Showing posts with label ನಮ್ಮ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿರುವ ಕಪ್ಪು ಕತ್ತಿನ ಕೊಕ್ಕರೆ. Show all posts
Showing posts with label ನಮ್ಮ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿರುವ ಕಪ್ಪು ಕತ್ತಿನ ಕೊಕ್ಕರೆ. Show all posts

Friday, 28 August 2015

ನಮ್ಮ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿರುವ ಕಪ್ಪು ಕತ್ತಿನ ಕೊಕ್ಕರೆ

     ಪರಿಸರ ಸಂರಕ್ಷಣೆ, ಪರಿಸರ ಹೋರಾಟಗಾರರು, ಪರಿಸರ ಇಲಾಖೆ.. ಮುಂತಾದುವುಗಳೆಲ್ಲ ಇವತ್ತು ಈ ದೇಶದಲ್ಲಿ ಯಾವ ಬಗೆಯ ತಿರಸ್ಕಾರಕ್ಕೆ ಈಡಾಗಿದೆಯೆಂಬುದು ಎಲ್ಲರಿಗೂ ಗೊತ್ತು. ಮೇಧಾ ಪಾಟ್ಕರ್, ವಿನಯಕುಮಾರ್, ಪದ್ಮನಾಭನ್, ಗೋಪಾಲ್ ದುಕಾಂಡೆ, ದೇಸರದ.. ಮುಂತಾದವರೆಲ್ಲ ಇವತ್ತು ಈ ದೇಶದಲ್ಲಿ ತಲೆ ತಪ್ಪಿಸಿಕೊಂಡು ಓಡಾಡಬೇಕಾದಂತಹ ಸ್ಥಿತಿಯಿದೆ. ಅವರನ್ನು ದೇಶದ್ರೋಹಿ ಎನ್ನಲಾಗುತ್ತಿದೆ. ಅಭಿವೃದ್ಧಿ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ‘ಬೃಹತ್ ಯೋಜನೆಗಳ ಹೊರತು ಅಭಿವೃದ್ಧಿ ಸಾಧ್ಯವಿಲ್ಲ..’ ಎಂಬೊಂದು ಪ್ರಚಾರದ ಮಧ್ಯೆ ಸಾಮಾಜಿಕ ಹೋರಾಟಗಾರರು, ಪರಿಸರ ಸ್ನೇಹಿಗಳೆಲ್ಲ ವಿಲನ್‍ಗಳಾಗಿ ಚಿತ್ರಿತರಾಗುತ್ತಿದ್ದಾರೆ. ಇಂಥದ್ದೊಂದು ಸ್ಥಿತಿಯಲ್ಲಿ, ವಿರಳ ಜಾತಿಯ ಹಲ್ಲಿ ಮತ್ತು ಹಾವುಗಳು ವಿಶ್ವದಲ್ಲಿಯೇ ಅತಿ ದೊಡ್ಡದಾದ ಅಭಿವೃದ್ಧಿ ಯೋಜನೆಯೊಂದನ್ನು ತಡೆದ ಸುದ್ದಿಯು ಹೊರಬಿದ್ದಿದೆ. ಇದು ಸಾಧ್ಯವಾದುದು ಆಸ್ಟ್ರೇಲಿಯಾದಲ್ಲಿ. 16.5 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಕಲ್ಲಿದ್ದಲು ಗಣಿಗಾರಿಕೆಯನ್ನು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ಪ್ರಾರಂಭಿಸಲು ಭಾರತದ ಅದಾನಿಯವರು ಮುಂದಾಗಿದ್ದರು. ಎರಡ್ಮೂರು ವರ್ಷಗಳ ಮೊದಲೇ ಅವರು ಈ ಯೋಜನೆಗಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ‘ಪಾರ್ಟಿ ಫಂಡ್' ಅನ್ನೂ ನೀಡಿದ್ದರು. ಮಾತ್ರವಲ್ಲ, ಅವರು ನಿರೀಕ್ಷಿಸಿದಂತೆಯೇ ಸರಕಾರ ಅನುಮತಿಯನ್ನೂ ನೀಡಿತ್ತು. ಆದರೆ ಅಲ್ಲಿನ ನ್ಯಾಯಾಲಯ ಇದೀಗ ಸರಕಾರದ ಈ ಅನುಮತಿಯನ್ನು ರದ್ದುಪಡಿಸಿದೆ. ‘ಈ ಯೋಜನೆಯಿಂದಾಗಿ ಕ್ವೀನ್ಸ್ ಲ್ಯಾಂಡ್‍ನಲ್ಲಿರುವ ಅಪರೂಪದ ಹಲ್ಲಿ ಮತ್ತು ಹಾವುಗಳ ಪ್ರಬೇಧಗಳು ನಾಶವಾಗುವ ಸಾಧ್ಯತೆಯಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಸೂಕ್ತವಲ್ಲ’ ಎಂದು ಅದು ಅಭಿಪ್ರಾಯಪಟ್ಟಿದೆ. ವಿಶೇಷ ಏನೆಂದರೆ, ಹಾವು, ಹಲ್ಲಿ, ಪಾರಿವಾಳ, ಜಿಂಕೆಗಳೆಲ್ಲ ಬರೇ ಆಸ್ಟ್ರೇಲಿಯಾದಲ್ಲಿ ಮಾತ್ರ ಇರುವುದಲ್ಲ. ಜಗತ್ತಿನೆಲ್ಲೆಡೆ ಇದೆ. ಭಾರತದ ಅರುಣಾಚಲ ಪ್ರದೇಶದಲ್ಲೂ ಇಂಥದ್ದೇ ಒಂದು ವಾತಾವರಣ ಇದೆ. ಝೆುಮಿತಾಂಗ್ ಎಂಬಲ್ಲಿ 780 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಯೋಜನೆಯೊಂದನ್ನು ಸರಕಾರ ಹಮ್ಮಿಕೊಂಡಿದೆ. ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಮೂಲಕ ಈ ವಿದ್ಯುತ್ ಅನ್ನು ಉತ್ಪಾದಿಸುವ ಗುರಿ ಸರಕಾರದ್ದಾದರೆ, ಪುಟ್ಟ ಕೊಕ್ಕರೆಗಳು ಇದನ್ನು ಪ್ರಶ್ನಿಸುತ್ತಿವೆ. ಚೀನಾ, ಭೂತಾನ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಕಪ್ಪು ಕತ್ತಿನ ಅಪರೂಪದ ಕೊಕ್ಕರೆಗಳು ಇವು. ಚಳಿಗಾಲದಲ್ಲಿ ಹೆಚ್ಚಾಗಿ ಅವು ಈ ಪ್ರದೇಶದಲ್ಲಿ ಠಿಕಾಣಿ ಹೂಡುತ್ತವೆ. ಒಂದು ವೇಳೆ, ಈ ಅಣೆಕಟ್ಟು ನಿರ್ಮಾಣಗೊಂಡರೆ ಕೊಕ್ಕರೆ ತನ್ನ ಅಸ್ತಿತ್ವವನ್ನು ಕಳಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ, ಇದು ಕೇವಲ ಕೊಕ್ಕರೆಯ ಪ್ರಶ್ನೆಯಲ್ಲ. ಒಂದು ಜೀವಿಯ ಅಸ್ತಿತ್ವದ ಪ್ರಶ್ನೆ. ಮನುಷ್ಯರಂತೆ ಮಾತಾಡುವ, ಬಂದೂಕು ಎತ್ತುವ ಅಥವಾ ಪ್ರತಿಭಟನೆ ಹಮ್ಮಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಒಂದು ಪಕ್ಷಿಯ ಜೀವಿಸುವ ಹಕ್ಕನ್ನು ಕಬಳಿಸುವ ಸ್ವಾತಂತ್ರ್ಯ ಮನುಷ್ಯರಿಗಿದೆಯೇ? ಅಣೆಕಟ್ಟು ಮನುಷ್ಯರ ಅಗತ್ಯ. ವಿದ್ಯುತ್ತೂ ಮನುಷ್ಯರದ್ದೇ ಬೇಡಿಕೆ. ಹೀಗೆ ಬರೇ ಮನುಷ್ಯರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕಾಲ ಕಾಲಗಳಿಂದ ವಾಸಿಸುತ್ತಿರುವ ಕೊಕ್ಕರೆಯ ಮನೆಯನ್ನು ನಾಶಪಡಿಸುವುದು ನೈತಿಕವೇ? ವಿದ್ಯುತ್ ಅನ್ನು ಕೊಕ್ಕರೆ ಉಪಯೋಗಿಸುವುದಿಲ್ಲ. ಪಕ್ಷಿಗಳು ನೀರಿಗಾಗಿ ಅಣೆಕಟ್ಟನ್ನು ಆಶ್ರಯಿಸುತ್ತಲೂ ಇಲ್ಲ. ಅವು ತಮ್ಮ ಪಾಡಿಗೆ ಮನುಷ್ಯರಿಂದ ದೂರ ಇದ್ದುಕೊಂಡು ಬದುಕುತ್ತವೆ. ಮನುಷ್ಯ ಮಾತ್ರ ತನ್ನ ಬದುಕನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅವುಗಳ ಬದುಕನ್ನು ನಾಶ ಮಾಡುತ್ತಾನೆ. ಪ್ರತಿಭಟಿಸುವ ಸಾಮರ್ಥ್ಯ ಇಲ್ಲದ ಅವು ಕ್ರಮೇಣ ಕಣ್ಮರೆಯಾಗುತ್ತವೆ. ಅಷ್ಟಕ್ಕೂ, ಅಭಿವೃದ್ಧಿಯ ಬೆನ್ನು ಹತ್ತಿರುವ ವ್ಯವಸ್ಥೆಯು ಈ ಕಣ್ಮರೆಯನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಭಿವೃದ್ಧಿಯ ಹೆಸರಲ್ಲಿ ಮನುಷ್ಯರನ್ನೇ ನಿರ್ಗತಿಕರನ್ನಾಗಿಸಲು ಹಿಂಜರಿಯದ ವ್ಯವಸ್ಥೆಯಲ್ಲಿ ಮನುಷ್ಯರೆದುರು ಏನೇನೂ ಅಲ್ಲದ ಪಕ್ಷಿಗಳು ಪ್ರಾಮುಖ್ಯತೆ ಪಡಕೊಳ್ಳುವುದಾದರೂ ಹೇಗೆ? ಅಧಿಕಾರದ ಬದಲಾವಣೆಯಲ್ಲಿ ಕೊಕ್ಕರೆಗಳ ಪಾತ್ರ ಶೂನ್ಯ. ಅವು ಓಟು ಹಾಕಲ್ಲ. ಧರಣಿ ಕೂರಲ್ಲ. ಪ್ರತಿಭಟಿಸಲ್ಲ. ಹೀಗಿರುವಾಗ ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಕುರಿತಾದ ಅವುಗಳ ಕಳವಳ ವ್ಯವಸ್ಥೆಗೆ ಅರ್ಥವಾಗುವುದು ಹೇಗೆ?
 ಅಭಿವೃದ್ಧಿಯ ಕುರಿತಂತೆ ನಮ್ಮಲ್ಲೊಂದು ಭ್ರಮೆಯಿದೆ. ಈ ಭ್ರಮೆ ಎಷ್ಟು ಅತಿರೇಕ ಮಟ್ಟದಲ್ಲಿ ಇದೆಯೆಂದರೆ, ಇದರ ಕುರಿತು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವವರೆಲ್ಲ ದೇಶದ್ರೋಹಿಗಳು ಎಂಬಷ್ಟು. ನರ್ಮದಾ ಯೋಜನೆಯಿಂದಾಗಿ ಮುಳುಗುವ ಪ್ರದೇಶಗಳು, ನಿರ್ಗತಿಕರಾಗುವ ಮನುಷ್ಯರು, ಗದ್ದೆಗಳು, ಅರಣ್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಕುರಿತಂತೆ ದನಿಯೆತ್ತಿದ ಮೇಧಾ ಪಾಟ್ಕರ್ ಇವತ್ತು ಗೊಂದಲಕಾರಿ ಎಂಬ ಹಣೆಪಟ್ಟಿಯೊಂದಿಗೆ ಓಡಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ಕುಡಂಕುಲಮ್ ಅಣುಸ್ಥಾವರವು ಪರಿಸರ ಮತ್ತು ನಾಗರಿಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದ ವಿನಯಕುಮಾರ್ ಇವತ್ತು ‘ದೇಶದ್ರೋಹಿ' ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಜೈತಾಪುರ್ ಅಣುಸ್ಥಾವರವನ್ನು ವಿರೋಧಿಸುತ್ತಿರುವ ಪದ್ಮನಾಭನ್, ಗೋಪಾಲ್ ದುಕಾಂಡೆ ಇವತ್ತು ವ್ಯವಸ್ಥೆ ದಾಖಲಿಸಿದ ವಿವಿಧ ಕೇಸುಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಅರುಂಧತಿ ರಾಯ್ ಕೂಡ ಈ ಪಟ್ಟಿಯಿಂದ ಹೊರತಾಗಿಲ್ಲ. ಅಂದಹಾಗೆ, ‘ಬೃಹತ್ ಉದ್ಯಮಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂಬ ಪ್ರಚಾರವೊಂದು ನಮ್ಮ ನಡುವೆಯಿದೆ. ಈ ಪ್ರಚಾರ ಎಷ್ಟು ಪ್ರಬಲವಾಗಿದೆಯೆಂದರೆ, ಆ ‘ಅಭಿವೃದ್ಧಿ'ಗಾಗಿ ರೈತನಲ್ಲಿ ಕೇಳದೆಯೇ ಆತನ ಭೂಮಿಯನ್ನು ವಶಪಡಿಸಬಹುದು (ಭೂ ಮಸೂದೆ) ಎಂದು 65% ರೈತರೇ ಇರುವ ದೇಶವೊಂದರ ಸರಕಾರವೇ ವಾದಿಸುತ್ತಿದೆ. ಅದಕ್ಕಾಗಿ ಕಾನೂನನ್ನು ರಚಿಸಲೂ ಪ್ರಯತ್ನಿಸುತ್ತಿದೆ. ಉದ್ಯಮಿಗಳಿಗೆ ಜುಜುಬಿ ಮೊತ್ತಕ್ಕೆ ಭೂಮಿಯನ್ನು ಕೊಡುತ್ತಿದೆ. ನೀರು, ವಿದ್ಯುತ್, ಸಾಲ, ತೆರಿಗೆ ಮನ್ನಾ ಮುಂತಾದ ಸೌಲಭ್ಯಗಳನ್ನು ತರಾತುರಿಯಿಂದ ನೀಡುತ್ತಿದೆ. ಹೀಗೆ ಕಾಂಕ್ರೀಟು ನಾಡನ್ನು ಕಟ್ಟುವ ಧಾವಂತ ನಮ್ಮದು. ಕಬ್ಬಿಣ, ಸಿಮೆಂಟು,  ಹೊೈಗೆ, ಜಲ್ಲಿಕಲ್ಲು.. ಮುಂತಾದುವುಗಳೇ ಸದ್ದು ಮಾಡುವ ಜಗತ್ತು. 24 ತಾಸು ವಿದ್ಯುತ್, 24 ತಾಸು ನೀರು, ಗ್ಯಾಸು, ನ್ಯೂಸುಗಳ ಆರಾಮದಾಯಕ ಜಗತ್ತನ್ನು ಕಟ್ಟುವ ಓಟದಲ್ಲಿ ನಾವಿದ್ದೇವೆ. ಈ ಓಟದ ಹಾದಿಯಲ್ಲಿ ನಾವು ಕಾಡು, ನದಿ, ಗದ್ದೆ, ಪ್ರಾಣಿ, ಪಕ್ಷಿ ಮತ್ತು ಕೆಲವೊಮ್ಮೆ ಮನುಷ್ಯರನ್ನೇ ತಡೆಯೆಂದು ಭಾವಿಸುತ್ತೇವೆ. ಈ ತಡೆಯನ್ನು ದಾಟುವುದಕ್ಕಾಗಿ ರೋಮಾಂಚನಕಾರಿ ಕತೆಗಳನ್ನು ಕಟ್ಟುತ್ತೇವೆ. ಆ ಕತೆಗಳ ತುಂಬ ದೇಶಪ್ರೇಮ ಇರುತ್ತದೆ. ಸಂತಸದಿಂದ ತುಂಬಿ ತುಳುಕುತ್ತಿರುವ ಜನಸಮೂಹವಿರುತ್ತದೆ. ಎಲ್ಲ ಸೌಲಭ್ಯಗಳೂ 24 ತಾಸೂ ಲಭ್ಯವಿರುವ ಅಭಿವೃದ್ಧಿಯಿರುತ್ತದೆ. ಇದನ್ನು ತಡೆಯುವ ಪಾತ್ರಧಾರಿಗಳಾಗಿ ಅರುಂಧತಿ, ಮೇಧಾ, ವಿನಯ್, ಗೋಪಾಲ್ ಕಾಣಿಸಿಕೊಳ್ಳುತ್ತಾರೆ. ಇವರನ್ನು ದೇಶದ್ರೋಹಿಗಳು ಎನ್ನಲಾಗುತ್ತದೆ. ಇವರ ವಿರುದ್ಧ ಮೊಕದ್ದಮೆಯನ್ನು ಹೂಡಲಾಗುತ್ತದೆ.
 ನಿಜವಾಗಿ, ಅದಾನಿಯ ವಿರುದ್ಧ ಆಸ್ಟ್ರೇಲಿಯಾದಲ್ಲಿ ಯಕಶ್ಚಿತ್ ಪುಟ್ಟ ಹಲ್ಲಿಗಳು ಸಾಧಿಸಿದ ವಿಜಯವು ನಮ್ಮ ಅಭಿವೃದ್ಧಿ (ಆDevelopment) ಕಲ್ಪನೆಯ ಸುತ್ತ ಮರು ಚರ್ಚೆಯೊಂದನ್ನು ಹುಟ್ಟು ಹಾಕಬೇಕಿದೆ. ‘ಬೃಹತ್ ಯೋಜನೆಗಳು ಎಲ್ಲಿಯ ವರೆಗೆ, ಯಾಕೆ ಮತ್ತು ಹೇಗೆ..’ ಎಂಬ ಗಂಭೀರ ಚಿಂತನೆಗೆ ಸಮಾಜ ತನ್ನನ್ನು ತೆರೆದುಕೊಳ್ಳಲು ಈ ಪ್ರಕರಣವನ್ನು ಕಾರಣವಾಗಿ ಬಳಸಿಕೊಳ್ಳಬೇಕಿದೆ. ಆಸ್ಟ್ರೇಲಿಯಾದ ಹಲ್ಲಿಯಂತೆ ಭಾರತದ ಕೊಕ್ಕರೆಗೂ ಜೀವಿಸುವ ಹಕ್ಕಿದೆ, ಅದು ಸದಾ ಇರಲಿ. ಅದರ 'ಮನೆ' ಯಾರ ಪಾಲೂ ಆಗದಿರಲಿ.