Showing posts with label ಅಖ್ಲಾಕ್ ನ ಫ್ರಿಡ್ಜ್ ನಲ್ಲಿ ಮಾಂಸ ಹುಡುಕುವ ಬಿಜೆಪಿಯಿಂದ ಮಥುರಾದಲ್ಲಿ ಜೋಗುಳ. Show all posts
Showing posts with label ಅಖ್ಲಾಕ್ ನ ಫ್ರಿಡ್ಜ್ ನಲ್ಲಿ ಮಾಂಸ ಹುಡುಕುವ ಬಿಜೆಪಿಯಿಂದ ಮಥುರಾದಲ್ಲಿ ಜೋಗುಳ. Show all posts

Thursday, 9 June 2016

  ಅಖ್ಲಾಕ್ ನ ಫ್ರಿಡ್ಜ್ ನಲ್ಲಿ ಮಾಂಸ ಹುಡುಕುವ ಬಿಜೆಪಿಯಿಂದ ಮಥುರಾದಲ್ಲಿ ಜೋಗುಳ

         1. ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್ ಮತ್ತು 60 ಲೀಟರ್ ಡೀಸೆಲ್ ಲಭ್ಯವಾಗಬೇಕು.
  2. ಚಿನ್ನದ ನಾಣ್ಯಗಳನ್ನು  ಮತ್ತೆ ಚಲಾವಣೆಗೆ ತರಬೇಕು.
  3. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿಯ ನಿಯಮ ಪುಸ್ತಕವನ್ನು ಭಾರತೀಯ ಕಾನೂನಾಗಿ ಮತ್ತು ಆಡಳಿತ ನಿಯಮವಾಗಿ ಪರಿಗಣಿಸಬೇಕು.
  4. ರೂಪಾಯಿ ಬದಲು ಆಝಾದಿ ಹಿಂದ್ ಫೌಜ್ ಎಂಬ ಕರೆನ್ಸಿ  ಚಾಲ್ತಿಗೆ ತರಬೇಕು. .
  5. ದೇಶಾದ್ಯಂತ ಮಾಂಸಾಹಾರವನ್ನು ನಿಷೇಧಿಸಬೇಕು. ಉಲ್ಲಂಘಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
  6. ಜವಾಹರ್ ಪಾರ್ಕನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕು..
  7. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ರದ್ದು ಮಾಡಬೇಕು.....
          ಎಂದು ಮುಂತಾದ ತಲೆತಿರುಕ ಬೇಡಿಕೆಯೊಂದಿಗೆ ಸುಮಾರು 3 ಸಾವಿರದಷ್ಟಿರುವ ಮಂದಿಯ ಗುಂಪು ಉತ್ತರ ಪ್ರದೇಶ ಸರಕಾರದ ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ಮತ್ತು 270 ಎಕರೆಯಷ್ಟು ವಿಸ್ತಾರವಾದ ಜವಾಹರ್ ಬಾಘ್ ಪಾರ್ಕ್ ಅನ್ನು ಸೇರಿಕೊಳ್ಳುವುದು ಮತ್ತು ಎರಡು ವರ್ಷಗಳ ವರೆಗೆ ಅಲ್ಲಿ ಕಾನೂನುಬಾಹಿರವಾಗಿ ತಂಗುವುದೆಲ್ಲ ಏನು? ಸ್ವಾಧೀನ್ ಭಾರತ್ ಸುಭಾಷ್ ಸೇನಾ ಎಂಬ ಗುಂಪನ್ನು ಕಟ್ಟಿಕೊಂಡ ರಾಮ್ ವೃಕ್ಷ ಯಾದವ್ ಮತ್ತು ಆತನ ಅನುಯಾಯಿಗಳಿಗೆ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು? ಉತ್ತರ ಪ್ರದೇಶದ ಮಥುರಾದಲ್ಲಿ ಕಳೆದ ವಾರ ನಡೆದ ಘಟನೆ ಈ ಪ್ರಶ್ನೆಯನ್ನು ನಮ್ಮೆದುರು ಮತ್ತೆ ಮತ್ತೆ ಮುಂದಿಡುತ್ತದೆ. ಒಂದು ವೇಳೆ, 2014 ಎಪ್ರಿಲ್‍ನಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಿಂದ ಹೊರಟ ಸ್ವಾಧೀನ್ ಭಾರತ್ ವಿದಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ತಂಡದ ನಾಯಕನ ಹೆಸರು ರಾಮ್ ವೃಕ್ಷ ಯಾದವ್ ಎಂಬುದರ ಬದಲು ಓರ್ವ ಮುಸ್ಲಿಮನದ್ದಾಗಿರುತ್ತಿದ್ದರೆ ಮತ್ತು ಆತ ಸುಭಾಷ್‍ರ ಬದಲು ಅಬ್ದುಲ್ ಕಲಾಮ್ ಆಝಾದ್‍ರ ಅನುಯಾಯಿಯಾಗಿ ಗುರುತಿಸಿ ಜವಾಹರ್ ಪಾರ್ಕ್‍ನಲ್ಲಿ ತನ್ನ ಗುಂಪಿನೊಂದಿಗೆ ಎರಡು ವರ್ಷಗಳ ವರೆಗೆ ತಂಗಿ, ಕೊನೆಗೆ ವ್ಯವಸ್ಥೆಯೊಂದಿಗೆ ಶಸ್ತ್ರಾಸ್ತ್ರ ಕಾದಾಟಕ್ಕೆ ಇಳಿದಿದ್ದರೆ ಆ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹೇಗಿರುತ್ತಿದ್ದುವು? ಈ ಪ್ರಶ್ನೆ ತುಸು ಉತ್ಪ್ರೇಕ್ಷೆಯದ್ದಾಗಿ ಕಂಡರೂ ಇವತ್ತಿನ ರಾಜಕೀಯ, ಸಾಮಾಜಿಕ ವಾತಾವರಣದಲ್ಲಿ ಅಸಂಬದ್ಧವೇನೂ ಅಲ್ಲ. 2014ರಲ್ಲಿ ಮಧ್ಯಪ್ರದೇಶದಿಂದ ಹೊರಟ ಸ್ವಾಧೀನ್ ಭಾರತ್ ಸೇನಾ ಎಂಬ ಈ ಗುಂಪು ಮಥುರಾದ ಜವಾಹರ್ ಪಾರ್ಕ್‍ನಲ್ಲಿ ಕೇವಲ ಎರಡು ದಿನಗಳ ಕಾಲ ತಂಗುವುದಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿಯನ್ನು ಪಡೆದುಕೊಂಡಿತ್ತು. ಅವರ ಆಧ್ಯಾತ್ಮ ಗುರು ಬಾಬಾ ಜೈ ಗುರುದೇವ್‍ರು 2012ರಲ್ಲಿ ಮೃತಪಟ್ಟಿದ್ದು, ಅವರು ಸುಮಾರು 12 ಸಾವಿರ ಕೋಟಿ ಆಸ್ತಿಯನ್ನು ಬಿಟ್ಟು ಹೋಗಿದ್ದರು. ಈ ಕುರಿತಂತೆ ರಾಮ್ ವೃಕ್ಷ ಯಾದವ್ ಸಹಿತ ಬಾಬಾರ ಮೂವರು ಪ್ರಮುಖ ಅನುಯಾಯಿ ನಾಯಕರಲ್ಲಿ ವಿವಾದವೂ ಬೆಳೆದಿತ್ತು. ಆದ್ದರಿಂದ ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆಸಲಿರುವ ಪ್ರತಿಭಟನೆಗಿಂತ ಮೊದಲು ಪಾರ್ಕ್‍ನಲ್ಲಿ ಎರಡು ದಿನಗಳ ಕಾಲ ತಂಗಿ ಹೋಗುವುದಾಗಿ ಈ ಗುಂಪು ಹೇಳಿಕೊಂಡಿತ್ತು. ಆದರೆ ಬಳಿಕ  ಈ ಗುಂಪು ಅಲ್ಲಿಂದ ಕದಲಲೇ ಇಲ್ಲ. ಜವಾಹರ್ ಪಾರ್ಕನ್ನು ವಾಸಯೋಗ್ಯಗೊಳಿಸುವುದಕ್ಕಾಗಿ 2400 ಮರಗಳನ್ನು ಅದು ಸುಟ್ಟು ಹಾಕಿತು. ತೋಟಗಾರಿಕಾ ಇಲಾಖೆಯ ಸಿಬಂದಿಗಳನ್ನು ಓಡಿಸಿತು. ಆ ಪಾರ್ಕ್‍ನೊಳಗೆ ಪ್ರವೇಶಿಸಲು ಬಯಸುವವರನ್ನು ಬಲವಂತದಿಂದ ಹೊರಹಾಕತೊಡಗಿತು. ಕ್ರಮೇಣ ಪರ್ಯಾಯ ಸರಕಾರವೇ ಅಲ್ಲಿ ಸ್ಥಾಪಿತವಾಯಿತು.ತಮ್ಮದೇ ಸ್ವಂತ ಕಾನೂನು, ಕಾರಾಗ್ರಹ, ಕೋರ್ಟು ತಲೆ ಎತ್ತಿತು. ಸಾವಿರ ಮಂದಿಯ ಪ್ರತ್ಯೇಕ ಸೇನೆ ತಯಾರಾಯಿತು. ಈ ಸಾಮ್ರಾಜ್ಯದ ಒಳಗಿರುವ ಪ್ರತಿ ವ್ಯಕ್ತಿಗೆ ಗುರುತಿನ ಚೀಟಿಯನ್ನು ನೀಡಲಾಯಿತಲ್ಲದೆ , ಇಲ್ಲಿಂದ ಹೊರಹೋಗಬೇಕಾದರೆ ಎಕ್ಸಿಟ್ ಪಾಸ್ ಪಡಕೊಳ್ಳುವುದು ಕಡ್ದಾಯವಾಯಿತು. ಈ ಕುರಿತಂತೆ ವಿಜಯಪಾಲ್ ಸಿಂಗ್ ತೋಮರ್ ಎಂಬವರು 2014ರಲ್ಲೇ ಕೋರ್ಟ್ ಮೆಟ್ಟಿಲೇರಿದ್ದರು. ಮಾತ್ರವಲ್ಲ, 2015 ಮೇ 20ರಂದೇ ಅಲಹಾಬಾದ್ ಹೈಕೋರ್ಟ್ ಈ ಗುಂಪನ್ನು ಆ ಪಾರ್ಕ್‍ನಿಂದ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿಯೂ ಇತ್ತು. ಇದಾಗಿ ಒಂದು ವರ್ಷದ ಬಳಿಕ ಕಳೆದ ವಾರ ಉತ್ತರ ಪ್ರದೇಶದ ಸರಕಾರ ಈ ಸ್ವಾಧೀನ್ ಭಾರತ್ ತಂಡವನ್ನು ಜವಾಹರ್ ಪಾರ್ಕ್‍ನಿಂದ ತೆರವುಗೊಳಿಸಲು ಮುಂದಾಯಿತು. ಆದರೆ ಅತಿಕ್ರಮಣಕೋರರು ಯಾವ ಮಟ್ಟದಲ್ಲಿ ಆಯುಧಧಾರಿಗಳಾಗಿದ್ದರೆಂದರೆ, ಅದು ಭಯೋತ್ಪಾದಕರ ಅಡಗುತಾಣವಾಗಿತ್ತೇನೋ ಎಂದು ಭಯಪಡುವಷ್ಟು. ಭಾರೀ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ವಶಪಡಿಸಿಕೊಳ್ಳಲಾಯಿತು. ಅಚ್ಚರಿಯ ಸಂಗತಿ ಏನೆಂದರೆ, ಕಳೆದ ಎರಡು ವರ್ಷಗಳಿಂದ 3 ಸಾವಿರ ಮಂದಿಯ ಗುಂಪು ಶಸ್ತ್ರಾಸ್ತ್ರಗಳ ಸಹಿತ ಸರಕಾರಿ ಉದ್ಯಾನದಲ್ಲಿ ಅಕ್ರಮವಾಗಿ ನೆಲೆಸಿದ್ದರೂ ಯಾವ ರಾಜಕೀಯ ಪಕ್ಷವೂ ಆ ಬಗ್ಗೆ ಮಾತನ್ನೇ ಆಡದಿರುವುದು.ಈ ನಡುವೆ ಲೋಕಸಭಾ ಚುನಾವಣೆ ನಡೆದಿದೆ. ರಾಜ್ಯ ವಿಧಾನಸಭೆಯು ಚುನಾವಣೆಯ ತಯಾರಿಯಲ್ಲಿದೆ. ಯಾಕೆ ಯಾವ ಪಕ್ಷಕ್ಕೂ ಇದು ಇಶ್ಯೂ ಆಗಿ ಕಾಣಲಿಲ್ಲ? ಒಂದು ವೇಳೆ ಸುಭಾಷ್ ಸೇನಾದ ಬದಲು ಅಬ್ದುಲ್ ಕಲಾಮ್ ಆಝಾದ್ ಸೇನಾ ಆಗಿರುತ್ತಿದ್ದರೆ ಪಕ್ಷಗಳು ಈ ಮಟ್ಟದಲ್ಲಿ ಮೌನ ವಹಿಸುತ್ತಿದ್ದುವೇ? ದಾದ್ರಿಯ ಅಖ್ಲಾಕ್ ಮನೆಯ ಫ್ರಿಡ್ಜ್ ನಲ್ಲಿದ್ದ  ಮಾಂಸದ ಬಗ್ಗೆ  ಇನ್ನೂ ಕುತೂಹಲ ವ್ಯಕ್ತಪಡಿಸುತ್ತಿರುವ ಮತ್ತು ಆ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿರುವ ಬಿಜೆಪಿಯ ನಿಲುವು ಏನಿರುತ್ತಿತ್ತು? ಮಾರಕ ಆಯುಧಗಳನ್ನು ಹೊಂದಿದ ಆಝಾದ್ ಗುಂಪನ್ನು ಅದು ದೇಶವಿರೋಧಿಯಾಗಿ ಕಾಣುತ್ತಿರಲಿಲ್ಲವೇ? ಪಾಕ್‍ನ ಐಎಸ್‍ಐನೊಂದಿಗೂ ಇರಾಕ್ ಮತ್ತು ಸಿರಿಯಾಗಳಲ್ಲಿರುವ ಐಎಸ್‍ಐನೊಂದಿಗೂ ಇಂಡಿಯನ್ ಮುಜಾಹಿದೀನ್‍ನೊಂದಿಗೂ ಈ ಗುಂಪಿಗಿರುವ ಸಂಬಂಧವನ್ನು ಅದು ಪತ್ತೆ ಹಚ್ಚುತ್ತಿರಲಿಲ್ಲವೇ? ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮುಖ್ಯ ವಿಷಯವಾಗಿ ಅದು ಈ ವಿಷಯವನ್ನೇ ಎತ್ತಿಕೊಳ್ಳುತ್ತಿರಲಿಲ್ಲವೇ? ಮುಸ್ಲಿಮರ ಒರಟುತನಕ್ಕೆ, ಅವರ ಭಯೋತ್ಪಾದಕ ಮನಸ್ಥಿತಿಗೆ, ದೇಶವಿರೋಧಿ ನಿಲುವಿಗೆ ಪುರಾವೆಯಾಗಿ ಈ ಘಟನೆಯನ್ನು ಉದಾಹರಿಸಿಕೊಂಡು ಎಷ್ಟು ಟಿ.ವಿ. ಡಿಬೆಟ್‍ಗಳು ನಡೆಯುತ್ತಿರಲಿಲ್ಲ? ಎಷ್ಟು ಲೇಖನಗಳು ಪ್ರಕಟವಾಗುತ್ತಿರಲಿಲ್ಲ? ಎಷ್ಟೆಷ್ಟು ಪತ್ರಿಕಾ ಹೇಳಿಕೆಗಳು, ಭಾಷಣಗಳು ನಡೆಯುತ್ತಿರಲಿಲ್ಲ?
  ನಿಜವಾಗಿ, 2012ರಲ್ಲಿ ಮೃತಪಟ್ಟ ಬಾಬಾ ಜೈ ಗುರುದೇವ್‍ರ ಅನುಯಾಯಿಗಳ ಪಟ್ಟಿಯಲ್ಲಿ ರಾಜನಾಥ್ ಸಿಂಗ್, ಮುಲಾಯಂ ಸಿಂಗ್‍ರಿಂದ ಹಿಡಿದು ಇಂದಿರಾ ಗಾಂಧಿಯ ವರೆಗೆ ಎಲ್ಲರೂ ಇದ್ದಾರೆ. ಅಧ್ಯಾತ್ಮ ಕ್ಷೇತ್ರವು ಈ ದೇಶದಲ್ಲಿ ಎಷ್ಟರ ಮಟ್ಟಿಗೆ ಕಲುಷಿತಗೊಂಡಿದೆ ಅನ್ನುವುದು ಪ್ರತಿದಿನದ ಬೆಳವಣಿಗೆಗಳು ಇಲ್ಲಿ ಸ್ಪಷ್ಟಪಡಿಸುತ್ತಲೇ ಇವೆ. ಸ್ವಘೋಷಿತ ದೇವಮಾನವರು, ಗುರುಗಳೆಲ್ಲ ತಮ್ಮ ಅನುಯಾಯಿಗಳ ಪಟ್ಟಿಯಲ್ಲಿ ರಾಜಕಾರಣಿಗಳನ್ನು ತಪ್ಪದೇ ಸೇರಿಸಿಕೊಳ್ಳುತ್ತಿರುತ್ತಾರೆ. ರಾಜಕಾರಣಿ ಮತ್ತು ಆಧ್ಯಾತ್ಮ ಗುರುಗಳ ನಡುವಿನ ಸಂಪರ್ಕ ಬಲಗೊಂಡಷ್ಟೂ ವಂಚನೆಗೆ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅಧ್ಯಾತ್ಮದ ಹೆಸರಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಉಡಾಫೆ ನಿಲುವು ಅನೇಕರಲ್ಲಿದೆ. ಅದಕ್ಕೆ ಪೂರಕವಾಗಿ ರಾಜಕಾರಣಿಗಳನ್ನು ಈ ಕ್ಷೇತ್ರ ಬಳಸಿಕೊಳ್ಳುತ್ತಿರುತ್ತದೆ. ಇಲ್ಲದಿದ್ದರೆ ಈ ಸ್ವಾಧೀನ್ ಭಾರತ್ ಗುಂಪನ್ನು ಜವಾಹರ್ ಪಾರ್ಕ್‍ನಿಂದ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ 2015ರಲ್ಲೇ ಆದೇಶಿಸಿದ್ದರೂ ಮತ್ತೂ ಒಂದು ವರ್ಷದ ವರೆಗೆ ಮಥುರಾ ಜಿಲ್ಲಾಡಳಿತ ಮೌನವಾದದ್ದು ಯಾಕೆ?  ಸರಕಾರಿ ಭೂಮಿಯಲ್ಲಿ ಸೋಗೆ ಮಾಡಿ ಗುಡಿಸಲನ್ನು ಕಟ್ಟಿಕೊಂಡ ಬಡವನ ಬಗ್ಗೆ ಜಿಲ್ಲಾಡಳಿತ ಇಷ್ಟು ಸಹನೆ ವಹಿಸುತ್ತಿತ್ತೇ?
  ಏನೇ ಆಗಲಿ, ಮಥುರಾದ ಜವಾಹರ್ ಉದ್ಯಾನವು ಈ ದೇಶವನ್ನಾಳುವ ಬಿಜೆಪಿಯ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಬಿಜೆಪಿಯೇ ಯಾಕೆ ಮುಖ್ಯ ಅಂದರೆ, ಬಿಜೆಪಿಯಷ್ಟು ಪ್ರಚ್ಛನ್ನವಾಗಿ
ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಬೇರೆ ರಾಷ್ಟ್ರೀಯ ಪಕ್ಷಗಳಿಲ್ಲ ಎಂಬುದರಿಂದ. ಮುಝಫ್ಫರ್ ನಗರಕ್ಕೆ ಬೆಂಕಿ ಕೊಟ್ಟು ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿಗೆ ಜವಾಹರ್ ಪಾರ್ಕ್‍ಗೆ ಬೆಂಕಿ ಕೊಟ್ಟು ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಕಷ್ಟವೇನೂ ಇರಲಿಲ್ಲ. ಆದರೆ ಮುಝಫ್ಫರ್ ನಗರಕ್ಕಿದ್ದ ಹಿಂದೂ-ಮುಸ್ಲಿಮ್ ವಿಶೇಷತೆ ಜವಾಹರ್ ಪಾರ್ಕ್‍ಕೆ ಇಲ್ಲ ಎಂಬುದೇ ಬಿಜೆಪಿಯ ಪಾಲಿನ ಬಹುದೊಡ್ಡ ಹಿನ್ನಡೆ. ಆದ್ದರಿಂದಲೇ ಅದು ಸ್ವಾಧೀನ್ ಭಾರತ್ ಗುಂಪಿನ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳ ಬಗ್ಗೆಯಾಗಲಿ, ಎರಡು ವರ್ಷಗಳ ವರೆಗೆ ಅಕ್ರಮವಾಗಿ ನೆಲೆಸಿರುವ ಬಗ್ಗೆಯಾಗಲಿ ಗಂಭೀರವಾಗಿ ಮಾತಾಡುತ್ತಲೇ ಇಲ್ಲ. ಅದನ್ನು ದೇಶದ್ರೋಹವಾಗಿಯೂ ಅದು ಕಾಣುತ್ತಿಲ್ಲ. ಸ್ವಾದೀನ್ ಭಾರತ್ ಗುಂಪನ್ನು ಖಂಡಿಸಲು ಬಿಜೆಪಿ ಬಳಸಿರುವ ಪದಗಳಲ್ಲಿ ಎಷ್ಟು ಮೃದುತನವಿದೆಯೆಂದರೆ, ಅವು ಜೋಗಳದಷ್ಟೇ ಇಂಪಾಗಿವೆ. ಈ ಬಗೆಯ ದ್ವಂದ್ವಕ್ಕೆ ಧಿಕ್ಕಾರವನ್ನಲ್ಲದೇ ಇನ್ನೇನು ತಾನೇ ಹೇಳಲು ಸಾಧ್ಯ?