Showing posts with label ಸನ್ಮಾರ್ಗ ಓದುಗ-ಹಿತೈಷಿಗಳೇ: ಒಂದು ವಿನಂತಿ. Show all posts
Showing posts with label ಸನ್ಮಾರ್ಗ ಓದುಗ-ಹಿತೈಷಿಗಳೇ: ಒಂದು ವಿನಂತಿ. Show all posts

Tuesday, 20 June 2023

ಸನ್ಮಾರ್ಗ ಓದುಗ-ಹಿತೈಷಿಗಳೇ: ಒಂದು ವಿನಂತಿ

 3-11-2022

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಲ್ಪಡುವ ಈ ಜಗತ್ತಿನ ಏಕೈಕ ವಸ್ತು ಪತ್ರಿಕೆ. ಯಾವುದೇ ಪತ್ರಿಕೆಯ ಮುಖಬೆಲೆಗೂ ಅದರ ಉತ್ಪಾದನಾ ವೆಚ್ಚಕ್ಕೂ ಸಂಬಂಧ ಇರುವುದಿಲ್ಲ. ಮುಖಬೆಲೆಗಿಂತ ಸುಮಾರು ಒಂದು-ಒಂದೂವರೆ ಪಟ್ಟು ಅಧಿಕ ವೆಚ್ಚದಲ್ಲಿ ಒಂದು ಪತ್ರಿಕೆ ತಯಾರಾಗುತ್ತದೆ. ಹಾಗಿದ್ದೂ, ಖರೀದಿದಾರರ ಮೇಲೆ ಈ ಉತ್ಪಾದನಾ ವೆಚ್ಚದ ಭಾರವನ್ನು ಪತ್ರಿಕೆಗಳು ಹೊರಿಸುವುದಿಲ್ಲ. ಇಲ್ಲಿ ಸಹಜವಾಗಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ.1. ಯಾಕೆ ಹೀಗೆ? 2. ನಷ್ಟದ ಈ ವ್ಯಾಪಾರದಲ್ಲಿ ಪತ್ರಿಕೆಗಳು ಉಳಿದುಕೊಂಡಿರುವುದು ಹೇಗೆ?

ಯಾವುದೇ ಪತ್ರಿಕೆ ಯಾರಿಗೂ ಊಟ, ನಿದ್ರೆಯಷ್ಟು ಅನಿವಾರ್ಯವಲ್ಲ. ಪತ್ರಿಕೆ ಖರೀದಿಸದಿದ್ದರೆ ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯೂ ಇಲ್ಲ. ಆದ್ದರಿಂದ ಪತ್ರಿಕೆಯನ್ನು ಜನರು ಖರೀದಿಸಲೇ ಬೇಕಾದರೆ ಅಗ್ಗದ ದರದಲ್ಲಿ ಲಭ್ಯಗೊಳಿಸಲೇಬೇಕಾದ ಒತ್ತಡವೊಂದು ಪತ್ರಿಕಾ ಸಂಸ್ಥೆಗಳನ್ನು ಆರಂಭದಲ್ಲಿ ಕಾಡಿರಲೇಬೇಕು. ಮೊದಲು ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸುವುದು ಅವರ ಉದ್ದೇಶ ಆಗಿರಲೂಬಹುದು. ಆದರೆ ಈ ನಷ್ಟದ ಉದ್ಯಮ ಹೆಚ್ಚು ಸಮಯ ಬಾಳಿಕೆ ಬರದು ಎಂಬುದು ಮನವರಿಕೆಯಾದಾಗ, ಬದುಕಿ ಉಳಿಯುವುದಕ್ಕಾಗಿ ಪರ್ಯಾಯ ದಾರಿಗಳನ್ನು ಕಂಡುಕೊಂಡಿರುವ ಸಾಧ್ಯತೆ ಇದೆ. ಅದುವೇ ಜಾಹೀರಾತು. ಉತ್ಪಾದನಾ ವೆಚ್ಚದ ನಷ್ಟವನ್ನು ಜಾಹೀರಾತಿನ ಮೂಲಕ ತುಂಬಿಕೊಳ್ಳುವ ವಿನೂತನ ಪ್ರಯೋಗವೊಂದು ಹೀಗೆ ಆರಂಭವಾಗಿರಬಹುದು. ಆದರೆ ಬರಬರುತ್ತಾ ಈ ಪ್ರಯೋಗ ಎಷ್ಟು ಹದಗೆಟ್ಟು ಹೋಯಿತೆಂದರೆ, ಜಾಹೀರಾತಿನ ನಡುವೆ ಒಂದಿಷ್ಟು ಸುದ್ದಿ ಎಂಬಲ್ಲಿಗೆ ಬಂದು ನಿಂತಿತು. ಖರೀದಿದಾರರು ಕಡೆಗಣನೆಗೆ ಒಳಗಾದರು. ಜಾಹೀರಾತುದಾರರ ಹಿತಾಸಕ್ತಿಯೇ ಮುಖ್ಯವಾಗತೊಡಗಿತು. ರಾಜಕಾರಣಿಗಳ ಆಸೆಗಣ್ಣು ಪತ್ರಿಕೆಗಳ ಮೇಲೆ ಬೀಳುವುದರೊಂದಿಗೆ ಈ ಕ್ಷೇತ್ರ ಸಂಪೂರ್ಣ ರಾಡಿಯೆದ್ದು ಹೋಯಿತು. ಯಾವುದು ಸುದ್ದಿ ಮತ್ತು ಯಾವುದು ಜಾಹೀರಾತು ಎಂಬುದನ್ನು ಓರ್ವ ಗ್ರಾಹಕ ನಿರ್ಧರಿಸಲು ಹೆಣಗಾಡುವಷ್ಟರ ಮಟ್ಟಿಗೆ ಪತ್ರಿಕೆ ತನ್ನನ್ನು ಆಡಳಿತಗಾರರಿಗೆ ಮಾರಿಕೊಳ್ಳತೊಡಗಿದುವು. ಬಹುತೇಕ ಪತ್ರಿಕೆಗಳು ಇವತ್ತು ಮುಖಪುಟವನ್ನು ಜಾಹೀರಾತಿಗೆ ಬಿಟ್ಟುಕೊಡುತ್ತಿವೆ. ಸುದ್ದಿಗಳನ್ನು ಒಳಪುಟಕ್ಕೆ ತಳ್ಳುತ್ತಿವೆ. ಹಾಗಂತ, ಓರ್ವ ಖರೀದಿದಾರ ಇದನ್ನು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆತ ಅಥವಾ ಆಕೆ ಸುದ್ದಿಗಾಗಿ ಪತ್ರಿಕೆಯನ್ನು ಖರೀದಿಸುತ್ತಾನೆಯೇ ಹೊರತು ಜಾಹೀರಾತಿಗಾಗಿ ಅಲ್ಲ. ಆದರೆ, ಸುದ್ದಿ ಬೇಕೆಂದರೆ ಜಾಹೀರಾತನ್ನು ಸಹಿಸಿಕೊಳ್ಳಲೇಬೇಕು ಎಂಬ ಅ ನಿವಾರ್ಯತೆಯೊಂದು ಪ್ರತಿ ಖರೀದಿದಾರರ ಮುಂದೆಯೂ ಇವತ್ತು ತೂಗುಗತ್ತಿಯಂತೆ ನೇತಾಡುತ್ತಿದೆ. ಗ್ರಾಹಕರಿಗಿಂತ ಎರಡು ಪಟ್ಟು ಹೆಚ್ಚು ದುಡ್ಡನ್ನು ಜಾಹೀರಾತುದಾರರೇ ನೀಡುತ್ತಿರುವುದರಿಂದ ಜಾಹೀರಾತುದಾರರ ಮರ್ಜಿಯಂತೆ ಪತ್ರಿಕೆಗಳು ನಡೆಯಬೇಕಾದ ಮತ್ತು ಈ ಸ್ಪರ್ಧೆಯಲ್ಲಿ ಗ್ರಾಹಕ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ವಾತಾವರಣ ಇಂದಿನದ್ದಾಗಿದೆ. ಆದರೆ,

ಸನ್ಮಾರ್ಗ ಪತ್ರಿಕೆಯ ಹಾದಿ ಇಷ್ಟು ಸುಲಭದ್ದಲ್ಲ.
ಮೊದಲನೆಯದಾಗಿ, ಇದು ಸುದ್ದಿ ಪತ್ರಿಕೆ ಅಲ್ಲ. ಎರಡನೆಯದಾಗಿ, ಯಾವುದೇ ಜಾಹೀರಾತನ್ನು ಒಪ್ಪಿಕೊಳ್ಳುವ ಮೊದಲು ನೂರು ಬಾರಿ ಆಲೋಚಿಸಬೇಕಾದ ಕಠಿಣ ಷರತ್ತುಗಳನ್ನು ಅದು ತನ್ನ ಮೇಲೆ ವಿಧಿಸಿಕೊಂಡಿದೆ. ಸನ್ಮಾರ್ಗ- ಮೌಲ್ಯವನ್ನೇ ಉಸಿರಾಗಿಸಿಕೊಂಡಿರುವ ಪತ್ರಿಕೆ. ಸತ್ಯ ಪರವಾದ ಸಾಮಾಜಿಕ ಕ್ರಾಂತಿಯೊಂದಕ್ಕೆ ನೆಲವನ್ನು ಹಸನುಗೊಳಿಸುವುದು ಅದರ ಗುರಿ. ಮದ್ಯ, ಜೂಜು, ಬಡ್ಡಿ, ಅನೈತಿಕತೆ, ಅತ್ಯಾಚಾರ, ಅನ್ಯಾಯ, ಅಸಮಾನತೆ, ಭ್ರಷ್ಟಾಚಾರ, ಕೋಮುವಾದ, ಜ್ಯೋತಿಷ್ಯ... ಇತ್ಯಾದಿ ಸರ್ವ ಕೆಡುಕುಗಳಿಂದಲೂ ಮುಕ್ತವಾದ ಮತ್ತು ಸತ್ಯನಿಷ್ಠವಾದ ಸಮಾಜವೊಂದನ್ನು ಕಟ್ಟುವ ಗುರಿ ಸನ್ಮಾರ್ಗದ್ದು. ದೇವ ಮತ್ತು ಮಾನವನ ನಡುವಿನ ಸಂಬಂಧವನ್ನು ವಿಶ್ಲೇಷಣೆಗೆ ಒಡ್ಡುವ ಹಾಗೂ ಜನರ ವಿವೇಚನಾ ಶಕ್ತಿಗೆ ಬಲ ನೀಡುವುದನ್ನೇ ಸನ್ಮಾರ್ಗ ಧ್ಯೇಯವನ್ನಾಗಿ ಮಾಡಿಕೊಂಡಿದೆ. ಇಂಥ ಧ್ಯೇಯವುಳ್ಳ ಯಾವುದೇ ಪತ್ರಿಕೆ ಮದ್ಯ, ಬಡ್ಡಿ, ಜೂಜು, ಜ್ಯೋತಿಷ್ಯ, ಅನೈತಿಕತೆ, ಕೋಮುವಾದ ಮುಂತಾದುವುಗಳಿಗೆ ಪೂರಕವಾದ ಜಾಹೀರಾತನ್ನು ಪ್ರಕಟಿಸಲು ಸಾಧ್ಯವೇ ಇಲ್ಲ. ಕಳೆದ 44 ವರ್ಷಗಳಿಂದಲೂ ಸನ್ಮಾರ್ಗ ಈ ಮೌಲ್ಯಕ್ಕೆ ಬದ್ಧವಾಗಿಯೇ ಪ್ರಕಟವಾಗುತ್ತಾ ಬಂದಿದೆ. ಆದರೆ, ಈ ಮೌಲ್ಯ ನಿಷ್ಠೆಗಾಗಿ ಅದು ಕಳಕೊಂಡದ್ದು ಮಾತ್ರ ಅಪಾರ. ಸನ್ಮಾರ್ಗ ಪ್ರಕಟಿಸಿದ ಜಾಹೀರಾತಿಗಿಂತಲೂ ಎಷ್ಟೋ ಪಟ್ಟು ಅಧಿಕ ಜಾಹೀರಾತನ್ನು ತಿರಸ್ಕರಿಸುತ್ತಾ ಬಂದಿದೆ. ಇದರಿಂದಾಗಿ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ಸಂಕಟಕ್ಕೂ ಒಳಗಾಗಿದೆ. ಒಂದೋ ರಾಜಿಯಾಗು, ಇಲ್ಲವೇ ಬಾಗಿಲು ಮುಚ್ಚು ಎಂಬ ಇಕ್ಕಟ್ಟಿನ ಸ್ಥಿತಿಯ ನಡುವೆಯೂ ಸನ್ಮಾರ್ಗ ಇವತ್ತು ಉಳಿದುಕೊಂಡಿದ್ದರೆ, ಅದಕ್ಕೆ ಓದುಗರ ಬೆಂಬಲ ಮತ್ತು ಸತ್ಯನಿಷ್ಠೆಗೆ ದಕ್ಕುತ್ತಿರುವ ದೇವಸಹಾಯವೇ ಕಾರಣ. ಹಾಗಂತ,

ಪತ್ರಿಕೆಯ ಬೆಂಬಲಿಗರು ಮತ್ತು ಹಿತೈಷಿಗಳು ಜವಾಬ್ದಾರಿಯಿಂದ ಮುಕ್ತರಾಗುವುದಿಲ್ಲ. ಇದು ಇತರ ಟ್ಯಾಬ್ಲಾಯ್ಡ್ ಪತ್ರಿಕೆಗಳಂತೆ ಮನೋರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಪ್ರಕಟವಾಗುತ್ತಿಲ್ಲವಾದ್ದರಿಂದ, ಜನರು ಸ್ವಯಂಪ್ರೇರಿತರಾಗಿ ಖರೀದಿಸುವ ಅಥವಾ ಚಂದಾದಾರರಾಗುವ ಸಾಧ್ಯತೆಗಳು ಬಹಳ ಹೆಚ್ಚಿಲ್ಲ. ಆದ್ದರಿಂದ, ಸನ್ಮಾರ್ಗವನ್ನು ಜನರ ಬಳಿಗೆ ತಲುಪಿಸುವ ಮತ್ತು ಅವರನ್ನು ಚಂದಾದಾರರನ್ನಾಗಿಸುವ ಜವಾಬ್ದಾರಿ ಎಲ್ಲ ಓದುಗ ಬೆಂಬಲಿಗರು ಮತ್ತು ಹಿತೈಷಿಗಳು ವಹಿಸಿಕೊಳ್ಳಬೇಕು. ಪ್ರತಿಯೊಬ್ಬ ಓದುಗ ಮತ್ತು ಹಿತೈಷಿ ಕನಿಷ್ಠ ತಮ್ಮ ಪರಿಚಯದ 5 ಮಂದಿಯನ್ನು ಸನ್ಮಾರ್ಗ ಚಂದಾದಾರರನ್ನಾಗಿ ಮಾಡಿದರೆ, ಇದು ಬಹುದೊಡ್ಡ ಮೈಲುಗಲ್ಲಾಗುವುದರಲ್ಲಿ ಅನುಮಾನವಿಲ್ಲ. ಸನ್ಮಾರ್ಗದ ಯಾವುದೇ ಓದುಗ ಅಥವಾ ಹಿತೈಷಿಗೆ ಕನಿಷ್ಠ 25ರಿಂದ 50 ಮಂದಿಯಷ್ಟು ಗೆಳೆಯರು ಇದ್ದೇ ಇರುತ್ತಾರೆ. ಇವರಲ್ಲಿ ಕೇವಲ 5 ಮಂದಿಯನ್ನು ಚಂದಾದಾರರನ್ನಾಗಿಸುವುದು ಕಷ್ಟವೇನೂ ಅಲ್ಲ. ಹೀಗೆ ಪ್ರತಿಯೊಬ್ಬರೂ 5 ಮಂದಿಯನ್ನು ಗುರಿಯಾಗಿಸಿಕೊಂಡು ಈ ಚಂದಾ ಅಭಿಯಾನದಲ್ಲಿ ತೊಡಗಿಸಿಕೊಂಡರೆ, ಇತಿಹಾಸವೇ ನಿರ್ಮಾಣವಾಗಬಹುದು. ಈ ಬಾರಿ ತನ್ನ ತಂಗಿ ಅನುಪಮ ಪತ್ರಿಕೆಯನ್ನು ಜೊತೆ ಸೇರಿಸಿಯೇ ಸನ್ಮಾರ್ಗ ತನ್ನ ಚಂದಾ ಅಭಿಯಾನವನ್ನು ನಡೆಸುತ್ತಿದೆ. ಎರಡೂ ಪತ್ರಿಕೆಗಳ ವಾರ್ಷಿಕ ಚಂದಾದಾರಿಕೆಗೆ 1000 ರೂಪಾಯಿ ಮತ್ತು ಅರ್ಧ ವರ್ಷಕೆ 630ರೂಪಾಯಿಯನ್ನು ನೀಡಿದರೆ ಸಾಕಾಗುತ್ತದೆ. ಹಾಗಂತ, ಒಂದು ಸಾವಿರ ರೂಪಾಯಿ ತೀರಾ ಸಣ್ಣ ಮೊತ್ತ ಅಲ್ಲ ಎಂಬುದು ನಿಜ. ಆದರೆ, ಪ್ರತಿದಿನ ಮೂಲಭೂತ ಅಗತ್ಯಗಳ ಹೊರತಾಗಿ ನಾವು ಮಾಡುತ್ತಿರುವ ಖರ್ಚನ್ನು ಲೆಕ್ಕ ಹಾಕಿದರೆ, ಈ ಮೊತ್ತ ಬಲು ಭಾರದ್ದೇನೂ ಅಲ್ಲ. ಪ್ರತಿದಿ ನದ ಖರ್ಚಿನಲ್ಲಿ ಕನಿಷ್ಠ 3 ರೂಪಾಯಿಯನ್ನು ತೆಗೆದಿಟ್ಟರೂ ಅನುಪಮ ಮತ್ತು ಸನ್ಮಾರ್ಗದ ವಾರ್ಷಿಕ ಚಂದಾದಾರಿಕೆಗೆ ಈ ಮೊತ್ತ ಸಾಕಾಗುತ್ತದೆ. ಇದರ ಜೊತೆಗೆ ಇನ್ನೂ ಒಂದು ಸಂಗತಿಯಿದೆ.

ಸನ್ಮಾರ್ಗ ವೆಬ್‌ಪೋರ್ಟಲ್‌ನ ಮೂಲಕ ಪ್ರತಿದಿನ ಕ್ಷಣಕ್ಷಣದ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಹಾಗೆಯೇ ಸನ್ಮಾರ್ಗ ನ್ಯೂಸ್ ಚಾನೆಲ್ ವಿವಿಧ ಕಾರ್ಯಕ್ರಮಗಳನ್ನು ಪ್ರತಿದಿನ ಪ್ರಸಾರ ಮಾಡುತ್ತಲೂ ಇದೆ. ಇವು ಯಾವುವೂ ಸ್ವಯಂಚಾಲಿತ ಅಲ್ಲ. ಇದರ ಹಿಂದೆ ತಜ್ಞರ ತಂಡ ಕೆಲಸ ಮಾಡುತ್ತಿರುತ್ತದೆ. ಅವರ ವೇತನ, ತಾಂತ್ರಿಕ ಉಪಕರಣಗಳ ಖರೀದಿ ಮತ್ತು ನಿರ್ವಹಣೆ ಇತ್ಯಾದಿಗಳಿಗಾಗಿ ಹಣ ಖರ್ಚು ಮಾಡುತ್ತಲೂ ಇರಬೇಕಾಗುತ್ತದೆ. ಆದ್ದರಿಂದ ನೀವು ಕೊಡುವ ಒಂದು ಸಾವಿರ ರೂಪಾಯಿ ಯನ್ನು ಬರೇ ಸನ್ಮಾರ್ಗ ಮತ್ತು ಅನುಪಮ ಚಂದಾದಾರಿಕೆಗೆ ಮಾತ್ರ ಮಿತಿಗೊಳಿಸಿ ನೋಡಬೇಕಿಲ್ಲ. ಇದೊಂದು ಪ್ಯಾಕೇಜು. ಈ ಪ್ಯಾಕೇಜ್‌ನಲ್ಲಿ ಎರಡು ಪತ್ರಿಕೆಗಳ ಜೊತೆಗೇ ವೆಬ್ ಪೋರ್ಟಲ್ ಮತ್ತು ನ್ಯೂಸ್ ಚಾನೆಲ್ಲೂ ಲಭ್ಯವಾಗುತ್ತದೆ. ನ್ಯೂಸ್ ಚಾನೆಲನ್ನು ಸಬ್‌ಸ್ಕ್ರೈಬ್ ಮಾಡುವ ಮೂಲಕ ನೀವು ಈ ಅಭಿಯಾ ನದಲ್ಲಿ ನಮ್ಮ ಬೆಂಬಲಿಗರಾಗಬಹುದು.

ಅಂದಹಾಗೆ, ಮೌಲ್ಯನಿಷ್ಠೆಗೆ ಕಟ್ಟುಬಿದ್ದು ಜಾಹೀರಾತುಗಳನ್ನು ತಿರಸ್ಕರಿಸುತ್ತಾ ಒಂದು ಪತ್ರಿಕೆ ದೀರ್ಘ ಕಾಲ ಉಳಿಯುವುದೇ ಒಂದು ಸಾಹಸ. ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಲಭ್ಯ ಇರುವ ಜಾಹೀರಾತು ಗಳೆಂದರೆ, ಮದ್ಯ, ಬಡ್ಡಿ, ಸಿನಿಮಾ, ಜೂಜು, ಜ್ಯೋತಿಷ್ಯ ಮತ್ತು ಎದುರಾಳಿಗಳನ್ನು ತೇಜೋವಧೆಗೊಳಿಸುವ ರಾಜಕೀಯ ಇತ್ಯಾದಿಗಳದ್ದು. ಒಂದೋ ಇದನ್ನು ಸ್ವೀಕರಿಸಬೇಕು ಇಲ್ಲವೇ ಓದುಗರು, ಹಿತೈಷಿಗಳು ಮತ್ತು ಬೆಂಬಲಿಗರನ್ನು ನಂಬಿಕೊಂಡು ಇದನ್ನು ತಿರಸ್ಕರಿಸುವ ಧೈರ್ಯ ತೋರಬೇಕು. ಸನ್ಮಾರ್ಗ ಕಳೆದ 4 ದ ಶಕಗಳಿಂದಲೂ ಓದುಗರು ಮತ್ತು ಹಿತೈಷಿಗಳ ಬೆಂಬಲದ ಮೇಲೆ ವಿಶ್ವಾಸ ಇಟ್ಟುಕೊಂಡೇ ಪ್ರಕಟವಾಗುತ್ತಿರುವ ಪತ್ರಿಕೆ. ಬದುಕಿ ಉಳಿಯುವುದಕ್ಕಾಗಿ ಮೌಲ್ಯಕ್ಕೆ ತಿಲಾಂಜಲಿ ಇಡುವುದನ್ನು ಅದು ಕಲ್ಪಿಸಿಕೊಳ್ಳಲೂ ಸಿದ್ಧವಿಲ್ಲ. ಈ ಜಗತ್ತಿನಲ್ಲಿ ಸುಳ್ಳು ವೇಗವಾಗಿ ಚಲಿಸುತ್ತಿದೆ. ಸತ್ಯ ತುಸು ನಿಧಾನ. ಆದರೆ, ಒಂದಲ್ಲ ಒಂದು ದಿನ ಸತ್ಯ ಗೆದ್ದೇ ಗೆಲ್ಲುತ್ತದೆ ಮತ್ತು ಸುಳ್ಳಿಗೆ ಸೋಲಾಗುತ್ತದೆ ಎಂಬ ಪ್ರಾಕೃತಿಕ ಪಾಠದಲ್ಲಿ ಸನ್ಮಾರ್ಗ ದೃಢವಾದ ವಿಶ್ವಾಸವನ್ನು ಹೊಂದಿದೆ. ಓದುಗರು ಮತ್ತು ಹಿತೈಷಿಗಳಾದ ತಮ್ಮ ಬೆಂಬಲವೇ ನಮ್ಮ ಪಾಲಿನ ಆಮ್ಲಜನಕ. ಆದ್ದರಿಂದ ನವೆಂಬರ್ 6 ರಿಂದ 13ರ ವರೆಗೆ ನಡೆಯುವ ಸನ್ಮಾರ್ಗ-ಅನುಪಮ ಜಂಟಿ ಅಭಿಯಾನದಲ್ಲಿ ಮನಸ್ಸಿಟ್ಟು ಭಾಗಿಯಾಗಿ. ಪ್ರತಿಯೊಬ್ಬರೂ ಕನಿಷ್ಠ 5 ಮಂದಿಯನ್ನು ಚಂದಾದಾರಿಕೆ ಮಾಡುವ ಗುರಿ ಇಟ್ಟುಕೊಳ್ಳಿ. ಇದು ಅಸಾಧ್ಯ ಅಲ್ಲ.