Monday, 27 March 2017

ಯೋಗಿ ಆದಿತ್ಯನಾಥ ಮತ್ತು ಆಶಾವಾದ

     ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ದಿನವೇ, ದೇಶದಾದ್ಯಂತ ಒಂದು ಲಕ್ಷ ಮದ್ರಸಗಳಲ್ಲಿ ಶೌಚಾಲಯವನ್ನು ಕಟ್ಟಿಸುವ ಮತ್ತು ಮಧ್ಯಾಹ್ನದೂಟವನ್ನು ಒದಗಿಸುವ ಯೋಜನೆಯನ್ನು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಪ್ರಕಟಿಸಿದ್ದಾರೆ. ಇದರ ಮರುದಿನವೇ ಘೋಷಿಸಲಾದ ಯೋಗಿ ಆದಿತ್ಯನಾಥ್‍ರ ಸಚಿವ ಸಂಪುಟದಲ್ಲಿ ಮುಹ್ಸಿನ್ ರಝಾ ಎಂಬವರು ಕಾಣಿಸಿಕೊಂಡಿದ್ದಾರೆ. ಏನಿದರ ಅರ್ಥ? ಬಿಜೆಪಿಗೆ ಒಳಗೊಂದು ಹೊರಗೊಂದು ಮುಖವಿದೆಯೇ? ಒಳಗಿನ ಮುಖವು ಹೊರಗಿನ ಮುಖಕ್ಕಿಂತ ಮೃದುವೇ, ಜಾತ್ಯತೀತವೇ? ‘ಸಬ್‍ಕಾ ವಿಕಾಸ್’ ಅನ್ನು ಕ್ಷೀಣ ಮಟ್ಟದಲ್ಲಾದರೂ ಅದು ಪ್ರತಿಪಾದಿಸುತ್ತದೆಯೇ? ಯೋಗಿ ಆದಿತ್ಯನಾಥ್‍ರ ವಿಚಾರಧಾರೆ ಏನು ಅನ್ನುವುದು ಈ ದೇಶಕ್ಕೆ ಚೆನ್ನಾಗಿ ಗೊತ್ತು. ಬಿಜೆಪಿಯನ್ನು ಇವತ್ತು ಮುಸ್ಲಿಮ್ ವಿರೋಧಿಯಾಗಿ ಯಾರಾದರೂ ಗುರುತಿಸುತ್ತಿದ್ದರೆ, ಅದಕ್ಕೆ ಯೋಗಿ ಆದಿತ್ಯನಾಥ್‍ರ ಕೊಡುಗೆ ಬಹಳ ಇದೆ. ಅವರು ಬಿಜೆಪಿಯ ಉಗ್ರ ಮುಖ. ಇಂಥವರು ಮುಖ್ಯಮಂತ್ರಿಯಾಗಿ ಆಯ್ಕೆಯಾದುದನ್ನು ಘೋಷಿಸಿದ ದಿನವೇ ಅವರ ವ್ಯಕ್ತಿತ್ವಕ್ಕೆ ತೀರಾ ಹೊಂದದ ಯೋಜನೆಯನ್ನು ಬಿಜೆಪಿ ಪ್ರಕಟಿಸಿದ್ದೇಕೆ? ಅದು ಆದಿತ್ಯನಾಥ್‍ರಿಗೆ ಬಿಜೆಪಿ ಪರೋಕ್ಷವಾಗಿ ರವಾನಿಸಿದ ಸಂದೇಶವೇ? ನಿಮ್ಮ ವಿಚಾರಧಾರೆಯಲ್ಲಿ ಸಮತೋಲನವಿಲ್ಲ ಎಂಬುದನ್ನು ಬಿಜೆಪಿ ಈ ಮೂಲಕ ಸಾರಿದೆಯೇ? ಅದೇ ವೇಳೆ, ಮುಹ್ಸಿನ್ ರಝಾರನ್ನು ಯೋಗಿ ಆದಿತ್ಯನಾಥ್‍ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ವಿಧಾನಸಭೆಯ ಸದಸ್ಯರೂ ಅಲ್ಲ, ವಿಧಾನ ಪರಿಷತ್‍ನ ಸದಸ್ಯರೂ ಅಲ್ಲ. ಇಷ್ಟಿದ್ದೂ, ಅವರು ಸಚಿವ ಸಂಪುಟಕ್ಕೆ ಯಾವ ಕಾರಣಕ್ಕಾಗಿ ಸೇರ್ಪಡೆಗೊಂಡರು? ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದ ಬಿಜೆಪಿಯು ಯಾಕೆ ಮುಸ್ಲಿಮ್ ಮುಕ್ತ ಸಚಿವ ಸಂಪುಟವನ್ನು ರಚಿಸಲಿಲ್ಲ? ಮುಸ್ಲಿಮರಿಗೆ ಟಿಕೆಟು ಕೊಡದ ಪಕ್ಷವೊಂದು ಹಾಗೆ ಮಾಡುವುದರಲ್ಲಿ ಅಚ್ಚರಿಯೇನೂ ಇಲ್ಲವಲ್ಲ. ಅಲ್ಲದೇ ತನ್ನ ವಿಚಾರಧಾರೆಯ ಮೇಲೆ ತನಗಿರುವ ಬದ್ಧತೆಯನ್ನು ಅದು ಸಾರ್ವಜನಿಕವಾಗಿ ಮತ್ತೊಮ್ಮೆ ತೋರ್ಪಡಿಸಿಕೊಂಡ ಹಾಗೂ ಆಗುತ್ತಿತ್ತು. ಒಂದು ಕಡೆ ಯೋಗಿ ಆದಿತ್ಯನಾಥ್‍ರ ಉಗ್ರ ವಿಚಾರಧಾರೆ, ಇನ್ನೊಂದು ಕಡೆ ಈ ವಿಚಾರಧಾರೆಗೆ ತಕ್ಕುದಾದ ಸಚಿವ ಸಂಪುಟ.. ಇದು ಹೆಚ್ಚು ಸೂಕ್ತವಾಗಿತ್ತಲ್ಲವೇ? ಮುಸ್ಲಿಮರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸದಿದ್ದುದನ್ನೇ ಸಾಮಥ್ರ್ಯವಾಗಿ ಬಿಂಬಿಸಿಕೊಂಡ ಪಕ್ಷ ಬಿಜೆಪಿ. ಸುಮಾರು 20% ಮುಸ್ಲಿಮರಿರುವ ರಾಜ್ಯವೊಂದರಲ್ಲಿ ಇಂಥದ್ದೊಂದು ನಿರ್ಧಾರಕ್ಕೆ ಗಟ್ಟಿ ಗುಂಡಿಗೆ ಬೇಕು. ಭಾರತದ ಜಾತ್ಯತೀತ ಗುಣವನ್ನೇ ಪ್ರಶ್ನಿಸುವ ನಿರ್ಧಾರ ಇದು. ಕನಿಷ್ಠ ಸಮತೋಲನಕ್ಕಾದರೂ ಒಂದಿಬ್ಬರು ಮುಸ್ಲಿಮರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಅದರ ಮೇಲಿತ್ತು. ಆದರೆ ಹಾಗೆ ಮಾಡದಿರುವುದರಿಂದಲೇ ಲಾಭ ಇದೆ ಅಂದುಕೊಂಡ ಬಿಜೆಪಿಯು, ಸಚಿವ ಸಂಪುಟದ ರಚನೆಯ ಸಂದರ್ಭದಲ್ಲಿ ಆ ಲಾಭದ ಲೆಕ್ಕಾಚಾರವನ್ನು ಕೈ ಬಿಟ್ಟದ್ದೇಕೆ? ಇದು ಅನಿವಾರ್ಯವಾಗಿತ್ತೇ? ಹೊರಗಿನ ಉಗ್ರ ಮುಖಕ್ಕಿಂತ ಹೊರತಾದ ಮೃದು ಮುಖವನ್ನು ಅದು ಹೊಂದಿದೆಯೇ ಅಥವಾ ಹೊಂದಬೇಕಾದ ಒತ್ತಡವೊಂದು ಅದರ ಮೇಲಿದೆಯೇ? ಆ ಒತ್ತಡವನ್ನು ಹೇರಿದ್ದು ಯಾರು?
     ಬಹುಶಃ, ಸರ್ವ ಮನುಷ್ಯರ ಹಕ್ಕುಗಳಿಗಾಗಿ ಹಾಗೂ ತಾರತಮ್ಯ ರಹಿತ ಆಡಳಿತಕ್ಕಾಗಿ ಧ್ವನಿಯೆತ್ತುತ್ತಿರುವ ಎಲ್ಲರ ಗೆಲುವು ಇದು ಎಂದೇ ಅನಿಸುತ್ತದೆ. ಈ ದೇಶದಲ್ಲಿರುವ ಪ್ರಜಾತಂತ್ರದ ಮೇಲೆ ಇನ್ನೂ ಈ ಆದಿತ್ಯನಾಥ್‍ರ ವಿಚಾರಧಾರೆಗೆ ಪ್ರಾಬಲ್ಯವನ್ನು ಹೊಂದಲು ಸಾಧ್ಯವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ಅಗತ್ಯಕ್ಕಿಂತಲೂ ಉಗ್ರವಾಗಿರುವ ಈ ಮುಖ, ಚುನಾವಣೆಯ ಬಳಿಕ ಮೃದುವಾಗುತ್ತದೆ ಅಥವಾ ಮೃದುವಾಗಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಅದಕ್ಕೆ ಈ ದೇಶದ ಮಂದಿ ಪ್ರಜಾತಂತ್ರದ ಮೇಲೆ ಪ್ರಕಟಿಸುತ್ತಿರುವ ವಿಶ್ವಾಸವೇ ಕಾರಣ. ಪ್ರಜಾತಂತ್ರ ಈ ದೇಶದಲ್ಲಿ ಒಂದು ಸಾಧ್ಯತೆಯನ್ನು ಸೃಷ್ಟಿಸಿದೆ. ಕಟು ಏಕಮುಖೀ ಚಿಂತನೆಯೂ ನಿರ್ಣಾಯಕ ಸಂದರ್ಭದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲೇಬೇಕಾದ ಸಾಧ್ಯತೆ ಅದು. ಬಿಜೆಪಿಯೂ ಇದಕ್ಕೆ ಹೊರತಲ್ಲ. ಶಿವಸೇನೆಯೂ ಹೊರತಲ್ಲ. ಸದ್ಯ ಜಾತ್ಯತೀತ ಪಕ್ಷಗಳ ಸ್ವಯಂಕೃತಾಪರಾಧಗಳು ಜನರನ್ನು ನಿರಾಶರನ್ನಾಗಿಸಿದೆ. ಯಾವುದೇ ನಿರಾಶೆಯು ಕೆಲವೊಮ್ಮೆ ತಪ್ಪಾದ ಚಿಂತನೆಯನ್ನು ಬೆಂಬಲಿಸುವಷ್ಟು ಅವರು ನಿರುತ್ಸಾಹಿಯಾಗಿಸುವುದಿದೆ. ಅಂಥ ಸಂದರ್ಭದಲ್ಲಿ ಉಗ್ರ ವಿಚಾರಧಾರೆಯನ್ನು ಮೃದುವಾಗಿ ಕಾಣಬಹುದಾದ ಸಾಧ್ಯತೆಯೂ ಇದೆ. ಬಿಜೆಪಿ ಸದ್ಯ ಇಂಥದ್ದೊಂದು ವಾತಾವರಣದ ಲಾಭವನ್ನು ಪಡಕೊಳ್ಳುತ್ತಿದೆ. ಜೊತೆಗೇ ಅದರೊಳಗೊಂದು ಭೀತಿಯೂ ಇದೆ. ಇದೇ ಉಗ್ರ ವಿಚಾರಧಾರೆಯು ಎಲ್ಲಿಯ ವರೆಗೆ ಫಸಲು ಕೊಡಬಲ್ಲುದು? ಜಾತ್ಯತೀತ ಶಕ್ತಿಗಳು ಮುಂದಕ್ಕೆ ಮತ್ತೆ ತಮ್ಮ ತಪ್ಪುಗಳಿಂದ ಹೊರಬಂದು ದೇಶದ ಜಾತ್ಯತೀತ ಸ್ವರೂಪಕ್ಕೆ ಮತ್ತೆ ಚೌಕಟ್ಟನ್ನು ಕಟ್ಟತೊಡಗಿದರೆ, ಆಗ ಈ ವಿಚಾರಧಾರೆಯೂ ಇಷ್ಟೇ ವ್ಯಾಪಕವಾಗಿ ಸ್ವಾಗತಿಸಲ್ಪಡಬಹುದೇ?
ಪ್ರಜಾತಂತ್ರ ವ್ಯವಸ್ಥೆ ಇರುವವರೆಗೆ ಏಕಮುಖ ವಿಚಾರಧಾರೆ ಹೆಚ್ಚು ದಿನ ಬಾಳಿಕೆ ಬರಲು ಸಾಧ್ಯವಿಲ್ಲ. ಈ ದೇಶಕ್ಕೊಂದು ವಿಚಾರಧಾರೆಯನ್ನು ಕಟ್ಟಿಕೊಟ್ಟದ್ದು ಸಂವಿಧಾನ. ಕಾಂಗ್ರೆಸ್ ಆಗಲಿ, ಜನತಾ ಪರಿವಾರವಾಗಲಿ ಅಥವಾ ಬಿಜೆಪಿಯೇ ಆಗಲಿ ಸಂವಿಧಾನವನ್ನು ತಿರಸ್ಕರಿಸಿ ಮಾತಾಡಿಲ್ಲ. ಯಾಕೆಂದರೆ, ಹಾಗೆ ಮಾಡುವುದು ಅತ್ಯಂತ ಅಪಾಯಕಾರಿ ಎಂಬುದು ಅವುಗಳಿಗೆ ಗೊತ್ತು. ಯೋಗಿ ಆದಿತ್ಯನಾಥ್‍ರು ಇವತ್ತು ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದು ಸಂಪೂರ್ಣ ಸಾಂವಿಧಾನಿಕವಲ್ಲ ಎಂಬುದು ಈ ದೇಶದ ಜನರಿಗೆ ಗೊತ್ತು. ಆದ್ದರಿಂದಲೇ ಅವರ ಮಾತುಗಳಿಗೆ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಬಿಜೆಪಿಯೇ ಇಂಥ ಮಾತುಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದೆ. ನಿಜವಾಗಿ, ಬಿಜೆಪಿಯ ವಿಚಾರಧಾರೆ ಸಂವಿಧಾನಕ್ಕೆ ಪೂರಕ ಅಲ್ಲದೇ ಇರಬಹುದು. ಆದರೆ, ಅದನ್ನು ಧೈರ್ಯದಿಂದ ಪ್ರಸ್ತುತಪಡಿಸಲು ಈ ದೇಶದ ಪ್ರಜಾತಂತ್ರ ವ್ಯವಸ್ಥೆ ಅನುವು ಮಾಡಿಕೊಡುತ್ತಿಲ್ಲ. ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಸಣ್ಣ ಪ್ರಯತ್ನವೂ ಇಲ್ಲಿ ಈಗಲೂ ದೊಡ್ಡ ಚರ್ಚಾ ವಿಷಯವಾಗುತ್ತಿದೆ. ಆದ್ದರಿಂದಲೇ ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಏನೇ ಕಾರ್ಯತಂತ್ರವನ್ನು ರೂಪಿಸಲಿ ಮತ್ತು ಹೇಳಿಕೆಗಳನ್ನು ಕೊಡಲಿ, ನಿರ್ಣಾಯಕ ಸಂದರ್ಭದಲ್ಲಿ ಜಾತ್ಯತೀತ ಆಗಲೇ ಬೇಕಾದ ಸಂದಿಗ್ಧಕ್ಕೆ ಸಿಲುಕುತ್ತಿದೆ. ಇದಕ್ಕಿರುವ ಇನ್ನೊಂದು ಕಾರಣ, ಸದ್ಯದ ವಾತಾವರಣ ಯಾವ ಸಮಯದಲ್ಲೂ ಬದಲಾಗಿ ಬಿಡಬಹುದು ಅನ್ನುವುದು. ಇವತ್ತು ಜಾತ್ಯತೀತ ಪಕ್ಷಗಳ ವಿರುದ್ಧ ಜನರು ಮುನಿಸಿರಬಹುದು. ನಾಳೆ, ಬಿಜೆಪಿಯ ಉಗ್ರ ವಿಚಾರಧಾರೆಯ ವಿರುದ್ಧವೂ ಇದೇ ವಾತಾವರಣ ಸೃಷ್ಟಿಯಾಗಬಾರದು ಎಂದೇನಿಲ್ಲ. ಆದ್ದರಿಂದಲೇ, ಅದು ಸಮತೋಲನದ ಹೆಜ್ಜೆ ಹಾಕುತ್ತಿದೆ. ಮುಹ್ಸಿನ್ ರಝಾ ಮತ್ತು ಶೌಚಾಲಯಗಳು ಈ ಸಂದಿಗ್ಧತೆಯನ್ನು ಪ್ರತಿನಿಧಿಸುವ ಎರಡು ಉದಾಹರಣೆಗಳು. ನಿಜವಾಗಿ, ಬಿಜೆಪಿಯ ಭಾಷೆಯಲ್ಲಿ ಶೌಚಾಲಯ ಕಟ್ಟಿಸುವುದೆಂದರೆ ಮುಸ್ಲಿಮ್ ಓಲೈಕೆ ಮತ್ತು ತುಷ್ಠೀಕರಣ. ಕಾಂಗ್ರೆಸ್ ಅನ್ನು ಈ ಹಿಂದೆ ಹಲವು ಬಾರಿ ಇದೇ ಕಾರಣಕ್ಕಾಗಿ ಅದು ಹೀಗೆ ಟೀಕಿಸಿದೆ. ಆದರೆ, ಈಗ ಅದನ್ನೇ ಮಾಡಬೇಕಾದ ಅನಿವಾರ್ಯತೆ ಅದಕ್ಕಿದೆ. ಇದು ಪ್ರಜಾತಂತ್ರದ ಗೆಲುವು. ಈ ಗೆಲುವೇ ಮುಂದಿನ ಆಶಾವಾದವೂ ಹೌದು.

Monday, 20 March 2017

ಪದೇ ಪದೇ ‘ಸರ್ತಾಜ್’ಗಳೇ ಯಾಕೆ ದೇಶನಿಷ್ಠೆಯನ್ನು ಪ್ರಕಟಿಸಬೇಕು?

      ಕಳೆದ ವಾರ ಎರಡು ಮಹತ್ವಪೂರ್ಣ ಘಟನೆಗಳು ನಡೆದುವು. 1. ಲಕ್ನೋದಲ್ಲಿ ಕೊಲ್ಲಲ್ಪಟ್ಟ ಶಂಕಿತ ಉಗ್ರ ಸೈಫುಲ್ಲಾನ ಬಗ್ಗೆ ಆತನ ತಂದೆ ಮುಹಮ್ಮದ್ ಸರ್ತಾಜ್‍ರ ನಿಷ್ಠುರ ನಿಲುವು. ಅವರು ತನ್ನ ಮಗನ ಮೃತದೇಹವನ್ನು ಪಡೆಯಲು ನಿರಾಕರಿಸಿದರು. ದೇಶಕ್ಕೆ ನಿಷ್ಠೆಯನ್ನು ತೋರದವನು ನಮಗೆ ನಿಷ್ಠೆ ತೋರಬಲ್ಲನೇ ಎಂದವರು ಪ್ರಶ್ನಿಸಿದರು. ಅವರ ಈ ನಿಲುವಿಗೆ ಎಲ್ಲೆಡೆಯಿಂದ ಸ್ವಾಗತ ಲಭಿಸಿತು. ಮಾಧ್ಯಮಗಳು ಹೊಗಳಿದುವು. ಗೃಹ ಸಚಿವ ರಾಜನಾಥ್ ಸಿಂಗ್ ಪ್ರಶಂಸಿಸಿದರು. ಸಂಸತ್ತು ಶ್ಲಾಘಿಸಿತು.
     2. ಇದೇ ಸೈಫುಲ್ಲಾ ಪ್ರಕರಣದಲ್ಲಿ ಕೆಲವರ ಬಂಧನವೂ ನಡೆಯಿತು. ಇದರಲ್ಲಿ ವಾಯು ದಳದ ಮಾಜಿ ಅಧಿಕಾರಿ ಜಿ.ಎಂ. ಖಾನ್ ಎಂಬವರೂ ಸೇರಿದ್ದರು. ಇವರ ಮಕ್ಕಳು ತಂದೆಯ ಬಗ್ಗೆ ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದರು. ಅಬ್ದುಲ್ ಕಾದಿರ್ ಅನ್ನುವ ಅವರ ಮಗ ಮಾಧ್ಯಮಗಳೊಂದಿಗೆ ಮಾತಾಡಿದರು. ದೇಶದ ಶತ್ರು ನಮ್ಮ ಶತ್ರುವೂ ಆಗಿದ್ದಾನೆ ಎಂದವರು ಪ್ರತಿಕ್ರಿಯಿಸಿದರು. ಈ ಹೇಳಿಕೆಯೂ ವ್ಯಾಪಕವಾಗಿ ಸ್ವಾಗತಿಸಲ್ಪಟ್ಟಿತು.
      ಮಾರ್ಚ್ 7ರಂದು ಮಧ್ಯ ಪ್ರದೇಶದ ಭೋಪಾಲ್‍ನಿಂದ ಉಜ್ಜೈನಿಗೆ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲಿನಲ್ಲಿ ಸ್ಫೋಟಕವೊಂದು ಸಿಡಿದು 8 ಮಂದಿ ಗಾಯಗೊಂಡ ಬಳಿಕ ನಡೆದ ಬೆಳವಣಿಗೆಗಳಿವು. ಘಟನೆ ಖಂಡನಾರ್ಹ. ಯಾವುದೇ ಒಂದು ಕೃತ್ಯ ಖಂಡನಾರ್ಹವೆನಿಸಿಕೊಳ್ಳುವುದಕ್ಕೆ ಆ ಕೃತ್ಯದಲ್ಲಿ ಭಾಗಿಯಾದವರು ಯಾರು, ಸಂತ್ರಸ್ತರ ಸಂಖ್ಯೆ ಎಷ್ಟು ಮತ್ತು ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯ ಆಗಬಾರದು. ಮನುಷ್ಯರನ್ನು ಕೊಲ್ಲುವ ಅಥವಾ ಬೆದರಿಸುವ ಅಥವಾ ಅವಮಾನಿಸುವ ಉದ್ದೇಶವು ಕೃತ್ಯವೊಂದರ ಹಿಂದಿದೆ ಎಂಬುದು ದಿಟವಾದ ತಕ್ಷಣ, ನಾವದನ್ನು ಪ್ರಶ್ನಿಸಬೇಕು. ಕೃತ್ಯದಲ್ಲಿ ಭಾಗಿಯಾದವರನ್ನು ಖಂಡಿಸಬೇಕು. ಶಂಕಿತ ಉಗ್ರ ಸೈಫುಲ್ಲಾನ ತಂದೆ ಸರ್ತಾಜ್ ಮತ್ತು ಜಿ.ಎಂ. ಖಾನ್‍ರ ಮಗ ಅಬ್ದುಲ್ ಕಾದಿರ್‍ರ ನಿಲುವು ಮುಖ್ಯವಾಗುವುದು ಈ ಹಿನ್ನೆಲೆಯಲ್ಲಿ. ರಾಜನಾಥ್ ಸಿಂಗ್ ಕೂಡಾ ಅದರ ಮಹತ್ವವನ್ನು ಗುರುತಿಸಿದ್ದಾರೆ. ಆದ್ದರಿಂದಲೇ, ಕೆಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಗುಜರಾತ್‍ನಲ್ಲಿ ಸಾವಿರಾರು ಮಂದಿಯ ಹತ್ಯೆ ನಡೆಯಿತು. ಅಸಂಖ್ಯ ಅತ್ಯಾಚಾರ ಪ್ರಕರಣಗಳು ನಡೆದುವು. ಆದರೆ ಒಬ್ಬನೇ ಒಬ್ಬ ಮುಹಮ್ಮದ್ ಸರ್ತಾಜ್ ಅಲ್ಲಿ ಕಾಣಿಸಿಕೊಳ್ಳಲಿಲ್ಲ, ಯಾಕೆ? ಉತ್ತರ ಪ್ರದೇಶದ ಮುಝಫ್ಫರ್ ನಗರ್‍ನಲ್ಲಿ 60ಕ್ಕಿಂತಲೂ ಹೆಚ್ಚು ಮಂದಿಯ ಹತ್ಯೆ ನಡೆಯಿತು. ಅತ್ಯಾಚಾರಗಳಾದುವು. ಕೊಲೆಗಾರರ ಪಟ್ಟಿಯನ್ನು ಪೊಲೀಸರು ಬಿಡುಗಡೆಗೊಳಿಸಿದರು. ಆದರೂ ಒಬ್ಬನೇ ಒಬ್ಬ ಸರ್ತಾಜ್ ಅಲ್ಲಿ ಈವರೆಗೂ ಕಾಣಿಸಿಕೊಂಡಿಲ್ಲವಲ್ಲ, ಏನಿದರ ಅರ್ಥ? ಮುಹಮ್ಮದ್ ಅಖ್ಲಾಕ್ ಎಂಬ ವೃದ್ಧನನ್ನು ತುಳಿದು ಹತ್ಯೆ ಮಾಡಲಾಯಿತು. ಅದರಲ್ಲಿ ಭಾಗಿಯಾದವರು ಯಾರೆಂಬುದನ್ನೂ ಪೊಲೀಸರು ಹೇಳಿದ್ದಾರೆ. ಆದರೂ ಆ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳುವ ಅಬ್ದುಲ್ ಕಾದಿರ್‍ಗಳು, ಸರ್ತಾಜ್‍ಗಳು ಇನ್ನೂ ಕಾಣಿಸಿಕೊಂಡಿಲ್ಲವೇಕೆ? ಒಂದು ಕಡೆ, ಮುಸ್ಲಿಮರ ದೇಶ ನಿಷ್ಠೆಯನ್ನು ಇದೇ ರಾಜನಾಥ್ ಸಿಂಗ್‍ರ ಬಳಗ ಆಗಾಗ ನಿಕಷಕ್ಕೆ ಒಡ್ಡುತ್ತಲೇ ಇದೆ. ಪಾಕಿಸ್ತಾನಕ್ಕೆ ಕಳುಹಿಸುವ ಬೆದರಿಕೆಯನ್ನು ಹಾಕುತ್ತಲೂ ಇರುತ್ತದೆ. ಈ ಹಿಂದೆ ಕೇರಳದಲ್ಲೂ ಸರ್ತಾಜ್‍ರಂಥದ್ದೇ  ಘಟನೆಯೊಂದು ನಡೆದಿತ್ತು. ಭಾರತ-ಪಾಕ್ ಗಡಿಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಕೇರಳದ ಯುವಕನ ತಂದೆಯೋರ್ವರು ಮಗನ ಮೃತದೇಹವನ್ನು ಪಡೆಯಲು ನಿರಾಕರಿಸಿದ್ದರು. ಯಾಕೆ ರಾಜ್‍ನಾಥ್ ಸಿಂಗ್‍ರ ಬಳಗದಿಂದ ‘ದೇಶನಿಷ್ಠೆ’ಯನ್ನು ಮತ್ತೆ ಮತ್ತೆ ಅನುಮಾನದ ಮೊನೆಯಲ್ಲಿರಿಸಿಕೊಂಡ ಸಮುದಾಯದಿಂದಲೇ ಗರಿಷ್ಠ ದೇಶನಿಷ್ಠೆಯ ನಿಲುವುಗಳು ಪ್ರಕಟವಾಗುತ್ತಿವೆ? ಇಂಥ ನಿಲುವುಗಳನ್ನು ಪ್ರದರ್ಶಿಸಬೇಕಾದ ನೂರಾರು ಸಂದರ್ಭಗಳು ಎದುರಾಗುತ್ತಿದ್ದರೂ ಒಂದೇ ಒಂದು ಬಾರಿ ಇಂಥ ದೇಶನಿಷ್ಠೆಯನ್ನು ಪ್ರದರ್ಶಿಸಲು ಸಿಂಗ್ ಬಳಗ ಮುಂದಾಗಿಲ್ಲವಲ್ಲ, ಇದು ಏನನ್ನು ಸೂಚಿಸುತ್ತದೆ? ಕೇವಲ 8 ಮಂದಿ ಗಾಯಗೊಂಡ ಪ್ರಕರಣಕ್ಕೆ ತಂದೆಯೋರ್ವ ಈ ಮಟ್ಟದಲ್ಲಿ ಪ್ರತಿಕ್ರಿಯಿಸುತ್ತಾರೆಂದಾದರೆ ಮತ್ತು ಅದು ರಾಜನಾಥ್ ಸಿಂಗ್‍ರು ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾಪಿಸಿ ಗೌರವಿಸುವಷ್ಟು ಪ್ರಾಮುಖ್ಯತೆ ಉಳ್ಳದ್ದೆಂದಾದರೆ ಇಂಥ ನಿಲುವನ್ನು ಅವರ ಬೆಂಬಲಿಗ ಗುಂಪಿನಿಂದ ನಾವು ಯಾಕೆ ನಿರೀಕ್ಷಿಸಬಾರದು? ಸರ್ತಾಜ್‍ರು ಬರೇ ಪೊಲೀಸರ ಹೇಳಿಕೆಯನ್ನೇ ನಂಬಿಕೊಂಡು ಇಂಥದ್ದೊಂದು ಕಠಿಣ ತೀರ್ಮಾನವನ್ನು ಕೈಗೊಂಡಿದ್ದಾರೆ. ನಿಜಕ್ಕೂ, ಕೊಲ್ಲಲ್ಪಟ್ಟ ಸೈಫುಲ್ಲಾ ಮತ್ತು ಬಂಧಿತ ಖಾನ್ ಉಗ್ರರು ಹೌದೋ ಅಲ್ಲವೋ ಅನ್ನುವುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ, ಮನುಷ್ಯ ವಿರೋಧಿ ಕ್ರೌರ್ಯದ ಆರೋಪದಲ್ಲಿ ಪೊಲೀಸರು ಬಂಧಿಸಿದ ಮತ್ತು ಅಪರಾಧಿಗಳಾಗಿ ಗುರುತಿಸಿದವರಲ್ಲಿ ರಾಜನಾಥ್ ಸಿಂಗ್ ಬಳಗಕ್ಕೆ ಸೇರಿದವರ ಸಂಖ್ಯೆ ಎಷ್ಟಿರಬಹುದು? ಬರೇ ಗುಜರಾತ್, ಮುಝಫ್ಫರ್ ನಗರ್, ಅಸ್ಸಾಂ ಎಂದಷ್ಟೇ ಅಲ್ಲ, ದೇಶದಾದ್ಯಂತ ಇಂಥ ಮನುಷ್ಯ ವಿರೋಧಿ ಪ್ರಕರಣಗಳು ಅಸಂಖ್ಯ ನಡೆದಿವೆ. ಕೋಮುಗಲಭೆಗಳ ಹೆಸರಲ್ಲಿ ನಡೆದ ಕ್ರೌರ್ಯಗಳು ಈ ದೇಶದಲ್ಲಿ ಎಷ್ಟು ಸರ್ತಾಜ್‍ಗಳನ್ನು ಕಣ್ಣೀರಿಗೊಳಪಡಿಸಿವೆ, ಎಷ್ಟು ವಿಧವೆಯರನ್ನು, ಅನಾಥರನ್ನು, ತಬ್ಬಲಿ ಮಕ್ಕಳನ್ನು ಸೃಷ್ಟಿಸಿವೆ ಎಂಬುದು ಎಲ್ಲರಿಗೂ ಗೊತ್ತು. ಕಳೆದವಾರವಷ್ಟೇ ರಂಗಕರ್ಮಿ ಯೋಗೇಶ್ ಮಾಸ್ಟರ್‍ರಿಗೆ ಮಸಿ ಬಳಿಯಲಾಗಿದೆ. ಹಲ್ಲೆ ನಡೆಸಲಾಗಿದೆ. ಇದರಲ್ಲಿ ಭಾಗಿಯಾದವರಿಗೂ ರಾಜ್‍ನಾಥ್ ಸಿಂಗ್‍ರ ಪಕ್ಷದ ಬೆಂಬಲಿಗರಿಗೂ ನಡುವೆ ಏನೇನು ಸಂಬಂಧ ಇವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ದಾಳಿ ನಡೆಸುವವರೂ ಬೆತ್ತಲೆಗೊಳಿಸಿ ಥಳಿಸಿವವರೂ ಈ ಬಳಗದಲ್ಲಿದ್ದಾರೆ. ಹೀಗಿದ್ದೂ ಯಾಕೆ ರಾಜನಾಥ್ ದೇಶಪ್ರೇಮಿ ಬಳಗದ ಒಬ್ಬನೇ ಒಬ್ಬ ತಂದೆ ‘ಸರ್ತಾಜ್’ ಆಗುತ್ತಿಲ್ಲ? ಬಾಂಬ್ ಸ್ಫೋಟಿಸುವ ಮೂಲಕ ಜನರನ್ನು ಸಾಯಿಸುವುದು ಹೇಗೆ ಸಂವಿಧಾನ ವಿರೋಧಿಯೋ ಬಂದೂಕು, ಬೆಂಕಿ, ತಲವಾರು.. ಇತ್ಯಾದಿ ಆಯುಧಗಳ ಮೂಲಕ ಜನರನ್ನು ಸಾಯಿಸುವುದು ಕೂಡ ಸಂವಿಧಾನ ವಿರೋಧಿಯೇ. ಮಸಿ ಬಳಿದು ಅವಮಾನಿಸುವುದು ಕೂಡ ಸಂವಿಧಾನ ವಿರೋಧಿಯೇ. ಅತ್ಯಾಚಾರವೂ ಇದೇ ಪಟ್ಟಿಯಲ್ಲಿ ಬರುತ್ತದೆ. ಮನುಷ್ಯರನ್ನು ಅನ್ಯಾಯವಾಗಿ ಸಾಯಿಸುವ ಎಲ್ಲವೂ ಎಲ್ಲರೂ ಮನುಷ್ಯ ವಿರೋಧಿಗಳೇ. ದೇಶದ್ರೋಹಿಗಳೇ. ಆದರೆ, ಮುಸ್ಲಿಮರ ದೇಶನಿಷ್ಠೆಯನ್ನು ಆಗಾಗ ಪ್ರಶ್ನಿಸುವ ರಾಜನಾಥ್ ಸಿಂಗ್‍ರ ಬಳಗ ಈ ವರೆಗೂ ಒಬ್ಬನೇ ಒಬ್ಬ ಸರ್ತಾಜ್‍ರನ್ನು ತಯಾರಿಸಿಲ್ಲ. ತಮ್ಮ ಮಕ್ಕಳಿಂದ ಅಂತರ ಕಾಯ್ದುಕೊಂಡ ದೇಶಪ್ರೇಮಿ ತಂದೆಯನ್ನು ಆ ಬಳಗ ಇನ್ನೂ ಸೃಷ್ಟಿಸಿಲ್ಲ. ಇಷ್ಟಿದ್ದೂ, ಆ ಬಳಗ ತಮ್ಮನ್ನು ದೇಶಪ್ರೇಮಿಯಾಗಿ ಗುರುತಿಸಿಕೊಳ್ಳುತ್ತಿದೆ. ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸುತ್ತಿದೆ. ಇದಕ್ಕೆ ಏನೆನ್ನಬೇಕು? ಇದು ಸತ್ಯದ್ರೋಹ, ನ್ಯಾಯದ್ರೋಹ, ಧರ್ಮದ್ರೋಹ, ದೇಶದ್ರೋಹ, ಆತ್ಮವಂಚನೆಯಲ್ಲವೇ? ಸರ್ತಾಜ್‍ರನ್ನು ಹೊಗಳುವ ನೈತಿಕ ಅರ್ಹತೆ ರಾಜ್‍ನಾಥ್ ಸಿಂಗ್ ಮತ್ತು ಅವರ ಬಳಗಕ್ಕೆ ನಿಜಕ್ಕೂ ಇದೆಯೇ? ಯಾಕೋ ವಿಷಾದವೆನಿಸುತ್ತಿದೆ.

Saturday, 4 March 2017

ಡೈರಿ ಮತ್ತು ನೈತಿಕತೆಯ ಪ್ರಶ್ನೆ

     ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆಯ ಮೇಲೆ 2016 ಮಾರ್ಚ್ 15ರಂದು ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಸಿಕ್ಕಿದೆಯೆನ್ನಲಾಗುವ ಡೈರಿಯು ಈ ಹಿಂದಿನ ಹಲವು ಡೈರಿಗಳ ಬಗ್ಗೆ ಕುತೂಹಲ ತಾಳುವಂತೆ ಮಾಡಿದೆ. ಮೊದಲನೆಯದಾಗಿ, ರಾಜಕಾರಣಿಗಳು ಡೈರಿ ಬರೆದಿಡುತ್ತಾರೆಂಬುದೇ ಅದ್ಭುತ. ಒಂದುವೇಳೆ, ಬರೆದಿಟ್ಟರೂ ಅದು ನೂರು ಶೇಕಡಾ ಪ್ರಾಮಾಣಿಕವಾಗಿರುತ್ತದೆ ಎಂದು ನಾವೆಲ್ಲ ನಂಬುವುದು ಇನ್ನೊಂದು ಅದ್ಭುತ. ಇನ್ನು, ಅವರು ಡೈರಿ ಬರೆಯುತ್ತಾರೆ ಮತ್ತು ಅದು ಪ್ರಾಮಾಣಿಕವೂ ಆಗಿರುತ್ತದೆ ಎಂದೇ ನಾವು ನಂಬಬೇಕೆಂದುಕೊಂಡರೂ, ಸಿದ್ಧರಾಮಯ್ಯನವರ ರಾಜಿನಾಮೆಯೊಂದಿಗೆ ಈ ಹಿಂದಿನ ಎಲ್ಲ ‘ಡೈರಿ ಪಾಪಗಳೂ’ ಪರಿಹಾರವಾಗುತ್ತವೆ ಎಂಬಂತೆ ವರ್ತಿಸುತ್ತಿರುವ ಬಿಜೆಪಿಯ ನಿಲುವು ಪರಮಾದ್ಭುತ.
      ನೈತಿಕತೆ ಎಂಬ ಬಹು ಅಮೂಲ್ಯ ಮತ್ತು ಬಹು ಭಾರವುಳ್ಳ ಮೌಲ್ಯಕ್ಕೆ ಚಿಕ್ಕಾಸಿನ ಗೌರವವನ್ನೂ ನೀಡದವರು ಮತ್ತು ಆ ಶಬ್ದವನ್ನು ಪದೇ ಪದೇ ಬಳಸಿ ಅದರ ಮಾನವನ್ನು ಹರಾಜು ಹಾಕುತ್ತಿರುವವರು ರಾಜಕಾರಣಿಗಳು. ಗೋವಿಂದರಾಜು ಡೈರಿಯ ನೈತಿಕ ಹೊಣೆ ಹೊತ್ತು ಸಿದ್ಧರಾಮಯ್ಯ ರಾಜಿನಾಮೆ ನೀಡಬೇಕೆಂದು ಯಡಿಯೂರಪ್ಪ ಆಗ್ರಹಿಸುತ್ತಿದ್ದಾರೆ. ಹಾಗಾದರೆ, ಗಣಿ ದೊರೆ ಜನಾರ್ಧನ ರೆಡ್ಡಿಯ ಬಂಟ ಖಾರದಪುಡಿ ಮಹೇಶನ ಡೈರಿಯ ಬಗ್ಗೆ ಅವರ ನಿಲುವು ಏನು? ಗಣಿ ಹಗರಣವನ್ನು ತನಿಖೆ ನಡೆಸಿದ್ದ ಯು.ವಿ. ಸಿಂಗ್‍ರ ವರದಿಯಲ್ಲಿ ಆ ಡೈರಿಯ ವಿವರವಿತ್ತಲ್ಲ, ಅದಕ್ಕಾಗಿ ಯಾರು ನೈತಿಕ ಹೊಣೆ ಹೊರಬೇಕು? ಗೋವಿಂದರಾಜು ಅವರ ಡೈರಿಯಲ್ಲಿರುವ ಫಲಾನುಭವಿಗಳ ಹೆಸರಾದರೋ ಸಂಕೇತಾಕ್ಷರಗಳಲ್ಲಿದೆ. ಆರ್‍ಜಿ, ಎಸ್‍ಜಿ, ಕೆಜೆಜಿ, ಡಿಕೆಎಸ್ ಹೀಗೆ. ಇದನ್ನು ನಾವು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಜಾರ್ಜ್, ಶಿವಕುಮಾರ್… ಎಂದೆಲ್ಲ ನಮ್ಮ ಗ್ರಹಿಕೆಗೆ ತಕ್ಕಂತೆ ವಿಸ್ತರಿಸಿ ಓದಬೇಕು. ಆದರೆ ಖಾರದಪುಡಿ ಡೈರಿಯಲ್ಲಿ ಇಂಥ ಸಿಕ್ಕುಗಳೇ ಇಲ್ಲ. ಜುಪಿಟರ್ ಏವಿಯೇಶನ್ ಎಂಬ ನೇರ ಉಲ್ಲೇಖವೇ ಇದೆ. ಈ ಜುಪಿಟರ್‍ನ ಮಾಲಿಕ ಯಾರು ಮತ್ತು ಅವರು ಯಾವ ಪಕ್ಷದ ರಾಜ್ಯಸಭಾ ಸದಸ್ಯರು ಎಂಬುದು ಯಡಿಯೂರಪ್ಪರಿಗೆ ಚೆನ್ನಾಗಿಯೇ ಗೊತ್ತು. ಬಿಜೆಪಿಯ ಕೋಶಾಧಿಕಾರಿಯಾಗಿದ್ದ ಲೆಹರ್ ಸಿಂಗ್‍ರ ನಿವಾಸದ ಮೇಲೆ 2013ರಲ್ಲಿ ದಾಳಿಯಾಗಿತ್ತು. ಆಗ ಸಿಕ್ಕಿದ ಡೈರಿಯಲ್ಲಿ ಬಿಜೆಪಿಯ ವರಿಷ್ಠರಿಗೆ 391 ಕೋಟಿ ರೂಪಾಯಿ ಪಾವತಿಸಿದ ವರದಿಗಳಿವೆ ಎಂದು ಹೇಳಲಾಗುತ್ತದೆ. ಅಲ್ಲದೇ, ಸ್ವತಃ ಲೆಹರ್ ಸಿಂಗ್ ಅವರೇ ಒಂದು ಸಂದರ್ಭದಲ್ಲಿ ಬರೆದ ಪತ್ರದಲ್ಲೂ ಕಪ್ಪ ಕಾಣಿಕೆಯ ಉಲ್ಲೇಖಗಳಿದ್ದುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇನ್ನು, ರಾಜ್ಯವನ್ನು ಬಿಟ್ಟು ರಾಷ್ಟ್ರಮಟ್ಟವನ್ನು ಪರಿಗಣಿಸಿದರೂ ಅಲ್ಲಿಯ ನೈತಿಕತೆಯೇನೂ ಭವ್ಯವಾಗಿಲ್ಲ. ದಶಕಗಳ ಹಿಂದಿನ ಜೈನ-ಹವಾಲಾ ಡೈರಿಯಿಂದ ಇತ್ತೀಚೆಗಿನ ಸಹರಾ-ಬಿರ್ಲಾ ಕಂಪೆನಿಗಳ ಡೈರಿಯವರೆಗೆ ಎಲ್ಲವೂ ಕೊಳಕೇ. ಸಹರಾ-ಬಿರ್ಲಾ ಡೈರಿಯಂತೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನೇ ಅನುಮಾನದ ಮೊನೆಯಲ್ಲಿಟ್ಟಿದೆ. ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಸಲ್ಲಿಸಲಾದ ಕಪ್ಪ ಕಾಣಿಕೆಯ ಉಲ್ಲೇಖಗಳು ಅದರಲ್ಲಿವೆ ಎಂದು ಹೇಳಲಾಗುತ್ತದೆ. ಒಂದುವೇಳೆ, ‘ನೈತಿಕ ಹೊಣೆ’ ಎಂಬುದು ನಿಜಕ್ಕೂ ಇತರೆಲ್ಲ ಹೊಣೆಗಳಿಗಿಂತ ಶ್ರೇಷ್ಠವೇ ಆಗಿದ್ದರೆ, ಮೊಟ್ಟ ಮೊದಲು ‘ಸನ್ಯಾಸಿ’ ಆಗಬೇಕಾದವರು ಯಾರು? ಅದು ಬಿಟ್ಟು, 2016 ಮಾರ್ಚ್ 15ಕ್ಕಿಂತ ಮೊದಲಿನ ಯಾವ ಡೈರಿಗೂ ಅನ್ವಯವಾಗದ ನಿಯಮಗಳೆಲ್ಲ ‘ಗೋವಿಂದರಾಜು’ ಡೈರಿಗೆ ಅನ್ವಯವಾಗಬೇಕೆಂದು ವಾದಿಸುವುದು ಯಾವ ಬಗೆಯ ನೈತಿಕತೆ? ಹಾಗಂತ,
      ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪರಮ ಪವಿತ್ರ ಮತ್ತು ಬಿಜೆಪಿ ಪರಮ ನೀಚ ಎಂಬ ಅಭಿಪ್ರಾಯ ಈ ದೇಶದ ಯಾರಲ್ಲೂ ಇರುವ ಸಾಧ್ಯತೆ ಇಲ್ಲ. ಇಂಥದ್ದೊಂದು ವರ್ಗೀಕರಣದ ಹೊರಗೆ ಈ ಎರಡೂ ಪಕ್ಷಗಳು ಇವತ್ತು ಬಂದು ನಿಂತಿವೆ. ಆದ್ದರಿಂದಲೇ, ಬಿಜೆಪಿಯ ಡೈರಿಯ ಆರೋಪಕ್ಕೆ ಕಾಂಗ್ರೆಸ್ ಇನ್ನೊಂದು ಡೈರಿಯ ಮೂಲಕವೇ ಉತ್ತರಕೊಡುವ ಮಟ್ಟಕ್ಕೆ ಇಳಿದಿರುವುದು. ಒಂದು ತಪ್ಪನ್ನು ಇನ್ನೊಂದು ತಪ್ಪಿನ ಮೂಲಕ ಸಮರ್ಥಿಸಿಕೊಳ್ಳುವುದನ್ನೇ ರಾಜಕೀಯ ಎಂದು ಅಂದುಕೊಳ್ಳಬೇಕಾದ ಸ್ಥಿತಿಗೆ ನಾವೆಲ್ಲ ತಲುಪಿ ಬಿಟ್ಟಿದ್ದೇವೆ. ನಿಜವಾಗಿ, ಉದ್ಯಮಿಗಳಿಂದ ಅಥವಾ ಬೇನಾಮಿ ಮೂಲಗಳಿಂದ ರಾಜಕೀಯ ಪಕ್ಷಗಳು ಹಣ ಸಂಗ್ರಹಿಸುವುದು ಎಂಟನೇ ಅದ್ಭುತವೇನೂ ಅಲ್ಲ. ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಸಾವಿರಾರು ರೂ. ಖರ್ಚು ಮಾಡಬೇಕಾದ ಅನಿವಾರ್ಯತೆಯಿರುವ ದೇಶದಲ್ಲಿ ರಾಷ್ಟ್ರೀಯ ಪಕ್ಷವೊಂದು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವುದೆಂದರೆ ಅದು ಎಷ್ಟು ಕೋಟಿ ರೂಪಾಯಿಗಳ ಬಜೆಟ್ ಆಗಿರಬಹುದು? ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗಳು ಅತೀ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸುತ್ತವೆ. ಇಷ್ಟೊಂದು ಸಂಖ್ಯೆಯ ಅಭ್ಯರ್ಥಿಗಳಿಗೆ ಎಷ್ಟು ಕೋಟಿ ರೂಪಾಯಿ ಖರ್ಚು ತಗಲಬಹುದು? ಅವೆಲ್ಲ ಯಾರದ್ದು? ಸೋನಿಯಾಗಾಂಧಿ ಮತ್ತು ಅಮಿತ್ ಶಾ ಅವರು ಈ ಎಲ್ಲ ದುಡ್ಡನ್ನು ಭರಿಸುತ್ತಿದ್ದಾರೆಯೇ? ಇಲ್ಲ ಎಂದಾದರೆ, ಹಣದ ಮೂಲ ಯಾವುದು? ಈ ಪ್ರಶ್ನೆಯನ್ನು ಮತ್ತೂ ಮತ್ತೂ ಕೆದಕುತ್ತಾ ಹೋದರೆ, `ಕಪ್ಪ ಕಾಣಿಕೆಗಳ' ಪಟ್ಟಿ ಬಿಚ್ಚಿಕೊಳ್ಳುತ್ತಾ ಹೋಗಬಹುದು. ಆದ್ದರಿಂದಲೇ, ಈಗ ಬಹಿರಂಗವಾಗಿರುವ ಡೈರಿ ವಿವರಗಳನ್ನು `ಒಪ್ಪತಕ್ಕ ಪುರಾವೆ' ಎಂದು ಕೋರ್ಟ್ ಪರಿಗಣಿಸದಿರಲಿ ಎಂದು ಈ ಎರಡೂ ಪಕ್ಷಗಳು ಖಂಡಿತ ಬಯಸುತ್ತಿರಬಹುದು. ಡೈರಿಯ ಉಲ್ಲೇಖಗಳನ್ನು ಪುರಾವೆಯಾಗಿ ಸ್ವೀಕರಿಸುವುದಕ್ಕೆ ಸುಪ್ರೀಮ್ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು ಕೂಡ. ಒಂದು ರೀತಿಯಲ್ಲಿ, ಕೋರ್ಟ್‍ನ ಈ ನಿರಾಕರಣೆಯೇ ಯಡಿಯೂರಪ್ಪರಿಗೆ ಇವತ್ತು ಇಮ್ಮಡಿ ಧೈರ್ಯವನ್ನು ಒದಗಿಸಿದೆ. ಡೈರಿಯನ್ನು ಕೋರ್ಟ್ ಒಪ್ಪುವುದಿಲ್ಲವೆಂದ ಮೇಲೆ `ಹಳೆ ಡೈರಿಗಳ' ಬಗ್ಗೆ ಭಯಪಡಬೇಕಾದ ಅಗತ್ಯವೇನೂ ಇಲ್ಲವಲ್ಲ.
    ಸದ್ಯ ನಮ್ಮ ನಡುವೆ ನಿಜಕ್ಕೂ ಚರ್ಚೆಗೊಳಗಾಗಬೇಕಾದದ್ದು ‘ಡೈರಿ’ಗಳು ನಕಲಿಯೋ ಅಸಲಿಯೋ ಎಂಬುದಲ್ಲ. ಅವೆಲ್ಲವನ್ನೂ ಅಸಲಿಯೆಂದೇ ಪರಿಗಣಿಸಿದರೂ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಈ ಕಪ್ಪ ಕಾಣಿಕೆಗಳನ್ನು ತಡೆಗಟ್ಟುವುದು ಹೇಗೆ? ಪಕ್ಷವೊಂದಕ್ಕೆ ಹಣ ಅನಿವಾರ್ಯವಾಗುವುದು ಯಾವೆಲ್ಲ ಕಾರಣಗಳಿಗೆ? ಚುನಾವಣೆ ಎಂಬುದೇ ಅದಕ್ಕೆ ಉತ್ತರವೆಂದಾದರೆ, ಹಣದ ಪೈಪೋಟಿಯನ್ನು ತಗ್ಗಿಸಬಲ್ಲ ಬೇರೇನಾದರೂ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೇ? ಪ್ರಜಾತಂತ್ರವೆಂದರೆ ಪ್ರಜೆಗಳ ಸಂಪೂರ್ಣ ಭಾಗಿದಾರಿಕೆಯಿಂದಲೇ ಕಟ್ಟಲಾಗುವ ಸೌಧವೇ ಹೊರತು ಹಣದಿಂದಲ್ಲ. ಹಣದ ಪ್ರಾಬಲ್ಯ ಇರುವವರೆಗೆ ಪ್ರಜಾತಂತ್ರದಲ್ಲಿ ನಿಜವಾದ ಪ್ರಜೆ ಅಪ್ರಸ್ತುತ ಆಗುತ್ತಾನೆ/ಳೆ. ಇವತ್ತು ಎಲ್ಲ ಕಪ್ಪ ಕಾಣಿಕೆಗಳನ್ನೂ ಚುನಾವಣೆಯ ಹಿನ್ನೆಲೆಯಲ್ಲಿಯೇ ಸಂಗ್ರಹಿಸಲಾಗುತ್ತದೆ.  ಹೆಚ್ಚು ಹಣ ಸಂಗ್ರಹಿಸಿದ ಮತ್ತು ಖರ್ಚು ಮಾಡಿದ ಪಕ್ಷವು ಅಧಿಕಾರಕ್ಕೆ ಹೆಚ್ಚು ಹತ್ತಿರವಾಗುವ ದುರಂತವೂ ನಡೆಯುತ್ತಿದೆ. ಈ ಸ್ಥಿತಿಯ ಬದಲಾವಣೆಯ ಹೊರತು `ಡೈರಿ'ಗಳನ್ನು ದೂರಿ ಪ್ರಯೋಜನವೇನೂ ಇಲ್ಲ. ಗೋವಿಂದರಾಜು ಡೈರಿಯನ್ನು ಹಿಡಿದು ಯಡಿಯೂರಪ್ಪ ಇವತ್ತು ಎಷ್ಟೇ ಮಾತಾಡಲಿ, ನಾಳೆ ಇಂಥದ್ದೇ ಇನ್ನೊಂದು ಡೈರಿಯ ಹೊರತು ತನಗೂ ಅಸ್ತಿತ್ವ ಇಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತು. ಆದ್ದರಿಂದಲೇ, ಅವರ ಮಾತಿನಲ್ಲಿ ಬರೇ ಅಬ್ಬರವೇ ಇಣುಕುತ್ತಿದೆ. `ನೈತಿಕ ಹೊಣೆ' ಎಂಬ ಪದವನ್ನು ಅವರು ಎಷ್ಟು ಸಹಜವಾಗಿ ಮತ್ತು ಎಷ್ಟು ನಿರ್ವಿಕಾರವಾಗಿ ಉಚ್ಚರಿಸುತ್ತಿದ್ದಾರೆಂದರೆ ಆ ಪದಕ್ಕೂ ನೈತಿಕತೆಗೂ ಯಾವ ಸಂಬಂಧವೇ ಇಲ್ಲ ಎಂಬಷ್ಟು. ಡೈರಿಯ ವಿಷಯದಲ್ಲಿ ಬಿಜೆಪಿಯ ಆಂತರಿಕ ನಿಲುವು ಏನು ಎಂಬುದಕ್ಕೆ ಅವರ ಭಾವರಹಿತ ಅಬ್ಬರದ ಮಾತುಗಳೇ ಸಾಕ್ಷಿ. ಗೋವಿಂದ ರಾಜು ಡೈರಿಯು ಬಿಜೆಪಿಯ ನೈತಿಕ ಬದ್ಧತೆಯನ್ನು ತೆರೆದಿಟ್ಟಿದೆ ಎಂದೂ ಹೇಳಬಹುದು.

Wednesday, 22 February 2017

ಪಚ್ಚ ಚೆಡಿ ಎಂಬ ಎಲೆ ಮತ್ತು ಎತ್ತಿನಹೊಳೆ

        ಕಾಡು ಮತ್ತು ನಾಡು ಸದಾ ಸುದ್ದಿಯಲ್ಲಿರುವ ಎರಡು ಕ್ಷೇತ್ರಗಳು. ನಾಡಿನಲ್ಲಿರುವ ಮನುಷ್ಯರ ಕುತೂಹಲವು ಅವರನ್ನು ಕಾಡು ಪ್ರವೇಶಿಸುವಂತೆ ಮಾಡಿದರೆ, ಕಾಡಿನಲ್ಲಿರುವ ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡೋ ಅಥವಾ ದಾರಿ ತಪ್ಪಿಯೋ ನಾಡು ಪ್ರವೇಶಿಸುತ್ತವೆ. ಹೀಗೆ ಒಂದು ಕಡೆ ಕುತೂಹಲ ಮತ್ತು ಇನ್ನೊಂದು ಕಡೆ ಆಹಾರ ಹುಡುಕಾಟದ ಈ ಆಟ ನಡೆಯುತ್ತಲೇ ಇದೆ. ಇತ್ತೀಚೆಗೆ ವಿಜ್ಞಾನಿಗಳ ಒಂದು ತಂಡ ಕೇರಳದ ಪಶ್ಚಿಮ ಘಟ್ಟವನ್ನು ಪ್ರವೇಶಿಸಿತು. ಅದರ ನೇತೃತ್ವವನ್ನು ವಹಿಸಿದ್ದು ರಾಜಶೇಖರನ್ ಎಂಬವರು. ಆ ತಂಡದಲ್ಲಿ ಕಾಡುತ್ಪನ್ನಗಳ ಬಗ್ಗೆ, ಅಲ್ಲಿರುವ ಗಿಡಗಳ ಬಗ್ಗೆ ಮತ್ತು ಕಾಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕುತೂಹಲ ಇತ್ತೇ ಹೊರತು ಇದಮಿತ್ಥಂ ಅನ್ನುವ ಗುರಿಯೇನೂ ಇರಲಿಲ್ಲ. ಈ ತಂಡ ಕಾಡಿನಲ್ಲಿ ಬದುಕುತ್ತಿರುವ ಆದಿವಾಸಿಗಳನ್ನೂ ಭೇಟಿಯಾಯಿತು. ಕುಟ್ಟಮಲ ಕುಣಿಯನ್ ಎಂಬ ಹಿರಿಯ ಆದಿವಾಸಿ ಇವರಲ್ಲಿ ಒಬ್ಬರು. ಕೋಲಾನೈಕನ್ ಆದಿವಾಸಿ ಪಂಗಡಕ್ಕೆ ಸೇರಿರುವ ಆ ವ್ಯಕ್ತಿಯ ಎದೆಯ ಉದ್ದಕ್ಕೂ ಗಂಭೀರ ಗಾಯದ ಗುರುತು ಕಾಣಿಸುತ್ತಿತ್ತು. ವಿಜ್ಞಾನಿಗಳ ತಂಡ ಆ ಬಗ್ಗೆ ಕುತೂಹಲ ವ್ಯಕ್ತಪಡಿಸಿತು. ಆಗ ಆ ಹಿರಿಯ ವ್ಯಕ್ತಿ ಒಂದು ಘಟನೆಯನ್ನು ವಿವರಿಸಿದರು. ಆ ವ್ಯಕ್ತಿಯ ಮಟ್ಟಿಗೆ ಅದೊಂದು ಸಾಮಾನ್ಯ ಘಟನೆ. ಕೆಲವು ವರ್ಷಗಳ ಹಿಂದೆ ಅವರ ಮೇಲೆ ಕರಡಿಯೊಂದು ದಾಳಿ ನಡೆಸಿತ್ತು. ಪರಸ್ಪರ ಘರ್ಷಣೆಗಳೂ ನಡೆದುವು. ಒಂದು ಹಂತದಲ್ಲಿ ಕರಡಿಯು ಈ ಕುಟ್ಟುಮಲ ಕುಣಿಯನ್‍ರನ್ನು ನೆಲಕ್ಕೆ ಬೀಳಿಸಿತು. ಎದೆಯನ್ನು ಸೀಳುವ ಪ್ರಯತ್ನ ನಡೆಸಿತು. ಎದೆಗೆ ಚುಚ್ಚಿದ ಪರಿಣಾಮದಿಂದ ರಕ್ತ ಹರಿಯಿತು. ಆದರೂ ಕುಣಿಯನ್ ಮೇಲೆದ್ದು ನಿಂತರಲ್ಲದೇ ಪ್ರತಿ ಹೋರಾಟದ ಮೂಲಕ ಕರಡಿಯನ್ನು ಸಾಯಿಸಿದರು. ಬಳಿಕ ಎದೆಯ ಉದ್ದಕ್ಕೂ ಆದ ಆಳ ಗಾಯಕ್ಕೆ ‘ಪಚ್ಚ ಚೆಡಿ’ (Neurocalyx calycinus ) ಎಂಬ ಹೆಸರಿನ ಎಲೆಗಳಿಂದ ಮಾಡಲಾದ ನಾಟಿಮದ್ದನ್ನು ಹಚ್ಚಿದರು. ಗಾಯವು ಸಂಪೂರ್ಣವಾಗಿ ಗುಣವಾಯಿತು. ಕುಣಿಯನ್‍ರ ಮಾತಿನಿಂದ ಪ್ರಭಾವಿತವಾದ ಈ ತಂಡ, ಆ ಗಿಡಮೂಲಿಕೆಯ ಮೇಲೆ ಸಂಶೋಧನೆಯನ್ನು ಕೈಗೊಂಡಿತು. ಸಾಮಾನ್ಯವಾಗಿ ಸುಸಜ್ಜಿತ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಚಿಕಿತ್ಸೆಯನ್ನು ಪಡೆಯಬೇಕಿದ್ದ ವ್ಯಕ್ತಿಯೋರ್ವ ಕೇವಲ ಗಿಡಮೂಲಿಕೆಯಿಂದ ಗುಣಮುಖನಾಗುವುದನ್ನು ಆ ತಂಡಕ್ಕೆ ಸುಲಭದಲ್ಲಿ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಶೋಧನೆ ಮುಂದುವರಿದಂತೆ ವಿಜ್ಞಾನಿಗಳೂ ಅಚ್ಚರಿಪಟ್ಟರು. ಆ ಗಿಡಮೂಲಿಕೆಯ ಪೇಟೆಂಟ್‍ಗೆ ಅರ್ಜಿ ಹಾಕಿದರು. ವಿಶೇಷ ಏನೆಂದರೆ, ಆ ಗಿಡಮೂಲಿಕೆಯಲ್ಲಿ ಒಂದಕ್ಕಿಂತ ಹೆಚ್ಚು ರೋಗನಿವಾರಕ ಗುಣಗಳಿದ್ದುವು. ಅದರಲ್ಲಿ ಕ್ಯಾನ್ಸರ್ ವಿರೋಧಿ ಅಂಶವೂ ಒಂದು. ಗಾಯಗಳು, ಸುಟ್ಟ ಗಾಯಗಳನ್ನು ಒಣಗಿಸುವ ಪರಿಣಾಮಕಾರಿ ಅಂಶಗಳು ಈ ಗಿಡಮೂಲಿಕೆಯಲ್ಲಿದ್ದುವು. ರಾಸಾಯನಿಕಗಳನ್ನು ಬಳಸಿ ಮಾಡಲಾಗುವ ಔಷಧಿಗಳಷ್ಟೇ ಸಾಮರ್ಥ್ಯವು ಈ ಗಿಡಮೂಲಿಕೆಯಲ್ಲಿರುವುದನ್ನೂ ಆ ವಿಜ್ಞಾನಿಗಳ ಗುಂಪು ಪತ್ತೆ ಹಚ್ಚಿತು. ಕೇರಳದ ನೀಲಾಂಬರ ಅರಣ್ಯದಲ್ಲಿ ಪತ್ತೆ ಹಚ್ಚಲಾದ ಪಚ್ಚ ಚೆಡಿ ಎಂಬ ಹೆಸರಿನ ಈ ಗಿಡಮೂಲಿಕೆಯ ಮೇಲೆ ಸದ್ಯ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
     ಕಾಡಿನ ಕುರಿತಂತೆ ನಾಡಿನಲ್ಲಿರುವ ಅನೇಕರಲ್ಲಿ ಒಂದು ಉಡಾಫೆಯ ನಿಲುವು ಇದೆ. ಪಶ್ಚಿಮ ಘಟ್ಟ ನಾಶದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವಾಗಲೂ ಈ ಉಡಾಫೆತನ ವ್ಯಕ್ತಗೊಳ್ಳುವುದಿದೆ. ಅರಣ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡದ ಅಭಿವೃದ್ಧಿ ಪರಿಕಲ್ಪನೆ ಇವತ್ತಿನದು. ಎಲ್ಲವನ್ನೂ ಭೋಗದ ದೃಷ್ಟಿಯಿಂದ ವ್ಯಾಖ್ಯಾನಿಸುವ ಕಲೆ ನಾಡು ಜೀವಿಗೆ ಕರಗತವಾಗಿದೆ. ಕಾಂಕ್ರೀಟು ನಾಡಿಗಾಗಿ ಮರಗಳು ನಾಶವಾಗುತ್ತವೆ. ಭೂ ಸಂಪತ್ತಿಗಾಗಿ ಅರಣ್ಯವೇ ಬರಡಾಗುತ್ತದೆ. ಅರಣ್ಯಗಳ ದೌರ್ಬಲ್ಯ ಏನೆಂದರೆ, ಅವುಗಳಿಗೆ ಮಾತು ಬರದೇ ಇರುವುದು. ಪಶ್ಚಿಮ ಘಟ್ಟವನ್ನೇ ಎತ್ತಿಕೊಳ್ಳಿ. ಅಲ್ಲಿಯ ಪ್ರಾಕೃತಿಕ ಸಂಪತ್ತು ಯಾವ ಬಗೆಯದು? ಏನೆಲ್ಲ ಗಿಡಮೂಲಿಕೆಗಳು ಅಲ್ಲಿರಬಹುದು? ನಮ್ಮ ಅರಿವಿಗೆ ಬಾರದ ಎಷ್ಟೆಲ್ಲ ಪ್ರಾಣಿ ಸಂಕುಲಗಳು, ಸಸ್ಯ ಪ್ರಭೇದಗಳು ಅಲ್ಲಿರಬಹುದು? ಮನುಷ್ಯ ಪ್ರಕೃತಿಬದ್ಧವಾಗಿ ಬದುಕಿದರೆ, ಕಾಯಿಲೆಗಳಿಗೆ ಮದ್ದನ್ನೂ ಪ್ರಕೃತಿಯೇ ಒದಗಿಸಬಲ್ಲುದು. ನಾಡು ಮತ್ತು ಕಾಡು ಪರಸ್ಪರ ಪೂರಕವಾದುದು. ಒಂದು ಇನ್ನೊಂದನ್ನು ಅವಲಂಬಿಸಿಕೊಂಡೇ ಜೀವಿಸುತ್ತವೆ. ಅಷ್ಟಕ್ಕೂ, ಪಶ್ಚಿಮಘಟ್ಟವನ್ನು ಸೀಳಿ ಎತ್ತಿನಹೊಳೆ ಯೋಜನೆಯ ಜಾರಿಗೆ ನಾವೊಂದು ದಾರಿಯನ್ನು ಕಂಡುಕೊಂಡೆವು ಎಂದೇ ಇಟ್ಟುಕೊಳ್ಳೋಣ. ಆದರೆ ಈ ದಾರಿ ಎಷ್ಟೆಲ್ಲ ಸಸ್ಯ ಪ್ರಭೇದಗಳ ಕೊಲೆಗೆ ಕಾರಣವಾಗಬಹುದು? ಪ್ರಾಣಿ, ಕೀಟ ಪ್ರಬೇಧಗಳ ನಾಶಕ್ಕೆ ಹೇತುವಾಗಬಹುದು? ಅರಣ್ಯವೆಂದರೆ ನೀರಿನ ಉಗಮ ಭೂಮಿ. ಅರಣ್ಯವನ್ನೇ ಸೀಳುವುದರಿಂದ ಅಥವಾ ಅದರ ಮೇಲೆ ದಾಳಿ ಮಾಡುವುದರಿಂದ ಈ ನೀರ ಒರತೆಯ ಮೇಲೆ ಏನೆಲ್ಲ ಪರಿಣಾಮಗಳಾಗಬಹುದು? ಕಾಡು ಎಂಬುದು ನಾಡಿನಲ್ಲಿರುವ ಜೀವಿಗಳು ಬೇಕಾಬಿಟ್ಟಿಯಾಗಿ ಬಳಸಬಹುದಾದ ಉಂಬಳಿ ಭೂಮಿಯೇನೂ ಅಲ್ಲವಲ್ಲ.
     ತಂತ್ರಜ್ಞಾನಗಳ ಮೇಲೆ ಮಾನವನ ವಿಪರೀತ ಅವಲಂಬನೆಯು ಎರಡು ರೀತಿಯ ಅಡ್ಡ ಪರಿಣಾಮಗಳಿಗೆ ಕಾರಣವಾಯಿತು. ಒಂದು- ಅದು ಕಾಡು ನಾಶಕ್ಕೆ ವೇಗವನ್ನು ಒದಗಿಸಿದರೆ ಇನ್ನೊಂದು- ಕಾಂಕ್ರೀಟು ಜಗತ್ತಿಗೆ ದೊಡ್ಡ ರೀತಿಯಲ್ಲಿ ಅಡಿಪಾಯವನ್ನು ಹಾಕಿತು. ಕಾಂಕ್ರೀಟು ಜಗತ್ತಿಗೆ ಬೇಕಾದ ಸಂಪನ್ಮೂಲಗಳಿರುವುದು ಭೂಮಿಯ ಎದೆಯಲ್ಲಿ. ಅದನ್ನು ಸೀಳುವುದರ ಹೊರತು ಕಾಂಗ್ರೀಟು ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುಲಭ ಪರಿಹಾರವಾಗಿ ಕಾಣಿಸಿದ್ದು ಕಾಡುಗಳು. ಅವುಗಳ ಮೇಲೆ ದಾಳಿ ನಡೆಸಿದರೆ, ಸೀಳಿದರೆ ಅಥವಾ ಅದರೊಳಗಿರುವ ಸಂಪನ್ಮೂಲವನ್ನು ಕಿತ್ತುಕೊಂಡರೂ ಅದು ಪ್ರತಿಭಟಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದು ನಾಡುಜೀವಿಗಳಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಕಾಡು ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳು ಎಗ್ಗಿಲ್ಲದೇ ನಡೆದುವು. ಕಾಡನ್ನು ನಾಶ ಮಾಡಿ ನಾಡು ಕಟ್ಟುವ ನೀಲನಕ್ಷೆಗಳು ತಯಾರಾದುವು. ಈ ಅಭಿವೃದ್ಧಿಯ ಹೊಡೆತಕ್ಕೆ ಸಿಕ್ಕಿ ದಿಕ್ಕು ತಪ್ಪಿದ ಪ್ರಾಣಿಗಳನ್ನು ‘ಊರಿಗೆ ದಾಳಿಯಿಟ್ಟ ಪ್ರಾಣಿ’ಗಳ ಪಟ್ಟಿಗೆ ಸೇರಿಸಲಾಯಿತು. ಕ್ರಮೇಣ ಊರಿನ ವಾತಾವರಣ ಹದಗೆಡತೊಡಗಿತು. ಕಂಡೂ ಕೇಳರಿಯದ ಹೊಸ ಬಗೆಯ ರೋಗಗಳು ನಾಡಲ್ಲಿ ಕಾಣಿಸಿಕೊಳ್ಳತೊಡಗಿದುವು. ಈ ರೋಗವನ್ನು ಗುಣಪಡಿಸುವುದಕ್ಕಾಗಿ ಸಂಶೋಧನೆಗಳು ನಡೆದುವು. ದುಬಾರಿ ಬೆಲೆಯ ಔಷಧಿಗಳು ಮಾರುಕಟ್ಟೆಗೆ ಬಂದುವು. ಒಂದು ಕಡೆ ಮಾನವನೇ ತಂತ್ರಜ್ಞಾನದ ಬಲದಿಂದ ಕಾಡು ನಾಶದಲ್ಲಿ ತೊಡಗಿದ. ದುಡ್ಡು ಸಂಪಾದಿಸಿದ. ಇನ್ನೊಂದು ಕಡೆ, ಆ ನಾಶದ ಅಡ್ಡಪರಿಣಾಮವಾಗಿ ಕಾಣಿಸಿಕೊಂಡ ರೋಗಗಳಿಗೆ ಆ ದುಡ್ಡನ್ನು ವ್ಯಯ ಮಾಡುವ ಸಂದಿಗ್ಧಕ್ಕೂ ಸಿಲುಕಿದ. ಪ್ರಾಕೃತಿಕ ಸಮತೋಲನದ ಮೇಲೆ ಆಗುವ ಬಾಹ್ಯ ದಾಳಿಯ ಫಲಿತಾಂಶ ಇದು. ಆದ್ದರಿಂದ,
     ಕೇರಳದ ನೀಲಾಂಬರ ಅರಣ್ಯದಲ್ಲಿ ಸಿಕ್ಕ ‘ಪಚ್ಚ ಚೆಡಿ’ಯನ್ನು ನಮ್ಮ ಅಭಿವೃದ್ಧಿ ಪರಿಕಲ್ಪನೆಗೆ ಮುಖಾಮುಖಿಯಾಗಿಟ್ಟು ನೋಡಬೇಕಾಗಿದೆ. ಅರಣ್ಯವೆಂದರೆ ಬರೇ ಮರಗಳಲ್ಲ. ಅದು ನಾಡಿನ ಆರೋಗ್ಯವನ್ನು ಕಾಪಾಡುವ ಅಮೂಲ್ಯ ಸಂಪತ್ತು. ಮಾನವನು ಯಂತ್ರದ ಮುಷ್ಠಿಯಿಂದ ಹೊರಬಂದು ಚಿಂತಿಸಿದರೆ ಇದು ಖಂಡಿತ ಅರ್ಥವಾಗುತ್ತದೆ.


Monday, 13 February 2017

ಕಲ್ಲಡ್ಕವನ್ನು ಪ್ರತಿನಿಧಿಸಬೇಕಾದವರು ಯಾರು?


      ಕಲ್ಲಡ್ಕ - ಎರಡು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಅದರಲ್ಲಿ ಒಂದು ಕಾರಣವನ್ನು ವಿಕಿಪೀಡಿಯಾ ಹೇಳುತ್ತದೆ. ಗೂಗಲ್‍ನಲ್ಲಿ ಕಲ್ಲಡ್ಕ ಎಂದು ಬರೆದರೆ ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಒಂದು ಊರು ಎಂಬ ಮಾಹಿತಿ ಸಿಗುತ್ತದೆ. ಅದರ ಜೊತೆಗೇ KT (ಕಲ್ಲಡ್ಕ ಟೀ) ಬಹಳ ಹೆಸರುವಾಸಿ ಎಂದೂ ಅದು ಹೇಳುತ್ತದೆ. ಇನ್ನೊಂದು ಕಾರಣವನ್ನು ಸಮಾಜ ಹೇಳುತ್ತದೆ. ಅದು ಕಲ್ಲಡ್ಕ ಪ್ರಭಾಕರ ಭಟ್. ಈ ವರೆಗೆ ಕಲ್ಲಡ್ಕವು ಈ ಎರಡು ಕಾರಣಗಳ ಸುತ್ತಲೇ ಚರ್ಚೆಗೆ ಒಳಗಾಗುತ್ತಿತ್ತು. ವಾದ-ಪ್ರತಿವಾದ, ವಾಗ್ವಾದ, ಶ್ಲಾಘನೆಗಳಲ್ಲಿ ಕಲ್ಲಡ್ಕ ಟೀ (KT) ಮತ್ತು ಪ್ರಭಾಕರ ಭಟ್ಟರೇ ಕೇಂದ್ರ ಸ್ಥಾನದಲ್ಲಿದ್ದರು. ಆದರೆ ಕಳೆದವಾರ ಈ ರಂಗಮಂಟಪಕ್ಕೆ ವೆಂಕಪ್ಪ ಪೂಜಾರಿ ಎಂಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೋರ್ವರು ದಿಢೀರ್ ಪ್ರವೇಶಗೈದರು. ಮಾತ್ರವಲ್ಲ, ಕಲ್ಲಡ್ಕವನ್ನು ಪ್ರತಿನಿಧಿಸುವುದಕ್ಕೆ ಕಲ್ಲಡ್ಕ ಟೀ ಮತ್ತು ಪ್ರಭಾಕರ ಭಟ್ಟರಲ್ಲಿ ಯಾರು ಸೂಕ್ತ ಎಂಬುದನ್ನು ಅತ್ಯಂತ ಮನೋಜ್ಞವಾಗಿ ಸಮಾಜದ ಮುಂದಿಟ್ಟರು.
      ಮೇಸ್ತ್ರಿ ಕೆಲಸವನ್ನು ಬಲ್ಲ ವೆಂಕಪ್ಪ ಪೂಜಾರಿಯವರು 2016 ಮೇ ತಿಂಗಳಲ್ಲಿ ಉದ್ಯೋಗಕ್ಕೆಂದು ಕತರ್ ದೇಶಕ್ಕೆ ತೆರಳುತ್ತಾರೆ. ಓರ್ವ ಮಧ್ಯವಯಸ್ಕ ವ್ಯಕ್ತಿಯಾಗಿ ಮತ್ತು ಕಲ್ಲಡ್ಕದ ನಿವಾಸಿಯಾಗಿ ವೆಂಕಪ್ಪ ಪೂಜಾರಿಯವರಿಗೆ ಕಲ್ಲಡ್ಕ ಏನೆಂಬುದು ಚೆನ್ನಾಗಿಯೇ ಗೊತ್ತು. ಕಲ್ಲಡ್ಕ ಟೀ ಮತ್ತು ಪ್ರಭಾಕರ ಭಟ್ - ಎರಡರ ಬಗ್ಗೆಯೂ ಗೊತ್ತು. ಕರ್ನಾಟಕಕ್ಕೆ ಮಾತ್ರವಲ್ಲ, ಜಗತ್ತಿಗೇ KT ಒಂದು ವಿಶಿಷ್ಟ ಕೊಡುಗೆ. ಅದರಲ್ಲಿ ವಿಶೇಷ ಸ್ವಾದ ಇದೆ. ತಯಾರಿಯಲ್ಲಿ ಹೊಸತನವಿದೆ. ಅದು ಎಲ್ಲರನ್ನೂ ಸ್ವಾಗತಿಸುತ್ತದೆ. ಎಲ್ಲರನ್ನೂ ತೃಪ್ತಿಪಡಿಸುತ್ತದೆ. ಧರ್ಮ-ಜಾತಿ-ಕುಲ-ಗೋತ್ರ-ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲರೊಳಗೊಂದಾಗುವ ವಿಶಿಷ್ಟ ಗುಣವೊಂದು KTಯಲ್ಲಿದೆ. ಆದ್ದರಿಂದಲೇ, KTಯನ್ನು ಮಾರುವ ಕಲ್ಲಡ್ಕದ ನಿರ್ದಿಷ್ಟ ಹೊಟೇಲಿಗೆ ಮುಸ್ಲಿಮರೂ ಭೇಟಿ ಕೊಡುತ್ತಾರೆ. ಹಿಂದೂಗಳೂ ಭೇಟಿ ಕೊಡುತ್ತಾರೆ. ಮಹಿಳೆಯರೂ ಮಕ್ಕಳೂ ಪರಿಚಿತರೂ ಅಪರಿಚಿತರೂ.. ಎಲ್ಲರೂ KTಯನ್ನು ಪ್ರೀತಿಸುತ್ತಾರೆ. ಆದರೆ, ಇದಕ್ಕೆ ಯಾವ ರೀತಿಯಲ್ಲೂ ಹೊಂದದ ವ್ಯಕ್ತಿತ್ವ ಪ್ರಭಾಕರ ಭಟ್ಟರದ್ದು. ಅವರು ಮಾತಾಡಿದರೆ ಉಳಿದವರ ಮನಸ್ಸು ಮುದುಡುತ್ತದೆ. ಅವರ ಮಾತುಗಳು ಮುಸ್ಲಿಮರನ್ನು
   
ಇರಿಯುವಂತಿರುತ್ತದೆ. ಮಹಿಳೆಯರನ್ನು ಅವಮಾನಿಸುವಂತಿರುತ್ತದೆ. ಮಸೀದಿ, ಮದ್ರಸ, ಶರೀಅತ್, ಬುರ್ಖಾ, ಇಸ್ಲಾಮ್, ಮುಸ್ಲಿಮರ ತೆಗಳಿಕೆ ಇರುತ್ತದೆ. ಉದ್ದೇಶಪೂರ್ವಕ ಸುಳ್ಳುಗಳಿರುತ್ತದೆ. ಮುಸ್ಲಿಮ್ ಮತ್ತು ಇಸ್ಲಾಮನ್ನು ತೆಗಳುವುದನ್ನೇ ಅವರು ‘ಭಾಷಣ’ ಮಾಡಿಕೊಂಡಿರುತ್ತಾರೆ. ‘ಮುಸ್ಲಿಮರೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಡಿ’ ಎಂದು ನೇಮೋತ್ಸವ, ಜಾತ್ರೋತ್ಸವ, ಹಿಂದೂ ಸಮಾಜೋತ್ಸವಗಳಲ್ಲಿ ಅವರು ಬಹಿರಂಗವಾಗಿ ಕರೆ ಕೊಡುತ್ತಾರೆ. ಕಲ್ಲಡ್ಕದ ಹೃದಯ ಭಾಗದಲ್ಲಿದ್ದು ಸಮಾಜದ ಹೃದಯವನ್ನೇ ಒಡೆಯುವ ಕರೆಗಳು ಅಸಂಖ್ಯ ಬಾರಿ ಅವರಿಂದ ಹೊರಟಿವೆ. ಅವರ ಪ್ರತಿ ಮಾತೂ ಸಮಾಜವನ್ನು ಹಿಂದೂ ಮತ್ತು ಮುಸ್ಲಿಮ್ ಆಗಿ ಸದಾ ವಿಭಜಿಸುತ್ತಿರುತ್ತದೆ. ಕತರ್‍ಗೆ ಹೊರಟು ನಿಂತ ವೆಂಕಪ್ಪ ಪೂಜಾರಿಯವರು ಇದನ್ನು ಚೆನ್ನಾಗಿಯೇ ಬಲ್ಲರು. ಭಟ್ಟರ ಮಾತು ಮತ್ತು ಚಿತಾವಣೆಯಿಂದಾಗಿ ಕಲ್ಲಡ್ಕ ಎಷ್ಟು ಬಾರಿ ಉದ್ವಿಘ್ನಗೊಂಡಿದೆ ಹಾಗೂ ಏನೇನು ಅನಾಹುತಗಳಾಗಿವೆ ಎಂಬುದಕ್ಕೂ ಅವರು ಸಾಕ್ಷಿಯಾದವರು. KT ಪ್ರಸ್ತುತಪಡಿಸುವ ‘ಸರ್ವೇಜನಃ ಸುಖಿನೋ ಭವಂತು’ ಎಂಬ ಮನುಷ್ಯ ಪ್ರೇಮಿ ಮೌಲ್ಯವನ್ನು ‘ಮುಸ್ಲಿಮ್ ಜನಃ ಅಸುಖಿನೋ ಭವಂತು’ ಎಂದು ತಿರುಚುತ್ತಿರುವವರು ಪ್ರಭಾಕರ ಭಟ್ಟರು. ತನ್ನ ಊರು ಇಂಥ ವ್ಯಕ್ತಿಯೋರ್ವರಿಗೆ ಆಶ್ರಯ ನೀಡಿದೆ ಮತ್ತು ಅವರನ್ನು ಅನುಸರಿಸುವ ಒಂದು ವರ್ಗವೂ ಇಲ್ಲಿದೆ ಎಂಬುದು ಗೊತ್ತಿದ್ದುದರಿಂದಲೇ ವೆಂಕಪ್ಪ ಪೂಜಾರಿಯವರು ಕತರ್‍ನಲ್ಲಿ ಗೊಂದಲಕ್ಕೆ ಒಳಗಾದುದು. ಒಂದು ಕಡೆ, ತಾನು ಕೆಲಸ ನಿರ್ವಹಿಸುತ್ತಿದ್ದ ಕಂಪೆನಿ ಎರಡೇ ತಿಂಗಳಲ್ಲಿ ಬಾಗಿಲು ಮುಚ್ಚಿದೆ. ಸಂಬಳವನ್ನೂ ಪಾವತಿಸಿಲ್ಲ. ಇನ್ನೊಂದು ಕಡೆ, ತನ್ನ ಪಾಸ್‍ಪೋರ್ಟ್ ಮಾಲಕನ ಕೈಯಲ್ಲಿದೆ. ಆತ ಎಲ್ಲಿದ್ದಾನೋ ಗೊತ್ತಿಲ್ಲ. ಉಳಿದುಕೊಂಡಿದ್ದ ರೂಂನ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಕೈಯಲ್ಲಿ ಬಿಡಿಗಾಸೂ ಇಲ್ಲದೇ, ಹೊಟ್ಟೆ ತುಂಬಿಸುವುದಕ್ಕಾಗಿ ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ, ಗುಜರಿ ಅಂಗಡಿಗೆ ಮಾರಬೇಕಾದ ಮತ್ತು ರಾತ್ರಿಯನ್ನು ಮೋಂಬತ್ತಿ ಉರಿಸಿ ಕಳೆಯಬೇಕಾದ ದಯನೀಯ ಸ್ಥಿತಿಯಲ್ಲಿ ವೆಂಕಪ್ಪ ಪೂಜಾರಿಯವರನ್ನು ಅತ್ಯಂತ ಕಾಡಿರಬಹುದಾದ ವ್ಯಕ್ತಿತ್ವವೆಂದರೆ ಪ್ರಭಾಕರ ಭಟ್ಟರದ್ದು. ಯಾಕೆಂದರೆ, ಭಟ್ಟರು ಪ್ರತಿಪಾದಿಸುವ ಜೀವನ ಸೂತ್ರದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಮಾತ್ರವಲ್ಲ, ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಪಣತೊಟ್ಟ ಸಮುದಾಯವಾಗಿ ಅವರು ಮುಸ್ಲಿಮರನ್ನು ಚಿತ್ರಿಸುತ್ತಿದ್ದರು. ಆದ್ದರಿಂದ, ವೆಂಕಪ್ಪ ಪೂಜಾರಿಯವರಲ್ಲಿ ಮುಸ್ಲಿಮರ ಬಗ್ಗೆ ಒಂದಿಷ್ಟು ಆತಂಕ ಮನೆ ಮಾಡಿದ್ದಿದ್ದರೆ ಅದನ್ನು ಅಸಹಜ ಎನ್ನಬೇಕಾಗಿಲ್ಲ. ಅದೇ ವೇಳೆ, ತನ್ನೂರಿನ ಪ್ರಭಾಕರ ಭಟ್ಟರಿಂದ ತನಗೆ ನೆರವು ಲಭ್ಯವಾದೀತು ಎಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದರೂ ಅದೂ ಅಸಾಧುವಲ್ಲ. ಆದರೆ ಕತರ್‍ನಲ್ಲಿರುವ ಕಲ್ಲಡ್ಕದ ಆಸುಪಾಸಿನ ಕೆಲವು ಮುಸ್ಲಿಮ್ ಯುವಕರು ಒಂದು ದಿನ ಅವರನ್ನು ಹುಡುಕಿಕೊಂಡು ಬಂದರು. ಇಂಡಿಯನ್ ಸೋಶಿಯಲ್ ಫಾರಂ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡಿರುವ ಈ ಯುವಕರು ವೆಂಕಪ್ಪ ಪೂಜಾರಿಯವರನ್ನು ತಮ್ಮ ಮನೆಯ ಸದಸ್ಯನಂತೆ ತಮ್ಮ ಮನೆಯಲ್ಲೇ ಇರಿಸಿಕೊಂಡರು. ಸುಡಾನ್ ಮೂಲದ ಕಂಪೆನಿಯ ಮಾಲಕನನ್ನು ಸಂಪರ್ಕಿಸಿ ಪಾಸ್‍ಪೋರ್ಟ್ ಅನ್ನು ಮರಳಿಸಿದರು. ಭಾರತಕ್ಕೆ ಮರಳಲು ವೆಂಕಪ್ಪ ಪೂಜಾರಿಯವರಿಗಿದ್ದ ಕಾನೂನು ತೊಡಕನ್ನು ನಿವಾರಿಸಿದರು. ವಿಮಾನದ ಟಿಕೇಟನ್ನು ಖರೀದಿಸಿ ಊರಿಗೆ ಕಳುಹಿಸಿಕೊಟ್ಟರು. ವಿಶೇಷ ಏನೆಂದರೆ, ಈ ಇಡೀ ಪ್ರಕ್ರಿಯೆಯಲ್ಲಿ ಪ್ರಭಾಕರ ಭಟ್ಟರ ಪಾತ್ರ ಶೂನ್ಯಾತಿ ಶೂನ್ಯ. ಕನಿಷ್ಠ ವೆಂಕಪ್ಪ ಪೂಜಾರಿಯವರನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟ ಮುಸ್ಲಿಮ್ ಯುವಕರಿಗೆ ಅವರು ಕೃತಜ್ಞತೆಯನ್ನೂ ಸಲ್ಲಿಸಿಲ್ಲ. ವೆಂಕಪ್ಪರನ್ನು ಭೇಟಿಯಾದ ಬಗ್ಗೆ ವಿವರಗಳು ಈವರೆಗೂ ಲಭ್ಯವಾಗಿಲ್ಲ. ಆದ್ದರಿಂದಲೇ,
      ಸಾಧ್ಯವಾದರೆ ವೆಂಕಪ್ಪ ಪೂಜಾರಿಯವರು ಭಟ್ಟರನ್ನೊಮ್ಮೆ ಭೇಟಿಯಾಗಬೇಕು. ನಿಮ್ಮ ನೀತಿ-ಸಂಹಿತೆ ಎಷ್ಟು ಅಪಾಯಕಾರಿ ಮತ್ತು ಯಾವ ಕಾರಣಕ್ಕಾಗಿ ಅದು ಮನುಷ್ಯ ವಿರೋಧಿ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಬೇಕು. ನಿಜವಾಗಿ, ವೆಂಕಪ್ಪ ಪೂಜಾರಿ ‘ಧರ್ಮ’ದ ಸಂಕೇತ. ಪ್ರಭಾಕರ ಭಟ್ ಪ್ರತಿಪಾದಿಸುತ್ತಿರುವುದು ‘ಅಧರ್ಮ’ ಎಂಬುದನ್ನು ಸಾರುತ್ತಿರುವುದರ ಸಂಕೇತವೂ ಹೌದು. ಅಷ್ಟಕ್ಕೂ, ಹಿಂದೂ ಎಂಬ ಕಾರಣಕ್ಕಾಗಿ ವೆಂಕಪ್ಪ ಪೂಜಾರಿಯವರನ್ನು ಆ ಮುಸ್ಲಿಮ್ ಯುವಕರು ತಿರಸ್ಕರಿಸಿರುತ್ತಿದ್ದರೆ ಖಂಡಿತ ಅದು ಅಧರ್ಮ ಆಗುತ್ತಿತ್ತು. ಕ್ರೌರ್ಯ ಎನಿಸಿಕೊಳ್ಳುತ್ತಿತ್ತು. ಆದ್ದರಿಂದಲೇ ಮುಸ್ಲಿಮ್ ಯುವಕರು ಅಭಿನಂದನೆಗೆ ಅರ್ಹರು. ಪ್ರಭಾಕರ್ ಭಟ್ ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದರ ತಪ್ಪುಗಳನ್ನು ಆ ಮುಸ್ಲಿಮ್ ಯುವಕರು ಅತ್ಯಂತ ನಯವಾಗಿ ಸ್ಪಷ್ಟಪಡಿಸಿದ್ದಾರೆ.
      ಯಾವ ಊರಲ್ಲಿ ಮನುಷ್ಯದ್ವೇಷಿ ಸಿದ್ಧಾಂತವನ್ನು ಪ್ರತಿಪಾದಿಸಲಾಗುತ್ತಿದೆಯೋ ಅದೇ ಊರಲ್ಲಿ ಆ ಸಿದ್ಧಾಂತದ ಪರಾಜಯವನ್ನು ಬಿಂಬಿಸುವ ಪ್ರತ್ಯಕ್ಪ ಸಾಕ್ಷಿಯಾಗಿ ನಾವು ವೆಂಕಪ್ಪ ಪೂಜಾರಿಯವರನ್ನು ಪರಿಗಣಿಸಬೇಕು. ಅವರು ಮನುಷ್ಯಪ್ರೇಮಿ ಸಿದ್ಧಾಂತದ ರಾಯಭಾರಿ. ಮುಸ್ಲಿಮರು ಮತ್ತು ಹಿಂದೂಗಳು ವೈರಿಗಳಾಗಬಾರದು ಎಂಬುದನ್ನು ಸಾರುವ ಸಂಕೇತ. KTಯ ಗುಣವೂ ಅದುವೇ. ಅದರ ಸ್ವಾದಕ್ಕೆ ಧರ್ಮ ಭೇದವಿಲ್ಲ. ಅದು ಮನುಷ್ಯರೆಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಇದನ್ನು ಸಹಿಸದವರೇ ಪ್ರಭಾಕರ್ ಭಟ್ ಆಗುತ್ತಾರೆ. ಅವರನ್ನು ವೆಂಕಪ್ಪ ಪೂಜಾರಿಯಂಥ ಸಾಮಾನ್ಯರಲ್ಲಿ ಸಾಮಾನ್ಯರು ಮತ್ತೆ ಮತ್ತೆ ಸೋಲಿಸುತ್ತಲೂ ಇರುತ್ತಾರೆ. ಅಧರ್ಮ ಸೋಲಲೇಬೇಕಾದದ್ದು. ಅದು ಸದಾ ಸೋಲುತ್ತಲೇ ಇರಲಿ.


Tuesday, 7 February 2017

ಮೂತ್ರದಲ್ಲಿ ಚಿನ್ನ ಹುಡುಕುವವರ ಮಧ್ಯೆ...

      ಚಂದ್ರನ ಅಂಗಳದಲ್ಲಿ ಕೊನೆಯ ಬಾರಿ ಹೆಜ್ಜೆ ಊರಿದ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅಮೇರಿಕದ ಗಗನಯಾತ್ರಿ ಯುಗೆನೆ ಸೆರ್ನಾನ್ ಅವರ ನಿಧನದ ಎರಡು ದಿನಗಳ ಬಳಿಕ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಸಂಬಂಧಿಸಿ ಹೊಸ ಸಾಹಸವೊಂದಕ್ಕೆ ಕೈ ಹಾಕಿರುವ ಸುದ್ದಿ ಪ್ರಕಟವಾಗಿದೆ. ಈ ಸಾಹಸಕ್ಕೆ ವಿಜ್ಞಾನಿಗಳು ಹವಾಯಿ ದ್ವೀಪವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಸಮುದ್ರದಿಂದ 8,200 ಅಡಿ ಎತ್ತರದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಗೋಲಾಕೃತಿಯ ಗುಮ್ಮಟವನ್ನು ತಯಾರಿಸಿದ್ದಾರೆ. ಮುಂದಿನ 8 ತಿಂಗಳ ಕಾಲ 6 ಮಂದಿ ವಿಜ್ಞಾನಿಗಳು ಅದರೊಳಗೆ ಸಂಶೋಧನೆಯಲ್ಲಿ ನಿರತರಾಗುತ್ತಾರೆ. ಇದರ ಸಂಪೂರ್ಣ ವೆಚ್ಚವನ್ನು ಅಮೇರಿಕದ ವ್ಯೋಮ ಯಾನ ಸಂಸ್ಥೆ ‘ನಾಸಾ’ ಭರಿಸಲಿದೆ. ಮಂಗಳಗ್ರಹ ಯಾತ್ರೆಯ ಸುತ್ತ ಸಂಶೋಧನೆಯಲ್ಲಿ ತೊಡಗುವುದು ಇದರ ಉದ್ದೇಶ. ಮುಂದಿನ 8 ತಿಂಗಳ ಕಾಲ ಈ 6 ಮಂದಿ ವಿಜ್ಞಾನಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿರುತ್ತಾರೆ. ತಾವು ವಾಸಿಸುವ ಗುಮ್ಮಟದೊಳಗೆ ಮಂಗಳ ಗ್ರಹದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿಕೊಂಡು ನಡೆಸುವ ಅಧ್ಯಯನ ಇದು. ಮಾನವ ಸಹಿತ ಮುಂದಿನ ಮಂಗಳ ಯಾನಕ್ಕೆ ನೆರವಾಗುವ ಗುರಿಯನ್ನು ವಿಜ್ಞಾನ ವಲಯ ಈ ಮೂಲಕ ಇಟ್ಟುಕೊಂಡಿದೆ.
        ನಿಜವಾಗಿ, ವರ್ಷದ 365 ದಿನಗಳಲ್ಲಿ ಅತ್ಯಂತ ಕಡಿಮೆ ಸುದ್ದಿಯಲ್ಲಿರುವ ಕ್ಷೇತ್ರವೆಂದರೆ ಅದು ವಿಜ್ಞಾನ ಕ್ಷೇತ್ರ. ರಾಜಕಾರಣಿಗಳು, ಸ್ವಘೋಷಿತ ಧರ್ಮರಕ್ಷಕರು, ಮಾನವ ದ್ವೇಷಿಗಳು.. ಇತ್ಯಾದಿಗಳು ಈ ಕ್ಷೇತ್ರದಲ್ಲಿ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಥಟ್ಟನೆ ಹೇಳಿ ಬಿಡಬಹುದಾದರೂ ಇದುವೇ ಅಂತಿಮ ಅಲ್ಲ. ನಾವು ಇವತ್ತು ಅತ್ಯಂತ ಹೆಚ್ಚು ಅವಲಂಬಿತವಾಗಿರುವ ಮೊಬೈಲ್‍ನಿಂದ ಹಿಡಿದು ಟಿ.ವಿ.ಯ ವರೆಗೆ, ಕಂಪ್ಯೂಟರ್-ಇಂಟರ್‍ನೆಟ್‍ನಿಂದ ತೊಡಗಿ ಔಷಧಗಳ ವರೆಗೆ.. ಇವು ಯಾವುವೂ ರಾಜಕಾರಣಿಗಳ ನೇರ ಕೊಡುಗೆ ಅಲ್ಲ. ‘ಗೋವಿನ ಮೂತ್ರದಲ್ಲಿ ಚಿನ್ನದ ಅಂಶ ಇದೆ’ ಎಂದು ಓರ್ವ ರಾಜಕಾರಣಿ ಹೇಳಬಹುದೇ ಹೊರತು ಓರ್ವ ವಿಜ್ಞಾನಿ ಥಟ್ಟನೆ ಹೇಳಿಬಿಡಲಾರ. ಯಾಕೆ ಹೇಳಲಾರ ಅಂದರೆ, ಆತನ ಎದುರು ತಕ್ಷಣದ ಲಾಭ ಎಂಬುದಿಲ್ಲ. ಆತನಿಗೆ ಓಟು ಬೇಕಾಗಿಲ್ಲ. ಚಪ್ಪಾಳೆ ಗಿಟ್ಟಿಸಬಹುದಾದಂತಹ ಮಾತುಗಳು ಬೇಕಾಗಿಲ್ಲ. ಒಂದು ವಸ್ತುವಿನ ಸಂಶೋಧನೆಗಾಗಿ ಓರ್ವ ವಿಜ್ಞಾನಿ ವರ್ಷಗಳನ್ನು ಸವೆಸಿರುತ್ತಾನೆ. ಅಧ್ಯಯನಕ್ಕಾಗಿ ತನ್ನನ್ನೇ ಅರ್ಪಿಸಿರುತ್ತಾನೆ. ದುಡಿಮೆ, ದುಡಿಮೆ ಮತ್ತು ದುಡಿಮೆ.. ಇದು ವಿಜ್ಞಾನ ಕ್ಷೇತ್ರದ ಅತಿ ಮಹತ್ವಪೂರ್ಣ ಧ್ಯೇಯವಾಕ್ಯ. ಅದರ ಒಂದು ಸಣ್ಣ ಉದಾಹರಣೆಯನ್ನಷ್ಟೇ ನಾವು ಹವಾಯಿ ದ್ವೀಪದ ಸಂಶೋಧನಾ ಪ್ರಕ್ರಿಯೆಯಲ್ಲಿ ಕಾಣುತ್ತಿರುವುದು. ರಾತ್ರಿ ಬೆಳಗಾಗುವುದರೊಳಗೆ ಸ್ಟೀವ್ ಜಾಬ್ಸ್ ಗೆ ಐಪೋನನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗಿಲ್ಲ. ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಮಂಡಿಸುವುದರ ಹಿಂದೆ ನ್ಯೂಟನ್ ಅನೇಕ ನಿದ್ದೆಗಳನ್ನು ಕಳೆದಿರಬಹುದು. ಎಷ್ಟೋ ಏಕಾಂತದ ದಿನಗಳನ್ನು ಕಂಡಿರಬಹುದು. ಒಂದು ಮಾವು ತಲೆಗೆ ಬಿದ್ದ ತಕ್ಷಣ ನ್ಯೂಟನ್ ವಿಜ್ಞಾನಿಯಾಗುವುದಕ್ಕೆ ಸಾಧ್ಯವಿಲ್ಲ. ಆತ ಒಂದು ಗುಂಗಿನಲ್ಲಿದ್ದ. ಆ ಗುಂಗು ವರ್ಷಗಳ ವರೆಗೂ ಮುಂದುವರಿದಿರಬಹುದು. ಆ ದಿನಗಳಲ್ಲೆಲ್ಲ ಮಾವು ಮೇಲಿನಿಂದ ಕೆಳಕ್ಕೆ ಬೀಳುತ್ತಲೇ ಇತ್ತು. ಆದರೆ, ಒಂದು ಸಂದರ್ಭದಲ್ಲಿ ಆತನ ಹುಡುಕಾಟದ ಮನಸ್ಸನ್ನು ಅದು ತಾಗಿತು. ಒಂದು ವೇಳೆ, ನ್ಯೂಟನ್‍ನಲ್ಲಿ ರಾಜಕಾರಣಿಯ ಮನಸ್ಸಿರುತ್ತಿದ್ದರೆ ಏನಾಗುತ್ತಿತ್ತು? ಪ್ರತಿದಿನ ಆತ ಒಂದೊಂದು ಹೇಳಿಕೆಯನ್ನು ಕೊಡುವ ಸಕಲ ಸಾಧ್ಯತೆಯೂ ಇತ್ತು. ತಾನೊಂದು ಸಂಶೋಧನೆಯಲ್ಲಿದ್ದೇನೆ ಎಂದು ಒಂದು ದಿನ ಹೇಳುತ್ತಿದ್ದ. ಮರುದಿನ ಮತ್ತೊಂದು ಹೇಳಿಕೆಯನ್ನು ನೀಡುತ್ತಿದ್ದ. ಕೊನೆಗೆ ಸಂಶೋಧನೆ ಬಿಟ್ಟು ಜನಪ್ರಿಯ ಸುದ್ದಿ ಸೃಷ್ಟಿಸುವುದನ್ನೇ ಪೂರ್ಣಕಾಲಿಕ ಸಂಶೋಧನೆಯನ್ನಾಗಿ ಮಾಡಿಕೊಳ್ಳುತ್ತಿದ್ದ.
ರಾಜಕಾರಣಿಗಳು ಯಾವ ಪ್ರಾಣಿಯ ಮೂತ್ರದಲ್ಲಿ ಯಾವ್ಯಾವ ದಿವ್ಯೌಷಧವನ್ನು ಬೇಕಾದರೂ ಪತ್ತೆ ಹಚ್ಚಬಹುದು. ಆದರೆ ವಿಜ್ಡಾನ ಕ್ಷೇತ್ರದಿಂದ ಈ ಪವಾಡ ಸಾಧ್ಯವಿಲ್ಲ. ಅಲ್ಲಿ ದುಡಿಮೆ ಇದೆ. ಪ್ರಾಮಾಣಿಕ ಶ್ರಮ ಇದೆ. ಸದ್ಯದ ತುರ್ತು ಅಗತ್ಯ ಏನೆಂದರೆ, ಈ ಕ್ಷೇತ್ರವನ್ನು ಜನಪ್ರಿಯಗೊಳಿಸುವುದು. ಮಾನವ ದ್ವೇಷಿಗಳು, ಸ್ವಘೋಷಿತ ಧರ್ಮರಕ್ಷಕರ ಹಿಂಬಾಲಕರಾಗದಂತೆ ಆಧುನಿಕ ತಲೆಮಾರನ್ನು ತಡೆಯುವುದು. ಒಂದು ಕಡೆ ಅತ್ಯಂತ ಸುದ್ದಿಯಲ್ಲಿರುವ ರಾಜಕೀಯದಂಥ ಕ್ಷೇತ್ರವಿದ್ದರೆ, ಇನ್ನೊಂದು ಕಡೆ, ಸಂಪೂರ್ಣ ಕತ್ತಲು ಕವಿದಂತೆ ಕಾಣಿಸುವ ಸುದ್ದಿಯೇ ಇರದ ಕ್ಷೇತ್ರವೊಂದಿದೆ. ಆಧುನಿಕ ತಲೆಮಾರಿನ ಮಟ್ಟಿಗೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವಾಗ ಅವರು ಸುದ್ದಿಯಲ್ಲಿರುವುದರತ್ತ ಆಕರ್ಷಿತರಾಗುವುದು ಸಹಜ. ಆದ್ದರಿಂದ ಸುದ್ದಿಯಲ್ಲಿರದ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ತುರ್ತಾಗಿ ಆಗಬೇಕಾಗಿದೆ.


ಯುಗೆನೆ ಸೆರ್ನಾನ್
          ಜಗತ್ತು ಹೊಸ ಹೊಸ ಸೌಲಭ್ಯಗಳಿಂದ ಶ್ರೀಮಂತಗೊಳ್ಳುತ್ತಿರುವುದರ ಜೊತೆಗೇ ಅದರ ಅಡ್ಡ ಪರಿಣಾಮಗಳ ಆಘಾತದಿಂದ ಸಂಕಟ ಪಡುತ್ತಲೂ ಇದೆ. ಹೊಸ ಹೊಸ ಕಾಯಿಲೆಗಳು ಪರಿಚಿತವಾಗುತ್ತಿವೆ. ಮಣ್ಣು, ನೀರು, ವಾಯು ಮಲಿನವಾಗುತ್ತಿದೆ. ಉಸಿರಾಡುವ ಗಾಳಿಯಿಂದ ಹಿಡಿದು ತಿನ್ನುವ ಆಹಾರದ ವರೆಗೆ ಎಲ್ಲವೂ ವರ್ಜಿಸಲೇ ಬೇಕಾದ ಪಟ್ಟಿಯಲ್ಲಿ ಸ್ಥಾನ ಪಡಕೊಳ್ಳುತ್ತಿವೆ. ಅದರ ಜೊತೆಗೇ ಯಾವುದನ್ನೂ ವರ್ಜಿಸಲೇಬಾರದಂತಹ ಅನಿವಾರ್ಯತೆಯೂ ಎಲ್ಲರ ಎದುರಿದೆ. ಇದರ ಮಧ್ಯೆಯೇ ರಾಜಕಾರಣಿ ಎಂಬ ಇನ್‍ಸ್ಟಂಟ್ ವಿಜ್ಞಾನಿ, ವಿಜ್ಞಾನದ ಹೆಸರಲ್ಲಿ ದಿನಕ್ಕೊಂದು ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿರುತ್ತಾರೆ. ಅವರಿಗೆ ತಮ್ಮ ಗುರಿಯತ್ತ ಸಾಗುವುದಕ್ಕೆ ಅಂಥ ಸುಳ್ಳುಗಳ ಅಗತ್ಯವಿರುತ್ತದೆ. ಇವೆಲ್ಲವುಗಳ ನಡುವೆಯೇ ಹೊಸ ಪೀಳಿಗೆಯಲ್ಲಿ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಖ್ಯವಾಗಿ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಂಶೋಧನಾ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನ ಆಗಬೇಕು. ಪ್ರತಿಯೊಂದರಲ್ಲೂ ಕುತೂಹಲವನ್ನು ಹುಟ್ಟಿಸಬೇಕು. ಹೊಸತಿನ ಬಗ್ಗೆ ಆಲೋಚಿಸುವ ಮತ್ತು ಕಂಡು ಹುಡುಕುವ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ನಮಗೆ ಸದ್ಯ ಕುತೂಹಲಭರಿತ ಮಕ್ಕಳ ಅಗತ್ಯ ಇದೆ. ಶ್ರಮ ವಹಿಸಿ ದುಡಿಯುವ ಪೀಳಿಗೆಯ ಜರೂರತ್ತು ಇದೆ. ಒಂದು ದೇಶ ಬರೇ ರಾಜಕಾರಣಿಗಳಿಂದ ನಡೆಯಲಾರದು. ಒಂದು ವೇಳೆ ನಡೆದರೂ ಆ ನಡೆ ಪ್ರಚಲಿತ ಜಗತ್ತಿಗೆ ಹೋಲಿಸಿದರೆ ನೂರಾರು ವರ್ಷಗಳಷ್ಟು ಪುರಾತನ ಕಾಲದ್ದಾಗಿರಬಹುದು. ಜಗತ್ತನ್ನು ಆಧುನಿಕಗೊಳಿಸುವವರು ವಿಜ್ಞಾನಿಗಳು. ವಿಜ್ಞಾನಿಗಳೆಂದರೆ, ಹೊಸತನ್ನು ಕೊಡಲೇ ಬೇಕಾದವರು ಎಂದಲ್ಲ. ಒಂದು ಗುರಿಯನ್ನು ನಿಗದಿಪಡಿಸಿ ಅದರ ಸಾಕಾರಕ್ಕಾಗಿ ಶ್ರಮ ವಹಿಸಿ ದುಡಿಯುವವರು ಎಂದರ್ಥ. ತಮ್ಮ ಶ್ರಮದ ಮೇಲೆ ಅಪಾರ ಭರವಸೆಯನ್ನು ಇಟ್ಟವರು. ಈ ದೇಶಕ್ಕೆ ಸದ್ಯ ಈ ವರ್ಗದ ಅಗತ್ಯ ಇದೆ. ಆದ್ದರಿಂದಲೇ, ವಿಜ್ಞಾನ ಕ್ಷೇತ್ರವನ್ನು ಈಗಾಗಲೇ ಜನಪ್ರಿಯವಾಗಿರುವ ಕ್ಷೇತ್ರಕ್ಕೆ ಪರ್ಯಾಯವಾಗಿ ಬೆಳೆಸಬೇಕಾಗಿದೆ. ಹೊಸ ತಲೆಮಾರಿನ ಆದ್ಯತೆಯ ಪಟ್ಟಿಯಲ್ಲಿ ವಿಜ್ಞಾನ ಪ್ರಥಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಹವಾಯಿ ದ್ವೀಪದಲ್ಲಿ ಸಮುದ್ರ ಮಟ್ಟದಿಂದ 8,200 ಅಡಿ ಎತ್ತರದಲ್ಲಿ ಎಲ್ಲರಿಂದಲೂ ಎಲ್ಲದರಿಂದಲೂ ಕಳಚಿಕೊಂಡು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ನಿಜಕ್ಕೂ ಸುದ್ದಿಯಲ್ಲಿರುವುದಕ್ಕೆ ಅರ್ಹರಾದವರು. ಅವರ ಬದ್ಧತೆ, ತ್ಯಾಗ ಖಂಡಿತ ಅಭಿನಂದನಾರ್ಹ.

ಒಂದು ತಪರಾಕಿಯ ಸುತ್ತ..

      ಕಳೆದವಾರ ಮೂರು ವೀಡಿಯೋಗಳು ಬಿಡುಗಡೆಗೊಂಡುವು. ಚಿತ್ರೀಕರಣ, ಭಾಷಾ ಸ್ಪಷ್ಟತೆ ಮತ್ತು ಕ್ಯಾಮರಾ ಬಳಕೆಗೆ ಸಂಬಂಧಿಸಿ ಹೇಳುವುದಾದರೆ, ಇವು ಮೂರೂ ಕಳಪೆ ವೀಡಿಯೋಗಳೇ. ಪಾತ್ರಧಾರಿಗಳೂ ನಟರಾಗಿರಲಿಲ್ಲ. ತೇಜ್ ಬಹಾದ್ದೂರ್ ಯಾದವ್, ಯಜ್ಞ ಪ್ರತಾಪ್ ಸಿಂಗ್ ಮತ್ತು ನಾೈಕ್ ರಾಂ ಭಗತ್ ಎಂಬ ಮೂವರೂ ವೃತ್ತಿಪರ ನಟರೂ ಅಲ್ಲ, ಪರಿಣತ ವೀಡಿಯೋ ನಿರ್ಮಾಪಕರೂ ಅಲ್ಲ ಅಥವಾ ಪ್ರಸಿದ್ಧ ವ್ಯಕ್ತಿಗಳೂ ಅಲ್ಲ. ಆದರೆ ಈ ವೀಡಿಯೋಗಳು ಎಷ್ಟು ಜನಪ್ರಿಯ ಆಯಿತೆಂದರೆ, ತಾಂತ್ರಿಕವಾಗಿ ಅತ್ಯಂತ ಪರಿಣತ ತಂಡದವರು ನಿರ್ಮಿಸಿ ಬಿಡುಗಡೆಗೊಳಿಸುವ ಸಿನಿಮಾ ಟ್ರೇಲರ್‍ಗಿಂತಲೂ ಹೆಚ್ಚು. ಇದಕ್ಕಿರುವ ಏಕೈಕ ಕಾರಣ ಏನೆಂದರೆ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಕೆಲವು ಪರಮ ಸುಳ್ಳುಗಳು. ಈ ಸುಳ್ಳುಗಳನ್ನು ಚಾಲ್ತಿಗೆ ತಂದವರು ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರ. ಸೇನೆಯ ಬಗ್ಗೆ ಮಾತಾಡುವಾಗಲೆಲ್ಲ ಬಿಜೆಪಿ ಭಾವುಕವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗದ್ಗದಿತರಾಗುತ್ತಾರೆ. ‘ಗಡಿಯಲ್ಲಿ ಯೋಧರು ಎಚ್ಚರವಾಗಿರುವುದರಿಂದಲೇ ನಾವಿಲ್ಲಿ ಸುಖವಾಗಿ ನಿದ್ರಿಸುತ್ತೇವೆ..’ ಎಂಬ ಡಯಲಾಗು ಬಿಜೆಪಿಯ ಉನ್ನತ ನಾಯಕತ್ವದಿಂದ ಹಿಡಿದು ತಳಮಟ್ಟದ ಕಾರ್ಯಕರ್ತರ ವರೆಗೆ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ‘ಬಿಜೆಪಿಯು ಯೋಧರ ಪರ ಮತ್ತು ಕಾಂಗ್ರೆಸ್ ಯೋಧರ ವಿರೋಧಿ’ ಎಂಬ ಸಂದೇಶ ರವಾನೆಗೂ ಬಿಜೆಪಿಯ ವರ್ತನೆಗಳು ಸಾಕಷ್ಟು ನೆರವಾಗಿವೆ. ‘ನಮ್ಮ ಯೋಧರ ಒಂದು ತಲೆಯು ಪಾಕಿಸ್ತಾನದ 10 ಯೋಧರ ತಲೆಗೆ ಸಮ’ ಎಂಬ ರೀತಿಯಲ್ಲಿ ಆಡಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ. ಆದ್ದರಿಂದಲೇ, ಮೇಲಿನ ಮೂರು ವೀಡಿಯೋಗಳು ತಾಂತ್ರಿವಾಗಿ ಕಳಪೆ ಗುಣಮಟ್ಟದ ಹೊರತಾಗಿಯೂ ವೈರಲ್ ಆದುವು. ‘ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯುವ ಯೋಧರ ಅನ್ನದ ಬಟ್ಟಲಿನಿಂದ ಆಹಾರವನ್ನೂ ಕಸಿಯಲಾಗುತ್ತಿದೆ..’ ಅನ್ನುವುದನ್ನು ದೇಶದ ಜನತೆಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದಾರೆ. ರಕ್ಷಣಾ ಸಚಿವ ಪಾರಿಕ್ಕರ್ ಅವರೂ ಕಾಂಗ್ರೆಸಿನವರಲ್ಲ. ಯೋಧರ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸುವ ಪಕ್ಷ ಅಧಿಕಾರದಲ್ಲಿದ್ದೂ ಯೋಧರಿಗೇಕೆ ಈ ಸ್ಥಿತಿ ಬಂದೊದಗಿದೆ? ನಮ್ಮ ಯೋಧರು ಸರ್ಜಿಕಲ್ ದಾಳಿ ನಡೆಸಿದ್ದು ಈ ಕರಕಲು ಪರೋಟ, ಕಳಪೆ ದಾಲ್ ಅನ್ನು ಸೇವಿಸಿಯೇ? ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವವರಿಗೆ ಕನಿಷ್ಠ ಉತ್ತಮ ಆಹಾರವನ್ನು ಒದಗಿಸುವ ಹೊಣೆಗಾರಿಕೆಯನ್ನೂ ಈ ಸರಕಾರ ಪ್ರದರ್ಶಿಸುವುದಿಲ್ಲವೆಂದರೆ, ಅದರ ಭಾವುಕತನ, ‘ಹತ್ತು ತಲೆಯ’ ಡಯಲಾಗ್‍ಗಳಿಗೆಲ್ಲ ಏನು ನೆಲೆ-ಬೆಲೆ ಇದೆ ಎಂದು ವೀಕ್ಷಕರು ಅಚ್ಚರಿಪಟ್ಟರು.
      ವಿಷಾದ ಏನೆಂದರೆ, ಯೋಧರ ಬಗ್ಗೆ ಮತ್ತು ಗಡಿಯಲ್ಲಿ ಅವರು ಚಳಿ-ಮಳೆ-ಬಿಸಿಲನ್ನೂ ಲೆಕ್ಕಿಸದೇ ದೇಶ ಕಾಯುವುದರ ಬಗ್ಗೆ ಅದ್ಭುತ ಭಾಷಣಗಳನ್ನು ಬಿಗಿಯುವ ಬಿಜೆಪಿ ಮತ್ತು ಅದರ ಪರಿವಾರದ ನಾಯಕರಲ್ಲಿ ಒಬ್ಬರೂ ಈ ವೀಡಿಯೋಗಳ ಬಗ್ಗೆ ಮಾತಾಡುತ್ತಿಲ್ಲ. ಅದರ ಬದಲು ಈ ವೀಡಿಯೋಗಳ ಗಂಭೀರತೆಯನ್ನು ತಗ್ಗಿಸುವ ಶ್ರಮಗಳನ್ನು ವಿವಿಧ ಮೂಲಗಳ ಮೂಲಕ ಅವರು ನಿರ್ವಹಿಸುತ್ತಿದ್ದಾರೆ. ಪ್ರಥಮವಾಗಿ ವೀಡಿಯೋವನ್ನು ಬಿಡುಗಡೆಗೊಳಿಸಿದ ಬಿಎಸ್‍ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್‍ರನ್ನು ಮದ್ಯವ್ಯಸನಿ, ಅವಿಧೇಯ ಎಂದೆಲ್ಲಾ ಸೇನೆಯ ವತಿಯಿಂದ ಹೇಳಿಸಿರುವುದು ಇದಕ್ಕೆ ಉತ್ತಮ ಪುರಾವೆ. ಈ ಮೊದಲು ‘ಏಕಶ್ರೇಣಿ, ಏಕ ಪಿಂಚಣಿ’ಗೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನ ಬಗ್ಗೆಯೂ ಇಂಥದ್ದೇ ತಂತ್ರವನ್ನು ಇವೇ ಮಂದಿ ಪ್ರದರ್ಶಿಸಿದ್ದರು. ಆ ಯೋಧರನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದರು. ಒಂದು ರೀತಿಯಲ್ಲಿ, ಇದು ಆ ಯೋಧರಿಗೆ ಮಾತ್ರ ಅಲ್ಲ, ನಮ್ಮ ಸೇನೆಗೇ ಮಾಡಿದ ಅವಮಾನವಾಗಿತ್ತು. ನಿಜವಾಗಿ, ‘ಏಕಶ್ರೇಣಿ, ಏಕ ಪಿಂಚಣಿ’ ಎಂಬುದು ಯಾವುದಾದರೂ ನಿರ್ದಿಷ್ಟ ಧರ್ಮದ, ಜಾತಿಯ, ಪಂಗಡದ ಬೇಡಿಕೆಯೇನೂ ಆಗಿರಲಿಲ್ಲ. ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯ್ದ ‘ಯೋಧರು’ ಎಂಬ ವಿಶಾಲ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ನಿವೃತ್ತಿಯ ಬಳಿಕ ಅವರು ಸುಖವಾಗಿ ನಿದ್ದೆ ಮಾಡುವಂತೆ ಮತ್ತು ನೆಮ್ಮದಿಯಿಂದ ಬಾಳುವಂತೆ ಮಾಡುವ ಉದ್ದೇಶದ ಯೋಜನೆಯಾಗಿತ್ತು. ಆದರೆ ಬಿಜೆಪಿ ಈ ಬೇಡಿಕೆಯನ್ನು ಎಷ್ಟಂಶ ನಿರ್ಲಕ್ಷಿಸಿತೆಂದರೆ, ನಿವೃತ್ತ ಯೋಧ ಕೊನೆಗೆ ನಿರಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು. ಅಂದು ಆ ಯೋಧನ ಸಾವಿಗೆ ಬಿಜೆಪಿ ಒದಗಿಸಿದ ಕಾರಣವನ್ನೇ ಈಗ ಸೇನಾ ಮುಖ್ಯಸ್ಥರ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್‍ರ ಮುಖಾಂತರ ಯೋಧರಿಗೆ ಬೆದರಿಕೆಯನ್ನೂ ನೀಡಲಾಗಿದೆ.
      ಒಂದು ವೇಳೆ, ಸೇನೆಯಲ್ಲಿರುವ ಪ್ರತಿ ಯೋಧರ ಮನೆಗೆ ಭೇಟಿ ಕೊಡುವ ಯೋಜನೆಯನ್ನೇನೇದರೂ ನಾವು ಕೈಗೆತ್ತಿಕೊಂಡರೆ, ಹಳ್ಳಿ-ಗ್ರಾಮ-ತಾಲೂಕುಗಳ ಮೂಲೆಯಲ್ಲಿರುವ ಮನೆಯಂತಹ ಸಾಮಾನ್ಯ ಸೂರುಗಳೇ ನಮ್ಮನ್ನು ಸ್ವಾಗತಿಸಿಯಾವು. ರಾಜಕಾರಣಿಗಳು, ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳ ಮಕ್ಕಳು ಸೇನೆಯಲ್ಲಿ ಕಾಣಿಸುವುದು ತೀರಾ ಅಪರೂಪ. ಶ್ರೀಮಂತರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದು ಬಹಳ ಬಹಳ ಕಡಿಮೆ. ಆದ್ದರಿಂದಲೇ, ಭಾರತೀಯ ಸೇನೆ ಎಂಬುದು ಬಹುಸಂಖ್ಯಾತ ಭಾರತೀಯರ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುವುದು. ಅವರಿಗೆ ಬಡತನದ ಅರಿವಿದೆ. ಹಸಿವಿದ್ದು ಗೊತ್ತಿದೆ. ಹಳಸಲು ರೊಟ್ಟಿ, ದಾಲ್‍ಗಳ ಪರಿಚಯವೂ ಇದೆ. ಈ ಕಳಪೆಗಳನ್ನು ಸೇವಿಸಿಯೇ ಈ ಯೋಧರು ಅಂಬಾನಿ, ಅದಾನಿಗಳಿರುವ, ಶ್ರೀಮಂತ ರಾಜಕಾರಣಿಗಳಿರುವ; ಭ್ರಷ್ಟರು, ಕ್ರಿಮಿನಲ್‍ಗಳು, ಮನುಷ್ಯ ದ್ರೋಹಿಗಳೂ ಇರುವ ಭಾರತವೆಂಬ ವಿಶಾಲ ರಾಷ್ಟ್ರವನ್ನು ನಿದ್ದೆಗೆಟ್ಟು ಕಾಯುತ್ತಿದ್ದಾರೆ. ಈ ಸಹನೆಯನ್ನು ಶ್ರೀಮಂತರಿಂದ ನಿರೀಕ್ಷಿಸುವುದು ಬಹಳ ಕಷ್ಟ. ಚಿನ್ನದ ತಟ್ಟೆಯಲ್ಲಿ ಊಟ ಮಾಡಿದ ವ್ಯಕ್ತಿ, ಕರಕಲು ಪರೋಟವನ್ನು ಮತ್ತು ಕಳಪೆ ದಾಲ್ ಅನ್ನು ಹೊಟ್ಟೆಗಿಳಿಸುವುದಕ್ಕೆ ಒಪ್ಪಿಕೊಳ್ಳುತ್ತಾನೆಂದು ಹೇಳಲಾಗದು. ಬಹುಶಃ, ಭಾರತೀಯ ಸೇನೆಯಲ್ಲಿ ಶ್ರೀಮಂತ ಭಾರತೀಯರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಾಗಿರುವುದಕ್ಕೆ ಅದರಲ್ಲಿರುವ ಅಪಾಯ ಮತ್ತು ಸೌಲಭ್ಯಗಳ ಕೊರತೆಯೂ ಕಾರಣವಾಗಿರಬಹುದು. ಸಾಯುವುದಕ್ಕೆ ಸಿದ್ಧಗೊಳಿಸುವ ಮತ್ತು ಸಾವನ್ನು ವಿಜೃಂಭಿಸುವುದರ ಹೊರತಾಗಿ ಸೌಲಭ್ಯವಿಲ್ಲದ ಕ್ಷೇತ್ರವಾಗಿ ಅದು ಮಾರ್ಪಟ್ಟಿರುವುದೂ ಇನ್ನೊಂದು ಕಾರಣವಾಗಿರಬಹುದು. ಒಂದು ವೇಳೆ, ಶ್ರೀಮಂತರಿಗೆ ಸೇನೆ ಸೇರುವುದನ್ನು ಕಡ್ಡಾಯಗೊಳಿಸಿರುತ್ತಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತಿತ್ತು? ಕರಕಲು ಪರೋಟಗಳು ಯಾವ ಮಟ್ಟದ ಸುದ್ದಿಗೆ ಒಳಗಾಗುತ್ತಿತ್ತು ಅಥವಾ ಅಂತಹ ಪರೋಟಗಳು ಅಲ್ಲಿ ಲಭ್ಯವಿರುತ್ತಿತ್ತೇ? ಅಲ್ಲಿನ ಸೌಲಭ್ಯಗಳು ಎಷ್ಟು ಉನ್ನತ ಮಟ್ಟದವು ಆಗಿರುತ್ತಿತ್ತು? ಏಕಶ್ರೇಣಿ ಏಕ ಪಿಂಚಣಿಗಾಗಿ ನಿರಶನ ಕೈಗೊಳ್ಳಬೇಕಾದ ಅಗತ್ಯ ಬರುತ್ತಿತ್ತೇ?
      ಏನೇ ಆಗಲಿ, ಸದ್ಯ ಬಿಡುಗಡೆಗೊಂಡ ಮೂರು ವೀಡಿಯೋಗಳಲ್ಲಿ ಯೋಧರ ಸಂಕಟಗಳಷ್ಟೇ ಇರುವುದಲ್ಲ, ಯೋಧರಿಗಾಗಿ ಮೊಸಳೆ ಕಣ್ಣೀರು ಸುರಿಸಿದವರಿಗೆ ತಪರಾಕಿಯೂ ಇದೆ. ಯೋಧರ ಕತೆ ಹೇಳುತ್ತಾ ಭಾವುಕವಾಗುವ ಬಿಜೆಪಿ, ಅದರಾಚೆಗೆ ಅವರಿಗಾಗಿ ಏನನ್ನೂ ಮಾಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕನಿಷ್ಠ ಯೋಧರ ಸ್ಥಿತಿ-ಗತಿಯ ಬಗ್ಗೆ ಪರಿಶೀಲನೆ ನಡೆಸುವ ಪ್ರಯತ್ನವನ್ನೂ ಅದು ನಡೆಸಿಲ್ಲ. ಆದ್ದರಿಂದಲೇ, ಯೋಧರಿಗೆ ನಿರಾಶೆಯಾಗಿದೆ. ತಮ್ಮನ್ನು ಈ ಸರಕಾರ ದುರುಪಯೋಗಪಡಿಸುತ್ತಿದೆ ಎಂಬುದು ಅರಿವಾಗಿದೆ. ಆ ಕಾರಣದಿಂದಲೇ ವೀಡಿಯೋಗಳು ಬಿಡುಗಡೆಗೊಂಡಿವೆ. ಸದ್ಯ ಕೇಂದ್ರ ಸರಕಾರವು ಆ ಯೋಧರ ಬಾಯಿ ಮುಚ್ಚಿಸುವ ಬದಲು ಸ್ವತಃ ಆತ್ಮಾವಲೋಕನ ನಡೆಸಲಿ. ನಿz್ದÉಗೆಟ್ಟು ದೇಶ ಕಾಯುವವರಿಗೆ ನೆಮ್ಮದಿಯನ್ನು ಒದಗಿಸಲಿ.