Showing posts with label - ಅಸಲಿ ಉಗ್ರರಿಗೆ ಬಲಿಯಾಗುತ್ತಿರುವ ಶಂಕಿತ ಉಗ್ರರು... Show all posts
Showing posts with label - ಅಸಲಿ ಉಗ್ರರಿಗೆ ಬಲಿಯಾಗುತ್ತಿರುವ ಶಂಕಿತ ಉಗ್ರರು... Show all posts

Tuesday, 12 June 2012

- ಅಸಲಿ ಉಗ್ರರಿಗೆ ಬಲಿಯಾಗುತ್ತಿರುವ ಶಂಕಿತ ಉಗ್ರರು..

ಹೆಸರು: ಮುಹಮ್ಮದ್ ಖಲೀಲ್ ಸಿದ್ದೀಖಿ
ಕುಟುಂಬ: 8 ತಿಂಗಳ ಬಸುರಿ ಪತ್ನಿ, 2 ವರ್ಷದ ಮಗಳು
ಆರೋಪ: ಶಂಕಿತ ಭಯೋತ್ಪಾದಕ
ಘಟನೆ: ಜೂನ್ 8ರಂದು ಮಹಾರಾಷ್ಟ್ರದ ಯರವಾಡ ಜೈಲಿನಲ್ಲಿ ಸಿದ್ದೀಖಿಯ ಹತ್ಯೆ

     ಜೈಲಿನಲ್ಲಿರುವ ಕೈದಿಗಳ ಕೈಯಿಂದಲೇ ಕೊಲೆಗೀಡಾಗಿರುವನೆಂದು ಹೇಳಲಾಗಿರುವ ಮುಹಮ್ಮದ್ ಸಿದ್ದೀಖಿಯ ಬಗ್ಗೆ ಈ ವರೆಗೆ (ಜೂನ್ 11) ಯಾವೊಂದು ಕನ್ನಡ ಪತ್ರಿಕೆಯೂ ಸಂಪಾದಕೀಯ ಬರೆದಿಲ್ಲ. ಹಾಗಂತ ಸಂಪಾದಕೀಯಕ್ಕೆ ಎತ್ತಿಕೊಳ್ಳುವಷ್ಟು ಆ ಕೊಲೆ ತೂಕದ್ದಲ್ಲ ಎಂದಲ್ಲ. ಮುಂಬೈಯ ಜರ್ಮನ್ ಬೇಕರಿ ಸ್ಫೋಟ, ಪುಣೆಯ ಗಣಪತಿ ದೇವಸ್ಥಾನದಲ್ಲಿ ಸ್ಫೋಟ ನಡೆಸುವ ಸಂಚು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಫೋಟ, ದೆಹಲಿ ಜಾಮಾ ಮಸೀದಿಯಲ್ಲಿ ಗುಂಡು ಹಾರಾಟ.. ಮುಂತಾದ ಆರೋಪಗಳನ್ನು ಹೊತ್ತುಕೊಂಡ ಶಂಕಿತ ಭಯೋತ್ಪಾದಕನನ್ನು ಸಂಪಾದಕೀಯದಲ್ಲಿಟ್ಟು ಚರ್ಚಿಸಿದರೆ ಎಲ್ಲಿ ಇಮೇಜು ಹಾಳಾಗುತ್ತದೋ ಅನ್ನುವ ಭಯ ಪತ್ರಿಕೆಗಳನ್ನು ಕಾಡುತ್ತಿರುವಂತಿದೆ. ಇಷ್ಟಕ್ಕೂ, ಭಯೋತ್ಪಾದನಾ ಕೃತ್ಯಗಳನ್ನು ಮುಲಾಜಿಲ್ಲದೆ ಖಂಡಿಸಲು ನಮಗೆ ಸಾಧ್ಯವಾಗಿದೆ ಎಂದಾದರೆ, ಶಂಕಿತ ಆರೋಪಿಯ ಕೊಲೆಯನ್ನು ಚರ್ಚಿಸುವುದಕ್ಕೆ ಹಿಂಜರಿಕೆಯೇಕೆ? ಭಯೋತ್ಪಾದನಾ ಕೃತ್ಯಗಳು ಘಟಿಸಿದಾಗಲೆಲ್ಲಾ ಪತ್ರಿಕೆಗಳು ಸಂಪಾದಕೀಯ ಬರೆಯುತ್ತವೆ. ಸುದ್ದಿ ವಿಶ್ಲೇಷಣೆ ನಡೆಸುತ್ತವೆ. ಆ ಕೃತ್ಯದ ಹಿಂದಿರುವ ಸಂಚು, ಸಂಭಾವ್ಯ ತಂಡ, ವ್ಯಕ್ತಿಗಳು.. ಹೀಗೆ ಎಲ್ಲದರ ಬಗ್ಗೆಯೂ ಮಾಹಿತಿಗಳನ್ನು ಕೊಡುತ್ತಿರುತ್ತವೆ. ಇದು ತಪ್ಪು ಎಂದಲ್ಲ. ಮನುಷ್ಯ ವಿರೋಧಿ ಕೃತ್ಯಗಳ ವಿರುದ್ಧ ಸಮಾಜವನ್ನು ಜಾಗೃತಗೊಳಿಸುವುದು ಮಾಧ್ಯಮ ಸಹಿತ ಪ್ರತಿಯೊಬ್ಬರ ಕರ್ತವ್ಯ. ಆದರೆ, ಸಿದ್ದೀಖಿಯ ಕೊಲೆಯನ್ನು ಇಂಥದ್ದೊಂದು ವಿಶ್ಲೇಷಣೆಗೆ ಕನ್ನಡ ಪತ್ರಿಕೆಗಳೇಕೆ ಒಳಪಡಿಸಿಲ್ಲ? ಸಹ ಕೈದಿಗಳು ಉಸಿರುಗಟ್ಟಿಸಿ ಕೊಂದರು ಅನ್ನುವ ಒಂದು ವಾಕ್ಯದ ಕಾರಣದಲ್ಲಿ ಅವೆಲ್ಲ ತೃಪ್ತಿ ಹೊಂದಿದ್ದೇಕೆ? ಸಿದ್ದೀಖಿಯನ್ನು ಹತ್ಯೆಗೈದ ಆರೋಪ ಹೊತ್ತುಕೊಂಡಿರುವ ಶರದ್ ಮೆಹೊಲ್ ಅನ್ನುವ ಕೈದಿಯೂ ಸಿದ್ದೀಖಿಯೂ ಪರಸ್ಪರ ಸ್ನೇಹಿತರಾಗಿದ್ದರು, ಒಂದೇ ಕೋಣೆಯಲ್ಲಿದ್ದ ಅವರು ಚೆಸ್ ಆಡುತ್ತಿದ್ದರು.. ಅನ್ನುವ ಸುದ್ದಿಗಳೆಲ್ಲಾ ನಮ್ಮ ಪತ್ರಿಕೆಗಳಲ್ಲೇಕೆ ಕಾಣಿಸಿಕೊಳ್ಳುತ್ತಿಲ್ಲ? ಅನ್ಹದ್ ಸಹಿತ ಹತ್ತಾರು ಮಾನವ ಹಕ್ಕು ಸಂಘಟನೆಗಳು ಕೊಲೆಯನ್ನು ಅನುಮಾನಿಸಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿವೆ, ತನಿಖೆಗೆ ಆಗ್ರಹಿಸಿವೆ. ಅಷ್ಟೇ ಅಲ್ಲ, ನವೆಂಬರ್ 22, 2011ರಂದು ಸಿದ್ದೀಖಿಯನ್ನು ಬಂಧಿಸಿದ ದೆಹಲಿ ಪೊಲೀಸರು ಈತ ಇಂಡಿಯನ್ ಮುಜಾಹಿದೀನ್ ನ  ಸೂತ್ರದಾರ ಎಂದು ಹೇಳಿದ್ದರು. ಆದರೆ ಬಂಧಿಸಿ ಬಹುತೇಕ ಏಳು ತಿಂಗಳುಗಳೇ ಆಗಿದ್ದರೂ ಆತನ ಮೇಲೆ ಈ ವರೆಗೆ ಆರೋಪ ಪಟ್ಟಿಯನ್ನೇ ದಾಖಲಿಸಿಲ್ಲ. ಜೂನ್ 8ರಂದು ಬೆಳಿಗ್ಗೆ ಆತನ ಕೊಲೆಯಾಗಿದೆ. ಆದರೆ ಅದೇ ದಿನ ಸಂಜೆ ಆತನನ್ನು ಕೋರ್ಟಿಗೆ ಹಾಜರುಪಡಿಸಲು ಸಮಯ ನಿಗದಿಯಾಗಿತ್ತು. ಅಲ್ಲದೇ ಅದೇ ದಿನ ತಮ್ಮ ಕಸ್ಟಡಿಯಿಂದ ದೆಹಲಿ ಪೊಲೀಸರಿಗೆ ಒಪ್ಪಿಸಲು ಮುಂಬೈ ಪೊಲೀಸರು ತೀರ್ಮಾನಿಸಿದ್ದರು. ಇವೆಲ್ಲ ಏನು? ಒಂದು ಕೊಲೆಯನ್ನು ಸಾಮಾನ್ಯ ಪ್ರಕರಣಕ್ಕಿಂತ ಭಿನ್ನವಾಗಿ ನೋಡುವುದಕ್ಕೆ ಈ ಮಾಹಿತಿಗಳೆಲ್ಲ ಒತ್ತಾಯಿಸುವುದಿಲ್ಲವೇ? ಅಂದಹಾಗೆ, ಇಂಡಿಯನ್ ಮುಜಾಹಿದೀನ್ ನ  ಮೇಲೆ ಹತ್ತಾರು ಭಯೋತ್ಪಾದನಾ ಕೃತ್ಯಗಳ ಆರೋಪ ಇದೆ. ಅಂಥದ್ದೊಂದು ತಂಡದ ಸೂತ್ರದಾರನ ಕೊಲೆಯು ಸಾಮಾನ್ಯ ಅನ್ನಿಸಿಕೊಂಡದ್ದೇಕೆ? ಅದರ ಹಿಂದೆ ಸಂಚುಗಳು ಇರಬಾರದೆಂದಿದೆಯೇ? ಸತ್ಯ ಹೊರ ಬೀಳಬಹುದು ಅನ್ನುವ ಭೀತಿಯಿಂದ ಜೈಲಿನ ಹೊರಗಿರುವ ನಿಜವಾದ ಭಯೋತ್ಪಾದಕರು ಕೊಲೆ ಮಾಡಿಸಿರುವ ಸಾಧ್ಯತೆ ಇಲ್ಲವೇ?
        `ಶಂಕಿತ ಉಗ್ರ’ ಅನ್ನುವ ಭೀಕರ ಬಿರುದನ್ನು ತಗುಲಿಸಿಕೊಂಡು ಜೈಲಲ್ಲಿ ಕೊಳೆಯುತ್ತಿದ್ದ ಮುಸ್ಲಿಮ್ ಯುವಕರ ಪರ ವಾದಿಸುತ್ತಿದ್ದ ಮುಂಬೈಯ ವಕೀಲ ಶಾಹಿದ್ ಆಝ್ಮಿಯನ್ನು ಎರಡು ವರ್ಷಗಳ ಹಿಂದೆ ಗುಂಡಿಕ್ಕಿ ಕೊಲ್ಲಲಾಯಿತು. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಕಾಯ್ದೆಯ (ಮೋಕಾ) ಹುಳುಕುಗಳನ್ನು ಮೊತ್ತಮೊದಲು ಎತ್ತಿ ತೋರಿಸಿದ್ದು ಅವರೇ. ಪೊಲೀಸರ ಆರೋಪ ಪಟ್ಟಿಯನ್ನು ಇಂಚಿಂಚೂ  ಪರೀಕ್ಷೆಗೊಡ್ಡಿ ತಪ್ಪುಗಳನ್ನು ಪತ್ತೆ ಹಚ್ಚಿ  ಕೆಲವು 'ಶಂಕಿತ ಉಗ್ರ'ರನ್ನು ಬಿಡುಗಡೆಗೊಳಿಸಲು ನೆರವಾದದ್ದೂ ಅವರೇ. ನಿರಪರಾಧಿ `ಉಗ್ರ’ರ ಪಾಲಿಗೆ ಅವರು ಭರವಸೆಯಾಗಿದ್ದರು. ಫೀಸು ಪಡಕೊಳ್ಳದೇ ಕಕ್ಷಿದಾರರ ಪರ ವಾದಿಸುತ್ತಿದ್ದರು. ಸದ್ಯ ಅವರ ಹತ್ಯೆಯ ಆರೋಪವನ್ನು ಛೋಟಾ ರಾಜನ್ ನ  ಮೇಲೆ ಹೊರಿಸಲಾಗಿದ್ದರೂ ಅದರ ಸೂತ್ರದಾರರು ಮುಂಬೈ ಪೊಲೀಸರೇ ಎಂಬ ಅನುಮಾನ ಈಗಲೂ ಇದೆ. ಹೀಗಿರುವಾಗ ಸಿದ್ದೀಖಿಯ ಕೊಲೆಯನ್ನು ಸಾಮಾನ್ಯ ಕೊಲೆ ಎಂದು ಹೇಗೆ ನಂಬುವುದು? ಅಷ್ಟಕ್ಕೂ ಮಾಲೆಗಾಂವ್, ಸಂಜೋತಾ ಎಕ್ಸ್ ಪ್ರೆಸ್ , ಮಕ್ಕಾ ಮಸೀದಿ ಸಹಿತ ಹತ್ತಾರು ಸ್ಫೋಟ ಪ್ರಕರಣಗಳ ಆರೋಪವನ್ನು ಮೊದಲು ಲಷ್ಕರ್, ಇಂಡಿಯನ್ ಮುಜಾಹಿದೀನ್ ನ  ಮೇಲೆ ಹೊರಿಸಲಾಗಿತ್ತು. ಆ ಬಳಿಕ ಅದು ಅಭಿನವ್ ಭಾರತ್ ಅನ್ನುವ ಸಂಘಟನೆಯೊಂದರ ಕೃತ್ಯ ಅನ್ನುವುದು ಬೆಳಕಿಗೆ ಬಂತು.ಸಾಧ್ವಿ , ಪುರೋಹಿತ್ ರ  ಬಂಧನವಾಯಿತು . ಆದ್ದರಿಂದ, ಸಿದ್ದೀಖಿಯ ಮೇಲೆ ಪೊಲೀಸರು ಯಾವ ಆರೋಪವನ್ನು ಈಗ ಹೊರಿಸಿದ್ದಾರೋ ಅದುವೇ ಅಂತಿಮ ಅನ್ನುವಂತಿಲ್ಲ. ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ 21 ಮುಸ್ಲಿಮ್ ಯುವಕರನ್ನು ಪೊಲೀಸರು ಬಂಧಿಸಿ 3 ವರ್ಷಗಳ ಕಾಲ ಜೈಲಲ್ಲಿಟ್ಟಿದ್ದರು. ಮಸೀದಿಗೆ ಬಾಂಬಿಟ್ಟು ಕೋಮುಗಲಭೆ ಹುಟ್ಟಿಸುವುದು ಇವರ ಉದ್ದೇಶ ಎಂದು ಅವರು ಸಮರ್ಥಿಸಿದ್ದರು. ಆದರೆ ಆ ಬಳಿಕ ಅದು ಅಭಿನವ್ ಭಾರತ್ ನ  ಕೃತ್ಯ ಎಂಬುದು ಸಾಬೀತಾಯಿತು. ಇದೀಗ ಸಿದ್ದೀಖಿಯ ಮೇಲೆ ದೆಹಲಿಯ ಜಾಮಾ ಮಸೀದಿಯಲ್ಲಿ ಗುಂಡು ಹಾರಿಸಿದ ಆರೋಪವಿದೆ. ಬಹುಶಃ ಮಕ್ಕಾ ಮಸೀದಿಯಂತೆ ಈ ಪ್ರಕರಣಕ್ಕೂ ಇನ್ನೊಂದು ಮುಖ ಇರಲಾರದೆಂದು ಹೇಳಲು ಸಾಧ್ಯವಿಲ್ಲ. ಆ ಮುಖ ಬಹಿರಂಗವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಸಿದ್ದೀಖಿಯ ಕೊಲೆ ನಡೆದಿರಬಹುದೇ? ಆತ ಅಮಾಯಕನೆಂದು ಸಾಬೀತಾದರೆ ಇಂಡಿಯನ್ ಮುಜಾಹಿದೀನ್ ನ  ಸೂತ್ರದಾರ ಅನ್ನುವ ಪೊಲೀಸರ ಹೇಳಿಕೆಯು ಹಾಸ್ಯಾಸ್ಪದವಾಗುತ್ತಾದ್ದರಿಂದ ಆತನನ್ನೇ ಮುಗಿಸುವ ಸಂಚು ನಡೆದಿರಬಹುದೇ?
        ಏನೇ ಆಗಲಿ, ಸಿದ್ದೀಖಿಯ ಸಾವು `ದೇಶಭಕ್ತಿ’ ಮುಖವಾಡದಲ್ಲಿ ಕೊಚ್ಚಿ ಹೋಗಬಾರದು. ಸಿದ್ದೀಖಿ ಎಂಬ ಶಂಕಿತ ಉಗ್ರನನ್ನು ಕೊಂದ ಅಸಲಿ ಉಗ್ರರನ್ನು ಪತ್ತೆ ಹಚ್ಚಲೇಬೇಕು. ಜೈಲಿನ ಹೊರಗಿರುವ ಅಸಲಿ ಉಗ್ರರಿಂದ ಜೈಲಿನೊಳಗಿನ ಶಂಕಿತ ಉಗ್ರರನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ.