Monday, 13 February 2017

ಕಲ್ಲಡ್ಕವನ್ನು ಪ್ರತಿನಿಧಿಸಬೇಕಾದವರು ಯಾರು?


      ಕಲ್ಲಡ್ಕ - ಎರಡು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಅದರಲ್ಲಿ ಒಂದು ಕಾರಣವನ್ನು ವಿಕಿಪೀಡಿಯಾ ಹೇಳುತ್ತದೆ. ಗೂಗಲ್‍ನಲ್ಲಿ ಕಲ್ಲಡ್ಕ ಎಂದು ಬರೆದರೆ ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಒಂದು ಊರು ಎಂಬ ಮಾಹಿತಿ ಸಿಗುತ್ತದೆ. ಅದರ ಜೊತೆಗೇ KT (ಕಲ್ಲಡ್ಕ ಟೀ) ಬಹಳ ಹೆಸರುವಾಸಿ ಎಂದೂ ಅದು ಹೇಳುತ್ತದೆ. ಇನ್ನೊಂದು ಕಾರಣವನ್ನು ಸಮಾಜ ಹೇಳುತ್ತದೆ. ಅದು ಕಲ್ಲಡ್ಕ ಪ್ರಭಾಕರ ಭಟ್. ಈ ವರೆಗೆ ಕಲ್ಲಡ್ಕವು ಈ ಎರಡು ಕಾರಣಗಳ ಸುತ್ತಲೇ ಚರ್ಚೆಗೆ ಒಳಗಾಗುತ್ತಿತ್ತು. ವಾದ-ಪ್ರತಿವಾದ, ವಾಗ್ವಾದ, ಶ್ಲಾಘನೆಗಳಲ್ಲಿ ಕಲ್ಲಡ್ಕ ಟೀ (KT) ಮತ್ತು ಪ್ರಭಾಕರ ಭಟ್ಟರೇ ಕೇಂದ್ರ ಸ್ಥಾನದಲ್ಲಿದ್ದರು. ಆದರೆ ಕಳೆದವಾರ ಈ ರಂಗಮಂಟಪಕ್ಕೆ ವೆಂಕಪ್ಪ ಪೂಜಾರಿ ಎಂಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೋರ್ವರು ದಿಢೀರ್ ಪ್ರವೇಶಗೈದರು. ಮಾತ್ರವಲ್ಲ, ಕಲ್ಲಡ್ಕವನ್ನು ಪ್ರತಿನಿಧಿಸುವುದಕ್ಕೆ ಕಲ್ಲಡ್ಕ ಟೀ ಮತ್ತು ಪ್ರಭಾಕರ ಭಟ್ಟರಲ್ಲಿ ಯಾರು ಸೂಕ್ತ ಎಂಬುದನ್ನು ಅತ್ಯಂತ ಮನೋಜ್ಞವಾಗಿ ಸಮಾಜದ ಮುಂದಿಟ್ಟರು.
      ಮೇಸ್ತ್ರಿ ಕೆಲಸವನ್ನು ಬಲ್ಲ ವೆಂಕಪ್ಪ ಪೂಜಾರಿಯವರು 2016 ಮೇ ತಿಂಗಳಲ್ಲಿ ಉದ್ಯೋಗಕ್ಕೆಂದು ಕತರ್ ದೇಶಕ್ಕೆ ತೆರಳುತ್ತಾರೆ. ಓರ್ವ ಮಧ್ಯವಯಸ್ಕ ವ್ಯಕ್ತಿಯಾಗಿ ಮತ್ತು ಕಲ್ಲಡ್ಕದ ನಿವಾಸಿಯಾಗಿ ವೆಂಕಪ್ಪ ಪೂಜಾರಿಯವರಿಗೆ ಕಲ್ಲಡ್ಕ ಏನೆಂಬುದು ಚೆನ್ನಾಗಿಯೇ ಗೊತ್ತು. ಕಲ್ಲಡ್ಕ ಟೀ ಮತ್ತು ಪ್ರಭಾಕರ ಭಟ್ - ಎರಡರ ಬಗ್ಗೆಯೂ ಗೊತ್ತು. ಕರ್ನಾಟಕಕ್ಕೆ ಮಾತ್ರವಲ್ಲ, ಜಗತ್ತಿಗೇ KT ಒಂದು ವಿಶಿಷ್ಟ ಕೊಡುಗೆ. ಅದರಲ್ಲಿ ವಿಶೇಷ ಸ್ವಾದ ಇದೆ. ತಯಾರಿಯಲ್ಲಿ ಹೊಸತನವಿದೆ. ಅದು ಎಲ್ಲರನ್ನೂ ಸ್ವಾಗತಿಸುತ್ತದೆ. ಎಲ್ಲರನ್ನೂ ತೃಪ್ತಿಪಡಿಸುತ್ತದೆ. ಧರ್ಮ-ಜಾತಿ-ಕುಲ-ಗೋತ್ರ-ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲರೊಳಗೊಂದಾಗುವ ವಿಶಿಷ್ಟ ಗುಣವೊಂದು KTಯಲ್ಲಿದೆ. ಆದ್ದರಿಂದಲೇ, KTಯನ್ನು ಮಾರುವ ಕಲ್ಲಡ್ಕದ ನಿರ್ದಿಷ್ಟ ಹೊಟೇಲಿಗೆ ಮುಸ್ಲಿಮರೂ ಭೇಟಿ ಕೊಡುತ್ತಾರೆ. ಹಿಂದೂಗಳೂ ಭೇಟಿ ಕೊಡುತ್ತಾರೆ. ಮಹಿಳೆಯರೂ ಮಕ್ಕಳೂ ಪರಿಚಿತರೂ ಅಪರಿಚಿತರೂ.. ಎಲ್ಲರೂ KTಯನ್ನು ಪ್ರೀತಿಸುತ್ತಾರೆ. ಆದರೆ, ಇದಕ್ಕೆ ಯಾವ ರೀತಿಯಲ್ಲೂ ಹೊಂದದ ವ್ಯಕ್ತಿತ್ವ ಪ್ರಭಾಕರ ಭಟ್ಟರದ್ದು. ಅವರು ಮಾತಾಡಿದರೆ ಉಳಿದವರ ಮನಸ್ಸು ಮುದುಡುತ್ತದೆ. ಅವರ ಮಾತುಗಳು ಮುಸ್ಲಿಮರನ್ನು
   
ಇರಿಯುವಂತಿರುತ್ತದೆ. ಮಹಿಳೆಯರನ್ನು ಅವಮಾನಿಸುವಂತಿರುತ್ತದೆ. ಮಸೀದಿ, ಮದ್ರಸ, ಶರೀಅತ್, ಬುರ್ಖಾ, ಇಸ್ಲಾಮ್, ಮುಸ್ಲಿಮರ ತೆಗಳಿಕೆ ಇರುತ್ತದೆ. ಉದ್ದೇಶಪೂರ್ವಕ ಸುಳ್ಳುಗಳಿರುತ್ತದೆ. ಮುಸ್ಲಿಮ್ ಮತ್ತು ಇಸ್ಲಾಮನ್ನು ತೆಗಳುವುದನ್ನೇ ಅವರು ‘ಭಾಷಣ’ ಮಾಡಿಕೊಂಡಿರುತ್ತಾರೆ. ‘ಮುಸ್ಲಿಮರೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಡಿ’ ಎಂದು ನೇಮೋತ್ಸವ, ಜಾತ್ರೋತ್ಸವ, ಹಿಂದೂ ಸಮಾಜೋತ್ಸವಗಳಲ್ಲಿ ಅವರು ಬಹಿರಂಗವಾಗಿ ಕರೆ ಕೊಡುತ್ತಾರೆ. ಕಲ್ಲಡ್ಕದ ಹೃದಯ ಭಾಗದಲ್ಲಿದ್ದು ಸಮಾಜದ ಹೃದಯವನ್ನೇ ಒಡೆಯುವ ಕರೆಗಳು ಅಸಂಖ್ಯ ಬಾರಿ ಅವರಿಂದ ಹೊರಟಿವೆ. ಅವರ ಪ್ರತಿ ಮಾತೂ ಸಮಾಜವನ್ನು ಹಿಂದೂ ಮತ್ತು ಮುಸ್ಲಿಮ್ ಆಗಿ ಸದಾ ವಿಭಜಿಸುತ್ತಿರುತ್ತದೆ. ಕತರ್‍ಗೆ ಹೊರಟು ನಿಂತ ವೆಂಕಪ್ಪ ಪೂಜಾರಿಯವರು ಇದನ್ನು ಚೆನ್ನಾಗಿಯೇ ಬಲ್ಲರು. ಭಟ್ಟರ ಮಾತು ಮತ್ತು ಚಿತಾವಣೆಯಿಂದಾಗಿ ಕಲ್ಲಡ್ಕ ಎಷ್ಟು ಬಾರಿ ಉದ್ವಿಘ್ನಗೊಂಡಿದೆ ಹಾಗೂ ಏನೇನು ಅನಾಹುತಗಳಾಗಿವೆ ಎಂಬುದಕ್ಕೂ ಅವರು ಸಾಕ್ಷಿಯಾದವರು. KT ಪ್ರಸ್ತುತಪಡಿಸುವ ‘ಸರ್ವೇಜನಃ ಸುಖಿನೋ ಭವಂತು’ ಎಂಬ ಮನುಷ್ಯ ಪ್ರೇಮಿ ಮೌಲ್ಯವನ್ನು ‘ಮುಸ್ಲಿಮ್ ಜನಃ ಅಸುಖಿನೋ ಭವಂತು’ ಎಂದು ತಿರುಚುತ್ತಿರುವವರು ಪ್ರಭಾಕರ ಭಟ್ಟರು. ತನ್ನ ಊರು ಇಂಥ ವ್ಯಕ್ತಿಯೋರ್ವರಿಗೆ ಆಶ್ರಯ ನೀಡಿದೆ ಮತ್ತು ಅವರನ್ನು ಅನುಸರಿಸುವ ಒಂದು ವರ್ಗವೂ ಇಲ್ಲಿದೆ ಎಂಬುದು ಗೊತ್ತಿದ್ದುದರಿಂದಲೇ ವೆಂಕಪ್ಪ ಪೂಜಾರಿಯವರು ಕತರ್‍ನಲ್ಲಿ ಗೊಂದಲಕ್ಕೆ ಒಳಗಾದುದು. ಒಂದು ಕಡೆ, ತಾನು ಕೆಲಸ ನಿರ್ವಹಿಸುತ್ತಿದ್ದ ಕಂಪೆನಿ ಎರಡೇ ತಿಂಗಳಲ್ಲಿ ಬಾಗಿಲು ಮುಚ್ಚಿದೆ. ಸಂಬಳವನ್ನೂ ಪಾವತಿಸಿಲ್ಲ. ಇನ್ನೊಂದು ಕಡೆ, ತನ್ನ ಪಾಸ್‍ಪೋರ್ಟ್ ಮಾಲಕನ ಕೈಯಲ್ಲಿದೆ. ಆತ ಎಲ್ಲಿದ್ದಾನೋ ಗೊತ್ತಿಲ್ಲ. ಉಳಿದುಕೊಂಡಿದ್ದ ರೂಂನ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಕೈಯಲ್ಲಿ ಬಿಡಿಗಾಸೂ ಇಲ್ಲದೇ, ಹೊಟ್ಟೆ ತುಂಬಿಸುವುದಕ್ಕಾಗಿ ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ, ಗುಜರಿ ಅಂಗಡಿಗೆ ಮಾರಬೇಕಾದ ಮತ್ತು ರಾತ್ರಿಯನ್ನು ಮೋಂಬತ್ತಿ ಉರಿಸಿ ಕಳೆಯಬೇಕಾದ ದಯನೀಯ ಸ್ಥಿತಿಯಲ್ಲಿ ವೆಂಕಪ್ಪ ಪೂಜಾರಿಯವರನ್ನು ಅತ್ಯಂತ ಕಾಡಿರಬಹುದಾದ ವ್ಯಕ್ತಿತ್ವವೆಂದರೆ ಪ್ರಭಾಕರ ಭಟ್ಟರದ್ದು. ಯಾಕೆಂದರೆ, ಭಟ್ಟರು ಪ್ರತಿಪಾದಿಸುವ ಜೀವನ ಸೂತ್ರದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಮಾತ್ರವಲ್ಲ, ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಪಣತೊಟ್ಟ ಸಮುದಾಯವಾಗಿ ಅವರು ಮುಸ್ಲಿಮರನ್ನು ಚಿತ್ರಿಸುತ್ತಿದ್ದರು. ಆದ್ದರಿಂದ, ವೆಂಕಪ್ಪ ಪೂಜಾರಿಯವರಲ್ಲಿ ಮುಸ್ಲಿಮರ ಬಗ್ಗೆ ಒಂದಿಷ್ಟು ಆತಂಕ ಮನೆ ಮಾಡಿದ್ದಿದ್ದರೆ ಅದನ್ನು ಅಸಹಜ ಎನ್ನಬೇಕಾಗಿಲ್ಲ. ಅದೇ ವೇಳೆ, ತನ್ನೂರಿನ ಪ್ರಭಾಕರ ಭಟ್ಟರಿಂದ ತನಗೆ ನೆರವು ಲಭ್ಯವಾದೀತು ಎಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದರೂ ಅದೂ ಅಸಾಧುವಲ್ಲ. ಆದರೆ ಕತರ್‍ನಲ್ಲಿರುವ ಕಲ್ಲಡ್ಕದ ಆಸುಪಾಸಿನ ಕೆಲವು ಮುಸ್ಲಿಮ್ ಯುವಕರು ಒಂದು ದಿನ ಅವರನ್ನು ಹುಡುಕಿಕೊಂಡು ಬಂದರು. ಇಂಡಿಯನ್ ಸೋಶಿಯಲ್ ಫಾರಂ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡಿರುವ ಈ ಯುವಕರು ವೆಂಕಪ್ಪ ಪೂಜಾರಿಯವರನ್ನು ತಮ್ಮ ಮನೆಯ ಸದಸ್ಯನಂತೆ ತಮ್ಮ ಮನೆಯಲ್ಲೇ ಇರಿಸಿಕೊಂಡರು. ಸುಡಾನ್ ಮೂಲದ ಕಂಪೆನಿಯ ಮಾಲಕನನ್ನು ಸಂಪರ್ಕಿಸಿ ಪಾಸ್‍ಪೋರ್ಟ್ ಅನ್ನು ಮರಳಿಸಿದರು. ಭಾರತಕ್ಕೆ ಮರಳಲು ವೆಂಕಪ್ಪ ಪೂಜಾರಿಯವರಿಗಿದ್ದ ಕಾನೂನು ತೊಡಕನ್ನು ನಿವಾರಿಸಿದರು. ವಿಮಾನದ ಟಿಕೇಟನ್ನು ಖರೀದಿಸಿ ಊರಿಗೆ ಕಳುಹಿಸಿಕೊಟ್ಟರು. ವಿಶೇಷ ಏನೆಂದರೆ, ಈ ಇಡೀ ಪ್ರಕ್ರಿಯೆಯಲ್ಲಿ ಪ್ರಭಾಕರ ಭಟ್ಟರ ಪಾತ್ರ ಶೂನ್ಯಾತಿ ಶೂನ್ಯ. ಕನಿಷ್ಠ ವೆಂಕಪ್ಪ ಪೂಜಾರಿಯವರನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟ ಮುಸ್ಲಿಮ್ ಯುವಕರಿಗೆ ಅವರು ಕೃತಜ್ಞತೆಯನ್ನೂ ಸಲ್ಲಿಸಿಲ್ಲ. ವೆಂಕಪ್ಪರನ್ನು ಭೇಟಿಯಾದ ಬಗ್ಗೆ ವಿವರಗಳು ಈವರೆಗೂ ಲಭ್ಯವಾಗಿಲ್ಲ. ಆದ್ದರಿಂದಲೇ,
      ಸಾಧ್ಯವಾದರೆ ವೆಂಕಪ್ಪ ಪೂಜಾರಿಯವರು ಭಟ್ಟರನ್ನೊಮ್ಮೆ ಭೇಟಿಯಾಗಬೇಕು. ನಿಮ್ಮ ನೀತಿ-ಸಂಹಿತೆ ಎಷ್ಟು ಅಪಾಯಕಾರಿ ಮತ್ತು ಯಾವ ಕಾರಣಕ್ಕಾಗಿ ಅದು ಮನುಷ್ಯ ವಿರೋಧಿ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಬೇಕು. ನಿಜವಾಗಿ, ವೆಂಕಪ್ಪ ಪೂಜಾರಿ ‘ಧರ್ಮ’ದ ಸಂಕೇತ. ಪ್ರಭಾಕರ ಭಟ್ ಪ್ರತಿಪಾದಿಸುತ್ತಿರುವುದು ‘ಅಧರ್ಮ’ ಎಂಬುದನ್ನು ಸಾರುತ್ತಿರುವುದರ ಸಂಕೇತವೂ ಹೌದು. ಅಷ್ಟಕ್ಕೂ, ಹಿಂದೂ ಎಂಬ ಕಾರಣಕ್ಕಾಗಿ ವೆಂಕಪ್ಪ ಪೂಜಾರಿಯವರನ್ನು ಆ ಮುಸ್ಲಿಮ್ ಯುವಕರು ತಿರಸ್ಕರಿಸಿರುತ್ತಿದ್ದರೆ ಖಂಡಿತ ಅದು ಅಧರ್ಮ ಆಗುತ್ತಿತ್ತು. ಕ್ರೌರ್ಯ ಎನಿಸಿಕೊಳ್ಳುತ್ತಿತ್ತು. ಆದ್ದರಿಂದಲೇ ಮುಸ್ಲಿಮ್ ಯುವಕರು ಅಭಿನಂದನೆಗೆ ಅರ್ಹರು. ಪ್ರಭಾಕರ್ ಭಟ್ ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದರ ತಪ್ಪುಗಳನ್ನು ಆ ಮುಸ್ಲಿಮ್ ಯುವಕರು ಅತ್ಯಂತ ನಯವಾಗಿ ಸ್ಪಷ್ಟಪಡಿಸಿದ್ದಾರೆ.
      ಯಾವ ಊರಲ್ಲಿ ಮನುಷ್ಯದ್ವೇಷಿ ಸಿದ್ಧಾಂತವನ್ನು ಪ್ರತಿಪಾದಿಸಲಾಗುತ್ತಿದೆಯೋ ಅದೇ ಊರಲ್ಲಿ ಆ ಸಿದ್ಧಾಂತದ ಪರಾಜಯವನ್ನು ಬಿಂಬಿಸುವ ಪ್ರತ್ಯಕ್ಪ ಸಾಕ್ಷಿಯಾಗಿ ನಾವು ವೆಂಕಪ್ಪ ಪೂಜಾರಿಯವರನ್ನು ಪರಿಗಣಿಸಬೇಕು. ಅವರು ಮನುಷ್ಯಪ್ರೇಮಿ ಸಿದ್ಧಾಂತದ ರಾಯಭಾರಿ. ಮುಸ್ಲಿಮರು ಮತ್ತು ಹಿಂದೂಗಳು ವೈರಿಗಳಾಗಬಾರದು ಎಂಬುದನ್ನು ಸಾರುವ ಸಂಕೇತ. KTಯ ಗುಣವೂ ಅದುವೇ. ಅದರ ಸ್ವಾದಕ್ಕೆ ಧರ್ಮ ಭೇದವಿಲ್ಲ. ಅದು ಮನುಷ್ಯರೆಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಇದನ್ನು ಸಹಿಸದವರೇ ಪ್ರಭಾಕರ್ ಭಟ್ ಆಗುತ್ತಾರೆ. ಅವರನ್ನು ವೆಂಕಪ್ಪ ಪೂಜಾರಿಯಂಥ ಸಾಮಾನ್ಯರಲ್ಲಿ ಸಾಮಾನ್ಯರು ಮತ್ತೆ ಮತ್ತೆ ಸೋಲಿಸುತ್ತಲೂ ಇರುತ್ತಾರೆ. ಅಧರ್ಮ ಸೋಲಲೇಬೇಕಾದದ್ದು. ಅದು ಸದಾ ಸೋಲುತ್ತಲೇ ಇರಲಿ.


Tuesday, 7 February 2017

ಮೂತ್ರದಲ್ಲಿ ಚಿನ್ನ ಹುಡುಕುವವರ ಮಧ್ಯೆ...

      ಚಂದ್ರನ ಅಂಗಳದಲ್ಲಿ ಕೊನೆಯ ಬಾರಿ ಹೆಜ್ಜೆ ಊರಿದ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅಮೇರಿಕದ ಗಗನಯಾತ್ರಿ ಯುಗೆನೆ ಸೆರ್ನಾನ್ ಅವರ ನಿಧನದ ಎರಡು ದಿನಗಳ ಬಳಿಕ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಸಂಬಂಧಿಸಿ ಹೊಸ ಸಾಹಸವೊಂದಕ್ಕೆ ಕೈ ಹಾಕಿರುವ ಸುದ್ದಿ ಪ್ರಕಟವಾಗಿದೆ. ಈ ಸಾಹಸಕ್ಕೆ ವಿಜ್ಞಾನಿಗಳು ಹವಾಯಿ ದ್ವೀಪವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಸಮುದ್ರದಿಂದ 8,200 ಅಡಿ ಎತ್ತರದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಗೋಲಾಕೃತಿಯ ಗುಮ್ಮಟವನ್ನು ತಯಾರಿಸಿದ್ದಾರೆ. ಮುಂದಿನ 8 ತಿಂಗಳ ಕಾಲ 6 ಮಂದಿ ವಿಜ್ಞಾನಿಗಳು ಅದರೊಳಗೆ ಸಂಶೋಧನೆಯಲ್ಲಿ ನಿರತರಾಗುತ್ತಾರೆ. ಇದರ ಸಂಪೂರ್ಣ ವೆಚ್ಚವನ್ನು ಅಮೇರಿಕದ ವ್ಯೋಮ ಯಾನ ಸಂಸ್ಥೆ ‘ನಾಸಾ’ ಭರಿಸಲಿದೆ. ಮಂಗಳಗ್ರಹ ಯಾತ್ರೆಯ ಸುತ್ತ ಸಂಶೋಧನೆಯಲ್ಲಿ ತೊಡಗುವುದು ಇದರ ಉದ್ದೇಶ. ಮುಂದಿನ 8 ತಿಂಗಳ ಕಾಲ ಈ 6 ಮಂದಿ ವಿಜ್ಞಾನಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿರುತ್ತಾರೆ. ತಾವು ವಾಸಿಸುವ ಗುಮ್ಮಟದೊಳಗೆ ಮಂಗಳ ಗ್ರಹದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿಕೊಂಡು ನಡೆಸುವ ಅಧ್ಯಯನ ಇದು. ಮಾನವ ಸಹಿತ ಮುಂದಿನ ಮಂಗಳ ಯಾನಕ್ಕೆ ನೆರವಾಗುವ ಗುರಿಯನ್ನು ವಿಜ್ಞಾನ ವಲಯ ಈ ಮೂಲಕ ಇಟ್ಟುಕೊಂಡಿದೆ.
        ನಿಜವಾಗಿ, ವರ್ಷದ 365 ದಿನಗಳಲ್ಲಿ ಅತ್ಯಂತ ಕಡಿಮೆ ಸುದ್ದಿಯಲ್ಲಿರುವ ಕ್ಷೇತ್ರವೆಂದರೆ ಅದು ವಿಜ್ಞಾನ ಕ್ಷೇತ್ರ. ರಾಜಕಾರಣಿಗಳು, ಸ್ವಘೋಷಿತ ಧರ್ಮರಕ್ಷಕರು, ಮಾನವ ದ್ವೇಷಿಗಳು.. ಇತ್ಯಾದಿಗಳು ಈ ಕ್ಷೇತ್ರದಲ್ಲಿ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಥಟ್ಟನೆ ಹೇಳಿ ಬಿಡಬಹುದಾದರೂ ಇದುವೇ ಅಂತಿಮ ಅಲ್ಲ. ನಾವು ಇವತ್ತು ಅತ್ಯಂತ ಹೆಚ್ಚು ಅವಲಂಬಿತವಾಗಿರುವ ಮೊಬೈಲ್‍ನಿಂದ ಹಿಡಿದು ಟಿ.ವಿ.ಯ ವರೆಗೆ, ಕಂಪ್ಯೂಟರ್-ಇಂಟರ್‍ನೆಟ್‍ನಿಂದ ತೊಡಗಿ ಔಷಧಗಳ ವರೆಗೆ.. ಇವು ಯಾವುವೂ ರಾಜಕಾರಣಿಗಳ ನೇರ ಕೊಡುಗೆ ಅಲ್ಲ. ‘ಗೋವಿನ ಮೂತ್ರದಲ್ಲಿ ಚಿನ್ನದ ಅಂಶ ಇದೆ’ ಎಂದು ಓರ್ವ ರಾಜಕಾರಣಿ ಹೇಳಬಹುದೇ ಹೊರತು ಓರ್ವ ವಿಜ್ಞಾನಿ ಥಟ್ಟನೆ ಹೇಳಿಬಿಡಲಾರ. ಯಾಕೆ ಹೇಳಲಾರ ಅಂದರೆ, ಆತನ ಎದುರು ತಕ್ಷಣದ ಲಾಭ ಎಂಬುದಿಲ್ಲ. ಆತನಿಗೆ ಓಟು ಬೇಕಾಗಿಲ್ಲ. ಚಪ್ಪಾಳೆ ಗಿಟ್ಟಿಸಬಹುದಾದಂತಹ ಮಾತುಗಳು ಬೇಕಾಗಿಲ್ಲ. ಒಂದು ವಸ್ತುವಿನ ಸಂಶೋಧನೆಗಾಗಿ ಓರ್ವ ವಿಜ್ಞಾನಿ ವರ್ಷಗಳನ್ನು ಸವೆಸಿರುತ್ತಾನೆ. ಅಧ್ಯಯನಕ್ಕಾಗಿ ತನ್ನನ್ನೇ ಅರ್ಪಿಸಿರುತ್ತಾನೆ. ದುಡಿಮೆ, ದುಡಿಮೆ ಮತ್ತು ದುಡಿಮೆ.. ಇದು ವಿಜ್ಞಾನ ಕ್ಷೇತ್ರದ ಅತಿ ಮಹತ್ವಪೂರ್ಣ ಧ್ಯೇಯವಾಕ್ಯ. ಅದರ ಒಂದು ಸಣ್ಣ ಉದಾಹರಣೆಯನ್ನಷ್ಟೇ ನಾವು ಹವಾಯಿ ದ್ವೀಪದ ಸಂಶೋಧನಾ ಪ್ರಕ್ರಿಯೆಯಲ್ಲಿ ಕಾಣುತ್ತಿರುವುದು. ರಾತ್ರಿ ಬೆಳಗಾಗುವುದರೊಳಗೆ ಸ್ಟೀವ್ ಜಾಬ್ಸ್ ಗೆ ಐಪೋನನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗಿಲ್ಲ. ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಮಂಡಿಸುವುದರ ಹಿಂದೆ ನ್ಯೂಟನ್ ಅನೇಕ ನಿದ್ದೆಗಳನ್ನು ಕಳೆದಿರಬಹುದು. ಎಷ್ಟೋ ಏಕಾಂತದ ದಿನಗಳನ್ನು ಕಂಡಿರಬಹುದು. ಒಂದು ಮಾವು ತಲೆಗೆ ಬಿದ್ದ ತಕ್ಷಣ ನ್ಯೂಟನ್ ವಿಜ್ಞಾನಿಯಾಗುವುದಕ್ಕೆ ಸಾಧ್ಯವಿಲ್ಲ. ಆತ ಒಂದು ಗುಂಗಿನಲ್ಲಿದ್ದ. ಆ ಗುಂಗು ವರ್ಷಗಳ ವರೆಗೂ ಮುಂದುವರಿದಿರಬಹುದು. ಆ ದಿನಗಳಲ್ಲೆಲ್ಲ ಮಾವು ಮೇಲಿನಿಂದ ಕೆಳಕ್ಕೆ ಬೀಳುತ್ತಲೇ ಇತ್ತು. ಆದರೆ, ಒಂದು ಸಂದರ್ಭದಲ್ಲಿ ಆತನ ಹುಡುಕಾಟದ ಮನಸ್ಸನ್ನು ಅದು ತಾಗಿತು. ಒಂದು ವೇಳೆ, ನ್ಯೂಟನ್‍ನಲ್ಲಿ ರಾಜಕಾರಣಿಯ ಮನಸ್ಸಿರುತ್ತಿದ್ದರೆ ಏನಾಗುತ್ತಿತ್ತು? ಪ್ರತಿದಿನ ಆತ ಒಂದೊಂದು ಹೇಳಿಕೆಯನ್ನು ಕೊಡುವ ಸಕಲ ಸಾಧ್ಯತೆಯೂ ಇತ್ತು. ತಾನೊಂದು ಸಂಶೋಧನೆಯಲ್ಲಿದ್ದೇನೆ ಎಂದು ಒಂದು ದಿನ ಹೇಳುತ್ತಿದ್ದ. ಮರುದಿನ ಮತ್ತೊಂದು ಹೇಳಿಕೆಯನ್ನು ನೀಡುತ್ತಿದ್ದ. ಕೊನೆಗೆ ಸಂಶೋಧನೆ ಬಿಟ್ಟು ಜನಪ್ರಿಯ ಸುದ್ದಿ ಸೃಷ್ಟಿಸುವುದನ್ನೇ ಪೂರ್ಣಕಾಲಿಕ ಸಂಶೋಧನೆಯನ್ನಾಗಿ ಮಾಡಿಕೊಳ್ಳುತ್ತಿದ್ದ.
ರಾಜಕಾರಣಿಗಳು ಯಾವ ಪ್ರಾಣಿಯ ಮೂತ್ರದಲ್ಲಿ ಯಾವ್ಯಾವ ದಿವ್ಯೌಷಧವನ್ನು ಬೇಕಾದರೂ ಪತ್ತೆ ಹಚ್ಚಬಹುದು. ಆದರೆ ವಿಜ್ಡಾನ ಕ್ಷೇತ್ರದಿಂದ ಈ ಪವಾಡ ಸಾಧ್ಯವಿಲ್ಲ. ಅಲ್ಲಿ ದುಡಿಮೆ ಇದೆ. ಪ್ರಾಮಾಣಿಕ ಶ್ರಮ ಇದೆ. ಸದ್ಯದ ತುರ್ತು ಅಗತ್ಯ ಏನೆಂದರೆ, ಈ ಕ್ಷೇತ್ರವನ್ನು ಜನಪ್ರಿಯಗೊಳಿಸುವುದು. ಮಾನವ ದ್ವೇಷಿಗಳು, ಸ್ವಘೋಷಿತ ಧರ್ಮರಕ್ಷಕರ ಹಿಂಬಾಲಕರಾಗದಂತೆ ಆಧುನಿಕ ತಲೆಮಾರನ್ನು ತಡೆಯುವುದು. ಒಂದು ಕಡೆ ಅತ್ಯಂತ ಸುದ್ದಿಯಲ್ಲಿರುವ ರಾಜಕೀಯದಂಥ ಕ್ಷೇತ್ರವಿದ್ದರೆ, ಇನ್ನೊಂದು ಕಡೆ, ಸಂಪೂರ್ಣ ಕತ್ತಲು ಕವಿದಂತೆ ಕಾಣಿಸುವ ಸುದ್ದಿಯೇ ಇರದ ಕ್ಷೇತ್ರವೊಂದಿದೆ. ಆಧುನಿಕ ತಲೆಮಾರಿನ ಮಟ್ಟಿಗೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವಾಗ ಅವರು ಸುದ್ದಿಯಲ್ಲಿರುವುದರತ್ತ ಆಕರ್ಷಿತರಾಗುವುದು ಸಹಜ. ಆದ್ದರಿಂದ ಸುದ್ದಿಯಲ್ಲಿರದ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ತುರ್ತಾಗಿ ಆಗಬೇಕಾಗಿದೆ.


ಯುಗೆನೆ ಸೆರ್ನಾನ್
          ಜಗತ್ತು ಹೊಸ ಹೊಸ ಸೌಲಭ್ಯಗಳಿಂದ ಶ್ರೀಮಂತಗೊಳ್ಳುತ್ತಿರುವುದರ ಜೊತೆಗೇ ಅದರ ಅಡ್ಡ ಪರಿಣಾಮಗಳ ಆಘಾತದಿಂದ ಸಂಕಟ ಪಡುತ್ತಲೂ ಇದೆ. ಹೊಸ ಹೊಸ ಕಾಯಿಲೆಗಳು ಪರಿಚಿತವಾಗುತ್ತಿವೆ. ಮಣ್ಣು, ನೀರು, ವಾಯು ಮಲಿನವಾಗುತ್ತಿದೆ. ಉಸಿರಾಡುವ ಗಾಳಿಯಿಂದ ಹಿಡಿದು ತಿನ್ನುವ ಆಹಾರದ ವರೆಗೆ ಎಲ್ಲವೂ ವರ್ಜಿಸಲೇ ಬೇಕಾದ ಪಟ್ಟಿಯಲ್ಲಿ ಸ್ಥಾನ ಪಡಕೊಳ್ಳುತ್ತಿವೆ. ಅದರ ಜೊತೆಗೇ ಯಾವುದನ್ನೂ ವರ್ಜಿಸಲೇಬಾರದಂತಹ ಅನಿವಾರ್ಯತೆಯೂ ಎಲ್ಲರ ಎದುರಿದೆ. ಇದರ ಮಧ್ಯೆಯೇ ರಾಜಕಾರಣಿ ಎಂಬ ಇನ್‍ಸ್ಟಂಟ್ ವಿಜ್ಞಾನಿ, ವಿಜ್ಞಾನದ ಹೆಸರಲ್ಲಿ ದಿನಕ್ಕೊಂದು ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿರುತ್ತಾರೆ. ಅವರಿಗೆ ತಮ್ಮ ಗುರಿಯತ್ತ ಸಾಗುವುದಕ್ಕೆ ಅಂಥ ಸುಳ್ಳುಗಳ ಅಗತ್ಯವಿರುತ್ತದೆ. ಇವೆಲ್ಲವುಗಳ ನಡುವೆಯೇ ಹೊಸ ಪೀಳಿಗೆಯಲ್ಲಿ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಖ್ಯವಾಗಿ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಂಶೋಧನಾ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನ ಆಗಬೇಕು. ಪ್ರತಿಯೊಂದರಲ್ಲೂ ಕುತೂಹಲವನ್ನು ಹುಟ್ಟಿಸಬೇಕು. ಹೊಸತಿನ ಬಗ್ಗೆ ಆಲೋಚಿಸುವ ಮತ್ತು ಕಂಡು ಹುಡುಕುವ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ನಮಗೆ ಸದ್ಯ ಕುತೂಹಲಭರಿತ ಮಕ್ಕಳ ಅಗತ್ಯ ಇದೆ. ಶ್ರಮ ವಹಿಸಿ ದುಡಿಯುವ ಪೀಳಿಗೆಯ ಜರೂರತ್ತು ಇದೆ. ಒಂದು ದೇಶ ಬರೇ ರಾಜಕಾರಣಿಗಳಿಂದ ನಡೆಯಲಾರದು. ಒಂದು ವೇಳೆ ನಡೆದರೂ ಆ ನಡೆ ಪ್ರಚಲಿತ ಜಗತ್ತಿಗೆ ಹೋಲಿಸಿದರೆ ನೂರಾರು ವರ್ಷಗಳಷ್ಟು ಪುರಾತನ ಕಾಲದ್ದಾಗಿರಬಹುದು. ಜಗತ್ತನ್ನು ಆಧುನಿಕಗೊಳಿಸುವವರು ವಿಜ್ಞಾನಿಗಳು. ವಿಜ್ಞಾನಿಗಳೆಂದರೆ, ಹೊಸತನ್ನು ಕೊಡಲೇ ಬೇಕಾದವರು ಎಂದಲ್ಲ. ಒಂದು ಗುರಿಯನ್ನು ನಿಗದಿಪಡಿಸಿ ಅದರ ಸಾಕಾರಕ್ಕಾಗಿ ಶ್ರಮ ವಹಿಸಿ ದುಡಿಯುವವರು ಎಂದರ್ಥ. ತಮ್ಮ ಶ್ರಮದ ಮೇಲೆ ಅಪಾರ ಭರವಸೆಯನ್ನು ಇಟ್ಟವರು. ಈ ದೇಶಕ್ಕೆ ಸದ್ಯ ಈ ವರ್ಗದ ಅಗತ್ಯ ಇದೆ. ಆದ್ದರಿಂದಲೇ, ವಿಜ್ಞಾನ ಕ್ಷೇತ್ರವನ್ನು ಈಗಾಗಲೇ ಜನಪ್ರಿಯವಾಗಿರುವ ಕ್ಷೇತ್ರಕ್ಕೆ ಪರ್ಯಾಯವಾಗಿ ಬೆಳೆಸಬೇಕಾಗಿದೆ. ಹೊಸ ತಲೆಮಾರಿನ ಆದ್ಯತೆಯ ಪಟ್ಟಿಯಲ್ಲಿ ವಿಜ್ಞಾನ ಪ್ರಥಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಹವಾಯಿ ದ್ವೀಪದಲ್ಲಿ ಸಮುದ್ರ ಮಟ್ಟದಿಂದ 8,200 ಅಡಿ ಎತ್ತರದಲ್ಲಿ ಎಲ್ಲರಿಂದಲೂ ಎಲ್ಲದರಿಂದಲೂ ಕಳಚಿಕೊಂಡು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ನಿಜಕ್ಕೂ ಸುದ್ದಿಯಲ್ಲಿರುವುದಕ್ಕೆ ಅರ್ಹರಾದವರು. ಅವರ ಬದ್ಧತೆ, ತ್ಯಾಗ ಖಂಡಿತ ಅಭಿನಂದನಾರ್ಹ.

ಒಂದು ತಪರಾಕಿಯ ಸುತ್ತ..

      ಕಳೆದವಾರ ಮೂರು ವೀಡಿಯೋಗಳು ಬಿಡುಗಡೆಗೊಂಡುವು. ಚಿತ್ರೀಕರಣ, ಭಾಷಾ ಸ್ಪಷ್ಟತೆ ಮತ್ತು ಕ್ಯಾಮರಾ ಬಳಕೆಗೆ ಸಂಬಂಧಿಸಿ ಹೇಳುವುದಾದರೆ, ಇವು ಮೂರೂ ಕಳಪೆ ವೀಡಿಯೋಗಳೇ. ಪಾತ್ರಧಾರಿಗಳೂ ನಟರಾಗಿರಲಿಲ್ಲ. ತೇಜ್ ಬಹಾದ್ದೂರ್ ಯಾದವ್, ಯಜ್ಞ ಪ್ರತಾಪ್ ಸಿಂಗ್ ಮತ್ತು ನಾೈಕ್ ರಾಂ ಭಗತ್ ಎಂಬ ಮೂವರೂ ವೃತ್ತಿಪರ ನಟರೂ ಅಲ್ಲ, ಪರಿಣತ ವೀಡಿಯೋ ನಿರ್ಮಾಪಕರೂ ಅಲ್ಲ ಅಥವಾ ಪ್ರಸಿದ್ಧ ವ್ಯಕ್ತಿಗಳೂ ಅಲ್ಲ. ಆದರೆ ಈ ವೀಡಿಯೋಗಳು ಎಷ್ಟು ಜನಪ್ರಿಯ ಆಯಿತೆಂದರೆ, ತಾಂತ್ರಿಕವಾಗಿ ಅತ್ಯಂತ ಪರಿಣತ ತಂಡದವರು ನಿರ್ಮಿಸಿ ಬಿಡುಗಡೆಗೊಳಿಸುವ ಸಿನಿಮಾ ಟ್ರೇಲರ್‍ಗಿಂತಲೂ ಹೆಚ್ಚು. ಇದಕ್ಕಿರುವ ಏಕೈಕ ಕಾರಣ ಏನೆಂದರೆ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಕೆಲವು ಪರಮ ಸುಳ್ಳುಗಳು. ಈ ಸುಳ್ಳುಗಳನ್ನು ಚಾಲ್ತಿಗೆ ತಂದವರು ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರ. ಸೇನೆಯ ಬಗ್ಗೆ ಮಾತಾಡುವಾಗಲೆಲ್ಲ ಬಿಜೆಪಿ ಭಾವುಕವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗದ್ಗದಿತರಾಗುತ್ತಾರೆ. ‘ಗಡಿಯಲ್ಲಿ ಯೋಧರು ಎಚ್ಚರವಾಗಿರುವುದರಿಂದಲೇ ನಾವಿಲ್ಲಿ ಸುಖವಾಗಿ ನಿದ್ರಿಸುತ್ತೇವೆ..’ ಎಂಬ ಡಯಲಾಗು ಬಿಜೆಪಿಯ ಉನ್ನತ ನಾಯಕತ್ವದಿಂದ ಹಿಡಿದು ತಳಮಟ್ಟದ ಕಾರ್ಯಕರ್ತರ ವರೆಗೆ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ‘ಬಿಜೆಪಿಯು ಯೋಧರ ಪರ ಮತ್ತು ಕಾಂಗ್ರೆಸ್ ಯೋಧರ ವಿರೋಧಿ’ ಎಂಬ ಸಂದೇಶ ರವಾನೆಗೂ ಬಿಜೆಪಿಯ ವರ್ತನೆಗಳು ಸಾಕಷ್ಟು ನೆರವಾಗಿವೆ. ‘ನಮ್ಮ ಯೋಧರ ಒಂದು ತಲೆಯು ಪಾಕಿಸ್ತಾನದ 10 ಯೋಧರ ತಲೆಗೆ ಸಮ’ ಎಂಬ ರೀತಿಯಲ್ಲಿ ಆಡಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ. ಆದ್ದರಿಂದಲೇ, ಮೇಲಿನ ಮೂರು ವೀಡಿಯೋಗಳು ತಾಂತ್ರಿವಾಗಿ ಕಳಪೆ ಗುಣಮಟ್ಟದ ಹೊರತಾಗಿಯೂ ವೈರಲ್ ಆದುವು. ‘ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯುವ ಯೋಧರ ಅನ್ನದ ಬಟ್ಟಲಿನಿಂದ ಆಹಾರವನ್ನೂ ಕಸಿಯಲಾಗುತ್ತಿದೆ..’ ಅನ್ನುವುದನ್ನು ದೇಶದ ಜನತೆಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದಾರೆ. ರಕ್ಷಣಾ ಸಚಿವ ಪಾರಿಕ್ಕರ್ ಅವರೂ ಕಾಂಗ್ರೆಸಿನವರಲ್ಲ. ಯೋಧರ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸುವ ಪಕ್ಷ ಅಧಿಕಾರದಲ್ಲಿದ್ದೂ ಯೋಧರಿಗೇಕೆ ಈ ಸ್ಥಿತಿ ಬಂದೊದಗಿದೆ? ನಮ್ಮ ಯೋಧರು ಸರ್ಜಿಕಲ್ ದಾಳಿ ನಡೆಸಿದ್ದು ಈ ಕರಕಲು ಪರೋಟ, ಕಳಪೆ ದಾಲ್ ಅನ್ನು ಸೇವಿಸಿಯೇ? ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವವರಿಗೆ ಕನಿಷ್ಠ ಉತ್ತಮ ಆಹಾರವನ್ನು ಒದಗಿಸುವ ಹೊಣೆಗಾರಿಕೆಯನ್ನೂ ಈ ಸರಕಾರ ಪ್ರದರ್ಶಿಸುವುದಿಲ್ಲವೆಂದರೆ, ಅದರ ಭಾವುಕತನ, ‘ಹತ್ತು ತಲೆಯ’ ಡಯಲಾಗ್‍ಗಳಿಗೆಲ್ಲ ಏನು ನೆಲೆ-ಬೆಲೆ ಇದೆ ಎಂದು ವೀಕ್ಷಕರು ಅಚ್ಚರಿಪಟ್ಟರು.
      ವಿಷಾದ ಏನೆಂದರೆ, ಯೋಧರ ಬಗ್ಗೆ ಮತ್ತು ಗಡಿಯಲ್ಲಿ ಅವರು ಚಳಿ-ಮಳೆ-ಬಿಸಿಲನ್ನೂ ಲೆಕ್ಕಿಸದೇ ದೇಶ ಕಾಯುವುದರ ಬಗ್ಗೆ ಅದ್ಭುತ ಭಾಷಣಗಳನ್ನು ಬಿಗಿಯುವ ಬಿಜೆಪಿ ಮತ್ತು ಅದರ ಪರಿವಾರದ ನಾಯಕರಲ್ಲಿ ಒಬ್ಬರೂ ಈ ವೀಡಿಯೋಗಳ ಬಗ್ಗೆ ಮಾತಾಡುತ್ತಿಲ್ಲ. ಅದರ ಬದಲು ಈ ವೀಡಿಯೋಗಳ ಗಂಭೀರತೆಯನ್ನು ತಗ್ಗಿಸುವ ಶ್ರಮಗಳನ್ನು ವಿವಿಧ ಮೂಲಗಳ ಮೂಲಕ ಅವರು ನಿರ್ವಹಿಸುತ್ತಿದ್ದಾರೆ. ಪ್ರಥಮವಾಗಿ ವೀಡಿಯೋವನ್ನು ಬಿಡುಗಡೆಗೊಳಿಸಿದ ಬಿಎಸ್‍ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್‍ರನ್ನು ಮದ್ಯವ್ಯಸನಿ, ಅವಿಧೇಯ ಎಂದೆಲ್ಲಾ ಸೇನೆಯ ವತಿಯಿಂದ ಹೇಳಿಸಿರುವುದು ಇದಕ್ಕೆ ಉತ್ತಮ ಪುರಾವೆ. ಈ ಮೊದಲು ‘ಏಕಶ್ರೇಣಿ, ಏಕ ಪಿಂಚಣಿ’ಗೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನ ಬಗ್ಗೆಯೂ ಇಂಥದ್ದೇ ತಂತ್ರವನ್ನು ಇವೇ ಮಂದಿ ಪ್ರದರ್ಶಿಸಿದ್ದರು. ಆ ಯೋಧರನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದರು. ಒಂದು ರೀತಿಯಲ್ಲಿ, ಇದು ಆ ಯೋಧರಿಗೆ ಮಾತ್ರ ಅಲ್ಲ, ನಮ್ಮ ಸೇನೆಗೇ ಮಾಡಿದ ಅವಮಾನವಾಗಿತ್ತು. ನಿಜವಾಗಿ, ‘ಏಕಶ್ರೇಣಿ, ಏಕ ಪಿಂಚಣಿ’ ಎಂಬುದು ಯಾವುದಾದರೂ ನಿರ್ದಿಷ್ಟ ಧರ್ಮದ, ಜಾತಿಯ, ಪಂಗಡದ ಬೇಡಿಕೆಯೇನೂ ಆಗಿರಲಿಲ್ಲ. ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯ್ದ ‘ಯೋಧರು’ ಎಂಬ ವಿಶಾಲ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ನಿವೃತ್ತಿಯ ಬಳಿಕ ಅವರು ಸುಖವಾಗಿ ನಿದ್ದೆ ಮಾಡುವಂತೆ ಮತ್ತು ನೆಮ್ಮದಿಯಿಂದ ಬಾಳುವಂತೆ ಮಾಡುವ ಉದ್ದೇಶದ ಯೋಜನೆಯಾಗಿತ್ತು. ಆದರೆ ಬಿಜೆಪಿ ಈ ಬೇಡಿಕೆಯನ್ನು ಎಷ್ಟಂಶ ನಿರ್ಲಕ್ಷಿಸಿತೆಂದರೆ, ನಿವೃತ್ತ ಯೋಧ ಕೊನೆಗೆ ನಿರಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು. ಅಂದು ಆ ಯೋಧನ ಸಾವಿಗೆ ಬಿಜೆಪಿ ಒದಗಿಸಿದ ಕಾರಣವನ್ನೇ ಈಗ ಸೇನಾ ಮುಖ್ಯಸ್ಥರ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್‍ರ ಮುಖಾಂತರ ಯೋಧರಿಗೆ ಬೆದರಿಕೆಯನ್ನೂ ನೀಡಲಾಗಿದೆ.
      ಒಂದು ವೇಳೆ, ಸೇನೆಯಲ್ಲಿರುವ ಪ್ರತಿ ಯೋಧರ ಮನೆಗೆ ಭೇಟಿ ಕೊಡುವ ಯೋಜನೆಯನ್ನೇನೇದರೂ ನಾವು ಕೈಗೆತ್ತಿಕೊಂಡರೆ, ಹಳ್ಳಿ-ಗ್ರಾಮ-ತಾಲೂಕುಗಳ ಮೂಲೆಯಲ್ಲಿರುವ ಮನೆಯಂತಹ ಸಾಮಾನ್ಯ ಸೂರುಗಳೇ ನಮ್ಮನ್ನು ಸ್ವಾಗತಿಸಿಯಾವು. ರಾಜಕಾರಣಿಗಳು, ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳ ಮಕ್ಕಳು ಸೇನೆಯಲ್ಲಿ ಕಾಣಿಸುವುದು ತೀರಾ ಅಪರೂಪ. ಶ್ರೀಮಂತರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದು ಬಹಳ ಬಹಳ ಕಡಿಮೆ. ಆದ್ದರಿಂದಲೇ, ಭಾರತೀಯ ಸೇನೆ ಎಂಬುದು ಬಹುಸಂಖ್ಯಾತ ಭಾರತೀಯರ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುವುದು. ಅವರಿಗೆ ಬಡತನದ ಅರಿವಿದೆ. ಹಸಿವಿದ್ದು ಗೊತ್ತಿದೆ. ಹಳಸಲು ರೊಟ್ಟಿ, ದಾಲ್‍ಗಳ ಪರಿಚಯವೂ ಇದೆ. ಈ ಕಳಪೆಗಳನ್ನು ಸೇವಿಸಿಯೇ ಈ ಯೋಧರು ಅಂಬಾನಿ, ಅದಾನಿಗಳಿರುವ, ಶ್ರೀಮಂತ ರಾಜಕಾರಣಿಗಳಿರುವ; ಭ್ರಷ್ಟರು, ಕ್ರಿಮಿನಲ್‍ಗಳು, ಮನುಷ್ಯ ದ್ರೋಹಿಗಳೂ ಇರುವ ಭಾರತವೆಂಬ ವಿಶಾಲ ರಾಷ್ಟ್ರವನ್ನು ನಿದ್ದೆಗೆಟ್ಟು ಕಾಯುತ್ತಿದ್ದಾರೆ. ಈ ಸಹನೆಯನ್ನು ಶ್ರೀಮಂತರಿಂದ ನಿರೀಕ್ಷಿಸುವುದು ಬಹಳ ಕಷ್ಟ. ಚಿನ್ನದ ತಟ್ಟೆಯಲ್ಲಿ ಊಟ ಮಾಡಿದ ವ್ಯಕ್ತಿ, ಕರಕಲು ಪರೋಟವನ್ನು ಮತ್ತು ಕಳಪೆ ದಾಲ್ ಅನ್ನು ಹೊಟ್ಟೆಗಿಳಿಸುವುದಕ್ಕೆ ಒಪ್ಪಿಕೊಳ್ಳುತ್ತಾನೆಂದು ಹೇಳಲಾಗದು. ಬಹುಶಃ, ಭಾರತೀಯ ಸೇನೆಯಲ್ಲಿ ಶ್ರೀಮಂತ ಭಾರತೀಯರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಾಗಿರುವುದಕ್ಕೆ ಅದರಲ್ಲಿರುವ ಅಪಾಯ ಮತ್ತು ಸೌಲಭ್ಯಗಳ ಕೊರತೆಯೂ ಕಾರಣವಾಗಿರಬಹುದು. ಸಾಯುವುದಕ್ಕೆ ಸಿದ್ಧಗೊಳಿಸುವ ಮತ್ತು ಸಾವನ್ನು ವಿಜೃಂಭಿಸುವುದರ ಹೊರತಾಗಿ ಸೌಲಭ್ಯವಿಲ್ಲದ ಕ್ಷೇತ್ರವಾಗಿ ಅದು ಮಾರ್ಪಟ್ಟಿರುವುದೂ ಇನ್ನೊಂದು ಕಾರಣವಾಗಿರಬಹುದು. ಒಂದು ವೇಳೆ, ಶ್ರೀಮಂತರಿಗೆ ಸೇನೆ ಸೇರುವುದನ್ನು ಕಡ್ಡಾಯಗೊಳಿಸಿರುತ್ತಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತಿತ್ತು? ಕರಕಲು ಪರೋಟಗಳು ಯಾವ ಮಟ್ಟದ ಸುದ್ದಿಗೆ ಒಳಗಾಗುತ್ತಿತ್ತು ಅಥವಾ ಅಂತಹ ಪರೋಟಗಳು ಅಲ್ಲಿ ಲಭ್ಯವಿರುತ್ತಿತ್ತೇ? ಅಲ್ಲಿನ ಸೌಲಭ್ಯಗಳು ಎಷ್ಟು ಉನ್ನತ ಮಟ್ಟದವು ಆಗಿರುತ್ತಿತ್ತು? ಏಕಶ್ರೇಣಿ ಏಕ ಪಿಂಚಣಿಗಾಗಿ ನಿರಶನ ಕೈಗೊಳ್ಳಬೇಕಾದ ಅಗತ್ಯ ಬರುತ್ತಿತ್ತೇ?
      ಏನೇ ಆಗಲಿ, ಸದ್ಯ ಬಿಡುಗಡೆಗೊಂಡ ಮೂರು ವೀಡಿಯೋಗಳಲ್ಲಿ ಯೋಧರ ಸಂಕಟಗಳಷ್ಟೇ ಇರುವುದಲ್ಲ, ಯೋಧರಿಗಾಗಿ ಮೊಸಳೆ ಕಣ್ಣೀರು ಸುರಿಸಿದವರಿಗೆ ತಪರಾಕಿಯೂ ಇದೆ. ಯೋಧರ ಕತೆ ಹೇಳುತ್ತಾ ಭಾವುಕವಾಗುವ ಬಿಜೆಪಿ, ಅದರಾಚೆಗೆ ಅವರಿಗಾಗಿ ಏನನ್ನೂ ಮಾಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕನಿಷ್ಠ ಯೋಧರ ಸ್ಥಿತಿ-ಗತಿಯ ಬಗ್ಗೆ ಪರಿಶೀಲನೆ ನಡೆಸುವ ಪ್ರಯತ್ನವನ್ನೂ ಅದು ನಡೆಸಿಲ್ಲ. ಆದ್ದರಿಂದಲೇ, ಯೋಧರಿಗೆ ನಿರಾಶೆಯಾಗಿದೆ. ತಮ್ಮನ್ನು ಈ ಸರಕಾರ ದುರುಪಯೋಗಪಡಿಸುತ್ತಿದೆ ಎಂಬುದು ಅರಿವಾಗಿದೆ. ಆ ಕಾರಣದಿಂದಲೇ ವೀಡಿಯೋಗಳು ಬಿಡುಗಡೆಗೊಂಡಿವೆ. ಸದ್ಯ ಕೇಂದ್ರ ಸರಕಾರವು ಆ ಯೋಧರ ಬಾಯಿ ಮುಚ್ಚಿಸುವ ಬದಲು ಸ್ವತಃ ಆತ್ಮಾವಲೋಕನ ನಡೆಸಲಿ. ನಿz್ದÉಗೆಟ್ಟು ದೇಶ ಕಾಯುವವರಿಗೆ ನೆಮ್ಮದಿಯನ್ನು ಒದಗಿಸಲಿ.

Monday, 6 February 2017

ನಮ್ಮ ವಿವೇಚನೆಯ ಮಟ್ಟವನ್ನು ಅಳೆದ ವಾಟ್ಸಪ್ ವಧು

       ಸುದ್ದಿಯ ‘ಮೂಲ’ ಯಾಕೆ ಮಹತ್ವಪೂರ್ಣ ಎಂಬುದನ್ನು ಕಳೆದವಾರದ ಎರಡು ಸುದ್ದಿಗಳು ಮತ್ತೆ ಮತ್ತೆ ಸಾರಿದವು. ಎರಡೂ ಹೃದಯ ವಿದ್ರಾವಕ ಸುದ್ದಿಗಳೇ. ಒಂದು- ಪತಿ, ಪತ್ನಿ ಮತ್ತು ಕೂಲಿಯಾಳು ವಿದ್ಯುದಾಘಾತಕ್ಕೆ ತುತ್ತಾಗಿ ಪ್ರಾಣ ಬಿಟ್ಟ ಸುದ್ದಿ. ಇನ್ನೊಂದು, ಬೆಳಗ್ಗೆ 11 ಗಂಟೆಗೆ ನಿಖಾ (ಹಸೆಮಣೆ) ಆಗಬೇಕಾದ ವಧು, ಅದಕ್ಕಿಂತ ತುಸು ಮೊದಲು ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ಸುದ್ದಿ. ಎರಡೂ ಸುದ್ದಿಗಳ ಮೂಲ ದಕ್ಷಿಣ ಕನ್ನಡ ಜಿಲ್ಲೆ. ಮೊದಲ ಸುದ್ದಿ ಅತ್ಯಂತ ಸ್ಪಷ್ಟ, ನಿಖರ ಮತ್ತು ಸುದ್ದಿ ಮೂಲ ಅತ್ಯಂತ ಪ್ರಾಮಾಣಿಕ. ತೆಂಗಿನ ಮರದಲ್ಲಿ ಹಬ್ಬಿದ್ದ ಬಳ್ಳಿಯಿಂದ ಕಾಳು ಮೆಣಸನ್ನು ಕೀಳುವಾಗ ಕಬ್ಬಿಣದ ಏಣಿಯು ಜಾರಿ ವಿದ್ಯುತ್ ತಂತಿಯ ಮೇಲೆ ಬೀಳುತ್ತದೆ. ಕಾಳು ಮೆಣಸನ್ನು ಕೀಳುತ್ತಿದ್ದುದು ಸಂದೀಪ್ ಅನ್ನುವ ಕೂಲಿಯಾಳು. ಮನೆಯ ಮಾಲಿಕ ವೆಲೇರಿಯನ್ ಲೋಬೋ ಏಣಿಯನ್ನು ಹಿಡಿದಿದ್ದರು. ವಿದ್ಯುದಾಘಾತದಿಂದ ಲೋಬೋ ಕಿರುಚಿಕೊಂಡಾಗ ಅವರ ಪತ್ನಿ ಹೆಝ್ಮಿ ಲೋಬೋ ಅವರನ್ನು ರಕ್ಷಿಸಲು ಯತ್ನಿಸಿದರು. ಮೂವರೂ ಪ್ರಾಣ ಬಿಟ್ಟರು. ಈ ಸುದ್ದಿ ಮಾಧ್ಯಮಗಳಲ್ಲಿ ಚಿತ್ರಸಹಿತ ಪ್ರಕಟವಾಯಿತು. ಇದೇ ದಿನ ವಧು ಸಾವಿಗೀಡಾದ ಸುದ್ದಿಯೂ ವಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಹೆಣ್ಣು ಮತ್ತು ಗಂಡು ಜೊತೆಯಾಗಿ ಕುಳಿತಿರುವ ಪೋಟೋಗಳೂ ವಾಟ್ಸಪ್ ಮೂಲಕ ಪ್ರಕಟವಾಯಿತು. ‘ದೇವನ ಅನುಗ್ರಹ ಇರುತ್ತಿದ್ದರೆ ಇವರಿಬ್ಬರು ಇವತ್ತು ಪತಿ-ಪತ್ನಿ ಆಗಿರುತ್ತಿದ್ದರು’ ಎಂಬ ಇಮೋಶನ್ ಒಕ್ಕಣೆಗಳೂ ಅದರ ಜೊತೆಗಿದ್ದುವು. ಸೋಶಿಯಲ್ ಮೀಡಿಯಾಗಳ ಮೂಲಕ ದೇಶ-ವಿದೇಶಗಳ ಸಾವಿರಾರು ಮಂದಿಗೆ ಈ ಸುದ್ದಿ ತಲುಪಿತು. ರವಿವಾರದ ಕಲ್ಯಾಣ ಮಂಟಪಗಳು ಇದನ್ನೇ ಚರ್ಚಿಸಿದುವು. ದುರಂತ ಏನೆಂದರೆ, ಈ ಸುದ್ದಿಯನ್ನು ಸಾಬೀತುಪಡಿಸಬೇಕಾದ ಸಾಂದರ್ಭಿಕ ಸಾಕ್ಷ್ಯಗಳು ಅನುಮಾನಾಸ್ಪದವಾಗಿದ್ದುವು. ಸುದ್ದಿಯನ್ನು ತಯಾರಿಸಿದವರ ಬಗ್ಗೆ ಯಾವ ಸುಳಿವೂ ಇರಲಿಲ್ಲ. ಚಿತ್ರಗಳಿಗೆ ಅಧಿಕೃತತೆ ಇರಲಿಲ್ಲ. ಸುದ್ದಿಯ ಮೂಲ ಎಲ್ಲಿ, ಯಾರು, ವಧುವಿನ ವಿಳಾಸ ಇತ್ಯಾದಿಗಳ ಕುರಿತು ಯಾವ ಸ್ಪಷ್ಟತೆ ಇಲ್ಲದೆಯೂ ಸಾವಿರಾರು ಮಂದಿಯನ್ನು ಭಾವುಕಗೊಳಿಸಿದ ಸುದ್ದಿಯದು. ಅನೇಕರು ವಧುವಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಬದುಕು ಎಷ್ಟು ಅಶಾಶ್ವತ ಮತ್ತು ನೀರ ಮೇಲಿನ ಗುಳ್ಳೆಯಂತೆ ಹೇಗೆ ಹೃಸ್ವ ಎಂಬ ವಿಶ್ಲೇಷಣೆ ನಡೆಸಿದರು. ಇಡೀ ದಿನ ಈ ಸುದ್ದಿ ಜನರಿಂದ ಜನರಿಗೆ ಮತ್ತು ಮೊಬೈಲ್‍ನಿಂದ ಮೊಬೈಲ್‍ಗೆ ರವಾನೆಯಾದ ಬಳಿಕ, ವಧು ಸಾವಿಗೀಡಾಗಿಲ್ಲ ಮತ್ತು ಇಡೀ ಘಟನೆಗೆ ಇನ್ನೊಂದು ಆಯಾಮವೂ ಇದೆ ಎಂಬ ಸುದ್ದಿ ಇವೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟವಾಗತೊಡಗಿತು. ಜನರು ಇನ್ನಷ್ಟು ಗೊಂದಲಕ್ಕೆ ಸಿಲುಕಿದರು. ಕೆಲವರು ಶ್ರದ್ಧಾಂಜಲಿಯನ್ನು ಹಿಂಪಡೆದರು. ಸುಮಾರು 24 ಗಂಟೆಗಳೊಳಗೆ ಒಂದು ವದಂತಿಯು ಸುದ್ದಿಯ ಸ್ವರೂಪ ಪಡೆದುಕೊಂಡು ಕರಾವಳಿ ಭಾಗದಲ್ಲಿ ಎಷ್ಟು ದೊಡ್ಡ ಸದ್ದು ಮಾಡಿತೆಂದರೆ, ಜನರು ವಾಟ್ಸಪ್ ಅನ್ನೇ ದ್ವೇಷಿಸುವಷ್ಟು.
    ಸುಮಾರು ಒಂದೂವರೆ ದಶಕಗಳಿಂದೀಚೆಗೆ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ‘ಮೂಲಗಳು ತಿಳಿಸಿವೆ’ ಎಂಬ ಪದಪ್ರಯೋಗದೊಂದಿಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗಿವೆ. ಇತ್ತಿತ್ತಲಾಗಿ ಈ ಮೂಲಗಳ ಸಮಸ್ಯೆ ತುಸು ಕಡಿಮೆ ಆಗಿದ್ದರೂ ಅವು ಸಂಪೂರ್ಣವಾಗಿ ನಿಂತು ಹೋಗಿಲ್ಲ. ಮುಖ್ಯವಾಗಿ ಮುಸ್ಲಿಮರಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಈ ಮೂಲಗಳು ಸದಾ ಕಾಣಿಸಿಕೊಳ್ಳುತ್ತಿದ್ದುವು. ಅತ್ಯಂತ ಹೆಚ್ಚು ಬಾರಿ ಈ ‘ಮೂಲಗಳು’ ಬಳಕೆಯಾದುದು ಭಯೋತ್ಪಾದನಾ ಸುದ್ದಿಗಳಿಗೆ ಸಂಬಂಧಿಸಿ. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯ ಬಗ್ಗೆ ಏನನ್ನು ಹೇಳುತ್ತಾರೋ ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸುದ್ದಿಗಳು ಮೂಲಗಳ ಹೆಸರಲ್ಲಿ ಪ್ರಕಟವಾಗುತ್ತಿದ್ದುವು. ಜನರು ಗಮನಿಸಲೆಂದು ವಿಶೇಷ ಬಾಕ್ಸ್ ಗಳಲ್ಲೂ ಅಂಥ ಸುದ್ದಿಗಳನ್ನು ಪ್ರಕಟಿಸಲಾಗುತ್ತಿತ್ತು. ಹಿಂದೂ ಮುಖಂಡರನ್ನು ಮತ್ತು ಪತ್ರಕರ್ತರನ್ನು ಹತ್ಯೆ ನಡೆಸಲು ಸಂಚು ಹೂಡಿರುವರೆಂದು ಆರೋಪಿಸಿ ಪತ್ರಕರ್ತ ಮುತೀಉರ್ರಹ್ಮಾನ್ ಸೇರಿದಂತೆ ಹಲವರನ್ನು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದಾಗಲೂ ಕೆಲವು ಕನ್ನಡ ಪತ್ರಿಕೆಗಳ ‘ಮೂಲಗಳು’ ಜಾಗೃತವಾಗಿದ್ದುವು. ಕಣ್ಣಂಬಾಡಿ ಅಣೆಕಟ್ಟನ್ನು ಸ್ಫೋಟಿಸಲು ಸಜ್ಜಾಗಿದ್ದರೆಂಬಲ್ಲಿ ವರೆಗೆ ಅನಧಿಕೃತ ಸುದ್ದಿಯನ್ನು ಅವು ತೇಲಿ ಬಿಟ್ಟಿದ್ದುವು. ಇತ್ತೀಚಿನ ಭೋಪಾಲ್ ಜೈಲ್ ಬ್ರೇಕ್ ಘಟನೆಯಲ್ಲೂ ಮೂಲಗಳನ್ನು ಜೋಡಿಸಿಕೊಂಡು ಸುದ್ದಿಗಳು ಪ್ರಕಟವಾಗಿದ್ದುವು. ನಿಜವಾಗಿ, ಮೂಲ ಎಂಬುದು ಅನಧಿಕೃತವಾಗಿರುವುದರ ಹೆಸರು ಅಲ್ಲ. ಯಾವುದೇ ಪತ್ರಿಕೆಗೆ ಬೇರೆ ಬೇರೆ ಪ್ರದೇಶಗಳಲ್ಲಿ ಸುದ್ದಿಯನ್ನು ಮುಟ್ಟಿಸುವ ‘ಮೂಲ’ ಇರುತ್ತದೆ. ಅಲ್ಲೊಂದು ಘಟನೆ ನಡೆದರೆ, ಆತ/ಕೆ ಆ ಘಟನೆಯ ವಿವರಗಳನ್ನು ಅಲ್ಲಿಯ ಅಧಿಕೃತ ಪತ್ರಿಕಾ ವರದಿಗಾರರಿಗೆ ತಲುಪಿಸುತ್ತಾರೆ. ಆ ವರದಿಗಾರ ಅದನ್ನು ಖಚಿತಪಡಿಸಿಕೊಂಡು ಅಥವಾ ‘ಮೂಲ’ದ ಮೇಲೆ ಭರವಸೆಯನ್ನು ಇಟ್ಟುಕೊಂಡು ಸುದ್ದಿ ತಯಾರಿಸುತ್ತಾರೆ. ಆದ್ದರಿಂದಲೇ, ಮೂಲ ಎಂಬುದನ್ನು ಡೆಸ್ಕ್ ರೂಮ್‍ನಲ್ಲಿ ಕೂತು ಕತೆ ಹೆಣೆಯುವುದಕ್ಕೆ ಕೊಟ್ಟುಕೊಳ್ಳುವ ಹೆಸರಲ್ಲ. ಪತ್ರಿಕೆಯೊಂದಕ್ಕೆ ಅಗತ್ಯವೆಂದು ಕಂಡುಬಂದರೆ, ಆ ಮೂಲವನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದು. ಓದುಗರ ಅನುಮಾನಕ್ಕೆ ಉತ್ತರವನ್ನು ಆ ‘ಮೂಲ’ದ ಮೂಲಕ ಕೊಡಿಸಬಹುದು. ದುರಂತ ಏನೆಂದರೆ, ಭಯೋತ್ಪಾದನೆಯ ಹೆಸರಲ್ಲಿ ಈ ಹಿಂದೆಲ್ಲ ಪ್ರಕಟವಾಗುತ್ತಿದ್ದ ಮೂಲಗಳನ್ನಾಧರಿಸಿದ ಹೆಚ್ಚಿನ ಸುದ್ದಿಗಳಿಗೆ ಖಚಿತತೆಯೇ ಇದ್ದಿರಲಿಲ್ಲ. ಇದಮಿತ್ಥಂ ಅನ್ನುವ ಮೂಲವೂ ಇದ್ದಿರಲಿಲ್ಲ. ಹೆಚ್ಚಿನವು ಪತ್ರಕರ್ತನ ಕೈಚಳಕವನ್ನು ಅವಲಂಬಿಸಿಕೊಂಡಿತ್ತು. ತಾನೇ ಒಂದು ರೋಮಾಂಚಕ ಕತೆಯನ್ನು ಹೆಣೆದು ಕೊನೆಯಲ್ಲಿ ಮೂಲಗಳು ತಿಳಿಸಿವೆ ಎಂದು ಮುಗಿಸಿ ಬಿಡುವ ಪರಿಪಾಠವೂ ನಡೆದಿತ್ತು. ಕೆಲವು ಸತ್ಯಶೋಧನಾ ಸಮಿತಿಗಳು ಮತ್ತು ಪ್ರಜ್ಞಾವಂತ ಓದುಗರು ಈ ಮೂಲಗಳ ಅಧಿಕೃತತೆಯನ್ನು ಮತ್ತೆ ಮತ್ತೆ ಪ್ರಶ್ನಿಸತೊಡಗಿದುದರಿಂದ ಇವತ್ತು ಪತ್ರಿಕೆಗಳು ತುಸು ಎಚ್ಚರಿಕೆಯಿಂದ ಮೂಲವನ್ನು ಬಳಸುತ್ತಿವೆ ಎಂಬುದನ್ನು ಬಿಟ್ಟರೆ, ಈ ಕ್ಷೇತ್ರದಲ್ಲಿ ಭಾರೀ ಎನ್ನಬಹುದಾದ ಪ್ರಗತಿಯೇನೂ ಆಗಿಲ್ಲ.
      ಕರಾವಳಿ ಭಾಗದಲ್ಲಿ ಸುದ್ದಿಯಾದ ಎರಡು ಘಟನೆಗಳಲ್ಲಿ ಒಂದಕ್ಕೆ ಖಚಿತವಾದ ಮೂಲ ಇದೆ. ಆದರೆ, ವಧುವಿನ ಸಾವಿಗೆ ಸಂಬಂಧಿಸಿ ಈ ಯಾವ ಖಚಿತತೆಯೂ ಇಲ್ಲ. ವಧುವಿನ ಸಾವನ್ನು ದೃಢೀಕರಿಸುವ ವ್ಯಕ್ತಿ ಇಲ್ಲ. ಅದನ್ನು ಮೊದಲಾಗಿ ಕಂಡು ಸುದ್ದಿ ತಯಾರಿಸಿದವರ ವಿಳಾಸ ಇಲ್ಲ. ಮೃತದೇಹ ಎಲ್ಲಿದೆ, ಎಲ್ಲಿ ದಫನ ಮಾಡಲಾಗುತ್ತದೆ ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ಉತ್ತರಗಳೂ ಇಲ್ಲ. ಆದರೂ ವಿದ್ಯುದಾಘಾತದ ಸುದ್ದಿಗಿಂತ ಹೆಚ್ಚು ಚರ್ಚೆಯಲ್ಲಿದ್ದುದು ಮತ್ತು ಹೆಚ್ಚು ಜನರಿಗೆ ರವಾನೆಯಾದುದು ಈ ಎರಡನೇ ಸುದ್ದಿ. ಇದನ್ನು ಹೇಗೆ ವಿಶ್ಲೇಷಿಸಬಹುದು? ಅಖಚಿತ ಸುದ್ದಿಗಳ ಮೇಲೆ ಜನರು ಯಾಕೆ ಇಷ್ಟು ಆಕರ್ಷಿತರಾಗುತ್ತಾರೆ ಅಥವಾ ಸುದ್ದಿಯನ್ನು ಖಚಿತಪಡಿಸಿಕೊಳ್ಳುವ ಬಹುಮುಖ್ಯ ಹಂತದಲ್ಲಿ ಯಾಕೆ ಎಡವುತ್ತಾರೆ? ಇದು ಓರ್ವ ವಧುವಿನ ಪ್ರಶ್ನೆಯಲ್ಲ. ಸಾರ್ವಜನಿಕ ಮನೋಭಾವದ ಪ್ರಶ್ನೆ. ಸುಳ್ಳು ಸುದ್ದಿಯನ್ನು ಸೃಷ್ಟಿಸುವವರ ಮುಂದೆ ಇವತ್ತು ಸಾಕಷ್ಟು ಅವಕಾಶಗಳು ಮುಕ್ತವಾಗಿರುತ್ತವೆ. ಅವರು ಹೇಗೆ ಬೇಕಾದರೂ ಆ ಸುದ್ದಿಯನ್ನು ಆಕರ್ಷಕಗೊಳಿಸಬಹುದು. ಬೇರೆ ಬೇರೆ ಕಥಾಪಾತ್ರಗಳನ್ನು ಸೃಷ್ಟಿಸಿಕೊಳ್ಳಬಹುದು. ಯಾಕೆಂದರೆ, ಮೂಲದಲ್ಲಿ ಅಂಥದ್ದೊಂದು ಘಟನೆ ನಡೆದಿರುವುದೇ ಇಲ್ಲ. ಕೆಲವು ಪತ್ರಿಕೆಗಳು ಭಯೋತ್ಪಾದನಾ ಘಟನೆಗಳಿಗೆ ಸಂಬಂಧಿಸಿ ಇಂಥ ಅನುಚಿತ ದಾರಿಯನ್ನು ಅವಲಂಬಿಸಿ ಜನರ ಪ್ರಶ್ನೆಗೆ ಗುರಿಯಾದುವು. ಸದ್ಯ ಸೋಶಿಯಲ್ ಮೀಡಿಯಾಗಳು ಅದರಲ್ಲೂ ವಾಟ್ಸಪ್‍ನಂಥ ಮಾಧ್ಯಮ ಇದೇ ಅನುಚಿತ ಕ್ರಮವನ್ನು ಇನ್ನಷ್ಟು ಕೆಟ್ಟದಾಗಿ ಇವತ್ತು ನಿರ್ವಹಿಸುತ್ತಿದೆ. ಮೂಲವೇ ಗೊತ್ತಿಲ್ಲದ ಸುದ್ದಿಗಳು ಅಧಿಕೃತವೆಂಬಂತೆ ರವಾನೆಯಾಗುತ್ತಿವೆ. ಆದ್ದರಿಂದ, ಪತ್ರಿಕೆಗಳ ಸುದ್ದಿ ಮೂಲವನ್ನು ಪ್ರಶ್ನಿಸಿದ ಜನರು ಈ ಮೂಲರಹಿತ ಸುದ್ದಿಗಳ ಬಗೆಗೂ ಜಾಗೃತವಾಗಬೇಕು. ಖಚಿತವಾಗದ ಯಾವ ಸುದ್ದಿಯನ್ನೂ ಇನ್ನೊಬ್ಬರಿಗೆ ರವಾನಿಸದೇ ವಿವೇಚನೆಯಿಂದ ನಡೆದುಕೊಳ್ಳಬೇಕು. ನಾವು ದ್ವೇಷಿಸಬೇಕಾದದ್ದು ವಾಟ್ಸಪ್ ಅನ್ನು ಅಲ್ಲ. ನಮ್ಮ ಅವಿವೇಕವನ್ನು. ನಮ್ಮ ಬೇಜವಾಬ್ದಾರಿತನವನ್ನು. ಇಲ್ಲದಿದ್ದರೆ ನಮ್ಮ ಸಾವಿನ ಸುದ್ದಿಯನ್ನು ನಾವೇ ಓದಬೇಕಾದಂತಹ ಪ್ರಸಂಗವೂ ಎದುರಾದೀತು.

Wednesday, 18 January 2017

ಲೈಂಗಿಕ ದೌರ್ಜನ್ಯವನ್ನು ಹುಡುಕುವ ಕ್ಯಾಮರಾಗಳು ಮತ್ತು ಕೆರೆಗೆ ಹಾರುವ ಬಾಬುಗೌಡರು

       ಕಳೆದವಾರ ಮಾಧ್ಯಮ ಕ್ಷೇತ್ರ ಸಾಕಷ್ಟು ಬ್ಯುಸಿಯಾಗಿದ್ದುವು. ಅತ್ಯಾಚಾರ, ಚುಡಾವಣೆ, ಲೈಂಗಿಕ ದೌರ್ಜನ್ಯ ಮುಂತಾದುವುಗಳ ಸುತ್ತ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಧಾರಾಳ ಬೆವರು ಸುರಿಸಿದುವು. ಪುಟಗಳನ್ನೂ ಸಮಯವನ್ನೂ ಮೀಸಲಿರಿಸಿದುವು. ಇದೇ ವೇಳೆ ನಮ್ಮೊಳಗನ್ನು ತೀವ್ರವಾಗಿ ತಟ್ಟಲೇಬೇಕಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬಲ್ಲಿ ನಡೆಯಿತು. ಒಂದೇ ಮನೆಯ ನಾಲ್ಕು ಮಂದಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ವ್ಯವಸ್ಥೆ ಹೇಗೆ ಮನುಷ್ಯರ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಈ ಕುಟುಂಬ. ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾದರೆ ಓರ್ವ ಬದುಕುಳಿದಿದ್ದಾನೆ. ಈ ಬದುಕುಳಿದವನ ಮೇಲೆ ತಮ್ಮವರ ಸಾವು ಯಾವ ರೀತಿಯ ಆಘಾತಕಾರಿ ಪರಿಣಾಮವನ್ನು ಬೀರಬಹುದು ಎಂಬುದು ಒಂದು ಪ್ರಶ್ನೆಯಾದರೆ, ಸಾವು ಯಾಕೆ ಒಂದು ಆಯ್ಕೆಯಾಗಿ ಅಥವಾ ‘ಪರಿಹಾರ’ವಾಗಿ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬ ಪ್ರಶ್ನೆ ಇನ್ನೊಂದು. ಹಾಗಂತ, ಆತ್ಮಹತ್ಯೆಯನ್ನು ಪ್ರಶ್ನಿಸಿ ಸಿನಿಮಾ ತಯಾರಿಸಬಹುದು. ನಾಟಕ ರಚಿಸಬಹುದು. ಕಾದಂಬರಿಯನ್ನೋ ಲೇಖನವನ್ನೋ ಬರೆಯಬಹುದು. ಇವೆಲ್ಲದರ ಬಳಿಕವೂ ಮುಖ್ಯ ಪ್ರಶ್ನೆಯೊಂದು ಹಾಗೆಯೇ ಉಳಿಯುತ್ತದೆ. ಓರ್ವ ವ್ಯಕ್ತಿಯನ್ನು ಆತ್ಮಹತ್ಯೆಗೆ ಒತ್ತಾಯಿಸುವ ಮೂಲಭೂತ ಅಂಶ ಯಾವುದು? ಯಾರಿಂದ ಮತ್ತು ಯಾವುದರಿಂದ ಆ ಆತ್ಮಹತ್ಯೆ ಪ್ರಚೋದಿತವಾಗಿದೆ? ಅಂದಹಾಗೆ, ಈ ಆತ್ಮಹತ್ಯೆಯ ಹಿಂದೆ ಎಂಡೋಸಲ್ಫಾನ್ ಎಂಬ ಕ್ರೌರ್ಯದ ಹಿನ್ನೆಲೆಯಿದೆ. ಮನೆಯೊಂದು ಎಂಡೋ ಪೀಡಿತರ ಕುಟುಂಬವಾಗಿ ಮಾರ್ಪಟ್ಟರೆ ಆ ಮನೆಯ ಆಲೋಚನೆಗಳು ಹೇಗಿರಬಹುದು? ವಿಕ್ಷಿಪ್ತರು, ವಿಕಲಚೇತನರು, ಚಾಪೆಗೇ ಸೀಮಿತವಾದವರ ಜೀವನಚಕ್ರ ಏನಿರಬಹುದು? ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಮತ್ತು ಈ ಆತ್ಮಹತ್ಯೆಯನ್ನು ನಾವು ಮುಖಾಮುಖಿಗೊಳಿಸಬೇಕಾದ ಅನಿವಾರ್ಯತೆ ಎದುರಾಗುವುದು ಇಲ್ಲೇ. ರಾತ್ರಿ ಪಾರ್ಟಿಯನ್ನು ಒಂದು ಹಂತದವರೆಗೆ ‘ಹೊಟ್ಟೆ ತುಂಬಿದವರ ಖಯಾಲಿ' ಎಂದು ಹೇಳಬಹುದು. ಅಲ್ಲಿಗೆ ಎಂಡೋ ಸಂತ್ರಸ್ತರು ಬರಲ್ಲ. ಯಾಕೆ ಬರಲ್ಲ ಅಂದರೆ, ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಸೌಂದರ್ಯ ಅವರಿಗಿಲ್ಲ. ದೈಹಿಕವಾಗಿಯೂ ಮಾನಸಿಕವಾಗಿಯೂ ಸ್ವಸ್ಥರಲ್ಲ. ಹೆಚ್ಚಿನವರಿಗೆ ಮನೆ ಬಿಟ್ಟು ಹೊರಬರಲೂ ಆಗುತ್ತಿಲ್ಲ. ಹಾಗಂತ, ಇವರ ಸಂಖ್ಯೆ ಬೆಂಗಳೂರಿನಲ್ಲಿ ರಾತ್ರಿ ಪಾರ್ಟಿಯಲ್ಲಿ ಸೇರಿದವರಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು. ದಕ್ಷಿಣ ಕನ್ನಡ ಒಂದರಲ್ಲಿಯೇ ಮೂರು ಸಾವಿರಕ್ಕಿಂತ ಅಧಿಕ ಎಂಡೋ ಪೀಡಿತರಿದ್ದಾರೆ. ಕೇರಳದ ಕಾಸರಗೋಡು ಮತ್ತಿತರ ಕಡೆಯೂ ಇದ್ದಾರೆ. ದುರಂತ ಏನೆಂದರೆ, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ ಪತ್ರಕರ್ತರಲ್ಲಿ ಶೇ. 1ರಷ್ಟು ಮಂದಿಯೂ ಈ ಮನುಷ್ಯರನ್ನು ಭೇಟಿಯಾಗಿಲ್ಲ. ತಮ್ಮ ಕ್ಯಾಮರಾಗಳಲ್ಲಿ ಇವರನ್ನು ಚಿತ್ರೀಕರಿಸಿಕೊಂಡಿಲ್ಲ. ಲೈವ್ ಚರ್ಚೆಗಳು ನಡೆದಿಲ್ಲ. ಮನುಷ್ಯರಿಗೆ ಈ ಪ್ರದೇಶ ಎಷ್ಟು ಸುರಕ್ಷಿತ ಎಂಬ ಬಗ್ಗೆ ವಿಶ್ಲೇಷಣೆಗಳು ನಡೆದಿಲ್ಲ. ಅಂಕಿ-ಅಂಶಗಳ ಸಂಗ್ರಹವಾಗಿಲ್ಲ. ಅಷ್ಟಕ್ಕೂ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಒಂದು ಹಂತದಲ್ಲಿ ಅದರ ಪ್ರಭಾವದಿಂದ ಹೊರಬರಲೂ ಬಹುದು. ಕಾಲವು ಅವರಿಂದ ಅದನ್ನು ಮರೆಸಿ ಬಿಡಲೂಬಹುದು ಅಥವಾ ಅವರು ಸ್ವತಃ ಲೈಂಗಿಕ ದೌರ್ಜನ್ಯ ವಿರೋಧಿ ಹೋರಾಟಗಾರರಾಗಿ ಪರಿವರ್ತನೆಯಾಗುವ ಮೂಲಕ ಪ್ರತೀಕಾರ ತೀರಿಸಲೂ ಬಹುದು. ಆದರೆ, ಎಂಡೋ ಸಂತ್ರಸ್ತರಿಗೆ ಇಂಥದ್ದೊಂದು ಅವಕಾಶವೇ ಇಲ್ಲ. ಅದಕ್ಕೆ ತುತ್ತಾದವರು ಬಹುತೇಕ ಶಾಶ್ವತವಾಗಿ ಅದೇ ಸ್ಥಿತಿಯಲ್ಲಿ ಕೊರಗುತ್ತಾ ಬದುಕಬೇಕಾಗುತ್ತದೆ. ಯಾರೇ ಆಗಲಿ, ದೈಹಿಕ ಅಂಗಾಂಗಳು ಸ್ವಸ್ಥವಾಗಿರುವುದನ್ನು ಇಷ್ಟಪಡುತ್ತಾರೆ. ಆರೋಗ್ಯಪೂರ್ಣವಾಗಿರುವುದು, ಸುಂದರವಾಗಿರುವುದು ಇವೆಲ್ಲ ಮಾನವ ಸಹಜ ಬಯಕೆಗಳು. ಎಂಡೋಸಲ್ಫಾನ್ ವಿರೋಧಿಸುವುದೇ ಇವುಗಳನ್ನು. ಅದಕ್ಕೆ ತುತ್ತಾದವರು ಸಹಜ ಸೌಂದರ್ಯವನ್ನು ಕಳಕೊಳ್ಳುತ್ತಾರೆ. ದೈಹಿಕ ಅಂಗರಚನೆಗಳು ಊನಗೊಳ್ಳುತ್ತವೆ. ಆದ್ದರಿಂದಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೂ ಅವರಲ್ಲಿ ಹಿಂಜರಿಕೆ ಉಂಟಾಗುತ್ತದೆ. ಇದೇ ಸ್ಥಿತಿ ಮುಂದುವರಿಯುತ್ತಾ ಅವರನ್ನು ವಿಕ್ಷಿಪ್ತತೆಯೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ, ಬೆಂಗಳೂರಿನ ಲೈಂಗಿಕ ದೌರ್ಜನ್ಯಕ್ಕೆ ಕೊಕ್ಕಡದ ಎಂಡೋ ದೌರ್ಜನ್ಯವನ್ನು ಮುಖಾಮುಖಿಗೊಳಿಸಿದರೆ ಹಾಗೂ ಬೆಂಗಳೂರಿಗೆ ಸಿಕ್ಕ ಪ್ರಚಾರದ ಮತ್ತು ಆಡಳಿತಾತ್ಮಕ ಸಾಂತ್ವನದ ಅಣುವಿನಷ್ಟು ಮಹತ್ವವೂ ಕೊಕ್ಕಡದ ಎಂಡೋ ದೌರ್ಜನ್ಯಕ್ಕೆ ಸಿಗದೇ ಹೋಗಿದ್ದರೆ ಅದರಲ್ಲಿ ತಮ್ಮ ಹೃದಯ ಶೂನ್ಯತೆಗೆ ಎಷ್ಟು ಪಾಲು ಇದೆ ಎಂಬ ಬಗ್ಗೆ ಮಾಧ್ಯಮದ ಮಂದಿ ಆತ್ಮಾವಲೋಕನ ನಡೆಸಬೇಕಾಗಿದೆ. ಬೆಂಗಳೂರಿನ ಲೈಂಗಿಕ ದೌರ್ಜನ್ಯವನ್ನು ನಾವು ಹೇಗೆ ಆಡಳಿತಾತ್ಮಕ ವೈಫಲ್ಯ ಎಂದು ಕರೆಯುತ್ತೇವೋ ಅಷ್ಟೇ ಮತ್ತು ಅದಕ್ಕಿಂತಲೂ ಹೆಚ್ಚಿನ ಆಡಳಿತಾತ್ಮಕ ವೈಫಲ್ಯ ಎಂಡೋ ಪೀಡಿತರದ್ದು. ಆ ಭಾಗದಲ್ಲಿ ಗೇರು ತೋಟಗಳ ಮೇಲೆ ಸರಕಾರ ಎಂಡೋಸಲ್ಫಾನ್ ಸಿಂಪಡಿಸಿರುವುದರ ಅಡ್ಡ ಪರಿಣಾಮದ ಫಲಿತಾಂಶವೇ ಈ ಸಂತ್ರಸ್ತರು. ವ್ಯವಸ್ಥೆಯೊಂದು ಬೇಜವಾಬ್ದಾರಿಯುತವಾಗಿ ನಡೆದುಕೊಂಡರೆ ಏನಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಇದು.
     ಮಾಧ್ಯಮ ಜಗತ್ತಿನ ಸಂವೇದನೆಯನ್ನು ಮತ್ತು ಸ್ಪಂದನಾ ಸಾಮರ್ಥ್ಯವನ್ನು ಮರು ಅವಲೋಕನಕ್ಕೆ ಒಳಪಡಿಸಲು ಬಾಬುಗೌಡ, ಗಂಗಮ್ಮ, ಸದಾನಂದ ಮತ್ತು ನಿತ್ಯಾನಂದ ಎಂಬ ಎಂಡೋ ಪೀಡಿತರ ಸಾವು ನಿಮಿತ್ತವಾಗಬೇಕು. ನಗರ ಪ್ರದೇಶದ, ಆಕರ್ಷಕವಾಗಿ ಮಾತಾಡಬಲ್ಲ, ಕೈ ತುಂಬ ದುಡ್ಡು ಎಣಿಸುವ, ಸುಂದರವಾಗಿರುವ, ದುಬಾರಿ ವಾಹನಗಳಲ್ಲಿ ಓಡಾಡುವ ಜನರ ಸುತ್ತಲೇ ಇವತ್ತು ಜರ್ನಲಿಸಂ ಸುತ್ತುತ್ತಿದೆಯೇ? ಅವರ ಸಮಸ್ಯೆಯನ್ನೇ ಇಡೀ ದೇಶದ ಸಮಸ್ಯೆಯಾಗಿ ಮತ್ತು ದೇಶದ ಘನತೆಯ ವಿಷಯವಾಗಿ ಪರಿಗಣಿಸುತ್ತಿವೆಯೇ? ಅವರನ್ನೇ ಭಾರತವಾಗಿಸುವ ತಪ್ಪುಗಳು ನಡೆಯುತ್ತಿವೆಯೇ? ಭಾರತವೆಂದರೆ ನಗರ ಪ್ರದೇಶಗಳೇ ಅಲ್ಲವಲ್ಲ. ನಗರಗಳಲ್ಲಿರುವವರು ಮಾತ್ರವೇ ಮನುಷ್ಯರೂ ಅಲ್ಲವಲ್ಲ. ನಿಜವಾದ ಭಾರತ ನಗರಗಳ ಹೊರಗಿದೆ. ಗಂಭೀರವಾದ ಸಮಸ್ಯೆಗಳೂ ಅಲ್ಲೇ ಇವೆ. ಮಾಧ್ಯಮ ಜಗತ್ತಿನ ಲೇಖನಿಗಳು, ಕ್ಯಾಮರಾಗಳು ಆ ಕಡೆಗೆ ಮುಖ ಮಾಡಬೇಕಾಗಿದೆ. ಟಿ.ವಿ.ಗಳ ಚರ್ಚೆಗಳಲ್ಲಿ ಎಂಡೋ ಪೀಡಿತರನ್ನು, ಸಾಲಗಾರ ರೈತರನ್ನು, 365 ದಿನ ದುಡಿದೂ ಹೊಟ್ಟೆ-ಬಟ್ಟೆ ತುಂಬಲಾರದವರನ್ನು, ಸೋರುವ ಮಾಡನ್ನೂ ಮಾಡಿನೊಳಗಿನ ಮನುಷ್ಯರನ್ನೂ, ಅವರ ತಲ್ಲಣಗಳನ್ನೂ ನಗರಗಳ ಮುಂದೆ ಇಡಬೇಕಾಗಿದೆ. ಆ ಮೂಲಕ ನಗರದ ಮನುಷ್ಯರನ್ನು ಮತ್ತು ನಗರವಲ್ಲದ ಮನುಷ್ಯರನ್ನು ಮುಖಾಮುಖಿಗೊಳಿಸಬೇಕಾಗಿದೆ. ಅಂದಹಾಗೆ,
      ಆತ್ಮಹತ್ಯೆ ಪರಿಹಾರ ಅಲ್ಲ ಸರಿ. ಅದು ತಪ್ಪೂ ಹೌದು. ಆದರೆ, ವ್ಯವಸ್ಥೆ ಬಿಡಿ ಮಾಧ್ಯಮಗಳೂ ಸಂವೇದನೆಯನ್ನು ಕಳಕೊಂಡರೆ ಮತ್ತು ವ್ಯವಸ್ಥೆಯ ಮೇಲೆ ಒತ್ತಡ ಹಾಕುವ ಜವಾಬ್ದಾರಿಯಿಂದ ನುಣುಚಿಕೊಂಡರೆ, ಸಂತ್ರಸ್ತರು ಮಾನಸಿಕ ಸ್ವಸ್ಥತೆಯನ್ನು ಕಳಕೊಳ್ಳಲಾರರೆಂದು ಹೇಗೆ ಹೇಳುವುದು? ನಿಜವಾಗಿ, ಬೆಂಗಳೂರಿನ ‘ಲೈಂಗಿಕ ದೌರ್ಜನ್ಯ’ದ ಆರು ದಿನಗಳ ಬಳಿಕ ನಡೆದ ಬಾಬುಗೌಡ ಕುಟುಂಬದ ಆತ್ಮಹತ್ಯೆಯು ವ್ಯವಸ್ಥೆ ಮತ್ತು ಮಾಧ್ಯಮ ಜಗತ್ತಿನ ಸಂವೇದನಾರಹಿತ ಮನಸ್ಥಿತಿಗೆ ತೋರಿದ ತೀವ್ರ ಪ್ರತಿಭಟನೆಯೆಂದೇ ಹೇಳಬೇಕು. ಮಾತ್ರವಲ್ಲ, ಈ ಪ್ರತಿಭಟನೆಯು ಉಳಿದ ಸಂತ್ರಸ್ತರ ಆಯ್ಕೆಯೂ ಆಗುವ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ನಗರ ಕೇಂದ್ರಿತ ಜರ್ನಲಿಸಂ ಅನ್ನು ಸಮಸ್ಯೆ ಕೇಂದ್ರಿತ ಜರ್ನಲಿಸಂ ಆಗಿ ಇದು ಪರಿವರ್ತಿಸಬೇಕು. ವಿಷಾದ ಏನೆಂದರೆ, ಮಾಧ್ಯಮ ಜಗತ್ತು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಬಾಬುಗೌಡ ಕುಟುಂಬದ ಸಾವಿಗೆ ಸಣ್ಣ ಸುದ್ದಿಯ ಹೊರತಾಗಿ ಬೇರೆ ಯಾವ ಮಹತ್ವವನ್ನೂ ಅವು ಕೊಟ್ಟಿಲ್ಲ. ಅವು ಇನ್ನೂ ಲೈಂಗಿಕ ದೌರ್ಜನ್ಯವನ್ನು ಹುಡುಕುತ್ತಾ ನಗರಗಳಲ್ಲೇ ಇವೆ.

Saturday, 7 January 2017

67 ಸಾವಿರ ಕೋಟಿ ರೂಪಾಯಿ ವ್ಯವಹಾರದ ಬಳಿಕವೂ ನಾವೇಕೆ ಒಂಟಿ?

      ಬಡವರನ್ನು ಅಣಕಿಸುವ ದಿನವನ್ನಾಗಿ ಡಿ. 31ನ್ನು ಪ್ರಧಾನಿ ನರೇಂದ್ರ ಮೋದಿಯವರು ಪರಿವರ್ತಿಸಿದುದಕ್ಕಿಂತ ಎರಡ್ಮೂರು ದಿನಗಳ ಮೊದಲು ಮೋದಿಯವರ ಸಾಮರ್ಥ್ಯವನ್ನು ಪ್ರಶ್ನಿಸುವ ಬೆಳವಣಿಗೆಗಳು ರಶ್ಯಾದಲ್ಲಿ ನಡೆದುವು. ಭಾರತಕ್ಕೆ ಮತ್ತು ಭಾರತೀಯರ ಪಾಲಿಗೆ ಈ ಎರಡೂ ಬಹಳ ಮುಖ್ಯವಾದುವು. ಡಿ. 31, ಈ ವರೆಗೆ ಜಗತ್ತಿನ ಎಲ್ಲೂ ಅಣಕದ ದಿನವಾಗಿ ಆಚರಣೆಗೆ ಒಳಗಾಗಿಲ್ಲ. ಹೊಸ ವರ್ಷಕ್ಕೆ ಸ್ವಾಗತ ಕೋರುವ ದಿನವನ್ನಾಗಿ ಡಿ. 31ನ್ನು ಆಚರಿಸುವವರಲ್ಲೂ ನಿರೀಕ್ಷೆ, ಶುಭಾಕಾಂಕ್ಷೆ ಮತ್ತು ಸಂತಸವಿರುತ್ತದೆಯೇ ಹೊರತು ಅಣಕವಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ಈ ಪರಂಪರೆಯನ್ನು ಮುರಿದಿದ್ದಾರೆ. ಡಿ. 31ನ್ನು ಅಣಕದ ದಿನವನ್ನಾಗಿ ಅವರು ಘೋಷಿಸಿದ್ದಾರೆ. ‘ನನಗೆ 50 ದಿನಗಳನ್ನು ಕೊಡಿ’ ಎಂದು ನೋಟು ಅಮಾನ್ಯದ ಬಳಿಕ ನರೇಂದ್ರ ಮೋದಿಯವರು ಭಾರತೀಯರಲ್ಲಿ ವಿನಂತಿಸಿದ್ದರು. ಯಾವುದೇ ನೇತಾರ ಮಾಡಬಹುದಾದ ಅಪರೂಪದ ವಿನಂತಿ ಇದು. 85% ಜನರು ಅವಲಂಬಿಸಿರುವ ನಗದು ವ್ಯವಹಾರವನ್ನು ದಿಢೀರನೇ ರದ್ದುಗೊಳಿಸುವುದು, ಬ್ಯಾಂಕ್‍ನೆದುರು ದಿನಗಟ್ಟಲೆ ಸರತಿ ಸಾಲಲ್ಲಿ ನಿಲ್ಲಿಸುವುದು ಹಾಗೂ ಈ ಸ್ಥಿತಿ 50 ದಿನಗಳವರೆಗೆ ಇರುತ್ತದೆ ಎಂದು ಹೇಳುವುದೇ ಒಂದು ರೀತಿಯಲ್ಲಿ ಅಸೌಜನ್ಯ ಮತ್ತು ಜನವಿರೋಧಿ. ಆದರೆ, ಜನರು ಅದನ್ನು ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಿದರು. ಬಳಿಕ ಇದೇ ನೋಟು ರದ್ಧತಿ ನೀತಿಯನ್ನು ವೆನೆಝುವೇಲಾದಲ್ಲಿ ಮಡುರೋ ಅವರ ಕಮ್ಯುನಿಸ್ಟ್ ಸರಕಾರ ಜಾರಿಗೆ ತಂದಾಗ ಜನರು ದಂಗೆ ಎದ್ದು ಬ್ಯಾಂಕ್ ಲೂಟಿ ಮಾಡಿದುದನ್ನು ಮತ್ತು ನೋಟು ರದ್ಧತಿಯನ್ನೇ ಸರಕಾರ ರದ್ದು ಮಾಡಬೇಕಾಗಿ ಬಂದುದನ್ನು ಪರಿಗಣಿಸುವಾಗ ಭಾರತೀಯರು ತೋರಿದ ಸಹಕಾರ ನೀತಿಯ ಬೆಲೆ ಏನು ಎಂಬುದು ಸ್ಪಷ್ಟವಾಗುತ್ತದೆ. ನೋಟು ಅಮಾನ್ಯದಿಂದ ತೊಂದರೆಗೊಳಗಾಗಿ 100ಕ್ಕಿಂತ ಅಧಿಕ ಮಂದಿ ಸಾವಿಗೀಡಾದರೂ ಭಾರತೀಯರು ದಂಗೆ ಏಳಲಿಲ್ಲ. ಬ್ಯಾಂಕ್ ಲೂಟಿಗೂ ಇಳಿಯಲಿಲ್ಲ. ‘ದೇಶದ ಹಿತಕ್ಕಾಗಿ ಅಳಿಲು ಸೇವೆ’ ಎಂಬ ಭಾವದಲ್ಲಿ ಅವರೆಲ್ಲ ಸಹಿಸಿಕೊಂಡರು. ಆದ್ದರಿಂದಲೇ ಡಿ. 31ನ್ನು ಭಾರತೀಯರು ಅಪಾರ ನಿರೀಕ್ಷೆಯಿಂದ ಕಾದರು. ತಾವು ತಮ್ಮದೇ ಹಣವನ್ನು ಪಡಕೊಳ್ಳುವುದಕ್ಕಾಗಿ ಬಿಸಿಲಲ್ಲಿ ದಿನಗಟ್ಟಲೆ ಕಳೆದ ಸಮಯದ ಫಲಿತಾಂಶವನ್ನು ಡಿ. 31ರಂದು ಪ್ರಧಾನಿಯವರು ಪ್ರಕಟಿಸುತ್ತಾರೆ ಎಂಬ ತೀರಾ ತೀರಾ ಜುಜುಬಿ ಆಸೆಯಷ್ಟೇ ಅವರದಾಗಿತ್ತು. ಹಣ ಅವರದ್ದು, ಸಮಯ ಅವರದ್ದು, ಆರೋಗ್ಯವೂ ಅವರದ್ದೇ. ಜನಸಾಮಾನ್ಯರಿಂದ ಈ ಎಲ್ಲವನ್ನೂ 50 ದಿನಗಳ ವರೆಗೆ ಕಿತ್ತುಕೊಂಡ ಪ್ರಧಾನಿಯವರಿಗೆ, ಅದರಿಂದ ದೇಶಕ್ಕೆ ಮತ್ತು ಆ ಮೂಲಕ ಜನಸಾಮಾನ್ಯರಿಗೆ ಆಗಿರುವ ಲಾಭ ಏನು ಎಂಬುದನ್ನು ಹೇಳಬೇಕಾದ ಜವಾಬ್ದಾರಿ ಖಂಡಿತ ಇದೆ. ನರೇಂದ್ರ ಮೋದಿಯವರು ಡಿ. 31ರಂದು ಭಾಷಣವನ್ನೇನೋ ಮಾಡಿದರು. ಆದರೆ ಆ ಭಾಷಣವು 50 ದಿನಗಳನ್ನು ಕೊಟ್ಟ ಜನಸಾಮಾನ್ಯರನ್ನು ಅಣಕಿಸುವ ರೀತಿಯಲ್ಲಿತ್ತು. ಅವರು ತಮ್ಮ ಭಾಷಣದಲ್ಲಿ ನೋಟು ಅಮಾನ್ಯತೆಗೆ ಸಂಬಂಧಿಸಿದಂತೆ ಬಹುಮುಖ್ಯ ಭಾಗವನ್ನು ಸ್ಪರ್ಶಿಸಲೇ ಇಲ್ಲ. ಬ್ಯಾಂಕ್‍ಗಳಲ್ಲಿ ಜಮೆ ಆಗಿರುವ ಹಣ ಎಷ್ಟು, ಕಪ್ಪು ಹಣ ಎಷ್ಟು, ಹೊಸದಾಗಿ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ, ಜನಸಾಮಾನ್ಯರಿಗೆ ಲಭ್ಯವಾದ ದೀರ್ಘಾವಧಿ ಲಾಭ ಏನು ಮತ್ತು ಆ ಕುರಿತಾದ ಅಂಕಿ-ಅಂಶಗಳೇನು.. ಮುಂತಾದ ಜನಸಾಮಾನ್ಯರ ಕುತೂಹಲಗಳಿಗೆ ಮೋದಿಯವರು ಸ್ಪಂದಿಸಲೇ ಇಲ್ಲ. ಅದರ ಬದಲು ಅವರು ಕೆಲವು ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದರು. 50 ದಿನಗಳ ವರೆಗೆ ದೇಶಕ್ಕಾಗಿ ಸಾಕಷ್ಟನ್ನು ಕಳಕೊಂಡ ಜನಸಾಮಾನ್ಯರನ್ನು ನಡೆಸಿಕೊಳ್ಳುವ ವಿಧಾನವೇ ಇದು? ಜನತಂತ್ರ ವ್ಯವಸ್ಥೆಯಲ್ಲಿ ಪ್ರಭುವಿನ ಸ್ಥಾನದಲ್ಲಿರುವ ಜನಸಾಮಾನ್ಯರನ್ನು ನೇತಾರನೊಬ್ಬ ಗುಲಾಮರಂತೆ ನಡೆಸಿಕೊಂಡುದುದಕ್ಕೆ ಉದಾಹರಣೆಯಲ್ಲವೇ ಇದು? ನಿಜವಾಗಿ, ನೋಟು ಅಮಾನ್ಯತೆಯ ಘೋರ ವೈಫಲ್ಯವನ್ನು ಸೂಚಿಸುವ ಬೆಳವಣಿಗೆ ಇದು. ಪ್ರಧಾನಿಯವರಿಗೆ ನೋಟು ಅಮಾನ್ಯತೆಯಿಂದಾಗುವ ದೀರ್ಘಾವಧಿ ಲಾಭದ ಬಗ್ಗೆ ಖಚಿತತೆ ಇಲ್ಲ ಅಥವಾ ಅದರ ವೈಫಲ್ಯದ ಮುನ್ಸೂಚನೆ ಅವರಿಗೆ ಸಿಕ್ಕಿದೆ. ಆದ್ದರಿಂದಲೇ ಅವರು ಮಾತು ಹೊರಳಿಸಿದ್ದಾರೆ. ನೋಟು ಅಮಾನ್ಯತೆ ಚರ್ಚೆಗೊಳಗಾಗದಂತೆ ನೋಡಿಕೊಳ್ಳಲು ಯತ್ನಿಸಿದ್ದಾರೆ. ಈ ಗೊಂದಲದಲ್ಲಿ ಅವರಿಗಾಗಿ ಜೀವತೆತ್ತ 100ಕ್ಕಿಂತಲೂ ಅಧಿಕ ಜನಸಾಮಾನ್ಯರಿಗೆ ಕನಿಷ್ಠ ಶ್ರದ್ಧಾಂಜಲಿ ಸಲ್ಲಿಸುವುದಕ್ಕೂ ಅವರು ಮರೆತು ಬಿಟ್ಟಿದ್ದಾರೆ. ಅಂದಹಾಗೆ, ಈ ವೈಫಲ್ಯಕ್ಕಿಂತ ಎರಡ್ಮೂರು ದಿನಗಳ ಮೊದಲೇ ರಷ್ಯಾದ ಮಾಸ್ಕೋದಲ್ಲಿ ನಡೆದ ಸಭೆಯೊಂದು ಮೋದಿಯವರನ್ನು ಅಸಮರ್ಥ ಎಂದು ಪರೋಕ್ಷವಾಗಿ ಸಾರಿತ್ತು.
       ಚೀನಾ, ಪಾಕಿಸ್ತಾನ ಮತ್ತು ರಷ್ಯಾಗಳು ಜೊತೆ ಸೇರಿಕೊಂಡು ಮಾಸ್ಕೋದಲ್ಲಿ ಕಳೆದ ವಾರ ಸಭೆ ನಡೆಸಿದುವು. ತಾಲಿಬಾನನ್ನು ಮುಖ್ಯವಾಹಿನಿಗೆ ತರುವುದು, ಅಫಘಾನ್ ಆಡಳಿತದಲ್ಲಿ ತಾಲಿಬಾನ್‍ಗೆ ಸ್ಥಾನ ಕಲ್ಪಿಸುವುದು ಮತ್ತು ಅದಕ್ಕೆ ಶಸ್ತ್ರಾಸ್ತ್ರ ಕೊಟ್ಟು ಐಸಿಸ್‍ನ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುವುದು.. ಇವು ಸಭೆಯ ಒಟ್ಟು ಉದ್ದೇಶವಾಗಿತ್ತು. ಇರಾನ್ ಕೂಡ ಅದನ್ನು ಬೆಂಬಲಿಸಿತು. ಒಂದು ರೀತಿಯಲ್ಲಿ, ಈ ಸಭೆಯು ಭಾರತದ ಹಿತಾಸಕ್ತಿಗೆ ವಿರುದ್ಧ. ಪಾಕ್ ಮತ್ತು ಚೀನಾಗಳು ಅಫಘಾನ್‍ನಲ್ಲಿ ಪ್ರಾಬಲ್ಯ ಪಡೆಯುವುದೆಂದರೆ ಮತ್ತು ತಾಲಿಬಾನ್‍ಗೆ ಮರುಜೀವ ಕೊಡುವುದೆಂದರೆ ಅಫಘಾನ್‍ನಿಂದ ಭಾರತವನ್ನು ಹೊರದಬ್ಬುವುದು ಎಂದೇ ಅರ್ಥ. ಅಫಘಾನ್‍ನ ನಿರ್ಮಾಣ ಕಾಮಗಾರಿಯಲ್ಲಿ ಭಾರತ ತೊಡಗಿಸಿಕೊಂಡಿದೆ. ಸಾಕಷ್ಟು ಹೂಡಿಕೆಯನ್ನೂ ಮಾಡಿದೆ. ಅಲ್ಲದೇ ತಾಲಿಬಾನ್ ಅನ್ನು ಮೋದಿ ಸರಕಾರವು ಭಾರತದ ವೈರಿಯೆಂದೇ ಪರಿಗಣಿಸಿದೆ. ರಷ್ಯಾದೊಂದಿಗೆ 67 ಸಾವಿರ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಭಾರತವು ಇತ್ತೀಚೆಗಷ್ಟೇ ಸಹಿ ಹಾಕಿದ ಬಳಿಕವೂ ಭಾರತ ವಿರೋಧಿ ಸಭೆಗೆ ರಷ್ಯಾ ನೇತೃತ್ವ ನೀಡುವುದೆಂದರೆ ಏನರ್ಥ? ನರೇಂದ್ರ ಮೋದಿಯವರು ತನ್ನ ಅಧಿಕಾರದ ಈ ಎರಡೂವರೆ ವರ್ಷಗಳಲ್ಲಿ ಸುತ್ತದ ದೇಶಗಳಿಲ್ಲ. ತನ್ನ ಈ ವಿದೇಶಿ ಭೇಟಿಯನ್ನೆಲ್ಲ ಅವರು ಸಹಕಾರ ವೃದ್ಧಿಯ ಹೆಸರಲ್ಲಿ ಸಮರ್ಥಿಸಿಕೊಂಡಿದ್ದರು. ಅವರ ಬೆಂಬಲಿಗರು ಜಗತ್ತೇ ಭಾರತದ ಜೊತೆಗಿದೆ ಎಂಬುದಾಗಿ ಈ ಭೇಟಿಯನ್ನು ಉಲ್ಲೇಖಿಸಿ ವಾದಿಸಿದ್ದರು. ಪಾಕಿಸ್ತಾನ ಒಂಟಿಯಾಯಿತೆಂದು ಸಂಭ್ರಮಿಸಿದ್ದರು. ಆದರೆ, ಮೋದಿಯವರ ರಾಜತಾಂತ್ರಿಕ ನೀತಿ ಅಸಮರ್ಥವಾಗಿದೆ ಎಂಬುದನ್ನು ಮಾಸ್ಕೋ ಸಭೆ ಇದೀಗ ಸ್ಪಷ್ಟಪಡಿಸಿದೆ. 67 ಸಾವಿರ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಖರೀದಿಸುವ ಒಪ್ಪಂದ ಮಾಡಿಕೊಂಡ ಬಳಿಕವೂ ಭಾರತದ ಹಿತಾಸಕ್ತಿಗೆ ರಶ್ಯಾ ವಿರುದ್ಧವಾಗಿ ನಿಂತಿದೆ. ರಷ್ಯಾದ ಅಧ್ಯಕ್ಷ ಪುತಿನ್‍ರೊಂದಿಗೆ ಅಮೇರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್‍ಗೆ ಆತ್ಮೀಯ ಬಾಂಧವ್ಯ ಇರುವುದರಿಂದಾಗಿ ಇನ್ನಷ್ಟು ಭಾರತ ಹಿತಾಸಕ್ತಿ ವಿರೋಧಿ ನೀತಿಗಳು ಭವಿಷ್ಯದಲ್ಲಿ ಜಾರಿಯಾಗುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ಕಡೆ, ಭಾರತವು ಕಪ್ಪು ಪಟ್ಟಿಯಲ್ಲಿ ಸೇರಿಸಿರುವ ಪಾಕಿಸ್ತಾನದ ಮಸ್ಹೂದ್ ಅಝರ್‍ನ ಮೇಲೆ ವಿಶ್ವಸಂಸ್ಥೆಯಲ್ಲಿ ನಿಷೇಧ ವಿಧಿಸಲು ಮೋದಿಯವರಿಗೆ ಸಾಧ್ಯವಾಗಿಲ್ಲ. ಇನ್ನೊಂದು ಕಡೆ, ಎನ್‍ಎಸ್‍ಜಿಯಲ್ಲಿ ಸ್ಥಾನ ಪಡೆಯುವಲ್ಲೂ ಭಾರತ ವಿಫಲವಾಗುತ್ತಿದೆ. ಮತ್ತೊಂದೆಡೆ, ಭಾರತದ ಹಿತಾಸಕ್ತಿಗೆ ಧಕ್ಕೆಯಾಗಬಹುದೆಂದು ಹೇಳಲಾಗುವ ಬೆಳವಣಿಗೆಗಳು ನಡೆಯುತ್ತಿವೆ. ಇದು ಸೂಚಿಸುವುದೇನನ್ನು? ನರೇಂದ್ರ ಮೋದಿಯವರ ವಿದೇಶಿ ಭೇಟಿಗಳು ಯಶಸ್ವಿ ಆಗಿರುತ್ತಿದ್ದರೆ ಈ ಎಲ್ಲ ಬೆಳವಣಿಗೆಗಳು ನಡೆಯಲು ಸಾಧ್ಯವಿತ್ತೇ? ಸದ್ಯ, ಪಾಕಿಸ್ತಾನವು ರಷ್ಯಾ ಮತ್ತು ಅಮೇರಿಕ ಎರಡಕ್ಕೂ ಹತ್ತಿರವಾಗುತ್ತಿದೆ. ಆದರೆ, ಹೊಸ ರಾಜತಾಂತ್ರಿಕ ನೀತಿಯನ್ನು ಪರಿಚಯಿಸಿದ ಭಾರತವು ಎರಡರಿಂದಲೂ ದೂರವಾಗುತ್ತಿದೆ. ಪಾಕಿಸ್ತಾನವನ್ನು ಒಂಟಿ ಮಾಡುವುದಕ್ಕೆ ಹೊರಟ ನರೇಂದ್ರ ಮೋದಿಯವರು ಅಂತಿಮವಾಗಿ ಭಾರತವನ್ನೇ ಒಂಟಿ ಮಾಡುತ್ತಿದ್ದಾರೆಯೇ?
      ಡಿ. 31ರಂದು ನರೇಂದ್ರ ಮೋದಿಯವರು ಮಾಡಿದ ಭಾಷಣ ಮತ್ತು ಅದಕ್ಕಿಂತ ಮೊದಲು ಮಾಸ್ಕೋದಲ್ಲಿ ನಡೆದ ಸಭೆ - ಎರಡರ ಸಂದೇಶವೂ ಒಂದೇ. ಭಾರತ ದುರ್ಬಲವಾಗುತ್ತಿದೆ. ಮೋದಿಯವರು ಅಸಮರ್ಥರಾಗುತ್ತಿದ್ದಾರೆ.

Wednesday, 4 January 2017

50 ದಿನಗಳು ಮತ್ತು ಎರಡು ಪ್ರಶ್ನೆಗಳು

        ನೋಟು ಅಮಾನ್ಯದ ನಂತರದ ಬೆಳವಣಿಗೆಗಳು ಎರಡು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಒಂದು- ನಿಜಕ್ಕೂ ಇದರ ಹಿಂದಿನ ಮುಖ್ಯ ಉದ್ದೇಶ ಕಪ್ಪು ಹಣ, ಭ್ರಷ್ಟಾಚಾರ, ನಕಲಿ ನೋಟುಗಳನ್ನು ನಿರ್ಬಂಧಿಸುವುದೇ ಆಗಿದೆಯೇ? ಎರಡು- ದೇಶ ಬಿಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರ ಇಂಥದ್ದೊಂದು ಪ್ರಕ್ರಿಯೆಗೆ ಸಿದ್ಧವಾಗಿತ್ತೇ?
       ಪ್ರಧಾನಿ ಮೋದಿಯವರು ನವೆಂಬರ್ 8ರಂದು ನೋಟು ಅಮಾನ್ಯದ ಘೋಷಣೆಯನ್ನು ಹೊರಡಿಸಿದ ಬಳಿಕ, ತೆರಿಗೆ ಇಲಾಖೆಯಿಂದ ದೇಶದಾದ್ಯಂತ ಅನೇಕಾರು ದಾಳಿಗಳಾಗಿವೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲೇ ಯಾಕೆ ಹೆಚ್ಚಿನ ದಾಳಿಗಳಾಗಿವೆ ಎಂಬ ಪ್ರಶ್ನೆ ಸಹಜವಾಗಿದ್ದರೂ ಮತ್ತು ಈ ಕಾರಣಕ್ಕಾಗಿಯೇ ಈ ದಾಳಿಗಳ ಹಿಂದೆ ರಾಜಕೀಯ ದುರುದ್ದೇಶವನ್ನು ಶಂಕಿಸಬಹುದಾದರೂ ಇದರ ಹೊರತಾಗಿಯೂ ಈ ದಾಳಿಗಳು ವಿಶ್ಲೇಷಣೆಗೆ ಅರ್ಹವಾಗಿವೆ. ಕಳೆದವಾರ, ತಮಿಳ್ನಾಡಿನ ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್‍ರ ಮನೆಯ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಲೋಡುಗಟ್ಟಲೆ ನಗದು, ಬಂಗಾರ, ಆಭರಣಗಳು ದೊರಕಿವೆ. ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ.. ಮುಂತಾದ ಕಡೆಯೂ ಇಂಥದ್ದೇ ದಾಳಿಗಳು ನಡೆದಿವೆ. ಅಧಿಕಾರಿಗಳು, ಉದ್ಯಮಿಗಳು ಕಪ್ಪು ಹಣದ ಮೂಲಕ ಸಿಕ್ಕಿಬಿದ್ದಿದ್ದಾರೆ. ಇಲ್ಲೂ ಕೆಲವು ಪ್ರಶ್ನೆಗಳಿವೆ. ನೋಟು ಅಮಾನ್ಯದ ಬಳಿಕವೇ ಈ ದಾಳಿಗಳು ನಡೆಯಲು ಕಾರಣವೇನು? ಅದೂ ನಿರ್ದಿಷ್ಟ ರಾಜ್ಯಗಳೇ ಈ ದಾಳಿಗಳ ಮುಖ್ಯ ಗುರಿ ಆಗಿರುವುದೇಕೆ? ತೆರಿಗೆ ಇಲಾಖೆಯ ದಾಳಿಗೆ ನಿರ್ದಿಷ್ಟ ದಿನ, ತಿಂಗಳು, ವರ್ಷಗಳು ಎಂಬುದಿಲ್ಲವಲ್ಲ. ಅದು ಸಹಜ ಪ್ರಕ್ರಿಯೆ. ಯಾವ ಸಂದರ್ಭದಲ್ಲೂ ಅದು ದಾಳಿ ನಡೆಸಬಹುದು. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲೇ ತೆರಿಗೆ ಇಲಾಖೆ ಇದೆ ಮತ್ತು ದಾಳಿಯನ್ನೂ ನಡೆಸಿದೆ. ಆದ್ದರಿಂದ ನೋಟು ಅಮಾನ್ಯತೆಯು ತೆರಿಗೆ ಇಲಾಖೆಗೆ ದಾಳಿ ನಡೆಸಲು ಲಭಿಸಿದ ಸ್ವಾತಂತ್ರ್ಯ ಎಂದು ಭಾವಿಸುವುದು ಅಸಂಬದ್ಧವಾಗುತ್ತದೆ. ನೋಟು ಅಮಾನ್ಯತೆಯನ್ನು ಬೆಂಬಲಿಸುವ ಮಂದಿ ಅದಕ್ಕೆ ಸಮರ್ಥನೆಯಾಗಿ ತೆರಿಗೆ ಇಲಾಖೆಯ ದಾಳಿಯಲ್ಲಿ ಸಿಕ್ಕಿ ಬಿದ್ದವರನ್ನು ಉಲ್ಲೇಖಿಸುತ್ತಿರುವುದು ಹಾಸ್ಯಾಸ್ಪದವೆಂದು ಹೇಳಬೇಕಾದುದು ಈ ಕಾರಣದಿಂದಾಗಿ. ಒಂದು ರೀತಿಯಲ್ಲಿ, ಈ ದಾಳಿಯೇ ಪ್ರಧಾನಿಯವರ ಘೋಷಿತ ಉದ್ದೇಶ ಶುದ್ಧಿಯನ್ನು ಪ್ರಶ್ನಾರ್ಹಗೊಳಿಸುವುದಕ್ಕೆ ಸಾಕಾಗಬಹುದು. ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯಾಗುವುದಕ್ಕಿಂತ ಮೊದಲೇ ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಭರವಸೆ ನೀಡಿದವರು. ಸ್ವಿಸ್ ಬ್ಯಾಂಕ್‍ನಲ್ಲಿರುವ ಸುಮಾರು 648 ಭಾರತೀಯ ಖಾತೆಗಳಲ್ಲಿರುವ ಕಪ್ಪು ಹಣವನ್ನೆಲ್ಲ ವಶಪಡಿಸಿಕೊಂಡು ಪ್ರತಿ ಭಾರತೀಯರ ಜೇಬಿಗೆ ತಲಾ 15 ಲಕ್ಷ ಪಾವತಿಸುವುದಾಗಿ ಮಾತು ಕೊಟ್ಟವರು. ಅದಕ್ಕಾಗಿ 100 ದಿನಗಳ ವಾಯಿದೆಯನ್ನೂ ಕೇಳಿದವರು. ಹಾಗಂತ, ಸ್ವಿಝರ್‍ಲ್ಯಾಂಡ್ ಎಂಬುದು ಭಾರತದ ಒಂದು ರಾಜ್ಯ ಅಲ್ಲವಾದುದರಿಂದ ಈ ಭರವಸೆಯನ್ನು ಈಡೇರಿಸುವಲ್ಲಿ ಅವರಿಗಿರುವ ಅಡೆ-ತಡೆಗಳನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳೋಣ. ಆದರೆ, ಭಾರತದ ಒಳಗಿನ ಕಪ್ಪು ಹಣವನ್ನು ವಶಪಡಿಸಿಕೊಳ್ಳುವುದಕ್ಕೆ ಈ ಯಾವ ಅಡೆತಡೆಗಳೂ ಇರಲಿಲ್ಲವಲ್ಲ? ಪ್ರಧಾನಿಯಾದ ತಕ್ಷಣ ಕಪ್ಪು ಕುಳಗಳ ಮೇಲೆ ತೆರಿಗೆ ಇಲಾಖೆಯಿಂದ ಅವರಿಗೆ ದಾಳಿ ನಡೆಸಬಹುದಿತ್ತಲ್ಲವೇ? 15 ಲಕ್ಷವಲ್ಲದಿದ್ದರೂ ಸಾವಿರ ರೂಪಾಯಿಯನ್ನಾದರೂ ಭಾರತೀಯರ ಖಾತೆಗೆ ಜಮೆ ಮಾಡಬಹುದಿತ್ತಲ್ಲವೇ? ಅದು ಬಿಟ್ಟು ಪೈಂಟರ್‍ಗಳು, ಪ್ಲಂಬರ್‍ಗಳು, ಕೂಲಿ ಕಾರ್ಮಿಕರು, ವೃದ್ಧರು ಸಹಿತ ಬಡ ಭಾರತೀಯರನ್ನು ಎಟಿಎಮ್‍ಗಳ ಎದುರು ನಿಲ್ಲಿಸಿದ್ದೇಕೆ? ಕಪ್ಪು ಹಣ ಯಾರ ಬಳಿ ಇದೆ ಎಂಬುದು ತೆರಿಗೆ ಇಲಾಖೆಗೆ ಗೊತ್ತು ಅಥವಾ ಆ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ತೆರಿಗೆ ಇಲಾಖೆಗಿದೆ. ಉಳ್ಳವರ ಕೈಯಲ್ಲಿರುವ ಕಪ್ಪು ಹಣವನ್ನು ವಶಪಡಿಸುವುದಕ್ಕೆ ಇಲ್ಲದವರನ್ನು ಎಟಿಎಂನ ಮುಂದೆ ಬಿಸಿಲಲ್ಲಿ ತಿಂಗಳುಗಟ್ಟಲೆ ನಿಲ್ಲಿಸಬೇಕೇ? ಒಂದು ಸರಕಾರಕ್ಕೆ ಇಷ್ಟೂ ಗೊತ್ತಾಗಲ್ಲ ಎಂಬುದನ್ನು ಹೇಗೆ ನಂಬುವುದು? ಅಥವಾ ಬೃಹತ್ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ ಪರಿಣಾಮದಿಂದಾಗಿ ಇಂಥದ್ದೊಂದು ನಿರ್ಧಾರಕ್ಕೆ ಸರಕಾರ ಬಂತೇ? ಸಾಲ ಮನ್ನಾದಿಂದಾಗಿ ಖಾಲಿ ಕೊಡದಂತಾಗುವ ಬ್ಯಾಂಕ್‍ಗಳಿಗೆ ಹಣ ತುಂಬಿಸುವುದಕ್ಕಾಗಿ ನೋಟು ಅಮಾನ್ಯದ ದಿಢೀರ್ ನಿರ್ಧಾರಕ್ಕೆ ನರೇಂದ್ರ ಮೋದಿ ಮುಂದಾದರೇ? ಯಾಕೆಂದರೆ, ನವೆಂಬರ್ 8ರ ಬಳಿಕದ ಈ ಸುಮಾರು 50 ದಿನಗಳಲ್ಲಿ ಸರಕಾರ ಮತ್ತು ಆರ್.ಬಿ.ಐ. ಒಟ್ಟು ಸೇರಿ 60ರಷ್ಟು ಸುತ್ತೋಲೆಗಳನ್ನು ಹೊರಡಿಸಿವೆ. ನಿಖರ ಯೋಜನೆ, ಸ್ಪಷ್ಟ ಕಾರ್ಯಸೂಚಿ ಹೊಂದಿರುವ ಯಾವುದೇ ನಿರ್ಧಾರಕ್ಕೆ ಇಷ್ಟೊಂದು ಸುತ್ತೋಲೆಗಳ ಅಗತ್ಯ ಇರುವುದೇ ಇಲ್ಲ. ಇನ್ನೊಂದು ಕಡೆ, ತೆರಿಗೆ ಇಲಾಖೆಯ ದಾಳಿಯಲ್ಲಿ ಕೋಟ್ಯಂತರ ರೂಪಾಯಿಯ ಹೊಸ ನೋಟುಗಳು ಪತ್ತೆಯಾಗಿವೆ. ಇದರರ್ಥ, ಭ್ರಷ್ಟರು ಧಾರಾಳ ಸಂಖ್ಯೆಯಲ್ಲಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ ಎಂದೇ. ತೆರಿಗೆ ಇಲಾಖೆ ದಾಳಿ ಮಾಡಿದ ಕೆಲವು ಎಣಿಕೆಯ ಮಂದಿಯ ಹೊರತಾಗಿ ದಾಳಿಗೊಳಗಾಗದ ಇಂಥವರ ಸಂಖ್ಯೆ ಎಷ್ಟಿರಬಹುದು? ಇಂಥ ಸಾಧ್ಯತೆಯನ್ನು ಸರಕಾರ ಮುಂಚಿತವಾಗಿ ಯಾಕೆ ಕಂಡುಕೊಳ್ಲಲಿಲ್ಲ? ಇದು ಎಡವಟ್ಟೋ ಅಲ್ಲ ಉದ್ದೇಶಪೂರ್ವಕವೋ? ಒಂದು ಕಡೆ, ರಾಜಕೀಯ ಪಕ್ಷಗಳ ವರಮಾನದ ಮೇಲೆ ಪ್ರಧಾನಿಯವರು ಯಾವ ಪ್ರಶ್ನೆಯನ್ನೂ ಎತ್ತುತ್ತಿಲ್ಲ. ಉದ್ಯಮಿಗಳ ಕಪ್ಪುಹಣದ ದೊಡ್ಡದೊಂದು ಮೂಟೆ ಬಿಜೆಪಿ, ಕಾಂಗ್ರೆಸ್ ಸಹಿತ ಪ್ರಮುಖ ರಾಜಕೀಯ ಪಕ್ಷಗಳಿಗೆ ಸಂದಾಯವಾಗುತ್ತಲೇ ಇವೆ. ಕನಿಷ್ಠ ಕಳೆದ 5 ವರ್ಷಗಳಿಂದ ರಾಜಕೀಯ ಪಕ್ಷಗಳಿಗೆ ಸಂದಾಯವಾದ ಮೊತ್ತದ ವಿವರವನ್ನಾದರೂ ನರೇಂದ್ರ ಮೋದಿಯವರು ‘ಬಿಳಿ’ಗೊಳಿಸಬಹುದಿತ್ತಲ್ಲವೇ? ಅದಕ್ಕಾಗಿ ಸರ್ಜಿಕಲ್ ದಾಳಿ ನಡೆಸಬಹುದಿತ್ತಲ್ಲವೇ? ಅದನ್ನು ಬಿಟ್ಟು ಬಡ ಭಾರತೀಯರ ಮೇಲೆ ದಾಳಿ ನಡೆಸಿದ್ದೇಕೆ?
       ನಿಜವಾಗಿ, ರಾಜಕೀಯ ದೇಣಿಗೆಯಲ್ಲಿ ಒಂದು ಬಗೆಯ ಋಣ ಸಂದಾಯವಿರುತ್ತದೆ. ದೇಣಿಗೆ ಪಡೆದ ಪಕ್ಷ ಅಧಿಕಾರಕ್ಕೆ ಬಂದಾಗ ದೇಣಿಗೆ ನೀಡಿದವರ ಬೇಡಿಕೆಗಳನ್ನು ಪೂರೈಸಬೇಕಾದ ಒತ್ತಡಕ್ಕೆ ಒಳಗಾಗುತ್ತದೆ. ನೋಟು ಅಮಾನ್ಯ ಇಂಥದ್ದೊಂದು ಒತ್ತಡದ ಕೂಸೇ? ನರೇಂದ್ರ ಮೋದಿಯವರನ್ನು ದೇಣಿಗೆ ಮತ್ತಿತರ ಒತ್ತಡಗಳು ಕೈಕಟ್ಟಿ ಹಾಕಿದ್ದುವೇ? ಅವರ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವುದಕ್ಕಾಗಿ ನೋಟು ಅಮಾನ್ಯ ದಿಢೀರ್ ಜಾರಿಗೊಂಡಿತೇ? ಪ್ರಧಾನಿಯವರ 50 ದಿನಗಳ ವಾಯಿದೆಯು ಬಹುತೇಕ ಕೊನೆಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಹೆಚ್ಚೆಚ್ಚು ಪ್ರಸ್ತುತಗೊಳ್ಳುತ್ತವೆ. ಇಷ್ಟು ದಿನಗಳಾದರೂ ಬ್ಯಾಂಕುಗಳು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ನಿಬರ್ಂಧಗಳಲ್ಲಿ ಸಡಿಲಿಕೆಯಾಗಿಲ್ಲ. ಬಹುತೇಕ ಎಟಿಎಂಗಳು ಕಾರ್ಯನಿರ್ವಹಿಸುತ್ತಲೂ ಇಲ್ಲ. ಕಳೆದವಾರ ಪಶ್ಚಿಮ ಬಂಗಾಳದ ನಾರು ಉದ್ಯಮ ಸಂಸ್ಥೆಯೊಂದು ಕೆಲಸ ಸ್ಥಗಿತಗೊಳಿಸಿದೆ. ಆ ಮೂಲಕ ನಾಲ್ಕು ಸಾವಿರದಷ್ಟು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಹಾಗಂತ, ಇದು ಮೊದಲ ಪ್ರಕರಣ ಅಲ್ಲ. ಸಾಮಾನ್ಯ ಜನರ ಅನ್ನದ ಬಟ್ಟಲಾಗಿರುವ ಅನೇಕಾರು ಉದ್ಯಮಗಳು, ಚಿಕ್ಕ-ಪುಟ್ಟ ಸಂಸ್ಥೆಗಳು, ವ್ಯಾಪಾರಗಳು ಕೆಲಸ ನಿಲ್ಲಿಸಿವೆ. ತನ್ನದೇ ಹಣವನ್ನು ಪಡಕೊಳ್ಳುವುದಕ್ಕೆ ಕೆಲಸಕ್ಕೆ ರಜೆ ಹಾಕಿ ಸರತಿಯಲ್ಲಿ ನಿಲ್ಲಬೇಕಾದ ಒತ್ತಡವನ್ನು ಬಡವರ ಮೇಲೆ ಹೇರಲಾಗಿದೆ. ಇದು ಸುಧಾರಣಾ ವಿಧಾನವೇ? ಭ್ರಷ್ಟರ ಕೈಯಲ್ಲಿ ಹೊಸ ನೋಟುಗಳು ಕೋಟ್ಯಂತರ ಲೆಕ್ಕದಲ್ಲಿ ಇವೆ. ಬಡವರು ಕನಿಷ್ಠ 500 ರೂಪಾಯಿಗೂ ದಿನವೊಂದನ್ನು ಬ್ಯಾಂಕುಗಳ ಮುಂದೆ ಕೊಲ್ಲಬೇಕಾಗುತ್ತದೆ. ನೋಟು ಅಮಾನ್ಯದ ಉದ್ದೇಶ ಶುದ್ಧಿಯು ಶಂಕೆಗೊಳಗಾಗುವುದು ಈ ಕಾರಣಕ್ಕಾಗಿ. ಲಾಭ ಯಾರಿಗೆ ಪ್ರಧಾನಿಯವರೇ ಎಂದು ಪ್ರಶ್ನಿಸಬೇಕಾಗಿರುವುದೂ ಇದೇ ಕಾರಣದಿಂದ.