Wednesday, 27 May 2015

ಮುಕುಂದ್, ಓಂಕಾರ್‍ರ ಸಂಖ್ಯೆ ಅಸಂಖ್ಯವಾಗಲಿ...

ಝೀಶಾನ್ ಅಲಿ ಖಾನ್
    ಕೋಮುವಾದಿ ಸಿದ್ಧಾಂತವನ್ನು ಎದೆಯೊಳಗಿಟ್ಟುಕೊಂಡು ಬದುಕುತ್ತಿರುವ ಸರ್ವರನ್ನೂ ಓಂಕಾರ್ ಬಾನ್‍ಸೋಡೆ ಮತ್ತು ಮುಕುಂದ್ ಪಾಂಡೆ ಎಂಬಿಬ್ಬರು ಯುವಕರು ತರಾಟೆಗೆ ಎತ್ತಿಕೊಂಡಿದ್ದಾರೆ. ಅಂಥವರ ಆತ್ಮಸಾಕ್ಷಿಗೆ ತಮ್ಮ ಮನುಷ್ಯ ಪ್ರೇಮಿ ನಡೆಯ ಮೂಲಕ ಬಲವಾಗಿ ಚುಚ್ಚಿದ್ದಾರೆ. ಘಟನೆ ನಡೆದಿರುವುದು ಕಳೆದ ವಾರ. ವಜ್ರವನ್ನು ರಫ್ತು ಮಾಡುವ ಹರೇಕೃಷ್ಣ ಎಕ್ಸ್ ಪೋರ್ಟ್ (HKE) ಎಂಬ ಪ್ರಭಾವಿ ಕಂಪೆನಿಗೆ ಝೀಶಾನ್ ಅಲಿ ಖಾನ್ ಎಂಬ ಮುಂಬೈಯ ಎಂಬಿಎ ಪದವೀಧರ ಯುವಕ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದ. ಆತನ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಕಳೆದ ವಾರ ಕಂಪೆನಿಯಿಂದ  ಇಮೇಲ್ ಬರುತ್ತದೆ. ‘ಮುಸ್ಲಿಮರನ್ನು ಕಂಪೆನಿ ಪರಿಗಣಿಸುವುದಿಲ್ಲ' ಎಂಬುದನ್ನು ಅದಕ್ಕೆ ಕಾರಣವಾಗಿ ಉಲ್ಲೇಖಿಸುತ್ತದೆ. ಈ ಇಮೇಲ್ ಅನ್ನು ಝೀಶನ್ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಾನೆ. ವಿಶೇಷ ಏನೆಂದರೆ, ಈತನ ಜೊತೆಯಲ್ಲೇ ಓಂಕಾರ್ ಮತ್ತು ಮುಕುಂದ್‍ರು ಈ ಕಂಪೆನಿಗೆ ಅರ್ಜಿ ಹಾಕಿದ್ದರು. ಆ ಪ್ರಕಾರ ಅವರಿಗೆ ಇಂಟರ್‍ವ್ಯೂವ್‍ಗಾಗಿ ಕರೆ ಬಂದಿತ್ತು. ಉದ್ಯೋಗಿಯಾಗಿ ನೇಮಕಗೊಳ್ಳುವುದಕ್ಕೆ ಬೇಕಾದ ಆರಂಭಿಕ ಪರೀಕ್ಷೆಗಳಲ್ಲೂ ಅವರು ಉತ್ತೀರ್ಣರಾಗಿದ್ದರು. ಆದರೆ ಝೀಶನ್ ಅಲಿಯ ಪ್ರಕರಣ ಅವರ ಗಮನಕ್ಕೆ ಬಂದದ್ದೇ ತಡ ಅವರು ಕಂಪೆನಿಯ ಉದ್ಯೋಗದ ಆಫರ್ ಅನ್ನೇ ತಿರಸ್ಕರಿಸಿದರು. ಝೀಶನ್ ಅಲಿಯ ಮೇಲಾದ ಪಕ್ಷಪಾತವನ್ನು ಅವರು ಬಹಿರಂಗವಾಗಿಯೇ ಖಂಡಿಸಿದರು. ಅಲ್ಲದೇ ಮುಂಬೈಯಲ್ಲಿರುವ ಕಂಪೆನಿಯ ಕಚೇರಿಗೆ ಭೇಟಿ ಕೊಟ್ಟು ಅಲ್ಲಿನ ವಾತಾವರಣವನ್ನು ಅರಿತುಕೊಳ್ಳಲು ಪ್ರಯತ್ನಿಸಿದರು. ಹಿಂದೂಗಳಿಗೆ ಮಾತ್ರ ಪ್ರಾಶಸ್ತ್ಯ ಇರುವ ಮತ್ತು ಸಸ್ಯಾಹಾರದ ಪರ ಕಟ್ಟುನಿಟ್ಟಿನ ನಿಯಮಗಳಿರುವ ಕಂಪೆನಿಯ ಬಗ್ಗೆ ಅವರು ತಮ್ಮ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದರು. ನಿಜವಾಗಿ, ಓಂಕಾರ್ ಮತ್ತು ಮುಕುಂದ್ ಕಳೆದ ವಾರದ ಹೀರೋಗಳು. ಮಾನವ ಪ್ರೇಮದ ಬಗ್ಗೆ ಅವರಿಗಿರುವ ಖಚಿತ ವಿಶ್ವಾಸಕ್ಕಾಗಿ ನಾವು ಅವರನ್ನು ಮನಃಪೂರ್ವಕ ಅಭಿನಂದಿಸಬೇಕಾಗಿದೆ.
 ಇವತ್ತಿನ ಸುದ್ದಿಗಳ ಮಾರುಕಟ್ಟೆಯಲ್ಲಿ ನಕಾರಾತ್ಮಕ ಸುದ್ದಿಗಳಿಗೆ ಬಹುಬೇಡಿಕೆಯಿದೆ. ಮಾನಭಂಗ- ಬ್ರೇಕಿಂಗ್ ನ್ಯೂಸ್. ದರೋಡೆ- ಮುಖಪುಟದ ಸುದ್ದಿ. ಕೊಲೆ, ಅತ್ಯಾಚಾರ, ಕ್ರೌರ್ಯಗಳೆಲ್ಲ ವಾರಗಟ್ಟಲೆ ಚರ್ಚಿಸಬಹುದಾದ ಸುದ್ದಿಗಳು. ಹಾಗಂತ ಇವು ಪ್ರಮುಖ ಸುದ್ದಿಗಳಲ್ಲ ಎಂದು ಅರ್ಥವಲ್ಲ. ಆದರೆ ಈ ಸುದ್ದಿಗಳ ನಡುವೆಯೇ ನೂರಾರು ಓಂಕಾರ್‍ಗಳು, ಮುಕುಂದ್‍ರು ಬದುಕುತ್ತಿರುತ್ತಾರೆ. ಅವರು ಮಾನಭಂಗವನ್ನು ಪ್ರಶ್ನಿಸಿರುತ್ತಾರೆ. ಅತ್ಯಾಚಾರವನ್ನು ತಡೆದಿರುತ್ತಾರೆ. ಹತ್ಯಾಕಾಂಡ, ಕ್ರೌರ್ಯಗಳ ವಿರುದ್ಧ ಪ್ರಾಣದ ಹಂಗು ತೊರೆದು ಪ್ರತಿಭಟಿಸಿರುತ್ತಾರೆ. ಆದರೆ ನಕಾರಾತ್ಮಕ ಸುದ್ದಿಗಳ ಮೇಲಿರುವ ನಮ್ಮ ಒಲವು ಅನೇಕ ಬಾರಿ ಇಂಥವರು ಹೀರೋ ಆಗುವುದನ್ನು ತಪ್ಪಿಸಿಬಿಡುತ್ತದೆ. ಈ ದೇಶದಲ್ಲಿ ಕೋಮುಗಲಭೆಗಳು, ಹತ್ಯಾಕಾಂಡಗಳಷ್ಟೇ ನಡೆದಿರುವುದಲ್ಲ. ಅಂಥ ಸಂದರ್ಭದಲ್ಲಿ ಮಾನವೀಯತೆಯ ಅಸಂಖ್ಯ ಘಟನೆಗಳೂ ನಡೆಯುತ್ತಿರುತ್ತವೆ. ಮುಸ್ಲಿಮರನ್ನು ತನ್ನ ಮನೆಯೊಳಗೆ ಕೂರಿಸಿ ರಕ್ಷಿಸಿದ ಹಿಂದೂಗಳಿದ್ದಾರೆ. ಹಿಂದೂಗಳನ್ನು ರಕ್ಷಿಸಿದ ಮುಸ್ಲಿಮರಿದ್ದಾರೆ. ಮುಸ್ಲಿಮರ ಮನೆಗೆ ನೀರು ಒದಗಿಸುವ ಹಿಂದೂ, ಹಿಂದೂಗಳನ್ನು ಮನೆಯ ಸದಸ್ಯರಂತೆ ಪ್ರೀತಿಸುವ ಮುಸ್ಲಿಮ್ ಈ ಸಮಾಜದಲ್ಲಿ ಇವತ್ತೂ ಬದುಕುತ್ತಿದ್ದಾರೆ. ಅವರು ಪರಸ್ಪರ ಮದುವೆ, ಮುಂಜಿ, ಹಬ್ಬಗಳನ್ನು ಹಿಂದೂ-ಮುಸ್ಲಿಮ್ ವಿಭಜನೆಯಿಲ್ಲದೇ ಆಚರಿಸುತ್ತಾರೆ, ಅನುಭವಿಸುತ್ತಾರೆ. ಅವರ ಮೇಲೆ ಮನುಷ್ಯ ವಿರೋಧಿ ಪ್ರಚಾರಗಳು ಪ್ರಭಾವ ಬೀರಿಲ್ಲ. ‘ಲವ್ ಜಿಹಾದ್', ‘ಘರ್ ವಾಪ್‍ಸಿ', ‘ಟೆರರಿಸಂಗಳು ಅವರ ಅನ್ಯೋನ್ಯತೆಯನ್ನು ಕಡಿದು ಬಿಡಲು ಯಶಸ್ವಿಯಾಗಿಲ್ಲ. ನಿಜವಾಗಿ, ಇಂಥ ಮಾನವೀಯ ಘಟನೆಗಳು ಸಮಾಜದ ಮುಂದೆ ಮತ್ತೆ ಮತ್ತೆ ಬರಬೇಕು. ಅವು ಚರ್ಚೆಗೆ ಒಳಪಡಬೇಕು. ಇಂಥವುಗಳಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ ಲಭಿಸಿದಂತೆಯೇ ಹರೇ ಕೃಷ್ಣ ಎಕ್ಸ್ ಪೋರ್ಟ್ ನಂಥ ಕಂಪೆನಿಗಳು ಮುಜುಗರಕ್ಕೆ ಒಳಗಾಗುತ್ತಲೇ ಹೋಗುತ್ತವೆ. ಅಷ್ಟಕ್ಕೂ, ಮನುಷ್ಯ ವಿರೋಧಿಯಾದ ಕಂಪೆನಿಯನ್ನೋ ವ್ಯಕ್ತಿಯನ್ನೋ ಮುಖ ಮುಚ್ಚಿ ಬದುಕುವಂತೆ ಮಾಡುವುದಕ್ಕೆ ನಾವು ಪ್ರತಿಭಟನೆಯೊಂದನ್ನೇ ಆಶ್ರಯಿಸಿಕೊಳ್ಳಬೇಕಿಲ್ಲ. ಇಂಥ ಮನುಷ್ಯ ಪ್ರೇಮಿ ಮುಖಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಿಬಿಟ್ಟರೂ ಸಾಕಾಗುತ್ತದೆ.
 ಅಂದಹಾಗೆ, ಝೀಶನ್ ಅಲಿ ಒಂಟಿಯಲ್ಲ. ಆತನಂತೆ ಧರ್ಮದ ಕಾರಣಕ್ಕಾಗಿ ತಿರಸ್ಕೃತಗೊಂಡವರ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಅವರಲ್ಲಿ ಪ್ರತಿಭೆಯಿದೆ, ಶೈಕ್ಷಣಿಕ ಅರ್ಹತೆಯಿದೆ, ದೈಹಿಕವಾದ ಸಾಮರ್ಥ್ಯವೂ ಇದೆ. ಆದರೂ ಅವರು ಸಮಾಜದ ಮುಖ್ಯ ವಾಹಿನಿಯಿಂದ ಆಗಾಗ ತಿರಸ್ಕೃತಗೊಳ್ಳುತ್ತಲೇ ಇರುತ್ತಾರೆ. ಹರೇಕೃಷ್ಣ ಎಕ್ಸ್ ಪೋರ್ಟ್ ಕಂಪೆನಿಯೇನೋ ತನ್ನ ಮನುಷ್ಯ ವಿರೋಧಿ ರೋಗವನ್ನು ಇಮೇಲ್ ಮೂಲಕ ಬಹಿರಂಗವಾಗಿಯೇ ಹೇಳಿಕೊಂಡಿತು. ಆದರೆ ಹೆಚ್ಚಿನೆಲ್ಲ ಸಂಸ್ಥೆಗಳು ಹೀಗೆ ಹೇಳಿಕೊಳ್ಳುವುದಿಲ್ಲ. ಅವು ರೋಗವನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಹೊರಗಡೆ ಮನುಷ್ಯ ಪ್ರೇಮದ ಮುಖವಾಡವನ್ನು ಹಾಕಿಕೊಂಡಿರುತ್ತವೆ. ತಮಗೆ ಬಂದ ಅರ್ಜಿಯನ್ನು ದಲಿತರು, ಶೂದ್ರರು, ಮಾದಿಗರು, ಮುಸ್ಲಿಮರು, ಕ್ರೈಸ್ತರು, ಬ್ರಾಹ್ಮಣರು.. ಎಂದು ವಿಭಜಿಸುತ್ತಾ ಪ್ರತಿಭೆಯನ್ನು ಹುಟ್ಟಿನ ಆಧಾರದಲ್ಲಿ ಅವು ವಿಂಗಡಿಸಿಬಿಡುತ್ತವೆ. ನಿಜವಾಗಿ, ಒಂದು ಸಮಾಜದ ಆಲೋಚನಾ ಕ್ರಮವನ್ನೇ ಬದಲಿಸಿಬಿಡಲು ಪ್ರಚೋದನೆ ನೀಡಬಹುದಾದ ಅಪಾಯಕಾರಿ ವರ್ತನೆಗಳಿವು. ಅನೇಕ ಬಾರಿ ಇಂಥ ಪಕ್ಷಪಾತಿ ನಿಲುವುಗಳೇ ವ್ಯಕ್ತಿಯನ್ನು ಕೋಮುವಾದಿಯನ್ನಾಗಿ ಮಾಡಿಬಿಡುತ್ತದೆ. ಉಗ್ರ ಚಿಂತನೆಯೆಡೆಗೆ ದೂಡಿ ಬಿಡುತ್ತದೆ. ದುರಂತ ಏನೆಂದರೆ, ಹೊರನೋಟಕ್ಕೆ ಇಂಥ ಸಂಸ್ಥೆಗಳ ನಿಲುವುಗಳು ಗೋಚರಕ್ಕೆ ಬರುವುದಿಲ್ಲವಾದ್ದರಿಂದ ವ್ಯಕ್ತಿಯ ಕೋಮುವಾದಕ್ಕಾಗಿ ನಾವು ಆತನ ಧರ್ಮವನ್ನು ಹೊಣೆ ಮಾಡುತ್ತೇವೆ. ಆತನ ಉಗ್ರ ಚಿಂತನೆಗೆ ಆತನ ಧರ್ಮದ ವಿಚಾರಧಾರೆಗಳೇ ಕಾರಣ ಅನ್ನುತ್ತೇವೆ. ಆದರೆ ಇವರನ್ನು ಉತ್ಪಾದಿಸುವ ಹರೇಕೃಷ್ಣ ಎಕ್ಸ್ ಪೋರ್ಟ್‍ನಂಥ ಕಂಪೆನಿಗಳು ಯಾವ ಸಂದರ್ಭದಲ್ಲೂ ಕಾನೂನಿನ ವ್ಯಾಪ್ತಿಯೊಳಗೇ ನಿಲ್ಲುವುದೇ ಇಲ್ಲ. ಅವು ಸಮಾಜಕ್ಕೆ ಮತ್ತೆ ಮತ್ತೆ
ಕಂಪೆನಿಯಿಂದ ಬಂದ  ಇಮೇಲ್
ಕೋಮುವಾದಿಗಳನ್ನೋ ಟಿರರಿಸ್ಟ್ ಗಳನ್ನೋ ಉತ್ಪಾದಿಸಿ ಬಿಡುಗಡೆ ಮಾಡುತ್ತಲೇ ಇರುತ್ತವೆ. ನಾವು ಮುಕುಂದ್ ಮತ್ತು ಓಂಕಾರ್‍ರನ್ನು ಅಭಿನಂದಿಸಬೇಕಾದದ್ದು ಈ ಬಹುಮುಖ್ಯ  ಕಾರಣಕ್ಕಾಗಿ. ಅವರು ಈ ಪಕ್ಷಪಾತಿ ಮನೋಭಾವವನ್ನು ಪ್ರಶ್ನಿಸಿದ್ದಾರೆ. ಹಾಗಂತ, ಅವರು ಪ್ರಶ್ನಿಸಲೇಬೇಕಾದ ಅಗತ್ಯವೇನೂ ಇರಲಿಲ್ಲ. ತಮಗೆ ಸಿಕ್ಕ ಉದ್ಯೋಗವನ್ನು ಅನುಭವಿಸಿಕೊಂಡು ಸುಮ್ಮನಿರಬಹುದಾದ ಎಲ್ಲ ಅವಕಾಶಗಳೂ ಅವರಿಗಿದ್ದುವು. ಝೀಶನ್ ಅಲಿ ಅವರ ಧರ್ಮದವನಲ್ಲ. ಓರಗೆಯವನೂ ಅಲ್ಲ. ಆದರೆ ಆ ಯುವಕರಿಬ್ಬರು ನಿಜವಾದ ಹಿಂದೂಗಳಾಗಿದ್ದರು. ನಿಜವಾದ ಹಿಂದೂವೊಬ್ಬ ಕೋಮುವಾದಿ, ಪಕ್ಷಪಾತಿಯಾಗುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತೋರಿಸಿಕೊಟ್ಟರು. ಇದು ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ. ಸಮಾಜವನ್ನು ನಕಾರಾತ್ಮಕ ಮತ್ತು ಕೋಮುವಾದಿ ಚಿಂತನೆಗಳಿಂದ ಹೊರತರಬೇಕಾದರೆ ಇಂಥ ಮನುಷ್ಯ ಪ್ರೇಮದ ಘಟನೆಗಳು ಹೆಚ್ಚೆಚ್ಚು ನಡೆಯಬೇಕು ಮತ್ತು ಅವುಗಳಿಗೆ ಪ್ರಚಾರ ಸಿಗಬೇಕು. ಮುಕುಂದ್ ಮತ್ತು ಓಂಕಾರ್ ಈ ಸಮಾಜದ ಭರವಸೆಗಳು. ಅವರ ಬೆಲೆ ಹರೇಕೃಷ್ಣ ಎಕ್ಸ್ ಪೋರ್ಟ್ ಸಂಸ್ಥೆಯ ವಜ್ರಕ್ಕಿಂತ ಮಿಗಿಲಾದುದು. ಇಂಥವರ ಸಂಖ್ಯೆ ಅಸಂಖ್ಯವಾಗಲಿ ಎಂದು ಹಾರೈಸೋಣ. ಅವರ ಧೈರ್ಯದ ನಿಲುವಿಗಾಗಿ ಅಭಿನಂದಿಸೋಣ.

.

Monday, 18 May 2015

ಐನ್‍ಸ್ಟಿನ್‍ರ ಪತ್ರ ಮತ್ತು ಹರ್ಮನ್‍ ಸಿಂಗ್ ರ ಟರ್ಬನ್

   
 ಕಳೆದವಾರ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಒಂದು ಖ್ಯಾತ ವಿಜ್ಞಾನಿ ಐನ್‍ಸ್ಟಿನ್‍ಗೆ ಸಂಬಂಧಿಸಿದ್ದಾದರೆ ಇನ್ನೊಂದು ಹರ್ಮನ್ ಸಿಂಗ್ ಎಂಬ 22ರ ಯುವಕನಿಗೆ ಸಂಬಂಧಿಸಿದ್ದು. ದೇವ ಮತ್ತು ಧರ್ಮಕ್ಕೆ ಸಂಬಂಧಿಸಿದ ಚಿಂತನೆಗಳೂ ಸೇರಿದಂತೆ ಐನ್‍ಸ್ಟಿನ್‍ರ ವಿವಿಧ ಬರಹಗಳು ಜೂನ್ 11ರಂದು ಏಲಂ ಆಗಲಿವೆ ಅನ್ನುವುದು ಮೊದಲ ಸುದ್ದಿ. `ತಾನು ಎಂದೆಂದೂ ನಾಸ್ತಿಕ' ಎಂದು ಹೇಳಿಕೊಂಡು 1945 ಜುಲೈನಲ್ಲಿ ಐನ್‍ಸ್ಟಿನ್‍ರು ತನ್ನ ಗೆಳೆಯ ಕ್ಯಾನರ್‍ಗೆ ಪತ್ರ ಬರೆದಿದ್ದರು. ಅಲ್ಲದೆ, 1949ರಲ್ಲಿ ಮತ್ತೆ ತನ್ನ `ನಾಸ್ತಿಕ' ನಿಲುವನ್ನು ಸಮರ್ಥಿಸಿಕೊಂಡು ಅದೇ ಗೆಳೆಯನಿಗೆ ಮತ್ತೊಂದು ಪತ್ರ ಬರೆದಿದ್ದರು. ಇವಲ್ಲದೇ ತನ್ನ ಮಾಜಿ ಪತ್ನಿ ಮಿಲೆವಾ ಮ್ಯಾರಿಕ್ ಹಾಗೂ ಮಕ್ಕಳಾದ ಹ್ಯಾನ್ಸ್ ಮತ್ತು ಎಡ್ವರ್ಡ್ ಐನ್‍ಸ್ಟಿನ್‍ರಿಗೆ ಬರೆದ ಪತ್ರಗಳೂ ಈ ಏಲಂನಲ್ಲಿ ಒಳಗೊಳ್ಳಲಿವೆ ಎಂದು ಹೇಳಲಾಗಿದೆ. ಈ ಸುದ್ದಿಗಿಂತ ಒಂದು ದಿನ ಮೊದಲು ನ್ಯೂಝಿಲ್ಯಾಂಡ್‍ನಲ್ಲಿರುವ ಹರ್ಮನ್‍ಸಿಂಗ್ ಸುದ್ದಿಗೀಡಾಗಿದ್ದಾನೆ. ತನ್ನ ಅಕ್ಕನ ಜೊತೆ ಶಾಲೆಗೆ ಹೋಗುತ್ತಿದ್ದ ಐದರ ಹುಡುಗನಿಗೆ ಕಾರು ಢಿಕ್ಕಿಯಾಗಿ ತಲೆಯಿಂದ ರಕ್ತಸ್ರಾವವಾಗುತ್ತದೆ. ಅಲ್ಲೇ ಇದ್ದ ಹರ್ಮನ್ ಸಿಂಗ್ ತನ್ನ ತಲೆಯ ಟರ್ಬನ್ ಅನ್ನು ಕಳಚಿ ಮಗುವಿನ ತಲೆಗೆ ಕಟ್ಟುತ್ತಾನೆ. ಸಿಖ್ಖರಲ್ಲಿ ಟರ್ಬನ್ ಕಳಚುವುದಕ್ಕೆ ಕೆಲವು ಕಠಿಣ ನಿಬಂಧನೆಗಳಿವೆ. ಅಪರೂಪಕ್ಕೊಮ್ಮೆ ಅದನ್ನು ಕಳಚಲಾಗುತ್ತದೆ. ಆದ್ದರಿಂದಲೇ ಹರ್ಮನ್ ಸಿಂಗ್‍ನ ಟರ್ಬನ್ ಪ್ರಕರಣವು ನ್ಯೂಝಿಲ್ಯಾಂಡ್ ಮತ್ತು ಪಕ್ಕದ ಆಸ್ಟ್ರೇಲಿಯಾಗಳಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಮತ್ತು ಶ್ಲಾಘನೆಗೆ ಪಾತ್ರವಾಗುತ್ತದೆ.
    ನಿಜವಾಗಿ, ಈ ಜಗತ್ತು ಕಂಡ ಅಪರೂಪದ ವಿಜ್ಞಾನಿ ಐನ್‍ಸ್ಟಿನ್. ಅಣ್ವಸ್ತ್ರಗಳ ತಯಾರಿಕೆಯಲ್ಲಿ ಅವರ ಥಿಯರಿಗೆ ಮಹತ್ವದ ಪಾತ್ರವಿದೆ ಎಂಬುದು ಎಲ್ಲರಿಗೂ ಗೊತ್ತು. ಜಪಾನಿನ ಹಿರೋಶಿಮ ಮತ್ತು ನಾಗಸಾಕಿಗೆ ಅಮೇರಿಕವು ಬಾಂಬ್ ಹಾಕಿದ ಒಂದು ತಿಂಗಳ ಬಳಿಕ ಅವರು ತನ್ನ ಮಗನಿಗೆ ಬರೆದ ಪತ್ರದಲ್ಲಿ ತನ್ನ ರಿಲೇಟಿವಿಟಿ ಥಿಯರಿಗೂ ಅಣುಬಾಂಬ್‍ಗೂ ನಡುವೆ ಇರುವ ಸಂಬಂಧವನ್ನು ಚರ್ಚಿಸಿದ್ದರು. ಅಂದಹಾಗೆ, ಧರ್ಮ ಮತ್ತು ದೇವರ ಬಗ್ಗೆ ಅವರ ಅಭಿಪ್ರಾಯಗಳು ಎಷ್ಟೇ ನಕಾರಾತ್ಮಕವಾಗಿರಲಿ, ಲಕ್ಷಾಂತರ ಮಂದಿಯ ಸಾವಿನಲ್ಲಿ ಅವರ ಚಿಂತನೆಗಳಿಗೂ ಪಾತ್ರವಿತ್ತು ಎಂಬುದನ್ನು ನಿರಾಕರಿಸುವ ಹಾಗಿಲ್ಲ. ದೇವರನ್ನು ಮತ್ತು ಧರ್ಮವನ್ನು ನಂಬುವ ಮನುಷ್ಯರ ಕೊಲೆಗೆ ಅವರ ಚಿಂತನೆಗಳನ್ನು ಬಳಸಲಾಗಿದೆ. ಅಷ್ಟಕ್ಕೂ, ನಾಸ್ತಿಕ ಎಂಬುದು ಆಸ್ತಿಕ ಎಂಬುದರ ವಿರೋಧ ಪದವೇನೂ ಆಗಬೇಕಿಲ್ಲ. ಒಂದು ಶ್ರೇಷ್ಠ ಇನ್ನೊಂದು ಕನಿಷ್ಠ ಎಂಬ ವಿಭಜನೆಯೂ ಬೇಕಿಲ್ಲ. ಹಿಟ್ಲರ್ ಆಸ್ತಿಕನಾಗಿದ್ದ, ಜಪಾನ್‍ಗೆ ಅಣುಬಾಂಬ್ ಹಾಕಿದವರೂ ಆಸ್ತಿಕರಾಗಿದ್ದರು, ಮುಸೋಲೋನಿ ಆಸ್ತಿಕನಾಗಿದ್ದ...  ಎಂದೆಲ್ಲಾ ಹೇಳಿ ಅಸ್ತಿಕರನ್ನು ಕ್ರೂರಿಗಳೆಂದು ಹೇಳುವಾಗ ಈ ಬಾಂಬ್‍ಗಳ ತಯಾರಿಯಲ್ಲಿ ನಾಸ್ತಿಕರೆನಿಸಿದ ಐನ್‍ಸ್ಟಿನ್‍ನಂಥ ವಿಜ್ಞಾನಿಗಳಿದ್ದಾರೆ ಎಂದೂ ಹೇಳಬೇಕಾಗುತ್ತದೆ. ಧರ್ಮ ಎಂಬುದು ಮಾನವೀಯ ಎಂಬ ಪದಕ್ಕೆ ಅನ್ವರ್ಥವಾದುದು. ಅದು ಮನುಷ್ಯರಿಗಾಗಿ ಇರುವಂಥದ್ದು. ಆದ್ದರಿಂದಲೇ ಹರ್ಮನ್ ಸಿಂಗ್‍ಗೆ ತನ್ನ ಟರ್ಬನ್ ಅನ್ನು ಕಳಚಲು ಸಾಧ್ಯವಾದದ್ದು. ಅದು ಧರ್ಮ. ಟರ್ಬನ್ ಅಸ್ತಿಕವಾದದ ಸಂಕೇತವೇ ಹೊರತು ಕ್ರೌರ್ಯದ ಸಂಕೇತ ಅಲ್ಲ.
 ಒಂದು ವ್ಯಕ್ತಿತ್ವವಾಗಿ ಐನ್‍ಸ್ಟಿನ್‍ರ ಮುಂದೆ ಹರ್ಮನ್ ಸಿಂಗ್ ಏನೂ ಅಲ್ಲ. ಅವರಿಬ್ಬರ ನಡುವೆ ಯಾವ ನೆಲೆಯಲ್ಲೂ ಹೋಲಿಕೆಗಳಲ್ಲ. ಆದರೆ ಎರಡು ವಾದಗಳನ್ನು ಪ್ರತಿನಿಧಿಸುವವರೆಂಬ ನೆಲೆಯಲ್ಲಿ ಐನ್‍ಸ್ಟಿನ್ ಮತ್ತು ಹರ್ಮನ್ ಸಿಂಗ್‍ರನ್ನು ನಾವು ಎದುರು-ಬದುರು ನಿಲ್ಲಿಸಬಹುದು. ಹಾಗಂತ, ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ಸಾಬೀತು ಪಡಿಸುವುದು ಇಂಥ ಮುಖಾಮುಖಿಗಳ ಉದ್ದೇಶ ಆಗಬೇಕಿಲ್ಲ. ಅಷ್ಟಕ್ಕೂ, ಧರ್ಮ ಅಫೀಮು ಎಂದು ಹೇಳುವವರಲ್ಲಿ ಅದನ್ನು ಸಮರ್ಥಿಸುವುದಕ್ಕೆ ಉದ್ದದ ಪಟ್ಟಿಯಿದೆ. ಜಗತ್ತಿನಲ್ಲಾದ ಯುದ್ಧ, ಹತ್ಯೆ, ಹತ್ಯಾಕಾಂಡಗಳ ವಿವರವನ್ನು ಅವರು ಅದರ ಸಮರ್ಥನೆಗಾಗಿ ಮುಂದಿಡಬಲ್ಲರು. ನಾಸ್ತಿಕವಾದವನ್ನು ಪ್ರಶ್ನಿಸುವವರಲ್ಲೂ ಇಂಥದ್ದೇ ಉದ್ದದ ಪಟ್ಟಿಯಿದೆ. ನಿಜವಾಗಿ, ಧರ್ಮ ಎಂಬುದು ನಾವು ನಾಸ್ತಿಕ-ಆಸ್ತಿಕ ಎಂಬ ಸೀಮಿತ ಪರಿಧಿಯೊಳಗಿಟ್ಟು ನೋಡುವುದಕ್ಕಿಂತ ವಿಶಾಲವಾದದ್ದು. ನಾಗಸಾಕಿಗೆ ಬಾಂಬ್ ಹಾಕಿದವರು ಅದನ್ನು ಧರ್ಮದ ಕಾರಣಕ್ಕಾಗಿ ಎಸಗಿರುವ ಸಾಧ್ಯತೆಯಿಲ್ಲ. ನಾಸ್ತಿಕವಾದವನ್ನು ಪ್ರತಿಪಾದಿಸಿದ ಸ್ಟಾಲಿನ್ ಮಾನವ ಹತ್ಯಾಕಾಂಡದ ಆರೋಪವನ್ನು ಹೊತ್ತುಕೊಂಡಿದ್ದಾರೆ. ತನ್ನ ಪತ್ನಿಯನ್ನೇ ಗುಂಡಿಟ್ಟು ಕೊಂದ ಆರೋಪ ಸ್ಟಾಲಿನ್ ಮೇಲಿದೆ. ಹಾಗಂತ, ಸ್ಟಾಲಿನ್ ಎಸಗಿದ ಹತ್ಯಾಕಾಂಡ ಮತ್ತು ಹತ್ಯೆಗಳಿಗೆ ಅವರ ನಾಸ್ತಿಕ ವಾದವೇ ಕಾರಣ ಎಂದು ವಾದಿಸುವುದು ಅಸಾಧುವಾಗುತ್ತದೆ. ಧರ್ಮ ಕ್ರೌರ್ಯದ ವಿರೋಧ ಪದ. ಆದ್ದರಿಂದಲೇ ಹರ್ಮನ್ ಸಿಂಗ್‍ನ ಮನಸ್ಸು ಮಗುವಿನ ರಕ್ತಕ್ಕೆ ಸ್ಪಂಧಿಸಿತು. ನಮಾಝ್ ನಡೆಯುತ್ತಿರುವ ಪಕ್ಕದಲ್ಲೇ ಮನೆ ಉರಿಯುತ್ತಿದ್ದರೆ ನಮಾಜ್ ಬಿಟ್ಟು ಮನೆಯ ಬೆಂಕಿಯನ್ನು ನಂದಿಸುವುದನ್ನೇ ಇಸ್ಲಾಮ್ ಧರ್ಮ ಎಂದು ಹೇಳುತ್ತದೆ. ನಮಾಝ್ ದೇವನಿಗೆ ಅತೀ ಹತ್ತಿರ ಮತ್ತು ಬಹು ಪ್ರಾಮುಖ್ಯತೆ ಇರುವ ಆರಾಧನೆಯೇ ಆಗಿರಬಹುದು. ಆದರೆ ಮನುಷ್ಯರ ಸಂಕಟ ಆ ಆರಾಧನೆಗಿಂತ ಮಿಗಿಲು. ನಮಾಝ್‍ನ ವೇಳೆ ಮಗುವಿನ ಅಳು ಕೇಳಿಸಿದರೆ ನಮಾಝನ್ನು ತ್ವರಿತಗೊಳಿಸುವುದು ಧರ್ಮ. ಒಬ್ಬನ ಹತ್ಯೆಯನ್ನು ಸರ್ವ ಮಾನವರ ಹತ್ಯೆಗೆ ಸಮನಾಗಿಸುವುದು ಧರ್ಮ. ಈ ಹಿನ್ನೆಲೆಯಲ್ಲಿ ಧರ್ಮವನ್ನು ಅಧ್ಯಯನ ನಡೆಸಿದರೆ ಹರ್ಮನ್ ಸಿಂಗ್ ಮತ್ತು ಆತ ಪ್ರತಿಪಾದಿಸಿದ ಧರ್ಮ ಅರ್ಥವಾಗುತ್ತದೆ. ಒಂದು ವೇಳೆ ಸ್ಟಾಲಿನ್‍ರ ಹತ್ಯಾಕಾಂಡವನ್ನು ಎದುರಿಟ್ಟುಕೊಂಡು ನಾಸ್ತಿಕವಾದವನ್ನು ಓದಲು ಹೊರಟರೆ ಅದು ‘ಕ್ರೌರ್ಯಗಳ ವಾದ’ ಎಂದು ಹೇಳಬೇಕಾಗುತ್ತದೆ. ಆದರೆ ಇದು ತಪ್ಪು. ವ್ಯಕ್ತಿಗತ ತಪ್ಪುಗಳನ್ನು ‘ವಾದ’ಕ್ಕೆ ಜೋಡಿಸಿ ನೋಡಬಾರದು.
 ಹಿಟ್ಲರ್‍ನಿಂದ ತೊಂದರೆಗೆ ಗುರಿಯಾದ ಐನ್‍ಸ್ಟೀನ್‍ರು ನಾಸ್ತಿಕವಾದವನ್ನು ಪ್ರತಿಪಾದಿಸುವುದರಲ್ಲಿ ಒಂದು ತರ್ಕವಿದೆ. ಹಿಟ್ಲರ್ ತಾನು ಆರ್ಯ ವಂಶಸ್ಥ ಅನ್ನುತ್ತಿದ್ದ. ‘ಧರ್ಮಿಷ್ಠ’ ಎಂದೂ ಗುರುತಿಸಿಕೊಳ್ಳುತ್ತಿದ್ದ. ಆದ್ದರಿಂದ ಆತನ ಅಮಾನವೀಯ ವರ್ತನೆಗಳು ಐನ್‍ಸ್ಟೀನ್‍ರನ್ನು ನಾಸ್ತಿಕವಾದಿಯಾಗಿ ಮಾಡಿರಲೂ ಬಹುದು. ಆದರೆ ಅವರ ನಾಸ್ತಿಕವಾದದ ಪ್ರತಿಪಾದನೆಯುಳ್ಳ ಪತ್ರದ ಏಲಂನ ಸಂದರ್ಭದಲ್ಲಿಯೇ ಹರ್ಮನ್ ಸಿಂಗ್ ತನ್ನ ಟರ್ಬನ್ ಅನ್ನು ಕಳಚಿ ಮಗುವನ್ನು ಉಳಿಸುವ ಪ್ರಯತ್ನ ಮಾಡಿದ್ದಾನೆ. ಈ ಮೂಲಕ ಧರ್ಮ ಮಾನವೀಯವಾದುದು ಮತ್ತು ಅದರ ಮೇಲಿರುವ ಕ್ರೌರ್ಯಗಳ ಆರೋಪ ಅಸಾಧುವಾದುದು ಎಂದು ಸಾರಿದ್ದಾನೆ. ಜೂನ್ 11ರ ಏಲಂನಲ್ಲಿ ಐನ್‍ಸ್ಟೀನ್ ರ ‘ನಾಸ್ತಿಕ' ಪತ್ರಗಳು ಎಷ್ಟು ಬೆಲೆಗೆ ಮಾರಾಟವಾಗುತ್ತದೋ ಏನೋ ಆದರೆ ಬೆಲೆ ಕಟ್ಟಲಾಗದ ಸಂದೇಶವೊಂದನ್ನು ಹರ್ಮನ್ ಸಿಂಗ್ ರವಾನಿಸಿದ್ದಾನೆ. ಮಾನವೀಯತೆಯೇ ಧರ್ಮ ಎಂದ ಆತನನ್ನು ಅಭಿನಂದಿಸೋಣ.

Tuesday, 12 May 2015

ನಕಲಿ ಪ್ರಣಾಳಿಕೆಯನ್ನು ಬಹಿರಂಗಕ್ಕೆ ತಂದ ಬಿಜೆಪಿಯ ‘ರಾಮ’

   ಬಿಜೆಪಿ ಮತ್ತೆ ಮಾತು ಮರೆತಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಅದು ಇತರ ಪಕ್ಷಗಳು ನೀಡದ ಕೆಲವು ವಿಶೇಷ ಭರವಸೆಗಳನ್ನು ಭಾರತೀಯರ ಮುಂದಿಟ್ಟಿತ್ತು. ಅದರಲ್ಲಿ ರಾಮ ಮಂದಿರ ನಿರ್ಮಾಣವೂ ಒಂದು. ಅದಕ್ಕೆಷ್ಟು ಒತ್ತು ನೀಡಲಾಗಿತ್ತೆಂದರೆ, ಪೂರ್ಣ ಬಹುಮತ ಸಿಕ್ಕರೆ ಅಧಿಕಾರಕ್ಕೇರಿದ ದಿನವೇ ಮಂದಿರ ನಿರ್ಮಾಣಕ್ಕಾಗಿ ಪ್ರಯತ್ನಿಸಲಾಗುತ್ತದೆ ಎಂಬಷ್ಟು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ರದ್ಧತಿ, ಸಮಾನ ನಾಗರಿಕ ಸಂಹಿತೆ, ಗೋಹತ್ಯಾ ನಿಷೇಧ.. ಮುಂತಾದುವುಗಳಿಗೂ ಚುನಾವಣಾ ಪ್ರಣಾಳಿಕೆಯಲ್ಲಿ ವಿಶೇಷ ಒತ್ತು ನೀಡಲಾಗಿತ್ತು. ಆದರೆ ಇದೀಗ ‘ರಾಮಮಂದಿರ ನಿರ್ಮಾಣಕ್ಕೆ ಕಾನೂನು ರಚಿಸುವುದಿಲ್ಲ' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದಕ್ಕೆ, ‘ರಾಜ್ಯಸಭೆಯಲ್ಲಿ ಬಹುಮತವಿಲ್ಲ’ ಎಂಬುದನ್ನು ಕಾರಣವಾಗಿ ಕೊಟ್ಟಿದ್ದಾರೆ. ಅಲ್ಲದೇ, ಬಹುಮತ ಸಿಕ್ಕರೂ ಕಾನೂನು ರಚಿಸುವ ಬಗ್ಗೆ ಅವರು ಭರವಸೆ ಕೊಟ್ಟಿಲ್ಲ. ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಒಂದು ಬಗೆಯ ನಿರಾಸಕ್ತಿ ಅವರ ಮಾತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಷ್ಟಕ್ಕೂ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆಯೂ ವಿವಾದಾತ್ಮಕ ಭೂ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಹೊರಟಿರುವ ಪಕ್ಷವೊಂದು ಅದೇ ರಾಜ್ಯಸಭೆಯನ್ನು ತೋರಿಸಿ ರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಏನೆನ್ನಬೇಕು? ಭೂಮಸೂದೆಗೆ ವಿರೋಧ ಪಕ್ಷಗಳು ಬಿಡಿ, ಬಿಜೆಪಿ ಮಿತ್ರಕೂಟದಲ್ಲಿಯೇ ಅಪಸ್ವರ ಇದೆ. ಸಂಘಪರಿವಾರದ ಕಿಸಾನ್ ಮೋರ್ಚಾ ಆಕ್ಷೇಪ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯಿಂದ ತೊಡಗಿ ಅನೇಕಾರು ರೈತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಭೂ ಮಸೂದೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಪ್ರಸ್ತಾಪಿಸಿಯೂ ಇರಲಿಲ್ಲ. ಇಷ್ಟಿದ್ದೂ, ಈ ಭೂ ಮಸೂದೆಗಾಗಿ ಸುಗ್ರೀವಾಜ್ಞೆಯ ಮೊರೆ ಹೋಗುವ ಬಿಜೆಪಿಯು ರಾಮಮಂದಿರ ವಿಷಯದಲ್ಲಿ ಬಹುಮತದ ಕೊರತೆಯನ್ನು ತೋರಿಸುತ್ತಿರುವುದು ಎಷ್ಟು ಪ್ರಾಮಾಣಿಕ? ನಿಜವಾಗಿ, ಬಿಜೆಪಿಗೆ ವರ್ಚಸ್ಸು ಪ್ರಾಪ್ತವಾದದ್ದೇ ರಾಮಮಂದಿರ ಚಳವಳಿಯಿಂದ. ಪ್ರಧಾನಿ ವಿ.ಪಿ. ಸಿಂಗ್‍ರ ಮಂಡಲ್ ವರದಿಗೆ ವಿರುದ್ಧವಾಗಿ ಬಿಜೆಪಿ ಕಮಂಡಲ್ (ರಾಮಮಂದಿರ) ಅನ್ನು ಎತ್ತಿಕೊಂಡ ಬಳಿಕ ಈ ದೇಶದಲ್ಲಿ ಧಾರಾಳ ರಕ್ತ ಹರಿದಿದೆ. ಒಂದಂಕಿಯಲ್ಲಿದ್ದ ಬಿಜೆಪಿಯ ಲೋಕಸಭಾ ಸೀಟುಗಳು ನೂರನ್ನು ದಾಟಿವೆ. ಒಂದು ರೀತಿಯಲ್ಲಿ, ಬಿಜೆಪಿಯ ರಾಮಮಂದಿರ ಚಳವಳಿಯೇ ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದ್ದು. ಅದು ರಾಮಮಂದಿರ ನಿರ್ಮಾಣದ ಹೆಸರಲ್ಲಿ ಇಟ್ಟಿಗೆಯನ್ನು ಸಂಗ್ರಹಿಸಿತು. ದುಡ್ಡನ್ನು ಒಟ್ಟು ಸೇರಿಸಿತು. ಈ ದೇಶದ ಉದ್ದಗಲಕ್ಕೂ ಸಭೆ-ಸಮಾರಂಭಗಳನ್ನು ಏರ್ಪಡಿಸಿ ‘ನಾವು’ ಮತ್ತು ‘ಅವರು’ ಎಂಬ ಎರಡು ಪ್ರತಿಕೃತಿಗಳನ್ನು ರಚಿಸಿತು. ‘ನಾವು' ಸಂತ್ರಸ್ತರು ಮತ್ತು ‘ಅವರು' ಆಕ್ರಮಣಕೋರರು. ಈ ಆಕ್ರಮಣಕೋರರಿಂದ ಮಂದಿರವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಬಿಜೆಪಿ ಹೊತ್ತುಕೊಂಡಿದೆ ಎಂಬ ಧಾಟಿಯಲ್ಲಿ ಅದು ಮಾತಾಡಿತು. ಹೀಗೆ ರಾಮಮಂದಿರದ ಹೆಸರಲ್ಲಿ ಒಂದು ಭಾವುಕ ಸನ್ನಿವೇಶವನ್ನು ನಿರ್ಮಾಣ ಮಾಡಲು 90ರ ದಶಕದಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಅಂದಿನಿಂದ ಕಳೆದ ಲೋಕಸಭಾ ಚುನಾವಣೆಯ ವರೆಗೆ ಸನ್ನಿವೇಶದ ಆರ್ದ್ರತೆಯನ್ನು ಉಳಿಸಿಕೊಂಡು ಬರಲು ಬಿಜೆಪಿ ಉದ್ದಕ್ಕೂ ಪ್ರಯತ್ನಿಸಿದೆ. ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಗೊಂಡಾಗಲೂ ಬಿಜೆಪಿಯ ‘ರಾಮ ಬದ್ಧತೆ' ಪ್ರಶ್ನೆಗೀಡಾಗಿದೆ. ಆದರೆ ಲೋಕಸಭೆಯಲ್ಲಿ ಪೂರ್ಣ ಬಹುಮತವಿಲ್ಲದಿರುವುದನ್ನು ಆಗ ಕಾರಣವಾಗಿ ಕೊಡಲಾಗಿತ್ತು. ಇದೀಗ ಪೂರ್ಣ ಬಹುಮತ ಲಭಿಸಿಯೂ ಬಿಜೆಪಿ ತನ್ನ ಭರವಸೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಏನೆನ್ನಬೇಕು? ಭೂ ಮಸೂದೆಯ ಮೇಲಿರುವ ಆಸಕ್ತಿಯ ಒಂದಂಶವಾದರೂ ರಾಮಮಂದಿರದ ಮೇಲಿಲ್ಲ ಎಂಬುದರ ಹೊರತು ಬೇರೆ ಯಾವ ಕಾರಣವನ್ನು ಇದಕ್ಕೆ ಕೊಡಬಹುದು?
 ನಿಜವಾಗಿ, ಬಿಜೆಪಿಯಲ್ಲಿ ಎರಡು ಪ್ರಣಾಳಿಕೆಗಳಿವೆ. ಒಂದು ಜನರಿಗೆ ತೋರಿಸಲು ಇರುವುದಾದರೆ ಇನ್ನೊಂದು ಜಾರಿಗೊಳಿಸಲು. ತೋರಿಸುವ ಪ್ರಣಾಳಿಕೆಯಲ್ಲಿ ಭಾವ ತೀವ್ರತೆಯಿರುತ್ತದೆ. ಆರ್ದ್ರರತೆಯಿರುತ್ತದೆ. ಧರ್ಮ, ಸಂಸ್ಕøತಿ, ಮಠ, ಮಂದಿರಗಳ ಬಗ್ಗೆ ಅಪಾರ ಮಿಡಿತಗಳಿರುತ್ತವೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ವಾದಿಸುವುದು ಈ ಪ್ರಣಾಳಿಕೆಯೇ. ಮುಸ್ಲಿಮರ ಜನಸಂಖ್ಯೆಯ ಬಗ್ಗೆ, ತಲಾಕ್‍ನ ಬಗ್ಗೆ, ಬುರ್ಖಾ-ಬಹುಪತ್ನಿತ್ವದ ಬಗ್ಗೆ ಭೀತಿಕಾರಕ ಪದಗಳೊಂದಿಗೆ ವಿವರಿಸುವುದೂ ಈ ಪ್ರಣಾಳಿಕೆಯೇ. ಮುಸ್ಲಿಮ್ ‘ತುಷ್ಠೀಕರಣ’, ‘ಹಿಂದೂ ಸಂತ್ರಸ್ತರು’ ಎಂಬೆಲ್ಲ ಪದಗಳನ್ನು ಈ ಪ್ರಣಾಳಿಕೆಯಲ್ಲಿ ಧಾರಾಳ ಉಲ್ಲೇಖಿಸಲಾಗುತ್ತದೆ. ಲವ್ ಜಿಹಾದ್, ಮತಾಂತರ ಮುಂತಾದುವು ಈ ಪ್ರಣಾಳಿಕೆಯಲ್ಲಿ ಅನೇಕ ಬಾರಿ ಕಾಣಸಿಗುತ್ತದೆ. ರಾಮ ಮಂದಿರ, ಸೋಮನಾಥ ದೇವಾಲಯ, ಗೋಹತ್ಯೆ, 370ನೇ ವಿಧಿ ರದ್ಧತಿ.. ಮುಂತಾದುವುಗಳು ಈ ಪ್ರಣಾಳಿಕೆಯಲ್ಲಿನ ಖಾಯಂ ಸಂಗತಿಗಳು. ಆದರೆ ಇನ್ನೊಂದು ಪ್ರಣಾಳಿಕೆಯಲ್ಲಿ ಇವಾವುವೂ ಇರುವುದಿಲ್ಲ. ಅಲ್ಲಿರುವುದು ಕಾರ್ಪೋರೇಟ್, ಕಾರ್ಪೋರೇಟ್ ಮತ್ತು ಕಾರ್ಪೋರೇಟ್ ಮಾತ್ರ. ಆದ್ದರಿಂದಲೇ, ಭೂಸ್ವಾಧೀನ ಮಸೂದೆಗಾಗಿ ಸುಗ್ರೀವಾಜ್ಞೆಯನ್ನೂ ರಾಮಮಂದಿರಕ್ಕಾಗಿ ಬಹುಮತದ ಕೊರತೆಯನ್ನೂ ಅದು ತೋರಿಸುತ್ತಿರುವುದು. ರಾಮಮಂದಿರವೆಂಬುದು ನಕಲಿ ಪ್ರಣಾಳಿಕೆ. ಕಾರ್ಪೋರೇಟರ್‍ಗಳನ್ನು ಸಂತೃಪ್ತಿಪಡಿಸುವುದು ಅಸಲಿ ಪ್ರಣಾಳಿಕೆ. ಒಂದು ರೀತಿಯಲ್ಲಿ, ಬಿಜೆಪಿಗೂ ಕಾಂಗ್ರೆಸ್‍ಗೂ ಪ್ರಣಾಳಿಕೆಯ ವಿಷಯದಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡೂ ಪಕ್ಷಕ್ಕೂ ಅಮೇರಿಕನ್ ಪ್ರಣೀತ ಅರ್ಥವ್ಯವಸ್ಥೆ ಇಷ್ಟ. ಬಂಡವಾಳಶಾಹಿ ಸಿದ್ಧಾಂತಕ್ಕೆ ಸಂಬಂಧಿಸಿ ಎರಡೂ ಪಕ್ಷಗಳಲ್ಲಿ ದೊಡ್ಡ ವ್ಯತ್ಯಾಸ ಏನಿಲ್ಲ. ಕಾರ್ಪೋರೇಟ್ ಕುಳಗಳನ್ನು ಓಲೈಸುವುದರಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದೇ ಇದೆ. ಬಂಡವಾಳ ಹೂಡಿಕೆ, ಮುಕ್ತ ಮಾರುಕಟ್ಟೆ, ವಿಮೆ, ರಕ್ಷಣೆ, ತೈಲ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳನ್ನೆಲ್ಲ ವಿದೇಶಿ ಹೂಡಿಕೆಗೆ ತೆರೆದಿಡುವಲ್ಲಿ ಬಿಜೆಪಿಯಲ್ಲಿರುವ ಉಮೇದು ಕಾಂಗ್ರೆಸ್‍ಗಿಂತ ಹೆಚ್ಚೇ ಇದೆ. ವ್ಯತ್ಯಾಸ ಏನೆಂದರೆ, ಜನರಿಗೆ ತೋರಿಸುವುದಕ್ಕೆಂದೇ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸುವುದಿಲ್ಲ. ಹಾಗಂತ, ಇಂಥ ನಕಲಿ ಪ್ರಣಾಳಿಕೆಯ ಅಗತ್ಯ ಅದರ ಪಾಲಿಗೆ ಬಂದಿಲ್ಲ ಎಂದಲ್ಲ. ಸೈದ್ಧಾಂತಿಕ ಸಂಘರ್ಷ ಮತ್ತು ಒಂದು ಬಗೆಯ ಅಂಜಿಕೆ ಹಾಗೆ ಮಾಡುವುದರಿಂದ ಅದನ್ನು ತಡೆ ಹಿಡಿದಿದೆ. ಆದರೂ ಅನೇಕ ಬಾರಿ ಅದು ಬಿಜೆಪಿಯ ನಕಲಿ ಪ್ರಣಾಳಿಕೆಯಂತೆ ಕಾರ್ಯಾಚರಿಸಿದೆ. ಬಿಜೆಪಿಗಿಂತಲೂ ತೀವ್ರವಾಗಿ ನಕಲಿ ಪ್ರಣಾಳಿಕೆಯ ಮೇಲೆ ಬದ್ಧತೆ ವ್ಯಕ್ತಪಡಿಸಿದೆ. ಆದರೂ ಬಿಜೆಪಿ ಮತ್ತು ಕಾಂಗ್ರೆಸನ್ನು ಮುಖಾಮುಖಿಗೊಳಿಸಿದರೆ ನಕಲಿ ಪ್ರಣಾಳಿಕೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದ ಶ್ರೇಯಸ್ಸು ಬಿಜೆಪಿಗೇ ಸಲ್ಲುತ್ತದೆ.
 ಏನೇ ಆಗಲಿ, ರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯಿಂದ ಹಿಂಜರಿಯುವ ಮೂಲಕ ರಾಮಮಂದಿರವು ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವುದಕ್ಕಿರುವ ಒಂದು ಅಸ್ತ್ರ ಮಾತ್ರ ಎಂಬುದನ್ನು ಮೋದಿ ಸರಕಾರವು ಪರೋಕ್ಷವಾಗಿ ಜನರ ಮುಂದೆ ಒಪ್ಪಿಕೊಂಡಂತಾಗಿದೆ. ರಾಮಮಂದಿರವನ್ನು ನಿರ್ಮಿಸುವ ಮೂಲಕ ಈ ಅಸ್ತ್ರವನ್ನು ಕಳಕೊಳ್ಳಲು ಅದು ಸಿದ್ಧವಿಲ್ಲ. ರಾಜನಾಥ್ ಸಿಂಗ್‍ರ ಮಾತು ಇದನ್ನೇ ಸೂಚಿಸುತ್ತದೆ.

Friday, 8 May 2015

ಬೇಟಿ ಹಠಾವೋ ಬೀಜ ತಯಾರಿಸಿದ ರಾಮ್‍ದೇವ್

    6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವ ದೇಶವೊಂದರಲ್ಲಿ ಸುದ್ದಿಗೀಡಾಗಬೇಕಾದ ಮದ್ದು ಯಾವುದು - ಪುತ್ರ ಜೀವಕ್ ಬೀಜವೋ ಅಥವಾ ಪುತ್ರಿ ಜೀವಕ್ ಬೀಜವೋ? ಬಾಬಾ ರಾಮ್‍ದೇವ್ ಇಂಥದ್ದೊಂದು ಚರ್ಚೆಯ ಕೇಂದ್ರವಾಗಿದ್ದಾರೆ. ಪುತ್ರ ಸಂತಾನ ಪ್ರಾಪ್ತಿಗಾಗಿರುವ ಪುತ್ರ ಜೀವಕ್ ಬೀಜವನ್ನು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾದಾಗ ಅದನ್ನು ಸಂಸ್ಕೃತ ಪದವೆಂದು ಸಮರ್ಥಿಸಲು ಹೋಗಿ ಮತ್ತಷ್ಟು ನಗೆಪಾಟಲಿಗೆ ಗುರಿಯಾಗಿದ್ದಾರೆ. ಒಂದು ಕಡೆ, ಹರ್ಯಾಣ ಸರಕಾರದ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಕಾರ್ಯಕ್ರಮದ ಬ್ರಾಂಡ್ ಅಂಬಾಸಡರ್ ಇವರು. ಇನ್ನೊಂದು ಕಡೆ, ಪುತ್ರ ಪ್ರಾಪ್ತಿಗಾಗಿ ಮಾತ್ರೆಗಳನ್ನು ಮಾರುತ್ತಿರುವುದೂ ಇವರೇ. ಈ ದ್ವಂದ್ವಕ್ಕೆ ಏನೆನ್ನಬೇಕು? ಹಾಗಂತ, ಇದು ರಾಮ್‍ದೇವ್ ಒಬ್ಬರ ಸಮಸ್ಯೆಯಲ್ಲ. ಇಂಥ ದ್ವಂದ್ವಗಳುಳ್ಳ ತಂಡವೇ ಈ ದೇಶದಲ್ಲಿದೆ. ಹಿಂದುಗಳು ಮೂರು, ನಾಲ್ಕು, ಐದು.. ಹೀಗೆ ಮಕ್ಕಳನ್ನು ಹೊಂದಬೇಕೆಂದು ಆಗ್ರಹಿಸುತ್ತಿರುವುದು ಈ ತಂಡದ ಮಂದಿಯೇ.ಆದರೆ ಅವರು ಸ್ವತಃ ಹೆರುವುದನ್ನೇ ನಿಷೇಧಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ಪ್ರತಿದಿನ ಬೆಳಗ್ಗೆದ್ದು 'ಕಪ್ಪು ಹಣ' ಎಂದು ಕೂಗಿಯೇ ಈ ತಂಡದ ಮಂದಿ ಬ್ರಶ್ ಮಾಡುತ್ತಿದ್ದರು. ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಅವರು ಆ ವಿಷಯದಲ್ಲಿ ಮಾತಾಡುವುದನ್ನೇ ನಿಲ್ಲಿಸಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರಿಗೂ ಆಧಾರ್ ಕಾರ್ಡ್ ಸಿಗುತ್ತಿದ್ದು, ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದೂ ಈ ತಂಡದವರೇ. ಇದೀಗ ಹಿಂದಿಗಿಂತಲೂ ನಿಷ್ಠುರವಾಗಿ ಆಧಾರ್ ಕಾರ್ಡನ್ನು ಜಾರಿಗೊಳಿಸುತ್ತಿರುವುದೂ ಇವರೇ. ಮುಸ್ಲಿಮರ ವಿಶ್ವಾಸ ಬೆಳೆಸುವುದಕ್ಕಾಗಿ ಸದ್ಭಾವನಾ ಯಾತ್ರೆ ಕೈಗೊಂಡವರು ಈ ತಂಡದ ಬೆಂಬಲಿಗರೇ ಆಗಿದ್ದರು. ಇದೀಗ ಮುಸ್ಲಿಮರ ಓಟಿನ ಹಕ್ಕನ್ನೇ ಕಸಿಯಬೇಕೆಂದೂ ಸಂತಾನ ಹರಣ ಚಿಕಿತ್ಸೆಗೆ ಅವರನ್ನು ಗುರಿಪಡಿಸಬೇಕೆಂದೂ ಒತ್ತಾಯಿಸುತ್ತಿರುವವರೂ ಈ ಮಂದಿಯೇ. ಒಂದು ರೀತಿಯಲ್ಲಿ, ಈ ತಂಡದ ಐಡೆಂಟಿಟಿಯೇ ‘ದ್ವಂದ್ವ' ಆಗಿಬಿಟ್ಟಿದೆ. ಪುತ್ರ ಜೀವಕ್ ಬೀಜದ ಮೂಲಕ ರಾಮ್‍ದೇವ್‍ರು ಈ 'ದ್ವಂದ್ವ'ಗಳಿಗೆ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
 ನಿಜವಾಗಿ, ಈ ದೇಶದಲ್ಲಿ ತಯಾರಾಗಬೇಕಾದ ಔಷಧಿ ಯಾವುದು ಎಂಬುದನ್ನು ತೀರ್ಮಾನಿಸುವುದಕ್ಕೆ ಪಂಜಾಬ್-ಹರ್ಯಾಣಗಳಂಥ ರಾಜ್ಯಗಳ ಹೆಣ್ಣು-ಗಂಡು ಅನುಪಾತವೇ ಧಾರಾಳ ಸಾಕು. ಹರ್ಯಾಣವನ್ನು ವಧುಗಳ ಕೊರತೆ ಎಷ್ಟರ ಮಟ್ಟಿಗೆ ಬಾಧಿಸಿಬಿಟ್ಟಿದೆಯೆಂದರೆ ಬಿಹಾರದಿಂದ ಯುವತಿಯರನ್ನು ಹರ್ಯಾಣಕ್ಕೆ ಕರೆತಂದು ಮದುವೆ ಮಾಡಿಕೊಳ್ಳಲಾಗುತ್ತದೆ. ಈ ಎರಡು ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪುತ್ರಿಯರು ಕಾಣೆಯಾಗತೊಡಗಿದ್ದಾರೆ. ಎಲ್ಲರಿಗೂ 'ಪುತ್ರ ಜೀವಕ್ ಬೀಜ' ಬೇಕು ಅಥವಾ ಪುತ್ರ ಸಂತಾನ ಬೇಕು. ರಾಮ್‍ದೇವ್‍ರಿಗೆ ಇದು ಗೊತ್ತಿಲ್ಲ ಎಂದಲ್ಲ. ‘ಬೇಟಿ ಪಡಾವೋ ಬೇಟಿ ಬಚಾವೋ' ಎಂಬ ಯೋಜನೆ ಹರ್ಯಾಣದಲ್ಲಿ ಹುಟ್ಟಿಕೊಂಡದ್ದೇ ಈ ಕಾರಣದಿಂದ. ಹೀಗಿದ್ದೂ ಅವರು ಪುತ್ರ ಸಂತಾನ ಪ್ರಾಪ್ತಿಗಾಗಿ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆಂದರೆ ಒಂದೋ ಅವರು ಪಕ್ಕಾ ವ್ಯಾಪಾರಿಯಾಗಿರಬೇಕು ಅಥವಾ ಹೆಣ್ಣು ಸಂತಾನದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರಬೇಕು. ಪುತ್ರರನ್ನು ಬಯಸುವ ಸಮಾಜವೊಂದರಲ್ಲಿ ಪುತ್ರ ಜೀವಕ್ ಬೀಜಕ್ಕೆ ಇರುವ ಮಾರುಕಟ್ಟೆ ಎಷ್ಟು ದೊಡ್ಡದು ಎಂಬುದು ವ್ಯಾಪಾರಿಯಾಗಿ ರಾಮ್‍ದೇವ್‍ರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಯೋಗವನ್ನು ಮಾರಬಲ್ಲ ರಾಮ್‍ದೇವ್‍ರಿಗೆ ಮಾತ್ರೆಯನ್ನು ಉತ್ಪಾದಿಸುವುದು ಮತ್ತು ಮಾರುಕಟ್ಟೆ ಕಂಡುಕೊಳ್ಳುವುದು ಕಷ್ಟವಲ್ಲ. ಸದ್ಯ ಅವರು ಸಮಾಜದ ಪುತ್ರ ದೌರ್ಬಲ್ಯವನ್ನು ತನ್ನ ವ್ಯಾಪಾರಕ್ಕಾಗಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ರಾಯಭಾರಿಯಾದ ಬಳಿಕವೂ ಅವರು ಇಂಥದ್ದೊಂದು ಔಷಧವನ್ನು ಮಾರುತ್ತಾರೆಂದರೆ, ಅವರದು ಬೇಟಿ ಹಠಾವೋ ಮನಸ್ಥಿತಿ ಎಂದೂ ಹೇಳಬೇಕಾಗುತ್ತದೆ. ನಿಜವಾಗಿ, ಓರ್ವ ವ್ಯಾಪಾರಿ ಎಷ್ಟೇ ಕಟುಕನಾಗಿದ್ದರೂ ಆತ ಸಮಾಜ ಸೇವಕನಾಗಿ ಗುರುತಿಸಿಕೊಳ್ಳಬಯಸುತ್ತಾನೆ. ಸಮಾಜದ ಕೆಂಗಣ್ಣಿಗೆ ಗುರಿಯಾಗಬಲ್ಲ ಅಥವಾ ಮನ್ನಣೆ ಸಿಗದಂಥ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಸಮಾಜಕ್ಕೆ ಏನಾದರೂ ನೀಡುತ್ತಲಿರಬೇಕು ಮತ್ತು ಅದನ್ನು ಸಮಾಜ ಎತ್ತಿ ಹೇಳಬೇಕೆಂಬ ಒಳ ಆಸೆಯೂ ಅವನಲ್ಲಿರುತ್ತದೆ. ಇಂಥ ಆಸೆಗಳಿಂದ ಸಮಾಜಕ್ಕಾಗುವ ಲಾಭ ಏನೆಂದರೆ, ಸಮಾಜ ಅಷ್ಟರ ಮಟ್ಟಿಗೆ ಇಂಥ ವ್ಯಕ್ತಿತ್ವಗಳ ಕಿರುಕುಳಗಳಿಂದ ಮುಕ್ತವಾಗಿರುವುದು. ಅವರು ಸಮಾಜಕ್ಕೇನೂ ಕೊಡದಿದ್ದರೂ ತೊಂದರೆ ಮಾಡುವುದಿಲ್ಲವಲ್ಲ ಎಂಬ ನಿರಾಳಭಾವದಿಂದ ಬದುಕುವುದು. ಆದರೆ, ರಾಮ್‍ದೇವ್‍ರು ಕಟುಕ ವ್ಯಾಪಾರಿಗಳನ್ನೂ ವಿೂರಿಸುವ ಆತಂಕಕಾರಿ ಮನಸ್ಥಿತಿಯನ್ನು ಪುತ್ರ ಬೀಜದ ಮೂಲಕ ತೆರೆದಿಟ್ಟಿದ್ದಾರೆ. ಅವರು ವ್ಯಾಪಾರಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಭತ್ತ, ಅಳಸಂಡೆ, ಬದನೆ, ಕುಂಬಳಕಾಯಿ, ತೊಂಡೆಕಾಯಿಯಂಥ ಬೀಜಗಳನ್ನಲ್ಲ, ಪುತ್ರ ಬೀಜವನ್ನು. ಈ ಬೀಜ ಮಣ್ಣಿನಲ್ಲಿ ಬೆಳೆಯುವುದಿಲ್ಲ. ಮನುಷ್ಯರ ಹೊಟ್ಟೆಯಲ್ಲಿ ಬೆಳೆಯುತ್ತದೆ. ನಿಜವಾಗಿ, ಹೊಟ್ಟೆಯಲ್ಲಿ ಗಂಡು ಬೆಳೆಯಬೇಕೋ ಹೆಣ್ಣು ಬೆಳೆಯಬೇಕೋ ಎಂದು ತೀರ್ಮಾನಿಸಬೇಕಾದದ್ದು ಮನುಷ್ಯ ಅಲ್ಲ, ಪ್ರಕೃತಿ. ಪ್ರಕೃತಿಯ ತೀರ್ಮಾನಕ್ಕೆ ಮನುಷ್ಯ ಎಲ್ಲಿಯ ವರೆಗೆ ಬದ್ಧವಾಗಿರುತ್ತಾನೋ ಅಲ್ಲಿಯ ವರೆಗೆ ಭೂಮಿಯ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಇದು ಎಲ್ಲರಿಗೂ ಗೊತ್ತು. ಆದರೆ ಆಸೆಬುರುಕ ಮನುಷ್ಯ ಕೆಲವೊಮ್ಮೆ ಅಧಿಕ ಇಳುವರಿಯ ಆಸೆಯಿಂದ ಅಥವಾ ದುಡ್ಡು ದುಪ್ಪಟಾಗುವ ದುರಾಸೆಯಿಂದ ನಕಲಿ ಬೀಜಗಳನ್ನು ಖರೀದಿಸುವುದಿದೆ ಅಥವಾ ವಂಚಕರನ್ನು ಸವಿೂಪಿಸುವುದಿದೆ. ರಾಮ್‍ದೇವ್‍ರ ಪುತ್ರಬೀಜ ಇಂಥ ವಂಚಕರನ್ನು ನೆನಪಿಸುತ್ತದೆ. ಸಮಾಜದ ಆಸೆಬುರುಕ ಮನುಷ್ಯರನ್ನು ಗುರಿಯಿರಿಸಿಕೊಂಡೇ ಅವರು ಪುತ್ರ ಬೀಜವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಹೀಗೆ ಮಾಡುವಾಗ ತಾನು ಪ್ರಕೃತಿಗೆ ಮೋಸ ಮಾಡುತ್ತಿದ್ದೇನೆಂಬ ಅರಿವು ಅವರಿಗೆ ಇದ್ದಿರಲಿಲ್ಲ ಎಂದು ಹೇಳುವಂತಿಲ್ಲ. ಪ್ರಕೃತಿ, ಆಧ್ಯಾತ್ಮ, ಶಾಸ್ತ್ರ, ಪುರಾಣಗಳ ಬಗ್ಗೆ ತನ್ನ ಯೋಗ ಶಿಬಿರದಲ್ಲಿ ಬಾಯ್ತುಂಬ ಹೇಳುವ ರಾಮ್‍ದೇವ್‍ರಿಗೆ ತನ್ನ ಪುತ್ರ ಬೀಜವು ಪ್ರಕೃತಿಯ ಹೆಣ್ಣು-ಗಂಡು ಸಮತೋಲನಕ್ಕೆ ಸಡ್ಡು ಹೊಡೆಯುತ್ತದೆ ಎಂಬುದಾಗಿ ಅರಿತಿರುವುದಿಲ್ಲ ಎಂದು ವಾದಿಸುವುದು ನಮ್ಮ ಮೂರ್ಖತನವಾಗುತ್ತದೆ. ಸಮಾಜದ ಒಳಿತಿನ ಬಗ್ಗೆ ಯಾವ ಕಾಳಜಿಯೂ ಇಲ್ಲದ ಮತ್ತು ಪ್ರಕೃತಿಯ ಕುರಿತಂತೆ ತೀವ್ರ ಅಗೌರವ ಇರುವ ವ್ಯಕ್ತಿಯಿಂದ ಮಾತ್ರ ಇಂಥ ವ್ಯಾಪಾರ ಸಾಧ್ಯ. ಆದ್ದರಿಂದ ನಕಲಿ ಭತ್ತ, ಅಳಸಂಡೆ, ತೊಂಡೆ, ಬದನೆ.. ಬೀಜಗಳಿಗಿಂತ ಎಷ್ಟೋ ಅಪಾಯಕಾರಿಯಾಗಿ ರಾಮ್‍ದೇವ್‍ರ ಪುತ್ರಬೀಜ ಗೋಚರಿಸುತ್ತದೆ.  ಅವರ ಬೀಜದಿಂದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೋ ಇಲ್ಲವೋ ಆದರೆ ಪುತ್ರಿ ಸಂತಾನದ ಕಡೆಗಣನೆಗಂತೂ ಕರೆ ಕೊಡುತ್ತದೆ. ಆದ್ದರಿಂದಲೇ ಇದು ಮನುಷ್ಯ ವಿರೋಧಿ. ಮಾನವತೆಗೆ ವಿರುದ್ಧವಾದ ಈ ಪುತ್ರಬೀಜದ ವಿರುದ್ಧ ಸಮಾಜ ಮುಖ್ಯವಾಗಿ ಮಹಿಳೆಯರು ಧ್ವನಿಯೆತ್ತಬೇಕು. ಹೆಣ್ಣು ಕೀಳಲ್ಲ ಮತ್ತು ಅಮುಖ್ಯಳೂ ಅಲ್ಲ. ಆಕೆಯನ್ನು ಕೀಳಾಗಿಸುವ ರಾಮ್‍ದೇವ್‍ರ ಬೀಜ ಈ ದೇಶಕ್ಕೆ ಅಗತ್ಯವೂ ಇಲ್ಲ. ಬೇಕಾದರೆ ರಾಮ್‍ದೇವ್‍ರು ಅಳಸಂಡೆ, ಮಾವು, ತೊಂಡೆ, ಮುಳ್ಳುಸೌತೆ ಬೀಜಗಳನ್ನು ಮಾರಲಿ. ಆದರೆ ಪುತ್ರಿಯರನ್ನು ಅವಮಾನಿಸದಿರಲಿ.

Tuesday, 28 April 2015

  ಸುಳ್ಳಿನ ಮುಖವಾಡವನ್ನು ಕಿತ್ತೊಗೆದ ಗೋವು ಮತ್ತು ಹೆಣ್ಣು

    ಕಳೆದವಾರ ಎರಡು ಗಮನಾರ್ಹ ಸುದ್ದಿಗಳು ಪ್ರಕಟವಾದುವು. ಒಂದು ಗೋಮಾಂಸಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ಭ್ರೂಣಹತ್ಯೆಗೆ ಸಂಬಂಧಿಸಿದ್ದು. ಗೋವನ್ನು ಮತ್ತು ಹೆಣ್ಣನ್ನು ಪೂಜನೀಯವಾಗಿ ಕಾಣುವ ದೇಶ ಎಂಬ ನೆಲೆಯಲ್ಲಿ ಈ ಸುದ್ದಿಗಳು ಗಮನಾರ್ಹವಷ್ಟೇ ಅಲ್ಲ, ಮಹತ್ವಪೂರ್ಣ ಮತ್ತು ಅತಿ ಗಂಭೀರವಾದುದು. ಗೋಹತ್ಯೆಯನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವುದು ಮತ್ತು ಅದನ್ನು ಚುನಾವಣಾ ಅಜೆಂಡಾವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಮುಂದಿರಿಸಿದ್ದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ. ಅಕ್ರಮ ಗೋ ಸಾಗಾಟದ ಹೆಸರಲ್ಲಿ ಹಲ್ಲೆ ನಡೆಸುವವರಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಗೋವಿಗೆ ಹಿಂದೂ ಧರ್ಮದಲ್ಲಿರುವ ಪ್ರಾಮುಖ್ಯತೆಯ ಕುರಿತಂತೆ ಭಾವುಕ ಭಾಷಣ ಮಾಡುವವರಲ್ಲೂ ಆ ಪಕ್ಷದವರಿದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಅಭಿಯಾನವನ್ನು ಗೋಪೂಜೆಯ ಮೂಲಕ ಆರಂಭಿಸುವ ಕ್ರಮವೂ ಆ ಪಕ್ಷದಲ್ಲಿದೆ. ಆದ್ದರಿಂದಲೇ, ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಈ ದೇಶ ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ಜಿಗಿದಿದೆ ಎಂಬ ಕಳೆದವಾರದ ಸುದ್ದಿಯು ಆಶ್ಚರ್ಯಕರವಾಗಿ ಕಾಣಿಸುತ್ತದೆ. ಜಾಗತಿಕ ಗೋಮಾಂಸ ರಫ್ತಿನ ಬಗ್ಗೆ ಅಮೇರಿಕದ ಕೃಷಿ ಇಲಾಖೆಯು (USDA) ಕಳೆದವಾರ ವರದಿಯನ್ನು ಪ್ರಕಟಿಸಿದ್ದು, ಅದರ ಪ್ರಕಾರ, ಭಾರತವು ಗೋಮಾಂಸ ರಫ್ತಿನಲ್ಲಿ ಬ್ರೆಝಿಲನ್ನು ಹಿಂದಿಕ್ಕಿದೆ. ಈ ವರ್ಷ ಭಾರತದಿಂದ ಅತೀ ಹೆಚ್ಚು ಗೋಮಾಂಸ ರಫ್ತಾಗಬಹುದೆಂಬ ನಿರೀಕ್ಷೆಯನ್ನೂ ಅದು ವ್ಯಕ್ತಪಡಿಸಿದೆ. ಈ ಬೆಳವಣಿಗೆಗೆ ಏನೆನ್ನಬೇಕು? ಒಂದು ಕಡೆ ಗೋವಿನ ಬಗ್ಗೆ ಅತೀವ ಕಾಳಜಿಯನ್ನು ವ್ಯಕ್ತಪಡಿಸುವ ಸರಕಾರ, ಇನ್ನೊಂದು ಕಡೆ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು - ಏನಿದರ ಅರ್ಥ? ಮಹಾರಾಷ್ಟ್ರದ ಬಿಜೆಪಿ ಸರಕಾರವು ಜಾನುವಾರು ಹತ್ಯೆಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದೆ. ಹರ್ಯಾಣದ ಬಿಜೆಪಿ ಸರಕಾರವು ಶೀಘ್ರವೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಲಿದೆ. ಆದರೂ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು ಹೇಗೆ ಮತ್ತು ಏಕೆ? ಜನಸಾಮಾನ್ಯನಿಗೂ ಅರ್ಥವಾಗುವ ಒಂದು ಸರಳ ಲೆಕ್ಕಾಚಾರವಿದೆ. ಅದೇನೆಂದರೆ, ನೀವು ಬಟಾಟೆ ಉತ್ಪಾದನೆಗೆ ನಿಷೇಧ ವಿಧಿಸಿದರೆ ಆ ಬಳಿಕ ಬಟಾಟೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ. ಬೇರೆಡೆಗೆ ರಫ್ತಾಗುವುದಕ್ಕೆ ಸಾಧ್ಯವೂ ಇಲ್ಲ. ನಿಷೇಧಕ್ಕೆ ಒಳಗಾಗುವ ಎಲ್ಲ ವಸ್ತುಗಳ ಹಣೆಬರಹವೂ ಇದುವೇ. ಆದರೆ ಗೋಮಾಂಸದ ವಿಷಯದಲ್ಲಿ ಈ ಲೆಕ್ಕಾಚಾರ ದಿಕ್ಕು ತಪ್ಪುತ್ತಿರುವುದೇಕೆ? ನಿಷೇಧಕ್ಕೆ ಒಳಗಾದ ಮಾಂಸವೇ ಅತೀ ಹೆಚ್ಚು ರಫ್ತಾಗುತ್ತಿರುವುದರ ಹಿಂದಿನ ಕಾರಣಗಳೇನು? ಅಂದಹಾಗೆ, ಜಾನುವಾರು ಮಾಂಸವನ್ನು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುವ ಈ ದೇಶದ ಪ್ರಮುಖ 6 ಕಂಪೆನಿಗಳಲ್ಲಿ ಸತೀಶ್ ಮತ್ತು ಅತುಲ್ ಅಗರ್ವಾಲ್‍ರ ಅಲ್ ಕಬೀರ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಸುನೀಲ್ ಕಪೂರ್ ಮಾಲಿಕತ್ವದ ಅರೇಬಿಯನ್ ಎಕ್ಸ್ ಪೋರ್ಟ್ಸ್  ಪ್ರೈವೇಟ್ ಲಿಮಿಟೆಡ್, ಮದನ್ ಅಬ್ಬೋಟ್ ಅವರ ಎಂ.ಕೆ.ಆರ್. ಫ್ರೋಝನ್ ಫುಡ್ ಎಕ್ಸ್ ಪೋರ್ಟ್ಸ್  ಪ್ರೈವೇಟ್ ಲಿಮಿಟೆಡ್ ಮತ್ತು ಎ.ಎಸ್. ಬಿಂದ್ರಾ ಅವರ ಪಿ.ಎಂ.ಎಲ್. ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ಗಳಿಗೆ ಜಾನುವಾರು ಎಲ್ಲಿಂದ ಸಾಗಾಟವಾಗುತ್ತಿದೆ? ಇಲ್ಲಿಗೆ ಸಾಗಾಟವಾಗುವ ಜಾನುವಾರುಗಳನ್ನೇಕೆ ತಡೆಹಿಡಿಯಲಾಗುತ್ತಿಲ್ಲ? ಈ ಕಂಪೆನಿಗಳ ಮೇಲೆ ದಾಳಿ ನಡೆಸಿ ಈ ಮಾಂಸೋದ್ಯಮವನ್ನು ತಡೆಯುವ ಪ್ರಯತ್ನಗಳೇಕೆ ನಡೆಯುತ್ತಿಲ್ಲ? ಈ ಕಂಪೆನಿಗಳ ಪರವಾನಿಗೆಯನ್ನು ನವೀಕರಿಸುತ್ತಿರುವವರು ಯಾರು? ಒಂದು ಕಡೆ ಗೋ ಹತ್ಯೆಯ ವಿರುದ್ಧ ಬಿಜೆಪಿ ಕಟು ಭಾಷೆಯಲ್ಲಿ ಮಾತಾಡುತ್ತದೆ. ಅದನ್ನು ಪೂಜನೀಯವೆಂದು ಘೋಷಿಸುತ್ತದೆ. ಆದರಿಸುತ್ತದೆ. ಇದನ್ನು ಗೌರವಿಸೋಣ. ಆದರೆ ಇನ್ನೊಂದು ಕಡೆ ಗೋ ಹತ್ಯೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸುವ ಮತ್ತು ವಿದೇಶಗಳಿಗೆ ಮಾಂಸ ರಫ್ತು ಮಾಡುವ ಕಂಪೆನಿಗಳ ಬಗ್ಗೆ ಇದೇ ಪಕ್ಷ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಹಾಗಂತ, ಈ ಕಂಪೆನಿಗಳೆಲ್ಲ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇರುವುದಲ್ಲವಲ್ಲ. ಮುಂಬಯಿ, ದೆಹಲಿ, ಚಂಡೀಗಢದಲ್ಲೂ ಈ ಕಂಪೆನಿಗಳ ಕಚೇರಿಗಳಿವೆ. ಹೀಗಿದ್ದೂ ಈ ಬಗ್ಗೆ ಯಾವ ಹೇಳಿಕೆಯನ್ನೂ ಬಿಜೆಪಿ ಹೊರಡಿಸುತ್ತಿಲ್ಲವೇಕೆ? ಅಥವಾ ಬಿಜೆಪಿಯ ಉದ್ದೇಶವು ಭಾರತೀಯರನ್ನು ಗೋಮಾಂಸ ಸೇವನೆಯಿಂದ ತಡೆಯುವುದು ಮಾತ್ರವೇ, ವಿದೇಶಗಳಿಗೆ ರಫ್ತು ಮಾಡುವುದರಿಂದ ತೊಂದರೆಯಿಲ್ಲ ಎಂದೇ?
 ದುರಂತ ಏನೆಂದರೆ, ಗೋಮಾಂಸದ ರಫ್ತಿನಲ್ಲಿ ದೇಶ ಬ್ರೆಝಿಲನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ತಲುಪಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಈ ದೇಶದಲ್ಲಿ ಹೆಣ್ಣಿನ ಸಂತತಿ ತೀವ್ರವಾಗಿ ನಶಿಸುತ್ತಿದೆಯೆಂಬ ಸುದ್ದಿ ಪ್ರಕಟವಾಗಿದೆ. 20ರ ಪ್ರಾಯದ 5.63 ಕೋಟಿ ಯುವಕರಿಗೆ ಅದೇ ಪ್ರಾಯದ ಯುವತಿಯರು ಕೇವಲ 2.02 ಕೋಟಿಯಷ್ಟೇ ಈ ದೇಶದಲ್ಲಿದ್ದಾರೆ. 30 ಮತ್ತು 40ರ ಪ್ರಾಯದ ಪುರುಷರಿಗೂ ಮತ್ತು ಅದೇ ಪ್ರಾಯದ ಮಹಿಳೆಯರಿಗೂ ಹೋಲಿಸಿದರೂ ಅಲ್ಲೂ ವಿಪರೀತ ಅಂತರ ಕಂಡುಬರುತ್ತಿದೆ. ಈ ವ್ಯತ್ಯಾಸ ಎಷ್ಟು ಗಂಭೀರ ಮಟ್ಟದಲ್ಲಿದೆಯೆಂದರೆ, ಮದುವೆ ವಯಸ್ಸಿನ 4.12 ಕೋಟಿ ಯುವಕರಿಗೆ ವಧುಗಳೇ ಇಲ್ಲ. 1970ರಿಂದ 1990ರ ನಡುವೆ ವ್ಯಾಪಕ ಪ್ರಮಾಣದಲ್ಲಿ ನಡೆದ ಭ್ರೂಣಹತ್ಯೆಯ ಪರಿಣಾಮ ಇದು. ಇವತ್ತೂ ಹೆಣ್ಣು ಭ್ರೂಣದ ಮೇಲೆ ಅಸಡ್ಡೆಯಿದೆ. ಗಂಡು ಭ್ರೂಣಕ್ಕೆ ವಿಪರೀತ ಮಹತ್ವವಿದೆ. ಅಲ್ಲದೇ ಜಾನುವಾರು ಹತ್ಯೆಗೆ 10 ವರ್ಷಗಳ ಶಿಕ್ಷೆಯಿರುವ ಈ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಈ ಯಾವ ಬೆದರಿಕೆಯೂ ಇಲ್ಲ. ಅಂದಹಾಗೆ, ಗೋವಿನ ಸಾಗಾಟ ಅಕ್ರಮವೋ ಸಕ್ರಮವೋ ಎಂಬುದನ್ನು ತಪಾಸಿಸುವುದಕ್ಕೆ ಇಲ್ಲಿ ಪೊಲೀಸರಷ್ಟೇ ಅಲ್ಲ, ಖಾಸಗಿ ತಂಡಗಳೂ ಇವೆ. ಅದಕ್ಕಾಗಿ ರಾತ್ರಿ ನಿದ್ದೆಗೆಟ್ಟು ಕಾಯುವವರಿದ್ದಾರೆ. ಹಲ್ಲೆ ನಡೆಸುವವರಿದ್ದಾರೆ. ಕಸಾಯಿಖಾನೆಗಳಿಗೆ ನುಗ್ಗಿ ದಾಂಧಲೆ ನಡೆಸುವವರಿದ್ದಾರೆ. ಆದರೆ ಹೆಣ್ಣು ಭ್ರೂಣಕ್ಕೆ ಈ ಯಾವ ರಕ್ಷಣೆಯೂ ಇಲ್ಲ. ಭ್ರೂಣ ಹತ್ಯೆ ನಡೆಸುವ ತಾಣಗಳ ಮೇಲೆ ದಾಳಿ ನಡೆಸುವವರಿಲ್ಲ. ಎಲ್ಲಿ ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ನಿದ್ದೆಗೆಟ್ಟು ಕಾಯುವವರಿಲ್ಲ. ಅಷ್ಟಕ್ಕೂ, ಕಾನೂನನ್ನು ಕೈಗೆತ್ತಿಕೊಳ್ಳುವುದು ಗೋವಿನ ವಿಷಯದಲ್ಲೂ ಭ್ರೂಣದ ವಿಷಯದಲ್ಲೂ ಅಪರಾಧವೇ. ಆದರೆ ಗೋವಿನ ವಿಷಯದಲ್ಲಿ ಈ ಅಪರಾಧವನ್ನು ಎಗ್ಗಿಲ್ಲದೇ ನಡೆಸುವವರು ಭ್ರೂಣಹತ್ಯೆಯ ಬಗ್ಗೆ ಯಾವ ಅಜೆಂಡಾವನ್ನೂ ಹೊಂದಿಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
 ಗೋಮಾಂಸದ ರಫ್ತಿನಲ್ಲಿ ವೃದ್ಧಿ ಮತ್ತು ಹೆಣ್ಣಿನ ಸಂಖ್ಯೆಯಲ್ಲಿ ಕುಸಿತ - ನಿಜವಾಗಿ ಇವು ನಮ್ಮನ್ನು ಇವತ್ತು ತೀವ್ರವಾಗಿ ಕಾಡಬೇಕಿದೆ. ಗೋಮಾಂಸದಲ್ಲಿ ವೃದ್ಧಿಯಾಗಬಾರದೆಂಬುದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಯಕೆ. ಆದರೆ ಅದರಲ್ಲಿ ವೃದ್ಧಿಯಾಗುತ್ತಿದೆ. ಹೆಣ್ಣು ಭ್ರೂಣದ ಸಂಖ್ಯೆಯಲ್ಲಿ ಕುಸಿತವಾಗಬಾರದೆಂಬುದೂ ಆಡಳಿತದ ಬಯಕೆ. ಆದರೆ ಅದರಲ್ಲಿ ಕುಸಿತವಾಗುತ್ತಿದೆ. ಏನಿದರ ಅರ್ಥ? ಇದು ಸೂಚಿಸುವುದೇನನ್ನು? ಸರಕಾರ ಪ್ರಾಮಾಣಿಕವಾಗಿಲ್ಲ ಎಂಬುದರ ಹೊರತು ಬೇರೆ ಏನೆಂದು ಇದನ್ನು ವಿಶ್ಲೇಷಿಸಬೇಕು?

Wednesday, 22 April 2015

  ಘರ್‍ವಾಪಸಿಗೆ ನಿಜ ಮಾದರಿಯನ್ನು ತೋರಿಸಿಕೊಟ್ಟ ಮುಸ್ಲಿಮ್ ವಿದ್ವಾಂಸರು

    ಸಂಘಪರಿವಾರದ ಘರ್‍ವಾಪಸಿ ಮತ್ತು ಕಾಂಗ್ರೆಸ್‍ನ ಜವಿೂನು ವಾಪಸಿಯ ಮಧ್ಯೆ ಒಂದು ಮಾದರಿ ‘ವಾಪಸಿ'ಯನ್ನು ಮುಸ್ಲಿಮ್ ವಿದ್ವಾಂಸರು ಈ ದೇಶಕ್ಕೆ ಪರಿಚಯಿಸಿದ್ದಾರೆ. ಉತ್ತರ ಪ್ರದೇಶದ ರಾಂಪುರದಲ್ಲಿರುವ ವಾಲ್ಮೀಕಿ ಸಮುದಾಯದ ಸುಮಾರು 800 ಕುಟುಂಬಗಳು ಇಸ್ಲಾಮ್‍ಗೆ ಮತಾಂತರವಾಗಿರುವುದಾಗಿ ಕಳೆದ ವಾರ ಘೋಷಿಸಿದುವು. ಸರಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಕಟ್ಟಿ ಇವರು ವಾಸಿಸುತ್ತಿದ್ದು, ಜಾಗ ತೆರವು ಮಾಡಲು ನಗರ ಪಾಲಿಗೆ ಆದೇಶಿಸಿತ್ತು. ಇಲ್ಲಿ  ಸಚಿವ ಅಝಂಖಾನ್‍ರು ಶಾಪಿಂಗ್‍ಮಾಲ್ ನಿರ್ಮಿಸುತ್ತಾರೆಂಬ ಪುಕಾರೂ ಹಬ್ಬಿತ್ತು. ‘ತಾವು ಇಸ್ಲಾಮ್‍ಗೆ ಮತಾಂತರವಾದರೆ ಅಝಂಖಾನ್‍ರು ತೆರವು ಕಾರ್ಯವನ್ನು ಸ್ಥಗಿತಗೊಳಿಸಬಹುದು’ ಎಂದು ನಂಬಿ ಅವರು ಇಸ್ಲಾಮ್ ಸ್ವೀಕಾರದ ಘೋಷಣೆ ಮಾಡಿದ್ದರು. ವಿಶೇಷ ಏನೆಂದರೆ, ಈ ಕುಟುಂಬಗಳಿಗೆ ಮತಾಂತರದ ವಿಧಿ-ವಿಧಾನಗಳನ್ನು ಹೇಳಿಕೊಡುವುದಕ್ಕೆ ಯಾವೊಬ್ಬ ಮುಸ್ಲಿಮ್ ವಿದ್ವಾಂಸರೂ ಬರಲೇ ಇಲ್ಲ. ಕೊನೆಗೆ ಮುಸ್ಲಿಮರ ಸಾಂಪ್ರದಾಯಿಕ ಟೋಪಿಯನ್ನು ಸ್ವಯಂ ಧರಿಸಿಕೊಳ್ಳುವ ಮೂಲಕ ಅವರೆಲ್ಲ ಮತಾಂತರವಾಗಿರುವುದಾಗಿ ಘೋಷಿಸಿದರು. ನಿಜವಾಗಿ, ಇದೊಂದು ಐತಿಹಾಸಿಕ ಕ್ಷಣ. ಸಂಘಪರಿವಾರದ ಘರ್‍ವಾಪಸಿಗೆ ಎದುರಾದ ಬಹುದೊಡ್ಡ ಮುಖಭಂಗ. ಇದಕ್ಕಿಂತ ಮೊದಲು ಸಂಘಪರಿವಾರವು ಘರ್‍ವಾಪಸಿಯ ಹೆಸರಲ್ಲಿ ಮತಾಂತರದ ಹಲವಾರು ಕಾರ್ಯಕ್ರಮಗಳನ್ನು ಈ ದೇಶದ ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಂಡಿತ್ತು. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ನೂರಾರು ಮಂದಿ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದಾಗಿಯೂ ಅದು ಹೇಳಿಕೊಂಡಿತ್ತು. ಆದರೆ ಆ ಬಳಿಕದ ಸುದ್ದಿಗಳು ಈ ವಾಪಸಿ ಎಷ್ಟು ಧರ್ಮವಿರೋಧಿ ಎಂಬುದನ್ನೂ ಸಾರಿತ್ತು. ಜನರು ರೇಶನ್ ಕಾರ್ಡ್‍ಗಾಗಿ, ಗುಡಿಸಲು ಉಳಿಸುವುದಕ್ಕಾಗಿ, ವಿೂಸಲಾತಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದಕ್ಕಾಗಿ.. ಹೀಗೆ ವಿವಿಧ ಷರತ್ತುಗಳನ್ನು ವಿಧಿಸಿ ಇಂಥದ್ದೊಂದು ವಾಪಸಿಗೆ ಒಪ್ಪಿಕೊಂಡಿದ್ದರು ಎಂಬುದೂ ಬಹಿರಂಗವಾಗಿತ್ತು. ಕೂಲಿ ಕೆಲಸ ಮಾಡಿ ಬದುಕುವ ಬಡವರು ತಮ್ಮ ಬದುಕು ಉಜ್ವಲವಾಗುವ ನಿರೀಕ್ಷೆಯಿಂದ ಹಣೆಗೆ ವಿಭೂತಿ ಹಚ್ಚಿಕೊಳ್ಳಲು ಸಿದ್ಧವಾದ ಹೃದಯ ವಿದ್ರಾವಕ ವಾಪಸಿ ಅದು. ಈ ವಾಪಸಿಯಲ್ಲಿ ಭಾಗವಹಿಸಿದವರು ಬಳಿಕ ಮಸೀದಿಗೆ ಹೋಗಿ ನಮಾಝ್ ಮಾಡಿದ ಬಗ್ಗೆಯೂ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದುವು. ಇದೀಗ ಮುಸ್ಲಿಮ್ ವಿದ್ವಾಂಸರು ಘರ್‍ವಾಪಸಿಯ ಮಾದರಿ ರೂಪವನ್ನು ಸಮಾಜದ ಮುಂದಿಟ್ಟಿದ್ದಾರೆ. ಆಮಿಷ ಅಥವಾ ಸ್ವಾರ್ಥ ಉದ್ದೇಶದಿಂದ ಆಗುವ ವಾಪಸಿಯು ಧರ್ಮವಿರೋಧಿ ಎಂಬುದನ್ನು ಅವರು ಬಹಿರಂಗವಾಗಿಯೇ ಸಾರಿದ್ದಾರೆ. ಅಂದಹಾಗೆ, ಸಂಖ್ಯೆಯನ್ನು ಹೆಚ್ಚುಗೊಳಿಸುವುದು ಮತಾಂತರದ ಉದ್ದೇಶ ಅಲ್ಲ, ಆಗಬಾರದು ಕೂಡ. ಓರ್ವ ವ್ಯಕ್ತಿ ಒಂದು ಸಿದ್ಧಾಂತದಿಂದ ಇನ್ನೊಂದು ಸಿದ್ಧಾಂತಕ್ಕೆ ಆಕರ್ಷಿತಗೊಳ್ಳಬೇಕು. ಅದನ್ನು ಅಧ್ಯಯನ ನಡೆಸಬೇಕು. ಬಳಿಕ ಸ್ವಇಚ್ಛೆಯಿಂದ ಇಷ್ಟದ ಸಿದ್ಧಾಂತವನ್ನು ಸಮಾಜದ ಮುಂದೆಯೋ ವ್ಯವಸ್ಥೆಯ ಮುಂದೆಯೋ ಘೋಷಿಸಬೇಕು. ಆದರೆ, ಸಂಘಪರಿವಾರದ ಘರ್‍ವಾಪಸಿ ಇದಕ್ಕೆ ವಿರುದ್ಧವಾಗಿತ್ತು. ಆ ವಾಪಸಿಯಲ್ಲಿ ಆಮಿಷವಷ್ಟೇ ಇತ್ತು, ಅಧ್ಯಯನಕ್ಕೆ ಮಹತ್ವವೇ ಇರಲಿಲ್ಲ. ಆದ್ದರಿಂದಲೇ ರಾಂಪುರದ ಘಟನೆಯನ್ನು ಘರ್‍ವಾಪಸಿಗೆ ಆದ ಬಹುದೊಡ್ಡ ಹೊಡೆತವೆಂದು ಹೇಳಬೇಕಾಗಿದೆ.
  ಅಷ್ಟಕ್ಕೂ, ಸಂಘಪರಿವಾರವು ಅದ್ದೂರಿಯಾಗಿ ಆರಂಭಿಸಿರುವ ಘರ್ ವಾಪಸಿಯ ಹಿಂದೆ ಇರುವ ನಿಜವಾದ ಉದ್ದೇಶ ಮತಾಂತರ ಎಂದು ಖಚಿತವಾಗಿ ಹೇಳುವಂತಿಲ್ಲ. ಒಂದುಕಡೆ, ದನದ ಮಾಂಸವನ್ನು ಬಹಿರಂಗವಾಗಿಯೇ ಸೇವಿಸುವ ಪ್ರತಿಭಟನಾ ಕಾರ್ಯಕ್ರಮಗಳು ಹಿಂದೂ ಧರ್ಮದಲ್ಲಿ ಗುರುತಿಸಿಕೊಂಡವರಿಂದಲೇ ಏರ್ಪಡುತ್ತಿವೆ. ತಾಳಿ ಕಿತ್ತೊಗೆಯುವ ಪ್ರತಿಭಟನೆಗಳು ನಡೆಯುತ್ತಿವೆ. ಪಂಕ್ತಿಬೇಧ, ಮಡೆಸ್ನಾನ ಸಹಿತ ಅಸ್ಪೃಶ್ಯತಾ ಆಚರಣೆಗಳ ವಿರುದ್ಧ ವಿರೋಧದ ಧ್ವನಿಗಳು ತೀವ್ರವಾಗುತ್ತಿವೆ. ಅಲ್ಲದೇ, ಮೋದಿಯವರ ಆಡಳಿತದಲ್ಲಿ ಹೇಳಿಕೊಳ್ಳಬಹುದಾದ ಸುಖದ ಅನುಭವವೂ ಜನರಿಗೆ ಆಗಿಲ್ಲ. ಕಪ್ಪು ಹಣ ಇನ್ನೂ ವಾಪಸಾಗಿಲ್ಲ. ಅತ್ಯಾಚಾರವೂ ನಿಂತಿಲ್ಲ. ಮಠ, ಮಂದಿರಗಳು ತಪ್ಪಾದ ಕಾರಣಕ್ಕೆ ಸುದ್ದಿಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಜನರು ವಿಚಲಿತಗೊಳ್ಳದಂತೆ ನೋಡಿಕೊಳ್ಳಬೇಕಾದರೆ ಘರ್‍ವಾಪಸಿ, ಗೋಹತ್ಯೆಯಂಥ ಕಾರ್ಯಕ್ರಮಗಳನ್ನು ಚರ್ಚಾ ವಸ್ತುವಾಗಿ ಮುನ್ನೆಲೆಗೆ ತರಬೇಕಾದ ಅಗತ್ಯ ಬಹಳವೇ ಇದೆ. ಘರ್‍ವಾಪಸಿಯಲ್ಲಿ ಜನರು ಗಮನ ನೆಟ್ಟರೆ ‘ಹಣ ವಾಪಸಿ' ಮರೆತು ಹೋಗುತ್ತದೆ. ಗೋವನ್ನು ಕೇಂದ್ರೀಕರಿಸಿ ಚರ್ಚೆ ಆರಂಭಿಸಿದರೆ ಮುಸ್ಲಿಮ್ ವಿರೋಧಿ ವಾತಾವರಣವೊಂದನ್ನು ಕಟ್ಟಿ ಬೆಳೆಸುವುದಕ್ಕೆ ಸುಲಭವಾಗುತ್ತದೆ. ಬಿಜೆಪಿಯ ಸಂಸದರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ ಇರುವುದರ ಹಿಂದೆ ಇಂಥದ್ದೊಂದು ರಹಸ್ಯ ಉದ್ದೇಶ ಇರಬಹುದೋ ಎಂಬ ಅನುಮಾನ ಕಾಡುವುದು ಈ ಎಲ್ಲ ಕಾರಣಗಳಿಂದಲೇ. ಈ ರಾಜಕಾರಣಿಗಳು ತಲೆಗೊಂದು ಮಾತಾಡುತ್ತಿರುವಂತೆಯೇ ಮೋದಿ ಸರಕಾರವು ತೈಲ ಮಾರುಕಟ್ಟೆಯನ್ನು ಮುಕ್ತಗೊಳಿಸಿತು. ಅವಸರವಸರವಾಗಿ ಭೂಸ್ವಾಧೀನ ಕಾಯ್ದೆಯನ್ನು ತಯಾರಿಸಿತು. ಭಾರತಕ್ಕೆ ಮಾರಕ ಆಗಬಹುದಾದ ರೀತಿಯಲ್ಲಿ ಅಮೇರಿಕದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಿತು. ಅಲ್ಲದೇ ಇದೀಗ, ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಸಂಗ್ರಹವಾಗಿರುವ ಟನ್ನುಗಟ್ಟಲೆ ಚಿನ್ನವನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಇಟ್ಟು ಅದರ ಬದಲಿಗೆ ದೇವಸ್ಥಾನಗಳಿಗೆ ಸುವರ್ಣ ಸರ್ಟಿಫಿಕೇಟು ಕೊಡುವ ಮತ್ತು ಆ ಭಾರೀ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಚಿನ್ನದ ಆಮದನ್ನು ಕಡಿಮೆ ಮಾಡುವ ಯೋಜನೆಯನ್ನೂ ಅದು ತಯಾರಿಸಿದೆ. ನಿಜವಾಗಿ, ದೇವಸ್ಥಾನಗಳ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಈ ಏಕೈಕ ಯೋಜನೆಯೇ ಬಿಜೆಪಿಯನ್ನು ಹಿಂದೂ ವಿರೋಧಿ ಎಂದು ಘೋಷಿಸುವುದಕ್ಕೆ ಧಾರಾಳ ಸಾಕು. ಒಂದು ವೇಳೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇಂಥದ್ದೊಂದು ಯೋಜನೆ ರೂಪ ಪಡೆಯುತ್ತಿದ್ದರೆ ಈ ದೇಶದ ಸರ್ವ ದೇವಸ್ಥಾನಗಳನ್ನೂ ಬಿಜೆಪಿ ಒಟ್ಟುಗೂಡಿಸುತ್ತಿತ್ತು. ಸಂಘಪರಿವಾರ ಬೀದಿಗಿಳಿಯುತ್ತಿತ್ತು. ಆದರೆ ಈಗ ಹಾಗೆ ಮಾಡುವಂತಿಲ್ಲ. ಮಾತ್ರವಲ್ಲ, ಇವು ದೇಶದ ಗಮನ ಸೆಳೆಯದಂತೆ ನೋಡಿಕೊಳ್ಳಬೇಕಾದ ತುರ್ತೂ ಇದೆ. ಬಹುಶಃ ಘರ್‍ವಾಪಸಿ, ಗೋ ಹತ್ಯೆಯಂಥ ವಿಷಯಗಳು ಭಾರೀ ಸದ್ದಿನೊಂದಿಗೆ ಅಖಾಡಕ್ಕೆ ಇಳಿದಿರುವುದರ ಹಿಂದೆ ಇಂಥ ಸಾಧ್ಯತೆಗಳು ಖಂಡಿತ ಇವೆ.
    ಹಾಗಂತ, ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂಬ ವಚನವನ್ನು ಪವಿತ್ರ ಕುರ್‍ಆನ್‍ಗೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಅಂಥದ್ದೊಂದು ಆಶಯ ಸರ್ವ ಧರ್ಮಗಳದ್ದು. ಭಾರತಕ್ಕೆ ಇಸ್ಲಾಮ್ ಖಡ್ಗದೊಂದಿಗೆ ಆಗಮಿಸಿತು ಎಂದು ಹೇಳುವವರಿಗೂ ಖಡ್ಗವೊಂದು ಧರ್ಮವನ್ನು ಪ್ರಸಾರ ಮಾಡಲಾರದೆಂಬ ಸತ್ಯ ಖಂಡಿತ ಗೊತ್ತು. ಖಡ್ಗದೆದುರು ವಿಶ್ವಾಸ ಬದಲಿಸಿದವ ಖಡ್ಗದ ಮೊನೆ ಸರಿದಾಗ ಮತ್ತೆ ತನ್ನ ಸಹಜ ವಿಶ್ವಾಸಕ್ಕೆ ಮರಳುತ್ತಾನೆ. ಖಡ್ಗದ ವಿರುದ್ಧ ಬಂಡಾಯವೇಳುತ್ತಾನೆ. ಇದು ಮನುಷ್ಯ ಪ್ರಕೃತಿ. ಈ ಪ್ರಕೃತಿಗೆ ವಿರುದ್ಧವಾಗಿ ಈ ಹಿಂದಿನ ಭಾರತೀಯರು ಬದುಕಿದ್ದರು ಎಂದು ಹೇಳುವುದು ಅವರಿಗೆ ಮಾಡುವ ಅವಮಾನವಾಗುತ್ತದೆ. ನಿಜವಾಗಿ, ಈ ದೇಶದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯ ಪದ್ಧತಿಯೇ ಇಸ್ಲಾಮನ್ನೋ ಕ್ರೈಸ್ತ ಧರ್ಮವನ್ನೋ ಬೌದ್ಧ, ಬಸವ ಪಥವನ್ನೋ ಜನರು ಆರಿಸಿಕೊಳ್ಳಲು ಕಾರಣವಾಯಿತು.  ಅಸ್ಪೃಶ್ಯತೆಯ ವಿರುದ್ಧ ಜನರು ಪ್ರಕೃತಿ ಸಹಜವಾಗಿಯೇ ಬಂಡೆದ್ದರು. ಈ ಬಂಡಾಯ ಇವತ್ತೂ ಮುಂದುವರಿದಿದೆ. ವಿಧವೆಯರು ತೇರು ಎಳೆದದ್ದು, ಅರ್ಚಕಿಯರಾದದ್ದು, ತಾಳಿ, ದನದ ಮಾಂಸ, ದೇವಸ್ಥಾನ ಬಹಿಷ್ಕಾರ... ಮುಂತಾದ ರೂಪಗಳಲ್ಲಿ ಅದು ಹೊರಹೊಮ್ಮುತ್ತಲೂ ಇವೆ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಮಂದಿ ಖಡ್ಗ ಮತ್ತು ಬಲಾತ್ಕಾರವನ್ನು ತೋರಿಸುತ್ತಿರುತ್ತಾರೆ. ಆದ್ದರಿಂದಲೇ, ರಾಂಪುರದ ಘಟನೆ ಮುಖ್ಯವಾಗುತ್ತದೆ. ಘರ್‍ವಾಪಸಿಗೆ ಸುಂದರ ಮಾದರಿಯನ್ನು ತೋರಿಸಿಕೊಟ್ಟ ಮುಸ್ಲಿಮ್ ವಿದ್ವಾಂಸರನ್ನು ಅಭಿನಂದಿಸಬೇಕೆನಿಸುತ್ತದೆ.

Tuesday, 14 April 2015

ಪಂಡಿತರ ಮನೆ ನಿರ್ಮಾಣದ ಹೊಣೆಯನ್ನು ಮುಸ್ಲಿಮರೇ ವಹಿಸಿಕೊಳ್ಳಲಿ

ಬಲವಂತದ ವಲಸೆ, ಒಕ್ಕಲೆಬ್ಬಿಸುವಿಕೆ, ಬೆದರಿಕೆ.. ಮುಂತಾದ ಪದಗಳಿಗೆ ಮೇಲ್ನೋಟಕ್ಕೆ ಕಾಣುವ ಅರ್ಥಗಳಷ್ಟೇ ಇರುವುದಲ್ಲ. ಅಂಥ ಪದಗಳೊಳಗೆ ಕಣ್ಣೀರಿರುತ್ತದೆ. ಭಾವುಕತೆಯಿರುತ್ತದೆ. ಕರುಳು ಮಿಡಿಯುವ ಹೃದಯ ವಿದ್ರಾವಕ ಕತೆಗಳಿರುತ್ತವೆ. ಆದರೆ ಇವುಗಳಿಗೆ ‘ಪ್ರತ್ಯೇಕ ವಸತಿ ಪ್ರದೇಶ' ನಿರ್ಮಿಸುವುದು ಪರಿಹಾರವೇ? ಹಾಗಂತ ಬಿಜೆಪಿ ವಾದಿಸುತ್ತಿದೆ. 1990ರಲ್ಲಿ ಕಾಶ್ಮೀರದಿಂದ ದೊಡ್ಡ ಪ್ರಮಾಣದಲ್ಲಿ ದೆಹಲಿ ಮತ್ತಿತರೆಡೆಗೆ ಬಲವಂತದಿಂದ ವಲಸೆ ಹೋದ ಪಂಡಿತರಿಗೆ ಕಾಶ್ಮೀರದಲ್ಲಿಯೇ ಪ್ರತ್ಯೇಕ ವಸತಿ ಪ್ರದೇಶವನ್ನು ನಿರ್ಮಾಣ ಮಾಡಬೇಕೆಂದು ಅದು ವಾದಿಸುತ್ತಿದೆ. ಆದರೆ ಕಾಶ್ಮೀರಿಗಳು ಅದನ್ನು ಒಪ್ಪುತ್ತಿಲ್ಲ. ಅದನ್ನು ಇಸ್ರಲ್ ಮಾದರಿ ಎಂದವರು ಖಂಡಿಸಿದ್ದಾರೆ. ಇಸ್ರೇಲನ್ನು ಮಾದರಿಯಾಗಿ ಪರಿಗಣಿಸಿರುವ ಬಿಜೆಪಿಯು ಕಾಶ್ಮೀರಿ ಪಂಡಿತರ ಸಮಸ್ಯೆಗೆ ಇಸ್ರೇಲನ್ನು ಪರಿಹಾರವಾಗಿ ಕಂಡಿರುವುದರಲ್ಲಿ ಅಚ್ಚರಿ ಏನಿಲ್ಲ. ಫೆಲೆಸ್ತೀನಿಯರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಲ್ಲಿ ಯಹೂದಿಗಳನ್ನು ನೆಲೆಗೊಳಿಸುವ ಅಕ್ರಮ ಕೃತ್ಯದಲ್ಲಿ ಇಸ್ರೇಲ್ ಇವತ್ತು ತೊಡಗಿಸಿಕೊಂಡಿದೆ. ಮಾತ್ರವಲ್ಲ, ಈ ಭಾಗದಲ್ಲಿ ಬೃಹತ್ ಗೋಡೆಯನ್ನೆಬ್ಬಿಸಿ ಫೆಲೆಸ್ತೀನಿ ಮತ್ತು ಇಸ್ರೇಲಿಗರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಾಶ್ವತವಾಗಿ ವಿಭಜಿಸಿಬಿಡುತ್ತಿದೆ. ಯಹೂದಿಗಳಿಗೆ ಒದಗಿಸಲಾಗುವ ಸೌಲಭ್ಯಗಳಲ್ಲಿ ಸಣ್ಣ ಪ್ರಮಾಣವನ್ನೂ ವಿಭಜಿತ ಫೆಲೆಸ್ತೀನಿಗಳಿಗೆ ಅದು ಒದಗಿಸುತ್ತಿಲ್ಲ. ಜಾಗತಿಕವಾಗಿಯೇ ಖಂಡನೆಗೆ ಒಳಗಾಗಿರುವ ಈ ವಸತಿ ನಿರ್ಮಾಣ ಯೋಜನೆಯನ್ನು ಬಿಜೆಪಿ ಇದೀಗ ಕಾಶ್ಮೀರಿ ಪಂಡಿತರಿಗಾಗಿ ಜಾರಿ ಮಾಡುವ ಉಮೇದನ್ನು ವ್ಯಕ್ತಪಡಿಸುತ್ತಿದೆ. ಕಾಶ್ಮೀರದ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ವಸತಿ ಪ್ರದೇಶಗಳಲ್ಲಿ ಅನ್ಯರಂತೆ ಬದುಕುವ ಯೋಜನೆ ಇದು. ಹಿಂದೂಗಳಿಗೆ ಒಂದು ಪ್ರದೇಶ, ಮುಸ್ಲಿಮರಿಗೆ ಒಂದು ಪ್ರದೇಶ. ಆದರೆ ಈ ಯೋಜನೆ ಇಷ್ಟಕ್ಕೇ ನಿಲ್ಲುವ ಸಾಧ್ಯತೆಯಿಲ್ಲ. ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿದರು ಎಂಬ ಆರೋಪ ಹೊರಿಸಿ ಬಳಿಕ ಇಸ್ರೇಲ್ ಎಬ್ಬಿಸಿದಂತೆ ಪ್ರತ್ಯೇಕತೆಯ ಗೋಡೆಯನ್ನು ಎಬ್ಬಿಸುವ ಉದ್ದೇಶವೂ ಇದರಲ್ಲಿರಬಹುದು. ಮುಸ್ಲಿಮ್ ತೀವ್ರವಾದಿಗಳಿಂದ ಹಿಂದೂಗಳನ್ನು ರಕ್ಷಿಸುವುದಕ್ಕೆ ಇದು ಅನಿವಾರ್ಯ ಎಂದೂ ಸಮರ್ಥಿಸಿಕೊಳ್ಳಬಹುದು. ಹೀಗೆ ಹಿಂದೂ-ಮುಸ್ಲಿಮರನ್ನು ಜೊತೆಯಾಗಿ ಬೆಳೆಸಿದ ಕಾಶ್ಮೀರಿವು ದ್ವೇಷದ ಗೋಡೆಯನ್ನೆಬ್ಬಿಸಿ ಶಾಶ್ವತ ವೈರತ್ವಕ್ಕೆ ನಾಂದಿಯನ್ನೂ ಹಾಡಬಹುದು. ಅಷ್ಟಕ್ಕೂ, ಜನರು ಬಲವಂತದಿಂದ ವಲಸೆ ಹೋಗಿರುವುದು ಕಾಶ್ಮೀರದಿಂದ ಮಾತ್ರವಲ್ಲ, ಗುಜರಾತ್, ಅಸ್ಸಾಮ್, ಉತ್ತರ ಪ್ರದೇಶ.. ಸಹಿತ ಈ ದೇಶದ ಹಲವು ರಾಜ್ಯಗಳು ಇಂಥ ವಲಸೆಗಳಿಗೆ ತುತ್ತಾಗಿವೆ. ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಸಾವಿರಾರು ಮಂದಿ ತಮ್ಮ ಹುಟ್ಟಿದೂರಿನಿಂದ ವಲಸೆ ಹೋದರು. ಮನೆ, ಗದ್ದೆ, ಅಂಗಡಿ ಎಲ್ಲವನ್ನೂ ಕಳಕೊಂಡು ನಿರಾಶ್ರಿತ ಶಿಬಿರಗಳಲ್ಲಿ ವಾಸ ಹೂಡಿದರು. ಅವರನ್ನು ಮರಳಿ ಸ್ವೀಕರಿಸುವುದಕ್ಕೆ ಪರಿಸರದ ಮಂದಿ ಅಡ್ಡಿಪಡಿಸುತ್ತಿದ್ದಾರೆ. ಅವರ ಬೆಲೆಬಾಳುವ ಆಸ್ತಿಗಳು ಇತರರ ಪಾಲಾಗಿವೆ. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಸತಿ ಪ್ರದೇಶದ ಯೋಜನೆಯನ್ನು ಮುಂದಿಟ್ಟಿರುವ ಬಿಜೆಪಿಇವರ ಕುರಿತೇಕೆ ಮಾತಾಡುತ್ತಿಲ್ಲ?   ಕಳೆದ 13 ವರ್ಷಗಳಿಂದ ಗುಜರಾತ್ ಮತ್ತಿತರೆಡೆ ವಲಸೆ ಜೀವನ ನಡೆಸುತ್ತಿರುವ ಗುಜರಾತಿ ಮುಸ್ಲಿಮರಿಗೆ ಬಿಜೆಪಿಯೇಕೆ ಇಂಥದ್ದೊಂದು ಯೋಜನೆಯನ್ನು ಪ್ರಕಟಿಸಿಲ್ಲ? ಇವರಿಗೆ ಹಿಂದೂ ಎಂಬ ಗುರುತು ಇಲ್ಲ ಎಂಬ ಕಾರಣಕ್ಕೋ? ಕಾಶ್ಮೀರದಲ್ಲಾದರೋ ಸಮ್ಮಿಶ್ರ ಸರಕಾರವಿದೆ. ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ಇಷ್ಟಿದ್ದೂ ಇಂಥದ್ದೊಂದು ಯೋಜನೆಯನ್ನು ಅದು ಪ್ರಸ್ತುತಪಡಿಸುತ್ತದೆಂದಾದರೆ ಸ್ಪಷ್ಟ ಬಹುಮತವಿರುವ ಗುಜರಾತ್‍ನಲ್ಲೇಕೆ ಅದನ್ನು ಜಾರಿಗೊಳಿಸಿ ತೋರಿಸಬಾರದು?
 ನಿಜವಾಗಿ, ಕಾಶ್ಮೀರಿ ಪಂಡಿತರಿಗೆ ಮನೆ ನಿರ್ಮಿಸಿಕೊಡಬೇಕಾದದ್ದು ಸರಕಾರ ಅಲ್ಲ, ಕಾಶ್ಮೀರದ ಮುಸ್ಲಿಮರು. ಎಲ್ಲೆಲ್ಲ ಕಾಶ್ಮೀರಿ ಪಂಡಿತರು 25 ವರ್ಷಗಳ ಹಿಂದೆ ವಾಸವಿದ್ದರೋ ಅಲ್ಲೆಲ್ಲ  ಮುಸ್ಲಿಮರು ಮತ್ತೆ ಹೊಸದಾಗಿ ಪಂಡಿತ ಮನೆಗಳನ್ನು ಕಟ್ಟಿಕೊಡಬೇಕಾಗಿದೆ. ಅದಕ್ಕೆ ಸರಕಾರ ಸರ್ವ ರೀತಿಯ ನೆರವು ಮತ್ತು ಪ್ರೇರಣೆಯನ್ನು ನೀಡಬೇಕಾಗಿದೆ. ಹಾಗಂತ ಯಾರೆಲ್ಲ ಮನೆ ನಿರ್ಮಿಸಿ ಕೊಡುತ್ತಾರೋ ಅವರೆಲ್ಲ ಪಂಡಿತರನ್ನು ಓಡಿಸಿದವರು ಎಂದರ್ಥವಲ್ಲ. ಅದೊಂದು ಸೇವೆ. ತಮ್ಮ ಸಹೋದರರಿಗೆ ಕೊಡುವ ಪ್ರೀತಿಯ ಭರವಸೆ ಮತ್ತು ಕಾಣಿಕೆ. ತಮ್ಮ ಮನೆಯ ಪಕ್ಕ ಈ ಹಿಂದೆ ಪಂಡಿತರ ಮನೆಯಿದ್ದಿದ್ದರೆ ಮತ್ತು ವಲಸೆಯಿಂದಾಗಿ ಆ ಪ್ರದೇಶ ಖಾಲಿ ಬಿದ್ದಿದ್ದರೆ ಅಥವಾ ಅದನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಮರಳಿ ಪಂಡಿತರಿಗೆ ಒಪ್ಪಿಸುವುದು ಬಹಳ ಅಗತ್ಯ. ಆಗಿರುವ ಪ್ರಮಾದಗಳನ್ನು ಪರಸ್ಪರ ಒಪ್ಪಿಕೊಂಡು ಮರಳಿ ಸೌಹಾರ್ದದ ಸೌಧ ಕಟ್ಟುವ ಕೆಲಸ ಎರಡೂ ಕಡೆಯಿಂದ ಆಗಬೇಕಿದೆ. ಇಂಥದ್ದೊಂದು ಆರಂಭ ಮಾತ್ರ ಕಾಶ್ಮೀರಿ ಪಂಡಿತ ಸಮಸ್ಯೆಗೆ ಪರಿಹಾರವೇ ಹೊರತು ಪ್ರತ್ಯೇಕ ವಸತಿ ಪ್ರದೇಶಗಳಲ್ಲ. ಹಿಂದೂ ಮತ್ತು ಮುಸ್ಲಿಮರು ಕಾಶ್ಮೀರದಲ್ಲಿ ಬಿಜೆಪಿಯೋ ಶಿವಸೇನೆ, ಸಂಘಪರಿವಾರವೋ ಹುಟ್ಟಿಕೊಂಡ ಬಳಿಕ ಕಾಣಿಸಿಕೊಂಡವರಲ್ಲ. ಈ ಪ್ರದೇಶದಲ್ಲಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಬದುಕುತ್ತಿದ್ದಾರೆ. ಕಾಶ್ಮೀರಿಗಳಿಗೆ ಪಂಡಿತರೂ ಹೊಸಬರಲ್ಲ, ಪಂಡಿತರಿಗೆ ಕಾಶ್ಮೀರಿಗಳೂ ಹೊಸಬರಲ್ಲ. ಈ ಸಹಜತೆಗೆ ಬಿಜೆಪಿಯ ಪ್ರತ್ಯೇಕ ವಸತಿ ಯೋಜನೆಯು ಖಂಡಿತ ಮಸಿ ಬಳಿಯುತ್ತದೆ. ಧಾರ್ಮಿಕ ನೆಲೆಯಲ್ಲಿ ಒಂದು ರಾಜ್ಯದ ಜನತೆಯನ್ನು ಆ ಕಡೆ-ಈ ಕಡೆ ಮಾಡಿಬಿಟ್ಟರೆ ಆ ಬಳಿಕ ಅಲ್ಲಿ ದ್ವೇಷದ ಹೊರತು ಶಾಂತಿ ನೆಲೆಗೊಳ್ಳಲು ಸಾಧ್ಯವೇ ಇಲ್ಲ.
 25 ವರ್ಷಗಳ ಹಿಂದೆ ವಲಸೆ ಹೋದ ಪಂಡಿತರಿಗೂ ಅವರ ಈಗಿನ ಹೊಸ ತಲೆಮಾರಿಗೂ ದೊಡ್ಡದೊಂದು ಅಂತರವಿದೆ. ಈ ಹೊಸ ತಲೆಮಾರು ಕಾಶ್ಮೀರಕ್ಕೆ ಭೇಟಿ ಕೊಟ್ಟಿದೆಯೋ ಅಲ್ಲಿ ನೆಲೆಸಲು ಉತ್ಸುಕವಾಗಿದೆಯೋ ಎಂಬುದೂ ಸ್ಪಷ್ಟವಿಲ್ಲ. ಕಾಶ್ಮೀರಿದಲ್ಲಿ ತಮ್ಮ ಭೂಮಿ, ಮನೆ, ಕೃಷಿ ತೋಟಗಳನ್ನು ಕೈ ಬಿಟ್ಟು ಬಂದ ಹಿರಿಯ ಪಂಡಿತರಂಥಲ್ಲ ಅವರ ಮಕ್ಕಳು. ಅವರು ದೆಹಲಿಯಲ್ಲೋ ಇನ್ನಿತರ ಪ್ರದೇಶಗಳಲ್ಲೋ ಹೊಸ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರಕ್ಕೆ ಹೋಲಿಸಿದರೆ ಅವರು ಈಗ ಬದುಕುತ್ತಿರುವ ಪ್ರದೇಶಗಳು ಹೆಚ್ಚು ಸುರಕ್ಷಿತ. ಅವರು ತಮ್ಮ ಉದ್ಯೋಗ, ಮನೆಯನ್ನು ಬಿಟ್ಟು ಕಾಶ್ಮೀರಕ್ಕೆ ತೆರಳಬಹುದೇ ಎಂಬ ಅನುಮಾನವೊಂದು ಸಹಜವಾಗಿಯೇ ಇದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಈಗಲೂ ಜೀವಂತವಿದೆ. ಪ್ರವಾಹದ ಭೀತಿಯಿರುತ್ತದೆ. ಮಿಲಿಟರಿ ಮತ್ತು ಜನರ ನಡುವೆ ಆಗಾಗ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲಿನ ಅರ್ಥವ್ಯವಸ್ಥೆ ಮತ್ತು ಉದ್ಯೋಗ ಲಭ್ಯತೆಯು ದೆಹಲಿ ಇನ್ನಿತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆಯೇ. ಇಂಥ ಸ್ಥಿತಿಯಲ್ಲಿ ವಲಸಿಗ ಪಂಡಿತ ಕುಟುಂಬವು ಕಾಶ್ಮೀರಕ್ಕೆ ಮರಳಲು ಮುಂದಾಗಬಹುದೇ? ಪ್ರತ್ಯೇಕ ವಸತಿ ಪ್ರದೇಶದ ಬಗ್ಗೆ ಮಾತಾಡುವವರು ಈ ಬಗ್ಗೆ ಎಷ್ಟಂಶ ಆಲೋಚಿಸಿದ್ದಾರೆ?
 ಕಾಶ್ಮೀರವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದು ಪಂಡಿತ ಸಮಸ್ಯೆಗೆ ಪರಿಹಾರ ಅಲ್ಲ,ಸ್ವತ ಅದುವೇ ಒಂದು ಸಮಸ್ಯೆ. ಮುಸ್ಲಿಮರ ನಡುವೆಯೇ ಹಿಂದೂಗಳ ಮನೆ ನಿರ್ಮಾಣವಾಗಬೇಕು. ಅದರ ನೇತೃತ್ವನ್ನು ಮುಸ್ಲಿಮರೇ ವಹಿಸಿಕೊಳ್ಳಬೇಕು. ಅಂಥದ್ದೊಂದು ಸೌಹಾರ್ದದ ವಾತಾವರಣ ನಿರ್ಮಾಣಕ್ಕಾಗಿ ಪ್ರಯತ್ನಗಳು ನಡೆಯಬೇಕು. ಕಾಶ್ಮೀರ ಹಿಂದೂ ಮತ್ತು ಮುಸ್ಲಿಮರದ್ದು. ಅದು ಹಾಗೆಯೇ ಉಳಿಯಲಿ.