Monday, 9 December 2024

ದುಶ್ಯಂತ್ ದವೆ ಕಣ್ಣೀರಲ್ಲಿ ಪ್ರತಿಫಲಿಸಿದ ಭಾರತೀಯ ಮುಸ್ಲಿಮರ ನೋವು





ಮುಸ್ಲಿಮರ ಮೇಲಿನ ದಾಳಿ, ಅಪಪ್ರಚಾರ ಮತ್ತು ವ್ಯವಸ್ಥಿತ ದಬ್ಬಾಳಿಕೆಗೆ ಮರುಗಿ ಈ ದೇಶದ ಪ್ರಸಿದ್ಧ ನ್ಯಾಯವಾದಿ ದುಶ್ಯಂತ್ ದವೆ ಕಣ್ಣೀರು ಹಾಕಿದ್ದಾರೆ. ‘ದ ವಯರ್’ ಡಿಜಿಟಲ್ ಚಾನೆಲ್‌ನಲ್ಲಿ ಕರಣ್ ಥಾಪರ್ ನಡೆಸಿಕೊಡುವ  ಕಾರ್ಯಕ್ರಮದಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಹೀಗೆ ಭಾವುಕರಾಗಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಐವರು  ಮುಸ್ಲಿಮರ ಸಾವಿಗೆ ಕಾರಣವಾದ ಮಸೀದಿ ಸಮೀಕ್ಷೆಯ ಒಳ-ಹೊರಗನ್ನು ವಿಶ್ಲೇಷಿಸುತ್ತಾ ಇಡೀ ಪ್ರಕ್ರಿಯೆಗೆ ನಿವೃತ್ತ  ಸುಪ್ರೀಮ್ ಮುಖ್ಯ ನ್ಯಾಯಾ ಧೀಶ ಚಂದ್ರಚೂಡ್ ಹೇಗೆ ಹೊಣೆಗಾರರಾಗಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ. ಇದೇ  ಸಮಯದಲ್ಲಿ ಇನ್ನೆರಡು ಘಟನೆಗಳೂ ನಡೆದಿವೆ. ಮಾಂಸವನ್ನು ಕೊಂಡೊಯ್ಯುತ್ತಿದ್ದಾರೆಂದು  ಹೇಳಿ ಸುಮಾರು 70  ವರ್ಷದ ಮುಸ್ಲಿಮ್ ವೃದ್ಧರನ್ನು ಮಹಾರಾಷ್ಟ್ರದಲ್ಲಿ ಗುಂಪೊಂದು ಯದ್ವಾತದ್ವಾ ಥಳಿಸಿದೆ. ಇದರ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಪುಟ್ಟ ಬ್ಯಾಗ್‌ನಲ್ಲಿರುವ ಮಾಂಸವನ್ನೂ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಘಟನೆಗಿಂತ ದಿನಗಳ ಮೊದಲು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿಯೋರ್ವರು, ‘ಮುಸ್ಲಿಮರಿಂದ ಮತದಾನದ ಹಕ್ಕ ನ್ನು ಕಸಿದುಕೊಳ್ಳಬೇಕೆಂದು’ ಆಗ್ರಹಿಸಿದ್ದಾರೆ. ಹೀಗೆ ಆಗ್ರಹಿಸಿದ 24 ಗಂಟೆಗಳ ಬಳಿಕ ಅವರು ತಮ್ಮ ಮಾತಿಗೆ ವಿಷಾದ  ಸೂಚಿಸಿದ್ದಾ ರಾದರೂ ಅವರು ಆಡಿರುವ ಮಾತಿನ ವೀಡಿಯೋ ಈ ವಿಷಾದದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ  ಧಾರಾಳ ಹಂಚಿಕೆಯಾಗುತ್ತಿವೆ.

ನಿಜವಾಗಿ, ದುಶ್ಯಂತ್ ದವೆ ಅವರ ಕಣ್ಣೀರು ಈ ದೇಶದ ಕೋಟ್ಯಂತರ ಮುಸ್ಲಿಮರ ಸಂಕಟವನ್ನು ಪ್ರತಿನಿಧಿಸುತ್ತದೆ ಎಂಬ  ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ದವೆ ಅವರು ಮುಸ್ಲಿಮ್ ಸಮುದಾಯದ ವ್ಯಕ್ತಿಯಲ್ಲ, ರಾಜಕಾರಣಿಯಲ್ಲ ಅಥವಾ  ಪ್ರಭುತ್ವ ವಿರೋಧಿ ಸಂಸ್ಥೆಗಳ ಫಲಾನುಭವಿಯೂ ಅಲ್ಲ. ಅವರೇಕೆ ಮಾತಾಡುತ್ತಾ ಭಾವುಕರಾದರು ಅನ್ನುವುದನ್ನು ಸಮಾಜ  ವಿಶ್ಲೇಷಣೆಗೆ ಒಳಪಡಿಸಬೇಕು.

ಮುಸ್ಲಿಮರ ಮೇಲೆ ದಾಳಿ ಮಾಡುವುದನ್ನೇ ಹಿಂದೂ ಧರ್ಮದ ರಕ್ಪಣೆ ಎಂದು ಅಂದುಕೊಂಡಿರುವ ಒಂದು ಗುಂಪು ಮತ್ತು  ಆ ಗುಂಪನ್ನು ರಕ್ಷಿಸುವ ರಾಜಕೀಯ ಪಕ್ಷ ಇವತ್ತು ಅಧಿಕಾರದಲ್ಲಿದೆ. ದೇಶದಾದ್ಯಂತ ಈ ಗುಂಪು ನಡೆಸುತ್ತಿರುವ ಮುಸ್ಲಿಮ್  ದ್ವೇಷಿ ಚಟುವಟಿಕೆಗಳನ್ನು ಈ ರಾಜಕೀಯ ಪಕ್ಷದ ನೇತಾರರು ವಿವಿಧ ನೆಪಗಳನ್ನೊಡ್ಡಿ ಸಮರ್ಥಿಸುತ್ತಿದ್ದಾರೆ. ಇನ್ನೊಂದು  ಕಡೆ ಇದೇ ಗುಂಪಿನ ಜನರು ನ್ಯಾಯಾಲಯಗಳಿಗೆ ಅರ್ಜಿ ಹಾಕಿ ಮಸೀದಿಗಳ ವೈಜ್ಞಾನಿಕ ಸಮೀಕ್ಷೆಗೆ ಮನವಿ  ಮಾಡುತ್ತಿದ್ದಾರೆ. ಎಲ್ಲ ಅರ್ಜಿಗಳಲ್ಲೂ ಒಂದು ಸಾಮಾನ್ಯ ಉಲ್ಲೇಖ ಇರುತ್ತದೆ. ಅದೇನೆಂದರೆ, ಮಂದಿರವನ್ನು ಒಡೆದು  ಮಸೀದಿಯನ್ನು ನಿರ್ಮಿಸಲಾಗಿದೆ ಎಂದು. ಇದರ ಹೊಚ್ಚ ಹೊಸ ಅವತಾರವಾಗಿ ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್  ಚಿಶ್ತಿ ದರ್ಗಾ ಗುರುತಿಸಿಕೊಂಡಿದೆ. ಅದು ಪೂರ್ವದಲ್ಲಿ ಶಿವಮಂದಿರವಾಗಿತ್ತು ಮತ್ತು ಅದನ್ನು ಒಡೆದು ದರ್ಗಾ  ಮಾಡಲಾಗಿದೆ ಎಂದು ವಿಷ್ಣುಗುಪ್ತ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಹಾಗಂತ,

ಇಂಥ ಅರ್ಜಿಗಳ ಕಾನೂನು ಬದ್ಧತೆಯ ಬಗ್ಗೆ ಈ ದೇಶದ ಅಸಂಖ್ಯ ಜನರಲ್ಲಿ ಹಲವು ಗೊಂದಲಗಳಿವೆ. ಬಾಬರಿ ಮಸೀದಿ  ಧ್ವಂಸವಾಗುವುದಕ್ಕಿಂತ  ಎರಡು ತಿಂಗಳ ಮೊದಲು, ‘ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ 1991’ ಎಂಬ ಕಾನೂನನ್ನು  ಈ ದೇಶದ ಪಾರ್ಲಿಮೆಂಟು ಅಂಗೀಕರಿಸಿತ್ತು. ‘1947 ಆಗಸ್ಟ್ 15ರಂದು ಈ ದೇಶದ ಮಸೀದಿ, ಮಂದಿರ, ಚರ್ಚ್  ಸೇರಿದಂತೆ ಆರಾಧನಾ ಕೇಂದ್ರಗಳು ಯಾವ ಸ್ವರೂಪದಲ್ಲಿತ್ತೋ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಮತ್ತು  ಅದರಲ್ಲಿ ಯಾವುದೇ ಮಾರ್ಪಾಡು ಸಲ್ಲ..’ ಎಂಬುದನ್ನು ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಬಾಬರಿ  ಮಸೀದಿಯನ್ನು ಈ ಕಾಯ್ದೆಯ ವ್ಯಾಪ್ತಿಂಯಿಂದ  ಹೊರಗಿಡಲಾಗಿತ್ತು. ಹಾಗಂತ, ಈ ಕಾನೂನು ಊರ್ಜಿತದಲ್ಲಿದ್ದಾಗ್ಯೂ  2023ರಲ್ಲಿ ಗ್ಯಾನ್‌ವಾಪಿ ಮಸೀದಿಯ ಬಗ್ಗೆ ಸಮೀಕ್ಷೆ ನಡೆಯಿತು. ಆ ಬಳಿಕ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು  ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ, ಸಂಭಾಲ್‌ನ ಜಾಮಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಗಳೂ ನಡೆದುವು. ಇದು  ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರವೇ ನಿವೃತ್ತ ಮುಖ್ಯ ನ್ಯಾಯಾಧೀಶ ಚಂದ್ರಚೂಡ್.

ಮಂದಿರವನ್ನು ಒಡೆದು ಗ್ಯಾನ್‌ವಾಪಿ ಮಸೀದಿಯನ್ನು ಕಟ್ಟಲಾಗಿದೆ ಮತ್ತು ಅದರ ದೃಢೀಕರಣಕ್ಕಾಗಿ ಸರ್ವೇ ನಡೆಸಬೇಕು  ಎಂಬ ಅರ್ಜಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಲಾ ಗಿತ್ತು. ಆ ಬಳಿಕ ಅದು ಸುಪ್ರೀಮ್  ಕೋರ್ಟ್ ಗೆ  ಬಂತು. ಅದನ್ನು ವಿಚಾರಣೆಗೆ ಎತ್ತಿಕೊಂಡದ್ದೇ  ಚಂದ್ರಚೂಡ್ ನೇತೃತ್ವದ ವಿಚಾರಣಾ ಪೀಠ. ಅವರು, ‘1991ರ  ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಗೆ ವಿಚಿತ್ರ ವ್ಯಾಖ್ಯಾನ ಬರೆದರು. 'ಈ ಕಾಯ್ದೆಯು 1947 ಆಗಸ್ಟ್ 15ರಂದು ಇದ್ದ  ಆರಾಧನಾ ಕೇಂದ್ರಗಳನ್ನು ಯಥಾಸ್ಥಿತಿಯನ್ನು ಕಾಪಾಡಬೇಕು, ಕಟ್ಟಡಗಳ ಸ್ವರೂಪವನ್ನು ಬದಲಿಸಬಾರದೆಂದು ಹೇಳಿದೆಯೇ  ಹೊರತು ಕಟ್ಟಡದ ಸರ್ವೇ ನಡೆಸಬಾರದೆಂದು ಹೇಳಿಲ್ಲ..’ ಎಂದು ತೀರ್ಪಿತ್ತರು. ಆ ಒಂದು ತೀರ್ಪೇ ಆ ಬಳಿಕ ಸರ್ವೇ  ಬಯಸಿ ಸರಣಿ ಅರ್ಜಿಗಳನ್ನು ಸಲ್ಲಿಸುವುದು ಕಾರಣವಾಯಿತು. ನಿಜವಾಗಿ,

ಚಂದ್ರಚೂಡ್ ಅವರು 1991ರ ಕಾಯ್ದೆಯನ್ನು ಅಕ್ಷರಗಳಲ್ಲಿ ಓದಿದ್ದಾರೆ ಎಂದು ಹೇಳಿದರೇನೇ ಸರಿ. ಅಷ್ಟಕ್ಕೂ, ಆರಾಧನಾ  ಕೇಂದ್ರಗಳ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು, ಬದಲಿಸಬಾರದು ಎಂದು ಹೇಳುವುದರ ಉದ್ದೇಶವೇನು? ಬಾಬರಿ  ಮಸೀದಿಯಂತೆ ಇನ್ನಾವುದೇ ಆರಾಧನಾ ಕೇಂದ್ರವನ್ನೂ ವಿವಾದವನ್ನಾಗಿ ಮಾಡಬಾರದು ಎಂದೇ ಅಲ್ಲವೇ? ಹಾಗಿದ್ದ  ಮೇಲೆ ಸರ್ವೇ ಮಾಡುವುದರ ಅಗತ್ಯವೇನಿದೆ? ಪೂರ್ವ ಕಾಲದಲ್ಲಿ ಒಂದು ಆರಾಧನಾ ಕೇಂದ್ರ ಮಸೀದಿಯಾಗಿತ್ತೋ  ಮಂದಿರವಾಗಿತ್ತೋ ಎಂದು ಖಚಿತಪಡಿಸಿಕೊಂಡು ಆಗುವುದಕ್ಕೇನಿದೆ? ಅದರಿಂದ ಲಾಭ ಏನು? ಆರಾಧನಾ ಕೇಂದ್ರಗಳ  ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕಿರುವ ಸರಿಯಾದ ವಿಧಾನ ಏನೆಂದರೆ, ಅವುಗಳ ಸರ್ವೇ ನಡೆಸದೇ ಇರುವುದು.  ಸರ್ವೇಗೆ ಅವಕಾಶ ಕೊಡುವುದೆಂದರೆ, ವಿವಾದಕ್ಕೆ ಅವಕಾಶ ಮಾಡಿಕೊಡುವುದು ಎಂದೇ ಅರ್ಥ. ‘1991ರ ಆರಾಧನಾ  ಕೇಂದ್ರಗಳ ಕಾಯ್ದೆ’ಯ ಆಶಯ ಇದುವೇ ಆಗಿತ್ತು ಅನ್ನುವುದು ಅದನ್ನು ಓದಿದವರಿಗೆ ಖಂಡಿತ ಗೊತ್ತಾಗುತ್ತದೆ. ಆದರೆ  ಅದರ ಮೇಲೆ ಸೂಕ್ಷ್ಮದರ್ಶಕವನ್ನು ಹಿಡಿದು, ಅದರಲ್ಲಿರುವ ಲೋಪವನ್ನು ಹುಡುಕುವುದೇ ಉದ್ದೇಶವಾದರೆ ಏನಾದರೊಂದು  ಲೋಪ ಸಿಕ್ಕೇ ಸಿಗುತ್ತದೆ. ಚಂದ್ರಚೂಡ್ ಅವರು ಕಾನೂನಿನಲ್ಲಿರುವ ಇಂಥ ಲೋಪಗಳನ್ನೇ ಎತ್ತಿಕೊಂಡು ಮಸೀದಿ  ಸಮೀಕ್ಷೆಗೆ ಅನುಮತಿ ನೀಡಿದ್ದಾರೆ. ಗ್ಯಾನ್‌ವಾಪಿಗೆ ಸಂಬಂಧಿಸಿ ಅವರು ನೀಡಿರುವ ಆ ಒಂದು ಆದೇಶವು ಕಂಡ ಕಂಡ  ಮಸೀದಿಯನ್ನು ಮಂದಿರ ಎಂದು ವಾದಿಸುವ ಮತ್ತು ಸರ್ವೇಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕುವ ಲ್ಲಿವರೆಗೆ ತಲುಪಿದೆ. ಅಷ್ಟಕ್ಕೂ,

ಈ ಅರ್ಜಿ ಹಾಕುವ ಪ್ರಕ್ರಿಯೆಯ ಹಿಂದೆ ಒಂದು ನಿರ್ದಿಷ್ಟ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಅನ್ನುವುದಕ್ಕೆ ಗ್ಯಾ ನ್‌ವಾಪಿಯಿಂದ ಸಂಭಾಲ್ ಜಾಮಾ ಮಸೀದಿಯ ವರೆಗೆ ಅರ್ಜಿ ಹಾಕಿದವರ ವಿವರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.  ಹರಿಶಂಕರ್ ಜೈನ್ ಮತ್ತು ಅವರ ಮಗ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಎಂಬವರೇ ಈ ಎಲ್ಲ ಮಸೀದಿಗಳ  ಸಮೀಕ್ಷೆಯನ್ನು ಕೋರಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ಹಾಕಿದವರಾಗಿದ್ದಾರೆ. ಈ ಎಲ್ಲ ಮಸೀದಿಗಳ  ಪೂರ್ವಾಪರಗಳ ಬಗ್ಗೆ ಈ ಇಬ್ಬರಲ್ಲಿ ಇಷ್ಟೊಂದು ಆಸಕ್ತಿ ಹುಟ್ಟಿದ್ದು ಹೇಗೆ? ಯಾವುದೇ ಕಾನೂನು ಪ್ರಕ್ರಿಯೆಗೂ ದುಬಾರಿ  ಹಣದ ಅಗತ್ಯ ಇರುತ್ತದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರಕರಣ ಒಂದು ವೇಳೆ ಸುಪ್ರೀಮ್  ಕೋರ್ಟ್ ವರೆಗೆ ಸಾಗಿದರೆ ಅಲ್ಲಿಯವರೆಗೆ ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಈ ಇಬ್ಬರು ಇಷ್ಟೊಂದು ಹಣವನ್ನು ಖರ್ಚು ಮಾಡುವುದಕ್ಕೆ ಯಾವ ಕಾರಣಕ್ಕಾಗಿ ಸಿದ್ಧವಾಗಿದ್ದಾರೆ? ಇವರಿಗೆ ಈ ಹಣವನ್ನು ಒದಗಿಸುವ ಬೇರೆ  ಶಕ್ತಿಗಳಿವೆಯೇ? ಅವರು ಯಾರು? ಅವರ ಉದ್ದೇಶ ಏನು? ಅವರೇಕೆ ಮಸೀದಿಗಳ ಹಿಂದೆ ಬಿದ್ದಿದ್ದಾರೆ?... ಇಂಥ ಅನೇಕ  ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಅಂದಹಾಗೆ,

ದುಶ್ಯಂತ್  ದವೆ ಅವರ ಕಣ್ಣೀರು ಚಂದ್ರಚೂಡ್ ಅವರನ್ನು ತಲುಪಿದೆಯೋ ಗೊತ್ತಿಲ್ಲ. ಒಂದುವೇಳೆ ತಲುಪಿದ್ದರೂ ಅವರಲ್ಲಿ  ತಮ್ಮ ತೀರ್ಪಿಗಾಗಿ ಪಶ್ಚಾತ್ತಾಪ ಭಾವ ಮೂಡಿಸಿದೆಯೋ, ಅದೂ ಗೊತ್ತಿಲ್ಲ. ಆದರೆ, ಈ ದೇಶದ ಮುಸ್ಲಿಮರ ಸಹಿತ ಶಾಂತಿ,  ಸಾಮರಸ್ಯವನ್ನು ಬಯಸುವ ದೊಡ್ಡದೊಂದು ಜನಸಮೂಹ ಅವರ ಈ ತೀರ್ಪನ್ನು ಎಂದೂ ಮರೆಯಲಾರದು ಎಂಬುದು  ನಿಜ. ಹಿಂದೂ ಮುಸ್ಲಿಮರನ್ನು ವಿಭಜಿಸಿ, ಧರ್ಮ ದ್ವೇಷವನ್ನು ಸದಾ ಜೀವಂತದಲ್ಲಿಡ ಬಯಸಿರುವ ಗುಂಪಿಗೆ ಅತ್ಯುತ್ತಮ  ಅಸ್ತ್ರವನ್ನು ನೀಡಿದ ಅವರನ್ನು ಇತಿಹಾಸ ಎಂದೂ ಕ್ಷಮಿಸದು.

Monday, 2 December 2024

ಕಡುಕೋಳ: ಮತಾಂಧರ ವಿರುದ್ಧ ಯುಎಪಿಎ ದಾಖಲಿಸಿ



ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡುಕೋಳ ಗ್ರಾಮದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಮಾಧ್ಯಮಗಳು  ಬೆಳಕು ಚೆಲ್ಲಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಲ್ಲೇನು ನಡೆದಿದೆ ಎಂಬುದು ಕಡುಕೋಳವನ್ನು ಬಿಟ್ಟರೆ ರಾಜ್ಯದ ಉಳಿದ  ಭಾಗಗಳಿಗೆ ಬಹಳ ಕಡಿಮೆಯಷ್ಟೇ ಗೊತ್ತಿದೆ. ಇಲ್ಲಿಯ ಸುಮಾರು 70ರಷ್ಟು ಮುಸ್ಲಿಮ್ ಕುಟುಂಬಗಳು ಊರು ತೊರೆದಿವೆ.  ಘಟನೆ ನಡೆದು ಎರಡು ವಾರಗಳು ಕಳೆದರೂ ಈ ಕುಟುಂಬಗಳು ಮರಳಿ ತಮ್ಮ ಮನೆಗಳಿಗೆ ಮರಳಲು ಹೆದರುತ್ತಿವೆ.  ಎರಡು ವಾರಗಳ ಹಿಂದೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಥಳಿಸಿದವರು, ದಾಂಧಲೆ ನಡೆಸಿದವರು ಮತ್ತು ಸೊತ್ತುಗಳನ್ನು  ನಾಶ ಮಾಡಿದವರು ಮರಳಿ ಬಂದು ಅದನ್ನೇ ಪುನರಾವರ್ತಿಸಲಾರರು ಎಂದು ಹೇಳುವುದು ಹೇಗೆ ಎಂಬ ಭಯ ಅವರಲ್ಲಿ  ಆವರಿಸಿದೆ. ಸನ್ಮಾರ್ಗ ತಂಡ ಆ ಇಡೀ ಪ್ರದೇಶಕ್ಕೆ ಭೇಟಿ ಕೊಟ್ಟು ಸಂತ್ರಸ್ತರನ್ನು ಮಾತನಾಡಿಸಿದಾಗ ಸಿಕ್ಕ ಮಾಹಿತಿಗಳು  ಆಘಾತಕಾರಿಯಾಗಿವೆ. ತಾವೇಕೆ ದಾಳಿಗೊಳಗಾಗಿದ್ದೇವೆ ಎಂಬ ಸ್ಪಷ್ಟ ತಿಳುವಳಿಕೆಯೇ ಸಂತ್ರಸ್ತರಿಗಿಲ್ಲ. ಯಾವ ತಪ್ಪೂ  ಮಾಡದೇ ದಾಳಿಗೊಳಗಾಗುವುದೆಂದರೆ, ಭವಿಷ್ಯವೇನು ಎಂಬ ಆತಂಕ ಅವರೆಲ್ಲರನ್ನೂ ಕಾಡತೊಡಗಿದೆ. ಮುಸ್ಲಿಮ್  ದ್ವೇಷವನ್ನು ಅಮಲಾಗಿ ಏರಿಸಿಕೊಂಡವರನ್ನು ಮಟ್ಟ ಹಾಕದಿದ್ದರೆ ರಾಜ್ಯ ಎಂಥ ಅನಾಹುತಕಾರಿ ಪರಿಸ್ಥಿತಿಗೆ  ಸಾಕ್ಷಿಯಾಗಬೇಕಾದೀತು ಎಂಬುದಕ್ಕೆ ಈ ಕಡುಕೋಳ ಒಂದು ಪುರಾವೆ ಅನ್ನಬಹುದು.

ವಕ್ಫ್ ಹೆಸರಲ್ಲಿ ರಾಜ್ಯದಲ್ಲಿ ಮೊದಲ ಹಿಂಸಾಚಾರ ನಡೆದ ಗ್ರಾಮ ಕಡುಕೋಳ. ಹಾಗಂತ, ಈ ಗ್ರಾಮದ ರೈತರಿಗಾಗಲಿ  ಜಮೀನುದಾರರಿಗಾಗಲಿ ಕಂದಾಯ ಇಲಾಖೆಯಿಂದ ನೋಟೀಸೇ ಬಂದಿಲ್ಲ. ನಿಮ್ಮ ಜಮೀನು ವಕ್ಫ್ ಗೆ  ಸೇರಿದ್ದಾಗಿದೆ ಎಂದು  ಯಾವ ಮುಸ್ಲಿಂ ರಾಜಕಾರಣಿಯೂ ಕಡುಕೋಳ ಗ್ರಾಮದ ರೈತರಲ್ಲಿ ಹೇಳಿಲ್ಲ. ಯಾವ ಅಧಿಕಾರಿಯೂ ಅಲ್ಲಿ ಸರ್ವೇ ನಡೆಸಿಲ್ಲ.  ನಿಮ್ಮನ್ನು ಒಕ್ಕಲೆಬ್ಬಿಸುವುದಾಗಿ ಯಾವ ಮುಸ್ಲಿಮರೂ ರೈತರಿಗೆ ಹೇಳಿಲ್ಲ. ಮಸೀದಿಯಿಂದ ಅಂಥದ್ದೊಂದು  ಘೋಷಣೆಯೂ  ನಡೆದಿಲ್ಲ. ಹೀಗಿದ್ದ ಮೇಲೂ ಏಕಾಏಕಿ ಮುಸ್ಲಿಮ್ ಮನೆಗಳಿಗೆ ದಾಳಿಯಾಗಲು ಕಾರಣವೇನು? ಬಿಜೆಪಿ ಪ್ರಣೀತ  ವಿಚಾರಧಾರೆ ಎಷ್ಟು ಮನುಷ್ಯ ವಿರೋಧಿ ಅನ್ನುವುದನ್ನೇ ಇಲ್ಲಿಯ ಹಿಂಸಾಚಾರ ಹೇಳುತ್ತದೆ. ನಿಮ್ಮ ಭೂಮಿ ವಕ್ಫ್  ಇಲಾಖೆಯ ಪಾಲಾಗುತ್ತದೆ ಎಂಬ ಭಯವನ್ನು ಬಿಜೆಪಿ ಈ ಕಡುಕೋಳದ ಹಿಂದೂಗಳಲ್ಲಿ ಮೂಡಿಸಿದೆ. ಮುಸ್ಲಿಮರನ್ನು  ಹಿಂದೂಗಳ ವೈರಿಗಳಂತೆ ನಿರಂತರ ಬಿಂಬಿಸತೊಡಗಿದೆ. ವಿಜಯಪುರದಲ್ಲಿ ರೈತರಿಗೆ ನೀಡಲಾದ ನೋಟೀಸನ್ನು  ಎತ್ತಿಕೊಂಡು ಹಿಂದೂಗಳಲ್ಲಿ ಅಸ್ತಿತ್ವದ ಭಯವನ್ನು ಹುಟ್ಟು ಹಾಕಿದೆ. ಮುಸ್ಲಿಮರು ನಿಮ್ಮ ಜಮೀನು ಕಸಿಯಲು ಹೊಂಚು  ಹಾಕುತ್ತಿರುವ ವೈರಿಗಳು ಎಂಬಂತೆ  ಬಿಂಬಿಸಿದೆ. ಈ ಎಲ್ಲದರ ಒಟ್ಟು ಪರಿಣಾಮವೇ ಈ ದಾಳಿ ಎಂಬುದು ಅಲ್ಲಿಯ ಒಟ್ಟು  ಪರಿಸ್ಥಿತಿಯನ್ನು ಅವಲೋಕಿಸಿದಾಗ ಅರಿವಾಗುತ್ತದೆ. ಅಲ್ಲಿನ ಮಸೀದಿಯ ಅಧ್ಯಕ್ಷ ಮೌಲಾಸಾಬ್ ನದಾಫ್ ಎಂಬ ಸರಿಯಾಗಿ  ದೃಷ್ಟಿಯೂ ಕಾಣಿಸದ ವಯೋ ವೃದ್ಧರನ್ನೂ ಅವರ ಮನೆಯ ಮಹಿಳೆಯರು, ಮಕ್ಕಳನ್ನೂ ಕ್ರೂರಿಗಳು ಥಳಿಸಿದ್ದಾರೆ. ಅಪ್ಪಟ  ಕೃಷಿಕರಾದ ಮತ್ತು ಮನೆಯಲ್ಲಿ ಗೋವುಗಳನ್ನು ಸಾಕುತ್ತಿರುವ ಅವರಿಗೆ ಈ ಗಾಯ ಬದುಕನ್ನಿಡೀ ಕಾಡಲಿದೆ ಎಂಬುದಕ್ಕೆ  ಅವರ ನೋವುಭರಿತ ಮಾತುಗಳೇ ಸಾಕ್ಷಿ. ಹಲವು ಮನೆಗಳ ಮೇಲೆ ದಾಳಿಯಾಗಿವೆ. ಧರ್ಮದ್ವೇಷಿ ಅಮಲನ್ನು  ಏರಿಸಿಕೊಂಡವರ ದಾಳಿಗೆ ಒಂದಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಮನೆ, ಪೀಠೋಪಕರಣಗಳು ನಾಶವಾಗಿವೆ. ಎರಡು  ವಾರಗಳಿಂದ ಇಲ್ಲಿನ ಮಸೀದಿ ಬಾಗಿಲು ಮುಚ್ಚಿದೆ. ಈ ಎಲ್ಲವೂ ಯಾಕೆ ನಡೆಯಿತು ಎಂಬ ಪ್ರಶ್ನೆಗೆ ವಕ್ಫ್ ಅನ್ನು  ತೋರಿಸಲಾಗುತ್ತದೆ. ಅಂದಹಾಗೆ,

ಈ ವಕ್ಫ್ ವಿಷಯಕ್ಕೂ ಮುಸ್ಲಿಮರಿಗೂ ಏನು ಸಂಬಂಧ? ವಿಜಯಪುರದ ರೈತರಿಗಾಗಲಿ ಇತರರಿಗಾಗಲಿ ಮುಸ್ಲಿಮರು  ನೋಟೀಸು ಕಳುಹಿಸಿದ್ದಾರಾ? ಅಥವಾ ನೋಟೀಸು ಕಳುಹಿಸುವಂತೆ ಪ್ರತಿಭಟನೆ ನಡೆಸಿದ್ದಾರಾ? ರೈತರ ಜಮೀನಿನಲ್ಲಿ  ನಿಂತು ಇದು ನಮ್ಮದು ಎಂದು ಹಕ್ಕು ಮಂಡಿಸಿದ್ದಾರಾ? ಮುಸ್ಲಿಮರು ತಮ್ಮ ಪಾಡಿಗೆ ತಾವು ಬದುಕುತ್ತಿರುವಾಗ ವಕ್ಫ್ನ  ಹೆಸರಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಿರುವುದೇಕೆ? ಇದನ್ನು ವಕ್ಫ್ ಪ್ರೇರಿತ ದಾಳಿ ಎನ್ನುವುದು ಎಷ್ಟು ಸರಿ? ಇದು  ಶುದ್ಧ ರಾಜಕೀಯ ಪ್ರೇರಿತ ಧರ್ಮದ್ವೇಷದ ದಾಳಿಯಲ್ಲವೇ? ಮುಸ್ಲಿಮರನ್ನು ಹೇಗೆ ನಡೆಸಿಕೊಂಡರೂ ನಡೆಯುತ್ತದೆ ಎಂಬ  ಭಂಡ ಧೈರ್ಯದ ಕೃತ್ಯವಲ್ಲವೇ? ರಾಜ್ಯ ಸರಕಾರ ಯಾಕೆ ಈ ಘಟನೆಯನ್ನು ಕ್ಷುಲ್ಲಕವಾಗಿ ಕಂಡಿದೆ? ದೂರು ಕೊಡಲೂ  ಹಿಂಜರಿಯುವ ಈ ಸಂತ್ರಸ್ತರ ಬೆನ್ನಿಗೆ ನಿಂತು ಮತಾಂಧರನ್ನು ಮಟ್ಟ ಹಾಕಬೇಕಾದ ಸರಕಾರ ಯಾಕೆ ತೇಪೆ ಹಚ್ಚುವ  ಪ್ರಯತ್ನಕ್ಕಿಳಿದಿದೆ? ಸಂತ್ರಸ್ತರಿಗೆ, ಒಮ್ಮೆ ಮನೆಗೆ ಮರಳಿದರೆ ಸಾಕು ಎಂಬ ಅನಿವಾರ್ಯತೆಯಿದೆ. ಯಾಕೆಂದರೆ, ಅವರೆಲ್ಲ  ದುಡಿದು ತಿನ್ನುವ ಬಡಪಾಯಿಗಳು. ಆದರೆ, ಇಂಥ ಅನಿವಾರ್ಯತೆಗಳನ್ನೇ ಮತಾಂಧರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ರಾಜಿ ಮಾತುಕತೆಯಲ್ಲಿ ಮುಗಿಸುವ ಒತ್ತಡ ಹೇರತೊಡಗುತ್ತಾರೆ. ನಿರ್ದಿಷ್ಟ ರಾಜಕೀಯ ಚಿಂತನೆಯೇ ಇಂಥ ಕ್ರೌರ್ಯಗಳ  ಹಿಂದಿರುವುದರಿAದ ರಾಜಕೀಯ ಒತ್ತಡಗಳೂ ಬೀಳುತ್ತವೆ. ಅಂತಿಮವಾಗಿ,

ದೂರು ದಾಖಲಾಗಿಲ್ಲ ಎಂಬ ಪಿಳ್ಳೆ ನೆಪ ಇಟ್ಟುಕೊಂಡು ಸರಕಾರ ತಪ್ಪಿಸಿಕೊಂಡರೆ, ಊರಿಗೆ ಮರಳಬೇಕಾದರೆ ದೂರು  ದಾಖಲಿಸಬೇಡಿ ಎಂಬ ಒತ್ತಡ ಹಾಕಿ ಈ ದುರುಳರು ತಪ್ಪಿಸಿಕೊಳ್ಳುತ್ತಾರೆ. ಇದೇ ಧೈರ್ಯದಿಂದ ಮತ್ತೊಂದು ಮತಾಂಧ  ಕೃತ್ಯಕ್ಕೆ ಸಂಚು ನಡೆಸುತ್ತಾರೆ. ಕಾಂಗ್ರೆಸ್ ಬಂದರೂ ಬಿಜೆಪಿ ಬಂದರೂ ಮುಸ್ಲಿಮರ ಕುರಿತಾದ ಧೋರಣೆಯಲ್ಲಿ ಅಂಥ  ವ್ಯತ್ಯಾಸವೇನಿಲ್ಲ ಎಂಬ ಆರೋಪಕ್ಕೆ ಪೂರಕವಾಗಿಯೇ ಸರಕಾರ ನಡಕೊಳ್ಳುತ್ತಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ರೈತರಿಗೆ ನೋಟೀಸು ಕಳುಹಿಸಿರುವುದು ಸರಕಾರದ ಅಧೀನದಲ್ಲಿರುವ ಕಂದಾಯ ಇಲಾಖೆ. ವಕ್ಫ್ ಸಚಿವಾಲಯ  ಇರುವುದು ಸರಕಾರದ ಅಧೀನದಲ್ಲಿ. ವಕ್ಫ್ ಸಚಿವರ ನೇಮಕದಿಂದ ಹಿಡಿದು ವಕ್ಫ್ ಇಲಾಖೆ, ಕಂದಾಯ ಇಲಾಖೆ ಸಹಿತ  ಈ ಇಡೀ ಪ್ರಕ್ರಿಯೆ ನಡೆಯುವುದೂ ಸರಕಾರದ ಅಧೀನದಲ್ಲೇ. ವಕ್ಫ್ ಇಲಾಖೆಯಲ್ಲಿ ವಕ್ಫ್ ಟ್ರಿಬ್ಯೂನಲ್ ಎಂಬ  ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ರಚಿಸಿರುವುದೂ ಈ ದೇಶದ್ದೇ  ಸರಕಾರಗಳು. ಹೈಕೋರ್ಟು ನ್ಯಾಯಾಧೀಶರೇ ಈ  ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ. ಈ ಟ್ರಿಬ್ಯೂನಲ್ ಕೂಡಾ ಸಂವಿಧಾನದ ಅಡಿಯಲ್ಲೇ  ಇದೆ. ಈ  ದೇಶದಲ್ಲಿ ವಕ್ಫ್ ನಿಯಮಾವಳಿಯನ್ನು ಮುಸ್ಲಿಮರು ರಚಿಸಿಲ್ಲ. ಅದನ್ನು ರಚಿಸಿದ್ದು ಮತ್ತು ಪಾರ್ಲಿಮೆಂಟ್‌ನಲ್ಲಿ  ಅಂಗೀಕರಿಸಿಕೊಂಡದ್ದೂ ಇಲ್ಲಿನ ಸರಕಾರಗಳೇ. ಈವರೆಗಿನ ಕಾಂಗ್ರೆಸ್ ಸರಕಾರ, ಬಿಜೆಪಿ ಸರಕಾರ, ಜನತಾ ಸರಕಾರ ಮತ್ತು  ಇನ್ನಿತರ ಸರಕಾರಗಳು ಈ ವಕ್ಫ್ ನಿಯಮಾವಳಿಗಳನ್ನು ಒಪ್ಪಿಕೊಳ್ಳುತ್ತಾ ಅಗತ್ಯ ಕಂಡಾಗ ತಿದ್ದುಪಡಿ ಮಾಡಿಕೊಳ್ಳುತ್ತಾ ಮತ್ತು  ಜಾರಿಮಾಡಿಕೊಳ್ಳುತ್ತಾ ಬಂದಿವೆ. ಈ ಎಲ್ಲದರಲ್ಲೂ ಮುಸ್ಲಿಮರ ಪಾತ್ರ ತೀರಾತೀರಾ ಅತ್ಯಲ್ಪ. ಶಾಸಕಾಂಗ, ನ್ಯಾಯಾಂಗ  ಮತ್ತು ಕಾರ್ಯಾಂಗಗಳಲ್ಲಿ ಜುಜುಬಿ ಅನ್ನುವಷ್ಟೇ ಪ್ರಾತಿನಿಧ್ಯವಿರುವ ಮತ್ತು ಏನೇನೂ ಪ್ರಭಾವಿಯಾಗಿಲ್ಲದ ಮುಸ್ಲಿಮ್  ಸಮುದಾಯಕ್ಕೆ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯವೂ ಇಲ್ಲ. ಇಷ್ಟೆಲ್ಲಾ ಇದ್ದೂ ವಕ್ಫ್ ಹೆಸರಲ್ಲಿ ಬಿಜೆಪಿ  ಮತ್ತು ಅವರ ಬೆಂಬಲಿಗರು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ ದಿನಾ ಪ್ರಚೋದನೆ ಮಾಡುತ್ತಿ ರುವುದೆಂದರೆ ಏನರ್ಥ?  ಮುಸ್ಲಿಮರನ್ನು ತೋರಿಸಿ ಹೊಟ್ಟೆ ಹೊರೆಯುವುದಕ್ಕೆ ಇವರಿಗೆ ನಾಚಿಕೆಯೂ ಆಗುವುದಿಲ್ಲವೇ? ಈ ದರಿದ್ರ ರಾಜಕೀಯಕ್ಕೆ  ಸಾಮಾನ್ಯ ಜನರು ಯಾಕೆ ಇನ್ನೂ ಮರುಳಾಗುತ್ತಿದ್ದಾರೆ?

ಕಡುಕೋಳದಲ್ಲಿ ಏನು ನಡೆದಿದೆಯೋ ಅದು ಈ ರಾಜ್ಯದಲ್ಲಿ ಧರ್ಮದ್ವೇಷಕ್ಕೆ ಇನ್ನೂ ಮಾರುಕಟ್ಟೆಯಿದೆ ಎಂಬುದನ್ನು ಸಾರಿ  ಹೇಳಿದ ಪ್ರಸಂಗವಾಗಿದೆ. ಮುಸ್ಲಿಮರ ಮೇಲೆ ದಾಳಿ ಮಾಡುವುದಕ್ಕೆ ಕಾರಣಗಳೇ ಬೇಕಿಲ್ಲ ಎಂದು ಘಂಟಾಘೋಷವಾಗಿ  ಸಾರಿದ ಸಂದರ್ಭವಾಗಿದೆ. ಮುಸ್ಲಿಮರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಲ್ಲೆವು, ಅಗತ್ಯ ಕಂಡರೆ ಊರಿಂದಲೇ  ಓಡಿಸಬಲ್ಲೆವು ಎಂಬ ಕಾಡು ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿ ತೋರಿಸಿದ ಘಟನೆಯಾಗಿದೆ. ಇದು  ಮುಂದುವರಿಯಬಾರದು. ಕಡುಕೋಳದ ಸಂತ್ರಸ್ತರು ದೂರು ಕೊಟ್ಟಿದ್ದಾರೋ ಇಲ್ಲವೋ, ಆದರೆ ಮುಸ್ಲಿಮರನ್ನು ಊರಿ ನಿಂದ ಪಲಾಯನ ಮಾಡುವಂತೆ ದಾಳಿ ನಡೆಸಲಾದದ್ದು ನಿಜ. ಅವರು ಸಂತ್ರಸ್ತ ರಾಗಿ ಪಕ್ಕದ ಊರಲ್ಲಿ ನೆಲೆಸಿರುವುದೂ  ನಿಜ. ಆದ್ದರಿಂದ, ಇಂಥ ಸ್ಥಿತಿಗೆ ಕಾರಣರಾದ ಮತಾಂಧರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಬೇಕು. ದೇಶದಲ್ಲಿ ಗಲಭೆ ಎಬ್ಬಿಸಲು  ಪ್ರಚೋದಿಸುವ ಯುಎಪಿಎ ಕಾನೂನಿನಡಿ ಕೇಸು ದಾಖಲಿಸಿ ಪಾಠ ಕಲಿಸಬೇಕು.

Monday, 11 November 2024

ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿದ್ದೂ ಹಿಂದೂ ಅಪಾಯದಲ್ಲಿರುವುದೇಕೆ?

 




ಬಿಜೆಪಿ ಮತ್ತು ಅವರ ಬೆಂಬಲಿಗ ಪಡೆ ಹರಡುತ್ತಾ ಇರುವ ಸುಳ್ಳುಗಳು ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ  ಬೀರುತ್ತಿದೆ ಅನ್ನುವುದಕ್ಕೆ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮವೇ ಸಾಕ್ಷಿ. ಈ ಗ್ರಾಮದ 15 ಸಾವಿರ ಎಕ್ರೆ ಭೂಮಿಯನ್ನು ಸರಕಾರ ವಕ್ಫ್ ಇಲಾಖೆಗೆ ಬರೆದು ಕೊಡಲು ಹೊರಟಿದೆ ಎಂಬ ಸುಳ್ಳನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕ  ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರು ಹಬ್ಬಿಸಿದ್ದಾರೆ. ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಈ  ವಿಜಯಪುರಕ್ಕೆ ಭೇಟಿ ಕೊಟ್ಟು ವಕ್ಫ್ ಅದಾಲತ್‌ನಲ್ಲಿ ಭಾಗಿಯಾದುದು ಮತ್ತು ವಕ್ಫ್ ಭೂಮಿಯ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನೇ ಬಿಜೆಪಿ ನಾಯಕರು ತಮ್ಮ ಸುಳ್ಳಿನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಇದನ್ನು  ನಂಬಿದ ಸ್ಥಳೀಯ ರೈತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಂದಾಯ ಇಲಾಖೆಯಿಂದ ನೋಟೀಸು ಬಂದಿದ್ದು, ಅದರಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಬರೆದಿರುವುದಾಗಿ ಅವರು ಹೇಳಿದ್ದಾರೆ. ರೈತರನ್ನು ಹೀಗೆ  ಪ್ರಚೋದಿಸಿದ ಬಿಜೆಪಿ, ಸರಣಿ ಹೇಳಿಕೆಗಳನ್ನೂ ನೀಡಿ ರೈತರ ಭೂಮಿ ವಕ್ಫ್ ಪಾಲಾಗಲಿದೆ ಎಂಬ ಭೀತಿಯನ್ನು ಹುಟ್ಟು  ಹಾಕಿದೆ. ಇದಾದ ಬಳಿಕ ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ‘ಯಾವುದೇ ರೈತರಿಗೆ ಸರಕಾರ ನೋಟೀಸು ನೀಡಿಲ್ಲ’  ಎಂದು ಅವರು ಹೇಳಿದ್ದಾರೆ. ಕಂದಾಯ ಇಲಾಖೆಗೆ ಜಮೀನು ವರ್ಗಾವಣೆ ಮಾಡುವ ಅಧಿಕಾರವೇ ಇಲ್ಲ ಎಂದೂ ಅವರು  ಹೇಳಿದ್ದಾರೆ. ಇನ್ನು, ಯಾರಿಗೇ ಆಗಲಿ ನೋಟೀಸು ಬರುವುದು ಅಪರಾಧ ಅಲ್ಲ, ನಿಮ್ಮಲ್ಲಿರುವ ದಾಖಲೆಯನ್ನು ಮಂಡಿಸಿ  ಭೂಮಿಯ ಒಡೆತನವನ್ನು ಜಾಹೀರುಪಡಿಸಿದರೆ ಎಲ್ಲವೂ ಮುಗಿಯುತ್ತದೆ...  ಎಂದವರು ಹೇಳಿದ್ದಾರೆ. ಇದರ ಬೆನ್ನಿಗೇ ಸಚಿವ  ಎಂ.ಬಿ. ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೊನವಾಡದಲ್ಲಿ 11 ಎಕ್ರೆ ವಕ್ಫ್ ಭೂಮಿ ಮಾತ್ರವೇ ಇದ್ದು, ಇದರ ಪೈಕಿ 10  ಎಕ್ರೆ ಜಾಗದಲ್ಲಿ ಕಬರಸ್ತಾನ ಮತ್ತು ಮಸೀದಿಗಳಿವೆ ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ, ಹೊನವಾಡ ಎಂಬ ಗ್ರಾಮದಲ್ಲಿ 15 ಸಾವಿರ ಎಕರೆ ಭೂಮಿ ಇರುವುದೇ ಅನುಮಾನ. ಯಾವುದೇ ಗ್ರಾಮ 15  ಸಾವಿರ ಎಕರೆಯಷ್ಟು ವಿಸ್ತಾರವಾಗುವುದಕ್ಕೆ ಸಾಧ್ಯವೂ ಇಲ್ಲ. ಇನ್ನು, ಅಕ್ಕಪಕ್ಕದ ಪ್ರದೇಶಗಳನ್ನೆಲ್ಲ ಸೇರಿಸಿಕೊಂಡೇ ಈ ಹೊನವಾಡ ಗ್ರಾಮವನ್ನು ಲೆಕ್ಕ ಹಾಕಿದರೂ 15 ಸಾವಿರ ಎಕ್ರೆ ಭೂಮಿ ಇರುವುದು ಕಷ್ಟಸಾಧ್ಯ. ಬಿಜೆಪಿಯ ಆರೋಪಗಳು  ಎಂದೂ ವಾಸ್ತವವನ್ನು ಆಧರಿಸಿ ಇರುವುದಿಲ್ಲ ಅನ್ನುವುದಕ್ಕೆ ಇದೊಂದು ಸಾಕ್ಷ್ಯ  ಅಷ್ಟೇ. ಈಗಿನ ಸಿದ್ದರಾಮಯ್ಯ ಸರಕಾರಕ್ಕಿಂತ  ಮೊದಲು ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗಲೂ ಈ ಹೊನವಾಡ ಗ್ರಾಮ ಇತ್ತು ಮತ್ತು ವಕ್ಫ್ ಇಲಾಖೆ, ಕಂದಾಯ  ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಯೂ ಇತ್ತು. ಅಲ್ಲದೇ, ಹೊನವಾಡದಲ್ಲಿ ಎಷ್ಟು ವಕ್ಫ್ ಭೂಮಿ ಇದೆ ಎಂಬ ಬಗ್ಗೆ  ಆಗಲೇ ಗಜೆಟೆಡ್ ವರದಿಯೂ ಇತ್ತು. ಒಂದುವೇಳೆ, ರೈತರ ಭೂಮಿಯನ್ನು ವಕ್ಫ್ ಇಲಾಖೆ ಕಬಳಿಸುತ್ತಿದೆ ಎಂದಾದರೆ,  ಅದನ್ನು ಆಗಲೇ ತಡೆಯಬಹುದಿತ್ತಲ್ಲವೇ? ಹೊನವಾಡ ಸಹಿತ ಇಡೀ ವಿಜಯಪುರದಲ್ಲಿ ಎಷ್ಟು ವಕ್ಫ್ ಭೂಮಿಯಿದೆಯೋ  ಅವು ಯಾವುವೂ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ದಿಢೀರನೇ ಉದ್ಭವವಾಗಿರುವುದೇನಲ್ಲವಲ್ಲ. ರಾತ್ರಿ  ಬೆಳಗಾಗುವುದರೊಳಗಾಗಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಘೋಷಿಸಲು ಸಾಧ್ಯವೂ ಇಲ್ಲವಲ್ಲ. ಒಂದು ಆಸ್ತಿ  ವಕ್ಫ್ ಆಸ್ತಿಯಾಗಿ ನೋಂದಾಯಿತವಾಗಬೇಕಾದರೆ ನಿರ್ದಿಷ್ಟ ಕಾನೂನು ನಿಯಮಗಳಿವೆ. ಯಾರೇ ಆಗಲಿ, ಒಂದು ಜಮೀನಿನಲ್ಲಿ ನಿಂತು, ಇದು ವಕ್ಫ್ ಜಮೀನು ಅಂದರೆ ಅದು ವಕ್ಫ್ ಆಸ್ತಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ,

 2019ರಿಂದ  2023ರ ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಹೊನವಾಡದ ಸಂಗತಿ ಗೊತ್ತಿರಲಿಲ್ಲವೇ? ಅಲ್ಲಿ 15 ಸಾವಿರ ಎಕ್ರೆ  ಭೂಮಿಯಿದೆ ಎಂದು ವಕ್ಫ್ ಇಲಾಖೆ ಹೇಳುತ್ತಿದೆಯೆಂದಾಗಿದ್ದರೆ ಮತ್ತು ಈ ಭೂಮಿಯೆಲ್ಲಾ ರೈತರದ್ದು ಎಂದಾಗಿದ್ದರೆ  ಯಾಕೆ ಬೊಮ್ಮಾಯಿ ಆಗಲಿ ಯಡಿಯೂರಪ್ಪರಾಗಲಿ ಕ್ರಮ ಕೈಗೊಳ್ಳಲಿಲ್ಲ? ಆಗ ಇಲ್ಲದೇ ಇರುವ ಸಮಸ್ಯೆ ಈಗ ದಿಢೀರನೇ  ಹುಟ್ಟಿಕೊಂಡದ್ದು ಹೇಗೆ?

ನಿಜವಾಗಿ, ಬಿಜೆಪಿ ಭಾವನಾತ್ಮಕ ವಿಷಯದ ಕೊರತೆಯಿಂದ ಬಳಲುತ್ತಿದೆ. ಈ ಮೊದಲು ಬಾಬರಿ ಮಸೀದಿಯಿತ್ತು. ಅದು  ಮುಕ್ತಾಯಗೊಂಡ ಬಳಿಕ ಇಡೀ ಭಾರತವನ್ನು ಏಕಪ್ರಕಾರವಾಗಿ ಪ್ರಭಾವಿಸಬಲ್ಲ ಭಾವನಾತ್ಮಕ ವಿಷಯದ ಕೊರತೆ ಅದಕ್ಕೆ  ಎದುರಾಯಿತು. ಉತ್ತರ ಭಾರತದಲ್ಲಿ ಒಂದೆರಡು ಮಸೀದಿಗಳನ್ನು ಆ ಬಳಿಕ ಮುನ್ನೆಲೆಗೆ ತರಲಾಯಿತು. ಆದರೆ,  ಅದು ಬಾಬರಿ ಮಸೀದಿ ರೀತಿಯಲ್ಲಿ ದೇಶದ ಜನರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದರಲ್ಲಿ  ಸೋಲುಂಡಿತು.  ಬಹುತೇಕ ಉತ್ತರ ಭಾರತದ ಸ್ಥಳೀಯ ಸಂಗತಿಯಾಗಿ ಅದು ಮಾರ್ಪಟ್ಟ ಕಾರಣ ಬಿಜೆಪಿ ಅನ್ಯ ಸಂಗತಿಗಳತ್ತ ಕೈ  ಹಾಕಲೇಬೇಕಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಹಿನ್ನಡೆಯು, ಇನ್ನು ಮುಂದೆ ಮಂದಿರ  ಮಸೀದಿಗಳು ಮತ ತಂದುಕೊಡಲ್ಲ ಅನ್ನುವುದನ್ನು ಬಿಜೆಪಿಗೆ ಮನವರಿಕೆ ಮಾಡಿಸಿತು. ಆದರೆ, ಹಿಂದೂಗಳನ್ನು ಸದಾ  ಭಯದ ನೆರಳಲ್ಲಿ ಉಳಿಸುವುದರಲ್ಲೇ  ತಮ್ಮ ಅಧಿಕಾರದ ಗುಟ್ಟು ಇದೆ ಎಂಬುದು ಬಿಜೆಪಿಗೆ ಗೊತ್ತು. ಮುಸ್ಲಿಮರನ್ನು  ಹಿಂದೂಗಳ ವೈರಿಗಳು ಎಂದು ಬಿಂಬಿಸುವುದನ್ನೇ ಬಿಜೆಪಿ ರಾಜಕೀಯ ತಂತ್ರವಾಗಿಸಿಕೊಂಡಿದೆ. ಆದ್ದರಿಂದಲೇ, ಈ ವಕ್ಫ್  ವಿಷಯವನ್ನು ಅದು ಮುನ್ನೆಲೆಗೆ ತಂದಿದೆ. ವಕ್ಫ್ ಆಸ್ತಿ ಎಂಬುದು ಮುಸ್ಲಿಮರು ಎಲ್ಲೆಲ್ಲ ಇದ್ದಾರೋ ಅಲ್ಲೆಲ್ಲಾ  ಇರುವುದರಿಂದ ಬಾಬರಿ ಮಸೀದಿಯಂತೆ ಇಡೀ ದೇಶವನ್ನೇ ಈ ವಿಷಯದ ಮೂಲಕ ಪ್ರಭಾವಿಸಬಹುದು ಎಂದು ಅದು  ಭಾವಿಸಿದಂತಿದೆ. ಇದು ಮುಗಿದರೆ ಸಮಾನ ನಾಗರಿಕ ಸಂಹಿತೆಯನ್ನು ಬಿಜೆಪಿ ಎತ್ತಿಕೊಳ್ಳುವ ಸಾಧ್ಯತೆಯೂ ಇದೆ.

ವಕ್ಫ್ ಕಾಯ್ದೆಯ ಬಗ್ಗೆ ಮತ್ತು ವಕ್ಫ್ ಟ್ರಿಬ್ಯೂನಲ್ ಬಗ್ಗೆ ಈಗಾಗಲೇ ಬಿಜೆಪಿ ರಾಷ್ಟ್ರಾದ್ಯಂತ ತನ್ನ ಐಟಿ ಸೆಲ್ ಮೂಲಕ  ಸುಳ್ಳುಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದೆ. ವಕ್ಫ್ ಟ್ರಿಬ್ಯೂನಲ್‌ನ ಅಗತ್ಯ ಏನು ಎಂದು ಅದು ಪ್ರಶ್ನಿಸುತ್ತಿದೆ. ಜಮೀನು ವಿವಾದವನ್ನು ಸಾಮಾನ್ಯ ಸಿವಿಲ್ ಕೋರ್ಟ್ ಗಳಲ್ಲೇ  ಪರಿಹರಿಸಬಾರದೇ ಎಂದೂ ಜನರನ್ನು ಗೊಂದಲಕ್ಕೆ ದೂಡುತ್ತಿದೆ. 

ಅಂದಹಾಗೆ, ಆರಂಭದಲ್ಲಿ ವಕ್ಫ್ ವಿವಾದವು ಸಾಮಾನ್ಯ ಸಿವಿಲ್ ನ್ಯಾಯಾಲಯಗಳಲ್ಲೇ  ವಿಚಾರಣೆಗೆ ಒಳಗಾಗುತ್ತಿತ್ತು. ಆದರೆ, ನ್ಯಾಯ  ವಿತರಣೆಯಲ್ಲಾಗುವ ವಿಳಂಬವನ್ನು ಪರಿಗಣಿಸಿ ಸರಕಾರಗಳೇ ವಕ್ಫ್ ಟ್ರಿಬ್ಯೂನಲ್ ಅನ್ನು ರಚಿಸಿವೆ. ಇದರ ನ್ಯಾಯಾಧೀಶರು ಮುಸ್ಲಿಂ ಧರ್ಮಗುರುಗಳೋ ಕಾಜಿಗಳೋ ಅಲ್ಲ.  ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರೇ ಇಲ್ಲೂ ನ್ಯಾಯಾಧೀಶರಾಗಿರುತ್ತಾರೆ. ಹಾಗಂತ, ಈ ಟ್ರಿಬ್ಯೂನಲ್‌ನಲ್ಲಿ  ಯಾವ ತೀರ್ಪು ಬರುತ್ತೋ ಅದುವೇ ಅಂತಿಮವಲ್ಲ. ಅಲ್ಲಿಂದ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಗೆ  ಹೋಗುವ  ಅವಕಾಶ ಕಕ್ಷಿದಾರರಿಗೆ ಇದ್ದೇ  ಇದೆ. ಆದರೆ ಬಿಜೆಪಿ ಈ ಸತ್ಯವನ್ನು ಅಡಗಿಸಿಟ್ಟು ಅಪಪ್ರಚಾರದಲ್ಲಿ ನಿರತವಾಗಿದೆ. ಈ ದೇಶದಲ್ಲಿ ಟ್ರಿಬ್ಯೂನಲ್ ಎಂಬುದು ವಕ್ಫ್ ಗೆ  ಸಂಬಂಧಿಸಿ ಮಾತ್ರವೇ ಇದೆ ಎಂಬಂತೆ  ಬಿಂಬಿಸುತ್ತಿದೆ. ನಿಜವಾಗಿ, ಅಸ್ಸಾಮ್‌ನ ಲ್ಲಿರುವ ಫಾರಿನರ್ಸ್ ಟ್ರಿಬ್ಯೂನಲ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಟ್ರಿಬ್ಯೂನಲ್‌ಗಳಿವೆ. ಕಾನೂನು ಪ್ರಕ್ರಿಯೆ  ಸುಲಭ ಮತ್ತು ಶೀಘ್ರಗೊಳಿಸುವುದಕ್ಕಾಗಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಮಾಡಲಾಗುವ ವ್ಯವಸ್ಥೆ ಇದುವೇ ಹೊರತು  ಮುಸ್ಲಿಮರಿಗೆ ಮಾತ್ರ ರಚಿಸಲಾದ ವ್ಯವಸ್ಥೆ ಇದಲ್ಲ.

ಜನರನ್ನು ಭಾವನಾತ್ಮಕವಾಗಿ ಪೀಡಿಸುವುದೇ ಬಿಜೆಪಿಯ ರಾಜಕೀಯ ಮಂತ್ರ. ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು  ಸದಾ ಬಿಂಬಿಸುತ್ತಾ ಬರುವುದೇ ಅದರ ರಾಜಕೀಯ ತಂತ್ರ. ನಿಜವಾಗಿ, 20%ದಷ್ಟೂ ಇಲ್ಲದ ಸಮುದಾಯವೊಂದು  80%ದಷ್ಟಿರುವ ಬೃಹತ್ ಸಮುದಾಯದ ಪಾಲಿಗೆ ಅಪಾಯಕಾರಿಯಾಗಿದೆ ಎಂದು ಹೇಳುವುದೇ  80%ದಷ್ಟಿರುವ  ಸಮುದಾಯಕ್ಕೆ ಮಾಡುವ ಬಹುದೊಡ್ಡ ಅವಮಾನ. ಹೀಗೆ ಭಯವನ್ನು ಬಿತ್ತಿಯೇ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ  ಬಿಜೆಪಿ ಅಧಿಕಾರದಲ್ಲಿದೆ. ಆದರೂ ಇನ್ನೂ ಭಯ ಹೊರಟು ಹೋಗಿಲ್ಲ ಎಂದರೆ, ಈ ಭಯ ವಾಸ್ತವವಲ್ಲ ಎಂದೇ ಅರ್ಥ.  ಇದು ರಾಜಕೀಯ ಲಾಭಕ್ಕಾಗಿ ಕೃತಕವಾಗಿ ಸೃಷ್ಟಿ ಮಾಡಲಾದ ಭಯ. ನಿಜಕ್ಕೂ ಈ ದೇಶದಲ್ಲಿ ಭಯದಲ್ಲಿ ಇರಬೇಕಾದವರು  ಮುಸ್ಲಿಮರು. ಯಾಕೆಂದರೆ, ಆಡಳಿತದಲ್ಲಿರುವ ಪಕ್ಷವೇ ಅವರ  ವಿರುದ್ಧ ಬಹಿರಂಗವಾಗಿಯೇ ನಿಂತಿರುವಾಗಲೂ ಅವರು ಭಯವನ್ನು ಹಂಚದೇ ಸುಮ್ಮನಿದ್ದಾರೆ. ಇದು ರಾಜಕೀಯ  ತಂತ್ರವೆಂದು  ಅವರಿಗೆ ಗೊತ್ತಿದೆ. ಆದರೆ ಬಿಜೆಪಿ ಹಿಂದೂಗಳನ್ನು ಪದೇ ಪದೇ ಮೂರ್ಖರನ್ನಾಗಿಸುವ ಪ್ರಯತ್ನ ನಡೆಸುತ್ತಲೇ  ಇದೆ.

Thursday, 24 October 2024

ಅರಾಜಕ ಸ್ಥಿತಿಯ ಮುನ್ನೆಚ್ಚರಿಕೆ ನೀಡುತ್ತಿರುವ ಬೆಳವಣಿಗೆಗಳು

 


ದೇಶದ ಭದ್ರತಾ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಕುಸಿದಿರುವುದನ್ನು ಸಾಲು ಸಾಲು ಪ್ರಕರಣಗಳು ಸಾಬೀತುಪಡಿಸುತ್ತಿವೆ. ಕಳೆದ  ಒಂದು ವಾರದಲ್ಲಿ ಸುಮಾರು 100ರಷ್ಟು ವಿಮಾನಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ. ರೈಲು ಹಳಿಗಳನ್ನು ತಪ್ಪಿಸುವ  ಪ್ರಕರಣಗಳು ಮತ್ತು ಅದರಿಂದಾಗಿ ಅಪಘಾತಗಳಾಗುತ್ತಿರುವ ಸುದ್ದಿಗಳು ತಿಂಗಳುಗಳಿಂದ  ವರದಿಯಾಗುತ್ತಲೇ ಇವೆ. ಇನ್ನೊಂದೆಡೆ ಲಾರೆನ್ಸ್ ಬಿಷ್ಣೋಯ್ ಎಂಬ ಘಾತುಕ ಗ್ಯಾಂಗನ್ನು ಕೇಂದ್ರ ಸರಕಾರವೇ ಪೋಷಿಸುತ್ತಿದೆಯೇನೋ ಎಂಬ ಅ ನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಕೆನಡಾದಲ್ಲಿದ್ದ  ಖಲಿಸ್ತಾನಿ ಪರ ನಾಯಕ ನಿಜ್ಜರ್ ನನ್ನು ಹತ್ಯೆಗೈಯಲು ಕೇಂದ್ರ ಸರಕಾರ ಈತನನ್ನು ಬಳಸಿಕೊಂಡಿದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಕಳೆದ ಜೂನ್ 18ರಂದು ಹರ್ದೀಪ್ ಸಿಂಗ್ ನಿಜ್ಜರ್  ಎಂಬ ಸಿಕ್ಖ್ ಪ್ರತ್ಯೇಕತಾವಾದಿ ನಾಯಕನನ್ನು ಕೆನಡಾದಲ್ಲಿ ಹತ್ಯೆಗೈಯಲಾಗಿತ್ತು. ಈತನನ್ನು ಭಯೋತ್ಪಾದಕ ಎಂದು  2020ರಲ್ಲಿ ಭಾರತ ಘೋಷಿಸಿತ್ತು. ಭಾರತ ಸರಕಾರದ ಬೆಂಬಲದಿಂದಲೇ ಈತನನ್ನು ಹತ್ಯೆ ಮಾಡಲಾಗಿದೆ ಎಂದು ಕೆನಡಾ  ನೇರವಾಗಿ ಆರೋಪಿಸಿದೆ. ಮಾತ್ರವಲ್ಲ, ಭಾರತೀಯ ರಾಯಭಾರಿಯನ್ನು ತನಿಖಿಸಲೂ ಮುಂದಾಗಿದೆ. ಇದರ ಬೆನ್ನಿಗೇ  ಬಿಷ್ಣೋಯ್ ಗ್ಯಾಂಗ್‌ನ ಪಾತ್ರದ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ.

ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಜೈಲಿನಲ್ಲಿದ್ದಾನೆ. ಈತನನ್ನು ಜೈಲಿನಿಂದ ಹೊರಗೆ ತನಿಖೆಗಾಗಿ ಕರೆದುಕೊಂಡು  ಹೋಗದಂತೆ ಕೇಂದ್ರ ಸರಕಾರವೇ ತಡೆಯನ್ನು ವಿಧಿಸಿದೆ. ಮಹಾರಾಷ್ಟ್ರದಲ್ಲಿ ಬಾಬಾ ಸಿದ್ದೀಕಿಯನ್ನು ಇತ್ತೀಚೆಗೆ  ಹತ್ಯೆಗೈಯಲಾಯಿತು. ಈತನದೇ ಗ್ಯಾಂಗ್‌ನ ಶಾರ್ಪ್ ಶೂಟರ್‌ಗಳು ಈ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.  ಆದರೆ, ಈತನನ್ನು ತನಿಖೆಗಾಗಿ ಮುಂಬೈಗೆ ಕರೆತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಪೊಲೀಸರು ಗುಜರಾತ್ ಜೈಲಿನಲ್ಲಿ ಮಾತ್ರ  ಈತನನ್ನು ವಿಚಾರಣೆ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ಕೇಂದ್ರ ಸರಕಾರ ಈತನಿಗಾಗಿ ಇಂಥದ್ದೊಂದು ನಿಯಮ ಜಾರಿ  ಮಾಡಿರುವುದೇಕೆ ಎಂಬ ಪ್ರಶ್ನೆಯೂ ಇದೆ. ಇದು ಈತನನ್ನು ಕಾನೂನು ಕ್ರಮಗಳಿಂದ ರಕ್ಷಿಸುವ ದುರುದ್ದೇಶದಿಂದ  ಮಾಡಲಾದ ರಕ್ಷಣಾ ಕವಚ ಎಂಬ ಅಭಿಪ್ರಾಯವೂ ಇದೆ. ಇದರ ನಡುವೆಯೇ,

ಉತ್ತರ ಭಾರತದ ಹಲವು ಕಡೆ ಮುಸ್ಲಿಮ್ ವಿರೋಧಿ ಮತ್ತು ಪ್ರವಾದಿ ನಿಂದನೆಯ ಘಟನೆಗಳು ವರದಿಯಾಗುತ್ತಲೇ ಇವೆ.  ಉತ್ತರಾಖಂಡದ ಕಾನ್ವಾರ್ ಪ್ರದೇಶದ ವ್ಯಾಪಾರಿಗಳ ಸಂಘವು ಮುಸ್ಲಿಮರಿಗೆ ಜೀವ ಬೆದರಿಕೆ ಹಾಕಿದೆ. ಈ ವರ್ಷದ ಅಂತ್ಯಕ್ಕೆ  ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಮುಸ್ಲಿಮರಿಗೆ ಬಾಡಿಗೆಗೆ ಮನೆ ನೀಡಿದ ಮಾಲಕರಿಗೂ ಧಮಕಿ ಹಾಕಿದೆ.  ಮುಸ್ಲಿಮರಿಗೆ ಮನೆ ಬಾಡಿಗೆ ನೀಡಿರುವ ಮಾಲಕರು ಮುಸ್ಲಿಮರನ್ನು ಹೊರಹಾಕದಿದ್ದರೆ 10 ಸಾವಿರ ರೂಪಾಯಿ ದಂಡ  ವಿಧಿಸುವುದಾಗಿ ಬೆದರಿಕೆ ಹಾಕಿದೆ. ಇನ್ನೊಂದೆಡೆ ಯತಿ ನರಸಿಂಗಾನಂದ  ಎಂಬವರು ಸುಪ್ರೀಮ್ ಕೋರ್ಟ್ ನ  ಆದೇಶಕ್ಕೆ  ಕಿಂಚಿತ್ ಬೆಲೆಯನ್ನೂ ನೀಡದೇ ಪ್ರವಾದಿ ನಿಂದನೆ ಮತ್ತು ಮುಸ್ಲಿಮ್ ನಿಂದನೆಯನ್ನು ಮಾಡುತ್ತಲೇ ಇದ್ದಾರೆ.

ಸದ್ಯ ದೇಶದಲ್ಲಿ ದ್ವೇಷ ಭಾಷಣವೆಂಬುದು ಸಹಜ ಬೆಳವಣಿಗೆಯಾಗುತ್ತಿದೆ. ಉತ್ತರ ಪ್ರದೇಶದ ಬಹ್ರೆಚ್  ನಲ್ಲಿ ನಡೆದ  ಕೋಮುಗಲಭೆಯ ಬಳಿಕ ಆರೋಪಿ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾದ ದೃಶ್ಯಗಳು ಸೋಶಿಯಲ್  ಮೀಡಿಯಾದಲ್ಲಿ ಹರಿದಾಡುತ್ತಿವೆ. ಆರೋಪಿಗಳ ಮನೆ ಧ್ವಂಸ ಮಾಡುವುದನ್ನು ಕಾನೂನುಬಾಹಿರ ಎಂದು ಸುಪ್ರೀಮ್  ಕೋರ್ಟ್ ತೀರ್ಪಿತ್ತ ಬಳಿಕ ನಡೆದಿರುವ ಈ ಘಟನೆಯು ನ್ಯಾಯಾಂಗದ ಮಹತ್ವ ಕಡಿಮೆಯಾಗುತ್ತಿರುವುದನ್ನು  ಸೂಚಿಸುವಂತಿದೆ. ಅಂದಹಾಗೆ,

ಬಾಂಬ್  ಬೆದರಿಕೆ ಎಂಬುದು ವಿಮಾನಯಾನ ಕಂಪೆನಿಗಳ ಪಾಲಿಗೆ ಅತೀ ದುಬಾರಿ ಖರ್ಚಿನ ಸಂಗತಿಯಾಗಿದೆ. ನಿಲ್ದಾಣದಿಂದ ಹೊರಟುಹೋದ ವಿಮಾನವು ಬಾಂಬ್ ಬೆಂದರಿಕೆಯ ಕಾರಣದಿಂದ ತುರ್ತು ಭೂಸ್ಪರ್ಶ ಮಾಡುವುದಕ್ಕೆ, ಅಪಾರ  ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಮುಂಬೈಯಿಂದ  ಅಮೇರಿಕಾದ ನ್ಯೂಯಾರ್ಕ್ ಗೆ  ತೆರಳುತ್ತಿದ್ದ ಎಐ117 ವಿಮಾನವು ಕಳೆದವಾರ ಬಾಂಬ್ ಬೆದರಿಕೆಯ ಕಾರಣ ತುರ್ತು ಭೂಸ್ಪರ್ಶ ಮಾಡಿತ್ತು. ಪ್ರಯಾಣಿಕರೂ ಅವರ ಲಗೇಜ್‌ಗಳೂ  ಸೇರಿದಂತೆ ಇಂಥ ವಿಮಾನಗಳ ತೂಕ 450 ಟನ್‌ನಷ್ಟಿರುತ್ತದೆ. ಅದು ತುರ್ತು ಭೂಸ್ಪರ್ಶ ಮಾಡಬೇಕೆಂದರೆ, 100 ಟನ್  ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಪ್ರತೀ ಟನ್ ಇಂಧನಕ್ಕೆ ಒಂದು ಲಕ್ಷ ರೂಪಾಯಿ ಬೆಲೆಯಿದೆ. ಕೇವಲ ಇಂಧನ  ಖರ್ಚನ್ನೇ ಲೆಕ್ಕ ಹಾಕಿದರೂ ತುರ್ತು ಭೂಸ್ಪರ್ಶದಿಂದಾಗಿ ಒಂದು ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದಲ್ಲದೇ ವಿಮಾನವನ್ನು ತಪಾಸಿಸಬೇಕೆಂದರೆ ಅದರಲ್ಲಿರುವ ಪ್ರಯಾಣಿಕರನ್ನು ಇಳಿಸಿ ವಿವಿಧ ಹೊಟೇಲುಗಳಿಗೆ ರವಾನಿಸಬೇಕಾಗುತ್ತದೆ.  ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಅಲ್ಲದೇ, ಬೇರೆ ವಿಮಾನದ ವ್ಯವಸ್ಥೆಯನ್ನೂ  ಮಾಡಬೇಕಾಗುತ್ತದೆ. ಇವೆಲ್ಲವೂ ಸೇರಿದರೆ ಒಂದು ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ ಆಗುವ ಖರ್ಚು  ಮೂರು ಕೋಟಿಯನ್ನೂ ಮೀರಿದ್ದು ಎಂದು ಹೇಳಲಾಗುತ್ತಿದೆ. ಇದು ಒಂದು ವಿಮಾನದಿಂದಾಗುವ ನಷ್ಟ. ಹಾಗಿದ್ದರೆ 100 ವಿಮಾನಗಳಿಗೆ ಹಾಕಲಾದ ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ ಆಗಿರುವ ನಷ್ಟ ಎಷ್ಟಿರಬಹುದು? ಪದೇಪದೇ  ಇಂಥ ಬಾಂಬ್ ಬೆದರಿಕೆಯ ಕರೆ ಬರಲು ಕಾರಣವೇನು? ಕಳೆದವಾರ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಹಾಗೂ ಬಿ.ಎಂ.ಎಸ್. ಕಾಲೇಜುಗಳಿಗೆ ಬಾಂಬ್ ಬೆದರಿಕೆಯ ಈಮೇಲ್ ಬಂದಿತ್ತು. ಬಳಿಕ ಪೊಲೀಸರು ಪಶ್ಚಿಮ ಬಂಗಾಳದ  ಡಾರ್ಜಿಲಿಂಗ್ ಜಿಲ್ಲೆಯ ದೀಪಾಂಜನ್ ಮಿಶ್ರಾನನ್ನು ಬಂಧಿಸಿದರು. ನಿರುದ್ಯೋಗದ ಹತಾಶೆ ಇಂಥದ್ದನ್ನು ಯುವಸಮೂಹ ದಿಂದ ಮಾಡಿಸುತ್ತಿದೆಯೇ?

ದೇಶದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಭಾವ ಹರಡತೊಡಗುವುದೆಂದರೆ, ಅಪರಾಧ ಪ್ರಕರಣಗಳಿಗೆ ವೇದಿಕೆ  ಸಿದ್ಧಗೊಳ್ಳುವುದು ಎಂದರ್ಥ. ಹೀಗಾದರೆ ಸಮಾಜಘಾತುಕರು ಮತ್ತೆ ತಲೆ ಎತ್ತುತ್ತಾರೆ. ಕಾನೂನು ಭಂಜಕ  ಕೃತ್ಯಗಳಿಗಿಳಿಯುತ್ತಾರೆ. ಇದರಿಂದ ಜನಸಾಮಾನ್ಯರು ಭಯದಲ್ಲೇ  ಬದುಕಬೇಕಾಗುತ್ತದೆ. ಬಿಷ್ಣೋಯ್ ಗ್ಯಾಂಗ್‌ನ ಸುತ್ತ  ಕೇಳಿಬರುತ್ತಿರುವ ಸುದ್ದಿಗಳನ್ನು ನೋಡುವಾಗ ವ್ಯವಸ್ಥೆಯೇ ಈ ಅರಾಜಕ ಸ್ಥಿತಿಗೆ ವೇದಿಕೆ ಸಜ್ಜು ಮಾಡುತ್ತಿರುವಂತೆ  ಕಾಣಿಸುತ್ತದೆ. ಸಿಕ್ಖ್ ಪ್ರತ್ಯೇಕತಾವಾದಿ ನಾಯಕನಾಗಿದ್ದ ಬಿಂದ್ರನ್ ವಾಲೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೂ  ಹೀಗೆಯೇ ಬಳಸಿಕೊಂಡಿದ್ದರು ಎಂಬ ಅಭಿಪ್ರಾಯವಿದೆ. ಅಂತಿಮವಾಗಿ ಆತ ಸರಕಾರಕ್ಕೆ ತಲೆ ನೋವಾಗುವಂತೆ ಬೆಳೆದ.  ಕೊನೆಗೆ ಬ್ಲೂಸ್ಟಾರ್ ಕಾರ್ಯಾಚರಣೆಯ ಮೂಲಕ ಆತನ ಹತ್ಯೆಗೆ ಇಂದಿರಾ ಕಾರಣವಾದರು. ಆದರೆ ಅದೇ ಕಾರಣಕ್ಕಾಗಿ  ಆತನ ಬೆಂಬಲಿಗರು ಇಂದಿರಾ ಗಾಂಧಿಯನ್ನೂ ಹತ್ಯೆಗೈದರು. ಅಪರಾಧಿಗಳನ್ನು ವ್ಯವಸ್ಥೆ ಸ್ವಲಾಭಕ್ಕೆ ಬಳಸಿಕೊಳ್ಳತೊಡಗಿದರೆ  ಅಂತಿಮವಾಗಿ ಅವರು ವ್ಯವಸ್ಥೆಯ ಮೇಲೆಯೇ ಸವಾರಿ ನಡೆಸುತ್ತಾರೆ ಎಂಬುದಕ್ಕೆ ಇದನ್ನು ಉದಾಹರಣೆಯಾಗಿ ಎತ್ತಿಕೊಳ್ಳ  ಬಹುದು.

ಒಂದುಕಡೆ, ನಾಗರಿಕ ಸಂಘರ್ಷಕ್ಕೆ ಅಥವಾ ಕೋಮುಗಲಭೆಗೆ ಪ್ರಚೋದನೆ ನೀಡುವ ಬೆಳವಣಿಗೆಗಳು ನಡೆಯುತ್ತಿರುವುದು  ಮತ್ತು ಇನ್ನೊಂದು ಕಡೆ, ಕಾನೂನಿನ ಭಯವೇ ಇಲ್ಲದೇ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿರುವುದು ಸಂಭಾವ್ಯ ಅಪಾಯದ ಸೂಚನೆಯನ್ನು ನೀಡುತ್ತಿದೆ. ಅತ್ಯಂತ ಸುರಕ್ಷಿತವೆನ್ನಲಾಗುತ್ತಿರುವ ರೈಲು ಹಳಿಗಳಿಗೂ ಈಗ ಭಯ ಆವರಿಸಿದೆ.  ಇವೆಲ್ಲ ಕ್ಷುಲ್ಲಕ ಘಟನೆ ಗಳಲ್ಲ. ಅರಾಜಕ ಸ್ಥಿತಿಯೊಂದರ ಮುನ್ಸೂಚನೆಯಂತೆ ಇವನ್ನೆಲ್ಲ ನೋಡಬೇಕಾಗಿದೆ. ತನ್ನ ಗುರಿ  ಸಾಧನೆಗಾಗಿ ಪ್ರಭುತ್ವವೇ ಘಾತಕ ಗ್ಯಾಂಗ್‌ಗಳನ್ನು ಸಾಕುವುದು ಹೇಗೆ ಅಪಾಯಕಾರಿಯೋ ದೇಶದೊಳಗೆ ಧರ್ಮದ್ವೇಷವನ್ನು  ಬಿತ್ತುತ್ತಾ ಮತ್ತು ಗಲಭೆಗೆ ಪ್ರಚೋದನೆ ಕೊಡುತ್ತಾ ಸಾಗುವ ಬೆಳವಣಿಗೆಗಳೂ ಅಪಾಯಕಾರಿಯೇ. ಇವೆರಡೂ  ಅಂತಿಮವಾಗಿ ನಾಗರಿಕ ಸಮಾಜದ ಮೇಲೆ ಪ್ರಭುತ್ವದ ಹಿಡಿತವನ್ನು ಸಡಿಲಗೊಳಿಸುತ್ತದೆ. ಹಾಗಾದಾಗ ಕಾನೂನು  ಸುವ್ಯವಸ್ಥೆಗಾಗಿ ಖಜಾನೆಯಲ್ಲಿರುವ ಹಣವನ್ನು ಖರ್ಚು ಮಾಡಬೇಕಾದ ಒತ್ತಡವನ್ನು ತಂದಿಡುತ್ತದೆ. ಇದರಿಂದ ಅಭಿವೃದ್ಧಿ  ಕುಂಠಿತಗೊಂಡು  ಉತ್ಪಾದನೆ ಸ್ಥಗಿತಗೊಳುತ್ತದೆ. ಸದಾ ಭೀತಿಯಲ್ಲಿರುವ ಸಮೂಹದಿಂದ ನಿರ್ಮಾಣಾತ್ಮಕ ಆಲೋಚನೆ  ಸಾಧ್ಯವೂ ಇಲ್ಲ.

ಆದ್ದರಿಂದ ಕಾನೂನು ಸುವ್ಯವಸ್ಥೆಗೆ ತೊಡಕಾಗುವವರನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಸಮಾಜದಲ್ಲಿ  ಭಯಮುಕ್ತ ಮತ್ತು ದ್ವೇಷ ಮುಕ್ತ ವಾತಾವರಣವನ್ನು ಉಂಟು ಮಾಡಬೇಕು.

Friday, 18 October 2024

ಇಸ್ರೇಲ್, ಹಮಾಸ್ ಮತ್ತು ವಿಮೋಚನಾ ಹೋರಾಟ

 



ನಿಯಮಗಳಿರುವುದೇ ಮುರಿಯುವುದಕ್ಕೆ ಎಂಬ ದುರಹಂಕಾರಿ ನೀತಿಯನ್ನು ಇಸ್ರೇಲ್ ಅಳವಡಿಸಿಕೊಂಡು ದಶಕಗಳಾದುವು. 1948ರಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಗುವ ಹಿಂದಿನ ದಿನದಿಂದಲೇ ಈ ನೀತಿಯನ್ನು ಅದು  ಅಳವಡಿಸಿಕೊಂಡೇ ಬಂದಿದೆ. ಇದೀಗ ಈ ದುರಹಂಕಾರ ಎಲ್ಲಿಗೆ ಬಂದು ತಲುಪಿದೆಯೆಂದರೆ, ಲೆಬನಾನ್‌ನಲ್ಲಿ  ವಿಶ್ವಸಂಸ್ಥೆಯೇ ನಿಯೋಜಿಸಿರುವ ಶಾಂತಿ ಪಾಲನಾ ಪಡೆಯ ಮೇಲೆ ದಾಳಿ ನಡೆಸಿದೆ. ಸುಮಾರು 50 ರಾಷ್ಟ್ರಗಳ 10  ಸಾವಿರ ಯೋಧರು ಲೆಬನಾನ್‌ನ ದಕ್ಷಿಣ ಭಾಗದಲ್ಲಿದ್ದಾರೆ. ಇದರಲ್ಲಿ ಇಟಲಿಯ ಸಾವಿರ ಯೋಧರಿದ್ದಾರೆ. ಫ್ರಾನ್ಸ್ನ 700  ಯೋಧರಿದ್ದಾರೆ. 1978ರ ಬಳಿಕದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಬೀಡುಬಿಟ್ಟಿದೆ.  

1982ರಲ್ಲಿ ಲೆಬನಾನ್‌ನ ಮೇಲೆ ದಾಳಿ ಮಾಡಿದ ಇಸ್ರೇಲ್ ದಕ್ಷಿಣ ಲೆಬನಾನನ್ನು ವಶಪಡಿಸಿಕೊಂಡಿತ್ತು. ಈ ಬಗೆಯ  ದಾಳಿಯನ್ನು ಪ್ರತಿರೋಧಿಸಿಯೇ ಹಿಝ್ಬುಲ್ಲಾ ಹುಟ್ಟಿಕೊಂಡಿತು. ದಕ್ಷಿಣ ಲೆಬನಾನನ್ನು ಮರಳಿ ವಶಪಡಿಸುವುದಕ್ಕಾಗಿ ಅದು  ನಿರಂತರ ಪ್ರತಿರೋಧವನ್ನು ಒಡ್ಡುತ್ತಾ ಬಂತು. 2000ನೇ ಇಸವಿಯಲ್ಲಿ ಇಸ್ರೇಲ್ ಈ ಜಾಗದಿಂದ ಹಿಂದೆ ಸರಿಯಿತು.  2006ರಲ್ಲಿ ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವೆ 5 ವಾರಗಳ ತನಕ ಸಂಘರ್ಷ ನಡೆಯಿತು ಮತ್ತು ಆ ಸಂದರ್ಭದಲ್ಲಿ  ಮಧ್ಯಸ್ಥಿಕೆ ವಹಿಸಿ ಸಂಘರ್ಷ ಕೊನೆಗೊಳಿಸಿದ್ದೇ  ಈ ಶಾಂತಿ ಪಾಲನಾ ಪಡೆ. ಈ ಭಾಗದಲ್ಲಿ ಇಸ್ರೇಲ್ ಮತ್ತು ಲೆಬನಾನ್  ನಡುವೆ ಘರ್ಷಣೆ ಉಂಟಾಗದಂತೆ  ನೋಡಿಕೊಳ್ಳುವುದೇ ಈ ಪಡೆಯ ಜವಾಬ್ದಾರಿ. ಇದೀಗ ಈ ಪಡೆಯ ಮೇಲೆಯೇ  ಇಸ್ರೇಲ್ ದಾಳಿ ನಡೆಸುವ ಸಾಹಸ ಮಾಡಿದ್ದು, ವಿಶ್ವಸಂಸ್ಥೆ ಖಂಡಿಸಿದೆ. ಇಸ್ರೇಲ್‌ನ ಪ್ರಬಲ ಬೆಂಬಲಿಗ ರಾಷ್ಟçವಾದ ಇಟಲಿ  ಇದೇ ಮೊದಲ ಬಾರಿಯೆಂಬಂತೆ  ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರಿಗೆ ಇಸ್ರೇಲ್  ಪ್ರವೇಶ ನಿರ್ಬಂಧ ಹೇರಿದೆ. ಬಹುಶಃ ವಿಶ್ವಸಂಸ್ಥೆಯ ಇತಿಹಾಸದಲ್ಲೇ  ಮೊದಲ ಬಾರಿ ಇಂಥದ್ದೊಂದು  ಘಟನೆ ನಡೆದಿದೆ  ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆಯ ನಿಯಮಗಳನ್ನಷ್ಟೇ ಉಲ್ಲಂಘಿಸುವುದಲ್ಲ, ಜೊತೆಗೇ ವಿಶ್ವಸಂಸ್ಥೆಯ ಪ್ರಧಾನ  ಕಾರ್ಯದರ್ಶಿಯನ್ನೇ ತಿರಸ್ಕರಿಸುವ ದಾರ್ಷ್ಟ್ಯವನ್ನು ಇಸ್ರೇಲ್ ತೋರಿದೆ. ಇನ್ನೊಂದೆಡೆ,

ಜೆರುಸಲೇಮ್‌ನಿಂದ  ಸಿರಿಯಾದ ರಾಜಧಾನಿ ಡಮಾಸ್ಕಸ್ ವರೆಗೆ ವ್ಯಾಪಿಸಿರುವ ವಿಶಾಲ ಯಹೂದಿ ರಾಷ್ಟ್ರ  ಸ್ಥಾಪನೆಯೇ  ನಮ್ಮ ಅಂತಿಮ ಗುರಿ ಎಂದು ಇಸ್ರೇಲ್ ಹಣಕಾಸು ಸಚಿವ ಬೆಝಾಲೆಲ್ ಸ್ಮಾಟ್ರಿಚ್ ಹೇಳಿದ್ದಾರೆ. ಈ ವಿಶಾಲ ಯಹೂದಿ  ರಾಷ್ಟ್ರದಲ್ಲಿ ಫೆಲೆಸ್ತೀನ್ ಸಂಪೂರ್ಣ ಒಳಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ. ಹಾಗೆಯೇ, ಲೆಬನಾನ್, ಇರಾನ್, ಈಜಿ ಪ್ಟ್ ಮತ್ತು ಸೌದಿ ಅರೇಬಿ ಯಾದ ವಿವಿಧ ಭಾಗಗಳು ಈ ರಾಷ್ಟ್ರದ ವ್ಯಾಪ್ತಿಯೊಳಗೆ ಬರಲಿದೆ ಎಂದೂ ಅವರು ಹೇಳಿದ್ದಾರೆ.  ಸದ್ಯ ಪಶ್ಚಿಮೇಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನೋಡಿದರೆ, ಇಸ್ರೇಲ್ ತನ್ನ ಈ ವಿಶಾಲ ರಾಷ್ಟçದ ಗುರಿಯೆಡೆಗೆ  ದೃಷ್ಟಿ ನೆಟ್ಟಿದೆ ಎಂಬುದನ್ನೇ ಹೇಳುತ್ತದೆ. ಅದು ಒಂದುಕಡೆ ಅತಿಥಿಯಾಗಿ ಇರಾನ್‌ಗೆ ಆಗಮಿಸಿದ್ದ ಹಮಾಸ್ ನಾಯಕ  ಇಸ್ಮಾಈಲ್ ಹನಿಯ್ಯರನ್ನು ಮೋಸದಿಂದ ಹತ್ಯೆ ಮಾಡಿದೆ. ಇರಾನಿನ ಉನ್ನತ ಕಮಾಂಡರ್‌ಗಳನ್ನು ಲೆಬನಾನ್ ಮತ್ತು  ಸಿರಿಯಾದಲ್ಲಿ ಹತ್ಯೆ ಮಾಡಿದೆ. ಅಝರ್ ಬೈಜಾನ್‌ನಿಂದ ಹಿಂತಿರುಗುತ್ತಿದ್ದ ವೇಳೆ ಇರಾನ್‌ನ ಅಧ್ಯಕ್ಷ ಇಬ್ರಾಹೀಮ್  ರಈಸಿಯು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವುದು ತೋರಿಕೆಯ  ಕಾರಣವಾಗಿದ್ದರೂ ಆಂತರಿಕವಾಗಿ ಈ ಪತನದ ಹಿಂದೆ ಇಸ್ರೇಲ್‌ನ ಸಂಚು ಇದೆ ಎಂಬ ಅಭಿಪ್ರಾಯ ಇದೆ. ಇರಾನ್  ಅಧ್ಯಕ್ಷರು ಪೇಜರ್ ಬಳಸುತ್ತಿದ್ದರು ಮತ್ತು ಅದನ್ನು ಇಸ್ರೇಲ್ ಸ್ಫೋಟಿಸಿರುವುದೇ ಹೆಲಿಕಾಪ್ಟರ್ ಪತನಕ್ಕೆ ಕಾರಣ  ಎಂಬುದಾಗಿ ಇರಾನ್‌ನ ಪ್ರಮುಖ ನಾಯಕರೇ ಶಂಕಿಸಿದ್ದಾರೆ. ಇದಕ್ಕೆ ಆಧಾರವಾಗಿ, ಲೆಬನಾನ್‌ನಲ್ಲಿ ಸಾವಿರಾರು  ಪೇಜರ್‌ಗಳು ಸ್ಫೋಟಗೊಂಡದ್ದು ಮತ್ತು ಹಿಝ್ಬುಲ್ಲಾಯೋಧರಿಗೆ ಭಾರೀ ಪ್ರಮಾಣದಲ್ಲಿ ಹಾನಿ ತಟ್ಟಿದ್ದನ್ನು  ಉದಾಹರಣೆಯಾಗಿ ನೀಡಲಾಗುತ್ತಿದೆ. ಈ ಪೇಜರ್ ಸ್ಫೋಟದಲ್ಲಿ ಲೆಬನಾನ್‌ನಲ್ಲಿರುವ ಇರಾನಿನ ರಾಯಭಾರಿಗೂ  ಗಾಯವಾಗಿತ್ತು. ಇದರ ಜೊತೆಜೊತೆಗೇ ಸಿರಿಯಾದ ಮೇಲೆ ಇಸ್ರೇಲ್ ಆಗಾಗ ವೈಮಾನಿಕ ದಾಳಿ ನಡೆಸುತ್ತಲೇ ಬಂದಿದೆ.  ಫೆಲೆಸ್ತೀನಿಯರನ್ನಂತೂ ಕಳೆದ 7 ದಶಕಗಳಿಂದ ಕೈದಿಗಳಂತೆ ನಡೆಸಿಕೊಳ್ಳುತ್ತಿದೆ. ಫೆಲೆಸ್ತೀನಿ ಭೂಭಾಗವನ್ನು ಕಬಳಿಸುತ್ತಾ  ಮತ್ತು ಆ ಕಬಳಿಸಿದ ಜಾಗದಲ್ಲಿ ಯಹೂದಿಯರಿಗೆ ಮನೆ ನಿರ್ಮಿಸಿಕೊಟ್ಟು ವಾಸ ಮಾಡಿಸುತ್ತಾ ದೇಶ ವಿಸ್ತರಣೆಯಲ್ಲಿ  ತೊಡಗಿಸಿಕೊಂಡಿದೆ. ಇದನ್ನು ವಿರೋಧಿಸಿ ವಿಶ್ವಸಂಸ್ಥೆ ಪಾಸು ಮಾಡಿದ ನಿರ್ಣಯಗಳಿಗೆ ಲೆಕ್ಕಮಿತಿಯಿಲ್ಲ. ಆದರೆ, 

ಪ್ರತಿ  ನಿರ್ಣಯವನ್ನು ಇಸ್ರೇಲ್ ಕಾಲ ಕಸದಂತೆ ಪರಿಗಣಿಸುತ್ತಲೇ ಬಂದಿದೆ. ಕಳೆದ ಒಂದು ವರ್ಷದಲ್ಲಂತೂ ಅದು ಫೆಲೆಸ್ತೀನ್  ಮೇಲೆ ಮಾಡಿರುವ ದಾಳಿ ಅತಿಕ್ರೂರ ಮತ್ತು ಹೇಯವಾದುದು ಅನ್ನುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲ. 2023  ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕದಿಂದ ಇಸ್ರೇಲ್ 42 ಸಾವಿರ ಫೆಲೆಸ್ತೀನಿಯರನ್ನು  ಹತ್ಯೆಗೈದಿದೆ. ಸುಮಾರು ಒಂದು ಲಕ್ಷದಷ್ಟು ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಕೇವಲ  ಒಂದೇ ವರ್ಷದೊಳಗೆ ಇಸ್ರೇಲ್ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫೆಲೆಸ್ತೀನಿಯರ ಹತ್ಯಾಕಾಂಡ ನಡೆಸಿರಬಹುದಾದರೆ, ಕಳೆದ 7  ದಶಕಗಳಲ್ಲಿ ಅದು ಇನ್ನೆಷ್ಟು ಸಾವು-ನೋವಿಗೆ ಕಾರಣವಾಗಿರಬಹುದು? ಅದು ಫೆಲೆಸ್ತೀನ್ ಎಂಬ ರಾಷ್ಟ್ರ ಸ್ಥಾಪನೆಯನ್ನೇ  ಒಪ್ಪಿಕೊಳ್ಳುತ್ತಿಲ್ಲ. ಈ ದುರಹಂಕಾರವನ್ನು ಪ್ರತಿಭಟಿಸಿಯೇ ಫೆಲೆಸ್ತೀನಿಯರು ವಿವಿಧ ಪ್ರತಿರೋಧ ತಂಡಗಳನ್ನು ಕಟ್ಟಿಕೊಂಡು  ಹೋರಾಡುತ್ತಾ ಬಂದಿದ್ದಾರೆ. ಯಾಸಿರ್ ಅರಫಾತ್ ನೇತೃತ್ವದ ಫೆಲೆಸ್ತೀನ್ ವಿಮೋಚನಾ ಸಂಘಟನೆ ಇದರಲ್ಲಿ ಒಂದಾದರೆ,  ಶೈಕ್ ಯಾಸೀನ್ ನೇತೃತ್ವದ ಹಮಾಸ್ ಇನ್ನೊಂದು. ಫೆಲೆಸ್ತೀನನ್ನು ಇಸ್ರೇಲ್‌ನಿಂದ ವಿಮೋಚನೆಗೊಳಿಸುವುದನ್ನೇ ಈ  ಎರಡೂ ಗುಂಪುಗಳು ತಮ್ಮ ಗುರಿಯಾಗಿಸಿಕೊಂಡಿದೆ. ಆ ಕಾರಣದಿಂದಲೇ,

 ಈ ಎರಡೂ ಗುಂಪುಗಳು ಇಸ್ರೇಲ್‌ನ  ಜೊತೆಗಲ್ಲದೇ ಜಗತ್ತಿನ ಇನ್ನಾವ ರಾಷ್ಟ್ರದ ವಿರುದ್ಧವೂ ಹೋರಾಡಿಲ್ಲ. ಇಸ್ರೇಲ್‌ನ ಹಿಡಿತದಿಂದ ಫೆಲೆಸ್ತೀನನ್ನು ವಿಮೋಚ ನೆಗೊಳಿಸುವುದಕ್ಕಾಗಿ ಇವು ಸಂದರ್ಭಾನುಸಾರ ಶಸ್ತ್ರಾಸ್ತ್ರವನ್ನೂ ಬಳಸಿವೆ, ಸತ್ಯಾಗ್ರಹವನ್ನೂ ನಡೆಸಿವೆ. ಆದರೆ, ಇಸ್ರೇಲ್  ಬರೇ ಶಸ್ತ್ರಾಸ್ತ್ರದ ಮೂಲಕವೇ ಉತ್ತರಿಸುತ್ತಾ ಬಂದಿದೆ. ತಮ್ಮ ತಾಯ್ನಾಡಿನ ವಿಮೋಚನೆಗಾಗಿ ಹೋರಾಡಿದವರನ್ನೇ  ಭಯೋತ್ಪಾದಕರು ಎಂದು ಮುದ್ರೆಯೊತ್ತುತ್ತಾ ಮತ್ತು ಜಗತ್ತನ್ನು ಹಾಗೆಯೇ ನಂಬಿಸುತ್ತಲೂ ಇದೆ. ಫೆಲೆಸ್ತೀನ್ ಭೂಭಾಗದಲ್ಲಿ  1948ರಲ್ಲಿ ದಿಢೀರ್ ಆಗಿ ಉದ್ಭವವಾದ ಇಸ್ರೇಲ್ ಆ ಬಳಿಕ ಫೆಲೆಸ್ತೀನಿಯರನ್ನು ಹೊರದಬ್ಬುವುದನ್ನೇ ಘೋಷಿತ  ನೀತಿಯಾಗಿ ಸ್ವೀಕರಿಸಿರುವಾಗ, ಅದನ್ನು ಪ್ರತಿಭಟಿಸಿ ನಡೆಯುವ ಹೋರಾಟಗಳಲ್ಲಿ ವೈವಿಧ್ಯತೆ ಇರಬಾರದು ಎಂದು  ನಿರೀಕ್ಷಿಸುವುದಕ್ಕೆ ಅರ್ಥವೂ ಇಲ್ಲ. ಬ್ರಿಟಿಷರ ವಿರುದ್ಧ ನಮ್ಮದೇ ನೆಲದಲ್ಲಿ ಹುಟ್ಟಿಕೊಂಡ ವಿಮೋಚನಾ ಹೋರಾಟದಲ್ಲೂ ಈ  ವೈವಿಧ್ಯತೆಗಳಿದ್ದುವು. ಗಾಂಧೀಜಿ ಆ ಹೋರಾಟದ ಒಂದು ಮುಖವಾದರೆ, ಬೋಸ್, ಭಗತ್‌ಸಿಂಗ್ ಅದರ ಇನ್ನೊಂದು  ಮುಖ. ಇವರಾರೂ ಭಾರತೀಯರ ಪಾಲಿಗೆ ಭಯೋತ್ಪಾದಕರಲ್ಲ. ಹೆಮ್ಮೆಯ ಸ್ವಾತಂತ್ರ‍್ಯ ಯೋಧರು. ಆದರೆ ಬ್ರಿಟಿಷರು  ಇದೇ ಭಗತ್ ಸಿಂಗ್, ರಾಮ್ ಪ್ರಸಾದ್ ಬಿಸ್ಮಿಲ್ ಮುಂತಾದ ಅನೇಕರನ್ನು ಭಯೋತ್ಪಾದಕರೆಂದು ಕರೆದು ನೇಣಿಗೆ  ಹಾಕಿದರು. ಇದೇ ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ ಸುಭಾಷ್ ಚಂದ್ರ ಬೋಸ್‌ರು ಸೇನೆಯನ್ನೇ ಕಟ್ಟಿದರು. ಫೆಲೆಸ್ತೀನ್  ವಿಮೋಚನೆಗಾಗಿ ಹೋರಾಡುತ್ತಿರುವ ವಿವಿಧ ಗುಂಪುಗಳು ತಮ್ಮ ಗುರಿ ಸಾಧನೆಗಾಗಿ ಭಿನ್ನ ಭಿನ್ನ ದಾರಿಗಳನ್ನು  ಅವಲಂಬಿಸಿದೆ. ಈ ದಾರಿಗಳ ಬಗ್ಗೆ ಭಿನ್ನಾಭಿಪ್ರಾಯ ತಾಳುವುದು ತಪ್ಪಲ್ಲದಿದ್ದರೂ ಆ ವಿಮೋಚನಾ ಹೋರಾಟವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮತ್ತು ಇಸ್ರೇಲನ್ನು ಬೆಂಬಲಿಸುವುದು ಪರೋಕ್ಷವಾಗಿ ಭಾರತೀಯ ಸ್ವಾತಂತ್ರ‍್ಯ  ಹೋರಾಟವನ್ನೇ ಕಟಕಟೆಯಲ್ಲಿ ನಿಲ್ಲಿಸಿದಂತೆ. ಹಮಾಸನ್ನು ತೋರಿಸಿ ಇಸ್ರೇಲ್ ತನ್ನ ಕ್ರೌರ್ಯವನ್ನು ಸಮರ್ಥಿಸುತ್ತಿದೆ. ಆದರೆ,

  1948ರಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಗುವಾಗ ಹಮಾಸ್ ಹುಟ್ಟಿಕೊಂಡೇ ಇರಲಿಲ್ಲ. ಇಸ್ರೇಲ್‌ನ ಅನ್ಯಾಯವನ್ನು ಮತ್ತು  ಫೆಲೆಸ್ತೀನಿಯರ ಅಸಹಾಯಕತೆಯನ್ನು ಕಂಡೂ ಕಂಡೂ ರೋಸಿ ಹೋಗಿ ಸುಮಾರು 4 ದಶಕಗಳ ಬಳಿಕ 1987ರ  ಹೊತ್ತಿಗೆ ಸ್ಥಾಪನೆಯಾದ ಗುಂಪು ಇದು. ಫೆಲೆಸ್ತೀನಿಯರ ಸ್ವತಂತ್ರ ರಾಷ್ಟ್ರದ ಹಕ್ಕನ್ನು ಇಸ್ರೇಲ್ ಮಾನ್ಯ ಮಾಡಿರುತ್ತಿದ್ದರೆ ಈ  ಹಮಾಸ್‌ನ ಸೃಷ್ಟಿ ಆಗುತ್ತಲೇ ಇರಲಿಲ್ಲ. ಆದರೆ, ಇಸ್ರೇಲ್ ತನ್ನ ಪ್ರಚಾರ ಬಲದಿಂದ ಫೆಲೆಸ್ತೀನ್ ವಿಮೋಚನಾ  ಹೋರಾಟವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ತಂತ್ರ ಹೆಣೆದಿದೆ. ಆದರೆ, ಇಸ್ರೇಲ್ ಮಾಡುತ್ತಿರುವುದು ಪರಮ ಅನ್ಯಾಯ  ಅನ್ನುವುದನ್ನು ವಿಶ್ವಸಂಸ್ಥೆಯ ನೂರಾರು ಠರಾವುಗಳೇ ಹೇಳುತ್ತಿವೆ.

Thursday, 3 October 2024

ಸುಳ್ಳು ಸುದ್ದಿಗಳ ಉತ್ಪಾದನೆಗೆ ಬೀಗ ಬೀಳಲಿ...

 



ಸನ್ಮಾರ್ಗ ಸಂಪಾದಕೀಯ


ಕರ್ನಾಟಕ ಹೈಕೋರ್ಟ್ ನ  ನ್ಯಾಯಾಧೀಶ ವೇದವ್ಯಾಸಾಚಾರ್ ಮತ್ತು ಅಲಹಾಬಾದ್ ಹೈಕೋರ್ಟ್ ನ  ನ್ಯಾಯಾಧೀಶ  ರೋಹಿತ್ ರಂಜನ್ ಅಗರ್ವಾಲ್ ಅವರ ಅಭಿಪ್ರಾಯಗಳಿಗೆ ಸುಪ್ರೀಮ್ ಕೋರ್ಟ್ ಅಸಂತೋಷ ವ್ಯಕ್ತಪಡಿಸಿದೆ. ಮಾತ್ರವಲ್ಲ,  ಅವರ ಹೇಳಿಕೆಗಳನ್ನು ಅಳಿಸಿ ಹಾಕಿದೆ. ಬೆಂಗಳೂರಿನ ಮುಸ್ಲಿಮ್ ಬಾಹುಳ್ಯ ಪ್ರದೇಶವನ್ನು ಈ ವೇದವ್ಯಾಸಾಚಾರ್  ಪಾಕಿಸ್ತಾನಕ್ಕೆ ಹೋಲಿಸಿದ್ದರು. ಹಾಗೆಯೇ, ಧಾರ್ಮಿಕ ಮತಾಂತರವನ್ನು ನಿಲ್ಲಿಸದಿದ್ದರೆ ಮುಂದೊಂದು  ದಿನ  ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ರೋಹಿತ್ ರಂಜನ್ ಅಗರ್ವಾಲ್ ಹೇಳಿದ್ದರು. ಅಷ್ಟಕ್ಕೂ,

ಸುಪ್ರೀಮ್ ಕೋರ್ಟ್ ಏನೋ ಇವರಿಗೆ ಬುದ್ಧಿ ಹೇಳಿದೆ. ಆದರೆ, ಬುದ್ಧಿ ಹೇಳಿಸಿಕೊಳ್ಳಬೇಕಾದ ಸ್ಥಾನವೇ ಅದು?  ಹೈಕೋರ್ಟ್ ನ್ಯಾಯಾಧೀಶರೆಂದರೆ ಅವರಲ್ಲಿ ಅಪಾರ ಅನುಭವ ಇರುತ್ತದೆ. ಪ್ರಕರಣವನ್ನು ಮತ್ತು ಸಮಾಜವನ್ನು ಅತ್ಯಂತ  ಸೂಕ್ಷ್ಮವಾಗಿ  ಅವಲೋಕಿಸುವ ಜಾಣ್ಮೆಯೂ ಇರುತ್ತದೆ. ಹೀಗಿದ್ದೂ ಇಷ್ಟೊಂದು ಸಡಿಲ ಹೇಳಿಕೆಯನ್ನು ಇವರು ನೀಡಲು  ಸಾಧ್ಯವಾದದ್ದು ಹೇಗೆ? ಸೋಶಿಯಲ್ ಮೀಡಿಯಾದ ಪ್ರಭಾವಕ್ಕೆ ಅರಿವಿಲ್ಲದೆಯೇ ಇವರು ಒಳಗಾಗುತ್ತಿದ್ದಾರೆಯೇ?  ಮುಸ್ಲಿಮ್ ಸಮುದಾಯದ ಬಗ್ಗೆ ಸುಳ್ಳಿನ ಕಾರ್ಖಾನೆಯಲ್ಲಿ ಪ್ರತಿದಿನ ಉತ್ಪಾದಿಸಿ ಹಂಚಲಾಗುತ್ತಿರುವ ಸುದ್ದಿಗಳು  ನ್ಯಾಯಾಲಯಗಳ ಮೇಲೂ ಪ್ರಭಾವ ಬೀರತೊಡಗಿದೆಯೇ?

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬವರ ಹತ್ಯೆ ನಡೆಯಿತು. ಆಕೆಯ ದೇಹವನ್ನು 50 ತುಂಡುಗಳನ್ನಾಗಿ ಕತ್ತರಿಸಿ  ಫ್ರಿಡ್ಜ್ನಲ್ಲಿ ಇಡಲಾಗಿತ್ತು. ಈ ಕ್ರೌರ್ಯ ಬೆಳಕಿಗೆ ಬಂದ ತಕ್ಷಣ ಮುಸ್ಲಿಮ್ ದ್ವೇಷಿಗಳು ಚುರುಕಾದರು. ಅಶ್ರಫ್ ಎಂಬವ  ಈಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪುಕಾರು ಹಬ್ಬಿಸಿದರು. ರಾಜ್ಯ ಬಿಜೆಪಿಯ ಅಧಿಕೃತ ಸೋಶಿಯಲ್ ಮೀಡಿಯಾ  ಖಾತೆಯಲ್ಲೇ  ಈ ಸುಳ್ಳು ಸುದ್ದಿ ಪ್ರಕಟವಾಯಿತು. ‘ಕಾಂಗ್ರೆಸ್ ಸರಕಾರದ ಓಲೈಕೆ ನೀತಿಯಿಂದಾಗಿ ರಾಜ್ಯದಲ್ಲಿ ಕಾನೂನು  ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಶ್ರಫ್‌ನಿಂದ ನಡೆದಿರುವ ಮಹಾಲಕ್ಷ್ಮಿಯ ಹತ್ಯೆಯು ಕನ್ನಡಿಗರು ಇಲ್ಲಿ ಸುರಕ್ಷಿತರಲ್ಲ ಅನ್ನುವುದನ್ನು ಸಾಬೀತುಪಡಿಸಿದೆ’ ಎಂದು ಬಿಜೆಪಿ ಕರ್ನಾಟಕ ಎಂಬ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ಪ್ರಮುಖ  ಟಿವಿ ಚಾನೆಲ್ ನ್ಯೂಸ್ 18ನ ನಿರೂಪಕ ಅಮನ್ ಚೋಪ್ರಾ ಅಂತೂ ಅಶ್ರಫ್‌ನಿಂದಲೇ ಮಹಾಲಕ್ಷ್ಮಿಯ ಹತ್ಯೆ ನಡೆದಿದೆ  ಎಂಬುದನ್ನು ಕಣ್ಣಾರೆ ಕಂಡಂತೆ  ವಾದಿಸಿದ್ದೂ ನಡೆಯಿತು. ಈ ಸುದ್ದಿ ಎರಡ್ಮೂರು ದಿನಗಳ ಕಾಲ ಸೋಶಿಯಲ್  ಮೀಡಿಯಾದಲ್ಲಿ ಮತ್ತು ಟಿವಿ ಚಾನೆಲ್‌ಗಳಲ್ಲಿ ಎಗ್ಗಿಲ್ಲದೇ ಹರಿದಾಡಿದ ಬಳಿಕ ಕೊಲೆಗಾರ ಅಶ್ರಫ್ ಅಲ್ಲ ಅನ್ನುವುದು ಬೆಳಕಿಗೆ  ಬಂತು. ಒಡಿಸ್ಸಾದ ಮುಕ್ತಿ ರಂಜನ್ ರಾಯ್  ಎಂಬಾತ ಈ ಹತ್ಯೆ ನಡೆಸಿದ್ದ. ಮಾತ್ರವಲ್ಲ, ಹತ್ಯೆ ನಡೆಸಿದ ಬಳಿಕ ನೇರ  ಒಡಿಸ್ಸಾಕ್ಕೆ ತೆರಳಿದ ಆತ, ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಇಂಥದ್ದು ಪ್ರತಿದಿನವೆಂಬಂತೆ  ಈ ದೇಶದಲ್ಲಿ ನಡೆಯುತ್ತಿದೆ. ಮುಸ್ಲಿಮರನ್ನು ಕಳ್ಳರು, ದೇಶದ್ರೋಹಿಗಳು, ಹಿಂದೂ ವಿರೋ ಧಿಗಳು, ಮತಾಂತರಿಗಳು, ಪಾಕಿಸ್ತಾನಿಗಳು, ಜಿಹಾದಿಗಳು.. ಎಂದು ಮುಂತಾಗಿ ತರತರದ ಪ್ರಚಾರಗಳನ್ನು  ನಡೆಸಲಾಗುತ್ತಿದೆ. ಹೆಚ್ಚಿನ ಎಲ್ಲ ಆರೋಪಗಳು ಸುಳ್ಳೆಂದು ಸಾಬೀತಾದರೂ ಮತ್ತೆ ಮತ್ತೆ ಸುಳ್ಳನ್ನು ಉತ್ಪಾದಿಸಿ  ಹಂಚಲಾಗುತ್ತಿದೆ. ಸತ್ಯಸುದ್ದಿ ಬಹಿರಂಗಕ್ಕೆ ಬರುವಾಗ ದಿನಗಳು ಕಳೆಯುತ್ತವೆ ಮತ್ತು ಅಷ್ಟು ಅವಧಿಯೊಳಗೆ ಸುಳ್ಳು ತಲು ಪಬೇಕಾದವರಿಗೆಲ್ಲ ತಲುಪಿರುತ್ತದೆ ಎಂಬ ಭರವಸೆಯೇ ಈ ಸುಳ್ಳನ್ನು ಉತ್ಪಾದಿಸಿ ಹಂಚುವವರದ್ದಾಗಿದೆ ಎನ್ನುವುದಕ್ಕೆ  ಪುರಾವೆಗಳ ಅಗತ್ಯ ಇಲ್ಲ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಪರಾಧ ಕೃತ್ಯಗಳು ನಡೆಯುವುದು ಆಶ್ಚರ್ಯದ  ಸಂಗತಿಯಲ್ಲ. ಇದುವೇ ಸುಳ್ಳಿನ ಕಾರ್ಖಾನೆ ನಡೆಸುತ್ತಿರುವವರ ಪಾಲಿನ ಆಮ್ಲಜನಕ. ಇಂಥವುಗಳಲ್ಲಿ ನಿರ್ದಿಷ್ಟ ಘಟನೆಯ ನ್ನು ಎತ್ತಿಕೊಂಡು ಅದಕ್ಕೆ ಮುಸ್ಲಿಮ್ ಬಣ್ಣವನ್ನು ಬಳಿದು ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು ಇವರ ತಂತ್ರ.  ಆದರೆ,

ಈ ಅಪರಾಧಕ್ಕೆ ಶಿಕ್ಷೆ ಏನು? ಈ ಕಾರ್ಖಾನೆಗಳಿಗೆ ಬೀಗ ಜಡಿಯುವವರು ಯಾರು? ತಮ್ಮನ್ನು ಕಾನೂನು ಕಟ್ಟಿಹಾಕುವುದಿಲ್ಲ  ಎಂಬ ಭಂಡ ಧೈರ್ಯವೇ ಇಂಥ ಸುಳ್ಳನ್ನು ಹರಡುವವರ ಮೂಲ ಬಂಡವಾಳ. ಸೋಶಿಯಲ್ ಮೀಡಿಯಾದಲ್ಲಿ ಏನು  ಬರೆದು ಹಾಕಿದರೂ ನಡೆಯುತ್ತದೆ ಎಂಬ ಭಾವನೆ ನಿರ್ದಿಷ್ಟ ಗುಂಪಿನಲ್ಲಿದೆ. ಇದನ್ನು ಸುಳ್ಳು ಮಾಡಬೇಕಾದ ವ್ಯವಸ್ಥೆ  ಕೈಕಟ್ಟಿಕೊಂಡಂತಿದೆ. ಈ ಮಹಾಲಕ್ಷ್ಮಿ ಪ್ರಕರಣವನ್ನೇ ಎತ್ತಿಕೊಳ್ಳಿ. 

ಎರಡ್ಮೂರು ದಿನಗಳ ಕಾಲ ಸುಳ್ಳನ್ನು ಹರಡಿದವರ ಮೇಲೆ  ಈವರೆಗೂ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಇದು ಸುಳ್ಳು ಹರಡುವವರಲ್ಲಿ ಧೈರ್ಯವನ್ನು ಮೂಡಿಸುತ್ತದೆ.  ಮತ್ತೊಂದು ಸುಳ್ಳನ್ನು ಉತ್ಪಾದಿಸಿ ಹಂಚುವುದಕ್ಕೂ ಪ್ರೇರಣೆ ನೀಡುತ್ತದೆ. ನಿರಂತರ ಹೀಗೆ ಸುಳ್ಳನ್ನು ಉತ್ಪಾದಿಸಿ  ಹಂಚುವುದರಿಂದ  ಒಟ್ಟು ಸಮಾಜದ ಮೇಲೆ ಪ್ರಭಾವ ಬಿದ್ದೇ  ಬೀಳುತ್ತದೆ. ಮುಸ್ಲಿಮರನ್ನು ಅಪರಾಧಿಗಳಂತೆ ನೋಡುವುದಕ್ಕೆ  ಇಂಥ ಸುಳ್ಳುಗಳು ಸಮಾಜವನ್ನು ಸಜ್ಜುಗೊಳಿಸುತ್ತದೆ. ದೇಶದಲ್ಲಿ ಈಗಾಗಲೇ ಮುಸ್ಲಿಮ್ ವಿರೋಧಿ ಭಾವನೆಗಳು  ದಟ್ಟವಾಗಿರುವುದರ ಹಿಂದೆ ಇಂಥ ಸುಳ್ಳುಗಳ ಪಾತ್ರ ಬಹಳವಿದೆ. ಇದೇ ಮಹಾಲಕ್ಷ್ಮಿ ಹತ್ಯೆಯ ಬಗ್ಗೆ ಪಶ್ಚಿಮ ಬಂಗಾಳದಲ್ಲಿ  ಸುಳ್ಳು ಸುದ್ದಿಯನ್ನು ಹರಡಲಾಗಿತ್ತು ಎಂಬುದೇ ಈ ಸುಳ್ಳಿನ ವ್ಯಾಪ್ತಿಯನ್ನು ಹೇಳುತ್ತದೆ. ಘಟನೆ ಬೆಂಗಳೂರಿನಲ್ಲಿ ನಡೆದಿದೆಯಾದರೂ ಸುಳ್ಳು ಸುದ್ದಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬಿಜೆಪಿ ಐಟಿ ಸೆಲ್‌ಗಳು ಈ ಸುಳ್ಳನ್ನು  ದೇಶದಾದ್ಯಂತ ಹರಡುವಂತೆ ನೋಡಿಕೊಳ್ಳುತ್ತಿದೆ. ಆದ್ದರಿಂದ ಈ ಸುಳ್ಳನ್ನು ಕೇವಲವಾಗಿ ಕಾಣುವುದು ದೇಶದ ಆಂತರಿಕ  ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ. ಮುಸ್ಲಿಮರ ವಿರುದ್ಧ ಯಾವ ಸಂದರ್ಭದಲ್ಲೂ ದಂಗೆ ಎಬ್ಬಿಸುವುದಕ್ಕೆ ಪೂರಕ  ವಾತಾವರಣವನ್ನು ನಿರ್ಮಿಸಲು ಒಂದು ನಿರ್ದಿಷ್ಟ ಗುಂಪು ಯತ್ನಿಸುತ್ತಿದೆ. ಇದು ಬರೇ ರಾಜಕೀಯ ಹಿತಾಸಕ್ತಿಯ  ದೃಷ್ಟಿಯಿಂದ ಮಾತ್ರ ನಡೆಯುತ್ತಿರುವ ಸಂಚಲ್ಲ. ರಾಜಕೀಯ ಲಾಭದಾಚೆಗೆ ಒಂದು ಸಮುದಾಯದ ಅಸ್ತಿತ್ವವನ್ನೇ ಅಪಾಯಕ್ಕೆ  ಒಡ್ಡುವ ತಂತ್ರವೂ ಇರುವಂತಿದೆ.

ಸದ್ಯ ಪ್ರಭುತ್ವ ಎರಡು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕು. 1. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು. 2. ಸುಳ್ಳು  ಸುದ್ದಿಯನ್ನು ಉತ್ಪಾದಿಸಿ ಹಂಚುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು. ಕನಿಷ್ಠ 6 ತಿಂಗಳ ಅವಧಿಗಾದರೂ  ಜಾಮೀನು ದೊರೆಯದಂಥ ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳುವ ನಿಷ್ಠುರತೆಯನ್ನು ಸರಕಾರ ಪ್ರದರ್ಶಿಸಬೇಕು. ಒಮ್ಮೆ ಸರಕಾರ  ಇಂಥ ಸಾಹಸಕ್ಕೆ ಕೈ ಹಾಕಿದರೆ, ಸುಳ್ಳಿನ ಕಾರ್ಖಾನೆಗಳು ತನ್ನಿಂತಾನೇ ಬಾಗಿಲು ಹಾಕಲು ಶುರು ಮಾಡುತ್ತದೆ. ಇದು ಸದ್ಯದ  ತುರ್ತು ಅಗತ್ಯವೂ ಹೌದು. ಬಹುಶಃ, ಸುಳ್ಳಿನ ಕುರಿತು ಸರಕಾರಗಳ ಮೃದು ನೀತಿಯೇ ಸುಳ್ಳಿನ ವಿಜೃಂಭಣೆಗೆ ಮೂಲ  ಕಾರಣ ಎನ್ನಬೇಕು. ಮುಖ್ಯವಾಗಿ, ಪ್ರಭುತ್ವದಲ್ಲಿರುವವರಿಗೆ ಮುಸ್ಲಿಮರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು  ಸಾಧ್ಯವಾಗದಿರುವುದು ಈ ಉದಾಸೀನ ನೀತಿಗೆ ಕಾರಣವಾಗಿರಬಹುದು. ಸುಳ್ಳನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳಬೇಕಾದ  ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಪ್ರತಿನಿಧಿ ಇಲ್ಲ. ಮುಸ್ಲಿಮರನ್ನು ವೈರಿಗಳಂತೆ  ಬಿಂಬಿಸಿಯೇ ಕೇಂದ್ರದ ಈಗಿನ ಸರಕಾರ ಅಧಿಕಾರ ಪಡೆದಿದೆ. ಆದ್ದರಿಂದ ಸುಳ್ಳು ಸುದ್ದಿಗಳು ಅವರ ಪಾಲಿಗೆ ವರವೇ  ಹೊರತು ಶಾಪವಲ್ಲ. ಆದ್ದರಿಂದ ಕೇಂದ್ರದಿಂದ  ಸಮರ್ಪಕ ನೀತಿ ಪ್ರಕಟವಾದೀತು ಎಂದು ಹೇಳುವಂತಿಲ್ಲ. ಒಂದುವೇಳೆ,  ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳುವ ನೀತಿ ಜಾರಿಗೊಳಿಸಿದರೂ ಅದು ಎಷ್ಟು ಪಕ್ಷಪಾತಿ ರಹಿತವಾಗಿರಬಹುದು  ಎಂಬ ಬಗ್ಗೆ ಅನುಮಾನವಿದೆ. ಆದರೂ,

ಸುಳ್ಳುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇಬೇಕು. ನಿರಂತರ ಒಂದು ನಿರ್ದಿಷ್ಟ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾ ಇರುವುದರಿಂದ ಸಮಾಜವೇ ಅದನ್ನು ನಂಬಿಬಿಡುತ್ತದೆ. ಸರಕಾರಿ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯಾಗಲಿ  ಎಲ್ಲರೂ ಈ ಸಮಾಜದ ಭಾಗವೇ ಆಗಿರುವುದರಿಂದ ಅವರನ್ನು ಈ ಸುಳ್ಳುಗಳು ಪ್ರಭಾವಿಸದೆ ಇರಲು ಸಾಧ್ಯವೇ ಇಲ್ಲ.  ಮುಸ್ಲಿಮರ ಬಗ್ಗೆ ನ್ಯಾಯಾಧೀಶರೇ ಆಕ್ಷೇಪಾರ್ಹ ರೀತಿಯಲ್ಲಿ ಹೇಳಿಕೆ ನೀಡುತ್ತಾರೆಂದ ಮೇಲೆ ಉಳಿದವರ ಬಗ್ಗೆ  ಹೇಳುವುದಕ್ಕೇನಿದೆ? ಆದ್ದರಿಂದ, ಸುಳ್ಳು ಸುದ್ದಿಗಳ ವಿರುದ್ಧ ಧರ್ಮ ನೋಡದೇ ಕ್ರಮ ಕೈಗೊಳ್ಳುವ ಬಗ್ಗೆ ವ್ಯವಸ್ಥೆ ಗಂಭೀರ  ಚಿಂತನೆ ನಡೆಸಲಿ.
ಈ ಸುಳ್ಳುಗಳೆಲ್ಲ ಉದ್ದೇಶರಹಿತ ಮತ್ತು ಅಚಾನಕ್ ಬೆಳವಣಿಗೆಗಲ್ಲ. ಅದರ ಹಿಂದೆ ವ್ಯವಸ್ಥಿತ ತಂತ್ರವಿದೆ. ಅದನ್ನು ಬಯಲಿಗೆಳೆದು ಸಮಾಜದ ಆರೋಗ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆ ಸರಕಾರದ ಮೇಲಿದೆ.

ಜಮಾಅತೆ ಇಸ್ಲಾಮೀ ನಾಯಕರನ್ನು ನೇಣಿಗೇರಿಸಿದ್ದ ಹಸೀನಾಗೆ ನೇಣು ಭೀತಿ






‘ಯುದ್ಧಾಪರಾಧ ನ್ಯಾಯ ಮಂಡಳಿ’ಯನ್ನು ರಚಿಸಿ 5 ಮಂದಿ ಜಮಾಅತೆ ಇಸ್ಲಾಮೀ  ನಾಯಕರನ್ನು ನೇಣಿಗೇರಿಸಿದ್ದ  ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಇದೀಗ ಸ್ವತಃ ನೇಣು ಶಿಕ್ಷೆಯ ಭೀತಿಯನ್ನು  ಎದುರಿಸುತ್ತಿದ್ದಾರೆ. ಅವರ ವಿರುದ್ಧ ಬಾಂಗ್ಲಾದೇಶದಲ್ಲಿ ಹತ್ಯೆ, ಹತ್ಯಾ ಪ್ರಚೋದನೆ ಸಹಿತ ವಿವಿಧ ಕಲಂಗಳಡಿ ಪ್ರಕರಣ  ದಾಖಲಿಸಲಾಗಿದೆ.

 2001 ರಿಂದ 2006ರ ವರೆಗೆ ಅಧಿಕಾರದಲ್ಲಿದ್ದ ಬೇಗಂ ಖಲೀದಾ ಝಿಯಾ ಅವರ ಸರಕಾರದ  ಪಾಲುದಾರನಾಗಿ ಜಮಾಅತೆ ಇಸ್ಲಾಮಿಯು ಬಾಂಗ್ಲಾ ದೇಶದ ನಾಗರಿಕರ ಗಮನ ಸೆಳೆದಿತ್ತು. ಜಮಾಅತ್ ಅಧ್ಯಕ್ಷರಾಗಿದ್ದ  ಮೌಲಾನಾ ಮುತೀರ‍್ರಹ್ಮಾನ್ ನಿಝಾಮಿ ಅವರು ಕೃಷಿ ಮತ್ತು ಉದ್ಯಮ ಸಚಿವರಾಗಿ ಆಯ್ಕೆಯಾದುದಲ್ಲದೆ, ತನ್ನ  ಭ್ರಷ್ಟರಹಿತ ಪಾರದರ್ಶಕ ನೀತಿಯಿಂದ ಜನಪ್ರಿಯರಾದರು. ಇವರೂ ಸಹಿತ 2001ರಲ್ಲಿ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದ  ಜಮಾಅತ್‌ನ ಎಲ್ಲಾ 18 ಮಂದಿ ಸಂಸದರಲ್ಲಿ ಯಾರೊಬ್ಬರೂ ಭ್ರಷ್ಟಾಚಾರದಲ್ಲಿ ಸಿಲುಕಿಕೊಳ್ಳಲಿಲ್ಲ. ಅದೇವೇಳೆ,

2006ರ ಚುನಾವಣೆಯಲ್ಲಿ ಖಲೀದಾ ಝಿಯಾ ಸರ್ಕಾರ ಪತನಗೊಳ್ಳುವುದಕ್ಕೆ ಭ್ರಷ್ಟಾಚಾರವೂ ಒಂದು ಪ್ರಬಲ  ಕಾರಣವಾಗಿತ್ತು. ಈ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಅವಾಮೀ ಲೀಗ್ ಪಕ್ಷ ಬಹುಮತ ಪಡಕೊಂಡಿತಾದರೂ  ಜಮಾಅತೆ ಇಸ್ಲಾಮಿಯನ್ನು ಬಾಂಗ್ಲಾದೇಶಿಯರು ಭವಿಷ್ಯದ ಆಡಳಿತ ಪಕ್ಷವಾಗಿ ಸ್ವೀಕರಿಸುವ ಸೂಚನೆಯನ್ನು ನೀಡಿದ್ದರು.  ಆಡಳಿತ ವಿರೋಧಿ ಅಲೆಯಿಂದಾಗಿ ಜಮಾಅತ್ ಗಣನೀಯ ಸಂಖ್ಯೆಯಲ್ಲಿ ಪಾರ್ಲಿಮೆಂಟ್ ಸೀಟನ್ನು ಕಳಕೊಂಡರೂ  ತಳಮಟ್ಟದಲ್ಲಿ ಅದು ತನ್ನ ಜಾಲವನ್ನು ವಿಸ್ತರಿಸಿಕೊಂಡಿತ್ತು. ಶಿಕ್ಷಣ, ಆರೋಗ್ಯ ಮತ್ತು ನಾಗರಿಕ ಸೌಲಭ್ಯ ಕ್ಷೇತ್ರಗಳಲ್ಲಿ ಅದು  ಬಾಂಗ್ಲಾದೇಶೀಯರ ಮನೆ-ಮನಕ್ಕೆ ತಲುಪಿತ್ತು. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶೇಖ್ ಹಸೀನಾ ಅವರಿಗೆ  ಕಂಟಕವಾಗುವ ಎಲ್ಲ ಸೂಚನೆಯನ್ನೂ ಅದು ನೀಡಿತ್ತು. ಭ್ರಷ್ಟಾಚಾರ ಮತ್ತು ಜನಾಕ್ರೋಶಕ್ಕೆ ತುತ್ತಾಗಿದ್ದ ಖಾಲಿದಾ ಝಿಯಾ  ಅವರ ಪಕ್ಷವನ್ನು ಎದುರಿಸುವಷ್ಟು ಸುಲಭವಾಗಿ ಬೇರುಮಟ್ಟ ದಲ್ಲಿ ಕಾರ್ಯಕರ್ತರನ್ನು ಹೊಂದಿರುವ ಜಮಾಅತೆ  ಇಸ್ಲಾಮಿಯನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಹಸೀನಾ ತಿಳಿದುಕೊಂಡರು. 2006ರ ಚುನಾವಣಾ ಪ್ರಚಾರದಲ್ಲೇ  ಇದು ಅವರಿಗೆ ಮನವರಿಕೆ ಯಾಗಿತ್ತು. ಆದ್ದರಿಂದಲೇ, ‘ಅಧಿಕಾರಕ್ಕೆ ಬಂದರೆ ಯುದ್ಧಾಪರಾಧ ನ್ಯಾಯಮಂಡಳಿ’  ರಚಿಸುವುದಾಗಿ ಘೋಷಿಸಿದ್ದರು. 2009ರಲ್ಲಿ ಅವರು ಯುದ್ಧಾಪರಾಧ ನ್ಯಾಯಮಂಡಳಿಯನ್ನು ರಚಿಸಿದರು. ನಿಜವಾಗಿ,

ಯುದ್ಧಾಪರಾಧಗಳನ್ನು ತನಿಖಿಸುವುದೇ ಅವರ ಉದ್ದೇಶವಾಗಿದ್ದರೆ 1996ರಿಂದ 2001ರ ವರೆಗೆ ಪ್ರಧಾನಿಯಾಗಿದ್ದಾಗಲೇ  ಅವರಿಗೆ ಈ ನ್ಯಾಯಮಂಡಳಿಯನ್ನು ರಚಿಸಬಹುದಿತ್ತು. ಅಲ್ಲದೇ 1996ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶೇಖ್  ಹಸೀನಾರನ್ನು ಜಮಾಅತೆ ಇಸ್ಲಾಮೀ ಬೆಂಬಲಿಸಿತ್ತು ಮತ್ತು ಖಲೀದಾ ಝಿಯಾಗೆ ವಿರುದ್ಧವಾಗಿ ನಿಂತಿತ್ತು. ಆದರೆ ಶೇಖ್  ಹಸೀನಾ ಸರಕಾರದಲ್ಲಿ ಜಮಾಅತ್ ಭಾಗಿಯಾಗಲಿಲ್ಲ ಮತ್ತು 1998ರಲ್ಲಿ ಖಲೀದಾ ಝಿಯಾರ ಜೊತೆ ಮೈತ್ರಿ  ಮಾಡಿಕೊಂಡಿತು. ಇದಕ್ಕಿಂತ ಮೊದಲು ಶೇಖ್ ಹಸೀನಾರ ತಂದೆ ಶೇಖ್ ಮುಜೀಬರ‍್ರಹ್ಮಾನ್‌ರು 1971ರಲ್ಲಿ ಹೊಸದಾಗಿ  ರಚನೆಗೊಂಡ ಬಾಂಗ್ಲಾದೇಶದ ಪ್ರಪ್ರಥಮ ಪ್ರಧಾನಿಯಾಗಿದ್ದರು. ಅವರನ್ನು ಬಾಂಗ್ಲಾದ ರಾಷ್ಟ್ರ ಪಿತ ಎಂದು ಕರೆಯಲಾಗು  ತ್ತದೆ. ಪ್ರತ್ಯೇಕ ಬಾಂಗ್ಲಾದೇಶದ ರಚನೆಗಾಗಿ 1971ರಲ್ಲಿ ಮುಜೀಬರ‍್ರಹ್ಮಾನ್ ನೇತೃತ್ವದಲ್ಲಿ ನಡೆದ ಹೋರಾಟದ ವೇಳೆ ನಡೆದ  ನಾಗರಿಕರ ನರಮೇಧವನ್ನು ಶೇಖ್ ಹಸೀನಾ ಅವರು ಯುದ್ಧಾಪರಾಧ ಎಂದು ಕರೆಯುತ್ತಿದ್ದಾರೆ. ಜಮಾಅತೆ ಇಸ್ಲಾಮೀ  ಇದರಲ್ಲಿ ಭಾಗಿಯಾಗಿದೆ ಎಂಬುದು ಅವರ ಆರೋಪ. ಆದರೆ,

ಈ ವಿಷಯದಲ್ಲಿ ಅತೀ ಹೆಚ್ಚು ತಿಳಿದವರು ಶೇಖ್ ಮುಜೀಬರ‍್ರಹ್ಮಾನ್. ಪ್ರಧಾನಿಯಾಗಿದ್ದ ಮತ್ತು ಬಾಂಗ್ಲಾದ `ಗಾಂಧೀಜಿ'ಯಾಗಿದ್ದ ಅವರಿಗೆ ಇಂಥದ್ದೊಂದು  ನ್ಯಾಯಮಂಡಳಿ ರಚಿಸುವುದಕ್ಕೆ ಸರ್ವ ಸ್ವಾತಂತ್ರ್ಯವೂ ಇತ್ತು. ಆದರೂ ಅವರು  ರಚಿಸಲಿಲ್ಲ. ಪಾಕಿಸ್ತಾನದ ವಿಭಜನೆಗೆ ಜಮಾಅತೆ ಇಸ್ಲಾಮಿಯ ಬೆಂಬಲ ಇರಲಿಲ್ಲವಾದರೂ ಮತ್ತು ಪೂರ್ವ ಮತ್ತು ಪಶ್ಚಿಮ  ಪಾಕಿಸ್ತಾನವನ್ನು ಸ್ವಾಯತ್ತ ಪ್ರದೇಶವಾಗಿ, ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಪಾಲಿಮೆಂಟ್‌ನ ರಚನೆಗಾಗಿ ಮುಜೀಬರ‍್ರಹ್ಮಾನ್ ನಡೆಸಿದ್ದ  ಹೋರಾಟವನ್ನು ವಿರೋಧಿಸಿತ್ತಾದರೂ ಅದು ಎಂದೂ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿರಲಿಲ್ಲ ಎಂಬುದೇ ಸತ್ಯ. ಇಲ್ಲದಿದ್ದರೆ  ಮುಜೀಬರ‍್ರಹ್ಮಾನ್‌ರು ಖಂಡಿತ ಯುದ್ಧಾಪರಾಧ ನ್ಯಾಯ ಮಂಡಳಿಯನ್ನು ರಚಿಸುತ್ತಿದ್ದರು. ಆದರೆ,

2009ರಲ್ಲಿ ಪ್ರಧಾನಿ ಶೇಖ್ ಹಸೀನಾ ಯುದ್ಧಾಪರಾಧ ನ್ಯಾಯ ಮಂಡಳಿಯನ್ನು ರಚಿಸಿದರು. ಜಮಾಅತೆ ಇಸ್ಲಾಮಿಯನ್ನು  ಹಣಿಯುವುದೇ ಅವರ ಉದ್ದೇಶವಾಗಿತ್ತು. ಈ ನ್ಯಾಯಮಂಡಳಿ ಎಷ್ಟು ಏಕಮುಖವಾಗಿ ವಿಚಾರಣೆ ನಡೆಸಿತ್ತೆಂದರೆ,  ಇಂಟರ್‌ನ್ಯಾಶನಲ್ ಬಾರ್ ಅಸೋಸಿಯೇಶನ್, ನೋ ಪೀಸ್ ವಿದೌಟ್ ಜಸ್ಟಿಸ್, ಅಮೇರಿಕದ ಪಾರ್ಲಿಮೆಂಟ್ ಸದಸ್ಯರು,  ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯರು, ಬ್ರಿಟನ್ ಮತ್ತು ವೇಲ್ಸ್ ಮಾನವ ಹಕ್ಕು ಸಮಿತಿ, ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ಗಳು  ನ್ಯಾಯ ಮಂಡಳಿಯ ಉದ್ದೇಶಶುದ್ಧಿಯನ್ನೇ ಪ್ರಶ್ನಿಸಿದುವು. ಆದರೆ, ಹಸೀನಾ ಇವಾವುದನ್ನೂ ಕಿವಿಗೆ ಹಾಕಿ ಕೊಳ್ಳಲೇ ಇಲ್ಲ.  ಜಮಾಅತ್‌ನ ಪ್ರಮುಖ ನಾಯಕರಾದ ಅಲಿ ಅಹ್ಸನ್ ಮುಜಾಹಿದ್, ಅಬ್ದುಲ್ ಕಾದರ್ ಮುಲ್ಲಾ, ಮುಹಮ್ಮದ್  ಕಮರುಝ್ಝಮಾನ್, ಅಲಿ ಕಾಸಿಂ ಮತ್ತು ಖಲೀದಾ ಝಿಯಾ ಸರಕಾರದಲ್ಲಿ ಸಚಿವರಾಗಿದ್ದ ಮುತೀವುರ‍್ರಹ್ಮನ್  ನಿಝಾಮಿಯನ್ನು ಗಲ್ಲಿಗೇರಿಸಿತು. ಈ ತೀರ್ಪುಗಳನ್ನು ಸುಪ್ರೀಮ್ ಕೋರ್ಟ್ನಲ್ಲಿ ಪ್ರಶ್ನಿಸಲಾಯಿತಾದರೂ ಪ್ರಯೋಜ ನವಾಗಲಿಲ್ಲ. ಅಂದಹಾಗೆ, ಇತ್ತೀಚೆಗೆ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಹೋರಾಟಗಾರರು ಸುಪ್ರೀಮ್  ಕೋರ್ಟನ್ನು ಸುತ್ತುವರಿದಿದ್ದಲ್ಲದೇ, ಮುಖ್ಯ ನ್ಯಾಯಾಧೀಶ ರಾಜೀನಾಮೆ ಕೊಡುವಂತೆ ಮಾಡಿದ್ದು ಇಲ್ಲಿ ಸ್ಮರಣಾರ್ಹ.  ಕೋರ್ಟ್ ನ  ಉಳಿದ ಐವರು ನ್ಯಾಯಾಧೀಶರ ರಾಜೀನಾಮೆಯನ್ನೂ ಈ ಹೋರಾಟಗಾರರು ಆಗ್ರಹಿಸಿದ್ದರು ಎಂಬುದೂ  ಇಲ್ಲಿ ಮುಖ್ಯ. ರಾಜೀನಾಮೆ ನೀಡಿದ ಮುಖ್ಯ ನ್ಯಾಯಾಧೀಶರು ಹಸೀನಾ ಅವರ ಆಪ್ತರೂ ಬಂಧುವೂ ಆಗಿದ್ದರು  ಎಂಬುದನ್ನು ಪರಿಗಣಿಸಿದರೆ, ಒಟ್ಟು ನ್ಯಾಯಾಂಗ ವ್ಯವಸ್ಥೆಯನ್ನು ಹಸೀನಾ ಹೇಗೆ ದುರ್ಬಳಕೆ ಮಾಡಿಕೊಂಡಿದ್ದರು  ಎಂಬುದು ಮನದಟ್ಟಾಗುತ್ತದೆ. ಆಘಾತಕಾರಿ ಸಂಗತಿ ಏನೆಂದರೆ,

ಹೆದರಿಸಿ, ಬೆದರಿಸಿ, ಅಪಹರಿಸಿ ಸಾಕ್ಷಿಗಳಿಂದ ಸಾಕ್ಷ್ಯ  ಪಡೆಯಲಾಗಿತ್ತು ಎಂಬುದು. ಪಶ್ಚಿಮ ಪಾಕಿಸ್ತಾನದ ಬೋಶುಗೋರಿ  ಗ್ರಾಮದಲ್ಲಿ ನಡೆದ 450 ಮಂದಿಯ ಹತ್ಯೆಗೆ ನಿಝಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. ಆ ಹತ್ಯಾಕಾಂಡ  ನಡೆಸಲು ನಿಝಾಮಿ ಅವರು ಪಾಕ್ ಸೈನಿಕರಿಗೆ ಗ್ರಾಮದ ದಾರಿ ತೋರಿಸಿದ್ದರು ಎಂಬುದು ಆರೋಪ. ಇದೇ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಲಾಗಿತ್ತು. ಆ ಹತ್ಯಾಕಾಂಡದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯನ್ನು ಹೇಗೆ ಬಂದೂಕಿನ ಮೊನೆಯಲ್ಲಿಟ್ಟು ಸಾಕ್ಷ್ಯ  ಪಡೆಯಲಾಗಿತ್ತು ಎಂಬುದನ್ನು ಆ ಬಳಿಕದ ಸ್ಟಿಂಗ್ ಆಪರೇಶನ್ ಹೇಳಿತ್ತು. ಇದರ ಆಧಾರದಲ್ಲೇ  ಲಂಡ ನ್‌ನ ದಿ ಟೆಲಿಗ್ರಾಫ್ ಪತ್ರಿಕೆಯು ನಿಝಾಮಿ ವಿಚಾರಣಾ ಪ್ರಕ್ರಿಯೆಯನ್ನೇ ಬೋಗಸ್ ಎಂದು ಹೇಳಿತ್ತು. ಆ ಸ್ಟಿಂಗ್ ಆಪರೇ ಶನ್‌ನಲ್ಲಿ ಆ ವ್ಯಕ್ತಿ ತನ್ನನ್ನು ಪೊಲೀಸರು ಅಪಹರಿಸಿದ್ದು, ಮಂತ್ರಿಯ ಬಳಿಗೆ ಕೊಂಡೊಯ್ದದ್ದು ಮತ್ತು ಜೀವಬೆದರಿಕೆ  ಹಾಕಿದ್ದನ್ನೆಲ್ಲಾ ಹೇಳಿಕೊಂಡಿದ್ದ. ಅಲ್ಲದೇ, ಚುನಾವಣೆಯಲ್ಲಿ ತಾನು ಜಮಾಅತೆ ಇಸ್ಲಾಮಿಗೆ ಓಟು ಹಾಕಿದ್ದೆ  ಎಂದೂ ಹೇಳಿದ್ದ.  ಪಾಕ್ ಸೇನೆಗೆ ದಾರಿ ತೋರಿಸಿದವನ ಹೆಸರು ಅಸದ್ ಎಂದಾಗಿದ್ದು, ಆತನನ್ನು ಸ್ವಾತಂತ್ರ‍್ಯ ಹೋರಾಟಗಾರರು ಬಂಧಿಸಿದರಲ್ಲದೇ ಜನತಾ ನ್ಯಾಯಾಯಲದಲ್ಲಿ ವಿಚಾರಣೆಗೆ ಒಳಪಡಿಸಿ ನೇಣಿಗೇರಿಸಿದ್ದರು ಎಂದೂ ಆತ ಸ್ಟಿಂಗ್ ಆಪರೇಶನ್ ನಲ್ಲಿ ಹೇಳಿದ್ದ. ನಿಝಾಮಿ ವಿರುದ್ಧ ತಾನು ಸಾಕ್ಷ್ಯ  ನುಡಿಯದಿದ್ದರೆ ಪೊಲೀಸ್ ಇಲಾಖೆಯಲ್ಲಿರುವ ತನ್ನ ಮಗನ ಕೆಲಸ  ಹೋಗಲಿದೆ ಎಂಬ ಭೀತಿಯನ್ನೂ  ಆತ ವ್ಯಕ್ತಪಡಿಸಿದ್ದ.

ಬಾಂಗ್ಲಾದ ಯುದ್ಧಾಪರಾಧ ನ್ಯಾಯ ಮಂಡಳಿಯ ವಿವಿಧ ಪ್ರಕ್ರಿಯೆಯನ್ನು ಅಧ್ಯಯನ ನಡೆಸಿದರೆ, ಹಸೀನಾ ಎಂಥ  ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿದ್ದರು ಅನ್ನುವುದು ಗೊತ್ತಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜಮಾಅತೆ  ಇಸ್ಲಾಮೀ ವಿರುದ್ಧ ನಿಷೇಧ ಹೊರಡಿಸುವುದಕ್ಕೂ ಅವರು ಸಫಲವಾದರು. ತನ್ನ ವಿರುದ್ಧದ ಪ್ರತಿ ಧ್ವನಿಯನ್ನೂ ಹತ್ತಿಕ್ಕಿದರು.  ಜಮಾಅತೆ ಇಸ್ಲಾಮಿಯ ಸಾವಿರಾರು ಕಾರ್ಯಕರ್ತರು ತಲೆಮರೆಸಿಕೊಂಡೋ ನಿರಾಶ್ರಿತರಾಗಿಯೋ ಬದುಕಿದರು. ಅವರ  ನಾಯಕರನ್ನು ಜೈಲಿಗಟ್ಟಿದರು. ಅದರ ಚಟುವಟಿಕೆಗಳನ್ನು ಹತ್ತಿಕ್ಕಿದರು. ಇದರಿಂದ ನಾಗರಿಕರು ಎಷ್ಟು  ರೋಸಿಹೋದರೆಂದರೆ, 2022ರ ಪಾರ್ಲಿಮೆಂಟ್ ಚುನಾವಣೆಯನ್ನು ಬಹುತೇಕ  ಬಹಿಷ್ಕರಿಸಿದರು. ಕೇವಲ  40% ಮಂದಿಯಷ್ಟೇ ಮತದಾನ ಮಾಡಿದರು. ಹಸೀನಾರ ದಮನ ನೀತಿಯನ್ನು ಸ್ವತಃ ಅಮೇರಿಕವೇ ವಿರೋಧಿಸಿತು.  ಈಗಿನ ಮಧ್ಯಂತರ ಸರಕಾರದ ಪ್ರಧಾನಿ ಮುಹಮ್ಮದ್ ಯೂನುಸ್ ವಿರುದ್ಧವೇ 200ರಷ್ಟು ಕೇಸ್‌ಗಳನ್ನು ದಾಖಲಿಸಿ ಈ  ಹಸೀನಾ ಬಾಂಗ್ಲಾದಿಂದಲೇ ಓಡಿಸಿದ್ದರು. ಇದೀಗ,

ಅಂಥ ಹಸೀನಾರೇ ಮರಣ ದಂಡನೆ ಭೀತಿಯನ್ನು ಎದುರಿಸುತ್ತಿದ್ದಾರೆ. ಭಾರತ ಸರ್ಕಾರ ಒಂದೊಮ್ಮೆ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾನ್ತರಿಸಿದರೆ ಅವರಿಗೆ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಕಾಲ ಅತ್ಯಂತ ಶೀಘ್ರವಾಗಿ ಮತ್ತು  ಕಟುವಾಗಿ ಪ್ರತಿಕ್ರಿಯಿಸುತ್ತದೆ, ಅಲ್ಲವೇ?