ಓರ್ವ ಪ್ರಧಾನಿ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು ಏನೆಲ್ಲ ಎಂಬ ಚರ್ಚೆಯು ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯ ಒಂದು ವರ್ಗ ಬಿಂಬಿಸಿದಂದಿನಿಂದಲೇ ಆರಂಭವಾಗಿದೆ. ಮಾತ್ರವಲ್ಲ, ಆ ಚರ್ಚೆಯಲ್ಲಿ ಮೋದಿ ಮತ್ತೆ ಮತ್ತೆ ತನ್ನ ಅನರ್ಹತೆಯನ್ನು ಸಾರುತ್ತಲೂ ಇದ್ದಾರೆ. ಅವರೊಳಗೆ ಒಂದು ಬಗೆಯ ಗೊಂದಲ ಇದೆ. ತನ್ನ ಅಭಿಮಾನಿ ವಲಯವನ್ನೂ ಮೀರಿ ಗುರುತಿಸಿಕೊಳ್ಳುವ ಹಂಬಲ ಕೆಲವೊಮ್ಮೆ ಅವರ ಮಾತಿನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವೊಮ್ಮೆ, ಎಲ್ಲಿ ತನ್ನ ಅಭಿಮಾನಿ ವಲಯ ಮುನಿಸಿಕೊಳ್ಳುವುದೋ ಎಂಬ ಭೀತಿ ಕಾಣಿಸುತ್ತದೆ. ಸದ್ಭಾವನಾ ಯಾತ್ರೆ, 2002ರ ಗುಜರಾತ್ ನರಮೇಧಕ್ಕೆ ವಿಷಾದ, ನಾಯಿಮರಿ, ಹಿಂದೂ ರಾಷ್ಟ್ರವಾದಿ.. ಇವೆಲ್ಲ ಅವರೊಳಗಿನ ಗೊಂದಲಕ್ಕೆ ಪುರಾವೆಗಳು. 120 ಕೋಟಿ ಭಾರತೀಯರಿಗೆ ನಾಯಕತ್ವ ನೀಡಬೇಕಾದ ವ್ಯಕ್ತಿಯೊಬ್ಬರಿಗೆ ಇರಬೇಕಾದ ಮೊಟ್ಟಮೊದಲ ಅರ್ಹತೆ ಏನೆಂದರೆ, ಈ ದೇಶ ಮತ್ತು ಇಲ್ಲಿರುವ ಜನರ ಕುರಿತಂತೆ ಗೊಂದಲರಹಿತ ನಿಲುವು. ಈ ದೇಶದಲ್ಲಿರುವುದು ಮೋದಿಯ ಅಭಿಮಾನಿಗಳು ಮಾತ್ರ ಅಲ್ಲ. ಅವರನ್ನು ಅನುಮಾನಿಸುವ, ಭೀತಿಯಿಂದ ನೋಡುವ, ಖಂಡಿಸುವ ಮಂದಿ ಕೂಡ ಧಾರಾಳ ಇದ್ದಾರೆ. ಅವರೆಲ್ಲರನ್ನೂ ಸಮಚಿತ್ತದಿಂದ ನಿಭಾಯಿಸುವ ಹೊಣೆಗಾರಿಕೆ ನಾಯಕನ ಮೇಲಿರುತ್ತದೆ. ಮೋದಿಗೆ ಇದು ಸಾಧ್ಯವಾಗಿದೆಯೇ? ಈ ದೇಶದ 20 ಕೋಟಿಯಷ್ಟಿರುವ ದೊಡ್ಡದೊಂದು ಜನಸಮೂಹವನ್ನು ಕಾರಿನ ಚಕ್ರದಡಿಗೆ ಸಿಲುಕುವ ಬಡಪಾಯಿ ನಾಯಿಮರಿಗೆ ಅವರು ಹೋಲಿಸುತ್ತಾರೆ. ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರಾಡಿದ ಈ ಮಾತಿನಿಂದ ರವಾನೆಯಾಗುವ ಸೂಚನೆಯಾದರೂ ಏನು? ನಾಯಿ ಮರಿಯನ್ನು ಯಾವ ಚಾಲಕ ಕೂಡ ಉದ್ದೇಶಪೂರ್ವಕವಾಗಿ ಚಕ್ರದಡಿ ಸಿಲುಕಿಸುವುದಿಲ್ಲ. ಅನೇಕ ಬಾರಿ ಪ್ರಾಣಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಚಾಲಕನೇ ಅಪಾಯಕ್ಕೆ ಸಿಲುಕುವುದಿದೆ. ಆದರೆ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ನಿರ್ವಹಿಸಿದ ಪಾತ್ರ ಈ ರೀತಿಯದ್ದೇ? ಉದ್ದೇಶಪೂರ್ವಕ ಪಾತ್ರ ಇದ್ದಿರಲಿಲ್ಲವೇ? ಅಂಥದ್ದೊಂದು ಹತ್ಯಾಕಾಂಡದ ಉದ್ದೇಶದಿಂದಲೇ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮೊದಲೇ ಆಯಕಟ್ಟಿನ ಜಾಗಕ್ಕೆ ನೇಮಿಸಿರುವುದು ಸುಳ್ಳೇ? ಗುಜರಾತ್ನ ಹತ್ತಾರು ಪೊಲೀಸ್ ಅಧಿಕಾರಿಗಳು ಹತ್ಯಾಕಾಂಡದ ಆರೋಪ ಹೊತ್ತು ತಿರುಗುತ್ತಿರುವುದು ಏನನ್ನು ಸೂಚಿಸುತ್ತದೆ? ಇವೆಲ್ಲ ಮೋದಿಯ ಗಮನಕ್ಕೆ ಬಂದೇ ಇಲ್ಲ ಅನ್ನುವುದಾದರೆ ಅಂಥ ನಾಯಕನೊಬ್ಬ ಈ ದೇಶವನ್ನು ಮುನ್ನಡೆಸುವುದಾದರೂ ಹೇಗೆ? ಕೇವಲ 6 ಕೋಟಿ ಜನಸಂಖ್ಯೆ ಇರುವ ರಾಜ್ಯವೊಂದರ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗಗಳ ಮೇಲೆ ನಿಯಂತ್ರಣ ಇಡಲಾಗದ ವ್ಯಕ್ತಿ 120 ಕೋಟಿ ಜನಸಂಖ್ಯೆ ಇರುವ ರಾಷ್ಟ್ರವೊಂದರ ಮೇಲೆ ಹೇಗೆ ತಾನೇ ನಿಯಂತ್ರಣ ಇಟ್ಟುಕೊಳ್ಳಬಲ್ಲ? ಗುಜರಾತ್ ಹತ್ಯಾಕಾಂಡದಲ್ಲಿ ತಾನು ನಿಷ್ಕಳಂಕ ಅಂತ ಮೋದಿ ಹೇಳುತ್ತಲೇ ಬಂದಿದ್ದಾರೆ. ಆದ್ದರಿಂದಲೇ ತಾನು ಕ್ಷಮೆ ಯಾಚಿಸಲ್ಲ ಎಂದೂ ಹೇಳುತ್ತಿದ್ದಾರೆ. ಹಾಗಾದರೆ, 1984ರ ಸಿಕ್ಖ್ ಹತ್ಯಾಕಾಂಡದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ? ಸೋನಿಯಾ ಕಾಂಗ್ರೆಸ್ನ ನಾಯಕಿಯಾಗಿದ್ದರೆ? ಆದರೂ ಅವರು ಕ್ಷಮೆ ಯಾಚಿಸಿಲ್ಲವೇ? ಎಲ್ಲೋ ಒಂದು ಕಡೆ ರೈಲು ಅಪಘಾತಕ್ಕೀಡಾದಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೆ ಖಾತೆಗೆ ರಾಜೀನಾಮೆ ನೀಡಿದರಲ್ಲ, ಯಾಕೆ? ಅವರೇನು ಅಪಘಾತಕ್ಕೀಡಾದ ರೈಲಿನ ಚಾಲಕರಾಗಿದ್ದರೆ? ಕಲ್ಲಿದ್ದಲು ಹಗರಣ, ಟೆಲಿಕಾಂ, ಕಾಮನ್ವೆಲ್ತ್ ಹಗರಣದ ಹೊಣೆ ಹೊತ್ತುಕೊಂಡು ಪ್ರಧಾನಿ ಮನಮೋಹನ್ ಸಿಂಗ್ರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಹಲವು ಬಾರಿ ಆಗ್ರಹಿಸಿದೆ. ಉತ್ತರಾಖಂಡದ ಪ್ರವಾಹ ನಿರ್ವಹಣೆಯಲ್ಲಿ ಅಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿ ಬಹುಗುಣ ವಿಫಲರಾಗಿದ್ದಾರೆಂದು ಆರೋಪಿಸಿ ಇದೇ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಇಲ್ಲೆಲ್ಲಾ ಪರಿಗಣನೆಗೆ ಬರುವ ನಿಯಮ ಮೋದಿ ವಿಷಯದಲ್ಲಿ ಮಾತ್ರ ಅಳವಡಿಕೆ ಆಗುತ್ತಿಲ್ಲವೇಕೆ?ನಿಜವಾಗಿ, ಮೋದಿ ಈಗಾಗಲೇ ಒಂದು ನಿರ್ದಿಷ್ಟ ಇಮೇಜನ್ನು ಬೆಳೆಸಿಕೊಂಡಿದ್ದಾರೆ. ಒಂದು ವೇಳೆ ಗುಜರಾತ್ ಹತ್ಯಾಕಾಂಡಕ್ಕಾಗಿ ಕ್ಷಮೆ ಯಾಚಿಸಿದರೆ, ಆ ಇಮೇಜ್ಗೆ ಧಕ್ಕೆ ಬರಬಹುದೆಂಬ ಭೀತಿ ಅವರಲ್ಲಿ ಮತ್ತು ಅವರನ್ನು ಉಬ್ಬಿಸುತ್ತಿರುವವರಲ್ಲಿ ಇದೆ. ಬಾಬರಿ ಮಸೀದಿಯ ಧ್ವಂಸಕ್ಕೆ ವಿಷಾದಿಸಿದ ಮತ್ತು ಜಿನ್ನಾರನ್ನು ಹೊಗಳಿದ ಅಡ್ವಾಣಿಯಂತೆ ತಾನೂ ಕಳೆದುಹೋಗುವೆನೆಂಬ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದಲೇ ಕ್ಷಮೆ ಯಾಚನೆಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಅವರು ನಾಯಿ ಮರಿಯಂಥ ಕತೆಯನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸರ್ವರನ್ನೂ ಮೆಚ್ಚಿಸಿಕೊಳ್ಳುವುದಕ್ಕಾಗಿ ಸದ್ಭಾವನಾ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಮತ್ತೊಮ್ಮೆ ತಾನು ಹಿಂದೂ ರಾಷ್ಟ್ರವಾದಿ ಅನ್ನುತ್ತಾರೆ. ಒಂದು ರೀತಿಯಲ್ಲಿ ಅವರನ್ನು ಅಸ್ತಿತ್ವ ಭಯ ಕಾಡುತ್ತಿದೆ. ಅಷ್ಟಕ್ಕೂ, ಮುಸ್ಲಿಮ್ ರಾಷ್ಟ್ರವಾದಿ, ಕ್ರೈಸ್ತ ರಾಷ್ಟ್ರವಾದಿ, ಸಿಕ್ಖ್ ರಾಷ್ಟ್ರವಾದಿ.. ಎಂದೆಲ್ಲಾ ರಾಷ್ಟ್ರವಾದದಲ್ಲಿ ವಿಭಜನೆಯಿದೆಯೇ? ನಾಳೆ, ರಾಜ್ಯದ ಆರೋಗ್ಯ ಮಂತ್ರಿ ಯು.ಟಿ. ಕಾದರ್ ಅವರು, ತಾನು ಮುಸ್ಲಿಮ್ ರಾಷ್ಟ್ರವಾದಿ ಅಂದರೆ ಬಿಜೆಪಿ ಏನಂದೀತು? ಗೃಹ ಸಚಿವ ಜಾರ್ಜ್ ರು, ತಾನು ಕ್ರೈಸ್ತ ರಾಷ್ಟ್ರವಾದಿ ಅಂದರೆ ಇದೇ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾರದೇ? ಹಿಂದೂ ರಾಷ್ಟ್ರವಾದವನ್ನು ಮುಂದಿಡುವ ಮೋದಿಯಂತೆಯೇ ದಲಿತ್ ರಾಷ್ಟ್ರದ, ಸಿಕ್ಖ್ ರಾಷ್ಟ್ರದ ವಾದವನ್ನು ಮುಂದಿಡುವವರು ತಯಾರಾಗಬಹುದಲ್ಲವೇ? ಮೋದಿಗೆ ಇರುವಷ್ಟೇ ಹಕ್ಕು, ಅರ್ಹತೆ, ಸ್ವಾತಂತ್ರ್ಯ ಈ ದೇಶದ ಇತರೆಲ್ಲ ಪ್ರಜೆಗಳಿಗೂ ಇದೆಯಲ್ಲವೇ? ಅವರಂತೆಯೇ ಇತರರೂ ಮಾತಾಡಲು, ಹಕ್ಕು ಪ್ರತಿಪಾದಿಸಲು ಪ್ರಾರಂಭಿಸಿದರೆ ಈ ದೇಶ ಎತ್ತ ಸಾಗೀತು?
ಮೋದಿಯ ಮಾತು, ಆವೇಶ, ಹಾವಭಾವ, ಆಂಗಿಕ ಸನ್ನೆಗಳೆಲ್ಲ ಅವರೊಳಗೆ ಓರ್ವ ಅಪಾಯಕಾರಿ ಖಳನಾಯಕ ಇರುವುದನ್ನು ಚೆನ್ನಾಗಿ ಬಿಂಬಿಸುತ್ತದೆ. ಆ ಖಳನಾಯಕನೇ 2002ರ ಹತ್ಯಾ ಕಾಂಡದ ಸಂದರ್ಭದಲ್ಲಿ ಗುಜರಾತ್ಗೆ ನೇತೃತ್ವ ನೀಡಿದ್ದು. ಅಂಥ ವ್ಯಕ್ತಿಯೊಬ್ಬ ಈ ದೇಶಕ್ಕೆ ನೇತೃತ್ವ ಕೊಡಲು ಯಾವ ರೀತಿಯಿಂದಲೂ ಸೂಕ್ತರಲ್ಲ. 120 ಕೋಟಿ ಭಾರತೀಯರನ್ನು ಸಮಾನವಾಗಿ ಕಾಣುವ ಮತ್ತು ನಾಯಿ ಮರಿಗಳಂತೆ ಕಾಣದಿರುವ ಆರೋಗ್ಯಪೂರ್ಣ ಮನಸ್ಸು ಆ ನಾಯಕನಿಗಿರಬೇಕು. ಬರೇ ಮನುಷ್ಯರಾಗಿರುವುದಷ್ಟೇ ಪ್ರಧಾನಿ ಹುದ್ದೆಗಿರುವ ಅರ್ಹತೆಯಲ್ಲ. ಎಲ್ಲ ಅಂಗಗಳೂ ಸ್ವಸ್ಥ ಮತ್ತು ನಿರ್ಮಲವಾಗಿರಬೇಕಾದುದೂ ಅಗತ್ಯ. ಆದರೆ ಮೋದಿ ಬರೇ ಮನುಷ್ಯರಷ್ಟೇ ಆಗಿದ್ದಾರೆ. ಉಳಿದ ಯಾವ ಅರ್ಹತೆಗಳೂ ಅವರಲ್ಲಿ ಕಾಣಿಸುತ್ತಿಲ್ಲ.