್ಯಮಿಗಳನ್ನು ಧಾರಾಳ ಬಳಸಿಕೊಳ್ಳುತ್ತಾರೆ. ತಮ್ಮ ವಿಚಾರಧಾರೆಯನ್ನು ಜನರ ಮೇಲೆ ಹೇರುವುದಕ್ಕಾಗಿ ಇವರ ಮೂಲಕ ಶ್ರಮಿಸುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಪ್ರಯತ್ನಗಳು ಧಾರಾಳ ನಡೆದಿವೆ. ಒಂದು ಧರ್ಮವನ್ನು ಮತ್ತು ಅದರ ವಿಚಾರಧಾರೆಯನ್ನು ‘ಶಂಕಿತ'ಗೊಳಿಸಲು ಅನೇಕ ಬಾರಿ ಪುಟಗಳನ್ನು ಮೀಸಲಿಟ್ಟ ಪತ್ರಿಕೆಗಳಿವೆ. ಆದರೆ ಸನ್ಮಾರ್ಗ ಈ ಎಲ್ಲ ಸಂದರ್ಭಗಳಲ್ಲಿ ತನ್ನ ಸಾಮರ್ಥ್ಯ ವನ್ನೂ ಮೀರಿ ನಿಜದ ಧ್ವನಿಯಾಗಿದೆ. ಅಸತ್ಯದ ಅಕ್ಷರಗಳು ಮತ್ತು ಅದರ ಹಿಂದಿರುವ ಫ್ಯಾಸಿಸ್ಟ್ ಆಲೋಚನೆಗಳ ಕುರಿತಂತೆ ಕನ್ನಡಿಗರನ್ನು ಎಚ್ಚರಿಸುತ್ತಾ ಬಂದಿದೆ. ಆದ್ದರಿಂದಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಸನ್ಮಾರ್ಗ ಸೈದ್ಧಾಂತಿಕ ಗೆಲುವೆಂದು ಪರಿಗಣಿಸುವುದು. ಸನ್ಮಾರ್ಗ ಯಾವೊಂದು ಪಕ್ಷದ ವೈರಿಯೂ ಅಲ್ಲ. ಅದು ಅಸತ್ಯದ, ಅನ್ಯಾಯದ, ಭ್ರಷ್ಟಾಚಾರದ, ಫ್ಯಾಸಿಝಮ್‍ನ, ಕೋಮುವಾದದ.. ವೈರಿ. ಇವು ಸಮಾಜದಲ್ಲಿ ಪ್ರಾಬಲ್ಯ ಸ್ಥಾಪಿಸುತ್ತಾ ಹೋದರೆ ಅಮೌಲ್ಯದ, ಮನುಷ್ಯ ವಿರೋಧಿಯಾದ ವ್ಯವಸ್ಥೆ ಖಂಡಿತ ಜಾರಿಗೆ ಬರುತ್ತದೆ. ಅದನ್ನು ತಪ್ಪಿಸಿ ಈ ಮಣ್ಣನ್ನು ಸರ್ವರೂ ಸ್ವಾಭಿಮಾನದಿಂದ ಬಾಳುವಂತೆ ಮಾಡುವ ಗುರಿಯೊಂದಿಗೆ ಸನ್ಮಾರ್ಗ ಕಳೆದ 35 ವರ್ಷಗಳಿಂದಲೂ ಪ್ರಕಟವಾಗುತ್ತಲೇ ಬಂದಿದೆ. 36ನೇ ವರ್ಷದ ಈ ಪ್ರಥಮ ಸಂಚಿಕೆಯಲ್ಲೂ ಅದರ ನಿಲುವು ಬದಲಾಗಿಲ್ಲ. ಆಗುವುದೂ ಇಲ್ಲ. ಪ್ರಾಯ ಎಷ್ಟೇ ತುಂಬಲಿ, ಸಂಚಿಕೆ ಎಷ್ಟೇ ಹೊರ ಬರಲಿ, ಹುಟ್ಟುವಾಗಿನ ಮೂಲತತ್ವಗಳನ್ನು ಕೈ ಬಿಡದೇ ಸಮಾಜವನ್ನು ತಿದ್ದುವ, ಅಗತ್ಯ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡುವ ಮತ್ತು ಮುಲಾಜಿಲ್ಲದೇ ತಪ್ಪನ್ನು ತಪ್ಪೆಂದೂ ಸುಳ್ಳನ್ನು ಸುಳ್ಳೆಂದೂ ಹೇಳುವ ಸ್ವಾತಂತ್ರ್ಯವನ್ನು ಸನ್ಮಾರ್ಗ ಎಂದೂ ಯಾರಿಗೂ ಬಿಟ್ಟುಕೊಡುವುದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದ ಅಭ್ಯರ್ಥಿಗಳ ಕುರಿತಂತೆ ಸನ್ಮಾರ್ಗದ ನಿಲುವೂ ಇದುವೇ.

Monday, 4 March 2013

ನರಭಕ್ಷಕ ತೋಳಗಳ ಹಿಂಡಿನಲ್ಲಿ ಮ್ಯಾನ್ನಿಂಗ್ ಎಂಬ ಜಿಂಕೆ ಮರಿ


   ಬ್ರಾಡ್ಲಿ ಮ್ಯಾನ್ನಿಂಗ್ ಅನ್ನುವ ಯೋಧನೊಬ್ಬ ಅಮೇರಿಕನ್ನರ ‘ಸಂಕಟ’ದ ಸಂಕೇತವಾಗಿ ಇವತ್ತು ಜಗತ್ತಿನ ಮುಂದಿದ್ದಾನೆ. ಮಾತ್ರವಲ್ಲ, ಜೀವನ ಪರ್ಯಂತ ಜೈಲಿನಲ್ಲೇ ಇರಬೇಕಾದ ಭೀತಿಯನ್ನೂ ಎದುರಿಸುತ್ತಿದ್ದಾನೆ. ಆತ ಮಾಡಿದ ಅಪರಾಧ ಏನೆಂದರೆ, ಅಮೇರಿಕದ ರಕ್ತದಾಹಿ ನೀತಿಯನ್ನು ಪ್ರಶ್ನಿಸಿದ್ದು. ಭಯೋತ್ಪಾದನಾ ವಿರೋಧಿ ಹೋರಾಟದ ನೆಪದಲ್ಲಿ ಅಮಾಯಕ ಜನರನ್ನು ಅಮೇರಿಕ ಹೇಗೆ ನಿರ್ಭಾವುಕವಾಗಿ ಸಾಯಿಸುತ್ತದೆ ಎಂದು ವಿವರಿಸಿದ್ದು. ಆ ಕುರಿತಾಗಿರುವ ದಾಖಲೆಗಳನ್ನು ಸೋರಿಕೆ ಮಾಡಿದ್ದು.
   ಕಳೆದ ವಾರ ಅಮೇರಿಕದ ಮಿಲಿಟರಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ 35 ಪುಟಗಳ ಹೇಳಿಕೆಯನ್ನು ನ್ಯಾಯಾಧೀಶರೆದುರು ಬ್ರಾಡ್ಲಿ ಮ್ಯಾನ್ನಿಂಗ್ ಓದಿದ್ದಾನೆ. 2007ರಲ್ಲಿ ಅಮೇರಿಕದ ಅಪಾಚೆ ಹೆಲಿಕಾಪ್ಟರೊಂದು ಇರಾಕ್‍ನ ಬಗ್ದಾದಿನಲ್ಲಿ ಜನರ ಮೇಲೆ ಬಾಂಬು ಸುರಿಸುತ್ತದೆ. ಅದರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರೂ ಸೇರಿ ಅನೇಕ ಅಮಾಯಕರು ಸಾವಿಗೀಡಾಗುತ್ತಾರೆ. ಅಮೇರಿಕದ ಗುಪ್ತಚರ ವಿಭಾಗದ ವಿಶ್ಲೇಷಣಾಧಿಕಾರಿಯಾಗಿ ಇರಾಕ್‍ನ ಬಗ್ದಾದ್‍ನಲ್ಲಿ ಕರ್ತವ್ಯದಲ್ಲಿದ್ದ ನನ್ನನ್ನು ಆ ರಕ್ತದೋಕುಳಿ ತೀವ್ರವಾಗಿ ಘಾಸಿಗೊಳಿಸಿತು (Sikkened) ಎಂದಾತ ಹೇಳಿದ್ದಾನೆ. ಜನರನ್ನು ಎಗ್ಗಿಲ್ಲದೇ ಕೊಲ್ಲುವ, ಹಿಡಿದು ಥಳಿಸುವ ಮತ್ತು ಗುರಿ ರಹಿತವಾಗಿ ಓಡುವ ಅಮೇರಿಕನ್ ಸೇನೆಯನ್ನು ನೋಡಿ ನಾನು ತೀವ್ರ ಹತಾಶೆಗೊಂಡಿದ್ದೆ. ಅಮೇರಿಕನ್ ನಾಗರಿಕರಿಗೆ ಈ ಯುದ್ಧದ ಶೈಲಿ ಮತ್ತು ಖರ್ಚು ಗೊತ್ತಾಗಲಿ, ಆ ಮುಖಾಂತರ ಅವರು ಆಕ್ರಮಣವನ್ನು ಪ್ರತಿಭಟಿಸಲಿ ಎಂಬ ಸದುದ್ದೇಶದಿಂದ ನಾನು ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಗೆ 2010ರಲ್ಲಿ ಸೋರಿಕೆ ಮಾಡಿದೆ. ವೀಡಿಯೋಗಳನ್ನು ಹಸ್ತಾಂತರಿಸಿದೆ.. ಎಂದಾತ ಸ್ವಯಂ ಹೇಳಿಕೊಂಡಿದ್ದಾನೆ. (ದಿ ಹಿಂದೂ  02, 03, 2013)             
   ಆತನ ವಿಚಾರಣೆ ಮುಂದುವರಿಯುತ್ತಿದೆ.ಅದರ ಪಲಿತಾಂಶ ಏನೇ ಇರಲಿ, ಅಮೇರಿಕದ ಯುದ್ಧ ನೀತಿಯನ್ನು ಜಗತ್ತು ವಿಚಾರಣೆಗೆ ಒಳಪಡಿಸಲೇ ಬೇಕು ಎಂಬ ಒತ್ತಾಯವನ್ನು ಈ ಮೂಲಕ  ಬ್ರಾಡ್ ಮ್ಯಾನ್ನಿಂಗ್ ಪರೋಕ್ಷವಾಗಿ ಮಂಡಿಸಿದ್ದಾನೆ. ನಿಜವಾಗಿ, ಅಮೇರಿಕದ ‘ಯುದ್ಧನೀತಿ' ಪ್ರಶ್ನೆಗೊಳಗಾಗಿರುವುದು ಇದೇ ಮೊದಲಲ್ಲ. ಎರಡನೇ ವಿಶ್ವಯುದ್ಧದಿಂದಲೇ ಅಮೇರಿಕ ವಿವಾದಿತ ರಾಷ್ಟ್ರವಾಗಿದೆ. ತನಗೆ ಸರಿ ಕಾಣದ್ದನ್ನು ಬಲವಂತದಿಂದ ಸರಿಪಡಿಸುವ,ತನ್ನ ಮೂಗಿನ ನೇರಕ್ಕೇ ಸರಿ-ತಪ್ಪುಗಳನ್ನು ತೀರ್ಮಾನಿಸುವ ಚಾಳಿಯನ್ನು ಅದು ತೋರ್ಪಡಿಸುತ್ತಲೇ ಬಂದಿದೆ. ಅಫಘಾನ್ ಮತ್ತು ಇರಾಕ್‍ಗಳ ಮೇಲಿನ ದಾಳಿ ಈ ಮಾನಸಿಕತೆಯ ಮುಂದುವರಿಕೆಯಷ್ಟೇ. ಒಂದು ವೇಳೆ ಮ್ಯಾನ್ನಿಂಗ್‍ನಂಥವರು ಅಪರೂಪಕ್ಕೊಮ್ಮೆ ಅಮೇರಿಕದ ಕ್ರೌರ್ಯವನ್ನು ಬಿಚ್ಚಿಡದೇ ಹೋಗಿದ್ದರೆ, ಅಸಾಂಜೆಯಂಥ ಪತ್ರಕರ್ತರು ವಿಕಿಲೀಕ್ಸ್ ನ ಮುಖಾಂತರ ಅಮೇರಿಕದ ನಿಜ ಮುಖವನ್ನು ತೋರಿಸುವ ಧೈರ್ಯ ಮಾಡದೇ ಇರುತ್ತಿದ್ದರೆ ಏನಾಗುತ್ತಿತ್ತು? ಜಗತ್ತಿನ ಹೆಚ್ಚಿನ ಮಾಧ್ಯಮ ಕೇಂದ್ರಗಳು ಇವತ್ತು ಅಮೇರಿಕನ್ ಹಿತಾಸಕ್ತಿಗಳ ಹಿಡಿತದಲ್ಲಿವೆ. ಇವು ಸೆನ್ಸಾರ್ ಮಾಡಿ, ಒಪ್ಪಿಗೆ ಸೂಚಿಸಿದ ಸುದ್ದಿಗಳಷ್ಟೇ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು. ಅವು ಹೇಗಿರುತ್ತವೆ ಎಂಬುದೂ ನಮಗೆ ಗೊತ್ತು. ಅಮೇರಿಕದ ಡ್ರೋನ್ ಕ್ಷಿಪಣಿಯೊಂದು ಅಫಘನ್ನಿನಲ್ಲಿ ನಡೆಯುವ ಮದುವೆ ಸಮಾರಂಭಕ್ಕೋ, ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಂದಣಿಗೋ ಬಿದ್ದರೆ, ತಕ್ಷಣ ಆ ಡ್ರೋನನ್ನು ಸಮರ್ಥಿಸುವುದಕ್ಕೆ ವಿವಿಧ ನೆವನಗಳನ್ನು ಮಾಧ್ಯಮಗಳು ಹುಡುಕುತ್ತವೆ. ಅದರಲ್ಲಿ ಯಾವ ತಾಲಿಬಾನ್ ಮುಖಂಡ ಭಾಗವಹಿಸಿದ್ದ ಎಂಬ ವಿವರವುಳ್ಳ ಪತ್ರಿಕಾ ಹೇಳಿಕೆಯನ್ನು ಅಮೇರಿಕ ಬಿಡುಗಡೆಗೊಳಿಸುತ್ತದೆ. ಎಲ್ಲೋ ಬಂದೂಕು ಹಿಡಿದು, ಗಡ್ಡ-ಮುಂಡಾಸು ಧರಿಸಿ, ಕುರ್ತಾ-ಪೈಜಾಮ ತೊಟ್ಟ ಅಫಘಾನಿಯನ್ನು ತೋರಿಸಿ ಮಾಧ್ಯಮಗಳು ಆ ಸುದ್ದಿಯನ್ನು ಇನ್ನಷ್ಟು ಕಲುಷಿತಗೊಳಿಸಿ ಬಿಡುತ್ತವೆ. 'ಬಂದೂಕು, ಕೂದಲು, ಮುಂಡಾಸು, ಗಡ್ಡ, ಪೈಜಾಮ.. ಇವೆಲ್ಲ ಅಫಘಾನಿಯರ ಸಂಸ್ಕ್ರಿತಿ, ಅದು ಭಯೋತ್ಪಾದನೆಯ ಸಂಕೇತವಲ್ಲ' ಎಂದು ಜನರನ್ನು ತಿದ್ದುವ ಪ್ರಯತ್ನಗಳನ್ನು ಹೆಚ್ಚಿನ ಮಾಧ್ಯಮಗಳು ಮಾಡುವುದೂ ಇಲ್ಲ. ನಿಜವಾಗಿ, ಅಫಘನ್ನಿನ ಮೇಲೆ ದಾಳಿ ಮಾಡಿದ ಬಳಿಕ ಅಮೇರಿಕ ಮೊತ್ತಮೊದಲು ಮಾಡಿದ್ದೇ ಈ ತಿರುಚುವ ಕೆಲಸವನ್ನು. ಸಾಮಾನ್ಯ ಅಫಘಾನಿಯರ ವಿವಿಧ ಭಂಗಿಯ ಚಿತ್ರವನ್ನು ಬಿಡುಗಡೆಗೊಳಿಸಿ, ಇದು ‘ಭಯೋತ್ಪಾದಕ' ಅಂದಿತು. ಬುದ್ಧ ವಿಗ್ರಹಗಳು ಧ್ವಂಸಗೊಂಡ, ಯಾರದಾದರೂ ಕೈ-ಕಾಲು ಕತ್ತರಿಸಿದ ಸುದ್ದಿಗಳನ್ನಷ್ಟೇ ಅಫಘನ್ನಿನಿಂದ ಆಲಿಸುತ್ತಿದ್ದ ಜಗತ್ತು ಅಮೇರಿಕ ಬಿಡುಗಡೆಗೊಳಿಸುತ್ತಿರುವ ಈ ಹೊಸ ಮನುಷ್ಯ ಭಯೋತ್ಪಾದಕನೆಂದೇ ನಂಬಿಬಿಟ್ಟಿತು. ಆದ್ದರಿಂದ ಅಮೇರಿಕದ ಬಾಂಬುಗಳಿಗೆ ಅಫಘಾನಿಯರು ಬಲಿಯಾದಾಗಲೆಲ್ಲಾ ಭಯೋತ್ಪಾದಕರ ನಾಶವಾಯಿತು ಎಂದು ಜಗತ್ತು ಸಂಭ್ರಮಪಟ್ಟಿತು.
    ನಿಜವಾಗಿ, ಅಮೇರಿಕನ್ ಯೋಧರು ಗ್ವಾಂಟೆನಾಮೋದಲ್ಲಿ, ಅಫಘನ್ನಿನಲ್ಲಿ ನಡೆಸುತ್ತಿರುವ ಕ್ರೌರ್ಯದ ವೀಡಿಯೋಗಳನ್ನು ವಿಕಿಲೀಕ್ಸ್ ಗೆ ಹಸ್ತಾಂತರಿಸುವಾಗ ಬ್ರಾಡ್ಲಿ  ಮ್ಯಾನ್ನಿಂಗ್‍ಗೆ ತಾನೇನು ಮಾಡುತ್ತಿದ್ದೇನೆಂಬುದು ಚೆನ್ನಾಗಿ ಗೊತ್ತಿತ್ತು. ಅದರ ಪರಿಣಾಮ ಏನಾಗಬಹುದು ಎಂಬುದರ ಅರಿವೂ ಇತ್ತು. ಒಂದು ದೇಶ ಎಷ್ಟೇ ಅನ್ಯಾಯದಲ್ಲಿ ತೊಡಗಿರಲಿ, ಆ ದೇಶದ ಯೋಧನೊಬ್ಬ ಆ  ಅನ್ಯಾಯದ ದಾಖಲೆಗಳನ್ನು ಬಿಡುಗಡೆಗೊಳಿಸುವುದೆಂದರೆ, ದೇಶದ್ರೋಹವನ್ನು ಎಸಗಿದಂತೆ.ಅದಕ್ಕೆ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ ಸಿಗುವ ಸಾಧ್ಯತೆಯೇ ಹೆಚ್ಚು.  ಹೀಗಿದ್ದೂ, ಅಮೇರಿಕದ ಮುಖವನ್ನು ಬಹಿರಂಗಪಡಿಸಲು ಬ್ರಾಡ್ಲಿ  ಮ್ಯಾನ್ನಿಂಗ್  ಮುಂದಾದನೆಂದರೆ, ಅದು ಖಂಡಿತ ಸಣ್ಣ ಸಾಹಸವಲ್ಲ. ಅದನ್ನು ಅಮೇರಿಕ ದೇಶದ್ರೋಹತನ ಎಂದು ಪರಿಗಣಿಸಿದರೂ ಜಗತ್ತು ಹಾಗೆ ಪರಿಗಣಿಸಬೇಕಾದ ಅಗತ್ಯವೂ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಲಿಯನ್ ವಾಲಾಬಾಗ್‍ನಲ್ಲಿ ಹತ್ಯಾಕಾಂಡ ನಡೆದಿತ್ತಲ್ಲವೇ? ಆ  ಹತ್ಯಾಕಾಂಡಕ್ಕೆ ಬ್ರಿಟಿಷ್ ಜನರಲ್  ಡಯರ್ ಆದೇಶ ಕೊಟ್ಟದ್ದಾದರೂ ಆ ಆದೇಶ ಜಾರಿಗೊಂಡದ್ದು ಬ್ರಿಟಿಷ್ ಇಲಾಖೆಯಲ್ಲಿದ್ದ ಭಾರತೀಯ ಪೊಲೀಸ ರಿಂದಲೇ ಎಂದು ಇತಿಹಾಸ ಹೇಳುತ್ತದೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಭಾರತೀಯ ಪೊಲೀಸರೇ ಗುಂಡು ಹಾರಿಸಿದ್ದರು. ಸಾಮಾನ್ಯವಾಗಿ ವ್ಯವಸ್ಥೆಯ ಕ್ರೌರ್ಯವನ್ನು ಅದರ ಭಾಗವೇ ಆಗಿರುವ ಅಧಿಕಾರಿಗಳಾಗಲಿ, ಸೈನಿಕರಾಗಲಿ ಪ್ರಶ್ನಿಸುವುದೇ ಇಲ್ಲ. ಶಿಕ್ಷೆಗೆ ಹೆದರಿ ಅವರೆಲ್ಲಾ ಸುಮ್ಮನಾಗುತ್ತಾರೆ.
   ಏನೇ ಆಗಲಿ, ಬ್ರಾಡ್ಲಿ  ಮ್ಯಾನ್ನಿಂಗ್ ಎಂಬ ಯೋಧನೊಬ್ಬ ಅಮೇರಿಕದ ಕ್ರೌರ್ಯದ ಮುಖವನ್ನು ಎಲ್ಲ ಅಪಾಯಗಳ ಮಧ್ಯೆಯೂ ಜಗತ್ತಿನ ಮುಂದಿಡುವ ಧೈರ್ಯ ಪ್ರದರ್ಶಿಸಿದ್ದಾನೆ. ಅಮೇರಿಕ ಆತನನ್ನು ದೇಶದ್ರೋಹಿ ಎಂದು ಕರೆದರೂ ಅಫಘಾನ್, ಇರಾಕ್‍ನ ಮಂದಿ ಆತನನ್ನು ಮನುಷ್ಯಪ್ರೇಮಿ ಎಂದೇ ಕರೆದಾರು. ನರಭಕ್ಷಕ ತೋಳಗಳ ಹಿಂಡಿನಲ್ಲಿ ಕಾಣಿಸಿಕೊಂಡ ಈ ಜಿಂಕೆ ಮರಿಗಾಗಿ ಅವರು ಖಂಡಿತ ಹೆಮ್ಮೆ ಪಟ್ಟಾರು.

Monday, 25 February 2013

ಅಕ್ಷರ ಭಯೋತ್ಪಾದಕರನ್ನು ವಿಳಾಸ ಸಮೇತ ಪತ್ತೆಹಚ್ಚಿದ ಪತ್ರಕರ್ತ

   ಮುತೀಉರ್ರಹ್ಮಾನ್ ಸಿದ್ದೀಖಿ

   ಮುತೀಉರ್ರಹ್ಮಾನ್ ಸಿದ್ದೀಖಿ ಎಂಬ ಯುವ ಪತ್ರಕರ್ತ ಕೇವಲ 6 ತಿಂಗಳ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆಯೊಂದನ್ನು ನಡೆಸಿ ಗಮನ ಸೆಳೆದಿದ್ದಾನೆ. ಆ ಮೂಲಕ ಮಾಧ್ಯಮ ಮತ್ತು ಪೊಲೀಸ್  ಇಲಾಖೆಯಲ್ಲಿರುವ ಕೆಲವು ಅಪಾಯಕಾರಿ ಭಯೋತ್ಪಾದಕರನ್ನು ಆತ ವಿಳಾಸ ಸಮೇತ ಬಹಿರಂಗಪಡಿಸಿದ್ದಾನೆ. ಇದಕ್ಕಾಗಿ ಆತ ಪೆನ್ನು ಬಳಸಿಲ್ಲ. ಭಾಷಣ ಮಾಡಿಲ್ಲ. 6 ತಿಂಗಳ ಕಾಲ ಜೈಲಲ್ಲಿ ಕೂರುವ ಮುಖಾಂತರ ತಣ್ಣಗೆ ಈ ಕಾರ್ಯಾಚರಣೆಯನ್ನು ನಡೆಸಿದ್ದಾನೆ. 2012 ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಪೊಲೀಸರು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು. ಒಂದಿಬ್ಬರು ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆ ನಡೆಸುವ ಭಾರೀ ಭಯೋತ್ಪಾದಕ ಸಂಚನ್ನು ತಾವು ವಿಫಲಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ಬಂಧಿತ 15 ಮಂದಿಯಲ್ಲಿ ಇಬ್ಬರು ಇರಾನ್‍ಗೆ ಭೇಟಿ ಕೊಟ್ಟಿದ್ದು, ಆ ಬಳಿಕ ಪಾಕಿಸ್ತಾನಕ್ಕೆ ತೆರಳಿ ಐ.ಎಸ್.ಐ. ಏಜೆಂಟರೊಂದಿಗೆ ಮಾತುಕತೆ ನಡೆಸಿದ್ದನ್ನೂ ವಿವರಿಸಿದ್ದರು. ಅಲ್ಲದೇ 3 ತಿಂಗಳ ಸತತ ನಿಗಾದ ಬಳಿಕ ಈ 15 ಮಂದಿಯನ್ನು ಬಂಧಿಸಲಾಗಿದೆಯೆಂದೂ ಹೇಳಿಕೊಂಡಿದ್ದರು. ಅದರ ಮರುದಿನದಿಂದಲೇ ರಾಜ್ಯದಲ್ಲಿ ಅಕ್ಷರ ಭಯೋತ್ಪಾದನೆಗಳು ಪ್ರಾರಂಭವಾಗಿದ್ದುವು. ಬಂಧಿತ, ಡೆಕ್ಕನ್ ಹೆರಾಲ್ಡ್  ಪತ್ರಿಕೆಯ  ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿ ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಪತ್ರಕರ್ತನ ಸೋಗಿನಲ್ಲಿ ಆತ ಹೇಗೆ ವಿಧ್ವಂಸಕ ಕೃತ್ಯಕ್ಕೆ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಅವು ತನಿಖಾ ವರದಿಯನ್ನು ಪ್ರಕಟಿಸಿದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚಿನ ಹೊಣೆಯನ್ನೂ ಈ ಪತ್ರಕರ್ತನ ಮೇಲೆ ಹೊರಿಸಲಾಯಿತು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ, ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಮುತೀಉರ್ರಹ್ಮಾನ್‍ನ ಆ ವರೆಗಿನ ಪತ್ರಿಕಾ ವೃತ್ತಿಯಲ್ಲಿ ಅನುಮಾನಿತ ಅಂಶಗಳು ಕಂಡಿಲ್ಲವಾದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಪತ್ರಕರ್ತನನ್ನು ಸಮರ್ಥಿಸಿಕೊಳ್ಳುವುದಕ್ಕೆ ಅದು ಹಿಂದೇಟು ಹಾಕಿತು. ಆದರೆ ಮುತೀಉರ್ರಹ್ಮಾನ್ ತನ್ನ ಸಂಘಟನೆಯ ಸದಸ್ಯನೆಂದು ಎಸ್.ಐ.ಓ.(ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ)ನ ರಾಜ್ಯಾಧ್ಯಕ್ಷ ಅಶ್ಫಾಕ್ ಅಹ್ಮದ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಘೋಷಿಸಿದರು. ಮುತೀಉರ್ರಹ್ಮಾನ್ ಅಮಾಯಕ ಎಂದವರು ಸಾರಿದರು.
   ದುರಂತ ಏನೆಂದರೆ, ರಾಜ್ಯದ ಪತ್ರಕರ್ತ ಸಂಘಟನೆಗಳು ಮುತೀಉರ್ರಹ್ಮಾನ್‍ನ ಬಂಧನದ ಕುರಿತಂತೆ ಮೌನ ವಹಿಸಿದ್ದು. ಪತ್ರಕರ್ತ ನವೀನ್ ಸೂರಿಂಜೆಯ ಬಂಧನದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಅವು ಮುತೀಉರ್ರಹ್ಮಾನ್‍ನ ಬಂಧನದ ಸಂದರ್ಭದಲ್ಲಿ ತೋರಿಸಲೇ ಇಲ್ಲ. ಪ್ರತಿಭಟನೆ ನಡೆಸಬೇಕಾಗಿದ್ದ  ಅನೇಕ ಪತ್ರಕರ್ತರು ಯಾರೋ ಹೆಣೆದ ಷಡ್ಯಂತ್ರದ ದಾಳವಾಗಿ ಬಿಟ್ಟರು. ಆತನ ಮೇಲೆ ಹೊರಿಸಲಾದ ಆರೋಪಗಳೆಲ್ಲ ನಿಜವಾಗಿರಬಹುದು ಎಂದು ನಂಬುವ ಸ್ಥಿತಿಗೆ ಅನೇಕ ಪತ್ರಕರ್ತರು ತಲುಪಿ ಬಿಟ್ಟಿದ್ದರು. ಇಷ್ಟಕ್ಕೂ, ಕೆಲವು ಪತ್ರಿಕೆಗಳು ಕಲ್ಪಿತ ಸುದ್ದಿಗಳನ್ನು ಆಕರ್ಷಕ ಹೆಡ್‍ಲೈನ್‍ನೊಂದಿಗೆ ಪ್ರತಿದಿನವೂ ಪ್ರಕಟಿಸುತ್ತಿರುವಾಗ ಗೊಂದಲ ಉಂಟಾಗದಿರುವುದಾದರೂ ಹೇಗೆ? ಹೆಚ್ಚಿನೆಲ್ಲ ಪತ್ರಿಕೆಗಳು ಮುತೀಉರ್ರಹ್ಮಾನ್‍ನನ್ನು ಭಯೋತ್ಪಾದಕನಂತೆ ಚಿತ್ರಿಸಿ ಸಂಪಾದಕೀಯ ಬರೆಯುವಾಗ, ಆತನ ಬಗ್ಗೆ ನಾಲ್ಕು ಕೊಂಡಾಟದ ವಾಕ್ಯ ಬರೆಯುವುದಕ್ಕೆ ಸಾಮಾನ್ಯ ಪತ್ರಕರ್ತನಿಗೆ ಧೈರ್ಯ ಎಲ್ಲಿಂದ ಬರಬೇಕು? ನಿಜವಾಗಿ, ಮಾಧ್ಯಮಗಳಲ್ಲಿರುವ ಒಂದು ವರ್ಗವು ಭಯೋತ್ಪಾದನೆಯ ಭೂತವನ್ನು ಹಬ್ಬಿಸಿ, ಇಡೀ ಕನ್ನಡ ಪತ್ರಿಕೋದ್ಯಮವನ್ನೇ ಕುಲಗೆಡಿಸಿಬಿಟ್ಟಿತ್ತು. ಪತ್ರಕರ್ತನ ಬಂಧನದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ದೇಶದ್ರೋಹವಾದೀತೋ ಎಂದು ಪ್ರಮುಖ ಪತ್ರಕರ್ತರೂ  ಭಯಪಡುವಷ್ಟು ಈ ಭೂತ ಪ್ರಭಾವಶಾಲಿಯಾಗಿತ್ತು. ಆದ್ದರಿಂದಲೇ, ಮುತೀಉರ್ರಹ್ಮಾನ್‍ನ ಬಂಧನದ ವಿರುದ್ಧ ರಾಜ್ಯದಲ್ಲಿ ಪತ್ರಕರ್ತರಿಂದ ಒಂದೇ ಒಂದು ಪ್ರತಿಭಟನೆ ನಡೆಯಲಿಲ್ಲ. ಆತನ ಅಮಾಯಕತನವನ್ನು ಕನಿಷ್ಠ ಆತನ ಪತ್ರಕರ್ತ ಮಿತ್ರರು ಮತ್ತು ಸಂಪಾದಕರಿಗೂ ಘೋಷಿಸಲು ಸಾಧ್ಯವಾಗಲಿಲ್ಲ. ಇಷ್ಟಕ್ಕೂ, ಪತ್ರಕರ್ತರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಈ ಪತ್ರಕರ್ತರು ಮತ್ತು ಸಂಪಾದಕರು ಬರೆದ ಸುದ್ದಿಗಳನ್ನಲ್ಲವೇ ಅವರೂ ಓದುತ್ತಿರುವುದು? ಸುದ್ದಿಗಳೆಲ್ಲ ಮುತೀಉರ್ರಹ್ಮಾನ್‍ನನ್ನು ‘ಜಿಹಾದಿ ಪತ್ರಕರ್ತ' ಎಂದು ಕರೆಯುವಾಗ ಅವರು ಅದಕ್ಕಿಂತ ಭಿನ್ನವಾಗಿ ಆಲೋಚಿಸುವುದಕ್ಕೆ ಸಾಧ್ಯವಿದೆಯೇ?
   ಇದೀಗ ಮುತೀಉರ್ರಹ್ಮಾನ್‍ನ ಬಿಡುಗಡೆಗೆ ನ್ಯಾಯಾಲಯವೇ ಆದೇಶಿಸಿದೆ. ಆತನ ಮೇಲೆ ಯಾವೊಂದು ಆರೋಪವನ್ನೂ ಪೊಲೀಸರು ಹೊರಿಸಿಲ್ಲ. ವಿಷಾದ ಏನೆಂದರೆ, ಮುತೀಉರ್ರಹ್ಮಾನ್‍ನಿಗೆ ಖಳನಾಯಕನ ವೇಷ ತೊಡಿಸಿ, ಎರಡು ವಾರಗಳ ತನಕ ಮುಖಪುಟದಲ್ಲಿ ಕೂರಿಸಿದ ಪತ್ರಿಕೆಗಳು, ಆತನ ಬಿಡುಗಡೆಯ ಸುದ್ದಿಗೆ ಆ ಮಟ್ಟದ ಪ್ರಚಾರ ನೀಡದೇ ಇರುವುದು. ಆ ಕುರಿತಂತೆ ಸಂಪಾದಕೀಯ ಬರೆಯದೇ ಇರುವುದು. ಓರ್ವ ಅಮಾಯಕನನ್ನು ಭಯೋತ್ಪಾದಕನಂತೆ ಬಿಂಬಿಸಿದ ಪತ್ರಿಕೆಗಳು ಯಾಕಾಗಿ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡವು? ಈ ದೇಶದಲ್ಲಿ ಭಯೋತ್ಪಾದನೆಯ ಆರೋಪ ಹೊತ್ತುಕೊಂಡ ವ್ಯಕ್ತಿಯೊಬ್ಬ ಎದುರಿಸಬೇಕಾದ ಸಮಸ್ಯೆಗಳು ಏನೆಂಬುದು ಮಾಧ್ಯಮ ಮಿತ್ರರಿಗೆ ಗೊತ್ತಿಲ್ಲವೇ? ಭಯೋತ್ಪಾದನೆಯೆಂಬುದು ಕಳ್ಳತನದ ಆರೋಪದಂತೆ ಅಲ್ಲವಲ್ಲ. ನ್ಯಾಯಾಲಯವು ಅಮಾಯಕನೆಂದು ಬಿಡುಗಡೆಗೊಳಿಸಿದರೂ ಸಮಾಜ ಅಪರಾಧಿಯಂತೆಯೇ ನೋಡುತ್ತದಲ್ಲವೇ? ಸರಕಾರಿ ಇಲಾಖೆ ಇಲ್ಲವೇ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಸಿಗುವುದು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗುತ್ತದಲ್ಲವೇ? ಇಂಥ ವಾತಾವರಣದಲ್ಲಿ, ಸಮಾಜವನ್ನು ತಿದ್ದಬೇಕಾದ ಮಾಧ್ಯಮಗಳೇಕೆ ಬೆನ್ನು ತಿರುಗಿಸುತ್ತವೆ? ಸಮಾಜವನ್ನು ತಪ್ಪು ದಾರಿಗೆಳೆಯುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯೇ?
   ಏನೇ ಆಗಲಿ, ಮುತೀಉರ್ರಹ್ಮಾನ್ ಎಂಬ ಸಾಮಾನ್ಯ ಪತ್ರಕರ್ತನೋರ್ವ ಮಾಧ್ಯಮ ಕ್ಷೇತ್ರದಲ್ಲಿರುವ ಕೆಲವು ಭಯೋತ್ಪಾದಕರ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಅವರು ಯಾವ್ಯಾವ ಪತ್ರಿಕೆಯಲ್ಲಿ, ಯಾವ್ಯಾವ ಸ್ಥಾನದಲ್ಲಿದ್ದಾರೆಂಬುದನ್ನೂ ಬಹಿರಂಗಕ್ಕೆ ತಂದಿದ್ದಾನೆ. ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳು ಸುದ್ದಿಯ ಹೆಸರಲ್ಲಿ ಹೇಗೆ ಅಪ್ಪಟ ಸುಳ್ಳುಗಳನ್ನು ಹೇಳಬಲ್ಲವು ಎಂಬುದಕ್ಕೂ ಕನ್ನಡಿ ಹಿಡಿದಿದ್ದಾನೆ. ಆದ್ದರಿಂದ, 6 ತಿಂಗಳು ಜೈಲಲ್ಲಿದ್ದರೂ ಪರವಾಗಿಲ್ಲ, ಶಾಶ್ವತವಾಗಿ ಜೈಲಲ್ಲೇ ಇರಬೇಕಾದವರ ಪಟ್ಟಿಯೊಂದನ್ನು ಸಮಾಜದ ಮುಂದಿಟ್ಟನಲ್ಲ, ಅದಕ್ಕಾಗಿ ಆತನಿಗೆ ಅಭಿನಂದನೆ ಸಲ್ಲಿಸಬೇಕು.

Monday, 18 February 2013

`ಪಿಸ್ಟೋರಿಯಸ್’ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು...


   ಈ ಜಗತ್ತಿನಲ್ಲಿ ದಿನ ಬೆಳಗಾಗುವುದರೊಳಗೆ ರೋಲ್ ಮಾಡೆಲ್‍ಗಳು ಉದಯಿಸುವುದಿದೆ. ನೂರು ಮೀಟರ್ ಓಟವನ್ನು ವಿಶ್ವದಾಖಲೆಯ ಸಮಯದೊಂದಿಗೆ ಓಡಿ ಮುಗಿಸಿದರೆ; ಕಾರ್ ರೇಸ್, ಸೈಕ್ಲಿಂಗ್ ರೇಸ್‍ನಲ್ಲಿ ವಿಶ್ವದಾಖಲೆ ಮಾಡಿದರೆ; ಕ್ರಿಕೆಟ್ಟು, ಟೆನ್ನಿಸ್‍ನಲ್ಲಿ ಅಮೋಘ ಸಾಧನೆ ಮಾಡಿದರೆ.. ಕ್ರೀಡಾ ಪಟುಗಳು ಮಾಧ್ಯಮಗಳನ್ನಿಡೀ ತುಂಬಿಕೊಳ್ಳುತ್ತಾರೆ. ಬ್ರೇಕಿಂಗ್ ನ್ಯೂಸೂ ಅವರೇ. ಎಕ್ಸ್ ಕ್ಲೂಸಿವ್ ನ್ಯೂಸೂ ಅವರೇ. ಅವರ ಬದುಕು, ಹಿನ್ನೆಲೆ, ಶ್ರಮ ಇತ್ಯಾದಿಗಳೆಲ್ಲವೂ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತವೆ. ಕ್ರೀಡಾಪಟುಗಳೆಲ್ಲ ಯುವ ಪ್ರಾಯದವರೇ ಆಗಿರುವುದರಿಂದ ಯುವ ಸಮೂಹವು ಸಹಜವಾಗಿ ಈ ಚರ್ಚೆಗಳಿಂದ ಆಕರ್ಷಿತಗೊಳ್ಳುತ್ತದೆ. ಕ್ರಮೇಣ ಅವರೊಳಗೆ ಈ ಕ್ರೀಡಾಪಟುಗಳು ಚಿಕ್ಕದೊಂದು ಗೂಡು ಕಟ್ಟತೊಡಗುತ್ತಾರೆ. ಅವರನ್ನು ರೋಲ್ ಮಾಡೆಲ್‍ಗಳಂತೆ ಪ್ರೀತಿಸತೊಡಗುತ್ತಾರೆ. ತಮ್ಮ ಪುಸ್ತಕದಲ್ಲಿ, ಟೀ ಶರ್ಟು, ಫೇಸ್‍ಬುಕ್‍ನಲ್ಲಿ.. ಇವರನ್ನು ತುಂಬಿಸಿಕೊಳ್ಳುತ್ತಾರೆ. ಅವರ ಪ್ರಾಯ, ದೇಶ, ಸಾಧನೆಗಳು, ಅವರಿಗಿರುವ ಸಂಬಂಧಗಳು.. ಹೀಗೆ ಸಕಲ ಮಾಹಿತಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳುವ ಅಪ್ಪಟ ಫ್ಯಾನ್ ಕ್ಲಬ್‍ಗಳೂ ಇರುತ್ತವೆ. ಸೈಕ್ಲಿಂಗ್‍ನಲ್ಲಿ ನಿಬ್ಬೆರಗಾಗುವ ಸಾಧನೆ ಮಾಡಿದ ಅಮೇರಿಕದ ಆರ್ಮ್ ಸ್ಟ್ರಾಂಗ್ ನಿಂದ ಎಷ್ಟು ಮಂದಿ ಪ್ರಭಾವಿತವಾಗಿಲ್ಲ? ಕ್ಯಾನ್ಸರ್ ರೋಗಿಯಾಗಿದ್ದಾಗ ಅವರು ತೋರಿದ ಅಪಾರ ಆತ್ಮವಿಶ್ವಾಸ, ಕೆಚ್ಚೆದೆಯ ಬಗ್ಗೆ ಎಷ್ಟು ಬಾರಿ ಪತ್ರಿಕೆಗಳು ಬರೆದಿಲ್ಲ? ಅಂದ ಹಾಗೆ ಆತ ಕ್ಯಾನ್ಸರ್‍ನಿಂದ ಹೊರಬಂದು ಸೈಕ್ಲಿಂಗ್ ರೇಸ್‍ನಲ್ಲಿ ಎಲ್ಲ ದಾಖಲೆಗಳನ್ನೂ ಅಳಿಸಿ ಹಾಕಿದ್ದು ಸಣ್ಣ ಸಾಧನೆಯೇನೂ ಆಗಿರಲಿಲ್ಲ. ಆದರೆ ಆ ಸಾಧನೆಯ ಹಿಂದೆ ನಿಷೇಧಿತ ಔಷಧಿಗಳ (ಡ್ರಗ್ಸ್) ಪ್ರಭಾವವಿತ್ತು ಎಂಬುದನ್ನು ಆತ ಒಂದು ತಿಂಗಳ ಹಿಂದೆ ಬಹಿರಂಗವಾಗಿಯೇ ಒಪ್ಪಿಕೊಂಡ. ನಿಷೇಧಿತ ಔಷಧಗಳನ್ನು ಸೇವಿಸದೇ ತಾನು ಅಂಥ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ ಎಂದೂ ಹೇಳಿದ. ಇದೀಗ ಆಸ್ಕರ್ ಪಿಸ್ಟೋರಿಯಸ್ ಎಂಬ ‘ಬ್ಲೇಡ್ ರನ್ನರ್’ ತಪ್ಪು ಮಾಡಿ ಜೈಲು ಸೇರಿದ್ದಾನೆ.
  ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪಿಸ್ಟೋರಿಯಸ್ ಸಾಕಷ್ಟು ಸುದ್ದಿ ಮಾಡಿದ್ದ. ಎರಡೂ ಕಾಲುಗಳಿಲ್ಲದ ಈತ, ಕಾರ್ಬನ್ ಫೈಬರ್‍ನಿಂದ ತಯಾರಿಸಲಾದ ಕೃತಕ ಕಾಲುಗಳಿಂದ ಓಡಿ ಕಾಲುಳ್ಳವರನ್ನೂ ನಾಚಿಸಿದ್ದ. ಆತನ ಓಟ ಎಷ್ಟು ಆಕರ್ಷಣೀಯವೆಂದರೆ, ಕಾಲಿದ್ದವರೂ ಬೆರಗಾಗುವಷ್ಟು. ಆದ್ದರಿಂದಲೇ ನೂರು ಮೀಟರ್ ಓಟದ ವಿಶ್ವಚಾಂಪಿಯನ್ ಉಸೇನ್ ಬೋಲ್ಟ್ ನಂತೆಯೇ ಭಾರೀ ತಾರಾ ವರ್ಚಸ್ಸನ್ನು ಗಳಿಸಿಕೊಂಡ. ಬ್ಲೇಡ್‍ನಂತಹ ಕೃತಕ ಕಾಲುಗಳನ್ನು ಹೊಂದಿರುವುದರಿಂದ ‘ಬ್ಲೇಡ್ ರನ್ನರ್' ಅನ್ನುವ ಹೊಸ ಪದಪ್ರಯೋಗವೊಂದೂ ಆತನಿಗಾಗಿ ಹುಟ್ಟಿಕೊಂಡಿತು. ದಕ್ಷಿಣ ಆಫ್ರಿಕದಾದ್ಯಂತ ಆತನ ಬೃಹತ್ ಕಟೌಟ್‍ಗಳು, ಪ್ಲೆಕ್ಸ್ ಗಳೂ ಕಾಣಿಸಿಕೊಂಡವು. ಆತನ ಜೀವನೋತ್ಸಾಹ, ಆತ್ಮವಿಶ್ವಾಸಗಳೆಲ್ಲ ಭಾಷಣಗಳ ವಸ್ತುವಾಗಿ ಬಿಟ್ಟುವು. ಶಿಕ್ಷಕರು ಒಂದಲ್ಲ ಒಂದು ಸಂದರ್ಭದಲ್ಲಿ ಆತನನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಆತ ಖ್ಯಾತನಾಗಿ ಬಿಟ್ಟಿದ್ದ. ಆದರೆ ಇದೀಗ ಆತ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾನೆ. ಅದರ ಜೊತೆಗೇ ಆತನ ಬದುಕಿನ ಇನ್ನೊಂದು ಮಗ್ಗುಲೂ ತೆರೆದುಕೊಳ್ಳತೊಡಗಿದೆ. ತನ್ನ ಪ್ರೇಯಸಿ ರೀವಾ ಸ್ಟಿನ್‍ಕ್ಯಾಂಪ್‍ಳನ್ನು ಕಳೆದವಾರ ಗುಂಡಿಟ್ಟು ಕೊಂದ ಈ ಬ್ಲೇಡ್ ರನ್ನರ್‍ನ ವಯಸ್ಸು ಬರೇ 26. ಈ ಸಣ್ಣ ಪ್ರಾಯದಲ್ಲೇ ಈತನ ಬದುಕಿನಲ್ಲಿ 6 ಹೆಣ್ಣು ಮಕ್ಕಳ ಪ್ರವೇಶವಾಗಿದೆ. ಓರ್ವಳನ್ನು ಕೊಂದಿದ್ದಾನೆ. ಉಳಿದವರನ್ನು ಕೈಬಿಟ್ಟಿದ್ದಾನೆ. ಆತನ ಸಿಟ್ಟಿನ ಬಗ್ಗೆ, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿರುವುದರ ಬಗ್ಗೆಯೆಲ್ಲಾ ಮಾಧ್ಯಮಗಳಲ್ಲಿ ಇದೀಗ ಸುದ್ದಿಗಳು ಬರತೊಡಗಿವೆ..
   ನಿಜವಾಗಿ ಇವತ್ತು ರೋಲ್ ಮಾಡೆಲ್‍ಗಳ ಭಾರೀ ಕೊರತೆಯಿದೆ. ರಾಜಕಾರಣಿಗಳಂತೂ ರೋಲ್ ಮಾಡೆಲ್‍ಗಳ ಪಟ್ಟಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ. ಸತ್ಯ, ಪ್ರಾಮಾಣಿಕತೆ, ಮನುಷ್ಯತ್ವಕ್ಕೆಲ್ಲಾ ರಾಜಕಾರಣಿಗಳ ಪಟ್ಟಿಯಲ್ಲಿ ಮಾದರಿಗಳು ಸಿಗಲು ಸಾಧ್ಯವೇ ಇಲ್ಲ ಅನ್ನುವ ನಂಬಿಕೆ ಸಾರ್ವತ್ರಿಕವಾಗಿ ಬಿಟ್ಟಿದೆ. ಹೀಗಿರುವಾಗ ರಾಜಕಾರಣಿಗಳನ್ನು ಬಿಟ್ಟರೆ ಉಳಿದಂತೆ ಮಾಧ್ಯಮಗಳಲ್ಲಿ ಅತ್ಯಂತ ಸುದ್ದಿಯಲ್ಲಿರುವುದು ಒಂದೋ ಸಿನಿಮಾ ತಾರೆಯರು ಇಲ್ಲವೇ ಕ್ರೀಡಾಪಟುಗಳು. ಇವರಿಗಾಗಿ ಎಲ್ಲ ಪತ್ರಿಕೆಗಳು ಪ್ರತಿದಿನವೂ ಪುಟಗಳನ್ನು ಮೀಸಲಿಟ್ಟಿರುತ್ತವೆ. ಟಿ.ವಿ. ಚಾನೆಲ್‍ಗಳಲ್ಲೂ ಇವರಿಗಾಗಿ ಜಾಗ ಇರುತ್ತವೆ. ಇಂಥ ಹೊತ್ತಲ್ಲಿ, ಯುವ ಪೀಳಿಗೆಯು ಇವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಳ್ಳದೇ ಇನ್ನಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಇಷ್ಟಕ್ಕೂ, ಇಂಥ ಮಾದರಿಗಳು  ಪಿಸ್ಟೋರಿಯಸ್‍ನಂತೆ ತಲೆತಗ್ಗಿಸಿ ಕೂತರೆ ಅವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಂಡಿರುವ ಯುವ ಸಮೂಹದ ಮೇಲೆ ಅದು ಎಂಥ ಪರಿಣಾಮ ಬೀರಬಹುದು? ತಮ್ಮ ಮಾದರಿ ವ್ಯಕ್ತಿ ವಂಚನೆಯ ಮೂಲಕ ವಿಶ್ವದಾಖಲೆ ಮಾಡಿದ್ದಾನೆ ಎಂದು ಗೊತ್ತಾದರೆ ಅದು ಯುವ ಪೀಳಿಗೆಯನ್ನು, ‘ಎಲ್ಲರೂ ಹೀಗೆಯೇ’ ಅನ್ನುವ ಭಾವಕ್ಕೆ ಕೊಂಡೊಯ್ಯದೇ? ವಂಚನೆ, ಅನೈತಿಕ ಬದುಕು, ಕುಡಿತ.. ಮುಂತಾದುವುಗಳನ್ನೆಲ್ಲ ಹಗುರವಾಗಿ ಪರಿಗಣಿಸಲು, ಅವುಗಳನ್ನು ತಪ್ಪುಗಳ ಪಟ್ಟಿಯಿಂದ ಹೊರ ಹಾಕಿ ಬಿಡಲು ಕಾರಣವಾಗದೇ? ಪ್ರಸಿದ್ಧಿ ಪಡೆಯಬೇಕಾದರೆ ಸರಿ-ತಪ್ಪುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಅವು ತೀರ್ಮಾನಿಸದೇ?
   ಯಾವುದೇ ಒಂದು ಪೀಳಿಗೆ ದೇಶದ ಪಾಲಿಗೆ ಪ್ರಯೋಜನಕಾರಿಯಾಗಬೇಕಾದರೆ ಅದು ಆಯ್ಕೆ ಮಾಡಿಕೊಳ್ಳುವ ಮಾದರಿ ವ್ಯಕ್ತಿತ್ವಗಳು ಎಲ್ಲ ರೀತಿಯಲ್ಲೂ ಮಾದರಿಗಳಾಗಿರಬೇಕಾದುದು ಬಹಳ ಅಗತ್ಯ. ತಪ್ಪು ವ್ಯಕ್ತಿತ್ವಗಳು ಯುವ ಸಮೂಹದ ಮಾದರಿ ಪಟ್ಟಿಯಲ್ಲಿ ಸೇರಿಕೊಂಡರೆ ತಪ್ಪು ವ್ಯಕ್ತಿತ್ವಗಳ ತಯಾರಿಗಷ್ಟೇ ಅದು ಪ್ರೇರಕವಾದೀತು. ದುರಂತ ಏನೆಂದರೆ, ಇಂದಿನ ಜಗತ್ತಿನಲ್ಲಿ ಪಿಸ್ಟೋರಿಯಸ್‍ನಂಥ ತಪ್ಪು ವ್ಯಕ್ತಿತ್ವಗಳೇ ಯುವ ಸಮೂಹಕ್ಕೆ ಮಾದರಿಗಳಾಗುತ್ತಿದ್ದಾರೆ ಅನ್ನುವುದು. ಆದ್ದರಿಂದ ಯುವ ಪೀಳಿಗೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಬೇಕಾಗಿದೆ. ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಪ್ರಾಯದಲ್ಲಿ ಸಿನಿಮಾ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿರುವವರ ಮಿತಿಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಸಬೇಕಾಗಿದೆ. ಮಾಧ್ಯಮಗಳ ನಿರ್ದಿಷ್ಟ ಪುಟಗಳಲ್ಲಿ ಪ್ರತಿ ದಿನವೂ ಕಾಣಿಸಿಕೊಳ್ಳುವ ಮಾಡೆಲ್‍ಗಳು ಯಾವ ಸಂದರ್ಭದಲ್ಲೂ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಅವರಾಚೆಗಿನ ಚಾರಿತ್ರಿಕ ವ್ಯಕ್ತಿತ್ವಗಳನ್ನು ಮಾದರಿಯಾಗಿ ಯುವ ಸಮೂಹಕ್ಕೆ ಪರಿಚಯಿಸಬೇಕಾಗಿದೆ. ಇಲ್ಲದಿದ್ದರೆ ಯೌವನವನ್ನು ನಾಶಪಡಿಸಿಕೊಂಡ ಅನೇಕಾರು ಪಿಸ್ಟೋರಿಯಸ್‍ಗಳು ನಮ್ಮಲ್ಲೂ ಉದಯಿಸಿಯಾರು.

Monday, 11 February 2013

ನಮ್ಮ ನಮ್ಮ ತಲೆಗಳನ್ನು ರಕ್ಷಿಸಿಕೊಳ್ಳೋಣ

ಸರಬ್ಜಿತ್ ಸಿಂಗ್‍

   ಕಾಶ್ಮೀರಿಗಳನ್ನು ದೇಶದ್ರೋಹಿಗಳು, ಉಗ್ರವಾದಿಗಳೆಂದು ಕರೆಯುವುದಕ್ಕಾಗಿ ನೆಪಗಳನ್ನು ಹುಡುಕುತ್ತಾ ತಿರುಗಾಡುತ್ತಿರುವವರಿಗೆ ತೀವ್ರ ನಿರಾಶೆಯಾಗುವ ಸುದ್ದಿಯೊಂದು ಕಾಶ್ಮೀರದಿಂದ ಹೊರಬಿದ್ದಿದೆ. ‘ಅಫ್ಝಲ್ ಗುರುವಿಗೆ ನೇಣಾದುದನ್ನು ಪರಿಗಣಿಸಿ ಸರಬ್ಜಿತ್ ಸಿಂಗ್‍ಗೆ ನೇಣು ವಿಧಿಸಬಾರದು..' ಎಂದು ಜಮ್ಮು-ಕಾಶ್ಮೀರ್ ಲಿಬರೇಶನ್ ಫ್ರಂಟ್(ಜೆ.ಕೆ.ಎಲ್.ಎಫ್.)ನ ನಾಯಕ ಯಾಸಿನ್ ಮಲಿಕ್ ಪಾಕ್ ಸರಕಾರದೊಂದಿಗೆ ವಿನಂತಿಸಿದ್ದಾರೆ. ‘ಹಾಗೇನಾದರೂ ಮಾಡಿದರೆ, ಅದು ಒಂದು ಕೊಲೆ ಆಗಬಹುದೇ ಹೊರತು ಶಿಕ್ಷೆಯಲ್ಲ’ ಎಂದೂ ಅವರು ಹೇಳಿದ್ದಾರೆ. ಅಫ್ಝಲ್ ಗುರುವನ್ನು ನೇಣಿ ಗೇರಿಸಿದುದನ್ನು ಪ್ರತಿಭಟಿಸಿ 24 ಗಂಟೆ ಸತ್ಯಾಗ್ರಹ ನಡೆಸಿದ ಈ ವ್ಯಕ್ತಿಯಿಂದ ಇಂಥದ್ದೊಂದು ಹೇಳಿಕೆಯನ್ನು, 'ಲಡ್ಡು ತಿಂದು ಅಫ್ಝಲ್‍ನ ನೇಣಿಗೆ ಸಂತೋಷಪಟ್ಟ’ ಬಿಜೆಪಿ-ಸಂಘಪರಿವಾರವು ನಿರೀಕ್ಷಿಸಿರುವ ಸಾಧ್ಯತೆ ಖಂಡಿತ ಇಲ್ಲ.
   ನಿಜವಾಗಿ, ಅಫ್ಝಲ್ ಗುರುವಿಗೆ ಗಲ್ಲಾಗಿರುವುದರಿಂದ ಅತ್ಯಂತ ಆತಂಕಕ್ಕೆ ಒಳಗಾಗಿರುವುದು ಸರಬ್ಜಿತ್ ಸಿಂಗ್‍ನ ಕುಟುಂಬ. ಹರ್ಯಾಣದ ಈ ವ್ಯಕ್ತಿಗೆ ಪಾಕ್ ನ್ಯಾಯಾಲಯ ಈಗಾಗಲೇ ಮರಣ ದಂಡನೆ ವಿಧಿಸಿದೆ. ಪಾಕ್ ನೆಲದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಸರಬ್ಜಿತ್‍ನ ಮೇಲಿದೆ. ಅಫ್ಝಲ್ ಗುರುವಿಗೆ ಗಲ್ಲಾಗಲಿ ಎಂದು ಈ ದೇಶದಲ್ಲಿ ಯಾವಾಗೆಲ್ಲ ಕೂಗು ಕೇಳಿ ಬರುತ್ತದೋ ಆವಾಗೆಲ್ಲಾ ಸರಬ್ಜಿತ್ ಕುಟುಂಬದಲ್ಲಿ ಭೀತಿ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ, ಸರಬ್ಜಿತ್‍ನ ಗಲ್ಲು ಒಂದು ಹಂತದ ವರೆಗೆ ಅಫ್ಝಲ್ ಗುರುವಿನ ಗಲ್ಲಿನೊಂದಿಗೆ ತಳಕು ಹಾಕಿ ಕೊಂಡಿದೆ. ಅಫ್ಝಲ್‍ನನ್ನು ಭಾರತವು ನೇಣಿಗೇರಿಸಿದರೆ ಪಾಕಿಸ್ತಾನವು ಸರಬ್ಜಿತ್‍ನನ್ನು ನೇಣಿಗೇರಿಸಲಿದೆ ಎಂಬೊಂದು ಸುದ್ದಿಯು ಅನೇಕ ಬಾರಿ ಮಾಧ್ಯಮಗಳಲ್ಲಿ ಹರಿದಾಡಿದೆ. ಆ ಸುದ್ದಿಯನ್ನು ‘ವಿಳಾಸ ಇಲ್ಲದ ಸುದ್ದಿ' ಎಂದು ತಳ್ಳಿ ಹಾಕಿ ಬಿಡಬಹುದಾದರೂ ಆಳದಲ್ಲಿ, ‘ಇದ್ದರೂ ಇದ್ದೀತು' ಅನ್ನುವ ಅನುಮಾನ ಆ ಕುಟುಂಬ ದಲ್ಲಷ್ಟೇ ಅಲ್ಲ, ಜನಸಾಮಾನ್ಯರಲ್ಲೂ ಇದೆ. ಬಹುಶಃ ಸರಬ್ಜಿತ್ ಸಿಂಗ್ ಈ ವರೆಗೆ ಬದುಕುಳಿದಿರುವುದು ಅಫ್ಝಲ್ ಗುರುವಿನ ಕಾರಣದಿಂದಲೋ ಏನೋ. ಆದರೆ ‘ಲಡ್ಡು ತಿಂದು ಸಾವನ್ನು ಸಂಭ್ರಮಿಸುವ ವರ್ಗಕ್ಕೆ' ಇವೆಲ್ಲ ಮುಖ್ಯವಾಗುವ ಸಾಧ್ಯತೆಯೇ ಇಲ್ಲ. ಅಫ್ಝಲ್ ಗುರುವನ್ನು ಮುಂದಿಟ್ಟುಕೊಂಡು ಈ ವರ್ಗ ಈ ದೇಶದಲ್ಲಿ ಓಟು ಕೇಳಿದೆ. ಮುಸ್ಲಿಮರನ್ನು ದೇಶದ್ರೋಹಿಗಳೆಂದು ಚಿತ್ರಿಸುವುದಕ್ಕೆ ಗುರುವನ್ನು ಪರೋಕ್ಷವಾಗಿ ಬಳಸಿಕೊಂಡಿದೆ. ಮಾತ್ರವಲ್ಲ, ಕಸಬ್ ಮತ್ತು ಗುರು ಇನ್ನೂ ಜೀವಂತವಿರುತ್ತಿದ್ದರೆ, ಮುಂದಿನ ಚುನಾವಣೆಯಲ್ಲಿ ಅವರನ್ನು ದುರುಪಯೋಗಿಸುವ ಎಲ್ಲ ಸಾಧ್ಯತೆಯೂ ಇತ್ತು. ಈ ಅವಕಾಶವನ್ನು ಸದ್ಯ ಕಾಂಗ್ರೆಸ್ ಕಸಿದುಕೊಂಡಿರುವುದರಿಂದ ಈ ವರ್ಗವು ಇದೀಗ ಕಾಶ್ಮೀರದಲ್ಲಾಗುವ ಪ್ರತಿಭಟನೆಯನ್ನು ಭಾರೀ ಕುತೂಹಲದಿಂದ ವೀಕ್ಷಿಸುತ್ತಿದೆ. ಯಾಕೆಂದರೆ, ಮುಂದಿನ ಚುನಾವಣೆಯಲ್ಲಿ ದೇಶಭಕ್ತಿಯ ಭಾಷಣ ಬಿಗಿಯಲು ಒಂದಷ್ಟು ದೇಶದ್ರೋಹಿ ಕತೆಗಳ ಅಗತ್ಯವಿದೆ. ಒಂದು ವೇಳೆ ಸರಬ್ಜಿತ್‍ಗೆ ಗಲ್ಲಾಗಿ ಬಿಟ್ಟರೆ ಅದಕ್ಕಾಗಿ ಸಂಭ್ರಮಿಸುವ ಸಾಧ್ಯತೆಯಿರುವುದು ಈ ವರ್ಗ ಮಾತ್ರ. ಆ ಮೊಲಕ ಪಾಕಿಸ್ತಾನವನ್ನು ನಿಂದಿಸುವುದಕ್ಕೆ ಮತ್ತು ಸಾವನ್ನು ಓಟಾಗಿ ಪರಿವರ್ತಿಸುವುದಕ್ಕೆ ಅವಕಾಶವಿದೆಯಲ್ಲವೇ?
   ಅಂದಹಾಗೆ, ಕಸಬ್‍ನ ಬಳಿಕ ಇದೀಗ ಅಫ್ಝಲ್ ಗುರುವನ್ನು ನೇಣಿಗೇರಿಸುವ ಮೂಲಕ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಒಳ್ಳೆಯ ತಯಾರಿ ನಡೆಸಿದೆ. ಹತ್ಯಾಕಾಂಡದ ಆರೋಪಿಯೊಬ್ಬ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತಗೊಳ್ಳುತ್ತಿರುವಾಗ ಕೆಲವೊಂದು ತಲೆಗಳನ್ನು ಉರುಳಿಸದೇ ಆತನನ್ನು ಎದುರಿಸುವುದಕ್ಕೆ ಸಾಧ್ಯವಾಗಲಾರದು ಎಂದು ಕಾಂಗ್ರೆಸ್ ಭಾವಿಸಿರುವಂತಿದೆ. ಆದ್ದರಿಂದಲೇ ರಾಹುಲ್ ಗಾಂಧಿಯ ಕೈಯಲ್ಲಿ ಎರಡು ತಲೆಗಳನ್ನು ಕೊಟ್ಟು ಮೋದಿಯನ್ನು ಎದುರಿಸುವುದಕ್ಕೆ ಸಜ್ಜಾಗಿ ನಿಲ್ಲಿಸಿದೆ. ಇಷ್ಟಕ್ಕೂ, ಅಫ್ಝಲ್ ಮತ್ತು ಕಸಬ್ ಎಂಬ ಪ್ರಭಾವಿ ಅಸ್ತ್ರಗಳನ್ನು ಕಳಕೊಂಡು ಕುಸಿದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಮ ಮಂದಿರವನ್ನು ಆಯ್ಕೆ ಮಾಡಿಕೊಂಡರೆ ಕಾಂಗ್ರೆಸ್ ಇನ್ನೊಂದು ಹೆಜ್ಜೆ ಮುಂದಿಡಲೂ ಬಹುದು. ಬಿಜೆಪಿಗಿಂತ ಮೊದಲೇ ರಾಮಮಂದಿರಕ್ಕೆ ಅಡಿಗಲ್ಲನ್ನು ಹಾಕಿ ಬಿಜೆಪಿಯ ಬಾಯಿ ಮುಚ್ಚಿಸುವುದಕ್ಕೂ ಪ್ರಯತ್ನಿಸ ಬಹುದು. ಕಾಂಗ್ರೆಸ್‍ನ ಸದ್ಯದ ಧಾವಂತವನ್ನು ನೋಡಿದರೆ ಅದು ಯಾವುದಕ್ಕೂ ಹೇಸುವ ಸ್ಥಿತಿಯಲ್ಲಿಲ್ಲ. ಬಿಜೆಪಿಗೆ ಸದ್ಯ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಅರ್ಹತೆಯಿಲ್ಲ ಅನ್ನುವುದು ಕಾಂಗ್ರೆಸ್‍ಗೆ ಗೊತ್ತು. ಅಭಿವೃದ್ಧಿಯ ಮಾತಾಡಿದರೆ ಜನ ನಂಬುವ ಸಾಧ್ಯತೆಯೂ ಇಲ್ಲ. ಆದ್ದರಿಂದ ಬಿಜೆಪಿ ಭಯೋತ್ಪಾದನೆ ಮತ್ತು ರಾಮಮಂದಿರವನ್ನು ಮುಂದಿಟ್ಟುಕೊಂಡೇ ಮುಂದಿನ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯಿಂದ ಆ ಎರಡೂ ಅಸ್ತ್ರಗಳನ್ನು ಕಸಿದುಕೊಳ್ಳುವುದಕ್ಕೆ ಕಾಂಗ್ರೆಸ್ ತೀರ್ಮಾನಿಸಿರುವ ಸಾಧ್ಯತೆಯಿದೆ. ಅದರ ಭಾಗವಾಗಿಯೇ ಎರಡು ತಲೆಗಳನ್ನು ಉರುಳಿಸಲಾಗಿದೆ. ಒಂದು ವೇಳೆ ಬಿಜೆಪಿಯು ರಾಮಮಂದಿರದ ಬಗ್ಗೆ ಆಂದೋಲನ ನಡೆಸಿದರೆ ಆ ಅಸ್ತ್ರವನ್ನೂ ಕಸಿಯುವುದಕ್ಕೆ ತಂತ್ರ ರೂಪಿಸಬಹುದು.
   ದುರಂತ ಏನೆಂದರೆ, ಅಕ್ಕಿ, ಗೋಧಿ, ಸಕ್ಕರೆ ಸಹಿತ ದಿನ ನಿತ್ಯದ ಆಹಾರ ಪದಾರ್ಥಗಳು ಬೆಲೆ ಏರಿಸಿಕೊಂಡು ಜನಸಾಮಾನ್ಯರ ಕೊರಳು ಹಿಂಡುತ್ತಿರುವಾಗ ಈ ದೇಶದ ಪ್ರಮುಖ ಎರಡು ರಾಜಕೀಯ ಪಕ್ಷಗಳು ತಲೆಗಳನ್ನು ಉರುಳಿಸುವ ಲೆಕ್ಕಾಚಾರದಲ್ಲಿ ತೊಡಗಿವೆ ಅನ್ನುವುದು. ಒಂದು ಪಕ್ಷ ತಲೆ ಹಾರಿಸುವಾಗ ಇನ್ನೊಂದು ಪಕ್ಷ ಲಡ್ಡು ಹಂಚುತ್ತದೆ. ಇಂಥ ಪಕ್ಷಗಳು ಈ ದೇಶವನ್ನು ಎಲ್ಲಿಗೆ ಕೊಂಡೊಯ್ದಾವು? ತಲೆಗಳ ಹೊರತು ಜನರ ಮುಂದೆ ಹೇಳಿಕೊಳ್ಳುವುದಕ್ಕೆ ಅವುಗಳ ಬಳಿ ಬೇರೇನೂ ಇಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
   ಏನೇ ಆಗಲಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ಮೋದಿಗೆ ಪ್ರತಿ ಸವಾಲು ಎಸೆಯಲು ಕಾಂಗ್ರೆಸ್ ಗರಿಷ್ಠ ಶ್ರಮಿಸುತ್ತಾ ಇದೆ. ಮೋದಿಯ ಕೈಯಲ್ಲಿರುವ 2 ಸಾವಿರ ತಲೆಗಳಿಗಿಂತ ಪ್ರಭಾವಶಾಲಿಯಾದ ಎರಡು ತಲೆಗಳನ್ನು ಅದು ಈಗಾಗಲೇ ತನ್ನ ಬತ್ತಳಿಕೆಯಲ್ಲಿ ಪೇರಿಸಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಇನ್ನಷ್ಟು ತಲೆಗಳ ಅಗತ್ಯ ಬೀಳಲೂ ಬಹುದು. ಅಗತ್ಯ ಬಿದ್ದರೆ ಸರಬ್ಜಿತ್ ಸಿಂಗ್‍ನನ್ನು ಶೀಘ್ರ ಗಲ್ಲಿಗೇರಿಸುವಂತೆ ಒಳಗಿಂದೊಳಗೇ ಪಾಕ್‍ಗೆ ಒತ್ತಡ ಹೇರಲೂ ಬಹುದು. ಆದ್ದರಿಂದ ಓಟು ಮುಗಿಯುವ ವರೆಗೆ ನಮ್ಮ ನಮ್ಮ ತಲೆಗಳನ್ನು ಉರುಳದಂತೆ ಕಾಪಾಡಿಕೊಳ್ಳೋಣ.