Monday, 22 September 2025

ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು?





ಜಾತಿಯೇ ಇಲ್ಲದ ಧರ್ಮದ ಅನುಯಾಯಿಗಳು ಜಾತಿಯಾಧಾರಿತವಾಗಿ ಗುರುತಿಸಿಕೊಂಡರೆ ಅದು ಧರ್ಮದ್ರೋಹ ಆಗದೇ? ಇಸ್ಲಾಮ್‌ನಲ್ಲಿ ಜಾತಿಯೇ ಇಲ್ಲ ಎಂದ ಮೇಲೆ ಉಪಜಾತಿ ಯಾವುದು? ಸರಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಥವಾ ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು? ನಿಮ್ಮ ಧರ್ಮ ಯಾವುದು, ಜಾತಿ ಯಾವುದು ಮತ್ತು ಉಪಜಾತಿ ಯಾವುದು ಎಂದು ಸಮೀಕ್ಷೆಯವರು ಮನೆಗೆ ಬಂದು ಪ್ರಶ್ನಿಸಿದರೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಬರೆಯಬಹುದೇ? ಮುಸ್ಲಿಮ್ ಅನ್ನುವುದು ಜಾತಿ ಅಲ್ಲವಲ್ಲ. ಇಸ್ಲಾಮನ್ನು ಅನುಸರಿಸುವವ ಎಂಬ ಅರ್ಥದಲ್ಲಿರುವ ಮುಸ್ಲಿಮ್ ಅನ್ನು ಜಾತಿ ಎಂದು ಒಪ್ಪಿಕೊಂಡರೆ ಇಸ್ಲಾಮಿನ ‘ಜಾತಿರಹಿತ’ ಬೋಧನೆಗೆ ವಿರುದ್ಧವಾಗಿ ನಡಕೊಂಡಂತಲ್ಲವೇ? ಒಂದುವೇಳೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಎಲ್ಲರೂ ತುಂಬಿಸಿದರೂ ಅದರ ನಂತರದ ಉಪಜಾತಿಗೆ ಏನುತ್ತರಿಸಬೇಕು? ಅದನ್ನು ಖಾಲಿ ಬಿಟ್ಟರೆ ಏನು? ತುಂಬಿಸುವುದರಿಂದ  ಪ್ರಯೋಜನವೇನು? ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ, ಕಸಾಬ್, ಬ್ಯಾರಿ, ದಖ್ಖನಿ, ಬಾಗ್ಬಾನ್, ಅಟ್ಟಾರಿ, ಚಪ್ಪರ್‌ಬಂದರ್, ದರ್ಜಿ, ಧೋಬಿ, ಜೋಹಾರಿ, ಪಟ್ಟೆಗಾರ್, ಫೂಲ್‌ಮಾಲಿ, ರಂಗ್ರೆಜ್, ತೇಲಿ... ಇತ್ಯಾದಿ ಇತ್ಯಾದಿಯಾಗಿ ದಾಖಲಿಸುವುದರಿಂದ ಇಸ್ಲಾಮಿನ ಸಮಾನತೆ ಮತ್ತು ಜಾತಿರಹಿತ ಪರಿಕಲ್ಪನೆಗೆ ಬೀಳುವ ಹೊಡೆತವೇನು?

ಜಾತಿ ಸಮೀಕ್ಷೆ ಈಗಾಗಲೇ ಆರಂಭಗೊಂಡಿರುವುದರ ನಡುವೆಯೇ ಮುಸ್ಲಿಮ್ ಸಮುದಾಯದಲ್ಲಿ ಈ ಬಗೆಯ ಚರ್ಚೆಯೂ ಮುಂದುವರಿದಿದೆ. ನಿಜವಾಗಿ, ಈ ಚರ್ಚೆ ಸ್ವಾಗತಾರ್ಹ ಮತ್ತು ಮುಸ್ಲಿಮರಿಗೆ ಒಂದು ಸಮುದಾಯವಾಗಿ ಆತ್ಮಾವಲೋಕನ ನಡೆಸುವುದಕ್ಕೂ ಅತ್ಯುತ್ತಮ ಸಂದರ್ಭ. 2015ರಲ್ಲಿ ನಡೆಸಲಾದ ಜಾತಿ ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟು ಸುಮಾರು 80 ಲಕ್ಷ ಮುಸ್ಲಿಮರಲ್ಲಿ 99 ಉಪಜಾತಿಗಳಿವೆ ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ ಶೇಖ್ ಎಂಬುದು ಅತೀ ಹೆಚ್ಚು ಜನಸಂಖ್ಯೆಯಿರುವ ಉಪಜಾತಿ ಎಂದೂ ದಾಖಲಾಗಿದೆ. ಇವರ ಸಂಖ್ಯೆ 5 ಲಕ್ಷದ 50 ಸಾವಿರ. ಅಲ್ಲದೇ ಒಟ್ಟು 80 ಲಕ್ಷ ಜನರಲ್ಲಿ 59 ಲಕ್ಷ ಮಂದಿ ತಮ್ಮನ್ನು ಕೇವಲ ಮುಸ್ಲಿಮ್ ಎಂದು ಗುರುತಿಸಿರುವುದೂ ಗೊತ್ತಾಗಿದೆ. 2025 ಫೆಬ್ರವರಿ 29ರಂದು ಹಿಂದುಳಿದ ಆಯೋಗಗಳ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಆ ವರದಿಯ ಬಗ್ಗೆ ಕೇಳಿಬಂದ ಆಕ್ಷೇಪಗಳ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆಗೆ ಸರಕಾರ ಕೈಹಾಕಿದೆ. ಅಂದಹಾಗೆ,

ಸರಕಾರವೇ ಹೇಳಿಕೊಂಡಿರುವಂತೆ  ಇದು ಜಾತಿ ಸಮೀಕ್ಷೆ ಅಲ್ಲ. ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅತ್ಯಂತ ಪಾರದರ್ಶಕವಾಗಿ ಅರಿತುಕೊಳ್ಳುವುದಕ್ಕೆ ಮಾಡಲಾಗುವ ಯತ್ನ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಒಂದು ನಿರಾಕರಿಸಲಾಗದ ಸತ್ಯವಾಗಿರುವುದರಿಂದ ಮತ್ತು ಬಹುಸಂಖ್ಯಾತ ಜನರು ಜಾತಿಯಾಧಾರಿತವಾಗಿಯೇ ವಿಭಜನೆಗೊಂಡಿರುವುದರಿಂದ  ಸಮೀಕ್ಷೆಯ ಕಾಲಂನಲ್ಲಿ ಜಾತಿ ಮತ್ತು ಉಪಜಾತಿಗಳು ಇರಬೇಕಾದುದು ಅನಿವಾರ್ಯ. ಈ ಕಾಲಂಗಳನ್ನು ತುಂಬುವುದು ಐಚ್ಛಿಕವೇ ಹೊರತು ಕಡ್ಡಾಯ ಅಲ್ಲ. ಒಂದುವೇಳೆ, ಧರ್ಮ ಎಂಬ ಕಾಲಂನ್ನು ತುಂಬಿ ಉಳಿದ ಜಾತಿ ಮತ್ತು ಉಪಜಾತಿ ಕಾಲಂಗಳನ್ನು ತುಂಬದೇ ಇದ್ದರೂ ಅಪರಾಧ ಆಗುವುದಿಲ್ಲ. ಆದರೆ,

ಈ ಸಮೀಕ್ಷೆಯ ಉದ್ದೇಶ ಪೂರ್ಣಗೊಳ್ಳಬೇಕಾದರೆ ಪೂರ್ಣ ಪ್ರಮಾಣದಲ್ಲಿ ಈ ಸಮೀಕ್ಷೆಯೊಂದಿಗೆ ಸಹಕರಿಸುವುದು ಅಗತ್ಯ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಿ ದಾಖಲೆಗಳಲ್ಲಿ ಮುಸ್ಲಿಮ್ ಸಮುದಾಯದ ಉಪಜಾತಿಗಳು ಉಲ್ಲೇಖಗೊಂಡಿವೆ. ಮಾತ್ರವಲ್ಲ, ವಿವಿಧ ಸರಕಾರಿ ಖೋಟಾಗಳನ್ನೂ ಮೀಸಲಾತಿಗಳನ್ನೂ ಈ ಉಪಜಾತಿಗಳು ಪಡೆಯುತ್ತಲೂ ಇವೆ. ಈ ಉಪಜಾತಿ ಗುರುತುಗಳೆಲ್ಲ ಬಹುತೇಕ ವೃತ್ತಿಯಾಧಾರಿತ ಗುರುತುಗಳು. ನದಾಫ, ಪಿಂಜಾರ, ಕಸಾಬ್, ಅಟ್ಟಾರಿ, ಬಾಗ್ಬಾನ್, ಚಪ್ಪರ್‌ಬಂದ್ ಸಹಿತ ಜಯಪ್ರಕಾಶ್ ಆಯೋಗ ಪಟ್ಟಿ ಮಾಡಿರುವ ಉಪಜಾತಿಗಳೆಲ್ಲ ವೃತ್ತಿಯ ಹಿನ್ನೆಲೆಯಲ್ಲೇ  ಗುರುತಿಸಿಕೊಂಡಿವೆ. ಹೂಮಾರುವ ವೃತ್ತಿಯಲ್ಲಿರುವವರು, ಕಸಾಯಿ ವೃತ್ತಿ ಮಾಡುವವರು, ಧೋಬಿ ವೃತ್ತಿ, ದರ್ಜಿ ವೃತ್ತಿ, ಚಪ್ಪಲಿ ಹೊಲಿಯುವ ವೃತ್ತಿ.. ಇತ್ಯಾದಿ ವೃತ್ತಿಗಳನ್ನು ಪರಂಪರಾಗತವಾಗಿ ಮಾಡುತ್ತಾ ಬಂದಿರುವವರು ಒಂದು ಗುಂಪಾಗಿ ಗುರುತಿಸಿಕೊಂಡು ಕೊನೆಗೆ ಅವುಗಳೇ ಒಂದು ಉಪಜಾತಿಯಾಗಿ ಮಾರ್ಪಟ್ಟಿವೆ. ವ್ಯಾಪಾರವನ್ನೇ ನೆಚ್ಚಿಕೊಂಡಿದ್ದರಿAದ ಕರಾವಳಿ ಮತ್ತು ಇನ್ನಿತರ ಪ್ರದೇಶದ ಮುಸ್ಲಿಮರು ‘ಬ್ಯಾರಿ’ಯಾಗಿ ಗುರುತಿಸಿಕೊಂಡರು ಎಂಬ ವಾದವನ್ನೂ ಈ ಹಿನ್ನೆಲೆಯಲ್ಲಿಯೇ ನೋಡಬಹುದು. ನಿಜವಾಗಿ,

ಇವೆಲ್ಲ ಹಿಂದೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜಾತಿಗಳಂಥಲ್ಲ. ಇವು ವೃತ್ತಿಯಾಧಾರಿತ ಕುಲನಾಮಗಳು. ಇಲ್ಲಿ ಬ್ಯಾರಿ, ದಖ್ಖನಿ, ಕಸಾಬ್, ಪಿಂಜಾರ ಸಹಿತ ಎಲ್ಲರೂ ಒಂದೇರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತಾರೆ. ಐದು ಬಾರಿ ನಮಾಝï ಮಾಡುತ್ತಾರೆ. ಉಪವಾಸ ಆಚರಿಸುತ್ತಾರೆ. ಏಕದೇವನನ್ನು ಮತ್ತು ಪ್ರವಾದಿ ಮುಹಮ್ಮದ್‌ರನ್ನು ಅನುಸರಿಸುತ್ತಾರೆ. ಈ ಎಲ್ಲರೂ ಕುರ್‌ಆನನ್ನೇ ಪವಿತ್ರ ಗ್ರಂಥ ಎಂದು ಅಂಗೀಕರಿಸುತ್ತಾರೆ ಮತ್ತು ಅದರಂತೆ ನಡೆಯುತ್ತಾರೆ. ಪರಸ್ಪರ ವೈವಾಹಿಕ ಸಂಬAಧಗಳನ್ನು ಇಟ್ಟುಕೊಂಡಿದ್ದಾರೆ. ಮಸೀದಿಯಲ್ಲಿ ಭುಜಕ್ಕೆ ಭುಜ ತಾಗಿಸಿ ನಮಾಜ್  ಮಾಡುತ್ತಾರೆ. ಹಜ್ಜ್ಗೆಂದು ಮಕ್ಕಾಕ್ಕೆ ಹೋಗುತ್ತಾರೆ. ಅಂದರೆ, ಇಲ್ಲಿ ಉಪಜಾತಿ ಎಂಬ ಕಾಲಂನಲ್ಲಿ ದಾಖಲಿಸಲಾಗುವ ಬ್ಯಾರಿ, ನದಾಫ್, ಪಿಂಜಾರ...ಗಳೆಲ್ಲ ವೃತ್ತಿಯಾಧಾರಿತ ಕುಲನಾಮಗಳೇ ಹೊರತು ಧರ್ಮಾಧಾರಿತ ಜಾತಿಗಳಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಆದರೆ,

ಹಿಂದೂ ಸಮಾಜದಲ್ಲಿರುವ ಜಾತಿ ಮತ್ತು ಉಪಜಾತಿಗಳ ಸ್ವರೂಪ ಹೀಗಲ್ಲ. ಅದು ಧರ್ಮಾಧಾರಿತವಾಗಿಯೇ ಗುರುತಿಸಿಕೊಂಡಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಮತ್ತು ಇವುಗಳ ಪರಿಧಿಗೆ ಒಳಪಡದವರು ದಲಿತರು ಎಂಬ ನೆಲೆಯಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ಈ ಸಮುದಾಯಗಳು ಬೇರೆ ಬೇರೆ ರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತವೆ. ಇವುಗಳ ನಡುವೆ ನಂಬಿಕೆಗೆ ಸಂಬAಧಿಸಿಯೇ ವ್ಯತ್ಯಾಸಗಳಿವೆ. ವೈರುಧ್ಯಗಳಿವೆ. ದೇಗುಲ ಪ್ರವೇಶ ನಿಷೇಧಕ್ಕಾಗಿ ಇವತ್ತೂ ದಲಿತರು ಸುದ್ದಿಗೆ ಒಳಗಾಗುತ್ತಿದ್ದಾರೆ. ಅಸ್ಪೃಶ್ಯತೆ  ಇದೆ. ಈ ನಾಲ್ಕು ವರ್ಣಗಳ ಒಳಗೆ ಮತ್ತು ಜಾತಿ-ಉಪಜಾತಿಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ. ಅನೇಕ ಬಾರಿ ಇಂಥ ಬೇಲಿಯನ್ನು ಮುರಿದ ಕಾರಣಕ್ಕಾಗಿಯೇ ಮರ್ಯಾದಾ ಹತ್ಯೆಗಳಾಗುತ್ತಿರುವುದೂ ಸುದ್ದಿಗೊಳಗಾಗುತ್ತಿದೆ. ಆದ್ದರಿಂದಲೇ,

ಜಾತಿ-ಉಪಜಾತಿ ಎಂಬ ಕಾಲಂ ಕಂಡಾಗಲೇ ಮುಸ್ಲಿಮರಿಗೆ ಈ ಜಾತಿ ಸಂಘರ್ಷಗಳೇ ಕಣ್ಣೆದುರು ಬರುತ್ತದೆ. ನಾವು ಜಾತಿ-ಉಪಜಾತಿ ಕಾಲಂ ಅನ್ನು ತುಂಬಿಸಿದರೆ ಎಲ್ಲಿ ಹಿಂದೂ ಸಮಾಜದಲ್ಲಿರುವ ಜಾತಿಗಳಾಗಿ ಬಿಡುತ್ತೇವೋ ಎಂಬ ಅವ್ಯಕ್ತ ಭಯ ಮುಸ್ಲಿಮರಲ್ಲಿ ಕಾಣಿಸುತ್ತಿದೆ. ಇದು ಅಸಹಜ ಭಯ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇಂಥದ್ದೊಂದು ಜಾತಿ ವಿಭಜನೆಗೆ ಈ ಸಮೀಕ್ಷೆ ವೇದಿಕೆ ಒದಗಿಸುತ್ತದೋ ಎಂಬ ಭೀತಿಯಲ್ಲಿರುವ ಈ ಕಳಕಳಿಯನ್ನು ತಿರಸ್ಕರಿಸಬೇಕಾಗಿಯೂ ಇಲ್ಲ. ಆದರೆ, 

ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಮೇಲೆತ್ತುವುದಕ್ಕೆ ಸರಕಾರದ ಆಶ್ರಯವೂ ಬೇಕಾಗಿದ್ದು, ವೃತ್ತಿಯಾಧಾರಿತ ಕುಲನಾಮಗಳನ್ನು ನಮೂದಿಸುವುದರಿಂದ ಆಯಾ ಕುಲನಾಮಗಳಲ್ಲಿರುವವರ ಒಟ್ಟು ಸಂಖ್ಯೆ ಮತ್ತು ಅವರ ಬದುಕಿನ ಸ್ಥಿತಿ ಸರಕಾರಕ್ಕೆ ಸರಿಯಾಗಿ ಸಿಗುತ್ತದೆ. ಇದರಿಂದ ಅತೀ ಹಿಂದುಳಿದಿರುವ ನಿರ್ದಿಷ್ಟ ಕುಲನಾಮದ ಮುಸ್ಲಿಮ್ ಗುಂಪಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದಕ್ಕೆ ಮತ್ತು ಮೀಸಲಾತಿಯನ್ನು ಒದಗಿಸುವುದಕ್ಕೂ ಅವಕಾಶ ಸಿಗುತ್ತದೆ. ರಾಜ್ಯದ ಒಟ್ಟು 80 ಲಕ್ಷ  ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದಕ್ಕೂ ನಿರ್ದಿಷ್ಟ ಕುಲನಾಮಗಳಿಗೆ ಮಾತ್ರ ವಿಶೇಷ ಮೀಸಲಾತಿ, ಅನುದಾನವನ್ನು ಒದಗಿಸಿ ಅವರನ್ನು ಮೇಲೆತ್ತುವುದಕ್ಕೂ ವ್ಯತ್ಯಾಸ ಇದೆ. 80 ಲಕ್ಷ  ಮಂದಿಗೆ ಮೀಸಲಾತಿ ಘೋಷಿಸಿದಾಗ ಆ 80 ಲಕ್ಷದಲ್ಲಿರುವ ಶ್ರೀಮಂತರು ಅದನ್ನು ಪಕ್ಕನೇ ಪಡಕೊಳ್ಳುವುದಕ್ಕೂ ದುರ್ಬಲರು ವಂಚಿತರಾಗುವುದಕ್ಕೂ ಅವಕಾಶ ಇದೆ. ಆದರೆ, ನಿರ್ದಿಷ್ಟ ಕುಲನಾಮದಲ್ಲಿ ಗುರುತಿಸಿಕೊಂಡ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಒದಗಿಸುವುದರಿಂದ ಆ ಸಮುದಾಯ ಪೂರ್ಣ ಪ್ರಮಾಣದ ಪ್ರಯೋಜನವನ್ನು ಪಡಕೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ. ಆದ್ದರಿಂದ,

ಸರಕಾರದ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಮುಸ್ಲಿಮ್ ಎಂದೂ ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ.. ಎಂದು ಮುಂತಾಗಿಯೂ ನಮೂದಿಸುವುದು ಬಹಳ ಅಗತ್ಯ. ಈ ಬಗ್ಗೆ ಗೊಂದಲ ಬೇಡ. ಪ್ರವಾದಿ(ಸ) ಕಾಲದಲ್ಲಿ ನದೀರ್, ಕುರೈಶ್ ಖಝ್ರಜ್ ಸಹಿತ ಹಲವು ಬುಡಕಟ್ಟು ಗುರುತಿನೊಂದಿಗೆ ಮುಸ್ಲಿಮರು ಗುರುತಿಸಿಕೊಂಡಿದ್ದರು ಎಂಬುದೂ ಇಲ್ಲಿ ಗಮನಾರ್ಹ.

Wednesday, 17 September 2025

ಚಾಲಕನ ಧರ್ಮ ಹುಡುಕಿದವರು ಯಾವ ಧರ್ಮದ ರಕ್ಷಕರು?





ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಲಾರಿಯೊಂದು ಹರಿದ ಪ್ರಕರಣ ಕರ್ನಾಟಕದ ಹಾಸನವನ್ನು ಮಾತ್ರವಲ್ಲ, ರಾಜ್ಯವನ್ನೇ ಆಘಾತಕ್ಕೆ ಸಿಲುಕಿಸಿದೆ. ಈ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಎರಡು ಡಜನ್‌ನಷ್ಟು ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಪ್ರವೀಣ್ ಕುಮಾರ್, ಮಿಥುನ್ ಮತ್ತು ಸುರೇಶ್ ಎಂಬವರು ಹಾಸನದ ಎಂಜಿನಿಯರಿಂಗ್  ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು. ಗಾಯಗೊಂಡವರಲ್ಲೂ ವಿದ್ಯಾರ್ಥಿಗಳಿದ್ದಾರೆ. ದುರಂತ ಏನೆಂದರೆ,

ಈ ಅಪಘಾತ ನಡೆದ ಬೆನ್ನಿಗೇ ಲಾರಿ ಚಾಲಕನ ಧರ್ಮವನ್ನು ಹುಡುಕಾಡಲಾಗಿದೆ. ಆತನನ್ನು ಮುಸ್ಲಿಮ್ ಎಂದು ಪ್ರಚಾರ ಮಾಡಲಾಗಿದೆ. ಈ ಅಪಪ್ರಚಾರ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿತ್ತೆಂದರೆ, ಸ್ವತಃ ಸಚಿವ ಕೃಷ್ಣ ಭೈರೇಗೌಡರೇ ಎಚ್ಚರಿಕೆ ನೀಡಬೇಕಾಯಿತು. ಚಾಲಕನ ಹೆಸರು ಭುವನೇಶ್ ಎಂಬುದನ್ನು ಅಡಗಿಸಿಟ್ಟು, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ನಿಜವಾಗಿ,

ಈ ಅಪಘಾತ ನಮ್ಮಲ್ಲಿ ಯಾವ ಬಗೆಯ ಚರ್ಚೆಯನ್ನು ಹುಟ್ಟು ಹಾಕಬೇಕಿತ್ತು? ಚಾಲಕನ ಧರ್ಮ ಇಲ್ಲಿ ಮುಖ್ಯವಾಗಬೇಕಿತ್ತೋ ಅಥವಾ ಚಾಲಕ ಸೇವಿಸಿದ ಮದ್ಯ ಮುಖ್ಯವಾಗಬೇಕಿತ್ತೋ? ಅಪಘಾತದಲ್ಲೂ ಚಾಲಕನ ಧರ್ಮವನ್ನು ಹುಡುಕುವ ಮನಸ್ಥಿತಿ ಯಾವುದು? ಇದು ಯಾರ ಅಗತ್ಯ? ಇಂಥದ್ದೊಂದು  ಹುಡುಕಾಟ ನಡೆಸಿದವರ ಉದ್ದೇಶ ಏನು? ಅಪಘಾತದಲ್ಲಿ ತಮ್ಮವರನ್ನು ಕಳಕೊಂಡವರಾಗಲಿ, ಗಾಯಗೊಂಡವರಾಗಲಿ ಯಾರೂ ಚಾಲಕನ ಧರ್ಮದ ಬಗ್ಗೆ ಪ್ರಶ್ನೆಯನ್ನೇ ಎತ್ತಿಲ್ಲ. ಅದರ ಬದಲು ಈ ಸಂತ್ರಸ್ತ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಈ ಬಗೆಯ ಮೆರವಣಿಗೆಯನ್ನೇ ವಿರೋಧಿಸಿದ್ದಾರೆ. ಹೀಗಿರುವಾಗ, ಸಂತ್ರಸ್ತರಿಗೆ ಮತ್ತು ಅವರ ಕುಟುಂಬಕ್ಕೆ ಇಲ್ಲದ ತಕರಾರೊಂದನ್ನು ಅವರಿಗೆ ಸಂಬಂಧಿಸಿಯೇ ಇಲ್ಲದ ಇನ್ನಾರೋ ಎತ್ತಿರುವುದು ಏಕೆ? ಒಂದುವೇಳೆ,

ಹೀಗೆ ಚಾಲಕನ ಧರ್ಮವನ್ನು ಹುಡುಕಿದವರ ಬೆನ್ನು ಹತ್ತುತ್ತಾ ಹೋದರೆ ಅವರು ನಿರ್ದಿಷ್ಟ ರಾಜಕೀಯ ಪಕ್ಷದ ಮತ್ತು ಕೆಲವು ಸಂಘಟನೆಗಳ ವ್ಯಕ್ತಿಗಳಾಗಿ ಪತ್ತೆಯಾಗಬಲ್ಲರು. ಧರ್ಮದ್ವೇಷವನ್ನೇ ಉಸಿರಾಗಿಸಿಕೊಂಡಿರುವ ಮತ್ತು ಹಿಂದೂ ಹಾಗೂ ಮುಸ್ಲಿಮರನ್ನು ವೈರಿಗಳಂತೆ ಬಿಂಬಿಸುವುದನ್ನೇ ಖಾಯಂ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಇವರಿಗೆ ರಾಜಕೀಯ ಅಧಿಕಾರ ಪಡೆಯುವುದನ್ನು ಬಿಟ್ಟರೆ ಬೇರೆ ಯಾವ ಗುರಿಗಳೂ ಇಲ್ಲ. ಮುಸ್ಲಿಮರನ್ನು ಸದಾ ದ್ವೇಷಿಸುವುದರಿಂದ ಅಧಿಕಾರ ಸದಾ ತಮ್ಮ ಸುಪರ್ದಿಯಲ್ಲೇ  ಉಳಿಯಲಿದೆ ಎಂದು ಬಲವಾಗಿ ನಂಬಿರುವ ಸಮುದಾಯ ಇದು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಎಷ್ಟು ಸಾಧ್ಯವೋ ಅಷ್ಟು ವಿಷವನ್ನು ಇವರು ಹರಡುತ್ತಿರುತ್ತಾರೆ. ಪರಸ್ಪರರು ಸೌಹಾರ್ದವಾಗಿ ಬೆರೆಯದಂತೆ ಶ್ರಮಿಸುತ್ತಿರುತ್ತಾರೆ. ಎಲ್ಲೋ  ನಡೆದ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಬಿಂಬಿಸುತ್ತಿರುತ್ತಾರೆ. ಈ ಎಲ್ಲದರ ಉದ್ದೇಶ ರಾಜಕೀಯ ಅಧಿಕಾರ ಒಂದೇ ಆಗಿರುತ್ತದೆ. ಇದೇವೇಳೆ,

ಅಪರಾಧಿ ತನ್ನ ಸಮುದಾಯದವನೇ ಎಂದು ಗೊತ್ತಾದ ಕೂಡಲೇ ಇವರು ಬಾಯಿ ಮುಚ್ಚಿಕೊಳ್ಳುತ್ತಾರೆ. ಹಾಸನ ಘಟನೆಯಲ್ಲೂ ನಡೆದಿರುವುದು ಇದುವೇ. ಯಾವಾಗ ಸಚಿವರು ಎಚ್ಚರಿಕೆ ನೀಡಿದರೋ ಮತ್ತು ಭುವನೇಶ್ ಎಂಬವನೇ ಚಾಲಕ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಯಿತೋ ಈ ಗುಂಪು ಮೌನವಾಗಿದೆ. ಕನಿಷ್ಠ ಸತ್ತವರು ಮತ್ತು ಗಾಯಗೊಂಡವರ ಬಗ್ಗೆ ಸಾಂತ್ವನದ ಮಾತುಗಳನ್ನೂ ಆಡಿಲ್ಲ. ಭುವನೇಶ್‌ನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿಯೂ ಇಲ್ಲ. ಆತನ ವಿರುದ್ಧ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಿಲ್ಲ. ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿಯೇ ಲಾರಿ ಹತ್ತಿಸಲಾಗಿದೆ ಎಂದೂ ಹೇಳಿಲ್ಲ. ಒಂದುವೇಳೆ, ಚಾಲಕ ಮುಸ್ಲಿಮ್ ಆಗಿರುತ್ತಿದ್ದರೆ ಪ್ರತಿಭಟನೆಯ ಮೇಲೆ ಪ್ರತಿಭಟನೆ ನಡೆಯುತ್ತಿತ್ತು. ಆತನನ್ನು ಗಲ್ಲಿಗೇರಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ, ದ್ವೇಷದ ಕೃತ್ಯ ಎಂದೆಲ್ಲಾ ಪ್ರಚಾರ ಮಾಡಲಾಗುತ್ತಿತ್ತು. ನಿಜ ಏನೆಂದರೆ,

ಈ ಘಟನೆಯು ಮದ್ಯಪಾನದ ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೇಳುವುದಕ್ಕೆ ಕಾರಣ ಆಗಬೇಕಿತ್ತು. ಮದ್ಯ ಮಾರಾಟದ ಆದಾಯದಿಂದ ಸರಕಾರ ನಡೆಯಬೇಕಿಲ್ಲ ಎಂದು ಕೂಗಬೇಕಿತ್ತು. ಮದ್ಯ ಮುಕ್ತ ಕರ್ನಾಟಕ ಮಾಡುವ ಸಂಕಲ್ಪದ ಜನಜಾಗೃತಿ ಅಭಿಯಾನಕ್ಕೆ ಕಾರಣ ಆಗಬೇಕಿತ್ತು. ಸರಕಾರದ ಮದ್ಯನೀತಿಯನ್ನು ಪ್ರಶ್ನಿಸಿ ಸರಣಿ ಕಾರ್ಯಕ್ರಮಗಳಿಗೆ ನಾಂದಿ ಹಾಡುವ ಘಟನೆ ಆಗಬೇಕಿತ್ತು. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಸಾವು-ನೋವು ಉಂಟಾದ ಬಳಿಕವೂ ಯಾರೊಬ್ಬರಿಂದಲೂ ಸರಕಾರದ ಮದ್ಯ ನೀತಿಯನ್ನು ಪ್ರಶ್ನಿಸುವ ಪ್ರಯತ್ನವೇ ನಡೆದಿಲ್ಲ. ಚಾಲಕನ ಧರ್ಮ ನೋಡಿದವರಲ್ಲಿ ಯಾರೂ ಮದ್ಯಮುಕ್ತ ಕರ್ನಾಟಕಕ್ಕಾಗಿ ಒತ್ತಾಯಿಸಿಲ್ಲ. ಮದ್ಯ ನಿಷೇಧಿಸುವಂತೆ ಒತ್ತಾಯ ಕೇಳಿ ಬಂದಿಲ್ಲ. 2022ರಲ್ಲಿ ಕೇವಲ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕಾಗಿಯೇ 3268 ಅಪಘಾತಗಳು ಸಂಭವಿಸಿವೆ. 150ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 2024ರಲ್ಲಿ ಈ ಅಂಕಿ-ಅಂಶದಲ್ಲಿ ಇನ್ನಷ್ಟು ಏರಿಕೆ ಉಂಟಾಗಿದೆ. ಅಂದಹಾಗೆ,

ಮದ್ಯಪಾನವು ಕೇವಲ ವಾಹನ ಚಾಲಕರನ್ನು ಮಾತ್ರ ದಾರಿ ತಪ್ಪಿಸುವುದಲ್ಲ, ಸಮಾಜದ ನೆಮ್ಮದಿಯನ್ನೇ ಅದು ಭಂಗಗೊಳಿಸುತ್ತದೆ. ಈ ದೇಶದ ಕೋಟ್ಯಂತರ ಮನೆಗಳನ್ನು ಈ ಮದ್ಯವು ನರಕಮಯಗೊಳಿಸಿದೆ. ಮದ್ಯಪಾನಿಯಾದ ಪುರುಷರು ಮನೆಯ ಮಹಿಳೆಯರ ಮೇಲೆ ಹಲ್ಲೆ  ನಡೆಸುವುದು ಮತ್ತು ಹತ್ಯೆ ನಡೆಸುವುದೆಲ್ಲ ಪ್ರತಿದಿನವೆಂಬಂತೆ  ವರದಿಯಾಗುತ್ತಿದೆ. ರಾತ್ರಿಯಾಗುವುದಕ್ಕೆ ಹೆದರುವ ಕೋಟ್ಯಂತರ ಮಹಿಳೆಯರು ಈ ದೇಶದಲ್ಲಿದ್ದಾರೆ. ಹೆಚ್ಚಿನ ಮನೆಯ ಪುರುಷರು ರಾತ್ರಿ ಮನೆಗೆ ಮರಳುವಾಗ ಮದ್ಯ ಸೇವಿಸುತ್ತಾರೆ. ಕೂಲಿ ಕಾರ್ಮಿಕರಲ್ಲಿ ಈ ಅಭ್ಯಾಸ ಹೆಚ್ಚಿದೆ. ದುಡಿದ ಹಣವನ್ನು ಮದ್ಯದಂಗಡಿಗೆ ಕೊಡುವುದಲ್ಲದೇ ಮನೆಗೆ ಬಂದು ಪತ್ನಿ-ಮಕ್ಕಳ ಮೇಲೆ ಕೈ ಮಾಡುವ ಕ್ರೌರ್ಯಗಳು ಈ ದೇಶದಲ್ಲಿ ಸಾಮಾನ್ಯವಾಗಿದೆ. ಈ ಕ್ರೌರ್ಯವನ್ನು ಮನೆಯ ಮಹಿಳೆಯರು ಮತ್ತು ಮಕ್ಕಳು ಸಹಿಸಿಕೊಳ್ಳುತ್ತಾರೆ. ಮರ್ಯಾದೆಗೆ ಅಂಜಿ ಯಾರಲ್ಲೂ ಹೇಳುವುದಿಲ್ಲ. ಈ ಗುಣವನ್ನೇ ಮದ್ಯಪಾನಿಗಳು ದುರುಯೋಗಿಸಿಕೊಳ್ಳುತ್ತಾರೆ. ಆದರೂ,

ಈ ಬಗ್ಗೆ ಯಾವ ತಕರಾರನ್ನೂ ವ್ಯಕ್ತಪಡಿಸದ ಗುಂಪೊಂದು  ಮುಸ್ಲಿಮರೇ ಇಲ್ಲಿನ ಸಮಸ್ಯೆ ಎಂದು ಬಿಂಬಿಸುವುದಕ್ಕೆ ಶಕ್ತಿಮೀರಿ ಯತ್ನಿಸುತ್ತಿವೆ. ಒಂದುವೇಳೆ, ಇವರಿಗೆ ಹಿಂದೂ ಧರ್ಮೀಯರ ಏಳಿಗೆಯೇ ಮುಖ್ಯ ಎಂದಾಗಿದ್ದರೆ, ಸಂಪೂರ್ಣ ಪಾನ ನಿಷೇಧಕ್ಕಾಗಿ ಒತ್ತಾಯಿಸಬೇಕಿತ್ತು. ಈ ದೇಶದಲ್ಲಿ ಮದ್ಯಪಾನದ ಅಡ್ಡಪರಿಣಾಮಕ್ಕೆ ಅತ್ಯಂತ ಹೆಚ್ಚು ತುತ್ತಾಗುತ್ತಿರುವುದು ಮುಸ್ಲಿಮರಲ್ಲ. ಮದ್ಯಪಾನದ ವಿರುದ್ಧ ಇಸ್ಲಾಮ್‌ನಲ್ಲಿ ಕಟ್ಟುನಿಟ್ಟಿನ ಆದೇಶ ಇರುವುದರಿಂದ ಮುಸ್ಲಿಮರಲ್ಲಿ ಮದ್ಯಪಾನಿಗಳು ತೀರಾತೀರಾ ಕಡಿಮೆಯಿದ್ದಾರೆ. ಆದರೆ,

ಹಿಂದೂ ಸಮುದಾಯ ಇದರಿಂದ ತೀವ್ರ ತೊಂದರೆಯನ್ನು ಎದುರಿಸುತ್ತಿದೆ. ದುಡಿದ ಹಣವನ್ನು ಕುಟುಂಬದ ಖರ್ಚಿಗೆ ಬಳಸುವ ಬದಲು ಮದ್ಯದಂಗಡಿಗೆ ಸುರಿಯುವ ಪುರುಷರು ಧಾರಾಳ ಇದ್ದಾರೆ. ಇವರನ್ನು ಇದರಿಂದ ಮುಕ್ತಗೊಳಿಸಿದರೆ ಕೋಟ್ಯಂತರ ಮನೆಗಳಿಗೆ ನೆಮ್ಮದಿ ಸಿಗಬಹುದು. ಕೋಟ್ಯಂತರ ಮಹಿಳೆಯರು ಮತ್ತು ಮಕ್ಕಳು ಗೃಹಹಿಂಸೆಯಿಂದ  ರಕ್ಷಣೆ ಹೊಂದಬಹುದು. ಇವೆಲ್ಲ ಎಲ್ಲರಿಗೂ ಗೊತ್ತು. ಮದ್ಯಪಾನದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಸಾವುಗಳು, ಹಿಂಸೆಗಳು ಮತ್ತು ಕಾಯಿಲೆಗಳ ಅಂಕಿ-ಅAಶಗಳನ್ನು ಪ್ರತಿವರ್ಷ ಕೇಂದ್ರ ಸರಕಾರ ಬಿಡುಗಡೆಗೊಳಿಸುತ್ತಿರುತ್ತದೆ. ಇಷ್ಟಿದ್ದೂ ಇದರ ವಿರುದ್ಧ ಏನೊಂದೂ ಮಾತಾಡದೇ ಬರೇ ಹಿಂದೂ-ಮುಸ್ಲಿಮ್ ಎಂದು ಹೇಳುತ್ತಾ ದ್ವೇಷ ಬಿತ್ತುವವರನ್ನು ಏನೆಂದು ಕರೆಯಬೇಕು? ಇವರು ಯಾವ ಧರ್ಮದ ರಕ್ಷಕರು? ಇವರು ಯಾರ ಹಿತೈಷಿಗಳು? ಇವರಿಗೆ ಹಿಂದೂ ಸಮುದಾಯದ ಕಲ್ಯಾಣವೇ ಮುಖ್ಯ ಎಂದಾಗಿದ್ದರೆ ಧರ್ಮದ್ವೇಷವನ್ನು ಕೈಬಿಟ್ಟು ಸಂಪೂರ್ಣ ಪಾನ ನಿಷೇಧಕ್ಕೆ ಒತ್ತಾಯಿಸುತ್ತಿದ್ದರು. ಅವರ ಗುರಿ ಬರೇ ರಾಜಕೀಯ ಅಧಿಕಾರ ಅನ್ನುವುದನ್ನು ಹಾಸನದ ಘಟನೆ ಸ್ಪಷ್ಟಪಡಿಸಿದೆ.

Tuesday, 16 September 2025

ಬಾನು ಮುಶ್ತಾಕ್‌ರನ್ನು ಬಿಜೆಪಿ ವಿರೋಧಿಸಿರುವುದಕ್ಕೆ ಧರ್ಮ ಕಾರಣವೇ?


ಸನ್ಮಾರ್ಗ ಸಂಪಾದಕೀಯ 

ನಾಡಹಬ್ಬ ದಸರಾವನ್ನು ಸಾಹಿತಿ ಬಾನು ಮುಶ್ತಾಕ್ ಅವರು ಉದ್ಘಾಟಿಸುವುದು ಸರಿಯೋ ತಪ್ಪೋ ಎಂಬ ಚರ್ಚೆಯೊಂದನ್ನು ಬಿಜೆಪಿ ಕನ್ನಡಿಗರ ಮೇಲೆ ಎತ್ತಿ ಹಾಕಿದೆ. ಮಾಜಿ ಸಂಸದ ಪ್ರತಾಪಸಿಂಹ, ಶಾಸಕ ಯತ್ನಾಳ್ ಅವರು ಬಹಿರಂಗವಾಗಿಯೇ ಬಾನು ಮುಶ್ತಾಕ್ ಅವರ ಉದ್ಘಾಟನೆಯನ್ನು ವಿರೋಧಿಸಿದ್ದಾರೆ. ಬಾನು ಮುಶ್ತಾಕ್ ಅವರ ಧಾರ್ಮಿಕ ನಂಬಿಕೆಯೇ  ಈ ವಿರೋಧಕ್ಕೆ ಕಾರಣ ಎಂದೂ ಹೇಳಿದ್ದಾರೆ. ಬಾನು ಮುಶ್ತಾಕ್ ಅವರ ಧರ್ಮ ಈ ಉದ್ಘಾಟನಾ ವಿಧಾನವನ್ನು ಒಪ್ಪುವುದಿಲ್ಲ ಎಂಬುದು ಈ ಇಬ್ಬರ ವಾದ. ನಿಜವಾಗಿ,

ಈ ಪ್ರತಾಪಸಿಂಹ ಆಗಲಿ, ಯತ್ನಾಳ್ ಆಗಲಿ ನಿನ್ನೆ ಮೊನ್ನೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರಲ್ಲ. 2017ರಲ್ಲಿ ಈ ದಸರಾವನ್ನು ಉದ್ಘಾಟಿಸಿದ್ದು ಕವಿ ನಿಸಾರ್ ಅಹ್ಮದ್. ಆಗ ಪ್ರತಾಪಸಿಂಹ ಸಂಸದರಾಗಿದ್ದರು. ಯತ್ನಾಳ್ ಶಾಸಕರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೆ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಬಿಜೆಪಿ ಚಟುವಟಿಕೆಯಲ್ಲಿತ್ತು. ಅಂದೂ ಮುಖ್ಯಮಂತ್ರಿಯಾಗಿದ್ದುದು ಸಿದ್ದರಾಮಯ್ಯ. ಇಂದೂ ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯರೇ. ಆದರೆ,

2017ರಲ್ಲಿ ನಿಸಾರ್ ಅಹ್ಮದ್‌ರ ಧರ್ಮವನ್ನು ಉಲ್ಲೇಖಿಸಿ ಯಾವ ವಿರೋಧವನ್ನೂ ವ್ಯಕ್ತಪಡಿಸದ ಬಿಜೆಪಿ, 2025ರಲ್ಲಿ ಬಾನು ಮುಶ್ತಾಕ್‌ಗೆ ಧರ್ಮದ ಆಧಾರದಲ್ಲಿ ವಿರೋಧ ವ್ಯಕ್ತಪಡಿಸಲು ಕಾರಣವೇನು? ನಿಸಾರ್ ಅಹ್ಮದ್‌ರಿಗೆ ಹೋಲಿಸಿದರೆ ಬಾನು ಮುಶ್ತಾಕ್ ಅವರ ಆಯ್ಕೆಗೆ ಇನ್ನೂ ಹೆಚ್ಚು ತೂಕವಿದೆ. ಇವರು ಬೂಕರ್ ಪ್ರಶಸ್ತಿ ವಿಜೇತ ಮೊದಲ ಕನ್ನಡ ಸಾಹಿತಿ. ಅರ್ಹತೆ ಮತ್ತು ಆಯ್ಕೆಗೆ ಸಂಬಂಧಿಸಿ ಒಂದಿನಿತೂ ಅನುಮಾನ ಇಲ್ಲದಷ್ಟು ಸೂಕ್ತ ವ್ಯಕ್ತಿತ್ವ ಬಾನು ಮುಶ್ತಾಕ್‌ರದ್ದು. ಇಷ್ಟಿದ್ದೂ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಬಾನು ಮುಶ್ತಾಕ್‌ರ ಧರ್ಮವನ್ನು ಎತ್ತಿಕೊಂಡು ಮತ್ತು ಅವರ ಧರ್ಮದಲ್ಲಿರುವ ಏಕದೇವಾರಾಧನೆಯನ್ನು ಮುಂದು ಮಾಡಿಕೊಂಡು ಬಿಜೆಪಿ ವ್ಯಕ್ತಪಡಿಸುತ್ತಿರುವ ಈ ವಿರೋಧದ ಹಿಂದೆ ನಿಜಕ್ಕೂ ಕೆಲಸ ಮಾಡುತ್ತಿರುವುದು ಅವರ ಧರ್ಮವೋ ಅಥವಾ ಅವರ ನಿಲುವುಗಳೋ?

ಬಾನು ಮುಶ್ತಾಕ್ ಅಂದರೆ ಬಿಜೆಪಿಗೆ ಬಿಸಿ ತುಪ್ಪ. ಯಾಕೆಂದರೆ, ಬಾನು ಮುಶ್ತಾಕ್ ಬರೇ ಓರ್ವ ಸಾಹಿತಿಯಲ್ಲ. ಅವರು ವಕೀಲರು. ಅದಕ್ಕಿಂತಲೂ ಮುಖ್ಯವಾಗಿ ತಾಯಿ ಹೃದಯದ ಹೋರಾಟಗಾರರು. ಬಿಜೆಪಿಯ ಕೋಮುವಾದವನ್ನು ಸದಾ ಎದುರಿಸುತ್ತಲೇ ಬಂದ ಲಂಕೇಶ್ ಅವರ ಶೋಧನೆಯೇ ಈ ಬಾನು ಮುಶ್ತಾಕ್. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಇವರು ಬರಹ ಜಗತ್ತಿನಲ್ಲಿ ಗುರುತಿಸಿಕೊಂಡರು. ಅವರು ಬರೇ ತನ್ನನ್ನು ಬರಹಕ್ಕೆ ಮತ್ತು ವಕೀಲಗಾರಿಕೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗಿಯಾದರು. ಅದರಲ್ಲಿ ಬಾಬಾ ಬುಡನ್‌ಗಿರಿ ಚಳವಳಿಯೂ ಒಂದು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟ ಕೋಮುವಾದಿಗಳ ವಿರುದ್ಧ 2000 ಇಸವಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹೋರಾಟವನ್ನು ಹುಟ್ಟು ಹಾಕಿತ್ತು. ಬುಡನ್‌ಗಿರಿಗೆ ಭೇಟಿ ನೀಡುವುದರಿಂದ ಮುಸ್ಲಿಮರನ್ನು ಕೋಮುವಾದಿಗಳು ತಡೆದಿದ್ದರು. ‘ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಹಸ್ತಾಂತರಿಸಬೇಕು, ಅಲ್ಲಿನ ಗೋರಿಗಳನ್ನು ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ದತ್ತಾತ್ರೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು...’ ಇತ್ಯಾದಿ ಬೇಡಿಕೆಯೊಂದಿಗೆ ಸಂಘಪರಿವಾರ ಬಲವಂತದ ಹೋರಾಟಕ್ಕೆ ಮುಂದಾದಾಗ ಅದಕ್ಕೆ ವಿರೋಧವನ್ನು ಒಡ್ಡಿ ಕೋಮು ಸೌಹಾರ್ದ ವೇದಿಕೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿತು. 1999ರ ವರೆಗೆ ಸಹಜವಾಗಿದ್ದ ಮತ್ತು ಶಾಂತವಾಗಿದ್ದ ಬಾಬಾ ಬುಡನ್‌ಗಿರಿಯನ್ನು ದಿಢೀರ್ ಆಗಿ ಅಶಾಂತಿಯ ತಾಣವಾಗಿಸಿದುದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನು ಅರಿತುಕೊಂಡ ಕೋಮುಸೌಹಾರ್ದ ವೇದಿಕೆಯು ಬುಡನ್‌ಗಿರಿಯಲ್ಲಿ 1975ಕ್ಕಿಂತ ಮೊದಲಿದ್ದ ಪದ್ಧತಿಗಳನ್ನೇ ಮುಂದುವರಿಸಬೇಕು ಮತ್ತು ದರ್ಗಾದಲ್ಲಿ ಕೋಮುವಾದಿಗಳ ಆಚರಣೆಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಬೀದಿಗಿಳಿಯಿತು. ಅದರಲ್ಲಿ ಭಾಗಿಯಾದವರೇ ಈ ಬಾನು ಮುಶ್ತಾಕ್.

ಶಿವಮೊಗ್ಗದವರಾದ ಮತ್ತು ಹೋರಾಟ ಮನೋಭಾವದ ಬಾನು ಮುಶ್ತಾಕ್‌ರು ವಕೀಲ ವೃತ್ತಿಯ ಅನುಭವದೊಂದಿಗೆ ಹೋರಾಟಕ್ಕೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದರು. ಕೋಮುವಾದಿ ಚಟುವಟಿಕೆಗಳಿಗೆ ವಿರೋಧವನ್ನು ವ್ಯಕ್ತಪಡಿಸಿದರು. ಮುಸ್ಲಿಮ್ ಸಮುದಾಯದಲ್ಲಿದ್ದ ಮಡಿವಂತರು ಮಹಿಳೆಗೆ ಮಸೀದಿ ಪ್ರವೇಶವನ್ನು ನಿರಾಕರಿಸಿದಾಗ ಅವರು ಹೇಗೆ ವಿರೋಧಿಸಿ ಹೋರಾಟಕ್ಕಿಳಿದಿದ್ದರೋ ಅದೇ ರೀತಿಯ ಮನೋಭಾವವನ್ನು ಅವರು ಇಲ್ಲೂ ಪ್ರದರ್ಶಿಸಿದರು. ಈ ಕಾರಣದಿಂದಲೇ ಕೋಮುವಾದಿಗಳಿಗೆ ಬಾನು ಮುಶ್ತಾಕ್ ನುಂಗಲಾರದ ತುತ್ತಾಗಿ ಬಿಟ್ಟರು. ಬರೇ ಕತೆ, ಕವನ, ಬರಹಕ್ಕೆ ಸೀಮಿತವಾಗದೇ ನಾಡಿನ ಸಮಸ್ಯೆಗಳಿಗೆ ದನಿಯಾಗುವ ಬಾನು ಮುಶ್ತಾಕ್ ಅವರಿಗೆ ಬೇಕಾಗಿರಲಿಲ್ಲ. ಧರ್ಮದ್ವೇಷವನ್ನು ಪ್ರಶ್ನಿಸುವ ಬಾನು ಅವರಿಗೆ ಬೇಕಾಗಿರಲಿಲ್ಲ. ಆದ್ದರಿಂದಲೇ, ಬಾನು ಮುಶ್ತಾಕ್‌ರನ್ನು ಗಡಿಯಲ್ಲಿಟ್ಟೇ ಅವರು ನೋಡತೊಡಗಿದರು. ಆದರೆ,

ಬಾನು ಮುಶ್ತಾಕ್ ಇವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಸ್ಲಿಮ್ ದ್ವೇಷಿ ಮತ್ತು ಕೋಮುವಾದಿ ವಿಚಾರಧಾರೆಯನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತಲೇ ಬಂದ ಬಾನು ಮುಶ್ತಾಕ್ ಅವರು ಹಿಜಾಬ್ ವಿವಾದದ ಸಂದರ್ಭದಲ್ಲಿ ಮತ್ತೆ ತನ್ನ ಖಚಿತ ನಿಲುವಿನ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರು. ಶಾಲೆಗಳಲ್ಲಿ ಹಿಜಾಬ್ ಧರಿಸುವ ಹೆಣ್ಣು ಮಕ್ಕಳ ಹಕ್ಕನ್ನು ಅವರು ಬೆಂಬಲಿಸಿದರು. ಸಾಮಾನ್ಯವಾಗಿ,

ಸರಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಸಾಹಿತಿಗಳು ಧ್ವನಿಯೆತ್ತುವುದು ಕಡಿಮೆ ಎಂಬ ಮಾತಿದೆ. ಅದರಲ್ಲೂ ಬಿಜೆಪಿ ಸರಕಾರದ ಅವಧಿಯಲ್ಲಂತೂ ಇಂಥ ನಡವಳಿಕೆ ಹೆಚ್ಚು. ಮನ್‌ಮೋಹನ್ ಸಿಂಗ್ ಸರಕಾರವಿದ್ದಾಗ ಸಿನಿಮಾ ತಾರೆಯರಿಂದ ಹಿಡಿದು ಸಾಹಿತಿಗಳ ವರೆಗೆ ಎಲ್ಲರೂ ಸರಕಾರದ ನೀತಿ-ಧೋರಣೆಗಳನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ನಿಲುವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸುತ್ತಿದ್ದರು. ಆದರೆ, ಮೋದಿ ಸರಕಾರದ ಕಳೆದ 11 ವರ್ಷಗಳ ಅವಧಿಯಲ್ಲಿ ಈ ಪ್ರಕ್ರಿಯೆಯೇ ನಿಂತು ಹೋಗಿದೆ. ಆದರೆ, ಬಾನು ಮುಶ್ತಾಕ್ ಹಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದಾಗ ಬಾನು ಮುಶ್ತಾಕ್ ತನ್ನ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ‘ಹಿಂದೆ ಸರಿದ ಮುಸ್ಲಿಮ್ ಹುಡುಗಿಯರ ಶಿಕ್ಷಣ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ 2022 ಫೆಬ್ರವರಿ 26ರಂದು ದೀರ್ಘ ಲೇಖನ ಬರೆದರು. ಹಿಜಾಬ್ ನಿಷೇಧದ ರಾಜಕೀಯ ಒಳಸುಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದ ಅವರು, ಇದರಿಂದಾಗಿ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿ ಆತಂಕವನ್ನೂ ವ್ಯಕ್ತಪಡಿಸಿದ್ದರು. ನಿಜವಾಗಿ,

ಬಿಜೆಪಿಗೆ ತಕರಾರಿರುವುದೇ ಇಲ್ಲಿ. ತನಗೆ ವಿನೀತವಾಗಿರದ ಬಾನು ಮುಶ್ತಾಕ್‌ರ ಮೇಲೆ ಬಿಜೆಪಿಗೆ ದ್ವೇಷವಿದೆ. ಅದರಲ್ಲೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವರ ಬಂಡಾಯ ಮತ್ತು ಧರ್ಮದ್ವೇಷ ವಿರೋಧಿ ನೀತಿಯ ಬಗ್ಗೆ ಆಕ್ರೋಶವಿದೆ. ಬೂಕರ್ ಪ್ರಶಸ್ತಿ ಪಡೆದಾಗಲೂ ಬಾನು ಮುಶ್ತಾಕ್‌ರನ್ನು ಬಿಜೆಪಿ ಪೂರ್ಣ ಮನಸ್ಸಿನಿಂದ ಅಭಿನಂದಿಸದೇ ಇರಲೂ ಇದುವೇ ಕಾರಣ. ಇಡೀ ರಾಜ್ಯವೇ ಬಾನು ಮುಶ್ತಾಕ್‌ರನ್ನು ಬೂಕರ್ ಮುಶ್ತಾಕ್ ಎಂದು ಸಂಭ್ರಮಿಸುತ್ತಿದ್ದಾಗಲೂ ಬಿಜೆಪಿ ಮನೆಯನ್ನು ಮೌನ ಹೊದ್ದುಕೊಂಡಿತ್ತು. ಇದೀಗ ಬಿಜೆಪಿ ತನ್ನ ಅಸಲು ಮುಖವನ್ನು ಬಹಿರಂಗಕ್ಕೆ ತಂದಿದೆ. ಧರ್ಮದ ನೆಪವನ್ನು ಮುಂದಿಟ್ಟುಕೊಂಡು  ನಾಡಹಬ್ಬವನ್ನು ಉದ್ಘಾಟಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಒಂದುವೇಳೆ,

ದಸರಾ ಉದ್ಘಾಟಿಸುವುದಕ್ಕೆ ತನ್ನ ಧಾರ್ಮಿಕ ವಿಶ್ವಾಸ ಅಡ್ಡಿ ಬರುತ್ತದೆಂದಾದರೆ ಅದನ್ನು ಹೇಳಬೇಕಾಗಿರುವುದು ಬಾನು ಮುಶ್ತಾಕ್‌ರೇ ಹೊರತು ಬಿಜೆಪಿ ಅಲ್ಲ. ಆದರೆ ಬಾನು ಮುಶ್ತಾಕ್ ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದ್ದಾರೆ. ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಿರುವಾಗ, ಬಿಜೆಪಿಗೇನು ತೊಂದರೆ? ಬಾನು ಮುಶ್ತಾಕ್‌ರಿಗೇ ಇಲ್ಲದ ವಿರೋಧವನ್ನು ಬಿಜೆಪಿ ಹುಡುಕುತ್ತಿರುವುದೇಕೆ? ತನ್ನ ನಂಬಿಕೆಗೆ ಚ್ಯುತಿ ಬಾರದಂತೆ ನಾಡಹಬ್ಬವನ್ನು ಹೇಗೆ ಉದ್ಘಾಟಿಸಬೇಕು ಎಂಬುದನ್ನು ಬಾನು ಮುಶ್ತಾಕ್‌ರಿಗೆ ಬಿಜೆಪಿ ಹೇಳಿಕೊಡಬೇಕಾಗಿಲ್ಲ. ಅದನ್ನು ಅವರೇ ನಿರ್ಧರಿಸಿಕೊಳ್ಳಲಿ.