Monday, 28 July 2025

ಗಾಝಾ ನರಮೇಧಕ್ಕೆ ಪ್ರತಿಭಟನೆ ವ್ಯಕ್ತಪಡಿಸಬಾರದೇ?



ಸನ್ಮಾರ್ಗ ಸಂಪಾದಕೀಯ 

ಜುಲೈ 25ರಂದು ಬಾಂಬೆ ಹೈಕೋರ್ಟು ವ್ಯಕ್ತಪಡಿಸಿದ ಪರಾಮರ್ಶೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಪರಾಮರ್ಶೆಗೆ ಕಾರಣವಾದ ಘಟನೆ ಹೀಗಿದೆ-

ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನೆಯ ವಿರುದ್ಧ ಪ್ರತಿಭಟನೆ ನಡೆಸಲು ಆಲ್ ಇಂಡಿಯಾ ಪೀಸ್ ಆಂಡ್ ಸಾಲಿಡಾರಿಟಿ ಫೌಂಡೇಶನ್ (AIPSF) ಎಂಬ ಸಂಘಟನೆಯು ಜೂನ್ 13ರಂದು ಮುಂಬೈಯ ಆಝಾದ್ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಕೋರಿತ್ತು. ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ಹತ್ಯೆ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಏರ್ಪಡಬೇಕು ಎಂಬ ಆಗ್ರಹದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಕೋರಿಕೆ ಪತ್ರದಲ್ಲಿ ಪೊಲೀಸರಿಗೆ ತಿಳಿಸಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಜೂನ್ 17ರಂದು ಅನುಮತಿ ನಿರಾಕರಿಸಿ ಪೊಲೀಸರು ಸೂಚನೆ ಹೊರಡಿಸಿದರು. ಆಝಾದ್ ಮೈದಾನದಲ್ಲಿ ಅಂಥ ದ್ದೊಂದು ಪ್ರತಿಭಟನೆಯು ಕಾನೂನು ಸುವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡಬಹುದು ಎಂದು ಅವರು ಕಾರಣವನ್ನು ನೀಡಿದರು. ಇದನ್ನು ಪ್ರಶ್ನಿಸಿ ಸಿಪಿಐಎಂ ಪಕ್ಷವು ಬಾಂಬೆ ಹೈಕೋರ್ಟಿನ ಬಾಗಿಲು ಬಡಿಯಿತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಖದ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವೇ ಈಗ ಪ್ರಶ್ನೆಗೆ ಮತ್ತು ಟೀಕೆಗೆ ಒಳಗಾಗಿದೆ.

"ನಮ್ಮ ದೇಶದಲ್ಲೇ  ಬೇಕಾದಷ್ಟು ಸಮಸ್ಯೆಗಳಿವೆ, ಆದರೆ ನಮ್ಮ ದೇಶದ ಸಮಸ್ಯೆಗಳನ್ನು ನಿರ್ಲಕ್ಷಿಸಿ ನೀವು ಗಾಝಾ ಮತ್ತು ಫೆಲೆಸ್ತೀನ್ ಕಡೆ ನೋಡುತ್ತಿದ್ದೀರಿ, ಇದು ಸಂಕುಚಿತ ದೃಷ್ಟಿಕೋನ. ನೀವು ನಿಮ್ಮ ದೇಶದೊಳಗೆ ನೋಡಿ. ದೇಶಪ್ರೇಮಿಗಳಾಗಿ. ಈ ದೇಶದ ನಾಗರಿಕರಿಗಾಗಿ ಕೆಲಸ ಮಾಡಿ ದೇಶಪ್ರೇಮವನ್ನು ಪ್ರಕಟಿಸಿ. ಆದರೆ ನೀವು ಇದರ ಬದಲು ಸಾವಿರಾರು ಮೈಲು ದೂರ ಇರುವ ಫೆಲೆಸ್ತೀನ್ ಮತ್ತು ಗಾಝಾದ ಬಗ್ಗೆ ಗಮನ ಹರಿಸಿದ್ದೀರಿ. ಫೆಲೆಸ್ತೀನ್ ಪರ ನಿಲ್ಲಬೇಕೋ ಇಸ್ರೇಲ್ ಪರ ನಿಲ್ಲಬೇಕೋ ಎಂಬುದು ಭಾರತ ಸರಕಾರದ ಕೆಲಸ. ಇಂಥ ಸ್ಥಿತಿಯಲ್ಲಿ, ಭಾರತ ಸರಕಾರವು ಈ ಎರಡರಲ್ಲಿ ಯಾವುದಾದರೊಂದು ರಾಷ್ಟ್ರದ ಪರ ನಿಲುವು ತೆಗೆದುಕೊಳ್ಳಬೇಕಾದಂಥ ಪರಿಸ್ಥಿತಿಯನ್ನು ನೀವೇಕೆ ನಿರ್ಮಿಸುತ್ತಿದ್ದೀರಿ? ಇದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಿರಲಿ..’ ಎಂದು ಸಿಪಿಎಂ ಪಕ್ಷದ ನ್ಯಾಯವಾದಿ ಮಿಹಿರ್ ದೇಸಾಯಿ ಅವರಿಗೆ ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ,

ಅಭಿಪ್ರಾಯ ಸ್ವಾತಂತ್ರ‍್ಯ ಮತ್ತು ಪ್ರಜಾತಂತ್ರವನ್ನು ಅತಿಶ್ರೇಷ್ಠವೆಂದು ಬಗೆಯುವ ಸಂವಿಧಾನ ಈ ದೇಶದಲ್ಲಿದೆ. ನ್ಯಾಯಾಲಯ ಅದರ ಅಧೀನದಲ್ಲೇ  ಕೆಲಸ ಮಾಡುತ್ತದೆ. ಈ ದೇಶದಲ್ಲಿ ಪೊಲೀಸರು ಸ್ವತಂತ್ರರಲ್ಲ. ಅದನ್ನು ಸರಕಾರ ನಿಯಂತ್ರಿಸುತ್ತದೆ. ಸರಕಾರ ಯಾವ ಪಕ್ಷದ್ದೋ  ಆ ಪಕ್ಷದ ನಿಲುವುಗಳನ್ನೇ ಪೊಲೀಸರು ವ್ಯಕ್ತಪಡಿಸುತ್ತಾರೆ. ಇಂಥ ಸ್ಥಿತಿಯಲ್ಲಿ, ಪಕ್ಷಾತೀತ ನ್ಯಾಯವನ್ನು ನಾಗರಿಕರು ನಿರೀಕ್ಷಿಸಬೇಕಾದದ್ದು ನ್ಯಾಯಾಲಯಗಳಿಂದ ಮಾತ್ರ. ಆದರೆ ಬಾಂಬೇ ನ್ಯಾಯಾಲಯದ ಪರಾಮರ್ಶೆಯು ಈ ನಿರೀಕ್ಷೆಗೆ ತಕ್ಕುದಾಗಿಲ್ಲ ಮತ್ತು ದೇಶ ಒಪ್ಪಿಕೊಂಡಿರುವ ಪರಂಪರಾಗತ ವಿದೇಶಾಂಗ ನೀತಿಗೂ ಹೊಂದಿಕೊಳ್ಳುತ್ತಿಲ್ಲ.

ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು ತನ್ನ ವಿದೇಶಾಂಗ ನೀತಿಯಾಗಿಯೇ ಒಪ್ಪಿ ಘೋಷಿಸಿದ ರಾಷ್ಟ್ರ ಭಾರತ. ಫೆಲೆಸ್ತೀನಿ ಜನತೆಯನ್ನು ಪ್ರತಿನಿಧಿಸುವ ಅಧಿಕೃತ ಸಂಘಟನೆ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ(PLO)ನ್ನು 1974ರಲ್ಲೇ  ಅಂಗೀಕರಿಸಿದ ರಾಷ್ಟ್ರವೂ ಭಾರತವೇ. ಆ ಕಾಲದಲ್ಲಿ ಅರಬ್ ರಾಷ್ಟ್ರಗಳನ್ನು ಬಿಟ್ಟರೆ ಪಿಎಲ್‌ಓವನ್ನು ಹೀಗೆ ಘಂಟಾಘೋಷವಾಗಿ ಅಂಗೀಕರಿಸಿದ ಮೊತ್ತಮೊದಲ ಅರಬೇತರ ರಾಷ್ಟçವಾಗಿ ಪ್ರಶಂಸೆಗೆ ಒಳಗಾಗಿರುವುದೂ ಭಾರತವೇ. ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು 1988ರಲ್ಲೇ  ಭಾರತ ಅಂಗೀಕರಿಸಿದೆ. 2024ರ ಮೋದಿ ಸರಕಾರದ ಅವಧಿಯಲ್ಲಿ ಭಾರತ ಇನ್ನೂ ಒಂದು ಹೆಜ್ಜೆಯನ್ನು ಮುಂದಿಟ್ಟಿತು. ಫೆಲೆಸ್ತೀನಿಯರಿಗೆ ತಮ್ಮದೇ ದೇಶವನ್ನು ಹೊಂದುವ ಮತ್ತು ಸ್ವನಿರ್ಧಾರವನ್ನು ಹೊಂದುವ ಹಕ್ಕೂ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಆಯೋಗದ ಮಂಡಿಸಿದ ಪ್ರಸ್ತಾಪದ ಪರ ಭಾರತ ಮತವನ್ನೂ ಚಲಾಯಿಸಿತು. ಅಲ್ಲದೇ, 1948ರ ನರಮೇಧ ವಿರೋಧಿ ನಿರ್ಣಯಕ್ಕೆ ಸಹಿ ಹಾಕಿದ ದೇಶವೂ ಭಾರತವೇ. ಜೊತೆಗೇ, ಗಾಝಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಭಾರತ ಸರಕಾರ ಈಗಾಗಲೇ ವಿರೋಧವನ್ನೂ ವ್ಯಕ್ತಪಡಿಸಿದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ಪ್ರಧಾನಿ ಇಂದಿರಾ ಗಾಂಧಿ, ವಾಜಪೇಯಿ ಮತ್ತು ನರೇಂದ್ರ ಮೋದಿಯವರ ವರೆಗೆ ಫೆಲೆಸ್ತೀನ್ ವಿಷಯದಲ್ಲಿ ಭಾರತದ ನಿಲುವು ಬದಲಾಗಿಲ್ಲ. ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ಭಾರತ ಹೇಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬಂದಿತ್ತೋ ಅದೇರೀತಿಯಲ್ಲಿ ಫೆಲೆಸ್ತೀನ್ ಪರ ನಿಲುವನ್ನೂ ಭಾರತ ತನ್ನ ವಿದೇಶಾಂಗ ನೀತಿಯಾಗಿಯೇ ಘೋಷಿಸುತ್ತಾ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಿಂದ 200 ವರ್ಷಗಳ ಕಾಲ ಎದುರಿಸಿದ ದೌರ್ಜನ್ಯದ ಸ್ವಯಂ ಅನುಭವವೇ ಇವತ್ತು ಇಸ್ರೇಲ್‌ನ ಹಿಡಿತದಲ್ಲಿರುವ ಫೆಲೆಸ್ತೀನಿಯರ ನೋವುಗಳನ್ನು ತಿಳಿದುಕೊಳ್ಳಲು ಭಾರತಕ್ಕೆ ಧಾರಾಳ ಸಾಕು. ಸಾಮ್ರಾಜ್ಯಶಾಹಿತ್ವದ ಪ್ರಬಲ ವಿರೋಧಿಯಾಗಿ ಭಾರತ ಮಾರ್ಪಟ್ಟಿರುವುದು ಮತ್ತು ಅದನ್ನೇ ತನ್ನ ವಿದೇಶಾಂಗ ನೀತಿಯಾಗಿ 1947ರಿಂದಲೇ ಪಾಲಿಸುತ್ತಿರುವುದೂ ಈ ಕಾರಣದಿಂದಲೇ. ಆದರೆ,

ಬಾಂಬೆ ಹೈಕೋರ್ಟಿನ ಪರಾಮರ್ಶೆ ಈ ಕುರಿತಂತೆ ತೀರಾ ನಿರಾಶೆಯನ್ನು ಉಂಟು ಮಾಡುವಂಥದ್ದಾಗಿದೆ. ಕೇಂದ್ರ ಸರಕಾರದ ವಿದೇಶಾಂಗ ನೀತಿಯೂ ಸೇರಿದಂತೆ ಯಾವುದೇ ನಿರ್ಧಾರವನ್ನು ಪ್ರಶ್ನಿಸುವ ಮತ್ತು ಬೆಂಬಲಿಸುವ ಸ್ವಾತಂತ್ರ‍್ಯವನ್ನು ಈ ದೇಶದ ಸಂವಿಧಾನವೇ ನಾಗರಿಕರಿಗೆ ನೀಡುತ್ತದೆ. ಸರಕಾರ ಪ್ರಶ್ನಾತೀತವಲ್ಲ. ಅಲ್ಲದೇ ಗಾಝಾ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವು ಗಾಝಾದ ವಿರುದ್ಧವೂ ಇಲ್ಲ. ಗಾಝಾಕ್ಕೆ ಔಷಧ ಮತ್ತು ಇನ್ನಿತರ ನೆರವುಗಳನ್ನು ಭಾರತ ಸರಕಾರವೇ ರವಾನಿಸಿದೆ. ಭಾರತೀಯರು ಸ್ವಯಂಪ್ರೇರಿತವಾಗಿ ಗಾಝಾಕ್ಕೆ ನೆರವಾಗುವುದನ್ನು ಸರಕಾರ ನಿಷೇಧಿಸಿಯೂ ಇಲ್ಲ. ಒಂದುವೇಳೆ, ಗಾಝಾದ ನರಮೇಧವನ್ನು ಪ್ರತಿಭಟಿಸುವುದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದಾಗಿದ್ದರೆ ಗಾಝಾಕ್ಕೆ ನೆರವಾಗುವ ಮೂಲಕ ಕೇಂದ್ರ ಸರಕಾರವೇ ಅದನ್ನು ಉಲ್ಲಂಘಿಸಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ಯಾವುದೇ ದೇಶದ ನಾಗರಿಕರು ಒಂದುಕಡೆ ಸೇರಿ ವ್ಯಕ್ತಪಡಿಸುವ ಅಭಿಪ್ರಾಯವು ಅಲ್ಲಿನ ಸರಕಾರದ ಅಭಿಪ್ರಾಯವಾಗಬೇಕೆಂದಿಲ್ಲ. ಸರಕಾರದ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದೇ ಇರುವ ಸ್ವಾತಂತ್ರ‍್ಯಕ್ಕೆ ಆ ದೇಶದಲ್ಲಿ ಮನ್ನಣೆ ಇದೆ ಎಂಬುದೇ ಅದರ ಅರ್ಥ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ನೇತನ್ಯಾಹು ಪರ ಬಲವಾಗಿ ನಿಂತಿರುವಾಗ ಅಲ್ಲಿನ ನಾಗರಿಕರು ಟ್ರಂಪ್ ವಿರುದ್ಧ ನಿಂತಿದ್ದಾರೆ. ಗಾಝಾದ ನರಮೇಧದ ವಿರುದ್ಧ ರ‍್ಯಾಲಿ ನಡೆಸುತ್ತಿದ್ದಾರೆ. ಪ್ರತಿದಿನವೆಂಬಂತೆ  ಪ್ರತಿಭಟಿಸುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟçಗಳಲ್ಲಿ ಆ ರಾಷ್ಟ್ರಗಳ ಅಧಿಕೃತ ವಿದೇಶಾಂಗ ನೀತಿಯ ವಿರುದ್ಧ ಇವತ್ತೂ ಪ್ರತಿಭಟನೆಗಳಾಗುತ್ತಿವೆ. ಇಸ್ರೇಲ್ ನರಮೇಧವನ್ನು ಖಂಡಿಸಿ ಮತ್ತು ಗಾಝಾದ ಜನರ ಪರವಾಗಿ ಅಲ್ಲೆಲ್ಲಾ  ಜನರು ಬೀದಿಗಿಳಿದಿದ್ದಾರೆ. ಇದು ಆ ದೇಶಗಳಲ್ಲಿರುವ ಪ್ರಜಾತಂತ್ರವನ್ನು ಮತ್ತು ನಾಗರಿಕ ಸ್ವಾತಂತ್ರ‍್ಯಕ್ಕಿರುವ ಮಹತ್ವವನ್ನು ಹೇಳುತ್ತದೆ. ಆದರೆ,

ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ವಿದೇಶಾಂಗ ನೀತಿ ತೀರಾ ಸ್ಪಷ್ಟವಿದೆ. ಅದು ಸ್ವತಂತ್ರ ಫೆಲೆಸ್ತೀನ್ ರಾಷ್ಟçದ ಪರ ಮತ್ತು ಸಾಮ್ರಾಜ್ಯಶಾಹಿತ್ವದ ವಿರುದ್ಧವಿದೆ. ಅಲ್ಲದೇ, ವಸುದೈವ ಕುಟುಂಬಕಂ  ಎಂಬ ಉದಾತ್ತ ಪರಿಕಲ್ಪನೆಯಲ್ಲಿ ವಿಶ್ವಾಸ ಇಟ್ಟ ಮತ್ತು ಅದನ್ನು ಪ್ರತಿಪಾದಿಸುವ ರಾಷ್ಟç ನಮ್ಮದು. ಜಗತ್ತಿನ ಎಲ್ಲರೂ ಒಂದು ಕುಟುಂಬವಾಗಿದ್ದಾರೆ ಎಂಬ ನೀತಿಯಲ್ಲಿ ಇಸ್ರೇಲೂ ಬರುತ್ತದೆ, ಫೆಲೆಸ್ತೀನೂ ಬರುತ್ತದೆ. ಈ ಕುಟುಂಬದಲ್ಲಿ ಓರ್ವನ ಮೇಲೆ ದೌರ್ಜನ್ಯವಾಗುತ್ತಿದೆ ಎಂದಾದರೆ ಕುಟುಂಬದ ಸದಸ್ಯನಾಗಿ ಅದನ್ನು ಪ್ರಶ್ನಿಸಬೇಕಾದ ಹೊಣೆಗಾರಿಕೆ ನಮಗಿದೆ. ಆ ದೌರ್ಜನ್ಯವನ್ನು ಬಲವಂತದಿಂದ  ತಡೆಯುವ ಸಾಮರ್ಥ್ಯವಿದ್ದರೆ ಅದನ್ನು ತಡೆಯಬೇಕು. ಒಂದುವೇಳೆ, ಆ ಅವಕಾಶ ಇಲ್ಲವೆಂದಾದರೆ ಅದನ್ನು ಪ್ರಶ್ನಿಸುವ ಸ್ವಾತಂತ್ರ‍್ಯವನ್ನು ಬಳಸಿಕೊಳ್ಳಬೇಕು. ಆ ಮೂಲಕ ದೌರ್ಜನ್ಯ ನಡೆಸುವ ವ್ಯಕ್ತಿಯ ವಿರುದ್ಧ ಉಳಿದ ಸದಸ್ಯರನ್ನು ಒಟ್ಟುಗೂಡಿಸಬೇಕು. ದೌರ್ಜನ್ಯಕೋರನನ್ನು ಶಿಕ್ಷಿಸುವ ಮತ್ತು ಸಂತ್ರಸ್ತನನ್ನು ರಕ್ಷಿಸುವ ಪ್ರಯತ್ನವನ್ನು ಮಾಡಬೇಕು. ಸದ್ಯ ಫೆಲೆಸ್ತೀನ್ ದೌರ್ಜನ್ಯವನ್ನು ಎದುರಿಸುತ್ತಿದೆ. ಇಸ್ರೇಲ್ ಅಪರಾಧಿ ಸ್ಥಾನದಲ್ಲಿದೆ. ಇದನ್ನು ಪ್ರಶ್ನಿಸುವುದನ್ನು ದೇಶಪ್ರೇಮದ ಕೊರತೆ ಎಂಬಂತೆ  ನ್ಯಾಯಾಲಯವೇ ಹೇಳುವುದು ದುರದೃಷ್ಟಕರ.

Saturday, 12 July 2025

ಇಸ್ರೇಲ್-ಇರಾನ್ ಯುದ್ಧದಲ್ಲಿ ಕಾಣಿಸಿ ಕೊಂಡ ಈ ಕ್ಯಾಥರಿನ್ ಯಾರು?




1. ಎಲಿ ಕೋಹೆನ್

2. ಕ್ಯಾಥರಿನ್

ಜಗತ್ತನ್ನೇ ತಬ್ಬಿಬ್ಬುಗೊಳಿಸಿದ ಅತ್ಯಂತ ಶಕ್ತಿಶಾಲಿ ಗೂಢಚರ ಈ ಎಲಿ ಕೋಹೆನ್. ಇಸ್ರೇಲ್‌ನ ಯಹೂದಿ ವ್ಯಕ್ತಿಯಾದ ಈತನನ್ನು 1965ರಲ್ಲಿ ಸಿರಿಯಾ ಗಲ್ಲಿಗೇರಿಸಿತು. ಆದರೆ, ಅದಕ್ಕಿಂತ ಮೊದಲೇ ಸಿರಿಯಾಕ್ಕೆ ಏನೆಲ್ಲ ಅನಾಹುತಗಳನ್ನು ಮಾಡಿ ಬಿಡಬಹುದೋಅವೆಲ್ಲವನ್ನೂ ಈತ ಮಾಡಿಬಿಟ್ಟಿದ್ದ.

1967ರ ಅರಬ್-ಇಸ್ರೇಲ್ ಯುದ್ಧದ ಸಮಯದಲ್ಲಿ ಸಿರಿಯಾದ ಭಾಗವಾಗಿದ್ದ ಗೋಲಾನ್ ಬೆಟ್ಟವನ್ನು ಕೇವಲ ಎರಡೇ ದಿನಗಳೊ ಳಗೆ ಇಸ್ರೇಲ್ ವಶಪಡಿಸಿಕೊಂಡಿದ್ದರೆ ಅದರ ಸಂಪೂರ್ಣ ಯಶಸ್ಸು ಈ ಎಲಿ ಕೋಹೆನ್‌ಗೆ ಸಲ್ಲಬೇಕು. ಸಿರಿಯಾದ ನಾಗರಿಕನೇ ಅಲ್ಲದ ಈತ ಇಡೀ ವ್ಯವಸ್ಥೆಯನ್ನೇ ಮರುಳುಗೊಳಿಸಿ ಸಿರಿಯಾದ ರP್ಷÀಣಾ ಸಚಿವನಾಗುವ ಹಂತಕ್ಕೆ ಬೆಳೆದ ರೀತಿಯೇ ರೋಚಕ.

1924ರಲ್ಲಿ ಈಜಿಪ್ಟ್ ನ   ಯಹೂದಿ ಕುಟುಂಬದಲ್ಲಿ ಹುಟ್ಟಿದ ಈತ ಆರಂಭದಲ್ಲಿ ರಬ್ಬಿ (ಯಹೂದಿ ಧರ್ಮಗುರು)ಯಾಗಲು ಬಯಸಿದ್ದ. ಅದಕ್ಕಾಗಿ ಅಲೆಕ್ಸಾಂಡ್ರಿಯಾದ ಮುಖ್ಯ ರಬ್ಬಿಯಿಂದ ತರಬೇತಿಯನ್ನೂ ಪಡೆದಿದ್ದ. ಆಗಿನ್ನೂ ಇಸ್ರೇಲ್ ರಾಷ್ಟ್ರ  ಸ್ಥಾಪನೆ ಯಾಗಿರಲಿಲ್ಲ. ಆದರೆ ಇಸ್ರೇಲ್ ರಾಷ್ಟç ಸ್ಥಾಪನೆಗೆ ಬೇಕಾದ ತಯಾರಿಗಳು ಗುಪ್ತವಾಗಿ ನಡೆಯುತ್ತಿದ್ದುವು. ಆಗ ಈಜಿಪ್ಟ್ ನಲ್ಲಿ  ಧಾರಾಳ ಸಂಖ್ಯೆಯಲ್ಲಿ ಯಹೂದಿಯರಿದ್ದರು. ಅವರನ್ನು ಗುಪ್ತವಾಗಿ ಭೇಟಿಯಾಗುವುದು ಮತ್ತು ಸಂಭಾವ್ಯ ಇಸ್ರೇಲ್ ರಾಷ್ಟ್ರದೊಳಗೆ ಕಳುಹಿಸುವುದಕ್ಕೆ ನೇತೃತ್ವವನ್ನು ನೀಡಿದ್ದ. ಕೈರೋ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದಾಗಲೇ ಆತ ಇಸ್ರೇಲಿ ರಾಷ್ಟçದ ಪ್ರಬಲ ಬೆಂಬಲಿಗನಾಗಿ ಪರಿವರ್ತಿತವಾಗಿದ್ದ. ಅರೇಬಿಕ್, ಹಿಬ್ರೂ, ಇಂಗ್ಲಿಷ್, ಫ್ರೆಂಚ್, ಸ್ಪಾನಿಶ್ ಭಾಷೆಗಳಲ್ಲಿ ನಿರರ್ಗಳವಾಗಿ ಸಂವಾದ ನಡೆಸುವ ಸಾಮರ್ಥ್ಯವೂ ಈತನಿಗಿತ್ತು.

1949ರಲ್ಲಿ ಈ ಕೋಹೆನ್‌ನ ಹೆತ್ತವರು ಮತ್ತು ಅವನ ಮೂವರು ಸಹೋದರರು ಇಸ್ರೇಲ್‌ಗೆ ವಲಸೆ ಹೋದರು. ಆದರೆ ತನ್ನ ಡಿಗ್ರಿ ಪೂರ್ತಿಗೊಳಿಸುವ ಉದ್ದೇಶದಿಂದ ಈತ ಈಜಿಪ್ಟ್ ನಲ್ಲೇ  ಉಳಿದ. 1952ರಲ್ಲಿ ಮಿಲಿಟರಿ ಮುಖಂಡರಾದ ಮುಹಮ್ಮದ್ ನಜೀಬ್  ಮತ್ತು ಜಮಾಲ್ ಅಬ್ದುಲ್ ನಾಸಿರ್ ನೇತೃತ್ವದಲ್ಲಿ ದೊರೆ ಫಾರೂಖ್‌ರ ವಿರುದ್ಧ ಬಂಡಾಯ ಕಾಣಿಸಿಕೊಂಡಿತು. ಈ ಬಂಡಾಯಕ್ಕೆ ಬೆಂಬಲ ಸಾರಿದ ಆರೋಪದಲ್ಲಿ ಈಜಿಪ್ಟ್ ಅಧಿಕಾರಿಗಳು ಈ ಕೋಹೆನ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ದ್ದರು. ಆದರೆ ಪೂರಕ ಸಾಕ್ಷ್ಯ  ಸಿಗದ ಕಾರಣ ಬಿಟ್ಟುಬಿಟ್ಟಿದ್ದರು. ಈ ನಡುವೆ 1954ರಲ್ಲಿ ‘ಲ್ಯಾವನ್ ಅಫೇರ್’ ಎಂಬ ಹೆಸರಲ್ಲಿ ಗುರುತಿಸಿಕೊಂಡಿರುವ ಕುಖ್ಯಾತ ಕಾರ್ಯಾಚರಣೆಗೆ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಮುಂದಾಯಿತು. ಈಜಿಪ್ಟ್, ಬ್ರಿಟಿಷ್ ಮತ್ತು ಅಮೇರಿಕನ್ನರ ಮಾಲಕತ್ವದಲ್ಲಿರುವ ಸಿನಿಮಾ ಮಂದಿರಗಳು, ಲೈಬ್ರರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬಾಂಬಿಟ್ಟು ನಾಗರಿಕರನ್ನು ಹತ್ಯೆ ಮಾಡುವುದುಮತ್ತು ಇದರ ಹೊಣೆಯನ್ನು ಮುಸ್ಲಿಮ್ ಬ್ರದರ್‌ಹುಡ್ ಮೇಲೆ ಆರೋಪಿಸುವುದು ಈ ಕಾರ್ಯಾಚರಣೆಯ ಗುರಿಯಾಗಿತ್ತು. ಇದಕ್ಕಾಗಿ ಈಜಿಪ್ಟ್ ನಲ್ಲಿರುವ   ಯಹೂದಿಯರನ್ನು ತಯಾರುಗೊಳಿಸಲಾಯಿತು. ಯೋಜನೆಯಂತೆ ಬಾಂಬನ್ನೂ ಇಡಲಾಯಿತು. ಆದರೆ, ಕಾರ್ಯತಂತ್ರದಲ್ಲಿ ಆದ ಸಣ್ಣ ಎಡವಟ್ಟಿನಿಂದಾಗಿ ಈ ಎಲ್ಲ ಕಚೇರಿಗಳೂ ಬಾಗಿಲು ಮುಚ್ಚಿದ ಬಳಿಕ ಈ ಬಾಂಬ್‌ಗಳು ಸ್ಫೋಟಗೊಂಡವು. ಅದರಿಂದಾಗಿ ಭಾರೀ ಅನಾಹುತ ತಪ್ಪಿ ಹೋಯಿತು. ಈ ಕಾರ್ಯಾಚರಣೆಯ ಆರೋಪದಲ್ಲಿ ಇಬ್ಬರು ಯಹೂದಿಯರನ್ನು ಈಜಿಪ್ಟ್ ಸರಕಾರ ಗಲ್ಲಿಗೇರಿಸಿತಾದರೂ ಈ ಕೋಹೆನ್ ಶಿಕ್ಷೆಯಿಂದ ತಪ್ಪಿಸಿಕೊಂಡ. ಆತನನ್ನು ಅಪರಾಧಿ ಎಂದು ಸಾರುವುದಕ್ಕೆ ಬೇಕಾದ ದಾಖಲೆ ಸಿಗದೇ ಇರುವುದು ಇದಕ್ಕೆ ಕಾರಣವಾಗಿತ್ತು. 1956ರಲ್ಲಿ ನಡೆದ ಎರಡನೇ ಇಸ್ರೇಲ್-ಅರಬ್ ಯುದ್ಧದ ಬಳಿಕ ಈತನನ್ನು ಈಜಿಪ್ಟ್ ಬಲವಂತದಿಂದ  ಇಸ್ರೇಲ್‌ಗೆ ಗಡೀಪಾರು ಮಾಡಿತು. ಇಲ್ಲಿಂದ ಈತನ ಎರಡನೇ ಹಂತದ ಮತ್ತು ಅತ್ಯಂತ ಅಪಾಯ ಕಾರಿಯಾದ ಕಾರ್ಯಾಚರಣೆ ಆರಂಭಗೊಂಡಿತು. ಇಸ್ರೇಲ್‌ಗೆ ಬಂದವನೇ ಮೊಸಾದ್‌ನಲ್ಲಿ ಈತ ತರಬೇತಿಗೆ ಸೇರಿಕೊಂಡ.

 ಅಂದಹಾಗೆ,

ಅರಬ್ ರಾಷ್ಟ್ರಗಳೊಂದಿಗೆ ಎರಡೆರಡು ಯುದ್ಧಗಳನ್ನು ನಡೆ ಸಿದ್ದ ಇಸ್ರೇಲ್‌ಗೆ ತಾನು ಯಾವತ್ತೂ ಅಸುರಕ್ಷಿತ ರಾಷ್ಟ್ರ  ಅನ್ನು ವುದು ತಿಳಿದಿತ್ತು. ಅರಬ್ ರಾಷ್ಟ್ರಗಳು ಜೊತೆ ಸೇರಿ ತನ್ನ ವಿರುದ್ಧ ಮೂರನೇ ಯುದ್ಧ ನಡೆಸುವುದನ್ನು ಅದು ನಿರೀಕ್ಷಿಸಿಯೇ ಇತ್ತು. ಫೆಲೆಸ್ತೀನಿಯರನ್ನು ಒಕ್ಕಲೆಬ್ಬಿಸುವುದು ಮತ್ತು ಅಲ್ಲಿನ ಭೂಭಾಗವನ್ನು ಕಬಳಿಸುತ್ತಾ ಗಡಿ ವಿಸ್ತರಣೆಯಲ್ಲಿ ತೊಡಗುವುದನ್ನು ಅರಬ್ ಜನತೆ ಒಪ್ಪಲ್ಲ ಎಂದೂ ಇಸ್ರೇಲ್‌ಗೆ ತಿಳಿದಿತ್ತು. ಈ ಎಲ್ಲ ದೂರ ದೃಷ್ಟಿಯನ್ನು ಇಟ್ಟುಕೊಂಡೇ ಅದು ಕಾರ್ಯತಂತ್ರಗಳನ್ನು ರೂಪಿಸುತ್ತಿತ್ತು. ಇದರ ಭಾಗವಾಗಿಯೇ ಈ ಕೋಹೆನ್‌ನನ್ನು ಗೂಢಚರನಾಗಿ ಸಿರಿಯಾಕ್ಕೆ ಕಳುಹಿಸಲು ತೀರ್ಮಾನಿಸಿತು. ಅರ್ಜೆಂಟೀನಾದಿಂದ  ಮರಳುತ್ತಿರುವ ಸಿರಿಯಾದ ಬ್ಯುಸಿನೆಸ್‌ಮ್ಯಾನ್ ಎಂಬ ನಕಲಿ ದಾಖಲೆಯನ್ನು ಮೊಸಾದ್ ಈತನಿಗಾಗಿ ಸೃಷ್ಟಿಸಿತು. ಈತನ ಹೆಸರನ್ನು ಕಮಾಲ್ ಅಮೀನ್ ಥಾಬೆಟ್ ಎಂದು ಮರುನಾಮ ಕರಣ ಮಾಡಿತು. ಈತ ಅರ್ಜೆಂಟೀನಾದಲ್ಲಿದ್ದ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ 1961ರಲ್ಲಿ ಅರ್ಜೆಂಟೀನಾಕ್ಕೂ ಕಳುಹಿಸಿಕೊಟ್ಟಿತು. 

ಹೀಗೆ,

1962ರಲ್ಲಿ ಸಿರಿಯಾ ಪ್ರವೇಶಿಸಿದ ಈತ, ಅಲ್ಲಿನ ರಾಜಕಾರಣಿ ಗಳು, ರಾಯಭಾರ ಕಚೇರಿಗಳು, ಗುಪ್ತಚರ ಸಂಸ್ಥೆಯ ಕಚೇರಿ, ಸರಕಾರಿ ಕಟ್ಟಡಗಳು ಇರುವ ಮೆಹ್ದಿ ಇಬ್ನು ಸ್ಟ್ರೀಟ್‌ನಲ್ಲಿ ಮನೆ ಯನ್ನೂ ಮಾಡಿಕೊಂಡ. ಈ ಮನೆ ಮಾಡಿರುವುದೂ ತಂತ್ರದ ಭಾಗವಾಗಿತ್ತು. ಈಜಿಪ್ಟ್ನ ಉನ್ನತ ಅಧಿಕಾರಿಗಳು, ರಾಜಕಾರಣಿಗಳು, ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಜೊತೆ ಗೆಳೆತನ ಬೆಳೆಸಿ ಅವರಿಂದ ಮಾಹಿತಿಗಳನ್ನು ಪಡೆದು ಇಸ್ರೇಲ್‌ಗೆ ರವಾನಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಮಾತ್ರವಲ್ಲ, ಆತ ಇದರಲ್ಲಿ ಯಶಸ್ಸನ್ನೂ ಸಾಧಿಸಿದ.

ಸಿರಿಯಾದ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ಜೊತೆ ಬಹಳ ಬೇಗ ಗೆಳೆತನ ಬೆಳೆಸಿಕೊಂಡ ಈತ, ತನ್ನ ಅದ್ದೂರಿ ಮನೆಯಲ್ಲಿ ಅವರಿಗಾಗಿ ಪಾರ್ಟಿಯನ್ನೂ ಮಾಡತೊಡಗಿದ. ಮದ್ಯ ಮತ್ತು ಮಾನಿನಿಯರನ್ನೂ ಒದಗಿಸತೊಡಗಿದ. ಅವರನ್ನು ಅಮಲಿನಲ್ಲಿ ತೂಗಾಡುವಂತೆ ಮಾಡಿ ಸರಕಾರಿ ಗೌಪ್ಯ ಮಾಹಿತಿ ಗಳನ್ನು ಸಂಗ್ರಹಿಸತೊಡಗಿದ. ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿ ಗುಪ್ತ ದಾಖಲೆಗಳನ್ನು ಸಂಗ್ರಹಿಸತೊಡಗಿದ. ಈತ ಎಲ್ಲಿಯ ವರೆಗೆ ಸಿರಿಯನ್ ಪ್ರಭುತ್ವಕ್ಕೆ ಹತ್ತಿರವಾದನೆಂದರೆ, ರಕ್ಷಣಾ ಸಚಿವನಾಗಿ ಈತನನ್ನು ಸಂಪುಟಕ್ಕೆ ಸೇರಿಸುವುದಕ್ಕೂ ಸಂಪುಟದಲ್ಲಿ ಚರ್ಚೆ ನಡೆಯಿತು. ಹೀಗೆ 1962ರಿಂದ 65ರ ನಡುವೆ ಸಾವಿರಾರು ರಹಸ್ಯ ಮಾಹಿತಿಯನ್ನು ಈತ ಇಸ್ರೇಲ್‌ಗೆ ರವಾನಿಸಿದ. ಮುಖ್ಯ ವಾಗಿ, ರೇಡಿಯೋ, ರಹಸ್ಯ ಪತ್ರಗಳು ಮತ್ತು ರಹಸ್ಯ ಭೇಟಿ ಮೂಲಕ ಈ ಎಲ್ಲ ಮಾಹಿತಿಯನ್ನು ಇಸ್ರೇಲ್‌ಗೆ ತಲುಪಿಸುತ್ತಿದ್ದ. ಈತನ ಅತಿ ಮಹತ್ವಪೂರ್ಣ ಯಶಸ್ಸು ಏನೆಂದರೆ, ಗೋಲಾನ್ ಬೆಟ್ಟಕ್ಕೆ ಭೇಟಿ ಕೊಟ್ಟಿರುವುದು. ಒಟ್ಟು 3 ಬಾರಿ ಆತ ಈ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದ. ಅಲ್ಲಿ ಬಿಸಿಲಿಗೆ ಬೇಯುತ್ತಿರುವ ಸಿರಿಯನ್ ಸೈನಿಕರ ಬಗ್ಗೆ ಮರುಕಪಟ್ಟು ಅವರಿಗೆ ನೆರಳು ಒದಗಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟಿದ್ದ. ಇದು ಸೈನಿಕರ ಮನವನ್ನೂ ಗೆದ್ದಿತ್ತು. 

ಆದರೆ,

1967ರ ಮೂರನೇ ಇಸ್ರೇಲ್-ಅರಬ್ ಯುದ್ಧದ ಸಮಯದಲ್ಲಿ ಕೇವಲ ಎರಡೇ ದಿನಗಳಲ್ಲಿ ಇಸ್ರೇಲ್ ಈ ಗೋಲಾನ್ ಬೆಟ್ಟವನ್ನು ಸಿರಿಯಾದಿಂದ ವಶಪಡಿಸಿಕೊಳ್ಳುವುದಕ್ಕೆ ಈ ಮರಗಳೇ ನೆರವಾಗಿತ್ತು ಎಂದು ಹೇಳಲಾಗುತ್ತಿದೆ. ಆ ಮರಗಳಿಗೆ ಹಾಕಲಾಗಿದ್ದ ಗುರುತು ಗಳು ಇಸ್ರೇಲ್ ಕಾರ್ಯಾಚರಣೆಗೆ ನೆರವನ್ನೂ ಒದಗಿಸಿತ್ತು ಅನ್ನುವುದು ಆ ಬಳಿಕ ಬಹಿರಂಗವಾಗಿತ್ತು. ಆದರೆ, 1963ರಲ್ಲಿ ಸಿರಿಯಾದಲ್ಲಿ ಸೈನಿಕ ಬಂಡಾಯ ಉಂಟಾಯಿತು. ಸಿರಿಯಾದ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥರಾಗಿ ನೇಮಕ ವಾದ ಅಹ್ಮದ್ ಸುಯಿದಾನಿಯು ಈ ಎಲಿ ಕೋಹೆನ್ ಜೊತೆ ಸಂಬಂಧವನ್ನು ಇಟ್ಟುಕೊಳ್ಳಲಿಲ್ಲ. ಇದರಿಂದ ಕೋಹೆನ್‌ಗೂ ಭಯವಾಯಿತು. ಎಲ್ಲಿ ತನ್ನ ಗೂಢಚಾರಿಕೆ ಬಹಿರಂಗವಾಗುತ್ತೋ ಎಂಬ ಅನುಮಾನದಿಂದ 1964ರಲ್ಲಿ ಆತ ಇಸ್ರೇಲ್‌ಗೆ ಪ್ರಯಾಣಿಸಿದ ಮತ್ತು ಸಿರಿಯಾಕ್ಕೆ ಮರಳುವುದಿಲ್ಲವೆಂದೂ ತೀರ್ಮಾನಿಸಿದ್ದ. ಆದರೆ, ಮೊಸಾದ್‌ನ ಒತ್ತಡಕ್ಕೆ ಮಣಿದು ಕೊನೆಯ ಬಾರಿ ಎಂಬಂತೆ  ಸಿರಿಯಕ್ಕೆ ಮರಳಿದ. 

ಅದುವೇ ಆತನ ಅಂತ್ಯಕ್ಕೂ ಕಾರಣವಾಯಿತು.

ತಮ್ಮ ದೇಶದ ರಹಸ್ಯ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಅನುಮಾನವನ್ನು ಹೊಂದಿದ್ದ ಸಿರಿಯನ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಅಹ್ಮದ್ ಸುಯಿದಾನಿಯು, ಇದನ್ನು ಪತ್ತೆ ಹಚ್ಚುವುದಕ್ಕಾಗಿ ರಶ್ಯದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಂತ್ರಜ್ಞ ರನ್ನು ಬಳಸಿದರು. ಆಗ ಅವರಿಗೆ ರೇಡಿಯೋ ತರಂಗಾಂತರಗಳ ಮೂಲಕ ಮಾಹಿತಿ ರವಾನೆಯಾಗುತ್ತಿರುವುದು ಗೊತ್ತಾಯಿತು. ಅದರ ಜಾಡು ಹಿಡಿದು ಹೋದ ಅವರು ತಲುಪಿದ್ದು ಇದೇ ಕೋಹೆನ್ ಇದ್ದ ಅಪಾರ್ಟ್ಮೆಂಟ್‌ಗೆ. ಜುಲೈ 24, 1965ರಂದು ಅವರು ಕೋಹೆನ್ಮ ನೆ ಬಾಗಿಲು ತಟ್ಟುವಾಗ, ಆತ ರೇಡಿಯೇ ಮೂಲಕ ರಹಸ್ಯ ಮಾಹಿತಿಯನ್ನು ಇಸ್ರೇಲ್‌ಗೆ ರವಾನಿಸುತ್ತಿದ್ದ.

ಮಿಲಿಟರಿ ನ್ಯಾಯಾಲಯ ಈ ಕೋಹೆನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತು.

ಈ ಶಿಕ್ಷೆಯನ್ನು ಜಾರಿಗೊಳಿಸದಂತೆ ತಡೆಯುವುದಕ್ಕಾಗಿ ಇಸ್ರೇಲ್ ಇನ್ನಿಲ್ಲದಂತೆ ಪ್ರಯತ್ನಿಸಿತು. ಈತನಿಗೆ ಮರಣ ದಂಡನೆ ಯಿಂದ ರಿಯಾಯಿತಿ ಕೊಡುವಂತೆ ಒತ್ತಾಯಿಸಿ ಇಸ್ರೇಲ್ ವಿದೇಶಾಂಗ ಸಚಿವ ಗೋಲ್ಡನ್ ಮೇರ್ ನೇತೃತ್ವದಲ್ಲಿ ಅಭಿಯಾನವೇ ನಡೆಯಿತು. ಪೋಪ್ ಜಾನ್ ಪೌಲ್‌ರಿಂದ ಹಿಡಿದು ಬೆಲ್ಜಿಯಂ, ಕೆನಡಾ, ಫ್ರಾನ್ಸ್ ಗಳು  ಮರಣ ದಂಡನೆ ನೀಡದಂತೆ ಸಿರಿಯನ್ ಆಡಳಿತದ ಮೇಲೆ ಒತ್ತಡ ಹೇರಿದುವು. ಸಿರಿಯನ್ ಸರಕಾರಕ್ಕೆ ಆತನ ಪತ್ನಿ ನಾದಿಯಾ ಭಾವನಾತ್ಮಕ ಪತ್ರ ಬರೆದರು. ಆದರೆ,

ಸಿರಿಯಾ ಮಣಿಯಲಿಲ್ಲ.

1965 ಮೇ 18ರಂದು ಡಮಾಸ್ಕಸ್‌ನ ಮರ್ಜಾ ವೃತ್ತದಲ್ಲಿ ಸಾರ್ವಜನಿಕವಾಗಿ ಈ ಕೋಹೆನ್‌ನನ್ನು ನೇಣಿಗೇರಿಸಲಾಯಿತು. ಈತನನ್ನು ಇಸ್ರೇಲ್ ರಾಷ್ಟ್ರೀಯ ಹೀರೋವಾಗಿ ಗೌರವಿಸಿತು. ಗೋಲಾನ್ ಬೆಟ್ಟದಲ್ಲಿರುವ ಇಲ್ಲಿಹಾದ್ ಯಹೂದಿ ವಸತಿಗಳಿಗೆ ಈತನ ಹೆಸರನ್ನು ಇಟ್ಟಿತು. ಅಲ್ಲದೇ ಇಸ್ರೇಲ್‌ನ ಅನೇಕ ರಸ್ತೆಗಳು ಮತ್ತು ಕೆಲವು ಪ್ರದೇಶಗಳನ್ನು ಈತನ ಹೆಸರಿನಿಂದ ಕರೆಯಲಾಗುತ್ತಿದೆ. ಅಂದಹಾಗೆ,

ಈ ಎಲ್ಲವನ್ನೂ ಈಗ ಇಲ್ಲಿ ಹಂಚಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಅದುವೇ ಕ್ಯಾಥರಿನ್.

ಈಕೆ ಓರ್ವ ಯಮನ್ ಮುಸ್ಲಿಮನನ್ನು ಮದುವೆಯಾಗಿ ಫ್ರೆಂಚ್ ಪಾಸ್‌ಪೋರ್ಟ್ನೊಂದಿಗೆ ಇರಾನ್ ಪ್ರವೇಶಿಸಿದಳು. ಪಾಸ್‌ಪೋರ್ಟ್ನಲ್ಲಿ ಕ್ಯಾಥರಿನ್ ಪೆರಸ್ ಶಕ್ದಂ ಎಂಬ ಹೆಸರಿತ್ತು. ಇಸ್ರೇಲ್ ನಾಗರಿಕರಿಗೆ ಇರಾನ್ ಪ್ರವೇಶಕ್ಕೆ ನಿಷೇಧವಿದೆ ಅನ್ನುವುದು ಇಲ್ಲಿ ಗಮನಾರ್ಹ. ಈ ಕ್ಯಾಥರಿನ್ ಬುದ್ಧಿವಂತೆ. ನಿರರ್ಗಳವಾಗಿ ಮಾತಾಡಬಲ್ಲವಳು. ಈಕೆ ಶ್ರದ್ಧಾವಂತ ಮುಸ್ಲಿಮಳಂತೆ ತನ್ನನ್ನು ಬಿಂಬಿಸಿಕೊಂಡಳು. ಕ್ರಾಂತಿಯ ಭಾಷೆಯಲ್ಲಿ ಇಸ್ಲಾಮೀ ಆದರ್ಶವನ್ನು ಆಕರ್ಷಕವಾಗಿ ವ್ಯಕ್ತಪಡಿಸತೊಡಗಿದಳು. ಬಹಳ ಬೇಗ ಇರಾನ್ ನಲ್ಲಿ ಈಕೆಗೊಂದು ಐಡೆಂಟಿಟಿ ಪ್ರಾಪ್ತವಾಯಿತು. ವಿದೇಶಿಯರು ಅದರಲ್ಲೂ ಮಹಿಳೆಯರು ಪ್ರವೇಶಿಸಲೂ ಸಾಧ್ಯವಿಲ್ಲದಂಥ ಹಲವು ಪ್ರದೇಶಗಳಿಗೆ ಈಕೆ ಭೇಟಿ ನೀಡಿದಳು. ಇರಾನಿನ ಟಿವಿಯಲ್ಲಿ ಕಾರ್ಯಕ್ರಮವನ್ನು ನೀಡಿದಳು. ಸರ್ವೋಚ್ಛ ಧಾರ್ಮಿಕ ನಾಯಕ ಅಲಿ ಖಾಮಿನೈ  ಅವರ ಇಂಗ್ಲಿಷ್ ವೆಬ್ ಸೈಟ್‌ನಲ್ಲಿ ಲೇಖನವನ್ನೂ ಬರೆಯುವಷ್ಟರ ಮಟ್ಟಿಗೆ ಈಕೆ ಎತ್ತರಕ್ಕೆ ಬೆಳೆದಳು. 2017ರಲ್ಲಿ ಇಬ್ರಾಹೀಮ್ ರಈಸಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದಳು. ಅವರು ಆ ಬಳಿಕ ಅಧ್ಯಕ್ಷ ರಾಗಿಯೂ ಆಯ್ಕೆಯಾದರು. ಈಕೆ ಈ ಎಲ್ಲ ಪ್ರಭಾವವನ್ನು ಬಳಸಿ ಇರಾನಿನ ಉನ್ನತ ಸೇನಾ ನಾಯಕರು ಮತ್ತು ರಾಜಕಾರಣಿಗಳನ್ನು ಭೇಟಿಯಾಗಿರುವ ಮತ್ತು ಅವರೊಂದಿಗೆ ಹತ್ತಿರದ ಸಂಬಂಧವನ್ನು ಬೆಳೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಇರಾನಿನ ಮಾಜಿ ಅಧ್ಯಕ್ಷ  ಅಹ್ಮದಿ ನೆಜಾದ್ ಕೂಡಾ ಹೇಳಿದ್ದಾರೆ.

ಸದ್ಯ ಈಕೆ ಇರಾನಿನಿಂದ ತಪ್ಪಿಸಿಕೊಂಡಿದ್ದಾದ್ದಾಳೆ ಎಂಬ ವರದಿಯೂ ಇದೆ. ಈಕೆ ಇಸ್ರೇಲ್‌ನ ಗೂಢಚಾರಿಣಿ ಎಂದು ಇರಾನಿನ ಮಾಧ್ಯಮಗಳೂ ಬರೆದಿವೆ. ತಿಂಗಳುಗಳ ಹಿಂದೆ ಇಸ್ರೇಲ್‌ನ ವಾಯಿಸ್ ಆಫ್ ಇಸ್ರೇಲ್ ಪತ್ರಿಕೆಯಲ್ಲಿ ಈಕೆ ಲೇಖನ ಬರೆದಿರುವುದೂ ಇದೀಗ ಪತ್ತೆಯಾಗಿದೆ. ಅಂದಹಾಗೆ,

ಜೂನ್ 13ರಂದು ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಅಣು ವಿಜ್ಞಾನಿಗಳು ಮತ್ತು ಸೇನಾ ಮುಖಂಡರನ್ನು ಹತ್ಯೆ ಮಾಡಲು  ಇಸ್ರೇಲ್ ಯಶಸ್ವಿಯಾದದ್ದು ಹೇಗೆ ಎಂಬ ಪ್ರಶ್ನೆಯ ಬೆನ್ನು ಬಿದ್ದು ಹೋದಾಗ ಸಿಕ್ಕವರೇ ಈ ಕ್ಯಾಥರಿನ್. ಮತ್ತಷ್ಟು ಒಳಹೊಕ್ಕು ಹುಡುಕಿದಾಗ ಈ ಎಲಿ ಕೋಹೆನ್ ಪತ್ತೆಯಾದ.

ಕೈಕೈ ಹಿಸುಕಿಕೊಳ್ಳುವ ಸಂಕಟ ಇರಾನಿನದು.