Showing posts with label ಬಿಜೆಪಿಯ ಗೋ ಪ್ರೇಮವನ್ನು ಪ್ರಶ್ನಿಸಿದ ಗೊಡ್ಡು ಹಸು. Show all posts
Showing posts with label ಬಿಜೆಪಿಯ ಗೋ ಪ್ರೇಮವನ್ನು ಪ್ರಶ್ನಿಸಿದ ಗೊಡ್ಡು ಹಸು. Show all posts

Wednesday, 12 August 2015

ಬಿಜೆಪಿಯ ಗೋ ಪ್ರೇಮವನ್ನು ಪ್ರಶ್ನಿಸಿದ ಗೊಡ್ಡು ಹಸು

    ‘ಗೊಡ್ಡು (ಹಾಲು ನೀಡುವುದನ್ನು ನಿಲ್ಲಿಸಿದ) ಹಸುಗಳಿಗೆ ಉಚಿತ ಮೇವು' ಯೋಜನೆಯನ್ನು ರೂಪಿಸುವುದಾಗಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರು ಭರವಸೆ ನೀಡಿದ ಮರುದಿನವೇ, ‘ಮಾಂಸ ರಫ್ತಿನಲ್ಲಿ ಭಾರತ ಜಗತ್ತಿನಲ್ಲಿಯೇ ಪ್ರಥಮ ಸ್ಥಾನಿಯಾಗಿರುವ ಸುದ್ದಿಯನ್ನು ಮಾಧ್ಯಮಗಳು ಪ್ರಕಟಿಸಿವೆ. ಬಹುಶಃ ಕೇಂದ್ರದ ದ್ವಂದ್ವ ನೀತಿಗೆ ಮತ್ತೊಂದು ಪುರಾವೆ ಇದು. ಕಳೆದೊಂದು ವರ್ಷದಲ್ಲಿ ಭಾರತವು 2.4 ಮಿಲಿಯನ್ ಟನ್ ಮಾಂಸ (ಗೋ ಮತ್ತು ಎಮ್ಮೆ)ವನ್ನು ರಫ್ತು ಮಾಡಿದ್ದು ಇದು ಜಗತ್ತಿನಲ್ಲಿಯೇ ಅತ್ಯಧಿಕ. ಎರಡನೇ ಸ್ಥಾನದಲ್ಲಿರುವ ಬ್ರಝಿಲ್ 2 ಮಿಲಿಯನ್ ಟನ್ ಮಾಂಸವನ್ನು ರಫ್ತು ಮಾಡಿದ್ದರೆ 1.5 ಮಿಲಿಯನ್ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿಯೇ ರಪಾs್ತಗುವ ಒಟ್ಟು ಮಾಂಸದ ಪ್ರಮಾಣದಲ್ಲಿ 23.5% ಭಾರತದಿಂದಲೇ ರಫ್ತಾಗುತ್ತಿದೆ. ಅದರಲ್ಲೂ ಈ ಹಿಂದಿನ ವರ್ಷ ಈ ರಫ್ತಿನ ಪ್ರಮಾಣ 20.8% ಇತ್ತು. ಅಂದರೆ, ಸುಮಾರು 3%ದಷ್ಟು ಹೆಚ್ಚುವರಿ ಮಾಂಸವು ಈ ವರ್ಷ ರಫ್ತಾಗಿದೆ. ವಿಶೇಷ ಏನೆಂದರೆ, ಬಾಸುಮತಿ ಅಕ್ಕಿಯ ರಫ್ತಿನಿಂದ ಪಡೆಯುವ ವಿದೇಶಿ ವರಮಾನಕ್ಕಿಂತ ಹೆಚ್ಚಿನ ವರಮಾನವನ್ನು ಭಾರತವು ಮಾಂಸ ರಫ್ತಿನಿಂದ ಪಡೆದಿದೆ ಎಂಬುದು. ಅಮೇರಿಕದ ಕೃಷಿ ಇಲಾಖೆಯು ಬಿಡುಗಡೆ ಮಾಡಿರುವ ಈ ಅಂಕಿ-ಅಂಶಗಳಿಗಿಂತ ಒಂದು ದಿನ ಮೊದಲು ಗೋರಕ್ಷಣೆಯನ್ನು ಕೇಂದ್ರೀಕರಿಸಿ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಕೃಷಿ ಸಂಶೋಧನಾ ಸಂಸ್ಥೆ (IACR), ರಾಷ್ಟ್ರೀಯ ಗೋಧಾನ್ ಮಹಾಸಂಘ ಮತ್ತು ಪ್ರಾಣಿಗಳ ರಕ್ಷಣೆ ಹಾಗೂ ಕೃಷಿ ಸಂಶೋಧನಾ ಸಂಸ್ಥೆಗಳು ಸೇರಿಕೊಂಡು ಏರ್ಪಡಿಸಿದ್ದ ಈ ಸಭೆಯಲ್ಲಿ ಕೇಂದ್ರ ಮಂತ್ರಿಗಳು, ಸಂಘಪರಿವಾರದ ನಾಯಕರು, ವೈದ್ಯರು, ವಿಜ್ಞಾನಿಗಳೂ ಸೇರಿದಂತೆ ಸುಮಾರು ಸಾವಿರ ಮಂದಿ ಭಾಗವಹಿಸಿದ್ದರು. ಆ ಸಭೆಯ ಉದ್ದೇಶವೇ ಗೋವು. ಅದರ ಸೆಗಣಿ, ಮೂತ್ರ, ದೈಹಿಕ ಸಾಮರ್ಥ್ಯ, ಹಾಲು.. ಸಹಿತ ಎಲ್ಲದರ ಬಗ್ಗೆಯೂ ವಿಸ್ತೃತ ಚರ್ಚೆಯೊಂದನ್ನು ನಡೆಸುವುದು ಮತ್ತು ಗೋರಕ್ಷಣೆಯ ಉದ್ದೇಶದ ಈಡೇರಿಕೆಗಾಗಿ ಅಗತ್ಯ ವಾತಾವರಣವನ್ನು ನಿರ್ಮಿಸುವುದು ಕಾರ್ಯಕ್ರಮದ ಗುರಿಯಾಗಿತ್ತು. ಅಲೋಪತಿಗಿಂತ ‘ಕೌ’(Cow)ಪತಿಯೇ ಹೆಚ್ಚು ಲಾಭಕರ ಎಂದು ಬಿರ್ಲಾ ಗ್ರೂಪ್ ಆಸ್ಪತ್ರೆಗಳ ನಿರ್ದೇಶಕ ಸಂಜಯ್ ಮಹೇಶ್ವರಿ ಹೇಳಿದರು. ಲೈಂಗಿಕ ರೋಗಗಳಿಗೆ ಮತ್ತು ಕ್ಯಾನ್ಸರ್‍ಗೂ ಗೋವಿನಲ್ಲಿ ಮದ್ದಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಗೊಡ್ಡು ಹಸುಗಳಿಗೆ ಉಚಿತ ಮೇವು ಎಂಬ ಭರವಸೆಯನ್ನು ರಾಜನಾಥ್ ಸಿಂಗ್ ನೀಡಿದ್ದು ಈ ಸಭೆಯಲ್ಲಿಯೇ. ನಿಜವಾಗಿ, ಈ ಹೇಳಿಕೆಯ ಮೂಲಕ ಬಿಜೆಪಿಯು ಇದೇ ಮೊದಲ ಬಾರಿಗೆ ಗೋ ಮಾರಾಟಕ್ಕೂ ಅದರ ಸಾಕುವಿಕೆಗೂ ಸಂಬಂಧ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಸಾಮಾನ್ಯವಾಗಿ, ಗೋವು ಮತ್ತು ಎತ್ತನ್ನು ಸಾಕುವುದು ರೈತರು. ಅದವರ ಬದುಕು. ಗದ್ದೆಯ ಉಳುಮೆಗೆ, ಗೊಬ್ಬರಕ್ಕೆ, ಹಾಲು ಮತ್ತಿತರ ಉತ್ಪನ್ನಗಳಿಗೆ ಅವರು ಗೋವನ್ನೇ ಆಶ್ರಯಿಸಿಕೊಂಡಿದ್ದಾರೆ. ಗೋವು ಅವರಿಗೆ ಎಷ್ಟು ಗೌರವಾರ್ಹವೋ ಅಷ್ಟೇ ಆಧಾರಸ್ತಂಭ ಕೂಡ. ಬರೇ ಶ್ರದ್ಧೆಗಾಗಿ ಗೋವು ಸಾಕುವವರು ಈ ದೇಶದಲ್ಲಿ ಎಷ್ಟಿರಬಹುದೆಂದು ಪ್ರಶ್ನಿಸಿದರೆ ರಾಜನಾಥ್ ಆಗಲಿ, ಸಂಘಪರಿವಾರದ ನಾಯಕರಾಗಲಿ ಉತ್ತರಿಸಲಾರರು. ಯಾಕೆಂದರೆ, ಗೋವಿನ ಸುತ್ತ ಅತಿಮಾನುಷ ಪ್ರಭಾವಳಿಯೊಂದನ್ನು ಸೃಷ್ಟಿಸಿದ್ದು ರಾಜಕೀಯವೇ ಹೊರತು ಅದನ್ನು ಸಾಕುವವರಲ್ಲ. ಬಿಜೆಪಿ ಹುಟ್ಟುವುದಕ್ಕಿಂತ ಮೊದಲೇ ಈ ದೇಶದಲ್ಲಿ ಗೋವು ಇತ್ತು. ಅದರ ಸೆಗಣಿ, ಮೂತ್ರ, ಹಾಲು, ಗೊಬ್ಬರ.. ಎಲ್ಲವೂ ಇತ್ತು. ಜೊತೆಗೇ ಶ್ರದ್ಧೆ ಮತ್ತು ಗೌರವವೂ ಇತ್ತು. ಅಲ್ಲದೇ ಆಹಾರ ಕ್ರಮವಾಗಿಯೂ ಅದು ಬಳಕೆಯಲ್ಲಿತ್ತು. ಆದರೆ, ಬಿಜೆಪಿ ಮಾಡಿದ್ದೇನೆಂದರೆ, ಗೋವಿಗೆ ಭಾವನಾತ್ಮಕ ಚೌಕಟ್ಟೊಂದನ್ನು ಕೊಟ್ಟು ಈ ದೇಶದ ಜನರನ್ನು ನಾವು ಮತ್ತು ಅವರು ಎಂದು ವಿಭಜಿಸಿದ್ದು. ಗೋವುಗಳ ಸಾಗಾಟದಲ್ಲಿ ಮತ್ತು ಮಾಂಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಮರನ್ನು ತೋರಿಸಿ, ಮುಸ್ಲಿಮರನ್ನು ಹಿಂದೂ ವಿರೋಧಿಗಳಾಗಿ ಚಿತ್ರಿಸಿದ್ದು. ಗೋಮಾಂಸವನ್ನು ಸೇವಿಸುವುದು ಮತ್ತು ಮಾಂಸೋದ್ಯಮದಲ್ಲಿ ತೊಡಗಿಸಿಕೊಂಡಿರುವುದು ಕೇವಲ ಮುಸ್ಲಿಮರು ಮಾತ್ರ ಎಂಬ ಅಪ್ಪಟ ಸುಳ್ಳನ್ನು ಪ್ರಸಾರ ಮಾಡಿದ್ದು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಒಂದು ಬಹುಮುಖ್ಯ ಪ್ರಶ್ನೆಯಿಂದ ಅದು ತಪ್ಪಿಸಿಕೊಳ್ಳುತ್ತಲೇ ಇತ್ತು. ಅದೆಂದರೆ, ಈ ಗೋವುಗಳನ್ನು ಮಾರಾಟ ಮಾಡುವವರು ಯಾರು ಮತ್ತು ಅವರೇಕೆ ಅದನ್ನು ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆ. ಬರೇ ಶ್ರದ್ಧೆಯೊಂದೇ ಗೋಸಾಕಾಣಿಕೆಗೆ ಕಾರಣ ಎಂದಾದರೆ ಅದರ ಮಾರಾಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬರೇ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕಾಗಿ ಸಾಕಲಾಗುವ ಪ್ರಾಣಿಯು ಹಾಲು ಕೊಡದಿದ್ದರೂ ಉಳುಮೆಗೆ ಬಾರದಿದ್ದರೂ ಶ್ರದ್ಧಾಭಕ್ತಿ ಕಡಿಮೆಕೊಳ್ಳಲು ಸಾಧ್ಯವೂ ಇಲ್ಲ. ಗೋವನ್ನು ಬರೇ ಭಕ್ತಿ ಮತ್ತು ಶ್ರದ್ಧೆಯ ರೂಪಕವಾಗಿ ಪ್ರಸ್ತುತಪಡಿಸುತ್ತಿರುವ ಬಿಜೆಪಿಯ ಮುಂದೆ ಈ ಮಾರಾಟದ ಪ್ರಶ್ನೆಯನ್ನು ಸದಾ ಎಸೆಯಲಾಗುತ್ತಿತ್ತು. ಗೋವನ್ನು ಸಾಕುವವರು ಹಾಲು ಬತ್ತಿದ ಕೂಡಲೇ ಅದನ್ನೇಕೆ ಮಾರಾಟ ಮಾಡುತ್ತಾರೆ ಎಂದು ಪ್ರಶ್ನಿಸಲಾಗುತ್ತಿತ್ತು. ಬಿಜೆಪಿ ಈ ಬಹುಮುಖ್ಯ ಪ್ರಶ್ನೆಗೆ ಉತ್ತರಿಸುವ ಬದಲು ಆಗೊಮ್ಮೆ ಈಗೊಮ್ಮೆ ನಡೆಯುವ ಗೋಕಳ್ಳತನವನ್ನು ಬೊಟ್ಟು ಮಾಡಿ ವಿಷಯಾಂತರ ಮಾಡುತ್ತಿತ್ತು. ಆದರೆ, ಇದೀಗ ರಾಜನಾಥ್ ಸಿಂಗ್‍ರ ಮೂಲಕ ಬಿಜೆಪಿಯು ನಿಜವನ್ನು ಒಪ್ಪಿಕೊಂಡಿದೆ. ಸಾಕಾಣಿಕೆಗೂ ಮಾರಾಟಕ್ಕೂ ಮತ್ತು ಆರ್ಥಿಕತೆಗೂ ಸಂಬಂಧ ಇದೆ ಎಂಬುದನ್ನು ಅದು ಸಮರ್ಥಿಸಿದೆ.
  ನಿಜವಾಗಿ, ಗೋವನ್ನು ಬರೇ ಶ್ರದ್ಧಾ ದೃಷ್ಟಿಯಿಂದ ಮಾತ್ರ ಯಾರೂ ಸಾಕುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅದರಿಂದ ಹಾಲು ಪಡೆಯುವುದು ಹಾಗೂ ಒಂದು ದಿನ ಹಾಲು ತುಸು ಕಡಿಮೆಯಾದರೂ ಮಾಲಕನ ಹಣೆಯಲ್ಲಿ ನೆರಿಗೆಗಳು ಮೂಡುವುದೇ ಇದನ್ನು ಸಾಬೀತುಪಡಿಸುತ್ತದೆ. ಹಾಗಂತ, ಗೋವನ್ನು ಸಾಕುವವರು ಅದನ್ನು ಇತರ ಪ್ರಾಣಿಗಳಂತೆ ನೋಡದೇ ಇರಬಹುದು. ಆಡು, ಕುರಿ, ಕೋಳಿಗಳ ಸ್ಥಾನದಲ್ಲಿ ಅದನ್ನು ನಿಲ್ಲಿಸದೇ ಇರಬಹುದು. ಆದರೆ ಗೋವು ಒಂದು ಆರ್ಥಿಕ ಪ್ರಾಣಿ. ಲಾಭ ಮತ್ತು ನಷ್ಟಗಳನ್ನು ಲೆಕ್ಕ ಹಾಕಿಕೊಂಡೇ ಓರ್ವ ಗೋವನ್ನು ಸಾಕುತ್ತಾನೆ/ಳೆ. ಅದರ ಹಾಲು, ಸೆಗಣಿ, ಸಂತಾನ ಸಾಮಥ್ರ್ಯ ಮತ್ತು ಅದರ ದೇಹ.. ಎಲ್ಲದಕ್ಕೂ ಆರ್ಥಿಕ ಲೆಕ್ಕಾಚಾರವೊಂದು ಇದ್ದೇ ಇದೆ. ಗೋವನ್ನು ಗೌರವಿಸುತ್ತಲೇ ಅಗತ್ಯ ಬಂದಾಗ ಅದನ್ನು ಮಾಂಸಕ್ಕಾಗಿ ಮಾರಾಟ ಮಾಡುವುದನ್ನು ಶ್ರದ್ಧಾಭಂಗ ವಿಷಯವಾಗಿ ಆತ ಕಾಣದಿರುವುದು ಈ ಕಾರಣದಿಂದಲೇ. ಹಸು ಗೊಡ್ಡಾದಾಗ ಮಾಲಿಕ ಮಾರುತ್ತಾನೆ ಮತ್ತು ಇನ್ನೊಂದನ್ನು ಖರೀದಿಸುತ್ತಾನೆ ಅಥವಾ ಗೊಡ್ಡು ಹಸುವಿನ ಮರಿಗಳ ಮೇಲೆ ಆಶ್ರಯ ಪಡೆಯುತ್ತಾನೆ. ಸಾಮಾನ್ಯವಾಗಿ, ಗದ್ದೆ ಇಲ್ಲದವರ ಹಟ್ಟಿಯಲ್ಲಿ ಗಂಡು ಕರುಗಳು ಅಥವಾ ಎತ್ತುಗಳು ಇರುವುದೇ ಇಲ್ಲ. ಹಾಗಂತ, ಹಸುಗಳೆಲ್ಲ ಹೆಣ್ಣು ಕರುಗಳನ್ನು ಮಾತ್ರ ಹಡೆಯುತ್ತವೆ ಎಂದಲ್ಲ. ಗಂಡು ಕರು ಗದ್ದೆಯಿಲ್ಲದವರಿಗೆ ಉಪಯೋಗಶೂನ್ಯ. ಅದಕ್ಕೆ ಮೇವು, ಹಿಂಡಿ ನೀಡುವುದರಿಂದ ಯಾವ ಲಾಭವೂ ಇರುವುದಿಲ್ಲ. ಗೊಡ್ಡು ಹಸುವಿನ ಕುರಿತಾದ ಲೆಕ್ಕಾಚಾರವೂ ಇದುವೇ. ಅದನ್ನು ಸಾಕುವುದು ಆರ್ಥಿಕ ಲೆಕ್ಕಾಚಾರದ ದೃಷ್ಟಿಯಿಂದ ಖಂಡಿತವಾಗಿಯೂ ನಷ್ಟ. ರಾಜನಾಥ್ ಸಿಂಗ್‍ರ ‘ಉಚಿತ ಮೇವು’ ಹೇಳಿಕೆಯು ಈ ವಾಸ್ತವವನ್ನು ಒಪ್ಪಿಕೊಂಡಂತಾಗಿದೆ. ಶ್ರದ್ಧೆಗಿಂತ ಹೊರತಾದ ಮುಖವೊಂದು ಗೋವಿಗಿದೆ ಎಂಬುದನ್ನು ಅವರ ಈ ಹೇಳಿಕೆಯು ಸಮರ್ಥಿಸುತ್ತದೆ. ಇದು ಬಿಜೆಪಿಯ ಈ ವರೆಗಿನ ಘೋಷಿತ ನಿಲುವಿಗೆ ವಿರುದ್ಧವಾದುದು. ಅಂದಹಾಗೆ, ಇದು ಅಧಿಕಾರ ಸಿಕ್ಕ ಬಳಿಕದ ಬಿಜೆಪಿ. ಅಧಿಕಾರವಿಲ್ಲದಿದ್ದಾಗ ಅದರ ನಿಲುವು ಬೇರೆಯೇ ಆಗಿತ್ತು. ಅಷ್ಟಕ್ಕೂ, ಈ ಎರಡರಲ್ಲಿ ಅಸಲು ಬಿಜೆಪಿ ಯಾವುದೋ?